Updated News From Kaup
ಮಕರ ಸಂಕ್ರಮಣ ಆಧ್ಯಾತ್ಮಿಕ ಪುಣ್ಯಕಾಲ - ದೇವಯಾನದ ಆರಂಭ

Posted On: 13-01-2022 06:39PM
ಸಾಂಸ್ಕೃತಿಕ ಸಂಭ್ರಮಗಳಿಗೆ ಕಾಂತಿ ಹೆಚ್ಚುವ, ಧಾರ್ಮಿಕ ಆಚರಣೆಗಳಿಗೆ ಪ್ರಶಸ್ತವೆನಿಸುವ, ಆಧ್ಯಾತ್ಮಿಕವಾಗಿ ’ಪುಣ್ಯಕಾಲ’ ಎಂದು ನಂಬಲಾಗುವ ’ಉತ್ತರಾಯಣ’ವು ಮಕರ ಸಂಕ್ರಮಣದಿಂದ ಆರಂಭವಾಗುತ್ತದೆ. ಮಿಥುನ ಮಾಸ ಕಳೆದು ಕರ್ಕಾಟಕ ಮಾಸ ಪ್ರಾರಂಭವಾಗುವಾಗ ದಕ್ಷಿಣಾಯನ ಮೊದಲಿಡುತ್ತದೆ. ಆರು ತಿಂಗಳ ಬಳಿಕ ಧನುರಾಶಿಯಿಂದ ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಿರುವಂತೆಯೇ ಉತ್ತರಾಯಣ ಸನ್ನಿಹಿತವಾಗುತ್ತದೆ. ದಕ್ಷಿಣಾಯನವು ’ಪಿತೃಯಾನ’ವೆಂದೂ, ಉತ್ತರಾಯಣವು ’ದೇವಯಾನ’ವೆಂದೂ ವಿಭಾಗಿಸಲ್ಪಟ್ಟಿವೆ. ಉಪನಿಷತ್ತು, ಭಗವದ್ಗೀತೆ, ಮಹಾಭಾರತಗಳಲ್ಲಿ ದೇವಯಾನದ ಉಲ್ಲೇಖವಿದೆ. ಪ್ರಾಶಸ್ತ್ಯದ ವಿವರಣೆ ಇದೆ. ಭೀಷ್ಮರಂತಹ ಮಹನೀಯರು ಶರಶಯ್ಯೆಯಲ್ಲಿ ಮಲಗಿಯೇ ತನ್ನ ನಿಷ್ಕ್ರಮಣಕ್ಕೆ ಉತ್ತರಾಯಣವನ್ನು ನಿರೀಕ್ಷಿಸುತ್ತಾ ಕಾಲ ಕಳೆದರು. ಪ್ರಕೃತಿಯ ರಮ್ಯಾದ್ಭುತ ಸ್ಥಿತ್ಯಂತರಗಳನ್ನು ಗಮನಿಸುತ್ತಲೇ ತನ್ನ ಬದುಕಿಗೊಂದು ಸುಂದರ ಸಂವಿಧಾನವನ್ನು ರೂಪಿಸಿಕೊಂಡ ಮಾನವ ಈ ನಿಷ್ಕರ್ಷೆಗೆ ಶತಮಾನ ಶತಮಾನಗಳಷ್ಟು ದೀರ್ಘ ಅವಧಿಯಲ್ಲಿ ಅಧ್ಯಯನ (ಗಮನಿಸಿ ಪಡೆದ ಅನುಭವ) ನಡೆಸಿರಬೇಕು, ಕೊನೆಗೊಂದು ನಿರ್ಧಾರಕ್ಕೆ ಬಂದಿರಬೇಕು. ಆದರೆ ಕಾಲಗಣನೆಗೆ ವ್ಯವಸ್ಥೆ ಒದಗಿದರೂ ಕಾಲದ ಗತಿಯನ್ನು ನಿರ್ಧರಿಸಲಾಗದೆ, ಪಥವನ್ನು ನಿಖರವಾಗಿ ನಿರೀಕ್ಷಿಸಲಾಗದೆ, ’ಕಾಲಯ ತಸ್ಮೈ ನಮಃ’ ಎಂದಿರಬೇಕು. ಎಲ್ಲ ಕಾಲವು ಸಂದರ್ಭಾನುಸಾರ, ಸಂಭವ ವಿಧಾನದಿಂದ ಪ್ರಶಸ್ತವೇ ಆದರೂ ಕೆಲವು ತಿಂಗಳು, ಪರ್ವ ದಿನಗಳು, ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮೆಗಳು ಹೆಚ್ಚು ಪ್ರಶಸ್ತವೆಂದು ನಮ್ಮ ಪೂರ್ವಸೂರಿಗಳು ನಿರ್ಧರಿಸಿದ ಆಚರಣೆಗಳಿರುತ್ತವೆ ಅಥವಾ ಸಂಭ್ರಮದ ಹಬ್ಬಗಳಿರುತ್ತವೆ. ಭೂಮಿ, ಆಕಾಶ ಈ ನಡುವೆ ಹೇಗೆ ಪ್ರಕೃತಿಯನ್ನು ಅನುಸರಿಸುತ್ತಾ ಮಾನವನು ಭೂಮಿಯನ್ನು ವಾಸಯೋಗ್ಯವಾಗುವಂತೆ ಬಳಸಿಕೊಂಡನೊ ಅಂತೆಯೇ ಆಕಾಶವನ್ನು ಗಮನಿಸುತ್ತಾ ನಿತ್ಯ ಉದಯಿಸಿ ಅಸ್ತಮಿಸುವ ಸೂರ್ಯನನ್ನು ತಲೆಎತ್ತಿ ನೋಡುತ್ತಲೆ ಖಗೋಳ ಜ್ಞಾನವನ್ನು ಪಡೆದ. ಈ ನಿರಂತರ ಅಧ್ಯಯನವೇ ಆದಿಮದಿಂದ ಶಿಷ್ಟದವರೆಗೆ ಸಾಗಿ ಬಂದು ಮನುಕುಲದ ವ್ಯವಸ್ಥಿತ ಜೀವನ ವಿಧಾನ ಸ್ಥಾಯಿಯಾಯಿತು ಎನ್ನಬಹುದು.
ಕಳೆ ಏರುವುದು : ದೀಪಾವಳಿಯಿಂದ ಆಚರಣೆಗಳು ಆರಂಭವಾಗುತ್ತದೆ. ಕೋಲ-ನೇಮಗಳು, ಉತ್ಸವ ಮಹೋತ್ಸವಗಳು, ನಾಗ-ದೈವಗಳ ಪೂಜೆಗಳು ವೈಭವದಿಂದ ಪ್ರಾರಂಭವಾಗುತ್ತವೆ. ಆದರೆ ಮಕರ ಸಂಕ್ರಮಣದ ಬಳಿಕ ಮಳೆ ಆರಂಭದ ತನಕ (ಬೇಶದ ೧೦ನೇ ದಿನದ ಪತ್ತನಾಜೆಯವರೆಗೆ) ಈ ಆಚರಣೆಗಳಲ್ಲಿ ಹೆಚ್ಚಿನ ಉತ್ಸಾಹ ಎದ್ದು ಕಾಣುತ್ತದೆ. ಶುಭ್ರ ಆಕಾಶ, ವಾತಾವರಣದ ಪೂರಕ ಪ್ರೋತ್ಸಾಹ, ಕೃಷಿಯ ಧಾವಂತಕ್ಕೆ ಸ್ವಲ್ಪ ವಿರಾಮವೂ ಇರುವುದರಿಂದ ಕರಾವಳಿಯ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಸಂಭ್ರಮಗಳಿಗೆ ಕಳೆ ಏರುವುದೇ ಮಕರಸಂಕ್ರಮಣದಿಂದ. ಮದುವೆ, ನೂತನಗೃಹ ಪ್ರವೇಶ, ದೇವಾಲಯಗಳಲ್ಲಿ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ, ಹೊಸತಾಗಿ ನಿರ್ಮಿಸಲಾಗುವ ದೈವಸ್ಥಾನಗಳ ಒಕ್ಕಲು, ದೈವಸಾನ್ನಿಧ್ಯ ವಿಜೃಂಭಣೆಗೆ ಉತ್ತರಾಯಣ ಪ್ರಶಸ್ತವೆಂಬುದು ಪ್ರಾಚೀನ ಒಡಂಬಡಿಕೆ. ಈಗ ಗಮನಿಸಿದರೆ ದಕ್ಷಿಣಾಯನದಲ್ಲಿ ಒಂದು ಕಾಲಕ್ಕೆ ನಿಷಿದ್ದವಾಗಿದ್ದ ಎಲ್ಲ ಶುಭ ಶೋಭನಾದಿಗಳು, ಸತ್ಕಾರ್ಯಗಳು ನೆರವೇರುತ್ತದೆ. ಮಾನವ ಸ್ವೀಕರಿಸಿದ ವೇಗದ ಜೀವನ ಶೈಲಿಗೆ, ಆಧುನಿಕ ಚಿಂತನೆಗೆ ಎಲ್ಲವೂ ಸಕಾಲ. ಬೇಕು ಎನ್ನಿಸಿದಾಗ ಪಡೆಯುವುದು ಅಥವಾ ಆಚರಿಸುವುದು. ನಿಧಾನವಾದರೆ ಏನೋ ಆದೀತೆಂಬ ಆತಂಕ ಅಥವಾ ಅಂತಹ ಚಿಂತನೆಗಳ ಅಗತ್ಯವೇ ಇಲ್ಲದಿರುವುದು ಇಂದಿನ ಬದುಕು. ಆದರೂ ಉಳಿದು ಬಂದಿವೆ ಕೆಲವು ಆಚರಣೆಗಳು, ನೆನಪುಗಳು, ಪೂರ್ವ ನಿರ್ಧರಿತ ಕಟ್ಟುಪಾಡುಗಳು, ಮಕರ ಸಂಕ್ರಮಣ ಅಂತಹ ಒಂದು ನೆನಪಾಗಿ ಉಳಿದಿದೆ, ಆಚರಿಸಲ್ಪಡುತ್ತಿದೆ.
ತೀರ್ಥಸ್ನಾನ , ಸಪ್ತೋತ್ಸವ : ಕದ್ರಿಯ ಗೋ ಮುಖದಲ್ಲಿ ವಿಶೇಷ ತೀರ್ಥಸ್ನಾನಕ್ಕೆ ಮಕರಸಂಕ್ರಮಣ ಪುಣ್ಯಕಾಲ. ನಿತ್ಯೋತ್ಸವದ ದೇವಾಲಯಗಳ ನಗರ ಉಡುಪಿಯಲ್ಲಿ ಸಪ್ತೋತ್ಸವದ ಭವ್ಯ ಅನಾವರಣ. ಉಡುಪಿಯ ರಥಬೀದಿ ನಿಜ ಅರ್ಥದ ನಡೆ ದೇಗುಲಗಳು ಗಂಭೀರವಾಗಿ ಹಾದುಹೋಗುವ ದೃಶ್ಯಾವಳಿಗೆ ಸಾಕ್ಷಿಯಾಗುತ್ತದೆ. ಎಳ್ಳು-ಬೆಲ್ಲ ಬೀರುವ ಸಂಪ್ರದಾಯ ಮೂಲತಃ ತುಳು ನಾಡಿನಲ್ಲಿಲ್ಲ, ಆದರೆ ಈಗ ಈ ಶಿಷ್ಟಾಚಾರವೂ ರೂಢಿಯಲ್ಲಿದೆ. ಮಕರಸಂಕ್ರಮಣದಿಂದ ಮುಂದೆ ಧರೆಗಿಳಿಯುವ ದೇವ ದೇವರುಗಳು, ನೆಲದ ಸತ್ಯಗಳು ಎದ್ದು ಬರುವ ದೈವಲೋಕದ ಅನಾವರಣ, ನಾಗ-ಬ್ರಹ್ಮರ ಅಲೌಕಿಕ ಸೃಷ್ಟಿಗಳಿಗೆಲ್ಲ ಅಮಿತ ಉತ್ಸಾಹ. ಕಾರಣ ಪರಿಸರ; ಮಾವು, ಗೇರು ಮುಂತಾದ ಮರಗಳು ಹೂ ಬಿಡುತ್ತವೆ; ವಾತಾವರಣ ’ಪ್ರಚೋದಕವಾಗಿರುತ್ತದೆ. ಹೊಸ ಹರುಷ ತುಂಬಿರುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಶಬರಿಮಲೆ ಯಾತ್ರೆ ಜನಪ್ರಿಯವಾಗುತ್ತಿದೆ. ಪ್ರತಿ ಮನೆಯಿಂದಲೋ ಒಂದು ಕುಟುಂಬದಿಂದಲೋ ಓರ್ವ ಭಕ್ತ ವ್ರತಸ್ಥನಾಗಿ ’ಸ್ವಾಮಿ’ ಎನಿಸಿ ಅಯ್ಯಪ್ಪ ದರ್ಶನಕ್ಕೆ ಸಾಗಿ ಮಕರ ಸಂಕ್ರಮಣದ ದಿನ ಗೋಚರಿಸುವ ’ಮಕರಜ್ಯೋತಿ’ಯನ್ನು ಕಂಡು, ಧನ್ಯತಾಭಾವದೊಂದಿಗೆ ಮರಳಿ ಬಂದು ಪ್ರಸಾದ ಹಂಚುವ ಧಾರ್ಮಿಕ ಮನೋಭಾವ ಈ ಕಾಲದಲ್ಲಿ ಪ್ರತಿ ಊರಿನಲ್ಲೂ ಕಾಣುತ್ತೇವೆ. ಒಂದು ಸ್ಥಿತ್ಯಂತರ ಉತ್ಕರ್ಷಗಾಮಿಯಾಗಿ ಸಾಗಬೇಕು.ಹಾಗೆ ಮಕರಸಂಕ್ರಮಣ ಸ್ವೀಕರಿಸಲ್ಪಡುತ್ತಿದೆ.
ಬಡಕಾಯಿ ಪೋಪಿನಿ : ತುಳುವರಿಗೆ ಈ ಪರ್ವಕಾಲ ಪ್ರಾಕೃತಿಕ ಸ್ಥಿತ್ಯಂತರದ ಜ್ಞಾನವಿದೆ ಎಂಬ ನೆನಪಾಗಿ ಮಾತ್ರ ಇರುತ್ತದೆ. ಸಂಭ್ರಮದ ಆಚರಣೆಗಳಲ್ಲಿ ಸುಮಾರು ಮೂಲ್ಕಿ ಹೊಳೆಯವರೆಗೆ ರೂಢಿಯಲ್ಲಿರುವ ಒಂದು ವಿಧಿಯಾಚರಣೆ ಮಾರಣಕಟ್ಟೆಗೆ ಹೋಗುವುದು ಅಥವಾ ’ಬಡಕಾಯಿ ಪೋಪಿನಿ’. ಅಲ್ಲಿ ಹೂ ಒಪ್ಪಿಸುವುದು, ಹರಿವಾಣ ನೈವೇದ್ಯ ಸಮರ್ಪಿಸುವುದು. ಪ್ರಸಾದ ತಂದು ಮನೆಯಲ್ಲಿ ’ಗಡಿ ಆಹಾರ’ ಕೊಡುವ ಒಂದು ವಿಶೇಷ ಪದ್ಧತಿ ರೂಢಿಯಲ್ಲಿದೆ. ’ಎಡೆಬಡಿಸಿ’ ಇಟ್ಟು ಕುಟುಂಬಸ್ಥರು, ನೆಂಟರಿಷ್ಟರು ಸೇರಿ ನಡೆಯುವ ಈ ಆಚರಣೆ ಇಂದಿಗೂ ಶ್ರದ್ಧೆ ಭಕ್ತಿಯಿಂದ ವಾರ್ಷಿಕವೆಂಬಂತೆ ನೆರವೇರುತ್ತದೆ. ಇದಕ್ಕೆ ಮಕರ ಸಂಕ್ರಮಣ ಪ್ರಶಸ್ತಕಾಲ. ಮಾರಣಕಟ್ಟೆಯ ಹೆಸರು ಹೇಳಿ ಯಾರೂ ಶಾಪ ಹಾಕಲಾರರು. ವಾಕ್ದೋಷ ನಿವಾರಣೆ ಈ ಸಂದರ್ಭದಲ್ಲಿ ಮಾಡಿಸಿಕೊಳ್ಳುವ ಪರಿಪಾಠವಿದೆ. ಲೇಖನ :ಕೆ.ಎಲ್.ಕುಂಡಂತಾಯ
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

Posted On: 13-01-2022 06:29PM
ಶಿರ್ವ: ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ ಸಂಸ್ಥೆ(ಗ್ಲೋಟಚ್ ಟೆಕ್ನಾಲಜೀಸ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್),ಬಿಇ(ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ(ಸಿಎಸ್),ಎಂಎಸ್ಸಿ (ಸಿಎಸ್), ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ,ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ವತಿಯಿಂದ ಜನವರಿ 13 ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು.
ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆಯಲು ಹಾಗೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ದಿಯ ಸಿಸ್ಟಮ್ಸ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಇಂದು ಸಂವಹನ ಕೌಶಲ್ಯಗಳ ಮಹತ್ವವನ್ನು ಅಭ್ಯರ್ಥಿಗಳು ಅರಿತುಕೊಂಡು ಇಂತಹ ಸಂದರ್ಶನಕ್ಕೆ ಭಾಗವಹಿಸಿ ಉದ್ಯೋಗ ಪಡೆಯಬೇಕು ಎಂದು ಶುಭ ಹಾರೈಸಿದರು. ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು - ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಸಂದರ್ಶನಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬೇಕಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಶ್ರೀ ಲೆಫ್ಟಿನೆಂಟ್ ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ ಸಂಸ್ಥೆಯ ಸೀನಿಯರ್ ಅನಲಿಸ್ಟ್ ಎಚ್.ಆರ್ ಶೀತಲ್ ಭಂಡಾರಿ, ಅನಲಿಸ್ಟ್ ಎಚ್.ಆರ್ ಸುರೇಶ್, ತನುಜ ಎನ್ ಸುವರ್ಣ, ಉಪನ್ಯಾಸಕರಾದ ಸುಷ್ಮಾ, ಪ್ರಕಾಶ್ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ್, ದೀಕ್ಷಾ ಪಿಜಿ, ದ್ಯುತಿಶ್ರೀ, ಹಾರ್ದಿಕ್ ಸಾಲಿಯಾನ್, ಸನತ್ ಕುಮಾರ್ ಶೆಟ್ಟಿ ಸಹಕರಿಸಿದರು. ದೀಪಿಕಾ ಮತ್ತು ಬಳಗ ಪ್ರಾರ್ಥಿಸಿ, ಪ್ರಿಯಾಂಕ ಸ್ವಾಗತಿಸಿ, ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ರಮಿಜಿಯಾ ವಂದಿಸಿದರು.
ವರುಣ ಆಳ್ವರನ್ನು ಅಭಿನಂದಿಸಿದ ಕಮಿಷನರ್

Posted On: 13-01-2022 05:05PM
ಮಂಗಳೂರು : ಮೊಬೈಲ್ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರುಣ ಆಳ್ವ ARSI ಇವರು ಬೆನ್ನಟ್ಟಿ, ಆರೋಪಿಗಳನ್ನು ಪತ್ತೆ ಹಚ್ಚಿ ಅವರಲ್ಲಿದ್ದ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಶ್ಲಾಘನೀಯ ಕರ್ತವ್ಯವನ್ನು ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪೋಲಿಸ್ ಕಮಿಷನರ್ ಶಶಿಕುಮಾರ್ ಅಭಿನಂದಿಸಿದರು.
ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳ್ಳನನ್ನು ಸೀನಿಮಿಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಮಂಗಳೂರು ಪೊಲೀಸ್
Posted On: 13-01-2022 12:43PM
ದಿನಾಂಕ 12/01/2022 ರಂದು ಮಧ್ಯಾಹ್ನದ ಸಮಯದಲ್ಲಿ ನೆಹರೂ ಮೈದಾನದ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಬೊಬ್ಬೆ ಹೊಡೆದು ಓಡುತ್ತಾ ಪರಿಸರದ ಸಾರ್ವಜನಿಕರಿಗೆ ಆತಂಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾ ಪರಾರಿಯಾಗಲು ಯತ್ನಿಸಿದಾಗ ಪೊಲೀಸ್ ಕಮಿಷನರ್ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಬಿಹಾರಿ ಮೂಲದ ವ್ಯಕ್ತಿಯ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಮೂವರು ವ್ಯಕ್ತಿಗಳು ದರೋಡೆ ಮಾಡಿ ಪರಾರಿಯಾಗಿರುತ್ತಾರೆ ಎಂದು ತಿಳಿಸಿದಾಗ ಅಲ್ಲೇ ಇದ್ದ ಆರೋಪಿ ಶಮಂತ್ (20 ವರ್ಷ) ನನ್ನು ವಶಕ್ಕೆ ಪಡೆದು, ಅವನ ಮುಖಾಂತರ ಆತನ ಇತರ ಸಹಚರರ ಮಾಹಿತಿ ಪಡೆದು, ತಕ್ಷಣವೇ ರೈಲ್ವೇ ನಿಲ್ದಾಣ ಹಾಗೂ ಹಂಪನಕಟ್ಟೆ ಪರಿಸರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇನ್ನೊಬ್ಬ ಆರೋಪಿ ಹರೀಶ್ ಪೂಜಾರಿ (32 ವರ್ಷ) ನನ್ನು ವಶಕ್ಕೆ ಪಡೆಯಲಾಯಿತು. ಆತನ ಜೊತೆ ಇದ್ದ ಇನ್ನೊಬ್ಬ ಆರೋಪಿ ರಾಜೇಶ್ ಎಂಬವನು ಪರಾರಿಯಾಗಿರುತ್ತಾನೆ. ಪರಾರಿಯಾಗಿರುವ ಆರೋಪಿಯ ಬಗ್ಗೆ ಮಾಹಿತಿ ಲಭ್ಯವಾಗಿರುತ್ತದೆ. ದರೋಡೆ ನಡೆಸಿದ ಸೊತ್ತುಗಳಾದ ಸ್ಯಾಮ್ಸಂಗ್ ಮೊಬೈಲ್ ಫೋನನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿರುತ್ತದೆ.
ಆರೋಪಿಗಳು 1) ಹರೀಶ್ ಪೂಜಾರಿ (32 ವರ್ಷ), ಪಾಲನೆ, ನೀರುಮಾರ್ಗ, ಕುಡುಪು, ಮಂಗಳೂರು. 2) ಶಮಂತ್ (20 ವರ್ಷ), ಅತ್ತಾವರ, ಬಾಬುಗುಡ್ಡೆ, ಮಂಗಳೂರು.
ಹೊಸಮಾರಿಗುಡಿ ನವನಿರ್ಮಾಣ : ಆರ್ಥಿಕ ಕ್ರೋಡಿಕರಣಕ್ಕೆ ಆರ್ಥಿಕ ಸಮಿತಿಯ ಸಮಾಲೋಚನಾ ಸಭೆ

Posted On: 12-01-2022 10:11PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಆರ್ಥಿಕ ಸಮಿತಿಯ ಪದಾಧಿಕಾರಿಗಳ ಮತ್ತು ಒಂಬತ್ತು ತಂಡಗಳ ಸಂಚಾಲಕರ ಸಭೆಯು ಜನವರಿ 11ರಂದು ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿಯವರು ದೇವಿಯ ಅಭಯ ವಾಕ್ಯದಂತೆ ಪ್ರತಿಯೊಬ್ಬರ ಮನೆ- ಮನಗಳಿಗೆ ಸುದ್ದಿ ತಲುಪಿಸುವುದು ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವೆಲ್ಲರೂ ಐಕ್ಯ ಮತದಿಂದ ಪ್ರತಿಯೊಬ್ಬ ಭಕ್ತರನ್ನು ಸಂಪರ್ಕಿಸಿ ಸುದ್ದಿ ತಲುಪಿಸಿ ದೇಗುಲದ ನವನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ಗೌರವಾಧ್ಯಕ್ಷರಾದ ಮನೋಹರ್ ಶೆಟ್ಟಿ, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕೊಲ್ಯ, ಸಂದೀಪ್ ಶೆಟ್ಟಿ ಮುಂಬೈ (ಶಿರ್ವ), ರವಿರಾಜ್ ಶೆಟ್ಟಿ ಮತ್ತು ಒಂಬತ್ತು ತಂಡಗಳ ಮುಖ್ಯ ಸಂಚಾಲಕರು ಹಾಗೂ ಸಂಚಾಲಕರುಗಳು ಉಪಸ್ಥಿತರಿದ್ದರು.
ಉಡುಪಿ : ರಾಷ್ಟ್ರೀಯ ಯುವ ದಿನಾಚರಣೆ

Posted On: 12-01-2022 08:59PM
ಉಡುಪಿ :- ಸ್ವಾಮಿ ವಿವೇಕಾನಂದರ ಆದಶ೯ಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ .ಮನೋಬಲ, ದೇಹಬಲ ಅದೇ ರೀತಿ ಶಿಸ್ತು ಅವಕಾಶ ಹಾಗೂ ಸೇವಾ ಮನೋಭಾವ ಗಳ ಬಗ್ಗೆ ಸ್ವಾಮೀಜಿಯವರು ನಮಗೆ ಹೇಳಿದ್ದಾರೆ ಅದನ್ನು ಅಳವಡಿಸಿಕೊಳ್ಳಿ ಎಂದು ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಡಾII ವಿಜಯ್ ನೆಗಳೂರು ಹೇಳಿದರು. ಅವರು ಜನವರಿ 12 ರಂದು ಕ್ರಿಶ್ಚಿಯನ್ ಪ.ಪೂ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದ ಜಯಂತಿ ಕಾಯ೯ಕ್ರಮದಲ್ಲಿ ಮಾತನಾಡಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ವಹಿಸಿದ್ದರು. ಈ ಸಂದಭ೯ದಲ್ಲಿ ವಿದ್ಯಾಥಿ೯ಗಳಿಗೆ ಭಾಷಣ ಸ್ಪರ್ಧೆ ನಡೆಯಿತು.
ವೇದಿಕೆಯಲ್ಲಿ ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕವಾ೯ಲು, ಕಿರಣ್ ಭಟ್, ಸಂದೀಪ್ ಕುಮಾರ್, ವೀಕ್ಷಿತ್ ಪೂಜಾರಿ, ಡಾII ಸಮದುಡು ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ನಾಗರಾಜ್ ನಿರೂಪಿಸಿ, ವಂದಿಸಿದರು.
ಶಿರ್ವ : ಎಮ್ ಎಸ್ ಆರ್ ಎಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

Posted On: 12-01-2022 08:52PM
ಶಿರ್ವ : ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಇಲ್ಲಿಯ ವಿದ್ಯಾರ್ಥಿ ಸಂಘವನ್ನು ಉಡುಪಿ ಜಿಲ್ಲೆ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ, ಕಾಪು ಉದ್ಘಾಟಿಸಿ, ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಯನಾ ಎಂ.ಪಕ್ಕಳ ವಹಿಸಿದ್ದರು.
ಈ ಸಂದರ್ಭ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಹೇಮಲತಾ ಶೆಟ್ಟಿ, ವಿದ್ಯಾರ್ಥಿಗಳಾದ ಗಣೇಶ್, ಆಕಾಶ್ ಶೆಟ್ಟಿ, ವಿಜಯಲಕ್ಷ್ಮಿ, ಆಡಳಿತ ಮಂಡಳಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
25 ಸಾವಿರ ಮೌಲ್ಯದ ಹಸುವೊಂದನ್ನು ಯಶೋಧ ಆಚಾರ್ಯರಿಗೆ ನೀಡಿದ ದಾನಿಗಳು

Posted On: 12-01-2022 07:47PM
ಕಾರ್ಕಳ : ಕಾರ್ಕಳ ಮಿಯಾರು ಕಜೆ ಎಂಬಲ್ಲಿಯ ಯಶೋಧ ಆಚಾರ್ಯ ಕುಟುಂಬಕ್ಕೆ ಸೇರಿದ 16 ಗೋವುಗಳನ್ನು ಒಂದುವರೆ ವರುಷದ ಅವಧಿಯಲ್ಲಿ ಗೋ ಕಳ್ಳರು ಕದ್ದೊಯ್ದಿದ್ದು, ಸಂಕಷ್ಟದಲ್ಲಿರುವ ಮಹಿಳೆಯ ಕುಟುಂಬಕ್ಕೆ ಸ್ಪಂದಿಸಿ ಹಲವರು ಗೋವು,ಮೇವುಗಳನ್ನು ನೀಡಿ ಸ್ಪಂದಿಸುತ್ತಿದ್ದಾರೆ.
ಗುರುವಾರ ಕಾಪು ತಾಲೂಕು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಆಚಾರ್ಯ ಓಂ ಸಾಯಿ ಪಾಂಗಾಳ ಅವರು ಸುಮಾರು 25 ಸಾವಿರ ಕ್ರಯದ ಹಸುವೊಂದನ್ನು ದಾನವಾಗಿ ನೀಡಿದರು. ಜತೆಗೆ ಮೇವು, ಹಿಂಡಿಗಳನ್ನು ನೀಡಿ ಸಹಕರಿಸಿದರು.
ಗೋವುಗಳನ್ನೇ ಆಧಾರವಾಗಿರಿಸಿಕೊಂಡು ಬದುಕು ಕಟ್ಟಿಕೊಂಡ ಬಡ ಮಹಿಳೆ ಗೋವುಗಳನ್ನು ಕಳೆದುಕೊಂಡು ತೀರಾ ಸಂಕಷ್ಟದಲ್ಲಿದೆ. ಇಂತಹ ಕುಟುಂಬಕ್ಕೆ ನೆರವು ನೀಡುವಲ್ಲಿ ನಾವೆಲ್ಲರು ಕೈ ಜೋಡಿಸಬೇಕಿದೆ ಎಂದು ಹೇಳಿ ಹಾರೈಸಿದರು.
ಈ ಸಂದರ್ಭ ಪ್ರವೀಣ್ ಶೆಟ್ಟಿ ಕಾರ್ಕಳ, ರಾಘವೇಂದ್ರ ಅಮೀನ್, ಅಜಿತ್ ಮೆಂಡನ್, ಪ್ರಸಾದ್ ಪೂಜಾರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು ಮೊದಲಾದವರು ಉಪಸ್ಥಿತರಿದ್ದರು.
ವಿವೇಕಾನಂದರ ಚಿಂತನೆಗಳಿಂದ ಯುವ ಜನತೆ ಸ್ಫೂರ್ತಿ ಪಡೆಯಬೇಕು : ರಘುಪತಿ ಭಟ್

Posted On: 12-01-2022 07:11PM
ಉಡುಪಿ : ಯುವ ಜನತೆ ವಿವೇಕಾನಂದರ ಚಿಂತನೆಗಳಿಂದ ಪೇರಿತರಾಗಿ ಸ್ಫೂರ್ತಿ ಪಡೆದು ನಾಗರೀಕ ಸೇವಾ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ, ನೆಹರೂ ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ವಾರ್ತಾ ಮತ್ತು ಪ್ರಸಾರ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು (ಲೀಡ್ ಕಾಲೇಜು), ಡಾ.ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಪೂರ್ಣಪ್ರಜ್ಞ ಕಾಲೇಜು, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ, ಸೈಂಟ್ ಮೇರಿಸ್ ಕಾಲೇಜು ಶಿರ್ವ ಹಾಗೂ ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಆಜಾದ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯ ಯುವ ಜನತೆ ಬುದ್ಧಿವಂತರಾಗಿದ್ದರೂ ಸಹ ನಾಗರೀಕ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಯುವ ಜನತೆಗೆ ನಾಗರೀಕ ಸೇವಾ ಪರೀಕ್ಷೆ ಕುರಿತಂತೆ ಜಿಲ್ಲಾಡಳಿತದ ಮೂಲಕ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಯುವ ಜನತೆ ಇದರ ಸದುಪಯೋಗ ಪಡೆದುಕೊಂಡು, ನಾಗರೀಕ ಸೇವೆಯ ಮೂಲಕ ವಿವೇಕಾನಂದರ ಆಶಯದಂತೆ ಉತ್ತಮ ಸಮಾಜ, ಸದೃಢ ದೇಶ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ರಘುಪತಿ ಭಟ್ ಹೇಳಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ತಾನು ನಾಗರೀಕ ಸೇವಾ ಪರೀಕ್ಷೆ ಎದುರಿಸಲು ವಿವೇಕಾನಂದರ ಚಿಂತನೆಗಳೇ ಪ್ರೇರಣೆ. ವಿವೇಕಾನಂದರ ನಿನ್ನನ್ನು ನೀನು ನಂಬು ಹಾಗೂ ಎದ್ದೇಳು ಗುರಿ ಮುಟ್ಟುವವರೆಗೆ ನಿಲ್ಲದಿರು ಎಂಬ ಸ್ಫೂರ್ತಿದಾಯಕ ಆದರ್ಶದ ಮಾತುಗಳು ಸರ್ವಕಾಲಕ್ಕೂ ಸಮ್ಮತವಾಗಿವೆ. ಜಿಲ್ಲೆಯ ಯುವಜನತೆಯು ಜಿಲ್ಲಾಡಳಿತದ ಎಲ್ಲಾ ಕಾರ್ಯಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದು, ಕ್ಲೀನ್ ಇಂಡಿಯಾ ಮತ್ತು ಫಿಟ್ ಇಂಡಿಯಾ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಸಹಕಾರ ನೀಡಿದ್ದಾರೆ. ಜಿಲ್ಲಾಡಳಿತ ಕೂಡಾ ಜಿಲ್ಲೆಯ ಯುವ ಜನತೆಗೆ ನಾಗರೀಕ ಸೇವಾ ಪರೀಕ್ಷೆಗೆ ಉಚಿತ ತರಬೇತಿ ಆಯೋಜಸಿದ್ದು, ಇತ್ತೀಚೆಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 500 ಕ್ಕೂ ಹೆಚ್ಚು ಯುವಜನರಿಗೆ ಉದ್ಯೋಗ ದೊರಕಿಸಲಾಗಿದೆ. ಕೋವಿಡ್-19 ಎದುರಿಸಲು ಯುವ ಜನತೆಯ ಸಹಕಾರ ಅಗತ್ಯವಾಗಿದ್ದು, ಎಲ್ಲಾ ಯುವ ಜನರು 100% 2 ಡೋಸ್ ಕೋವಿಡ್ ಲಸಿಕೆ ಪಡೆಯಬೇಕು ಎಂದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಯುವ ಜನತೆ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ, ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ, ವಿವೇಕಾನಂದ ಅವರು ರಾಷ್ಟçದ ಯುವಜನತೆಯ ಐಕಾನ್ ಆಗಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯ 62.5% ರಷ್ಟಿರುವ ಯುವ ಜನತೆ, ವಿವೇಕಾನಂದರ ಆಶಯದಂತೆ ವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಂಡು, ದೇಶದ ಬಗ್ಗೆ ಚಿಂತನೆ ನಡೆಸಿದ್ದಲ್ಲಿ ಸಮೃದ್ಧ, ಸದೃಢ, ಸಶಕ್ತ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫೆçಡ್ ಡಿಸೋಜಾ ಸ್ವಾಗತಿಸಿದರು. ಪ್ರಾಧ್ಯಾಪಕ ರಾಜೇಂದ್ರ ನಿರೂಪಿಸಿ, ವಂದಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 12-01-2022 07:06PM
ಉಡುಪಿ : ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅವರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಬಗ್ಗೆ ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್ಗಳ ಮಾಲೀಕರು ಮತ್ತು ವೈದ್ಯರಿಗೆ ಏರ್ಪಡಿಸಿದ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದರು.
ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಮತೋಲನ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇವುಗಳಲ್ಲಿ ಏರುಪೇರಾದರೆ ಅನೇಕ ಬದಲಾವಣೆಗಳು ಸಮಾಜದಲ್ಲಿ ಉಂಟಾಗುತ್ತವೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ 1000 ಗಂಡು ಮಕ್ಕಳಿದ್ದಾರೆ. 935 ಹೆಣ್ಣುಮಕ್ಕಳ ಸಂಖ್ಯೆಯಿದೆ ಎಂದರು. ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಆರೋಪಿಗಳಿಗೆ 10 ವರ್ಷ ಜೈಲು ಹಾಗೂ ದಂಡ ವಿಧಿಸಲಾಗುವುದು ಎಂದ ಅವರು ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಸರ್ಕಾರ ಸೂಚಿಸಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಒಂದೊಮ್ಮೆ ಪಾಲಿಸದಿದ್ದಲ್ಲಿ ಅಂತಹವರ ನೊಂದಣಿಯನ್ನು ರದ್ದುಪಡಿಸಲಾಗುವುದು ಎಂದರು.
ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವ ರೀತಿಯಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಿದಲ್ಲಿ ಆಗುವ ಶಿಕ್ಷೆಯ ಬಗ್ಗೆ ಸೂಚನಾ ಫಲಕಗಳನ್ನು ತಪ್ಪದೇ ಅಳವಡಿಸಬೆಕು. ಸ್ಕಾö್ಯನಿಂಗ್ ಕಾರ್ಯವನ್ನು ಕೈಗೊಳ್ಳುವ ವೈದ್ಯರ ಸಲಹಾ ಚೀಟಿ ಹೊಂದಿದಲ್ಲಿ ಮಾತ್ರ ಸ್ಕ್ಯಾನಿಂಗ್ ಕಾರ್ಯವನ್ನು ಮಾಡಬೇಕು ಎಂದರು. 18 ವರ್ಷದ ಒಳಗಿನವರು ಗರ್ಭಧಾರಣೆಯಾಗಿ ಅಥವಾ ಇನ್ನಿತರೆ ಕಾರಣಗಳಿಂದ ಪರೀಕ್ಷೆಗೆ ಬಂದಲ್ಲಿ ಅವರುಗಳಿಗೆ ಸ್ಕ್ಯಾನಿಂಗ್ ಕಾರ್ಯ ಕೈಗೊಳ್ಳಬೇಕು. ಗರ್ಭಧಾರಣೆಯಾಗಿರುವ ಬಗ್ಗೆ ಕಂಡುಬಂದಲ್ಲಿ, ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಹಾಲಿ 75 ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಪ್ರತಿವರ್ಷ ನಿಗಧಿತ ಕಾಲಾವಧಿಯೊಳಗೆ ಅನುಮತಿಯನ್ನು ನವೀಕರಣಗೊಳಿಸಿಕೊಳ್ಳಬೇಕು. ಪರೀಕ್ಷೆ ಮಾಡುವ ತಜ್ಷರು ಬದಲಾವಣೆ ಆದಾಗ ಸಹ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು. ಕಾರ್ಯಾಗಾರದಲ್ಲಿ ಜಿಲ್ಲಾ ಪಿ.ಸಿ.ಪಿ.ಎನ್.ಡಿ.ಟಿ. ಸಲಹಾ ಸಮಿತಿ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಜಿಲ್ಲೆಯ ವಿವಿಧ ಸ್ಕ್ಯಾನಿಂಗ್ ಸೆಂಟರ್ಗಳ ಮಾಲೀಕರು ಮತ್ತು ವೈದ್ಯರು ಉಪಸ್ಥಿತರಿದ್ದರು. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಬಗ್ಗೆ ವಕೀಲೆ ಮೇರಿ ಶ್ರೇಷ್ಠ ಉಪನ್ಯಾಸ ನೀಡಿದರು.