Updated News From Kaup

ಡಿಸೆಂಬರ್ 4 : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೆರಂಪಳ್ಳಿ - ವಾರ್ಷಿಕ ದೀಪೋತ್ಸವ, ಭಜನಾ ಕಾರ್ಯಕ್ರಮ, ತುಳಸಿ ಸಂಕೀರ್ತನೆ

Thumbnail
Posted On: 29 Nov 2021, 06:50 PM

ಉಡುಪಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೆರಂಪಳ್ಳಿಯ ವಾರ್ಷಿಕ ದೀಪೋತ್ಸವ ಡಿಸೆಂಬರ್ 4, ಶನಿವಾರದಂದು ಜರಗಲಿದೆ. ಬೆಳಗ್ಗೆ ದೇವರಿಗೆ ಏಕಾದಶ ರುದ್ರಾಭಿಷೇಕ ತದನಂತರ ಮಹಾಪೂಜೆ ಹಾಗೂ ಸಂಜೆ 6 ರಿಂದ 7 ತನಕ ಶ್ರೀ ಮಾತಾ ಭಜನಾ ಮಂಡಳಿ ಪೆರಂಪಳ್ಳಿ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 7 ರಿಂದ ದೀಪಾರಾಧನೆ ಮತ್ತು ಕರಂಬಳ್ಳಿ ವಿಪ್ರ ಮಹಿಳಾ ಮಂಡಳಿಯವರಿಂದ ತುಳಸಿ ಸಂಕೀರ್ತನೆ ತದನಂತರ ರಂಗಪೂಜೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿಗಳಾದ ಪಿ.ಎನ್ ಪ್ರಸನ್ನ ಕುಮಾರ್ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಯುವಜನರ ಆರೋಗ್ಯಪೂರ್ಣ ಮನಸ್ಸಿಗಾಗಿ ಯೋಗ - ಇದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮಂತ್ರ - ಡಾ| ಹೆರಾಲ್ಡ್ ಐವನ್ ಮೋನಿಸ್

Thumbnail
Posted On: 29 Nov 2021, 06:36 PM

ಶಿರ್ವ: ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ರಂಜಿತ್ ಪುನರ್ ರವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು. ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶವು ಆರೋಗ್ಯಯುತ ಯುವಜನರನ್ನು ರೂಪಿಸಲು ಯೋಗ ಮತ್ತು ಕ್ರೀಡಾ ಕಡ್ಡಾಯವಾಗಿ ಶಿಕ್ಷಣದಲ್ಲಿ ಭಾಗವಾಗಿದೆ. ಈ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಪಡೆದು ಮುಂದೆ ಇತರರಿಗೆ ಮಾದರಿಯಾಗಿ ಸಮಾಜಸೇವೆಯನ್ನು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಗುರುಗಳಾದ ಅನಂತ ರಾಯ ಶೆಣೈ , ಕಾಲೇಜಿನ ವಿದ್ಯಾರ್ಥಿ ಸಂಘದ ನಿರ್ದೇಶಕಿ ಯಶೋಧ , ಹಿರಿಯ ಉಪನ್ಯಾಸಕ ವಿಠಲ್ ನಾಯಕ್, ಯೋಗ ಮತ್ತು ಫಿಟ್ನೆಸ್ ಸೆಲ್ ನಿರ್ದೇಶಕ ಜೆಫ್ ಸನ್ನಿ ಡಿಸೋಜಾ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಅಣ್ಣಯ್ಯ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದೀಪ್ತಿ ಮತ್ತು ಬಳಗ ಪ್ರಾರ್ಥಿಸಿ, ಚಂದನ ಸ್ವಾಗತಿಸಿ, ಹರ್ಷಿತ ಕಾರ್ಯಕ್ರಮ ನಿರೂಪಿಸಿ, ಶ್ರಾವ್ಯ ವಂದಿಸಿದರು.

ಬಂಟಕಲ್‍ನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ, ವಿವಿಧ ಸಾಧಕರಿಗೆ ಸನ್ಮಾನ

Thumbnail
Posted On: 28 Nov 2021, 11:54 AM

ಕಾಪು : ನಮ್ಮ ನಾಡಿನ ಪುರಾತನ ಸಾಂಪ್ರದಾಯಿಕ ಜನಪದ ಸೊಬಗು ಇಂದಿನ ಯುವಪೀಳಿಗೆಗೆ ಕಟ್ಟುಕತೆಯಂತೆ ಭಾಸವಾಗಬಹುದು. ಆದರೆ ಜಾನಪದ ಎಂಬುದು ವಾಸ್ತವ ಸತ್ಯವಾಗಿದೆ. ಕುದುರೆ ರೇಸ್‍ನಂತಹ ಜೂಜಾಟವನ್ನು ನಿಲ್ಲಿಸದೆ ಜನರ ಮನೋರಂಜನಾ ಜಾನಪದ ಕ್ರೀಡೆಗಳಾದ ಕೋಳಿಅಂಕ, ಕಂಬಳದಂತಹ ಕ್ರೀಡೆಗಳನ್ನು ನಿರ್ಬಂಧಿಸಲು ಪ್ರಯತ್ನ ಪಡುವುದು ದುರಂತವಾಗಿದೆ. ಇದಕ್ಕೆ ಜಾನಪದ ಪರಿಷತ್ ನಂತಹ ಸಂಘಟನೆಗಳು ಸರಕಾರವನ್ನು ಪ್ರಶ್ನಿಸಬೇಕಾಗಿದೆ ಎಂದು ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದ್ದಾರೆ. ಅವರು ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕ ಮತ್ತು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಜಾನಪದ ರಾಜ್ಯೋತ್ಸವ-2021 ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಸಾಧಕರನ್ನು ಗೌರವಿಸಿ ಮಾತನಾಡಿದರು. ಪ್ರಸ್ತುತ ಜಾನಪದದ ಬಗ್ಗೆ ಮಕ್ಕಳಿಗೆ ತಿಳಿಸುವ ಅನಿವಾರ್ಯತೆಯಿದೆ. ಅದರ ಆಳ, ಅರಿವಿನ ಸಂಶೋಧನೆಗಳಾಗಬೇಕಾಗಿದ್ದು,ಜಾನಪದ ದಾಖಲೀಕರಣ ಪ್ರಕ್ರಿಯೆಗಳಿಗೆ ನಮ್ಮ ಸಂಸ್ಥೆ ಸದಾ ಪ್ರೋತ್ಸಾಹಿಸಲಿದೆ ಎಂದರು. ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದದ ವಸ್ತು ವಿಷಯಗಳ ಬಗ್ಗೆ ದಾಖಲೀಕರಣವಾಗಬೇಕು. ಅದರ ಮೂಲಕ ಮತ್ತಷ್ಟು ತಿಳುವಳಿಕೆಯನ್ನು ಜನರಿಗೆ ಮೂಡಿಸಲು ಸಾಧ್ಯವಾಗಬಹುದು ಎಂದರು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಕುಮಾರ್ ಗಂಗೊಳ್ಳಿ ಮಾತನಾಡಿ, ಹಳ್ಳಿಗಳಲ್ಲಿ ಜಾನಪದಗಳು ಜನರ ದಿನನಿತ್ಯದ ಬದುಕಾಗಿದೆ. ಬೆಳಗಿನ ರಂಗೋಲಿಯಿಂದ, ತಾವು ಮಾಡುವ ಕೆಲಸಗಳ ದಣಿವಾರಿಸಲು ಜನಪದ ಸಾಹಿತ್ಯವನ್ನು ಅವರು ಬಳಸುವುದು ಜಾನಪದದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದರು. ಇದೇ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ, ಚಾಣಕ್ಯ ಪ್ರಶಸ್ತಿ ವಿಜೇತ ಮಾಸ್ಟರ್ ಯಶಸ್ ಪಿ. ಸುವರ್ಣ, ಡಾ.ಎಸ್.ಪಿ.ಬಿ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಕೆ. ರವಿಶಂಕರ್ ಮಂಗಳೂರು, ಪ್ರಗತಿಪರ ಯುವಕೃಷಿಕ ಸಂತೋಷ್ ಶೆಟ್ಟಿ ಪಂಜಿಮಾರು, ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಗಣೇಶ್ ಕುಮಾರ್ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಭಾರತಿ ಟಿ ಕೆ, ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ, ಕಾರ್ಯದರ್ಶಿ ಭುವನೇಶ್ ಪ್ರಭು ಹಿರೇಬೆಟ್ಟು, ಜತೆಕಾರ್ಯದರ್ಶಿ ಪವಿತ್ರ ಶೆಟ್ಟಿ, ದಯಾನಂದ ದೆಂದೂರುಕಟ್ಟೆ, ದೀಪಕ್ ಬೀರ ಉಪಸ್ಥಿತರಿದ್ದರು. ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತಿಮಾ ಸಾಮಗ ಪ್ರಾರ್ಥಿಸಿದರು. ಚೈತ್ರ, ಸಮೀಕ್ಷ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಬಳಿಕ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಅವರಿಂದ ಕೊಳಲುವಾದನ ಹಾಗೂ ಗಣೇಶ್‍ಕುಮಾರ್ ಗಂಗೊಳ್ಳಿ ಅವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.

ಶಿರ್ವ ಮಹಿಳಾ ಮಂಡಲ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಪಂಜಿಮಾರ್ ಗೆ ಸನ್ಮಾನ

Thumbnail
Posted On: 28 Nov 2021, 11:32 AM

ಕಾಪು :ವಿಶೇಷ ಚೇತನ ಪ್ರತಿಭೆ ಗಣೇಶ್ ಪಂಜಿಮಾರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಲುವಾಗಿ ಶನಿವಾರ ಶಿರ್ವ ಮಹಿಳಾ ಮಂಡಲ (ರಿ.) ಇದರ ಸರ್ವ ಪದಾಧಿಕಾರಿಗಳು ಗಣೇಶ್ ಪಂಜಿಮಾರ್ ಅವರ ಮನೆಗೆ ಆಗಮಿಸಿ ಪ್ರೀತಿ ಪೂರ್ವಕವಾಗಿ ಸನ್ಮಾನಿಸಿದರು.

ಜಿಲ್ಲೆಯ ಅಭಿವೃದ್ದಿಯಲ್ಲಿ ಯುವ ಜನತೆಯ ಪಾತ್ರ ಮಹತ್ವವಾದುದು : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 28 Nov 2021, 11:27 AM

ಉಡುಪಿ : ಜಿಲ್ಲೆಯ ಅಭಿವೃದ್ದಿಗೆ ಯುವಜನತೆ ನೀಡುವ ಸಹಕಾರ ಅತ್ಯಂತ ಮಹತ್ವವಾಗಿದ್ದು, ಜಿಲ್ಲೆಯಲ್ಲಿನ ವಿವಿಧ ಯೋಜನೆಗಳ ಪ್ರಗತಿಗೆ ಯುವಜನತೆ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶನಿವಾರ ಉಡುಪಿ ಪುರಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ,ಉಡುಪಿ, ಐಕ್ಯುಎಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಕಾರದೊಂದಿಗೆ ನಡೆದ ,ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಯುವ ಜನತೆ ಇತ್ತೀಚೆಗೆ ನಡೆದ ಫಿಟ್ ಇಂಡಿಯಾ,ಕ್ಲೀನ್ ಇಂಡಿಯಾ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳ ಸಂಪೂರ್ಣ ಯಶಸ್ಸಿಗೆ ಉತ್ತಮ ಸಹಕಾರ ನೀಡಿದ್ದು, ಜಿಲ್ಲಾಡಳಿತ ಕೂಡಾ ಯುವಜನತೆ ನೀಡುವ ಸಲಹೆಗಳನ್ನು ಪರಿಗಣಿಸುತ್ತಿದ್ದು, ಯುವ ಜನತೆಯ ಕೋರಿಕೆ ಮೇರೆಗೆ ಇತ್ತೀಚೆಗೆ ಐ.ಎ.ಎಸ್, ಕೆ.ಎ.ಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಮಾಹಿತಿ ಮತ್ತು ತರಬೇತಿಯನ್ನು ಏರ್ಪಡಿಸಲಾಗಿದೆ. ಸ್ವಚ್ಚತೆ ಕುರಿತಂತೆ ಜಿಲ್ಲೆಯ ಎಲ್ಲಾ ಕಾಲೇಜುಗಳ ಆವರಣ ಗೋಡೆಗಳ ಮೇಲೆ ಉತ್ತಮ ಸಂದೇಶ ಸಾರುವ ಆಕರ್ಷಕ ಚಿತ್ರಣ ಮತ್ತು ಸಂದೇಶಗಳನ್ನು ರಚಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಯುವ ಜನತೆ ತಮ್ಮಲ್ಲಿರುವ ಯುವಶಕ್ತಿ ಮತ್ತು ಪ್ರತಿಭೆಯನ್ನು ಸದ್ಬಳಕೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಸಂಪೂರ್ಣ 2 ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು,ಈಗಾಗಲೇ 93% ಪ್ರಥಮ ಡೋಸ್ ಮತ್ತು 68% ಎರಡನೇ ಡೋಸ್ ಸಾಧನೆ ಆಗಿದ್ದು,100% ಎರಡೂ ಡೋಸ್ ಲಸಿಕೆ ಸಾಧನೆ ಆಗುವ ನಿಟ್ಟಿನಲ್ಲಿ ಯುವ ಜನತೆ ಸಹಕಾರ ಅಗತ್ಯವಾಗಿದ್ದು, ಯುವಜನತೆ ತಮ್ಮ ಮನೆಗಳಲ್ಲಿ ಮತ್ತು ಸಮೀಪದ ಮನೆಗಳಲ್ಲಿ ಕೋವಿಡ್ ಲಸಿಕೆ ಪಡೆಯದವರಿಗೆ ಲಸಿಕೆ ಪಡೆಯುವ ಕುರಿತಂತೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರೇರೆಪಿಸಬೇಕು ಆ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಯುವ ಜನತೆಯಲ್ಲಿನ ವ್ಯಕ್ತಿತ್ವ ಮತ್ತು ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಇದರಿಂದ ಯುವ ಜನತೆಯ ವ್ಯಕ್ತಿತ್ವ ವಿಕಸನ ಕೂಡಾ ಆಗಲಿದೆ. ದೇಶದಲ್ಲಿ ಯುವ ಸಂಪತ್ತು ಅತ್ಯಧಿಕವಾಗಿದ್ದು ಇದರ ಸದ್ಬಳಕೆ ಆಗಬೇಕು, ಯುವಕರು ಎಲ್ಲಾ ಕಾರ್ಯಕ್ರಮಗಳ ರಾಯಭಾರಿಗಳಾಗಬೇಕು ,ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುತ್ತಮ ನಾಯಕರು ಯುವ ಸಮುದಾಯದಿಂದ ಮೂಡಿಬರಬೇಕು ಎಂದರು. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಾಣಿ ಬಲ್ಲಾಳ್, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ರಾಜೇಂದ್ರ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ತ್ರಿವೇಣಿ ನಿರೂಪಿಸಿದರು. ಯುವಜನೋತ್ಸವದಲ್ಲಿ, ಜಾನಪದ ನೃತ್ಯ, ಜಾನಪದ ಹಾಡು, ಏಕಪಾತ್ರಾ ಅಭಿನಯ,ಶಾಸ್ತ್ರೀಯ ಸಂಗೀತ, ,ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದ್ಯ, ಹಾರ್ಮೋನಿಯಂ, ಗಿಟಾರ್, ಆಶು ಭಾಷಣ ಮುಂತಾದ ಸ್ಪರ್ಧೆಗಳನ್ನು 3 ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗಿತ್ತು.

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 73ನೇ ಎನ್.ಸಿ.ಸಿ ದಿನಾಚರಣೆ

Thumbnail
Posted On: 28 Nov 2021, 11:16 AM

ಶಿರ್ವ: ಇಂದು ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸಮಯ ಪ್ರಜ್ಞೆ ಮೂಡಿಸುವ ಸಂಘಟನೆಗಳಲ್ಲಿ ವಿಶ್ವದ ಅತಿ ದೊಡ್ಡ ಯುವ ಸಂಘಟನೆಯಾದ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್.ಸಿ.ಸಿ) ಒಂದಾಗಿದೆ. ಯುವಜನರಲ್ಲಿ ರಾಷ್ಟ್ರಪ್ರೇಮ,ಸಮಾಜ ಸೇವಾಗುಣಗಳನ್ನು, ತಮ್ಮ ವ್ಯಕ್ತಿತ್ವ ವಿಕಸನ,ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಾತ್ರವಲ್ಲದೆ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಎನ್.ಸಿ.ಸಿ ಸಹಕಾರಿ. ಇಂದು ಬಹಳಷ್ಟು ಪ್ರಮುಖರು ಎನ್.ಸಿ.ಸಿಯ ಹಳೆವಿದ್ಯಾರ್ಥಿಗಳು ಆಗಿರುವುದು ಗಮನಾರ್ಹ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಭೂ ಯುವ ಸೇನಾ ದಳದಿಂದ ಏರ್ಪಡಿಸಿದ 73ನೇ ಎನ್.ಸಿ.ಸಿಯ ದಿನಾಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂದು, ತಮ್ಮ ಪ್ರಾಣದ ಪರಮ ತ್ಯಾಗ ಮಾಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ದಿನವನ್ನು ಪ್ರತಿವರ್ಷ ನವೆಂಬರ್ ನಾಲ್ಕನೇ ಭಾನುವಾರದಂದು ಗುರುತಿಸಲಾಯಿತು ಎಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಡೆಟ್ ಎಲ್ರುಷಾ ಮಿಲಿನಾ ಡೇಸ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ತರಬೇತಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕ್ಯಾಡೆಟ್ ಗಳಾದ ಧೀರಜ್ ಆಚಾರ್ಯ, ದೀಪಕ್, ಮೋಹಿತ್ ಸಾಲಿಯನ್, ಜನಿಸಿಯಾ ನೊರೊನ್ಹಾ, ರಿಯಾ ಸೆರೆನಾ ಡಿಸೋಜಾ, ರತನ್ ಕುಮಾರ್ ಕೋಟ್ಯಾನ್, ಆಶಿಶ್ ಪ್ರಸಾದ್ ಇವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಈ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು ಮತ್ತು ಬಹುಮಾನವನ್ನು ವಿಜೇತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕಿ ಯಶೋದ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ, ಎಲ್ಲಾ ಕ್ಯಾಡೆಟ್ ಗಳು ಉಪಸ್ಥಿತರಿದ್ದರು. ಕ್ಯಾಡೆಟ್ ಸನ ಅತಿಯ ಬಹುಮಾನ ಪಟ್ಟಿಯನ್ನು ವಾಚಿಸಿದರು ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಎಲ್ಲರನ್ನು ಸ್ವಾಗತಿಸಿ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ ವಂದಿಸಿ,ಕ್ಯಾಡೆಟ್ ಲೋಬೋ ರಿಯಾ ಆನ್ ನೆವಿಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.

ಪಡುಬೆಳ್ಳೆ : ಶ್ರೀ ನಾರಾಯಣಗುರು ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸೈಬರ್ ಜಾಗೃತ ದಿವಸ್ ಕಾರ್ಯಕ್ರಮ

Thumbnail
Posted On: 28 Nov 2021, 11:09 AM

ಕಟಪಾಡಿ : ಶ್ರೀ ನಾರಾಯಣಗುರು ಪ್ರೌಢಶಾಲೆ ಪಡುಬೆಳ್ಳೆ ಇಲ್ಲಿ ಲಯನ್ಸ್ ಕ್ಲಬ್ ಬಂಟಕಲ್ ಬಿಸಿರೋಡ್ ಮತ್ತು ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಇವರ ಸಂಯುಕ್ತಾಶ್ರಯದಲ್ಲಿ ಸೈಬರ್ ಜಾಗೃತ ದಿವಸ್ ಕಾರ್ಯಕ್ರಮ ಜರಗಿತು. ಶಿರ್ವ ಠಾಣಾಧಿಕಾರಿ ಶ್ರೀಶೈಲ ಮುಂಡಗೋಡ ಇವರು ಆಗಮಿಸಿ ಸೈಬರ್ ಅಪರಾಧಗಳ ಬಗ್ಗೆ ಜಾಗ್ರತೆ ಮತ್ತು ಅಂತರ್ಜಾಲದ ಬಳಕೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಯ ಕುರಿತು ಮಾಹಿತಿಯನ್ನು ನೀಡಿದರು. ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಬಟ್ಟೆ ಚೀಲ ತಯಾರಿಕೆ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಿ ಮುಂದೆ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವ ರೀತಿಯಲ್ಲಿ ಎದುರಿಸಬೇಕು ಹಾಗೂ ಮಕ್ಕಳು ತಮ್ಮ ಶಾಲಾ ಶಿಕ್ಷಣದ ಹಂತದಲ್ಲಿ ಇದರ ಕುರಿತು ತಯಾರಿ ನಡೆಸಬೇಕಾದ ಅವಶ್ಯಕತೆ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿರ್ವ ಪಂಚಾಯತ್ ಅಧ್ಯಕ್ಷರು ಕೆ ಆರ್ ಪಾಟ್ಕರ್, ಅನಿತಾ ಮೆಂಡೊನ್ಸಾ, ಐರಿನ್ ಡಿಸೋಜ, ಸುನಿತಾ ಮೆನೇಜಸ್, ವೆಲೇರಿಯನ್, ರೋನಿ ಕ್ವಾಡ್ರಸ್, ವಿಲ್ಫ್ರೆಡ್ ಪಿಂಟೋ, ಹಾಗೂ ಶಾಲಾ ಹಳೆ ವಿದ್ಯಾರ್ಥಿ ವಿಜಯ್ ಧೀರಜ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಡ್ವರ್ಡ್ ಮಿನೇಜಸ್, ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಅಧ್ಯಕ್ಷೆ ಮೇಬಲ್ ಮಿನೇಜಸ್ ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕಿ ಗೀತಾ ಪಿ ಇವರು ಸೈಬರ್ ಜಾಗೃತಿಯ ಘೋಷಣೆಗಳನ್ನು ಓದಿದರು. ಮುಖ್ಯಶಿಕ್ಷಕಿ ಉಷಾ ಎಸ್ ಸ್ವಾಗತಿಸಿ, ಶಿಕ್ಷಕ ಪಾಂಡುರಂಗ ಮಲ್ಯ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ದುರ್ಗ್ಯ ನಾಯ್ಕ್ ವಂದಿಸಿದರು.

ಕಲ್ಲುಗುಡ್ಡೆ : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನದಲ್ಲಿ ದೀಪಸಂಭ್ರಮ, ಭಜನೆ ಸಂಪನ್ನ

Thumbnail
Posted On: 28 Nov 2021, 10:56 AM

ಕಾಪು : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನ ಕುಂಜ ಕಲ್ಲುಗುಡ್ಡೆ ಕ್ಷೇತ್ರದಲ್ಲಿ ನ.26 ಶುಕ್ರವಾರ ದೀಪಸಂಭ್ರಮ ಮತ್ತು ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಸಂದರ್ಭ ಸಾರ್ವಜನಿಕರು ದೀಪ ಬೆಳಗಿ ಅಶ್ವಥನಾರಾಯಣ ಒಡಗೂಡಿ ಪಂಚದೈವಾದಿ ನಾಗಬ್ರಹ್ಮನಲ್ಲಿ ಪ್ರಾರ್ಥಿಸಿದರು. ಪಂಚಮಿ ಭಜನಾ ಮಂಡಳಿ ಕಲ್ಲುಗುಡ್ಡೆ ಮತ್ತು ಶ್ರೀ ರಾಘವೇಂದ್ರ ಭಜನಾ ಮಂಡಳಿ ಹೇರೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಡಿಸೆಂಬರ್ 1 : ಕಳತ್ತೂರು ಪುಂಚಲಕಾಡು ಚಚ್೯ಗೆ ಸುವರ್ಣ ಮಹೋತ್ಸವದ ಸಂಭ್ರಮ

Thumbnail
Posted On: 26 Nov 2021, 10:59 PM

ಕಾಪು :ಕುತ್ಯಾರು ಭಾಗದ ಕಳತ್ತೂರು ಚರ್ಚ್ ಐವತ್ತನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು ಡಿಸೆಂಬರ್ ತಿಂಗಳ ಒಂದರಂದು ಚರ್ಚ್ನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಗಣ್ಯರು ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಲಾಲ ಚಾವಡಿಯಿಂದ ಧನ ಸಹಾಯ

Thumbnail
Posted On: 26 Nov 2021, 10:48 PM

ಕಾಪು : ಕೈ ಹಿಡಿದ ಪತಿಯಿಂದ ಪರಿತ್ಯಕ್ತರಾಗಿ ತವರು ಮನೆ ಸೇರಿದ್ದ ಸುನೀತಾರ ಬದುಕಿಗೆ ಕಾಡಿದ ಹೃದ್ರೋಗದ ಖಾಯಿಲೆಯು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ದೈಹಿಕ ಮಾನಸಿಕ ನೋವನ್ನು ಅವುಡುಗಚ್ಚಿ ಸಹಿಸಿಕೊಂಡರೂ ದೇಹಕ್ಕಂಟಿದ ಖಾಯಿಲೆಯ ಚಿಕಿತ್ಸೆಗೆ ತಗಲುವ ವೆಚ್ಚಕ್ಕೇನು ಎಂಬುವುದು ಅವರ ನಿತ್ಯ ಕಾಡುವ ಚಿಂತೆಯಾಗಿತ್ತು. ಅನಾಥೋ ದೈವ ರಕ್ಷಕ ಅನ್ನುವಂತೆ ಆ ಕ್ಷಣಕ್ಕೆ ಅವರಿಗೆ ಕಂಡಿದ್ದು ಕುಲಾಲ ಚಾವಡಿಯ ಸಹೃದಯಿಗಳು. ಹಳಿ ತಪ್ಪಿದ ಬದುಕಿನ ಲಗಾಮು ಒಮ್ಮೆ ಕೈಗೆ ಸಿಕ್ಕರೆ ಮತ್ತೆ ವಿಧಿಯನ್ನಾದರೂ ಜೈಸಿ ಬಿಟ್ಟೇನು ಎನ್ನುವ ಅವರ ದೃಢ ವಿಶ್ವಾಸದ ಹೆಜ್ಜೆಗೆ ಆತ್ಮಬಲ ತುಂಬುವ ಪುಟ್ಟ ಪ್ರಯತ್ನ ಚಾವಡಿ ಬಂಧುಗಳದ್ದು. ಸುನೀತಾರವರ ವಾಸ್ತವ ಬದುಕಿನ ಕಥೆ ವ್ಯಥೆಗಳನ್ನು ಅಕ್ಷರರೂಪಕ್ಕಿಳಿಸಿದಾಗ ಮಿಡಿದ ಮಾನವೀಯ ಹೃದಯಗಳು ಅಗಣಿತ. ಶ್ರೀರಾಮನ ರಾಮಸೇತುವಿಗೆ ಅಳಿಲು ಸಲ್ಲಿಸಿದ ಸೇವೆಯಂತೆ ಶಕ್ತ್ಯಾನುಸಾರ ನನ್ನದೊಂದಿಷ್ಟು ಪಾಲಿರಲಿ ಎನ್ನುವ ಸಹೃದಯಿಗಳ ಸಹಕಾರದ ಪೈಪೋಟಿ ನಮ್ಮ ಚಾವಡಿಯ ಧ್ಯೇಯಕ್ಕೆ ನೂರಾನೆಯ ಬಲ ತುಂಬಿದಂತೆ. ಸಹೃದಯಿ ಚಾವಡಿ ಬಂಧುಗಳ ಸದಾಶಯದ ಹಾರೈಕೆಯು ಆರ್ಥಿಕ ನೆರವಾಗಿ ಒಗ್ಗೂಡಿದ್ದು ₹ 25000/-ಕನಿಕರಿಸುವ ಹೃದಯಗಳ ಅಂತರಾತ್ಮದ ಹಾರೈಕೆಯ ಸಂತ್ರಸ್ತರಿಗೆ ತಲುಪಿಸುವ ಸುಯೋಗ ಕುಲಾಲ ಚಾವಡಿಯದ್ದು. ಫಲಾನುಭವಿಯ ಚಹರೆಯಲ್ಲಿ ಮೂಡಿತ್ತು ಮಂದಹಾಸದ ಕೋಲ್ಮಿಂಚು, ಕೃತಜ್ಞತಾ ಭಾವವು ಆನಂದ ಬಾಷ್ಪವಾಗಿ ತೊಯ್ದಿತ್ತು ಕಣ್ಣಂಚು. ಕುಲಾಲ ಚಾವಡಿಯ ಪುಟ್ಟ ಸತ್ಕಾರ್ಯ ಪಡೆದಿತ್ತು ಸಾರ್ಥೈಕ್ಯದ ಅಂಚು. ಆರ್ಥಿಕ ನೆರವು ಹಸ್ತಾಂತರಕ್ಕೆ ಜೊತೆಗೂಡಿದ ಚಾವಡಿ ಬಂಧುಗಳು ದೇವಪ್ಪ ಕುಲಾಲ್,ವಿಶ್ವನಾಥ ಕುಲಾಲ್,ಹೃದಯ್ ಕುಲಾಲ್,ಸುಧೀರ್ ಬಂಗೇರ,ಸಂದೇಶ್ ಕುಲಾಲ್,ಜ್ಯೋತಿ ಕುಲಾಲ್,ಶಾಲಿನಿ ಕುಲಾಲ್,ಸಂತೋಷ್ ನಾನಿಲ್ತಾರ್ ಹಾಗೂ ಯೋಗೀಶ್ ಕುಲಾಲ್ ಮುಲ್ಲಡ್ಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸಹೃದಯಿ ದಾನಿಗಳಿಗೆ ಕುಲಾಲ ಚಾವಡಿಯ ಅಡ್ಮಿನ್ ಸಂತೋಷ್ ಕುಲಾಲ್ ಪದವು ಕೃತಜ್ಞತೆ ಸಲ್ಲಿಸಿದರು.