Updated News From Kaup

ಅ. 29 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ - ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Posted On: 25-10-2024 02:51PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಇದೇ ಬರುವ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೇಜಾವರ ಮತ್ತು ಮಾಣಿಲ ಸ್ವಾಮಿಗಳ ಸಹಿತ 9ಜನ ಗಣ್ಯರಿಂದ ಪುಸ್ತಕ ಬಿಡುಗಡೆ, 99,999 ನವದುರ್ಗಾ ಲೇಖನದ ಪುಸ್ತಕಗಳಿಗೆ ಏಕಕಾಲದಲ್ಲಿ ವಾಗೀಶ್ವರಿ ಪೂಜೆ ನಡೆಯಲಿದೆ. ತದನಂತರ ನವದುರ್ಗಾ ಲೇಖನ ಬರೆಯುವ ಪುಸ್ತಕವನ್ನು ಭಕ್ತರಿಗೆ ವಿತರಿಸಲಾಗುವುದು. ಈಗಾಗಲೇ ಸೆಪ್ಟೆಂಬರ್ 3ರಿಂದ ನವದುರ್ಗಾ ಲೇಖನ ಬರೆಯುವ ಭಕ್ತರ ಹೆಸರಿನ ನೋಂದಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಪ್ರಕ್ರಿಯೆಗೆ ಪ್ರಪಂಚದಾದ್ಯಂತ ಇರುವ ಭಕ್ತರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ ನಡೆಸಿ ಪುಸ್ತಕ ಬರೆಯುವ ಸಂಕಲ್ಪದೊಂದಿಗೆ ಪುಸ್ತಕ ವಿತರಣೆಗೆ ಚಾಲನೆ ನೀಡಲಾಗುತ್ತದೆ, ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮರಳಿಸಬೇಕಿದೆ, 2025ರ ಫೆಬ್ರವರಿ 4ರಂದು ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ನವಚಂಡಿಯಾಗವನ್ನು ನಡೆಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ.

ಭಕ್ತರು ಬರೆದ ಪುಸ್ತಕವನ್ನು ಸೂರ್ಯ-ಚಂದ್ರರು ಇರುವವರೆಗೆ ಅಮ್ಮನ ಸಾನಿಧ್ಯದಲ್ಲಿ ಶೇಖರಿಸಿ ಇಡಲಾಗುತ್ತದೆ, ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಆ ಪುಸ್ತಕಕ್ಕೆ ಪ್ರತಿವರ್ಷ ನವರಾತ್ರಿಯ ಒಂದು ದಿನ ವಾಗೀಶ್ವರಿ ಪೂಜೆ ನೆರವೇರುತ್ತದೆ, ಲೇಖನ ಬರೆದವರ ಹೆಸರು ಸಾನಿಧ್ಯದಲ್ಲಿ ಶಾಶ್ವತವಾಗಿದ್ದು ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಸಾನಿಧ್ಯದಲ್ಲಿ ನೆನಪಿಸುವಂತೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಅವರ ಕುಟುಂಬದವರ ಒಳಿತಿಗಾಗಿ ಪ್ರಾರ್ಥಿಸುವ ಸಂಕಲ್ಪ ಹೊಂದಲಾಗಿದೆ. ಲೇಖನ ಬರೆದ ಕುಟುಂಬಕ್ಕೂ ಕಾಪು ಮಾರಿಯಮ್ಮನ ಸನ್ನಿಧಾನಕ್ಕೂ ಶಾಶ್ವತವಾದ ಭಕ್ತಿ ಭಾವದ ಸಂಬಂಧ ನೆಲೆಯೂರುತ್ತದೆ ಎಂದು ತಿಳಿಸಿದ್ದಾರೆ.

ಅ.30 : ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ "ಅಕ್ಷರ ಯಾನ"

Posted On: 25-10-2024 10:25AM

ಕಾರ್ಕಳ : ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ 'ಅಕ್ಷರಯಾನ - ಬರವಣಿಗೆಯ ಮೆರವಣಿಗೆ' ಕಾರ್ಯಕ್ರಮವು ಅಕ್ಟೋಬರ್ 30ರ ಬುಧವಾರ ಬೆಳಗ್ಗೆ 9:30ಕ್ಕೆ ಆರಂಭಗೊಳ್ಳಲಿದೆ.

ಈ ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿ. ಸುನಿಲ್ ಕುಮಾರ್ ರವರು ಆಗಮಿಸಲಿದ್ದಾರೆ.

ಯುವ ಸಾಹಿತ್ಯಾಸಕ್ತರಿಗೆ ಸ್ಪೂರ್ತಿದಾಯಕ ಮಾತುಗಳ ಜೊತೆಯಲ್ಲಿ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಖ್ಯಾತ ರಂಗ ಕಲಾವಿದ, ನಟ, ನಿರ್ದೇಶಕರಾಗಿರುವ ಎಸ್. ಎನ್. ಸೇತುರಾಮ್ ರವರು. ಲೇಖಕ, ಕನ್ನಡ ಸಿನಿಮಾರಂಗದ ಪ್ರಮುಖ ನಿರ್ದೇಶಕ ಮತ್ತು ನಟರೂ ಆಗಿರುವ ಪ್ರಕಾಶ್ ಬೆಳವಾಡಿಯವರು ಹಾಗೂ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ, ತೀಕ್ಷ್ಣ ಲೇಖನ ಹಾಗೂ ಯುವಪ್ರಜ್ಞೆ ಮತ್ತು ಉತ್ಸಾಹದ ಪ್ರತಿನಿಧಿಯಂತೆ ರಾಜಕೀಯದಲ್ಲೂ ತಮ್ಮ ಗುರುತು ಕಟ್ಟಿಕೊಂಡಿರುವ ಮಾಜಿ ಸಂಸದರಾದ ಪ್ರತಾಪ್ ಸಿಂಹರವರು.

ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಯುವ ಬರಹಗಾರರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ಪುಸ್ತಕಮನೆ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.

ಕಾಪು ಹೊಸ ಮಾರಿಗುಡಿ ದೇವಸ್ಥಾನ : ಸ್ವರ್ಣ ಜುವೆಲ್ಲರ್ಸ್ ಗೆ ಸ್ವರ್ಣ ಹಸ್ತಾಂತರ

Posted On: 24-10-2024 07:39PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ನೇತೃತ್ವದಲ್ಲಿ ಸ್ವರ್ಣ ಜುವೆಲರ್ಸ್ ನ ಪ್ರಬಂಧಕ ಲಕ್ಷ್ಮೀ ನಾರಾಯಣ್ ಮತ್ತು ಸುನಿಲ್ ಜಿ ಅವರಿಗೆ ಗುರುವಾರದಂದು ಚಿನ್ನ ಮತ್ತು ಬೆಳ್ಳಿಯನ್ನು ಹಸ್ತಾಂತರಿಸಲಾಯಿತು. ‌

ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರಶೇಖರ್ ಅಮೀನ್, ಪ್ರಚಾರ ಸಮಿತಿ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರೀ, ನವದುರ್ಗಾ ಲೇಖನ ಯಜ್ಞ ಸಮಿತಿಯ ಸಂಚಾಲಕ ದಾಮೋದರ ಶರ್ಮಾ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅ. 29ರವರೆಗೆ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಅವಕಾಶ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ನೇತೃತ್ವದಲ್ಲಿ ಭಕ್ತಾದಿಗಳಿಂದ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಸ್ವರ್ಣ ಸಮರ್ಪಣೆಗೆ ಜೂನ್ 25ರಂದು ಚಾಲನೆ ನೀಡಲಾಗಿತ್ತು, ಅಕ್ಟೋಬರ್ 3 ರಂದು ಮುಹೂರ್ತ ನೆರವೇರಿಸಲಾಗಿತ್ತು. ಸಮಿತಿಯ ನಿರೀಕ್ಷೆಯಂತೆ ಭಕ್ತರು ಈಗಲೂ ಚಿನ್ನ ಮತ್ತು ಬೆಳ್ಳಿಯನ್ನು ನೀಡುತ್ತಿದ್ದು, ಅಕ್ಟೋಬರ್ 29ರವರೆಗೆ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಅವಕಾಶವಿದ್ದು, ಸ್ವರ್ಣ ಗದ್ದುಗೆಯ ಕೆಲಸ ಪ್ರಗತಿಯಲ್ಲಿದೆ.

ಸುಮಾರು 20 ಕೆಜಿ ಚಿನ್ನ, 180 ಕೆಜಿ ಬೆಳ್ಳಿಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸ್ವರ್ಣ ಗದ್ದುಗೆಗೆ ಭಕ್ತರಿಂದ ಈಗಾಗಲೇ 11 ಕೆಜಿ ಚಿನ್ನ, 36 ಕೆಜಿ ಬೆಳ್ಳಿ ಸಮರ್ಪಣೆಯಾಗಿದೆ. ಪ್ರಪಂಚದಾದ್ಯಂತ ಇರುವ ಭಕ್ತರಿಂದ ಮತ್ತಷ್ಟು ಚಿನ್ನ ಸಮರ್ಪಣೆಗೊಳ್ಳುವ ನಿರೀಕ್ಷೆಯಿದ್ದು ಭಕ್ತರು ಆದಷ್ಟು ಶೀಘ್ರದಲ್ಲಿ ಸ್ವರ್ಣ ಮತ್ತು ಬೆಳ್ಳಿ ಸಮರ್ಪಿಸಬಹುದಾಗಿದೆ ಎಂದು ಸ್ವರ್ಣ ಗದ್ದುಗೆ ಸಮರ್ಪಣಾ ಸ‌ಮಿತಿ ಅಧ್ಯಕ್ಷ ರವಿಸುಂದರ್ ಶೆಟ್ಟಿ ಮುಂಬಯಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಪುತ್ತೂರಿನ ಕಿಶೋರ್ ಕುಮಾ‌ರ್ ಗೆಲುವು

Posted On: 24-10-2024 12:47PM

ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದಂತಹ ವಿಧಾನ ಪರಿಷತ್‌ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪುತ್ತೂರಿನ ಕಿಶೋರ್ ಕುಮಾ‌ರ್ ಬೊಟ್ಯಾಡಿ ಜಯಭೇರಿ ಸಾಧಿಸಿದ್ದಾರೆ.

ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದರು. ಇಂದು (ಅ.24) ಮಂಗಳೂರಿನ ಸಂತ ಅಲೋಷಿಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಕಿಶೋರ್ ಕುಮಾ‌ರ್ ಅಧಿಕ ಮತ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಎಸ್‌ಡಿಪಿಐ ಅಭ್ಯರ್ಥಿ ಅನ್ವ‌ರ್ ಸಾದತ್ ಬಜತ್ತೂರು ಹಾಗೂ ಪಕ್ಷೇತರ ಅಭ್ಯರ್ಥಿ ದಿನಕ‌ರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಶಂಕರಪುರದ ಅನಿಲ್ ಕುಮಾರ್ ರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Posted On: 24-10-2024 11:31AM

ಉಡುಪಿ: ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾಗಿರುವ ಶಂಕರಪುರ ಶಿವಾನಂದನಗರದ ಅನಿಲ್ ಕುಮಾರ್ ರವರು ಬೆಂಗಳೂರಿನ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ (RUPSA)ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ಅಕ್ಟೋಬರ್ 21ರಂದು ಬೆಂಗಳೂರಿನ ಜುಬಿಲಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳ ಉಡುಪಿ ವಲಯ ಮಟ್ಟದ ಕ್ರೀಡಾಕೂಟದ ಟ್ರೋಫಿ ಹಾಗೂ ಪದಕಗಳ ಕೊಡುಗೆ

Posted On: 24-10-2024 11:29AM

ಕಾಪು : ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಉಡುಪಿ, ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆ ಮಲ್ಲಾರು ಮತ್ತು ಸರಕಾರಿ ಸಂಯುಕ್ತ ಪ್ರೌಢಶಾಲೆ ಮೂಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅ.23 ಮತ್ತು 24 ರಂದು ಮಹಾತ್ಮ ಗಾಂಧಿ ಕ್ರೀಡಾಂಗಣ ಅಜ್ಜರಕಾಡು ಉಡುಪಿಯಲ್ಲಿ ನಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಉಡುಪಿ ವಲಯ ಮಟ್ಟದ ಕ್ರೀಡಾಕೂಟದ ಟ್ರೋಫಿ ಹಾಗೂ ಪದಕಗಳನ್ನು ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿವಂಗತ ಮೊಹಮ್ಮದ್ ಝಹಿರ್ ಅಬ್ದುಲ್ ಸತ್ತಾರ್ ಅವರ ಸ್ಮರಣಾರ್ಥ ವಹಿಸಲಾಗಿದೆ.

ಇದರ ವೆಚ್ಚದ ಚೆಕ್ ನ್ನು ಉರ್ದು ಪ್ರೌಢಶಾಲಾ ಮಲ್ಲಾರು ಇದರ ಮುಖ್ಯ ಶಿಕ್ಷಕಿ ವೀಣಾ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶಾನವಾಝ್ ಫಜಲುದ್ದೀನ್, ಉಪಾಧ್ಯಕ್ಷ ಶಾಹಿದ್ ನವಾಝ್, ಹಿರಿಯ ಸದಸ್ಯರಾದ ಶೇಕ್ ಖಾಲಿದ್ ಅಹ್ಮದ್, ಶಾನವಾಝ್ ನೂರುಲ್ಲಾ ಮತ್ತು ಸಯೀದ್ ಅಹ್ಮದ್ ಅಂಜಲಬೆಟ್ಟು ಉಪಸ್ಥಿತರಿದ್ದರು.

ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಕೋರಿ ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಉನ್ನತ ಶಿಕ್ಷಣ ಸಚಿವರಿಗೆ ಪತ್ರ

Posted On: 23-10-2024 10:52PM

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ತುಳು ಸ್ನಾತಕೋತ್ತರ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದು, ಸರ್ಕಾರ ಕೂಡಲೇ ಶುಲ್ಕ ಕಡಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶ ಶುಲ್ಕವನ್ನು 22,410 ರೂ. ಏರಿಸುವ ಮೂಲಕ ತುಳು ಭಾಷೆ ಅಧ್ಯಯನ ಮಾಡಬಯಸುವವರಿಗೆ ಆರ್ಥಿಕ ಹೊರೆಯುಂಟು ಮಾಡಲಾಗಿದೆ. ಆರಂಭದಲ್ಲಿ ತುಳು ಎಂಎ ಕೋರ್ಸ್‌ಗೆ 15 ಸಾವಿರ ರೂ. ಪ್ರವೇಶ ಶುಲ್ಕ ಇತ್ತು. ಆದರೆ ಇದೀಗ ಮೂರು ವರ್ಷದ ಬಳಿಕ 22,410 ರೂ.ಗೆ ಶುಲ್ಕ ಏರಿಕೆ ಮಾಡಿರುವುದರಿಂದ ತುಳು ಎಂಎ ಅಧ್ಯಯನಕ್ಕೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಭಾಷೆ ಮಾನ್ಯತೆ ಪಡೆಯುವುದಕ್ಕೆ ಪ್ರಯತ್ನಗಳು ನಡೆಯುತ್ತಿರಬೇಕಾದರೆ, ರಾಜ್ಯ ಸರ್ಕಾರವು ತುಳು ಭಾಷೆ ಉತ್ತೇಜನಕ್ಕೆ ಸಹಕಾರಿಯಾಗಿರುವ ಎಂಎ ಅಧ್ಯಯನ ಕೋರ್ಸ್‌ನ ಪ್ರವೇಶ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ. ಸ್ಥಳೀಯ ಭಾಷೆಗೆ ನೆರವು ನೀಡುವ ನಿಟ್ಟಿನಲ್ಲಿ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂಬ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ 2020-21ನೇ ಸಾಲಿನಿಂದ 4 ಸಾವಿರ ರೂ. ಕಡಿತಗೊಳಿಸಲಾಗಿತ್ತು. ಆದರೆ, 3 ವರ್ಷದ ಬಳಿಕ ವಿವಿಯು ಪ್ರವೇಶ ಶುಲ್ಕ ಹೆಚ್ಚಿಸುವ ಮೂಲಕ ತುಳು ಭಾಷೆ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ, ಕೂಡಲೇ ಶುಲ್ಕ ರಿಯಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ.

ತುಳು ಎಂಎ ವಿಭಾಗಕ್ಕೆ ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಮಾತ್ರ ವಿವಿಯು ತುಳು ಸ್ನಾತಕೋತ್ತರ ವಿಭಾಗವನ್ನು ಮುಂದುವರಿಸುವುದಕ್ಕೆ ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕವನ್ನು ಏಕಾಏಕಿ ಹೆಚ್ಚಳ ಮಾಡಿದರೆ ತುಳು ಎಂಎ ಅಧ್ಯಯನಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯುವ ಆತಂಕವಿದೆ. ಹೀಗಿರುವಾಗ, ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿಗಳು ಯಶಸ್ವಿಯಾಗಿ ಮುಂದುವರಿಯಬೇಕಾದರೆ, ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕವನ್ನು ಈ ಮೊದಲಿನಂತೆ ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಚಿವ ಡಾ.ಎಂ.ಸಿ ಸುಧಾಕರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ : 2025ರ ಏಪ್ರಿಲ್ 3 ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ

Posted On: 23-10-2024 08:42PM

ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ದೇವಳದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಬುಧವಾರ ಸಂಜೆ ನಡೆದ ನಡೆದ ವಿಶೇಷ ಸಭೆಯಲ್ಲಿ 2025 ಏಪ್ರಿಲ್ 3ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ ಎಂದು ಗ್ರಾಮಸ್ಥರ ಸಮ್ಮುಖ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ದೇವಳ ಸಂಕೋಚಕ್ಕೆ ತಂತ್ರಿಗಳು ಪ್ರಶಸ್ತ ದಿನ ನೀಡಿದ್ದಾರೆ. 20 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ದೇಗುಲದ ಸಮಗ್ರ ಜೀರ್ಣೋದ್ಧಾರವಾಗಲಿದೆ. ದೇವಸ್ಥಾನದ ಗರ್ಭಗುಡಿಯ ಪುಣ್ಯಕಾರ್ಯವು ಗ್ರಾಮದ ಸಮಸ್ತ ಭಕ್ತಾದಿಗಳ ಆರ್ಥಿಕ ಸಹಕಾರದಿಂದ ನಡೆಯಲಿದೆ ಎಂದು ಹೇಳಿದರು.

ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಮಾತನಾಡಿ, ಮುಂದಿನ ಏಪ್ರಿಲ್ 3ರಂದು ಬಾಲಾಲಯ ಪ್ರತಿಷ್ಟೆ, ಸಂಕೋಚಕ್ಕೆ ದಿನ ನಿಗದಿ ಪಡಿಸಲಾಗಿದೆ. 2026 ಮೀನ ಸಂಕ್ರಮಣದೊಳಗಾಗಿ ನಡೆಯಬೇಕಾದ ಬ್ರಹ್ಮಕಲಶಾದಿಗಳ ಕಾರ್ಯ ನಡೆಸಬೇಕು ಎಂದು ಸಮಗ್ರವಾಗಿ ವಿವರಣೆ ನೀಡಿದರು. ಗೌರವಾಧ್ಯಕ್ಷ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಶಕ್ತಿ ಮುಖ್ಯವಲ್ಲ ಭಕ್ತಿ ಮುಖ್ಯ. ಪಡುಬಿದ್ರಿಯ ದೇವಳದ ಜೀಣೋದ್ಧಾರಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ರಾಜೇಶ್ ಶೇರಿಗಾರ್, ವಿಶುಕುಮಾರ್ ಶೆಟ್ಟಿಬಾಲ್, ಕೇಶವ ಅಮೀನ್, ರವೀಂದ್ರನಾಥ ಜಿ. ಹೆಗ್ಡೆ, ವಿಷ್ಣುಮೂರ್ತಿ ಆಚಾರ್ಯ ಸಭೆಯಲ್ಲಿ ಮಾತನಾಡಿದರು. ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ದೇವಳದ ಅರ್ಚಕರಾದ ಪದ್ಮನಾಭ ಭಟ್, ವೈ. ಗುರುರಾಜ ಭಟ್, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ ಉಪಸ್ಥಿತರಿದ್ದರು.

ಉಪಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಪ್ರಾಸ್ತಾವಿಸಿದರು. ಮುರಳೀನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯ ಶೆಟ್ಟಿ ಪದ್ರ ವಂದಿಸಿದರು.

ರಾಜ್ಯಮಟ್ಟದ ‌ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾದ ಎಮ್. ನೀಲಾನಂದ ನಾಯ್ಕ್

Posted On: 22-10-2024 11:13PM

ಕಾಪು : ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರಿ.) ಕರ್ನಾಟಕ (ರುಪ್ಸ) ವತಿಯಿಂದ ಸೋಮವಾರ ಬೆಂಗಳೂರಿನಲ್ಲಿ ನಡೆದ ರುಪ್ಸ ಸಂಭ್ರಮ ಮತ್ತು ರುಪ್ಸ ಮಿತ್ರ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಮ್. ನೀಲಾನಂದ ನಾಯ್ಕ್ ರನ್ನು ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಎಲ್ ಭೋಜೆಗೌಡ, ರುಪ್ಸ ಕರ್ನಾಟಕ ಬೆಂಗಳೂರು ಇದರ ಗೌರವ ಅಧ್ಯಕ್ಷರಾದ ಟಿ.ವಿ ಮೋಹನ್, ರಾಜ್ಯಾಧ್ಯಕ್ಷರಾದ ಡಾ. ಹಾಲನೂರು ಲೇಪಾಕ್ಷಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ ಎಲ್ ದಿಂಡೂರ, ರಾಜ್ಯ ಕಾರ್ಯಾಧ್ಯಕ್ಷ ಕೊಟ್ರೇಶ್ ಬಿ ಎಮ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ನವದುರ್ಗಾ ಮಂಟಪ ಶಂಕುಸ್ಥಾಪನೆ

Posted On: 22-10-2024 06:42PM

ಕಾಪು : ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನವದುರ್ಗಾ ಮಂಟಪದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಗಳ ಕಚೇರಿ, 9 ಸೇವಾ ಕೌಂಟರ್, ಮೀಟಿಂಗ್ ಹಾಲ್ ಒಳಗೊಂಡಿರುವ ಸುಸಜ್ಜಿತ ಕಟ್ಟಡದ ಕಾಮಗಾರಿಗೆ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಶಂಕುಸ್ಥಾಪನೆ ಮಾಡಲಾಯಿತು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಇವರು ಗ್ರಾಮ ದೇವರಾದ ಒಡೆಯ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಾನದಲ್ಲಿ ಪ್ರಾರ್ಥಿಸಿ ಶಂಕುಸ್ಥಾಪನೆಯ ಕಲ್ಲುಗಳನ್ನು ಪುಷ್ಕರಣಿಯಲ್ಲಿ ಶುದ್ಧೀಕರಿಸಿ, ಅಮ್ಮನ ಸನ್ನಿಧಾನಕ್ಕೆ ತಂದು ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿ ಬಳಿಕ ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಮತ್ತು ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಜಾತ್ಯಾತೀತ ಜನತಾದಳ ಉಡುಪಿ ಜಿಲ್ಲಾಧ್ಯಕ್ಷ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಸಾಯಿರಾಧ ಗ್ರೂಪ್ ಉಡುಪಿ ಆಡಳಿತ ನಿರ್ದೇಶಕ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮನೋಹರ್ ಎಸ್. ಶೆಟ್ಟಿ , ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ. ಶೆಟ್ಟಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನವದುರ್ಗೆಯರ ಹೆಸರಿನ ಚೀಟಿಯನ್ನು ತೆಗೆಯುವ ಮೂಲಕ ಕೊರಂಗ್ರಪಾಡಿ ದೊಡ್ಡಮನೆ ನೇತ್ರಾವತಿ ಶೆಡ್ತಿಯವರ ಸ್ಮರಣಾರ್ಥ ಕಾಪು ದೇವಿ ಪ್ರಸಾದ್ ಕನ್ಸ್ಟ್ರಕ್ಷನ್ ಆಡಳಿತ ನಿರ್ದೇಶಕರಾದ ಬೀನಾ ವಾಸುದೇವ ಶೆಟ್ಟಿಯವರು ಕಟ್ಟಡ ನಿರ್ಮಿಸಿ ಕೊಡುವುದಾಗಿ ಗುತ್ತಿಗೆದಾರ ಪರಮೇಶ್ ಆಚಾರ್ಯ ಅವರಿಗೆ ಪ್ರಸಾದ ನೀಡಿ ಅಡ್ವಾನ್ಸ್ ನೀಡುವ ಮೂಲಕ ಕಟ್ಟಡ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅನಿಲ್ ಬಳ್ಳಾಲ್ ಕಾಪು ಬೀಡು, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ದಾನಿಗಳಾದ ನಾರಾಯಣ ಶೆಟ್ಟಿ ಮೂಳೂರು, ಉಡುಪಿ ನಗರಸಭಾ ಸಮಿತಿಯ ಪ್ರಧಾನ ಸಂಚಾಲಕ ದಿವಾಕರ ಶೆಟ್ಟಿ ಕೊಡವೂರು, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಕಾಪು ಕ್ಷೇತ್ರದ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಅರುಣ್ ಶೆಟ್ಟಿ ಪಾದೂರು, ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ, ಗೌರವ ಸಲಹೆಗಾರ ವಿಕ್ರಂ ಕಾಪು, ನಿರ್ಮಲ್ ಕುಮಾರ್ ಹೆಗ್ಡೆ, ವಾರ್ಡ್ ಸಮಿತಿಯ ಅನಿಲ್ ಕುಮಾರ್ ಕಾಪು, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳಾದ ಜಗದೀಶ್ ಬಂಗೇರ, ಚಂದ್ರಶೇಖರ ಅಮೀನ್, ರವೀಂದ್ರ ಎಂ, ಬಾಬು ಮಲ್ಲಾರ್, ರೇಣುಕಾ ದೇವಾಡಿಗ, ಶೈಲಜಾ ಪುರುಷೋತ್ತಮ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಶಿಲ್ಪಾ ಜಿ.ಸುವರ್ಣ, ಪ್ರಚಾರ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಸಾವಿತ್ರಿ ಗಣೇಶ್, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಆರ್ಥಿಕ ಸಮಿತಿಯ ಸಂಚಾಲಕ ಸುನಿಲ್ ಎಸ್. ಪೂಜಾರಿ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಮುಖ್ಯ ಸಂಚಾಲಕರು, ಸಂಚಾಲಕರು ಉಪಸ್ಥಿತರಿದ್ದರು.