Updated News From Kaup

ಬೆರಳು ಮುದ್ರೆ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕ ಅಸ್ವಸ್ತಗೊಂಡು ಕುಸಿದು ಸಾವು

Thumbnail
Posted On: 04 Mar 2022, 10:50 PM

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಿಪ್ಪಣ್ಣ ನಾಗವ್ವ ಮಾದರ (37) ಅಸ್ವಸ್ತಗೊಂಡು ಕುಸಿದಿದ್ದ ಇವರನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವ ಘಟನೆ ಮಾಚ್೯ 4ರ ಸಂಜೆ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ತಿಪ್ಪಣ್ಣ ನಾಗವ್ವ ಮಾದರ ಪಾಂಡೇಶ್ವರದಲ್ಲಿರುವ ಜಿಲ್ಲಾ ಎಸ್. ಪಿ. ಕಛೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಬರುತ್ತಿರುವಾಗ ಎ.ಬಿ . ಶೆಟ್ಟಿ ಸರ್ಕಲ್ ಬಳಿ ಅಸ್ವಸ್ತಗೊಂಡು ಕುಸಿದು ಬಿದ್ದವರನ್ನು ಸಿ. ಎ. ಆರ್. ಸಿಬ್ಬಂದಿ ರಮೇಶ್ ರವರು ಕೂಡಲೇ ಉಪಚರಿಸಿ ಎಂ. ವಿ. ಶೆಟ್ಟಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಕೂಡಲೇ ಅಂಬುಲೇನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕೆ. ಎಂ.ಸಿ. ಜ್ಯೋತಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ. ಇವರು 2011 ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ (FPB) ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಾಗಲಕೋಟೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದವರು ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳುಗಳಿಂದ ಎ.ಎಸ್.ಐ. (ಎಫ್.ಪಿ.ಬಿ.) ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪತ್ನಿ ದೀಪಾ ತಿಪ್ಪಣ್ಣ ಮಾದರ್ ಮತ್ತು ಮಕ್ಕಳಾದ ನಿಹಾರಿಕಾ (ಆರು ವರ್ಷ) ಅನ್ವಿತಾ (ಮೂರುವರೆ ವರ್ಷ) ಹಾಗೂ ನಿಶಾಂತ್ (ಒಂದೂವರೆ ವರ್ಷ) ಎಂಬ ಮೂರು ಮಕ್ಕಳನ್ನು ಅಗಲಿರುತ್ತಾರೆ.

ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಮಲ್ಲಂಪಳ್ಳಿ ಪೆರಂಪಳ್ಳಿ : ವೈಭವದ ಹೊರಕಾಣಿಕೆ

Thumbnail
Posted On: 04 Mar 2022, 10:06 PM

ಉಡುಪಿ : ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಮಲ್ಲಂಪಳ್ಳಿ ಪೆರಂಪಳ್ಳಿಯಲ್ಲಿ ಮಾಚ್೯ 5 ಮತ್ತು 6ರಂದು ಜರಗಲಿರುವ ಸಿರಿ ಸಿಂಗಾರ ನೇಮೋತ್ಸವದ ವೈಭವದ ಹೊರಕಾಣಿಕೆ ಮೆರವಣಿಗೆಗೆ ನಿತಿನ್ ಪೂಜಾರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ ಯಾದವ್ ಆಚಾರ್ಯ, ಗೌರವ ಅಧ್ಯಕ್ಷರಾದ ರಾಧಾಕೃಷ್ಣ, ಆಡಳಿತ ಮಂಡಳಿ ಸದಸ್ಯರಾದ ವಿನೋದ್ ಶೆಟ್ಟಿ, ಸುರೇಶ್ ಪಾಲನ್, ಕೃಷ್ಣ ನಾಯ್ಕ್, ಗುರಿಕಾರರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತಿಯಿದ್ದರು. ಮಾಹಿತಿ : ಸಮಿತ್ ಶೆಟ್ಟಿ ಪರ್ಕಳ

ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರುರಿಗೆ ವೈದ್ಯ ಬ್ರಹ್ಮ ಪ್ರಶಸ್ತಿ

Thumbnail
Posted On: 04 Mar 2022, 05:02 PM

ಮಂಗಳೂರು : ಮಂಗಳೂರಿನ ವೈದ್ಯ ಡಾ. ಎಂ.ಅಣ್ಣಯ್ಯ ಕುಲಾಲ್ ಉಳ್ತೂರುರಿಗೆ ಹೂವಿನ ಹಡಗಲಿಯ ರಾಜ್ಯ ಬರಹಗಾರರ ಸಂಘದ ನೇತೃತ್ವದಲ್ಲಿ ಹಾಸನದಲ್ಲಿ ಜರಗಿದ ಕನ್ನಡ ನುಡಿ ವೈಭವ 2022ರಲ್ಲಿ ವೈದ್ಯ ಬ್ರಹ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಣ್ಣಯ್ಯರವರ ಸಮಾಜಮುಖಿ ಸೇವೆ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಮಾರ್ಚ್ 6: ವಿಶ್ವ ಮಹಿಳಾ ದಿನದ ಅಂಗವಾಗಿ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

Thumbnail
Posted On: 02 Mar 2022, 08:35 PM

ಕಾಪು :ಬಿಜೆಪಿ ಮಹಿಳಾ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರ, ಆರೋಗ್ಯ ಭಾರತಿ ಘಟಕ ಕಾಪು ತಾಲೂಕು ಹಾಗೂ ಜಿಲ್ಲಾ ಸಮಿತಿ ಇವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಕುತ್ಪಾಡಿ ಇವರ ಸಹಯೋಗದೊಂದಿಗೆ ತಜ್ಞ ವೈದರಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಉಚಿತ ಆಯುರ್ವೇದ ಅರೋಗ್ಯ ತಪಾಸಣಾ ಶಿಬಿರವು ಮಾರ್ಚ್ 6, ಭಾನುವಾರ ಬೆಳಿಗ್ಗೆ 9.30 ರಿಂದ 1ರ ತನಕ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೀಮ್ ಮೋದಿ ಕಾಪು ವಲಯದಿಂದ ನಾಳೆ ಮಹಾರುದ್ರಯಾಗ

Thumbnail
Posted On: 02 Mar 2022, 08:25 PM

ಕಾಪು :ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ಧಿ, ಹಿಂದುತ್ವದ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾರುದ್ರಯಾಗವು ಟೀಮ್ ಮೋದಿ ಕಾಪು ವಲಯದ ವತಿಯಿಂದ ಯಶ್ ಪಾಲ್ ಸುವರ್ಣರ ಸಹಕಾರದೊಂದಿಗೆ ಮಾಚ್೯ 3ರಂದು ಕಾಪು ತಾಲೂಕಿನ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿದೆ. ಬೆಳಿಗ್ಗೆ 6ರಿಂದ ಪ್ರಾರಂಭಗೊಂಡು 10:30ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದಿಂದ ಮುದ್ರಕರ ದಿನಾಚರಣೆ

Thumbnail
Posted On: 02 Mar 2022, 05:45 PM

ಉಡುಪಿ : ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇದರ ವತಿಯಿಂದ ಮುದ್ರಕರ ದಿನಾಚರಣೆಯು ಅಮೃತ್ ಗಾರ್ಡನ್ ನಲ್ಲಿ ಜರಗಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಮ್ ಮಹೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಂಗ್ ಕಮಾಂಡರ್ ಎ ಎಸ್ ಭೋಜರಾಜ್ ಹಾಗೂ ಮುದ್ರಕ ಸೌಹಾರ್ದ ಸಹಕಾರಿ ಯ ಅಧ್ಯಕ್ಷರಾದ ಬಿ ಜಿ ಸುಬ್ಬರಾವ್ ಉಪಸ್ಥಿತರಿದ್ದರು. ಹಿರಿಯ ಮುದ್ರಕರ ಗೌರವ ಸನ್ಮಾನವನ್ನು ಹಿರಿಯ ಮುದ್ರಕರಾದ ಯು ಮೋಹನ್ ಉಪಾಧ್ಯ, ಆದರ್ಶ ಪ್ರಿಂಟರ್ಸ್ ಉಡುಪಿ ಶಿವರಾಮ್ ಆಚಾರ್ಯ, ಶ್ರೀರಾಮ್ ಪ್ರಿಂಟರ್ಸ್ ಕಾಪು ಕಡರಿ ರವೀಂದ್ರ ಪ್ರಭು, ಮಹಾಲಕ್ಷ್ಮಿ ಪ್ರಿಂಟರ್ಸ್ ಕಾರ್ಕಳ ನಾರಾಯಣ ಕುಂದರ್, ಉಷಾ ಪ್ರಿಂಟರ್ಸ್ ಕುಂದಾಪುರ ಇವರಿಗೆ ನೀಡಿ ಗೌರವಿಸಲಾಯಿತು. ಅದ್ರಷ್ಟ ವ್ಯಕ್ತಿಗಳಾಗಿ ಚಂದ್ರ ನಾಯಿರಿ ಹಾಗೂ ವಿವೇಕಾನಂದ ಕಾಮತ್ ಬಹುಮಾನ ಪಡೆದರು. ಪ್ರಧಾನ ಕಾರ್ಯದರ್ಶಿ ಮನೋಜ್ ಕಡಬ ಸ್ವಾಗತಿಸಿದರು. ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಯವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ರಮೇಶ್ ಕುಂದರ್ ನೆರವೇರಿಸಿದರು. ಕೋಶಾಧಿಕಾರಿ ಸುಧೀರ್ ಡಿ ಬಂಗೇರ ಧನ್ಯವಾದವಿತ್ತರು.

ಆಟವಾಡಲು ಹೋಗಿ ಕಾಣೆಯಾದ ಬಾಲಕ ಶವವಾಗಿ ಪತ್ತೆ

Thumbnail
Posted On: 28 Feb 2022, 11:21 PM

ಮಂಗಳೂರು : ಮನೆಯ ಹತ್ತಿರದ ಆಟದ ಮೈದಾನಕ್ಕೆ ಕ್ರಿಕೆಟ್ ಆಟಕ್ಕೆ ತೆರಳಿದ ಬಾಲಕ ಮನೆಗೆ ಬಾರದಿದ್ದನ್ನು ಕಂಡು ಕಾಣೆಯಾದ ಬಗ್ಗೆ ಬಾಲಕನ ತಾಯಿ ದೂರು ನೀಡಿದ್ದರು. ಸಂಜೆಯ ವೇಳೆ ಹೊಯ್ಗೆ ಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಾಕಾಳಿ ಪಡ್ಪು ನಿವಾಸಿಗಳಾದ ಆಶಾ ಮತ್ತು ಚೆನ್ನಪ್ಪ ದಂಪತಿಯ ಪುತ್ರ ದೃಶ್ಯಾಂತ್ (16) ನಗರದ ರೋಸಾರಿಯೋ ಶಾಲೆನಲ್ಲಿ 9ನೇ ತರಗತಿಯಲ್ಲಿ, ವ್ಯಾಸಾಂಗ ಮಾಡುತ್ತಿದ್ದು, ಫೆಬ್ರವರಿ 27ರಂದು ಶಾಲೆಗೆ ರಜೆ ಇದ್ದ ಕಾರಣ ಮಹಾಕಾಳಿ ಪಡ್ಪು ಮೈದಾನದಲ್ಲಿ, ಕ್ರಿಕೆಟ್ ಮ್ಯಾಚ್ ನಲ್ಲಿ ಭಾಗವಹಿಸಿ, ಅವನ ಸ್ನೇಹಿತರೆಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ಬಾಲಕ ಮನೆಗೆ ಬಂದಿರದೆ ಇದ್ದುದನ್ನು ಕಂಡು ಕೂಡಲೇ ಅವನ ಸ್ನೇಹಿತರಲ್ಲಿ ಹಾಗೂ ಪರಿಚಯದವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆಯದಿದ್ದನ್ನು ಕಂಡು ಬಾಲಕನ ತಾಯಿ ಪಾಂಡೇಶ್ವರ ಠಾಣೆಯಲ್ಲಿ ದೂರನ್ನು ನೀಡಿದ್ದರು. ಸಂಜೆಯ ವೇಳೆ ಹೊಯ್ಗೆ ಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ .ಈ ಘಟನೆಯ ಬಗ್ಗೆ ನಿಖರವಾದ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.

ಇ ಸಮುದಾಯ್ ಆಪ್ ಡೌನ್ಲೋಡ್ ಮಾಡಿ - ನಿಮಗೆ ಬೇಕಾದ ದಿನಸಿ, ಆಹಾರ ಪದಾರ್ಥಗಳು ಮನೆ ಬಾಗಿಲಿಗೆ

Thumbnail
Posted On: 28 Feb 2022, 10:43 PM

ಕಾಪು : ಸಾರ್ವಜನಿಕರಿಗೆ ಬೇಕಾದ ದಿನಸಿ ವಸ್ತುಗಳು, ಆಹಾರ ಪದಾರ್ಥ, ತಿಂಡಿತಿನಿಸುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಯು ಇದೀಗ ಕಾಪುವಿನಲ್ಲಿ ಪ್ರಾರಂಭವಾಗಿದೆ. ಈ ಸಮುದಾಯ ಆಪ್ ಡೌನ್ಲೋಡ್ ಮಾಡಿ ಆನ್ಲೈನ್ ಮೂಲಕ ಅಲ್ಲಿ ಸೂಚಿಸಿದ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ : APP LINK FACEBOOK PAGE LINK

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರ

Thumbnail
Posted On: 28 Feb 2022, 05:47 PM

ಶಿರ್ವ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಪದವೀಧರ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನ ಕಲಿಕೆಯು ಕಾಲೇಜು ಹಂತದಲ್ಲಿ ಕಲಿಯುವ ಮೂಲಕ ಮುಂದೆ ಸಮಾಜಕ್ಕೆ ಬೇಕಾಗುವ ನುರಿತ ತಂತ್ರಾಂಶವನ್ನು ರೂಪಿಸಲು ಮತ್ತು ಸಂಶೋಧನಾ ಮನಸ್ಥಿತಿಯನ್ನು ಬೆಳೆಸಲು ಇಂತಹ ಕಾರ್ಯಗಾರ ಸಹಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಬಿಸಿಎ ವಿದ್ಯಾರ್ಥಿಗಳಿಗೆ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಏರ್ಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಪ್ರೋ ಕಂಪನಿಯ ಜೂನಿಯರ್ ಅಸೋಸಿಯೇಟ್ ರಿಯಾನ್ ರಿಷಿ ಅಲ್ಫೋನ್ಸೋ ಮಾತನಾಡಿದರು. ತಾಂತ್ರಿಕ ಪರಿಣತಿಯೊಂದಿಗೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯೂ ಅಗತ್ಯ. ಈ ಅವಶ್ಯಕತೆಗಳನ್ನು ಪೂರೈಸಲು, ಉದ್ಯಮದ ಮಾನದಂಡಗಳಿಗೆ ಸಮಾನವಾಗಿ ಕಂಪ್ಯೂಟರ್ ಪದವೀಧರರ ಸಾಮರ್ಥ್ಯವನ್ನು ಹೆಚ್ಚಿಸಲು ಕಾಲೇಜು ಹಂತದಲ್ಲೇ ಇಂತಹ ಸಂಪೂರ್ಣ ತರಬೇತಿ ಪಡೆದುಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಮುಂದೆ ವಿವಿಧ ವಿಜ್ಞಾನಿಗಳ ಆಗಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ನುಡಿದರು. ಪ್ರತಿ ಸ್ಟಾರ್ಟ್‌ಅಪ್‌ಗೆ ಉತ್ತಮ ಐಡಿಯಾ ಬೇಕು. ಅನನ್ಯ ಮತ್ತು ಬಲವಾದ ಪೂರೈಸಬಹುದಾದ ಗ್ರಾಹಕರ ಅಗತ್ಯವನ್ನು ಕಂಡುಕೊಂಡಾಗ ಆರಂಭಿಕ ವ್ಯವಹಾರಗಳು ಯಶಸ್ವಿಯಾಗುತ್ತವೆ. ಯಾವುದೇ ಸಂದರ್ಭದಲ್ಲಿ, ಉತ್ತಮ ಆಲೋಚನೆ, ಸರಿಯಾದ ಮಾನದಂಡಗಳಿಗೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿಗೆ ನಿರ್ಣಾಯಕವಾಗಿದೆ. ಈ ಪ್ರಮುಖ ಅಂಶವನ್ನು ಪರಿಗಣನೆಗೆ ಇಟ್ಟುಕೊಂಡು, ಪದವಿ ವಿದ್ಯಾರ್ಥಿಗಳು ತಮ್ಮ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವಿವಿಧ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗವನ್ನು ಸಾಧಿಸಲು ಇಂತಹ ಕಾರ್ಯಗಾರ ಇಂದು ಅನಿವಾರ್ಯವಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಪ್ರೋ ಕಂಪನಿಯ ಜ್ಯೂನಿಯರ್ ಅಸೋಸಿಯೇಟ್ ಪೂಜಾರಿ ಪ್ರತಿಕ್ ಪ್ರಭಾಕರ್, ಉಪನ್ಯಾಸಕ ಪ್ರಕಾಶ್, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ್, ದೀಕ್ಷಿತ್ ಹಾಗೂ ಸಾತ್ವಿಕ್ ಜೆ ಕೋಟ್ಯಾನ್ ಸಹಕರಿಸಿದರು. ಹರ್ಷಿತ ಮತ್ತು ಬಳಗ ಪ್ರಾರ್ಥಿಸಿ, ಶ್ರಾವ್ಯ ವಂದಿಸಿದರು. ಛಾಯಾ ಏ ಕರ್ಕೇರ ಸ್ವಾಗತಿಸಿ, ಚಂದನ ಕಾರ್ಯಕ್ರಮ ನಿರೂಪಿಸಿದರು.

ಶಿವರಾತ್ರಿ - ಶರ್ವನಿಗೆ ಶರಣಾರ್ಥಿಯ ಶರಣು

Thumbnail
Posted On: 28 Feb 2022, 05:30 PM

ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆ ವಿಶಿಷ್ಟವಾದುದು : • ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ಜಗವು ಶಿವನಿಂದ ಬೇರಿಲ್ಲ ಈ ಬೆಡಗ ಅಘಹರನೇ ಬಲ್ಲ ಸರ್ವಜ್ಞ' 'ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ'. ‌‌‌ • 'ರಾತ್ರಿಯೊಳು ಶಿವರಾತ್ರಿ' ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ . • ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ . • ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ .ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು. • 'ಚೆನ್ನಮಲ್ಲಿಕಾರ್ಜುನಯ್ಯ ,ಆತ್ಮ ಸಂಗಾತಕ್ಕೆ ನೀನೆನಗುಂಟು', ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ. ಮಾನವ ಚಿಂತನೆಗೆ ಸುಲಭ ಗ್ರಹ್ಯವಾಗಬಲ್ಲ ಮನುಕುಲಕ್ಕೆ ಸಮೀಪವರ್ತಿಯಾಗಿ ಬಹುಮುಖ ವ್ಯಕ್ತಿತ್ವದಿಂದ ಬಹುಮಾನ್ಯನಾದ ದೇವರು ’ಶಿವ’. ಈ ಜನಪ್ರಿಯ ದೇವರ ಆರಾಧನಾ ಪರ್ವವೇ ’ಶಿವರಾತ್ರಿ’. ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಸನ್ನಿಹಿತವಾಗುತ್ತದೆ ಈ ಶುಭ ದಿನ. 'ಪರ್ವ' ಎಂದಾಗ 'ಹಬ್ಬ'ವೆಂದು ಆಚರಿಸುವ, ಆ ಮೂಲಕ ಸಂಭ್ರಮಿಸುವ ಅವಕಾಶ ’ಶಿವರಾತ್ರಿ’ ಸಂದರ್ಭದಲ್ಲಿಲ್ಲ. ಉಪವಾಸ, ರಾತ್ರಿ ಜಾಗರಣೆ, ಶಿವಧ್ಯಾನದಲ್ಲಿ ತೊಡಗಿ ಅಭಿಷಾಕಾದಿಗಳಿಂದ, ಅರ್ಚನೆಗಳಿಂದ ಶಿವ ಸಾಮೀಪ್ಯ ಸಾಧಿಸುವ ವ್ರತವಾಗಿ ಶಿವರಾತ್ರಿ ಸ್ವೀಕರಿಸಲ್ಪಟ್ಟಿದೆ. ಆದರೆ ಅರ್ಚನೆ ಪೂಜೆ, ಪ್ರದಕ್ಷಿಣೆ ಅಲಂಕಾರಗಳೆಲ್ಲ ಶಿವರಾತ್ರಿಯ ಅಂಗವೇ ಆಗಿರುವುದರಿಂದ ಶ್ರದ್ಧೆ ಇರುವ ಹಬ್ಬವಾಗಿಯೂ ಆಚರಿಸಬಹುದೆಂಬುದು ಶಾಸ್ತ್ರ ಸೂಚನೆ. ತ್ರಿಮೂರ್ತಿಗಳಲ್ಲಿ ಒಬ್ಬನೆನಿಸಿ,ಲಯಕರ್ತನಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ’ಶಿವ’ನದ್ದೆಂದು ಪುರಾಣಗಳು ವಿವರಿಸುತ್ತವೆ. ಇಲ್ಲೆ ಇರುವುದು, ಸಮಗ್ರ ಸೃಷ್ಟಿ ಲಯವಾಗಿ ಮುಂದಿನ ನೂತನ ಸೃಷ್ಟಿಯ ನಿರ್ಮಾಣಕ್ಕೆ ಸಿದ್ಧಗೊಳ್ಳುವಲ್ಲಿಯವರೆಗೆ ಅವುಗಳಿಗೆ ಲಯಾಧಿಕಾರಿಯಾದರೂ ಶಿವನೇ ಆಶ್ರಯಸ್ಥಾನ. ಸೃಷ್ಟಿ-ಸ್ಥಿತಿ-ಲಯಗಳ ನಿರಂತರ ಪ್ರಕ್ರಿಯೆಯಲ್ಲಿ ಲಯವೂ ಪ್ರಧಾನವಾದುದೇ. ಆದುದರಿಂದ ಲಯದಲ್ಲಿ ಒಂದು ತಡೆ ಇದೆ, ನಿಂತು ಮುಂದುವರಿಯುವ ಸಂಕೇತವಿದೆ. ಒಂದು ಮುಕ್ತಾಯದ ಸಂಜ್ಞೆ ಇದೆ. ಆದರೆ ಈ ಮುಕ್ತಾಯವೇ ಸೃಷ್ಟಿಗೆ ಪ್ರೇರಣೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಅಂತಹ ಮಹಾದೇವನಿಗೆ ಶಿವರಾತ್ರಿಯ ನಮೋ ನಮಃ ಎಂಬ ಪ್ರಣಾಮ. ಶರಣಾರ್ಥಿಯಾದವನ ಶರಣು (ನಮಸ್ಕಾರ) ಸ್ವೀಕರಿಸುವ ಭಗವಾನ್ ಶರ್ವನು ಸರ್ವಮಂಗಲಕರನು. ಮಂಗಲ ಎಲ್ಲಿದೆಯೋ ಅಲ್ಲಿ ಅಶುಭಗಳಿಲ್ಲದ ಆನಂದವಿರುತ್ತದೆ. ಭರ್ಗನ ಆರಾಧನೆಯಿಂದ ನಿರ್ಮಲಚಿತ್ತದೊಂದಿಗೆ ಹೃದಯದ ಔದಾರ್ಯವೂ ಸಿದ್ಧಿಸುವುದು. ಆ ಮೂಲಕ ಲೋಕಮುಖಿ ಮನೋಧರ್ಮವು ಬೆಳೆದು ಮಾನವ ಉದಾತ್ತ ಚರಿತನಾಗುತ್ತಾನೆ. ಈ ಭಾವಸ್ಫುರಣೆಗೆ ಶಿವನ ಹೊರತಾಗಿ ಬೇರೆ ದೇವರಿಲ್ಲ. ಆಧ್ಯಾತ್ಮ ತಿಳಿಯಾಗಿದ್ದಾಗ, ಸುಲಭ ಗ್ರಾಹ್ಯವಾಗಿದ್ದಾಗ ಬಹುಜನ ಪ್ರೀತವಾಗುತ್ತದೆ. ಅಂತೆಯೇ ಆರಾಧನಾ ಮೂರ್ತಿಯೂ ನಮ್ಮ ಹೃದಯಸ್ಪರ್ಶಿ ಗುಣಗಳಿಂದ ಆಲಂಕೃತನಾಗಿದ್ದರೆ ಸಹಜವಾಗಿ ದೇವ-ಜೀವ ಸಂಬಂಧ ಸಾಧ್ಯವಾಗುತ್ತದೆ. ಇಂತಹ ಕ್ಲಿಷ್ಟ, ಆದರೆ ಅನುಭವ ವೇದ್ಯವಾದ ಆನಂದಕ್ಕೆ ಮಹಾರುದ್ರನು ಕಾರಣನಾಗುತ್ತಾನೆ. ಭೂತನಾಥನಾಗಿ ಈ ಮಣ್ಣಿನ ಸತ್ಯಗಳ ಅಧಿದೈವವಾಗಿ ನಮ್ಮ ಮುಂದೆ ಒಡೆಯನಾಗಿ ಶೋಭಿಸುವ ದೇವರು ಅಂತರ ಬೇರ್ಪಡುವ ವ್ಯಕ್ತಿತ್ವ ಪ್ರದರ್ಶಿಸುವುದೇ ಇಲ್ಲ. ಆಸಕ್ತಿ-ವಿರಕ್ತಿ, ಸರಸ ವಿನೋದ, ಮಾನವರ ಕಷ್ಟಗಳಿಗೆ ಪರಿಹಾರ , ಸುಖದ ಅನುಗ್ರಹ ಮುಂತಾದುವುಗಳಲ್ಲಿ ಮನುಕುಲಕ್ಕೆ ಸಮೀಪವಾಗುವ ದೇವರು ಸುಲಭನಾಗಿ ಜನಪ್ರಿಯನಾಗುವುದು ಶಿವದೇವರ ವೈಶಿಷ್ಟ್ಯ. ಮಣ್ಣಿನ ಸತ್ಯಗಳು-ಶಿವ : ನಮ್ಮ ಆರಾಧನಾ ವಿಧಾನಗಳಲ್ಲಿ ಮಣ್ಣಿನ ಸತ್ಯಗಳ ಸಾಮ್ರಾಜ್ಯದಲ್ಲಿ, ನಾವು ಪ್ರತ್ಯಕ್ಷ - ಪರೋಕ್ಷವಾಗಿ ನಿರ್ದೇಶಿಸಲ್ಪಡುವ ಶಕ್ತಿಗಳಾದ ದೈವಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಹೊಂದಿ ಅವುಗಳ ಹುಟ್ಟಿಗೆ ಕಾರಣವಾಗುತ್ತಾ ಈ ಮಣ್ಣಿನ ಜನಮಾನಸವನ್ನು ಬೆಳಗುವ ಶಿವದೇವರು, ಈ ಮೂಲಕವೂ ನಮಗೆ ಪ್ರಿಯನಾದ ದೇವರು. ಪಾಪಿಗಳನ್ನು ಮರ್ದಿಸಲು ಸಾವಿರದೊಂದು ’ಗಂಡಗಣ’ಗಳನ್ನು ಸೃಷ್ಟಿಸಿದ ರುದ್ರ ದೇವರು ಸಾವಿರದೊಂದು ಭೂತಗಳನ್ನು ಅಷ್ಟೇ ಸಂಖ್ಯೆಯ ರೋಗಗಳನ್ನು ನಿರ್ಮಿಸಿ ಪಾಪಿಗಳನ್ನು ಶಿಕ್ಷಿಸಿದರೆಂದು ಆ ಮುಲಕ ಭೂತನಾಥರಾದರೆಂದು ಜನಪದ ಕಥೆಗಳು ವಿವರ ನೀಡುತ್ತವೆ. ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವದ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ಹೇಳುತ್ತದೆ. ಮುಂಡತ್ತಾಯ ದೈವವು ಶಿವದೇವರ ಹಣೆಯಿಂದ ಜನಿಸಿತಂತೆ. ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ. ಗುಳಿಗ ದೈವವೂ ಶಿವಾಂಶವೆಂಬ ವರ್ಣನೆ ಇದೆ. ಗಣಪತಿಯ ಜನನದ ಕುರಿತಾದ ಪಾಡ್ದನವೊಂದರಲ್ಲಿ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ. ಬಾಮಕುಮಾರನೇ ಗಣಪತಿ, ಶಿವಪಾರ್ವತಿಯರು ಬೇಡರಾಗಿಯೋ ಕೊರವಂಜಿಗಳಾಗಿಯೋ ’ಮೇಗಿ’ ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ. ಶಿವಪಾರ್ವತಿಯರ ಲೋಕ ಸಂಚಾರ ಸಾಮಾನ್ಯ ಘಟನೆಯಾಗಿದೆ. ಈ ಮೇಲಿನ ವಿವರಣೆಗಳಿಂದ ಶಿವ, ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ, ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ. ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯವರೆಗೆ ವಿವಿಧ ರೂಪಗಳಿಂದ, ಅನುಸಂಧಾನ ವಿಧಾನಗಳಿಂದ ಸ್ವೀಕರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು. ಅಂತಹ ಶರ್ವಾಣಿ ಸಹಿತನಾದ ಶರ್ವನಿಗೆ ಲೋಕದ ತಾಯಿ-ತಂದೆಯರೆಂದು ಭಾವಿಸಿ ಶಿವರಾತ್ರಿಯ ಪರ್ವದಿನದಲ್ಲಿ ’ಶರಣಾರ್ಥಿಗಳಾಗಿ ಶರಣು ಎನ್ನೋಣ. { ಮಾಘ ಮಾಸದಲ್ಲಿ‌ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು "ಶಿವರಾತ್ರಿ" . ಇದು ಹಬ್ಬವಲ್ಲ ವ್ರತ. ಅಭಿಷೇಕ - ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ , ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ .ಇದೇ ಶಿವರಾತ್ರಿ.} ಬರಹ :ಕೆ.ಎಲ್.ಕುಂಡಂತಾಯ