Updated News From Kaup
ಎಪಿಜೆ ಅಬ್ದುಲ್ ಕಲಾಂ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಡಾ.ಯು.ಎಂ ಫಾರೂಕ್ ಚಂದ್ರನಗರ ಆಯ್ಕೆ

Posted On: 25-12-2024 07:21AM
ಕಾಪು : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-2024 ಹಾಗೂ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ನ ಆಡಳಿತ ನಿರ್ದೇಶಕರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರ ಸಮಾಜ ಸೇವೆಗಾಗಿ ಕೊಡಲ್ಪಡುವ ಡಾ. ಎಪಿಜೆ ಅಬ್ದುಲ್ ಕಲಾಂ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಡಿ.29 ರಂದು ಕಲಾಗ್ರಾಮ ಜ್ಞಾನಭಾರತಿ ಯೂನಿವರ್ಸಿಟಿ ಸಭಾಂಗಣದಲ್ಲಿ ರಾಜ್ಯದ ಸ್ವಾಮೀಜಿಗಳು ರಾಜಕೀಯ ಗಣ್ಯತಿಗಣ್ಯರು ಸಾಹಿತಿಗಳು ನೀಡಿ ಗೌರವಿಸಲಿದ್ದಾರೆಂದು ಸಂಘದ ಅಧ್ಯಕ್ಷರಾದ ಕು| ನಿತ್ಯ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈ :14ನೇ ರಾಜ್ಯಮಟ್ಟದ ಓಪನ್ ಸೀ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಿಶಿತಾ ಚಂದ್ರಶೇಖರ್ ಗೆ ಫಿನಿಶರ್ ಪದಕ

Posted On: 24-12-2024 08:04PM
ಮುಂಬೈ : ಸಿಂಧುದುರ್ಗ್ ಜಿಲ್ಲಾ ಅಕ್ವೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ಚಿವ್ಲ ಬೀಚ್ ಮಾಲವಣದಲ್ಲಿ ಜರುಗಿದ 14ನೇ ರಾಜ್ಯಮಟ್ಟದ ಓಪನ್ ಸೀ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಿಶಿತಾ ಚಂದ್ರಶೇಖರ್ ಫಿನಿಶರ್ ಪದಕ ಗಳಿಸಿರುತ್ತಾರೆ.
ಈಕೆ ಕಾಪುವಿನ ಮಡುಂಬು ಸಂಜೀವ ಪೂಜಾರಿಯವರ ಮೊಮ್ಮಗಳಾಗಿದ್ದು, ಚಂದ್ರಶೇಖರ್ ಮತ್ತು ಸವಿತಾ ದಂಪತಿಗಳ ಪುತ್ರಿಯಾಗಿದ್ದಾರೆ.
ರಜತ ಸಂಭ್ರಮದಲ್ಲಿ ದಿ. ಸೂರ್ಯ ಕುಲಾಲ್ ಸ್ಥಾಪನೆಯ ಕಳತ್ತೂರು ಕುಕ್ಕುಂಜ ಅಯ್ಯಪ್ಪ ಶಿಬಿ

Posted On: 24-12-2024 03:57PM
ಕಾಪು : ಇಲ್ಲಿಯ ಕುತ್ಯಾರು ಕುಕ್ಕುಂಜದ ದಿ. ಸೂರ್ಯ ಕುಲಾಲ್ ಅವರ ಮುಖೆನ ಆರಂಭಗೊಂಡ ಶ್ರೀ ಅಯ್ಯಪ್ಪ ಭಕ್ತವೃಂದ (ರಿ.) ಕುಕ್ಕುಂಜ ಕಳತ್ತೂರು ಇದರ 25 ನೇ ವರ್ಷದ ಕಾರ್ಯಕ್ರಮ ಜ.10 ರಂದು ನಡೆಯಲಿದ್ದು ಆ ಪ್ರಯುಕ್ತ ಜ. 8 ರ ಬುಧವಾರ ರಾತ್ರಿ 9 ಗಂಟೆಗೆ ಶ್ರೀ ಅಯ್ಯಪ್ಪ ದೇವರ ದೀಪೋತ್ಸವ, ಜ.10 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಹಾಗೂ ಅಂದು ರಾತ್ರಿ 9 ಗಂಟೆಗೆ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ಅಯ್ಯಪ್ಪ ಕ್ಷೇತ್ರ ಮಹಾತ್ಮೆ,ರಾತ್ರಿ 8.30 ರಿಂದ ಅನ್ನ ಸಂತರ್ಪಣೆ ನಡೆಯಲಿದ್ದು ಭಕ್ತರು ಆಗಮಿಸಿ, ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶಿಬಿರದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.
ಭಾರತ ತಂಡಕ್ಕೆ ಕಾಪು ಮೂಲದ ತನುಷ್ ಕೋಟ್ಯಾನ್ ಆಯ್ಕೆ

Posted On: 24-12-2024 03:51PM
ಕಾಪು : ಕಾಪು ಮೂಲದ ತನುಷ್ ಕೋಟ್ಯಾನ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮುಂಬಯಿಯಲ್ಲಿ ಹುಟ್ಟಿ ಬೆಳೆದ ತನುಷ್ ಕ್ರಿಕೆಟ್ ಆಟದಲ್ಲಿ ಬಾಲ್ಯದಿಂದಲೇ ಆಲ್ ರೌಂಡರ್ ಆಟದೊಂದಿಗೆ ಗಮನ ಸೆಳೆದಿದ್ದು, ಮುಂಬಯಿ ಕಿರಿಯರ ತಂಡದಲ್ಲಿ ಖಾಯಂ ಸ್ಥಾನ ಪಡದುಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ ಹಜಾರೆ ಟೂರ್ನಿಯಲ್ಲೂ ಮುಂಬಯಿ ತಂಡದ ಭಾಗವಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ. ಈ ಹಿಂದೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬಯಿ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
26 ವಯಸ್ಸಿನ ತನುಷ್ ಕೋಟ್ಯಾನ್ ಬಲಗೈ ಸ್ಪಿನ್ನರ್, ಬಲಗೈ ಬ್ಯಾಟ್ಸ್ಮನ್. ತನುಷ್ ಕೋಟ್ಯಾನ್ ಮುಂಬಯಿ ಪರ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಹಾಗೆಯೇ 25.70 ಸರಾಸರಿಯಲ್ಲಿ 101 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ. ಅವರ ಬ್ಯಾಟ್ನಿಂದ 2 ಭರ್ಜರಿ ಶತಕ ಮತ್ತು 13 ಅರ್ಧ ಶತಕಗಳು ಮೂಡಿಬಂದಿವೆ. 2023-24ರಲ್ಲಿ ಮುಂಬಯಿ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ತನುಷ್ ಕೋಟ್ಯಾನ್ ಪ್ರಮುಖ ಪಾತ್ರವಹಿಸಿದ್ದರು. ಈ ಟೂರ್ನಿಯಲ್ಲಿ 41.83 ಸರಾಸರಿಯಲ್ಲಿ 502 ರನ್ ಗಳಿಸಿದ್ದಲ್ಲದೆ 29 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದರು. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಇರಾನಿ ಕಪ್ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 27 ವರ್ಷಗಳ ನಂತರ ಮುಂಬಯಿ ತಂಡ ಪ್ರಶಸ್ತಿ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ತನುಷ್ 3 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಂತೆ ಮೆಲ್ಲೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ತನುಷ್ ಕೋಟ್ಯಾನ್ ಆಡಲಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಸಮಾಲೋಚನಾ ಸಭೆ

Posted On: 24-12-2024 03:31PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ.) ಮತ್ತು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇದರ ವ್ಯವಸ್ಥಾಪನಾ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯಿಂದ ಜಂಟಿ ಸಭೆಯು ಸೋಮವಾರ ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಲಯದಲ್ಲಿ ನಡೆಯಿತು.
ನೂತನ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬೇಕಾಗುವಂತಹ ಅನೇಕ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ ಪ್ರಕಾಶ್ ಶೆಟ್ಟಿ, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಧಾನ ಅರ್ಚಕರಾದ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಲಾಲಾಜಿ ಆರ್. ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್, ಬೆಂಗಳೂರು ಸಮಿತಿಯ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಧವ ಆರ್. ಪಾಲನ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಉದಯ ಸುಂದರ್ ಶೆಟ್ಟಿ, ಜಯ ಸಿ. ಕೋಟ್ಯಾನ್, ಭಾಸ್ಕರ್ ಎಂ. ಸಾಲ್ಯಾನ್, ಭಗವಾನ್ ದಾಸ್ ಶೆಟ್ಟಿಗಾರ್,ಕೋಶಾಧಿಕಾರಿ ಸಿಎ ಸುದೇಶ್ ರೈ ಮಂಗಳೂರು, ಜೊತೆ ಕಾರ್ಯದರ್ಶಿ ಅರುಣ್ ಶೆಟ್ಟಿ ಪಾದೂರು, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ವಂದಿಸಿದರು.
ಸರಕಾರಿ ಸಂಯುಕ್ತ ಪ್ರೌಢ ಶಾಲೆ ಬೆಳಪು : ಶಾಲಾ ವಾರ್ಷಿಕೋತ್ಸವ

Posted On: 24-12-2024 02:56PM
ಕಾಪು : ಸರಕಾರಿ ಸಂಯುಕ್ತ ಪ್ರೌಢ ಶಾಲೆ ಬೆಳಪು ಇದರ ಶಾಲಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಶೆಟ್ಟಿ ವಹಿಸಿದ್ದರು. ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸ್ಫರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿತು.
ಈ ಸಂದರ್ಭ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ಮುಸ್ತಾಕ್ ಅಹಮದ್, ಬೆಳಪು ಸ್ಪೋರ್ಟ್ಸ್ ಕ್ಲಬ್ ಬೆಳಪು ಅಧ್ಯಕ್ಷ ಶಾ ನವಾಜ್, ರೋಟರಿ ಕ್ಲಬ್ ಕಾಪು ಅಧ್ಯಕ್ಷ ಬಾಲಕೃಷ್ಣ, ಉದ್ಯಮಿ ರವಿ, ಪ್ರಾಥಮಿಕ ಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷ ಚಂದ್ರಹಾಸ, ಎಸ್ ಡಿ ಎಂ.ಸಿ ಸದಸ್ಯರಾದ ಅನುರಾಧ, ಚಂದ್ರಶೇಖರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಬ್ರಾಹಿಂ, ಉಪಾಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಕೆ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನಸೂಯಾ ಇವರು ವಂದಿಸಿದರು. ಪ್ರೌಢ ಶಾಲೆಯ ಶಿಕ್ಷಕ ಸುಧಾಕರ್ ಪಿ ಎಲ್ ನಿರೂಪಿಸಿದರು.
ಉದ್ಯಾವರ ಸೌಹಾರ್ದ ಸಮಿತಿಯಿಂದ ಅಂಗನವಾಡಿಗಳಲ್ಲಿ ಕ್ರಿಸ್ಮಸ್ ಆಚರಣೆ

Posted On: 24-12-2024 02:27PM
ಉದ್ಯಾವರ : ಸೌಹಾರ್ದ ಸಮಿತಿ ಉದ್ಯಾವರದ ನೇತೃತ್ವದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಕ್ರಿಸ್ಮಸ್ ಸಿಹಿ ವಿತರಿಸಿ, ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವo. ಅನಿಲ್ ಡಿಸೋಜ, ಕ್ರಿಸ್ಮಸ್ ಹಬ್ಬ ಶಾಂತಿ, ಸೌಹಾರ್ದತೆ ಮತ್ತು ಕ್ಷಮಿಸುವ ಹಬ್ಬ. ದೇವರು ತಮ್ಮ ಏಕ ಮಾತ್ರ ಪುತ್ರನನ್ನು ಜಗತ್ತಿನ ಒಳಿತಿಗೋಸ್ಕರ ಅವರು ಧಾರೆ ಎರೆದರು. ಯೇಸು ಸ್ವಾಮಿಯವರು ಪ್ರೀತಿಯ ಮೂಲಕ ಎಲ್ಲರ ಮನಸ್ಸು ಗೆದ್ದರು. ನಾವೆಲ್ಲರೂ ಒಂದೇ ದೇವರ ಮಕ್ಕಳು. ನಾವೆಲ್ಲರೂ ಜೊತೆಯಾಗಿ ಪ್ರೀತಿಯ ಸಂದೇಶವನ್ನು ಎಲ್ಲೆಡೆ ಪಸರಿಸೋಣ. ಮನೆಗಳಲ್ಲಿ ತೂಗು ಹಾಕಿರುವ ನಕ್ಷತ್ರದ ಬೆಳಕಿನಂತೆ ಸಮಾಜಕ್ಕೆ ನಾವು ಬೆಳಕಾಗೋಣ. ಒಬ್ಬರಿಗೊಬ್ಬರು ಕ್ಷಮಿಸುವ ಮೂಲಕ ದೇವರ ಪ್ರೀತಿಯ ಸಂದೇಶವನ್ನು ಹಂಚೋಣ ಎಂದು ಕ್ರಿಸ್ಮಸ್ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರು ವಂ. ಸ್ಟೀಫನ್ ರೋಡ್ರಿಗಸ್, ಹಲಿಮಾ ಸಾಬ್ಜು ಆಡಿಟೋರಿಯಂ ಟ್ರಸ್ಟಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಿತಿನ್ ಸಾಲ್ಯಾನ್, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಂದರ್, ಪಂಚಾಯತ್ ಸದಸ್ಯರಾದ ರಿಯಾಜ್ ಪಳ್ಳಿ, ಆಶಾ ವಾಸು, ಆಬಿದ್ ಅಲಿ, ಶ್ರೀ ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಆಮಿನ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಡಿಸೋಜಾ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ನಾಗೇಶ್ ಕುಮಾರ್, ಶಿಕ್ಷಕಿಯರಾದ ಗೀತಾ, ಅಕ್ಷತಾ, ಅಂಗನವಾಡಿ ಕಾರ್ಯಕರ್ತೆಯರು, ಸೌಹಾರ್ದ ಸಮಿತಿ ಮತ್ತು ಕಥೋಲಿಕ್ ಸಭಾದ ಸದಸ್ಯರು ಉಪಸ್ಥಿತರಿದ್ದರು.
ಸೌಹಾರ್ದ ಸಮಿತಿ ಅಧ್ಯಕ್ಷ ರೊಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಡಿ.28 ಮತ್ತು 29 : ಪಡುಬಿದ್ರಿಯಲ್ಲಿ ಕೃಷಿ ಮೇಳ

Posted On: 24-12-2024 02:21PM
ಪಡುಬಿದ್ರಿ : ಉದಯಾದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ನಿತ್ಯಾನಂದ ಆಗ್ರೋ ಲಿಮಿಟೆಡ್ ಕೊಲ್ನಾಡ್,ಮುಲ್ಕಿ ಇವರ ಜಂಟಿ ಆಶ್ರಯದಲ್ಲಿ ಡಿ. 28 ಹಾಗೂ 29ರಂದು ದ್ವಿತೀಯ ಬಾರಿಗೆ ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಗಂಟೆ 9ರಿಂದ ರಾತ್ರಿ 9ರವರೆಗೆ ಜರಗಲಿದೆ ಎಂದು ಸಂಘಟಕರಾದ ರಕ್ಷಾ ಇವರು ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿಸೆಂಬರ್ 28ರಂದು ಕೃಷಿ ಮೇಳವನ್ನು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಜೆ. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ ಉದ್ಘಾಟಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಪಡುಬಿದ್ರಿ ಉದ್ಯಮಿ ಸಂತೋಷ್ ಶೆಟ್ಟಿ ನಡೆಸಲಿದ್ದಾರೆ.
ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಕೃಷಿ ಮಾಹಿತಿ, ಸಾವಯವ ಗೊಬ್ಬರಗಳು, ವಿವಿಧ ತರಕಾರಿ, ಹಣ್ಣಿನ ಗಿಡಗಳ ಮಾರಾಟ, ಕೃಷಿ ಯಂತ್ರೋಪಕರಣ, ನೀರಾವರಿ ಬಗ್ಗೆ ಮಾಹಿತಿ, ಮತ್ಸ್ಯ ಮೇಳ, ಆಹಾರ ಮೇಳಗಳು ಇರಲಿವೆ. ಈಗಾಗಲೇ 70 ಮಳಿಗೆಗಳು ನೋಂದಣಿಯಾಗಿದ್ದು, ಇದರಲ್ಲಿ 15 ಕೃಷಿ ಮಳಿಗೆಗಳಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ನಿತ್ಯಾನಂದ ಆಗ್ರೋ ಲಿಮಿಟೆಡ್ ಪ್ರಬಂಧಕ ನವೀನ್ ಚಂದ್ರ ಪ್ರಭು, ಉದಯಾದ್ರಿ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ಟ್ರಸ್ಟಿಗಳಾದ ಜಗದಾಭಿರಾಮ ಸ್ವಾಮಿ, ನಯನಾಭಿರಾಮ, ಪಿ.ಡಿ. ಶೇಖರ ರಾವ್, ದಿನಕರ ರಾವ್, ಚರಣ್ ರಾಜ್ ಉಪಸ್ಥಿತರಿದ್ದರು.
ಡಿ.29 : ಪಡುಬಿದ್ರಿಯಲ್ಲಿ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ - ಎಂ ಆರ್ ಜಿ ಟ್ರೋಫಿ 2024

Posted On: 24-12-2024 01:44PM
ಪಡುಬಿದ್ರಿ : ಇಲ್ಲಿನ ಬಂಟರ ಸಂಘದ ವತಿಯಿಂದ ಡಿ.29 ರಂದು ಪಡುಬಿದ್ರಿ ಬಂಟರ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ದಿ. ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ಐಕಳ ಭಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಮಂಗಳವಾರ ಪಡುಬಿದ್ರಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದೇಶಾದ್ಯಂತ ನೆಲೆಸಿರುವ ಬಂಟ ಸಮುದಾಯವನ್ನು ಒಗ್ಗೂಡಿಸಿ ಯುವ ಶಕ್ತಿಯ ಕ್ರೀಡಾ ಸ್ಫೂರ್ತಿಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವ ನಿಟ್ಟಿನಿಂದ ಹಲವಾರು ವಿಶೇಷತೆಗಳ ವೈಭವದಿಂದ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ತ್ರೋಬಾಲ್, ಕಬ್ಬಡಿ, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು.
ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿರುವ ಈ ಕ್ರೀಡಾ ಕೂಟದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್ ರಾಜೇಂದ್ರ ಕುಮಾರ್ ರಿಂದ ದೀಪ ಪ್ರಜ್ವಲನೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಂಟ ಕ್ರೀಡಾಕೂಟದ ಧ್ವಜಾರೋಹಣ, ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಪುಣೆ ಉದ್ಯಮಿಯಾದ ಸೀತಾರಾಮ ಶೆಟ್ಟಿ ಪುಚೊಟ್ಟು ಬೀಡು ಇವರು ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಬೆಳಿಗ್ಗೆ 9 ಗಂಟೆಗೆ ಅತ್ಯಾಕರ್ಷಕ ವಾಹನ ಮೆರವಣಿಗೆಯೊಂದಿಗೆ ಕ್ರೀಡಾಜ್ಯೋತಿಯು ಪಡುಬಿದ್ರಿ ಪೇಟೆಯ ಮೂಲಕ ಕ್ರೀಡಾಂಗಣಕ್ಕೆ ಸಾಗಿ ಬರಲಿದೆ. ಯು.ಪಿ.ಸಿ.ಎಲ್ ಅಧ್ಯಕ್ಷರಾದ ಕಿಶೋರ್ ಆಳ್ವರು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಿರುವರು. ವಿ.ಕೆ. ಗ್ರೂಪ್ಸ್ ಮುಂಬೈ ಯ ಸಿ.ಎಂ.ಡಿ ಕೆ. ಎಂ. ಶೆಟ್ಟಿಯವರು ವಾಲಿಬಾಲ್, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಹಗ್ಗ ಜಗ್ಗಾಟ, ಪುಣೆ ಉದ್ಯಮಿ ಚಂದ್ರಹಾಸ ಶೆಟ್ಟಿ ಪುಚೊಟ್ಟು ಬೀಡು ಕಬ್ಬಡ್ಡಿ, ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿಯವರು ತ್ರೋಬಾಲ್ ಕ್ರೀಡಾಂಗಣದ ಉದ್ಘಾಟನೆ ಮಾಡಲಿರುವರು.
ಅಭಿನಂದನೆ/ಪ್ರಶಸ್ತಿ ಪ್ರದಾನ/ಕ್ರೀಡಾ ಪ್ರೋತ್ಸಾಹ ಧನ ವಿತರಣೆ : 2024 ನೇ ಸಾಲಿನ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೇರಂಭ ಇಂಡಸ್ಟ್ರೀಸ್ ಮುಂಬೈನ ಸಿ.ಎಂ.ಡಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಬಂಟ ಸಾಧಕ ಪ್ರಶಸ್ತಿ ಪುರಸ್ಕಾರ, ಡಾ. ಕೆ.ಪ್ರಕಾಶ್ ಶೆಟ್ಟಿ, ಸಹಕಾರ ರತ್ನ ಡಾ. ಎಮ್.ಎನ್.ರಾಜೇಂದ್ರ ಕುಮಾರ್, ಕ್ರೀಡಾಂಗಣದ ಸ್ಥಳದಾನಿ ಮುಂಬೈ ಉದ್ಯಮಿ ಕರುಣಾಕರ ಪೂಜಾರಿಯವರಿಗೆ ಗೌರವಾಭಿನಂದನೆ. ಅಂತರ್ ರಾಷ್ಟ್ರೀಯ ಕ್ರೀಡಾಪಟು, ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಕಂಬಳ ಕ್ಷೇತ್ರದ ಎರ್ಮಾಳು ಪುಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ, ರಾಷ್ಟ್ರೀಯ ಈಜುಪಟು ನೈಶಾ ಶೆಟ್ಟಿ ಇವರಿಗೆ ಬಂಟ ಕ್ರೀಡಾರತ್ನ ಪ್ರಶಸ್ತಿ ಪ್ರದಾನ, ಬಂಟ ಸಮಾಜದ ಉದಯೋನ್ಮುಖ ಕ್ರೀಡಾಳುಗಳಿಗೆ ಪ್ರೋತ್ಸಾಹ ಧನ ವಿತರಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಂಜೆ 6.30 ರಿಂದ ಕ್ರೀಡಾಕೂಟದ ಪ್ರಾಯೋಜಕರಾದ ಡಾ.ಕೆ.ಪ್ರಕಾಶ್ ಶೆಟ್ಟಿಯವರಿಂದ ಬಹುಮಾನ ವಿತರಣೆ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಅವರಿಂದ ಸಮಾರೋಪ ಭಾಷಣ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್, ಕನ್ನಡ ತುಳು ಚಲನಚಿತ್ರದ ಕಲಾವಿದರು ಮತ್ತು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್, ಉಡುಪಿ, ದ.ಕ.ದ ಶಾಸಕರುಗಳು, ಲೋಕಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮತ್ತು ರಾಜ್ಯ ಅಂತರ್ ರಾಜ್ಯ ಬಂಟರ ಸಂಘಗಳ ಅಧ್ಯಕ್ಷರುಗಳು ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿರುವರು.
ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳು ಶಶಿಧರ್ ಶೆಟ್ಟಿ, ಸಿರಿಮುಡಿ ದತ್ತಿ ನಿಧಿ ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಕ್ರೀಡಾ ಸಂಚಾಲಕ ವಿನಯ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಅಧ್ಯಕ್ಷ ಜ್ಯೋತಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ಕಾಪು ತಾಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಸಾಂಸ್ಕೃತಿಕ ಸಂಚಾಲಕ ಜಯ ಶೆಟ್ಟಿ ಪದ್ರ, ಕ್ರೀಡಾ ಸಹ ಸಂಚಾಲಕಿ ಶರ್ಮಿಳಾ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉಪಸ್ಥಿತರಿದ್ದರು.
ಕಾಪುವಿನಲ್ಲಿ ಉಚಿತ ವೈದ್ಯಕೀಯ, ನೇತ್ರ, ದಂತ ತಪಾಸಣೆ ಚಿಕಿತ್ಸಾ ಶಿಬಿರ

Posted On: 22-12-2024 01:25PM
ಕಾಪು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಕಾಪು ಶಾಖೆಯ ನೇತೃತ್ವದಲ್ಲಿ ಕಾಪು ರೋಟರಿ ಕ್ಲಬ್ನ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ವಿಶ್ವವಿದ್ಯಾಲಯ ದೇರಳಕಟ್ಟೆ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ನುರಿತ ತಜ್ಞ ವೈದ್ಯರ ತಂಡದಿಂದ ಆದಿತ್ಯವಾರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕಾಪು ಶಾಖಾ ವಠಾರದಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ ಜರಗಿತು.
ಈ ಸಂದರ್ಭ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು, ಕಾಪು ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.