Updated News From Kaup
ಜಿಲ್ಲೆಯಲ್ಲಿ 15 -18 ವರ್ಷದವರೆಗಿನ 53,555 ಮಕ್ಕಳಿಗೆ ಕೋವಿಡ್-19 ಲಸಿಕೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 01-01-2022 08:09PM
ಉಡುಪಿ : ಜಿಲ್ಲೆಯಲ್ಲಿ ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 309 ಹೈಸ್ಕೂಲ್, 104 ಪದವಿ ಪೂರ್ವ ಕಾಲೇಜು, 21 ಐ.ಟಿ.ಐ ಇತ್ಯಾದಿ ಸಂಸ್ಥೆಗಳನ್ನು ಸೇರಿದಂತೆ ಒಟ್ಟು 434 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, 15 ರಿಂದ 18 ವರ್ಷದವರೆಗಿನ 53,555 ಮಕ್ಕಳಿಗೆ ಲಸಿಕೆ ನೀಡಲು ಗುರಿಯನ್ನು ನಿಗದಿಪಡಿಸಲಾಗಿದೆ.
2007 ಹಾಗೂ ಇದಕ್ಕೂ ಮುನ್ನ ಜನಿಸಿರುವ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರಿದ್ದು, ಮಕ್ಕಳು ಕಲಿಯುತ್ತಿರುವ ಹೈಸ್ಕೂಲ್, ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಸಿಕಾ ಶಿಬಿರಗಳನ್ನು ಏರ್ಪಡಿಸಿ ಅರ್ಹ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳಿಗೆ ಅವರು ವಾಸಿಸುವ ಸ್ಥಳದ ಹತ್ತಿರದ ಶಿಕ್ಷಣ ಸಂಸ್ಥೆಯ ಲಸಿಕಾ ಶಿಬಿರದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಗತ್ಯವಿದ್ದು, ಪೋಷಕರು ಮಕ್ಕಳ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಮತ್ತು ಪೋಷಕರ ಮೊಬೈಲ್ ಸಂಖ್ಯೆ ನೀಡಿ ಮಕ್ಕಳು ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು.
ಫಲಾನುಭವಿ ಮಕ್ಕಳು ಮೊಬೈಲ್ ಸಂಖ್ಯೆ ಬಳಸಿ ಅಥವಾ ಕೋವಿನ್ ಪೋರ್ಟಲ್ನಲ್ಲಿ ಈಗಾಗಲೇ ಇರುವ ಪೋಷಕರ ಅಕೌಂಟಲ್ಲಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಶಾಲೆಯ ಮಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಮೊಬೈಲ್ ಸಂಖ್ಯೆ ಮೂಲಕ ಲಸಿಕಾ ಶಿಬಿರದಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ಶಿಕ್ಷಣ ಸಂಸ್ಥೆ, ಕಾಲೇಜು ಹಾಗೂ ತರಬೇತಿ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಯವರನ್ನು ನೇಮಿಸಲಾಗಿದ್ದು, ಮಕ್ಕಳು ಅಥವಾ ಪೋಷಕರು ಲಸಿಕಾಕರಣದ ಬಗ್ಗೆ ಮಾಹಿತಿ ಪಡೆಯಲು ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿ, ಮುಖ್ಯಸ್ಥರು ಅಥವಾ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರನ್ನು ಸಂಪರ್ಕಿಸಬಹುದು.
ಕೋವಿಡ್ ಲಸಿಕೆ ಪಡೆಯುವವರಿಗೆ ಯಾವುದೇ ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಮಾದರಿ ಪರೀಕ್ಷೆ ನಡೆಸಲಾಗುವುದಿಲ್ಲ. ಲಸಿಕಾ ಶಿಬಿರ ನಡೆಯುವ ದಿನದಂದು, ಪೋಷಕರು ಲಸಿಕಾ ಶಿಬಿರ ಜರುಗುವ ಶಿಕ್ಷಣ ಸಂಸ್ಥೆಗಳಲ್ಲಿ ಉಪಸ್ಥಿತರಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾರಿಕೆರೆ ಕೊರಗ ಕಾಲೋನಿಗೆ ಗೃಹ ಸಚಿವರ ಭೇಟಿ

Posted On: 01-01-2022 07:59PM
ಉಡುಪಿ : ಬ್ರಹ್ಮಾವರ ತಾಲೂಕು ಕೋಟತಟ್ಟುವಿನ ಕೊರಗ ಕಾಲೋನಿಯಲ್ಲಿ ಮೆಹಂದಿ ಕಾರ್ಯಕ್ರಮದ ಸಂದರ್ಭದಲ್ಲಿ ಕೊರಗರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಘಟನೆಯ ಕುರಿತಂತೆ ,ಇಂದು ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಘಟನೆಯ ತನಿಖೆಯನ್ನು ಸಿ.ಓ.ಡಿ ಗೆ ವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ಲಾಠಿಚಾರ್ಜ್ ನಿಂದ ಗಾಯಗೊಂಡ 6 ಜನರಿಗೆ 2 ಲಕ್ಷ ರೂ ಗಳ ಪರಿಹಾರವನ್ನು ಘೋಷಣೆ ಮಾಡಿ, ಅದರಲ್ಲಿ ಮೊದಲ ಹಂತದ ಪರಿಹಾರವಾಗಿ 50000 ರೂ ಗಳ ಚೆಕ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ವಿಷ್ಣುವರ್ಧನ್, ಕೊರಗ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಮಲ್ಪೆ : ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ಮಾಹಿತಿ ಕಾರ್ಯಾಗಾರ

Posted On: 01-01-2022 10:32AM
ಉಡುಪಿ : ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘ ಮಲ್ಪೆ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂನಿಂದ ಆಗುವ ಅನಾಹುತಗಳ ಬಗ್ಗೆ ಕಾರ್ಯಾಗಾರವನ್ನು ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸೈಬರ್ ಕ್ರೈಂನ ಎಸ್ ಪಿ ಮಂಜುನಾಥ್ ಪೂಜಾರಿ ಆಗಮಿಸಿ ಕಾರ್ಯಾಗಾರವನ್ನು ನೆರವೇರಿಸಿಕೊಟ್ಟರು. ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಪಾಲ ಸಿ ಬಂಗೇರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಮ್ ಮಹೇಶ್ ಕುಮಾರ್, ಸುರೇಶ್ ಕರ್ಕೇರ, ಪ್ರಾಂಶುಪಾಲರಾದ ವರ್ಗಿಸ್, ಮುಖ್ಯೋಪಾಧ್ಯಾಯರಾದ ಸಂಧ್ಯಾ ಶಿವರಾಮ್, ಕಲ್ಮಾಡಿ ಲಕ್ಷ್ಮಣ್ ಮೈಂದನ್ ಹಾಗೂ ವಿದ್ಯಾರ್ಥಿ ನಾಯಕ ಭಾಗವಹಿಸಿದ್ದರು. ನಂತರ ಹಳೆ ವಿದ್ಯಾರ್ಥಿ ಎಮ್ ಮಹೇಶ್ ಕುಮಾರ್ ಕೊಡ ಮಾಡಿದ ಐ ಡಿ ಕಾರ್ಡ್ ನ್ನು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಪೂಜಾರಿಯವರನ್ನು ಸನ್ಮಾನ ಮಾಡಲಾಯಿತು. ಹಾಗೂ ಶಾಲೆಗೆ ಸಹಕಾರ ನೀಡಿದ ಶಿವರಾಮ್ ಕಲ್ಮಾಡಿ ಹಾಗೂ ಎಮ್ ಮಹೇಶ್ ಕುಮಾರ್ ರವರನ್ನು ಪ್ರೌಢ ಶಾಲಾ ವತಿಯಿಂದ ಗೌರವಿಸಲಾಯಿತು.
ಮುಖ್ಯೋಪಾಧ್ಯಾಯರಾದ ಸಂಧ್ಯಾರವರು ಸ್ವಾಗತಿಸಿ, ಸತೀಶ್ ಭಟ್ ನಿರೂಪಿಸಿ, ರಂಜನ್ ವಂದಿಸಿದರು.
ರಾಜ್ಯದಲ್ಲಿ ಎಥೆನಾಲ್ ಪಾಲಿಸಿ ಜಾರಿಗೆ ತರಲು ತೀರ್ಮಾನ ; ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಆರಂಭ ಕುರಿತಂತೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು : ಸಚಿವ ಶಂಕರ ಬ ಪಾಟೀಲ

Posted On: 31-12-2021 06:55PM
ಉಡುಪಿ : ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪಾದನೆ ಮಾಡುವ ಕುರಿತಂತೆ, ಎಥೆನಾಲ್ ಪಾಲಿಸಿಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಹೇಳಿದರು. ಅವರು ಇಂದು ಉಡುಪಿ ನೇಕಾರರ ಪ್ರಾಥಮಿಕ ಸಹಕಾರ ಸಂಘದಲ್ಲಿ ನಡೆದ, ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದು ಕೊರತೆ ಆಲಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಉಡುಪಿಯ ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಆರಂಭ ಕುರಿತಂತೆ, ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ, ಕಾರ್ಖಾನೆ ಆರಂಭಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ್, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಅಶೋಕ್, ದ.ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಸೀತಾರಾಮ ಶೆಟ್ಟಿಗಾರರ ಕೈ ಮಗ್ಗ ಕೇಂದ್ರಕ್ಕೆ ರಾಜ್ಯದ ಕೈಮಗ್ಗ ಮತ್ತು ಜವಳಿ ಖಾತೆ ಸಚಿವರ ಭೇಟಿ

Posted On: 31-12-2021 06:45PM
ಉಡುಪಿ: ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಅವರು ಇಂದು ದೊಡ್ಡಣಗುಡ್ಡೆಯ ನೇಕಾರರ ಕಾಲೋನಿಯ, ಸೀತಾರಾಮ ಶೆಟ್ಟಿಗಾರ ಅವರ ಕೈ ಮಗ್ಗಕ್ಕೆ ಭೇಟಿ ನೀಡಿ, ಕೈ ಮಗ್ಗದ ಕಾರ್ಯ ವಿಧಾನವನ್ನು ವೀಕ್ಷಿಸಿದರು.
ಜಿಲ್ಲೆಯಲ್ಲಿ ಕೈಮಗ್ಗಗಳ ಆಧುನೀಕರಣ ಕುರಿತು ಪರಿಶೀಲನೆಗೆ ತಜ್ಞರ ತಂಡ : ಸಚಿವ ಶಂಕರ ಬ ಪಾಟೀಲ

Posted On: 31-12-2021 06:31PM
ಉಡುಪಿ : ಜಿಲ್ಲೆಯ ಕೈಮಗ್ಗಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜವಳಿ ಇಂಜಿನಿಯರ್ಗಳು ಮತ್ತು ಜವಳಿ ಪರಿಣಿತರ ತಂಡವನ್ನು ಜಿಲ್ಲೆಗೆ ಕಳುಹಿಸಿ, ಅವರಿಂದ ಪರಿಶೀಲನಾ ವರದಿ ಪಡೆದು, ಕೈಮಗ್ಗಗಳನ್ನು ತಾಂತ್ರಿಕವಾಗಿ ಸುಧಾರಿಸಿ, ನೇಕಾರರಿಗೆ ಆರ್ಥಿಕ ಅನುಕೂಲವಾಗುವಂತೆ ಮಾಡಲಾಗುವುದು ಎಂದು ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಅವರು ಇಂದು ಉಡುಪಿ ನೇಕಾರರ ಪ್ರಾಥಮಿಕ ಸಹಕಾರ ಸಂಘದಲ್ಲಿ ನಡೆದ ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದು ಕೊರತೆ ಆಲಿಸಿ ಮಾತನಾಡಿದರು.
ನೇಕಾರಿಕೆಯಲ್ಲಿ ನಷ್ಟ ಎಂಬ ಕಾರಣದಿಂದ ಯುವಜನತೆ ಈ ಉದ್ಯೋಗದಿಂದ ದೂರ ಉಳಿದಿದ್ದಾರೆ. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಅದನ್ನು ಲಾಭದಾಯಕವನ್ನಾಗಿ ಮಾಡಲು ಜವಳಿ ಇಂಜಿನಿಯರ್ಗಳು ಮತ್ತು ಜವಳಿ ಪರಿಣಿತರ ತಂಡವನ್ನು ಜಿಲ್ಲೆಗೆ ಕಳುಹಿಸಿ, ಅವರ ಮೂಲಕ ವರದಿ ಪಡೆದು ಅದನ್ನು ಆಭಿವೃದ್ಧಿಪಡಿಸಲಾಗುವುದು. ಜಿಲ್ಲೆಯ ಕಾರ್ಕಳದಲ್ಲಿ ಆರಂಭವಾಗಲಿರುವ ಜವಳಿ ಪಾರ್ಕ್ನಲ್ಲಿ ವೃತ್ತಿಪರ ನೇಕಾರರಿಗೆ ಕೌಶಲ್ಯ ತರಬೇತಿ ನೀಡಲು, ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದ ಸಚಿವರು, ವಿದ್ಯಾರ್ಥಿಗಳಿಗೂ ಸಹ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ಉಡುಪಿ ಕೈಮಗ್ಗದ ಸೀರೆಗಳಿಗೆ ರಾಜ್ಯ ಮತ್ತು ರಾಷ್ಟçದಲ್ಲಿ ಬೇಡಿಕೆ ಇದೆ ಎಂದರು. ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಸಚಿವರು, ನೇಕಾರ ಸಮ್ಮಾನ ಯೋಜನೆಯಡಿ ಈಗಾಗಲೇ ಮೊತ್ತವನ್ನು ಪಾವತಿಸಲಾಗಿದ್ದು, 122 ಕೋಟಿ ರೂ. ಗಳ ಸಬ್ಸಿಡಿ ನೀಡಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಬಡ್ಡಿ ಸಹಾಯಧನ ಯೋಜನೆಯ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ರಘುಪತಿ ಭಟ್ ಮಾತನಾಡಿ, ಕೈಮಗ್ಗಗಳನ್ನು ಪುನಃಶ್ಚೇತನಗೊಳಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸುವುದರ ಮೂಲಕ ಯುವಜನತೆ ಇದರೆಡೆಗೆ ಆಕರ್ಷಿತವಾಗುವಂತೆ ಹಾಗೂ ಲಾಭದಾಯಕವಾಗುವಂತೆ ಮಾಡಬೇಕು. ಕೈಮಗ್ಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು ಎಂದರು.
ಕೈಮಗ್ಗ ಉತ್ಪನ್ನಗಳಿಗೆ ವಿಧಿಸಲಾಗಿರುವ ಜಿ.ಎಸ್.ಟಿ ದರವನ್ನು 12% ರಿಂದ 5% ಗೆ ಇಳಿಕೆ ಮಾಡಬೇಕು. ನೇಕಾರರಿಗೆ ನೀಡುವ ಮಜೂರಿ ಮೇಲೆ 10% ಇನ್ಸೆಂಟಿವ್ ಹಾಗೂ ಪ್ರೋತ್ಸಾಹಧನ ನೀಡಬೇಕು ಎಂದು ನೇಕಾರರು ಸಚಿವರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ್, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಅಶೋಕ್, ದ.ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಶಿವಶಂಕರ್, ನೇಕಾರರ ಸಂಘದ ಅಧ್ಯಕ್ಷ ಅಬ್ನೆಸರ್ ಸತ್ಯಾರ್ಥಿ, ಶಿವಳ್ಳಿ ನೇಕಾರರ ಸಂಘದ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ಸ್ವಾಗತಿಸಿ, ವಂದಿಸಿದರು.
ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ವಿಶೇಷ ಭಜನಾ ಕಾರ್ಯಕ್ರಮ

Posted On: 31-12-2021 06:25PM
ಶಿರ್ವ : ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ಆವರಣದಲ್ಲಿರುವ ಭವ್ಯ ಏಕಶಿಲಾ ಪರಶುರಾಮ ವಿಗ್ರಹವನ್ನೊಳಗೊಂಡ ಪರಶುರಾಮೇಶ್ವರ ದೇವಸ್ಥಾನದಲ್ಲಿ ನಾಗೇಶ್ವರ ಭಜನಾ ಮಂಡಳಿ, ಪಡುಬಿದ್ರಿ - ಮೂಲ್ಕಿ ವಲಯ ಇವರಿಂದ ಡಿಸೆಂಬರ್ 31 ರಂದು ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು.

ಭಜನಾ ಮಂಡಳಿಯ ನೇತೃತ್ವವನ್ನು ಶ್ರೀ ಚಂದ್ರಹಾಸ್ ವಹಿಸಿದ್ದರು. ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ತರುವಾಯ ಮಾತನಾಡಿದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ಮಾತನಾಡಿ, ಅಕ್ಷರ ಕಲಿಸುವ ವಿದ್ಯಾಲಯ ಹಾಗೂ ದೇವರ ಸಾನಿಧ್ಯವಿರುವ ದೇವಾಲಯ - ಇವೆರಡೂ ಒಟ್ಟಿಗೆ ಇರುವ ವಿಶೇಷ ಕ್ಷೇತ್ರ ಈ ಪರಶುರಾಮೇಶ್ವರ ಕ್ಷೇತ್ರ ಎಂದು ಬಣ್ಣಿಸಿದರು. ಭಜನೆಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಸೌಹಾರ್ದತೆ, ಸಹಬಾಳ್ವೆ ಮತ್ತು ಉದಾರತೆಯ ಸದ್ಗುಣಗಳನ್ನು ಬೆಳೆಸುತ್ತವೆ ಎಂದರು.
ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾ : ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ಗೆ ಆಯ್ಕೆ

Posted On: 30-12-2021 10:08PM
ಉಡುಪಿ : ರಾಜಾಪುರ ಸಾರಸ್ವತ ಕೊಂಕಣಿ ಭಾಷೆಯ ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾ 2021-22 ನೇ ಸಾಲಿನ ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಅಧಿಕೃತವಾಗಿ ಆಯ್ಕೆಗೊಂಡಿದೆ.
ಈ ಸಿನಿಮಾವನ್ನು ಮಾಡಲು ಕಳೆದ ಎರಡು ವರ್ಷಗಳಿಂದ ನಾವು ಪಟ್ಟ ಪರಿಶ್ರಮಕ್ಕೆ ಇಂದು ಬೆಲೆ ಸಿಕ್ಕಂತಾಗಿದೆ. ಅದೆಷ್ಟೋ ಸಿನೆಮಾ ನಿರ್ದೇಶಕರು, ಸಿನೆಮಾ ತಂಡದವರು ತಾವು ಮಾಡಿದ ಸಿನೆಮಾ ಒಮ್ಮೆಯಾದರೂ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ನಮ್ಮ ತಂಡದ ಈ ಕನಸು ಇಂದು ನನಸಾಗಿದೆ.
ಅಂತರಾಷ್ಟ್ರೀಯ ಸಿನೆಮಾ ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದು, ಪ್ರಶಸ್ತಿ ಗೆದ್ದಷ್ಟೇ ಖುಷಿ ನಮ್ಮದಾಗಿದೆ ಎಂದು ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾದ ಛಾಯಾಗ್ರಾಹಕರಾದ ಭುವನೇಶ್ ಪ್ರಭು ಹಿರೇಬೆಟ್ಟು ತಿಳಿಸಿದರು.
ಎರಡು ರಾಷ್ಟ್ರೀಯ ಪಕ್ಷಗಳ ಹಣ ಬಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋಲು ; ಮತದಾರ ಬಾಂಧವರಿಗೆ ಧನ್ಯವಾದಗಳು : ಯೋಗೀಶ್ ವಿ. ಶೆಟ್ಟಿ

Posted On: 30-12-2021 07:14PM
ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ(ಜಾತ್ಯತೀತ) 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು, ನಾಲ್ಕುಕಡೆ ನಾವು ಗೆಲುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಹಣ ಬಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋತಿದ್ದೇವೆ.
ನಮಗೆ ಆರ್ಥಿಕವಾಗಿ ಸ್ವಲ್ಪ ಕಷ್ಟವಾಯಿತು, ಕೊಂಬಗುಡ್ಡೆ ವಾರ್ಡ್ ನಲ್ಲಿ ನಾವು ಗೆಲುವು ಸಾಧಿಸಿದ್ದೇವೆ ಇದು ಪ್ರಾರಂಭ, ಯಾರು ಎಷ್ಟು ಲಘುವಾಗಿ ಮಾತನಾಡಲಿ, ನಾವು ನಮ್ಮದೇ ಆದ ರೀತಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸರಿಸಮಾನಾಗಿ ನಿಲ್ಲುತ್ತೇವೆ.
ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ನಮಗೆ ಬಂದಿರುತ್ತದೆ.
ಪುರಸಭಾ ಚುನಾವಣೆಯಲ್ಲಿ ಸಹಕರಿಸಿದ ಮತದಾರ ಬಾಂಧವರಿಗೆ ಧನ್ಯವಾದಗಳು ಎಂದು ಜನತಾದಳ(ಜಾತ್ಯತೀತ) ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಾಳೆ : Itsoksupport ಫೇಸ್ಬುಕ್ ಪೇಜ್ನಲ್ಲಿಆರ್ ಜೆ ಎರಾಲ್ ರಿಂದ ಸುಮತಾ ನಾಯಕ್ ಅಮ್ಮುಂಜೆ ಸಂದರ್ಶನ

Posted On: 30-12-2021 06:58PM
ಉಡುಪಿ : ಮಾನಸಿಕ ಆರೋಗ್ಯ, ಸಂಬಂಧಗಳಲ್ಲಿ ಜೀವಂತಿಕೆ, ಉತ್ತಮ ಆರೋಗ್ಯ ಹಾಗೂ ಮಕ್ಕಳ ಆರೋಗ್ಯಕರ ಬೆಳವಣಿಗೆ ಈ ವಿಚಾರದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡುತ್ತಿದ್ದಾರೆ ಸುಮತಾ ನಾಯಕ್ ಅಮ್ಮುಂಜೆ.
ಇವರ ವಿಶೇಷ ಸಂದರ್ಶನವು Itsoksupport ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಆರ್ ಜೆ ಎರಾಲ್ ಅವರೊಂದಿಗೆ ಡಿಸೆಂಬರ್ 31, ಸಂಜೆ 4 ಗಂಟೆಗೆ ಜರಗಲಿದೆ.
ಈ ಸಂದರ್ಭ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.