Updated News From Kaup

ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

Thumbnail
Posted On: 18 May 2025, 03:56 PM

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಸಂಸ್ಥೆಯ 15ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸಾಗರ್ ವಿದ್ಯಾ ಮಂದಿರ ಶಾಲೆಯ ಸಾಗರ ದರ್ಶಿನಿ ವೇದಿಕೆಯಲ್ಲಿ ನೆರವೇರಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲೀಲಾಧರ್ ಸಾಲಿಯಾನ್, ವಿದ್ಯಾಶ್ರೀ, ನೀತಾಗುರುರಾಜ್, ಚಂದ್ರಶೇಖರ್, ಅಶೋಕ್ ಸಾಲಿಯಾನ್, ಗಂಗಾಧರ ಕರ್ಕೇರ, ಅಜಿತ್ ಶೆಟ್ಟಿ, ಮಿಥುನ್ ಆರ್ ಹೆಗ್ಡೆ, ವಿಶ್ವಾಸ್ ಅಮೀನ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು. ವರ್ಷಿಣಿ ಎಲ್ ಕರ್ಕೇರ ಪ್ರಾರ್ಥಿಸಿದರು. ಕಿರಣ್ ರಾಜ್ ಕರ್ಕೇರ ಸ್ವಾಗತಿಸಿದರು. ಸಂತೋಷ್ ಎಚ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ದಿಶನ್ ಪುತ್ರನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಅರ್ಬುದ

Thumbnail
Posted On: 18 May 2025, 03:43 PM

ಯಾರು ಬಲ್ಲರು ನಿನ್ನ ಮಾಯಕಾರತನವ ??? ಸುದ್ಧಿಯಿಲ್ಲದೆ ಸ್ವಯಂಭು ಮೂರ್ತಿವೆತ್ತು ಬಲಿತು ಮದ್ದಿಗೂ ಬಗ್ಗದೆ ಬುದ್ಧಿಗೆ ಒಗ್ಗದೆ ಸಿದ್ಧಿಗೂ ಸಿಗದೆ ತಂದೊಡ್ಡುವೆ ಬದುಕಿಗೂ ಸಾವಿಗೂ ನರಕ ಯಾತನೆ ಬಂದೊದಗುವೆ ಬಾಳಿಗೆ ನಿತ್ಯ ಕಂಠಕನಾಗಿ ಬಡವನೋ ಬಲ್ಲಿದನೋ ಬಾಲ್ಯ ಯೌವ್ವನ ವೃದ್ಧಾಪ್ಯ ನಿನಗಿಲ್ಲ ಬೇಧ ಅರ್ಬುದರಾಯ ಕಡು ಸಮಾನತೆಯ ಜೀವ ಭಕ್ಷಕ ಹರಿಕಾರ ಮಡುವಿಕೊಳ್ಳುತಿ ದಶಪಾದಗಳಲಿ ಏಡಿರಾಯ ನಿನ್ನ ಆಗಮ ಉಗಮ ಜಂಗಮತನ ಮೌನದ ಮುಸುಕಿನಲಿ ಮತ್ತೆ ಮತ್ತೆ ಉಲ್ಬಣ ಎಣಿಸಲಾರದ ಪರಮ ಸೋಜಿಗವದು ಬಣ್ಣಿಸಲಾರದ ನಿನ್ನ ಪರಮ ನೀಚತನವದು ರಸಹೀರಿ ಕಸವಾಗಿಸಿ ಬಸವಳಿಸಿ ಕಸುವ ಬಳಲಿಸಿ ಬರಿದಾಗಿಸಿ ಅಸುವ ಅಪರಿಸುವ ಓ! ಅರ್ಬುದ ಅಸುರ ತನದ ನಿನ್ನ ನಡೆ ಅದಕ್ಕಿಂತ ಕಡೆ ಶ್ವೇತ ರಕುತ ಕಣಗಳು ಮರಣಿಸದಿರಲು ನಿನ್ನ ಜನನ ನಿತ್ಯ ಬಲಗೊಳ್ಳುತ ಅಂಗದಿಂದ ಅಂಗಕೆ ಪಯಣ ಮರ್ತ್ಯರ ಜೀವ ಜೀವನದಲಿ ಅತಿಕ್ರಮಣ ಸತ್ವವ ಕಸಿದು ಚೈತನ್ಯ ಬಸಿದು ಕಬಳಿಸುತಿ ನೀ ಪ್ರಾಣ ಶಿರಡಿ ಸಾಯಿನಾಥರ ಗುರು ಪರಮಹಂಸರ ಪರಮ ಯೋಗಿ ರಮಣರ ವಿಶ್ವಕವಿ ರವೀಂದ್ರರ ವರಕವಿ ಬೇಂದ್ರೆಯವರ ಮೇಹರಬಾಯಿ ಟಾಟಾರವರ ಹರಣ ಕಸಿದ ನಿನಗೆ ಸಾಮಾನ್ಯರೇನು ಮಹತ್ತರ ?? ಕರಾಳ ಕಂಬಂಧ ಬಾಹುಗಳ ಚಾಚಿ ನಿರಂತರ ಹಸಿ ರಕುತವ ಬಸಿವ ಪಿಶಾಚಿ ಕರುಣೆಯಿರಲಿ ಕಡು ಬಡವರ ಮೇಲೆ ಸೈರಣೆಯಿಂದಲಿ ತಗ್ಗಿಸು ನಿನ್ನ ಲೀಲೆ ಯಾರು ಬಲ್ಲರು ನಿನ್ನ ಮಾಯಕಾರ ತನವ ??? ಉದಯ ಬಿ. ಶೆಟ್ಟಿ, ಪಂಜಿಮಾರು

ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು : ಡಾ. ನಿಕೇತನ

Thumbnail
Posted On: 18 May 2025, 03:35 PM

ಉಡುಪಿ : ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆಯಾಗಿದೆ. ನಮ್ಮ ಸಾಹಿತ್ಯ ವಿವಿಧ ಮಜಲುಗಳನ್ನು ಸ್ಪರ್ಶಿಸಿ ವಿವಿಧ ರಂಗಕ್ಕೆ ಕಾಲಿಟ್ಟರೂ ಕೂಡ ಅದರ ಮೌಲ್ಯವನ್ನು ಕಳೆದುಕೊಳ್ಳದೆ ಇನ್ನಷ್ಟು ಎತ್ತರಕ್ಕೆ ಏರಿದೆ ಎಂದು ಪ್ರಾಧ್ಯಾಪಕಿ, ಸಾಹಿತಿ ಡಾ. ನಿಕೇತನ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ನಡೆದ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ 'ಕಲಾಯತನ ಸಾಹಿತ್ಯ ಯಕ್ಷ ಸಂಭ್ರಮ' ದಲ್ಲಿ ಸಮಾರೋಪ ಭಾಷಣ ಮಾಡಿದರು. ಸಾಮಗರವರ ದೈತ್ಯ ಪ್ರತಿಭೆ ಅವರ ಮಾನವೀಯತೆಯ ನಡೆ ಅಭಿನಂದನಾಹ೯ ಕನ್ನಡ ಮತ್ತು ಆಂಗ್ಲ ಭಾಷೆಯ ಅವರ ಪ್ರೌಢಿಮೆ ಅವರು ನಾಡಿಗೆ ಕೊಟ್ಟಂತ ಶ್ರೇಷ್ಠ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿದೆ. ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದೆ ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು. ಈ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಚರ್ಚೆಗಳು ವಿಚಾರಗೋಷ್ಠಿ ಯಕ್ಷ ಕವಿಗೋಷ್ಠಿ ಸೇರಿದಂತೆ ಬಹಳಷ್ಟು ಉತ್ತಮವಾದ ಕಾರ್ಯಕ್ರಮಗಳು ನಡೆದಿದೆ ಎಂದರು. ಸಮ್ಮೇಳನದ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಮಾತನಾಡಿ, ಮಲ್ಪೆ ಎಂದರೆ ಎಲ್ಲರಿಗೂ ನೆನಪಾಗುವುದು ಶಂಕರನಾರಾಯಣ ಸಾಮಗ ಅಂತ ಶ್ರೇಷ್ಠ ವ್ಯಕ್ತಿ ಅವರು ಕೊಟ್ಟಂತಹ ಕೊಡುಗೆಗಳು ನಮ್ಮನ್ನು ಈ ಎತ್ತರಕ್ಕೆ ಏರಿಸುತ್ತಿದೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನದ ಕಲಾವಿದರನ್ನು ಸಮ್ಮೇಳನ ಅಧ್ಯಕ್ಷ ಮಾಡಿರೋದು ಯಕ್ಷಗಾನಕ್ಕೆ ನೀಡಿದ ದೊಡ್ಡ ಅಭಿನಂದನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಾಜ್ಯದ ಮನೆ ಮಾತಾಗಿದೆ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಬೇಕು ಎಂದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ವೆಂಕಟ್ರಮಣ ಐತಾಳ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣಿೈ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯನ್, ಕಾರ್ಯದರ್ಶಿ ಸತೀಶ್ ಕೊಡವೂರು, ತಾಲೂಕು ಪದಾಧಿಕಾರಿಗಳಾದ ಜನಾರ್ಧನ ಕೊಡವೂರು, ರಾಜೇಶ್ ಭಟ್ ಪಣಿಯಾಡಿ, ರಂಜಿನಿ ವಸಂತ್ ಮುಂತಾದವರು ಉಪಸ್ಥಿತರಿದ್ದರು. ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಸಮ್ಮೇಳನದ ಅಧ್ಯಕ್ಷ ದಂಪತಿಗಳಿಗೆ ಗೌರವಿಸಲಾಯಿತು. ಪ್ರಭಾಕರ್ ತುಮರಿ ಮತ್ತು ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು ರಂಜನಿ ವಸಂತ್ ವಂದಿಸಿದರು. ನಂತರ ಯಕ್ಷ ರಂಗಾಯಣ ಇವರಿಂದ ಕುಮಾರವ್ಯಾಸ ಭಾರತ ವಿರಾಟ ಪರ್ವದಿಂದ ಆಯ್ದ ಭಾಗ ಆರೊಡನೆ ಕಾದುವೆನು ಕಾರ್ಯಕ್ರಮ ನಡೆಯಿತು.

ಮೇ.18 : ಕಟಪಾಡಿಯಲ್ಲಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ

Thumbnail
Posted On: 17 May 2025, 08:34 PM

ಕಟಪಾಡಿ : ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.) ವತಿಯಿಂದ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್‌ ನಗರದ ಪಂಪಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಮೇ.18, ಆದಿತ್ಯವಾರ ಬೆಳಗ್ಗೆ 9.47ಕ್ಕೆ ನಡೆಯಲಿದೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮತ್ತು ಗಣ್ಯರು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಸ್ಥಾಪನೆ, ಮುಷ್ಠಿಕಾಣಿಕೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ನೆರವೇರಿಸಲಿರುವರು. ಈ ದೇವಳದಲ್ಲಿ ಅಯೋಧ್ಯೆಯ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಲ್ಲಿ ಕೆತ್ತಿದ ಅಯ್ಯಪ್ಪಸ್ವಾಮಿ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗುವುದು. ಕ್ಷೇತ್ರದ ಪ್ರಧಾನ ತಂತ್ರಿ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಂಗಳೂರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಗುರುಸ್ವಾಮಿ ಸುರೇಶ್ ಜತ್ತನ್ ಕಟಪಾಡಿ, ಅಧ್ಯಕ್ಷ ರಿಯಾನ್ ಟಿ ಕಟಪಾಡಿ, ಕಾರ್ಯಾಧ್ಯಕ್ಷ ಕೇಶವ ಕುಂದರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜಿ.ಸನಿಲ್ ಅಚ್ಚಡ ಕಟಪಾಡಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪುವಿನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಮತ್ತು ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್‌ಶಿಪ್ 2025

Thumbnail
Posted On: 15 May 2025, 04:46 PM

ಕಾಪು : ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಉಡುಪಿ ವತಿಯಿಂದ ಎಐಸಿಎಫ್ ದೆಹಲಿ, ಕೆಎಸ್ಸಿಎ ಬೆಂಗಳೂರು ಮತ್ತು ಯುಡಿಸಿಎ ಉಡುಪಿ ಮೇರೆಗೆ ಕಾಪುವಿನಲ್ಲಿ ಪ್ರಥಮ ಬಾರಿಗೆ ಮೇ.23 ರಿಂದ ಮೇ.25ರವರೆಗೆ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಮತ್ತು ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್‌ಶಿಪ್ 2025 ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ ಜರಗಲಿದೆ ಎಂದು ಸಂಸ್ಥೆಯ ಸ್ಥಾಪಕ ಮಾ| ಸಾಕ್ಷಾತ್ ಯು.ಕೆ.ಕಾಪು ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್‌ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 3 ವರ್ಷದಿಂದ 15 ವರ್ಷದೊಳಗಿನ ಬಾಲಕ ಬಾಲಕಿಯರು, ಅಂದಾಜು 300 ಚೆಸ್ ಕ್ರೀಡಾಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 100 ಟ್ರೋಪಿ ಹಾಗೂ ರೂ.50,000/- ನಗದು ಬಹುಮಾನವನ್ನು ನೀಡಲಾಗುವುದು. ವಯೋಮಿತಿ 15 ಬಾಲಕ ಬಾಲಕಿಯರಿಗೆ 10 ರಂತೆ 20 ಟ್ರೋಪಿ ಹಾಗೂ ರೂ.50,000/- ನಗದು ಹಾಗೂ ಚೆಸ್ ಕ್ರೀಡಾಕೂಟಗಳನ್ನು ಪ್ರೋತ್ಸಾಹಿಸಲು ವಯೋಮಿತಿ 7,9,11,13 ರ ಬಾಲಕರಿಗೆ 10, ಬಾಲಕಿಯರಿಗೆ 10 ರಂತೆ 4 ವಿಭಾಗದಲ್ಲಿ 80 ಟ್ರೋಪಿ ಮತ್ತು ವಯೋಮಿತಿ 7 ರಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಟ್ರೋಪಿಯನ್ನು ನೀಡಲಾಗುವುದು. ವಯೋಮಿತಿ 15ರಲ್ಲಿ ಪ್ರಥಮ ಬಾಲಕರು 4 ಹಾಗೂ ಬಾಲಕಿಯರು 4 ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ರಾಷ್ಟ್ರಮಟ್ಟದ ಪಂದ್ಯದ ನೊಂದಣಿ ಶುಲ್ಕವನ್ನು ನಮ್ಮ ಸಂಸ್ಥೆಯಿಂದ ಭರಿಸಲಾಗುವುದು. ನಮ್ಮ ಸಂಸ್ಥೆಯ 26ನೇ ಚೆಸ್ ಸ್ಪರ್ಧೆಯಲ್ಲಿ ವಯೋಮಿತಿ 15ರ ಒಳಗಿನ ಎಲ್ಲಾ ಕ್ರೀಡಾಳುಗಳು ಭಾಗವಹಿಸಬೇಕಾಗಿ ಕೋರಲಾಗಿದೆ. ಮೇ.23ರಂದು ಬೆಳಿಗ್ಗೆ ಗಂಟೆ 9ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಕರಾಗಿ, ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರು ಪ್ರಸಾದ್ ಜಿ. ಶೆಣೈ ಕಾಪು ಇವರ ಅಧ್ಯಕ್ಷತೆಯಲ್ಲಿ, ಶ್ರೀಧರ್ ಶೆಣೈ ಕಾಪು, ರಾಮ ನಾಯಕ್, ಪ್ರಭಾಕರ ಪೂಜಾರಿ, ವಿಕ್ರಮ್ ಕಾಪು, ಡಾ. ವ್ಯಾಸರಾಜ ತಂತ್ರಿ, ಡಾ. ಕಲ್ಯಾ ರಾಜ್‌ಗೋಪಾಲ್ ಶೆಣೈ, ಅವಿನಾಶ್ ಶೆಟ್ಟಿ, ಸೀತಾರಾಂ ಭಟ್, ರಾಘವೇಂದ್ರ ವೈ.ಟಿ., ದಿವಾಕರ ಶೆಟ್ಟಿ ಕಾಪು, ಅಶೋಕ್ ಕುಮಾರ್ ಶೆಟ್ಟಿ, ಸುನಿಲ್ ಪೂಜಾರಿ, ಸುಧಾಕರ ಸಾಲ್ಯಾನ್, ಟಿ.ಎನ್. ಮಧುಕರ್ ತುಮಕೂರು, ರಮೇಶ್ ಕೋಟೆ ಭಾಗವಹಿಸಲಿದ್ದಾರೆ. ಸಮಾರೋಪವು ಮೇ.25ರಂದು ಸಂಜೆ ಗಂಟೆ 5ಕ್ಕೆ ನೆರವೇರಲಿದೆ. ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು 9341111024 ಕ್ಕೆ ತಿಳಿಸಬಹುದು ಎಂದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಉಮಾನಾಥ ಕಾಪು, ನಿರ್ದೇಶಕಿ ಶ್ರೀಮತಿ ಸೌಂದರ್ಯ ಯು.ಕೆ. ಕಾಪು, ಸಂಸ್ಥೆಯ ಸಲಹೆಗಾರರಾದ ಪೆನ್‌ವಿಲ್ ಸೋನ್ಸ್, ನಾಗೇಶ ಕಾರಂತ್ ಪಾಂಗಾಳ ಉಪಸ್ಥಿತಿಯಿದ್ದರು.

ಮೇ. 16 : ಕರಾವಳಿ ಸ್ಟಾರ್ಸ್ ನಡಿಪಟ್ನ, ಪಡುಬಿದ್ರಿ ಇದರ 15ನೇ ವರ್ಷದ ವಾರ್ಷಿಕೋತ್ಸವ

Thumbnail
Posted On: 15 May 2025, 04:40 PM

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ, ಪಡುಬಿದ್ರಿ ಇದರ 15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ, ಕರಾವಳಿ ಸ್ಟಾರ್ಸ್ ನಡಿಪಟ್ಟ ಇವರಿಂದ ನೃತ್ಯ ವೈವಿಧ್ಯ, ಅರುಣ್ ಕಾಪು ಇವರಿಂದ ಸಂಗೀತ ಸಂಜೆ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ತುಳು‌ ಚಾರಿತ್ರಿಕ ನಾಟಕ ಛತ್ರಪತಿ ಶಿವಾಜಿ ಮೇ.16, ಶುಕ್ರವಾರ ಸಂಜೆ 5ಗಂಟೆಯಿಂದ ಸಾಗರ್ ವಿದ್ಯಾ ಮಂದಿರ ಶಾಲಾ ವಠಾರದಲ್ಲಿ ಜರಗಲಿದೆ ಎಂದು ಕರಾವಳಿ ಸ್ಟಾರ್ಸ್ ನಡಿಪಟ್ನ, ಪಡುಬಿದ್ರಿ ಇದರ ಅಧ್ಯಕ್ಷರು ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

ಈ ಬಯೋಟೋರಿಯಂ ಕಂಪನಿ : ಆರೋಗ್ಯ ಮಾಹಿತಿ ಶಿಬಿರ ; ಸಾಧಕರ ಸನ್ಮಾನ

Thumbnail
Posted On: 14 May 2025, 05:45 PM

ಶಿರ್ವ : ಈ ಬಯೋಟೋರಿಯಂ ಕಂಪನಿಯ ಆರೋಗ್ಯ ಮಾಹಿತಿ ಶಿಬಿರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಶಾಮ್ಸ್ ಸ್ವೇರ್ ಜಾಸ್ಮಿನ್ ಮಿನಿ ಹಾಲ್ ನಲ್ಲಿ ನಡೆಯಿತು. ಶಿರ್ವ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ವಿಠಲ್ ಬಿ ಅಂಚನ್ ಹಾಗೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿರುವ ವಿಷ್ಣುಮೂರ್ತಿ ಸರಳಾಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಆರೋಗ್ಯದ ಮಾಹಿತಿಯನ್ನು ಸಂತೋಷ್ ಶೆಟ್ಟಿ ಮೂಡಬಿದ್ರೆ ನೆರವೇರಿಸಿದರು. ಕಂಪನಿಯ ಸಿಬ್ಬಂದಿ ಸುಧಾಕರ ಆಚಾರ್ಯ ಕುತ್ಯಾರು ಇವರಿಗೆ ವೈದ್ಯಕೀಯ ನೆರವು ರೂ. 25,500 ನೀಡಲಾಯಿತು. ಗಿರೀಶ್ ನಾಯಕ್ ಅಲೆವೂರು, ಪ್ರಶಾಂತ್ ಆಚಾರ್ಯ ಶಿರ್ವ, ನವೀನ್ ಪೂಜಾರಿ ಬ್ರಹ್ಮಾವರ, ತ್ರಿಶೂಲ್ ಆಚಾರ್ಯ ಉಡುಪಿ, ಸಂತೋಷ ಶೆಟ್ಟಿ ಮೂಡಬಿದ್ರೆ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತಿಯಿದ್ದರು. ಮಲ್ಲಿಕಾ ಆಚಾರ್ಯ ಕಿನ್ನಿಗೊಳಿ ಸ್ವಾಗತಿಸಿ, ವಂದಿಸಿದರು.

ಉಡುಪಿ : ಲೈಟ್ ಹೌಸ್ ಚಲನಚಿತ್ರ ನೇತ್ರದಾನ ವಾಗ್ದಾನ ಕಾಯ೯ಕ್ರಮ

Thumbnail
Posted On: 14 May 2025, 05:34 PM

ಉಡುಪಿ : ಲೈಟ್ ಹೌಸ್ ಚಲನಚಿತ್ರ ತಂಡ ಮತ್ತು ಪ್ರಸಾದ್ ನೇತ್ರಾಲಯ ಉಡುಪಿ ಇದರ ವತಿಯಿಂದ ನೇತ್ರದಾನ ಅರಿವು ಮೂಡಿಸುವ ಉದ್ದೇಶದಿಂದ ನೇತ್ರದಾನ ವಾಗ್ದಾನ ಕಾರ್ಯಕ್ರಮ ಪ್ರಸಾದ್ ನೇತ್ರಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಪ್ರಸಾದ್ ನೇತ್ರಾಲಯ ಇದರ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಮಾತನಾಡಿ ಭಾರತದಲ್ಲಿ ನೇತ್ರದಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಇದರಿಂದ ದೃಷ್ಟಿ ಕಳೆದುಕೊಂಡವರಿಗೆ ಶ್ರೀಲಂಕಾದಿಂದ ಕಣ್ಣಿನ ಕರಿಗುಡ್ಡೆಯನ್ನು ಆಮದು ಮಾಡಿ ರೋಗಿಗಳಿಗೆ ನೀಡಲಾಗುತ್ತಿದೆ. ಬೌದ್ಧ ಧರ್ಮದಲ್ಲಿ ನೇತ್ರದಾನಕ್ಕೆ ವಿಶೇಷವಾದ ಆದ್ಯತೆ ಇರುವ ಕಾರಣ ಅವರು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ. ಒಂದು ಕರಿಗುಡ್ಡೆಯಿಂದ ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯ ಈ ನಿಟ್ಟಿನಲ್ಲಿ ಲೈಟ್ ಹೌಸ್ ಚಲನಚಿತ್ರ ತಂಡದ ಕಾರ್ಯ ಅಭಿನಂದನೀಯ ನೇತ್ರದಾನದ ಬಗ್ಗೆ ಇರುವ ಅಪನಂಬಿಕೆಯನ್ನು ದೂರ ಮಾಡಲು ಈ ರೀತಿಯ ಕಾರ್ಯಕ್ರಮ ಪೂರಕವಾಗಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಕಾಕ೯ಳ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಂದ್ರನಾಥ ಎಂ.ವಿ ಮಾತನಾಡಿ, ದೃಷ್ಟಿ ಕಳೆದುಕೊಂಡವರು ಪ್ರಪಂಚವನ್ನು ನೋಡಲು ಅಸಾಧ್ಯ ಈ ನಿಟ್ಟಿನಲ್ಲಿ ನೇತ್ರದಾನದ ಅರಿವು ಮೂಡಿಸುವ ಕಾರ್ಯಕ್ರಮ ಎಲ್ಲಾ ಕಡೆಯಲ್ಲಿ ನಡೆಯಬೇಕು ಎಂದು ಶುಭ ಹಾರೈಸಿದರು. ಸಾಮಾಜಿಕ ಕಾರ್ಯಕರ್ತ ಲೇಖಕ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ನಾವು ಕಣ್ಣು ಮುಚ್ಚಿದಾಗ ಮತ್ತೊಬ್ಬರು ಕಣ್ಣು ತೆರೆಯಬೇಕು. ಈ ನಿಟ್ಟಿನಲ್ಲಿ ನೇತ್ರದಾನ ಮತ್ತು ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಮೂಢನಂಬಿಕೆ. ದೂರ ಮಾಡಲು ನೇತ್ರದಾನ ವಾಗ್ದಾನ ಶಿಬಿರಗಳು ಪ್ರತಿಯೊಂದು ಗ್ರಾಮದಲ್ಲಿ ನಡೆಯಬೇಕು. ದೃಷ್ಟಿ ಕಳೆದುಕೊಂಡವರು ಸಮಾಜದಲ್ಲಿ ಯಾವ ರೀತಿಯ ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂಬ ಕಥೆಯನ್ನು ಹೊಂದಿರುವ ಲೈಟ್ ಹೌಸ್ ಚಲನಚಿತ್ರ ತಂಡದ ಈ ಕಾರ್ಯ ಶ್ಲಾಘನೀಯ ಎಂದರು. ವೈದ್ಯರಾದ ಡಾ. ಶಮಂತ್ ಶೆಟ್ಟಿ, ಡಾ. ಸ್ನೇಹ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು. ಲೈಟ್ ಹೌಸ್ ಚಲನಚಿತ್ರದ ನಿರ್ಮಾಪಕರಾದ ದತ್ತಾತ್ರೇಯ ಪಾಟ್ಕಾರ್' ಮಾತನಾಡಿದರು. ಚಿತ್ರದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಸ್ವಾಗತಿಸಿ ಮತ್ತು ಪ್ರಸ್ತಾವನೆಗೈದರು, ರಂಗಭೂಮಿ ಕಲಾವಿದ ರಾಮಾಂಜಿ ನಮ್ಮ ಭೂಮಿ ನಿರೂಪಿಸಿ, ವಂದಿಸಿದರು.

ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿತ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

Thumbnail
Posted On: 14 May 2025, 05:14 PM

ಕಾಪು : ನಗರ ಹಾಗೂ ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಸಂಬಂದಿತ ವಿವಿಧ ಸಮಸ್ಯೆಗಳ ಬಗ್ಗೆ ಬುಧವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಉಡುಪಿ ಜಿಲ್ಲಾಧಿಕಾರಿಗಳಾದ ವಿದ್ಯಾಕುಮಾರಿ ಅವರನ್ನು ಭೇಟಿಯಾಗಿ ಚರ್ಚಿಸಿದರು. ಸ್ಥಳಿಯ ಯೋಜನ ಪ್ರದೇಶದ ಹೊರಭಾಗದಲ್ಲಿನ 1 ಎಕರೆಗಿಂತ ಕಡಿಮೆ ಇರುವ ಪ್ರದೇಶ ಮತ್ತು ಎಕನಿವೇಶನ ವಸತಿ/ವಸತಿಯೇತರ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯನ್ನು ಈ ಹಿಂದೆ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಲ್ಲಿ ಅನುಮೋದನೆಯನ್ನು ನೀಡಲಾಗುತ್ತಿತ್ತು. 2024 ರಿಂದ ಸದ್ರಿ ಅಧಿಕಾರವನ್ನು ನಗರ ಗ್ರಾಮಾಂತರ ಯೋಜನಾ ಇಲಾಖೆಗೆ ನೀಡಿದ್ದರಿಮದ ಸಾರ್ವಜನಿಕರಿಗೆ ಸಕಾಲದಲ್ಲಿ ವಿನ್ಯಾಸ ಅನುಮೋದನೆಯನ್ನು ಪಡೆಯಲಾಗುತ್ತಿಲ್ಲ. ಇದರಿಂದಾಗಿ ವಿಳಂಬವಾಗುತ್ತಿದೆ. 9&11ಎ ಅನ್ನು ಸಾರ್ವಜನಿಕರಿಗೆ ಪಡೆಯಲು ವಿಳಂಬವಾಗುತ್ತಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ವಹಿಸಿದ್ದರಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿಂದ ವಿನ್ಯಾಸ ಅನುಮೋದನೆಯನ್ನು ಪಡೆಯಲು ಕನಿಷ್ಠ 2 ರಿಂದ 3 ತಿಂಗಳು ಬೇಕಾಗುದರಿಂದ ಸಾರ್ವಜನಿಕರಿಗೆ ಅನಾನುಕೂಲತೆಯಾಗಿರುತ್ತದೆ. ಈ ಹಿಂದೆ ಗ್ರಾಮ ಹಾಗೂ ತಾಲೂಕು ಪಂಚಾಯತ ನಲ್ಲಿ 15 ದಿನದ ವಿನ್ಯಾಸ ಅನುಮೋದನೆಯೊಂದಿಗೆ 9&11ಎ ಅನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿ ಪಡೆಯಲು ಸಾದ್ಯವಾಗುತ್ತಿತ್ತು. ಅತೀ ದೂರದ ಗ್ರಾಮೀಣ ಪ್ರದೇಶಗಳಿಗೆ ಸಕಾಲದಲ್ಲಿ ಕ್ಷೇತ್ರ ಭೇಟಿ ನೀಡಲು ನಗರ ಹಾಗೂ ಗ್ರಾಮಾಂತರ ಯೋಜನ ಪ್ರಾಧಿಕಾರಿಗಳ ಅಧಿಕಾರಿಗಳಿಗೆ ಸಾದ್ಯವಾಗದೇ ಇದ್ದು, ಅಲ್ಲದೆ ದಾಖಲೆಗಳ ನೆಪವೊಡ್ಡಿ ಕಡತಗಳ ವಿಲೆಯಲ್ಲಿ ವಿಳಂಬತೆಯನ್ನು ತೋರುತ್ತಿರುದರಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಜನ ಪ್ರತಿನಿಧಿಗಳಿಗೆ ಪ್ರತಿ ನಿತ್ಯ ಸಾರ್ವಜನಿಕರಿಂದ ದುರುಗಳು ಬರುತ್ತಿದೆ. ಕಾಪು ತಾಲೂಕು ವ್ಯಾಪ್ತಿಯಲ್ಲಿ 16 ಗ್ರಾಮ ಪಂಚಾಯಿತಿಗಳು ಇದ್ದು ಸದ್ರಿ ಗ್ರಾಮ ಪಂಚಾಯತ್ ಗೆ ಸಂಬಂದಿಸಿದಂತೆ ಸಾಕಷ್ಟು ಕಡತಗಳು ಕಾಪು ಯೋಜನ ಪ್ರಾಧಿಕಾರದಲ್ಲಿ ವಿನ್ಯಾಸ ಅನುಮೋದನೆ ಅವಶ್ಯಕತೆಯಿದ್ದು ಸದಸ್ಯ ಕಾರ್ಯದರ್ಶಿರವರಿಗೆ ಕಾಪು ತಾಲೂಕು ಅಲ್ಲದೆ ಕಾರ್ಕಳ ಹಾಗೂ ಬಂಟ್ವಾಳ ತಾಲೂಕಿಗೆ ಹೆಚ್ಚುವರಿ ಪ್ರಭಾರವಹಿಸಿದ್ದರಿಂದ ಕಾಪು ತಾಲೂಕು ವ್ಯಾಪ್ತಿಯಲ್ಲಿನ ಏಕ ವಿನ್ಯಾಸ ಕಡತಗಳು ಸುಮಾರು 3 ತಿಂಗಳ ವರೆಗೆ ವಿಲೇ ಯಾಗದೇ ಇರುವುದರಿಂದ 9&11ಎ ಅನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿ ಪಡೆಯಲು ಸಾದ್ಯವಾಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಗ್ರಾಮ ಠಾಣಾ ಪ್ರಕ್ರಿಯೆ ಇಲ್ಲದೆ ಇದ್ದು ಹೆಚ್ಚಿನವರು ತುಂಡು ಭೂಮಿಯನ್ನು ಹೊಂದಿದವರಾಗಿರುತ್ತಾರೆ. ವಿನ್ಯಾಸ ಅನುಮೋದನೆಯ ಸಂದರ್ಭದಲ್ಲಿ ನಿವೇಶನ ಭೂಪರಿವರ್ತನೆಯಾಗಿದ್ದರೂ ಪ್ರಾಧಿಕಾರದ ನಿಯಮದಂತೆ ರಸ್ತೆಯನ್ನು ಭೂ ಪರಿವರ್ತನೆ ಮಾಡಿ ಪುರಸಭೆ ಹಾಗೂ ಗ್ರಾಮ ಪಂಚಾಯತ್ ಗಳಿಗೆ ಪಾರಾಧೀನ ಮಾಡುವಂತೆ ಹಾಗೂ ಗ್ರಾಮಾಂತರ ದಲ್ಲಿ ರಸ್ತೆಯ ಮದ್ಯ ಬಾಗದಿಂದ 25 ಮೀ. ಬಿಟ್ಟು ಕಟ್ಟಡವನ್ನು ನಿರ್ಮಿಸಲು ಕಡ್ಡಾಯಗೊಳಿಸಿದ್ದರಿಂದ ತುಂಡು ಭೂಮಿಯನ್ನು ಹೊಂದಿದ್ದವರಿಗೆ ಇದರಿಂದ ಕಷ್ಟವಾಗುತ್ತಿದ್ದು ಬಗ್ಗೆ ಸರಳೀಕರಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಬಸ್ಸು ಸೌಲಭ್ಯ ಒದಗಿಸಿ : ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ

Thumbnail
Posted On: 14 May 2025, 04:57 PM

ಕಾಪು : ತಾಲೂಕಿನ ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಸರಕಾರಿ ಬಸ್ಸಿನ ಸೌಲಭ್ಯ ಅಥವಾ ಖಾಸಗಿ ಬಸ್ಸಿನ ಸೌಲಭ್ಯವನ್ನು ಮುಂದುವರಿಕೆ ಮಾಡುವಂತೆ ಈಗಾಗಲೇ ಮನವಿ ನೀಡಿದ್ದು ಪುನರ್ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ಜಯರಾಮ ಆಚಾರ್ಯ ಕಾಪು ಇವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರಿಗೆ ಮನವಿ ಮಾಡಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಕಾಪು ಪಡುಕುತ್ಯಾರು ಇರಂದಾಡಿ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಸ್ವಾಮಿಗಳಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಸಾರ್ವಜನಿಕರು ನೀಡಿದ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಈ ಗ್ರಾಮಾಂತರ ಭಾಗಕ್ಕೆ ಬಸ್ಸು ಸೌಲಭ್ಯ ಒದಗಿಸುವರೆ ಉಡುಪಿ ಜಿಲ್ಲಾಧಿಕಾರಿ ಮುಖೇನ, ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೂಲಕ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಬಿಜೈ ಮಂಗಳೂರುರವರಿಗೆ ಪತ್ರ ಮುಖೇನ ಕುತ್ಯಾರು ಗ್ರಾಮಂತರ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವರೆ ತಿಳಿಸಿರುತ್ತಾರೆ. ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರಿಗೂ ಮನವಿಯನ್ನು ಸಲ್ಲಿಸಲಾಗಿರುತ್ತದೆ. ನಂತರ ನಡೆದ ಬೆಳವಣಿಗೆ ಗಮನಿಸಿದಾಗ ಖಾಸಗಿ ಬಸ್ಸಿನವರು ಗ್ರಾಮಂತರ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯನ್ನು ಪಡೆದಿರುವ ಮಾಹಿತಿಯು ತಿಳಿದು ಬಂದಿರುತ್ತದೆ. ಹಲವಾರು ವರ್ಷಗಳಿಂದ ನಮ್ಮ ಪ್ರದೇಶಕ್ಕೆ ಸರಕಾರಿ ಅಥವಾ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಲಿಲ್ಲ. ಅಂತೆಯೇ ಮನವಿಯನ್ನು ನೀಡಿ ಒಂದು ವರ್ಷ ಐದು ತಿಂಗಳು ಕಳೆದರೂ ಯಾವುದೇ ವ್ಯವಸ್ಥೆಯಾಗಲಿಲ್ಲ. ಈ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರಿಗೆ ಮತ್ತು ಮಾನ್ಯ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಪುನರಪಿ ಜ.15ರಂದು ಮನವಿಯನ್ನು ಸಲ್ಲಿಸಲಾಯ್ತು. ಯಾವ ಕಾರಣಕ್ಕಾಗಿ, ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಬಸ್ಸು ಸೌಲಭ್ಯ ಒದಗಿಸಲಾಗಿರುವುದಿಲ್ಲ ಎಂದು ನಮಗೆ ತಿಳಿದಿರುವುದಿಲ್ಲ. ಖಾಸಗಿ ಬಸ್ಸಿನವರು ಸರಕಾರಿ ಬಸ್ಸು ಹಾಕದಂತೆ ತಡೆ ಮಾಡಿಸಿದರೆ ತಡೆ ತೆರವಿಗೆ ಯಾರು ಸ್ಪಂದಿಸಬೇಕೆಂದು ಮನವರಿಕೆಯಾಗುವುದಿಲ್ಲ. ತಡೆ ತೆರವಿನ ನಂತರ ನಮ್ಮ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಬರಲಿ ಎಂದು ಆಶಿಸುತ್ತಿದ್ದೇನೆ. ಅಂತೆಯೇ ತಮ್ಮಲ್ಲಿ ನಿವೇದಿಸುವುದೆಂದರೆ, ಪ್ರಸ್ತುತ ಉಡುಪಿಯಿಂದ ಹೊರಟು ಕಾಪು ಮೂಲಕ ಈಗ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳು ಕುತ್ಯಾರು ಗ್ರಾಮದ ಪುಂಚಲಕಾಡು ಪ್ರದೇಶದಲ್ಲಿ 45 ನಿಮಿಷಕ್ಕೂ ಮೇಲ್ಪಟ್ಟು ನಿಲುಗಡೆಯಾಗುತ್ತಿದ್ದು, ಸದ್ರಿ ಬಸ್ಸುಗಳ ಮುಂದಿನ ನಿಲುಗಡೆ ವ್ಯಾಪ್ತಿಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕುತ್ಯಾರು ಗ್ರಾಮದ ಇರಂದಾಡಿ, ಆನೆಗುಂದಿ ಶ್ರೀ ಮಹಾಸಂಸ್ಥಾನ ಸರಸ್ವತಿ ಪೀಠ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೋರಾರ್ಜಿ ದೇಸಾಯಿ ವಸತಿ ಶಿಕ್ಷಣ ಶಾಲೆ, ಶ್ರೀ ದುರ್ಗಾಮಂದಿರ ಮತ್ತು ಇತರ ಸಂಘ ಸಂಸ್ಥೆಗಳು ಇರುವ ಸ್ಥಳದಲ್ಲಿ ನಿಲುಗಡೆ ಮಾಡಿ ಅಲ್ಲಿಂದ ಪುಂಚಲಕಾಡು ಮಾರ್ಗವಾಗಿ ಕಾಪುವಿನಿಂದ ಉಡುಪಿಗೆ ತಲುಪಬಹುದು. ಪ್ರಸ್ತುತ ಪುಂಚಲಕಾಡಿನಿಂದ ನಮ್ಮ ಪ್ರದೇಶಕ್ಕೆ ಕ್ರಾಂಕ್ರಿಟ್ ರಸ್ತೆಯಾಗಿದ್ದು ಯಾವುದೇ ಆಡಚನೆಯಾಗುವುದಿಲ್ಲ. ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಇದಕ್ಕೆ ಬೇಕಾದ ಖಾಸಗಿ ಬಸ್ಸುಗಳ ಪರ್ಮಿಟ್ ವ್ಯವಸ್ಥೆಯನ್ನು ಮಾರ್ಪಾಡು ಮಾಡಿ ಸಾರ್ವಜನಿಕರಿಗೆ ಬಸ್ಸಿನ ಸೌಕರ್ಯವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.