Updated News From Kaup

ಮುನಿಯಾಲು ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎನ್ಎಸ್ಎಸ್ ವತಿಯಿಂದ ಪೌಷ್ಟಿಕ ಆಹಾರ, ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ

Thumbnail
Posted On: 09 Jun 2022, 11:06 PM

ಉಡುಪಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿಕೊಡಿ ಇಲ್ಲಿ ಜೂನ್ 08 ರಂದು ಮುನಿಯಾಲು ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎನ್ಎಸ್ಎಸ್ ಘಟಕದ ವತಿಯಿಂದ ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ. ಅರ್ಚನಾ ಇವರು ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಇವರು ಮಕ್ಕಳಿಗೆ ದಿನನಿತ್ಯ ಜೀವನ ಶೈಲಿ, ಬಿಸಿನೀರು ಕುಡಿಯುವುದು, ಎಣ್ಣೆ ಹಚ್ಚಿ ಸ್ನಾನಮಾಡುವುದರ ಮಹತ್ವವನ್ನು ತಿಳಿಸಿಕೊಟ್ಟರು. ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ಸೊಪ್ಪು, ತರಕಾರಿಯನ್ನು ಸೇವಿಸಬೇಕೆಂದು ತಿಳಿಸಿದರು. ಹಾಗೆಯೇ ದಿನನಿತ್ಯ ವಿಟಮಿನ್ಯುಕ್ತ ಆಹಾರ ಮತ್ತು ಕಬ್ಬಿಣಅಂಶ ಇರುವ ಆಹಾರವನ್ನು ಸೇವಿಸಬೇಕು. ಪ್ರತಿದಿನ 2 ಲೋಟ ಹಾಲನ್ನು ಕುಡಿಯಬೇಕು ಎಂದು ತಿಳಿಸಿ, ಬೆಲ್ಲದ ಪ್ರಾಮುಖ್ಯತೆಯನ್ನು ಹಾಗೂ ಒಂದೆಲಗದ ಪ್ರಾಮುಖ್ಯತೆಯನ್ನು ತಿಳಿಸಿ ಕೊಟ್ಟರು. ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಔಷಧಿ ಗಿಡವನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಆಶಾಲತಾ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಸುದೀಪ್ ಹಾಗೂ ಡಾ. ಅರ್ಚನಾ ಅವರು ಉಪಸ್ಥಿತರಿದ್ದರು.

ಪಡುಬಿದ್ರಿ ರೋಟರಿ ಕ್ಲಬ್ ಗೆ ಗವರ್ನರ್ ಭೇಟಿ - ವಿವಿಧ ಸಮಾಜಮುಖಿ ಕಾರ್ಯಗಳ ಉದ್ಘಾಟನೆ

Thumbnail
Posted On: 07 Jun 2022, 10:31 PM

ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ಗೆ ಗವರ್ನರ್ ಭೇಟಿ ನೀಡಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಉದ್ಘಾಟಿಸಿದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಾಮಫಲಕ , ದಾರಿ ಸೂಚಕ ನಾಮಫಲಕ , ಅಂಗನವಾಡಿ ಕೇಂದ್ರ ಪಡುಬಿದ್ರಿ ಪುನರ್ ಪೈಂಟಿಂಗ್, ವಿಶ್ವ ಪರಿಸರ ದಿನಾಚರಣೆ, ಬ್ಲೂ ಫ್ಲಾಗ್ ಬೀಚಿನಲ್ಲಿ ನಾಮಫಲಕದ ಅನಾವರಣಗೊಳಿಸಲಾಯಿತು. ರೋಟೇರಿಯನ್ ಪಿಎಚ್ಎಫ್ ಎಂಜಿ ರಾಮಚಂದ್ರಮೂರ್ತಿ ಡಿಸ್ಟ್ರಿಕ್ ಗವರ್ನರ್ ಮಾತನಾಡಿ ಪಡುಬಿದ್ರಿ ರೋಟರಿ ಕ್ಲಬ್ ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಡುಬಿದ್ರಿ ರೋಟರಿ ಕ್ಲಬ್ ಜನಸೇವೆ ಮಾಡುತ್ತಾ ಮನೆಮಾತಾಗಿದ್ದಾರೆ ಇದನ್ನು ಮುಂದುವರಿಸಿಕೊಂಡು ಬರಬೇಕಾಗಿ ಕೇಳಿಕೊಂಡರು. ಅಸಿಸ್ಟೆಂಟ್ ಗವರ್ನರ್ ಆದ ರೋಟೇರಿಯನ್ ಪಿಎಚ್ಎಫ್ ಡಾ.ಅರುಣ್ ಹೆಗ್ಗಡೆಯವರು ಸ್ಪಂದನ ಗ್ರಹ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿ ತರುಣರ ಕ್ಲಬ್ ಪಡುಬಿದ್ರಿ ರೋಟರಿ ಶಿಸ್ತಿನ ಕ್ಲಬ್ ಎಂದು ಕೊಂಡಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಲಯ ಸೇನಾನಿ ಅನಿಲ್ ಡೆಸ ಶುಭಾಶಯ ಕೋರಿದರು. ಸಾರ್ವಜನಿಕ ಸಮಾರಂಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್ ಅಧ್ಯಕ್ಷತೆವಹಿಸಿಕೊಂಡರು. ಸುಧಾಕರ್ ಕೆ ಹಾಗೂ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಬಿ ಎಸ್ ಆಚಾರ್ಯ ವರದಿ ವಾಚಿಸಿ, ವಂದಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ - ಗಣಿತ ತರಬೇತಿ ಕಾರ್ಯಾಗಾರ

Thumbnail
Posted On: 07 Jun 2022, 09:45 PM

ಶಿರ್ವ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಯಾವುದೇ ಪರೀಕ್ಷೆಯನ್ನು ಎದುರಿಸಬೇಕಾದದಲ್ಲಿ ಅವರಲ್ಲಿ ಪರೀಕ್ಷೆಯ ಸಂಪೂರ್ಣ ಮಾಹಿತಿ, ಮಾರ್ಗದರ್ಶನವನ್ನು ಪಡೆದು ಪೂರ್ವಸಿದ್ಧತೆಯನ್ನು ಮಾಡಿದ್ದಲ್ಲಿ ಮುಂದೆ ಎಂಥಾ ಸವಾಲುಗಳನ್ನು ಎದುರಿಸುವ ಗುಣಗಳನ್ನು ಪಡೆಯಬಹುದು. ಕಠಿಣ ಪರಿಶ್ರಮದ ಜೊತೆಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕೌಶಲ್ಯಗಳನ್ನು ಅರಿತುಕೊಂಡು ಪ್ರಯತ್ನ ಪಡುವ ಮೂಲಕ ಉದ್ಯೋಗವನ್ನು ಪಡೆದು ಅವರ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಇಂತಹ ಕಾರ್ಯಗಾರಗಳು ಅತ್ಯಗತ್ಯ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು. ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಹಾಗೂ ಐಟಿ ಕ್ಲಬ್ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೋಟೇಶ್ವರ, ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನಾ ಗಣಿತ ಉಪನ್ಯಾಸಕಿ ಪ್ರಣಿತರವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತ ಗಣಿತ ವಿಷಯದ ಬಗ್ಗೆ ವಿವರಣೆ ನೀಡಿ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕರಾದ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರವರು ಕಾರ್ಯಕ್ರಮದ ಉದ್ದೇಶ ಮತ್ತು ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಸಿಎ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕ್ಯಾಂಪಸ್ನಲ್ಲಿ ಆಯ್ಕೆ ಆದ ಪ್ರೀತಿಕಾ,ವಿಧಾತ ಶೆಟ್ಟಿ, ಪ್ರಜ್ವಲ್, ಪ್ರತ್ವಿನ್ ಬಂಗೇರ, ದೇವಿಪ್ರಸಾದ್ ಶೆಟ್ಟಿ, ಪ್ರಿಯಾಂಕ ಆಚಾರ್ಯ, ಸುರೇಖಾ ರಾವ್, ಶಮಿತಾ ಶೆಟ್ಟಿ , ದ್ಯುತಿಶ್ರೀ, ಹಾರ್ದಿಕ ಸಾಲಿಯಾನ್, ದೀಕ್ಷಾ ಪಿಜಿ ಯವರನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಶ್ರೀ ಬಿ, ಪ್ರಕಾಶ್, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ ಹಾಗೂ ಅಲಿಸ್ಟರ್ ಸುಜಾಯ್ ಡಿಸೋಜಾ ಸಹಕರಿಸಿದರು. ಸುಪ್ರಿಯ ಪ್ರಾರ್ಥಿಸಿದರು. ಸಹನ ಶೆಟ್ಟಿ ಸ್ವಾಗತಿಸಿ, ಶ್ವೇತಾ ಕಾರ್ಯಕ್ರಮ ಸಂಯೋಜಿಸಿದರು. ಪ್ರತಿಕ್ಷ ವಂದಿಸಿದರು.

ಶ್ರೀ ಆನೆಗುಂದಿ ಸರಸ್ವತೀ ಪೀಠ ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನಲ್ಲಿ ಪೋಷಕರ ಸಭೆ

Thumbnail
Posted On: 06 Jun 2022, 09:31 PM

ಕಾಪು : ಶ್ರೀ ಆನೆಗುಂದಿ ಮೂಲಗುರು ಪರಂಪರಾ ಪರಮ ಪೂಜ್ಯನೀಯ ಜಗದ್ಗುರುಗಳ ದಿವ್ಯ ಉಪಸ್ಥಿಯಲ್ಲಿ ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆಯು ಜೂನ್ 4ರಂದು ಶ್ರೀ ಆನೆಗುಂದಿ ಮಠ ಸೂರ್ಯಚೈತನ್ಯ ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸೂರ್ಯ ಚೈತನ್ಯ ಹೈಸ್ಕೂಲ್ ಮುಂದಿನ ವರ್ಷಗಳಲ್ಲಿ ಮಾದರಿ ಶಾಲೆಯಾಗಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುನ್ನತ ಸಾಧನೆ ತೋರುತ್ತದೆ ಎಂದು ಶ್ರೀಗಳು ನುಡಿದರು. ವೇದಿಕೆಯಲ್ಲಿ ಮೋಹನ್ ಕುಮಾರ್ ಬೆಳ್ಳೂರು, ಪ್ರಾಂಶುಪಾಲ ಗುರುದತ್ ಸೋಮಯಾಜಿ, ಶಾಲೆಯ ಅಧ್ಯಾಪಕ ವೃಂದ, ಶಂಭುದಾಸ್ ಗುರೂಜಿ , ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರ್ಯ ಕಂಬಾರ್, ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನ್ ಟ್ರಸ್ಟ್ (ಅಸೆಟ್) ನ ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ ಶಿರ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷರಾದ ಸೂರ್ಯಕುಮಾರ್ ಹಳೆಯಂಗಡಿ , ಪ್ರಧಾನ ಕಾರ್ಯದರ್ಶಿಗಳಾದ ಗುರುರಾಜ ಆಚಾರ್ಯ ಮಂಗಳೂರು, ಪೋಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳು ಪಾಲ್ಗೊಂಡಿದ್ದರು. ಆಡಳಿತ ಮಂಡಳಿ ಹಾಗೂ ಪೋಷಕರ ಜೊತೆ ಶೈಕ್ಷಣಿಕ ಸಂವಾದ, ತದನಂತರ ಶಾಲಾಭಿವೃದ್ಧಿಗೆ ಆಡಳಿತ ಮಂಡಳಿ ಕೈಗೊಂಡ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಶಿಕ್ಷಕಿ ರಾಜಲಕ್ಷ್ಮಿ ಅಜಯ್ ಕಾರ್ಯಕ್ರಮ ನಿರೂಪಿಸಿದರು.

ಸಹಾಯದ ನಿರೀಕ್ಷೆಯಲ್ಲಿ ಇರುವ (ರಂಗ್ದ ರಾಜೆ) ರಾಜೇಶ್ ಕೆಂಚನಕೆರೆ

Thumbnail
Posted On: 06 Jun 2022, 08:57 PM

ಹೌದು ಅದೆಷ್ಟು ನಾಟಕರಂಗದಲ್ಲಿ ಹಾಸ್ಯ ನಟನೆಯಿಂದ ಕಲಾಭಿಮಾನಿಗಳನ್ನು ನಗಿಸಿದ ನಮ್ಮ ರಾಜೇಶ್ ಕೆಂಚನಕೆರೆ ಅವರ ಕುಟುಂಬ ದುಃಖದಲ್ಲಿದೆ. ರಾಜೇಶ್ ಕೆಂಚನಕೆರೆ ಅವರು ನಾಟಕ, ಯಕ್ಷಗಾನ, ಬಲೇ ತೆಲಿಪಾಲೆ ಇನ್ನೂ ಅನೇಕ ಪಾತ್ರಗಳಲ್ಲಿ ನಟಿಸಿ ಕಲಾಮಾತೆಯ ಸೇವೆ ಮಾಡಿಕೊಂಡು ಬಂದವರು. ಬಲೇ ತೆಲಿಪಾಲೆ ಖ್ಯಾತಿಯ ರಾಜೇಶ್ ಕೆಂಚನಕೆರೆ ಅವರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದಾರೆ. ರಾಜೇಶ್ ಅವರು ಈಗಾಗಲೇ ಡಯಾಲಿಸಿಸ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ರಾಜೇಶ್ ಅವರ ಭವಿಷ್ಯದ ದೃಷ್ಟಿಯಿಂದ ಅವರ ಪತ್ನಿ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ. ಈ ಕಿಡ್ನಿ ಸ್ಥಳಾಂತರದ ಪ್ರಕ್ರಿಯೆಗೆ ಸುಮಾರು 12 ಲಕ್ಷ ರೂಪಾಯಿ ಅಂದಾಜಿಸಲಾಗಿದೆ. ಈ ಖರ್ಚು ಭರಿಸಲು ರಾಜೇಶ್ ಅವರ ಕುಟುಂಬ ಅಸಮರ್ಥವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಾನಿಗಳ ನೆರವು ಯಾಚಿಸಿದ್ದಾರೆ. ರಾಜೇಶ್ ಕೆಂಚನಕೆರೆ ಅವರ ಭವಿಷ್ಯ ನಮ್ಮ ಕೈಯಲ್ಲಿದೆ. ರಾಜೇಶ್ ಅವರು ಹಲವಾರು ಸಂಘಸಂಸ್ಥೆಯಲ್ಲಿ ಸಕ್ರಿಯವಾಗಿದ್ದು ಅದೆಷ್ಟೋ ಬಡಕುಟುಂಬಗಳಿಗೆ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೆನರಾ ಬ್ಯಾಂಕ್ ಕಿನ್ನಿಗೋಳಿ ಖಾತೆ ನಂಬ್ರ: 0362200052157 IFsc code: CNRB0010136 Google pay no:9632173543 ಸಂಪರ್ಕಕ್ಕಾಗಿ ರಾಜೇಶ್ ಕೆಂಚನಕೆರೆ 9880639161 ಒಪ್ಪಿಗೆ ಮೇರೆಗೆ • ಜೀವನ್ ಶೆಟ್ಟಿ ಅಂಗರಗುಡ್ಡೆ

ಸಾಮಾಜಿಕ ಜಾಲತಾಣದಲ್ಲಿ ಯಶ್ ಪಾಲ್ ಸುವರ್ಣರಿಗೆ ಹತ್ಯೆ ಬೆದರಿಕೆ ಕಾಪು ಬಿಜೆಪಿ ಯುವಮೋರ್ಚಾ ವತಿಯಿಂದ ದೂರು

Thumbnail
Posted On: 06 Jun 2022, 08:50 PM

ಕಾಪು : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹತ್ಯೆ ಮಾಡುವ ಬೆದರಿಕೆ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಮ್ ಖಾತೆಯ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಪು ಯುವ ಮೋರ್ಚಾ ವತಿಯಿಂದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಶ್ರೀ ಪ್ರಕಾಶ್ ಹಾಗೂ ಕಾಪು ಪೊಲೀಸ್ ಠಾಣಾ ಉಪ ನಿರೀಕ್ಷಕರಿಗೆ ದೂರು ನೀಡಲಾಯಿತು. ಪ್ರಚೋದನಕಾರಿ ಪೋಸ್ಟ್ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶ ಹೊಂದಿರುವ ಮತೀಯವಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಪೂಜಾರಿ, ಅಕ್ಷಿತ್ ಶೆಟ್ಟಿ ಹೆರ್ಗ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಕಾಪು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋನು ಪಾಂಗಾಳ, ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು.

ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ನಲ್ಲಿ ವಿಶ್ವ ಪರಿಸರ ದಿನಾಚರಣೆ

Thumbnail
Posted On: 05 Jun 2022, 11:50 PM

ಪಡುಬಿದ್ರಿ : ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಸಿಕಾಮ್, ಬೀಚ್ ಮ್ಯಾನೇಜ್ಮೆಂಟ್ ಕಮಿಟಿ ಹಾಗೂ ಮಣ್ಣು ಉಳಿಸಿ ಅಭಿಯಾನದ ಸಹಯೋಗದೊಂದಿಗೆ ಜೂನ್ 5ರಂದು ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ಬ್ಲೂ ಫ್ಲಾಗ್ ಬೀಚ್ ವೀಕ್ಷಕ ಸುಜಿತ್ ದೋಂಗ್ಲೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪರಿಸರ ರಕ್ಷಣೆ ನಮ್ಮ ಕರ್ತವ್ಯ. ಅದರ ಉಳಿವಿಗಾಗಿ ನಾವು ಪ್ರಯತ್ನಿಸಬೇಕು. ಮಣ್ಣಿನ ಸಾವಯವ, ಫಲವತ್ತತೆ ಮುಖ್ಯ. ಕರಾವಳಿಯಲ್ಲಿ ಮಣ್ಣಿನ ರಕ್ಷಣೆ ಅತೀ ಮುಖ್ಯ ಎಂದರು. ನಿವೃತ್ತ ಐಎಫ್ಎಸ್ ಅಧಿಕಾರಿ ಅಜಯ್ ಸಕ್ಸೇನಾ ಮಾತನಾಡಿ ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಮನೆಯಲ್ಲಿಯೇ ಆರಂಭಿಸಬೇಕು. ಮುಂದಿನ ಪೀಳಿಗೆಗೆ ಇದರ ಬಗ್ಗೆ ತಿಳಿಸುವುದು ಅನಿವಾರ್ಯ ಎಂದರು. ಈ ಸಂದರ್ಭ ದಿಶಾ ಫೌಂಡೇಷನ್ ನ ಜಗ್ಗಿ ವಾಸುದೇವ್ ಅವರ ಅನುಯಾಯಿ ಮಣ್ಣು ಉಳಿಸಿ ಅಭಿಯಾನದ ಸದಸ್ಯ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸಂದೇಶ್ ಶೆಟ್ಟಿ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಉಪನಿರ್ದೇಶಕ ಕ್ಲಿಫಡ್೯ ಲೋಬೊ, ಪಡುಬಿದ್ರಿ ಪಂಚಾಯತ್ ಉಪಾಧ್ಯಕ್ಷೆ ಯಶೋದ, ಪಂಚಾಯತ್ ಸದಸ್ಯರಾದ ಸುಜಾತ ಆಚಾರ್ಯ, ವಿದ್ಯಾಶ್ರೀ, ಯಶ್ವಿನ್ ಬಂಗೇರ, ನವೀನ್ ಕುಮಾರ್, ಪಿಪಿಸಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಕಿರಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಲಿಫಡ್೯ ಲೋಬೊ ವಂದಿಸಿದರು.

ಕೇಂಜ ಗರಡಿಯ ಅರ್ಚಕ ಸುರನಾಥ ಪೂಜಾರಿಯವರಿಗೆ ನುಡಿನಮನ

Thumbnail
Posted On: 05 Jun 2022, 10:54 PM

ಕಾಪು : ಕೇಂಜ ಗರಡಿಯಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಪೂ ಪೂಜನಾ ಕಾರ್ಯ ನೆರವೇರಿಸುತ್ತಿದ್ದ ಸುರನಾಥ ಪೂಜಾರಿ (ಬಾಬಣ್ಣ)ಯವರು ಮೇ 31ರಂದು ಅಸೌಖ್ಯದಿಂದ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿಕೋರುವ ನಿಟ್ಟಿನಲ್ಲಿ ಜೂನ್ 5ರಂದು ಕೇಂಜ ಗರಡಿ ವಠಾರದಲ್ಲಿ ನುಡಿನಮನ ಕಾರ್ಯವು ಜರಗಿತು. ಮುಲ್ಕಿ ತೋಕೂರು ತಪೋವನ ಎಂ.ಆರ್ ಪೂಂಜ ತಾಂತ್ರಿಕ ವಿದ್ಯಾಲಯ ಪ್ರಾಂಶುಪಾಲರಾದ ಹರಿ ಎಚ್ ಪಿಲಾರು, ಮುದರಂಗಡಿ ತಮ್ಮ ನುಡಿನಮನದಲ್ಲಿ ಕೇಂಜದ ಗ್ರಾಮವು ಹೂವಿನ ತೋಟದಂತೆ ಇಲ್ಲಿನ ಜನರು ಮೃದು ಸ್ವಭಾವದವರು. ಅದರಲ್ಲಿ ಓರ್ವರಾದ ಬಾಬಣ್ಣನವರನ್ನು ಹತ್ತಿರದಿಂದ ಬಲ್ಲವನಾಗಿದ್ದು ಎಲ್ಲರೊಂದಿಗೆ ಆತ್ಮೀಯನಾಗಿದ್ದು ಜಾತಿ ಮತ ಬೇಧವೆನ್ನದೆ ಸರಳ ಸಜ್ಜನಿಕೆಯಿಂದ ಉತ್ತಮ ಸಂಸ್ಕಾರಯುತ ಬಾಳನ್ನು ನಡೆಸಿ ಗೌರವದಿಂದಲೂ, ಪ್ರೀತಿ ವಾತ್ಸಲ್ಯದಿಂದಲೂ ಬೆರೆತು ನಿಷ್ಠೆಯಿಂದ ಬೈದೇರುಗಳ ಸೇವೆ ಸಲ್ಲಿಸುತ್ತಿದ್ದ ಇವರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರು. ಈ ಸಂದರ್ಭ ಇರಂದಾಡಿ ಅರಸರ ಮನೆಯ ಜಗದೀಶ್ ಅರಸ, ಅರುಣ್ ಕುಮಾರ್ ಶೆಟ್ಟಿ ಪಡು ಇರಂದಾಡಿ, ರಾಘು ಶೆಟ್ಟಿ ಪಣಿಯೂರು ಗುತ್ತು, ಶಂಕರ ಶೆಟ್ಟಿ ಬರ್ಪಾಣಿ, ಪವನ್ ಶೆಟ್ಟಿ ನಡುಗುತ್ತು, ಕುತ್ಯಾರು ನವೀನ್ ಶೆಟ್ಟಿ, ಕೃಷ್ಣ ಪೂಜಾರಿ ಕೇಂಜ, ಸುಧಾಕರ ಪೂಜಾರಿ, ಸಾಯಿನಾಥ್ ಶೆಟ್ಟಿ, ಸಂಪತ್ ಕುಮಾರ್, ದೇವರಾಜು ಬಿ ಶೆಟ್ಟಿ, ಪ್ರವೀಣ್ ಭಂಡಾರಿ, ರಾಜೇಶ್ ಶೆಟ್ಟಿ, ಸತೀಶ್ ಪಾತ್ರಿ, ಮೃತರ ಕುಟುಂಬಸ್ಥರು, ಮತ್ತಿತರರು ಉಪಸ್ಥಿತರಿದ್ದರು. ಕೇಂಜ ಗರಡಿಯ ಭಂಡಾರದ ವತಿಯಿಂದ ಮೃತರ ಪುತ್ರಿಯ ಉನ್ನತ ವಿದ್ಯಾಭ್ಯಾಸದ ಖರ್ಚು ಭರಿಸುವ ಬಗ್ಗೆ ಹಾಗೂ ಕುಟುಂಬ ನಿರ್ವಹಣೆಗೆ ಹತ್ತು ಸಮಸ್ತರ ಕ್ರೋಢೀಕರಣದಿಂದ ಸಹಾಯ ನೀಡುವುದೆಂದು ನಿರ್ಣಯಿಸಲಾಯಿತು. ಕೇಂಜ ಬಗ್ಗ ತೋಟ ಬಗ್ಗ ಪೂಜಾರಿಯವರು ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಾಗಂದಡಿ ಕಿರಣ್ ಆಳ್ವ ವಂದಿಸಿದರು.

ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ವಿಶ್ವ ಪರಿಸರ ದಿನ

Thumbnail
Posted On: 05 Jun 2022, 09:23 PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ವಿಶ್ವ ಪರಿಸರ ದಿನದ ಅಂಗವಾಗಿ ವನ‌ ಮಹೋತ್ಸವ ಕಾರ್ಯಕ್ರಮ ಮಟ್ಟಾರ್ ನಲ್ಲಿ ನಡೆಯಿತು. ಕರಾವಳಿ ಅಭಿವೃಧ್ಧಿ‌ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಶಿರ್ವ ಪೋಲೀಸ್ ಠಾಣೆಯ ಉಪ ನಿರೀಕ್ಷಕರಾದ ರಾಘವೇಂದ್ರ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪ್ರಖಂಡ ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು. ಬಜರಂಗದಳ‌ ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ, ಮಟ್ಟಾರು ಘಟಕ ಬಜರಂಗದಳ‌ ಸಂಚಾಲಕ ವಿಶ್ವನಾಥ ಆಚಾರ್ಯ, ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು, ಸುರಕ್ಷಾ ಪ್ರಮುಖ್ ಅಭಿಜಿತ್ ಪೂಜಾರಿ, ಕೋಶಾಧಿಕಾರಿ ಅಜಿತ್ ಪೂಜಾರಿ, ಸೇವಾ ಪ್ರಮುಖ್ ಸತೀಶ್, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಟ್ಟಾರು ಇದರ ಕಾರ್ಯಕರ್ತರು, ಮತ್ತಿತರರು ಪಾಲ್ಗೊಂಡಿದ್ದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಂಚಿನಡ್ಕ ಮಿಂಚಿನ ಬಾವಿ ಮೇಲ್ಛಾವಣಿ ವಿವಾದ : ಆಕ್ಷೇಪಣೆ ಹಿಂಪಡೆದ ಕುಟುಂಬ

Thumbnail
Posted On: 04 Jun 2022, 06:53 PM

ಪಡುಬಿದ್ರಿ : ಕಂಚಿನಡ್ಕ ಮಿಂಚಿನ ಬಾವಿಯ ಶ್ರೀ ಕೋರ್ದಬ್ಬು ದೈವಸ್ಥಾನದ ಮೇಲ್ಛಾವಣಿ ಬಗ್ಗೆ ಸಾನಿಧ್ಯದ ಬಳಿಯ ಎರಡು ಮುಸ್ಲಿಂ ಕುಟುಂಬಗಳು ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಸಲ್ಲಿಸಿದ್ದ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆದಿದೆ. ಪಂಚಾಯತ್ ರಸ್ತೆಯಾದ್ದರಿಂದ ಗ್ರಾಮಪಂಚಾಯತ್ ಸರಿಯಾದ ನಿರ್ಧಾರ ಕೈಗೊಳ್ಳಬೇಕಿದೆ. ದೈವಸ್ಥಾನದ ಮುಂಭಾಗದ ಈ ರಸ್ತೆಯಲ್ಲಿ ಎಲ್ಲಾ ಸಮುದಾಯದ ಜನರು ಹೋಗುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಆಕ್ಷೇಪಣೆ ಹಿಂಪಡೆದ ಮಹಿಳೆಯೋರ್ವರು ಮಾತನಾಡಿ ದೈವಸ್ಥಾನಕ್ಕೆ ಮೇಲ್ಛಾವಣಿ ಹಾಕುವ ಬಗ್ಗೆ ಆಕ್ಷೇಪ ಮುಂಚಿನಿಂದಲೂ ಇರಲಿಲ್ಲ. ನಾವು ರಸ್ತೆಗೆ ಹಾಕಬೇಡಿ ಎಂದು ಹೇಳುವುದು. 2004 ರಿಂದಲೂ ಇಲ್ಲಿ ನಡೆಯುವ ‌ಯಾವುದೇ ಕಾರ್ಯಕ್ರಮಗಳಿಗೆ ನಾವು ತೊಂದರೆ ಮಾಡಿಲ್ಲ. ನಮ್ಮಿಂದಾಗಿ ಯಾವುದೇ ಗಲಾಟೆಯಾಗಬಾರದೆಂದು ನಾವು ಆಕ್ಷೇಪಣೆ ಹಿಂಪಡೆದಿದ್ದೇವೆ. ಯಾವುದೇ ರೀತಿಯ ಹೆದರಿಕೆಯ ವಾತಾವರಣ ಆಗಬಾರದು. ಕಾನೂನು ಎಲ್ಲರಿಗೂ ಒಂದೇ. ದಿನನಿತ್ಯ ಓಡಾಡುವ ರಸ್ತೆ ಇದಾಗಿದೆ. ಗಾಳಿಯ ರಭಸಕ್ಕೆ ಮೇಲ್ಛಾವಣಿಯ ತಗಡಿನಿಂದ ತೊಂದರೆಯಾಗಬಾರದು. ಪಡುಬಿದ್ರಿ ಠಾಣೆಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಗೊಂದಲವಾಗಿದೆ ಎಂದು ಸೃಷ್ಟಿಸಲಾಗಿದೆ ಎಂದರು. ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಮಾತನಾಡಿ ನಾವೆಲ್ಲರೂ ಸಹಬಾಳ್ವೆ, ಅನ್ಯೋನ್ಯತೆಯಿಂದ ಬಾಳಬೇಕಾಗಿದೆ. ಕಾನೂನಾತ್ಮಕವಾಗಿ ಪಂಚಾಯತ್ ಇದನ್ನು ಪರಿಶೀಲಿಸಲಿದೆ. ಡೋರ್ ನಂಬರ್ ಇಲ್ಲವಾದ್ದರಿಂದ ಪಂಚಾಯತ್ನಿಂದ ಯಾವುದೇ ಪರವಾನಗಿ ನೀಡಲಾಗದು. ಧಾರ್ಮಿಕ ಕೇಂದ್ರವಾದ್ದರಿಂದ ಪರಸ್ಪರ ಸಹಮತದಿಂದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಆಕ್ಷೇಪಣೆ ಹಿಂಪಡೆದ ಕುಟುಂಬ ವರ್ಗ, ಸ್ಥಳೀಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.