Updated News From Kaup
ದೇಶದಲ್ಲಿ ಅಶಾಂತಿ ಉಂಟುಮಾಡಲು ಕೇಂದ್ರದ ಬಿಜೆಪಿ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಮಂಡನೆ : ಶರ್ಫುದ್ದೀನ್ ಶೇಖ್
Posted On: 02 Apr 2025, 10:55 PM
ಕೇಂದ್ರ ಸರ್ಕಾರ ದೇಶದಲ್ಲಿ ಹಿಂದೂ ಮುಸ್ಲಿಂ ಸಮುದಾಯ ವಿಭಜನೆ ಮಾಡಲು ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ವಕ್ಪ್ ಬೋರ್ಡ್ ಹಸರಿನಲ್ಲಿ ದೇಶದ ಜನರಿಗೆ ಶುದ್ದ ಸುಳ್ಳುಗಳನ್ನು ಹೇಳಿ ಇವತ್ತು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಬಿಲ್ಲನ್ನು ಮಂಡಿಸಿದೆ. ವಕ್ಪ್ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಯಾರಿಗೂ ಅನ್ಯಾಯವಾಗಿರಲಿಲ್ಲ. ಆದರೆ ವಖ್ಫ್ ವಿಚಾರದಲ್ಲಿ ಜನರಿಗೆ ವಾಸ್ತವ ವಿಚಾರವನ್ನು ಮರೆಮಾಚಿ ಸುಳ್ಳು ಹೇಳಿಕೆಗಳನ್ನು ನೀಡಿ ಕೇಂದ್ರ ಸರ್ಕಾರ ತನ್ನ ವೈಪಲ್ಯಗಳನ್ನು ಮರೆಮಾಚಲು ತಯಾರಿ ನಡೆಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಖಂಡಿಸಿದ್ದಾರೆ. ಈ ದೇಶಕ್ಕೆ ಅಲ್ಪಸಂಖ್ಯಾತರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಜಾತಿಮತ ಭೇದ ಇಲ್ಲದೆ ಎಲ್ಲರೂ ಸೇರಿ ಭಾರತ ದೇಶಕ್ಕೆ ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ ಮತ್ತು ಬಲಿದಾನಗೈದಿದ್ದಾರೆ. ಆದರೆ ಇಂದು ವಕ್ಫ್ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿ ಉಂಟುಮಾಡಲು ತಯಾರಿ ಮಾಡಿದ ಬಿಜೆಪಿ ಮತ್ತು ಸಂಘಪರಿವಾರದ ತ್ಯಾಗ ಏನು ಎಂಬುದು ನಾಡಿನ ಜನರ ಪ್ರಶ್ನೆಯಾಗಿದೆ. ನಿಜವಾಗಿಯೂ ವಕ್ಫ್ ಭೂಮಿ ಇರುವ ಪ್ರಮಾಣಕ್ಕಿಂತ ಅದೆಷ್ಟೋ ಪ್ರಮಾಣ ಕಡಿಮೆ ಇದೆ. ಭಾಗಶ: ಭೂಮಿ ಕಬಳಿಕೆ ಮಾಡಲಾಗಿದೆ. ಭೂಸುಧಾರಣೆ ಕಾನೂನಿಂದಾಗಿ ಕಳೆದುಕೊಂಡದ್ದು ಮತ್ತು ಸರ್ಕಾರಿ ಕಚೇರಿಗಳಿಗೆ ಕೊಟ್ಟು ಇರುವ ಭೂಮಿಯನ್ನು ಕೂಡ ಕಬಳಿಕೆ ಮಾಡಿ ತಮ್ಮ ಪರವಿರುವ ಉದ್ಯಮಿಗಳಿಗೆ ಹಂಚುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವಿದೆ. ಇದು ಖಂಡನೀಯ. ಧಾರ್ಮಿಕ ವಿಚಾರಗಳನ್ನೇ ಎತ್ತಿಕೊಂಡು ಸಮುದಾಯಗಳ ನಡುವೆ ಸಾಮರಸ್ಯ ಕದಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಇದೆಲ್ಲವನ್ನು ಬಿಟ್ಟು ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಕೋಮುವಾದ ನಿರ್ಮೂಲನೆ ಕುರಿತು ಕಾಳಜಿ ವಹಿಸಬೇಕು. ದೇಶದಲ್ಲಿ ಶಾಂತಿ ಕದಡುವುದೇ ದೊಡ್ಡ ದೇಶದ್ರೋಹ. ಈ ಜ್ಞಾನ ಕೇಂದ್ರ ಸರ್ಕಾರ ಬೆಳೆಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು ದಂಡತೀರ್ಥ ವಿದ್ಯಾಸಂಸ್ಥೆ : ಬೇಸಿಗೆ ಶಿಬಿರ ಉದ್ಘಾಟನೆ
Posted On: 02 Apr 2025, 10:43 PM
ಕಾಪು : ಪ್ರಕೃತಿ ಸಮತೋಲನವನ್ನು ಕಾಪಾಡುವಲ್ಲಿ ವನ್ಯಜೀವಿಗಳು ಹಾಗೂ ಹಾವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪರಿಸರ ವ್ಯವಸ್ಥೆಯಲ್ಲಿ ಅವು ಎಷ್ಟು ಮುಖ್ಯ ಎಂಬುದನ್ನು ಅರಿತುಕೊಂಡು ಅವುಗಳನ್ನು ಸಂರಕ್ಷಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ವನ್ಯಜೀವಿ ಹಾಗೂ ಉರಗ ರಕ್ಷಕ ಅಕ್ಷಯ್ ಎನ್. ಶೇಟ್ ಹೇಳಿದರು. ಅವರು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಜರಗಿದ ಸ್ಕೌಟ್ಸ್, ಗೈಡ್ಸ್ ,ಕಬ್, ಬುಲ್-ಬುಲ್ ಮತ್ತು ಸೇವಾದಳಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೀಲಾನಂದ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಕುಮಾರಿ ಅನುಷ್ಕಾ ಸ್ವಾಗತಿಸಿದರು. ವಿದ್ಯಾರ್ಥಿ ಮಾಸ್ಟರ್ ರಚಿತ್ ಕೆ. ದೇವಾಡಿಗ ವಂದಿಸಿದರು. ಕುಮಾರಿ ಕ್ಷಮ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ
Posted On: 02 Apr 2025, 08:03 PM
ಉಡುಪಿ : ಜಿಲ್ಲೆಯ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ರಸ್ತೆದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ಈಗಾಗಲೇ ಪೈಓವರ್ ನಿರ್ಮಿಸುವಂತೆ ಪ್ರತಿಭಟನೆ ಹಾಗೂ ಮನವಿಯನ್ನು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ವತಿಯಿಂದ ಮವವಿ ಸಲ್ಲಿಸಿದ್ದು. ಈ ವಿಚಾರವಾಗಿ ಯಾರೂ ಕೂಡ ಗಮನ ಹರಿಸದೆ ಇರುವುದು ಬೇಸರದ ಸಂಗತಿಯಾಗಿದೆ. ಆಭಾಗದಲ್ಲಿ ದಿನೇ ದಿನೇ ಅಪಘಾತಗಳು ಜಾಸ್ತಿಯಾಗುತ್ತಿದ್ದು ಎ.1, ಮಂಗಳವಾರ ಬೆಳಿಗ್ಗೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆಗೆ ಹೋಗುವ ಸಂದರ್ಭದಲ್ಲಿ ರಸ್ತೆದಾಟುವಾಗ ಬ್ರಹ್ಮಾವರ ಎಸ್.ಎಂ.ಎಸ್ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ವಂಶಿ ಜಿ. ಶೆಟ್ಟಿ ಎಂಬ ಬಾಲಕನು ಅಪಘಾತದಲ್ಲಿ ಸಾವನಪ್ಪಿದ್ದು ಈ ಬಾಲಕನ ಕುಟುಂಬದವರಿಗೆ ಯಾವುದೇ ಪರಿಹಾರ ನೀಡದಿರುವುದರಿಂದ ಈ ಕೂಡಲೆ ಜಿಲ್ಲಾಡಳಿತ ಮತ್ತು ಸಂಬಂದ ಪಟ್ಟ ಇಲಾಖೆಯಿಂದ ಪರಿಹಾರ ಒದಗಿಸಿ ಕೊಡುವಂತೆ ಹಾಗೂ ಆ ಭಾಗದಲ್ಲಿ ಪೈಓವರ್ ನಿರ್ಮಿಸುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಯವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಈ ವಿಚಾರದಲ್ಲಿ ತಕ್ಷಣವೇ ಕ್ರಮ ಕೃೆಗೂಳ್ಳುತೇನೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಸ್ಥಾಪಕ ಶಿವ ಕುಮಾರ್ ಕರ್ಜೆ, ಗೌರವ ಸಲಹೆಗಾರ ವಿಶ್ವಾಸ್ ಅಮೀನ್, ಸಂತೋಷ್ ಪಡುಬಿದ್ರಿ, ಉಡುಪಿ ತಾಲೂಕು ಅಧ್ಯಕ್ಷ ವಿದಿತ್ ನಾಗರಾಜ್, ಉಪಾಧ್ಯಕ್ಷ ಮನೀಷ್ ಪೂಜಾರಿ, ಕಾಲೇಜು ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ, ಕಿರಣ್ ಶೆಟ್ಟಿ, ಧನುಷ್ ಆಚಾರ್ಯ, ಸೌರಭ್ ಪೂಜಾರಿ ಉಪಸ್ಥಿತರಿದ್ದರು.
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ 92 ಹೇರೂರು, ಬಂಟಕಲ್ಲು : ನೂತನ ಕಾರ್ಯಕಾರಿ ಸಮಿತಿ ರಚನೆ
Posted On: 31 Mar 2025, 09:59 PM
ಬಂಟಕಲ್ಲು : ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ (ರಿ.) 92 ಹೇರೂರು, ಬಂಟಕಲ್ಲು ಇಲ್ಲಿನ ವಾರ್ಷಿಕ ಮಹಾಸಭೆಯಲ್ಲಿ 2025-27ನೇ ಸಾಲಿನ ಅವಧಿಗೆ ಕಳೆದ ಕಾರ್ಯಕಾರಿ ಸಮಿತಿಯು ಅವಿರೋಧವಾಗಿ ಪುನರಾಯ್ಕೆಗೊಂಡಿತು. ಅಧ್ಯಕ್ಷರಾಗಿ ರಾಘವೇಂದ್ರ ಸ್ವಾಮಿ, ಕಾರ್ಯದರ್ಶಿಯಾಗಿ ಚರಣ್ ದೇವಾಡಿಗ, ಉಪಾಧ್ಯಕ್ಷರಾಗಿ ಮಾಧವ ಆಚಾರ್ಯ, ಕೋಶಾಧಿಕಾರಿಯಾಗಿ ಸುಧೀರ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಉದಯ ಕರ್ಕೇರ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಜೇಶ್ ಜೋಗಿ, ದೇವದಾಸ ಜೋಗಿ, ಶ್ರೀಧರ್ ಕಾಮತ್, ಶ್ರೀನಿವಾಸ ದೇವಾಡಿಗ, ದಿನೇಶ್ ದೇವಾಡಿಗ ರವರು ಆಯ್ಕೆಯಾದರು. ಇದರ ಜೊತೆಗೆ ಸಕ್ರಿಯ ಮತ್ತು ಹಿರಿಯ ಸದಸ್ಯರುಗಳ ಸಲಹಾ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.
ಕಾಪು ಶ್ರೀ ಹೊಸ ಮಾರಿಗುಡಿಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಭೇಟಿ
Posted On: 31 Mar 2025, 09:50 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲತಾ ಅವರು ಅಮ್ಮನ ದರುಶನ ಪಡೆದು ನವದುರ್ಗಾ ಲೇಖನ ಯಜ್ಞದ ಪುಸ್ತಕವನ್ನು ಪಡೆದಿದ್ದರು. ಪುಸ್ತಕದಲ್ಲಿ ನವದುರ್ಗಾ ಲೇಖನವನ್ನು 9 ದಿನಗಳವರೆಗೆ ಬರೆದು "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಪಿ.ಎಸ್ ರವರಿಗೆ ಮುಖ್ಯಮಂತ್ರಿ ಪದಕ ಗೌರವ
Posted On: 31 Mar 2025, 09:44 PM
ಪಡುಬಿದ್ರಿ : ಕರ್ನಾಟಕ ಸರಕಾರವು 2024 ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ 197 ಪೋಲಿಸ್ ಅಧಿಕಾರಿಗಳನ್ನು ಘೋಷಿಸಿದ್ದು, ಪ್ರಶಸ್ತಿ ಪುರಸ್ಕೃತರಲ್ಲಿ ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಕಳ , ಮಂಗಳೂರು ವಿವಿಧ ಕಡೆಗಳಲ್ಲಿ ಪ್ರಾಮಾಣಿಕ ಹಾಗು ನಿಷ್ಠೆಯಿಂದ ದಕ್ಷ ಅಧಿಕಾರಿಯಾಗಿ ಸೇವೆಗೃೆದು ಪ್ರಸ್ತುತ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಗಿರುವ ಪ್ರಸನ್ನ ಪಿ.ಎಸ್ ರವರು ಭಾಜನರಾಗಿದ್ದಾರೆ. ಎಪ್ರಿಲ್ 2 ರಂದು ಬೆಂಗಳೂರು ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಹಾಗೂ ಕನ್ನಡ, ಸಂಸ್ಕೃತಿ ಇಲಾಖೆ ಉಡುಪಿ : ಪ್ರಸಾದನ ಕಾರ್ಯಗಾರ ಸಂಪನ್ನ
Posted On: 31 Mar 2025, 09:33 PM
ಉಡುಪಿ : ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರಸಾದನ ಕಾರ್ಯಗಾರ ಜರುಗಿತು. ಕಾರ್ಯಾಗಾರದ ಉದ್ಘಾಟನೆಯನ್ನು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂದೀಪ್ ಶೆಟ್ಟಿ ನೆರವೇರಿಸಿ ನೃತ್ಯ ಕಲಾವಿದರಿಗೆ ಪ್ರಸಾದನ ಕಾರ್ಯಗಾರವೆನ್ನುವುದು ಕಲಾ ಪ್ರದರ್ಶನಕ್ಕೆ ಪೂರಕ ಅಂಶಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸಾದನ ಕಾರ್ಯಗಾರವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಆರ್ ಕೆ ಕಲಾ ತಂಡಗಳ ನಿರ್ದೇಶಕರು, ಬಹುಮುಖ ಪ್ರತಿಭೆಯ ಸಂಪನ್ಮೂಲ ವ್ಯಕ್ತಿ ರಾಜೇಶ್ ವಿಟ್ಲ ಅವರು ಭರತ ನಾಟ್ಯ ಮುಖವರ್ಣಿಕೆ, ಕೇಶ ವಿನ್ಯಾಸ, ವಸ್ತ್ರ ವಿನ್ಯಾಸದ ಬಗ್ಗೆ ವಿವರಣೆ ಹಾಗು ಪ್ರಾತ್ಯಕ್ಷಿಕೆ ಯೊಂದಿಗೆ ಬಹಳ ಉತ್ತಮ ರೀತಿಯಲ್ಲಿ ಶಿಬಿರಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕರು, ಖ್ಯಾತ ನಿರೂಪಕರಾದ ಯೋಗೀಶ್ ಕೊಳಲಗಿರಿ, ನಾಟ್ಯಾಲಯದ ನೃತ್ಯ ಗುರುಗಳು ನಿರ್ದೇಶಕರು ಆಗಿರುವ ಭವಾನಿಶಂಕರ್ ಉಪಸ್ಥಿತರಿದ್ದರು. ಸುಮಾರು 80 ಶಿಬಿರಾರ್ಥಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ಪೋಷಕರು ಕೂಡ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಕಾರ್ಯಗಾರವನ್ನು ನೆರವೇರಿಸಿ ಕೊಟ್ಟ ಸಂಪನ್ಮೂಲ ವ್ಯಕ್ತಿ ರಾಜೇಶ್ ವಿಟ್ಲರವರನ್ನು ಸನ್ಮಾನಿಸಲಾಯಿತು. ಶ್ರೀ ಭ್ರಾಮರಿ ನಾಟ್ಯಾಲಯದ ಗುರುಗಳಾದ ಭವಾನಿಶಂಕರ್ ಸ್ವಾಗತಿಸಿ , ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮೇ.6 : ಯುವಸೇನೆ ಮಡುಂಬು - 18ನೇ ವಾರ್ಷಿಕೋತ್ಸವ
Posted On: 31 Mar 2025, 04:38 PM
ಕಾಪು : ಯುವಸೇನೆ ಮಡುಂಬು ವೈ.ಎಸ್.ಎಮ್ ಫ್ರೆಂಡ್ಸ್ ಮಡುಂಬು ಇದರ 18ನೇ ವಾರ್ಷಿಕೋತ್ಸವ ಮೇ 06, ಮಂಗಳವಾರ ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ಜರಗಲಿದೆ. ರಾತ್ರಿ ಗಂಟೆ 8 ರಿಂದ ಸಭಾ ಕಾರ್ಯಕ್ರಮವು ಯುವಸೇನೆ ಮಡುಂಬು ಇದರ ಅಧ್ಯಕ್ಷರಾದ ದೀಪಕ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಉದ್ಘಾಟನೆ ಹಾಗೂ ಭಗವದ್ಗಿತಾ ದಿಕ್ಸೂಚಿ ಭಾಷಣವನ್ನು ಜ್ಯೋತಿಷಿ ಮತ್ತು ಪುರೋಹಿತರಾದ ವಿದ್ವಾನ್ ಕೆ.ಪಿ. ಶ್ರೀನಿವಾಸ ತಂತ್ರಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶಾಂತ ಇಲೆಕ್ಟ್ರಿಕಲ್ಸ್, ಉಡುಪಿ ಆಡಳಿತ ನಿರ್ದೇಶಕರಾದ ಶ್ರೀಪತಿ ಭಟ್, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಪತ್ರಕರ್ತ ರಾಕೇಶ್ ಕುಂಜೂರು, ಫ್ರೆಂಡ್ಸ್ ಕೆಟರರ್ಸ್ ಶಂಕರಪುರ ಮಾಲಕರಾದ ನವೀನ್ ಅಮೀನ್, ಉದ್ಯಮಿ ದಿನೇಶ್ ಶೆಟ್ಟಿ, ಕಲ್ಯಾಲು, ಕಾಂಗ್ರೆಸ್ ಮುಖಂಡರಾದ ಸುನಿಲ್ ಬಂಗೇರ ಉಪಸ್ಥಿತರಿರಲಿದ್ದಾರೆ. ಸಂಜೆ ಗಂಟೆ 6 ರಿಂದ 8 ರವರೆಗೆ ಸ್ಥಳೀಯ ಪ್ರತಿಭೆಗಳಿ೦ದ ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿದೆ. ರಾತ್ರಿ ಗಂಟೆ 8ಕ್ಕೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತುಳು ಚಾರಿತ್ರಿಕ ನಾಟಕ ಛತ್ರಪತಿ ಶಿವಾಜಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ : ರೋಯ್ಸ್ ಫೆರ್ನಾಂಡಿಸ್ ಅಧ್ಯಕ್ಷರಾಗಿ ಆಯ್ಕೆ
Posted On: 31 Mar 2025, 04:17 PM
ಕಟಪಾಡಿ : ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ (ರಿ.) ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಐರಿನ್ ಪಿರೇರಾ ಹಾಗೂ ಗ್ಲೋರಿಯ ಪಿಂಟೊ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿದ್ದು, ಹೊಸ ನಿರ್ದೇಶಕರಾಗಿ ಗೊಡ್ಫ್ರಿ ಡಿಸೋಜಾ, ವಿಲಿಯಂ ಲೋಬೊ, ಆಸ್ಟಿನ್ ಕರ್ಡೋಜಾ, ಜೆರೊಮ್ ಕಸ್ತೆಲಿನೊ, ಲಾರೆನ್ಸ್ ಕ್ರಾಸ್ಟೊ, ರೊನಾಲ್ಡ್ ಮಾಚಾದೊ, ಶಾಂತಿ ಕ್ವಾಡ್ರಸ್, ಮೇರಿ ಡಿಸಿಲ್ವ ಆಯ್ಕೆಯಾಗಿದ್ದಾರೆ.
ಎ.4 - 13 : ಕಾಪುವಿನಲ್ಲಿ ಹತ್ತು ದಿನದ ಪ್ರಾಣಾಯಾಮ - ಧ್ಯಾನದ ಉಚಿತ ಶಿಬಿರ
Posted On: 31 Mar 2025, 04:13 PM
ಕಾಪು : ಧೀಶಕ್ತಿ ಜ್ಞಾನ ಯೋಗ ಶಿಬಿರ ಮಂಗಳೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ಇದರ ಆಶ್ರಯದಲ್ಲಿ ಕಾಯಿಲೆ ಹಾಗೂ ದು:ಖ ರಹಿತವಾದ ಜೀವನಕ್ಕಾಗಿ ಹತ್ತು ದಿನದ ಪ್ರಾಣಾಯಾಮ - ಧ್ಯಾನದ ಉಚಿತ ಶಿಬಿರ ಎಪ್ರಿಲ್ 04 ಶುಕ್ರವಾರದಿಂದ ಎಪ್ರಿಲ್ 13 ರವಿವಾರ ತನಕ ಸಾಯಂಕಾಲ 06 ಗಂಟೆಯಿಂದ 8.30 ಗಂಟೆಯವರೆಗೆ ಕಾಪು ಕಾಳಿಕಾಂಬಾ ದೇವಸ್ಥಾನದ ಸಭಾಭಾವನದಲ್ಲಿ ನಡೆಯಲಿದೆ. ವಯಸ್ಸು 10 ವರ್ಷ ದಾಟಿದವರು ಯಾರು ಕೂಡ ಭಾಗವಹಿಸಬಹುದು. ಕುಟುಂಬ ಸಮೇತರಾಗಿ ಭಾಗವಹಿಸಿ ಆದಷ್ಟು ಮಕ್ಕಳು ಭಾಗವಹಿಸಿದರೆ ಅತೀ ಉತ್ತಮ, ವಿದ್ಯಾರ್ಥಿಗಳಿಗೆ ಅತೀ ಅವಶ್ಯವಿರುವ ತರಗತಿ. ಬಿಪಿ, ಶುಗರ್, ಮೈಗ್ರೇನ್ ನಂತಹ ಅನೇಕ ಕಾಯಿಲೆಗಳು ಕೇವಲ 10 ದಿನದಲ್ಲಿಯೇ ವಾಸಿಯಾಗುತ್ತದೆ ಮತ್ತಿತರ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಕೂಡ ಉತ್ತಮ ತರಗತಿ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ತರಗತಿ. ಈ ತರಗತಿಯಲ್ಲಿ ಚರ್ಮದ ಕಾಯಿಲೆಗಳು ಗುಣವಾದ ಉದಾಹರಣೆಗಳಿವೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸುವ ತರಗತಿ. ವ್ಯಾಪಾರ ವಹಿವಾಟುಗಳಿಗೆ ಕೂಡ ಈ ತರಗತಿಯಲ್ಲಿ ಲಾಭವಾಗಲಿದೆ. ನೆಲದ ಮೇಲೆ ಕುಳಿತುಕೊಳ್ಳಲಾಗದವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳವ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ಸಂಪರ್ಕಿಸಿ : 9845379440, 9242494317, 7026810880, 9663261694
