Updated News From Kaup
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ-ಬೀಳ್ಕೊಡುಗೆ ಸಮಾರಂಭ
Posted On: 04 Dec 2021, 09:25 PM
ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 36ವರ್ಷ ಅಧಿಕ ಕಾಲ ಕಾಲೇಜಿನ ಕಚೇರಿ ಸಹಾಯಕ ಸಿಬ್ಬಂದಿರಾದ ಶ್ರೀರಂಗರವರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಇಂದು ನೆರವೇರಿತು. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ಜೊತೆಗೆ ಕಚೇರಿ ಸಿಬ್ಬಂದಿ ವರ್ಗದವರು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಕಾಲೇಜಿನ ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದರಲ್ಲಿ ಸಹಾಯಕ ಸಿಬ್ಬಂದಿ ಪಾತ್ರ ಮಹತ್ವದ್ದು. ಶ್ರೀರಂಗರವರು ನಮ್ಮ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ಅವರ ಕಾರ್ಯದಕ್ಷತೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನದಾಳವನ್ನು ಹೊಂದಿದ್ದರು. ಮೃದು ಸ್ವಭಾವಿ ಆಗಿದ್ದ ಶ್ರೀರಂಗರವರ ಎಲ್ಲರ ಜೊತೆಗೆ ಬಾಳಿ ತಮ್ಮ ಎಲ್ಲಾ ಸಹಕಾರವನ್ನು ನೀಡುತ್ತಿದ್ದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸ ರವರು ಮಾತನಾಡಿ ಶುಭ ಹಾರೈಸಿದರು. ಕಚೇರಿ ಸಿಬ್ಬಂದಿಯಾದ ಲಾರೆನ್ಸ್ ಡಿಸೋಜರವರು ಸನ್ಮಾನ ಪತ್ರವನ್ನು ವಾಚಿಸಿದರು. ಕಚೇರಿ ಸಿಬ್ಬಂದಿಯಾದ ರಿಚಡ್೯ರವರು ಮಾತನಾಡಿದರು, ಅಧ್ಯಾಪಕ ವೃಂದದ ವತಿಯಿಂದ ಹಿರಿಯ ಉಪನ್ಯಾಸಕ ವಿಟ್ಟಲ್ ನಾಯಕರವರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧೀಕ್ಷಕಿ ಡೋರಿನ್ ಡಿಸಿಲ್ವಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಯಶೋಧ, ಸ್ಟಾಫ್ ಸೆಕ್ರೆಟರಿ ರೀಮಾ ಲೋಬೋ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಅಮಿತಾ, ಆಡಳಿತ ಮಂಡಳಿಯ ಸದಸ್ಯೆ ಲೀನಾ ಮಚ್ಚಾದೋ , ನಿವೃತ್ತಿ ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ವರ್ಗದವರು, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಐರಿನ್ ಮೆಂಡೋನ್ಸಾ, ಅಧ್ಯಾಪಕ ಬಂಧುಗಳು ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕ ಕೋಸ್ಟಾನ್ವಿ ಗೊನ್ಸಾಲ್ವ್ಸ್ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಿಬ್ಬಂದಿ ಗ್ಲೆಂಡಾ ಡಿಸೋಜಾ ವಂದಿಸಿದರು.
ಕಾರ್ತಿಕದ 'ದೀಪಾರಾಧನೆ' ಮುಗಿತಾಯ - ಎಲ್ಲೂರಿನ ಲಕ್ಷದೀಪೋತ್ಸವ
Posted On: 04 Dec 2021, 09:07 AM
" ದೀಪಜ್ಯೋತಿಃ ಪರಂ ಬ್ರಹ್ಮ ದೀಪಜ್ಯೋತೀ ತಮೋಪಹಃ ದೀಪೇನ ಸಾಧ್ಯತೇ ಸರ್ವಂ ಸಂಧ್ಯಾದೀಪ ನಮೋಸ್ತುತೆ" ಹೀಗೆಂದು ದೀಪವನ್ನು ಸ್ತುತಿಸುತ್ತಾ , ಬೆಳಕಿನ ತಿಂಗಳು ಕಾರ್ತಿಕಮಾಸದ ಅಂತ್ಯದ ಅಮಾವಾಸ್ಯೆಯಂದು ತಿಂಗಳು ಪೂರ್ತಿ ನೆರವೇರಿದ ದೀಪಾರಾಧನೆಯ ಸರ್ವ ಯಶಸ್ಸು ಮನುಕುಲಕ್ಕೆ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ಶರತ್ಕಾಲದಲ್ಲಿ( ಶರದೃತು) ವಿಶ್ವಕ್ಕೆ ಮಂಗಳವಾದುದರ ಬಗ್ಗೆ ಪುರಾಣಗಳು ಉಲ್ಲೇಖಿಸುತ್ತವೆ.ಮಹಿಷಾಸುರ ,ನರಕ ದೈತ್ಯರೇ ಮುಂತಾದವರ ವಧೆಯಾಗಿ ಶಾಂತಿ ಸ್ಥಾಪನೆಯಾಗಿದೆ.ಕತ್ತಲಲ್ಲಿದ್ದವರು ಬೆಳಕಿಗೆ ಬಂದಕಾಲ.ಸ್ತ್ರೀಯರ ಬಂಧಮುಕ್ತಿ - ರಕ್ಷಣೆಯಾದ ಕಾಲ.ಈ ಸಂದರ್ಭವನ್ನು ಬೆಳಕು ಹಚ್ಚಿ ಸಂಭ್ರಮಿಸಿದಕಾಲ.ಇದೇ ವೇಳೆ 'ಉತ್ಥಾನ ದ್ವಾದಶಿ'ಯಂತಹ ಶ್ರೀಮನ್ನಾರಾಯಣನು ನಿದ್ದೆ ಮುಗಿಸಿ ಎದ್ದ ಪುಣ್ಯಕಾಲವೂ ಒದಗಿಬರುತ್ತದೆ. ಶರನ್ನವರಾತ್ರಿ ,ದೀಪಾವಳಿ, ಉತ್ಥಾನ ದ್ವಾದಶಿ ,ಕಾರ್ತಿಕ ಸೋಮವಾರಗಳೇ ಮುಂತಾದ ಪರ್ವಗಳು ಸನ್ನಿಹಿತವಾಗುವುದು ಆಶ್ವಯುಜ ಮತ್ತು ಕಾರ್ತಿಕಮಾಸಗಳನ್ನು ಒಳಗೊಂಡ 'ಶರದೃತು'ವಿನಲ್ಲಿ.ಮುಂದೆ ಹೇಮಂತ ಋತು. { 'ಕಾರ್ತಿ' ಅಂದರೆ ಆರ್ತಿ=ದುಃಖ. ದುಃಖನಾಶವಾದಾಗ ಕಾರ್ತಿಕ. ಅಲ್ಲದೆ ಬೆಳೆ ಬೆಳೆದು ಧಾನ್ಯತುಂಬಿ ಮನೆ - ಮನಸ್ಸುಗಳು ಸಂಭ್ರಮಿಸಿದಾಗ ದೀಪವನ್ನೇ ಹಚ್ಚುವುದು ಸಂಪ್ರದಾಯ.} ಮನೆಗಳಲ್ಲಿ ,ಆರಾಧನಾ ಸ್ಥಾನಗಳಲ್ಲಿ , ಮಠ - ಮಂದಿರಗಳಲ್ಲಿ, ದೇವಾಲಯಗಳಲ್ಲಿ ದೀಪವೇ ಪ್ರಧಾನವಾಗಿರುವ 'ದೀಪೋತ್ಸವ' ನೆರವೇರುವ ,ಎಲ್ಲೆಡೆ ದೀಪವೇ ವಿಜೃಂಭಿಸುವ ದೀಪದ ತಿಂಗಳು ಕಾರ್ತಿಕ. ಈ ತಿಂಗಳಲ್ಲಿ ಹಚ್ಚುವ ದೀಪಗಳು ಒಂದಲ್ಲ ,ಎರಡಲ್ಲ ಹತ್ತಲ್ಲ ,ಸಾವಿರವಲ್ಲ ,ಅದು ಲಕ್ಷ ಸಂಖ್ಯೆಯಲ್ಲಿ.ಆದುದರಿಂದಲೇ "ಲಕ್ಷದೀಪೋತ್ಸವ ". ಲಕ್ಷ್ಯವನ್ನು ಬೆಳಗುವ ದೀಪಗಳು ನಿಸರ್ಗಕ್ಕೆ ನೀರಾಜನವಾಗುತ್ತವೆ. ಪ್ರಕೃತಿಮಾತೆ ಮತ್ತೆ ಫಲವತಿಯಾಗಲು , ಸಸ್ಯಶ್ಯಾಮಲೆಯಾಗಲು ಸಜ್ಜಾಗುವ ಪರ್ವ . ಸರ್ವ ದೈವ - ದೇವರಿಗೆ ನಿತ್ಯ ದೀಪಹಚ್ಚುವ ನಾವು ಕಾರ್ತಿಕದಲ್ಲಿ 'ದೀಪದ ಉತ್ಸವ', 'ತುಡರಬಲಿ'ನಡೆಸಿ ಸಂತೋಷಪಡುತ್ತೇವೆ. ದೀಪವು ಲೌಕಿಕ - ಅಲೌಕಿಕಗಳನ್ನು ಬೆಸೆಯುತ್ತಾ ಭವ್ಯದಲ್ಲಿ ದಿವ್ಯವನ್ನು ಸೃಷ್ಟಿಸುತ್ತದೆ . ಅಂಧಕಾರದಲ್ಲಿ ಅಸಂಖ್ಯ ದೀಪಗಳ ಪ್ರಜ್ವಲನೆ , ಗಗನದ ತಾರೆಗಳು ಭುವಿಗಿಳಿದು ಭವವೆಲ್ಲ ಬೆಳ್ಳಂಬೆಳಗು . ಈ ಪರ್ವ ಭಗವಂತನ ಹಲವು ಆರಾಧನೆಗಳಲ್ಲಿ ಒಂದು ಪರ್ವ ; ದೀಪದ ಪರ್ವ.ಈ ಪರ್ವ ಒದಗಿಬರುವ ಮಾಸವೇ ಕಾರ್ತಿಕ ಮಾಸ . ಎಲ್ಲೂರಿನ ಲಕ್ಷದೀಪೋತ್ಸವ : ಶಿಷ್ಟ ಸಂಪ್ರದಾಯ ,ನಡೆದು ಬಂದ ಪದ್ಧತಿ , ನಡವಳಿಕೆ ,ಕ್ರಮಬದ್ಧತೆಗಳೇ ಪ್ರಧಾನವಾಗಿದ್ದು , "ಸೀಯಾಳ ಅಭಿಷೇಕ"ದ ಸೇವೆಯಿಂದ ಪ್ರಸಿದ್ಧವಾದ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಳವು 900 - 1000 ವರ್ಷ ಪುರಾತನ ಸೀಮೆಯ ದೇವಾಲಯ ."ಎಲ್ಲೂರು ಕುಂದ ಹೆಗ್ಗಡೆ" ಎಂದೇ ತುಳುನಾಡಿನ ಇತಿಹಾಸದಲ್ಲಿ ಪ್ರಸಿದ್ಧನಾದ ಕುಂದ ಕುಲ ಸಂಜಾತನಾದ ರಾಜನೊಬ್ಬನು ನಿರ್ಮಿಸಿದ ಪ್ರತಿಷ್ಠೆಯ ದೇವಾಲಯ ಇದು. ಇಲ್ಲಿ ನೆರವೇರುವ ಪ್ರತಿಯೊಂದು ಪರ್ವಗಳಿಗೆ , ಆಚರಣೆಗಳಿಗೆ , ಉತ್ಸವಾದಿಗಳಿಗೆ ಅವುಗಳದ್ದೇ ಆದ ಹಿನ್ನೆಲೆಗಳಿವೆ, ನಿಯಮ ನಿಬಂಧನೆಗಳಿವೆ . ಕಾರ್ತಿಕ ಮಾಸದ ಸೋಮವಾರಗಳು ಮತ್ತು ಕಾರ್ತಿಕದ ಕೊನೆಯ ದಿನವಾದ ಅಮಾವಾಸ್ಯೆಯಂದು ಪೂರ್ಣಗೊಳ್ಳುವ 'ಲಕ್ಷದೀಪೋತ್ಸವ' ಧಾರ್ಮಿಕ - ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ,ಅಸಾಮಾನ್ಯ ಲಕ್ಷಣವುಳ್ಳದ್ದಾಗಿದೆ . "ಉಮಯಾ ಸಹವರ್ತತೇ ಇತಿ ಸೋಮಃ" ವಾರಕ್ಕೊಮ್ಮೆ ಬರುವ ಸೋಮವಾರವೂ ಶಿವನ ಆರಾಧಕರಿಗೆ ಹಬ್ಬದ ದಿನವೇ . "ಉಮಯಾ ಸಹವರ್ತತೇ ಇತಿ ಸೋಮಃ" ಉಮೆಯೊಂದಿಗೆ ಈಶ್ವರನು ಸೇರಿದಾಗ 'ಸೋಮ'ನೆಂದು ಕರೆಯಲ್ಪಡುತ್ತಾನೆ . ಉಮೆಯೊಂದಿಗೆ ಆತನು ವಿಹರಿಸುವ ,ಅವನಿಗೆ ಪ್ರಿಯವೆನಿಸಿದ ಸೋಮವಾರದಂದು ನಡೆಸುವ ಉಪವಾಸ , ಪೂಜೆ , ಅಭಿಷೇಕ ಇತ್ಯಾದಿಗಳು ಅವನನ್ನು ಪ್ರಸನ್ನಗೊಳಿಸುತ್ತವೆ . ಸೋಮವಾರ ಅಥವಾ ಶನಿವಾರ ದಿನಗಳಂದು ತ್ರಯೋದಶಿ ತಿಥಿ ಕೂಡಿ ಬಂದರೆ ಅದು 'ಪ್ರದೋಷ'. ಈ ಪವಿತ್ರ ಮುಹೂರ್ತದಲ್ಲಿ ವಿಶ್ವೇಶ್ವರನನ್ನು ಆರಾಧಿಸಿದರೆ ಮಹಾದೇವನು ಶೀಘ್ರ ಅನುಗ್ರಹಿಸುತ್ತಾನೆ. ಕಾರ್ತಿಕ ಮಾಸದಲ್ಲಿ ಬರುವ ಎಲ್ಲಾ ಸೋಮವಾರಗಳು ವಿಶ್ವನಾಥನ ಆರಾಧನೆಯಿಂದ ಸಂತೃಪ್ತಿ ಪಡೆಯಲು ಬಯಸುವ ಭಕ್ತರ ಪಾಲಿಗೆ ಅತ್ಯುತ್ಕ್ರಷ್ಟವೆಂದು ವೇದಗಳು ಹೇಳಿವೆ . ಕಾರ್ತಿಕ ಸೋಮವಾರಗಳಲ್ಲಿ ಶತರುದ್ರಾಭಿಷೇಕ , ದೀಪೋತ್ಸವ , ಲಕ್ಷ ಬಿಲ್ವಾರ್ಚನೆಗಳಿಂದ ಶಿವಾರಾಧನೆ ಮಾಡುವುದು ಶ್ರೇಯಸ್ಕರವೆನಿಸಿದೆ . 'ಲಕ್ಷದೀಪೋತ್ಸವ' ಎಲ್ಲೂರಿನಲ್ಲಿ ಪ್ರಸಿದ್ಧವಾದ ಜಾತ್ರೆ.ಮಧ್ಯಾಹ್ನ ಅನ್ನಸಂತರ್ಪಣೆ , ರಾತ್ರಿ ತುಳಸಿಪೂಜೆ , ದೊಡ್ಡರಂಗಪೂಜೆ ನೆರವೇರಿ ಬೆಳಗಿನಜಾವ ಸುಮಾರು ನಾಲ್ಕು ಗಂಟೆಗೆ ದೀಪಾರಾಧನೆ ,ದೀಪೋತ್ಸವದ ಬಲಿ ಹೊರಡುತ್ತದೆ .ಕಾರ್ತಿಕ ಮಾಸದ ಅಮಾವಾಸ್ಯೆ ಕಳೆದು ಮಾರ್ಗಶಿರ ಮಾಸದ ಶುದ್ಧ ಪಾಡ್ಯದ ಸೂರ್ಯೋದಯಕ್ಕೆ ಎಲ್ಲೂರು ದೀಪೋತ್ಸವವು ಸಮಾಪನಗೊಳ್ಳುತ್ತದೆ . 'ದೀಪಪ್ರಭೆ' ಸೂರ್ಯಕಿರಣದಲ್ಲಿ ಐಕ್ಯ : ಈಗ ಎಲ್ಲೂರು ದೇವರನ್ನು ಮುಟ್ಟಿ ,ತಮ್ಮ ಪರಂಪರೆಯ ತಂತ್ರ ನಿರ್ವಹಿಸುತ್ತಿರುವ ಎಲ್ಲೂರು ಸೀಮೆಯ ಒಂಬತ್ತುಮಂದಿ ತಂತ್ರಿಗಳ ಹಿಂದಿನ ತಲೆಮಾರಿನ ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ತಂತ್ರಾಗಮ ತಜ್ಞರಲ್ಲಿ ಸುಮಾರು ನಲ್ವವತ್ತು ವರ್ಷಗಳಷ್ಟು ಹಿಂದೆಯೇ ಈ ಲೇಖಕ "ನಮ್ಮಲ್ಲಿ ಯಾಕೆ ಬೆಳಗಿನ ಜಾವ ಲಕ್ಷದೀಪೋತ್ಸವ" ಎಂಬ ಪ್ರಶ್ನೆಯನ್ನು ಕೇಳಿದ್ದು ; ಆಕಾಲದ ವಿದ್ವಾಂಸರು ವಿವರಿಸಿದ್ದ ಉತ್ತರ ಹೀಗಿದೆ : "ವಿಶ್ವೇಶ್ವರನ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ನಿರಂತರ ದೀಪಾರಾಧನೆಯ ದೀಪದ ಜ್ಯೋತಿಯು ( ಪ್ರಕಾಶ ,ಕಾಂತಿ) ಮಧ್ಯರಾತ್ರಿ ಕಾಲದಲ್ಲಿ ಅಥವಾ ಕತ್ತಲಲ್ಲಿ ಕರಗಿಹೋಗಬಾರದು. ಬೆಳಗಿನಜಾವ ಉತ್ಸವಬಲಿ ಹೊರಟಾಗ ದೇವಳದ ಒಳ ,ಹೊರ ಅಂಗಣಗಳಲ್ಲಿ ದಳಿ ಅಳವಡಿಸಿ ಹಣತೆಗಳಲ್ಲಿ ಬೆಳಗುವ ಬಹುಸಂಖ್ಯೆಯ ದೀಪಗಳು ಉರಿಯುತ್ತಿರುವಂತೆ ಉತ್ಸವ ಮುಗಿಯುತ್ತದೆ ,ಆಗ ಬೆಳಗಾಗುತ್ತಾ ಅರುಣೋದಯ ಅನಂತರ ಸೂರ್ಯೊದಯವಾಗುತ್ತದೆ . ದೇವಳದ ಸುತ್ತಲೂ ಬೆಳಗಿದ ದೀಪಗಳು ನಂದಿಹೋಗಲು(ಆರಿಹೋಗಲು) ಆರಂಭವಾಗುತ್ತವೆ , ಹೀಗೆ ನಂದಿಹೋಗುವ ದೀಪದ 'ಪವಿತ್ರ ಜ್ಯೋತಿಯು' ಸೂರ್ಯಕಿರಣದೊಂದಿಗೆ ಐಕ್ಯವಾಗುತ್ತದೆ . ಆಗ ಬೆಳಗಾಗುತ್ತದೆ .ಅಂದರೆ ದೀಪ - ಜ್ಯೋತಿ ಆರಿಹೋಗದೆ ಸೂರ್ಯ ಪ್ರಭೆಯೊಂದಿಗೆ ನಿರಂತರ ಬೆಳಗುತ್ತಿರುತ್ತವೆ " ಎಂಬ ಧಾರ್ಮಿಕ - ಸಾಂಸ್ಕೃತಿಕ ವಸ್ತು ಸ್ಥಿತಿಯ ವಿವರಣೆ ನೀಡಿದ್ದರು . ಕನಿಷ್ಠ ನೂರು ವರ್ಷಗಳಿಂದ ಲಕ್ಷದೀಪೋತ್ಸವ , ಆಯನೋತ್ಸವಗಳಂದು ರಾತ್ರಿ ಯಕ್ಷಗಾನ ತಾಳಮದ್ದಳೆ - ಬಯಲಾಟಗಳು ಬೆಳಗಿನ ಜಾವ ಬಲಿಹೊರಡುವವರೆಗೆ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ .ಈ ಲಕ್ಷದೀಪ , ಆಯನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರ್ಥ ಹೇಳಿದ್ದ ಆ ಕಾಲದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳ ಜೀವನ ವೃತ್ತಾಂತಗಳಲ್ಲಿ (ಮುದ್ರಿತ) ಉಲ್ಲೇಖಗಳು ಸಿಗುತ್ತವೆ. ಸ್ಥಳೀಯ ಉತ್ಸಾಹಿ ಯಕ್ಷಗಾನಾಸಕ್ತರು ಇದ್ದರು,ಅವರು ಅರ್ಥ ಹೇಳುತ್ತಿದ್ದ ,ಹಿಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆಯೂ ವಿವರಗಳು ಸಿಗುತ್ತವೆ . ವ್ಯಕ್ತಿ ಜೀವನದ ಸಿದ್ಧಿ ದೃಷ್ಟಾಂತವನ್ನು ದೃಢ ಪಡಿಸಲು 'ದೀಪ'ವು ಲಕ್ಷಣವಾದಾಗ 'ಲಕ್ಷ್ಯ" ಸಾಧಿಸಲ್ಪಡುತ್ತದೆ. ಆಗ ಸಹಜವಾಗಿ ಅಜ್ಞಾನ , ದಾಷ್ಟ್ಯ ,ದುರಹಂಕಾರ ನಾಶವಾಗಿ ಸುಜ್ಞಾನ ಪ್ರಾಪ್ತಿಯಾಗುತ್ತದೆ .ಬೆಳಗಿದ 'ದೀಪ' ಅರ್ಥಪೂರ್ಣ 'ಜ್ಞಾನ'ವೇ ಆಗುತ್ತದೆ. ಉದ್ದೇಶ ಸಫಲವಾಗುತ್ತದೆ .ಅಂದರೆ "ದೀಪ" ಗೆದ್ದಂತೆ . ದೀಪವು ಗೆಲ್ಲಬೇಕು ತಾನೆ ? ಲೇಖನ : ಕೆ.ಎಲ್.ಕುಂಡಂತಾಯ.
ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Posted On: 03 Dec 2021, 09:02 PM
ಉಡುಪಿ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಾಜ್ಯಪಾಲರು ತುಪ್ಪದ ದೀಪದಿಂದ ಆರತಿ ಬೆಳಗಿದರು. ಬ್ರಹ್ಮಾರ್ಪಣ ನೆರವೇರಿಸಿದರು ಹಾಗೂ ಅರ್ಚನೆ ಮಾಡಿಸಿದರು. ದೇವಾಲಯದ ಆವರಣದಲ್ಲಿ ವೀರಭದ್ರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ದೇವಾಲಯ ಪ್ರದಕ್ಷಿಣೆ ಪ್ರದಕ್ಷಿಣೆ ಮಾಡಿದ ರಾಜ್ಯಪಾಲರು ದೇವರ ಚಿನ್ನದ ರಥ ವೀಕ್ಷಿಸಿದರು. ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು , ಬೈಂದೂರು ತಹಸಿಲ್ದಾರ್ ಶೋಭಾಲಕ್ಷ್ಮಿ , ಎಎಸ್ಪಿ ಕುಮಾರ ಚಂದ್ರ , ದೇವಾಲಯದ ಪ್ರಧಾನ ಅರ್ಚಕರು ಮತ್ತು ಸಿಬ್ಬಂದಿಗಳು ಹಾಗೂ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಶ್ರೀ ಕೃಷ್ಣ ಮಠ ಭೇಟಿ ; ಅದಮಾರು ಮಠಾಧೀಶರಿಂದ ಪರ್ಯಾಯ ಮಂಗಲೋತ್ಸವದ ಆಮಂತ್ರಣ ಪತ್ರಿಕೆ ಸ್ವೀಕರಿಸಿದ ರಾಜ್ಯಪಾಲರು
Posted On: 03 Dec 2021, 08:57 PM
ಉಡುಪಿ : ಕರ್ನಾಟಕ ಸರ್ಕಾರದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಇವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭ ಅದಮಾರು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿ ಪರ್ಯಾಯ ಮಂಗಲೋತ್ಸವದ ಆಮಂತ್ರಣ ಪತ್ರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶ್ರೀ ಕೃಷ್ಣಾಸೇವಾ ಬಳಗದ ಪ್ರದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಒಮೆಕ್ರಾನ್ ಭೀತಿ : ಸರಕಾರದಿಂದ ನೂತನ ಮಾರ್ಗಸೂಚಿ
Posted On: 03 Dec 2021, 06:25 PM
ಬೆಂಗಳೂರು: ಕೋವಿಡ್ ನ ರೂಪಾಂತರಿತ ಹೊಸ ಪ್ರಭೇದ ಒಮೆಕ್ರಾನ್ ಸೋಂಕು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವರದಿಯಾಗಿರುವುದರಿಂದ ನೂತನ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪೋಷಕರು 2 ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಭಾಗವಹಿಸಲು ಅವಕಾಶ ಇರುತ್ತದೆ. ಅದೇರೀತಿ ಸಿನೆಮಾ ಥಿಯೇಟರ್, ಮಾಲ್ ಗಳಿಗೆ 2 ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಅವಕಾಶ ಎಂದು ಸಚಿವರು ವಿವರಿಸಿದರು. ಶಾಲೆ-ಕಾಲೇಜುಗಳಲ್ಲಿ ಯಾವುದೇ ಸಭೆ, ಸಮಾರಂಭ ಮಾಡುವಂತಿಲ್ಲ ಎಂದವರು ತಿಳಿಸಿದರು. ಪ್ರತಿನಿತ್ಯ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಒಂದು ಲಕ್ಷಕ್ಕೆ ಏರಿಸಲಾಗಿದೆ. 2ನೇ ಅಲೆ ಸಂದರ್ಭ ಸಜ್ಜುಗೊಳಿಸಿದಂತೆ ಆಕ್ಸಿಜನ್ ಯುಕ್ತ ಬೆಡ್, ಐಸಿಯು ಬೆಡ್ ವ್ಯವಸ್ಥೆಯನ್ನು ಮತ್ತೆ ಸಿದ್ಧಪಡಿಸಬೇಕು. ಆಕ್ಸಿಜನ್ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಆಕ್ಸಿಜನ್ ಲಭ್ಯತೆ, ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಗೆ ಇಂದಿನ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು. ಕೋವಿಡ್ ಕಂಟ್ರೋಲ್ ರೂಂ ಅನ್ನು ಮತ್ತೆ ಆರಂಭಿಸಲಾಗುವುದು ಎಂದವರು ಹೇಳಿದರು.
ಕಾಪು ಪುರಸಭಾ ಚುನಾವಣೆ : ಜೆಡಿಎಸ್ ಪಕ್ಷದಿಂದ ಸಭೆ
Posted On: 03 Dec 2021, 04:36 PM
ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಚುನಾವಣೆ ತಯಾರಿ ಬಗ್ಗೆ ಜೆಡಿಎಸ್ ಪಕ್ಷದಿಂದ ಇಂದು ಕಾಪು ಮಹಾಬಲ ಮಾಲ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇಕ್ಬಾಲ್ ಅತ್ರಾಡಿಯವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಎಚ್ ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಮತ್ತು ಎಚ್ ಡಿ ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಮಾಡಿದಂತಹ ಕೆಲಸಗಳನ್ನು ಜನರಿಗೆ ತಿಳಿಸುವುದು ಹಾಗೂ ಕಾಪು ಪುರಸಭೆ ಮತ್ತು ಪ್ರಾಧಿಕಾರದಿಂದಾಗಿ ಆದ ತೊಂದರೆಗಳು, ಅದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಇನ್ನು ಮುಂದಿನ ದಿನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಪುರಸಭೆಗೆ ಆಯ್ಕೆ ಮಾಡುವಲ್ಲಿ, ಜನರು ಸಹಕಾರ ಕೊಟ್ಟರೆ, ಪುರಸಭೆಯಲ್ಲಿ ಏನು ತೊಂದರೆ ಆಗುತ್ತಿತ್ತು ಅದನ್ನೆಲ್ಲ ನಿವಾರಿಸುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತೇವೆ. ನಮ್ಮನ್ನು ಬೆಂಬಲಿಸಿ ಎಂದು ಜನರಲ್ಲಿ ಸಹಕಾರವನ್ನು ಕೋರಬೇಕು, ಎಲ್ಲಾ ಕಾರ್ಯಕರ್ತರು, ನಾಯಕರು ಒಗ್ಗಟ್ಟಿನಿಂದ ದುಡಿದು ಹೆಚ್ಚಿನ ಸಂಖ್ಯೆಯಲ್ಲಿ ಪುರಸಭಾ ಸದಸ್ಯರು ಆಯ್ಕೆಯಾಗುವಲ್ಲಿ ಪ್ರಯತ್ನಿಸಬೇಕು ಎಂದರು. ಕಾರ್ಯಾಧ್ಯಕ್ಷರಾದ ವಾಸುದೇವ ರಾವ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ವೀಕ್ಷಕರಾದ ಸುಧಾಕರ್ ಶೆಟ್ಟಿ, ಉದಯ ಹೆಗ್ಡೆ, ಎಂ ಟಿ ವೆಂಕಟೇಶ್, ರಾಜು ಆರ್ ಪುತ್ರನ್, ಅಬ್ದುಲ್ ಹಮೀದ್ ಯೂಸುಫ್, ತಬಸುಮ್, ಉದಯ ಆರ್ ಶೆಟ್ಟಿ, ಶ್ರೀನಾಥ, ಅರವಿಂದ ಶೆಟ್ಟಿ, ರಶೀದ್, ಅಲ್ತಾಫ್, ಶಂಸುದ್ದೀನ್, ಸನವರ್, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಬೇಸಿಕ್ ಅಕೌಂಟಿಂಗ್ ಕುರಿತು ವಿಶೇಷ ಉಪನ್ಯಾಸ
Posted On: 03 Dec 2021, 03:43 PM
ಶಿರ್ವ: ಇಂದಿನ ವಾಣಿಜ್ಯ ಕ್ಷೇತ್ರಗಳಲ್ಲಿ ಲೆಕ್ಕಪತ್ರಗಳ ಲೆಕ್ಕಚಾರ ಮಾಡಲು ಬೇಸಿಕ್ ಅಕೌಂಟಿಂಗ್ ಬಗ್ಗೆ ಎಲ್ಲಾ ಯುವಕರಲ್ಲಿ ಜ್ಞಾನದ ಅರಿವು ಇರಬೇಕೆಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಬೇಸಿಕ್ ಅಕೌಂಟಿಂಗ್ ಕುರಿತು ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಸ್ಯಾಮ್ ಜೋಯಲ್ ಡೈಸ್ ರವರು ಪ್ರಾಯೋಗಿಕವಾಗಿ ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಉದ್ಯೋಗ ಕ್ಷೇತ್ರದಲ್ಲಿ ಅಕೌಂಟಿಂಗ್ ಎಕ್ಸ್ಪರ್ಟ್ ಗಳಿಗೆ ವಿಪುಲ ಅವಕಾಶಗಳು ಲಭ್ಯವಿದೆ. ಸರಿಯಾದ ಮಾರ್ಗದರ್ಶನ ಮತ್ತು ಮಾಹಿತಿ ಪಡೆದು ಅಕೌಂಟಿಂಗ್ ವಿಷಯದಲ್ಲಿ ವಿದ್ಯಾರ್ಥಿಗಳು ಸಂಶೋಧನಾ ಮನಸ್ಥಿತಿಯನ್ನು ಬೆಳೆಸಿಕೊಂಡು ದೇಶಕ್ಕೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಆಧುನಿಕ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ವಿವಿಧ ಅವಕಾಶಗಳಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಚಾರ್ಟರ್ಡ್ ಅಕೌಂಟೆನ್ಸಿ ,ಟ್ಯಾಲಿ ಮತ್ತು ಎಸ್ಎಪಿ ಅಂತ ವಿಷಯಗಳಲ್ಲಿ ಜ್ಞಾನ ಪಡೆಯಲು ಬೇಸಿಕ್ ಅಕೌಂಟಿಂಗ್ ಸಹಾಯಕಾರಿ ಮತ್ತು ವಿವಿಧ ಸಂಸ್ಥೆಯಲ್ಲಿ ಲಭ್ಯವಿರುವ ಅಕೌಂಟೆಂಟ್ ಹಾಗೂ ಎಸ್ಎಪಿ ಇಂಜಿನಿಯರ್ ಉದ್ಯೋಗ ಪಡೆಯಲು ಬಿಸಿಎ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಇದೊಂದು ನವಿಲುಗರಿ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಾಹಿತಿ ತಂತ್ರಜ್ಞಾನ ಕ್ಲಬ್ ನ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ಕು. ಸುರೇಖಾ ಮತ್ತು ಬಳಗ ಪ್ರಾರ್ಥಿಸಿ, ದ್ಯುತಿಶ್ರೀ ಸ್ವಾಗತಿಸಿ, ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿ, ದೀಕ್ಷಾ ಪಿ ಜಿ ವಂದಿಸಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ
Posted On: 02 Dec 2021, 11:26 PM
ಶಿರ್ವ: . ಕಂಪ್ಯೂಟರ್ ಜ್ಞಾನ ಇಂದಿನ ಯುವಕರಲ್ಲಿ ಅತ್ಯಂತ ಅವಶ್ಯಕವಾಗಿದೆ. ಕಲಿಕೆಯ ಜೊತೆಗೆ ಇದನ್ನು ಸಮರ್ಪಕವಾಗಿ ಮುಂದೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಅಳವಡಿಸಿಕೊಂಡದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಿಸಬಹುದೆಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತ ಕೋಶ ಜಂಟಿಯಾಗಿ ಏರ್ಪಡಿಸಿದ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ ದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಕಚೇರಿ “ಅಧಿಕ್ಷಕಿ ಡೊರಿಯನ್ ಡಿಸಿಲ್ವಾ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ನುಡಿದರು. ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಾ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸುಲಭವಾಗಿ ನಡೆಯಲು ಮತ್ತು ಅತ್ಯಂತ ವೇಗವಾಗಿ ಪರಿಣಾಮಕಾರಿಯಾಗಿ ಮಾನವನ ಶೇಕಡ 95 ಕೆಲಸವನ್ನು ಕಂಪ್ಯೂಟರ್ ಬಳಕೆಯಿಂದ ಸಾಗುತ್ತಿದೆ. ಇಂದಿನ ಸಾಂಕ್ರಾಮಿಕ ಕಾಯಿಲೆಗಳ ಹಾವಳಿಯಲ್ಲಿಯು ಅತ್ಯುತ್ತಮ ತಂತ್ರಜ್ಞಾನದ ಆವಿಷ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಒಂದು ತೊಂದರೆಗಳಿಲ್ಲದೆ ಶಿಕ್ಷಣವನ್ನು ನೀಡಲು ಕಂಪ್ಯೂಟರ್ ವಿದ್ಯೆ ಮತ್ತು ಸಮರ್ಪಕ ಬಳಕೆ ಮಾಡುವುದರಿಂದ ಎಲ್ಲ ಚಟುವಟಿಕೆಗಳು ನಡೆಯಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಶೈಕ್ಷಣಿಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆ ಇಂದಿನ ದಿನ ಅತ್ಯಂತ ಪ್ರಮುಖವಾಗಿದೆ.ಇದರ ಪ್ರಯುಕ್ತ ಕಾಲೇಜಿನಲ್ಲಿ ವಿಭಾಗದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಬೇಸಿಕ್ ಮತ್ತು ಟ್ಯಾಲಿ ಕೋರ್ಸುಗಳ ತರಬೇತಿ ನೀಡಿ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಂಡ ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಇಂಥ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳಿಗೆ ಸಹಾಯಕಾರಿ ಎಂದು ಮಾತನಾಡಿದರು. ನಿವೇದಿತಾ ನಿಖಿಲ್ ಪೂಜಾರಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಅಧಿಕಾರಿ ಯಶೋದ, ಪ್ರಿಯಾಂಕ, ಅಧ್ಯಾಪಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಂಪ್ಯೂಟರ್ ಸಾಕ್ಷರತೆ ಕೋಶದ ಸಂಯೋಜಕಿ ದಿವ್ಯಶ್ರೀ ರವರು ಸ್ವಾಗತಿಸಿ, ಪ್ರೀತಿಕಾ ವಂದಿಸಿದರು. ಚೈತ್ರ ಮತ್ತು ಬಳಗ ಪ್ರಾರ್ಥಿಸಿ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.
ಶಿರ್ವ ಗ್ರಾಮ ಪಂಚಾಯತ್ : ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ
Posted On: 02 Dec 2021, 03:06 PM
ಶಿರ್ವ : ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ಆದೇಶದಂತೆ ಶಿರ್ವ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಿರ್ವ ಗ್ರಾಮ ಪಂಚಾಯತ್ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ತ್ಯಾಜ್ಯ, ಕಸ , ಪ್ಲಾಸ್ಟಿಕ್ ನಿಯಂತ್ರಣ ಮಾಡುವ ಉದ್ದೇಶದಿಂದ ಶಿರ್ವ ಪೇಟೆಯಿಂದ ಸಿಧ್ಧಿವಿನಾಯಕ ದೇವಸ್ಥಾನದವರೆಗೆ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಬಸ್ಸು ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ, ಶಾಲೆ, ಚರ್ಚ್ ಮುಂಬಾಗ ದಲ್ಲಿ ಹರಡಿದ್ದ ಕಸ ತ್ಯಾಜ್ಯ ವನ್ನು ಹೆಕ್ಕಿ ಸ್ವಚ್ಚಗೊಳಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭನಾಯಕ್, ಕಾರ್ಯದರ್ಶಿ ಮಂಗಳಾ ಕೆ.ವಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾವಾಗ್ಲೆ, SLRM ಘಟಕದ ಮೇಲ್ವಿಚರಕರಾದ ಕಿಶೋರ್, ರಕ್ಷಿತ್ ಗ್ರಾಮ ಪಂಚಾಯತ್ ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಗುಂಪಿನ ಸದಸ್ಯರು, SLRM ಘಟಕದ ಸದಸ್ಯರು ಭಾಗವಹಿಸಿದ್ದರು.
ಡಿಸೆಂಬರ್ 10 : 'ಉತ್ತಮ ಶಿಕ್ಷಕರು ಅತ್ಯುತ್ತಮರಾಗುವುದು ಹೇಗೆ?' - ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲಿನಲ್ಲಿ ವಿಶೇಷ ಶೈಕ್ಷಣಿಕ ಉಪನ್ಯಾಸ
Posted On: 02 Dec 2021, 10:53 AM
ಕಾಪು : ಶಿಕ್ಷಕ ವೃತ್ತಿಯನ್ನು ಸಮಾಜದ ಶ್ರೇಷ್ಠ ವೃತ್ತಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೇಶದ ಭವಿಷ್ಯದ ಪ್ರಜೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಕೊಂಡೊಯ್ಯುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ. ಪರಿಣಾಮಕಾರಿ ಬೋಧನಾಕಲೆಯೂ ಶಿಕ್ಷಕ ವೃತ್ತಿಯ ಅಗತ್ಯತೆಗಳಲ್ಲೊಂದು. ಶಿಕ್ಷಕರು ಇನ್ನೂ ಒಳ್ಳೆಯ ರೀತಿಯಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧನೆ ಮಾಡುವುದರ ಕುರಿತು ಒಂದು ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮವನ್ನು ಕುತ್ಯಾರಿನ ಸೂರ್ಯ ಚೈತನ್ಯ ವಿದ್ಯಾಸಂಸ್ಥೆ ಡಿಸೆಂಬರ್ 10 ರ ಶುಕ್ರವಾರದಂದು ಹಮ್ಮಿಕೊಂಡಿದ್ದು ಉಪನ್ಯಾಸದ ವಿಷಯವು ' ಉತ್ತಮ ಶಿಕ್ಷಕರು ಅತ್ಯುತ್ತಮರಾಗುವುದು ಹೇಗೆ ' ಆಗಿರುತ್ತದೆ . ತಜ್ಞ ಉಪನ್ಯಾಸಕರಾಗಿ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಚಂದ್ರ ಆಚಾರ್ ಪಾಲ್ಗೊಳ್ಳುವರು. ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಉಪನ್ಯಾಸಕ ಶ್ರೀ ಚಂದ್ರ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸೂರ್ಯಚೈತನ್ಯ ಹೈಸ್ಕೂಲ್ ನ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ, ಶಿಕ್ಷಕವೃಂದ ಮತ್ತು ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
