Updated News From Kaup

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಏಪ್ರಿಲ್ 1ರಿಂದ 15ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣ್ಯೋತ್ಸವ, ರಥೋತ್ಸವ, ಚತು:ಪವಿತ್ರ ನಾಗಮಂಡಲೋತ್ಸವ

Thumbnail
Posted On: 28 Mar 2022, 08:34 PM

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ ಇದರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಗಳು ಏಪ್ರಿಲ್ 1 ರ ಶುಕ್ರವಾರದಿಂದ 15 ನೇ ತಾರೀಕಿನವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಜಿರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ|ಜಿ ಶಂಕರ್ ಹೇಳಿದರು. ಅವರು ಗುರುವಾರ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಾಸ್ತು ತಜ್ಞ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಕ್ಷೇತ್ರ ತಂತ್ರಿಗಳಾದ ಶ್ರೀ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆಯವರ ಮಾರ್ಗದರ್ಶನದಲ್ಲಿ ಶಿಲಾಮಯ ಗರ್ಭ ಗುಡಿ, ಶಿಲಾಮಯ ಶ್ರೀ ಭದ್ರಕಾಳಿ ಗುಡಿ, ಶಿಲಾಮಯ ಶ್ರೀ ಪ್ರಸನ್ನ ಗಣಪತಿ ಗುಡಿ, ಶ್ರೀ ನಾಗದೇವರ ಗುಡಿ, ಸುತ್ತುಪೌಳಿ, ಗುರುಪೀಠ, ರಾಜಗೋಪುರ, ಯಾಗಶಾಲೆ, ವಸಂತ ಮಂಟಪ, ರಥಬೀಧಿ, ಸುತ್ತು ಆವರಣ ಗೋಡೆ, ಬಯಲು ರಂಗ ಮಂಟಪ, ಒಳಚರಂಡಿ ವ್ಯವಸ್ಥೆ, ಇಂಟರ್ಲಾಕ್ ಅಳವಡಿಕೆ ಹಾಗೂ ಪುಷ್ಕರಣಿಗಳನ್ನೊಳಗೊಂಡ ರೂಪಾಯಿ 32 ಕೋಟಿ ಅಂದಾಜು ಮೊತ್ತದ ಸಮಗ್ರ ಜೀರ್ಣೋದ್ಧಾರ ಕಾರ್ಯಕೈಗೊಳ್ಳಲಾಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು ಶಿಲೆದಾರು ಶಿಲ್ಪಗಳಿಂದ ಕೂಡಿದ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ, ಶ್ರೀ ನಾಗದೇವರ ಸಹಿತ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವಗಳನ್ನೊಳಗೊಂಡ ವೈಧಿಕ ವಿಧಿ ವಿಧಾನಗಳನ್ನು ಇದೇ ಬರುವ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಹಿರಿಯ ಅರ್ಚಕರಾದ ವೆಂಕಟನರಸಿಂಹ ಉಪಾಧ್ಯಾಯ ಹಾಗೂ ರಾಘವೇಂದ್ರ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಮತ್ತು ಯತಿವರೇಣ್ಯರ ಶುಭಾಶೀರ್ವಾದಗಳೊಂದಿಗೆ ವೈಭವೋಪೇತವಾಗಿ ನಡೆಸಲು ಸಂಕಲ್ಪಿಸಲಾಗಿದೆ ಎಂದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ 2 ರಿಂದ 3 ಲಕ್ಷದಷ್ಟು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದ್ದು ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಮಾರ್ಚ್ 27 ಕ್ಕೆ ಅವಿಭಜಿತ ದ. ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಂದ ಪ್ರಸಾದದ ರೂಪದಲ್ಲಿ ಹೊರೆಕಾಣಿಕೆಯು ಕ್ಷೇತ್ರವನ್ನು ತಲುಪಲಿದೆ. ಈಗಾಗಲೇ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಹೊರೆಕಾಣಿಕೆಗಳು ದೇವಸ್ಥಾನಕ್ಕೆ ತಲುಪಿದೆ. ಕರಾವಳಿ ಭಾಗದ ಭಕ್ತಾದಿಗಳ ಹೊರಕಾಣಿಕೆಯು 2000ಕ್ಕೂ ಮಿಕ್ಕಿದ ವಾಹನಗಳ ಮೂಲಕ ದೇವಸ್ಥಾನದ ಉತ್ತರ ಭಾಗದ ಮೆರವಣಿಗೆಯು ಮೂಳೂರಿನಿಂದ ಹಾಗೂ ದಕ್ಷಿಣ ಭಾಗದ ಮೆರವಣಿಗೆಯು ತೆಂಕ ಎರ್ಮಾಳ್‌ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೊ, ಚೆಂಡೆ, ಭಜನಾಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ. ಅನ್ನ ಛತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ನೂಕು ನುಗ್ಗಲಾಗದಂತೆ ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಿ ಎಲೆ ಊಟ ಮತ್ತು ಬಫೆ ಊಟಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ಬೇಕಾಗುವಷ್ಟು ಪಾರ್ಕಿಂಗ್ ಜಾಗದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನವಾಗಿ ನಿರ್ಮಾಣಗೊಂಡ ಭವ್ಯ ರಾಜಗೋಪುರ ಹಾಗೂ ಸರಕಾರದ ಅನುದಾನದೊಂದಿಗೆ ನಿರ್ಮಾಣಗೊಂಡ ಲಕ್ಷ್ಮೀ ತೀರ್ಥ ಕೆರೆಯು ಏಪ್ರಿಲ್ 1ರ ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಏಪ್ರಿಲ್ 2ರಿಂದ ಏಪ್ರಿಲ್ 15ರತನಕ ಪ್ರತಿದಿನ ಸಂಜೆ ಗಂಟೆ 4 ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾಅನ್ನಸಂತರ್ಪಣೆ ಏಪ್ರಿಲ್ 6ರಂದು ನಡೆಯಲಿದೆ. ವರ್ಷಂಪ್ರತಿ ನಡೆಯುವ ಶ್ರೀಮಹಾಲಕ್ಷ್ಮೀ ರಥೋತ್ಸವ ಹಾಗೂ ಮಹಾಅನ್ನಸಂತರ್ಪಣೆಯು ಏಪ್ರಿಲ್ 13ರಂದು ನಡೆಯಲಿದೆ. ಏಪ್ರಿಲ್ 15ರ ರಾತ್ರಿ ಗಂಟೆ 8ಕ್ಕೆ ಹಾಲಿಟ್ಟು ಸೇವೆ ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎಪ್ರಿಲ್ 16ರ ಬೆಳಗ್ಗೆ ಸಂಪೆ ವೀಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ಶುಭಾಂತ್ಯವಾಗಲಿದೆ. ಏಪ್ರಿಲ್ 15ರ ರಾತ್ರಿ ಗಂಟೆ 8ಕ್ಕೆ ಹಾಲಿಟ್ಟು ಸೇವೆ ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಿರಂತರ 15ದಿನಗಳ ಪರ್ಯಂತ ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಶ್ರೀ ಸಿದ್ಧರಾಮಯ್ಯ, ಹೆ ಚ್ ಡಿ ಕುಮಾರಸ್ವಾಮಿ, ಸಂಸದರುಗಳಾದ ನಳಿನ್ ಕುಮಾರ್ ಕಟೀಲ್, ಶೋಭಾಕರಂದ್ಲಾಜೆ, ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ. ವಿವಿಧ ಮಠಾಧೀಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತೀ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಖ್ಯಾತ ಗಾಯಕರೂ, ಸಂಗೀತ ನಿರ್ದೇಶಕರೂ ಆದ ಗಾನಗಂಧರ್ವ ವಿಜಯ ಪ್ರಕಾಶರವರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಪೂರ್ವಾಹ್ನ ಗಂಟೆ 11.30 ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ಸುಧಾಕರ ಕುಂದರ್, ವಾಸುದೇವ ಸಾಲ್ಯಾನ್, ಮೋಹನ್ ಕರ್ಕೇರಾ, ಭರತ್ ಎರ್ಮಾಳ್, ವಿನಯ್ ಕರ್ಕೇರಾ, ಶಂಕರ್ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

ಯುವವಾಹಿನಿ ಕಾಪು ಘಟಕದ 2022 ನೇ ಸಾಲಿನ ಪದಗ್ರಹಣ, ಸಮ್ಮಾನ

Thumbnail
Posted On: 28 Mar 2022, 08:29 PM

ಕಾಪು,ಮಾ.28 : ಯುವವಾಹಿನಿ (ರಿ.) ಕಾಪು ಘಟಕದ 2022ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾಪು ಜೇಸಿಐ ಭವನದಲ್ಲಿ ಜರಗಿತು. ಸಮಾರಂಭವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ವಕೀಲರಾದ ಸಂಕಪ್ಪ ಭಾಗವಹಿಸಿದ್ದರು. ಸಮ್ಮಾನ : 2021ನೇ ಸಾಲಿನಲ್ಲಿ ಕಾಪು ಪುರಸಭಾ ಚುನಾವಣೆಯಲ್ಲಿ ವಿಜೇತರಾದ ಬಿಲ್ಲವ ಸಮುದಾಯದ ನಾಲ್ವರು ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರತಿಜ್ಞಾ ವಿಧಿ ಬೋಧನೆ : ಕಾಪು ಯುವವಾಹಿನಿ ಘಟಕದ 2022 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಪ್ರತಿಜ್ಞಾವಿಧಿ ಬೋಧಿಸಿದರು. ಅಧಿಕಾರ ಹಸ್ತಾಂತರ : ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಸೌಮ್ಯ ರಾಕೇಶ್ ನೂತನ ಅಧ್ಯಕ್ಷರಾದ ಸಚಿನ್ ಉಚ್ಚಿಲ ಇವರಿಗೆ, ಕಾರ್ಯದರ್ಶಿ ಸುಧಾಕರ ಸಾಲಿಯಾನ್ ನೂತನ ಕಾರ್ಯದರ್ಶಿ ಸುಮಿತ್ರಾರವರಿಗೆ ಅಧಿಕಾರ ಹಸ್ತಾಂತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಯುವವಾಹಿನಿ ಘಟಕದ ಅಧ್ಯಕ್ಷೆ ಸೌಮ್ಯ ರಾಕೇಶ್ ವಹಿಸಿದ್ದರು. ಕಾಪು ಯುವವಾಹಿನಿ ಘಟಕದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಏರ್ಮಾಳ್, ಪತ್ರಕರ್ತ ರಾಕೇಶ್ ಕುಂಜೂರು, ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ಘಟಕದ ಸದಸ್ಯರು ಉಪಸ್ಥಿತರಿದ್ದರು.

ಪಾಂಗಾಳ ಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಹರಕೆಯ ಹೂವಿನ ಪೂಜೆ ಸಲ್ಲಿಸಿದ ಸಚಿವ ಸುನೀಲ್ ಕುಮಾರ್

Thumbnail
Posted On: 27 Mar 2022, 10:38 PM

ಕಟಪಾಡಿ : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಹಾಗೂ ಅವರ ಕುಟುಂಬಸ್ಥರು ಮಾಚ್೯ 27 ರಂದು ಪಾಂಗಾಳ ಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಹರಕೆಯ ಹೂವಿನ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜಯ ಡಿ ಅಮೀನ್, ಶೇಖರ್ ಜಿ ಅಮೀನ್, ಸುಧಾಕರ್ ಡಿ ಅಮೀನ್, ಗರಡಿಯ ಚಾಕರಿ ವರ್ಗ, ಪಕ್ಷದ ಪ್ರಮುಖರು, ಮತ್ತಿತರರು ‌ಉಪಸ್ಥಿತರಿದ್ದರು.

ಅವರಾಲು : ಧೂಮಾವತಿ ದೈವಸ್ಥಾನ - ವರ್ಷಾವಧಿ ನೇಮೋತ್ಸವ

Thumbnail
Posted On: 27 Mar 2022, 06:12 PM

ಹೆಜಮಾಡಿ : ಅವರಾಲು ಶ್ರೀ ಧೂಮಾವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಮಾಚ್೯ 29 ಮತ್ತು 30 ರಂದು ಜರಗಲಿದೆ. ಮಾಚ್೯ 29ರಂದು ಬೆಳಿಗ್ಗೆ ಗಂಟೆ 9 ಕ್ಕೆ ಸ್ಥಳ ಶುದ್ಧಿ, ನವಕ ಕಲಶಾಭಿಷೇಕ, ಗಂಟೆ 11ಕ್ಕೆ ಚಪ್ಪರ ಆರೋಹಣ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಭಂಡಾರ ಇಳಿಯುವುದು, ರಾತ್ರಿ 8ಕ್ಕೆ ಅನ್ನಸಂತರ್ಪಣೆ, ರಾತ್ರಿ 10ರಿಂದ ಗಡುವಾಡು ಸ್ಥಳದಲ್ಲಿ ಶ್ರೀ ಉಳ್ಳಾಯ, ಕೊಡಮಣಿತ್ತಾಯ, ಜಾರಂದಾಯ ಹಾಗೂ ಬಂಟ ದೈವಗಳ ನೇಮೋತ್ಸವ ಜರಗಲಿದೆ. ಮಾಚ್೯ 30 ರಂದು ರಾತ್ರಿ 7ಕ್ಕೆ ಆದಿ ಜನಾರ್ಧನ ಮಕ್ಕಳ ಕುಣಿತ ಭಜನಾ ಮಂಡಳಿ ಶಿಮಂತೂರು ಇವರ ವತಿಯಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಅನ್ನಸಂತರ್ಪಣೆ, ರಾತ್ರಿ 10ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇನ್ನಂಜೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಸಂತಸದ ಶಿಬಿರ - ಸುದರ್ಶನ ಕ್ರಿಯಾ, ಯೋಗ, ಪ್ರಾಣಯಾಮ, ಧ್ಯಾನ, ಜ್ಞಾನಗಳ ಸುಂದರ ಮಿಶ್ರಣ

Thumbnail
Posted On: 25 Mar 2022, 10:36 PM

ಕಾಪು : ಜೀವನದಲ್ಲಿ ಸಂತೋಷ, ಯಶಸ್ವಿ ಮತ್ತು ಆರೋಗ್ಯವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಸಂತಸದ ಶಿಬಿರ (ಸುದರ್ಶನ ಕ್ರಿಯಾ, ಯೋಗ, ಪ್ರಾಣಯಾಮ, ಧ್ಯಾನ, ಜ್ಞಾನಗಳ ಸುಂದರ ಮಿಶ್ರಣ) ಮಾಚ್೯ 28 ರಿಂದ ಏಪ್ರಿಲ್‌ 2ರವರೆಗೆ ಬೆಳಿಗ್ಗೆ ಘಂಟೆ 5 ರಿಂದ 7ರವರೆಗೆ ಇನ್ನಂಜೆ ಶಾಲೆಯ ಹತ್ತಿರದ ದಾಸ ಭವನದಲ್ಲಿ ನಡೆಯಲಿದೆ. ತಕ್ಷಣವೇ ಈ ಶಿಬಿರದಲ್ಲಿ ನೋಂದಾಯಿಸಿ, ಭಾಗವಹಿಸಿ ಜ್ಞಾನದ ಅನುಭವವನ್ನು ಪಡೆದುಕೊಳ್ಳಲು ಸಂಘಟಕರು ವಿನಂತಿಸಿದ್ದಾರೆ. (ವಿ.ಸೂ. : ಶಿಬಿರಾರ್ಥಿಗಳು ಬರುವಾಗ ಬೆಡ್‌ಶೀಟ್ ಮತ್ತು ಕುಡಿಯಲು ನೀರು ತರಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980915511

ಹೆಜಮಾಡಿ : ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಚಾಲನೆ

Thumbnail
Posted On: 22 Mar 2022, 12:03 PM

ಹೆಜಮಾಡಿ : ಸುರತ್ಕಲ್‌ನ ಎನ್.ಐ.ಟಿ.ಕೆ. ಬಳಿಯ ಟೋಲ್ ಗೇಟನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಮಾಚ್೯ 22ರಂದು ಬೃಹತ್ ಪಾದಯಾತ್ರೆಗೆ ವಿವಿಧ ಪಕ್ಷ, ಸಂಘ-ಸಂಸ್ಥೆ ಮತ್ತು ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಹೆಜಮಾಡಿ ಟೋಲ್ ಗೇಟ್ ಬಳಿ ಚಾಲನೆ ನೀಡಲಾಯಿತು. ಹೆಜಮಾಡಿ ಟೋಲ್ ಗೇಟ್ ನಿಂದ ಆರಂಭವಾಗಿ ಸುರತ್ಕಲ್ ಟೋಲ್ ಗೇಟ್ ವರೆಗೆ ಪಾದಯಾತ್ರೆಯು ಸಾಗಲಿದೆ. ಸುಮಾರು ಸಾವಿರಾರು ಮಂದಿಯಷ್ಟು ಸೇರಿದ ಪ್ರತಿಭಟನಾಕಾರರು, ಸಂಸದರು ಮತ್ತು ಶಾಸಕರ ವಿರುದ್ಧ ಘೋಷಣೆಯನ್ನು ಕೂಗಿ ಸುರತ್ಕಲ್ ಟೋಲ್ ತೆರವುಗೊಳಿಸಲು ವಿಳಂಬಿಸಿದ್ದಲ್ಲಿ ಮುಂದೆ ನಡೆಯ ಬಹುದಾದ ದುರಂತಕ್ಕೆ ನೀವೇ ಜವಾಬ್ದಾರಿ ಆಗಲಿದ್ದೀರಿ ಎಂಬುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ರಾಜಕೀಯ ನಾಯಕರು, ನಾಗರಿಕರು ಉಪಸ್ಥಿತರಿದ್ದರು.

ರೋಟರಿ ಸಮುದಾಯ ದಳ ಇನ್ನಂಜೆಯಿಂದ ಇನ್ನಂಜೆ ಪ್ರಾಥಮಿಕ ಆರೋಗ್ಯ ಉಪಕೇಂದ್ರಕ್ಕೆ ಬಿ. ಪಿ. ಆಪರೇಟರ್ ಕೊಡುಗೆ

Thumbnail
Posted On: 21 Mar 2022, 01:26 PM

ಕಾಪು : ರೋಟರಿ ಸಮುದಾಯ ದಳ ಇನ್ನಂಜೆ ಇವರ ವತಿಯಿಂದ ಮಾಲಿನಿ ಶೆಟ್ಟಿ ಇನ್ನಂಜೆ ಇವರ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉಪ ಕೇಂದ್ರವಾದ ಇನ್ನಂಜೆಗೆ ಬಿ. ಪಿ. ಆಪರೇಟರನ್ನು ಪ್ರೈಮರಿ ಹೆಲ್ತ್ ಆಫೀಸರ್ ಶಕುಂತಲಾ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಪಂಚಾಯತ್ ಕಾರ್ಯದರ್ಶಿಯಾದ ಚಂದ್ರಶೇಖರ್ ಸಾಲಿಯಾನ್, ಸದಸ್ಯರಾದ ದಿವೇಶ್ ಶೆಟ್ಟಿ, ಕಮ್ಯುನಿಟಿ ಹೆಲ್ತ್ ಆಫೀಸರ್ ದೀಪಕ್, ರೋಟರಿ ಸಮುದಾಯ ದಳ ಸದಸ್ಯರುಗಳಾದ ಆದ ವಜ್ರೇಶ್ ಆಚಾರ್ಯ, ಗಣೇಶ್ ಆಚಾರ್ಯ ಮತ್ತು ಜೇಸುದಾಸ್ ಸೋನ್ಸ್ ಉಪಸ್ಥಿತರಿದ್ದರು.

ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ - ಇಬ್ಬರ ಮೃತ್ಯು, ಮೂವರು ಗಂಭೀರ

Thumbnail
Posted On: 21 Mar 2022, 01:01 PM

ಕಾಪು : ಇಲ್ಲಿನ ಮಲ್ಲಾರು ಸಲಫಿ ಮಸೀದಿ ಸಮೀಪಗುಜರಿ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಮಾಚ್೯ 21ರಂದು ನಡೆದಿದೆ. ಮೃತರನ್ನು ರಜಾಕ್ ಮಲ್ಲಾರ್ ಮತ್ತು ರಜಬ್ ಚಂದ್ರನಗರ ಎಂದು ಗುರುತಿಸಲಾಗಿದೆ. ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಗುಜರಿ ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕಾಪು ಪೊಲೀಸರು ಧಾವಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ - ದಶಮಾನೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಜನಜಾಗೃತಿ ಅಭಿಯಾನ

Thumbnail
Posted On: 20 Mar 2022, 10:29 PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದಶಮಾನೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು. ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ನಾಯಕ್, ಆಶಾ ಆಚಾರ್ಯ, ಮಮತಾ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು, ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಜಗದೀಶ ಆಚಾರ್ಯ, ಸಂಚಾಲಕ ವಿಶ್ವನಾಥ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್, ರಾಜೇಶ್ ನಾಯ್ಕ್, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಮತ್ತು ನಾಗರಿಕರು ಪಾಲ್ಗೊಂಡಿದ್ದರು. ಅಟ್ಟಿಂಜ ಸೇತುವೆಯಿಂದ ಮಟ್ಟಾರು ಯು.ಬಿ.ಎಂ.ಸಿ ಶಾಲೆಯ ವರೆಗೆ ಸ್ವಚ್ಛತೆ ಮಾಡಲಾಯಿತು.

ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕಾಪು -ಪಡು ವತಿಯಿಂದ ಜರಗಲಿರುವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Thumbnail
Posted On: 20 Mar 2022, 11:53 AM

ಕಾಪು : ಕಾಪು -ಪಡು ಇಲ್ಲಿನ ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇದರ ಆಶ್ರಯದಲ್ಲಿ ಏಪ್ರಿಲ್ 16, ಶನಿವಾರ ಮಧ್ಯಾಹ್ನ 12: 30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮ ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮಂಡಳಿ ಇವರಿಂದ ಸಾರ್ವಜನಿಕ ಹರಕೆಯ ಯಕ್ಷಗಾನ ಬಯಲಾಟ ಶ್ರೀ ಶನೀಶ್ವರ ಮಹಾತ್ಮೆ ಜರಗಲಿದೆ. ಈ ಪ್ರಯುಕ್ತ ಮಾಚ್೯ 20 ರಂದು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್ , ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ದಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ ಶೆಟ್ಟಿ ಬಾಲಾಜಿ, ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಮತ್ತು ಕ್ಲಬ್ ನ ಕೋಶಾಧಿಕಾರಿ ಅನಿಲ್ ಕುಮಾರ್ ಪಾಡಿಮನೆ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.