Updated News From Kaup

ನನಗೆ ನೀಡಿದ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನ ಅವಿಸ್ಮರಣೀಯ : ಡಾ.ಕೆ. ಪ್ರಕಾಶ್ ಶೆಟ್ಟಿ

Posted On: 29-09-2024 07:42PM

ಪಡುಬಿದ್ರಿ : ಪಡುಬಿದ್ರಿಯ ಅಳಿಯನಾಗಿ ನನಗೆ ಪ್ರೀತಿ, ಸ್ನೇಹ ನೀಡಿದ್ದೀರಿ. ನಿಮ್ಮ ಅಭಿಮಾನಕ್ಕೆ ಚಿರ ಋಣಿ. ನೀವೆಲ್ಲ ದೇವರಿಗೆ ಸಮಾನ. ನನಗೆ ನೀಡಿದ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನ ಅವಿಸ್ಮರಣೀಯ. ಈ ಊರಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗ ಬೇಕಿದೆ. ಬಂಟ ಸಮಾಜದ ಅಭ್ಯದಯಕ್ಕಾಗಿ ದುಡಿಯಲು ಸದಾ ಸಿದ್ಧ ಎಂದು ಬೆಂಗಳೂರಿನ ಉದ್ಯಮಿ, ಎಂಆರ್ ಜಿ ಗ್ರೂಪ್ ನ ಚೇರ್ಮನ್, ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಪಡುಬಿದ್ರಿ, ಸಿರಿಮುಡಿ ದತ್ತಿನಿಧಿ ಟ್ರಸ್ಟ್‌ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ‘ಸಿರಿಮುಡಿ ದತ್ತಿನಿಧಿ ಟ್ರಸ್ಟ್’ ಬಂಟರ ಸಂಘ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಇತ್ತೀಚೆಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿ “ಶ್ರೀ ಗುರು ನಿತ್ಯಾನಂದಾನುಗ್ರಹ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಅವರು ಇಂದಿನ ಸೋಶಿಯಲ್ ವೆಲ್ಫೇರ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಹಿರಿ, ಕಿರಿಯರನ್ನು ಮೇಲೆತ್ತುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ. ದೇಶ ವಿದೇಶಗಳ ನಮ್ಮ ಬಂಟ ಬಾಂಧವರಿಂದಲೂ ಸಹಾಯಪಡೆದು ವಿದ್ಯಾರ್ಥಿಗಳಿಗೆ ಹಂಚೋಣ. ವಿದ್ಯಾಭ್ಯಾಸದಿಂದಲೂ ಸಮಾಜವೂ ಬಲಯುತವಾಗಬಲ್ಲದು ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಬದುಕು ಸಮಾಜದ ಋಣ ತೀರಿಸುವ ಬದುಕಾಗಬೇಕು. ಪ್ರಕಾಶ ಶೆಟ್ಟಿ ಅವರಂತಹಾ ಅದರ್ಶ ವ್ಯಕ್ತಿತ್ವಗಳು ಮತ್ತಷ್ಟು ಮೂಡಿಬರಲೆಂದರು. ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ, ಬಂಟ ಸಮಾಜದ ಉದ್ಧಾರಕ್ಕಾಗಿ ಅಹರ್ನಿಶಿ ದುಡಿಯುತ್ತಿರುವವರು ಪ್ರಕಾಶ್ ಶೆಟ್ಟಿ ಅವರಾಗಿದ್ದಾರೆ. ಮಾನವ ಸಂಪನ್ಮೂಲ ಸದ್ಬಳಕೆಯಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಮುಂಚೂಣಿಯಲ್ಲಿರುವುದಾಗಿಯೂ, ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೊಡುಗೆಯಿತ್ತವರನ್ನು ಮರೆಯಬಾರದೆಂದರು.

ಸಮಾರಂಭದಲ್ಲಿ 15ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ, ವಿಧವಾ ವೇತನ, ವಿಶೇಷ ಚೇತನರಿಗೆ ಧನ ಸಹಾಯದ ರೂಪದಲ್ಲಿ ವಿತರಿಸಲಾಯಿತು. ಬಂಟಾಶ್ರಯ ಯೋಜನೆಗಾಗಿ ಸ್ಥಳವನ್ನಿತ್ತ ಮಾರ್ಕ್ಸ್ ಡಿಸೋಜರಿಗೆ ಮುಂಬೈ ಉದ್ಯಮಿ ಎಲ್ಲೂರುಗುತ್ತು ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಮುಂಗಡ ಹಣವನ್ನು ಹಸ್ತಾಂತರಿಸಲಾಯಿತು. ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಹಾಗೂ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದ ಬ್ರೋಷರ್ ಹಾಗೂ ಠೇವಣಾತಿ ಪತ್ರವನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸಭೆಯಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಅದ್ದೂರಿಯಾದ ಮೆರವಣಿಗೆ ನಡೆದು, ಮೆರವಣಿಗೆಯಲ್ಲಿ ಡಾ. ಕೆ ಪ್ರಕಾಶ್ ಶೆಟ್ಟಿ ಹಾಗೂ ಇತರ ಅತಿಥಿ ಗಣ್ಯರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ 10 ರಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರುಣಾಕರ ಆರ್. ಶೆಟ್ಟಿ, ಸಿ.ಎಂ.ಡಿ. ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್, ಮುಂಬಯಿ ಮತ್ತು ಎರ್ಮಾಳು, ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ, ಪುಣೆ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಸೀತಾರಾಮ ಶೆಟ್ಟಿ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು. ಸಿರಿಮುಡಿ ದತ್ತಿನಿಧಿಯ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಶೆಟ್ಟಿ ಪದ್ರ ಹಾಗೂ ಡಾ. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

ಕಾಪು : ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ನಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ

Posted On: 29-09-2024 09:10AM

ಕಾಪು : ರೇಬಿಸ್ ರೋಗವನ್ನು ತಡೆಗಟ್ಟುವ ಜಾಗೃತಿಗಾಗಿ ಸೆಪ್ಟೆಂಬರ್ 28ನ್ನು ವಿಶ್ವ ರೇಬಿಸ್ ದಿನವಾಗಿ ಆಚರಿಸಲಾಗುತ್ತಿದೆ. ರೇಬಿಸ್ ರೋಗವು ನಾಯಿ ಮತ್ತು ಬೆಕ್ಕು ಕಡಿತದಿಂದ ಬರುತ್ತದೆ. ಈ ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ಎಚ್ಚರಿಕೆಯ ಕ್ರಮವಾಗಿ ಎಲ್ಲಾ ಸಾಕುಪ್ರಾಣಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಆಕಸ್ಮಿಕವಾಗಿ ಪ್ರಾಣಿಗಳ ಕಡಿತವಾದರೆ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಮಾರಣಾಂತಿಕ ರೋಗದಿಂದ ದೂರವಿರಬಹುದೆಂದು ಕಾಪು ತಾಲೂಕು ಪಶುವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ತಿಳಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪಶು ಚಿಕಿತ್ಸಾಲಯ ಶಿರ್ವ, ರೋಟರಿ ಕ್ಲಬ್ ಶಿರ್ವ ಸಹಯೋಗದಲ್ಲಿ ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ಜರುಗಿದ ರೇಬಿಸ್ ಜಾಗೃತಿ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು.

ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ಅಮಿತ್ ಅರುಣ್ ಅಧ್ಯಕ್ಷತೆ ವಹಿಸಿದ್ದರು.

ಡಾ.ಲೋಕೇಶ್ ಪಡುಬಿದ್ರಿ, ಹಿರಿಯ ಪಶುವೈದ್ಯ ಪರೀಕ್ಷಕರಾದ ಶಿವಪುತ್ರೇಯ ಗುರುಸ್ವಾಮಿ, ವಸಂತ ಮಾಧವ, ರೋಟರಿ ಮಾಜಿ ಅಧ್ಯಕ್ಷ ಡಾ.ವಿಠಲ ನಾಯಕ್, ರೊಟೇರಿಯನ್ ವಿಲಿಯಂ ಪುರ್ತಾದೊ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಸಂಗೀತ ರಾವ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ರೇಬಿಸ್ ಜಾಗೃತಿ ಕರಪತ್ರವನ್ನು ವಿತರಿಸಲಾಯಿತು.

ನವೆಂಬರ್ 16 : ಪಲಿಮಾರಿನಲ್ಲಿ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ - ಪೂರ್ವಭಾವಿ ಸಭೆ

Posted On: 29-09-2024 09:06AM

ಪಲಿಮಾರು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 16, ಶನಿವಾರ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಲಿದ್ದು, ಸಮ್ಮೇಳನದ ಸಿದ್ಧತಾ ಪೂರ್ವಭಾವಿ ಸಭೆಯು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆಯವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಪು ತಾಲೂಕು ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ವಿಶಿಷ್ಠ ಪರಂಪರೆಯನ್ನು ಹೊಂದಿದ ತಾಲೂಕು ಆಗಿದೆ. ಕಾಪು ನೂತನ ತಾಲೂಕು ಆಗಿ ರಚನೆಯಾದಂದಿನಿಂದ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯದ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಈ ತಾಲೂಕು ಹೊಂದಿದ್ದು 6ನೇ ಸಮ್ಮೇಳನಕ್ಕೆ ಸಿದ್ಧತೆಯಲ್ಲಿರುವುದು ಅಭಿನಂದನೀಯ ಎಂದರು. ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ ನುಡಿಜಾತ್ರೆಯಾಗಿದ್ದು ತಾಯಿ ಭುವನೇಶ್ವರೀಯ ಶೋಭಾಯಾತ್ರೆಯೊಂದಿಗೆ ಪ್ರಾರಂಭವಾಗಿ ಸಮಾರೋಪದವರೆಗೆ ಜರುಗುವ ವಿವಿಧ ಕಾರ್ಯಕ್ರಮಗಳು, ವ್ಯವಸ್ಥಿತವಾಗಿ ನಡೆಸಲು ಪೂರಕ ಉಪಸಮಿತಿಗಳು ಹಾಗೂ ಸಮಿತಿಯ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರು, ಉಪ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಹಿರಿಯ ಸಮಾಜಸೇವಕರು, ಶಾಲಾ ಹಳೆವಿದ್ಯಾರ್ಥಿಗಳಾದ ಲಕ್ಷ್ಮಣ ಶೆಟ್ಟಿ ನಂದಿಕೂರು, ಪಲಿಮಾರು ಇಗರ್ಜಿಯ ಧರ್ಮಗುರುಗಳಾದ ರೆ.ಫಾ.ಜೆರಾಲ್ಡ್ ಡಿಮೆಲ್ಲೋ ಮಾತನಾಡಿ ಪಲಿಮಾರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಒದಗಿಬಂದುದು ಊರಿಗೆ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ಸೇರಿ ಯಶಸ್ವಿಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಪಿ, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮೇಲ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಪಲಿಮಾರು ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಸಾಪದ ಪದಾಧಿಕಾರಿಗಳು, ಸದಸ್ಯರು, ಆಹ್ವಾನಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿದರು. ಪ್ರೌಢ ಶಾಲಾ ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ, ವಂದಿಸಿದರು.

ಸೆಪ್ಟೆಂಬರ್ 29 (ನಾಳೆ) : ಕಾರ್ಕಳ ಕುಲಾಲ ಸಂಘದ ವಾರ್ಷಿಕ ಮಹಾಸಭೆ

Posted On: 28-09-2024 09:20PM

ಕಾರ್ಕಳ : ತಾಲೂಕಿನ ಕುಲಾಲ ಸುಧಾರಕ ಸಂಘ (ರಿ.) ಜೋಡುರಸ್ತೆ ಕಾರ್ಕಳ ಇದರ 29 ನೇ ವರ್ಷದ ಮಹಾಸಭೆ, ಶ್ರೀ ಸತ್ಯ ನಾರಾಯಣ ಪೂಜೆ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಸಂಘದ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಮುಖರು ತಿಳಿಸಿರುವರು.

ನ. 16 - 18 : ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್ ವತಿಯಿಂದ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿ

Posted On: 28-09-2024 11:15AM

ಪಡುಬಿದ್ರಿ : ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ವತಿಯಿಂದ ನವೆಂಬರ್ 16ರಿಂದ 18ರವರೆಗೆ ರಾಷ್ಟ್ರ ಮಟ್ಟದ ಅಹರ್ನಿಶಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪಡುಬಿದ್ರಿ ಎಸ್.ಎಸ್.ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ತಂಡದ ಅಧ್ಯಕ್ಷ ಚೇತನ್‌ ಕುಮಾ‌ರ್ ಮಾಹಿತಿ ನೀಡಿದರು.

ವಿಜೇತರಿಗೆ ಪ್ರಥಮ ಕಡಲ್ ಫಿಶ್ ಟ್ರೋಫಿ ಸಹಿತ ನಗದು 5 ಲಕ್ಷ ರೂ., ದ್ವಿತೀಯ 3 ಲಕ್ಷ ರೂ. ಬಹುಮಾನವಿದೆ. ಪಂದ್ಯಾಕೂಟದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮುಂಬಯಿ, ಹರ್ಯಾಣ, ಬೆಂಗಳೂರು, ಚಿತ್ರದುರ್ಗ, ಕೋಲಾರ ಸಹಿತ 25ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ.

ಉಡುಪಿ ಮತ್ತು ದಕ್ಷಿಣ ಕನ್ನಡದ ತಂಡಗಳನ್ನು ಪಿನ್‌ ಕೋಡ್ ಮಾದರಿಯಲ್ಲಿ ಆಡಿಸಲಾಗುವುದು. ಇಲ್ಲಿ ವಿಜೇತ ತಂಡ ನೇರ ಫೈನಲ್ ಪ್ರವೇಶ ಪಡೆಯಲಿದೆ. ಪಂದ್ಯಾವಳಿಯ ಉಳಿಕೆಯ ಹಣವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಸಂಘಟಕರ ಪರವಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ತಿಳಿಸಿದರು.

ಈ ಸಂದರ್ಭ ಅಶೋಕ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್, ಕರುಣಾಕರ ಪೂಜಾರಿ, ರಮೀಝ್ ಹುಸೈನ್, ಸುಭಾಷ್ ಕಾಮತ್, ಕೃಷ್ಣ ಬಂಗೇರ, ಪ್ರಶಾಂತ್ ಸಾಲ್ಯಾನ್, ವಸಂತ್ ಮತ್ತಿತರರು ಉಪಸ್ಥಿತರಿದ್ದರು.

ಅಕ್ಟೋಬರ್ 3 -12 : ವೈಭವದ ಉಡುಪಿ ಉಚ್ಚಿಲ ದಸರಾ - 2024

Posted On: 25-09-2024 08:04PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷದ ಉಡುಪಿ ಉಚ್ಚಿಲ ದಸರಾ-2024ವನ್ನು ಅಕ್ಟೋಬರ್ 3 ರಿಂದ 12 ರ ತನಕ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಕ್ತರ ಸಹಕಾರದೊಂದಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ಉಚ್ಚಿಲದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನವೆಂಬರ್ 02 ರ ಸಂಜೆ ಗಂಟೆ 6.30 ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಅಕ್ಟೋಬರ್ 3, ಗುರುವಾರ ಬೆಳಗ್ಗೆ ಗಂಟೆ 10ಕ್ಕೆ ಸರಿಯಾಗಿ ದಸರಾ ಉತ್ಸವದ ಉದ್ಘಾಟನೆಯು ಗಣ್ಯರು, ದಾನಿಗಳ, ಉಪಸ್ಥಿತಿಯಲ್ಲಿ ನಡೆಯಲಿದೆ.

ದಸರಾ ಪ್ರಯುಕ್ತ ಆಯೋಜಿಸಿರುವ ವಿವಿಧ ಮೇಳ, ಮಾಹಿತಿ ಶಿಬಿರ ಹಾಗೂ ವಸ್ತು ಪ್ರದರ್ಶನದ ಉದ್ಘಾಟನೆಯು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಬೆಳಿಗ್ಗೆ, ಗಂಟೆ 10.45 ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭ ಮಾಡಲಾಗುವುದು.

ಪ್ರತಿ ದಿನ ಚಂಡಿಕಾ ಹೋಮ, ಕಲ್ಪೋಕ್ತ ಪೂಜೆ, ಧಾರ್ಮಿಕ ಸಭೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸಹಿತ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ ವಿವಿಧ ವೃತ್ತಿಪರ ತಂಡಗಳಿಂದ ಜಾದೂ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಜಾನಪದ ನೃತ್ಯ, ನೃತ್ಯ ರೂಪಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಕರಾವಳಿ ಜಿಲ್ಲೆಗಳ 40 ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕ್ಷೇತ್ರದ ರಥಬೀದಿಯ ಸುತ್ತ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ ಸಹಿತ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸೆ. 29 : ಪಡುಬಿದ್ರಿ ಬಂಟರ ಸಂಘದಲ್ಲಿ ಡಾ| ಕೆ. ಪ್ರಕಾಶ್ ಶೆಟ್ಟಿಯವರಿಗೆ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಪ್ರದಾನ

Posted On: 25-09-2024 12:10PM

ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ 'ಸಿರಿಮುಡಿ ದತ್ತಿನಿಧಿ ಟ್ರಸ್ಟ್' ಬಂಟರ ಸಂಘ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 29, ಆದಿತ್ಯವಾರ ಪಡುಬಿದ್ರಿ ಬಂಟರ ಸಂಘದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಇತ್ತೀಚೆಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಬಂಟ ಸಮಾಜದ ದಾನಿ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿಯವರಿಗೆ 'ಶ್ರೀ ಗುರು ನಿತ್ಯಾನಂದಾನುಗ್ರಹ' ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ಪಡುಬಿದ್ರಿ ಬಂಟರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸದ್ರಿ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಡಾ| ಕೆ. ಪ್ರಕಾಶ್ ಶೆಟ್ಟಿ ದಂಪತಿ ಹಾಗೂ ಇತರ ಅತಿಥಿ ಗಣ್ಯರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ ಗಂಟೆ 10 ರಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ಸ್ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಸಿ.ಎ. ಅಶೋಕ ಶೆಟ್ಟಿ ಇವರು ನೆರವೇರಿಸಲಿದ್ದಾರೆ. ಸಿರಿಮುಡಿ ದತ್ತಿನಿಧಿ ಬಂಟರ ಸಂಘ ಪಡುಬಿದ್ರಿ ಟ್ರಸ್ಟ್ ನಿಂದ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ನೆರವಾಗಲು ವಿದ್ಯಾರ್ಥಿವೇತನ, ಸಮಾಜದ ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 15 ಲಕ್ಷ ರೂಪಾಯಿಗಳನ್ನು ವಿತರಿಸಲಾಗುವುದು. ಸಿರಿಮುಡಿ ದತ್ತಿನಿಧಿ ಪಡುಬಿದ್ರಿ ಇದರ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ದಾನಿಗಳಿಂದ ಸಂಗ್ರಹಿಸಿದ ಸುಮಾರು 1.31 ಕೋಟಿ ರೂಪಾಯಿಗಳನ್ನು ಶಾಶ್ವತ ಠೇವಣಿಯಾಗಿರಿಸಿ ಅದರಲ್ಲಿ ಬರುವ ಬಡ್ಡಿಯಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಮುಖ್ಯ ಅತಿಥಿಗಳಾಗಿ ಕರುಣಾಕರ ಆ‌ರ್. ಶೆಟ್ಟಿ, ಸಿ.ಎಂ.ಡಿ. ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್, ಮುಂಬಯಿ ಮತ್ತು ಎರ್ಮಾಳು ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ ಇವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬರುವ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಆಯೋಜಿಸಲು ಉದ್ದೇಶಿಸಿರುವ ಅಂತರ್ ರಾಜ್ಯ ಬಂಟರ ಕ್ರೀಡಾಕೂಟ ಇದರ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ವಿಶ್ವ ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎಣಿಸಲಿರುವ ಬಂಟಾಶ್ರಯ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳ್ ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷ ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಸಾಂಸ್ಕೃತಿಕ ಸಂಚಾಲಕ ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.

ಕಾಪು ವೃತ್ತದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಸಮಾರೋಪ

Posted On: 25-09-2024 09:59AM

ಕಾಪು : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಮತ್ತು ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯಚೈತನ್ಯ ಹೈಸ್ಕೂಲ್ ಕುತ್ಯಾರು ಆಶ್ರಯದಲ್ಲಿ ಕಾಪು ವೃತ್ತದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಸಮಾರೋಪವು ಸಂಸ್ಥೆಯ ಕ್ರೀಡಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಸ್ಸೆಟ್ ಕಾರ್ಯದರ್ಶಿ ಗುರುರಾಜ ಕೆ.ಜೆ ಮಾತನಾಡಿ, ಪ್ರಥಮ ಬಾರಿಗೆ ಸಂಸ್ಥೆಯಲ್ಲಿ ಕ್ರೀಡಾಕೂಟವನ್ನು ಸಂಘಟಿಸಲು ಸಹಕರಿಸಿದ ಶಾಲಾ ಶಿಕ್ಷಣ ಇಲಾಖೆ ಮತ್ತು ದಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಶಿರ್ವದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ. ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ದಂಡತೀರ್ಥ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಉಳಿಯಾರಗೋಳಿಯ ಮಹಮ್ಮದ್ ಅಯಾನ್ ಮತ್ತು ಚಿರಾಗ್ ಬಾಲಕರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ , ಶಿರ್ವದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ನಿಶಾ ಮತ್ತು ಅನುಷಾ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗಳಿಸಿದರು. ಬಾಲಕರ ವಿಭಾಗದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ದಂಡತೀರ್ಥ ಶಾಲೆ ಉಳಿಯಾರಗೋಳಿ, ಬಾಲಕಿಯರ ವಿಭಾಗದ ಚಾಂಪಿಯನ್ ಮತ್ತು ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಶಿರ್ವದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಗಳಿಸಿತು.

ಅಸ್ಸೆಟ್ ಪದಾಧಿಕಾರಿಗಳಾದ ವಿವೇಕ ಆಚಾರ್ಯ, ಜನಾರ್ದನ ಆಚಾರ್ಯ ಬಜಕೂಡ್ಲು, ಸುಂದರ ಆಚಾರ್ಯ ಮರೋಳಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಕಿರಣ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವೇಣುಗೋಪಾಲ್, ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಪ್ರಾಂಶುಪಾಲೆ ಸಂಗೀತ ರಾವ್ ಸ್ವಾಗತಿಸಿ, ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಆಚಾರ್ಯ ವಂದಿಸಿದರು.

ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ : ಕಲಾ ಸಂಭ್ರಮದಲ್ಲಿ ದ್ವಿತೀಯ ಸ್ಥಾನಿ ಪ್ರಶಸ್ತಿ

Posted On: 23-09-2024 05:42PM

ಉಡುಪಿ : ಪದ್ಮಶಾಲಿ ಸೇವಾಸಮಿತಿ, ಕಾಡುಮಠ ಗ್ರಾಮ, ವಿಟ್ಲ ವಲಯದ ದಶಮಾನೋತ್ಸವದ ಅಂಗವಾಗಿ ನಡೆದ ಕಲಾ ಸಂಭ್ರಮದಲ್ಲಿ ವೈವಿಧ್ಯಮಯ ಮನೋರಂಜನೆ ಸ್ವರ್ಧೆಯಲ್ಲಿ ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ ದ್ವಿತೀಯ ಸ್ಥಾನಿ ಪ್ರಶಸ್ತಿ ಪಡೆದಿರುತ್ತಾರೆ.

ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ ಇವರು ಚಿಕ್ಕಂದಿನಿಂದಲೂ ತುಳುನಾಡ ಗಂಡುಕಲೆಯೆಂದೇ ಪ್ರಸಿದ್ದವಾಗಿರುವ ಯಕ್ಷಗಾನ ಕಲಾಕ್ಷೇತ್ರದಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಸಾಂಸಾರಿಕ ಜೀವನಕ್ಕೆ ಕಾಲಿಟ್ಟರೂ ತನ್ನ ಪತಿ ಚಂದ್ರಕಾಂತ್ ಶೆಟ್ಟಿಗಾರ್ ರವರ ಸಂಪೂರ್ಣ ಬೆಂಬಲವನ್ನು ಪಡೆದು ತಮಗಿರುವ ಯಕ್ಷಗಾನ ಕಲಾ ಕ್ಷೇತ್ರದಲ್ಲಿನ ಆಸಕ್ತಿಯನ್ನು ತ್ಯಜಿಸದೆ ಸಾಂಸಾರಿಕ ಜೀವನದೊಟ್ಟಿಗೆ ಯಕ್ಷಗಾನ ಕಲಾಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.

ಮಜೂರು ಕರಂದಾಡಿ ಶ್ರೀ ರಾಮ ಅನುದಾನಿತ ಹಿ.ಪ್ರಾ. ಶಾಲೆಗೆ ಅಗತ್ಯ ವಸ್ತುಗಳ ಹಸ್ತಾಂತರ

Posted On: 23-09-2024 05:40PM

ಕಾಪು : ಮಜೂರು ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಚಪ್ಪಲ್ ಸ್ಟ್ಯಾಂಡ್, ಶಾಲಾ ಕಛೇರಿಗೆ 10 ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಬ್ಯಾಂಕ್ ಆಫ್ ಬರೋಡ ಕಾಪು ಶಾಖಾ ಪ್ರಬಂಧಕ ಶಿವಪ್ರಸಾದ್, ನಯೇಶ್ ಶೆಟ್ಟಿ ಎಲ್ಲೂರು, ಯಶೋಧರ ಶೆಟ್ಟಿ ಎರ್ಮಾಳು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರಂದಾಡಿ ಪದ್ಮನಾಭ ಶಾನುಭಾಗ್, ಮುಖ್ಯ ಶಿಕ್ಷಕ ಆರ್. ಎಸ್. ಕಲ್ಲೂರ, ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ಆಡಳಿತ ಸಮಿತಿ ಸದಸ್ಯ ನಾಗಭೂಷಣ್ ರಾವ್, ಗೌರವ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.