Updated News From Kaup

ಉಡುಪಿ : ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ತುಳು ನಾಟಕ ಪ್ರದರ್ಶನ

Posted On: 12-01-2025 09:42AM

ಉಡುಪಿ : ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಇವರ ವತಿಯಿಂದ ಜ.12, ಆದಿತ್ಯವಾರ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಅರವಿಂದ ಬೋಳಾರ್ ನಟನೆಯ ಒರಿಯಾಂಡಲ ಸರಿ ಬೋಡು ಎನ್ನುವ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ.

ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇವರ ಆಶ್ರಯದಲ್ಲಿ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಅಭಿನಯಿಸುವ, ಲಯನ್ ಡಿ ಕಿಶೋರ್ ಶೆಟ್ಟಿ ನಿರ್ದೇಶನದ , ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ನಟಿಸಿರುವ ಈ ವರ್ಷದ ಸೂಪರ್ ಹಿಟ್ ತುಳು ನಾಟಕ ಒರಿಯಾಂಡಲ ಸರಿ ಬೋಡು ಎಂಬ ನಾಟಕ ಪ್ರದರ್ಶನ ನಡೆಯಲಿದೆ.

ಸಂಜೆ 6:15 ರಿಂದ ಪ್ರಾರಂಭ ಗೊಳ್ಳುವ ಈ ನಾಟಕಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಮತ್ತು ಎಂದಿಗೂ ಕಲಾವಿದರನ್ನು ಪ್ರೋತ್ಸಾಹಿಸುವ ಉಡುಪಿ ಪರಿಸರದ ಜನತೆ ಈ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವೀ ಮಾಡಿಕೊಡಬೇಕೆಂದು ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇದರ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್ ಸಂತೆಕಟ್ಟೆ, ಪದಾಧಿಕಾರಿಗಳಾದ ವಿಕೇಶ್ ಸುವರ್ಣ ಹೆಜಮಾಡಿ, ಮಹೇಶ್ ಪೂಜಾರಿ ಬೈಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.12 ರಾಷ್ಟ್ರೀಯ ಯುವ ದಿನ : ಯುವ ಜನಾಂಗಕ್ಕೆ ಸ್ಫೂತಿ೯ ತಂದ ದಿನ

Posted On: 12-01-2025 07:36AM

ಯುವಜನತೆಯಲ್ಲಿ ಕೆಚ್ಚು ತುಂಬಿದ ಧೀಮಂತ ಸ್ವಾಮಿ ವಿವೇಕಾನಂದ ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವಿಂದು. ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ ಅವರ ಸಂದೇಶವನ್ನು ಜಾರಿ ತಂದರೆ ಖಂಡಿತವಾಗಿಯೂ ದೇಶ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ. ಯುವಕರ ಅಗಾಧ ಶಕ್ತಿ, ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಅವರ ಸಹಜ ಪ್ರಜ್ಞೆಯನ್ನು ಗುರುತಿಸಿ, ಗೌರವಿಸಿ, ಗುರುತರ ಗುರಿಯತ್ತ ಕೊಂಡೊಯ್ಯುವ ಪ್ರಕ್ರಿಯೆಗೆ ಪ್ರಭೆ ತಂದ ವಿಶಿಷ್ಟ ದಿನವಾದ ಇಂದು ನಾವೆಲ್ಲರೂ ಹೊಸ ಪ್ರತಿಜ್ನೆ ಮಾಡಿ ನಮ್ಮ ಬದುಕು ರಾಷ್ಟ್ರಕ್ಕಾಗಿ ಸಮಪಿ೯ತವಾಗಬೇಕು. ಸ್ವಾಮಿ ವಿವೇಕಾನಂದರು 1863ರ ಜ.12ರಂದು ಕೋಲ್ಕತಾದಲ್ಲಿ ಜನಿಸಿದರು. ಮೂಲ ಹೆಸರು ನರೇಂದ್ರನಾಥ ದತ್ತ. ಅವರ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ. ವಿಶ್ವನಾಥ ದತ್ತರು ಯಶಸ್ವಿ ವಕೀಲ, ಸಮಾಜದಲ್ಲಿ ಅತ್ಯಂತ ಪ್ರಭಾವಿ. ಅವರ ತಾಯಿ ಸಜ್ಜನ ದೈವಭಕ್ತೆ. ಇಂಥ ಪರಿಸರದಲ್ಲಿ ಬೆಳೆದ ನರೇಂದ್ರನಿಗೆ ಸಹಜವಾಗಿ ವೈಚಾರಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಮೂಡಿ, ಸಮಾಜದ ಅಂಧತೆಯನ್ನು ನಿವಾರಿಸಿ, ವಿವೇಕಾನಂದವನ್ನು ಸೃಷ್ಟಿಸುವ ಮಹಾಹಂಬಲ ಸ್ಫುರಿಸಿದ್ದು ಭಾರತದ ಭಾಗ್ಯ.

ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ : ಯುವಕರೆಂದರೆ ವಿವೇಕಾನಂದರಿಗೆ ಪಂಚಪ್ರಾಣ. ಯುವ ಶಕ್ತಿಯ ನಿರ್ವಿವಾದಿತ ಸಂಕೇತವಾಗಿ ಬೆಳೆದವರು ಸ್ವಾಮಿ ವಿವೇಕಾನಂದರು. ಯುವಕರಲ್ಲಿ ಹುರುಪು- ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದರು. ಯುವಕರನ್ನು ಉದ್ದೇಶಿಸಿ ಅವರು ಹೇಳಿದ 'ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ಸಂದೇಶವನ್ನು ಕೇಳದ ಭಾರತೀಯರೇ ಇಲ್ಲ. ಇದನ್ನು ನಾವು ನಿರಂತರ ನೆನೆದು ಇತರರ ಜೊತೆಗೆ ಹಂಚಿಕೊಂಡಿದ್ದೇವೆ. ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವ ಸಮುದಾಯ ತಮಗೆ ಎದುರಾದ ಸಂಕಷ್ಟಗಳಿಗೆ, ಎಡರು-ತೊಡರುಗಳಿಗೆ ಬೆದರದೆ 'ಧೈರ್ಯಂ ಸರ್ವತ್ರ ಸಾಧನಂ' ಎಂದರಿತು ಗುರಿ ತಲುಪಬೇಕು. ಅಸಹಾಯಕರಾಗಿ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈಹಾಕಬಾರದು. ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುವ ಜನಾಂಗವನ್ನು ಹೊಂದಿರುವ ದೇಶ, ಮುಂದಿನ ಶತಮಾನ ಅದು ಭಾರತದ್ದೆ ಏಕೆಂದರೆ ಉಳಿದ ರಾಷ್ಟ್ರಗಳಲ್ಲಿ ಯುವಕರ ಸಂಖ್ಯೆ, ಅತ್ಯಂತ ಕಡಿಮೆ ಇದೆ. ಜೀವನಕ್ಕೆ ಸ್ಪಷ್ಟ ಗುರಿಯಿರಲಿ : ಸ್ವಾಮಿ ವಿವೇಕಾನಂದರು ತಮ್ಮ ಯೌವನವನ್ನು ಸಾತ್ವಿಕ ಮಾರ್ಗದಲ್ಲಿ ಸಾಗಿಸಿದರು. ಪ್ರತಿ ಸಮಸ್ಯೆಯನ್ನು ಕೂಲಂಕಷವಾಗಿ ಪರಾಂಬರಿಸುತ್ತ, ಪ್ರಶ್ನಿಸುತ್ತ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಂಡರು. ತಾರುಣ್ಯದಲ್ಲಿಯೇ ಅತ್ಯಂತ ಆಳವಾದ ಅಧ್ಯಯನ ಮಾಡಿ ಧರ್ಮ, ಶಾಸ್ತ್ರ, ತತ್ವಜ್ಞಾನ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ ಕುರಿತು ಧ್ಯಾನಿಸಿದರು. ಅವುಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಳ್ಳಲು ಕಾರ್ಯತತ್ಪರರಾದರು. ಅನೇಕ ವರ್ಷಗಳವರೆಗೆ ದೇಶ ಪರ್ಯಟನ ಮಾಡಿದರು. ಪ್ರಪಂಚವನ್ನೂ ಸುತ್ತಿದರು. ತಮಗೆ ತಿಳಿಯದ ವಿಷಯದ ಬಗ್ಗೆ ಬಲ್ಲವರ ಜತೆಗೆ ದೀರ್ಘವಾಗಿ ಚರ್ಚಿಸಿ ತಮ್ಮ ದ್ವಂದ್ವಗಳನ್ನು ನಿವಾರಿಸಿಕೊಳ್ಳುತ್ತಿದ್ದರು ಮುಂದೆ ಅಮೆರಿಕದ ಶಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತೀಯತೆಯ ಭವ್ಯ ಪರಂಪರೆಯನ್ನು ಇಡೀ ಜಗತ್ತಿಗೆ ಅರಿವಾಗುವಂತೆ ಅನಾವರಣ ಮಾಡಿದರು. ಕಾಮ-ಕ್ರೋಧ-ಮೋಹ-ಮದ-ಮತ್ಸರಗಳು ಯುವಕರ ಜೀವನದ ಕಲೆಗಳಾಗಬಾರದು ಎನ್ನುತ್ತಿದ್ದರು ವಿವೇಕಾನಂದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತ, ಲೈಕುಗಳನ್ನು ಎಣಿಸುತ್ತ ಕಾಲಹರಣ ಮಾಡುವುದೇ ಮಹತ್ತರವಾಗದೇ ಜೀವನದಲ್ಲಿ ಸ್ಪಷ್ಟ ಗುರಿಗಳನ್ನಿರಿಸಿಕೊಂಡು ಹೆಜ್ಜೆ ಇರಿಸಬೇಕು.ಇಲ್ಲವಾದಲ್ಲಿ ನಮ್ಮ ಜನ್ಮಕ್ಕೆ ಸಾಥ೯ಕತೆ ಸಿಗಲಾರದು. ಬದುಕಲು ಸುವರ್ಣಾವಕಾಶಗಳಿವೆ : ಈ ಪ್ರಪಂಚ ಬಹು ದೊಡ್ಡದು. ಇಲ್ಲಿ ಎಲ್ಲರೂ ಸುಖ, ಸಂತೋಷ ಮತ್ತು ಸಂಭ್ರಮದಿಂದ ಬದುಕಲು ಸುವರ್ಣಾವಕಾಶಗಳಿವೆ. ಹೇಗೆ ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುತ್ತಾ ಹೋದರೋ ಹಾಗೆ ಯುವಕರು ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪಾದಿಸಬೇಕು. ವಿವಿಧ ಕೌಶಲಗಳನ್ನು ಕಲಿತು, ಯೋಗ್ಯತೆ ಹೆಚ್ಚಿಸಿಕೊಳ್ಳಬೇಕು. ಕೌಟುಂಬಿಕ, ಸಾಮಾಜಿಕ, ಔದ್ಯೋಗಿಕ, ಸಾರ್ವತ್ರಿಕ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿಶ್ರೇಷ್ಠತೆಗೆ ಬೇಕಾಗಿರುವ ಕೌಶಲಗಳನ್ನು ಪಡೆದುಕೊಳ್ಳಬೇಕು. ಕಾಲಹರಣ ಮಾಡದೆ, ಕಾರ್ಯಕ್ಷಮತೆಯ ಮನೋಭಾವನ್ನು ಬೆಳೆಸಿಕೊಳ್ಳಬೇಕು. ಬದುಕು ಸುಂದರವಾಗಲು ನಿರಂತರ ಕಲಿಕೆ, ಸತತ ಪರಿಶ್ರಮ, ಸಮಯೋಚಿತ ಪ್ರಜ್ಞೆ, ಪ್ರಾಮಾಣಿಕತೆ, ಪಾರದರ್ಶಕತೆಯನ್ನು ರೂಢಿಸಿಕೊಳ್ಳಬೇಕು. ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮೃದ್ಧ ಬದುಕನ್ನು ಕಟ್ಟಿಕೊಂಡರೆ ಯೌವನಕ್ಕೆ ಬಹು ದೊಡ್ಡ ಗೌರವ ಸಿಕ್ಕಂತಾಗುತ್ತದೆ. ನಮ್ಮ ಕೌಟುಂಬಿಕ , ಸಾಮಾಜಿಕ ಮತ್ತು ಉದ್ಯೋಗ ಜೀವನ ಉತ್ತಮಗೊಳಿಸಲು ಪರಿಶ್ರಮ ಮತ್ತು ಗುರಿ ಅಗತ್ಯ'

ತಮ್ಮತನವೆಂಬ ಅಸ್ಮಿತೆ : ನುಡಿದಂತೆ ಬದುಕಬೇಕು. ಮತ್ತೊಬ್ಬರನ್ನು ಅನಾಯಾಸವಾಗಿ ಅನುಕರಿಸುವುದಕ್ಕಿಂತ, ಬೇಕಾದರೆ ಅನುಸರಿಸುವ ಕುಶಲಮಾರ್ಗವನ್ನು ಬೆಳೆಸಿಕೊಳ್ಳಬೇಕು. ಎಂಥ ಕಠಿಣ ಪರಿಸ್ಥಿತಿ ಬಂದರೂ ಸಮಾಧಾನ, ಸದ್ವಿನಯ, ಸದ್ಭಾವದಿಂದ ತಮ್ಮತನದ ಸಂರಕ್ಷಣೆ ಮಾಡಿಕೊಳ್ಳಬೇಕು. 'ಚಲನಚಿತ್ರ ನಾಯಕ'ರು ಆದರ್ಶ ಪುರುಷರಾಗುವುದಕ್ಕಿಂತ 'ಚರಿತ್ರನಾಯಕ'ರು ಆದಶ೯ರು ನಮಗೆ ಸ್ವಾಮಿ ವಿವೇಕಾನಂದರು ಜಗತ್ತಿನ ವಿವಿಧ ದೇಶಗಳನ್ನು ಸುತ್ತಿದರು. ಭಾರತೀಯತೆ ಮತ್ತು ಸನಾತನತೆಯ ಕುರಿತು ಪ್ರಖರವಾಗಿ, ನಿಖರವಾಗಿ ಮಾತನಾಡಿದರು. ಯಾವುದೇ ದೇಶದಲ್ಲಿದ್ದಾಗಲೂ ತಮ್ಮತನ ಮಾರಿಕೊಳ್ಳಲಿಲ್ಲ. ತಮ್ಮ ದಿರಿಸು, ಆಹಾರ, ಆಚಾರ, ವಿಚಾರ, ಮಾತೃಭೂಮಿಯ ಅನನ್ಯತೆ ಮತ್ತು ಅದಮ್ಯತೆಯ ಕುರಿತು ಪ್ರವಚನಗಳನ್ನು ನೀಡಿದರು.

ನಿರ್ಮಾಣವಾಗಲಿ ರಾಜಮಾರ್ಗ : ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ 5 ತಿಂಗಳು, 22 ದಿವಸ. ಆದರೆ ಆ ಮಹಾನ್‌ ಸಂತ ಇಲ್ಲಿ ಬಿಟ್ಟು ಹೋಗಿದ್ದು ಸಹಸ್ರಾರು ಯುಗಗಳವರೆಗೂ ಉಳಿದು ಬೆಳೆಯಬಲ್ಲ ಅಧ್ಯಾತ್ಮಿಕ ಔನ್ನತ್ಯದ ಮೌಲ್ಯಗಳು. ಅವರು ಆಗಿನ ಕಾಲಕ್ಕಿಂತ ಈಗ ಇನ್ನೂ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಮತ್ತು ಅಷ್ಟೇ ಪ್ರಸ್ತುತರೂ ಆಗಿದ್ದಾರೆ. ಅದು ಆ ಸಂತನ ವರ್ಣಿಸಲಾಗದ ತಾಕತ್ತು. ತಂತ್ರಜ್ಞಾನವನ್ನು ಲೀಲಾಜಾಲವಾಗಿ ಬಳಸುವ, ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ, ಪ್ರತಿಕ್ಷಣ ಹೊಸತನ್ನು ಸೃಷ್ಟಿಸಿ ಜಿಜ್ಞಾಸೆ ಮೂಡಿಸುವ ಯುವಕರನ್ನು ಸರಿಯಾದ ಮಾರ್ಗದಲ್ಲಿ ನಡೆಯಿರಿ ಎಂದು ಹೇಳುವುದಕ್ಕಿಂತ, ಅವರು ಅರಿತು, ಬೆರೆತು ಬೆಳೆಯಲು ಸರಿಯಾದ ಮಾರ್ಗಗಳನ್ನು ನಿರ್ಮಿಸಿಕೊಡಬೇಕಾಗಿದ್ದು ಸಮಾಜ ಮತ್ತು ಜವಾಬ್ದಾರಿಯುತ ಸರಕಾರಗಳ ಆದ್ಯತೆ. ಅವರಲ್ಲಿ ಧನಾತ್ಮಕ ಚಿಂತನೆ ಒಡಮೂಡಬೇಕಾದರೆ ಅವರಲ್ಲಿ ಸಮಾಜ ಮತ್ತು ಸರಕಾರಗಳ ಬಗ್ಗೆ ನಂಬಿಕೆ ಬರುವಂತಾಗಬೇಕು. ಶಾಲೆ-ಕಾಲೇಜುಗಳು ಅವರಿಂದ ಬರೀ ಫೀಜು ಕಿತ್ತುಕೊಳ್ಳುವ ಹಣಪಿಪಾಸುಗಳಾಗದೆ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ 'ರಾಜಮಾರ್ಗ'ವಾಗಬೇಕು. ಯುವ ಸಮುದಾಯದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವರಿಗೆ ಕಲಿಯಲು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕು. ದುಡಿಯಲು ಉದ್ಯೋಗಾವಕಾಶಗಳನ್ನು ವಿಪುಲವಾಗಿ ಸೃಷ್ಟಿಸಬೇಕು. ಮಸ್ತಕಕ್ಕೊಂದು ಪುಸ್ತಕ ಓದುವ ಗೀಳು ಹಚ್ಚಿಸಬೇಕು. ಸ್ವಜನಶೀಲತೆಯಿಂದ ಧಕ್ಕೆಯಾಗದಂತೆ ಅವರ ಸೃಜನಶೀಲತೆಗೆ ಮುಕ್ತ ಪರಿಸರ ನಿರ್ಮಾಣ ಮಾಡಬೇಕು. ಯುವಕರನ್ನು ಬರಿ ಹೊಗಳಿ ಹೊನ್ನ ಶೂಲಕ್ಕೇರಿಸದೆ, ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಕೊಟ್ಟರೆ ಅವರೂ ಯೋಗ್ಯವಾಗಿ ಬದುಕು ನಡೆಸುತ್ತಾರೆ. ಯುವ ಜನಾಂಗ "ಯೂಸ್ ಲೆಸ್ ಅಲ್ಲ ಬದಲಾಗಿ ಯೂಸಡ್ ಲೆಸ್ " ದೇಶದಲ್ಲಿ ಹೊಸ ಬದಲಾವಣಿ ತರಬೇಕಾದರೆ, ನಾವೆಲ್ಲರೂ ಬದಲಾಗಬೇಕು ಇಲ್ಲವಾದಲ್ಲಿ ಬದಲಾವಣೆಯೇ ಬದಲಾಯಿಸುತ್ತದೆ. ಸ್ವಾಮೀಜಿಯ ಜನ್ಮದಿನದ ನೆನಪು ನಮ್ಮ ಬದುಕಿಗೆ ಹೊಸ ಭಾಷ್ಯ ಬರೆಯಲಿ. ✍

ಉದ್ಯಾವರ : ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ - ಪಣಿಯೂರಿನ ಯುವಕ ಮೃತ್ಯು

Posted On: 11-01-2025 12:06PM

ಉದ್ಯಾವರ : ಇಲ್ಲಿನ ಕೊರಂಗ್ರಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಟ್ರಕ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ  ಶುಕ್ರವಾರ ತಡರಾತ್ರಿ ಘಟಿಸಿದೆ.

ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯೂರಿಗೆ ಮರಳುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಯುವಕ. ಬೆಂಕಿಯ ತೀವ್ರತೆಗೆ ಲಾರಿ ಮತ್ತು ಸ್ಕೂಟರ್ ಸುಟ್ಟು ಕರಕಲಾಗಿದೆ.

ಅಪಘಾತದ ಸಂದರ್ಭ ಲಾರಿಯ ಅಡಿಭಾಗದಲ್ಲಿ ಬೈಕ್ ಸಿಲುಕಿಕೊಂಡಿದ್ದು ಈ ವೇಳೆ ಬೈಕಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಹಾಗೂ ಲಾರಿ ಬೆಂಕಿಗಾಹುತಿಯಾಗಿದೆ.

ಈ ಬಗ್ಗೆ ಕಾಪು‌ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಉಚ್ಚಿಲ: ಪಾದಚಾರಿಗೆ ಕಾರು ಡಿಕ್ಕಿ ಸ್ಥಳದಲ್ಲೇ ಸಾವು

Posted On: 10-01-2025 08:58PM

ಪಡುಬಿದ್ರಿ : ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರೊಂದು ರಸ್ತೆ ದಾಟುತ್ತಿದ್ದ ವಯೋವೃದ್ಧರಿಗೆ ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕುಂಜೂರು ನಿವಾಸಿ ಶ್ರೀನಿವಾಸ ತೋಣಿತ್ತಾಯ (72)ಎಂದು ಗುರುತಿಸಲಾಗಿದೆ. ಅವರು ಪಶ್ಚಿಮ ಬದಿಯಿಂದ ಪೂರ್ವ ಬದಿಗೆ ರಸ್ತೆ ದಾಟುತ್ತಿದ್ದ ಸಂದರ್ಭ ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅವರು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪಡುಬಿದ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಭೇಟಿ

Posted On: 10-01-2025 10:42AM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮುಂಬಯಿಯ ಉದ್ಯಮಿ, ಹೇರಂಭ ಇಂಡಸ್ಟ್ರೀಸ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರು ಬುಧವಾರ ಭೇಟಿ ನೀಡಿ, ಸಕುಟುಂಬಿಕರಾಗಿ ಬರೆದಿರುವ ನವದುರ್ಗಾ ಲೇಖನ ಯಜ್ಞದ ಪುಸ್ತಕವನ್ನು ಶಿಲಾಸೇವೆ ಸಹಿತವಾಗಿ ಸಮರ್ಪಿಸಿದರು.

ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರು ಕನ್ನಡ ಭಾಷೆಯಲ್ಲಿ ನವದುರ್ಗಾ ಲೇಖನವನ್ನು ಬರೆದಿದ್ದು, ಅವರ ಪತ್ನಿ ಸುಜಾತ ಶೆಟ್ಟಿ ಅವರು ತುಳು ಭಾಷೆಯಲ್ಲಿ ಹಾಗೂ ಸೊಸೆ ಮತ್ತು ಮನೆಯವರು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕಾಪು ಮಾರಿಯಮ್ಮನ ಸ್ಮರಣೆಯೊಂದಿಗೆ ನವದುರ್ಗಾ ಲೇಖನವನ್ನು ಬರೆದಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪುಸ್ತಕವನ್ನು ಸ್ವೀಕರಿಸಿ, ಮಾರಿಯಮ್ಮ ದೇವಿಯ ಪ್ರಸಾದ ನೀಡಿ ಗೌರವಿಸಿದರು.

ಮುಂಬಯಿಯ ಉದ್ಯಮಿ ಕೆ. ಕೆ. ಶೆಟ್ಟಿ , ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ನವದುರ್ಗಾ ಲೇಖನ ಯಜ್ಞದ ಮಹಿಳಾ ಸಮಿತಿ ಪ್ರಧಾನ ಸಂಚಾಲಕರಾದ ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ಎಲ್. ಸಾಲ್ಯಾನ್, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕರಾದ ಜಯರಾಮ್ ಆಚಾರ್ಯ, ಕಾರ್ತಿಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

Posted On: 10-01-2025 10:37AM

ಉಡುಪಿ : ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ರಾಜ್ಯಾಧ್ಯಕ್ಷ ಡಾ.ಎಸ್‌ ಬಾಲಾಜಿ ಯವರು ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿಯವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಿದ್ದಾರೆ.

ಕಲ್ಯಾಣಪುರ ಡಾ. ಟಿ ಎಮ್ ಎ ಪೈ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ.

ಜ.13 : ಪಡುಬಿದ್ರಿ ಸಿ.ಎ.ಸೊಸೈಟಿ ವಿರುದ್ಧ ಜನಜಾಗೃತಿಗಾಗಿ ಸಾರ್ವಜನಿಕ ಬೃಹತ್ ಪ್ರತಿಭಟನೆ

Posted On: 09-01-2025 07:17PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಕನಿಷ್ಠ ಷೇರು ಹೊಂದಿರುವ ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಣಯ ಕೃೆಗೊಂಡಿರುವ ಆಡಳಿತ ಮಂಡಳಿ ವಿರುದ್ಧ ಹಾಗು ಆಡಳಿತ ಮಂಡಳಿ ಕಳೆದ ಎರಡು ದಶಕಗಳಿಂದ ನಡೆಸಿದ ದುರಾಡಳಿತ ಮತ್ತು ಸಾರ್ವಜನಿಕರನ್ನು ಹಾಗು ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಮತ್ತೆ ಚುನಾವಣೆಗೆ ಮುಂದಾದ ಅಧ್ಯಕ್ಷ ಹಾಗು ಆಡಳಿತ ಮಂಡಳಿ ವಿರುದ್ಧ ಇಲಾಖಾ ತನಿಖೆಯ ಬಗ್ಗೆ ಹಕ್ಕೊತ್ತಾಯ ಪಡಿಸಲು ಜನ ಜಾಗೃತಿಗಾಗಿ ಜನವರಿ 13 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಜಾಥವು ಪಡುಬಿದ್ರಿ ಗ್ರಾಮ ಪಂಚಾಯತಿಯಿಂದ ಹೊರಟು ಸೊಸೈಟಿಯ ಕೇಂದ್ರ ಕಚೇರಿಯ ಮುಂದುಗಡೆ ಸಾರ್ವಜನಿಕ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಹಕಾರಿ ಜನಪರ ಒಕ್ಕೂಟದ ಅಧ್ಯಕ್ಷರಾದ ಶೇಖರ್ ಹೆಜಮಾಡಿ ತಿಳಿಸಿದ್ದಾರೆ.

ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕನಿಷ್ಠ ಷೇರು ಹೊಂದಿರುವ ಸಾಮಾನ್ಯ ಜನರಿಗೆ ಸ್ಪರ್ಧಿಸದಂತೆ ನಿರ್ಣಯವನ್ನು ಕೃೆಗೊಂಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವೃೆವಸ್ಥೆಗೆ ವಿರುದ್ಧವಾದ ಕೃತ್ಯವಾಗಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಸುಮಾರು 15 ವರ್ಷಗಳಿಂದ ಈ ಹಿಂದೆ ಇದ್ದ ನಿರ್ದೇಶಕರೇ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬ್ಯಾಂಕಿನ ಲಾಭಾಂಶವನ್ನು ತನ್ನ ಸ್ವಹಿತಕ್ಕಾಗಿ ಬಳಸಿಕೊಂಡು ಬಡವರ ಕಣ್ಣೀರ ದುಡ್ಡಿನಲ್ಲಿ ಮೋಜು ಮಸ್ತಿಗಾಗಿ ದೇಶ, ವಿದೇಶಗಳಿಗೆ ಪ್ರವಾಸ ಕೈಗೊಂಡು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತಿದ್ದಾರೆ. ನೆಪ ಮಾತ್ರಕ್ಕೆ ಅಧ್ಯಯನ ಪ್ರವಾಸ ಎಂಬ ಶಿರ್ಷೀಕೆ. ಮತ್ತೇ ಅದೇ ತಂಡ‌ ಈ ಬಾರಿಯ ಚುನಾವಣೆಗೆ ಸಜ್ಜುಗೂಂಡು ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಚುನಾವಣೆಯೇ ನಡೆಯಬಾರದೆಂದು ನಮ್ಮ ತಂಡದ ಸ್ಪರ್ಧಾಳುಗಳ ಮೇಲೆ ಒತ್ತಡ ತರುತ್ತಿದ್ದಾರೆ.

ಹೆಜಮಾಡಿ ಮತ್ತು ಪಡುಬಿದ್ರಿ ಬ್ಯಾಂಕಿನಲ್ಲಿ ನಕಲಿ ಬಂಗಾರದ ಮೇಲೆ ಕೋಟಿ ಹತ್ತಿರದ ಮೊತ್ತದ ಸಾಲ ನೀಡಿರುವುದರಲ್ಲಿ ಅಡಳಿತ ಮಂಡಳಿ ಶಾಮೀಲಾಗಿರುತ್ತದೆ ಹಾಗೂ ಹೆಜಮಾಡಿ ಮತ್ತು ಪಲಿಮಾರು ಶಾಖೆಯ ಕಟ್ಟಡದಲ್ಲೂ ಬಹಳ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು ಅಲ್ಲದೆ ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿಯಲ್ಲಿ ಭಾರಿ ಮೊತ್ತದ ಹಣ ಬೇಡಿಕೆಯನ್ನು ಪಡೆದು ನೂರಾರು ಸಂಖ್ಯೆಯ ಬಡ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ವಂಚಿಸಿರುತ್ತಾರೆ. ಈ ರೀತಿ ನೇಮಕಾತಿ ನಡೆಸಿದರೂ ಯಾರೂ ಪ್ರಶ್ನಿಸುವಂತಿಲ್ಲ, ಅನ್ಯಾಯಕ್ಕೆ ಒಳಗಾದ ಯುವಜನತೆಯ ಪರವಾಗಿ ಇಂತಹ ಸ್ವಾರ್ಥ ಆಡಳಿತ ಮಂಡಳಿಯ ವಿರುದ್ದ ಪ್ರಜ್ಞಾವಂತ ಮತದಾರರು ಧ್ವನಿಯಾಗಬೇಕಾಗಿದೆ. ಯಾಕೆಂದರೆ 13 ಸದಸ್ಯರೂ ಒಂದೇ ಗುಂಪಿನವರಾಗಿದ್ದೂ ವಿರೋಧ ಪಕ್ಷ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಇದಲ್ಲದೆ, ಬ್ಯಾಂಕಿನ ಈಗಿರುವ ಕೆಲವು ನಿರ್ದೇಶಕರು ರಾಷ್ಟ್ರೀಯ ಬ್ಯಾಂಕಿನಲ್ಲಿ ಮತ್ತು ಸೊಸೈಟಿಯಲ್ಲಿಯೇ ಸಾಲದ ಸುಸ್ತಿದಾರರಾಗಿದ್ದು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇಂಥವರು ಚುನಾವಣೆಯಲ್ಲಿ ಗೆದ್ದರೆ ಪಡುಬಿದ್ರಿ ಸಿ.ಎ.ಸೊಸೈಟಿ ದಿವಾಳಿ ಆಗುವುದು ಖಂಡಿತ ಎಂದಿದ್ದಾರೆ.

ಆದ್ದರಿಂದ ಎರಡು ದಶಕಗಳ ಕಾಲ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘವನ್ನು ದುರಾಡಳಿತ ನಡೆಸಿ ಸಾರ್ವಜನಿಕರನ್ನು ಹಾಗು ಯುವಜನತೆಯನ್ನು, ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಸೊಸೈಟಿ ಅಧ್ಯಕ್ಷ ಹಾಗು ಅಡಳಿತ ಮಂಡಳಿ ವಿರುದ್ಧ ಇಲಾಖಾ ತನಿಖೆಯ ಬಗ್ಗೆ ಹಕ್ಕೊತ್ತಾಯ ಪಡಿಸಲು ಜನಜಾಗೃತಿಗಾಗಿ "ಸಾರ್ವಜನಿಕ ಬೃಹತ್ ಪ್ರತಿಭಟನೆಯು" ನಡೆಯಲಿದೆ. ಈ ಪ್ರತಿಭಟನಾ ಸಭೆಯಲ್ಲಿ ಪ್ರಜ್ಞಾವಂತ ನಾಗರಿಕರು, ವಿದ್ಯಾರ್ಥಿಗಳು , ಮಹಿಳೆಯರು ಹಾಗು ಮತದಾರರು ಭಾಗವಹಿಸುವಂತೆ ವಿನಂತಿಸಿದ್ದಾರೆ.

ಉಡುಪಿ ಜಿಲ್ಲಾ ಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ 2025 ಕಾರ್ಯಕ್ರಮ

Posted On: 08-01-2025 10:06PM

ಉಡುಪಿ : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಇದರ ವತಿಯಿಂದ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಡಾ.ಟಿ. ಎಂ. ಎ. ಪೈ ಪ್ರೌಢಶಾಲೆ ಕಲ್ಯಾಣಪುರ ಶಾಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ 2025 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ, ಜಾನಪದವು ಪಠ್ಯಕ್ರಮವಾಗಬೇಕಾಗಿದೆ. ಜನಪದವು ಮುಂದಿನ ತಲೆಮಾರಿಗೆ ಉಳಿಯಬೇಕಾದರೆ ವಿದ್ಯಾರ್ಥಿಗಳಲ್ಲಿ ಜನಪದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಇದರಲ್ಲಿರುವ ಅಘಾತವಾದ ಜ್ಞಾನ ಸಂಪತ್ತು ಇದನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇಂದಿನ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.

ಈ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ದೈವನರ್ತಕರಾದ ಬಿರು ಪಾಣರ, ಸಂಗೀತ ಕಲಾವಿದರಾದ ವೇಣುಗೋಪಾಲ್ ಭಟ್ ಕೊಟೇಶ್ವರ, ಕನ್ನಡ ಅಧ್ಯಾಪಕಿ ಸುರೇಖಾ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರೇಯ ಮತ್ತು ಮಾನ್ಯ ಆಚಾರ್ಯ ಅವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದವು ಜನರ ಜೀವನ ಪದ್ಧತಿಯಾಗಿತ್ತು. ಜನಪದರು ಯಾವುದೇ ಶಿಕ್ಷಣ ಇಲ್ಲದೆ ಸಾವಿರಾರು ಹಾಡನ್ನು ರಚನೆ ಮಾಡಿ ಹಾಡಿದ್ದರು. ಅವರ ಕೊಡುಗೆಯನ್ನು ನಾವು ಉಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಎಚ್.ಎನ್. ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಿಲ್ಲಾ ಪದಾಧಿಕಾರಿಗಳಾದ ಚಂದ್ರ ಹಂಗಾರಕಟ್ಟೆ, ಫಾರೂಕ್ ಚಂದ್ರ ನಗರ, ತಾಲ್ಲೂಕು ಪದಾಧಿಕಾರಿಗಳಾದ ಪ್ರಭಾರಾವ್, ಸುಜಾತ ನಿತ್ಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ನಿಕಿತಾ ಮತ್ತು ತಂಡದವರು ಜಾನಪದ ಗೀತೆ ಹಾಡಿದರು. ಜಿಲ್ಲಾ ಪದಾಧಿಕಾರಿ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

ವಿಶ್ವಮಾನವನಾಗಬೇಕೆಂಬುದು ಕುವೆಂಪುರವರ ಕನಸಾಗಿತ್ತು : ಕುಸುಮಾ ಕೆ.ಆರ್.

Posted On: 07-01-2025 08:41PM

ಮಂಗಳೂರು : ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಆನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪುರವರಿಗಿತ್ತು ಎಂದು ಶಿಕ್ಷಕಿ ಕುಸುಮಾ ಕೆ. ಆರ್ ಹೇಳಿದರು. ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಾರಥ್ಯದಲ್ಲಿ ಜ5ರಂದು ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕ್ನಲ್ಲಿ ಕುವೆಂಪು ಜನ್ಮ ದಿನದ ಪ್ರಯುಕ್ತ ನಡೆದ “ಕನ್ನಡವೇ ಸತ್ಯ” ವಿಚಾರಗೋಷ್ಠಿ-ಕವಿಗೋಷ್ಠಿ ಮತ್ತು ಗೀತಗಾಯನ ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಕೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಅವರ ಕನಸನ್ನು ನನಸಾಗಿಸುವ ಪ್ರಯತ್ನ ನಮ್ಮದಾಗಬೇಕು. ಇಂದಿನ ಈ ಕನ್ನಡವೇ ಸತ್ಯ ಕಾರ್ಯಕ್ರಮವು ನಿಜಕ್ಕೂ ರಸಋಷಿಗೆ ಸಮರ್ಪಣೆ ಎಂದು ನುಡಿದರು. ಈ ಸಂದರ್ಭದಲ್ಲಿ ಹೊಸ ಕನ್ನಡ ಎಂಬ ಪತ್ರಿಕೆಯನ್ನು ಮಂಗಳೂರಿನ ಜನಪ್ರಿಯ ವೈದ್ಯ, ಸಾಹಿತಿ ಡಾ.ಸುರೇಶ್ ನೆಗಳಗುಳಿ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ಸಾಕಷ್ಟು ಇದ್ದರೂ ಪತ್ರಿಕೆ ಓದುವ ಹವ್ಯಾಸ ಈಗಲೂ ಇರುವುದರಿಂದ ಇಂತಹ ಪತ್ರಿಕೆಗಳು ಮೂಡಿಬರಲು ಸಾಧ್ಯ. ಪತ್ರಿಕೆ ತನ್ನ ವಸ್ತುನಿಷ್ಠತೆಯನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ ಕರ್ತವ್ಯ ನಿರ್ವಹಿಸಬೇಕು. ಹಾಗೇನೇ ಪತ್ರಿಕೆ ಬೆಳೆಯಬೇಕಾದರೆ ಪತ್ರಿಕೆಯನ್ನು ಕೊಂಡು ಓದುವ ಮನಸ್ಥಿತಿ ಹೆಚ್ಚಾಗಬೇಕು ಎಂದು ಮಾರ್ಮಿಕವಾಗಿ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರು ಒಂದು ದೊಡ್ಡ ಜ್ಞಾನ ಭಂಡಾರವೇ ಸರಿ. ಅವರ ಒಂದೊಂದು ಸಾಹಿತ್ಯವು ಕೂಡಾ ಒಂದೊಂದು ಗ್ರಂಥಗಳು ಎಂದು ಹೇಳಬಹುದು. ಅವರು ಒಂದು ಗ್ರಂಥಾಲಯವಲ್ಲ ಅವರು ಒಂದು ವಿಶ್ವವಿದ್ಯಾನಿಲಯವೇ ಸರಿ. ಅಂತಹ ಮಹಾನ್ ಚೇತನರನ್ನು ನೆನಯುವುದು ಕನ್ನಡಿಗರಾದ ನಮ್ಮ ಕರ್ತವ್ಯ ಮತ್ತು ಜವಾಬ್ಧಾರಿ ಎಂದು ಹೇಳಿದರು. ಮಂಗಳೂರು ಮಹಾನಗರಪಾಲಿಕೆ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ, ಪುತ್ತೂರು ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ, ಎನ್ಎಸ್ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ, ಮತ್ತು ಪತ್ರಕರ್ತ ಲೋಕಯ್ಯ ಶಿಶಿಲ ಉಪಸ್ಥಿತರಿದ್ದರು. ಕವಿಗೋಷ್ಟಿ : ಕಬಕ ಸರಕಾರಿ ಪದವಿಪೂರ್ವ ಕಾಲೇಜು ಶಿಕ್ಷಕಿ ಶ್ರೀಮತಿ ಶಾಂತ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಅನುರಾಧ ರಾಜೀವ ಸುರತ್ಕಲ್ , ಎಂ.ಎಸ್.ವೆಂಕಟೇಶ್ ಗಟ್ಟಿ , ದೀಪಾ ಚಿಲಿಂಬಿ, ಅನಿತಾ ಶೆಣೈ, ನಿಶಾನ್ ಅಂಚನ್, ವೀಣಾ ರಾವ್ ವಾಮಂಜೂರು, ಸಲೀಂ ಅನಾರ್ಕಲಿ, ಉಮೇಶ್ ಕಾರಂತ್, ಬದ್ರುದ್ದೀನ್ ಕೂಳೂರು, ಸುಕಲತ ಶೆಟ್ಟಿ, ಜುಲಿಯೆಟ್ ಫೆರ್ನಾಂಡಿಸ್ ತಮ್ಮ ಸ್ವರಚಿತ ಕವನ ವಾಚಿಸಿದರು.

ಕೆಎಸ್ಎಸ್ಎಪಿ ಖಜಾಂಚಿ ವರ್ಷ ನಿಖಿಲ್‌ರಾಜ್ ಪ್ರಾರ್ಥನೆ ಗೈದರು. ಎನ್ಎಸ್ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ವಂದಿಸಿದರು, ದೀಪಾ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು. ಅ ಬಳಿಕ ಗಾಯನ ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ ಗಂಗಾಧರ್ ಗಾಂಧಿ ಬಳಗದಿಂದ ಗೀತಗಾಯನ ನಡೆಯಿತು.

ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆ ಸಂಪನ್ನ

Posted On: 07-01-2025 06:00PM

ಉಡುಪಿ : ವಿದ್ಯಾರ್ಥಿಗಳು ಮೊಬೈಲನ್ನು ದೂರವಿಟ್ಟು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಆ ಮೂಲಕ ಜ್ಞಾನ ಸಂಪಾದನೆ ಮಾಡಿ , ಉನ್ನತ ವ್ಯಾಸಂಗವನ್ನು ಮಾಡಿ ಉತ್ತಮ ನೌಕರಿಯನ್ನು ಆಯ್ಕೆ ಮಾಡಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ-ಬದುಕಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಉಡುಪಿ ಸರಕಾರಿ ಜಿಲ್ಲಾ ಆಸ್ಫತ್ರೆಯ ಹಿರಿಯ ವೈದ್ಯಕೀಯ ತಜ್ಞರಾದ ಡಾ . ದಯಾಮಣಿ ಬಿ. ಇವರು ತಿಳಿಸಿದರು. ಅವರು ಕಲ್ಯಾಣಪುರದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಜರುಗಿದ ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಸಮುದಾಯ ಸಂಘದ ಅಧ್ಯಕ್ಷರಾದ ಬಾಲಕ್ರಷ್ಣ ನಾಯಕ ಮಾತನಾಡಿ, ನಮ್ಮ ಸಮುದಾಯವು ಒಗ್ಗಟ್ಟಿನಿಂದ ಇದ್ದು ಮುಂದೆ ಏನೇ ಸಮಸ್ಯೆ ಬಂದರೂ ನಾವೆಲ್ಲ ಒಂದಾಗಿ ಹೋರಾಟ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರಕಾರದಿಂದ ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು. ಸಭೆಯನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾದ ಕಾರ್ಕಳ ನಗರ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಯಶವಂತ, ಜಿಲ್ಲಾ ನಾಯಕ ಸಮುದಾಯ ಸಂಘದ ಗೌರವ ಅಧ್ಯಕ್ಷರಾದ ಶೇಖರ್ ನಾಯಕ, ಕಾಪು ತಾಲೂಕು ನಾಯಕ ಸಮುದಾಯದ ಅಧ್ಯಕ್ಷರಾದ ನೀಲಾನಂದ ನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸನ್ಮಾನ‌ : ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ,ನಿವೃತ್ತರನ್ನು ,ಸಾಧಕರನ್ನು ಹಾಗೂ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಂಗಳೂರು ತಾಲೂಕು ಸಂಘದ ಅಧ್ಯಕ್ಷರಾದ ಹರೀಶ್ ನಾಯಕ, ಜಿಲ್ಲಾ ಸಂಘದ ಗೌರವ ಸಲಹೆಗಾರರಾದ ವಸಂತ ನಾಯಕ, ಕೋಶಾಧಿಕಾರಿ ಮಂಜುನಾಥ ನಾಯಕ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಸತೀಶ್ ನಾಯಕ ವರದಿ ವಾಚಿಸಿದರು. ಉಪನ್ಯಾಸಕಿ ಪ್ರತಿಮ ಸನ್ಮಾನ ಪತ್ರ ವಾಚಿಸಿದರು. ಸಂಶೋಧನಾ ವಿದ್ಯಾರ್ಥಿನಿ ಕುಮಾರಿ ನಿಶಾ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ನಾಯಕ ವಂದಿಸಿದರು.