Updated News From Kaup
ಕಾಪು : ಪರಿವಾರ ನಾಯಕ ಸಮಾಜದ ವತಿಯಿಂದ ಹಸಿರು ಹೊರೆಕಾಣಿಕೆ
Posted On: 24 Feb 2025, 07:35 AM
ಕಾಪು : ಕಾಪುವಿನ ಅಮ್ಮನ ಬ್ರಹ್ಮಕಲಶೋತ್ಸಕ್ಕೆ ಕಾಪು ತಾಲೂಕಿನ ಪರಿವಾರ ನಾಯಕ ಸಮಾಜದ ವತಿಯಿಂದ ಪಯ್ಯಾರು ಕಾಂತನಾಧಿಕಾರಿ ಧೂಮಾವತಿ ಧೈವಸ್ಥಾನದಿಂದ ಹಸಿರು ಹೊರೆಕಾಣಿಕೆಯನ್ನು ಶ್ರೀ ದೇವಳಕ್ಕೆ ಸಮರ್ಪಿಸಲಾಯಿತು. ಸಜಾತಿ ಬಾಂಧವರಿಂದ ಒಟ್ಟುಗೂಡಿದ 17.50 ಕ್ವಿಂಟಾಲ್ ಅಕ್ಕಿ , 544 ಕೆ.ಜಿ. ಬೆಲ್ಲ , 43 ಲೀಟರ್ ದೀಪದೆಣ್ಣೆ ,225 ತೆಂಗಿನಕಾಯಿ , 550 ಬಾಳೆಎಲೆ ಮತ್ತು ಬಾಳೆಗೊನೆ , ತುಪ್ಪ ಮೊದಲಾದ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲ್ ನಾಯ್ಕ್ , ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಅಧ್ಯಕ್ಷರಾದ ನೀಲಾನಂದ ನಾಯ್ಕ್, ಹಿರಿಯರು, ಪದಾಧಿಕಾರಿಗಳು ಹಾಗೂ ಸಜಾತಿ ಬಾಂಧವರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ : ಉತ್ತರ ವಾಹಿನಿ ಹೊರೆಕಾಣಿಕೆ ಸಮರ್ಪಣೆ
Posted On: 24 Feb 2025, 07:26 AM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. 25 ರಿಂದ ಮಾರ್ಚ್ 5ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮರ್ಪಿಸಿದ ಉತ್ತರವಾಹಿನಿ ಹೊರೆಕಾಣಿಕೆ ಮೆರವಣಿಗೆಗೆ ರವಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಅವರು ಪಾಂಗಾಳ ಸೇತುವೆ ಬಳಿ ಚಾಲನೆ ನೀಡಿದರು. ಹೊರೆಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ತರಕಾರಿಗಳು, ದವಸ ಧಾನ್ಯಗಳನ್ನು 500ಕ್ಕೂ ಅಧಿಕ ವಾಹನಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕಾಪು ಪೇಟೆಯಾಗಿ ಹೊಸ ಮಾರಿಗುಡಿ ತಲುಪಿತು. ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ವೀರಗಾಸೆ, ಡೋಲು ವಾದನ, ತಾಲೀಮು, ಪುರುಷರು, ಮಹಿಳೆಯರು ಹಾಗೂ ಮಕ್ಕಳ ಕುಣಿತ ಭಜನೆ, ಕೊಂಬು, ಬಿರುದಾವಳಿ, ಕೀಲು ಕುದುರೆ, ವಿವಿಧ ರೀತಿಯ ಟ್ಯಾಬ್ಲೋ, ಹುಲಿ ವೇಷ ಕುಣಿತ, ಚೆಂಡೆ ಸಹಿತ ವಿವಿಧ ವೇಷಗಳು ಮೆರವಣಿಗೆಗೆ ರಂಗು ತಂದಿತು. ನವೋದಯ ಸ್ವಸಹಾಯ ಗುಂಪು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಹೊರೆಕಾಣಿಕೆ ಸಮರ್ಪಣಾ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ಹರೀಶ್ ನಾಯಕ್ ಕಾಪು, ಸಾಯಿ ಈಶ್ವರ್ ಗುರೂಜಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕೆ. ರಘಪತಿ ಭಟ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಪುಣೆ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಉದಯ ಸುಂದರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ಕಾಪು ದಿವಾಕರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಸುಗ್ಗಿ ಸುಧಾಕರ ಶೆಟ್ಟಿ, ರೋಷನ್ ಕುಮಾರ್ ಶೆಟ್ಟಿ, ಭಗವಾನ್ ದಾಸ್ ಶೆಟ್ಟಿಗಾರ್, ಸಂದೀಪ್ ಶೆಟ್ಟಿ ಮುಂಬಯಿ, ಮಾಧವ ಆರ್. ಪಾಲನ್, ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಡಾ. ಸುನೀತಾ ಶೆಟ್ಟಿ, ಶಾಂತಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳೆ ಗ್ರಾಮ ಪಂಚಾಯತಿಯಲ್ಲಿ ರೋಜ್ ಗಾರ್ ದಿನಾಚರಣೆ
Posted On: 21 Feb 2025, 07:51 PM
ಶಿರ್ವ : ಬೆಳ್ಳೆ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜ್ ಗಾರ್ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಶ್ರೀನಿವಾಸ ರಾವ್ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಾಮ ಪಂಚಾಯತ್ ಜೊತೆಗೆ ಸಮುದಾಯ ಸಂಘಟಿತವಾಗಿ ಭಾಗಿಯಾದರೆ ಉದ್ಯೋಗ ಖಾತರಿ ಯೋಜನೆಯ ಮುಖಾಂತರ ಸಾಕಷ್ಟು ವೈಯಕ್ತಿಕ ಮತ್ತು ಸಮುದಾಯದ ಅಭಿವೃದ್ಧಿಯನ್ನು ಮಾಡಬಹುದೆಂದು ಮತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಪ್ರತೀ ಗ್ರಾಮ ಮಟ್ಟದಲ್ಲಿ ನಡೆದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯಗಳು ಬೆಸೆಯುತ್ತವೆ ಎಂದು ತಿಳಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವರವರು ಮಾತನಾಡಿ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಿಬ್ಬಂದಿ ಉತ್ತಮ ಬಾಂಧವ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯತ್ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು. ಸಾಮಾಗ್ರಿ ಹಸ್ತಾಂತರ, ಗೌರವಾರ್ಪಣೆ : ದಾನಿಗಳಿಂದ ಕೊಡುಗೆಯಾಗಿ ನೀಡಿದ ಕೆಲಸದ ಸಾಮಾಗ್ರಿಗಳನ್ನು ನೋಂದಾಯಿತ ಕೂಲಿಗಾರರಿಗೆ ಮುಖ್ಯ ಕಾರ್ಯದರ್ಶಿಯವರು ಹಸ್ತಾಂತರಿಸಿದರು. ವೈಯಕ್ತಿಕ ಫಲಾನುಭವಿಗಳಾದ ಹರೀಶ್ ಕರ್ಕೇರ ಮತ್ತು ಸುದೀಪ್ ರೋಷನ್ ಲೋಬೊ ಹಾಗೂ ಎಲ್ಲಾ ಕಾರ್ಮಿಕರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ವಿ. ಆಚಾರ್ಯ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ. ಪಂ. ಸಹಾಯಕ ನಿರ್ದೇಶಕರಾದ ಚಂದ್ರಕಲಾ, ತಾಂತ್ರಿಕ ಸಂಯೋಜಕರಾದ ಪವನ್ ಜಿ., ಬಿಎಫ್ ಟಿ ಶಂಕರ್, ಯೋಜನಾ ಸಂವಹನಕಾರರಾದ ಅಕ್ಷಯ್ ಕೃಷ್ಣ, ಪಂಚಾಯತ್ ಕಾರ್ಯದರ್ಶಿ ಅನಂದ್ ಕುಲಕರ್ಣಿ, ಗ್ರಾಮ ಪಂಚಾಯತ್ ಸದಸ್ಯರಾದ ಪರಶುರಾಮ ಭಟ್, ಹರೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸಿಬ್ಬಂದಿ ಸದಾನಂದ ಪೂಜಾರಿ, ರೇಷ್ಮಾ ಆಚಾರ್ಯ, ನೀತಾ ನಾಯಕ್, ರಕ್ಷಿತಾ, ಯಶೋದ, ಚಂದ್ರಿಕಾ, ರಮೇಶ್ ಶೆಟ್ಟಿ, ಪ್ರೀತೇಶ್, ಸುಂದರ ಹಾಗೂ ಸ್ಥಳೀಯರಾದ ಭಾಸ್ಕರ ಶೆಟ್ಟಿ, ಮಾಜಿ ಗ್ರಾ.ಪಂ. ಸದಸ್ಯರಾದ ಸುನೀತಾ ಶೆಟ್ಟಿ, ಮಮತಾ ವಾಗ್ಳೆ ಹಾಗೂ ಯೋಜನೆಯ ಸುಮಾರು ಮೂವತ್ತಾರು ಜನ ಕಾರ್ಮಿಕರು, ಗ್ರಾಮಸ್ಥರು, ಫಲಾನುಭವಿಗಳು ಉಪಸ್ಥಿತರಿದ್ದರು. ಕೂಲಿಯಿಂದ ಮಗಳನ್ನು ಗಗನಸಖಿಯಾಗಿಸಿದ ಮಹಿಳೆ : ಕೂಲಿ ಕಾರ್ಮಿಕರಲ್ಲೊಬ್ಬರಾದ ಕುಸುಮ ನಾಯಕ್ ಇವರು ಆರು ವರ್ಷಗಳಿಂದ ಯೋಜನೆಯಲ್ಲಿ ಕೂಲಿ ಪಡೆದು, ಅದರಿಂದ ಮಗಳಿಗೆ ವಿದ್ಯಾಭ್ಯಾಸ ನೀಡಿ ಗಗನಸಖಿಯನ್ನಾಗಿಸಲು ಯೋಜನೆ ಪ್ರಯೋಜನವಾಗಿದೆಯೆಂದು ತಿಳಿಸಿ ಭಾವುಕರಾದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಧರ ವಾಗ್ಳೆ ಸ್ವಾಗತಿಸಿ, ವಂದಿಸಿದರು. ಆರೋಗ್ಯ ಇಲಾಖೆಯ ಸಿ ಎಚ್ ಒ ವೈಷ್ಣವಿ ಮತ್ತು ಶಕುಂತಲ ಆರೋಗ್ಯ ತಪಾಸನೆ ನಡೆಸಿದರು
ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಸರ್ವೇಶ್ ಭಟ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
Posted On: 21 Feb 2025, 10:39 AM
ಉಡುಪಿ : ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ನಡೆಸಿದ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಸರ್ವೇಶ್ ಭಟ್ ಶೇ.83.8% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀ ಭ್ರಾಮರಿ ನಾಟ್ಯಾಲಯ, ಅಮ್ಮುಂಜೆಯ ನೃತ್ಯಗುರು ವಿದ್ವಾನ್ ಕೆ.ಭವಾನಿ ಶಂಕರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಪೆರಂಪಳ್ಳಿಯ ವೇದಮೂರ್ತಿ ಪ್ರಾಣೇಶ್ ಭಟ್ ಹಾಗೂ ಶ್ರೀಮತಿ ಸೌಮ್ಯ ಭಟ್ ಇವರ ಪುತ್ರರಾಗಿದ್ದು. ಜೈನ್ ಯೂನಿವರ್ಸಿಟಿ ಬೆಂಗಳೂರು ಸಂಸ್ಥೆಯಲ್ಲಿ ಎಂಬಿಎ ಪದವಿಯನ್ನು ಮುಂದುವರಿಸುತ್ತಿದ್ದಾರೆ.
ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಯಶಸ್ವಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
Posted On: 21 Feb 2025, 10:36 AM
ಉಡುಪಿ : ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಕು.ಯಶಸ್ವಿ ಶೇ.82.4 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆಯ ನೃತ್ಯಗುರು ವಿದ್ವಾನ್ ಕೆ.ಭವಾನಿ ಶಂಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಡಾ.ಜಿ. ಶಂಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇಲ್ಲಿ ದ್ವಿತೀಯ ಎಂ.ಕಾಮ್ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪುತ್ತೂರು ಸುಬ್ರಹ್ಮಣ್ಯ ನಗರದ ವಿಜಯ್ ಸನಿಲ್ ಹಾಗೂ ಶ್ರೀಮತಿ ಸುಮಾ ಸನಿಲ್ ದಂಪತಿಗಳ ಪುತ್ರಿಯಾಗಿದ್ದಾಳೆ.
ಫೆ.23 : ಕುತ್ಯಾರು ಕುಲಾಲ ಸಂಘದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ; ಸನ್ಮಾನ
Posted On: 21 Feb 2025, 10:30 AM
ಕಾಪು : ತಾಲೂಕಿನ ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಇದರ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಫೆ. 23 ರ ಭಾನುವಾರ ಕುತ್ಯಾರು ರಾಮೋಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದ್ದು, ಸಮುದಾಯದ ಪ್ರಮುಖರು, ಊರಿನ ಗಣ್ಯರ ಜೊತೆಗೆ, ಕುಲಾಲ ಸಮುದಾಯದ ಇಬ್ಬರನ್ನು ಸನ್ಮಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶೈಲೇಶ್ ಕುಲಾಲ್ ಮತ್ತು ಪ್ರಮುಖರು ಪ್ರಕಟನೆಯಲ್ಲಿ ತಿಳಿಸಿರುವರು.
ಫೆ. 20-23 : ಉದ್ಯಾವರದಲ್ಲಿ ಏಳನೇ ವರ್ಷದ ನಿರಂತರ ಬಹುಭಾಷಾ ನಾಟಕೋತ್ಸವ
Posted On: 20 Feb 2025, 10:42 AM
ಕಾಪು : ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆ 7ನೇ ವರ್ಷದ ಬಹುಭಾಷಾ ನಾಟಕೋತ್ಸವವನ್ನು ಫೆಬ್ರವರಿ 20 ರಿಂದ 23ರ ವರೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜು, ಮೈದಾನ, ಗ್ರಾಮ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಆಯೋಜಿಸಲಾಗಿದೆ. ಫೆಬ್ರವರಿ 20ರಂದು ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ ಬ್ರಹ್ಮಾವರದ ಮಂದಾರ ತಂಡದಿಂದ ಬೆತ್ತಲಾಟ ಕನ್ನಡ ನಾಟಕ, ಫೆಬ್ರವರಿ 21ರಂದು ಪ್ರತಿಷ್ಠಿತ ಸುಮನಸ ಕೊಡವೂರು ಉಡುಪಿ ಇವರಿಂದ ತುಳು ಭಾಷೆಯಲ್ಲಿ ಈದಿ, ಫೆಬ್ರವರಿ 22ರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಇವರಿಂದ ಹ್ಯಾಂಗ್ ಆನ್ ಕನ್ನಡದಲ್ಲಿ ಮತ್ತು ಫೆಬ್ರವರಿ 23 ಕೊನೆಯ ದಿನ ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಇವರಿಂದ ಕೊಂಕಣಿ ಭಾಷೆಯಲ್ಲಿ ಪಯ್ಣ್ ಪರ್ವತಕ್ ಪ್ರದರ್ಶನವಾಗಲಿದೆ. ಪ್ರತಿದಿನ ಸಂಜೆ 6:30ಕ್ಕೆ ಸರಿಯಾಗಿ ನಾಟಕಗಳು ಆರಂಭವಾಗಲಿದ್ದು, ಎಲ್ಲಾ ನಾಟಕಗಳಿಗೆ ಉಚಿತ ಪ್ರವೇಶವಿರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ : ಮುಜರಾಯಿ, ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಆಹ್ವಾನ
Posted On: 19 Feb 2025, 08:22 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25ರಿಂದ ಮಾ.5ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರದ ವತಿಯಿಂದ ಕರ್ನಾಟಕ ಸರಕಾರದ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿರವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮತ್ತು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ ಹಾಗೂ ಸದಸ್ಯರಾದ ಮಾಧವ ಆರ್. ಪಾಲನ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ನಾಯಕ ಸಂಘದ ನಿಯೋಗದಿಂದ ಲೋಕೋಪಯೋಗಿ ಸಚಿವರ ಭೇಟಿ
Posted On: 18 Feb 2025, 10:03 PM
ಉಡುಪಿ : ಉಡುಪಿ ಜಿಲ್ಲಾ ಪರಿವಾರ ನಾಯಕ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯಕ ಇವರ ನೇತೃತ್ವದಲ್ಲಿ ಉಡುಪಿಗೆ ಭೇಟಿ ನೀಡಿದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ನಾಯಕ ಸಮುದಾಯದ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರಲಾಯಿತು. ಉಡುಪಿ ಜಿಲ್ಲೆಗೆ ನಾಯಕ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ವಿನಂತಿಸಲಾಯಿತು. ಸಚಿವರು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು. ಸಚಿವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಂತರ ಜಿಲ್ಲಾ ಸಂಘದ ನಿಯೋಗವು ಸಚಿವರೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಜಿಲ್ಲಾಧಿಕಾರಿಗೂ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವ ಅದ್ಯಕ್ಷರಾದ ಶೇಖರ್ ನಾಯಕ, ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ, ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ನಾಯಕ, ಕಾಪು ತಾಲೂಕಿನ ಉಪಾಧ್ಯಕ್ಷರಾದ ಗೋಪಾಲ್ ನಾಯಕ ಕರಂದಾಡಿ, ಸಕ್ರಿಯ ಸದಸ್ಯರಾದ ಸುರೇಶ್ ನಾಯಕ ಕಲ್ಯಾ-ಕಾಪು, ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವಂತೆ ಧರ್ಮಸ್ಥಳದ ಧರ್ಮಾಧಿಕಾರಿಯವರಿಗೆ ಮನವಿ
Posted On: 18 Feb 2025, 07:10 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5ರವರೆಗೆ ನವ ದಿನಗಳ ಪರ್ಯಂತ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಕ್ಷೇತ್ರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಮನವಿಯನ್ನು ಮಾಡಲಾಯಿತು. ಈ ಸಂದರ್ಭ ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್.ಪಾಲನ್ ಹಾಗೂ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
