Updated News From Kaup

ಉಡುಪಿ : ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ

Thumbnail
Posted On: 11 Apr 2022, 10:55 PM

ಉಡುಪಿ : ರೋಟರಿ ಕ್ಲಬ್ ಕಲ್ಯಾಣಪುರ, ಜಿಲ್ಲಾ ಆಸ್ಪತ್ರೆ ಉಡುಪಿ, ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ ಮಂಗಳೂರು ತಜ್ಙ ದಂತ ವೈದ್ಯರಿಂದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರವನ್ನು ಉಡುಪಿಯ ಸರ್ಕಾರಿ ದಂತ ಚಿಕಿತ್ಸಾ ಆಸ್ಪತ್ರೆ ವಠಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಡಾಕ್ಟರ್ ನಾಗಭೂಷಣ ಉಡುಪ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಇಂತಹ ಸೇವೆಗಳು ತಾಲೂಕು ಮತ್ತು ಸಮುದಾಯ ಆಸ್ಪತ್ರೆ ಕೇಂದ್ರಗಳ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ದಾನಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಲ್ಲಿ ಇನ್ನೂ ಹೆಚ್ಚು ಫಲಾನುಭವಿಗಳಿಗೆ ಸಹಾಯ ಮಾಡಲು ಪ್ರಯತ್ನಿಸುವುದಾಗಿ ನುಡಿದರು. ಡಾಕ್ಟರ್ ಬೀಸು ನಾಯ್ಕ್, ಜಿಲ್ಲಾ ದಂತ ನೋಡಲ್ ಅಧಿಕಾರಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ದಂತ ಆರೋಗ್ಯ ರಕ್ಷಣೆ ಮಹತ್ವದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷರಾದ ಶಂಭು ಶಂಕರ್ ರವರು ಸಂದರ್ಭೋಚಿತವಾಗಿ ಮಾತನಾಡಿ ಫಲಾನುಭವಿಗಳಿಗೆ ಶುಭ ಹಾರೈಸಿದರು. ಡಾಕ್ಟರ್ ಚೇತನ್ ಹೆಗ್ಡೆ, ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ ಮಂಗಳೂರು ಇವರು ಮಾತನಾಡಿ 33 ವರ್ಷಗಳಿಂದ ಜನ ಸಮುದಾಯದ ಶಿಬಿರಗಳಿಗೆ ತಜ್ಞ ವೈದ್ಯಕೀಯ ತಂಡದೊಂದಿಗೆ ತೆರಳಿ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವ್ರತ್ತರಾಗಿರುವ ಸಂಸ್ಥೆಯಾಗಿದ್ದು ಸದಾ ಸೇವೆಗೆ ಲಭ್ಯವಿರುವುದಾಗಿ ತಿಳಿಸಿ ಶಿಬಿರದ ಆಯೋಜಕರಿಗೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾಕ್ಟರ್ ಮಧುಸೂದನ ನಾಯಕ್ ರವರು ಶಿಬಿರಕ್ಕೆ ಅರ್ಹ ಫಲಾನುಭವಿಗಳನ್ನು ಸಂಘಟಿಸಿ , ಪ್ರಯೋಜನವನ್ನು ಪಡೆದುಕೊಳ್ಳಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮೈಸೂರು ವಲಯದ ವಿಭಾಗೀಯ ನೋಡಲ್ ಅಧಿಕಾರಿ ಡಾಕ್ಟರ್ ಸತ್ಯ ಪ್ರಕಾಶ್, ಉಡುಪಿ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಚಂದ್ರಶೇಖರ್ ಅಡಿಗ, ಡಾಕ್ಟರ್ ಸುದೇಶ್ ಕುಮಾರ್, ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇದರ ಅಧ್ಯಕ್ಷರಾದ ಡಾಕ್ಟರ್ ರೋಶನ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ರೋಟರಿ ಕಾರ್ಯದರ್ಶಿ ಪ್ರಕಾಶ್ ಕುಮಾರ್ ಮತ್ತಿತರ ರೋಟರಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಒಂದು ದಿನದ ಈ ವಿಶೇಷ ಶಿಬಿರದಲ್ಲಿ 50 ಕ್ಕೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಉಚಿತವಾಗಿ ದಂತ ಪಂಕ್ತಿ ಜೋಡಣೆ ಮಾಡುವ ಮೂಲಕ ಯಶಸ್ವಿಯಾಗಿ ನಿರ್ವಹಿಸಲಾಯಿತು.

ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರಿಯ ಪ್ರಶಸ್ತಿಗೆ ಮೊಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ ಬಿ ಶೆಟ್ಟಿ ಕಳತ್ತೂರು ಆಯ್ಕೆ

Thumbnail
Posted On: 11 Apr 2022, 10:36 PM

ಕಾಪು : ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಏಪ್ರಿಲ್ 20 ರಂದು ಗೋವಾದ ಪಂಚಾತಾರ ಹೋಟೆಲ್ ವಿವಿಟಾ ತಾಜ್ ಸಭಾಂಗಣದಲ್ಲಿ ನಡೆಯುವ ಐ.ಜೆ.ಸಿ ಹಾಗೂ ಇ.ಜೆ.ಎಸ್.ಐ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿಗೆ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಮತ್ತು ದಿವಾಕರ ಬಿ ಶೆಟ್ಟಿ ಕಳತ್ತೂರು ಆಯ್ಕೆಯಾಗಿದ್ದಾರೆ ಎಂದು ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ಸಂಸ್ಥೆ ಇದರ ಅಧ್ಯಕ್ಷರಾದ ಗ್ಯಾನ್ ಪ್ರಕಾಶ್ ದೆಹಲಿ ಇವರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ. ಮೊಹಮ್ಮದ್ ಫಾರೂಕ್ ಉದ್ಯಮಿಯಾಗಿದ್ದು ಸ್ನೇಹ ಜೀವಿಯಾಗಿ ಕಾಪು ಪರಿಸರದ ಸಮಾಜ ಸೇವಕರಾಗಿ ಎಲ್ಲರ ಗಮನ ಸೆಳೆದು ನೂರಾರು ಕಡೆ ಗೌರವ ಸನ್ಮಾನ ಪಡೆದುಕೊಂಡಿರುತ್ತಾರೆ. ಈಗಾಗಲೇ ಏಶ್ಯನ್ ಫೆಸಿಫಿಕ್ ಗೋಲ್ಡ್ ಸ್ಟಾರ್ ರಾಷ್ಟ್ರಿಯ ಪ್ರಶಸ್ತಿ, ಕರ್ನಾಟಕ ಸರಕಾರ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೇರಳ-ಕರ್ನಾಟಕ ರಾಜ್ಯದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ಸಾಧಕ ರತ್ನ ಪ್ರಶಸ್ತಿ, ಕಾಸರಗೋಡು ಕೈರಳಿ ಪ್ರಕಾಶನ ಇವರಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ. ದಿವಾಕರ ಬಿ ಶೆಟ್ಟಿ ಕಳತ್ತೂರು ಇವರು ಕಳೆದ 30 ವರ್ಷಗಳಿಂದ ಕಾಪು ಕಳತ್ತೂರು ಪರಿಸರದಲ್ಲಿ 1000 ಕ್ಕೂ ಮಿಕ್ಕಿ ಸರಕಾರಿ ಸೌಲಭ್ಯ ಜನರಿಗೆ ತಲುಪುವ ವ್ಯವಸ್ಥೆ ಮಾಡಿರುವುದಲ್ಲದೆ ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ,ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುತ್ತಾರೆ. ವಿವಿಧ ಸಂಘಟನೆಯಿಂದ ಬಡ ಜನರಿಗೆ ಮನೆ ಕಟ್ಟುವಲ್ಲಿ ಸಹಾಯ ಮಾಡಿರುತ್ತಾರೆ. ಬಡವರ ಕಷ್ಟ ದಲ್ಲಿ ಸದಾ ಭಾಗಿಯಾಗುತ್ತಾರೆ. ಹವ್ಯಾಸಿ ಪತ್ರಕರ್ತರಾಗಿದ್ದು, ಕಾಪು ದ್ವಾದಶಿ ಪಬ್ಲಿಸಿಟಿ ನ್ಯೂಸ್ ಸರ್ವಿಸ್ ಇದರ ಆಡಳಿತ ನಿರ್ದೇಶಕರಾಗಿದ್ದು, ಗ್ರಾಮೀಣ ಮಟ್ಟದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋವಾದ ಸಚಿವರು ಕೇಂದ್ರ ಸಚಿವರು ಹಾಗೂ ಅನೇಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಹಿಂದೂ‌ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ನವಮಿ ಉತ್ಸವ ; ಸಾಮೂಹಿಕ ದೀಪ ಪ್ರಜ್ವಲನೆ ; ಮಂತ್ರ ಪಠಣ

Thumbnail
Posted On: 11 Apr 2022, 10:14 PM

ಕಾಪು : ವಿಶ್ವ ಹಿಂದೂ‌ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ನವಮಿ ಉತ್ಸವ ಕಾರ್ಯಕ್ರಮ ಜರಗಿತು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಉಪಾಧ್ಯಕ್ಷ ಜಗದೀಶ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು ಧಾರ್ಮಿಕ ಪ್ರವಚನ‌ ನೀಡಿದರು. ವಿಹಿಂಪ ಕಾಪು ಪ್ರಖಂಡ ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್, ಮಾತೃಶಕ್ತಿ ಮಟ್ಟಾರು ಇದರ ಪ್ರಮುಖ್ ಸುಲೋಚನಾ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ದೀಪ ಪ್ರಜ್ವಲನೆಗೆ ಅಯೋಧ್ಯಾ ಕರಸೇವಕರಾದ ರಮೇಶ್ ಪ್ರಭು ಮತ್ತು ದಿನೇಶ್ ಪಾಟ್ಕರ್ ಚಾಲನೆ ನೀಡಿದರು. ನೆರೆದಿರುವ ಎಲ್ಲರೂ ಸಾಮೂಹಿಕವಾಗಿ ಶ್ರೀರಾಮ ತಾರಕ ಮಂತ್ರ ಪಠಣ ಮಾಡಿದರು.

ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ವಿಭಾಗದ ಜನತಾದಳ ಪಕ್ಷದ ಅಧ್ಯಕ್ಷರಾಗಿ ಭರತ್ ಕುಮಾರ್ ಶೆಟ್ಟಿ ಆಯ್ಕೆ

Thumbnail
Posted On: 11 Apr 2022, 10:00 PM

ಕಾಪು : ಜನತಾದಳ( ಜಾತ್ಯತೀತ) ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ವಿಭಾಗದ ಅಧ್ಯಕ್ಷರನ್ನಾಗಿ ಭರತ್ ಕುಮಾರ್ ಶೆಟ್ಟಿ ಕಾಪುರವರನ್ನು ಜಿಲ್ಲಾಧ್ಯಕ್ಷರಾದ ಯೋಗಿಶ್ ವಿ ಶೆಟ್ಟಿಯವರು ನೇಮಕಾತಿ ಮಾಡಿರುತ್ತಾರೆ. ಭರತ್ ಕುಮಾರ್ ಶೆಟ್ಟಿಯವರು ಉದ್ಯಮಿಯಾಗಿದ್ದು, ಪಕ್ಷದಲ್ಲಿ ಸಕ್ರಿಯರಾಗಿದ್ದು ಅತ್ಯುತ್ತಮ ಸಮಾಜ ಸೇವಕರಾಗಿದ್ದಾರೆ.

ಮಂಗಳೂರು : ಯುವತಿಯರಿಬ್ಬರು ಸಮುದ್ರ ಪಾಲು

Thumbnail
Posted On: 10 Apr 2022, 04:56 PM

ಸುರತ್ಕಲ್ : ಇಲ್ಲಿಗೆ ಸಮೀಪದ ಎನ್ಐಟಿಕೆ ಬೀಚ್ ನಲ್ಲಿ ಬೆಂಗಳೂರು ಮೂಲದ ಯುವತಿಯರಿಬ್ಬರು ಸಮುದ್ರ ಪಾಲಾದ ಘಟನೆ ಏಪ್ರಿಲ್ 10ರಂದು ನಡೆದಿದೆ. ಮೃತರಾದವರನ್ನು ಬೆಂಗಳೂರಿನ ಶಕ್ತಿ ನಗರದ ವೈಷ್ಣವಿ (21) ಎಂದು ಗುರುತಿಸಲಾಗಿದ್ದು, ಈಕೆ ಎಜೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿಇ ವಿದ್ಯಾರ್ಥಿ. ಮತ್ತೋರ್ವಳು ಬೆಂಗಳೂರಿನ ನಿವಾಸಿ ತ್ರಿಶಾ (15) 9ನೇ ತರಗತಿ ತೇರ್ಗಡೆಯಾಗಿದ್ದು, ಈಗ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದಾಳೆ.

ಪಂಚಲಿಂಗೇಶ್ವರ ರಥೋತ್ಸವದಂದು ಸಾರ್ವಜನಿಕರ ಮನಸೂರೆಗೊಂಡ ಜಾನಪದ ವೈಭವ

Thumbnail
Posted On: 09 Apr 2022, 10:35 PM

ಬಾರ್ಕೂರು : ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವಾಲಯದ ರಥೋತ್ಸವದ ಪ್ರಯುಕ್ತ ಏಪ್ರಿಲ್ 8ರಂದು ಜಾನಪದ ವೈಭವ ಜರಗಿತು. ಈ ಸಂದರ್ಭ ಪಿ ಕಾಳಿಂಗ ರಾವ್ ಪ್ರತಿಷ್ಠಾನ ಬೆಂಗಳೂರು ಇವರು ಏರ್ಪಡಿಸಿದ ಜಾನಪದ ವೈಭವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ನಾಡಿನ ಖ್ಯಾತ ಸುಗಮ ಸಂಗೀತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಬಳಗದವರು ಜಾನಪದ ವೈಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಕಾಳಿಂಗ ರಾವ್ ಪ್ರತಿಷ್ಠಾನದ ವತಿಯಿಂದ ರಾಮಚಂದ್ರ ನಾಯಕ್ ಸರ್ಕಲ್ ಇನ್ಸ್ಪೆಕ್ಟರ್ ಆಂತರಿಕ ಭದ್ರತಾ ವಿಭಾಗ ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆ ಇವರು ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಸುಧಾಕರ ರಾವ್ ವಿಶ್ರಾಂತ ಮುಖ್ಯ ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಾರ್ಕೂರು ಹಾಗೂ ಉದ್ಯಮಿ ಸುರೇಶ್ ಗಾಣಿಗ ಮತ್ತು ಕಾಳಿಂಗ ರಾವ್ ಇವರ ಪುತ್ರ ಸಂತೋಷ್ ಕಾಳಿಂಗ ರಾವ್. ಬುಡಾನ್ ಸಾಹೇಬ್ ಪ್ರಸಾಧನ ವಿಭಾಗದ ಮುಖ್ಯಸ್ಥರಾದ ಶೌಕತ್ ಅಲಿ ಬಾರ್ಕೂರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಹಿರಿಯ ಗಾಯಕರು ಹಾಗೂ ಪಿ ಕಾಳಿಂಗ ರಾವ್ ಅವರ ಮೊಮ್ಮಗ ವಿಜಯ್ ಶಂಕರ್ ಸಂಯೋಜಿಸಿದರು. ಜಾನಪದ ವೈಭವ ಕಾರ್ಯಕ್ರಮಕ್ಕೆ ಸಹ ಗಾಯಕಿಯಾಗಿ ವಿಜಯಾ ಲಕ್ಷ್ಮಿ ಹಾವಾಂಜೆ, ಕೀಬೋರ್ಡ್ ಅಲ್ಲಿ ಚಂದ್ರ ಬೈಂದೂರು ಹಾಗೂ ಸುದರ್ಶನ ಮಲ್ಪೆ ತಬಲಾ ಮತ್ತು ಸತೀಶ್ ಆಚಾರ್ಯ ಬಸ್ರೂರು ರಿದಮ್ ಪ್ಯಾಡ್ ಅಲ್ಲಿ ಸಹಕರಿಸಿದರು.

ಉಚ್ಚಿಲ : ಮುಖ್ಯಮಂತ್ರಿ ಆಗಮನ - ಏಪ್ರಿಲ್ 11ಕ್ಕೆ ಮುಂದೂಡಿಕೆ

Thumbnail
Posted On: 08 Apr 2022, 03:41 PM

ಉಚ್ಚಿಲ : ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏಪ್ರಿಲ್ 9 ರಂದು 11 ಗಂಟೆಗೆ ನಡೆಯಬೇಕಿರುವ ಮುಖ್ಯಮಂತ್ರಿಗಳು ಪಾಲ್ಗೊಳ್ಳಬೇಕಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏಪ್ರಿಲ್ 11 ರಂದು ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ನಾಳೆಯ ಉಳಿದ ಎಲ್ಲಾ ಕಾರ್ಯಕ್ರಮಗಳು ಯಥಾವತ್ತಾಗಿ ಜರಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಸ್ತೆಗಳ ಬ್ಲಾಕ್ಸ್ಪಾಟ್ನಲ್ಲಿ ಅಪಘಾತವಾಗಿ ಜೀವಹಾನಿಯಾದಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ : ಜಿಲ್ಲಾಧಿಕಾರಿ ಎಚ್ಚರಿಕೆ

Thumbnail
Posted On: 07 Apr 2022, 09:26 PM

ಉಡುಪಿ : ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ರಸ್ತೆ ಬ್ಲಾಕ್ಸ್ಪಾಟ್ಗಳನ್ನು ಸಂಬಂಧಪಟ್ಟ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು 15 ದಿನಗಳಲ್ಲಿ ತೆರವುಗೊಳಿಸಬೇಕು. 15 ದಿನದ ನಂತರ ಆ ಪ್ರದೇಶದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾದಲ್ಲಿ ರಸ್ತೆಯನ್ನು ನಿರ್ಮಿಸಿ, ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಎ ರಲ್ಲಿ ಒಟ್ಟು 33 ಅಪಘಾತ ಸಂಭವಿಸುವ ಬ್ಲಾಕ್ಸ್ಪಾಟ್ಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದು, ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇನ್ನು 15 ದಿನದಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಅಗತ್ಯ ದುರಸ್ಥಿ ಕಾರ್ಯ ಕೈಗೊಂಡು ವರದಿ ನೀಡಬೇಕು. ದುರಸ್ಥಿ ಮಾಡದೇ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿ, ಜೀವ ಹಾನಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ, ಸಾವಿಗೆ ಕಾರಣವಾದ ಕುರಿತು ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಬ್ಲಾಕ್ಸ್ಪಾಟ್ಗಳ ದುರಸ್ಥಿ ಮಾಡುವ ಕುರಿತಂತೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಮತ್ತು ಪ್ರಾದೇಶಿಕ ನಿರ್ದೇಶಕರುಗಳಿಗೂ ಸಹ ಪತ್ರ ಬರೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯೊಳಗಿನ ಇತರೆ ರಸ್ತೆಗಳಲ್ಲಿಯೂ ಇರುವ ಬ್ಲಾಕ್ಸ್ಪಾಟ್ಗಳಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸಿ ಜೀವ ಹಾನಿಯಾದರೆ, ಮರಳಿ ವ್ಯಕ್ತಿಯ ಜೀವ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಇತ್ತೀಚೆಗೆ ಸಂತೆಕಟ್ಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಿಯಾದ ಪೊಲೀಸ್ ಅಧಿಕಾರಿ ಮತ್ತು ಮಗಳ ಸಾವಿನ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಮಣಿಪಾಲದ ಟೈಗರ್ ಸರ್ಕಲ್ ಬಳಿ ಅಳವಡಿಸಿರುವ ಸಿಗ್ನಲ್ನಿಂದ ರಸ್ತೆಯ ಬಲ ಮತ್ತು ಎಡ ಬದಿಯ ಕ್ರಾಸ್ಗಳಿಂದ ಬರುವ ವಾಹನ ಸವಾರರಿಗೆ ಸಿಗ್ನಲ್ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದರು. ಮಣಿಪಾಲದ ಈಶ್ವರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೀಸಲಿಟ್ಟ ಪ್ರದೇಶದಲ್ಲಿರುವ ರಿಕ್ಷಾ ನಿಲ್ದಾಣ ತೆರವುಗೊಳಿಸುವ ಬಗ್ಗೆ ಬಂದಿರುವ ದೂರಿನ ಕುರಿತಂತೆ ನಗರಸಭೆ, ಆರ್.ಟಿ.ಓ, ಪೋಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು. ಲಕ್ಷ್ಮೀಂದ್ರ ನಗರದ ಬಳಿ ಯೂಟರ್ನ್ ನಿರ್ಮಾಣದ ಅಗತ್ಯತೆ ಬಗ್ಗೆ ಎಸ್ಪಿ ವಿಷ್ಣುವರ್ಧನ್ ತಿಳಿಸಿದರು. ಕೂಡಲೇ ಇಲ್ಲಿ ಯೂಟರ್ನ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಿಂದ ಶಿರೂರುವರೆಗೆ ಅಗತ್ಯವಿರುವೆಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಎಸ್ಪಿ ತಿಳಿಸಿದರು. ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ 2021-22 ನೇ ಸಾಲಿನಲ್ಲಿ 18754 ವಾಹನ ತಪಾಸಣೆ ಮಾಡಿ, 2731 ಪ್ರಕರಣ ದಾಖಲಿಸಿ, 192 ವಾಹನ ಮುಟ್ಟುಗೂಲು ಹಾಕಿ, ತೆರಿಗೆ 79,81,250 ರೂ. ಹಾಗೂ ದಂಡ, 105,77,020 ರೂ. ಸೇರಿದಂತೆ ಒಟ್ಟು 1,85,58.270 ರೂ. ಅನ್ನು ವಸೂಲು ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿಗಳ ಭೇಟಿ - ಪೂರ್ವಭಾವಿ ಸಭೆ

Thumbnail
Posted On: 07 Apr 2022, 09:20 PM

ಉಡುಪಿ : ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 11 ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧ್ಯಕ್ಷತೆಯಲ್ಲಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ಪೂರ್ವಭಾವಿ ಸಭೆ ಇಂದು ನಡೆಯಿತು. ಮುಖ್ಯಮಂತ್ರಿಗಳು ಏಪ್ರಿಲ್ 11 ರಂದು ಬೆಳಗ್ಗೆ 12 ಗಂಟೆಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 2.30 ಕ್ಕೆ ಉಡುಪಿಯಲ್ಲಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಲಿದ್ದು, ಗ್ರಂಥಾಲಯದಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದು, ಗ್ರಂಥಾಲಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ನಿರ್ಮಿತಿ ಕೇಂದ್ರ ಮತ್ತು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು. ನಂತರ 3.30 ಕ್ಕೆ ಬನ್ನಂಜೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟಿಸಲಿದ್ದು, ನಂತರ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಪಘಾತ ರಹಿತ ಬಸ್ ಚಾಲನೆ ಮಾಡಿದ ಚಾಲಕರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 07 Apr 2022, 09:15 PM

ಉಡುಪಿ : ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದರು. ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳು ಮತ್ತು ನಗರ ಪ್ರದೇಶದ ವಾರ್ಡ್ಗಳ ಪಟ್ಟಿ ಮಾಡಿಕೊಂಡು, ಆ ಪ್ರದೇಶಗಳಲ್ಲಿ ಈ ಬಾರಿ ಸಮಸ್ಯೆ ತಲೆದೋರದಂತೆ, ನೀರಿನ ಸರಬರಾಜು ಮಾಡಲು ತಕ್ಷಣದಿಂದಲೇ ಯೋಜನೆ ರೂಪಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಮಸ್ಯೆ ಕಂಡು ಬಂದಲೇ ನೀರು ಸರಬರಾಜು ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಬೆಳೆಹಾನಿ, ಪ್ರಾಕೃತಿಕ ವಿಕೋಪ ಹಾನಿಯ ವಿವರಗಳನ್ನು ದಾಖಲಿಸಲು ವೆಬ್ ಆಧಾರಿತ ತಂತ್ರಜ್ಞಾನ ಇದ್ದು, ಇದರಲ್ಲಿಯೇ ಎಲ್ಲಾ ಹಾನಿಯ ವಿವರಗಳನ್ನು ದಾಖಲಿಸಿ. ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಸಲುವಾಗಿ, ನಿರ್ಮಿಸಲು ಉದ್ದೇಶಿಸಿರುವ ಡಿಜಿಟಲ್ ರೇಡಿಯೋ ಟವರ್ ಮತ್ತು ಸೈರನ್ ಟವರ್ಗಳನ್ನು ಅಳವಡಿಸಲು, ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಶೀಘ್ರದಲ್ಲಿ ಟವರ್ ಅಳವಡಿಕೆ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದು ತಿಳಿಸಿದರು. ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಕಾರ್ಯದಲ್ಲಿ ತೊಡಗುವ ಸಂಬಂಧಪಟ್ಟ ಇಲಾಖೆಗಳು, ತಮಗೆ ಅಗತ್ಯವಿರುವ ರಕ್ಷಣಾ ಉಪಕರಣಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ, ಅವುಗಳನ್ನು ಸರಬರಾಜು ಮಾಡಲಾಗುವುದು. ಈಗಾಗಲೇ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಖಾತೆಯಲ್ಲಿ ವಿಕೋಪ ನಿರ್ವಹಣೆಗೆ ಮೊತ್ತವನ್ನು ಹಂಚಿಕೆ ಮಾಡಿದ್ದು, ಜಿಲ್ಲಾ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು. ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಅಂಶು ಕುಮಾರ್, ಅಪರ ಜಿಲ್ಲಾಧಿಕಾರಿ ವೀಣಾ, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಎಎಸ್ಪಿ ಸಿದ್ಧಲಿಂಗಪ್ಪ, ರಾಜ್ಯ ಯೋಜನಾ ಅನುಷ್ಠಾನ ಘಟಕದ ಯೋಜನಾ ವ್ಯವಸ್ಥಾಪಕ ಡಾ.ರಾಜ್ಕುಮಾರ್ ಪೂಜಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.