Updated News From Kaup
ಕಾಪು.ಜೂನ್, 11 : ಕುಂಜೂರಿನಲ್ಲಿ 13ನೇ ಶತಕದ ತುಳು ಶಾಸನ ಪತ್ತೆ
Posted On: 11-06-2020 10:36AM
ಕಾಪು , ಜೂ.10 : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ಗೋಪುರದ ಇಕ್ಕೆಲಗಳಲ್ಲಿ ಇದ್ದ ಎರಡು "ತುಳು ಲಿಪಿಯಲ್ಲಿ ಬರೆದ ತುಳುಭಾಷೆಯ" ಶಾಸನಗಳನ್ನು ಇತಿಹಾಸ ಸಂಶೋಧಕ ಬಂಟಕಲ್ಲಿನ ಸುಭಾಸ್ ನಾಯಕ್ ಅವರು ಓದುವ ಪ್ರಯತ್ನ ಮಾಡಿದ್ದಾರೆ . ಎರಡು ಶಾಸನಗಳಲ್ಲಿ ಒಂದು ಸಂಪೂರ್ಣ ತ್ರುಟಿತಗೊಂಡಿದೆ , ಕಾಮಗಾರಿ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿದ್ದು ,ಓದಲಾಗದ ಸ್ಥಿತಿಯಲ್ಲಿದೆ . ಆದರೆ ಕಾಣುವ ಅಕ್ಷರಗಳನ್ನು ಗಮನಿಸಿದಾಗ ಅದು ತುಳು ಲಿಪಿಯ ಶಾಸನವೆಂದು ನಾಯಕ್ ಹೇಳುತ್ತಾರೆ . ಇನ್ನೊಂದು ಶಾಸನವು (ದೇವಳದ ಈಶಾನ್ಯದಲ್ಲಿರುವ) ಬಹುತೇಕ ಅಳಿಸಿಹೋಗಿದ್ದರೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದರೂ ಓದಲು ಸಾಧ್ಯವಾಗುತ್ತದೆ . ಈ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ - ಚಂದ್ರರ ಉಬ್ಬುಶಿಲ್ಪವಿದೆ . ಸ್ವಸ್ತಿಶ್ರೀಃ ಎಂದು ಪ್ರಾರಂಭವಾಗುವ ಬರೆಹವು 'ಮೀನಸ್ಯ' ಅಂದರೆ ಮೀನಮಾಸದಲ್ಲಿ . ಮುಂದೆ 'ವಲ್ಲ ಮಹಾದೇವರ ಕಾಲನ್ಟ್ ' ಎಂದು ಓದಬಹುದಾಗುತ್ತದೆ .ವಲ್ಲ ಮಹಾದೇವರ ಕಾಲನ್ಟ್ ಎಂದರೆ ವಲ್ಲ ಮಹಾದೇವರ ಕಾಲದಲ್ಲಿ. ಬಳಿಕ ಕೆಳಗಿನ ಸಾಲಿನಲ್ಲಿ ಇರುವ ಅಕ್ಷರಗಳು ಅಸ್ಪಷ್ಟವಾಗಿವೆ. ಪಳಂ ತುಳುವಾಗಿರುವುದರಿಂದ ಶಬ್ದ ಸಂಯೋಜನೆ ಕಷ್ಟಸಾಧ್ಯ . ಅನಂತರದ ಒಂದು ಸಾಲಿನಲ್ಲಿ 'ತುನರ ಪುರತ್ ನಯೆ' ಮುಂದುವರಿದರೆ 'ಮುದೆಲಾಯ' ಮುಂತಾದ ಶಬ್ದಗಳು ಸಿಗುತ್ತವೆ .ಇನ್ನುಳಿದಂತೆ ಅಕ್ಷರಗಳು ಒಂದೋ ಸಿಮೆಂಟ್ ಬಿದ್ದು ಅಥವಾ ಸವೆದು ಹೋಗಿದೆ . ಆದರೆ ಇದು ತುಳು ಭಾಷೆಯ ತುಳುಲಿಪಿಯಲ್ಲಿರುವ ಶಾಸನವಾದುದರಿಂದ ಮುಂದಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ನಾಯಕ್ . ಈ ಶಾಸನದಲ್ಲಿ ಉಲ್ಲೇಖವಾಗಿರುವ 'ವಲ್ಲ ಮಹಾದೇವ' ನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230 - 1250.ಅಂದರೆ 13 ನೇ ಶತಮಾನ ಎಂದು ಸುಭಾಸ್ ನಾಯಕ್ ಹೇಳಿದ್ದಾರೆ . ಇವರು ತುಳು ಶಾಸನ ಓದುವ ಬೆರಳೆಣಿಕೆಷ್ಟು ವಿದ್ವಾಂಸರಲ್ಲಿ ಒಬ್ಬರು .ಕ್ಷೇತ್ರಕಾರ್ಯದಲ್ಲಿ ಗುರುಪ್ರಸಾದ ನಾಯಕ್ ಸಹಕರಿಸಿದ್ದರು .ದೇವಸ್ಥಾನದ ಮೆನೇಜರ್ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು . ಕುಂಜೂರಿಗೆ ಬಹಳಷ್ಟು ಧಾರ್ಮಿಕ , ಐತಿಹಾಸಿಕ , ಸಾಂಸ್ಕೃತಿಕ ಹಿನ್ನೆಲೆ ಇದೆ.ಈ ಶಾಸನದ ಅಧ್ಯಯನಕ್ಕೆ ಬೇಕಾದ ಲಭ್ಯ ಮಾಹಿತಿಗಳನ್ನು ಸ್ಥಳೀಯರು ಒದಗಿಸಲು ಅಣಿಯಾಗಿದ್ದಾರೆ . ಬರಹ : ಕೆ ಎಲ್ ಕುಂಡಂತಾಯ
ಧನುಷ್ ತೀರ್ಥದಲ್ಲಿ ಮದ್ಯಪಾನ-ಮೋಜು : ಸ್ಥಳೀಯರ ವ್ಯಾಪಕ ಖಂಡನೆ
Posted On: 10-06-2020 10:04PM
ಜೂ09, ಕಾಪು ತಾಲೂಕಿನ ಇನ್ನಂಜೆ ಹಾಗೂ ಮಜೂರು ಗ್ರಾಮದ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಧನುಷ್ ತೀರ್ಥದಲ್ಲಿ ಮಂಗಳವಾರ ಸಂಜೆ ಹೊರಭಾಗದಿಂದ ಬಂದ ಕೆಲ ಯುವಕರು ಮದ್ಯಪಾನ ಮಾಡಿ ಮೋಜು ಮಾಡಿದ್ದಾರೆ. ತದನಂತರ ಕುಡಿದ ಮತ್ತಿನಲ್ಲಿ ತಮ್ಮ ಬೈಕ್ ಟಯರ್ ಗಳ ಬ್ಲೋ ತೆಗೆದಿದ್ದಾರೆಂದು ರಂಪಾಟ ನಡೆಸಿದ್ದಾರೆ. ಇದನ್ನು ಪರಿಸರದ ಯುವಕರು ಹಾಗೂ ಸ್ಥಳೀಯರು ತೀಕ್ಣವಾಗಿ ಖಂಡಿಸಿದ್ದು, ಪ್ರಸ್ತುತ ಸ್ಥಳವು ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ತಮಗೆಲ್ಲರಿಗೂ ಪೂಜನೀಯವಾಗಿದೆ. ಇದು ಇತ್ತೀಚೆಗೆ ಹೊರಗಿನಿಂದ ಬರುವ ಪ್ರೇಮಿಗಳ ಹಾಗೂ ಪುಂಡು ಪೋಕರಿಗಳ ಅಡ್ಡೆಯಾಗತ್ತಿದ್ದು, ಪ್ರತಿದಿನವೂ ಬಂಡೆಯಲ್ಲಿ ಮದ್ಯದ ಬಾಟಲ್ ,ಪ್ಲಾಸ್ಟಿಕ್ ರಾಶಿ ಬೀಳುತ್ತಿದ್ದು, ಮೇಲಿರುವ ತೀರ್ಥದ ಕೆರೆಯೂ ಕ್ರಮೇಣ ಮಲಿನಗೊಳ್ಳುತ್ತಿದೆ. ಪ್ರವಾಸಿ ತಾಣವಾಗಬೇಕಿದ್ದ, ಪ್ರೇಕ್ಷಣೀಯ ಸ್ಥಳವಾಗಬೇಕಿದ್ದ ಧನಸ್ಸು ತೀರ್ಥ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಂದು ಕುಡುಕರ ಅಡ್ಡೆಯಾಗಿದೆ. ಆದರೂ ಇಂದೋ ನಾಳೆಯೋ ಈ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಸಾರ್ವಜನಿಕರು ಕಾದು ಕುಳಿತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ, ಸಮಸ್ಯೆ ಹೀಗೇ ಮುಂದುವರಿದರೆ ಸಾರ್ವಜನಿಕರು ತಾವೇ ಕಾನೂನು ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ವೃದ್ಧರಿಗೆ ಸೂರು ನಿರ್ಮಿಸಲು ಬಹುಮಾನದ ಹಣವನ್ನು ನೀಡಿದ ಪಡುಬಿದ್ರಿಯ ಸಪ್ನಾ
Posted On: 10-06-2020 08:50PM
ಕರುಳು ಕಿತ್ತು ಬರುವ ದೃಶ್ಯ.ಇಂದೋ ನಾಳೆಯೋ ಬೀಳುವ ಹಂತದಲ್ಲಿರುವ ಮನೆ ,ಮನೆಯ ಕೆಲವು ಭಾಗಗಳು ಈಗಾಗಲೇ ಕುಸಿದು ಬಿದ್ದಿವೆ, ಮನೆಯ ಒಳಗೆಲ್ಲಾ ನೀರು ಸೋರುತ್ತಿದೆ ,ಆದರೂ ವಿಧಿಯಿಲ್ಲದೆ ಆ ಎರಡು ಹಿರಿ ಜೀವಗಳು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಆ ಮುರುಕಲು ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರೇ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರಿನ ಹೊಂಡೇಲು ನಿವಾಸಿಗಳಾದ ದೂಜ ಪೂಜಾರಿ, ಸುಶೀಲ ಪೂಜಾರ್ತಿ. ಈ ದಂಪತಿಗಳ ಕರುಣಾಜನಕ ಸ್ಥಿತಿ ನೋಡಿದವರೇ ಬಲ್ಲರು. ಇಬ್ಬರ ಆರೋಗ್ಯವೂ ಸರಿಯಾಗಿಲ್ಲ ತಾವೇ ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಈ ಹಿರಿ ಜೀವಗಳು ಮನೆಯನ್ನು ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ ಆದರೆ ಎಲ್ಲಿ ಈ ಬಾರಿಯ ಗಾಳಿ ಮಳೆಗೆ ಮನೆಯೊಳಗಡೆ ಮಲಗಿದಲ್ಲಿ ಮನೆ ಬಿದ್ದು ನಮಗೇನಾಗುವುದೋ ಎಂಬ ಭೀತಿಯಿಂದ ದೇವರ ಮೇಲೆ ಭಾರ ಹಾಕಿ ಜೀವನ ಸಾಗಿಸುವ ಅನಿವಾರ್ಯತೆ. ನಿಸ್ವಾರ್ಥ ಸೇವಾ ಮಾಣಿಕ್ಯ ಸ್ಫೂರ್ತಿ ವಿಶೇಷ ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ.ಶೆಟ್ಟಿಗಾರ್ ಮತ್ತು ಯುವ ಉತ್ಸಾಹಿ ಬಳಗ ಕೇಮಾರು ಇವರು ಈ ವೃದ್ಧ ಜೀವಗಳಿಗೊಂದು ಸೂರು ನಿರ್ಮಿಸಿಕೊಡುವ ಮಹಾ ಕೈಂಕರ್ಯ ಕ್ಕೆ ಇಳಿದಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ 'ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ' ಪೇಜ್ ವತಿಯಿಂದ ನಡೆದ ಮೂಕ ಪ್ರಾಣಿಗಳಿಗೆ ಆಹಾರ, ನೀರು ಇಡುವ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ವಿಜೇತರಾದ ಸಪ್ನ ಪೂಜಾರಿ ಉಡುಪಿ ಇವರು ಬಹುಮಾನ ಗಳಿಸಿದ 5,000 ರೂಗಳನ್ನು ನೀಡಿ ಅಶಕ್ತ ವೃದ್ಧರ ಪಾಲಿಗೊಂದು ಸೂರು ನಿರ್ಮಿಸಿ ಕೊಡುವ ಮಹಾ ಕೈಂಕರ್ಯ ಕ್ಕೆ ಜೊತೆಯಾಗಿದ್ದಾರೆ. ಇವರಿಗೆ ನಮ್ರತೆಯ ನಮನಗಳು.
ಉಂಡಾರು ಪೆರಿಯ ಕಲ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ
Posted On: 10-06-2020 10:51AM
ಇನ್ನಂಜೆ ಗ್ರಾಮದ ಉಂಡಾರುವಿನ ಕಾರ್ಣಿಕದ ದೈವ ಪೆರಿಯ ಕಲದ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳಾದ ಕಂಬೆರ್ಲು, ಜುಮಾದಿ, ಬಂಟ, ತನ್ನಿಮಾನಿಗ, ಅಜ್ಜಿ ಬೇರೆಂತೆಲ್, ಕೊರಗಜ್ಜ, ಗುಳಿಗ ದೈವಗಳ ಸಹಿತ ಬ್ರಹ್ಮೆರ್ ಪುನರ್ ಪ್ರತಿಷ್ಠೆ ಕಾಯಕ್ರಮವು ಇಂದು ಆಡಳಿತ ಮಂಡಳಿ ಮತ್ತು ಊರ ಜನರ ಸಮ್ಮುಖದಲ್ಲಿ ವಿಧಿವತ್ತಾಗಿ ನಡೆಯಿತು.. ದಿನಾಂಕ 09-06-2020 ರಂದು ಸಂಜೆ ವಾಸ್ತು ಹೋಮ, ಅಘೋರ ಹೋಮ ಹಾಗೂ ಇತರೆ ವಾಸ್ತುವಿಗೆ ಸಂಬಂಧಪಟ್ಟ ಪೂಜೆಗಳು ಬ್ರಹ್ಮಶ್ರೀ ನಾಗರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಸಾಂಗವಾಗಿ ನೆರೆವೇರಿದವು. ತಾತ್ಕಾಲಿಕ ಶೆಡ್ ವ್ಯವಸ್ಥೆಯಲ್ಲಿದ್ದ ದೈವಗಳನ್ನು ಜೀರ್ಣೋದ್ದಾರಗೊಂಡ ಗುಡಿಯ ಒಳಗೆ ಪುನರ್ ಪ್ರತಿಷ್ಠೆ ಮಾಡಲಾಯಿತು, ಪುನರ್ ಪ್ರತಿಷ್ಠೆಗೊಂಡ ದೈವಗಳಿಗೆ ದರ್ಶನ ಸೇವೆ ನೀಡಲಾಯಿತು. ಸರ್ಕಾರದ ಆದೇಶದ ಮೇರೆಗೆ ಈ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಮತ್ತು sanitizer ಬಳಸಿಕೊಂಡು ನಡೆಯಿತು. ಪೆರಿಯ ಕಲದ ಜೀರ್ಣೋದ್ದಾರ ಕಾರ್ಯಕ್ಕೆ ದೇಣಿಗೆ ನೀಡುವವರು ನೀಡಬಹುದು. ಬ್ಯಾಂಕ್ ಖಾತೆ ವಿವರ Account No-0636101016108 IFSC Code-CNRB0000636 Account Name-Shree Babbuswamy Matthu Parivara Bank Branch-CANARA Bank Shankarapura.
ಜಾಹಿರಾತು
Posted On: 10-06-2020 07:43AM
BakeLine ಮೂಡುಬೆಟ್ಟು, ಕಟಪಾಡಿ ಕಾಪು, ಶಿರ್ವ, ಬಂಟಕಲ್ ಉದ್ಯಾವರ ಈ ವ್ಯಾಪ್ತಿಯ ಪ್ರದೇಶಗಳಿಗೆ ಹೋಮ್ ಡೆಲಿವರಿ ಕೊಡಲಾಗುವುದು ಸಂಪರ್ಕಿಸಿ 9686433577, 9901726577
ಶೈಕ್ಷಣಿಕ ವರ್ಷದಲ್ಲಿ ಸಿಲಬಸ್ ಕಡಿಮೆ ಮಾಡಲು ಚಿಂತನೆ : ಸಚಿವ ಸುರೇಶ್ ಕುಮಾರ್
Posted On: 09-06-2020 07:34PM
ಉಡುಪಿ ಜೂನ್ 9 (ಕರ್ನಾಟಕ ವಾರ್ತೆ): ಕೋವಿಡ್-19 ಕಾರಣದಿಂದ ಈ ವರ್ಷದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವುದು ವಿಳಂಬವಾಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಸಕ್ತ ವರ್ಷದ ಶಾಲಾ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಅವರು ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಉಡುಪಿ, ಉತ್ತರ ಕನ್ನಡ ಮತ್ತು ದ.ಕನ್ನಡ ಜಿಲ್ಲೆಗಳ , ಜಿಲ್ಲಾ ಪಂಚಾಯತ್ ಸಿಇಓ ಗಳು, ಡಿಡಿಪಿಐ ಗಳು ಮತ್ತು ಬಿಇಓ ಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವ ಸಿದ್ದತೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿಮೆಯಾಗಲಿದ್ದು, ಇದಕ್ಕಾಗಿ ಶಾಲಾ ಪಠ್ಯವನ್ನು ಕಡಿಮೆಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಮುಂದಿನ ತರಗತಿಗೆ ಅಗತ್ಯವಿರುವ ಪಠ್ಯದ ಕೊರತೆಯಾಗದಂತೆ , ಸೀಮಿತ ಅವಧಿಯೊಳಗೆ ಅತ್ಯಗತ್ಯ ಇರುವ ಪಠ್ಯ ಮಾತ್ರ ಒಳಗೊಳ್ಳುವಂತೆ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಕೋವಿಡ್-19 ಅವಧಿಯಲ್ಲಿ ರಾಜ್ಯದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಪರೀಕ್ಷೆಗಾಗಿ ಪಠ್ಯದ ಪುನರ್ ಮನನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವ ಚಿಂತನೆ ಇದ್ದು, ಈ ಕುರಿತಂತೆ ಕೇಂದ್ರ ಸಚಿವ ಅಜಿತ್ ಜಾವೆಡ್ಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು. ಕೋವಿಡ್ ಅವಧಿಯಲ್ಲಿ ರಾಜ್ಯದ ಶಿಕ್ಷಕರು ಕಾನನ ಶಾಲೆ, ವಠಾರ ಶಾಲೆ, ಓಣಿ ಶಾಲೆ, ಓದಿನ ಮನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದು, ಇದು ಶಿಕ್ಷಕರಲ್ಲಿನ ಸೃಜನ ಶೀಲತೆ, ಕತೃತ್ವ ಶಕ್ತಿ ಗುಣಗಳನ್ನು ತೋರಿಸುತ್ತದೆ ಈ ಕುರಿತಂತೆ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸುವುದಾಗಿ ಸಚಿವರು ಹೇಳಿದರು. ರಾಜ್ಯದಲ್ಲಿ ಎಸ್.ಎಎಸ್.ಎಲ್.ಸಿ ಪರೀಕ್ಷೆ ನಡೆಸಲು ಸಂಬಂದಿಸಿದಂತೆ , ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಂತೆ, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷಾ ವಿಧಾನಗಳಿಗೆ ಯಾವುದೇ ಕುಂದು ಬಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ, ಪರೀಕ್ಷೆ ಕುರಿತಂತೆ ಮಕ್ಕಳಿಗೆ ಹಿತಕರ ವಾತಾವರಣ ನಿರ್ಮಿಸಿ, ಯಾವುದೇ ಆತಂಕಕ್ಕೆ ಒಳಗಾಗದಂತೆ ಪರೀಕ್ಷೆ ಬರೆಯಲು ಶಿಕ್ಷಕರು ಪ್ರೋತ್ಸಾಹ ತುಂಬುವಂತೆ ಸಚಿವ ಸುರೇಶ್ ಕುಮಾರ್ ಹೇಳಿದರು. ರಾಜ್ಯದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡೆಸಲಾಗುವುದು, ಪ್ರಸಕ್ತ ವರ್ಷದಲ್ಲಿ ಶಾಲಾ ಮಕ್ಕಳ ಹಾಜರಾತಿ ಗಣನೆಗೆ ತೆಗೆದುಕೊಂಡು ಶಾಲೆಗಳಲ್ಲಿನ ಹೆಚ್ವುವರಿ ಶಿಕ್ಷಕರ ವರ್ಗಾವಣೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಖಾಸಗಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು, ಜಿಲ್ಲಾ ಕೇಂದ್ರಕ್ಕೆ ಆಗಮಿಸುವವರಿಗೆ, ಜಿಲ್ಲೆಯಲ್ಲಿ ಉಳಿಯಲು ಹಾಸ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ , ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕರಾದ ರಘುಪತಿಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ,ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ದ.ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಸೆಲ್ವಮಣಿ, ಉ.ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ರೋಶನ್ , ಉಡುಪಿ ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಸಂಗೀತಲೋಕದ ಸ್ವರ ಸಾಮ್ರಾಟ್ ಬಿರುದಾಂಕಿತ ಶುಭಕರ ಬೆಳಪು
Posted On: 07-06-2020 09:28AM
"ಬೆಳಪುವಿನಲ್ಲಿ ಉದಯಿಸಿದ ಬೆಳಕು" "ಸಂಗೀತಲೋಕದಲ್ಲಿ ಮೂಡಿತು ಹೊಳಪು" "ಸಾಕ್ಷಿ ಬೆಳೆಸಿದ ಶುಭಕರ ಬೆಳಪು" ರಂಗಭೂಮಿ ಕಲಾವಿದನಿಗೆ ತನ್ನ ಪಾತ್ರವೊಂದಕ್ಕೆ ಜೀವ ನೀಡುವಲ್ಲಿ ಒದಗಿ ಬರುವ ಪರಿಕರಗಳಲ್ಲಿ ಸಂಗೀತವು ಒಂದು. ಎಂಟ್ರಿಯಿಂದ ಹಿಡಿದು ಡೈಲಾಗ್ ವರೆಗೆ, ಪಂಚಿಂಗ್ ನಿಂದ ಎಂಡಿಂಗ್ ತನಕ, ಒಟ್ಟಾರೆ ಇಡೀ ನಾಟಕ ಪ್ರೇಕ್ಷಕನಿಗೆ ಬೋರ್ ಆಗದಂತೆ, ಕಲಾವಿದರಿಗೆ ಹುಮ್ಮಸ್ಸು ಬರುವಂತೆ, ಕಾಪಾಡಿಕೊಂಡು ಬರುವುದು ಒಬ್ಬ ಸಂಗೀತಗಾರನ ಕೈಯಲ್ಲಿದೆ. ನಾಟಕ ಆರಂಭದಿಂದ ಕೊನೆಯ ತನಕದ ದೃಶ್ಯದವರೆಗೂ ಸಂಗೀತಗಾರನ ಪಾತ್ರ ಅತೀ ಮುಖ್ಯವಾಗಿ ಇರಲೇಬೇಕು. ನಾಟಕವನ್ನು ಯಶಸ್ಸುಗೊಳಿಸುವ ಅನೇಕ ಉತ್ತಮ ಸಂಗೀತಗಾರರಿದ್ದಾರೆ. ಅಂತಹ ಸಾಧಕರಲ್ಲಿ 'ಸ್ವರ ಸಾಮ್ರಾಟ್' ಶುಭಕರ್ ಬೆಳಪು ಕೂಡ ಒಬ್ಬರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಶ್ರೀ ಭೋಜ ಪೂಜಾರಿ ಹಾಗೂ ಶ್ರೀಮತಿ ಜಾನಕಿ ಪೂಜಾರ್ತಿಯವರ ಮೂರು ಮಂದಿ ಮಕ್ಕಳಲ್ಲಿ ಕಿರಿಯವರಾದ ಶುಭಕರ್ , ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಪದವಿ ವ್ಯಾಸಂಗ ಮಾಡಿರುತ್ತಾರೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಾಗದೆ ಮೀನುಗಾರಿಕೆ ಹಾಗೂ ಟ್ರಾವೆಲ್ ಏಜೆನ್ಸಿ ಉದ್ಯೋಗ ಆರಿಸಿಕೊಂಡರು. "ಭಜನೆಯಿಂದ ಸಂಗೀತ. ಹಾರ್ಮೋನಿಯಂನಿಂದ ಕೀ ಬೋರ್ಡ್" ತನ್ನೊಳಗೆ ಅಡಗಿರುವ ಸಂಗೀತದ ಕಲೆಗೆ ಭಜನೆಯೇ ದಾರಿಯಾಯಿತು. "ಶ್ರೀ ರಾಮ ಭಜನಾ ಮಂದಿರ ಎರ್ಮಾಳ್ ಬಡಾ" ಇಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಶುಭಕರ್ ಅಲ್ಲಿ ನುಡಿಸುತ್ತಿದ್ದ ಹಾರ್ಮೋನಿಯಂಗೆ ಆಕರ್ಷಿತರಾದರು. ಎಲ್ಲೂರು ಸೀಮೆಗೆ ಒಳಪಟ್ಟ "ಶ್ರೀ ಧರ್ಮ ಜಾರಂದಾಯ ಭಜನಾ ಮಂದಿರ ಬೆಳಪು" ಇಲ್ಲಿ ಭಜನೆ ನಡೆಯುವಾಗ ಸ್ವತಃ ತಾನೇ ಹಾರ್ಮೋನೀಯಂ ನುಡಿಸಲು ಆರಂಭಿಸಿದರು. ಕ್ರಮೇಣ ಸಂಗೀತದ ಬಗ್ಗೆ ಅಭ್ಯಾಸ ನಡೆಸುತ್ತಾ ಒಂದು ದಿನ ಊರಿನಲ್ಲಿ ನಡೆದ ನಾಟಕಕ್ಕೆ ಸಂಗೀತ ನೀಡುವ ಭಾಗ್ಯ ಸಿಕ್ಕಿತು. "ಗುರುವಿಗೆ ನಮನ. ಸಂಗೀತಕ್ಕೆ ಗಮನ." ಶುಭಕರ್ ಬೆಳಪುರವರಲ್ಲಿ ಕಾಣುವ ಬಲು ದೊಡ್ಡ ಗುಣ ಗುರು ಭಕ್ತಿ. "ಶರತ್ ಉಚ್ಚಿಲರವರನ್ನು ತನ್ನ ಸಂಗೀತದ ಗುರುವಾಗಿ" ಪ್ರಾರ್ಥಿಸಿಕೊಳ್ಳುವ ಬೆಳಪು, ಅವರ ನಿರ್ದೇಶನದ ಮುಖಾಂತರ ಪ್ರಥಮ ಬಾರಿಗೆ "ಶ್ರೀ ನವೋದಯ ಕಲಾವಿದೇರ್ ಕುಡ್ಲ" ತಂಡದಲ್ಲಿ ಸಂಗೀತಗಾರನಾಗಿ ಸೇರ್ಪಡೆಗೊಂಡರು. ಸುನೀಲ್ ನೆಲ್ಲಿಗುಡ್ಡೆ, ರಮಾನಂದ ನಾಯಕ್ ರವರ ಸಲಹೆ, ಸಹಕಾರ, ಮಾರ್ಗದರ್ಶನದ ಮೂಲಕ ಸಂಗೀತದಲ್ಲಿ ಮತ್ತಷ್ಟು ಗಟ್ಟಿಯಾದರು. ಅನಿವಾರ್ಯ ಸಮಸ್ಯೆ ಬಿಟ್ಟು ಇಂದಿಗೂ ಸಂಗೀತ ನುಡಿಸುವ ಮೊದಲು ದೂರವಾಣಿ ಅಥವಾ ವಾಟ್ಸಪ್ ಮೂಲಕ ಗುರುವನ್ನು ಸಂಪರ್ಕಿಸಿ ಅವರ ಆಶೀರ್ವಾದ ಪಡೆದೇ ಸಂಗೀತ ಪ್ರಾರಂಭಿಸುತ್ತಾರೆ. "ಎಲ್ಲೂರು ವಿಶ್ವನಾಥನಿಂದ.. ಧರ್ಮಸ್ಥಳ ಮಂಜುನಾಥನಲ್ಲಿಗೆ" ಆರಾಧ್ಯ ದೇವರು ಎಲ್ಲೂರು ಸೀಮೆಯ ಶ್ರೀ ವಿಶ್ವನಾಥ ತನ್ನೆಲ್ಲ ಕೆಲಸ ಕಾರ್ಯಕ್ಕೆ ಅವನೇ ಒಡೆಯ ಎಂದು ಪ್ರಾರ್ಥಿಸಿಕೊಳ್ಳುವ ಬೆಳಪು ಮದುವೆ ಸಂದರ್ಭದಲ್ಲಿ ಆರ್ಥಿಕವಾಗಿ ತುಂಬಾನೇ ಸಮಸ್ಯೆಗೊಳಗಾದರು ಆಗ ಇದೇ ವಿಶ್ವನಾಥ ದಾರಿ ತೋರಿಸಿದ್ದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ. ಪರಮ ಪೂಜ್ಯ ಖಾವಂದರು ನಡೆಸುವ ಸಾಮೂಹಿಕ ವಿವಾಹದಲ್ಲಿ ಬದುಕಿನ ಭಾಗ್ಯ ದೇವತೆ ಪ್ರತಿಮಾರವರನ್ನು ಕೈ ಹಿಡಿದು ದಾಂಪತ್ಯ ಜೀವನನಕ್ಕೆ ಕಾಲಿಟ್ಟರು. "ಸ್ವರ ಸಾಮ್ರಾಟ.. ಸಾಕ್ಷಿ ತಂಡದ ಯಜಮಾನ." ಧರ್ಮಸ್ಥಳದಲ್ಲಿ ದಾಂಪತ್ಯ ಜೀವನನಕ್ಕೆ ಕಾಲಿಟ್ಟ ಸಂದರ್ಭ, ಜೀವನದಲ್ಲಿ ಸಾಧಿಸಬೇಕು ಎಂಬ ಮಾಡಿದ ಸಂಕಲ್ಪ ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿತ್ತು. ಇವರ ಸಂಗೀತದ ಇಂಪನ್ನು ಅರಿತ ತುಳು "ಸಂಸಾರ ಕಲಾವಿದೇರ್ ಪಣಿಯೂರು" ವಿಶ್ವ ರಂಗ ಭೂಮಿ ದಿನಾಚರಣೆಯಂದು ಸ್ವರ ಸಾಮ್ರಾಟ ಬಿರುದು ನೀಡಿ ಗೌರವಿಸಿದರು. ತನ್ನದೇ ಆದ "ಸಾಕ್ಷಿ ಕಲಾವಿದರು ಬೆಳಪು" ತಂಡವನ್ನು ಹುಟ್ಟು ಹಾಕಿ ಹಲವಾರು ಕಡೆಯಲ್ಲಿ ನಾಟಕ, ಕಾಮಿಡಿ ಕಾರ್ಯಕ್ರಮ ನೀಡಿದರು. ತಂಡ ಆರಂಭಗೊಂಡ ಎರಡೇ ವರ್ಷದಲ್ಲಿ ರವೀಂದ್ರ ಕೋಟ್ಯಾನ್, ಸತೀಶ್ ಪೂಜಾರಿಯವರ ಸಹಕಾರದಲ್ಲಿ ದುಬೈಯಲ್ಲಿ ಕಾರ್ಯಕ್ರಮ ನೀಡುವ ಸೌಭಾಗ್ಯ ಸಿಕ್ಕಿತು. ಮೂರು ಬಾರಿ ಗಲ್ಫ್ ರಾಷ್ಟ್ರಕ್ಕೆ ಹೋಗಿ ಕಾರ್ಯಕ್ರಮ ನೀಡಿರುವುದು ಇವರ ಪ್ರತಿಭೆ, ಶ್ರಮಕ್ಕೆ ಸಿಕ್ಕಿದ ಗೌರವವೇ ಆಗಿದೆ. "ಸಮಯವೇ ಭಕ್ತಿ.. ಪರಿಶ್ರಮವೇ ಶಕ್ತಿ" ಬೆಳಪುರವರು ಶ್ರಮಜೀವಿ ಯಾವುದೇ ಕಾರ್ಯಕ್ರಮ ಒಪ್ಪಿಕೊಂಡ ಮೇಲೆ ಅದು ಪೂರ್ಣಗೊಳ್ಳುವ ತನಕ ಅಭ್ಯಾಸ ನಡೆಸುತ್ತಾರೆ. ಇನ್ನೊಂದು ಅವರ ಗುಣ ಸಮಯದ ಪಾಲನೆ. ನಾಟಕ ಅಥವಾ ಇತರ ಕಾರ್ಯಕ್ರಮವೇ ಇರಲಿ ಸಮಯಕ್ಕೆ ಸರಿಯಾಗಿ ತನ್ನ ಇರುವಿಕೆಯನ್ನು ಗುರುತಿಸಿಕೊಳ್ಳುತ್ತಾರೆ. ಇದೇ ಅವರ ಯಶಸ್ಸಿನ ಗುಟ್ಟು. ಬೇರೆ ಬೇರೆ ತಂಡಗಳಲ್ಲಿ ಹಲವಾರು ನಾಟಕಗಳಿಗೆ ಸಂಗೀತ ನೀಡಿರುತ್ತಾರೆ. ಕನ್ನಡ ನಾಟಕ ತಂಡಕ್ಕೂ ಸಂಗೀತ ನೀಡಿದ ಬೆಳಪುರವರು ಸಿ.ಪಿ.ಎಲ್, ಬಲೇ ತೆಲಿಪಾಲೇ ಕಾರ್ಯಕ್ರಮದಲ್ಲಿಯೂ ಸಂಗೀತ ನೀಡಿರುತ್ತಾರೆ. ಬೆಂಗಳೂರಿನಲ್ಲಿ ನಡೆದ ಅಂತರಾಜ್ಯ ಬಹುಭಾಷಾ ನಾಟಕ ಸ್ಪರ್ಧೆಯಲ್ಲಿ ತಬುರನ ಕಥೆ ನಾಟಕಕ್ಕೆ ಎರಡನೇ ಪ್ರಶಸ್ತಿ. ಅಂತರ್ ಜಿಲ್ಲಾ ನಾಟಕ ಸ್ಪರ್ಧೆಯಲ್ಲಿ ಉತ್ತಮ ಸಂಗೀತಗಾರ ಪ್ರಶಸ್ತಿ ಲಭಿಸಿದೆ. "ದುಬೈ ಗಮ್ಮತ್ ಕಲಾವಿದರು ಮಂಗಳೂರು" ಪುರಭವನದಲ್ಲಿ ಅಭಿನಯಿಸಿದ "ಬಯ್ಯ ಮಲ್ಲಿಗೆ" ನಾಟಕಕ್ಕೆ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಸಂಗೀತ ನೀಡಿರುತ್ತಾರೆ. ಪ್ರಸ್ತುತ "ತೆಲಿಕೆದ ಕಲಾವಿದೇರ್ ಕೊಯಿಲ ಬಂಟ್ವಾಳ" ತಂಡದಲ್ಲಿ ಸಂಗೀತಗಾರರಾಗಿದ್ದಾರೆ. "ನಾಟಕ ಸಂಗೀತ ಕಲಾವಿದರ ಒಕ್ಕೂಟದ" ನಿರ್ದೇಶಕರಾಗಿರುವ ಬೆಳಪುರವರು ದೇವರ ಅನುಗ್ರಹ, ಗುರುಭಕ್ತಿ, ಪರಿಶ್ರಮ, ಸರಳ ವ್ಯಕ್ತಿತ್ವ ಹಾಗೂ ತ್ಯಾಗ ಮನೋಭಾವನೆಯ ಮೂಲಕ ಉತ್ತಮ ಕಲಾವಿದನಾಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಮಡದಿ ಪ್ರತಿಮಾ ಮಕ್ಕಳಾದ ಸಾಕ್ಷಿ, ಸಾಹಿಲ್ ಜೊತೆ ಸುಖ ಜೀವನ ನಡೆಸುತ್ತಿರುವ ಶುಭಕರ್ ಬೆಳಪುರವರ ಕಲಾ ಜೀವನ ಇನ್ನಷ್ಟು ಎತ್ತರಕ್ಕೆ ಸಾಗಲಿ ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನ ಸಿಗಲಿ ಎಂದು ತಾಯಿ ಶಾರದೆಯಲ್ಲಿ ಪ್ರಾರ್ಥಿಸೋಣ. ✍️ ಕೆ ಕೆ ಬೆದ್ರ (ರಂಗಭೂಮಿ ಕಲಾವಿದ)
ಉಡುಪಿ.ಜೂ,6: ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್
Posted On: 06-06-2020 10:41PM
ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್ ಉಡುಪಿ ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇದುವರೆಗೆ 767 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 132 ಮಂದಿ ಡಿಸ್ಚಾರ್ಜ್ ಆಗಿದ್ದು, 635 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಇಂದಿನಿಂದ ಸರಾಸರಿ 100 ಮಂದಿ ಪ್ರತಿದಿನ ಗುಣಮುಖರಾಗಿ ಡಿಸ್ಚಾಜ್ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ 12,258 ಮಂದಿಯ ಕೋವಿಡ್ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 10992 ಮಂದಿಯ ವರದಿ ನೆಗೆಟಿವ್ ಆಗಿದ್ದು, 769 ವರದಿ ಬರಲು ಬಾಕಿ ಇದೆ, ಪಾಸಿಟಿವ್ ಪ್ರಕರಣಗಳಲ್ಲಿ ಶೇ.98 ಮಂದಿಗೆ ರೋಗ ಲಕ್ಷಣಗಳು ಇಲ್ಲ , ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಯಲ್ಲಿ 125, ಕಾರ್ಕಳದಲ್ಲಿ 75, ಎಸ್.ಡಿ.ಎಂ ಕಾಲೇಜಿನಲ್ಲಿ 180 ಮತ್ತು ಕೊಲ್ಲೂರುನಲ್ಲಿ 250 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್ -19 ಜಿಲ್ಲಾ ನೋಢೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ ಪಾಸಿಟಿವ್ ಪ್ರಕರಣಗಳಲ್ಲಿ ಯಾವುದೇ ರೋಗಿಗೆ ಆಕ್ಸಿಜಿನ್, ವೆಂಟಿಲೇಟರ್, ಐ.ಸಿ.ಯು ಸೇವೆ ನೀಡುವಂತಹ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಲ್ಲರೂ ಚಿಕಿತ್ಸೆಗೆ ಶೀಘ್ರದಲ್ಲಿ ಸ್ಪಂದಿಸುತ್ತಿದ್ದು, ಆರೋಗ್ಯವಾಗಿದ್ದಾರೆ, ಕ್ವಾರಂಟೈನ್ ಕೇಂದ್ರಗಳಿಂದ ತೆರಳಿದವರಿಂದ ಅವರ ಮನೆಯವರಿಗೆ ಹಾಗೂ ಸಮುದಾಯಕ್ಕೆ ರೋಗ ಹರಡಿಲ್ಲ, ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಆಶಾಕಾರ್ಯಕರ್ತೆಯರು ಭೇಟಿ ನೀಡಿ , ಪರಿಶೀಲಿಸುತ್ತಿದ್ದು, ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ, ಜಿಲ್ಲೆಯ ಸರ್ಕಾರಿ ಕೋವಿಡ್ ಲ್ಯಾಬ್ 10 ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು. ಕೋವಿಡ್-19 ವಿರುದ್ದ ಹೋರಾಟದಲ್ಲಿ ಪ್ರತಿಯೊಬ್ಬರೂ ಸೇನಾನಿಗಳಂತೆ ಕಾರ್ಯ ನಿರ್ವಹಿಸಬೇಕಿದ್ದು, ಜಿಲ್ಲೆಯ ಎಲ್ಲಾ ಜನಪ್ರನಿಧಿಗಳು ಆರೋಗ್ಯ ಇಲಾಖೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲು ಬದ್ದರಿರುವುದಾಗಿ ತಿಳಿಸಿದ ಸಂಸದೆ ಶೋಭಾ ಕರಂದ್ಲಾಜೆ, ಪ್ರಸ್ತುತ ಜಿಲ್ಲೆಗೆ ಮಹಾರಾಷ್ಟ,ದಿಂದ ಬರುತ್ತಿರುವ ನಾಗರೀಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ಬಗ್ಗೆ ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಗೆ ಇನ್ನೊಂದು ಹೆಚ್ಚುವರಿ ಕೋವಿಡ್-19 ಆಸ್ಪತ್ರೆಯ ಅಗತ್ಯವಿದ್ದಲ್ಲಿ ಪ್ರಸ್ತಾವನೆ ನೀಡುವಂತೆ ತಿಳಿಸಿದರು. ರಾಷ್ಟಿಯ ಹೆದ್ದಾರಿ 169 ಎ ನಲ್ಲಿ ಪರ್ಕಳ ಸಮೀಪ ಗುಂಡಿ ಬಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಕೂಡಲೇ ಅದನ್ನು ಕಾಂಕ್ರೀಟ್ ನಿಂದ ಮುಚ್ಚುವಂತೆ ಸೂಚಿಸಿದ ಸಂಸದರು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು. ಕುಂದಾಪುರ ಶಾಸ್ತಿ ಸರ್ಕಲ್ ಕಾಮಗಾರಿ ಪ್ರಗತಿ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಕೋವಿಡ್ 19 ಕಾರಣದಿಂದ ಕಾರ್ಮಿಕರು ಊರಿಗೆ ತೆರಳಿದ್ದು, ಕಾರ್ಮಿಕರ ಸಮಸ್ಯೆಯಿಂದ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದ್ದು, 2 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು. ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಹಾನಿಯಾದಲ್ಲಿ ಮೆಸ್ಕಾಂ ನಿಂದ ಶೀಘ್ರದಲ್ಲಿ ಪುರ್ನ ನಿರ್ಮಾಣ ಮಾಡುವಂತೆ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು, ಈಗಾಗಲೇ 140 ಮಂದಿ ಗ್ಯಾಂಗ್ ಮನ್ ನೇಮಕ ಮಾಡಿಕೊಂಡಿದ್ದು, ಇನ್ನೂ 140 ಮಂದಿ ನೇಮಕ ಮಾಡಿಕೊಳ್ಳಲಾಗುವುದು ಹಾಗೂ 3 ವಾಹನಗಳನ್ನು ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಕಡಲಕೊರೆತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸೂಚಿಸಿದರು. ಕುಡಿಯುವ ನೀರು ಯೋಜನೆಯ ಕುರಿತಂತೆ ನಿಟ್ಟೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 90% ಸಿವಿಲ್ ಕೆಲಸಗಳು ಮುಕ್ತಾಯಗೊಂಡಿದು, ಎಲೆಕ್ಟ್ರಿಕ್ ಕೆಲಸಗಳು ಬಾಕಿ ಇದ್ದು, 2 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 134000 ರೈತರ ಖಾತೆಗಳಿಗೆ 94.86 ಕೋಟಿ ರೂಗಳ ಜಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರದಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ವಿತರಿಸಲಾಗುವ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಾಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರೈಸುವಂತೆ ಸೂಚಿಸಿದ ಸಂಸದರು, ಸ್ವಚ್ಚ ಭಾರತ್ ಯೋಜನೆಯಡಿ ನಗರ ಪ್ರದೇಶದಲ್ಲಿನ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆತ್ಮ ನಿರ್ಭರ್ ಯೋಜನೆಯಡಿ ಸಣ್ಣ ಕೈಗಾರಿಕೆಗಳಿಗೆ ನೀಡಿರುವ ಸಾಲ ಸೌಲಭ್ಯಗಳ ಅನುಷ್ಠಾನ ಕುರಿತಂತೆ , ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ ಸಂಸದರು , ಈ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಸಿಇಓ ಪ್ರೀತಿ ಗೆಹಲೋತ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾದೂರು ತೈಲ ಸಂಗ್ರಹಗಾರದಿಂದ ದೇಶಕ್ಕೆ ಸಹಸ್ರ ಕೋಟಿ ರೂ ಉಳಿತಾಯ
Posted On: 05-06-2020 10:57AM
ಕಾಪು. ಜೂನ್, 5 : ಉಡುಪಿ ಜೆಲ್ಲೆಯ ಕಾಪು ತಾಲೂಕಿನ ಪಾದೂರು, ಮಂಗಳೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಭೂಗತ ತೈಲ ಸಂಗ್ರಹಗಳಿಂದ ದೇಶಕ್ಕೆ ಬರೋಬ್ಬರಿ 5000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. 53 ಲಕ್ಷ ಟನ್ ನಷ್ಟು ತುರ್ತು ಇಂಧನ ಸಂಗ್ರಹಕ್ಕೆ ಈ ಮೂರು ಕಡೆ ಪೆಟ್ರೋಲಿಯಂ ಸಚಿವಾಲಯ ಭೂಗತ ಸಂಗ್ರಹಗಾರ ಹೊಂದಿದೆ. ಏಪ್ರಿಲ್ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾತೈಲ ಬೆಲೆ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಾಗ ಕೇಂದ್ರ ಸರ್ಕಾರ ಅಗ್ಗದ ಬೆಲೆಗೆ ತೈಲ ಖರಿದಿಸಿ ಈ ಮೂರು ಸಂಗ್ರಹಾಗಾರಗಳಿಗೆ ತುಂಬಿಸಿದೆ. ಈ ವೇಳೆ ಮಂಗಳೂರು ಮತ್ತು ಪಾದೂರಿನ ತೈಲ ಸಂಗ್ರಹಾಗಾರಗಳು ಅರ್ಧದಷ್ಟು ಖಾಲಿಯಾಗಿದ್ದವು, ವಿಶಾಖಪಟ್ಟಣದಲ್ಲಿ ಅಲ್ಪ ಪ್ರಮಾಣದ ಸಂಗ್ರಹಕ್ಕೆ ಜಾಗವಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ 5000 ಕೋಟಿ ರೂ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮಾಡಿದೆ. ಮಂಗಳೂರು, ಪಾದೂರು, ವಿಶಾಖಪಟ್ಟಣ ಪೈಕಿ ಪಾದೂರು ಘಟಕವೇ ದೊಡ್ಡದು. ಈ ಮೂರು ಘಟಕಗಳಲ್ಲಿ 53 ದಶಲಕ್ಷ ಲಕ್ಷ ಟನ್ ತೈಲ ಸಂಗ್ರಹಿಸಬಹುದು. 9.5 ದಿನ ದೇಶಕ್ಕೆ ತೈಲವನ್ನು ನೀಡಬಹುದು..
ತನ್ನದಲ್ಲದ ತಪ್ಪಿಗಾಗಿ ಕೈ ಕಳೆದುಕೊಂಡ ಸಂದೀಪ್ ಕೋಟ್ಯಾನ್ ಮುದರಂಗಡಿ
Posted On: 03-06-2020 08:54PM
ವೈದ್ಯಕೀಯ ನೆರವಿಗಾಗಿ ಮನವಿ.. ವಿಧಿ ಬಡವರ ವಿಚಾರದಲ್ಲಿ ಕೆಲವೊಂದು ಬಾರಿ ತುಂಬಾ ಕ್ರೂರಿ ಆಗುತ್ತಾನೆ. ಕಷ್ಟಗಳನ್ನು ಕೊಟ್ಟವರಿಗೆ ಮತ್ತೇ ಕಷ್ಟಗಳನ್ನು ನೀಡುತ್ತಾನೆ. ಮುದರಂಗಡಿಯ ಬಡತನದಲ್ಲಿರುವ ಪುಟ್ಟ ಸಂಸಾರದ ಕಣ್ಣೀರಿನ ಕಥೆ ಕೇಳಿದರೆ ಎಂತಹ ನಿಷ್ಠರುಣಿಗೂ ಕಣ್ಣೀರು ಸ್ಫುರಿಸೀತು. ಹೌದು ಗೆಳೆಯರೇ, ಸಂದೀಪ್ ಕೋಟ್ಯಾನ್ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಸಂತಸದಿಂದ ಇರುವಾಗಲೇ ವಿಧಿ ಕ್ಯಾಂಟರ್ ವಾಹನದ ರೂಪದಲ್ಲಿ ಬಂದು ಸಂದೀಪ್ ನ ಬದುಕಿನ ಅಸ್ತಿತ್ವಕ್ಕೆ ಪೆಟ್ಟು ನೀಡಿದೆ. 2020ರ ಮಾರ್ಚ್ ತಿಂಗಳ 18ನೇ ತಾರೀಖು ಕೆಲಸದ ನಡುವೆ ತನ್ನ ಸ್ನೇಹಿತನೊಂದಿಗೆ ಮಧ್ಯಾಹ್ನದ ಊಟಕ್ಕೆ ತೆರಳಿದ್ದ. ಊಟ ಮುಗಿಸಿ ಕೆಲವೇ ದೂರ ಬೈಕ್ ನಲ್ಲಿ ಬರುವಾಗಲೇ ಹಿಂದಿನಿಂದ ಅತೀ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈತನ ಸ್ನೇಹಿತ ರಸ್ತೆ ಬದಿಯಲ್ಲಿ ಬಿದ್ದಿದ್ದ.ರಸ್ತೆಯಲ್ಲಿ ಬಿದ್ದಿದ್ದ ಸಂದೀಪ್ ಕೋಟ್ಯಾನ್ ನ ಬಲಗೈ ಅಂಗೈ ಮೇಲೆ ಇನ್ನೊಂದು ಟ್ಯಾಂಕರ್ ಸಾಗಿತ್ತು. ಹೊಟೇಲ್ ನವರ ಮತ್ತು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಬಲಗೈ ಅಂಗೈ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ವೈದ್ಯರು ಬಲಗೈ ಅಂಗೈ ಗಿಂತ ಸ್ವಲ್ಪ ಮೇಲೆ ಕೈ ಕತ್ತರಿಸಿದರು. 22 ವರ್ಷ ವಯಸ್ಸಿನ ಸಂದೀಪ್ ಬದುಕಿನ ಬಗ್ಗೆ ಅಪಾರವಾದ ಸಾಧನೆಯ ಕನಸ್ಸನ್ನು ಕಟ್ಟಿದ್ದ. ಆತನ ತಂದೆ ತಾಯಿ ಇಲ್ಲಿಯ ತನಕ ಸುಮಾರು 3.5ಲಕ್ಷ ರೂಪಾಯಿ ಈಗಾಗಲೇ ಅವರಿವರಿಂದ ಸಾಲ ಮಾಡಿ ಆಸ್ಪತ್ರೆಗೆ ಖರ್ಚು ಮಾಡಿರುತ್ತಾರೆ. ವೈದ್ಯರು ಬಲಗೈ ಅಂಗೈ ಸರಿ ಮಾಡಲು ಇನ್ನೂ 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಎದ್ದಾಗ ತನ್ನ ಕೈ ನೋಡಿ ಕಣ್ಣೀರು ಸುರಿಸುವುದನ್ನು ಕಂಡಾಗ ಹೃದಯ ಮರುಗುತ್ತದೆ. ಸಂದೀಪ್ ನ ತಂದೆ ಲೂನಾದಲ್ಲಿ ಚಹಾ ಮಾರಿ ಸಂಸಾರ ಸಾಗಿಸುತ್ತಿದ್ದಾರೆ. ಮನೆಗೆ ಆಸರೆಯಾಗ ಬೇಕಿದ್ದ ಮನೆ ಮಗ ಕೈ ಕಳೆದುಕೊಂಡು ಹಾಸಿಗೆಯಲ್ಲಿದ್ದಾನೆ. ಆತ್ಮೀಯರೇ, ಕಷ್ಟದಿಂದ ತತ್ತರಿಸಿರುವ ಸಂದೀಪ್ ಕೋಟ್ಯಾನ್ ನ ವೈದ್ಯಕೀಯ ಚಿಕಿತ್ಸೆ ಗೆ ನೆರವಾಗೋಣ. ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಾಗೆ ನಾವೆಲ್ಲ ಮನಸ್ಪೂರ್ತಿಯಿಂದ ನೀಡುವ ಆರ್ಥಿಕ ಸಹಾಯ ಸಂದೀಪ್ ನ ಕಣ್ಣೀರು ಒರೆಸಲು ನೆರವಾಗುತ್ತದೆ. ದಯವಿಟ್ಟು ಸಹಕರಿಸಿ.. Contact number : Kotian sandeep 8971173082 ಸಂದೀಪ್ ಕೋಟ್ಯಾನ್ ನ ಬ್ಯಾಂಕ್ ಖಾತೆ ವಿವರ.. Bank Details Account no -0638101011991 IFSC-CNRB0000638 CANARA BANK MUDARANGADI BRANCH ಸಹಾಯ ಹಸ್ತ ಚಾಚಿ ಸಂದೀಪ್ ಕೋಟ್ಯಾನ್ ನ ಹಸ್ತ ಉಳಿಸೋಣ.
