Updated News From Kaup
ಬಂಟಕಲ್ಲು : 8ನೇ ವರ್ಷದ "ಗಾದಂತ್ ಕ್ಹೇಳ್ ಮೇಳ್" - ಕೆಸರು ಗದ್ದೆ ಕ್ರೀಡೋತ್ಸವ ಸಂಪನ್ನ
Posted On: 16 Jun 2025, 11:44 AM
ಶಿರ್ವ : ಪ್ರಕೃತಿಯ ಜೊತೆಗಿನ ಬಾಂಧವ್ಯದೊಂದಿಗೆ ಜೊತೆಯಾದ ಹಿರಿಯರ ಅನುಭವಗಳು, ಕಷ್ಟದ ಶ್ರಮ ಜೀವನ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇಂದು ಮರೆಯಾಗುತ್ತಿದೆ. ಅವರ ಬದುಕು ನಮಗೆ ಆದರ್ಶವಾಗಿರಬೇಕು. ಹಿರಿಯರ ಕೃಷಿ ಸಂಸ್ಕೃತಿ, ಪ್ರಕೃತಿಯ ನಂಟು ನವಪೀಳಿಗೆಗೆ ಪರಿಚಯಿಸುವ "ಗಾದಂತ್ ಕ್ಹೇಳ್ ಮೇಳ್" ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಇದರ ನಿರ್ದೇಶಕರಾದ ಎಳ್ಳಾರೆ ಸದಾಶಿವ ಪ್ರಭು ನುಡಿದರು. ಅವರು ರವಿವಾರ ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಹಾಗೂ ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಡಂಬೈಲು ಅನಂತರಾಮ ವಾಗ್ಲೆಯವರ ದೊಡ್ಡಗದ್ದೆಯಲ್ಲಿ ಸಮಾಜದ ಸಂಘಟನೆ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಮನೋರಂಜನೆಯ ಸದುದ್ದೇಶದಿಂದ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ 8ನೇ ವರ್ಷದ "ಗಾದಂತ್ ಕ್ಹೇಳ್ ಮೇಳ್" - ಕೆಸರು ಗದ್ದೆ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಗತಿಪರ ಕೃಷಿಕೆ ಸಡಂಬೈಲು ಹೆಬ್ಬಾಗಿಲು ಸುನೀತಾ ಕೃಷ್ಣ ವಾಗ್ಲೆ ಮತ್ತು ಮೂಲತ: ಕೃಷಿಕರಾಗಿದ್ದು ಪ್ರಸ್ತುತ ಇನ್ನಂಜೆ ಎಸ್ವಿಎಚ್ ಪ.ಪೂ.ಕಾಲೇಜಿನ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕುಂಜರ್ಗ ರಾಜೇಂದ್ರ ಪ್ರಭು, ಕಂಬಳ ಕೋಣಗಳ ಯಜಮಾನ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್ ರವರನ್ನು ಸನ್ಮಾನಿಸಲಾಯಿತು. ಜೊತೆಗೆ ಕಂಬಳ ಕೋಣಗಳನ್ನು ಗದ್ದೆಗೆ ಇಳಿಸಿ ಸಹಕರಿಸಿದ ಸಹಪಾಠಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಾರಸ್ವತ ಸೌಹಾರ್ದ ಸಹಕಾರಿ ಸಂಘ (ನಿ.) ಮಣಿಪಾಲ ಇದರ ಅಧ್ಯಕ್ಷ ವಾಸುದೇವ ಕೃಷ್ಣ ನಾಯಕ್ ಸ್ಪರ್ಧಾ ವಿಜೇಜೇತರಿಗೆ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದ ಬೈಲು, ಸ್ಥಳೀಯ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಗದ್ದೆಯ ಯಜಮಾನ ಅನಂತರಾಮ ವಾಗ್ಲೆ, ಆರ್ಎಸ್ಬಿ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್, ಶ್ರೀದುರ್ಗಾ ಮಹಿಳಾ ಮಹಿಳಾ ವೃಂದದ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್, ಬೆಳ್ಳೆ ಗ್ರಾ,ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶೇಷ ಆಕರ್ಷಣೆಯಾಗಿ ಕೆಸರುಗದ್ದೆಯಲ್ಲಿ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್ರವರ ಕಂಬಳದ ಕೋಣಗಳ ಓಟವನ್ನು ಪ್ರದರ್ಶಿಸಲಾಯಿತು. ಕೆಸರು ಗದ್ದೆಯಲ್ಲಿ ನಿಧಿ ಶೋಧ, ಮಕ್ಕಳಿಗೆ ಕೆಸರುಗದ್ದೆ ಓಟ, ಅಡಿಕೆ ಹಾಳೆ ಓಟ, ಚೆಂಡು ಹೆಕ್ಕುವುದು, ಹಲಸಿನ ಬೀಜ ಹೆಕ್ಕುವುದು, ಪ್ರೌಢರಿಗೆ ತಂಡಗಳಲ್ಲಿ ಕಂಬಳ ಓಟ, ರಿಲೇ, ಗೂಟಕ್ಕೆ ಸುತ್ತುಹಾಕಿ ಓಟ, ಬಲೂನ್ ಓಟ, ಹಿರಿಯರಿಗೆ ದಂಪತಿ ಉಪ್ಪುಮೂಟೆ ಓಟ, ಕಂಬಳ ಓಟ, ರಿಲೇ ಓಟ, ಮಡಲು ಹೆಣೆಯುವುದು, ಬೈಹುಲ್ಲಿನಿಂದ ಹಗ್ಗ ತಯಾರಿ, ಬಲೂನ್ ಓಟ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಆಟಗಳನ್ನು ಏರ್ಪಡಿಸಲಾಗಿತ್ತು. ಪ್ರಧಾನ ಸಂಘಟಕ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್ ಪ್ರಾಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ಸ್ಫರ್ಧಾ ವಿಜೇತರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ನಿರೂಪಿಸಿದರು.
ಜೂ. 17 (ನಾಳೆ) : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಶ್ರೀಮಾತಾ ಸು-ವರ್ಣ ಪುಷ್ಪಾಂಜಲಿ ಸೇವೆ
Posted On: 16 Jun 2025, 11:20 AM
ಕಾಪು : ಇಲ್ಲಿನ ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ಶ್ರೀಮಾತಾ ಸಭಾಭವನ ಉದ್ಘಾಟನೆ ಮತ್ತು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಮತ್ತು ತಂಡದವರು ರಚಿಸಿರುವ ಮಹಾಮಾತೆ ಮಾರಿಯಮ್ಮ ಗ್ರಂಥ ಬಿಡುಗಡೆ ಹಾಗೂ ಘಂಟಾನಾದ ಸೇವೆಗೆ ಚಾಲನೆಯು ಜೂನ್ 17, ಮಂಗಳವಾರ ನಡೆಯಲಿದೆ. ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ.ಕುಮಾರಗುರು ಅವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿಗಳ ಸಹಯೋಗದೊಂದಿಗೆ ಶ್ರೀಮಾತಾ ಸು-ವರ್ಣ ಪುಷ್ಪಾಂಜಲಿ ಸೇವೆ ಆಯೋಜಿಸಲಾಗಿದೆ. ಬೆಳಗ್ಗೆ 9ಕ್ಕೆ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯಲ್ಲಿ ಪ್ರಾರ್ಥನೆ, 9.9ಕ್ಕೆ ಶ್ರೀಮಾತಾ ಸಭಾಭವನ ಉದ್ಘಾಟನೆ, 9.18ರಿಂದ ಶ್ರೀಮಾತಾ ಸು-ವರ್ಣ ಪುಷ್ಪಾಂಜಲಿ ಸೇವೆಯ ಪೂಜಾ ಪ್ರಕ್ರಿಯೆ ಆರಂಭ ಮತ್ತು ಭಕ್ತರಿಂದ ಸಂಕಲ್ಪ ಸ್ವೀಕಾರ, 10ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, 11.30 ಕ್ಕೆ ಉತ್ತರ ಪೂಜೆ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನೆರವೇರಲಿದೆ. ಘಂಟಾನಾದ ಸೇವೆ ಚಾಲನೆ ಪ್ರಯುಕ್ತ ಸಂಜೆ 6ರಿಂದ ಘಂಟಾನಾದ ಸೇವೆ ಜರುಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.ಕ. ಮೊಗವೀರ ಮಹಾಜನ ಸಂಘದಿಂದ ಮೊಗವೀರ ಗ್ರಾಮಸಭೆಗಳಿಗೆ ಭೇಟಿ
Posted On: 16 Jun 2025, 11:12 AM
ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಸಭಾ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಮಹಾಜನ ಸಂಘದ ಆಡಳಿತ ಪದಾಧಿಕಾರಿಗಳು ಭಾನುವಾರ ನಾನಾ ಮೊಗವೀರ ಮಹಾಸಭೆಗಳಿಗೆ ಭೇಟಿ ನೀಡಿದರು. ಹೆಜಮಾಡಿಯ ಗುಂಡಿ ಮೊಗವೀರ ಮಹಾಸಭಾದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ ಮಹಾಸಭಾದ ಅಧ್ಯಕ್ಷ ಜಯ ಸಿ.ಕೋಟ್ಯನ್ ಬೆಳ್ಳಂಪಳ್ಳಿ ಮಾತನಾಡಿ, ಶ್ರೀ ಕ್ಷೇತ್ರ ಉಚ್ಚಿಲಕ್ಕೆ ನಿತ್ಯ ಸಹಸ್ರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಇದೇ ರೀತಿ ಜಗತ್ಪ್ರಸಿದ್ಧ ಉಚ್ಚಿಲ ದಸರಾ ಮಹೋತ್ಸವದಲ್ಲಿ ಲಕ್ಷಾತರ ಭಕ್ತರು ಭಾಗವಹಿಸುತ್ತಾರೆ. ಜತೆಗೆ ಧಾರ್ಮಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ನಿರಂತರ ಸೇವೆಗಳು ನಡೆಯುತ್ತಾ ಬಂದಿದೆ. ಈ ಬಾರಿ ಹಲವು ಶಾಶ್ವತ ಯೋಜನೆಗಳನ್ನು ಕಾರ್ಯಗತಗೊಳಿಸಲು ಮಹಾಜನ ಸಂಘ ನಿರ್ಧರಿಸಿದ್ದು, ಗ್ರಾಮಸಭೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದರು. ಗುಂಡಿ ಮೊಗವೀರ ಮಹಾಸಭಾದ ಅಧ್ಯಕ್ಷ ದಿವಾಕರ ಹೆಜ್ಮಾಡಿ ಪ್ರತಿಕ್ರಿಯಿಸಿ, ಮಹಾಜನ ಸಂಘದ ಮನವಿಯಂತೆ ನಮ್ಮ ಗ್ರಾಮ ಸಭಾ ವತಿಯಿಂದ ಸರ್ವರ ಅಭಿಪ್ರಾಯದಂತೆ ಸಹಕಾರ ನೀಡಲು ಬದ್ಧರಿದ್ದೇವೆ ಎಂದರು. ಈ ಸಂದರ್ಭ ಜಯ ಸಿ.ಕೋಟ್ಯಾನ್ರವರು ದಿವಾಕರ ಹೆಜ್ಮಾಡಿಯವರಿಗೆ ಮಹಾಜನ ಸಂಘದ ಮನವಿಯನ್ನು ಹಸ್ತಾಂತರಿಸಿದರು. ಮೊಗವೀರ ಮಹಾಜನ ಸಂಘದ ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಸಮಿತಿ ಸದಸ್ಯರಾದ ಯಾದವ ವಿ.ಕೆ., ಕಿರಣ್ ಕುಮಾರ್ ಉದ್ಯಾವರ ಮತ್ತು ದಿನೇಶ್ ಎರ್ಮಾಳ್, ಶ್ರೀ ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ, ಗುಂಡಿ ಮೊಗವೀರ ಮಹಾಸಭಾದ ಗುರಿಕಾರ ಲೋಕನಾಥ ಗುರಿಕಾರ, ಪ್ರಧಾನ ಕಾರ್ಯದರ್ಶಿ ದಿನೇಶ್ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಶುಭ ದಿನೇಶ್, ಮಹಾಸಭಾದ ಜತೆ ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಕೋಶಾಧಿಕಾರಿ ಮೋಹಿತ್ ಸಾಲ್ಯಾನ್ ಉಪಸ್ಥಿತರಿದ್ದರು. ಭಾನುವಾರ 10ಕ್ಕೂ ಅಧಿಕ ಗ್ರಾಮಸಭೆಗಳಿಗೆ ಮಹಾಜನ ಸಂಘದ ಪದಾಧಿಕಾರಿಗಳು ಭೇಟಿ ನೀಡಿದ್ದು, ಮಹಾಜನ ಸಂಘ ಅಧೀನದ 169 ಗ್ರಾಮ ಸಭೆಗಳಿಗೂ ಭೇಟಿ ನೀಡಲಿದ್ದಾರೆ.
ಕುಂದಾಪುರ : ವಿದ್ಯಾಪೋಷಕ್ 76ನೇ ಮನೆ ಹಸ್ತಾಂತರ
Posted On: 16 Jun 2025, 11:07 AM
ಉಡುಪಿ : ಇಂಡಿ ವಿಲೇಜ್ ನ ಸಂಸ್ಥಾಪಕರಾದ ಶ್ರೀಕಾಂತ್ ಕೆ. ಅರಿಮಣಿತ್ತಾಯ ಮತ್ತು ಭಾರತಿ ಶ್ರಿಕಾಂತ್ ದಂಪತಿಗಳು ತಮ್ಮ ಮೂವತ್ತನೇ ವರ್ಷದ ವಿವಾಹ ಮಹೋತ್ಸವದ ಸವಿನೆನಪಿಗಾಗಿ 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂದಾಪುರ ತಾಲೂಕಿನ ಮೂಡುಮುಂದದ ಮೋರ್ಟುವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸುಶ್ಮಿತಾ ಇವಳಿಗೆ ನೂತನವಾಗಿ ನಿರ್ಮಿಸಿಕೊಟ್ಟ ‘ವಜ್ರಮ್’ ಮನೆಯನ್ನು ಹಸ್ತಾಂತರಿಸಿದರು. ಶ್ರೀಕಾಂತ್ ಕೆ. ಅರಿಮಣಿತ್ತಾಯ ಮತ್ತು ಭಾರತಿ ಶ್ರಿಕಾಂತ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶ್ರೀಕಾಂತರವರು, ತನ್ನ ಅಜ್ಜ, ತಂದೆ,ತಾಯಿ, ಗುರುಗಳು ತನಗೆ ಪ್ರೇರಕರಾಗಿದ್ದು, ಮುಂದಿನ ದಿನಗಳಲ್ಲಿ ಕಲಾರಂಗದ ಎಲ್ಲ ಚಟುವಟಿಕೆಗಳಿಗೆ ನೆರವಾಗಲು ಸಿದ್ದನಾಗಿದ್ದೇನೆ. ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿ, ಭವಿಷ್ಯದ ತನ್ನ ಯೋಜನೆಗಳನ್ನು ಪ್ರಕಟಿಸಿದರು. ಅಭ್ಯಾಗತರಾಗಿ ಆಗಮಿಸಿದ ಹಿರಿಯ ಬರಹಗಾರರು, ಶಿಕ್ಷಣತಜ್ಞರು ಆದ ಡಾ.ಬಿ.ಭಾಸ್ಕರ್ ರಾವ್, ಜಾಗತಿಕ ಮಟ್ಟದ ವಾಣಿಜ್ಯೋದ್ಯಮಿ ಶ್ರೀಕಾಂತರನ್ನು ತುಂಬು ಹೃದಯದಿಂದ ಅಭಿನಂದಿಸಿ, ಅವರ ಅಗಾಧ ಸಾಮರ್ಥ್ಯವನ್ನು ಪ್ರಶಂಸಿದರು. ಭೀಮ ಗೋಲ್ಡ್ಸ್ ಪ್ರೈ.ಲಿ.ಬೆಂಗಳೂರು ಇದರ ಪ್ರಮುಖರಾದ ಶ್ರೀಪತಿ ಭಟ್ ಅಭಿನಂದನೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಅರಿಮಣಿತ್ತಾಯರ ಮಾತೃಶ್ರೀ ಪುಷ್ಕಳಾ ಕೃಷ್ಣನ್, ಪುತ್ರ ವಿಶಾಲ್ ಅರಿಮಣಿತ್ತಾಯ, ಅಳಿಯ ನಚಿಕೇತ, ನಾಗರಾಜ ಆಚಾರ್ಯ, ಬಾಲಕೃಷ್ಣ ಕೋರ್ನಾಯ, ಸುಬ್ರಮಣ್ಯ ಭಟ್, ಹಯವದನ ಭಟ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ. ಜಿ. ಶೆಟ್ಟಿ, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಶೋಕ ಎಂ., ನಟರಾಜ ಉಪಾಧ್ಯ, ಗಣರಾಜ ಭಟ್, ವಿದ್ಯಾಪ್ರಸಾದ್, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ಗಣಪತಿ ಭಟ್ ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ರಾಘವೇಂದ್ರ ಸೋಮಯಾಜಿ ಸಂಸ್ಥೆಗೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಎಚ್.ಎನ್.ವೆಂಕಟೇಶ್ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು : ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ
Posted On: 12 Jun 2025, 04:16 PM
ಕಾಪು : ಶ್ರೀದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು ಇವರ ನೇತೃತ್ವದಲ್ಲಿ ದಿ.ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಗುರಿಕಾರ ಜಯ ರಾಣ್ಯ ಉದ್ಘಾಟಿಸಿದರು. ಮಲ್ಲಾರು ಜನರಲ್ ವಾರ್ಡಿನ ಸದಸ್ಯೆ ಮೋಹಿನಿ ಶೆಟ್ಟಿ, ಸಮಾಜದ ಪ್ರಮುಖರಾದ ಶೇಖರ ಗೌಡ್ರು, ರವೀಂದ್ರ ಮಲ್ಲಾರು, ರಾಣೆಯರ್ ಸಮಾಜ ಸೇವಾ ಸಂಘ ಕಾಪು ಇದರ ಅಧ್ಯಕ್ಷರಾದ ನಾಗಾರ್ಜುನ ಕಾಪು, ಹಳೇ ಮಾರಿಯಮ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಕು.ಜ್ಞಾನೇಶ್ವರಿ, ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಅಖಿಲೇಶ್, ಉಪಾಧ್ಯಕ್ಷರಾದ ನೀತಾ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆ
Posted On: 12 Jun 2025, 04:01 PM
ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ದೇಶದಾದ್ಯಂತ ಪಕ್ಷ ಸಂಘಟನಾ ಪರ್ವ ನಡೆಯುತ್ತಿದ್ದು ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತ ದಲ್ಲಿ ಉಳಿದಿರುವ 10 ಜಿಲ್ಲೆಗಳ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕುತ್ಯಾರ್ ನವೀನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಪರ್ವ 2024-25 ರಾಜ್ಯ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ : 2025 -26 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆ
Posted On: 12 Jun 2025, 03:55 PM
ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪುವಿನಲ್ಲಿ 2025 -26 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯು ಜರಗಿತು. ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ ಇವರು ಅಧ್ಯಕ್ಷತೆ ವಹಿಸಿದ್ದರು. ಹೊಸದಾಗಿ ನೇಮಕಗೊಂಡ ಸದಸ್ಯರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಲಾಯಿತು. ಆಸ್ಪತ್ರೆಯ ವಿವಿಧ ಕಾರ್ಯಕ್ರಮಗಳು, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರುವ ಬಗ್ಗೆ ರೂಪರೇಷೆಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಡಳಿತ ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ, ಸ್ಥಳೀಯ ಪ್ರತಿನಿಧಿಗಳಾದ ಹರೀಶ್ ನಾಯಕ್ ಕಾಪು, ಹಮೀದ್ ಯೂಸುಬ್, ಆಸಿಫ್, ಕಾರ್ತಿಕ್, ಯೋಗೇಶ್, ಆಶಾ ಶಂಕರ್, ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ, ವೈದ್ಯಾಧಿಕಾರಿ ಡಾ.ಧೃತಿ ಆಳ್ವ, ಸಿಬ್ಬಂದಿಯವರು ಉಪಸ್ಥಿತರಿದ್ದರು. ಸಿಸ್ಟರ್ ಚಂದ್ರಕಲಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಿರ್ವ : ಪೋಲಿಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ ಕಾರ್ಯಕ್ರಮ
Posted On: 12 Jun 2025, 02:37 PM
ಶಿರ್ವ : ಅಪ್ರಾಪ್ತ ವಯಸ್ಸಿನ ಮಕ್ಕಳು ಹೆಚ್ಚಾಗಿ ಮಾದಕ ದ್ರವ್ಯ ಸೇವನೆ ಸಹಿತ ವಿವಿಧ ಅಪರಾಧ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯ ಇದೆ. ತನಗೂ ಇನ್ನೊಬ್ಬರಿಗೂ ಅನುಕೂಲವಾಗುವಂತಹ ಶಿಕ್ಷಣ ಮನೆಯಿಂದಲೇ ಆಗಬೇಕು. ಸೈಬರ್ ಕ್ರೈಮ್, ಮೊಬೈಲ್ ಮೂಲಕ ಆಮಿಷಕ್ಕೆ ಒಳಗಾಗುವ ವಂಚನಾ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಕ್ರೈಮ್ ಸಹಿತ ಅಪರಾಧಗಳ ನಿಯಂತ್ರಣಕ್ಕೆ ಪೋಲಿಸರೊಂದಿಗೆ ಸಾರ್ವಜನಿಕರ ಸಕಾಲಿಕ ಸ್ಪಂದನ ಅಗತ್ಯ ಎಂದು ಶಿರ್ವ ಪೋಲಿಸ್ ಠಾಣಾಧಿಕಾರಿ ಮಂಜುನಾಥ್ ಮರಬದ ಹೇಳಿದರು. ಅವರು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವಠಾರದಲ್ಲಿ ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇದರ ಆಶ್ರಯದಲ್ಲಿ ಆರಕ್ಷಕ ಠಾಣೆ ಶಿರ್ವ ಇವರ ಸಹಯೋಗದೊಂದಿಗೆ ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು, ಅಟೋರಿಕ್ಷಾ ಚಾಲಕರ ಮಾಲಕರ ಸಂಘ ಬಂಟಕಲ್ಲು, ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇದರ ಸಹಕಾರದಲ್ಲಿ ಏರ್ಪಡಿಸಿದ "ಪೋಲಿಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ಗಳ ಬಗ್ಗೆ ಎಚ್ಚರ ವಹಿಸುವುದು, ಪ್ರಚೋದನಕಾರಿ ಮೆಸೆಜ್ಗಳನ್ನು ಲೈಕ್, ಫಾರ್ವರ್ಡ್ ಮಾಡುವುದೂ ಅಪರಾಧವಾಗಿದೆ ಎಂದರು. ಎಎಸ್ಐ ಶ್ರೀಧರ್ ಮತ್ತು ಮಹಿಳಾ ಪೋಲಿಸ್ ಗೀತಾ, ಮಹಿಳಾ ದೌರ್ಜನ್ಯ ಹಾಗೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾನೂನು, ಅಪ್ರಾಪ್ತರಿಂದ ವಾಹನ ಚಾಲನೆ ಅಪರಾಧಗಳ ಬಗ್ಗೆ ಮಾಹಿತಿ, ತಡೆಗಟ್ಟುವಿಕೆ, ಪೋಲಿಸ್ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಬಂಟಕಲ್ಲು ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಉದ್ಘಾಟಿಸಿದರು. ಈ ಸಂದರ್ಭ ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಗ್ರಾ.ಪಂ.ಸದಸ್ಯ ಸತೀಶ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಹೆಡ್ ಕಾನ್ಟೇಬಲ್ ಮಂಜುನಾಥ ಅಡಿಗ, ಬಂಟಕಲ್ಲು ಬೀಟ್ ಪೋಲಿಸ್ ಶಿವಾನಂದ, ಮಂಜುನಾಥ್, ನಾಗರಿಕರು ಉಪಸ್ಥಿತರಿದ್ದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜೂ.13 -14 : ಮಥುರಾದಲ್ಲಿ ನಡೆಯಲಿರುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ
Posted On: 11 Jun 2025, 11:07 AM
ಕಾಪು : ಉತ್ತರ ಪ್ರದೇಶ ಮಥುರಾದ ಶ್ರೀಧಾಮ ವೃಂದಾವನದಲ್ಲಿ ಜೂನ್ 13 ಮತ್ತು 14 ರಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಟಪಾಡಿಯ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಶ್ರೀ ಕೃಷ್ಣ ಜನ್ಮ ಭೂಮಿ ಮತ್ತು ಕಾಶಿ ಮುಕ್ತಿ ಹಾಗೂ ಯಾತ್ರಾ ಸ್ಥಳಗಳು ಮತ್ತು ಭವಿಷ್ಯದ ಏಳಿಗೆಗಳಿಗೆ ಭೌತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿ, ಪಂಗಡದ ಅನಾನುಭವಿ ಸನ್ಯಾಸಿಗಳ ತರಬೇತಿಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಶಿರ್ವ ರೋಟರಿ : ಕೃತಜ್ಞತಾ ಸಮರ್ಪಣೆ, ಅಭಿನಂದನೆ, ಕುಟುಂಬ ಸಮ್ಮಿಲನ ಕಾರ್ಯಕ್ರಮ
Posted On: 08 Jun 2025, 04:05 PM
ಶಿರ್ವ : 55 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವ ರೋಟರಿಯ 2024 -25ನೇ ಸೇವಾ ವರ್ಷದ ಕೃತಜ್ಞತಾ ಸಮರ್ಪಣೆ, ಅಭಿನಂದನೆ ಹಾಗೂ ಕುಟುಂಬ ಸಮ್ಮಿಲನದ ಕಾರ್ಯಕ್ರಮ ಶಿರ್ವ ರೋಟರಿ ಸಭಾ ಭವನ ಬಂಟಕಲ್ಲು ಇಲ್ಲಿ ಜರಗಿತು. ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ವಲಯ 5ರ ನೇತೃತ್ವ ವಹಿಸಿದ ಸಹಾಯಕ ಗವರ್ನರ್ ಅನಿಲ್ ಡೇಸಾ ಶಂಕರಪುರ, ವಲಯ ಸೇನಾನಿ ಮೆಲ್ವಿನ್ ಡಿಸೋಜ ಶಿರ್ವ ಹಾಗೂ ವಲಯ ತರಬೇತುದಾರ ಶೈಲೇಂದ್ರ ರಾವ್ ಕಾರ್ಕಳ ಇವರನ್ನು ಶಿರ್ವ ರೋಟರಿ ವತಿಯಿಂದ ವಲಯದ ಮಾಜಿ ಸಹಾಯ ಗವರ್ನರ್ಗಳಾದ ಬಿ.ಪುಂಡಲೀಕ ಮರಾಠೆ ಮತ್ತು ಡಾ.ಅರುಣ್ಕುಮಾರ್ ಹೆಗ್ಡೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಶ್ವಿನಿ ಅಮಿತ್ ಅರಾನ್ಹಾ, ಹಿರಿಯರಾದ ಹೆರಾಲ್ಡ್ ಕುಟಿನ್ಹೊ, ಮಾಜಿ ಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ವೇದಿಕೆಯಲ್ಲಿದ್ದರು. 2025-26ರ ನಿಯೋಜಿತ ಅಧ್ಯಕ್ಷ ವಿಲಿಯಮ್ ಮಚಾದೋ ಕಾರ್ಯಕ್ರಮ ನಿರೂಪಿಸಿದರು.
