Updated News From Kaup
ಪಡುಕಳತ್ತೂರು ಪಿಕೆಎಸ್ ಪ್ರೌಢ ಶಾಲೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ
Posted On: 18 Mar 2025, 09:12 PM
ಕಾಪು : ಪಡುಕಳತ್ತೂರು ಪಿಕೆಎಸ್ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಭಯ ಹಾಗೂ ಒತ್ತಡ ನಿವಾರಣೆ, ಪರಿಣಾಮಕಾರಿ ಪರೀಕ್ಷಾ ಪೂರ್ವ ಸಿದ್ಧತೆ, ಧನಾತ್ಮಕ ಚಿಂತನೆಯೊಂದಿಗೆ ಆತ್ಮವಿಶ್ವಾಸ ವೃದ್ಧಿಯ ಬಗ್ಗೆ ಕಾಪು ತಾಲೂಕು ಕಸಾಪ ಅಧ್ಯಕ್ಷರು ಹಾಗೂ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಸಂವಾದ ನಡೆಸಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಪರೀಕ್ಷೆಯ ದಿನದ ಮೊದಲ ಸಿದ್ಧತೆ, ಪರೀಕ್ಷಾ ಕೊಠಡಿಯಲ್ಲಿ ಹಾಗೂ ಪರೀಕ್ಷೆಯ ಕೊನೆಯಲ್ಲಿ ಗಮನಿಸಬೇಕಾದ ಅಂಶಗಳನ್ನು ತಿಳಿಸಿ ಯಾವುದೇ ಭಯವಿಲ್ಲದೆ ಖುಷಿಯಲ್ಲಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಬರೆಯುವಂತೆ ಮನವರಿಕೆ ಮಾಡಿದರು. ಕನ್ನಡ ಭಾಷಾ ಪಾಠದಲ್ಲಿ ಪೂರ್ಣ ಅಂಕಗಳಿಸಿದ ಕಾಪು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ನಗದು ಬಹುಮಾನದೊಂದಿಗೆ ತಾಲೂಕು ಮಟ್ಟದಲ್ಲಿ ಸನ್ಮಾನಿಸಲಾಗುವುದು ಎಂದರು. ಶಿರ್ವ ರೋಟರಿಯ ಇಂರ್ಯಾಕ್ಟ್ ಸಂಸ್ಥೆಗಳಿರುವ ಶಾಲೆಗಳಲ್ಲಿ ನೂರು ಶೇಕಡ ಫಲಿತಾಂಶ ದಾಖಲಿಸಿದ್ದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಬಹುಮನ ನೀಡಿ ಅಭಿನಂದಿಸಲಾಗುವುದು ಎಂದರು. ವಿದ್ಯಾರ್ಥಿಗಳು ಮುಕ್ತವಾಗಿ ಸಂವಾದದಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯ ಶಿಕ್ಷಕ ಗಂಗಾ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕ ಚಂದ್ರಕಾಂತ್ ಮಾನೆ ನಾಯ್ಕ್ ವಂದಿಸಿದರು. ವೇದಿಕೆಯಲ್ಲಿ ಶಿಕ್ಷಕಿಯರಾದ ಸಂಗೀತಾ, ಕು.ಕಾವ್ಯಾ ಉಪಸ್ಥಿತರಿದ್ದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ
Posted On: 18 Mar 2025, 09:04 PM
ಕಾಪು : ಪುನರ್ ನಿರ್ಮಾಣಗೊಂಡಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇಲ್ಲಿಗೆ ಮಂಗಳವಾರ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ ನೀಡಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಸನ್ನಿದಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೇಖರ್ ಸಾಲ್ಯಾನ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಪ್ರಚಾರ ಸಮಿತಿಯ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಕಲೆ : ಕಾಂತಾರ ಸಿನಿಮಾದ ಚಿತ್ರ ಬಿಡಿಸಿದ ಕಾಂತಾವರದ ಶ್ರೀಯಾ ಕುಲಾಲ್
Posted On: 18 Mar 2025, 03:39 PM
ಕಾರ್ಕಳ : ತಾಲೂಕಿನ ಕಾಂತಾವರದ ಶ್ರೀಯಾ ಕುಲಾಲ್ ಕಾಂತಾರ ಸಿನಿಮಾದ ಕಲ್ಪನೆಯ ಚಿತ್ರ ರಚಿಸಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಈಕೆಯಿಂದ ಹಲವಾರು ಚಿತ್ರಗಳು ರೂಪುಗೊಂಡಿದೆ. ಶ್ರೀಯಾ ಕುಲಾಲ್ ಕಾಂತಾವರ ಕುಲಾಲ ಸಂಘ ಇದರ ಸಕ್ರಿಯ ಸದಸ್ಯ ಸಂತೋಷ್ ಕುಲಾಲ್ ಬೇಲಾಡಿ ಹಾಗೂ ಸುಮಿತ ಕುಲಾಲ್ ದಂಪತಿ ಸುಪುತ್ರಿ.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ
Posted On: 18 Mar 2025, 10:41 AM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಂಗಳವಾರ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ ನೀಡಿದರು. ಅಂಗಾರಕ ಸಂಕಷ್ಟಹರ ಚತುರ್ಥಿಯ ಶುಭದಿನದಂದು ಶ್ರೀ ಕ್ಷೇತ್ರಕ್ಕೆ ಆಗಮಿಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗೆ ದೇವಳದ ಪ್ರಧಾನ ಅರ್ಚಕರು ಶ್ರೀದೇವಿಯ ಪ್ರಸಾದ ನೀಡಿದರು. ದೇವಸ್ಥಾನದ ವತಿಯಿಂದ ಗೌರವಿಸಿಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ, ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯ, ಶ್ರೀನಿವಾಸ್ ಉಪಾಧ್ಯಾಯ, ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.
ತುಳುನಾಡ ಕಲಾವಿದರು ಪಡುಬಿದ್ರಿ ವತಿಯಿಂದ 24 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ
Posted On: 18 Mar 2025, 10:34 AM
ಪಡುಬಿದ್ರಿ : ತುಳುನಾಡ ಕಲಾವಿದರು (ರಿ.) ಪಡುಬಿದ್ರಿ ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 24ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಭಾರತೀಯ ನೌಕದಳದ ನಿವೃತ್ತ ಸೇನಾಧಿಕಾರಿ ನಟರಾಜ್ ಪಿ.ಎಸ್ ಮಾತನಾಡಿ, ಕಲೆ ಹಾಗು ರಂಗಭೂಮಿ ಕಲಿಕೆಯು ಸೃಜನಶೀಲತೆ, ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಕಲೆಯು ಜನರಿಗೆ ಮೌಲ್ಯಯುತ ನೀತಿ ಪಾಠವನ್ನು ತಿಳಿಸುವ ಕೊಂಡಿಯಾಗಿದೆ. ಯುವ ಕಲಾವಿದರಿಗೆ ಉತ್ತೇಜನವನ್ನು ನೀಡುವ ಹಾಗೂ ಉತ್ತಮ ಅವಕಾಶವನ್ನು ಕಲ್ಪಿಸುವ ಕೆಲಸ ಕಾರ್ಯಗಳು ಸಂಘ ಸಂಸ್ಥೆಗಳು ಮಾಡಬೇಕಾಗಿದೆ. ಈ ನಿಟ್ಚಿನಲ್ಲಿ ತುಳುನಾಡ ಕಲಾವಿದರು ಮಾಡುತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಸನ್ಮಾನ/ಪ್ರಶಸ್ತಿ ಪ್ರಧಾನ : ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ನಟರಾಜ್ ಪಿ.ಎಸ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಸಮಾಜ ಸೇವಕ ಕೆ. ಸುರೇಶ್ ಕುಮಾರ್, ರಾಷ್ಟ್ರೀಯ ಅಥ್ಲೆಟಿಕ್ ಶಾಟ್ಪುಟ್ ಕ್ರೀಡಾ ಪಟು ಅನುರಾಗ್ ಜಿ. ರವರನ್ನು ಸನ್ಮಾನಿಸಲಾಯಿತು. 2024-25 ರ ಸಾಲಿನ "ತುಳುನಾಡ ಸಿರಿ ಪ್ರಶಸ್ತಿ"ಯನ್ನು ಕಲಾ ಕ್ಷೇತ್ರದಲ್ಲಿ ಸಾಧನೆಗೈದ ರಂಗಭೂಮಿ ಕಲಾವಿದೆ ಕು.ಯಶೋಧ ಪಡುಬಿದ್ರಿರವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದ್ದರು. ಈ ಸಂದರ್ಭದಲ್ಲಿ ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಗ್ರಾ.ಪಂ.ಸದಸ್ಯ ಗಣೇಶ್ ಕೋಟ್ಯಾನ್, ಓಂಕಾರ ಕಾಸ್ಟ್ಯೂಮ್ಸ್ ಮತ್ತು ಕಲಾ ಸಂಗಮದ ಪಾಲುದಾರೆ ಗೀತಾ ಅರುಣ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಕಡಲ್ ಫಿಶ್ ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷ ಚೇತನ್ ಪಡುಬಿದ್ರಿ, ಶ್ರೀ ಆದಿಶಕ್ತಿ ಮಂತ್ರದೇವತೆ ಮತ್ತು ಕೊರಗಜ್ಜ ಸನ್ನಿಧಾನದ ಧರ್ಮದರ್ಶಿ ಸುಧಾಕರ್ ಸಾಲ್ಯಾನ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯ ಅಧ್ಯಕ್ಷ ರಚನ್ ಸಾಲ್ಯಾನ್, ಭಗವತಿ ಫ್ರೆಂಡ್ಸ್ ಗ್ರೂಪ್ ಸ್ಥಾಪಕ ಅಧ್ಯಕ್ಷ ಯುವರಾಜ್ ಕುಲಾಲ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಧಾಕರ್ ಕೆ. ವಂದಿಸಿದರು.
ಶ್ರೀ ಕ್ಷೇತ್ರ ಶಂಕರಪುರ : ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ
Posted On: 17 Mar 2025, 12:59 PM
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆಯು ಆದಿತ್ಯವಾರ ಶಂಕರಪುರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಪ್ರಾಣಿ ಪಕ್ಷಿಗಳಿಗೂ ಆತ್ಮವಿದೆ ಪ್ರಾಣಿ ಪಕ್ಷಿಗಳು ವಿವಿಧ ಕಾರಣದಿಂದ ಸಾವನ್ನಪ್ಪಿದಾಗ ಇದಕ್ಕೆ ಮೋಕ್ಷ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ ಕಾರ್ಯಕ್ರಮವು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ, ವಿನೋದ್ ಪಡೀಲ್, ಚಂದ್ರಹಾಸ್, ಸಂತೋಷ್ ಉದ್ಯಾವರ ಮುಂತಾದವು ಉಪಸ್ಥಿತರಿದ್ದರು. ಮಠದ ಪ್ರಮುಖರಾದ ಸತೀಶ್, ನಿಲೇಶ್ ಮುಂತಾದವರು ಸಹಕರಿಸಿದರು. ರಾಘವೇಂದ್ರ ಪ್ರಭು ನಿರೂಪಿಸಿ, ವಂದಿಸಿದರು.
ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ
Posted On: 17 Mar 2025, 11:10 AM
ಕಾಪು : ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಇದರ ನೂತನವಾಗಿ ಆಯ್ಕೆಯಾದ ಜಮಾತ್ ಆಡಳಿತ ಸಮಿತಿ ಹಾಗೂ ಜಮಾತ್ ಅಭಿವೃದ್ದಿ ಸಮಿತಿಯ ವತಿಯಿಂದ ದಾನಿಗಳ ನೆರವಿನಿಂದ ವಿವಿದ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಅವರು ಅಭಿವೃದ್ದಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಮಾತ್ ಸಮಿತಿ ಮತ್ತು ಅಬಿವೃದ್ದಿ ಸಮಿತಿ ಹಾಗೂ ದಾನಿಗಳು, ಎಲ್ಲಾ ಜಮಾತಿಗರ ಒಗ್ಗಟ್ಟನ್ನು ಶ್ಲಾಘಿಸಿದರು. ಜಮಾತಿನ ಹಲವಾರು ದಾನಿಗಳ ಮುಖಾಂತರ ಸಮಾರು 10 ಲಕ್ಷದ ಅಭಿವೃದ್ಧಿ ಕಾರ್ಯಗಳು ನಡೆಯಿತು. ಜಮಾತಿನ ಅಧ್ಯಕ್ಷರಾದ ಡಾ. ಯು.ಎಂ.ಫಾರೂಕ್ ಚಂದ್ರನಗರರವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಜಬ್ ಪರ್ಕಳ, ಅಶ್ರಫ್ ಮೂಸ ಮಜೂರು, ಹಸನಬ್ಬ ಸಾಹೇಬ್, ಹಾಜಿಮೋನು, ಉ ಎ ರಶೀದ್, ಸಾದಿಕ್ ಕೆ ಪಿ, ಮಹಮ್ಮದ್, ಶೌಕತ್ ಅಲಿ ಬಾವ, ಅಬ್ದುಲ್ ರಹೀಂ, ಜಮಾತ್ ಆಡಳಿತ ಸಮಿತಿಯ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಜಮಾತಿನ ಸದಸ್ಯರು ಉಸಸ್ಥಿತರಿದ್ದರು. ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ದುವಾ ಮಾಡಿದರು. ಶರ್ಫುದ್ದೀನ್ ಶೇಖ್ ಸ್ವಾಗತಿಸಿ, ಅಶ್ರಫ್ ಖಾಸಿಂ ಕರಂದಾಡಿ ವಂದಿಸಿದರು.
ತೇಜಸ್ವಿ ಸೂರ್ಯ ದಂಪತಿ : ಕಾಪು ಶ್ರೀ ಹೊಸ ಮಾರಿಗುಡಿ ದೇವಳ ಭೇಟಿ
Posted On: 16 Mar 2025, 10:14 PM
ಕಾಪು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ದಂಪತಿ ಆದಿತ್ಯವಾರ ಸಂಜೆ ದೆಹಲಿಗೆ ಹೊರಡುವ ಮುನ್ನ ಕಾಪು ಮಾರಿಯಮ್ಮನ ದರುಶನ ಪಡೆದರು. ಈ ಸಂದರ್ಭ ದಂಪತಿಗಳಿಗೆ ಅಮ್ಮನ ಅನುಗ್ರಹ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ನೀಡಿದರು. ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ದುರ್ಗಾ ಸ್ತುತಿಯನ್ನು ಹಾಡಿದರು. ತೇಜಸ್ವಿ ಸೂರ್ಯ ದೇವಳದ ಶಿಲ್ಪಕಲೆಯ ಕೆತ್ತನೆಯ ವೈಭವವಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್. ಪಾಲನ್, ಕಚೇರಿ ನಿರ್ವಹಣಾ ಸಮಿತಿಯ ಮುಖ್ಯ ಸಂಚಾಲಕ ಸುನಿಲ್ ಎಸ್. ಪೂಜಾರಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಎಂ. ಸುವರ್ಣ, ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕಿ ಅನಿತಾ ಹೆಗ್ಡೆ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಂಪತಿ ಭೇಟಿ
Posted On: 16 Mar 2025, 10:45 AM
ಕಾಪು : ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಶನಿವಾರ ಬೆಳಿಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ್ ಜೋಶಿ ದಂಪತಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿಯವರು ಪ್ರಹ್ಲಾದ್ ಜೋಶಿ ದಂಪತಿಯನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ದೇವಳದ ಪ್ರಧಾನ ಅರ್ಚಕ ಶ್ರೀಧರ ತಂತ್ರಿಯವರು ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ದೇವಸ್ಥಾನವು ಭಕ್ತಾದಿಗಳ ದೇಣಿಗೆಯಿಂದ ಅತ್ಯಧ್ಭುತವಾಗಿ ಮೂಡಿ ಬಂದಿದೆ. ದೈವ ಭಕ್ತನಾದ ನಾನು ಅತ್ಯಂತ ಭಕ್ತಿಯಿಂದ ಇಲ್ಲಿಗೆ ಬಂದಿದ್ದೇನೆ ಎಂದರು. ಕೇಂದ್ರ ಅಥವಾ ರಾಜ್ಯ ಸರಕಾರದ ಅನುದಾನ ಬಂದಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಕೇಂದ್ರ ಸರಕಾರ ನೇರವಾಗಿ ನೀಡಲಾಗದು, ಆದರೆ ರಾಜ್ಯ ಸರಕಾರದ ಮೂಲಕ ಮನವಿ ಬಂದರೆ ನೋಡೋಣ ಎಂದರು. ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ, ರಮೇಶ್ ಹೆಗಡೆ ಕಲ್ಯ, ಉಡುಪಿ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಜಿತೇಂದ್ರ ಶೆಟ್ಟಿ, ಗೀತಾಂಜಲಿ ಸುವರ್ಣ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಮಾ.13 :ಪಾಂಗಾಳದಲ್ಲಿ ನಡೆಯಲಿದೆ ವೈಭವದ ಸಿರಿಜಾತ್ರೆ
Posted On: 12 Mar 2025, 10:00 AM
ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ವೈಭವದ ಸಿರಿ ಜಾತ್ರೆಯು ಮಾ.13, ಗುರುವಾರದಂದು ಜರಗಲಿದೆ. ಮಾ.13, ಗುರುವಾರದಂದು ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣದಿಂದ ಪ್ರಾರಂಭಗೊಂಡು ಮಧ್ಯಾಹ್ನ 12-30 ಕ್ಕೆ ಮಹಾಪೂಜೆ, 12-45 ಕ್ಕೆ ಬ್ರಾಹ್ಮಣ ಸುಹಾಸಿನಿ ಆರಾಧನೆ, ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ. ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 09-30 ಕ್ಕೆ ವೈಭವ್ ಬೈಗಿನ ಬಲಿ ನಡೆಯಲಿರುವುದು. ರಾತ್ರಿ 11 ಕ್ಕೆ ಕುಮಾರ ದರ್ಶನ , ರಾತ್ರಿ 1 ಕ್ಕೆ ರಂಗಪೂಜೆ, ರಾತ್ರಿ 2:30 ಕ್ಕೆ ಬ್ರಹ್ಮಮಂಡಲ, ರಾತ್ರಿ 3:30 ಕ್ಕೆ ಭೂತಬಲಿ, ರಾತ್ರಿ 4:30 ರಿಂದ ತುಲಾಭಾರ ಸೇವೆಗಳು ನಡೆಯಲಿದೆ. ಮಾ.14, ಶುಕ್ರವಾರ ಬೆಳಿಗ್ಗೆ 11ಕ್ಕೆ ಮಹಾಪೂಜೆ, ಸಂಜೆ 7 ಕ್ಕೆ ತಪ್ಪಂಗಾಯಿ ಬಲಿ, ರಾತ್ರಿ 8:30 ಕ್ಕೆ ದೂಳು ಮಂಡಲ, ನಂತರ ಭೂತಬಲಿ, ಕವಾಟಬಂಧನ, ಶಯನೋತ್ಸವ ಮಾ.15, ಶನಿವಾರ ಬೆಳಿಗ್ಗೆ 07-00 ಕ್ಕೆ ಕವಾಟೋದ್ಘಾಟನೆ, ನಂತರ ಮಹಾಪೂಜೆ, ಸಾಯಂಕಾಲ 05:00 ಕ್ಕೆ ಬಲಿ ಹೊರಟು ಕಟ್ಟೆಪೂಜೆ, ಅವಭೃತ ಸ್ನಾನ ನಡೆದು ಧ್ವಜಾವರೋಹಣಗೊಳ್ಳುವುದರ ಮೂಲಕ ಮೂರು ದಿನಗಳ ಗೌಣೋತ್ಸವು ಸಮಾಪ್ತಿಯಾಗುತ್ತದೆ. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ, ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೇವಸ್ಥಾನದ ಪ್ರಕಟಣೆಯು ತಿಳಿಸಿದೆ.
