Updated News From Kaup
ಮೂಡುಬೆಳ್ಳೆ : ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಘಟಕದ ವತಿಯಿಂದ ವನಮಹೋತ್ಸವ, ಭಗವಧ್ವಜ ಸ್ಥಾಪನೆ

Posted On: 26-09-2021 09:14PM
ಕಾಪು : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮತ್ತು ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಮೂಡುಬೆಳ್ಳೆ ಘಟಕ ವತಿಯಿಂದ ಕುಂತಳ ನಗರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಹಾಗೂ ಭಗವಧ್ವಜ ಸ್ಥಾಪಿಸಲಾಯಿತು.

ಈ ಸಂದರ್ಭದಲ್ಲಿ ಕಟ್ಟಿಂಗೇರಿ ದೇವಸ್ಥಾನದ ಧರ್ಮದರ್ಶಿಗಳಾದ ದೇವದಾಸ್ ಹೆಬ್ಬಾರ್ ಹಾಗೂ ಕಾಪು ತಾಲೂಕು ಕಾರ್ಯವಾಹ ಸಚಿನ್ ಶೆಟ್ಟಿ ವಿ.ಹಿಂ.ಪ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಕಾಪು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ, ಶಿರ್ವ ವಿ.ಹಿಂ.ಪ ವಲಯ ಅಧ್ಯಕ್ಷರಾದ ವಿಖ್ಯಾತ್ ಭಟ್ ಮೂಡುಬೆಳ್ಳೆ ಹಾಗೂ ಬೆಳ್ಳೆ ಘಟಕದ ಅಧ್ಯಕ್ಷರಾದ ವಿಜೇತ್ ಭಟ್, ಸ್ಥಳೀಯ ಉದ್ಯಮಿ ಅಶೋಕ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಕಲಚೇತನ ಕಲಾವಿದ ಗಣೇಶ್ ಕುಲಾಲ್ ಪಂಜಿಮಾರ್ ಕೈ ಚಲಕದಿ ಮೂಡಿದ ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಸಚಿವ ವಿ. ಸುನಿಲ್ ಕುಮಾರ್ ಚಿತ್ರ - ಹಸ್ತಾಂತರ

Posted On: 26-09-2021 12:28PM
ಕಾಪು : ಕಲೆಗೆ ಬೆಲೆ ಕಟ್ಟಲಾಗದು, ಚಿತ್ರಕಲೆಯಲ್ಲಿ ಸಾಧನೆಗೈದ ಮುಂದಿನ ಯುವ ಮನಸ್ಸುಗಳಿಗೆ ಮಾದರಿಯಾದ ವಿಕಲಚೇತನ ಕಲಾವಿದ ಗಣೇಶ್ ಕುಲಾಲ್ ಪಂಜಿಮಾರ್ ಇವರ ಕೈ ಚಲಕದಲ್ಲಿ ಮೂಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಕಾರ್ಕಳದ ಶಾಸಕರು ಹಾಗೂ ಸಚಿವರಾದ ವಿ ಸುನಿಲ್ ಕುಮಾರ್ ಅವರ ಚಿತ್ರವನ್ನ ಗಣೇಶ್ ಪಂಜಿಮಾರ್ ಅವರು ಅತಿಥಿ ಗಣ್ಯರ ಜೊತೆ ಅವರಿಗೆ ನೀಡಿದರು.

ಈ ಸುಂದರ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾಪು ವಲಯದ ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಶಂಕರಪುರ, ಕಾಪು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಸರ್ವಜ್ಞ ಆಸರೆ ಕಿರಣ ಬಳಗ ಇದರ ಸಂಚಾಲಕರು ಪ್ರಭಾಕರ್ ಕುಲಾಲ್ ಇನ್ನ, ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಸುಹಾಸ್ ಶೆಟ್ಟಿ, ಅವಿನಾಶ್ ಶೆಟ್ಟಿ, ಸುರೇಂದ್ರ ವರಂಗ, ಸಂದೇಶ್ ಕುಲಾಲ್, ಸಂದೀಪ್ ಕುಲಾಲ್ ಮಂಜರಪಲ್ಕೆ ಬೋಳ, ಪ್ರಭಾಕರ್ ಕುಲಾಲ್ ಬೇಲಾಡಿ ಉಪಸ್ಥಿತರಿದ್ದರು.
ತಂತ್ರಜ್ಞಾನದೊಂದಿಗೆ ಸಂಶೋಧನಾ ಮನಸ್ಥಿತಿ ಬೆಳೆಸಿ ಉತ್ತಮ ಉದ್ಯೋಗ ಪಡೆಯಿರಿ : ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್

Posted On: 26-09-2021 12:01PM
ಮೂಡಬಿದ್ರಿ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಸರಿಯಾದ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನವನ್ನುಪಡೆದು, ನಿರ್ದಿಷ್ಟ ಗುರಿ ಮತ್ತು ಧ್ಯೇಯವನ್ನು ತಲುಪಲು ಕಂಪ್ಯೂಟರ್ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ, ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆಯಬೇಕು. ಇದಕ್ಕೆ ವಿದ್ಯಾರ್ಥಿಗಳು ಪೂರ್ವ ತಯಾರಿಯನ್ನು ಮಾಡುವುದರ ಜೊತೆಗೆ, ಮೂಲಭೂತ ಸೌಕರ್ಯಗಳನ್ನು ಸದ್ಬಳಕೆ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿದೆಸೆಯಿಂದಲೇ ರೂಡಿಸಿಕೊಳ್ಳಬೇಕೆಂದು ಮೂಡಬಿದ್ರೆ ಧವಳಾ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಏರ್ಪಡಿಸಿದ ವೃತ್ತಿ ಮಾರ್ಗದರ್ಶನ ವೆಬಿನರ್ ನಲ್ಲಿ ಬಿಕಾಂ ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಥಿಗಳಿಗೆ ದೊರಕಬಹುದಾದ ಉದ್ಯೋಗ-ಅವಕಾಶಗಳ ಕೌಶಲ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಸುದರ್ಶನ್ ಕುಮಾರ್ ರವರು ಎಲ್ಲರನ್ನೂ ಸ್ವಾಗತಿಸಿ ಸರಿಯಾದ ಶಿಕ್ಷಣ ಜೊತೆಗೆ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಮೂಲಕ ವಿಪುಲ ಅವಕಾಶಗಳನ್ನು ಪಡೆಯಬಹುದು ಎಂದು ಪ್ರಾಸ್ತಾವಿಕವಾಗಿ ನುಡಿದರು.
ಈ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಶಿಕ್ಷಕರು-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 30 ವಿದ್ಯಾರ್ಥಿಗಳು ಭಾಗವಹಿದ್ದರು. ವಿಭಾಗದ ಸಂಯೋಜಕರಾದ ಪ್ರವೀಣ್ ಕುಲಕರ್ಣಿಯವರು ಅತಿಥಿಗಳನ್ನು ಪರಿಚಯಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ರಾಜ್ಯದ ಐ.ಟಿ.ಐ. ಕಾಲೇಜುಗಳು 5000 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೇಲ್ದರ್ಜೆಗೆ : ಸಚಿವ ಡಾ.ಅಶ್ವಥ್ ನಾರಾಯಣ್

Posted On: 26-09-2021 11:50AM
ಉಡುಪಿ : ರಾಜ್ಯದಲ್ಲಿನ 150 ಐ.ಟಿ.ಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೆಲ್ದರ್ಜೆಗೆ ಏರಿಸಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ&ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದರು. ಅವರು ಉಪ್ಪೂರುನಲ್ಲಿ ಸರಕಾರಿ ಉಪಕರಣಾಗಾರ ಮತ್ತು ನೂತನ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 1200 ಸರಕಾರಿ ಮತ್ತು ಖಾಸಗಿ ಐ.ಟಿ.ಐ ಕಾಲೇಜುಗಳಿದ್ದು, ಸರಕಾರಿ ಐಟಿಐ ಕಾಲೇಜುಗಳಲ್ಲಿ ಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ 150 ಐಟಿಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೇಲ್ದರ್ಜೆಗೆ ರಾಜ್ಯ ಸರ್ಕಾರವು ನಿರ್ಧರಿಸಿದ್ದು, 1000 ಕೋಟಿ ಸರ್ಕಾರವು ಉಳಿದ 4000 ಕೋಟಿಗಳನ್ನು ಟಾಟಾ ಟೆಕ್ನಾಲಜಿ ಕಾನ್ ಸಲ್ಟೋಯಿಂ ಮೂಲಕ ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಐ.ಟಿ.ಐ ಕಾಲೇಜುಗಳಲ್ಲಿ , ವಿಶ್ವ ದರ್ಜೆಯು ಅಡ್ವಾನ್ಸ್ ಕೈಗಾರಿಕಾ 4.0 ತಂತ್ರಜ್ಞಾನ ತರಬೇತಿ ನೀಡಲು ಅಗತ್ಯವಿರುವ ವರ್ಕ್ಶಾಪ್, ಡಿಸೈನ್ ಲ್ಯಾಬ್ ಗಳ ನಿರ್ಮಾಣಕ್ಕೆ ಬಳಸಲಾಗುವುದು ಇದಕ್ಕಾಗಿ ಪ್ರತಿ ಕೇಂದ್ರಕ್ಕೆ 30 ಕೋಟಿ ರೂ ವೆಚ್ಚವಾಗಲಿದೆ. ಈ ಯೋಜನೆ ಅಕ್ಟೋಬರ್ 2 ರಂದು ಉದ್ಘಾಟನೆಗೊಳ್ಳಲಿದೆ ಎಂದರು.
ಸರ್ಕಾರಿ ಉಪಕರಣಾಗಾರದಲ್ಲಿ ವಿದ್ಯಾರ್ಥಿಗಳಿಗೆ 21 ಶತಮಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಎಮರ್ಜಿಂಗ್ ತಂತ್ರಜ್ಞಾನವನ್ನು ಕಲಿಸಲಾಗುತ್ತಿದೆ ಇದರಿಂದ 100% ಖಚಿತ ಉದ್ಯೋಗವಕಾಶಗಳಿದ್ದು, ಇಡೀ ವಿಶ್ವಕ್ಕೆ ಏರೊಸ್ಪೇಸ್ ಉಪಕರಣ ಉತ್ಪಾದನೆಯಲ್ಲಿ ಕರ್ನಾಟಕ ನಂ 1 ಸ್ಥಾನ ಪಡೆದಿದ್ದು , ಭಾರತ ಸರ್ಕಾರದಿಂದಲೇ 3 ಲಕ್ಷ ಕೋಟಿ ಮೊತ್ತದ ಆರ್ಡರ್ ದೊರೆತಿದೆ, ಇದಲ್ಲದೇ ಇತರೆ ಕಂಪೆನಿಗಳಿಂದ ಆರ್ಡರ್ ದೊರೆತಿದೆ.ರ ಈ ಕಾರ್ಯಗಳನ್ನು ನಿರ್ವಹಿಸಲು ಕೌಶಲ್ಯಯುತ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಜಿಟಿಟಿಸಿ ಕಾಲೇಜುಗಳಲ್ಲಿನ ತಂತ್ರಜ್ಞಾನ ಆಧರಿತ ಕೋರ್ಸ್ಗಳಿಗೆ ಸೇರ್ಪಡೆಯಾಗಬೇಕು ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣರಾಜ ಕೋಟ್ಯಾನ್, ಜಿಟಿಟಿಸಿ ಮೈಸೂರು ನ ವ್ಯವಸ್ಥಾಪಕ ಲಿಂಗರಾಜ ಸಣ್ಣಮನಿ, ಜಿಟಿಟಿಸಿ ಉಪ್ಪೂರುನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಟೊಯೋಟಾ ಸಂಸ್ಥೆಯ ರೋಶನ್, ಪ್ರಾಂಶುಪಾಲ ಮಂಜುನಾಥ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸೆ.27 : ವಿಶ್ವ ಪ್ರವಾಸೋದ್ಯಮ ದಿನ - ಪ್ರವಾಸಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

Posted On: 26-09-2021 11:38AM
ಕರಾವಳಿ ಜಿಲ್ಲೆಗಳಲ್ಲಿ ವಿಫುಲವಾದ ಅವಕಾಶಗಳಿದ್ದರೂ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ ? ಇಲ್ಲಿರುವ ಪ್ರವಾಸಿ ಆಕರ್ಷಣೆಯ ಎಷ್ಟು ವಿಷಯಗಳು ಈಗಾಗಲೇ ತೆರೆದುಕೊಂಡಿವೆ - ತೆರೆಯಲಾಗಿದೆ ಅಥವಾ ಪರಿಚಯಿಸಲಾಗಿದೆ, ಗೊತ್ತಿಲ್ಲ ! . ಆದರೆ ನಮ್ಮ ಪ್ರವಾಸೋದ್ಯಮ ಸಂಬಂಧಿ ಚಟುವಟಿಕೆಗಳು ಕಡಲ ದಡವನ್ನು ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ . ಹಾಗಾದರೆ ಕಡಲು - ಘಟ್ಟದ ನಡುವೆ ಏನಿದೆ ? ನಮ್ಮ ಉಭಯ ಜಿಲ್ಲೆಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಸಂಸ್ಕೃತಿಯು ವೈಶಿಷ್ಟ್ಯ ಪೂರ್ಣವಾದುದು . ಇಲ್ಲಿ ಜಾನಪದ ಮೂಲದ ಆಚರಣೆ , ನಂಬಿಕೆಗಳಿವೆ . ಆರಾಧನಾ ಕಲೆಗಳು ,ಪ್ರದರ್ಶನ ರಂಗ ಕಲೆಗಳಿವೆ . ಪರ್ವತ , ಗುಡ್ಡ , ಬೆಟ್ಟ , ಜಲಪಾತ , ಝರಿ , ನದಿ , ಹೊಳೆ , ಸಮುದ್ರ ಎಲ್ಲವೂಇದೆ . ಆಹಾರ ಪದಾರ್ಥಗಳ ವೈವಿಧ್ಯತೆ ಇದೆ . ಆಕರ್ಷಕ ಉತ್ಪನ್ನಗಳಿವೆ .ಇತಿಹಾಸ ಹೇಳುವ ಪುರಾತನ ನಿರ್ಮಿತಿಗಳಿವೆ . ವೀರರ , ಪ್ರತಿಭಾವಂತರ , ಸಾಧಕರ , ದೈವೀಪುರುಷರ ಆಡುಂಬೊಲವಿದೆ . ಭವ್ಯವಾಗಿ ಬೆಳೆದ ದೇವಾಲಯ ಸಂಸ್ಕೃತಿಯಿದೆ . ಒಟ್ಟಿನಲ್ಲಿ ಮನಮೋಹಕ ಪರಿಸರದಲ್ಲಿ ಹಾಡು - ಕುಣಿತಗಳಿಗೆ ಪೂರಕವಾಗಿ ವಾದ್ಯಗಳ ಘೋಷ - ಇದಕ್ಕೆ ಬಣ್ಣದ ಮೆರಗಿನೊಂದಿಗೆ ಪ್ರತಿದಿನ ದೈವ - ದೇವಲೋಕಗಳು , ನಾಗ - ಬ್ರಹ್ಮ ಸನ್ನಿಧಾನಗಳು ಸನ್ನಿಹಿತವಾಗುತ್ತವೆ ,ಪುರಾಣ ಪ್ರಪಂಚ ತೆರೆದುಕೊಳ್ಳುತ್ತದೆ .ರಾತ್ರಿಗಳು ಬೆಳ್ಳಂಬೆಳಗಾಗುತ್ತವೆ .ಲೌಕಿಕದಲ್ಲಿ ಅಲೌಕಿಕ ಸಂಭವಿಸುತ್ತದೆ . ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವದೊಂದಿಗೆ ಪ್ರವಾಸಿಗೆ ತೋರಿಸಬೇಕು . ವಿವಿಧ ಸೌಲಭ್ಯಗಳೊಂದಿಗೆ ಈ ಸಾಂಸ್ಕೃತಿಕ ಸಂಪತ್ತಿನ ಖಜಾನೆಯ ಬಾಗಿಲು ತೆರೆಯಬೇಕು . ಆಗ ನಮ್ಮ ಸಂಸ್ಕೃತಿ ಜಗಜ್ಜಾಹೀರಾಗುತ್ತದೆ . ಬಹುತ್ವದ , ಬಹು ಆಯಾಮಗಳುಳ್ಳ ಒಂದು ಸಂಸ್ಕೃತಿ ಗೌರವಯುತವಾಗಿ ಪ್ರಸ್ತುತಪಡುವುದು ಹೆಮ್ಮೆಯಲ್ಲವೆ . ಆದರೆ ಪ್ರಸ್ತುತಿ ಹೇಗಾಗುತ್ತಿದೆ ಗೊತ್ತಿಲ್ಲ . ಅಂತಹ ಯಾವುದೇ ಮಾಹಿತಿ ಇಲ್ಲ . ನದಿಯಲ್ಲಿ ಸಾಹಸದ , ರೋಚಕ ದೋಣಿಪ್ರವಾಸದ ಬಗ್ಗೆ ಕೇಳಿ ಬರುತ್ತದೆ , ಸಮುದ್ರದಲ್ಲಿ ಬೋಟಿಂಗ್ ನೋಡ ಸಿಗುತ್ತದೆ . ರೆಸಾರ್ಟ್ ಗಳೂ ಇವೆ. ಬೇಕಾದಷ್ಟು ಬೀಚ್ ಉತ್ಸವಗಳು ಕಡಲ ಕಿನಾರೆಯ ಉದ್ದಕ್ಕೂ ನಡೆಯುತ್ತವೆ .ಬೈಕ್ ರಾಲಿಗಳು ಸಂಘಟಿಸಲ್ಪಡುತ್ತವೆ . ಅಷ್ಟಕ್ಕೆ ಸೀಮಿತವೇ ?
ಸಮುದ್ರ ಕಿನಾರೆ : ಸಮುದ್ರ ಎಂದರೆ ಭಯ ಭವ್ಯತೆಯನ್ನು ಹೊಂದಿ ಮನೆಸೂರೆಗೊಳ್ಳುವ ಒಂದು ವಿಸ್ಮಯ . ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ ಸುಂದರ ಪ್ರದೇಶ . ನಿಸರ್ಗ ಸಹಜ ದ್ವೀಪಗಳು (ಕುದುರು) ಪ್ರವಾಸಿ ತಾಣಗಳು . ಹಿನ್ನೀರಿನ ನೋಟವು ಅಗಾಧ ಜಲರಾಶಿ . ಇಂತಹ ಆಕರ್ಷಣೀಯ ಪರಿಸರ ಪ್ರವಾಸಿ ತಾಣಗಳಾಗಿವೆ. ಧಾರ್ಮಿಕ ಕ್ಷೇತ್ರಗಳು : ಪ್ರಸಿದ್ಧ ದೇವಾಲಯಗಳು , ಪವಿತ್ರ ನದಿ ಸ್ನಾನ - ತೀರ್ಥಸ್ನಾನದ ನದಿ ದಡಗಳು , ನಾಗ ಸನ್ನಿಧಾನಗಳು , ಮಾರಿಗುಡಿಗಳು , ಬ್ರಹ್ಮಸ್ಥಾನಗಳು , ದೈವಸ್ಥಾನಗಳು , ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆಯುತ್ತವೆ . ಧಾರ್ಮಿಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆ ಇದೆ . ಇಂತಹ ದೇವಾಲಯ , ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗುಇದೆ .ಮೂರ್ತಿಗಳು , ಕಲ್ಲಿನ - ಲೋಹಗಳ ವಿಶಿಷ್ಟ ಕಲಾಕೃತಿಗಳು - ಕುಸುರಿ ಕೆಲಸದ ಮಣೆ ಮಂಚಗಳಿವೆ ,ದೈವಗಳ ಭಂಡಾರದಲ್ಲಿ ಅಪೂರ್ವ - ಪವಿತ್ರ ವಸ್ತುಗಳಿರುತ್ತವೆ . ಇವೆಲ್ಲದರ ಪ್ರದರ್ಶನಾವಕಾಶ ಒದಗಬೇಕು . ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ . ಪ್ರಾಚೀನ ಚರ್ಚ್ , ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ .ಇಲ್ಲಿ ನಡೆಯುವ ಉರೂಸ್ , ಚರ್ಚ್ ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆ ಗಳು ಪ್ರವಾಸಿಗೆ ಆಕರ್ಷಣೀಯವಾಗಬಹುದು . ಪುರಾತನ ಚರ್ಚ್ ,ಮಸೀದಿಗಳ ಐತಿಹಾಸಿಕ ಮಹತ್ವ , ರಚನಾ ಶೈಲಿಗಳು ಮಹತ್ವಪೂರ್ಣವಾದುವೇ.
ಐತಿಹಾಸಿಕ ಸ್ಥಳಗಳು : ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆಗಳು , ಕೋಟೆಗಳ ಅವಶೇಷಗಳು , ಅಪೂರ್ವ ದಾರುಶಿಲ್ಪಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನಮನೆಗಳು , ಚೌಕಿಮನೆಗಳು , ಜಾನಪದ ವೀರರು ಹುಟ್ಟಿದ ಸ್ಥಳ - ನಡೆದಾಡಿದ ಪರಿಸರ - ಸಾಧಕ ವಿದ್ಯೆಕಲಿತ ಐಗಳಮಠ - ಗರಡಿಗಳು, ಪಾರ್ದನ - ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು , ಇತಿಹಾಸ , ಸಂಸ್ಕೃತಿ ಪ್ರೀತಿಯ ಪ್ರವಾಸಿಗಳ ಗಮನ ಸೆಳೆಯದಿದ್ದೀತೆ ? ಆಚರಣೆ - ಆರಾಧನೆ - ಕ್ರೀಡೆ : ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ- ನೇಮ - ಮೆಚ್ಚಿ - ಗೆಂಡ , ನಾಗಮಂಡಲ - ಡಕ್ಕೆಬಲಿ - ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿಗಳನ್ನು ಕರೆದೊಯ್ದು ತೋರಿಸುವ ಅವಕಾಶವಿದೆ . ದೇವಾಲಯಗಳ ವಾರ್ಷಿಕ ಜಾತ್ರೆ , ಕೋಲ - ನೇಮದ ಬಳಿಕ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ , ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸುವ ಸಾಧ್ಯತೆಇದೆ . ತೆಂಗಿನಕಾಯಿ ಕಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು . ವಾದನ - ನರ್ತನ ವೈಭವ : ವಾದನ - ನರ್ತನಗಳು ಸಂತೋಷ , ಸಂಭ್ರಮದ ಸಂಕೇತಗಳಾಗಿ , ದೈವ - ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ . ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ - ನರ್ತನ ಪ್ರಮುಖವಾದುದು . ಜಾನಪದ ನಾಗಸ್ವರ , ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು ,ಸಮ್ಮೇಳ ,ತಾಸ್ ಮಾರ್ , ದುಡಿ ತೆಂಬರೆ, ಡಕ್ಕೆ ,ದಿಡ್ಂಬು , ನಗರಿ , ದೋಲು ಮತ್ತು ಬ್ಯಾಂಡ್ ಸೆಟ್ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ , ಇವು ಪ್ರವಾಸಿಗರ ಮುಂದೆ ಪ್ರದರ್ಶಿಸುವಂತಹದ್ದು. ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ - ವಾದನ - ನರ್ತನ - ಸಾಹಿತ್ಯ ವೈಭವ, ಬೂತಾರಾಧನೆಯ ರಮ್ಯಾದ್ಭುತ ಸೊಗಸು , ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ ,ನಾಗಮಡಲ - ಡಕ್ಕೆಬಲಿಗಳಲ್ಲಿರುವ ನಾಟ್ಯ ,ವಾದನ ಮತ್ತು ಬಣ್ಣ ಹೀಗೆ ಬಣ್ಣದ ಬಣ್ಣನೆಗೆ ಬದಲಿಲ್ಲದ ಗಮನ ಸೆಳೆಯುವ ಆರಾಧನಾರಂಗಕಲೆಗಳು , ರಂಗಕಲೆಗಳು ನಮ್ಮಲಿವೆ . ಆಹಾರದ ವಿವಿಧತೆ ನಮ್ಮಲಿವೆ , ಅವುಗಳು ಅದರದ್ದೆ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿವೆ . ಕಡಲಿನಿಂದ ದೊರೆಯುವ ಫ್ರೆಶ್ ,ಶುದ್ದ ಮೀನು ಕರಾವಳಿಯ ವಿಶೇಷ .ಈ ಆಹಾರ ವೈವಿಧ್ಯವನ್ನು ಪ್ರವಾಸಿಗಳನ್ನು ಕರೆದೊಯ್ಯುವಲ್ಲಿ ಸುಲಭ ಲಭ್ಯವಾಗುವಂತೆ ಒದಗಿಸಬಹುದು .
ಕರಾವಳಿಯ ಉತ್ಪನ್ನಗಳು : ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳನ್ನು ಈ ಸಂದರ್ಭಗಳಲ್ಲಿ ಪ್ರದರ್ಶಿಸಿ ವ್ಯವಹಾರವನ್ನು ನಡೆಸುವ ಸಾಧ್ಯತೆಗಳಿವೆ . ಕೈಮಗ್ಗದ ಬಟ್ಟೆಗಳು , ಜಾನಪದ ಸೊಗಸುಳ್ಳ ಚಿನ್ನ - ಬೆಳ್ಳಿಯ ಆಭರಣಗಳು , ದೈವ ದೇವರ ಮುಖ , ಮೂರ್ತಿ, ಆಭರಣಗಳು , ಪಂಚಲೋಹ - ಕಂಚಿನ ಮೂರ್ತಿಗಳು ,ಪಾತ್ರೆಗಳು ಕಬ್ಬಿಣದ ಚೂರಿ ,ಕತ್ತಿ , ಕೊಡಲಿ , ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ , ಸೇರು , ಪಾವು , ಕಳಸೆ ,ಕಡೆಗೋಲು , ಮಣೆ , ಮೆಟ್ಟುಕತ್ತಿ ,ಹೆರೆಮಣೆ ಹಾಗೂ ಕರಾವಳಿಯ ಸೊಗಡಿನ ಪೀಠೋಪಕರಣಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡ ಬಹುದು . ಪ್ರಕೃತಿ ಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ ,ಗೆರಸೆ , ಬುಟ್ಟಿ, ಹುರಿಹಗ್ಗ , ನಾರಿನಹಗ್ಗ , ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ , ಜಾತ್ರೆಗಳಲ್ಲಿ ,ಕೋಲ- ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು . ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತಾಗುವುದಿಲ್ಲವೇ?. ಸಾಂಸ್ಕೃತಿಕ ಭವ್ಯತೆ : ಹೀಗೆ ವಿವಿಧ ಲಭ್ಯ ಆಕರಗಳನ್ನು ಬಳಸಿಕೊಂಡು ಪ್ರವಾಸಿಗಳನ್ನು ಆಕರ್ಷಿಸಬಹುದು .ನಮ್ಮದೆನ್ನುವ ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು , ವಿವರಿಸಬೇಕು , ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು . [ಉಭಯ ಜಿಲ್ಲೆಗಳಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು , ಆಸ್ಪತ್ರೆಗಳು ದೇಶದಲ್ಲಿ ಮಾದರಿ. ಇಂತಹವುಗಳ ಕುರಿತು ಅಧ್ಯಯನ ಅವಕಾಶವಿದೆ . ಈ ನೆವನವೂ ಪ್ರವಾಸೋದ್ಯಮವಾಗಬಹುದು. ಬ್ಯಾಂಕಿಂಗ್ ಸಹಿತ ಹಲವು ಉದ್ಯಮಗಳು ಬೆಳೆದು ನಿಂತಿವೆ.] ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು . ಇತಿಹಾಸವನ್ನು ತಿರುಚಬಾರದು .ಈ ಧಾರ್ಮಿಕ , ಐತಿಹಾಸಿಕ , ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿಸಬೇಕು . ವರ್ಣ, ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ , ಪ್ರಚುರಪಡಿಸುವ , ಅಳವಡಿಸಿಕೊಳ್ಳುವ ವಿಶಾಲಮನೋಭಾವ ಅಗತ್ಯವಿದೆ. ಪ್ರವಾಸೋದ್ಯಮ ವಿಶಾಲವಾಗಿ ಹರಡಿಕೊಳ್ಳಬೇಕಿದೆ . ಬರಹ : ಕೆ. ಎಲ್.ಕುಂಡಂತಾಯ.
ಸೈಬ್ರಕಟ್ಟೆ : ವಿಶ್ವ ಔಷಧಿಕಾರರ ದಿನಾಚರಣೆಯ ಅಂಗವಾಗಿ ಫಾರ್ಮಸಿಸ್ಟ್ ಸತೀಶ್ ಶೆಟ್ಟಿಗೆ ಸನ್ಮಾನ

Posted On: 26-09-2021 11:18AM
ಉಡುಪಿ : ವಿಶ್ವ ಔಷಧಿಕಾರರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಸರಕಾರಿ ಆಸ್ಪತ್ರೆ ಸೈಬ್ರಕಟ್ಟೆಯ ಫಾರ್ಮಸಿಸ್ಟ್ ಸತೀಶ್ ಶೆಟ್ಟಿ ಇವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಯು. ಪ್ರಸಾದ್ ಭಟ್ , ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್, ರಾಮ್ ಪ್ರಕಾಶ್ , ಕಿರಣ್, ನೀಲಕಂಠ ರಾವ್ , ಇಶ್ರಿಮುಡಿ ರಾಜು, ರವೀಂದ್ರನಾಥ್ ಕಿಣಿ , ಪ್ರಶಾಂತ್ ಜೋಗಿ, ಪೂಜಾರಿ ಗಣೇಶ್ ನಾಯಕ್ ಮತ್ತು ರೋಟರಿ ಸಮುದಾಯ ದಳದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಕಲ್ಬೆಟ್ಟು ಉಪಸ್ಥಿತರಿದ್ದರು.
ಪಾಲಿಟೆಕ್ನಿಕ್ ಶಿಕ್ಷಣದಿಂದ ಖಚಿತ ಉದ್ಯೋಗ : ಸಚಿವ ಡಾ. ಅಶ್ವಥ್ ನಾರಾಯಣ್

Posted On: 26-09-2021 11:10AM
ಕಾಪು : ಪಾಲಿಟೆಕ್ನಿಕ್ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಖಚಿತವಾಗಿ ಉದ್ಯೋಗ ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸೇರ್ಪಡೆಗೊಂಡು ಅದರ ಪ್ರಯೋಜನ ಪಡೆಯುವಂತೆ , ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ & ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದರು. ಅವರು ಇಂದು ಬೆಳಪುನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 21 ನೇ ಶತಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಕೋರ್ಸ್ ಗಳನ್ನು ಅಳವಡಿಸಿಕೊಂಡಿದ್ದು ,ಈ ಕೋಸ್೯ಗಳನ್ನು ಅಳವಡಿಸಿಕೊಳ್ಳುವ ಮೊದಲು ವಿವಿಧ ಪ್ರಸಿದ್ದ ಕೈಗಾರಿಕೆಗಳ ಮುಖ್ಯಸ್ಥರು ಮತ್ತು ಕೈಗಾರಿಕಾ ತಂತ್ರಜ್ಞರೊಂದಿಗೆ ಚರ್ಚಿಸಿ , ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆಗೆ ಅಗತ್ಯವಿರುವ ಕೋಸ್೯ಗಳನ್ನು ಮಾರ್ಪಡಿಸಿ, ಮರು ಸಿದ್ದಪಡಿಸಿದ್ದು, ದೇಶದಲ್ಲಿ ಈ ರೀತಿ ಇಡೀ ಪಠ್ಯವನ್ನು ಮಾರ್ಪಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್ ಮಾದರಿಯಲ್ಲಿ ಪಾಲಿಟೆಕ್ನಿಕ್ ಶಿಕ್ಷಣವನ್ನು ಸಿದ್ದಪಡಿಸಿದ್ದು,ಒಂದು ವರ್ಷ, 2 ವರ್ಷ ಮತ್ತು 3 ವರ್ಷ ಅಭ್ಯಾಸ ಮಾಡುವವರಿಗೆ ಅಗತ್ಯವಿರುವ ಶಿಕ್ಷಣವನ್ನು ರೂಪಿಸಿದ್ದು,ಇದು ಅಂತಾರಾಜ್ಯ ಮತ್ತು ದೇಶದ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಿದೆ ಎಂದರು. ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಿಸಲು , ಕಾಂಪ್ರೆಂನ್ಸಿವ್ ಲರ್ನಿಂಗ್ ಮ್ಯಾನೇಜ್ ಮೆಂಟ್ ಸಿಸ್ಟಂ, ಎಲ್ಲಾ ಕ್ಸಾಸ್ ರೂಮ್ ಗಳಿಗೆ ಇಂಟರ್ನೆಟ್ ಎನೇಬಲ್ ಸ್ಮಾಟ್ ಕ್ಲಾಸ್ ಹಾಗೂ ವಿದ್ಯಾರ್ಥಿಗಳಿಗೆ ಟ್ಯಾಬ್ ನ ನೀಡುವ ಮೂಲಕ , ಕಲಿಕೆಯಲ್ಲಿ ಸಂಪೂರ್ಣ ಡಿಜಿಟಲೈಸೇಶನ್ ಮಾಡಲಾಗುವುದು ಎಂದರು. ಬೆಳಪು ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಜ್ಞಾನ ಕೇಂದ್ರವನ್ನು 2022 ರ ಮಾರ್ಚ್ ನಲ್ಲಿ ಉದ್ಘಾಟಿಸಲಾಗುವುದು ಹಾಗೂ ಇಲ್ಲಿ ಸ್ನಾತಕೋತ್ತರ ವಿಜ್ಞಾನ ಕೇಂದ್ರ ಕೂಡಾ ಪ್ರಾರಂಭವಾಗಲಿದೆ ಎಂದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬಹು ಬೇಡಿಕೆ ಇರುವ ಕೋರ್ಸ್ಗಳಿಗೆ ಮಾತ್ರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಅಂತಹ ಕೋಸ್೯ಗಳನ್ನೇ ಕಾಪು ಪಾಲಿಟೆಕ್ನಿಕ್ ನಲ್ಲಿ ಆರಂಭಿಸಲಾಗಿದೆ, ನೂತನ ಶಿಕ್ಷಣ ನೀತಿಯಂತೆ ಆಯಾ ಭಾಗಗಳಿಗೆ ಅಗತ್ಯವಿರುವ ಶಿಕ್ಷಣವನ್ನು ನೀಡಲು ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ ಎಂದರು. ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಪಾಲಿಟೆಕ್ನಿಕ್ ಕಾಲೇಜಿಗೆ ಅಗತ್ಯವಿರುವ ಇನ್ನಿತರ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು, ಬೆಳಪು ನಲ್ಲಿ ವಿಜ್ಞಾನ ಕೇಂದ್ರ ಕೂಡಾ ಶೀಘ್ರದಲ್ಲಿ ಆರಂಭಗೊಳ್ಳಿದ್ದು, ಬೆಳಪು ಶಿಕ್ಷಣ ಕ್ಷೇತ್ರದ ಸಮೂಹ ಕೇಂದ್ರವಾಗಲಿದೆ , ವಿದ್ಯಾರ್ಥಿಗಳು ಇದರ ಪ್ರಯೋಜನಗಳನ್ನು ಪಡೆಯಬೇಕು ಎಂದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಬಿ. ಭಟ್, ನಿವೃತ್ತ ಪ್ರಾಂಶುಪಾಲ ಗಣಪತಿ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಪಾಲಿಟೆಕ್ನಿಕ್ ನ ವಿಶೇಷಾಧಿಕಾರಿ ಮಂಜುನಾಥ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದ ತಹಸೀಲ್ದಾರ್

Posted On: 25-09-2021 10:53AM
ಕಾಪು : ಇಲ್ಲಿನ ತಹಸೀಲ್ದಾರ್ ಪ್ರದೀಪ್ ಎಸ್.ಕುರುಡೇಕರ್ ಅವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಭರದಿಂದ ಸಾಗುತ್ತಿರುವ ದೇವಳದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಸಿಬ್ಬಂದಿ ಗೋವರ್ಧನ್ ಸೇರಿಗಾರ್, ಲಕ್ಷ್ಮಣ್ ಶೆಟ್ಟಿ ಮಂಡೇಡಿ, ಸಂತೋಷ್ ಶೆಟ್ಟಿ ಕಳತ್ತೂರು ಹಾಗೂ ಬಾಲಕೃಷ್ಣ (ಬಾಲು) ಉಪಸ್ಥಿತರಿದ್ದರು.
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಎರಡನೇ ಡೋಸ್ ಲಸಿಕಾ ಅಭಿಯಾನ

Posted On: 25-09-2021 10:47AM
ಶಿರ್ವ : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್ಸಿಸಿ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಎರಡನೇ ಡೋಸ್ ಲಸಿಕಾ ಅಭಿಯಾನವನ್ನು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ, ವಿದ್ಯಾರ್ಥಿಗಳಿಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಸೆಪ್ಟೆಂಬರ್ 21ರಿಂದ ಆಯೋಜಿಸಲಾಯಿತು.

ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗೆ ಕೋವಿಡ್ -19 ಲಸಿಕಾಕರಣ ನಡೆಸಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಕಾಲೇಜಿನ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಥಮ ಡೋಸ್ ಪಡೆದ ಅರ್ಹ ಫಲಾನುಭವಿಗಳಿಗೆ ಲಸಿಕೆಗಳ ಲಭ್ಯತೆಗೆ ಅನುಸಾರವಾಗಿ ಕಾಲೇಜು ಆವರಣದಲ್ಲಿಯೇ ಲಸಿಕಾಕರಣಅಭಿಯಾನ ಆಯೋಜಿಸಲಾಯಿತು, ಕಾಲೇಜು ಆಡಳಿತ ವ್ಯವಸ್ಥೆಯ ಸಹಕಾರದಿಂದ ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸಿಕೊಂಡು ಲಸಿಕೆ ವಿತರಿಸಲಾಗುತ್ತಿದೆ ಎಂದು ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಹಾಗೂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶಿರ್ವ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಗಾಯತ್ರಿರವರು ಜಿಲ್ಲಾಡಳಿತದ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಕಾಲೇಜುಗಳ ಮೂಲಕ ಲಸಿಕೆ ನೀಡಲಾಗುತ್ತಿದೆ, ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಈ ಅಭಿಯಾನಕ್ಕೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಕಲ್ಪನಾ, ಶಶಿ , ಗೀತಾ, ಸಂಜಯ್, ಲ್ಯಾಬ್ ಟೆಕ್ನಿಷಿಯನ್ ಶೃತಿ, ಕಿರಣ್, ಡೇಟಾ ಎಂಟ್ರಿ ಆಪರೇಟರ್ ವಿದ್ಯಾ ಮಹೇಶ್ ಹಾಗೂ ಆಶಾ ಕಾರ್ಯಕರ್ತರಾದ ಸವಿತಾ, ರೆಹೆಮತ್ ರವರು ಸಹಕರಿಸಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯ - ಬೀಳ್ಕೊಡುಗೆ ಸಮಾರಂಭ

Posted On: 25-09-2021 10:37AM
ಶಿರ್ವ: ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯವಾದ ಶಿಕ್ಷಣವೆಂದರೆ ಅದು ಪದವಿ ಶಿಕ್ಷಣ ವಾಗಿರುತ್ತದೆ. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳಲು ಕಾಲೇಜು ಶಿಕ್ಷಣದಲ್ಲಿ ಅನೇಕ ಅವಕಾಶಗಳಿವೆ. ಆಟ-ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕಾಗಿರುವುದು ಇಂದು ಅಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಗುರುಹಿರಿಯರ ಮಾರ್ಗದರ್ಶನವನ್ನು ಪಡೆದು ಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರು ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಅವರು ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಮುರಳಿ ರವರು ಸಂದರ್ಭೋಚಿತವಾಗಿ ಮಾತನಾಡಿದರು.
ಅಂತಿಮ ಪದವಿ ವಿದ್ಯಾರ್ಥಿಗಳಾದ ಲಿಖಿತ ಶೆಟ್ಟಿ, ಜೋಸಿಟಾ ಮೆಂಡೋನ್ಸಾ, ಕಾರ್ತಿಕ್ ರಾವ್, ಅಭಿಷೇಕ್, ಡಿಲ್ಸನ್ ನಿಜಾರ್,ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧೀಕ್ಷಕಿ ಡೊರಿನ್ ಡಿ'ಸಿಲ್ವ, , ವಿದ್ಯಾರ್ಥಿ ನಾಯಕರಾದ ದಾಕ್ಷಾಯಿಣಿ, ಮುಭಾಶಿ, ಎಲ್ಲ ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ಪೂಜಾರಿ ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕ ಮೆಲ್ವಿನ ಕ್ಯಾಸ್ಟಲಿನೋ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದಾ ವಂದಿಸಿದರು.