Updated News From Kaup
92ನೇ ಹೇರೂರು :ಬಂಟಕಲ್ಲು- ವಿಕಾಸ ಸೇವಾ ಸಮಿತಿ, ದಾನಿಗಳ ನೆರವಿನಿಂದ ನೀಡಲ್ಪಟ್ಟ 5 ನಾಮ ಫಲಕದ ಅನಾವರಣ
Posted On: 13 Mar 2022, 09:26 PM
ಕಾಪು : ನಾನೇ ಎಂಬ ಭಾವವನ್ನು ಬಿಟ್ಟು ನಾವು ಎಂಬ ಭಾವನೆ ಇದ್ದರೆ ದೈವಾನುಗ್ರಹ ಸದಾ ನಮಗಿರುತ್ತದೆ ಎಂದು ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಶೆಟ್ರವರು ಹೇಳಿದರು. ಅವರು ಬಂಟಕಲ್ಲು- ವಿಕಾಸ ಸೇವಾ ಸಮಿತಿ 92ನೇ ಹೇರೂರು ಇದರ ವತಿಯಿಂದ ದಾನಿಗಳ ನೆರವಿನಿಂದ ಕೊಡಮಾಡಿದ 5 ನಾಮ ಫಲಕದ ಅನಾವರಣವನ್ನು ನೇರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೇರೂರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಧೀರಜ್ ರವರು ಮಾತನಾಡಿ ಸ್ಥಾಪನೆಗೊಂಡು 2 ವರ್ಷಗಳ ಅವಧಿಯಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರ ಸಹಕಾರ ನಿಮಗೆ ಸದಾ ಇರಲಿ ಎಂದು ಶುಭ ಹಾರೈಸಿದರು. ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ವಿಜಯಾ ವಿಘ್ನೇಶ್ವರ ಆಚಾರ್ಯ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಮಾಧವ ಆಚಾರ್ಯ ಸ್ವಾಗತಿಸಿದರು. ಮಹಿಳಾ ಬಳಗದ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯೆ ಮಂಜುಳಾ ಗಣೇಶ್ ಆಚಾರ್ಯ ವಂದಿಸಿದರು.
ಶಿರ್ವದ ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ವತಿಯಿಂದ ಧರ್ಮಜಾರಂದಾಯ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ
Posted On: 13 Mar 2022, 02:45 PM
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಶಿರ್ವ ಶ್ರೀ ಧರ್ಮಜಾರಂದಾಯ ನೇಮೋತ್ಸವದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಸತತ ಮೂರು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಯಿತು.
ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ಪಾಸ್ಕಲ್ ಡೇಸಾ ನಿಧನ
Posted On: 13 Mar 2022, 02:39 PM
ಶಿರ್ವ: ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ಪಾಸ್ಕಲ್ಡೇಸಾ (67) ಅವರು ಮಾ. 13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ಪ್ರಸಿಲ್ಲಾ ಡೇಸಾ ,ಪುತ್ರ ಆರ್ಥೋಪೇಡಿಕ್ ಸರ್ಜನ್ ಡಾ| ಪ್ರಶಾಂತ್ ಡೇಸಾ ಮತ್ತು ಪುತ್ರಿ ವೈದ್ಯೆ ಡಾ|ಪ್ರೀಮಾ ಡೇಸಾ ಅವರನ್ನು ಅಗಲಿದ್ದಾರೆ. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 35 ವರ್ಷಗಳ ಕಾಲ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅವರು ಪ್ರಭಾರ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ವಿವಿ ವಾಣಿಜ್ಯ ಪರೀಕ್ಷಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ರು. ಕಾಲೇಜಿನಲ್ಲಿ 1984ರಲ್ಲಿ ಎನ್ಸಿಸಿ ಘಟಕ ಪ್ರಾರಂಭವಾದಂದಿನಿಂದ 29 ವರ್ಷಗಳ ಕಾಲ ಎನ್ಸಿಸಿ ಘಟಕವನ್ನು ಮುನ್ನಡೆಸಿ ಮೇಜರ್ ಆಗಿ ನಿವೃತ್ತರಾಗಿದ್ದರು. ಕಾಲೇಜಿನ ಎನ್.ಸಿ.ಸಿ ಘಟಕ ಮತ್ತು ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 24 ರಕ್ತದಾನ ಶಿಬಿರಗಳನ್ನು ಆಯೋಜಿಸಿ ಕೆಎಂಸಿ ಬ್ಲಡ್ ಬ್ಯಾಂಕ್ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಬ್ಯಾಂಕ್ಗೆ ಸಾವಿರಾರು ಯೂನಿಟ್ ರಕ್ತ ವನ್ನು ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ರೋಟರಿ ಕಲ್ಯಾಣಪುರದಿಂದ ವಿಶ್ವ ಮಹಿಳಾ ದಿನಾಚರಣೆ ; ಆಶಾ ಕಾರ್ಯಕರ್ತೆಯರಿಗೆ ಸನ್ಮಾನ
Posted On: 12 Mar 2022, 11:11 PM
ಉಡುಪಿ : ರೋಟರಿ ಕಲ್ಯಾಣಪುರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ 2022 ಪ್ರಯುಕ್ತ ಮಾಚ್೯ 10ರಂದು ಕ್ಲಬ್ ನ ಸಭಾಂಗಣದಲ್ಲಿ ಅಧ್ಯಕ್ಷರಾದ ಶಂಭು ಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ, ಉಪ್ಪೂರು, ಮತ್ತು ಹಾವಂಜೆ ಗ್ರಾಮದ 11 ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಅವರ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ರಾಜಾರಾಂ ಭಟ್, ನಿಕಟಪೂರ್ವ ಜಿಲ್ಲಾ ಗವರ್ನರ್ ಪದ್ಮನಾಭ ಕಾಂಚನ್, ಸಹಾಯಕ ಗವರ್ನರ್ ರವರು ಭಾಗವಹಿಸಿ ಶುಭ ಹಾರೈಸಿದರು. ನಿಯೋಜಿತ ಅಧ್ಯಕ್ಷರಾದ ಶಾರ್ಲೆಟ್ ಲೂವಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸೇನಾನಿ ಬ್ರಯಾನ್ ಡಿಸೋಜರವರು ಮಹಿಳಾ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ವೃತ್ತಿ ಸೇವೆ ನಿರ್ದೇಶಕರಾದ ಶಂಕರ್ ಸುವರ್ಣ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಅಲೆನ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ವಂದಿಸಿದರು.
ಮಾಚ್೯ 13 : ಪಾಂಗಾಳ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಹರಕೆಯ ಉತ್ಸವ, ರಂಗಪೂಜೆ, ಬ್ರಹ್ಮಮಂಡಲ ಸೇವೆ
Posted On: 12 Mar 2022, 11:04 PM
ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಾಚ್೯ 13, ಭಾನುವಾರದಂದು ವೈಭವದ ಒಂದು ದಿನದ ಹರಕೆಯ ಉತ್ಸವವು ಮಂಡೇಡಿ ಬಾಲಟ್ಟ ಮನೆ ಕಲ್ಯಾಣಿ ಶೆಟ್ಟಿ ಹಾಗೂ ಇವರ ಕುಟುಂಬಸ್ಥರ ಸೇವಾರ್ಥವಾಗಿ ಜರಗಲಿದೆ. ಬೆಳಗ್ಗೆ ಪಂಚ ವಿಂಶತಿ ಕಲಶ ಪ್ರಧಾನ ಹೋಮ , ಗಣಯಾಗ ದಿಂದ ಪ್ರಾರಂಭಗೊಂಡು 10:00 ಗಂಟೆಗೆ ಕಲಶಾಭಿಷೇಕ ನಂತರ 11 ಗಂಟೆಗೆ ಮಹಾಪೂಜೆ ನಡೆದು ಬಲಿ ಹೊರಟು ಪಲ್ಲಪೂಜೆ ನಡೆದು ಸರಿಯಾಗಿ 12:30 ಗೆ ಬ್ರಾಹ್ಮಣ ಸುಹಾಸಿನಿ ಆರಾಧನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿರುವುದು. ರಾತ್ರಿ 07:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 08-30 ಕ್ಕೆ ವೈಭವದ ಬೈಗಿನ ಬಲಿಯು ನಡೆಯಲಿರುವುದು. ರಾತ್ರಿ 11 ಕ್ಕೆ ರಂಗಪೂಜೆ , ರಾತ್ರಿ 12 ಕ್ಕೆ ವೈಭವದ ಬ್ರಹ್ಮಮಂಡಲ ಸೇವೆ ನಡೆದು ರಾತ್ರಿ 3:30 ಕ್ಕೆ ಶ್ರೀ ಭೂತಬಲಿ ಮೂಲಕ ಒಂದು ದಿನದ ಶೈವೋತ್ಸವವು ಸಮಾಪ್ತಿಯಾಗುತ್ತದೆ. ಭಕ್ತಾದಿಗಳು , ಆದಿ ಭಜಕರು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಸೇವಾರ್ಥಿಗಳು ಹಾಗೂ ದೇವಸ್ಥಾನದ ಪತ್ರಿಕಾ ಪ್ರಕಟಣೆಯು ತಿಳಿಸಿದೆ.
ಸಾರ್ವಜನಿಕರಿಗೆ ಕಂದಾಯ ಸೇವೆಗಳು ಸಮರ್ಪಕವಾಗಿ ತಲುಪಬೇಕು : ಶಾಸಕ ರಘುಪತಿ ಭಟ್
Posted On: 12 Mar 2022, 08:00 PM
ಉಡುಪಿ : ಸಾರ್ವಜನಿಕರಿಗೆ ಕಂದಾಯ ಇಲಾಖೆ ವ್ಯಾಪ್ತಿಯ ಎಲ್ಲಾ ಸೇವೆಗಳನ್ನು ಸಮರ್ಪಕವಾಗಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ , ಸಕಾಲದಲ್ಲಿ ಒದಗಿಸುವ ಮೂಲಕ, ಕಂದಾಯ ಸಮಸ್ಯೆಗಳನ್ನು ಸಮರ್ಪಕ ರೀತಿಯಲ್ಲಿ ಬಗೆಹರಿಸಲು, ಅಧಿಕಾರಿಗಳು ಪ್ರಾಮಾಣಿಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಯಡಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ರೈತರ ಮನೆಗಳಿಗೆ, ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತೆರಳಿ ವಿತರಿಸಿ, ನಂತರ ತೆಂಕನಿಡಿಯೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ರೂಪಿಸಿರುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯು ಸಾರ್ವಜನಿಕರಿಗೆ ಬಹುಪಯೋಗಿ ಮತ್ತು ದೂರದೃಷ್ಠಿ ಹೊಂದಿರುವ ಜನಪರ ಕಾರ್ಯಕ್ರಮವಾಗಿದ್ದು, ಹಲವು ವರ್ಷಗಳಿಂದ ಕಂದಾಯ ಇಲಾಖೆಯಿಂದ, ತಮಗೆ ಅಗತ್ಯವಿರುವ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಿರುವ ರೈತರ ಮನೆ ಬಾಗಲಿಗೆ ತೆರಳಿ , ಅವರಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಉಚಿತವಾಗಿ ನೀಡುತ್ತಿರುವುದು ದೇಶದಲ್ಲೇ ಪ್ರಥಮವಾಗಿದೆ ಎಂದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವುದರ ಮೂಲಕ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಉತ್ತಮ ರೀತಿಯಲ್ಲಿ ತಲುಪಿಸಲು ಸಾಧ್ಯವಾಗಲಿದೆ, ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಕಡತ ವಿಲೇವಾರಿ ಕಾರ್ಯಕ್ರಮ ಅಯೋಜಿಸುವ ಮೂಲಕ ಹಲವು ವರ್ಷಗಳಿಂದ ಬಾಕಿ ಇರುವ ಸಾರ್ವಜನಿಕರ ಕಡತಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ನಿಗಧಿತ ಶುಲ್ಕ ಪಾವತಿ ಮತ್ತು ಕಾಯುವ ಪರಿಸ್ಥಿತಿ ಇತ್ತು, ಆದರೆ ಈ ಯೋಜನೆಯ ಮೂಲಕ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ಅಟ್ಲಾಸ್/ ಹಿಸ್ಸಾ ಸ್ಕೆಚ್ ಗಳನ್ನು ಉಚಿತವಾಗಿ ತಲುಪಿಸಲಾಗುತ್ತಿದೆ. ಈಗ ನೀಡಲಾಗುತ್ತಿರುವ ದಾಖಲಾತಿಗಳಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಸಹ ಅವಕಾಶವಿದೆ. ಬಹುತೇಕ ಸಾರ್ವಜನಿಕರು ತಮಗೆ ಸಂಬಂಧಿಸಿದ ಕಂದಾಯ ದಾಖಲೆಗಳು ಇರುವ ಬಗ್ಗೆ ಮಾಹಿತಿ ಇಲ್ಲದೇ, ವ್ಯಾಜ್ಯದ ಸಂದರ್ಭದಲ್ಲಿ ನ್ಯಾಯಾಲಯಗಳಲ್ಲಿ ತೊಂದರೆಗೀಡಾಗಬೇಕಾದ ಪರಿಸ್ಥಿತಿಗಳಿದ್ದು, ಈ ಯೋಜನೆಯ ಮೂಲಕ ಅತ್ಯವಶ್ಯಕ ಅಗತ್ಯ ದಾಖಲೆಗಳನ್ನು ಉಚಿತವಾಗಿ, ಮನೆ ಬಾಗಿಲಿನಲ್ಲಿಯೇ ಪಡೆಯಲು ಸಾಧ್ಯವಾಗಿದ್ದು, ಜಿಲ್ಲೆಯ 267 ಗ್ರಾಮಗಳಲ್ಲಿ ಸಾರ್ವಜನಿಕರಿಗೆ ದಾಖಲೆಗಳನ್ನು ವಿತರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಸುರೇಶ್, ಉಪಾಧ್ಯಕ್ಷ ಅರುಣ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಉಡುಪಿ ತಹಸೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ವಂದಿಸಿದರು.
ಮಾಚ್೯ 12ರಂದು ಕಾಪು ತಾಲೂಕಿನಲ್ಲಿ ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಗೆ ಚಾಲನೆ
Posted On: 11 Mar 2022, 09:11 PM
ಕಾಪು : ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ನಿಟ್ಟಿನಲ್ಲಿ ಕಂದಾಯದಾಖಲೆ ಮನೆಬಾಗಿಲಿಗೆ ಯೋಜನೆಯನ್ನು ಮಾಚ್೯ 12 ರಂದು ರಾಜ್ಯಾದ್ಯಂತ ಅನುಷ್ಠಾನ ಗೊಳಿಸಲಾಗುತ್ತಿದೆ. ಅದರಂತೆ ಕಾಪು ತಾಲೂಕು ಮಟ್ಟದಲ್ಲಿ ಕಾಪು ಹೋಬಳಿಯ ಉಳಿಯಾರಗೋಳಿ ಗ್ರಾಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರ ಅಧ್ಯಕ್ಷತೆಯಲ್ಲಿ ಮಾಚ್೯ 12ರಂದು ಪೂರ್ವಾಹ್ನ 11ಘಂಟೆಗೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅದೇ ದಿವಸ ಕಾಪು ತಾಲೂಕಿನ ಇತರೆ ಗ್ರಾಮಗಳಲ್ಲಿಯೂ ಸಹಾ ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕರು ಕಂದಾಯ ದಾಖಲೆಗಳನ್ನು ಮನೆಬಾಗಿಲಿಗೆ ವಿತರಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂದು ಕಾಪು ತಹಶೀಲ್ದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 13 : ಕಳತ್ತೂರು ಪೈಯಾರು ಶ್ರೀ ಮಲೆ ಧೂಮಾವತಿ ದೈವ ಸನ್ನಿಧಿಯಲ್ಲಿ ವಾರ್ಷಿಕ ಮಂಜ
Posted On: 11 Mar 2022, 08:57 PM
ಕಾಪು : ಕಳತ್ತೂರು ಪೈಯಾರು ಶ್ರೀ ಮಲೆಧೂಮಾವತಿ ದೈವ ಸನ್ನಿಧಿಯಲ್ಲಿ ವಾರ್ಷಿಕ ಮಂಜ (ಭೋಗ) ಹಾಗೂ ರಾತ್ರಿ ಅನ್ನದಾನ ಕಾರ್ಯಕ್ರಮ ಮಾರ್ಚ್ 13 ರಂದು ನಡೆಯಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಿ ಶ್ರೀ ದೈವದ ಗಂಧ ಪ್ರಸಾದವನ್ನ ಸ್ವೀಕರಿಸಬೇಕಾಗಿ ವಿನಂತಿಸಿದ್ದಾರೆ.
ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಬೈಂದೂರಿನಲ್ಲಿ ಪರಿಸರ ರಕ್ಷಿಸಿ - ಜೀವನ ಉಳಿಸಿ ಅಭಿಯಾನ
Posted On: 11 Mar 2022, 08:51 PM
ಕುಂದಾಪುರ : ಕೃಷಿ ಮತ್ತು ಸಾಮಾನ್ಯ ಜನ ಜೀವನಕ್ಕೆ ಪೂರಕವಾಗಿರುವ ಅರಣ್ಯ ಭೂಮಿಯನ್ನು ಕೈಗಾರಿಕೆಗೆ ನೀಡುವುದು ಸೂಕ್ತವಲ್ಲ, ಕೈಗಾರಿಕೆಗೆಂದು ಅರಣ್ಯ ನಾಶ ಮಾಡುವುದರಿಂದ ಪ್ರಕೃತಿ ನಾಶದೊಂದಿಗೆ ಜನರ ನಿತ್ಯ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬರಡು ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ಹೇಳಿದರು. ಹಳಗೇರಿಯ ೫೩ ಎಕರೆ ದಟ್ಟ ಅರಣ್ಯ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಕಾದಿರಿಸಿರುವುದನ್ನು ಖಂಡಿಸಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, ವನದುರ್ಗ ರೈತ ಶಕ್ತಿ ಗುಂಪು ಮತ್ತು ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆಯ ಸಹಯೋಗದಲ್ಲಿ ಗುರುವಾರ ನಾಗೂರಿನ ಮಹಾಲಸಾ ಕಲ್ಚರರ್ ಹಾಲ್ ನಲ್ಲಿ ನಡೆದ ಪರಿಸರ ರಕ್ಷಿಸಿ - ಜೀವನ ಉಳಿಸಿ ಅಭಿಯಾನ ಮತ್ತು ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನವಸತಿ ಇಲ್ಲದ ಪ್ರದೇಶ ಬಳಸಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡಿ, ನಮಗೆ ಅರಣ್ಯವೂ ಬೇಕು, ಕೈಗಾರಿಕೆಯೂ ಬೇಕು; ಆದರೆ ಜನರ ಜೀವನಕ್ಕೆ ಸಮಸ್ಯೆಯನ್ನು ಉಂಟು ಮಾಡುವ ಪ್ರದೇಶದಲ್ಲಿ ಕೈಗಾರಿಕೆ ಸರಿಯಲ್ಲ. ಬೈಂದೂರಿನಲ್ಲಿ ಜನವಸತಿ ಇಲ್ಲದ ಜಾಗಗಳಿದ್ದು ಅಲ್ಲಿ ಕೈಗಾರಿಕೆಯನ್ನು ಪ್ರಾರಂಭಿಸಲು ನಮ್ಮ ಬೆಂಬಲ ಇರುತ್ತದೆ ಎಂದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟಿಯಾನ್ ಮಾತನಾಡಿ, ಕೈಗಾರಿಕೆಗೆ ನಮ್ಮ ವಿರೋಧ ಇಲ್ಲ. ಜನರಿಗೆ ತೊಂದರೆಯಾದಾಗ ನ್ಯಾಯ ಒದಗಿಸಲು ಹೋರಾಟ ನಡೆಸುವುದೇ ನಮ್ಮ ಗುರಿ; ಅದರಲ್ಲಿ ಯಶಸ್ವಿಯೂ ಆಗಿದ್ದೇವೆ ಎಂದರು. 'ಖಂಬದಕೋಣೆ ಗ್ರಾ.ಪಂ. ಅಧ್ಯಕ್ಷ ಸುಕೇಶ ಶೆಟ್ಟಿ ಮಾತನಾಡಿ, ಗ್ರಾ. ಪಂ. ನ ಗಮನಕ್ಕೆ ತರದೇ ಅಧಿಕಾರಿಗಳು ಈ ಪ್ರದೇಶವನ್ನು ಕೈಗಾರಿಕೆಗೆ ಕೊಟ್ಟಿದ್ದಾರೆ. ಇದಕ್ಕೆ ಎಲ್ಲ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು. ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಅಖಿಕ ಭಾರತ ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಕ. ರಾ. ವೈ. ಸಂ., ಉಡುಪಿ ಜಿಲ್ಲಾಧ್ಯಕ್ಷ ಡಾ| ಸುಬ್ರಮಣ್ಯ ಭಟ್, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ ದಾಸ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್, ಕಿರಿಮಂಜೇಶ್ವರ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸದಸ್ಯ ಈಶ್ವರ ದೇವಾಡಿಗ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ನರಸಿಂಹ ಹಳಗೇರಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ಅರಣ್ಯ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದರು. ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖ ಹೋರಾಟಗಾರ ನಳಿನ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ವನದುರ್ಗ ರೈತಶಕ್ತಿ ಗುಂಪು ಸಂಯೋಜಕ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ವಂದಿಸಿದರು ಅಗತ್ಯ ಬಿದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಭೆ ತೀರ್ಮಾನಿಸಿತು.
ಮಾಚ್೯ 13 : ಕಾಪು ಶ್ರೀ ಮಾರಿಯಮ್ಮ ದೇವಸ್ಥಾನದ ಆದಿಸ್ಥಳದಲ್ಲಿ ವಾರ್ಷಿಕ ಮಹೋತ್ಸವ
Posted On: 09 Mar 2022, 10:43 PM
ಕಾಪು : ಇಲ್ಲಿನ ಶ್ರೀ ಮಾರಿಯಮ್ಮ ದೇವಸ್ಥಾನದ ಆದಿಸ್ಥಳ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ ಇದರ ವಾರ್ಷಿಕ ಮಹೋತ್ಸವವು ಮಾಚ್೯13 ರಂದು ಜರಗಲಿದೆ. ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ 12:25 ಕ್ಕೆ ಚಂಡಿಕಾ ಪೂರ್ಣಾಹುತಿ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಹಾಗೂ ರಾತ್ರಿ 9:30 ಕ್ಕೆ ಜೋಡಿ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಭಕ್ತಾಭಿಮಾನಿಗಳು ಆಗಮಿಸಿ ಗಂಧ-ಪ್ರಸಾದ ಸ್ವೀಕರಿಸುವಂತೆ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.
