Updated News From Kaup

ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಹಾಗೂ ಕನ್ನಡ, ಸಂಸ್ಕೃತಿ ಇಲಾಖೆ ಉಡುಪಿ : ಪ್ರಸಾದನ ಕಾರ್ಯಗಾರ ಸಂಪನ್ನ

Thumbnail
Posted On: 31 Mar 2025, 09:33 PM

ಉಡುಪಿ : ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರಸಾದನ ಕಾರ್ಯಗಾರ ಜರುಗಿತು. ಕಾರ್ಯಾಗಾರದ ಉದ್ಘಾಟನೆಯನ್ನು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂದೀಪ್ ಶೆಟ್ಟಿ ನೆರವೇರಿಸಿ ನೃತ್ಯ ಕಲಾವಿದರಿಗೆ ಪ್ರಸಾದನ ಕಾರ್ಯಗಾರವೆನ್ನುವುದು ಕಲಾ ಪ್ರದರ್ಶನಕ್ಕೆ ಪೂರಕ ಅಂಶಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸಾದನ ಕಾರ್ಯಗಾರವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಆರ್ ಕೆ ಕಲಾ ತಂಡಗಳ ನಿರ್ದೇಶಕರು, ಬಹುಮುಖ ಪ್ರತಿಭೆಯ ಸಂಪನ್ಮೂಲ ವ್ಯಕ್ತಿ ರಾಜೇಶ್ ವಿಟ್ಲ ಅವರು ಭರತ ನಾಟ್ಯ ಮುಖವರ್ಣಿಕೆ, ಕೇಶ ವಿನ್ಯಾಸ, ವಸ್ತ್ರ ವಿನ್ಯಾಸದ ಬಗ್ಗೆ ವಿವರಣೆ ಹಾಗು ಪ್ರಾತ್ಯಕ್ಷಿಕೆ ಯೊಂದಿಗೆ ಬಹಳ ಉತ್ತಮ ರೀತಿಯಲ್ಲಿ ಶಿಬಿರಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕರು, ಖ್ಯಾತ ನಿರೂಪಕರಾದ ಯೋಗೀಶ್ ಕೊಳಲಗಿರಿ, ನಾಟ್ಯಾಲಯದ ನೃತ್ಯ ಗುರುಗಳು ನಿರ್ದೇಶಕರು ಆಗಿರುವ ಭವಾನಿಶಂಕರ್ ಉಪಸ್ಥಿತರಿದ್ದರು. ಸುಮಾರು 80 ಶಿಬಿರಾರ್ಥಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ಪೋಷಕರು ಕೂಡ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಕಾರ್ಯಗಾರವನ್ನು ನೆರವೇರಿಸಿ ಕೊಟ್ಟ ಸಂಪನ್ಮೂಲ ವ್ಯಕ್ತಿ ರಾಜೇಶ್ ವಿಟ್ಲರವರನ್ನು ಸನ್ಮಾನಿಸಲಾಯಿತು. ಶ್ರೀ ಭ್ರಾಮರಿ ನಾಟ್ಯಾಲಯದ ಗುರುಗಳಾದ ಭವಾನಿಶಂಕರ್ ಸ್ವಾಗತಿಸಿ , ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮೇ.6 : ಯುವಸೇನೆ ಮಡುಂಬು - 18ನೇ ವಾರ್ಷಿಕೋತ್ಸವ

Thumbnail
Posted On: 31 Mar 2025, 04:38 PM

ಕಾಪು : ಯುವಸೇನೆ ಮಡುಂಬು ವೈ.ಎಸ್.ಎಮ್ ಫ್ರೆಂಡ್ಸ್ ಮಡುಂಬು ಇದರ 18ನೇ ವಾರ್ಷಿಕೋತ್ಸವ ಮೇ 06, ಮಂಗಳವಾರ ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ಜರಗಲಿದೆ. ರಾತ್ರಿ ಗಂಟೆ 8 ರಿಂದ ಸಭಾ ಕಾರ್ಯಕ್ರಮವು ಯುವಸೇನೆ ಮಡುಂಬು ಇದರ ಅಧ್ಯಕ್ಷರಾದ ದೀಪಕ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಉದ್ಘಾಟನೆ ಹಾಗೂ ಭಗವದ್ಗಿತಾ ದಿಕ್ಸೂಚಿ ಭಾಷಣವನ್ನು ಜ್ಯೋತಿಷಿ ಮತ್ತು ಪುರೋಹಿತರಾದ ವಿದ್ವಾನ್ ಕೆ.ಪಿ. ಶ್ರೀನಿವಾಸ ತಂತ್ರಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶಾಂತ ಇಲೆಕ್ಟ್ರಿಕಲ್ಸ್, ಉಡುಪಿ ಆಡಳಿತ ನಿರ್ದೇಶಕರಾದ ಶ್ರೀಪತಿ ಭಟ್, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಪತ್ರಕರ್ತ ರಾಕೇಶ್ ಕುಂಜೂರು, ಫ್ರೆಂಡ್ಸ್ ಕೆಟರರ್ಸ್ ಶಂಕರಪುರ ಮಾಲಕರಾದ ನವೀನ್ ಅಮೀನ್, ಉದ್ಯಮಿ ದಿನೇಶ್ ಶೆಟ್ಟಿ, ಕಲ್ಯಾಲು, ಕಾಂಗ್ರೆಸ್ ಮುಖಂಡರಾದ ಸುನಿಲ್ ಬಂಗೇರ ಉಪಸ್ಥಿತರಿರಲಿದ್ದಾರೆ. ಸಂಜೆ ಗಂಟೆ 6 ರಿಂದ 8 ರವರೆಗೆ ಸ್ಥಳೀಯ ಪ್ರತಿಭೆಗಳಿ೦ದ ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿದೆ. ರಾತ್ರಿ ಗಂಟೆ 8ಕ್ಕೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತುಳು ಚಾರಿತ್ರಿಕ ನಾಟಕ ಛತ್ರಪತಿ ಶಿವಾಜಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ : ರೋಯ್ಸ್ ಫೆರ್ನಾಂಡಿಸ್ ಅಧ್ಯಕ್ಷರಾಗಿ ಆಯ್ಕೆ

Thumbnail
Posted On: 31 Mar 2025, 04:17 PM

ಕಟಪಾಡಿ : ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ (ರಿ.) ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಐರಿನ್ ಪಿರೇರಾ ಹಾಗೂ ಗ್ಲೋರಿಯ ಪಿಂಟೊ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿದ್ದು, ಹೊಸ ನಿರ್ದೇಶಕರಾಗಿ ಗೊಡ್ಫ್ರಿ ಡಿಸೋಜಾ, ವಿಲಿಯಂ ಲೋಬೊ, ಆಸ್ಟಿನ್ ಕರ್ಡೋಜಾ, ಜೆರೊಮ್ ಕಸ್ತೆಲಿನೊ, ಲಾರೆನ್ಸ್‌ ಕ್ರಾಸ್ಟೊ, ರೊನಾಲ್ಡ್ ಮಾಚಾದೊ, ಶಾಂತಿ ಕ್ವಾಡ್ರಸ್, ಮೇರಿ ಡಿಸಿಲ್ವ ಆಯ್ಕೆಯಾಗಿದ್ದಾರೆ.

ಎ.4 - 13 : ಕಾಪುವಿನಲ್ಲಿ ಹತ್ತು ದಿನದ ಪ್ರಾಣಾಯಾಮ - ಧ್ಯಾನದ ಉಚಿತ ಶಿಬಿರ

Thumbnail
Posted On: 31 Mar 2025, 04:13 PM

ಕಾಪು : ಧೀಶಕ್ತಿ ಜ್ಞಾನ ಯೋಗ ಶಿಬಿರ ಮಂಗಳೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ಇದರ ಆಶ್ರಯದಲ್ಲಿ ಕಾಯಿಲೆ ಹಾಗೂ ದು:ಖ ರಹಿತವಾದ ಜೀವನಕ್ಕಾಗಿ ಹತ್ತು ದಿನದ ಪ್ರಾಣಾಯಾಮ - ಧ್ಯಾನದ ಉಚಿತ ಶಿಬಿರ ಎಪ್ರಿಲ್ 04 ಶುಕ್ರವಾರದಿಂದ ಎಪ್ರಿಲ್ 13 ರವಿವಾರ ತನಕ ಸಾಯಂಕಾಲ 06 ಗಂಟೆಯಿಂದ 8.30 ಗಂಟೆಯವರೆಗೆ ಕಾಪು ಕಾಳಿಕಾಂಬಾ ದೇವಸ್ಥಾನದ ಸಭಾಭಾವನದಲ್ಲಿ ನಡೆಯಲಿದೆ. ವಯಸ್ಸು 10 ವರ್ಷ ದಾಟಿದವರು ಯಾರು ಕೂಡ ಭಾಗವಹಿಸಬಹುದು. ಕುಟುಂಬ ಸಮೇತರಾಗಿ ಭಾಗವಹಿಸಿ ಆದಷ್ಟು ಮಕ್ಕಳು ಭಾಗವಹಿಸಿದರೆ ಅತೀ ಉತ್ತಮ, ವಿದ್ಯಾರ್ಥಿಗಳಿಗೆ ಅತೀ ಅವಶ್ಯವಿರುವ ತರಗತಿ. ಬಿಪಿ, ಶುಗರ್, ಮೈಗ್ರೇನ್ ನಂತಹ ಅನೇಕ ಕಾಯಿಲೆಗಳು ಕೇವಲ 10 ದಿನದಲ್ಲಿಯೇ ವಾಸಿಯಾಗುತ್ತದೆ ಮತ್ತಿತರ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಕೂಡ ಉತ್ತಮ ತರಗತಿ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ತರಗತಿ. ಈ ತರಗತಿಯಲ್ಲಿ ಚರ್ಮದ ಕಾಯಿಲೆಗಳು ಗುಣವಾದ ಉದಾಹರಣೆಗಳಿವೆ. ನಮ್ಮ‌ ಜೀವನ ಶೈಲಿಯನ್ನು ಬದಲಾಯಿಸುವ ತರಗತಿ. ವ್ಯಾಪಾರ ವಹಿವಾಟುಗಳಿಗೆ ಕೂಡ ಈ ತರಗತಿಯಲ್ಲಿ ಲಾಭವಾಗಲಿದೆ. ನೆಲದ ಮೇಲೆ ಕುಳಿತುಕೊಳ್ಳಲಾಗದವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳವ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ಸಂಪರ್ಕಿಸಿ : 9845379440, 9242494317, 7026810880, 9663261694

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಕಾಪು ತಾಲೂಕು : ಕಾಪುವಿನಲ್ಲಿ ಸಿಹಿತಿಂಡಿ ವಿತರಣೆ

Thumbnail
Posted On: 31 Mar 2025, 03:00 PM

ಕಾಪು : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಕಾಪು ತಾಲೂಕು ವತಿಯಿಂದ ಸೋಮವಾರ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಕಾಪುವಿನಲ್ಲಿ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾ ಸಮಿತಿ ‌ಸದಸ್ಯ ಅನ್ವರ್ ಆಲಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸ್ನೇಹ, ಪ್ರೀತಿ ಮೂಡಿಬರಲಿ. ಸಮಾಜದ ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳಬೇಕು. ಈ ನಿಟ್ಟಿನಲ್ಲಿ ಕಾಪು ವೃತ್ತನಿರೀಕ್ಷಕರ ಕಚೇರಿಯಿಂದ ಕಾಪು ಠಾಣೆಯವರೆಗಿನ ಸುಮಾರು 300 ಅಂಗಡಿಗಳಿಗೆ ಸಿಹಿತಿಂಡಿಯ ಪೊಟ್ಟಣವನ್ನು ವಿತರಿಸಲಾಗಿದೆ. ಹಬ್ಬಗಳು ಎಲ್ಲಾ ಧರ್ಮ, ಜಾತಿ, ವರ್ಗಗಳ ನಡುವಿನ ಭಾಂದವ್ಯವನ್ನು ಗಟ್ಟಿಯಾಗಿಸಿ ಸ್ನೇಹ ಮತ್ತು ಒಗ್ಗಟ್ಟನ್ನು ಮೂಡಿಸಬೇಕು ಎಂದರು. ಕಾಪು ವೃತ್ತನಿರೀಕ್ಷಕರ ಕಚೇರಿಯ ಸಿಬ್ಬಂದಿಯವರಿಗೆ, ಕಾಪು ಪೇಟೆಯ ಅಂಗಡಿಗಳಿಗೆ, ಪೌರ ಕಾರ್ಮಿಕರಿಗೆ ಮತ್ತು ಕಾಪು ಠಾಣೆಯ ಸಿಬ್ಬಂದಿಯವರಿಗೆ ಸಿಹಿತಿಂಡಿ ವಿತರಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷರಾದ ನಸೀರ್ ಅಹಮದ್, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶಬೀಹ್ ಅಹಮದ್ ಕಾಝೀ, ಕಾಪು ತಾಲೂಕು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಬಿ.ಎಮ್.ಮೊಯ್ದಿನ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಆಝಮ್ ಶೇಕ್, ಕಾಪು ಸಮಿತಿ ಸದಸ್ಯರಾದ ಮುಸ್ತಾಕ್ ಸಾಹೇಬ್, ಮೊಹಮ್ಮದ್, ಮಹಮ್ಮದ್ ಆಲಿ, ಸನಾವರ್ ಶೇಕ್, ಷಹದತ್ ಆಲಿ, ಆಸಿಫ್ ಕಟಪಾಡಿ, ಬುಡಾನ್ ಸಾಹೇಬ್, ಸುಲೇಮಾನ್ ಮತ್ತಿತರರು ಉಪಸ್ಥಿತರಿದ್ದರು.

ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು : ಈದ್ ಉಲ್ ಫಿತ್ರ್ ಹಬ್ಬದ ಪ್ರಾರ್ಥನೆ

Thumbnail
Posted On: 31 Mar 2025, 12:41 PM

ಕಾಪು : ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಸೋಮವಾರ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ಅಬ್ದುಲ್ ರಶೀದ್ ಸಖಾಫಿ ಮಸ್ಜಿದ್, ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ, ಮಸ್ಜಿದ್ ಡೆವಲಪ್ಮೆಂಟ್ ಸಮಿತಿ ಅಧ್ಯಕ್ಷರಾದ ಶರ್ಫುದ್ದೀನ್ ಶೇಕ್, ಮಸ್ಜಿದ್ ಕಾರ್ಯದರ್ಶಿ ಅಶ್ರಫ್ ಮುಸ ಮಜೂರು ,ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ ಉಪಾಧ್ಯಕ್ಷರಾದ ಹಸನಬ್ಬ ಮಜೂರು, ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಆಡಳಿತ ಸಮಿತಿ ಸದಸ್ಯರಾದ ರಝಕ್ ಕೊಪ್ಪಲ್ತೋಟ, ರಝಕ್ ಕೊಪ್ಪ , ಹುಸೇನ್ ಅಚ್ಚಲ್, ರಝಕ್ ಗುಡ್ಡೆಕೇರಿ, ಹಸನಬ್ಬ ಗುಡ್ಡೆಕೇರಿ, ಶಮಿಮ್ ಕೆ.ಪಿ, ಅಬ್ದುಲ್ ರಹ್ಮನ್, ಹಸನಬ್ಬ ಪಕೀರಣಕಟ್ಟೆ, ಅಬ್ದುಲ್ಲ ಚಂದ್ರನಗರ, ಫಯಾಜ್ ಕಿನ್ನಿಗೋಳಿ, ಜಮಾತ್ ಅಂಗ ಸಂಸ್ಥೆ ಯವರು, ಜಮಾತಿಗರು ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಪಾಜಕ ಕ್ಷೇತ್ರದಲ್ಲಿ ಭಕ್ತಿ ರಥ ಯಾತ್ರೆಗೆ ವೈಭವದ ಚಾಲನೆ

Thumbnail
Posted On: 31 Mar 2025, 08:49 AM

ಕಾಪು : ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಉಡುಪಿ ಜಿಲ್ಲೆ ಪಾಜಕ ಕ್ಷೇತ್ರದಲ್ಲಿ ಭಕ್ತಿ ರಥಯಾತ್ರೆಗೆ ಅಧ್ವರ್ಯುಗಳೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ರಥದಲ್ಲಿ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ರಾಮದೇವರ ಪಂಚಲೋಹದ ಮೂರ್ತಿಯನ್ನು ಕುಳ್ಳಿರಿಸಿ ಪವಿತ್ರ ಮಂತ್ರೋದಕದಿಂದ ಶುದ್ಧೀಕರಿಸಿ ಅಲಂಕಾರಾದಿಗಳನ್ನು ಮಾಡಿ ಮಂಗಳಾರತಿ ಬೆಳಗಿದ ಬಳಿಕ ಭಗವಾಧ್ವಜ ಕೇಸರಿ ಪತಾಕೆಯ ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು , ತ್ರೇತಾಯುಗದಲ್ಲಿ ಹನುಮನಾಗಿ ದ್ವಾಪರದಲ್ಲಿ ಭೀಮನಾಗಿ ಅವತರಿಸಿದ ವಾಯುದೇವರೇ ಕಲಿಯುಗದಲ್ಲಿ ಮಧ್ವಾರಾಗಿ ಉಡುಪಿಯಲ್ಲಿ ಅವತರಿಸಿ ತತ್ವವಾದವೆಂಬ ಸರಳ ಸುಲಭವೂ ಆದ ಭಕ್ತಿಸಿದ್ಧಾಂತ ಸುಧೆಯನ್ನು ನಮಗೆಲ್ಲ ಉಣಬಡಿಸಿ ತಮ್ಮ ತಪಸ್ಸಿಗೆ ಒಲಿದ ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ನಮ್ಮೆಲ್ಲರನ್ನೂ ಧನ್ಯರಾಗಿಸಿದ್ದಾರೆ .‌ಭಗವಂತನ ಒಲುಮೆಗೆ ಪರಿಶುದ್ಧವಾದ ನಿಷ್ಕಲ್ಮಶ ಭಕ್ತಿಯೇ ಪರಮ ಸಾಧನ ಎಂದು ಸಾರಿ ಹೇಳಿದ ಮಧ್ವ ಗುರುಗಳು ನಾಡಿನೆಲ್ಲೆಡೆ ಈ ಸರಳ ಸಿದ್ಧಾಂತದ ಪ್ರಸಾರಕ್ಕಾಗಿ ಮಠಗಳನ್ನು ಸ್ಥಾಪಿಸಿ ತಾವೂ ದೇಶಾದ್ಯಂತ ಸಂಚರಿಸಿದರು. ಅಷ್ಟು ಮಾತ್ರವಲ್ಲದೇ ಹರಿದಾಸ ಸಾಹಿತ್ಯದ ಉಗಮಕ್ಕೂ ಕಾರಣರೆನಿಸಿ, ವ್ಯಾಸರಾಜರು ವಾದಿರಾಜರು ಜಯತೀರ್ಥರು ರಾಘವೇಂದ್ರ ತೀರ್ಥರು ಕನಕ‌ ಪುರಂದರದಾಸರು ಜಗನ್ನಾಥದಾಸರು ಶ್ರೀಪಾದರಾಜರು, ಗೋಪಾಲದಾಸರು ವಿಜಯದಾಸರು ಮೊದಲಾದ ದಾಸವರೇಣ್ಯರ ಮೂಲಕ ಭಕ್ತಿ ಸಿದ್ಧಾಂತದ ಜ್ಞಾನಗಂಗೆ ಈ ನಾಡಿನಲ್ಲಿ ಸಮೃದ್ಧವಾಗಿ ಹರಿಯುವಂತೆ ಮಾಡಿ ಈ ನೆಲವನ್ನು ಪಾವನಗೊಳಿಸಿದರು. ಮಧ್ವಗುರುಗಳು ಕೊಟ್ಟ ಇಂಥಹ ಅರ್ಪಣಾ ಭಾವದ ಭಕ್ತಿಯ ಸಿದ್ಧಾಂತವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ದೇಶದೆಲ್ಲೆಡೆ ಪ್ರಸಾರ ಮಾಡುವ ಕಾರ್ಯವನ್ನು ನಿರಂತರ ಮಾಡಿದ್ದರು. ಅದನ್ನು ಯಥಾಮತಿ ಮುಂದುವರೆಸುವ ಪ್ರಯತ್ನ ಮಾಡ್ತಾ ಇದ್ದೇವೆ. ಅಂದರ ಅಂಗವಾಗಿ ಪಾಜಕದಿಂದ ಪ್ರಾರಂಭಿಸಿ ಈ ಕರಾವಳಿ ಜಿಲ್ಲೆಗಳಲ್ಲಿ ಮಧ್ವರು ಸಂದರ್ಶಿಸಿದ ಕ್ಷೇತ್ರಗಳು ಹಾಗೂ ಇತರೆ ಧರ್ಮಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತ ಜನರಿಗೆ ಭಕ್ತಿ ಸಿದ್ಧಾಂತದ ಸಾರ ಸಂದೇಶಗಳನ್ನು ತಿಳಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಂಡಿದ್ದೇವೆ. ಸಮಸ್ತ ಆಸ್ತಿಕ ಜನತೆ ಇದರಲ್ಲಿ ಸಹಯೋಗ ಸಹಕಾರ ನೀಡಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ತಿಳಿಸಿದರು. ಆರಂಭದಲ್ಲಿ ಶ್ರೀಗಳು ಮಧ್ವಾಚಾರ್ಯರ ಮನೆ ದೇವರಾದ ಶ್ರೀ ಅನಂತಪದ್ಮನಾಭ ದೇವರು ಮತ್ತು ಶ್ರೀ ವಾದಿರಾಜ ಪ್ರತಿಷ್ಠಿತ ಮಧ್ವಗುರುಗಳ ಮಂಗಳಾರತಿ ಬೆಳಗಿ, ಗೋಗ್ರಾಸ ಸಮರ್ಪಿಸಿದರು. ವಿದ್ವಾನ್ ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಂದಳಿಕೆ ವಿಠಲ ಭಟ್ಟರು ಮಧ್ವರಾಜ ಭಟ್, ವಾದಿರಾಜ ಭಟ್ ಶ್ರೀಕರ ಭಟ್ವರ ಸಹಯೋಗದಲ್ಲಿ ರಾಮತಾರಕ ಮಂತ್ರ ಹೋಮ ನೆರವೇಸಿದರು. ನೂರಾರು ರಾಮ ಭಕ್ತರು, ಭಜಕರು, ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಸಾವಿರಕ್ಕೂ ಅಧಿಕ ಜನ ಸೇರಿದ್ದರು. ರಥಯಾತ್ರೆಗೆ ವಿಶ್ವಹಿಂದು ಪರಿಷತ್ ಸಹಕಾರ ದೊರೆತಿದೆ. ಪ್ರಾಂತ ವಿ ಹಿಂ ಪ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಠದ ದಿವಾನರಾದ ಎಂ‌ ರಘುರಾಚಾರ್ಯ, ಸಿ ಇ ಒ ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿಯ ಪ್ರ ಕಾರ್ಯದರ್ಶಿ ನಿಟ್ಡೆ ಪ್ರಸನ್ನಾಚಾರ್, ಕುಂಜಾರು ದುರ್ಗಾ ದೇವಳದ ಪರ್ಯಾಯ ಅರ್ಚಕ ರಾಘವೇಂದ್ರ ಭಟ್, ಪರಶುರಾಮ ದೇವಳದ ಅರ್ಚಕ ವಿನಯ ಪ್ರಸಾದ್ ಭಟ್,ಬೆಳ್ಳೆ ಗ್ರಾ ಪಂ ಅಧ್ಯಕ್ಷೆ ದಿವ್ಯಾ ಆಚಾರ್ಯ, ಗಿರಿಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಬೆಳ್ಳೆ ವಿ ಹಿಂ ಪ ಅಧ್ಯಕ್ಷ ವಿಕಾಸ್, ಕುರ್ಕಾಲು ಪಟ್ಟಾಚಾವಡಿ ಸುಂದರ ಶೆಟ್ಟಿ, ಸದಾನಂದ ಶೆಣೈ, ಸುರೇಂದ್ರ ಶೆಟ್ಟಿ ಕುಳೆದು, ಪಾಜಕ ಭಕ್ತಿರಥ ಯಾತ್ರಾ ಸಮಿತಿಯ ಅಧ್ಯಕ್ಷರಾದ ಕುರ್ಕಾಲು ದಿನೇಶ ಶೆಟ್ಟಿ , ಪ್ರ.ಕಾರ್ಯದರ್ಶಿ ಪಟ್ಟಾಭಿರಾಮ ಆಚಾರ್ಯ, ಮಧ್ವರಾಜ ಭಟ್, ಪಡುಬೆಳ್ಳೆ ವಿಶ್ವನಾಥ ಶೆಟ್ಟಿ , ಸುದರ್ಶನ್ ರಾವ್, ಕುರ್ಕಾಲು ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಗ್ರಿ ಅನಂತ ಸಾಮಗ , ವಿಷ್ಣುಮೂರ್ತಿ ಆಚಾರ್ಯ ಪೆರಣಂಕಿಲ ಶ್ರೀಶ ನಾಯಕ್, ಗಿರಿಧರ ಐತಾಳ್, ಕೃಷ್ಣರಾಜ ಕುತ್ಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ‌ ಸಂಯೋಜನೆಯಲ್ಲಿ ಸಹಕರಿಸಿದರು.

ಈದ್ ಸಂದೇಶ

Thumbnail
Posted On: 31 Mar 2025, 08:44 AM

ಈದ್ ಉಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಹನೆ, ಶಾಂತಿ, ಪ್ರೀತಿ, ಸಮೃದ್ದಿಯನ್ನು ತರುವಂತಾಗಲಿ. (ಅಮೀನ್ ) ನಿಮ್ಮ ನೆರೆಕರೆಯವರಿಗೆ ಸಂತೋಷ ತರುವವರೆಗೂ, ನೀವು ಸಂಪೂರ್ಣವಾಗಿ ಹಬ್ಬವನ್ನು ಆಚರಿಸಿದವರಾಗಲಾರಿರಿ. (ಪ್ರವಾದಿ ವಚನ) ನಿಜವಾದ ಹಬ್ಬವೆಂದರೆ, ಅದು ಸಮಾಜದಲ್ಲಿರುವ ಪ್ರತಿಯೊಬ್ಬರ ಹೃದಯದಲ್ಲಿ ಸಂಭ್ರಮ ಮೂಡಿಸುವ ಹಬ್ಬವಾಗಿರಬೇಕು. ಹೌದು, ಭಾರತವೆಂಬುವುದು ಸರ್ವ ಜನಾಂಗದ ಶಾಂತಿಯ ಹೂದೋಟವಾಗಿರುತ್ತದೆ. ಈ ದೇಶದಲ್ಲಿ ಯಾವುದೇ ಒಂದು ಧರ್ಮದವರಿಗೆ ಹಬ್ಬ ಬಂದರೆ, ಆ ಹಬ್ಬಗಳು, ಉಳಿದ ಎಲ್ಲಾ ಧರ್ಮದವರಿಗೆ ಸಂಭ್ರಮಿಸುವ, ಸಂತೋಷ ಪಡುವ ಮತ್ತು ಆ ಹಬ್ಬಗಳಲ್ಲಿ ಪಾಲ್ಗೊಳ್ಳುವ ಅವಕಾಶ ಮುಕ್ತವಾಗಿರಬೇಕು. ಹಬ್ಬದ ಅರ್ಥವೇ ಶಾಂತಿ, ಪ್ರೀತಿ ಮತ್ತು ಒಗ್ಗಟ್ಟನ್ನು ಹರಡುವುದು ಆಗಿರುತ್ತದೆ. ಇದು ಕೇವಲ ಆಚಾರ, ವಿಚಾರಗಳ ಸಂಗತಿಯಾಗಿರದೆ ಎಲ್ಲರ ಹೃದಯಕ್ಕೆ ಮತ್ತು ಮನಸ್ಸಿಗೆ ಹತ್ತಿರವಾಗುವ ಮತ್ತು ಎಲ್ಲರನ್ನೂ ಸಮಾನವಾಗಿ ಗೌರವಿಸುವ, ಹಸಿವು, ದಾಹಗಳನ್ನು ಮರೆಯುವ ಅವಕಾಶವಿರಬೇಕು. ಹಬ್ಬಗಳು ಎಲ್ಲಾ ಧರ್ಮ, ಜಾತಿ ವರ್ಗಗಳ ನಡುವಿನ ಭಾಂದವ್ಯವನ್ನು ಗಟ್ಟಿಯಾಗಿಸಿ ಸ್ನೇಹ ಮತ್ತು ಒಗ್ಗಟ್ಟನ್ನು ಮೂಡಿಸುವ ಸಂಕೇತವಾಗಬೇಕು. ಈ ದಿವಸ ಸಮಾಜದಲ್ಲಿ ಯಾರೂ ದುಃಖಿತನಾಗಿರಬಾರದು. " ನಾವೆಲ್ಲಾ ಮಾನವರು, ಪರಸ್ಪರ ಸಹೋದರರು. ನಮ್ಮೆಲ್ಲರ ಸ್ರಷ್ಟಿಕರ್ತ ದೇವನೊಬ್ಬನೇ " ಎಂಬ ಸಂದೇಶವನ್ನು ನೀಡುತ್ತಾ, ಹಬ್ಬದ ಶುಭಮಯ ವಾತಾವರಣ ಎಲ್ಲರ ಮನಸ್ಸಿಗೆ ಶಾಂತಿ ಮತ್ತು ಸಂತೋಷ ನೀಡಲಿ. ಅನ್ವರ್ ಅಲಿ, ಅಧ್ಯಕ್ಷರು, ಜಮಾ ಅತೆ ಇಸ್ಲಾಮಿ ಹಿಂದ್, ಕಾಪು.

ಎಸ್ ಕೆ ಪಿ ಎ ಕಾಪು ವಲಯ : ಛಾಯಾ ಟ್ರೋಫಿ - 2025 ಉದ್ಘಾಟನೆ

Thumbnail
Posted On: 31 Mar 2025, 08:31 AM

ಕಾಪು : ಸಂಘಟನೆಗಳು ಸದಸ್ಯರಿಗೆ ಒಗ್ಗಟ್ಟಿನ ಬಲದೊಂದಿಗೆ ನೈತಿಕ ಬೆಂಬಲವನ್ನು ನೀಡಬೇಕು. ಸೋತು ಗೆದ್ದಾಗ ಸಿಗುವ ಖುಷಿ ನಮ್ಮದಾಗಬೇಕು. ಸ್ಪರ್ಧಾತ್ಮಕತೆಯ ಯುಗದಲ್ಲಿ ತಾಂತ್ರಿಕತೆಗೆ ಅನುಗುಣವಾಗಿ ನಾವೂ ಹೊಂದಾಣಿಕೆ ಮಾಡಬೇಕಾಗಿದೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಕಾಪು ವಲಯ ಇವರ ಆಶ್ರಯದಲ್ಲಿ ಆದಿತ್ಯವಾರ ಕಟಪಾಡಿ ಎಸ್.ವಿ.ಎಸ್ ಕಾಲೇಜು ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಜರಗಿದ ಹೊನಲು ಬೆಳಕಿನ ಲೀಗ್ ಮಾದರಿಯ ಜಿಲ್ಲಾ ಮಟ್ಟದ ವಾಲಿಬಾಲ್ ಮತ್ತು ಹಗ್ಗ-ಜಗ್ಗಾಟ ಪಂದ್ಯಾಟ ಛಾಯಾ ಟ್ರೋಫಿ - 2025 ಉದ್ಘಾಟಿಸಿ ಮಾತನಾಡಿದರು. ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ದಕ ಸಂಘದ ಸಂಚಾಲಕ ಸತ್ಯೇಂದ್ರ ಪೈ, ಶ್ರೀ ಮಹಾಲಕ್ಷ್ಮೀ ದೇವಾಸ್ಥಾನ ಉಚ್ಚಿಲದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ದೀಪಕ್ ಎರ್ಮಾಳು, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಬಿಲ್ಲವ ಪರಿಷತ್ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಆಶಾ ಅಂಚನ್, ಸನ್ಮಾನಿತರಾದ ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ರಾವ್ ಮಟ್ಟು ಕಟಪಾಡಿ ಮಾತನಾಡಿದರು. ಸನ್ಮಾನ/ ಬಹುಮಾನ ವಿತರಣೆ : ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ರಾವ್ ಮಟ್ಟು ಕಟಪಾಡಿ ಇವರನ್ನು ಸನ್ಮಾನಿಸಲಾಯಿತು. ಉಚ್ಚಿಲ ದಸರಾ ಛಾಯಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಿತರಾದ ಸಂತೋಷ ಕೊರಂಗ್ರಪಾಡಿ, ವಾಮನ್ ಪಡುಕೆರೆ, ಪ್ರೇಮ್ ರನ್ನು ಗೌರವಿಸಲಾಯಿತು. ಎಸ್ ಕೆ ಪಿ ಎ ಕಾಪು ವಲಯ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಕೆ ಪಿ ಎ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಅಧ್ಯಕ್ಷರಾದ ಪದ್ಮಪ್ರಸಾದ್‌ ಜೈನ್, ಉದ್ಯಮಿ ಜಯವಂತ್ ಪ್ರಭು, ಶ್ರೀನಿಧಿ ಕನ್ಸ್ ಸ್ಟ್ರಕ್ಷನ್ ಉಚ್ಚಿಲ ಕರುಣಾಕರ್ ಪೂಜಾರಿ, ಎಸ್ ಕೆ ಪಿ ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ, ಎಸ್ ಕೆ ಪಿ ಎ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್, ಎಸ್ ಕೆ ಪಿ ಎ ಕಾಪು ವಲಯ ಕರುಣಾಕರ್ ನಾಯಕ್, ಎಸ್ ಕೆ ಪಿ ಎ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಂಜಿತ್ ಮೆಂಡನ್, ಹಿರಿಯ ಛಾಯಾಗ್ರಾಹಕ ಸುಭಾಷ್ ಬಲ್ಲಾಳ್, ಚಂದ್ರಹಾಸ ಕೋಟ್ಯಾನ್,ಭಾರಧ್ವಾಜ್, ಕಾಪು ವಲಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಕೋಶಾಧಿಕಾರಿ ಕಿರಣ್ ಕುಮಾರ್ ಕಾಪು, ಕ್ರೀಡಾ ಕಾರ್ಯದರ್ಶಿ ವಿಕ್ರಂ ಭಟ್, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಪೂಜಾರಿ ಕಾಪು, ಪೂರ್ವಾಧ್ಯಕ್ಷ ವಿರೇಂದ್ರ ಶಿರ್ವ, ಉದಯ ಮುಂಡ್ಕೂರು, ರವಿಕುಮಾರ್ ಕಟಪಾಡಿ, ವಿನೋದ್ ಕಾಂಚನ್, ದೀಪಕ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಕಾಪು ವಲಯದ ಮಾಜಿ ಅಧ್ಯಕ್ಷ ಪ್ರವೀಣ್ ಕುರ್ಕಾಲು ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ಸನ್ಮಾನ ಪತ್ರ ವಾಚಿಸಿದರು.ರಘುರಾಮ್ ಕೋಟ್ಯಾನ್ ಕುರ್ಕಾಲು ನಿರೂಪಿಸಿ, ರಾಘವೇಂದ್ರ ಭಟ್ ವಂದಿಸಿದರು.

ಬಂಟಕಲ್ಲು : ಬಿ.ಸಿ ರೋಡು - ಪಾಂಬೂರು ರಸ್ತೆ ಅಫಘಾತ ತಿರುವು ಬಂಟಕಲ್ಲು ನಾಗರಿಕ ಸಮಿತಿಯಿಂದ ದುರಸ್ಥಿ

Thumbnail
Posted On: 30 Mar 2025, 04:33 PM

ಶಿರ್ವ : ಬಂಟಕಲ್ಲು ಸಮೀಪದ ಬಿ.ಸಿ ರೋಡು - ಪಾಂಬೂರು ರಸ್ತೆಯಲ್ಲಿ ಅನೇಕ ಅಫಘಾತಗಳಿಗೆ ಕಾರಣವಾಗಿರುವ ರಸ್ತೆಯ ತಿರುವು ಮರಗಿಡಗಳು ರಸ್ತೆಗೆ ಚಾಚಿಕೊಂಡಿರುವುದು ವಾಹನ ಸವಾರರಿಗೆ ರಸ್ತೆಯ ಮುಂದೆ ಕಾಣದೆ ಇರುವುದು ಹಾಗೂ ರಸ್ತೆಯ ಬದಿಯಲ್ಲಿ ಸ್ಥಳವಿಲ್ಲದೆ ದೂಡ್ಡ ದೊಡ್ಡ ಹೊಂಡಗಳನ್ನು ತಪ್ಪಿಸಲು ವಾಹನ ಸವಾರರು ಬಲಭಾಗಕ್ಕೆ ವಾಹನ ಚಲಾಯಿಸುತ್ತಿದ್ದುದರಿಂದ ಆ ತಿರುವುನಲ್ಲಿ ಅನೇಕ ಅಫಘಾತಗಳು ನಡೆಯುತ್ತಿದ್ದವು. ಕಳೆದ ವಾರ ಅದೇ ತಿರುವುನಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊರ್ವರರಿಗೆ ವಿರುದ್ದ ದಿಕ್ಕಿನಿಂದ ಬಂದ ಕಾರು ಡಿಕ್ಕಿಹೊಡೆದು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರು ಮೃತಪಟ್ಟ ಅಘಾತದಿಂದ ಅವರ ತಾಯಿಯೂ ಮೃತಪಟ್ಟಿದ್ದರು. ಹೀಗೆ ಅಫಘಾತಗಳಿಗೆ ಕಾರಣವಾಗಿದ್ದ ಸದ್ರಿ ರಸ್ತೆ ತಿರುವನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ಇಂದು ಜೆ.ಸಿ.ಬಿ ಬಳಸಿ ತಿರುವನ್ನು ದುರಸ್ಥಿ ಪಡಿಸಿದ್ದಾರೆ. ಹೊಂಡಗಳಿಗೆ ಮಣ್ಣು ತುಂಬಿಸಿ, ರಸ್ತೆಗೆ ಅಡ್ಡವಾಗಿದ್ದ ಮರದ ಗೆಲ್ಲುಗಳು, ಗಿಡ, ಪೊದೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ದುರಸ್ಥಿಪಡಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿರುತ್ತಾರೆ. ನಾಗರಿಕ ಸೇವಾ ಸಮಿತಿಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಸದ್ರಿ ತಿರುವು ಅಫಘಾತಕ್ಕೆ ಕಾರಣವಾಗಬಹುದಾದ ತಿರುವು ಆಗಿರುವುದರಿಂದ ವಾಹನ ಸವಾರರು ಈ ಭಾಗದಲ್ಲಿ ನಿಧಾನವಾಗಿ ಸಂಚರಿಸುವಂತೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ ಆರ್ ಪಾಟ್ಕರ್ ತಿಳಿಸಿದ್ದಾರೆ. ನಾಗರಿಕ ಸಮಿತಿಯ ಉಮೇಶ್ ರಾವ್, ಪುಂಡಲೀಕ ಮರಾಠೆ, ವಿನ್ಸಂಟ್ ಕಸ್ತಲಿನೋ, ಡೇನಿಸ್ ಡಿಸೋಜಾ, ವೈಲೇಟ್ ಕಸ್ತಲಿನೋ, ಸ್ಥಳೀಯರಾದ ಸುಂದರ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು.