Updated News From Kaup

5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ಆಯ್ಕೆ

Thumbnail
Posted On: 14 Apr 2025, 07:00 AM

ಉಡುಪಿ : ಕೋಟಾದ "ಕಾರಂತ ಥೀಮ್ ಪಾರ್ಕ್"ನಲ್ಲಿ ಮೇ 4 ರಂದು ನಡೆಯಲಿರುವ 5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ರವರು ಆಯ್ಕೆಯಾಗಿದ್ದಾರೆ. ತೆಕ್ಕಟ್ಟೆ ಸಮೀಪದ, ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಮಂಗಳೂರಿನ ಪ್ರತಿಷ್ಠಿತ ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿದರು. ಐಎಮ್ಎ ಕರ್ನಾಟಕದ ನಿಯೋಜಿತ ರಾಜ್ಯ ಅಧ್ಯಕ್ಷರು. ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು.ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿದ್ದರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮನಪಾ ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಮಂಗಳಾದೇವಿ ಹಾಗೂ ಪಡೀಲ್ ಪರಿಸರದಲ್ಲಿ ಕಳೆದ 3 ದಶಕಗಳಿಂದ "ಕುಲಾಲ್ ಹೆಲ್ತ್ ಕೇರ್ ಸೆಂಟರ್" ಮತ್ತು "ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್" ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ "ಕನ್ನಡಿಕಟ್ಟೆ"ಗೆ ಇವರದೇ ನೇತೃತ್ವ. ಸರ್ವಜ್ಞ ವೃತ್ತ ಮಂಗಳೂರು, ರಾಷ್ಟ್ರಕವಿ "ಗೋವಿಂದ ಪೈ ವೃತ್ತ", ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ ಇವರಾಗಿದ್ದಾರೆ. ಮಂಗಳೂರಲ್ಲಿ "ಕುಡ್ಲಂಗಿಪ್ಪ ಕುಂದಾಪ್ರ" ಬಳಗದ ಕ್ರಿಯಾ ಶೀಲ ವ್ಯಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದಾರೆ. ಪ್ರತಿಷ್ಠಿತ "ದೇವರಾಜು ಅರಸು" ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವ್ಯಕ್ತಿ. ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ. ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಲೇಖನಗಳುಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.

ಪಡುಬಿದ್ರಿ : ರಜಾ-ಮಜಾ -2025 ಶಿಬಿರದ ಉದ್ಘಾಟನೆ

Thumbnail
Posted On: 14 Apr 2025, 06:45 AM

ಪಡುಬಿದ್ರಿ : ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆಯನ್ನು ಗುರುತಿಸಲು ರಜಾ ಮಜಾ ಶಿಬಿರಗಳು ಪೂರಕವಾಗಿದೆ. ಮಕ್ಕಳನ್ನು ಸಮಾಧಾನಪಡಿಸಲು ಭಯ ಮೂಡಿಸುವ ಕಾರ್ಯವನ್ನು ಮಾಡಿದರೆ ಮಕ್ಕಳ ಮನಸ್ಸಿಗೆ ತೊಂದರೆಯುಂಟಾಗಿ ಕ್ರಮೇಣ ಜೀವನದಲ್ಲಿ ಭಯವನ್ನು ಎದುರಿಸಲು ಅಶಕ್ತರಾಗಿರುತ್ತಾರೆ. ಆದ್ದರಿಂದ ಮಕ್ಕಳನ್ನು ಸದಾ ಕ್ರಿಯಾಶೀಲ ರಾಗುವಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ಓಂಕಾರ ಕಲಾ ಸಂಗಮದ ವತಿಯಿಂದ ಅಯೋಜಿಸಿರುವ 4 ನೇ ವರ್ಷದ "ರಜಾ ಮಜಾ-2025" ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳ ಕೆಟ್ಟ ಆಹಾರ ಪದ್ದತಿಯಿಂದ ವಯೋ ಸಹಜವಾಗಿ ಬರುವ ಕಾಯಿಲೆಗಳು ಇವತ್ತು ಚಿಕ್ಕ ಮಕ್ಕಳಲ್ಲಿ ಕಾಣಿಸುತ್ತಿದೆ. ಆದ್ದರಿಂದ ಮಕ್ಕಳು ಆರೋಗ್ಯ ಯುಕ್ತ ಆಹಾರವನ್ನು ಮಾತ್ರ ಉಪಯೋಗಿಸ ಬೇಕು. ಮನಸ್ಸಿಗೆ ಜಾಸ್ತಿ ಒತ್ತಡ ಹೇರದೆ ಮಕ್ಕಳನ್ನು ಮಕ್ಕಳಂತೆ ಪೋಷಕರು ನೋಡಿಕೂಳ್ಳಬೇಕು ಎಂದು ಪ್ರಾಥಮಿಕ ಅರೋಗ್ಯ ಕೇಂದ್ರದ ವೃೆದ್ಯಾಧಿಕಾರಿ ಡಾ. ರಾಜಶ್ರಿ ಕಿಣಿ ಹೇಳಿದರು. ಸನ್ಮಾನ : ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್. ಎಸ್ ರವರನ್ನು ಸನ್ಮಾನಿಸಲಾಯಿತು. ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.‌ ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ರಾಮಾಂಜಿ ಉಡುಪಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದೆ ಬೇಬಿ ಸಾಂಚಿ, ಸಂಸ್ಥೆಯ ಪಾಲುದಾರರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಅದ್ವಿತ್ ಕುಮಾರ್, ಉಪಸ್ಥಿತರಿದ್ದರು. ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು. ದೀಪಾಶ್ರಿ ಕರ್ಕೇರ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೌಡರಿನ ಹೊಸ ಬೆಳಕು ಆಶ್ರಮಕ್ಕೆ ಪಡುಬಿದ್ರಿ ನಟರಾಜ್ ಪಿ.ಎಸ್ ನೇತೃತ್ವದಲ್ಲಿ ಭಜನೆ, ದಿನಸಿ ವಸ್ತುಗಳ ಹಸ್ತಾಂತರ

Thumbnail
Posted On: 13 Apr 2025, 03:04 PM

ಪಡುಬಿದ್ರಿ : ಭಜನೆಯಿಂದ ಸಾಕ್ಷತ್ ಭಗವದ್ ಸಾಕ್ಷಾತ್ಕಾರವಾಗುವುದು.‌ ಮನ: ಶಾಂತಿ ದೊರಕುವುದು. ಇಂದಿನ ಯುವ ಪೀಳಿಗೆ ಭಜನೆಯಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಮನೆ ಮನೆಗಳಲ್ಲಿ ನಡೆಯುತಿದ್ದ ಭಜನೆಗಳು ನಶಿಸಿ ಹೋಗಿದೆ‌‌‌‌. ನಮ್ಮ ಸಂಸ್ಕೃತಿ, ಸಂಸ್ಕಾರಗಳು ಬೆಳೆಯ ಬೇಕಾದರೆ ಯುವ ಜನತೆ ಭಜನೆಯತ್ತ ಒಲವು ತೋರಬೇಕಾಗಿದೆ ಎಂದು ನಿವೃತ್ತ ಭಾರತೀಯ ನೌಕಾದಳ ಸೇನಾಧಿಕಾರಿ ನಟರಾಜ್ ಪಿ.ಎಸ್ ಹೇಳಿದರು.‌ ಅವರು ಕೌಡರಿನ ಹೊಸ ಬೆಳಕು ಆಶ್ರಮದಲ್ಲಿ ರಾಮ ನವಮಿಯ ಅಂಗವಾಗಿ ನಡೆಸಿದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಂತರ ನಟರಾಜ್ ಪಿ.ಎಸ್ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. 50 ಕೆ.ಜಿ ಅಕ್ಕಿ , 10 ಕೆ.ಜಿ. ಬೆಲ್ಲ , 10 ಕೆ.ಜಿ ಅವಲಕ್ಕಿ ಮತ್ತು 10 ಕೆ.ಜಿ. ಶಾವಿಗೆಯನ್ನು ಅಶ್ರಮಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದರಾದ ಸುಶ್ಮಿತಾ ಎರ್ಮಾಳು, ಸುಪ್ರೀತಾ ಕೋಟ್ಯಾನ್ ಪಾಂಗಾಳ, ಶ್ವೇತಾ ಪಾಲನ್ ಪಾಂಗಾಳ ಮತ್ತು ಹಾರ್ಮೋನಿಯಂ ವಾದಕ ಸುನಿಲ್ ಉಚ್ಚಿಲ, ತಬಲ ವಾದಕ ಸತೀಶ್ ಎರ್ಮಾಳು, ಸಕ್ಷನ್ ಸಾಲ್ಯಾನ್, ಹೊಸ ಬೆಳಕು ಆಶ್ರಮದ ಸಂಸ್ಥಾಪಕಿ ತನುಲಾ ತರುಣ್ ಉಪಸ್ಥಿತರಿದ್ದರು.

ಜೋಗಿಮನೆ ಟ್ರಸ್ಟ್ ತೆಂಕಬೆಟ್ಟು ಹಳಗೇರಿ, ಜೆ ಸಿ ಐ ಉಪ್ಪುಂದ : ಉಚಿತ ಯೋಗ ಶಿಬಿರ ಸಂಪನ್ನ

Thumbnail
Posted On: 13 Apr 2025, 02:55 PM

ಉಡುಪಿ : ಜೋಗಿಮನೆ ಟ್ರಸ್ಟ್ ತೆಂಕಬೆಟ್ಟು ಹಳಗೇರಿ ಹಾಗೂ ಜೆ ಸಿ ಐ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಎ.3ರಿಂದ 12ರವರೆಗೆ ಜರಗಿದ ಎರಡನೇ ವರ್ಷದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಜರಗಿತು. ಮುಖ್ಯ ಅತಿಥಿಗಳಾಗಿ ಕುಂದಾಪುರ ಜೋಗಿ ಸಮಾಜದ ಅಧ್ಯಕ್ಷರು ಆಗಿರುವ ಎಚ್ಎಸ್ ರಮೇಶ್ ಜೋಗಿ ಹಾಗೂ ಸರಕಾರಿ ಆಯುಷ್ಕ ಹೆಚ್ಚಿಗೆ ಸಲಹೆದ ವೈದ್ಯಾಧಿಕಾರಿ ಆಗಿರುವಂತ ಡಾ. ವೀಣಾ ಕಾರನ್ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋವಿಂದ ಬಿ ಹಾಗೂ ಶಿಕ್ಷಕರಾಗಿರುವ ಹರೀಶ್ ಜೋಗಿ ಹಾಗೂ ಜೋಗಿಮನೆ ಟ್ರಸ್ಟ್ ಇದರ ಅಧ್ಯಕ್ಷರಾದ ವಸಂತ್ ಜೋಗಿ ಕಾರ್ಯಕ್ರಮದ ಸಭಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವ ಯೋಗ ಶಿಕ್ಷಕರಾಗಿರುವ ಮಂಜುನಾಥ್ ದೇವಾಡಿಗ ಇವರಿಗೆ ಟ್ರಸ್ಟ್ ಪರವಾಗಿ ಗುರುವಂದನೆ ಸಲ್ಲಿಸಲಾಯಿತು ಅಂತರಾಷ್ಟ್ರೀಯ ಯೋಗ ಪಟು ಧನ್ವಿ ಪೂಜಾರಿ ಮರವಂತೆ ಯೋಗ ಪ್ರದರ್ಶನ ನೀಡಿದರು. ಇವರನ್ನೂ ಕೂಡ ಟ್ರಸ್ಟ್ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಂತೋಷ ನಾಗುರು ನಿರೂಪಿಸಿದರು. ಶ್ವೇತ ಜೋಗಿ ಸ್ವಾಗತಿಸಿ, ಸುರೇಶ್ ವಂದಿಸಿದರು.

ಮಣಿಪಾಲದಲ್ಲಿ ವಿಷುಕಣಿ-ಕವಿದನಿ ಬಹು ಭಾಷಾ ಕವಿಗೋಷ್ಠಿ ಸಂಪನ್ನ

Thumbnail
Posted On: 13 Apr 2025, 02:42 PM

ಉಡುಪಿ : ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಕೇಂದ್ರ, ಮಣಿಪಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗ ದೊಂದಿಗೆ "ವಿಷುಕಣಿ-ಕವಿದನಿ" ಬಹು ಭಾಷಾ ಕವಿಗೋಷ್ಠಿ ರೇಡಿಯೊ ಮಣಿಪಾಲ್, ಎಂ.ಐ.ಸಿ ಕ್ಯಾಂಪಸ್ ಮಣಿಪಾಲದಲ್ಲಿ ನಡೆಯಿತು. ಸಭಾ ಕ್ರಾಯಕ್ರಮ ಉದ್ಘಾಟನೆಯನ್ನು ಡಾ. ಶುಭ ಹೆಚ್. ಎಸ್‌. ನಿರ್ದೇಶಕರು, ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಮಾಹೆ ಮಣಿಪಾಲ ಇವರು ನೆರವೇರಿಸಿ ಮಾತನಾಡಿ, ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವಿದೆ, ಹೀಗಾಗಿ ಕವಿತೆಗಳಿಗೆ ವಿಮಶೆ೯ಯ ಅವಶ್ಯಕತೆ ಎದುರಾಗುವುದಿಲ್ಲ, ಯುಗಾದಿ ಹಬ್ಬದ ಕುರಿತು ನಮ್ಮಲ್ಲಿರುವ ಸಂಸ್ಕೃತಿ ಆಚಾರಗಳನ್ನು ಕವನಗಳ ಮೂಲಕ ಪ್ರಚುರಪಡಿಸುವ ಈ ಅಪೂವ೯ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಅಭಿನಂದನೀಯ ವಿಚಾರ ಎಂದರು. ಸಭಾಧ್ಯಕ್ಷತೆಯನ್ನು ಭಾಷಾ ತಜ್ಞ ನಾಡೋಜ ಪ್ರೊ. ಕೆ.ಪಿ. ರಾವ್ ವಹಿಸಿ, ಮಾತನಾಡಿ ಭಾಷೆಗಳನ್ನು ಉಳಿಸಿ ಬೆಳೆಸಬೇಕು ಇಲ್ಲವಾದಲ್ಲಿ ಭಾಷೆಯೊಂದಿಗೆ ಅದರ ಅಪೂವ೯ ಸಂಸ್ಕೃತಿ ಕೂಡ ಅವನತಿಯಾಗುವ ಸಂಭವವಿರುತ್ತದೆ. ನಮ್ಮ ದೇಶದಲ್ಲಿರುವ ಹಲವಾರು ಭಾಷೆಗಳು ಅವನತಿಯ ಹಾದಿಯಲ್ಲಿರುವುದು ದುಃಖದ ವಿಷಯ ಎಂದರು. ಮುಖ್ಯ ಅತಿಥಿ ಪೂರ್ಣಿಮಾ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಮತ್ಯು ಉಡುಪಿ ಕಸಾಪ ಉಡುಪಿ ತಾಲೂಕು ಈ ರೀತಿಯ ವಿನೂತನ ಕಾಯ೯ಕ್ರಮಗಳ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು. ರವಿರಾಜ್ ಎಚ್‌. ಪಿ.ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಮಾಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಶುಭ ಹಾರೈಸಿದರು. ಕವಿಗೋಷ್ಠಿಯ ಸಮನ್ವಯಕಾರರಾಗಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಿ'ಕವನಗಳು ಹುಟ್ಟುವ ಬಗ್ಗೆ ಅದೇ ರೀತಿ ಕವನಗಳನ್ನು ಮತ್ತಷ್ಟು ಆಕಷ೯ಕವಾಗಿ ಬರೆಯುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕವಿಗಳಾದ ಕವಿತಾ ಎಸ್ ಮಣಿಪಾಲ (ಹವ್ಯಕ ಕನ್ನಡ), ವೈಷ್ಣವಿ ಸುಧೀಂದ್ರ ರಾವ್ (ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ (ಕನ್ನಡ), ಮಾಲತಿ ರಮೇಶ್ ಭಂಡಾರಿ ಕೆಮ್ಮಣ್ಣು (ತುಳು), ಕೆ. ವಾಣಿಶ್ರೀ ಅಶೋಕ್ ಐತಾಳ್ (ತೆಲುಗು), ಪ್ರಣತಿ ಪಿ. ಭಟ್ ಮಣಿಪಾಲ (ಹಿಂದಿ), ವಿನೋದ ಪಡುಬಿದ್ರಿ (ತುಳು), ವಿಜಯಲಕ್ಷ್ಮೀ ಆರ್. ಕಾಮತ್ (ಕೊಂಕಣಿ), ಮನೋಹರ ಶೆಟ್ಟಿ ಬಿಟ್ಕಲ್ ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ (ಮಲಯಾಳಂ), ವಸುಧಾ ಅಡಿಗ ನೀಲಾವರ (ಕನ್ನಡ), ಲಲಿತ ಪ್ರದೀಪ್ ಭಟ್ (ಕನ್ನಡ) ಮಂಜುನಾಥ ಮರವ೦ತೆ (ಕುಂದಾಪ್ರ ಕನ್ನಡ), ಸುಲೋಚನ ಪಚ್ಚಿನಡ್ಕ (ತುಳು), ನೀಮಾ ಲೋಬೊ ಶಂಕರಪುರ (ಕೊಂಕಣಿ), ಪುಂಡಲೀಕ ನಾಯಕ್ ಬೈಂದೂರು ಇವರೆಲ್ಲರು ಸ್ವರಚಿತ ಕವನ ವಾಚಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಡಾ. ಡಾ. ಅಮ್ಮೆಂಬಳ, ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು, ರೇಡಿಯೊ ಮಣಿ ಪಾಲ್ ಇವರು ಪ್ರಸ್ತಾಪಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್ ವಂದಿಸಿದರು. ಸುಲೋಚನಾ ಪಚ್ಚಿನಡ್ಕ ಹಾಗು ವಸುಧಾ ಅಡಿಗ ನೀಲಾವರ ನಿರೂಪಿಸಿದರು.

ಕಾಪು ಶ್ರೀ ಹೊಸ ಮಾರಿಗುಡಿಗೆ ‌ದ.ಕ ಜಿಲ್ಲಾ ನ್ಯಾಯಾಧೀಶರ ಭೇಟಿ

Thumbnail
Posted On: 13 Apr 2025, 02:36 PM

ಕಾಪು : ದ.ಕ ಜಿಲ್ಲಾ ನ್ಯಾಯದೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಭಾನುವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕುಟುಂಬ ವರ್ಗದೊಂದಿಗೆ ಭೇಟಿ ನೀಡಿದರು. ಮಾರಿಯಮ್ಮ ಸಹಿತ ಉಚ್ಚಂಗಿ ಅಮ್ಮನವರ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಸಂಚಾಲಕ ಜಯರಾಮ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಹೊಸ ರಸಗೊಬ್ಬರ, ರಾಸಾಯನಿಕ ಕಾರ್ಖಾನೆಯ ಸ್ಥಾಪನೆಗೆ ಸಾಮಾಜಿಕ ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ ಒತ್ತಾಯ

Thumbnail
Posted On: 13 Apr 2025, 02:30 PM

ಉಡುಪಿ : ಉಡುಪಿ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆಯ ಸ್ಥಾಪನೆ ಕುರಿತಂತೆ ಸಾಮಾಜಿಕ ‌ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪತ್ರಮುಖೇನ ಒತ್ತಾಯಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಸಗೊಬ್ಬರ ಮತ್ತು ಕೆಮಿಕಲ್ ಫ್ಯಾಕ್ಟರಿ ಸ್ಥಾಪನೆಗೆ ನಿಮ್ಮ ಮಧ್ಯಸ್ಥಿಕೆಗೆ ಗೌರವಪೂರ್ವಕವಾಗಿ ವಿನಂತಿಸಲು ನಾನು ಬರೆಯುತ್ತಿದ್ದೇನೆ. ಒಂದು ಘಟಕವಾಗಿ ಅಂತಹ ಕಾರ್ಖಾನೆಯು ಭಾರತ ಮತ್ತು ಕರ್ನಾಟಕ ಕೃಷಿ ಕ್ಷೇತ್ರ ಮತ್ತು ಆರ್ಥಿಕತೆಗೆ ಗಮನಾರ್ಹವಾದ ಉತ್ಕರ್ಷವಾಗಲಿದೆ ಎಂದು ನಾನು ನಂಬುತ್ತೇನೆ. ಪ್ರಸ್ತುತ ನಮ್ಮ ರೈತರು ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಸೋರ್ಸಿಂಗ್ ಮಾಡುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಇದು ಬೆಳೆ ಇಳುವರಿ ಮತ್ತು ಲಾಭದಾಯಕತೆಯ ಮೇಲೆ ಪರಿಣಾಮ ಬೀರುತ್ತದೆ. ಕಾರ್ಖಾನೆಯನ್ನು ಸ್ಥಾಪಿಸುವುದು ಈ ಸಮಸ್ಯೆಯನ್ನು ಪರಿಹರಿಸುತ್ತದೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು ಸ್ಥಳೀಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇನ್ನೂ ಹೆಚ್ಚಿನದಾಗಿ, ಒಂದು ಕೆಮಿಕಲ್ ಫ್ಯಾಕ್ಟರಿ ಕೂಡ ಇದಕ್ಕೆ ಕೊಡುಗೆ ನೀಡಬಹುದು. ನಮ್ಮ ಪ್ರದೇಶದ ಕೈಗಾರಿಕಾ ಅಭಿವೃದ್ಧಿಯು ಇತರ ಕೈಗಾರಿಕೆಗಳನ್ನು ಬೆಂಬಲಿಸಬಹುದು, ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ನಾವೀನ್ಯತೆ ಮತ್ತು ಬೆಳವಣಿಗೆಗೆ ವೇದಿಕೆಯನ್ನು ಒದಗಿಸಬಹುದು. ನಿಮ್ಮ ಅಧಿಕಾರಾವಧಿಯಲ್ಲಿಯಾದರೂ ಈ ನಿರ್ಣಾಯಕ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಸಂಸತ್ತಿನ ಸದಸ್ಯರಾಗಿ ನಿಮ್ಮ ಸ್ಥಾನವನ್ನು ಬಳಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಸೌಲಭ್ಯದ ಸ್ಥಾಪನೆಗಾಗಿ ನಿಮ್ಮ ಬೆಂಬಲವನ್ನು ಪ್ರಶಂಸಿಸಲಾಗುತ್ತದೆ ಮತ್ತು ನಮ್ಮ ಜಿಲ್ಲೆ ಮತ್ತು ಕರ್ನಾಟಕದ ಜೀವನದ ಮೇಲೆ ಶಾಶ್ವತವಾದ ಧನಾತ್ಮಕ ಪರಿಣಾಮವನ್ನು ಹೊಂದುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಪತ್ರಮುಖೇನ ಮತ್ತು ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಿದ್ದಾರೆ.

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ಹೊಂಗಿರಣ ಯೋಜನೆಗೆ ಅರ್ಜಿ ಆಹ್ವಾನ

Thumbnail
Posted On: 12 Apr 2025, 05:57 PM

ಉಡುಪಿ : ದ್ವಿತೀಯ ಪಿಯುಸಿ ಹಾಗೂ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಫಲಿತಾಂಶಗಳ ಮೂಲಕ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ. ಈ ಯೋಜನೆಯಡಿಯಲ್ಲಿ 100 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹ ಧನದೊಂದಿಗೆ ಪಿ.ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ www.creativeedu.in ಮುಖಾಂತರ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ಸಾಧಿಸುವ ಛಲಕ್ಕೆ ಬೆನ್ನೆಲುಬಾಗಿ ನಿಂತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಾಧನೆ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದೆ. ಪೋಷಕರ ಹಾಗೂ ಪಾಲಕರ ಭರವಸೆಯನ್ನು ಈಡೇರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606474298

ಶಿರ್ವ : ಚಿಣ್ಣರು-2025 ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

Thumbnail
Posted On: 11 Apr 2025, 01:11 PM

ಶಿರ್ವ : ಶಿರ್ವ ಮಹಿಳಾ ಮಂಡಲದ ವತಿಯಿಂದ ಮಹಿಳಾ ಸೌಧದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ಮೂರು ದಿನಗಳ "ಚಿಣ್ಣರು-2025" ಉಚಿತ ಬೇಸಿಗೆ ಶಿಬಿರವನ್ನು ಗುರುವಾರ ಶಿರ್ವದ ಉದ್ಯಮಿ ಹಾಗೂ ಸಮಾಜಸೇವಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಇಂತಹ ಶಿಬಿರಗಳು ಸ್ಪೂರ್ತಿಯನ್ನು ನೀಡುತ್ತವೆ. ಶಿರ್ವ ಮಹಿಳಾ ಮಂಡಲ ಹಲವು ದಶಕಗಳಿಂದ ಈ ಪರಿಸರದಲ್ಲಿ ಸಂಘಟನೆಯ ಜೊತೆಗೆ ಅತ್ಯುತ್ತಮ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪೀಟರ್ ಕೋರ್ಡ, ಹಸನ್ ಇಬ್ರಾಹಿಂ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ ಪಿ. ಶೆಟ್ಟಿ ವಹಿಸಿ ಮಹಿಳಾ ಮಂಡಲದ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಠ್ಠಲ್ ಅಂಚನ್, ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ವನಿತಾ ಕೆ.ಶೆಣೈ, ಕೋಶಾಧಿಕಾರಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು. ಗೌರವ ಸಲಹೆಗಾರರಾದ ಬಂಟಕಲ್ಲು ಗೀತಾ ವಾಗ್ಲೆ ಸ್ವಾಗತಿಸಿದರು. ಮಾಲತಿ ಅನಂತ ಮೂಡಿತ್ತಾಯ ಪರಿಚಯಿಸಿದರು. ಜಯಶ್ರೀ ಜಯಪಾಲ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಐರಿನ್ ಪಿಂಟೊ ವಂದಿಸಿದರು. ಶಿಬಿರದಲ್ಲಿ 80ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ಇಂದಿನಿಂದ(ಎ.11) ಕನ್ನಂಗಾರ್ ಉರೂಸ್

Thumbnail
Posted On: 11 Apr 2025, 12:47 PM

ಕಾಪು : ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಂಗಾರ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕನ್ನಂಗಾರ್ ಉರೂಸ್ ಸಮಾರಂಭವು ಎ. 11ರಿಂದ 19ರವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಹೆಜಮಾಡಿ ತಿಳಿಸಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಉರೂಸ್ ಸಮಾರಂಭಕ್ಕೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಹಾಗೂ ಕ್ರಿಶ್ಚಿಯನ್ ಬಾಂಧವರು ಭಾಗವಹಿಸುತ್ತಾರೆ. ಇದೊಂದು ಸೌಹಾರ್ದತೆಯ ಕೇಂದ್ರವೂ ಆಗಿದೆ. ಎ.11ರಂದು ಶುಕ್ರವಾರ ಜುಮಾ ನಮಾಜಿನ ಬಳಿಕ ಧ್ವಜಾರೋಹಣ ನೆರವೇರಲಿದ್ದು, ಅಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ. ಅಂದು ರಾತ್ರಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ. ಅಸಯ್ಯದ್ ಅಬ್ದರ್ರಹ್ಮಾನ್ ಮಸ್ಊದ್ ತಂಙಳ್ ಕೂರತ್ ದುವಾ ನೆರವೇರಿಸಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಉರೂಸ್ ಪ್ರಯುಕ್ತ ವಿವಿಧ ದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಅಬ್ದರ್ರಹ್ಮಾನ್ ಮದನಿ, ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ, ಅಬ್ದರ್ರಹ್ಮಾನ್ ವಿಪಿಎ ತಂಙಳ್ ದಾರಿಮಿ ಆಟೀರಿ, ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಹಂಝ ಮದನಿ ಮಿತ್ತೂರು, ನೌಫಲ್ ಸಖಾಫಿ ಕಳಸ, ನೂರುಸ್ಸಾದಾತ್ ಅಬ್ದರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್, ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್ಹರ್, ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಭಾಗವಹಿಸಲಿದ್ದಾರೆ. ಎ.16ರಂದು ಅಸಯ್ಯದ್ ಕೆ.ಎಸ್. ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ಇವರ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ನೆರವೇರಲಿದೆ. ಎ. 19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರ, ಬದ್ರುಸ್ಸಾದಾತ್ ಅಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವರಾದ ಜಿ. ಪರಮೇಶ್ವರ್, ಝಮೀರ್ ಅಹಮದ್, ಮಂಕಾಳ ವೈದ್ಯ, ದಿನೇಶ್ ಗುಂಡುರಾವ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ , ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತಿತರರ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸರಕಾರದಿಂದ 25ಲಕ್ಷ ರೂ. ಅನುದಾನ: ಕನ್ನಂಗಾರ್ ಉರೂಸ್ಗೆ ಅಲ್ಪಸಂಖ್ಯಾತ ಇಲಾಖೆಯಿಂದ 25ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ವಿಧನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಶಿಫಾರಸಿನ ಮೇರೆಗೆ ಮುಖ್ಯಮತ್ರಿ ಸಿದ್ಧರಾಮಯ್ಯ ಅವರ ಆದೇಶದಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಝಮೀರ್ ಅಹಮದ್ ಬಿಡುಗಡೆ ಮಾಡಿದ್ದಾರೆ. ಎ. 13ರಂದು ಹೈಬಾ ಸಭಾಂಗಣದಲ್ಲಿ ಬೆಳಗ್ಗೆ ಸೌಹಾರ್ದ ಸಂಗಮ ಮತ್ತು ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರವು ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಕಾರ್ಯದರ್ಶಿ ರಕೀಬ್ ಕನ್ನಂಗಾರ್, ಮಸೀದಿ ಅಧ್ಯಕ್ಷರಾದ ಹಮಿದ್ ಹಾಜಿ, ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಉಪಸ್ಥಿತರಿದ್ದರು.