Updated News From Kaup
ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು : ಕಟ್ಟಿಂಗೇರಿ ಹೆಬ್ಬಾರ್
Posted On: 19 Apr 2025, 05:38 PM
ಕಾಪು : ಕೃಷಿ ಹಾಗೂ ಅಂತರ್ಜಲ ವೃದ್ಧಿಗೆ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನೀರಿನ ಶೇಖರಣೆಗೆ ಕೆರಗಳು ಅತೀ ಮುಖ್ಯ. ಜೀವಜಲ ಉಳಿಸುವುದು ಪುಣ್ಯದ ಕಾರ್ಯ. ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು ಎಂದು ರಾಜ್ಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪೂರ್ವ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿದರು. ಅವರು ಶನಿವಾರ ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ ಸಮೀಪ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಲ್ಲಿ ಕುರುಡಾಯಿ ಕೆರೆಯ ಹೂಳೆತ್ತುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಹುಟ್ಟಿನಿಂದ ಸಾಯುವವರೆಗೆ ಮನುಷ್ಯರಿಗೆ ಏನೆಲ್ಲಾ ಅಗತ್ಯ ಇದೆಯೋ ಅದನ್ನೆಲ್ಲಾ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಈಗಾಗಲೇ 800ಕ್ಕೂ ಅಧಿಕ ಕೆರಗಳ ಜೀರ್ಣೋದ್ದಾರ ಮಾಡಲಾಗಿದೆ ಎಂದರು. ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, ಎಲ್ಲಾ ಜೀವರಾಶಿಗಳಿಗೂ ನೀರು ಅತ್ಯಂತ ಅಮೂಲ್ಯವಾಗಿದ್ದು ಅದನ್ನು ಪೂಜ್ಯರು ಮನಗಂಡು ಈ ಕಾರ್ಯವನ್ನು ಕೈಗೊಂಡಿದ್ದಾರೆ. ಇದಕ್ಕೆ ಸರ್ವರ ಸಹಕಾರ ಅತ್ಯಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಶೆಟ್ಟಿ ಗ್ರಾ.ಪಂ.ಸದಸ್ಯ ಹಾಗೂ ಕುರುಡಾಯಿ ಕೆರೆ ಸಮಿತಿ ಬೆಳ್ಳೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ, ಜನಜಾಗೃತಿ ಸಮಿತಿ ಸದಸ್ಯೆ ಸುಜಾತಾ ಸುವರ್ಣ, ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಸ್ಯಾಮ್ಸನ್, ಶ್ರೀನಿಧಿ ಪ್ರಭು, ಗ್ರಾ.ಪಂ.ಸದಸ್ಯರಾದ ಸಂತೋಷ್, ಪ್ರೇಮಾ, ವೆಂಕಟೇಶ್, ಅಮಿತಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಗೀತಾ ನಿರೂಪಿಸಿದರು. ದೇವೇಂದ್ರ ನಾಯಕ್ ಸ್ವಾಗತಿಸಿದರು. ಸೇವಾ ಪ್ರತಿನಿಧಿಗಳಾದ ದಿವ್ಯಾ, ಮಲ್ಲಿಕಾ, ಲಕ್ಷ್ಮಿ, ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಏ.17, 18 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ದೃಢ ಸಂಪ್ರೋಕ್ಷಣೆ
Posted On: 15 Apr 2025, 07:29 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ವಿದ್ವಾನ್ ಕೆ. ಜಿ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ಕಲ್ಯಾ ವೇದಮೂರ್ತಿ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಏ.17, ಗುರುವಾರ ಮತ್ತು ಏ.18, ಶುಕ್ರವಾರ ಕಾಪು ಮಾರಿಯಮ್ಮನ ದೃಢ ಸಂಪ್ರೋಕ್ಷಣೆ ನಡೆಯಲಿದೆ. ಏ.17, ಗುರುವಾರ ಬೆಳಿಗ್ಗೆ ಗಂಟೆ 9 ಕ್ಕೆ ಪ್ರಾರ್ಥನೆ, ಪುಣ್ಯಾಹ, ನಾಂದಿ ಸಮಾರಾಧನೆ, ಮಾತೃಕಾ ಪೂಜೆ, ಗಣಯಾಗ, ನವಗ್ರಹ ಯಾಗ. ಸಂಜೆ ಗಂಟೆ 5 ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಂಕಾಲ 6.00ರಿಂದ ಸಪ್ತಶತಿ ಪಾರಾಯಣ, ದುರ್ಗಾ ನಮಸ್ಕಾರ ಪೂಜೆ, ಅಷ್ಟಾವಧಾನ ರಾತ್ರಿ 6.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ 7.30 ಹಾಸ್ಯಮಯ ತುಳು ನಾಟಕ 'ಅಮ್ಮು.. ಅಮುಂಡರಾ...?' ಪ್ರದರ್ಶನಗೊಳ್ಳಲಿದೆ. ಏ.18, ಶುಕ್ರವಾರ ಬೆಳಿಗ್ಗೆ ಗಂಟೆ 7.30ರಿಂದ ಚತುಃಷಷ್ಠಿ, ಯೋಗಿನೀ ಮಂಡಲ ಪೂಜಾ, ಚತು:ಷಷ್ಠಿ ಯೋಗಿನೀ ಬಲಿ, ಚತುಃಷಷ್ಠಿ ಯೋಗಿನಿ ದೇವತಾ ಪಾಯಸಯಾಗ. ಪೂರ್ವಾಹ್ನ ಗಂಟೆ 11 ಕ್ಕೆ ಪೂರ್ಣಾಹುತಿ, ಪಂಚವಿಂಶತಿ ಕಲಶ ಆರಾಧನೆ, ಕಲಶಾಭಿಷೇಕ, ಪ್ರಸನ್ನ ಪೂಜಾ ಪೂರ್ವಾಹ್ನ ಗಂಟೆ 11.30 ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ಇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟಕಲ್ಲು ಉಮಾನಾಥ ನಾಯಕ್ ನಿಧನ
Posted On: 15 Apr 2025, 07:19 PM
ಶಿರ್ವ : ಬಂಟಕಲ್ಲು ಪೊದಮಲೆ ನಿವೃತ್ತ ಶಿಕ್ಷಕ ದಿ.ರಾಮಚಂದ್ರ ನಾಯಕ್ರವರ ಪುತ್ರ ಉಮಾನಾಥ ನಾಯಕ್(62) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮುಂಬಯಿ ದಹೀಸಾರ್ನಲ್ಲಿ ನಿಧನರಾದರು. ಸ್ವಂತ ಉದ್ಯಮ ನಡೆಸುತ್ತಿದ್ದ ಇವರು ಜನಾನುರಾಗಿಯಾಗಿದ್ದರು. ತಾಯಿ, ಪತ್ನಿ, ಮಗಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಪಲಿಮಾರು ಗ್ರಾಮ ಪಂಚಾಯತ್ : ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ
Posted On: 14 Apr 2025, 10:27 PM
ಪಲಿಮಾರು : ಪಲಿಮಾರು ಗ್ರಾಮ ಪಂಚಾಯತ್, ಶ್ರೀ ಮಹದೇಶ್ವರ ಭಜನ ಮಂಡಳಿ ಮತ್ತು ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ವತಿಯಿಂದ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಜನ್ಮದಿನಾಚರಣೆಯನ್ನು ಪಲಿಮಾರು ಗ್ರಾಮ ಪಂಚಾಯತ್ ನ ಬ್ರಹ್ಮಶ್ರೀ ನಾರಾಯಣ ಸಭಾಂಗಣದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶೇ.100 ಶೈಕ್ಷಣಿಕ ಸಾಧನೆ ಮಾಡಿದ ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಹಿತ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷರಾದ ರಾಯೇಶ್ವರ ಪೈ , ಪಿಡಿಓ ಶಶಿಧರ್, ಮಹದೇಶ್ವರ ಮಂಡಳಿ ಸುಧಾಕರ್,ವಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್ ಕರ್ಕೇರ್, ಗ್ರಾ.ಪಂ ಸದಸ್ಯರು, ಸಂಘದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
Posted On: 14 Apr 2025, 09:55 PM
ಪಡುಬಿದ್ರಿ : ಪಡುಬಿದ್ರಿಯ ಓಂಕಾರ್ ಕಲಾ ಸಂಗಮದಲ್ಲಿ ನಡೆಯುತ್ತಿರುವ ರಜಾ-ಮಜಾ ಶಿಬಿರದಲ್ಲಿ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಅಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕರಾದ ಶೇಖರ್ ಹೆಜ್ಮಾಡಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಚಿಂತನೆಗಳು ಮತ್ತು ಭಾರತದ ಸಂವಿಧಾನ ಬಗ್ಗೆ ರಜಾ- ಮಜಾ ಶಿಬಿರದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಲಾ ಸಂಗಮದ ಮುಖ್ಯಸ್ಥರಾದ ಗೀತಾ ಅರುಣ್ ದೀಪ ಪ್ರಜ್ವಲನೆ ಮಾಡಿದರು. ಶಿಬಿರಾರ್ಥಿ ಪುಟಾಣಿ ಜೃೆಷ್ಣವಿರವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಸುಪ್ರೀತಾ ಕೋಟ್ಯಾನ್ ಪಾಂಗಳ, ಶ್ವೇತಾ ಪಾಂಗಳ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿ, ದೀಪಾ ಕರ್ಕೇರ ವಂದಿಸಿದರು.
ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿದೆ : ಪ್ರಸನ್ನ ಎಮ್.ಎಸ್
Posted On: 14 Apr 2025, 07:26 AM
ಮುಲ್ಕಿ : ವಿವಿಧ ರೀತಿಯ ಮಾದಕ ವಸ್ತುಗಳು ಬಳಕೆಯಾಗುತ್ತಿದ್ದು, ಮಾದಕ ವಸ್ತುಗಳಿಗೆ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಬಲಿಯಾಗುತಿದ್ದಾರೆ. ಅದರಲ್ಲಿಯೂ ಇಂಜಿನಿಯರ್ ಹಾಗೂ ವ್ಯೆದ್ಯಕೀಯ ವಿದ್ಯಾರ್ಥಿಗಳನ್ನು ಮಾದಕ ಮಾರಾಟಗಾರರು ಗುರಿಯಾಗಿಸಿದ್ದಾರೆ. ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿರುವುದು ಆಘಾತಕಾರಿದೆ. ನಮ್ಮ ರಾಜ್ಯ ಮಾದಕ ಮುಕ್ತ ರಾಜ್ಯವಾಗಲು ಎಲ್ಲರೂ ಸಹಕರಿಸಬೇಕು. ತಲಪಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗುವ ಅಪಘಾತದಿಂದ ಒಂದು ವರ್ಷಕ್ಕೆ ಆರುನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಬೇರೆ ಬೇರೆ ಕಾರಣದಿಂದ ಸಾವನ್ನಪ್ಪುವರ ಸಂಖ್ಯೆಗಿಂತ ದುಪ್ಪಟ್ಟು ಆಗಿದೆ. ಆದ್ದರಿಂದ ರಸ್ತೆ ನಿಯಮಗಳನ್ನು ತಮ್ಮ ಜೀವದ ರಕ್ಷಣೆಗಾಗಿ ಪಾಲಿಸಿ ಯಾವುದೇ ಅಧಿಕಾರಿಗಳ ಹೆದರಿಕೆಗೆ ಅಲ್ಲ ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ವಿಜಯ ಕಾಲೇಜು ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ.,ರೆಡ್ ಕ್ರಾಸ್ , ರೋವಸ್೯ & ರೇಂಜರ್ ಸಂಯುಕ್ತಾಶ್ರಯದಲ್ಲಿ ರಚನ್ ಸಾಲ್ಯಾನ್ ನೇತೃತ್ವದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ಇದರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ಮುಲ್ಕಿ ಠಾಣಾಧಿಕಾರಿ ಅನಿತಾರವರು ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ, ವಾಹನ ಚಲಿಸುವುದು ಕಂಡು ಬರುತ್ತಿದೆ. ಇದರಿಂದ ಪ್ರತಿದಿನ ರಸ್ತೆ ಅಪಘಾತಗಳು ಜಾಸ್ತಿಯಾಗುತ್ತಿದೆ. ರಸ್ತೆ ದಾಟುವಾಗ ಕೂಡಾ ನಿಯಮಗಳನ್ನು ಪಾಲಿಸದಿರುವುದು, ಮಾದಕ ವಸ್ತುಗಳನ್ನು ಮತ್ತು ಮದ್ಯಪಾನ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಜಾಸ್ತಿ ಯಾಗಿದೆ. ಇಂತಹ ಚಟಗಳಿಗೆ ಬಲಿಯಾಗದೆ, ಶಿಸ್ತುಬದ್ಧವಾಗಿ ಬಾಳಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು. ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ. ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಸಂಸ್ಥಾಪಕ ಡಾ.ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ , ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ರೋಟರಿ ಪೂರ್ವಾಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಪದಾಧಿಕಾರಿಗಳಾದ ಶಶಾಂಕ್ ಸುವರ್ಣ, ಸೌಮಿಕ್ ಶ್ರೀಯಾನ್, ವಿಜೇತ್ ಆಚಾರ್ಯ, ಸಚಿನ್ ಕುಂದರ್, ಪ್ರತೀಕ್ ಶೆಟ್ಟಿ ಕಾರ್ಕಳ, ಶಶಾಂಕ್ ಆಚಾರ್ಯ, ಸುಜನ್ ಕೋಟ್ಯಾನ್ ಹೆಜ್ಮಾಡಿ, ಯಶ್ ಅಮೀನ್ ಹೆಜ್ಮಾಡಿ, ಅದಿತ್ಯ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣಾ ಕುಮಾರಿ ಸ್ವಾಗತಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕ ಅಭಿಷೇಕ್ ವಂದಿಸಿದರು. ಲಾವಣ್ಯ ನಿರೂಪಿಸಿದರು.
ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ ಒಂತಿಬೆಟ್ಟು ಹಿರಿಯಡ್ಕ : ಪ್ರಥಮ ವಾರ್ಷಿಕೋತ್ಸವ
Posted On: 14 Apr 2025, 07:11 AM
ಬಂಟಕಲ್ಲು : ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ (ರಿ.) ಒಂತಿಬೆಟ್ಟು ಹಿರಿಯಡ್ಕ ಇದರ ಪ್ರಥಮ ವಾರ್ಷಿಕೋತ್ಸವ ಜರಗಿತು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಕ್ಕಳಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವಲ್ಲಿ ಮಾತೆಯರು ಮಹತ್ವದ ಪಾತ್ರವನ್ನು ವಹಿಸಬೇಕು. ರಾಮಾಯಣ, ಮಹಾಭಾರತ ನಮ್ಮ ಜೀವನದ ಉಸಿರಾಗಬೇಕು ಎಂದರು. ಗೀತಾ ನೃತ್ಯ ರೂಪಕ ಕಾರ್ಯಕ್ರಮ ನೀಡಿದ ಶ್ರೀ ಯತಿಗುರುರಾಯ ರೂಪಕ ತಂಡ 92ನೇ ಹೇರೂರು ಇದರ ನಿರ್ದೇಶಕಿಯಾಗಿರುವ ಅನಿತಾ ಉಮೇಶ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿವಿಧ ಸಾಧಕರು ಉಪಸ್ಥಿತರಿದ್ದರು. ಹೇರೂರು ಮಾಧವಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗಿರಬೇಕು : ರಾಘವೇಂದ್ರ ಪ್ರಭು ಕವಾ೯ಲು
Posted On: 14 Apr 2025, 07:04 AM
ಉಡುಪಿ : ಒಬ್ಬ ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗುವುದು ಅಷ್ಟೇ ಮುಖ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು. ಅವರು ಅಜ್ಜರಕಾಡು ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆದ ಮಕ್ಕಳ ಶಿಬಿರದಲ್ಲಿ ಮಾತನಾಡಿದರು. ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಪರಿಣಾಮಕಾರಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿದೆ. ಇಂದು ಉತ್ತಮ ಭಾಷಣಕಾರರಿಗೆ ಸಮಾಜದಲ್ಲಿ ಬೇಡಿಕೆ ಇದೆ. ನಾವೆಲ್ಲರೂ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾಥಿ೯ಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸುದ ರೊಂದಿಗೆ ವಿವಿಧ ರೀತಿಯ ಉತ್ತಮ ಹವ್ಯಾಸಗಳನ್ನು ರೂಢಿಸಬೇಕು ಎಂದರು. ಈ ಸಂದಭ೯ದಲ್ಲಿ ಬಿ.ಕೆ ಸುಮಾ ಮತ್ತು ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ಆಯ್ಕೆ
Posted On: 14 Apr 2025, 07:00 AM
ಉಡುಪಿ : ಕೋಟಾದ "ಕಾರಂತ ಥೀಮ್ ಪಾರ್ಕ್"ನಲ್ಲಿ ಮೇ 4 ರಂದು ನಡೆಯಲಿರುವ 5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ರವರು ಆಯ್ಕೆಯಾಗಿದ್ದಾರೆ. ತೆಕ್ಕಟ್ಟೆ ಸಮೀಪದ, ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಮಂಗಳೂರಿನ ಪ್ರತಿಷ್ಠಿತ ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿದರು. ಐಎಮ್ಎ ಕರ್ನಾಟಕದ ನಿಯೋಜಿತ ರಾಜ್ಯ ಅಧ್ಯಕ್ಷರು. ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು.ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿದ್ದರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮನಪಾ ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಮಂಗಳಾದೇವಿ ಹಾಗೂ ಪಡೀಲ್ ಪರಿಸರದಲ್ಲಿ ಕಳೆದ 3 ದಶಕಗಳಿಂದ "ಕುಲಾಲ್ ಹೆಲ್ತ್ ಕೇರ್ ಸೆಂಟರ್" ಮತ್ತು "ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್" ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ "ಕನ್ನಡಿಕಟ್ಟೆ"ಗೆ ಇವರದೇ ನೇತೃತ್ವ. ಸರ್ವಜ್ಞ ವೃತ್ತ ಮಂಗಳೂರು, ರಾಷ್ಟ್ರಕವಿ "ಗೋವಿಂದ ಪೈ ವೃತ್ತ", ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ ಇವರಾಗಿದ್ದಾರೆ. ಮಂಗಳೂರಲ್ಲಿ "ಕುಡ್ಲಂಗಿಪ್ಪ ಕುಂದಾಪ್ರ" ಬಳಗದ ಕ್ರಿಯಾ ಶೀಲ ವ್ಯಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದಾರೆ. ಪ್ರತಿಷ್ಠಿತ "ದೇವರಾಜು ಅರಸು" ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವ್ಯಕ್ತಿ. ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ. ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಲೇಖನಗಳುಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.
ಪಡುಬಿದ್ರಿ : ರಜಾ-ಮಜಾ -2025 ಶಿಬಿರದ ಉದ್ಘಾಟನೆ
Posted On: 14 Apr 2025, 06:45 AM
ಪಡುಬಿದ್ರಿ : ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆಯನ್ನು ಗುರುತಿಸಲು ರಜಾ ಮಜಾ ಶಿಬಿರಗಳು ಪೂರಕವಾಗಿದೆ. ಮಕ್ಕಳನ್ನು ಸಮಾಧಾನಪಡಿಸಲು ಭಯ ಮೂಡಿಸುವ ಕಾರ್ಯವನ್ನು ಮಾಡಿದರೆ ಮಕ್ಕಳ ಮನಸ್ಸಿಗೆ ತೊಂದರೆಯುಂಟಾಗಿ ಕ್ರಮೇಣ ಜೀವನದಲ್ಲಿ ಭಯವನ್ನು ಎದುರಿಸಲು ಅಶಕ್ತರಾಗಿರುತ್ತಾರೆ. ಆದ್ದರಿಂದ ಮಕ್ಕಳನ್ನು ಸದಾ ಕ್ರಿಯಾಶೀಲ ರಾಗುವಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ಓಂಕಾರ ಕಲಾ ಸಂಗಮದ ವತಿಯಿಂದ ಅಯೋಜಿಸಿರುವ 4 ನೇ ವರ್ಷದ "ರಜಾ ಮಜಾ-2025" ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳ ಕೆಟ್ಟ ಆಹಾರ ಪದ್ದತಿಯಿಂದ ವಯೋ ಸಹಜವಾಗಿ ಬರುವ ಕಾಯಿಲೆಗಳು ಇವತ್ತು ಚಿಕ್ಕ ಮಕ್ಕಳಲ್ಲಿ ಕಾಣಿಸುತ್ತಿದೆ. ಆದ್ದರಿಂದ ಮಕ್ಕಳು ಆರೋಗ್ಯ ಯುಕ್ತ ಆಹಾರವನ್ನು ಮಾತ್ರ ಉಪಯೋಗಿಸ ಬೇಕು. ಮನಸ್ಸಿಗೆ ಜಾಸ್ತಿ ಒತ್ತಡ ಹೇರದೆ ಮಕ್ಕಳನ್ನು ಮಕ್ಕಳಂತೆ ಪೋಷಕರು ನೋಡಿಕೂಳ್ಳಬೇಕು ಎಂದು ಪ್ರಾಥಮಿಕ ಅರೋಗ್ಯ ಕೇಂದ್ರದ ವೃೆದ್ಯಾಧಿಕಾರಿ ಡಾ. ರಾಜಶ್ರಿ ಕಿಣಿ ಹೇಳಿದರು. ಸನ್ಮಾನ : ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪಡುಬಿದ್ರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಮ್. ಎಸ್ ರವರನ್ನು ಸನ್ಮಾನಿಸಲಾಯಿತು. ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ರಾಮಾಂಜಿ ಉಡುಪಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದೆ ಬೇಬಿ ಸಾಂಚಿ, ಸಂಸ್ಥೆಯ ಪಾಲುದಾರರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಅದ್ವಿತ್ ಕುಮಾರ್, ಉಪಸ್ಥಿತರಿದ್ದರು. ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು. ದೀಪಾಶ್ರಿ ಕರ್ಕೇರ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
