Updated News From Kaup

ಮುದರಂಗಡಿ : ಸ್ತ್ರೀಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಾಗಾರ

Thumbnail
Posted On: 28 Mar 2025, 04:41 PM

ಮುದರಂಗಡಿ : ಜನನಿ ಮಹಾಸಂಘ ಮತ್ತು ಕಥೊಲಿಕ್ ಸ್ತ್ರೀ ಸಂಘಟನೆ ಮುದರಂಗಡಿ ವತಿಯಿಂದ ಸ್ಥಳೀಯ ಸ್ತ್ರೀಯರಿಗಾಗಿ ಸ್ತ್ರೀಯರ ಋತುಬಂಧ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಮಾಹಿತಿ ಕಾರ್ಯಗಾರವು ಸಂತ ಫ್ರಾನ್ಸಿಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಧೀರಜ್ ಫೆರ್ನಾಂಡಿಸ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ತ್ರೀಯರಲ್ಲಿ ಋತುಸ್ರಾವ, ಋತುಬಂಧದ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಚರ್ಚ್ ನ ಧರ್ಮಗುರು ಪೂಜ್ಯ ಫ್ರೆಡ್ರಿಕ್ ಡಿಸೋಜಾ ರವರು ಉಪಸ್ಥಿತರಿದ್ದರು. ಅಧ್ಯಕ್ಷೆ ಸಮಿತಾ ಮೆಂಡೋನ್ಸಾ‌ ರವರು ಸ್ವಾಗತಿಸಿ, ಪ್ರಮೋದಾ ಮತಾಯಸ್ ವಂದಿಸಿದರು.

ಉಡುಪಿ: ಪಂಚ ರಂಗಕರ್ಮಿಗಳಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರದಾನ

Thumbnail
Posted On: 28 Mar 2025, 03:30 PM

ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಆರನೇ ವರ್ಷದ 'ಮಲಬಾರ್ ವಿಶ್ವರಂಗ ಪುರಸ್ಕಾರ'ವನ್ನು ಐವರು ಹಿರಿಯ ರಂಗಕರ್ಮಿಗಳಿಗೆ ಬುಧವಾರ ಪ್ರದಾನ ಮಾಡಲಾಯಿತು. ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ನಟ, ನಿರ್ದೇಶಕ ಅರವಿಂದ ಕುಲಕರ್ಣಿ ಧಾರವಾಡ, ರಂಗ ಸಂಘಟಕ ಹಾಗೂ ನಿರ್ದೇಶಕ ಗಣೇಶ್ ಕಾರಂತ್ ಬೈಂದೂರು, ರಂಗನಟಿ, ಕಂಠದಾನ ಕಲಾವಿದೆ ಪ್ರಿಯಾ ಸರೋಜಾ ದೇವಿ ಮುಂಬೈ, ರಂಗನಟ ಪ್ರಕಾಶ್ ಜಿ. ಕೊಡವೂರು, ರಂಗನಟಿ ಮಂಜುಳಾ ಜನಾರ್ದನ್ ಮಂಗಳೂರು ಅವರಿಗೆ ಪ್ರಶಸ್ತಿ ಪತ್ರ, ಫಲಕ, ನಗದು ಹಾಗೂ ಬೆಳ್ಳಿಪದಕದೊಂದಿಗೆ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಂತ ವೈದ್ಯ ಡಾ.ವಿಜಯೇಂದ್ರ ರಾವ್, ಉದ್ಯಮಿ ಸುಗುಣ ಸುವರ್ಣ ಮಾತನಾಡಿದರು. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಮಲಬಾರ್ ಗೋಲ್ಡ್ ಉಡುಪಿ ಶಾಖೆ ಮುಖ್ಯಸ್ಥ ಹಫೀಜ್ ರೆಹೇಮನ್ ಉಪಸ್ಥಿತರಿದ್ದರು. ಯುಪಿಎಂಯ ಯುವ ಸಂಚಯದ ಬೀದಿ ನಾಟಕ ತಂಡವನ್ನು ಗೌರವಿಸಲಾಯಿತು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಸ್ವಾಗತಿಸಿದರು. ಸಂಧ್ಯಾ ಶೆಣೈ ವಂದಿಸಿದರು. ರಾಘವೇಂದ್ರ ಕವಾ೯ಲು, ಪೂಣಿ೯ಮಾ ಜನಾದ೯ನ್ , ವಿವೇಕಾನಂದ ಪಿ , ವಿದ್ಯಾಸರಸ್ವತಿ, ರೂಪಾಶೀ ಪರಿಚಯಿಸಿದರು.ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮೊದಲು ಸ್ವಸ್ತಿಶ್ರೀ ಅವರಿಂದ ನೃತ್ಯ ಕಾರ್ಯಕ್ರಮ ಜರುಗಿತು.

ಪಡುಬಿದ್ರಿಯ ಏಳು ಮಾಗಣೆಯ ಪಂಚ ಸಾನಿಧ್ಯದಲ್ಲಿ ದೈವರಾಜ ಶ್ರೀ ಕೋಡ್ದಬ್ಬು ವರ್ಷಾವಧಿ ನೇಮೋತ್ಸವ

Thumbnail
Posted On: 28 Mar 2025, 03:16 PM

ಪಡುಬಿದ್ರಿ : ಅತ್ಯಂತ ಪುರಾತನ ಪ್ರಾಚೀನ ಮತ್ತು ದೈವಿ ಶಕ್ತಿಯ ಬಹುದೊಡ್ಡ ಶಕ್ತಿ ಕೇಂದ್ರವಾದ ಪಡುಬಿದ್ರಿಯ ಏಳು ಮಾಗಣೆಯ ಪಂಚ ಕ್ಷೇತ್ರಗಳಾದ ಬೊಗ್ಗರಿಲಚ್ಚಿಲ್ ಇಲ್ಲಿ ಮಾರ್ಚ್ 27& ಮತ್ತು 28, ಪದ್ರದಬೆಟ್ಟುವಿನಲ್ಲಿ 28 ಮತ್ತು 29, ಸಂತೆಕಟ್ಟೆಯಲ್ಲಿ 29 ಮತ್ತು 30, ಕೊಂಕನಡ್ಪುವಿನಲ್ಲಿ ಮಾರ್ಚ್ 31 ಮತ್ತು ಎಪ್ರಿಲ್ 1 ಹಾಗೂ ಅಬ್ಬೇಡಿಯಲ್ಲಿ ಎಪ್ರಿಲ್ 1 ಮತ್ತು 2 ರಂದು ಶ್ರೀ ಕೋಡ್ದಬ್ಬು ದೈವದ ನೇಮೋತ್ಸವವು ಜರಗಲಿದೆ. ಇನ್ನುಳಿದಂತೆ 2 ದೈವಸ್ಥಾನಗಳಾದ ಅವರಾಲು ಕೋಟೆ ಮತ್ತು ಅಂಗಡಿಬೆಟ್ಟುವಿನಲ್ಲಿ ಅತ್ಯಂತ ಭಾವನಾತ್ಮಕವಾಗಿ ಕೋಡ್ದಬ್ಬು ದೈವದ ನುಡಿದಂತೆ ಮುಂಬರುವ ದಿನಗಳಲ್ಲಿ ಪಾವಿತ್ರತ್ಯತೆಯನ್ನು ಪಡೆಯಲಿದೆ. ಈ ಬಾರಿ ಪಡುಬಿದ್ರಿಯ ಕೋಡ್ದಬ್ಬು ದೈವಸ್ಥಾನಗಳ ನೇಮೋತ್ಸವಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಎಪ್ರಿಲ್ 3 ರ ನಂತರದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ನಡೆಯಲಿರುವುದರಿಂದ ಅದರ ಮುಂಚಿತವಾಗಿ ನೇಮೋತ್ಸವ ನಡೆಯಲಿದೆ. ತುಳುನಾಡಿನ ದೈವಾರಾಧನೆಯ "ದೈವರಾಜ"ನೆಂಬ ಘನತೆಯುಳ್ಳ ಶ್ರೀಬಬ್ಬುಸ್ವಾಮಿ/ ಶ್ರೀಕೋಡ್ದಬ್ಬು ದೈವವೂ ಉತ್ತರದ ಬಾರ್ಕೂರಿನಿಂದ ದಕ್ಷಿಣದ ಕೇರಳ ರಾಜ್ಯದ ನಿಲೇಶ್ವರದವರೆಗು, ಪೂರ್ವಭಾಗದಲ್ಲಿ ಪಶ್ಚಿಮ ಘಟ್ಟ, ಚಿಕ್ಕಮಗಳೂರು, ಶಿವಮೊಗ್ಗ, ಸಾಗರ, ಮಡಿಕೇರಿ ಭಾಗದಲ್ಲಿಯು ಸಾವಿರಾರು ಕೋಡ್ದಬ್ಬು ದೈವ ಸಾನಿಧ್ಯಗಳನ್ನು ನಾವು ಇಂದಿಗೂ ಗಮನಿಸಿದಾಗ ಇಡೀ ತುಳುನಾಡಿನ ಗ್ರಾಮಗ್ರಾಮದ ರಕ್ಷಣೆಯ ಮಹಾಶಕ್ತಿ ತುಳುನಾಡಿನ ಶ್ರೀಕೋಡ್ದಬ್ಬು ದೈವವೇ ಸರ್ವಶ್ರೇಷ್ಠವಾದುದು ಆಗಿದೆ. ಪಡುಬಿದ್ರಿಯ ಏಳು ಮಾಗಣೆಯಲ್ಲಿ ಏಳು ಕೋಡ್ದಬ್ಬು ದೈವಸ್ಥಾನಗಳಾದ ಅಂಗಡಿಬೆಟ್ಟು, ಸಂತೆಕಟ್ಟೆ, ಪದ್ರದಬೆಟ್ಟು, ಕೊಂಕನಡ್ಪು, ಅಬ್ಬೇಡಿ, ಬೊಗ್ಗರಿಲಚ್ಚಿಲ್, ಅವರಾಲು ಕೋಟೆಯ ಕೋಡ್ದಬ್ಬು ದೈವಸ್ಥಾನಗಳು ಪ್ರಮುಖವಾಗಿದೆ. ಪೂರ್ವಕಾಲದ ಪದ್ಧತಿಯಂತೆ ನಡೆಯುವ ವಾರ್ಷಿಕ ಸೇವೆಯಲ್ಲಿ ಭಕ್ತರು ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನಂಜೆ ಮಹಿಳಾ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆ

Thumbnail
Posted On: 28 Mar 2025, 03:06 PM

ಕಾಪು : ಇನ್ನಂಜೆ ಮಹಿಳಾ ಮಂಡಳಿ ವತಿಯಿಂದ ಎಸ್ ವಿಎಚ್ ಶಾಲೆಯ ದಾಸ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿಯವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಜಶ್ರೀಯವರು ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆ, ಅದಕ್ಕೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಾಗ್ಳೆ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷರಾಗಿದ್ದು, ಗ್ರಾಮ ಪಂಚಾಯತಿಯನ್ನು ಮುನ್ನಡೆಸಿದ ಐದು ಮಂದಿ ಗ್ರಾಮದ ಮಹಿಳಾ ಸಾಧಕರಾದ ಶಶಿಕಲಾ ಎನ್ ಶೆಟ್ಟಿ, ವಸಂತಿ ಆಚಾರ್ಯ, ರೇಖಾ ಅನಿಲ್ ಕುಮಾರ್, ಮಲ್ಲಿಕಾ ಆಚಾರ್ಯ, ಮಾಲಿನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಮಂಡಳಿಯ ಸದಸ್ಯರಿಗೆ ಆರೋಗ್ಯ ತಪಾಸಣೆ, ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ವೇತ ಎಲ್. ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಪೂರ್ಣಿಮಾ ಸುರೇಶ್, ಜತೆ ಕಾರ್ಯದರ್ಶಿ ಅನಿತಾ ಮಥಾಯಸ್, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಸಬು ನಂದನ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯಾ ಕ್ಯಾಸ್ತಲಿನೋ ವಂದಿಸಿದರು.

e ಮಣ್ಣು ಚಿತ್ರಕ್ಕೆ 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ

Thumbnail
Posted On: 28 Mar 2025, 02:23 PM

ಕಾಪು : ಶಿವಧ್ವಜ್ ಶೆಟ್ಟಿ ಕಥೆ -ಚಿತ್ರಕಥೆ- ನಿರ್ದೇಶನದ, ಈಶ್ವರಿದಾಸ್ ಶೆಟ್ಟಿ, ರಾಜೇಶ್ವರಿ ರೈ.ಪಿ ನಿರ್ಮಾಣದ e ಮಣ್ಣು ಲೋಕಲ್ ಟು ಗ್ಲೋಬಲ್ ಚಿತ್ರವು 2020ನೇ ಸಾಲಿನ ಕರ್ನಾಟಕ ರಾಜ್ಯ ವಿಶೇಷ ಸಾಮಾಜಿಕ ಜಾಗೃತಿ ಚಿತ್ರ ಮತ್ತು ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ಪಡೆದುಕೊಂಡಿದೆ. ವಿಶೇಷ ಸಾಮಾಜಿಕ ಜಾಗೃತಿ ಚಿತ್ರವಾಗಿ ನಿರ್ದೇಶಕ ಶಿವಧ್ವಜ್ ಶೆಟ್ಟಿಯವರು 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಉತ್ತಮ ಸಾಹಿತ್ಯಕ್ಕೆ ಸಚಿನ್ ಶೆಟ್ಟಿ ಕುಂಬ್ಳೆಯವರು 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ ತರಬೇತಿ :ಅರ್ಜಿ ಆಹ್ವಾನ

Thumbnail
Posted On: 28 Mar 2025, 02:10 PM

ಕಾರ್ಕಳ : ಕಾರ್ಕಳದ ಕಾಬೆಟ್ಟುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆ.ಜಿ.ಟಿ.ಟಿ.ಐ ವಿಸ್ತರಣಾ ಕೇಂದ್ರದಲ್ಲಿ ವಿವಿಧ ಅಲ್ಪಾವಧಿ ಕೌಶಲ ತರಬೇತಿಗಳಿಗೆ ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕಾರ್ಕಳದ ಅಥವಾ ಮಂಗಳೂರಿನಲ್ಲಿರುವ ಕೆ.ಜಿ.ಟಿ.ಟಿ.ಐ ಕಚೇರಿಯಿಂದ ಅರ್ಜಿ ಪಡೆದು ಉಚಿತ ತರಬೇತಿಗೆ ಹೆಸರನ್ನು ನೋಂದಾಯಿಸಬಹುದೆಂದು ಕೆ.ಜಿ.ಟಿ.ಟಿ.ಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8258200451, 8277741731

ಮಾ.30 : ಆಚಾರ್ಯ ಮಧ್ವರ ಜನ್ಮಭೂಮಿ ಶ್ರೀಕ್ಷೇತ್ರ ಪಾಜಕದಿಂದ ಭಕ್ತಿ ರಥಯಾತ್ರೆ ಪ್ರಾರಂಭ

Thumbnail
Posted On: 28 Mar 2025, 01:53 PM

ಕಾಪು : ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರಿಂದ ನಿರ್ಮಿಸಲ್ಪಟ್ಟ ನೂತನ ಮಂದಿರದಲ್ಲಿ ಶ್ರೀರಾಮಚಂದ್ರ ದೇವರನ್ನು ಪ್ರತಿಷ್ಠಾಪಿಸಿದ ನಂತರ, ನಮ್ಮಲ್ಲಿ ನಿರಂತರ ರಾಮದೇವರ ಪ್ರಜ್ಞೆ ಜಾಗೃತಿಯಲ್ಲಿರಬೇಕೆಂಬ ಸದುದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಮಿತಿಯವರ ಯೋಚನೆಯಂತೆ ಅದರ ಟ್ರಸ್ಟಿಗಳೂ ಆಗಿರುವ ಉಡುಪಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರತಿಯೊಬ್ಬರ ಮನೆಯಲ್ಲೂ ನಿರಂತರ ಶ್ರೀರಾಮ ಜಪ ನಡೆಯಬೇಕೆಂಬ ದೃಷ್ಠಿಯಿಂದ ರಾಮತಾರಕ ಮಂತ್ರದ ಮಹತ್ವವನ್ನು ತಿಳಿಸಲು ಹಾಗೂ ಭಕ್ತಿ ಸಿದ್ಧಾಂತವನ್ನು ಪ್ರಸಾರ ಮಾಡಲು "ಭಕ್ತಿ ರಥಯಾತ್ರೆ"ಯನ್ನು ಆಚಾರ್ಯ ಮಧ್ವರ ಅವತಾರ ಭೂಮಿ ಶ್ರೀಕ್ಷೇತ್ರ ಪಾಜಕದಿಂದ ಮಾ.30, ರವಿವಾರ ಪ್ರಾರಂಭಿಸುವುದಾಗಿ ಸಂಕಲ್ಪಿಸಿದ್ದಾರೆ ಎಂದು ಪಾಜಕ ಭಕ್ತಿ ರಥಯಾತ್ರೆ ಸಮಿತಿಯ ಸದಸ್ಯರಾದ ಪಡುಬೆಳ್ಳೆ ಮಧ್ವರಾಜ ಭಟ್ ಗುರುವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಕ್ತಿ ರಥವು ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ. ಪೇಜಾವರ ಶ್ರೀಪಾದರ ಮಾರ್ಗದರ್ಶನದಲ್ಲಿ ಎ.10 ರಿಂದ 12ರ ವರೆಗೆ ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ, ಎ.13 ರಂದು ಭಕ್ತರೆಲ್ಲರೂ ಸೇರಿ ಜಪಿಸಿದ ದಶಕೋಟಿ ರಾಮತಾರಕ ಮಂತ್ರದ ಯಾಗ, ಸಂತ ಸಂಗಮ, ಹಿಂದೂ ಸಮಾವೇಶ ಶ್ರೀಕ್ಷೇತ್ರ ಪೆರ್ಣಂಕಿಲದಲ್ಲಿ ನಡೆಯಲಿದೆ. ಯಾಗದಂದು ರಾಮತಾರಕ ಮಂತ್ರ ಜಪಿಸಿದ ಭಕ್ತರಿಗೆ ಮಂತ್ರಾಕ್ಷತೆ ಸಹಿತ ಪ್ರಸಾದ ವಿತರಿಸಲಾಗುವುದು. ಮಾ.30 ರವಿವಾರ ಬೆಳಿಗ್ಗೆ ಗಂಟೆ 9ಕ್ಕೆ ಶ್ರೀಪಾಜಕ ಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿಶ್ವಹಿಂದೂ ಪರಿಷದ್ ಪ್ರಾಂತೀಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಪೆರ್ಣಂಕಿಲ, ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಕುರ್ಕಾಲು ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಪೂಜಾರಿ ಸಹಿತ ಇನ್ನಿತರ ಗಣ್ಯದ ಉಪಸ್ಥಿತಿಯಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಕ್ತಿರಥಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡುವರು. ನಂತರ ವೇದಘೋಷ,ಪೂರ್ಣಕುಂಭ,ಕುಣಿತ ಭಜನೆ, ಡೋಲು, ಮಂಗಲವಾದ್ಯ ಸಹಿತ ಭಕ್ತಸಮೂಹದೊಂದಿಗೆ ಶ್ರೀಪರಶುರಾಮ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ, ಅಲ್ಲಿಂದ ಬೈಕ್ ರ‍್ಯಾಲಿಯೊಂದಿಗೆ ದಂಡತೀರ್ಥಕ್ಕೆ ಸಾಗುವುದು. ಅಲ್ಲಿಂದ ಮುಂದೆ ಮಂಗಳುರು, ಕಾಸರಗೋಡು ಜಿಲ್ಲೆಯಲ್ಲಿ ಸಾಗಿ ಎ.9 ಬುಧವಾರ ಪಾಜಕದಲ್ಲಿಯೇ ಸಮಾಪನಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರರು ಹಾಗೂ ಶ್ರೀಮಧ್ವಮಠ ಪಾಜಕಕ್ಷೇತ್ರದ ಪ್ರಧಾನ ವ್ಯವಸ್ಥಾಪಕರಾದ ವೇದಮೂರ್ತಿ ಮಾಧವ ಉಪಾಧ್ಯಾಯ, ಸಮಿತಿಯ ಅಧ್ಯಕ್ಷ ಕುರ್ಕಾಲು ಪಟ್ಟಚಾವಡಿ ದಿನೇಶ್ ಶೆಟ್ಟಿ, ಪ್ರಧಾನಕಾರ್ಯದರ್ಶಿ ಪಟ್ಟಾಭಿರಾಮ ಆಚಾರ್ಯ, ವಿಶ್ವನಾಥ ಪೂಜಾರಿ ಕುರ್ಕಾಲು, ಪರಶುರಾಮ ಭಟ್ ಉಪಸ್ಥಿತರಿದ್ದರು.

ಆಟೊ ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು : 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Thumbnail
Posted On: 28 Mar 2025, 01:48 PM

ಬಂಟಕಲ್ಲು : ಆಟೊ ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು : 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಸತತ 5ನೇ ಬಾರಿಗೆ ಅಧ್ಯಕ್ಷರಾಗಿ ಮಂಜುನಾಥ್ ಪೂಜಾರಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಮಾಧವ ಕಾಮತ್, ಉಪಾಧ್ಯಕ್ಷರಾಗಿ ಸಂದೇಶ ಕುಲಾಲ್, ಕಾರ್ಯದರ್ಶಿಯಾಗಿ ಹರೀಶ್ ಹೇರೂರು, ಜೊತೆ ಕಾರ್ಯದರ್ಶಿಯಾಗಿ ಗೋಪಾಲ್ ದೇವಾಡಿಗ, ಕೋಶಾಧಿಕಾರಿ ಸುರೇಶ್ ಟಿವಿಎಸ್, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ (ಗುಂಡು) ಆಯ್ಕೆಯಾದರು.

ಕಾಪು ಶ್ರೀ ಹಳೇ ಮಾರಿಯಮ್ಮ ದೇವಳ : ಸಮಗ್ರ ಜೀರ್ಣೋದ್ಧಾರ ಮಹಾ ಸಂಕಲ್ಪ - ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ

Thumbnail
Posted On: 26 Mar 2025, 04:13 PM

ಕಾಪು : ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದ ಸಮಗ್ರ ಜೀರ್ಣೋದ್ಧಾರ ಮಹಾಸಂಕಲ್ಪ- ಮೂಲನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರ ದೇಗುಲದ ವಠಾರದಲ್ಲಿ ಚಾಲನೆ ನೀಡಲಾಯಿತು. ಸನ್ನಿಧಾನದ ಜೀರ್ಣೋದ್ಧಾರ ಮತ್ತು ಸುತ್ತುಪೌಳಿ ಪುನರ್ ನಿರ್ಮಾಣ ಉದ್ದೇಶದೊಂದಿಗೆ ಶ್ರೀ ಕಾಶೀ ಮಠಾಧಿಶರಾದ ಶ್ರೀ ಸಂಯ್ಯಮೀಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ 2023ರಲ್ಲಿ ಮುಷ್ಟಿಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಗಿತ್ತು. ಈಗ ಕಾಪು ಪೇಟೆಯ ಹತ್ತು ಸಮಸ್ತರು ಮತ್ತು ಮಾರಿಯಮ್ಮ ದೇವರ ಸಮಸ್ತ ಭಕ್ತರ ಅಪೇಕ್ಷೆಯಂತೆ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಪೂರ್ವಭಾವಿಯಾಗಿ ಸಮಸ್ತ ಭಕ್ತರಿಗೆ ಕಾಣಿಕೆ ಡಬ್ಬಿ ವಿತರಣೆ, ಜೀರ್ಣೋದ್ದಾರ ಲಾಂಛನ ಅನಾವರಣ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಕೆ. ಕಮಲಾಕ್ಷ ಭಟ್, ಮಂಗಳೂರು ವೆಂಕಟರಮಣ ದೇವಸ್ಥಾನದ ತಂತ್ರಿ, ಧಾರ್ಮಿಕ ವಿದ್ವಾಂಸ ಡಾ. ಎಂ. ಪಂಡಿತ್ ನರಸಿಂಹ ಆಚಾರ್ಯ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತಾನಾಡಿ, 42 ವರ್ಷಗಳ ಹಿಂದೆ ಊರು ಬಿಟ್ಟು ಪರವೂರಿಗೆ ಹೋಗುವ ಸಂಧರ್ಭದಲ್ಲಿ ಕೈಯಲ್ಲಿ ಇದದ್ದು ಹಳೆ ಮಾರಿಯಮ್ಮನ ಗದ್ದಿಗೆ ಪೂಜೆಯ ಪ್ರಸಾದ ಇವತ್ತು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಸಂಕಲ್ಪ ಮಾಡಿದರೆ ಸಿದ್ದಿಯಾಗುವ ಸಮಯ ತುಂಬಾ ದೂರವಿಲ್ಲ ಎಂದರು. ಮಾಜಿ ಸಚಿವ ವಿನಯ್‌ಕುಮಾ‌ರ್ ಸೊರಕೆ ಮಾತಾನಾಡಿ, ಕಾಪು ಸುಗ್ಗಿ ಮಾರಿಪೂಜೆ ಕಾಪುವಿಗೆ ಹಬ್ಬವಾಗಿದೆ. ಜಿಎಸ್ಬಿ ಸಮಾಜ ನೂರಾರು ಕೋಟಿ ರೂಪಾಯಿಯನ್ನು ಶೈಕ್ಷಣಿಕ -ಧಾರ್ಮಿಕ-ವೈದ್ಯಕೀಯ ರಂಗಕ್ಕೆ ನೀಡಿದೆ. ಹಾಗಾಗಿ ಇವತ್ತಿನ ಮೂಲಧನ ಸಂಗ್ರಹ ಕೂಡ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದರು. ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದ್ರಾಯ ಶೆಣೈ, ಶಾಸಕರಾದ ಪ್ರತಾಪ್‌ಸಿಂಹ ನಾಯಕ್, ಮಾಜಿ ಶಾಸಕ ಲಾಲಾಜಿ ಆ‌ರ್. ಮೆಂಡನ್, ಜಿಎಸ್‌ಬಿ ಸರ್ವ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಅಜಿತ್ ಕುಡ್ವ ಮುಲ್ಕಿ, ಪ್ರಮುಖರಾದ ಮನೋಹರ್ ಎಸ್. ಶೆಟ್ಟಿ ಕಾಪು, ಕೆ. ವಾಸುದೇವ ಶೆಟ್ಟಿ, ವಿಕ್ರಂ ಕಾಪು, ಮೋಹನ್ ಎಂ. ಬಂಗೇರ, ಲಕ್ಷ್ಮೀನಾರಾಯಣ ನಾಯಕ್ ಕಾಪು, ಡಾ.ಕೆ. ನಾಗಾನಂದ ಭಟ್ ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸದಾನಂದ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮಟ್ಟಾರು : ಉಚಿತ ನೇತ್ರ ತಪಾಸಣೆ ; ಆರೋಗ್ಯ ಮಾಹಿತಿ ಮತ್ತು ದಂತ ತಪಾಸಣಾ ಶಿಬಿರ

Thumbnail
Posted On: 25 Mar 2025, 02:56 PM

ಶಿರ್ವ : ಶಿರ್ವ ಮಟ್ಟಾರು ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ಇದರ ನೇತೃತ್ವದಲ್ಲಿ ಡಾ.ವಿ.ಎಸ್.ಆಚಾರ್ಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಆರೋಗ್ಯ ಸೊಸೈಟಿ, ಅಂಧತ್ವ ನಿಯಂತ್ರಣ ವಿಭಾಗ ಉಡುಪಿ, ಸಂಚಾರಿ ನೇತ್ರಘಟಕ ಜಿಲ್ಲಾಸ್ಪತ್ರೆ ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಉಪ ಆರೋಗ್ಯ ಕೇಂದ್ರ ಮಟ್ಟಾರು ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ತಪಾಸಣೆ, ಗ್ಲಾಕೋಮಾ ಕಾಯಿಲೆ ಬಗ್ಗೆ ಮಾಹಿತಿ, ಉಚಿತ ದಂತ ಚಿಕಿತ್ಸಾ ಶಿಬಿರ,ಮಧುಮೇಹ, ರಕ್ತದೊತ್ತಡ ತಪಾಸಣೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಸ್ಪತ್ರೆಯ ಹಿರಿಯ ನೇತ್ರತಜ್ಞರಾದ ಡಾ. ನಿತ್ಯಾನಂದ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ, ಶಿಬಿರದ ಉದ್ದೇಶ ಮತ್ತು ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಮಟ್ಟಾರು ಬಬ್ಬರ್ಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಹಿಸಿದ್ದರು. ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯ ನೇತ್ರತಜ್ಙ ಡಾ.ಫಾಯಲ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯಾಧಿಕಾರಿ ಡಾ.ಗಾಯತ್ರಿ ಸಂತೋಷ್, ಮಟ್ಟಾರು ಆರೋಗ್ಯ ಸಮುದಾಯ ಆರೋಗ್ಯಾಧಿಕಾರಿ ಮಾನಸಾ ಜೆ, ಆರೋಗ್ಯ ಸುರಕ್ಷಾಧಿಕಾರಿ ಗೀತಾ, ಶಿರ್ವ ಗ್ರಾ.ಪಂ ಸದಸ್ಯ ದೇವದಾಸ್ ನಾಯಕ್, ಮಮತಾ ಶೆಟ್ಟಿ, ಮಟ್ಟಾರು ವಿ.ಹಿಂ.ಅಧ್ಯಕ್ಷ ಜಗದೀಶ ಆಚಾರ್ಯ, ವೇದಿಕೆಯಲ್ಲಿದ್ದರು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಿಬಿರಕ್ಕೆ ಭೇಟಿ ನೀಡಿ ಸಂಘಟನೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂಧಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದರು. ಸಂಘಟನೆಯ ಕಾರ್ಯಕರ್ತರು ಸಕ್ರೀಯವಾಗಿ ಭಾಗವಹಿಸಿದ್ದರು. 150 ಕ್ಕೂ ಅಧಿಕ ಗ್ರಾಮಸ್ಥರು ಶಿಬಿರದ ಪ್ರಯೋಜನವನ್ನು ಪಡೆದರು.