Updated News From Kaup

ಕುತ್ಯಾರು ಯುವಕ ಮಂಡಲ ಆಶ್ರಯದಲ್ಲಿ ಕುತ್ಯಾರು ಭಾಗದವರಿಗೆ ಮುದ್ದು ಕೃಷ್ಣ ಸ್ಪರ್ಧೆ.

Thumbnail
Posted On: 06 Aug 2020, 04:19 PM

ಕುತ್ಯಾರು ಗ್ರಾಮಸ್ಥರಿಗಾಗಿ. ಸದುಪಯೋಗ ಪಡೆಯಲು ಕೋರಲಾಗಿದೆ. ಯುವಕ ಮಂಡಲ(ರಿ.) ಕುತ್ಯಾರು

ಅಯೋದ್ಯೆಯಲ್ಲಿ ಕರಸೇವೆ ಸಲ್ಲಿಸಿದ ಇಬ್ಬರಿಗೆ ಕಾಪುವಿನ ಹಿಂದೂ ಸಂಘಟನೆಯಿಂದ ಸಮ್ಮಾನ

Thumbnail
Posted On: 05 Aug 2020, 10:08 PM

ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ ಸೇವೆ ಸಲ್ಲಿಸಿದ ಕಾಪು ತಾಲೂಕಿನ ಉಚ್ಚಿಲದ ವಸಂತ್ ದೇವಾಡಿಗ ಮತ್ತು ಸದಾನಂದ್ ದೇವಾಡಿಗರಿಗೆ ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಕೋವಿಡ್19 ಸುರಕ್ಷಾ ಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್

Thumbnail
Posted On: 05 Aug 2020, 08:36 PM

ಉಡುಪಿ ಆಗಸ್ಟ್ 5 (ಕರ್ನಾಟಕ ವಾರ್ತೆ): ಸರ್ಕಾರದ ಮಾರ್ಗಸೂಚಿಯಂತೆ, ಕೋವಿಡ್-19 ನಿಯಂತ್ರಣದ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರನ್ನು ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆ ಮತ್ತು ವೇದಿಕೆ ಮೇಲೆ ಸಹ ಸಾಮಾಜಿಕ ಅಂತರದಲ್ಲಿ ಗಣ್ಯರಿಗೆ ಆಸನ ವ್ಯವಸ್ಥೆ ಮಾಡುವಂತೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಡಿಸಿ ತಿಳಿಸಿದರು. ಕಾರ್ಯಕ್ರಮವನ್ನು ವೆಬ್ ಕಾಸ್ಟಿಂಗ್ ಮೂಲಕ ನೇರ ಪ್ರಸಾರ ಮಾಡುವುದು ಸೇರಿದಂತೆ ಫೇಸ್ ಬುಕ್ ಲೈವ್ ಹಾಗೂ ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ನೇರವಾಗಿ ತಲುಪುವಂತೆ ಎನ್.ಐ.ಸಿ ಮೂಲಕ ಅಗತ್ಯ ಕ್ರಮ ಕೈಗೊಂಡು, ಈ ಲಿಂಕ್ ಗಳ ವಿವರಗಳನ್ನು ಸಾಕಷ್ಟು ಮುಂಚಿತವಾಗಿ ಸಾರ್ವಜನಿಕರಿಗೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಕಾರ್ಯಕ್ರಮದಲ್ಲಿ ಕೋವಿಡ್-9 ವಿರುದ್ದ ಹೋರಾಟದಲ್ಲಿ ಗಮನಾರ್ಹ ಸಾಧನೆ ತೋರಿದ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿ ಗೌರವಿಸುವಂತೆ ಹೇಳಿದ ಜಿಲ್ಲಾಧಿಕಾರಿಗಳು, ಕೋವಿಡ್ ನಿಂದ ಗುಣಮುಖರಾದ ಆಯ್ದ ಕೆಲವು ಮಂದಿಗೆ ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ನೀಡುವಂತೆ ಹಾಗೂ ಆ ಪ್ರಯುಕ್ತ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸುವಂತೆ ಡಿಸಿ ಜಿ.ಜಗದೀಶ್ ತಿಳಿಸಿದರು. ಪೊಲೀಸ್, ಹೋಂ ಗಾರ್ಡ್, ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆಯಿಂದ ಪಥ ಸಂಚಲನ ನಡೆಸುವಂತೆ ಹಾಗೂ ಕಾರ್ಯಕ್ರಮದಲ್ಲಿ ಕೋವಿಡ್-19 ಸುರಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಡಿಸಿ ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

"ಮರ್ಯಾದಾ ಪುರುಷೋತ್ತಮ" ಶ್ರೀ ರಾಮ - ಕೆ.ಎಲ್. ಕುಂಡಂತಾಯ

Thumbnail
Posted On: 05 Aug 2020, 08:04 PM

ಸಂಸ್ಕೃತಿಯ ದ್ರಷ್ಟಾರರಾಗಿ , ಮನುಕುಲಕ್ಕೆ ಬದುಕಿನ ಸತ್ಪಥವನ್ನು ತೋರಿದ ಋಷಿಮುನಿಗಳು ತಮ್ಮ ತಪಸ್ಸಿನ ಫಲವನ್ನು ಕಾಡಿನಿಂದ ನಾಡಿಗೆ 'ಹರಿಸಿದರು' ಅಥವಾ 'ಹರಸಿದರು' .ಈ ರೀತಿಯಲ್ಲಿ ದಟ್ಟಾರಣ್ಯದಲ್ಲಿ ಅನುರಣಿಸಿ , ಮಹಾಮಂತ್ರವಾಗಿ ,ಕೋಗಿಲೆಯ ಇಂಚರದ ಮಾಧುರ್ಯದೊಂದಿಗೆ ನಾಡಿಗೆ ಕೇಳಿದ ಎರಡಕ್ಷರದ ಮಂತ್ರ "ರಾಮ". ಸಾವಿರಾರು ವರ್ಷಗಳ ನಿರಂತರ ಪಠನದ ಬಳಿಕ 'ರಾಮ' ಶಬ್ದ 'ರಾಮನಾಮ'ವಾಯಿತು , 'ಶ್ರೀ ರಾಮ' ಮಂತ್ರವಾಯಿತು .ಒಂದು ಮನೋಹರ ಬಿಂಬ ಸಿದ್ಧಗೊಂಡಿತು , ವಾಲ್ಮೀಕಿ ಆದಿ ಕವಿಯಾದರು . ಮಹರ್ಷಿ ವಾಲ್ಮೀಕಿಯು 'ರಾಮಾಯಣ' ಮಹಾಕಾವ್ಯದ ಮೂಲಕ ಜಗತ್ತಿಗೆ ನೀಡಿದ ಪರಿಪೂರ್ಣ ವ್ಯಕ್ತಿತ್ವ 'ರಾಮ'. ಭಾರತೀಯ ಸಂಸ್ಕೃತಿಯನ್ನು 'ರಾಮ' ಎಂಬ ಪ್ರತಿಮೆಯ ಮೂಲಕ ಸಮಗ್ರವಾಗಿ ಚಿತ್ರಿಸಿದ್ದು , ರಘುರಾಮನೆಂದೇ ಗುರುತಿಸಲ್ಪಟ್ಟ ದಾಶರಥಿಯದ್ದು , "ಮರ್ಯಾದಾ ಪುರುಷೋತ್ತಮನಾದ" ಶ್ರೀ ರಾಮಚಂದ್ರನದ್ದು . ಹಾಗಾಗಿಯೇ 'ರಾಮ' ಸಾಮಾನ್ಯ ಮಾನವನಾಗಿ ಜನಿಸಿ ದೇಶದಾದ್ಯಂತ , ಪ್ರಪಂಚದೆಲ್ಲೆಡೆ ವ್ಯಾಪ್ತನಾಗುತ್ತಾನೆ ,ಆದುದರಿಂದ 'ರಾಮ' ಎಂಬುದು ನಮಗೆ 'ಶ್ರೇಷ್ಠ' , 'ರಾಮ' ಎಂಬುದು 'ಪ್ರತಿಷ್ಠೆ'. ಬಳಸಿಕೊಂಡು ಪ್ರವಹಿಸುವ ಸರಯೂ ನದಿಯಿಂ‌ದ ಅಯೋಧ್ಯೆ ಪಾವನ ಭೂಮಿಯಾಗುತ್ತದೆ. ಇಂತಹ ನೆಲದಲ್ಲಿ‌ ಸೂರ್ಯವಂಶವೇ ಹಿನ್ನೆಲೆಯಾಗಿದ್ದ ಮಹಾರಾಜರಲ್ಲಿ 'ಸತ್ಯ'ಕ್ಕೆ ಬೇಕಾಗಿ ಸರ್ವವನ್ನೂ ತಿರಸ್ಕರಿಸಿ ,ಆಡಿದ ಮಾತಿಗೆ ತಪ್ಪದೇ ನಡೆದು ಅದ್ಭುತ ಮೌಲ್ಯವನ್ನು ಪ್ರತಿಪಾದಿಸಿದವರಿದ್ದರು , ದೇವಗಂಗೆಯನ್ನು ಧರೆಗಿಳಿಸಿದ ಪ್ರಯತ್ನಶೀಲ ಸಾಧಕರಿದ್ದರು, ಇಕ್ಷ್ವಾಕು ,ಸಗರ, ದಿಲೀಪ , ರಘು ಹೀಗೆ ಹತ್ತು ಹಲವು ಮಹನೀಯ ಮಹಾರಾಜರು ಅಷ್ಟೇ ಬೆಲೆಯುಳ್ಳ ಮಹತ್ತನ್ನು ಸಾಧಿಸಿದ್ದು , ರಾಜರಾದರೂ ರಾಜ ಋಷಿಗಳಾಗಿ ಮೆರೆದದ್ದು , ಸೂರ್ಯವಂಶದಲ್ಲಿ. ಇನವಂಶ ವಾರಿಧಿಗೆ ಪ್ರತಿಚಂದ್ರನಂತೆ ದೀರ್ಘ ಅವಧಿಗೆ ಅಯೋಧ್ಯೆಯನ್ನು ಆಳಿದ ದಶರಥನಿಗೆ ಋಷಿಕಲ್ಪರಾಗಿ ,ದೇವಕಲ್ಪರಾಗಿ ನಾಲ್ವರು ಗಂಡು ಮಕ್ಕಳು ಹುಟ್ಟುತ್ತಾರೆ ,ಅವರಲ್ಲಿ ರಾಮ ಒಬ್ಬ .ಪುತ್ರಕಾಮೇಷ್ಠಿ ಯಾಗವೇ ಇದಕ್ಕೆ ನೆರವೇರಿದ ಸತ್ ಕರ್ಮ. ಇಂತಹ ಭವ್ಯ 'ಐತಿಹಾಸಿಕ ಪರಂಪರೆ'ಯ ಹಿನ್ನೆಲೆಯೊಂದಿಗೆ ರಾಮನ ಬದುಕು ಆರಂಭವಾಗುತ್ತದೆ . ವಸಿಷ್ಠ - ವಿಶ್ವಾಮಿತ್ರರೇ ಗುರುಗಳಾಗಿ ಹರಸಿದ ಪುಣ್ಯಾತ್ಮ 'ರಾಮ'. ಪರಸ್ಪರ ವಿರೋಧಿಗಳಾದ ಈ ಮಹರ್ಷಿಗಳ ಶಿಷ್ಯನಾಗುವುದು ಎಂದರೆ ಇದು ಎಂತಹ ದೈವ ಸಂಕಲ್ಪ , ಮನುಕುಲಕ್ಕೆ ಎಂತಹ ಸಂದೇಶ. ರಾಮನೆಂಬವನೊಬ್ಬನ ಜನನವಾಗುತ್ತದೆ ಎಂದು ರಾಮನ ಹುಟ್ಟಿನ ಶತಮಾನ ಶತಮಾನಗಳಷ್ಟು ಪೂರ್ವದಲ್ಲೆ ವೇದಿಕೆ ಸಿದ್ಧಗೊಂಡಿರುತ್ತದೆ - ಸಂದರ್ಭ ಸೃಷ್ಟಿ ಯಾಗಿರುತ್ತದೆ . ತಪಸ್ವಿ ಗೌತಮನಿಂದ ಶಪಿಸಲ್ಪಟ್ಟು ಶಿಲೆಯಾಗಿದ್ದ ಆತನ ಪತ್ನಿ ಅಹಲ್ಯೆಯು ರಾಮನ ಪಾದಸ್ಪರ್ಶದಿಂದ ಮರಳಿ ಶಿಲೆಯ ಜಡತ್ವದಿಂದ ಮುಕ್ತಿಯನ್ನು ಪಡೆದು ಕ್ರಿಯಾಶೀಲ ಋಷಿ ಪತ್ನಿಯಾಗಿ , ಪತಿವ್ರತೆಯಾಗಿ ಎದ್ದು ಬರುತ್ತಾಳೆ. ಈ ಪ್ರಕರಣ ಪ್ರಾಚೀನವಾದ ಒಂದು ಋಷಿ ದಂಪತಿಯ ಬದುಕನ್ನು ಮತ್ತೆ ಒಂದಾಗಿಸಿದ 'ರಾಮ' ಕೆಲವೇ ದಿನಗಳಲ್ಲಿ ತಾನು 'ಸೀತಾರಾಮ'ನಾಗುತ್ತಾನೆ .ಬಳಿಕ ಭಾರ್ಗವರಾಮರಿಂದ ಅನುಗ್ರಹಿತನಾಗುತ್ತಾನೆ .ಏಕಕಾಲದಲ್ಲಿ ಎರಡು ರಾಮರ ಅಗತ್ಯ ಈ ಕಾಲಕ್ಕೆ ಬೇಡ , ಭಾರ್ಗವರಾಮನಾದ ನಾನು ನೇಪಥ್ಯಕ್ಕೆ ಸರಿಯುತ್ತೇನೆ , ರಘುರಾಮನಾದ ನೀನೇ ಧರ್ಮ ರಕ್ಷಣೆಯ ಕಾರ್ಯ ಮುಂದುವರಿಸು ಎಂದು ನಿರ್ದೇಶಿಸಲ್ಪಡುತ್ತಾನೆ . ಆ ಮೂಲಕ ಮಾನವ ಸಹಜವಾಗಿ ಪೂರ್ವಸೂರಿ ಸಾಧಕರಿಂದ ಹಾಗೂ ಯುಗಪ್ರವರ್ತಕರಿಂದ ಶುಭಾಶೀರ್ವಾದ ಪಡೆಯುತ್ತಾನೆ . ರಾಜರ್ಷಿ ಜನಕರಾಜನು ಯಾಗ ಮಾಡುವ ಉದ್ದೇಶದಿಂದ ಚಿನ್ನದ ನೇಗಿಲಿನಿಂದ ಭೂಮಿಯನ್ನು ಉಳುವಾಗ ಸೀತೆ ಸಿಗುತ್ತಾಳೆ ,ಅಂದರೆ ಯಾಗ ಸಂಕಲ್ಪದಲ್ಲೆ ಸೀತೆ ಜನಕನಿಗೆ ಮಗಳಾಗಿ ಪ್ರಾಪ್ತಳಾಗುತ್ತಾಳೆ . ದಶರಥ ಯಾಗದ ಫಲವಾಗಿ ರಾಮನ ಸಹಿತ ನಾಲ್ವರು ಮಕ್ಕಳನ್ನು ಪಡೆಯುತ್ತಾನೆ . ಎಂತಹ ಋಣಾನುಬಂಧ ಕಾರಣವಾಗಿ ಇವರೆಲ್ಲ ಒಂದಾಗುತ್ತಾರೆ.ಇದು ಕಾಲದ ಅಗತ್ಯ . ಅಯೋಧ್ಯೆಯ ಯುವರಾಜ ಪಟ್ಟಾಭೀಷೇಕಕ್ಕೆ ಮಂಗಳಸ್ನಾನದಿಂದ ಪುನೀತನಾದ ರಾಮನಿಗೆ ಪ್ರಾಪ್ತಿಯಾದದ್ದು ವನವಾಸದ ದೀಕ್ಷೆ , ಯುವರಾಜ ಸಿಂಹಾಸನವಲ್ಲ .ಇದು 'ಪಿತೃವಾಕ್ಯ ಪರಿಪಾಲನೆ'ಯಾಗಿ ರಾಮನಿಗೆ ಒದಗಿದ ಅವಕಾಶ . ಈ ಒಂದು ತಿರುವು ಕಾರಣವಾಗಿ ರಾಮ ಅಯೋಧ್ಯೆಯಿಂದ ಭರತವರ್ಷವನ್ನು ದಾಟಿ ಲಂಕೆಯವರೆಗೆ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸುತ್ತಾನೆ . ಭಾರತೀಯ ಸಂಸ್ಕೃತಿಯ ಸಂದೇಶವನ್ನು‌ ಜಗದಗಲ ಸಾರುತ್ತಾನೆ . ಈ ವಿಸ್ತಾರವಾದ ಅಂದರೆ ಹದಿನಾಲ್ಕು ವರ್ಷಕಾಲದ 'ವನವಾಸ' ಎಂಬ ಹೆಸರಿನ 'ತಿರುಗಾಟ' ರಾಮನ ವ್ಯಕ್ತಿತ್ವಕ್ಕೆ ವೈಚಾರಿಕ ವೈಶಾಲ್ಯತೆಯನ್ನು ಒದಗಿಸಿಕೊಡುತ್ತದೆ. ಸೀತೆ ಆದರ್ಶ ಸತಿಯಾಗುತ್ತಾಳೆ . ಲಕ್ಷ್ಮಣ ಅಣ್ಣನ ತಮ್ಮನಾಗುತ್ತಾನೆ , ಶ್ರೀರಾಮ ಪಾದುಕೆಯನ್ನು ಸ್ವೀಕರಿಸಿದ ಭರತ ಭ್ರಾತೃ ಪ್ರೇಮಕ್ಕೆ ಜ್ವಲಂತ ಉದಾಹರಣೆಯಾಗುತ್ತಾನೆ ,ಶತ್ರುಘ್ನ ರಾಮ ಸೇವೆಯ ನಿರೀಕ್ಷೆಯಲ್ಲಿರುತ್ತಾನೆ .ಇದೆಲ್ಲ ಪುತ್ರಕಾಮೇಷ್ಠಿಯಲ್ಲಿ ದೊರೆತ ಒಂದೇ ಪಾತ್ರೆಯಲ್ಲಿದ್ದ ಪಾಯಸ ಭಕ್ಷದ ಫಲಗಳೇ ತಾನೆ . ವನಾಭಿಮುಖರಾದ 'ಸೀತಾ , ರಾಮ , ಲಕ್ಷ್ಮಣ'ರು ಗಂಗಾನದಿಯನ್ನು ದಾಟುತ್ತಾರೆ . ಗಂಗಾನದಿಯ ಹರಿಯುವಿಕೆಯ ಜುಳುಜುಳು ಸ್ವರದಲ್ಲಿ ರಾಮನಿಗೆ ಕೇಳಿಸುವುದು "ಮರಳಿ ಯತ್ನವ ಮಾಡು" ,'ಮರಳಿ ಯತ್ನವ ಮಾಡು' ಎಂಬ 'ರವ'. ಭಗೀರಥನ ಪ್ರಯತ್ನವು ಗಂಗೆಯ ಪ್ರವಹಿಸುವಿಕೆಯಲ್ಲಿ ನಾದವಾಗಿ ಸ್ಥಾಯಿಯಾಗಿದೆ ಎಂಬುದು ರಾಮನಿಗೆ ಪ್ರೇರಣೆಯಾಗುತ್ತದೆ . ಆದುದರಿಂದಲೇ ತ್ಯಾಗಕ್ಕೆ ,ನಿರ್ಲಿಪ್ತ ಭಾವಕ್ಕೆ ,ಮಹಾನ್ ಸಾಧನೆಯ ಆದರ್ಶಕ್ಕೆ ರಾಮನ ಬದುಕು ದೃಶ್ಯ ಕಾವ್ಯವಾಗುತ್ತದೆ . ಬಹಳ ಮಂದಿ ಋಷಿಗಳಿಂದ ಅನುಗ್ರಹಿತನಾಗುತ್ತಾನೆ , ಕಾಲ್ನಡಿಗೆಯಲ್ಲಿ ಉತ್ತರದ ರಾಮ ದಕ್ಷಣದ ಗೋದಾವರಿ ನದಿಯ ದಡಕ್ಕೆ ಬಂದು ವಾಸಿಸುತ್ತಾನೆ. ‌ಸೀತಾಪಹಣವಾಗುತ್ತದೆ . ಸುಗ್ರೀವ ಸಖ್ಯವು ಆಂಜನೇಯನಿಂದಾಗುತ್ತದೆ ,ಶಬರಿಯ ಮಾತು ಸತ್ಯವಾಗುತ್ತದೆ . ಸೀತಾಪಹರಣವನ್ನು ತಡೆದು ಧರೆಗೆ ಉರುಳಿದ ಪಕ್ಷಿರಾಜ ಜಟಾಯುವಿನಿಂದ ಅಪಹರಣದ ಸೂಕ್ಷ್ಮ ತಿಳಿಯುವುದು .ವಾಲಿ ಬಲಾಢ್ಯನಾದರೂ ಸುಗ್ರೀವನ ಪಕ್ಷವಹಿಸಿ ಸಖ್ಯದ ಮಹತ್ವವನ್ನು ಜಗತ್ತಿಗೆ ತೋರಿಸುತ್ತಾನೆ .ಸೀತಾನ್ವೇಷಣೆ , ಸೇತುಬಂಧನ , ಲಂಕಾ ಪ್ರವೇಶ , ಅಂಗದ ಸಂಧಾನ ಹೀಗೆ ರಾಮಾಯಣ ಮುಂದುವರಿಯುತ್ತದೆ ರಾಮ - ರಾವಣರು ಯುದ್ಧಭೂಮಿಯಲ್ಲಿ ಮುಖಾಮುಖಿಯಾಗುತ್ತಾರೆ . ಯುದ್ಧದಲ್ಲಿ ಒಮ್ಮೆ ಪರಾಜಿತನಾಗುವ ರಾಮ ಸಹಜವಾಗಿ ನನ್ನಿಂದ ಈ ಕಾರ್ಯವಾಗದು ,ಎಲ್ಲರೂ ಮರಳಿಹೋಗಿ ಎಂದು ಸುಗ್ರೀವಾದಿಗಳಿಗೆ ಹೇಳುತ್ತಾನೆ , ವಿಭೀಷಣನಿಗೆ ವಾಗ್ದಾನದಂತೆ ಲಂಕೆಯ ಪಟ್ಟಕಟ್ಟುವಲ್ಲಿ ನಾನು ವಿಫಲನಾದೆ , ಕ್ಷಮಿಸು ಅಯೋಧ್ಯೆ ನನಗಾಗಿ ಕಾಯುತ್ತಿದೆ ನಿನಗೆ ಅಲ್ಲಿಯ ಪಟ್ಟ ಕಟ್ಟುತ್ತೇನೆ ಎಂದು ಹೇಳಿ ಲಕ್ಷ್ಮಣನಲ್ಲಿ ನಾನು ಮರಳಿ ಬರಲಾರೆ ಎಂದು ವೈರಾಗ್ಯದ ಮಾತನ್ನು ಹೇಳುತ್ತಾನೆ .ಇದು ರಾಮ , ರಾಮನ ವ್ಯಕ್ತಿತ್ವ . ಇಂದ್ರ ; ದೇವಸಾರಥಿಯಾದ ಮಾತಲಿಯ ಮೂಲಕ ರಥವನ್ನು ಕಳುಹಿಸುತ್ತಾನೆ , ರಾಮ ಅದನ್ನು ತಿರಸ್ಕರಿಸುತ್ತಾನೆ ,ಆದರೆ ವಾನರರು ರಥಾರೂಢನಾದ ರಾಮನನ್ನು ಕಾಣಬೇಕು ಎಂದು ಹಠಹಿಡಿದಾಗ ರಥಾರೋಹಣ ಮಾಡುತ್ತಾನೆ . ಕಪಿಗಳ ಮಾತನ್ನು ಪರಿಪಾಲಿಸುವ ರಾಮ ಕಪಿಗಳನ್ನು ದುಡಿಸಿಕೊಂಡದ್ದು ಮಾತ್ರವಲ್ಲ‌ , ಅವರನ್ಮು ಗೌರವಿಸುತ್ತಿದ್ದ , ಪ್ರೀತಿಸುತ್ತಿದ್ದ ಎಂಬುದು ಈ ಸಂದರ್ಭದ ಸಂದೇಶವಲ್ಲವೆ . ಸೀತೆಯನ್ನು ಮರಳಿ ಪಡೆಯುವುದು ಲಂಕಾ ಪ್ರವೇಶದ ಉದ್ದೇಶವಲ್ಲ ಸೂರ್ಯ ವಂಶದ ರಾಜರ್ಷಿ ಅನರಣ್ಯನು ಯಾಗ ದೀಕ್ಷಾಬದ್ದನಾಗಿದ್ದ ವೇಳೆ ರಾವಣ ಆ ರಾಜರ್ಷಿಯನ್ನು ಕೊಲ್ಲುತ್ತಾನೆ . ಆ ಸೇಡನ್ನು ತೀರಿಸಿಕೊಳ್ಳುವುದು ಈ ಅಭಿಯೋಗದ ಉದ್ದೇಶವಾಗಿದೆ ಎಂಬುದನ್ನು ರಾಮ ದೃಢೀಕರಿಸುತ್ತಾನೆ . ರಾವಣ ವಧಾನಂತರ ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸುವುದು ಮತ್ತೊಂದು ಆದರ್ಶ. ಅಯೋಧ್ಯೆಯಲ್ಲಿ ನಿಜ ಪಟ್ಟಾಭಿಷೇಕದ ಅನಂತರ ದೀರ್ಘ ಅವಧಿಗೆ ರಾಮರಾಜ್ಯ ಸ್ಥಾಪನೆಯಾಗುತ್ತದೆ . ಅಯೋಧ್ಯೆಯ ರಜಕನೊಬ್ಬನ ಮಾತಿಗೂ ರಾಜರಾಮ ಸ್ಪಂದಿಸುತ್ತಾನೆ , ಗರ್ಭಿಣಿಯಾದ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸುತ್ತಾನೆ , 'ಸೀತಾ ಪರಿತ್ಯಾಗ' ರಾಮನ ದೃಢ ನಿರ್ಧಾರಕ್ಕೆ ಒಂದು ಸಾಕ್ಷಿ . ಈ ಕೆಲಸಕ್ಕೆ ಲಕ್ಷ್ಮಣನನ್ನು ನಿಯೋಜಿಸುತ್ತಾನೆ .ಇಲ್ಲಿ ಸೀತೆಯನ್ನು ಕಾಡಿಗೆ ಬಿಟ್ಟುಬರಲು ಲಕ್ಷ್ಮಣನನ್ನು ನಿಯೋಜಿಸುವ ಸಂದರ್ಭ‌ವಂತೂ ಸೀತೆಗೆ ಮಾತ್ರವಲ್ಲ ಲಕ್ಷ್ಮಣನಿಗೂ ಅಗ್ನಿಪರೀಕ್ಷೆ .ರಾಮ ತಾನು ಸ್ವತಃ ಸವಾಲುಗಳನ್ನು ಸ್ವೀಕರಿಸುತ್ತಾನೆ , ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ . ಅವನನ್ನು ಅನುಸರಿಸಿದವರಿಗೂ ಅದೇ ಪರೀಕ್ಷೆಗಳನ್ನು ಎದುರಿಸುವ ಸ್ಥತಿ ಸೃಷ್ಟಿಸುತ್ತಾನೆ . ಕಾಡಿಗೆ ಹೋದ ಸೀತೆ ವಾಲ್ಮೀಕಿಯ ಮಡಿಲನ್ನು ಸೇರುತ್ತಾಳೆ ,ಕುಶಲವರ ಹುಟ್ಟು , ಕುಶಲವರ ಸಮೇತ ಸೀತಾರಾಮರ ಸಮಾಗಮ‌ . ಇದಕ್ಕೆ ವಾಲ್ಮೀಕಿಯ ಅನುಗ್ರಹ . ರಾಮ ನಿರ್ಯಾಣದವರೆಗೆ ಎಲ್ಲವೂ ವಚನಬದ್ಧತೆ , ಮನುಷ್ಯನಾಗಿ ಊಹಿಸಲೂ ಆಗದ ಆದರ್ಶವನ್ನು ಮೆರೆಯುವ ಕ್ರಮ , ನಿಜ ಕ್ಷತ್ರಿಯನಾಗಿ ವಿಜೃಂಭಿಸುವುದು , ರಾಜಧರ್ಮದ ಪಾಲನೆ ಎಲ್ಲವೂ ಅವಿಸ್ಮರಣೀಯ . ಆದುರಿಂದಲೇ ರಾಮ ಈ ದೇಶದ ಪ್ರತಿಷ್ಠೆ , ಸಂಸ್ಕೃತಿಯ ಸಾಕಾರಮೂರ್ತಿ , ಭಾರತೀಯರೆಲ್ಲರ ಆರಾಧ್ಯ ಮೂರ್ತಿ . ಪುರಾಣ ಪ್ರಪಂಚದ ನಿರೂಪಣೆಯಲ್ಲಿ ಪ್ರಖರವಾಗಿ ಮಿನುಗುವ ಜ್ಯೋತಿ . ರಾಮನ ಇಡೀ ಚರಿತ್ರೆಯಂತೆಯೇ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಕಟ್ಟುವ ಸಾಹಸದ ಕಾರ್ಯ ನಡೆದಿದೆ .ಎಷ್ಟು ತಿರುವುಗಳು , ಎಂತಹ ಆಘಾತಗಳು‌, ಮಂಥರೆಯಂತೆ , ಅಗಸನ ಪಾತ್ರಗಳ ಮೂಲಕ , ಸೀತಾಪಹರಣ ಪ್ರಕರಣಗಳಂತೆ ತಿರುವುಗಳನ್ನು ಪಡೆಯುತ್ತದೆ . ರಾಮನೆಂಬ ವ್ಯಕ್ತಿ ಇದ್ದನೆ ಎಂಬ ಪ್ರಶ್ನೆಯವರೆಗೂ ತಿಕ್ಕಾಟ ಭಾರತದಲ್ಲಿ ಕೇಳಿಬರುತ್ತದೆ . ರಾಮಮಂದಿರ ನಿರ್ಮಾಣಕಾರ್ಯ ಹೀಗೆ ಹಲವು ಆಯಾಮಗಳನ್ನು ಪಡೆಯುತ್ತಾ ಈ ಹಂತಕ್ಕೆ ಬರುತ್ತದೆ . ಈಗ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯಾಗುತ್ತದೆ . ದೇಶದ ಸಂಸ್ಕೃತಿಗೆ ಸ್ಮಾರಕದಂತೆ ಈ ಮಂದಿರವು ನಿರ್ಮಾಣವಾಗುತ್ತದೆ .ರಾಮ ಒಂದು ಸಂಸ್ಕೃತಿಯಂತೆ , ಪ್ರತಿಷ್ಠೆಯಂತೆ ಭಾರತದಲ್ಲಿ ಸ್ಥಾಪನೆಯಾಗುವ ಕಾಲಸನ್ನಿಹಿತವಾಗಿದೆ . ಜೈ ಶ್ರೀರಾಮ್ ಲೇಖನ : ಕೆ .ಎಲ್ .ಕುಂಡಂತಾಯ

ಮರ್ಣೆ ಯುವಕನಿಂದ ಪೇಪರ್ ಆರ್ಟ್ನಲ್ಲಿ ಮೂಡಿದ ಅಯೋಧ್ಯೆಯ ಚಿತ್ರಣ

Thumbnail
Posted On: 04 Aug 2020, 08:45 PM

ಇOಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಗೊOಡಕಲಾವಿದ ಮಹೇಶ್ ಮರ್ಣೆ ಯವರು ತೆಳುವಾದ ಬಿಳಿ ಪೇಪರ್ ಹಾಳೆ ಯಲ್ಲಿ ಬ್ಲೇಡ್ ನ ಸಹಾಯದಿOದ ರಚಿಸಿದ ಪೇಪರ್ ಕಟ್ಟಿOಗ್ ಆರ್ಟ್

ಕಡಲ ಮಕ್ಕಳಿಂದ ಸಮುದ್ರ ರಾಜನಿಗೆ ಸಮುದ್ರ ಪೂಜೆ

Thumbnail
Posted On: 03 Aug 2020, 06:36 PM

ಕರಾವಳಿಯ ವಿವಿಧೆಡೆ ಸೋಮವಾರ ಮೀನುಗಾರರು ಸಮುದ್ರಪೂಜೆ ಸಹಿತವಾಗಿ ಕ್ಷೀರಾಭಿಷೇಕ ನಡೆಸಿದರು. ಕಾಪು, ಮಲ್ಪೆ, ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಪೊಲಿಪು, ಕೈಪುಂಜಾಲು, ಮೂಳೂರು ಸಹಿತವಾಗಿ ಕರಾವಳಿಯಾದ್ಯಂತ ಇರುವ ಮೊಗವೀರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಭಜನಾ ಮಂದಿರಗಳು ಮತ್ತು ಪ್ರಾರ್ಥನಾ ಮಂದಿರಗಳ ಸಹಕಾರದೊಂದಿಗೆ ಸಮುದ್ರ ಪೂಜೆ ನೆರವೇರಿಸಲಾಯಿತು. ನೂಲ ಹುಣ್ಣಿಮೆಯಂದು ಕರಾವಳಿಯಲ್ಲಿ ಸಮುದ್ರ ಪೂಜೆ ನಡೆಸುವ ಮೀನುಗಾರರು ಹೇರಳ ಮತ್ಸ್ಯ ಸಂಪತ್ತು ದೊರಕಿಸುವಂತೆ ಮತ್ತು ಮೀನುಗಾರಿಕೆಯ ವೇಳೆ ಯಾವುದೇ ರೀತಿಯ ತೊಂದರೆಗಳು ಆಗದಿರಲೆಂಬ ಪ್ರಾರ್ಥನೆಯೊಂದಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಹಿತ ಪೂಜೆ ನೆರವೇರಿಸುತ್ತಾರೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಸಹಿತ ವಿವಿಧ ಗಣ್ಯರು, ಸಮಾಜದ ಮುಖಂಡರು, ಮೊಗವೀರ ಮಹಾಸಭೆ,ಯ ಪದಾಧಿಕಾರಿಗಳು, ಸದಸ್ಯರು, ಮೊಗವೀರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ದಾನಿಗಳ ನೆರವಿನಿಂದ ನವೀಕರಣಗೊಂಡ ಗುಂಡಿಬೈಲು ನಿವಾಸಿ ಸರೋಜರವರ ಮನೆ

Thumbnail
Posted On: 03 Aug 2020, 06:20 PM

ಉಡುಪಿ :- ಬಾಂಧವ್ಯ ಬ್ಲಡ್ ಕನಾ೯ಟಕ ಮತ್ತು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಇದರ ಇತಿಯಿಂದ ತುತು೯ ಸಹಾಯ ಯೋಜನೆಯ ಮೂಲಕ ನವೀಕರಣ ಗೊಂಡ ಉಡುಪಿ ಗುಂಡಿಬೈಲು ನಿವಾಸಿ ಸರೋಜ ರವರ ಬೆಳಕು ಯೋಜನೆ ಮನೆಯನ್ನು ಇಂದು ಸಂಜೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಅಭಿಯಾನದ ಸದಸ್ಯೆ ಜ್ಯೋತಿ ಸಾಮಾಂತ್ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ನಂತರ ಎಲ್ಲಾ ಸದಸ್ಯರು ಮತ್ತು ಗಣ್ಯರು ಸಾಮೂಹಿಕವಾಗಿ ಹಣತೆ ಬೆಳಗಿಸಿದರು.ಈ ಸಂದಭ೯ದಲ್ಲಿ ದಿನೇಶ್ ಬಾಂಧವ್ಯ ಯೋಜನೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಸರೋಜರವರು ತನ್ನ ವಿಶೇಷ ಚೇತನ ಮಗಳೊಂದಿಗೆ ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ದಾನಿಗಳ ನೆರವಿನಿಂದ ಈ ನವೀಕರಣ ಮಾಡಲಾಗಿದೆ.

ಶಿರ್ವ ಮಟ್ಟಾರು ನಿವಾಸಿ ಪುಂಡರೀಕಾಕ್ಷ (55) ಮೃತ ದೇಹ ಕೊಳೆತ ರೀತಿಯಲ್ಲಿ ಪತ್ತೆ

Thumbnail
Posted On: 02 Aug 2020, 09:48 PM

ಶಿರ್ವ.02, ಆಗಸ್ಟ್ : ಪುಂಡರೀಕಾಕ್ಷ (55) ಎಂಬುವವರು ಕಳೆದ 35 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆ ಹಾಗೂ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಬಿಪಿ, ಶುಗರ್ ಕಾಯಿಲೆ ಕೂಡ ಇತ್ತು ಎಂದು ತಿಳಿದು ಬಂದಿದೆ, ಇವರು ಮದುವೆಯಾಗದೆ ಒಬ್ಬಂಟಿಯಾಗಿ ಕಾಪು ತಾಲೂಕಿನ ಶಿರ್ವದ ಪಡುಮಠ ಮಟ್ಟಾರು ಎಂಬಲ್ಲಿ ವಾಸವಾಗಿದ್ದರು. ದಿನಾಂಕ 27/07/2020 ರಿಂದ 02/08/2020 ರ ಬೆಳಿಗ್ಗೆ 10:30 ರ ಮಧ್ಯಾವಧಿಯಲ್ಲಿ ಪುಂಡರೀಕಾಕ್ಷ (55) ಇವರು ಹೃದಯಾಘಾತ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿದ್ದು ಮೃತ ದೇಹವು ಸಂಪೂರ್ಣ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ಶವವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.. ಎಂದು ಬಲ್ಲ ಮೂಲಗಳು ತಿಳಿಸಿವೆ ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಭ್ರಾತೃ - ಭಗಿನಿ ಬಾಂಧವ್ಯದ ಸಂಕೇತವೇ ರಕ್ಷಾಬಂಧನ - ಕೆ ಎಲ್ ಕುಂಡಂತಾಯ

Thumbnail
Posted On: 02 Aug 2020, 08:23 PM

ಸಹೋದರ - ಸಹೋದರಿ‌ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ 'ರಕ್ಷಾಬಂಧನ' . 'ಸಹಭವ'ರಲ್ಲಿ ಬದ್ದವಾಗಿರುವ ಬಂಧವೇ ಸಾರ್ವತ್ರಿಕವಾಗುತ್ತಾ ಸಮಾಜದಲ್ಲಿ ಸರ್ವವ್ಯಾಪಿಯಾಗುವಷ್ಟು ಅರಳುವ , ದೇಶದಾದ್ಯಂತ ವ್ಯಾಪಿಸುವ ಆಚರಣೆಯೇ 'ರಕ್ಷಾಬಂಧನ" ; ಇದು ಭಾರತೀಯ ಸಂಸ್ಕೃತಿಯ ಸೊಗಸು. ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ "ರಾಖಿ" ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯತೆ . ಇದೇ 'ಭ್ರಾತೃ - ಭಗಿನಿ ಬಾಂಧವ್ಯ ಬಂಧನ'. "ಪರನಾರಿ ಸೋದರ" ಇದೊಂದು ಪ್ರತಿಜ್ಞೆಯಾಗಿ ಪುರಾಣಗಳಲ್ಲಿ , ದೇಶದ ಇತಿಹಾಸದಲ್ಲಿ ಕಾಣಸಿಗುವ ಒಂದು ರೋಚಕ ಸ್ವೀಕಾರ . ಇದು ಒಂದು "ಮೌಲ್ಯ"ವಾಗಿ ಆಚರಿಸಲ್ಪಟ್ಟು 'ಸಂದೇಶ'ವಾಗುವ ಶೈಲಿ ನಮ್ಮ ನೆಲದ ವ್ಯಕ್ತಿತ್ವಗಳ ಹೃದಯಶ್ರೀಮಂತಿಕೆ . ನಡೆದುಹೋದ ಸಂಗತಿ, ವರ್ತಮಾನದ ಆಚಾರ - ವಿಚಾರ ,ಭವಿಷ್ಯಕ್ಕೆ ಮುಂದುವರಿಯುವ "ಬಾಂಧವ್ಯ ಬಂಧನ‌" . ಇಂತಹ ಸಂಸ್ಕಾರಗಳು ನಮ್ಮ ಬದುಕಿನ ಕ್ರಮಕ್ಕೆ , ಮನಸ್ಸಿನ ಆಲೋಚನೆಗಳಿಗೆ ಪ್ರತ್ಯಕ್ಷ ಸಾಕ್ಷಿ . ಇಂತಹ ನೂರಾರು ಮೌಲ್ಯಗಳಲ್ಲಿ 'ರಕ್ಷಾಬಂಧನ' ಒಂದು. ದೇಶದಲ್ಲಿ ನೆರವೇರುವ "ರಾಖೀ" ಅತ್ಯಂತ ಜನಪ್ರಿಯ ನಡವಳಿಕೆ . ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ತಮ್ಮ ಸಹೋದರರಿಗೆ ಸಹೋದರಿಯರು ರಾಖೀ ಕಟ್ಟುವ ಮೂಲಕ 'ನಮ್ಮ ಮಾನ - ಪ್ರಾಣ ಉಳಿಸುವ ಹೊಣೆ ನಿಮ್ಮದು' ಎಂದು ನೆನಪಿಸುತ್ತಾರೆ . ಉಡುಗೊರೆ ಪಡೆಯುತ್ತಾರೆ . ರಾಖೀ ಕಟ್ಟುವ ಸಿಹಿ ತಿನ್ನಿಸಿ - ತಿನ್ನುವ ,ಉಡುಗೊರೆ ಪಡೆಯುವ ಈ ಭಾವನಾತ್ಮಕ ಪರ್ವದಿನವು ಮನೆಯೊಳಗೆ ಒಡಹುಟ್ಟಿದ ಸಹೋದರ - ಸಹೋದರಿಯರ ನಡುವೆ ಸಂಭ್ರಮಿಸುವುದಿಲ್ಲ ಬದಲಿಗೆ ಒಂದು ನೆರಕರೆಯನ್ನು ಒಂದು ವ್ಯಾಪ್ತಿಯನ್ನು ಅಲ್ಲ ಇಡೀ ದೇಶದಾದ್ಯಂತ ವಿಜೃಂಭಿಸುತ್ತಿದೆ . ಸಹಭವರಾಗ ಬೇಕಿಲ್ಲ , ಅಂತಹ 'ಪವಿತ್ರ ಭಾವಸ್ಪುರಣೆ' ಸಾರ್ವತ್ರಿಕವಾಗುತ್ತಿರುವುದು ನಮ್ಮ ಸಾಂಸ್ಕೃತಿಕ ಭವ್ಯತೆ . ‌‌‌‌ ಸಹೋದರ ಭಾವದ ವೈಶಾಲ್ಯತೆ ‌‌ ಒಡಹುಟ್ಟಿದವರೊಂದಿಗೆ ಸಮಾಜದ 'ಸ್ತ್ರೀ'ಯರೆಲ್ಲ ತನ್ನ ಸೋದರಿಯರು ಎಂಬ‌ ಉದಾತ್ತ ಭಾವದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ "ರಾಖೀಬಂಧನ" ಇಂಬು ಕೊಡುತ್ತದೆ .ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ತ್ರೀಯ ಮಾನ - ಪ್ರಾಣಗಳ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ರಕ್ಷಾಬಂಧನ - ರಾಖೀಬಂಧನ ಆಚರಿಸಲ್ಪಡುತ್ತದೆ . 'ರಕ್ಷಾಬಂಧನ'ಕ್ಕೆ ಮೀಸಲಾದ ದಿನ ಶ್ರಾವಣದ ಹುಣ್ಣಿಮೆ .ಪ್ರತಿ ಹುಣ್ಣಿಮೆಯೂ ಚಂದ್ರ ಪೂರ್ಣ ವೃದ್ಧಿಯೊಂದಿಗೆ ರಾರಾಜಿಸುವ ದಿನ . ಚಂದ್ರ ಮನಃಕಾರಕನಾದುದರಿಂದ ,ಹುಣ್ಣಿಮೆಯೇ ಮನಸ್ಸಿನ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುವ ಕಾಲವಾಗಿರುವುದರಿಂದ ಮನಸ್ಸಿನ ಭಾವ ಸಂಬಂಧಿಯಾದ ನಿರ್ಧಾರಕ್ಕೆ ಸಕಾಲವೆಂದು ತಿಳಿಯಬಹುದಲ್ಲ. ಶ್ರಾವಣ ಮಾಸವೂ ಒಂದು ಪ್ರೇರಣೆ ಸಹಜವಾಗಿ ಒದಗುವ ಶ್ರಾಯ. ನಾಡಿಗೆ ,ಬೀಡಿಗೆ ಬರುವ ಶ್ರಾವಣ ಮನಸ್ಸಿಗೆ ಬಾರದೆ ಇದ್ದೀತೆ ? , ಅದೇ ಶ್ರಾವಣದ ಕವಿ ಬೇಂದ್ರೆಯವರ "ಬಂತು ಶ್ರಾವಣ..." ಲವಲವಿಕೆ ತುಂಬಿದ ಉದ್ಗಾರ . ಇದೇ ಭಾವಗಳು ಬಿರಿಯುವ ,ಸುಗಂಧ ಬೀರುವ ಸುಸಮಯ . ರಾಖೀ ಎಷ್ಟೇ ವೈವಿಧ್ಯದ್ದಾದರೂ , ರಂಗುರಂಗಿನದ್ದಾದರೂ ಇದರ ಬಂಧನ ಪ್ರಕ್ರಿಯೆ ದಾರದ ಮೂಲಕ ತಾನೇ ? ಈ ದಾರ ಒಂದು ಕರ್ತವ್ಯಕ್ಕೆ ,ಜವಾಬ್ದಾರಿಗೆ‌ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ . ವ್ರತ , ಪೂಜೆ , ಮಹೋತ್ಸವ , ಮಹಾಯಾಗ ,ಮದುವೆ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ 'ಕಂಕಣಬಂಧ'ದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ದೇಶದಲ್ಲಿ ರೂಢಿಯಲ್ಲಿದೆ .ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ 'ನಾಂದೀ' . ಸತ್ಕಾರ್ಯ ಆರಂಭದಿಂದ ಸಮಾರೋಪ ಪರ್ಯಂತ ಕಂಕಣಬಂಧ ಕಟ್ಟಿಸಿಕೊಳ್ಳುವವರು ದೀಕ್ಷಾಬದ್ಧರೆಂದು ಅರ್ಥ . ಅನ್ಯ ಕಾರ್ಯಗಳ ಬಗ್ಗೆ ಆಲೋಚಿಸದೆ ಸಂಪೂರ್ಣ ಸಂಕಲ್ಪಿತ ಸತ್ಕಾರ್ಯದಲ್ಲೇ ನಿರತರಾಗಿಬೇಕೆಂಬುದು ಉದ್ದೇಶ . ಜ್ಞಾನ ಪೂರಕ ಉಪಾಕರ್ಮ 'ರಕ್ಷಾಬಂಧನ' ಹಾಗೂ 'ಉಪಾಕರ್ಮ' ವಿಧಿಗಳಲ್ಲಿ ಒಂದು ಭಾವ ಸಂಬಂಧಿಯಾದರೆ ಮತ್ತೊಂದು ಜ್ಞಾನ ಶುದ್ಧಿಯನ್ನು ಎಚ್ಚರಿಸುವ ವಿಶಿಷ್ಟ ಆಚರಣೆಗಳು . ಸಿದ್ಧತೆ ,ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವುದು ಮುಂತಾದ ಅರ್ಥ ನಿಷ್ಪತ್ತಿಯ ಉಪಾಕರ್ಮವು ವಾರ್ಷಿಕ ಧಾರ್ಮಿಕ ವಿಧಿಯಾಗಿ ,ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ವರ್ಗಕ್ಕೆ ವಿಶಿಷ್ಟ ಆಚರಣೆ . ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ . ಋಗ್ವೇದ ,ಯಜುರ್ವೇದ ,ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಲ್ಲಿ ಉಪಾಕರ್ಮ ಆಚರಿಸಲ್ಪಡುತ್ತದೆ .ಆದರೆ ಉಪಾಕರ್ಮದ ಉದ್ದೇಶ ಹಾಗೂ ನಿರ್ವಹಣೆಯು ಬಹುತೇಕ ಸಮಾನವಾಗಿಯೇ ಇದೆ . ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಟು ಗುರುಕುಲಗಳಲ್ಲಿ ಮಾಘ ಮಾಸದಿಂದ ಆರುತಿಂಗಳು ವ್ಯಾಕರಣ , ಜ್ಯೋತಿಷ್ಯ ಮುಂತಾದುವುಗಳ ಅಧ್ಯಯನದಲ್ಲಿ ನಿರತನಿರುತ್ತಾನೆ . ಶ್ರಾವಣದಿಂದ ಮುಂದಿನ ಆರುತಿಂಗಳು ವೇದಾಧ್ಯಯನಕ್ಕೆ ಮೀಸಲಾಗಿರುತ್ತದೆ .ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ 'ವೇದಾಧ್ಯಯನದ ಅಧಿಕಾರ ಸಿದ್ಧಿ'ಗಾಗಿ ಉಪಾಕರ್ಮ ವಿಧಿ ನೆರವೇರುತ್ತದೆ . ಮತ್ತೊಂದು ತಿಳಿವಳಿಕೆಯಂತೆ ಕೃಷಿ ಸಂಬಂಧಿಯಾದ ಕೆಲಸಕಾರ್ಯಗಳಿಗಾಗಿ‌ ವೇದ ಅಧ್ಯಯನ - ಅಧ್ಯಾಪನ ಸ್ಥಗಿತಗೊಳ್ಳುತ್ತದೆ , ಕೃಷಿಕಾರ್ಯ ಮುಗಿದ ಬಳಿಕ ವೇದಾಧ್ಯಯನ ಮುಂದುವರಿಸಲು ಅಧಿಕಾರ ಸಿದ್ಧಿಗಾಗಿ ಉಪಾಕರ್ಮ . ಬಹುಶಃ ಋಷಿಪರಂಪರೆ - ಗುರುಕುಲ ಪದ್ಧತಿಯಿದ್ದ ಕಾಲದಲ್ಲಿ ಇಂತಹ ಕ್ರಮ ಇದ್ದಿರಬಹುದಾದುದನ್ನು ಒಪ್ಪಬಹುದು. ಪುಣ್ಯಾಹ ,ಸಪ್ತ ಋಷಿಗಳ ಪೂಜೆ , ಉಪಾಕರ್ಮ ಹೋಮವನ್ನು 'ದಧಿ' ಮತ್ತು 'ಸತ್ತು'(ಅರಳು)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ . ಪ್ರಧಾನ ಹೋಮದ ಬಳಿಕ ಹೋಮದ್ರವ್ಯದ ಶೇಷ ಭಾಗವಾದ 'ದಧಿ - ಸತ್ತು' ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ . ಬಳಿಕ ಬ್ರಹ್ಮಯಜ್ಞ ,ದೇವ, ಋಷಿ ,ಆಚಾರ್ಯ‌, ಪಿತೃ ತರ್ಪಣ(ಅಧಿಕಾರವುಳ್ಳವರು ಮಾತ್ರ)ಕೊಡುವುದು . ಹೀಗೆ ಉತ್ಸರ್ಜನೆಯಿಂದ ಮರಳಿ ವೇದಾಧ್ಯಯನ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ , ಮಾನಸಿಕ , ದೈಹಿಕ ಶುದ್ಧಿಗಾಗಿಯೂ ಈ ಕ್ರಿಯೆ ನಡೆಯುತ್ತದೆ ( ಋಗ್ವೇದ ಕ್ರಮ ) . ವೇದ ಶಾಖೆಯನ್ನು ಆಧರಿಸಿ ಉಪಾಕರ್ಮ ವಿಧಿ ನಿರ್ವಹಣೆಯಲ್ಲಿ ವ್ಯತ್ಯಾಸ ಸಾಮಾನ್ಯವಾದುದು .ಪಾಠಾಂತರಗಳು ಬೇಕಾದಷ್ಟು ಇವೆ . ಆಕ್ಷೇಪ ಮತ್ತು ವಾದಕ್ಕೆ ಇದಕ್ಕಿಂತ ಪ್ರಶಸ್ತವಾದ ಕ್ಷೇತ್ರ ಬೇರೆ ಇಲ್ಲ . ಪುರೋಹಿತ ಪುರೋಹಿತರಲ್ಲಿ ಅನುಸಂಧಾನ ವ್ಯತ್ಯಾಸಗಳನ್ನು ಗಮನಿಸಲಾಗಿದೆ . ಋಷಿ ಪೂಜೆ ಪ್ರಧಾನ .ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು . ಋಷಿದ್ರಷ್ಟವಾದ ಮಂತ್ರಗಳ ಅಧ್ಯಯನ - ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಪ್ರಾಪ್ತಿಗಾಗಿ ಋಷಿಪೂಜೆ . ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ.ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ. ಈ ವಿಧಿಯನ್ನು ಮತ್ತು ಯಜ್ಞೋಪವೀತವನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ , ಎಳೆಗಳು , ಇವುಗಳಿಗಿರುವ ಶಾಸ್ತ್ರಾಧಾರ ಮತ್ತು ಮಂತ್ರಗಳು , ಕರ್ಮಾಂಗಗಳು ಭವ್ಯ ಅಷ್ಟೇ ದಿವ್ಯ . ಉಪಾಕರ್ಮವು ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ .ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ , ವಿಶ್ವಕ್ಕೆ ಕೊಡುಗೆಯಾದರೆ ಉಪಾಕರ್ಮ ಸಂಕುಚಿತವಾಗದೆ ವಿಶಾಲ ಅರ್ಥ ವ್ಯಾಪ್ತಿಯನ್ನು ಪಡೆದು ಮತ್ತಷ್ಟು ಗೌರವಾರ್ಹವಾದೀತು . ಬರಹ : ಕೆ.ಎಲ್ .ಕುಂಡಂತಾಯ

ಹೋಟೆಲ್ ಉದ್ಯಮಿ ಕಾಪು ಮಲ್ಲಾರ್ ಡಿ.ಕೆ ಪೂಜಾರಿ ನಿಧನ

Thumbnail
Posted On: 01 Aug 2020, 04:36 PM

ಮುಂಬಯಿ: ಹಿರಿಯ ಸಮಾಜ ಸೇವಕ ,ಹೋಟೇಲು ಉದ್ಯಮಿ ಡಿ. ಕೆ. ಪೂಜಾರಿಯವರು (78) ಆ.1ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಸಾಮಾಜಿಕ, ಧಾರ್ಮಿಕ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರ್ಶ ಹಾಗೂ ಸಾರ್ಥಕ ಜೀವನವನ್ನು ನಡೆಸಿರುವ ಡಿ.ಕೆ. ಪೂಜಾರಿಯವರು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಘಾಟ್ಕೋಪರ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷರಾಗಿ , ಅಸಲ್ಪಾ ಇಲ್ಲಿನ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ, ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಹಾಗೂ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷರಾಗಿ, ಹುಟ್ಟೂರಿನ ಕುದಿ ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುವರು. ಅಲ್ಲದೆ ಇವೆಲ್ಲದರ ಅಭಿವೃದ್ಧಿಗೆ ಶ್ರಮಿಸಿ ಅಮೂಲ್ಯ ಕೊಡುಗೆಯನ್ನು ನೀಡಿದವರಾಗಿರುವರು. ಬಿಲ್ಲವರ ಅಸೋಸಿಯೇಶನ್ ಘಾಟ್ಕೋಪರ್ ಸ್ಥಳೀಯ ಕಚೇರಿಗೆ ಜಾಗವನ್ನು ಕೊಡಾ ಡಿ .ಕೆ .ಪೂಜಾರಿಯವರು ಒದಗಿಸಿಕೊಟ್ಟಿದ್ದಾರೆ. ಮುಲುಂಡ್ ಪಶ್ಚಿಮದ ವೈಶಾಲಿ ನಗರ, ಕಲ್ಪನಾ ನಗರಿ ದೈವತ್ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಡಿ‌.ಕೆ. ಪೂಜಾರಿಯವರು ಹಿರಿಯ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದು ಘಾಟ್ಕೋಪರ್ ಅಸಲ್ಪೆಯಲ್ಲಿ ಮಲ್ಲಿಕಾ ಹೋಟೆಲನ್ನು ಹೊಂದಿದ್ದರು. ಮೂಲತಃ ಕಾಪು ಮಲ್ಲಾರ್ ಸಿಂಧು ನಿವಾಸದವರಾಗಿದ್ದ ಡಿ. ಕೆ .ಪೂಜಾರಿಯವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.