Updated News From Kaup
ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ 40ನೇ ವಾರ್ಷಿಕೋತ್ಸವ ; ಸನ್ಮಾನ ; ಧನಸಹಾಯ ; ಸಾಂಸ್ಕೃತಿಕ ಕಾರ್ಯಕ್ರಮಗಳು

Posted On: 20-12-2024 06:12PM
ಪಡುಬಿದ್ರಿ : ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿ (ರಿ.) ಇದರ 40ನೇ ವಾರ್ಷಿಕೋತ್ಸವವು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿ ಗೌರವಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಾಮಾಜಿಕ ಚಟುವಟಿಕೆಯ ಮೂಲಕ ಮಹಿಳೆಯರಿಗೆ ಸಾಕಷ್ಟು ಉತ್ತೇಜನವನ್ನು ನೀಡಿದ ಸಂಸ್ಥೆಯು ಹಲವಾರು ಕಲಾವಿದರನ್ನು ಹುಟ್ಟು ಹಾಕಿದೆ. ಇದೀಗ 40ರ ಸಂಭ್ರಮದಲ್ಲಿ ಸಮಾಜದ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜನಮಾನಸಕ್ಕೆ ಮಾದರಿಯಾಗಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಎರ್ಮಾಳು ಬೀಡು ಅಶೋಕರಾಜ್ ಮಾತನಾಡಿ, ಕಳೆದ ವರ್ಷಗಳಿಂದ ನಿರಂತರ ಚಟುವಟಿಕೆಯುಕ್ತವಾಗಿರುವ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲವು ಈ ಭಾಗದಲ್ಲಿ ಸಮಾಜ ಸೇವೆ, ಕಲಾ ಸೇವೆ ಸಹಿತ ಜನಜನಿತರಾಗಿದ್ದಾರೆ. ಇಂತಹ ಹತ್ತು ಹಲವು ಸಮಾಜಮುಖಿ ಸೇವೆಯ ಮೂಲಕ ಮನೆ ಮಾತಾಗಿರುವ ಮಹಿಳಾ ಮಂಡಲವು ಸಂಭ್ರಮದ ಶತಮಾನೋತ್ಸವ ಕಾಣುವಂತಾಗಲಿ ಎಂದು ಶುಭವನ್ನು ಹಾರೈಸಿದರು. ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗುವಲ್ಲಿ ಹೆಚ್ಚು ಒತ್ತು ನೀಡಿ ಸ್ವಸಹಾಯ ಸಂಘ ರಚಿಸಿ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದು ಹರ್ಷದಾಯಕ ಎಂದರು.
ಶಿರ್ವ ಮಹಿಳಾ ಮಂಡಲ ಅಧ್ಯಕ್ಷೆ, ಅಸೋಸಿಯೇಟ್ ಪ್ರೊಫೆಸರ್ ಡಾ|ಸ್ಪೂರ್ತಿ ಶೆಟ್ಟಿ ಮತ್ತು ಅಥ್ಲೆಟ್ ಕಟಪಾಡಿ ಸುಲತಾ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆಯರಿಗೆ ಗೌರವಾರ್ಪಣೆ ಹಾಗೂ ಸುಮಾರು ರೂ. 1ಲಕ್ಷ ಮೊತ್ತದಲ್ಲಿ ಬಡ ಅಶಕ್ತರನ್ನು ಗುರುತಿಸಿ ಧನ ಸಹಾಯ, ಪರಿಸರದ ಕನ್ನಡ ಮಾಧ್ಯಮದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಂಘದ ಸದಸ್ಯೆಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಅದಮಾರು ಪೂರ್ಣಪ್ರಜ್ಞ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ವೇದಿಕೆಯಲ್ಲಿದ್ದರು. ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಮಣಿ ಕುಂದರ್ ವಾರ್ಷಿಕ ವರದಿ ನೀಡಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ನಿರೂಪಿಸಿದರು. ಜತೆ ಕಾರ್ಯದರ್ಶಿ ಅಮೃತಕಲಾ ಶೆಟ್ಟ ವಂದಿಸಿದರು. ಬಳಿಕ ಸದಸ್ಯೆಯರಿಂದ ನೃತ್ಯ ವೈವಿಧ್ಯ, ರಂಗತರಂಗ ಕಾಪು ತಂಡದಿಂದ ತುಳುನಾಟಕ ಪ್ರದರ್ಶನಗೊಂಡಿತು.
ಆಧಾರ್ ಕಾಡ್೯ ಮಾಡಿಸಿ ಮಾನಸಿಕ ಅಸ್ವಸ್ಥರ ಬದುಕಿಗೆ ಬೆಳಕಾದ ಕಾಪು ತಹಶಿಲ್ದಾರ್

Posted On: 20-12-2024 05:55PM
ಕಾಪು : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎರ್ಮಾಳು ಬಡಾ ಗ್ರಾಮದ ಅಕ್ಕಪಕ್ಕದ ಮನೆಯ ಕಿರಣ ಕುಮಾರಿ (52) ಮತ್ತು ಪ್ರಮೋದ (69) ಎಂಬ ಮಹಿಳೆಯರಿಗೆ ಕಾಪು ತಾಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಅವರ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ.
ಈ ಈರ್ವರು ಮಹಿಳೆಯರನ್ನು ಆಧಾರ್ ಕೇಂದ್ರಕ್ಕೆ ಕರೆತರಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಆಧಾರ್ ಕಾರ್ಡ್ ಇಲ್ಲದ ಕಾರಣ ಸರಕಾರದ ಯಾವುದೇ ಯೋಜನೆಗಳು, ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ಕಿರಣಕುಮಾರಿ ಇವರ ತಾಯಿ 75 ವರ್ಷದ ವೃದ್ಧೆ ತಾಯಿ ಮತ್ತು ಪ್ರಮೋದರವರ ಪೋಷಕರು ತಹಶಿಲ್ದಾರರ ಕಚೇರಿಗೆ ಬಂದು ಅಳಲು ತೋಡಿಕೊಂಡಿದ್ದರು. ಇದನ್ನು ಮನಗಂಡು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಆಧಾರ್ ಕೇಂದ್ರವನ್ನೇ ಅವರ ಮನೆಗೆ ಕೊಂಡೊಯ್ಯುವ ಏರ್ಪಾಟು ಮಾಡಿ ಆಧಾರ್ ಕಾಡ್೯ ಮಾಡಿಸಿದ್ದರು. ಪಿಂಚಣಿ ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.
ಈ ಕಾರ್ಯಕ್ಕೆ ಆಧಾರ್ ಆಪರೇಟರ್ ಸಂಧ್ಯಾ, ಆಧಾರ್ ಕೇಂದ್ರದ ಇಸ್ಮಾಯಿಲ್ ಫಲಿಮಾರು, ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ್ ಎರ್ಮಾಳ್, ಅಜೀಜ್ ಹೆಜಮಾಡಿ ಸಹಕರಿಸಿದ್ದರು.
ರೋಬೋಸೋಫ್ಟ್ ಸಂಸ್ಥೆಯಿಂದ ಉಡುಪಿ ಜಿಲ್ಲಾ ಪಂಚಾಯತ್ ಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಹಸ್ತಾಂತರ

Posted On: 20-12-2024 12:04PM
ಉಡುಪಿ : ಸ್ವಚ್ಛತೆಯೇ ಸೇವೆ ಎಂಬ ಧೈಯವಾಕ್ಯದೊಂದಿಗೆ ಪರಿಸರ ಸುಸ್ಥಿರತೆ ಮತ್ತು ಹಸಿರು ಶಕ್ತಿಯ ಉತ್ತೇಜನದ ಕಡೆಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ಉಡುಪಿಯ ಐಟಿ ಕಂಪನಿಯಾದ ರೋಬೋಸೋಫ್ಟ್ ಟೆಕ್ನಾಲಜೀಸ್ ಸಿಎಸ್ಆರ್ ಕಾರ್ಯಕ್ರಮದ ಅಡಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಉಡುಪಿಯ ಹಲವಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಹಸ್ತಾಂತರಿಸಿತು.

ರೋಬೋಸೋಫ್ ಟೆಕ್ನಾಲಜೀಸ್ ಕಂಪನಿಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿಯವರು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ರೋಬೋಸೋಫ್ಟ್ ಸಂಸ್ಥೆ ಕೈಗೊಂಡಿರುವ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಎಲೆಕ್ಟ್ರಿಕ್ ಆಟೋ ರಿಕ್ಷಾ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ತುಂಬಾ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲೆಯು ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಆರ್ಥಿಕ ಚಟುವಟಿಕೆಯಾಗಿಸುವಲ್ಲಿ ಹೇಗೆ ಯಶಸ್ಸು ಸಾಧಿಸಿದೆ ಎಂದು ವಿವರಿಸಿದರು. ರೋಬೋಸೋಫ್ಟ್ ಸಂಸ್ಥೆಯ ಸ್ವಚ್ಛತೆಯೇ ಸೇವೆ ಎಂಬ ಸಂಕಲ್ಪ ಮತ್ತು ಈ ನಿಟ್ಟಿನಲ್ಲಿ ಕಂಪನಿಯ ಪ್ರಯತ್ನ ಮತ್ತು ಸಹಕಾರಕ್ಕೆ ಉಡುಪಿಯ ಸ್ಥಳೀಯ ಆಡಳಿತದ ಪರವಾಗಿ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಮಾತನಾಡಿ ರೋಬೋಸೋಫ್ಟ್ ಕಂಪನಿ ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಭವಿಷ್ಯದಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂಪನಿ ಮಾತೃ ಸಂಸ್ಥೆ ಟೆಕ್ನೊಪ್ರೋ ಜಪಾನ್ ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕಂಪನಿಯ ಉದ್ಯೋಗಿ ನಾಗೇಶ್ ದೊಂಡಿಯ ಸ್ವಾಗತಿಸಿ, ವಂದಿಸಿದರು.
ಕಾಪು ಹೊಸ ಮಾರಿಗುಡಿಗೆ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಭೇಟಿ

Posted On: 19-12-2024 11:15AM
ಕಾಪು : ಸಂಪೂರ್ಣ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡು, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಮಂಗಳವಾರ ಭೇಟಿ ನೀಡಿ, ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ಮಾರಿಗುಡಿ ದೇವಸ್ಥಾನದ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕುಮಾರ ಗುರು ತಂತ್ರಿ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ಅವರು ದೇವರ ಪ್ರಸಾದ ನೀಡಿ ಗೌರವಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ಜೀರ್ಣೋದ್ಧಾರದ ಕುರಿತಾಗಿ ಮಾಹಿತಿ ನೀಡಿದರು. ನವದುರ್ಗಾ ಲೇಖನ ಯಜ್ಣದ ಬಗ್ಗೆ ಮಾಹಿತಿ ಪಡೆದು, ಮೆಚ್ಚುಗೆ ವ್ತಕ್ತ ಪಡಿಸಿದ ಅವರು ನವದುರ್ಗಾ ಲೇಖನ ಬರೆಯುವ ಸಂಕಲ್ಪ ಸ್ವೀಕರಿಸಿದರು.
ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಕೆ. ರಘುಪತಿ ಭಟ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಅಧ್ಯಕ್ಷ ರವಿ ಸುಂದರ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮನೋಹರ ಶೆಟ್ಟಿ ಕಾಪು, ಮಾಧವ ಆರ್. ಪಾಲನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕಾರ್ಯ ನಿರ್ವಹಣಾಽಕಾರಿ ಮತ್ತು ಕೋಶಾಧಿಕಾರಿ ರವಿಕಿರಣ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ಶಶಿಧರ್, ಅಭಿವೃದ್ಧಿ ಸಮಿತಿ ಪ್ರಮುಖರಾದ ಗೀತಾಂಜಲಿ ಎಂ. ಸುವರ್ಣ, ರಘುರಾಮ ಶೆಟ್ಟಿ, ಮಧುಕರ್ ಎಸ್., ರಮೇಶ್ ಶೆಟ್ಟಿ ಕೊಲ್ಯ, ಜಯರಾಮ ಆಚಾರ್ಯ, ಪ್ರಬಂಧಕ ಗೋವರ್ಧನ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ : ಮುಂಬೈಯ ಮೀರಾ - ಬಾಯಂದರ್ ವಲಯದಲ್ಲಿ ನವದುರ್ಗಾ ಲೇಖನ ಸಂಕಲ್ಪಕ್ಕೆ ಸಭೆ

Posted On: 17-12-2024 06:26PM
ಮುಂಬೈ: ಮುಂಬೈಯ ಮೀರಾ - ಬಾಯಂದರ್ ವಲಯದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸಾನಿಧ್ಯ ವೃದ್ಧಿ ಮತ್ತು ಲೋಕಕಲ್ಯಾಣರ್ಥವಾಗಿ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದ ಮಾಹಿತಿ ನೀಡಲು ಡಿ.15ರಂದು ಮೀರಾ ರೋಡ್ ಪೂರ್ವದ ಹೋಟೆಲ್ ಬಾಲಾಜಿ ಇಂಟರ್ನ್ಯಾಷನಲ್ ನಲ್ಲಿ ಸಭೆ ನಡೆಯಿತು.

ಬ್ರಹ್ಮಕಲಶೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ.) ಇದರ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಉದಯ ಸುಂದರ್ ಶೆಟ್ಟಿಯವರು ನೀಡಿದರು.
ಮುಂಬೈ ಸಮಿತಿಯ ಗೌರವ ಸಲಹೆಗಾರರು ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿಯ ಮುಂಬೈಯ ಪ್ರಧಾನ ಸಂಚಾಲಕರಾದ ಎರ್ಮಾಳ್ ಹರೀಶ್ ಶೆಟ್ಟಿ ನವದುರ್ಗಾ ಲೇಖನ ಯಜ್ಞದ ವಿಧಿವಿಧಾನಗಳ ಬಗ್ಗೆ ತಿಳಿಸಿದರು. ಮೀರಾ ಬಾಯಂದರ್ ವಲಯದ ಸಂಚಾಲಕರಾದ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಪ್ರಾಸ್ತವಿಕವಾಗಿ ಮಾತನಾಡಿದರು. ಸಹ ಸಂಚಾಲಕರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿ ದಾನಿಗಳು ನೀಡಿರುವ ವಿಶೇಷ ಕೊಡುಗೆಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಪತ್ ಶೆಟ್ಟಿ ಪಂಜದ ಗುತ್ತು, ರವೀಂದ್ರ ಶೆಟ್ಟಿ ದೇರಳಕಟ್ಟೆ ,ಆರ್ಥಿಕ ಸಮಿತಿಯ ಸಂಚಾಲಕರಾದ ಸಂದೀಪ್ ಶೆಟ್ಟಿ ಶಿರ್ವ, ಮುಂಬಯಿ, ಬಾಲಾಜಿ ಇಂಟರ್ ನ್ಯಾಷನಲ್ ಹೋಟೆಲ್ ನ ಮಾಲಕರಾದ ಸುಂದರ್ ಶೆಟ್ಟಿ, ಬಾಬಾಪ್ರಸಾದ್ ಅರಸ ಕುತ್ಯಾರು, ಬಂಟ್ಸ್ ಸಂಘ ಮುಂಬೈ ಮೀರಾ ಬಾಯಂದರ್ ವಲಯದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆ : 37ನೇ ವರ್ಷದ ವಾರ್ಷಿಕೋತ್ಸವ

Posted On: 17-12-2024 06:16PM
ಉಚ್ಚಿಲ : ಉಚ್ಚಿಲ ಮೊಗವೀರ ಹಿತ ಸಾಧನ ವೇದಿಕೆ ಸಂಚಾಲಿತ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳವಾರ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಬಿ ಎಸ್ ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗಾಧಿಕಾರಿ ಸಂತೋಷ ಪೈ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಿಕ್ಷಕರು, ತಂದೆ ತಾಯಿ ಹಾಗೂ ಹಿರಿಯರ ಮಾತನ್ನು ಮೀರಿ ಮುಂದೆ ಸಾಗದಿರಿ. ಇದರಲ್ಲಿ ನಿಮ್ಮ ಜೀವನ ಅಡಕವಾಗಿದೆ. ಹೆಚ್ಚಿನ ಶ್ರಮ ವಹಿಸಿ ಕಲಿತರೆ ನಿಮ್ಮ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು. ಈ ಸಂದರ್ಭ ದಾನಿಗಳಾದ ಶೇಖರ್ ಸಾಲ್ಯಾನ್ ದಂಪತಿಗಳನ್ನು ಹಾಗೂ ಸಂತೋಷ್ ಪೈ ಯವರನ್ನು ಸನ್ಮಾನಿಸಲಾಯಿತು. ಶಾಲೆಗೆ ಒಂದು ಲಕ್ಷ ಐದು ಸಾವಿರ ವೆಚ್ಚದಲ್ಲಿ ಬಿ ಎಸ್ ಎಫ್ ಸಂಸ್ಥೆ ನೀಡಿದ ವಾಟರ್ ಕೂಲರನ್ನು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂಎಸ್ ರವರು ಉದ್ಘಾಟಿಸಿದರು.
ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ ಎಸ್ ಶಾಲಾ ಧ್ವಜಾರೋಹಣಗೈದರು. ಅತಿಥಿಗಳು ಶಾಲಾ ವಿದ್ಯಾರ್ಥಿಗಳ ಮ್ಯಾಗಝಿನ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಒಂದರಿಂದ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಶಾಲಾ ಸಂಚಾಲಕ ಗಂಗಾಧರ್ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೊಗವೀರ ಹಿತ ಸಾಧನ ವೇದಿಕೆಯ ಅಧ್ಯಕ್ಷ ಸರ್ವೋತ್ತಮ ಕುಂದರ್, ಬಿಇಒ ಯಲ್ಲಮ್ಮ, ಉದ್ಯಮಿ ಸಾಧು ಸಾಲ್ಯಾನ್, ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ವೇದಿಕೆಯ ಕಾರ್ಯದರ್ಶಿ ಸುಧಾಕರ್ ಕರ್ಕೇರ, ಕೋಶಾಧಿಕಾರಿ ವೇದವ್ಯಾಸ ಬಂಗೇರ, ಪೂರ್ಣಿಮಾ ಎಂ ಕರ್ಕೇರ, ಶಾಲಾ ವಿದ್ಯಾರ್ಥಿ ನಾಯಕ ಚೇತನ್ ಬಿ ಪೂಜಾರಿ, ಅಶೋಕ್ ಸುವರ್ಣ, ಅಶ್ವತ್ ಕರ್ಕೇರ, ಸತೀಶ್ ಸಾಲ್ಯಾನ್, ರವಿ ಕುಂದರ್, ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ನವ್ಯ ಸ್ವಾಗತಿಸಿದರು. ಶಿಕ್ಷಕಿ ಅನುಪಮಾ ಮತ್ತು ಶಿಕ್ಷಕ ಸಂತೋಷ್ ನಿರೂಪಿಸಿದರು. ಉಪ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.
ಡಿ.19ರಂದು ರೋಬೋಸೋಫ್ಟ್ ನಿಂದ ಜಿ.ಪಂ.ಗೆ 6 ಎಲೆಕ್ಟ್ರಿಕ್ ಆಟೋ ಹಸ್ತಾಂತರ

Posted On: 16-12-2024 06:07PM
ಉಡುಪಿ: ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಸ್ವಲ್ಪಮಟ್ಟಿಗೆ ಸುಲಭವಾಗಿಸುವ ನಿಟ್ಟಿನಲ್ಲಿ ಉಡುಪಿಯ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿಎಸ್ ಆರ್ ನಿಧಿಯ ಮೂಲಕ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಖರೀದಿಸಿ ಉಡುಪಿ ಜಿಲ್ಲಾ ಪಂಚಾಯತ್ ಗೆ ನೀಡಲು ನಿರ್ಧರಿಸಿದೆ.
ಅದರಂತೆ ಇದೇ ಡಿಸೆಂಬರ್ 19 ರಂದು ಬೆಳಿಗ್ಗೆ 10.30ಕ್ಕೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಶ್ಯಾಮ್ ರಾಜ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಅವರು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮತ್ತು ಜಿಪಂ ಸಿಇಓ ಪ್ರತೀಕ್ ಬಾಯಲ್ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಎಲೆಕ್ಟ್ರಿಕ್ ಆಟೋಗಳನ್ನು ಹಸ್ತಾಂತರಿಸಲಿದ್ದಾರೆ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಗುರಿಯೊಂದಿಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಹತ್ತಿರದ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸುತ್ತಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಕೇಶವನ್, ಕೃಷ್ಣ ರಾವ್, ಚಕ್ರಿ ಹೆಗ್ಡೆ ಇದ್ದರು.
ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 15-12-2024 06:33PM
ಕಾಪು : ತಾಲೂಕಿನ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.30 ರಿಂದ ಫೆ. 9ರವರೆಗೆ ನಡೆಯಲಿದ್ದು ಆ ಪ್ರಯುಕ್ತ ಇದರ ಆಮಂತ್ರಣ ಪತ್ರಿಕೆಯನ್ನು ರವಿವಾರ ಕ್ಷೇತ್ರದ ಆವರಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೈವ ದೇವಸ್ಥಾನಗಳು ಪೂರ್ವಜರು ಬಿಟ್ಟು ಹೋದ ಆಸ್ತಿ. ದೇವಸ್ಥಾನ ಕಟ್ಟಿದರೆ ಸಾಲದು ಅದರ ನಿರ್ವಹಣೆಯೂ ಅತಿ ಮುಖ್ಯ. ಎಲ್ಲರೂ ಜೀಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೃತಾರ್ಥರಾಗೋಣ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ, ಮನ:ಶಾಂತಿಗಾಗಿ ದೇವರ ಪ್ರಾರ್ಥನೆ ಮುಖ್ಯ. ಕಾಪು ಭಾಗದ ಎಲ್ಲಾ ದೇವಳಗಳು ಜೀಣೋದ್ಧಾರವಾಗುವ ಮೂಲಕ ಬೆಳಗುತ್ತಿದೆ. ಊರ ಪರವೂರ ಸಹಕಾರದಿಂದ ದೇವಸ್ಥಾನದ ಬೆಳವಣಿಗೆ ಸಾಧ್ಯ ಎಂದರು.
ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ವಿಜಯ ಶೆಟ್ಟಿ ಕಾರ್ಕಳ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ವಳದೂರು ಪ್ರಸಾದ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ, ಮುಂಬಯಿ ಸಮಿತಿಯ ಸಲಹೆಗಾರ ಯಾದವ ಕೃಷ್ಣ ಶೆಟ್ಟಿ , ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಮಕರ ಕಂಸ್ಟ್ರಕ್ಷನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಸುಧಾಕರ ಶೆಟ್ಟಿ ಮಲ್ಲಾರು, ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ, ಉಪಾಧ್ಯಕ್ಷ ವಿಠಲ ಶೆಟ್ಟಿ ಪಡುಬರ್ಪಾಣಿಗುತ್ತು, ಬರ್ಪಾಣಿ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಪಡುಮನೆ ದಿನೇಶ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮಾನಾಥ ಶೆಟ್ಟಿ, ನಿರಂಜನ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಕೆ ಪದ್ಮನಾಭ ಶಾನುಭಾಗ್ ಸ್ವಾಗತಿಸಿದರು. ನಿರ್ಮಲ್ ಕುಮಾರ್ ಹೆಗಡೆ ನಿರೂಪಿಸಿದರು. ವಾಸುದೇವ ರಾವ್ ವಂದಿಸಿದರು.
ಕಾಪು ಕಿಶೋರ ಯಕ್ಷಗಾನ ಸಂಭ್ರಮ - 2024 ಉದ್ಘಾಟನೆ

Posted On: 15-12-2024 06:29PM
ಕಾಪು : ಪ್ರದರ್ಶನ ಸಂಘಟನಾ ಸಮಿತಿ ಶಿರ್ವ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ಆಯೋಜಿಸಿದ ಕಾಪು ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ "ಕಿಶೋರ ಯಕ್ಷಗಾನ ಸಂಭ್ರಮ - 2024" ಇದರ ಉದ್ಘಾಟನಾ ಸಮಾರಂಭ ರವಿವಾರ ಶಿರ್ವ ಮಹಿಳಾ ಸೌಧದ ಬಳಿ ನಡೆಯಿತು.
ಶಿರ್ವ ಪ್ರದರ್ಶನ ಸಂಘಟನಾ ಸಮಿತಿ ಗೌರವಾಧ್ಯಕ್ಷರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.
ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ, ಶಿರ್ವ ವತಿಯಿಂದ ಆಯೋಜಿಸಲಾದ ಈ "ಕಿಶೋರ ಯಕ್ಷಗಾನ - 2024" ಶಿರ್ವಾ ಮಹಿಳಾ ಸೌಧದ ಬಳಿ ಡಿ. 15 ರಿಂದ ಡಿ. 17ರ ವರೆಗೆ ಸಂಜೆ 5 ರಿಂದ ರಾತ್ರಿ 8 ರ ವರೆಗೆ ದಿನಕ್ಕೆ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಎರಡು ಪ್ರಸಂಗಗಳಂತೆ ನಡೆಯಲಿದೆ.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕಿ ಶಾರದಾ ಎಂ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಶಿರ್ವ ಪ್ರದರ್ಶನಾ ಸಂಘಟನಾ ಸಮಿತಿ ಸಂಚಾಲಕರಾದ ಶ್ರೀಪತಿ ಕಾಮತ್, ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ವಿಠಲ್ ಬಿ ಅಂಚನ್, ಯಕ್ಷಗಾನ ಕಲಾರಂಗ ರಿ. ಉಪಾಧ್ಯಕ್ಷರಾದ ವಿ.ಜಿ ಶೆಟ್ಟಿ, ಎಸ್.ವಿ ಭಟ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳ ಅವಹೇಳನ ಸಹಿಸುವುದಿಲ್ಲ - ಪೆರ್ಣಂಕಿಲ ಶ್ರೀಶ ನಾಯಕ್

Posted On: 14-12-2024 07:15PM
ಉಡುಪಿ : ವಿಶ್ವಾದ್ಯಂತ ಕೋಟ್ಯಾಂತರ ಭಕ್ತಾಭಿಮಾನಿಗಳನ್ನು ಹೊಂದಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ತೀರಾ ಕೆಳಮಟ್ಟದಲ್ಲಿ ಅವಹೇಳನ ಮಾಡುವ ಘಟನೆಗಳು ನಡೆಯುತ್ತಿರುವ ಅತ್ಯಂತ ಖಂಡನೀಯ. ಉಡುಪಿಯ ಅಷ್ಟ ಮಠಗಳ ಯತಿಗಳ ಪರಂಪರೆಯಲ್ಲಿ ಯಾರೂ ಸಂವಿಧಾನದ ವಿರುದ್ಧ ಮಾತನಾಡಿದ ಉದಾಹರಣೆಗಳಿಲ್ಲ. ಅದರಲ್ಲೂ ಪೇಜಾವರ ಮಠದ ಹಿರಿಯರಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಂತೂ ಸಂವಿಧಾನದ ಮೇಲೆ ವಿಶೇಷ ಗೌರವವನ್ನು ಹೊಂದಿದ್ದರು, ತಾವೂ ಅದನ್ನು ಪಾಲಿಸುತ್ತಿದ್ದರು, ಇತರರೂ ಪಾಲಿಸುವಂತೆ ಹೇಳುತ್ತಿದ್ದರು.
ಅವರ ಶಿಷ್ಯೋತ್ತಮರಾದ ಶ್ರೀ ವಿಶ್ವಪ್ರಸನ್ನ ತೀರ್ಥರೂ ಈ ದೇಶದ ಸಂವಿಧಾನಕ್ಕನುಗುಣವಾಗಿ, ಸಂವಿಧಾನದ ಆಶಯದಂತೆ ಸಮಾಜೋದ್ಧಾರಕ್ಕಾಗಿ ಶ್ರಮಿಸುತಿದ್ದಾರೆ. ಅವರ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದಲ್ಲಿನ ಶ್ರಮ, ಅಸಂಖ್ಯ ಗೋವುಗಳ ಸೇವೆ, ದಲಿತರಿಗೆ ಭಕ್ತಿ ಮಾರ್ಗದರ್ಶನ, ಅಶಕ್ತರಿಗೆ ಮನೆ ನಿರ್ಮಾಣ, ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಸಾಂತ್ವಾನ, ಮಠಮಂದಿರಗಳ ಜೀರ್ಣೋದ್ಧಾರ ಇತ್ಯಾದಿ ಸತತ ಮತ್ತು ನಿರಂತರ ಯಶಸ್ವಿ ಸಾಧನೆಗಳನ್ನು ಸಹಿಸದ ಕೆಲವು ಫಡಪೋಶಿಗಳು ವಿಜಯಪುರದಲ್ಲಿ ಶ್ರೀಗಳ ವಿರುದ್ಧ ತೀರಾ ಅಸಂವಿಧಾನಿಕ, ಅಸಂಸದೀಯ, ಕಾನೂನು ಉಲ್ಲಂಘಿತ ಪದಗಳನ್ನು ಬಳಸಿ ಮಾತನಾಡಿರುವುದನ್ನು ಅವರ ಭಕ್ತಕೋಟಿ ಎಂದೂ ಸಹಿಸುವುದಿಲ್ಲ. ಮನುಷ್ಯನ ಘನತೆಯನ್ನೇ ಅವಹೇಳನ ಮಾಡುವ ಇಂತಹ ಪದಗಳ ಬಳಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಇದ್ದಿದ್ದರೇ ಉಗ್ರವಾಗಿ ವಿರೋಧಿಸುತಿದ್ದರು, ಆದರೇ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರು ಆಡಿರುವ ಈ ಅಸಂವಿಧಾನಿಕ ಪದಗಳು ಈ ದೇಶದ ಸಂವಿಧಾನವನ್ನು ರೂಪಿಸಿದ ಅಂಬೇಡ್ಕರ್ ಅವರಿಗೆ ಮಾಡಿರುವ ಘೋರ ಅವಮಾನವಲ್ಲದೇ ಬೇರೆನೂ ಅಲ್ಲ.
ಪೇಜಾವರ ಶ್ರೀಗಳು ತಾವು ಸಂವಿಧಾನದ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ, ಆದರೂ ತುಚ್ಛವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸಮಸ್ತ ಹಿಂದೂ ಸಮಾಜ ಸಹಿಸುವುದಿಲ್ಲ. ಆದ್ದರಿಂದ ಇನ್ನು ಮುಂದೆ ಪೇಜಾವರ ಶ್ರೀಗಳ ವಿರುದ್ಧವಾಗಲೀ ಹಿಂದೂ ಧರ್ಮದ ವಿರುದ್ಧವಾಗಲಿ ಸುಳ್ಳು ಆರೋಪಗಳನ್ನು ಹೊರಿಸುವುದಾಗಲಿ ಅವಹೇಳನ ಮಾಡುವುದಾಗಿ ಮಾಡಿದರೇ ಶ್ರೀಗಳ ಅಭಿಮಾನಿಗಳು ಸುಮ್ಮನಿರುವುದಿಲ್ಲ.
ಹಿಂದೂ ನಾಯಕ ಮೇಲೆ ಇಲ್ಲಸಲ್ಲದ ಕಾರಣಗಳಿಗೆ ಸುಮೋಟೋ ಕೇಸು ಹಾಕುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಉಡುಪಿ ಎಸ್ಪಿ ಅವರು, ಪೇಜಾವರ ಶ್ರೀಗಳ ವಿರುದ್ಧ ಸಾರ್ವಜನಿಕವಾಗಿ ಶಾಂತಿಭಂಗವಾಗುವ ರೀತಿಯಲ್ಲಿ ಬೆದರಿಕೆ ರೀತಿಯಲ್ಲಿ ಮಾತುಗಳನ್ನಾಡುವವರ ಮೇಲೆಯೂ ಸುಮೋಟೋ ಕೇಸು ದಾಖಲಿಸಿ ತಮ್ಮ ಸಂವಿಧಾನಬದ್ದತೆಯನ್ನು ತೋರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.