Updated News From Kaup
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದ ತಹಸೀಲ್ದಾರ್
Posted On: 25 Sep 2021, 10:53 AM
ಕಾಪು : ಇಲ್ಲಿನ ತಹಸೀಲ್ದಾರ್ ಪ್ರದೀಪ್ ಎಸ್.ಕುರುಡೇಕರ್ ಅವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಭರದಿಂದ ಸಾಗುತ್ತಿರುವ ದೇವಳದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಸಿಬ್ಬಂದಿ ಗೋವರ್ಧನ್ ಸೇರಿಗಾರ್, ಲಕ್ಷ್ಮಣ್ ಶೆಟ್ಟಿ ಮಂಡೇಡಿ, ಸಂತೋಷ್ ಶೆಟ್ಟಿ ಕಳತ್ತೂರು ಹಾಗೂ ಬಾಲಕೃಷ್ಣ (ಬಾಲು) ಉಪಸ್ಥಿತರಿದ್ದರು.
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಎರಡನೇ ಡೋಸ್ ಲಸಿಕಾ ಅಭಿಯಾನ
Posted On: 25 Sep 2021, 10:47 AM
ಶಿರ್ವ : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್ಸಿಸಿ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಎರಡನೇ ಡೋಸ್ ಲಸಿಕಾ ಅಭಿಯಾನವನ್ನು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ, ವಿದ್ಯಾರ್ಥಿಗಳಿಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಸೆಪ್ಟೆಂಬರ್ 21ರಿಂದ ಆಯೋಜಿಸಲಾಯಿತು. ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗೆ ಕೋವಿಡ್ -19 ಲಸಿಕಾಕರಣ ನಡೆಸಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಕಾಲೇಜಿನ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಥಮ ಡೋಸ್ ಪಡೆದ ಅರ್ಹ ಫಲಾನುಭವಿಗಳಿಗೆ ಲಸಿಕೆಗಳ ಲಭ್ಯತೆಗೆ ಅನುಸಾರವಾಗಿ ಕಾಲೇಜು ಆವರಣದಲ್ಲಿಯೇ ಲಸಿಕಾಕರಣಅಭಿಯಾನ ಆಯೋಜಿಸಲಾಯಿತು, ಕಾಲೇಜು ಆಡಳಿತ ವ್ಯವಸ್ಥೆಯ ಸಹಕಾರದಿಂದ ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸಿಕೊಂಡು ಲಸಿಕೆ ವಿತರಿಸಲಾಗುತ್ತಿದೆ ಎಂದು ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಹಾಗೂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶಿರ್ವ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಗಾಯತ್ರಿರವರು ಜಿಲ್ಲಾಡಳಿತದ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಕಾಲೇಜುಗಳ ಮೂಲಕ ಲಸಿಕೆ ನೀಡಲಾಗುತ್ತಿದೆ, ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಈ ಅಭಿಯಾನಕ್ಕೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಕಲ್ಪನಾ, ಶಶಿ , ಗೀತಾ, ಸಂಜಯ್, ಲ್ಯಾಬ್ ಟೆಕ್ನಿಷಿಯನ್ ಶೃತಿ, ಕಿರಣ್, ಡೇಟಾ ಎಂಟ್ರಿ ಆಪರೇಟರ್ ವಿದ್ಯಾ ಮಹೇಶ್ ಹಾಗೂ ಆಶಾ ಕಾರ್ಯಕರ್ತರಾದ ಸವಿತಾ, ರೆಹೆಮತ್ ರವರು ಸಹಕರಿಸಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯ - ಬೀಳ್ಕೊಡುಗೆ ಸಮಾರಂಭ
Posted On: 25 Sep 2021, 10:37 AM
ಶಿರ್ವ: ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯವಾದ ಶಿಕ್ಷಣವೆಂದರೆ ಅದು ಪದವಿ ಶಿಕ್ಷಣ ವಾಗಿರುತ್ತದೆ. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳಲು ಕಾಲೇಜು ಶಿಕ್ಷಣದಲ್ಲಿ ಅನೇಕ ಅವಕಾಶಗಳಿವೆ. ಆಟ-ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕಾಗಿರುವುದು ಇಂದು ಅಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಗುರುಹಿರಿಯರ ಮಾರ್ಗದರ್ಶನವನ್ನು ಪಡೆದು ಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರು ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಅವರು ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಮುರಳಿ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಅಂತಿಮ ಪದವಿ ವಿದ್ಯಾರ್ಥಿಗಳಾದ ಲಿಖಿತ ಶೆಟ್ಟಿ, ಜೋಸಿಟಾ ಮೆಂಡೋನ್ಸಾ, ಕಾರ್ತಿಕ್ ರಾವ್, ಅಭಿಷೇಕ್, ಡಿಲ್ಸನ್ ನಿಜಾರ್,ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧೀಕ್ಷಕಿ ಡೊರಿನ್ ಡಿ'ಸಿಲ್ವ, , ವಿದ್ಯಾರ್ಥಿ ನಾಯಕರಾದ ದಾಕ್ಷಾಯಿಣಿ, ಮುಭಾಶಿ, ಎಲ್ಲ ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ಪೂಜಾರಿ ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕ ಮೆಲ್ವಿನ ಕ್ಯಾಸ್ಟಲಿನೋ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದಾ ವಂದಿಸಿದರು.
ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ವತ್ಸಲಾ ಎಸ್.ಶೆಟ್ಟಿ ನಿಧನ
Posted On: 22 Sep 2021, 09:54 PM
ಕಾಪು : ಕಾಪು ಪೂವಣಿಗುತ್ತು, ಸುರೇಶ್ ಜಿ.ಶೆಟ್ಟಿಯವರ ಧರ್ಮಪತ್ನಿ, ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ವತ್ಸಲಾ ಎಸ್.ಶೆಟ್ಟಿ ಇವರು ಇಂದು (22-9-21)ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರ ಅಂತ್ಯಕ್ರಿಯೆಯು ನಾಳೆ (23/09/21) ಮಲ್ಲಾರು, ಪಕೀರ್ಣಕಟ್ಟೆಯ ಶಾರದ ನಿವಾಸದಲ್ಲಿ ನಡೆಯಲಿದೆ ಎಂದು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಕೊರಗ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಶ್ರೀರಾಮುಲು ಅವರೊಂದಿಗೆ ಶಾಸಕ ರಘುಪತಿ ಭಟ್ ಸಭೆ
Posted On: 22 Sep 2021, 09:01 PM
ಉಡುಪಿ, ಸೆ.22 : ರಾಜ್ಯದಲ್ಲಿರುವ ಕೊರಗ ಸಮುದಾಯದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರೊಂದಿಗೆ ಬೆಂಗಳೂರಿನ ಸಚಿವರ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಿದರು. ಕೊರಗ ಸಮುದಾಯದವರು ವಾಸ್ತವ್ಯದ ಮನೆ ನಿರ್ಮಿಸುವಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ, ಸಮುದಾಯದವರ ಸಮಗ್ರ ಆರೋಗ್ಯ ತಪಾಸಣೆ ನಡೆಸುವುದು ಹಾಗೂ ವೈದ್ಯಕೀಯ ನೆರವು ಒದಗಿಸುವುದು, ಶೈಕ್ಷಣಿಕ ವ್ಯವಸ್ಥೆ, ಉನ್ನತ ಶಿಕ್ಷಣಕ್ಕೆ ಮೀಸಲಾತಿಯಲ್ಲಿ ವಿಶೇಷ ಒತ್ತು, ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ನೀಡುವುದು ಸೇರಿದಂತೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಇಲಾಖೆ ಹಾಕಿಕೊಂಡ ಕಾರ್ಯಕ್ರಮಗಳ ಉಪಯೋಗ ಸುಲಭವಾಗಿ ಜನರಿಗೆ ತಲುಪಿಸುವಂತಹ ವ್ಯವಸ್ಥೆ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು. ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಆಲಿಸಲು ಕೊರಗರ ಜನವಸತಿ ಕಾಲನಿಯಲ್ಲಿ ವಾಸ್ತವ್ಯ ಹೂಡುವುದಾಗಿ ಸಚಿವ ಶ್ರೀರಾಮುಲು ಈ ಸಂದರ್ಭ ಆಶಯ ವ್ಯಕ್ತಪಡಿಸಿದರು. ಪರಿಶಿಷ್ಟ ಪಂಗಡಗಳ ಇಲಾಖೆಯ ನಿರ್ದೇಶಕರಾದ ಶ್ರೀ ಕಾಂತರಾಜು, ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಕುಮಾರ ಕೆಂಜೂರು, ಶೇಖರ ಕೆಂಜೂರು, ದಿವಾಕರ ಕಳತ್ತೂರು, ದೀಪ ಜಪ್ತಿ, ಸುಶೀಲಾ ಕೆಂಜೂರು, ಸುರೇಂದ್ರ ಕಳತ್ತೂರು, ಯುಹಂದ್ರ ಕಳತ್ತೂರು ಉಪಸ್ಥಿತರಿದ್ದರು.
ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಸಭೆ
Posted On: 22 Sep 2021, 08:51 PM
ಕಾಪು, ಸೆ.22 : ಕಾಪು ಬಿಜೆಪಿ ಕಚೇರಿಯಲ್ಲಿ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಯಿತು. ಮೋದಿ ಜನ್ಮದಿನದಿಂದ ಅ.07 ರ ವರೆಗಿನ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಕುರಿತಂತೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ವಿಸ್ತ್ರತವಾಗಿ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಎಲ್ಲ ಶಕ್ತಿಕೇಂದ್ರ ಪ್ರಮುಖರು ಮಹಾಶಕ್ತಿ ಕೇಂದ್ರ ಪ್ರಮುಖರೊಡನೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿಯೊಂದು ಕಾರ್ಯಕ್ರಮವನ್ನೂ ಬೂತ್ ಮಟ್ಟದಲ್ಲಿಯೂ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು. ಗಾಂಧಿ ಜಯಂತಿಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಉಪಾಧ್ಯಕ್ಷರೂ ಕಾರ್ಯಕ್ರಮದ ಜಿಲ್ಲಾ ಸಂಚಾಲಕರೂ ಆದ ಸುಪ್ರಸಾದ್ ಶೆಟ್ಟಿ ವಿವರಿಸಿದರು. ಪರಿಸರ ಸಂಬಂಧಿತ ವಿಷಯದ ಜಿಲ್ಲಾ ಸಂಚಾಲಕರೂ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಪ್ರವಿಣ್ ಗುರ್ಮೆ ಇವರೂ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು. ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷರಾದ ನಯನ ಗಣೇಶ್, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ, ಚಂದ್ರಶೇಖರ ಕೋಟ್ಯನ್ ಉಪಸ್ಥಿತರಿದ್ದರು. ಶಕ್ತಿಕೇಂದ್ರ ಪ್ರಮುಖರು, ಮಹಾಶಕ್ತಿಕೇಂದ್ರ ಪ್ರಮುಖರು, ಮಂಡಲ ಪದಾಧಿಕಾರಿಗಳು ವಿವಿಧ ವಿಷಯಗಳ ಸಂಚಾಲಕರು ಉಪಸ್ಥಿತರಿದ್ದರು.
ಕಟಪಾಡಿ ಪಡುಕುತ್ಯಾರಿನ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪುನರುತ್ಥಾನ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗೆ ಮನವಿ
Posted On: 22 Sep 2021, 08:42 PM
ಬೆಂಗಳೂರು : ಕಟಪಾಡಿ ಪಡುಕುತ್ಯಾರಿನ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯರ ನೇತೃತ್ವದಲ್ಲಿ ಮಹಾಸಂಸ್ಥಾನದ ಪುನರುತ್ಥಾನದ ಯೋಜನೆಗಳ ಮನವಿಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಬೆಂಗಳೂರಿನಲ್ಲಿ ಸಮರ್ಪಿಸಲಾಯಿತು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಉಪಾಧ್ಯಕ್ಷರಾದ ಚಂದ್ರಯ್ಯ ಆಚಾರ್ಯ ಕಳಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ಅಸೆಟ್ ) ಅಧ್ಯಕ್ಷ ಟಿ. ಸುಧಾಕರ ಆಚಾರ್ಯ ತ್ರಾಸಿ, ಪ್ರತಿಷ್ಠಾನದ ವಿಶ್ವಸ್ಥರಾದ ಹರೀಶ್ ಆಚಾರ್ಯ ಕಾರ್ಕಳ, ರವಿ ಆಚಾರ್ಯ ಕಾರ್ಕಳ, ಆನೆಗುಂದಿಯ ಸರಸ್ವತೀ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಮತ್ತು ಬೆಂಗಳೂರು ಶಾಖಾ ಮಠ ಸಮಿತಿ ಅಧ್ಯಕ್ಷ ಹರಿಶ್ವಂದ್ರ ಎನ್. ಆಚಾರ್ಯ ಬೆಂಗಳೂರು, ಬೆಂಗಳೂರು ನಗರ ಪಾಲಿಕೆ ಸದಸ್ಯೆ ಹೇಮಲತಾ ಸತೀಶ್ ಶೇಟ್ ಹಾಜರಿದ್ದರು. ಪ್ರಸ್ತುತ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ,ಲಾಲಾಜಿ ಮೆಂಡನ್,ರಘುಪತಿ ಭಟ್, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಅವರನ್ನು ಭೇಟಿ ಮಾಡಿ ಅವರ ಶಿಫಾರಸು ಮತ್ತು ಅವರ ಜತೆಗೂಡಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
92 ಹೆರೂರು : ಕಾಪು ತಾಲೂಕಿನಲ್ಲಿ ಶೇಕಡ ನೂರು ಕೋವಿಡ್ ಲಸಿಕೆ ಪೂರೈಸಿದ ಮೊದಲ ಗ್ರಾಮ
Posted On: 22 Sep 2021, 05:21 PM
ಕಾಪು : ಮನೆ ಮನೆಗೆ ಹೋಗಿ ಕೋವಿಡ್ ಲಸಿಕೆ ನೀಡುವ ಮೂಲಕ ಉಡುಪಿ ಜಿಲ್ಲೆಯ ಕಾಪು ತಾಲೂಕಿನ 92 ಹೆರೂರು ಗ್ರಾಮ ಕಾಪು ತಾಲೂಕಿನಲ್ಲಿಯೇ ಮೊದಲ ನೂರು ಶೇಕಡ (First Dose) ಲಸಿಕೆ ಪೂರೈಸಿದ ಗ್ರಾಮ ಎಂದು ದಾಖಲಾತಿ ಪಡೆದಿದೆ. ಈ ದಾಖಲಾತಿಗೆ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಜನರ ಸಹಕಾರದ ಫಲಶ್ರುತಿಯಾಗಿದೆ. ಈ ಬಗ್ಗೆ ವಿಜಯ್ ಧೀರಜ್ ಅವರು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ ಈ ಸಂದರ್ಭ ವಿಜಯ್ ಧೀರಜ್, ಮಂಜುಳ ಆಚಾರ್ಯ, ಡಾ. ಪ್ರೀತಿಕಾ ಉಪಸ್ಥಿತರಿದ್ದರು.
ಆಪತ್ಬಾಂಧವ ರಿಕ್ಷಾ ಚಾಲಕ - ಯತೀಶ್ ಆಚಾರ್ಯ
Posted On: 20 Sep 2021, 10:23 PM
ಮಂಗಳೂರು : ರಾತ್ರಿ ಸುಮಾರು 12 ಘಂಟೆ ವೇಳೆ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿದಾಗ ಮನೆಯವರು ಕುಪ್ಪೆಪದವಿನಲ್ಲಿ ರಿಕ್ಷಾ ಚಾಲಕರಾಗಿರುವ ಯತೀಶ್ ಆಚಾರ್ಯ ಅವರಿಗೆ ಕರೆ ಮಾಡಿದಾಗ ಕೂಡಲೇ ಧಾವಿಸಿ ಗರ್ಭಿಣಿ ಮಹಿಳೆಯನ್ನು ಬಹಳ ಜಾಗ್ರತೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದರು. ಆಸ್ಪತ್ರೆಗೆ ದಾಖಲಾದ ಕೆಲವು ಘಂಟೆಗಳ ನಂತರ ಹೆರಿಗೆಯಾಯಿತು. ತಾಯಿ ಮಗು ಆರೋಗ್ಯವಾಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ತಹಸೀಲ್ದಾರ್ ಅಂದ್ರೆ ಹೀಗೂ ಇರ್ತಾರಾ ?...
Posted On: 20 Sep 2021, 03:46 PM
ಬೈಂದೂರು : ಬೈಂದೂರು ಭಾಗದ ಜನರ ಯಾವ ಕಾಲದ, ಯಾರ ಪುಣ್ಯದ ಫಲವೋ ಏನೋ ಈ ಬಾರಿ ಸರಳ ಸಜ್ಜನಿಕೆಯ, ಮುತುವರ್ಜಿಯ, ಅಪಾರ ಜನಪರ ಕಾಳಜಿಯ, ಸರಕಾರಿ ಕೆಲಸ, ಜನಗಳ ಕೆಲಸ,ಸ್ವಂತ ಕೆಲಸದಷ್ಟೇ ಶ್ರದ್ದೆಯಿಂದ ಮಾಡುವ ಪ್ರಾಮಾಣಿಕ ಅಧಿಕಾರಿಗಳು ಸಿಗುವುದು ವಿರಳ. ಬೈಂದೂರು ಭಾಗದ ಈಗಿನ ತಹಸೀಲ್ದಾರ್ ಕಾರ್ಯ ವೈಖರಿಯನ್ನು ಮೆಚ್ಚಲೇಬೇಕು. ಪ್ರಾಮಾಣಿಕ ಕೆಲಸಗಾರರನ್ನು ಗುರುತಿಸಿ ಅವರನ್ನು ಉಳಿಸಿಕೊಳ್ಳೋದು ಅನಿವಾರ್ಯ. ಮಧ್ಯಮ ವರ್ಗದ ಅಲ್ಪ ಜನಸಂಖ್ಯೆಯ ವ್ಯಕ್ತಿಯೋರ್ವ ಆಕಸ್ಮಿಕ ಅವಘಡಕ್ಕೊಳಗಾದಾಗ ನಮ್ಮ ವ್ಯವಸ್ಥೆ ಹೇಗೆ ಸ್ಪಂದಿಸುತ್ತೆ ಅನ್ನೋ ಕೆಟ್ಟ ಅನುಭವ ಜನರಿಗಾಗಿದೆ. ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆ , ರಾಜಕೀಯ ತಾತ್ಸರತೆಗೆ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಅನ್ನೋದಕ್ಕೆ ಸಾಕ್ಷಿಭೂತರಾಗಿ ತಲೆತಗ್ಗಿಸುವಂತಾದ ಅಸಹಾಯಕ ಸ್ಥಿತಿ ಶನಿವಾರ ಬೆಳಿಗ್ಗೆ ನಡೆಯಿತು. ಬಡಪಾಯಿಯ ಶವವೊಂದು ಸಮುದ್ರದಲ್ಲಿ ತೇಲುತ್ತಿದೆ ಎನ್ನುವ ಮಾಹಿತಿ. ತೀರದಲ್ಲಿ ಕುಟುಂಬದ ಹಾಗೂ ಆ ಜನಾಂಗದ ಆಕ್ರಂದನ ಯಾರ ಕಿವಿಗೂ ಬೀಳದಿರೋದು ಈಗಿನ ಕಾಲದ ವಿಪರ್ಯಾಸವೇ ಸರಿ. ಆಗೊಮ್ಮೆ ಈಗೊಮ್ಮೆ ನೋಡಿದ ಮಾಹಿತಿ ಸಿಕ್ಕಿತೆ ಹೊರತು ನೀರಿನಿಂದ ಹೊರತರುವ ಕೆಲಸ ಮರೀಚಿಕೆಯಾಗುಳಿಯಿತು. ಶನಿವಾರ ಸಂಜೆಯ ಬೆಳವಣಿಯಲ್ಲಿ ತಹಶೀಲ್ದಾರಗೆ ಮಾಹಿತಿ ಹೋಗಿ ಆದಿತ್ಯವಾರ ಬೆಳಿಗ್ಗೆ 7 ಗಂಟೆಯ ಮೊದಲೇ ಬಂದು ಮರವಂತೆಯಲ್ಲಿ ಟಿಕಾಣಿ ಹೂಡಿ, ಸಂಬಂಧಿಸಿದ ಎಲ್ಲ ಇಲಾಖೆಗಳ ಕಳ್ಳಾಟವನ್ನು ಸಾವಧಾನವಾಗಿ ಶಾಂತ ಚಿತ್ತರಾಗಿ 12 ಗಂಟೆಯ ವರೆಗೂ ಇದ್ದು ಹುಡುಕಾಟದ ಖಚಿತತೆಯನ್ನು ಕಂಡ ಮೇಲೆಯೇ ಅಲ್ಲಿಂದ ತೆರಳಿದ ಮೇಲೆ ಎಲ್ಲರ ಬಾಯಲ್ಲೂ ಒಂದೇ ಉದ್ಘಾರ ತಹಸೀಲ್ದಾರ್ ಅಂದ್ರೆ ಹೀಗೂ ಇರ್ತಾರ??? ಅಂತ ಎಲ್ಲರ ಮೆಚ್ಚುಗೆ ಪಾತ್ರರಾದರು. ಇದೇ ಕೆಲಸ ಶನಿವಾರವೇ ಸಂಬಂದಿಸಿದ ಇಲಾಖೆಗಳು ಮಾಡಿದ್ದರೆ ಈಗಾಗಲೇ ವ್ಯಕ್ತಿಯ ಕ್ರಿಯಾಕರ್ಮಗಳು ಮುಗಿಯುತ್ತಿತ್ತು. ಆದಿತ್ಯವಾರ ಯಾವುದೇ ಫಲ ಇಲ್ಲ. ಕುಟುಂಬ ವರ್ಗ ಮುಖದ ಕೊನೆಯ ದರುಶನದ ನಿರೀಕ್ಷೆಯಲ್ಲಿ ಸೋಮವಾರ ಮುಂದಡಿ ಇಟ್ಟಿದೆ. ಕರೋನ ಕಾಲದಲ್ಲೂ ಒಂದಷ್ಟು ಒಳ್ಳೆಯ ಕೆಲಸ ಹಲವರು ಬಾಯಲ್ಲಿ ಓಡಾಡುತ್ತಿದೆ. ರಾತ್ರಿ ಹತ್ತು ಗಂಟೆಯ ಮೇಲು ಸಹಸ್ರ ಸಂಖ್ಯೆಯ ಮೆಹಂದಿ ಕಾರ್ಯಕ್ರಮದ ಮಾಹಿತಿ ಸಿಕ್ಕಾಗ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದು ಹಲವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ lockdown ಕಾರ್ಯಾಚರಣೆ ಕಂಡು ಹೌ ಹಾರಿದವರಿದ್ದಾರೆ. ವರ್ಷಗಟ್ಟಲೆ ದೂಳು ಹಿಡಿದ ಫೈಲ್ ಗೆ ಮುಕ್ತಿ ನೀಡಿದ್ದಕ್ಕೆ ಹರಸಿದವರಿದ್ದಾರೆ. ಸಮಸ್ಯೆಗಳ ಸೌಹಾರ್ದ ಪರಿಹಾರಕ್ಕೆ ಸಹನೆಯ ಪ್ರತಿಕ್ರಿಯೆಯ ಕಂಡು ಬೆರಗಾದವರಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಒತ್ತಡಗಳ ನಡುವೆಯೂ ಕ್ರಿಯಾಶೀಲತೆಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ವರದಿ :ದಾಮೋದರ ಮೊಗವೀರ ನಾಯಕವಾಡಿ .
