Updated News From Kaup
ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ
Posted On: 29-05-2020 10:56AM
ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ. ನಂಬಿದವರನ್ನು ಯಾವತ್ತು ಕೈಬಿಟ್ಟವರಲ್ಲ ಈ ಅತಿಮಾನುಷ ಶಕ್ತಿಗಳಾದ ದೈವಗಳು. ಅದೆಷ್ಟೋ ಕಾಲದ ಹೊಡೆತಕ್ಕೆ ಮಣ್ಣಿನಡಿಗೆ ಸೇರಿದ ದೈವಸ್ಥಾನಗಳು ಕೂಡ ಕಾಲ ಬಂದಾಗ ತಮ್ಮ ಇರುವಿಕೆಯನ್ನು ತೋರಿಸಿ ತಮಗೆ ಬೇಕಾದ ಸ್ಥಾನಮಾನಗಳನ್ನು ಕಟ್ಟಿಸಿಕೊಂಡು ನಂಬಿದವರಿಗೆ ಇಂಬುಕೊಟ್ಟವರು. ಇಂತಹ ದೈವಾರಾಧನೆಯಲ್ಲಿ ಗರಡಿಗಳು ಕೂಡ ಕಾಯ ಬಿಟ್ಟು ಮಾಯ ಸೇರಿದ ಅವಳಿ ಕಾರಣೀಕ ಪುರುಷರ ಆರಾಧನ ಕೇಂದ್ರ. ಪ್ರಸ್ಥುತ 250 ಮಿಕ್ಕಿ ಗರಡಿಗಳು ಇದ್ದರು ಕೂಡ ಕೆಲವು ಗರಡಿಗಳು ಮಣ್ಣಿನ ಅಡಿಯಲ್ಲಿ ಜೀರ್ಣಾವಸ್ಥೆಯಲ್ಲಿ ಇದೆ. ಹೆಸರಿಗೆ ಮಾತ್ರ ಲೆಕ್ಕದಲ್ಲಿ ಇದೆ. ಅಂತಹುದೇ ಗರಡಿಗಳಲ್ಲಿ ಮೈಂದಡಿ ಗರಡಿಯು ಒಂದು. ಶ್ರೀ ಕ್ಷೇತ್ರ ಕಟೀಲಿಗೆ ಹೋಗುವ ದಾರಿಯಲ್ಲಿ ಸಿಗುವ ನಿಡ್ಡೋಡಿ ಎಂಬ ಗ್ರಾಮದಲ್ಲಿ ಮೈಂದಡಿ ಎನ್ನುವ ಪುಟ್ಟ ಊರು. ಹಸಿರು ಕಾಂತಿಯಿಂದ ಈ ಹಳ್ಳಿ ಕಂಗೊಳಿಸುತ್ತಾ ಇದ್ದು ಎಲ್ಲರು ನೆಮ್ಮದಿಯಿಂದ ಒಟ್ಟಾಗಿ ಜೀವಿಸುತ್ತಿರುವ ಊರು. ಕಾಲದ ಹೊಡೆತಕ್ಕೆ ಸಿಕ್ಕಿ ಈ ಹಿಂದೆ ವಿಜೃಂಭಣೆಯಿಂದ ನಡೆಯುತ್ತಿದ್ದ ಗರಡಿ ಜಾತ್ರೆ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. 66 ಗರಡಿ 33 ತಾವುಗಳೆಂಬ ನಾಣ್ಣುಡಿಯಂತೆ ಈ ಗರಡಿಯು ಕೂಡ 66 ಗರಡಿಯಲ್ಲಿ ಸೇರಿರಬಹುದೆಂಬ ನಂಬಿಕೆಯಿದೆ. ಇಲ್ಲಿ ಅಳಿದು ಉಳಿದಿರುವ ಶಕ್ತಿ ಕಲ್ಲು, ದಂಬೆ ಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಇವೆಲ್ಲ ಇದಕ್ಕೆ ಸಾಕ್ಷಿಯೆಂಬಂತೆ ಇದೆ. ಸುಮಾರು 150 ವರ್ಪಗಳ ಹಿಂದೆ ಬಹು ಸಡಗರದಿಂದ ನಡೆಯುತ್ತಿದ್ದ ನೇಮೋತ್ಸವವು ಯಾಕಾಗಿ ನಿಂತಿದೆ ಎನ್ನುವ ಮಾಹಿತಿ ಯಾರಿಗೂ ಇಲ್ಲ. ನೋಡಿದ ಕೇಳಿದ ಜನರು ಇರಲು ಸಾಧ್ಯವಿಲ್ಲ. ಆದರೆ 5 ಕಡೆಗಳಿಂದ ದೈವಗಳು ಮತ್ತು ಬೈದೇರುಗಳ ಭಂಡಾರ ಬಂದು ನೇಮೋತ್ಸವ ಆಗುತ್ತಿದ್ದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿಯಿದೆ. ಭಾವದ ಮನೆಯಿಂದ ಕೊಡಮಂದಾಯ ದೈವದ ಭಂಡಾರ, ಪಾತ್ರಬೈಲು ಮನೆಯಿಂದ ಸರಳ ಜುಮಾದಿ ಭಂಡಾರ, ಮಚ್ಚಾರು ಮನೆಯಿಂದ ಬೈದೇರುಗಳ ಭಂಡಾರ, ನಂದೊಟ್ಟು ಮನೆಯಿಂದ ಕಾಂತೇರ್ ಜುಮಾದಿ ಭಂಡಾರ ಮತ್ತು ಇನ್ನೊಂದು ಕಡೆಯಿಂದ ಜಾರಂದಾಯನ ಭಂಡಾರ ಮೈಂದಡಿ ಎನ್ನುವ ಸ್ಥಳದಲ್ಲಿ ಇರುವ ದೈವಸ್ಥಾನಕ್ಕೆ ಮತ್ತು ಗರಡಿಗೆ ಒಟ್ಟಾಗಿ ಬಂದು ಧ್ವಜಾರೋಹಣ ಆಗಿ ನೇಮೋತ್ಸವ ಆಗುತ್ತಿತ್ತಂತೆ. ಇಡೀ ಊರಿಗೆ ಇದು ಜಾತ್ರೆ. ಗ್ರಾಮಸ್ಥರು ಎಲ್ಲರು ಒಟ್ಟಾಗಿ ದೈವಗಳ ಮತ್ತು ಬೈದೇರುಗಳ ಭಂಡಾರ ಮನೆಯವರ ಮುಂದಾಳತ್ವದಲ್ಲಿ ನಡೆಸುತ್ತಿದ್ದರಂತೆ. ಆದರೆ ಯಾವುದೋ ಒಂದು ವಿಷ ಗಳಿಗೆಯಲ್ಲಿ ಎಲ್ಲವು ನಿಂತು ಹೋಗಿ ಮೈಂದಡಿಯಲ್ಲಿರುವ ದೈವಸ್ಥಾನ ಮತ್ತು ಗರಡಿ ಧರಶಾಹಿಯಾಗಿದೆ. ಈ ಬಗ್ಗೆ ಊರಿನ ಸಂಬಂಧಪಟ್ಟವರಿಂದ ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದ್ದು ಅತೀ ಬೇಗನೆ ಆಗಬಹುದೆಂಬ ನಂಬಿಕೆಯಿದೆ. ಒಂದಂತು ಸತ್ಯ ಯಾವ ಕಾಲಕ್ಕೆ ಯಾವುದು ಆಗಬೇಕೆನ್ನುವುದು ದೈವ ನಿರ್ಣಯ. ದೈವಗಳ ಮತ್ತು ಬೈದೇರುಗಳ ನಿರ್ಣಯ ಯಾವ ರೀತಿ ಇದೆಯೆಂಬುದು ಯಾರಿಗೂ ತಿಳಿದಿಲ್ಲ. ಆದರೆ ಆಗುತ್ತೆ ಎನ್ನುವುದು ಸಾರ್ವಕಾಲಿಕ ಸತ್ಯ. ಗ್ರಾಮಸ್ಥರೆಲ್ಲ ಈ ಬಗ್ಗೆ ಉತ್ಸುಕತೆಯಿಂದ ಕಾಯುತ್ತಿದ್ದು ಎಲ್ಲರು ಒಂದು ಕಡೆ ಸೇರಿ ಈ ಬಗ್ಗೆ ಚರ್ಚಿಸಲು ಮಾತ್ರ ಬಾಕಿಯಿರುತ್ತದೆ. ಇಲ್ಲಿನ ಪಳೆಯುಳಿಕೆಗಳಾದ ದೈವಗಳ ದೈವಸ್ಥಾನ, ಬೈದೇರುಗಳ ಗರಡಿ, ದಂಬೆಕಲ್ಲು, ಶಕ್ತಿಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಹೊರಗಿನಿಂದ ಅಲ್ಪಸ್ವಲ್ಪ ಕಾಣುತ್ತಿದ್ದು ಚಿತ್ರಣವನ್ನು ನೋಡುವಾಗ ಮೈ ರೋಮಾಂಚಣಗೊಳ್ಳುತ್ತದೆ. ಇಂದಿಗೂ ಅಲ್ಲಿರುವ ಶಕ್ತಿಗಳು ಭಕ್ತರ ಬರುವಿಕೆಗೆ ಕಾದಿದೆಯೋ ಎನ್ನುವಂತೆ ಭಾಸವಾಗುತ್ತಿದೆ.
ಕಾಪು , ಮೇ. 27 : ಸರಕಾರದಿಂದ ಕೊರೊನ ಸೋಂಕಿತ ವ್ಯಕ್ತಿ ಡಿಸ್ಚಾರ್ಜ್ ಬಗ್ಗೆ ಹೊಸ ಮಾರ್ಗಸೂಚಿ
Posted On: 27-05-2020 11:21PM
ಕಾಪು, ಮೇ 27: ಕೊರೋನ ಪರೀಕ್ಷಾ ವರದಿಯಲ್ಲಿನ ತಾಂತ್ರಿಕ ಗೊಂದಲದಿಂದ ಸೋಂಕಿತ ಉಡುಪಿ ಜಿಪಂ ಸ್ವಚ್ಛತಾ ಅಭಿಯಾನ ವಿಭಾಗದ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನನ್ನು ವರದಿ ಬಂದ ಎರಡು ದಿನಗಳ ಬಳಿಕ ಇಂದು ಮಧ್ಯಾಹ್ನ ವೇಳೆಗೆ ಉದ್ಯಾವರ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೇ 17ರಂದು ರೋಗದ ಲಕ್ಷ್ಮಣಗಳು ಕಂಡುಬಂದಿದ್ದು, ಮೇ 19ಕ್ಕೆ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೇ 24ರಂದು ಇವರ ವರದಿ ಪಾಸಿಟಿವ್ ಎಂಬುದಾಗಿ ಬಂದಿತ್ತು. ಆದರೆ ಫಲಿತಾಂಶ ಬರುವ ಸಮಯದಲ್ಲಿ ಇವರಲ್ಲಿ ಯಾವುದೇ ರೋಗದ ಲಕ್ಷ್ಮಣಗಳು ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಟ್ರೂನಟ್ ಯಂತ್ರದ ಮೂಲಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ನೆಗೆಟಿವ್ ಎಂಬುದಾಗಿ ವರದಿ ಬಂದಿತ್ತು. ಈ ತಾಂತ್ರಿಕ ಗೊಂದಲ ಮತ್ತು ಆ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿದರೆ ಸೋಂಕು ತಗಲಬಹುದು ಎಂಬ ಕಾರಣಕ್ಕಾಗಿ ಅವರನ್ನು ಮನೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಮೇ 27ರಂದು ಮತ್ತೊಮ್ಮೆ ಅವರ ಗಂಟಲು ದ್ರವದ ಪರೀಕ್ಷೆಯನ್ನು ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸ ಲಾಗುತ್ತಿದೆ. ವರದಿಯಲ್ಲಿ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ದಾಖಲಿಸ ಲಾಗುವುದು ಮತ್ತು ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾಗು ವುದು ಎಂದು ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ. ಈ ಮಧ್ಯೆ ಈ ವ್ಯಕ್ತಿ ಈಗಾಗಲೇ ಸೋಂಕಿತ ಎಂಬುದಾಗಿ ಗುರುತಿಸಿ ಕೊಂಡಿರುವುದರಿಂದ ಸ್ಥಳೀಯರು ಆತಂಕ ಪಡಬಾರದು ಎಂಬ ಕಾರಣಕ್ಕೆ ಇಂದು ಮಧ್ಯಾಹ್ನ ವೇಳೆ ಅವರನ್ನು ಕೋವಿಡ್ ಆಸ್ಪತ್ರೆಯ ಬದಲು ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದ ಆದೇಶ ದಂತೆ ಸರಕಾರಿಗುಡ್ಡೆಯಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಸಂಬಂಧ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿಸ್ಚಾರ್ಜ್ ಬಗ್ಗೆ ಹೊಸ ಮಾರ್ಗಸೂಚಿ ಮೇ 26ರಂದು ಸರಕಾರದಿಂದ ಬಂದ ಹೊಸ ಮಾರ್ಗಸೂಚಿ ಪ್ರಕಾರ, ಯಾವುದೇ ರೋಗದ ಲಕ್ಷ್ಮಣಗಳಿಲ್ಲದೆ ಪಾಸಿಟಿವ್ ಬಂದ ವ್ಯಕ್ತಿಯನ್ನು ಏಳನೇ ದಿನಕ್ಕೆ ಮತ್ತೆ ಪರೀಕ್ಷಿಸಿದಾಗ ನೆಗೆಟಿವ್ ಬಂದರೆ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ಅದೇ ರೀತಿ ರೋಗದ ಲಕ್ಷ್ಮಣಗಳೊಂದಿಗೆ ಪಾಸಿಟಿವ್ ಬಂದ ವ್ಯಕ್ತಿಯಲ್ಲಿ ಏಳನೇ ದಿನಕ್ಕೆ ಯಾವುದೇ ರೋಗದ ಲಕ್ಷ್ಮಣ ಗಳು ಇಲ್ಲದಿದ್ದರೆ, 10ನೆ ದಿನಕ್ಕೆ ಪರೀಕ್ಷಿಸಿ, ನೆಗೆಟಿವ್ ಬಂದರೆ ಅಂತವರನ್ನು ಸಹ ಬಿಡುಗಡೆ ಮಾಡಬಹುದಾಗಿದೆ. ಒಂದು ವೇಳೆ ಸರಕಾರಿಗುಡ್ಡೆ ವ್ಯಕ್ತಿಯ ಈಗ ಕಳುಹಿಸಿರುವ ವರದಿ ನೆಗೆಟಿವ್ ಬಂದರೆ, ಮನೆಗೆ ಕಳುಹಿಸಲು ಈ ಹೊಸ ಮಾರ್ಗಸೂಚಿಯಂತೆ ಅವಕಾಶ ಇದೆ ಎಂದು ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಜೂನ್ 1 ರಿಂದ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನದ ಅವಕಾಶವಿದೆ
Posted On: 27-05-2020 01:14AM
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಆಗಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಜೂನ್ 1ರಿಂದಲೇ ಆರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿರುವ ಸುಮಾರು 36,000 ದೇವಾಲಯಗಳು ಸೋಮವಾರದಿಂದ ಬಾಗಿಲು ತೆರೆಯಲಿವೆ. ಎಲ್ಲಾ ದೇವಾಲಯಗಳಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಭಕ್ತರಿಗೆ ದೇವರ ದರ್ಶನ ಹಾಗೂ ಸೇವೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ದೇವಸ್ಥಾನಗಳನ್ನು ತೆರೆಯುವಂತೆ ಭಕ್ತರಿಂದ ಒತ್ತಡ ಬಂದಿತ್ತು. ಈ ಕುರಿತು ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದಾಗ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲೀಗ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಆದರೆ ದೇವಸ್ಥಾನಗಳಲ್ಲಿ ಜಾತ್ರೆ ಹಾಗೂ ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ. ಇನ್ನು ಭಕ್ತರ ಅನುಕೂಲಕ್ಕಾಗಿ ರಾಜ್ಯದ 52 ದೇವಸ್ಥಾನಗಳಲ್ಲಿ ಆನ್ ಲೈನ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಭಕ್ತರು ತಮ್ಮ ಸೇವೆಗಳನ್ನು ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದ್ದು, ಇದರಿಂದಾಗಿ ಭಕ್ತರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ನಾಳೆಯಿಂದಲೇ ಆನ್ ಲೈನ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಕಾಪು : ನಾಳೆಯಿಂದ ತಾಲೂಕಿನ ಎಲ್ಲಾ ಸೆಲೂನ್'ಗಳು ಕಾರ್ಯ ನಿರ್ವಹಿಸಲಿವೆ
Posted On: 26-05-2020 10:14PM
ಕೊರೊನಾ ಸೋಂಕಿತ ಜಿಲ್ಲಾ ಪಂಚಾಯತ್ ಸಿಬ್ಬಂದಿ ಕಟಪಾಡಿಯ ಸೆಲೂನ್ ಗೆ ಹೋಗಿದ್ದರಿಂದ ಸಾರ್ವಜನಿಕರು ಆತಂಕಗೊಂಡ ಹಿನ್ನಲೆಯಲ್ಲಿ ಕಾಪು ವಲಯದ ಸೆಲೂನ್ ಗಳು ಮೇ 26 ರಂದು ಬಂದ್ ಮಾಡಲಾಗಿತ್ತು ಮತ್ತೆ ವೈದ್ಯರ ಸಲಹೆಯ ಮೇರೆಗೆ ಮೇ 27ರಿಂದ ತೆರಯಲು ನಿರ್ಧರಿಸಿದ್ದಾರೆ ಕೊರೊನಾ ಸೋಂಕಿತಾ ಜಿಲ್ಲಾ ಪಂಚಾಯತ್ ಸಿಬ್ಬಂದಿ ಕಟಪಾಡಿಯ ಸೆಲೂನ್ ಒಂದರ ಸಂಪರ್ಕಕ್ಕೆ ಬಂದಿದ್ದು ಸಾರ್ವಜನಿಕರು ಆತಂಕ ಗೊಂಡಿದ್ದರು. ಈ ಹಿನ್ನೆಲೆ ಸೆಲೂನ್ ಗಳನ್ನು ಬಂದ್ ಮಾಡಲು ಕಾಪು ಸವಿತಾ ಸಮಾಜ ನಿರ್ಧರಿಸಿತ್ತು. ನಿನ್ನೆ ಸಂಜೆ ಸಭೆ ನಡೆಸಿ ಸೆಲೂನ್ ಗಳನ್ನು ಬಂದ್ ಮಾಡಲು ತೀರ್ಮಾನಿಸಿದ್ದರು. ಇಂದು ಕಾಪು ತಾಲೂಕಿನ ಎಲ್ಲ ಸೆಲೂನ್ ಗಳನ್ನು ಬಂದ್ ಮಾಡಿದ್ದು ಈ ಕುರಿತು ವೈದ್ಯರ ಸಲಹೆಯ ಮೇರೆಗೆ ಸವಿತಾ ಸಮಾಜದ ಮುಖಂಡರು ಸೆಲೂನ್ ಗಳನ್ನು ಮತ್ತೆ ತೆರೆಯಲು ತೀರ್ಮಾನಿಸಿದ್ದಾರೆ
ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪ್ರತಿಭೆ ಕಾವ್ಯ ಅಂಚನ್ ಕಾಪು
Posted On: 25-05-2020 09:34AM
ಯಾಕೋ ಬಹಳ ದಿನಗಳ ನಂತರ ನಮ್ಮೂರಿನ ಪ್ರತಿಭೆಯನ್ನು ಗುರುತಿಸೋಣ ಅಂತ ಅನಿಸ್ತು ಅದಕ್ಕಾಗಿ ನಾನಿವತ್ತು ಒಂದು ಪ್ರತಿಭೆಯ ಬಗ್ಗೆ ಬರೆಯಲಿಕ್ಕೆ ಹೊರಟಿದ್ದೇನೆ. ಅಂದಹಾಗೆ ಈ ಪ್ರತಿಭೆಯ ಬಗ್ಗೆ ಕೆಲವರು ಕೇಳಿರಬಹುದು ಇನ್ನು ಕೆಲವರು ಕೇಳದೆ ಇರಬಹುದು. ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ನಮ್ಮೂರಿನ ಹೆಮ್ಮೆಯ ಪ್ರತಿಭೆ ಕಾವ್ಯ ಅಂಚನ್ ಕಾಪು. ದಿವಂಗತ ವಿಜಯ ಬಿ ಅಂಚನ್ ಮತ್ತು ಶಕುಂತಲಾ ವಿ ಅಂಚನ್ ದಂಪತಿಗಳ ಎರಡು ಪುತ್ರಿಯರಲ್ಲಿ ಕಾವ್ಯ ಅಂಚನ್ ಮೊದಲಿಗರು ಹಾಗೂ ವೃಂದ ಅಂಚನ್ ಎರಡನೆಯವರು, ಇವರು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾವ್ಯ ಅಂಚನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಂಡತೀರ್ಥ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಉಳಿಯಾರಗೋಳಿ ಕಾಪು ಮತ್ತು ಪ್ರೌಢಶಿಕ್ಷಣವನ್ನು ವಿದ್ಯಾವರ್ಧಕ ಪ್ರೌಢಶಾಲೆ ಪಾಂಗಾಳ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿ ಪೂರ್ಣಗೊಳಿಸಿದರು. ಪ್ರಸ್ತುತ ಕೆನರಾ ಕಾಲೇಜು ಮಂಗಳೂರು ಇಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕಾವ್ಯ ಅಂಚನ್ ಇವರು ಇದುವರೆಗೂ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅವರು ಪಡೆದ ಪ್ರಶಸ್ತಿಗಳು.. ಸುದೀಕ್ಷಾ ಕಿರಣ್ ಸುವರ್ಣ ಇವರು ನಡೆಸಿದ, ಬಿರುವೆರ್ ಕುಡ್ಲ ಹಾಗೂ ಎನ್, ಬಿ ಮಾಡೆಲ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆದ ಮಿಸ್ ಬಿಲ್ಲವ 2019 ವಿಜೇತೆ. ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ ಫಸ್ಟ್ ರನ್ನರ್, ಬೆಂಗಳೂರಿನಲ್ಲಿ ವಿಜಯಕರ್ನಾಟಕದ ನೇತೃತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಕರ್ನಾಟಕದ ಎಲ್ಲಾ ಜಿಲ್ಲೆಗಳ ಒಟ್ಟು 36 ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದರು, ಆಯ್ಕೆಯಾದ 36 ಸ್ಪರ್ಧಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಕಾವ್ಯ ಅಂಚನ್ ಕೂಡ ಒಬ್ಬರಾಗಿದ್ದರು, ಸ್ಪರ್ಧೆಯ ದ್ವಿತೀಯ ಬಹುಮಾನವನ್ನು ಸ್ಯಾಂಡಲ್ವುಡ್ ಸ್ಟಾರ್ ನಟರಾದ ಶ್ರೀಮುರಳಿ, ರಿಷಬ್ ಶೆಟ್ಟಿ, ಅನುಪ್ ಭಂಡಾರಿ, ಹಾಗೂ ರಾಗಿಣಿ ಇವರಿಂದ ವಿಜಯ ಕರ್ನಾಟಕ ನವತಾರೆ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗ್ರಾವಿಟಿ ಡ್ಯಾನ್ಸ್ ಕ್ರಿವ್ ಕಾಪು ಇದರ ಸದಸ್ಯೆಯಾಗಿದ್ದು ಹತ್ತು ಹಲವಾರು ಕಡೆಗಳಲ್ಲಿ ನಡೆದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಡೆಲ್ಲಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ನೃತ್ಯ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವ ಇವರು ನೃತ್ಯ ನಿರ್ದೇಶನವನ್ನು ಕೂಡ ಮಾಡುತ್ತಾರೆ. ಕಳೆದ ಐದಾರು ವರ್ಷಗಳಿಂದ ಹಲವಾರು ಶಾಲೆಯ ಮಕ್ಕಳಿಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನವನ್ನು ಮಾಡುತ್ತಿದ್ದಾರೆ. ಕಾಪು ಹೊಸ ಮಾರಿಗುಡಿ ಹತ್ತಿರದಲ್ಲಿ ಇವರ ಮನೆ ಇರುವುದರಿಂದ, ಕಾಪು ಮಾರಿಯಮ್ಮನನ್ನು ಆರಾಧ್ಯ ದೇವರಾಗಿ ಪೂಜಿಸುತ್ತಾರೆ, ಇನ್ನು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ಕೊರಗಜ್ಜನಿಗೆ ಭಕ್ತಿಯಿಂದ ಕೈ ಮುಗಿಯುತ್ತಾರೆ, ಕುಲದೇವರಾದ ಬೆರ್ಮೆರ್ ಬೈದೆರ್ಲು ಆಶೀರ್ವಾದವು ಸದಾ ಅವರ ಮೇಲಿದೆ ಅನ್ನುತ್ತಾರೆ.. ಇನ್ನು ಇವರು ಮಾಡಿರುವ ಸಾಧನೆ ಬಗ್ಗೆ ಕೇಳಿದರೆ, ಗುರುಹಿರಿಯರ ದೈವ-ದೇವರ ಭಯಭಕ್ತಿಯಿಂದ ಮತ್ತು ನಾವು ಮಾಡುವ ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ ಅನ್ನುತ್ತಾರೆ, ದೈವ ದೇವರ ಅನುಗ್ರಹದಿಂದ ಗುರು-ಹಿರಿಯರ ಆಶೀರ್ವಾದದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರ ಬೆಳೆಯಲಿ ಎಂದು ಆಶಿಸುತ್ತೇನೆ. ಬರಹ : ✍ ವಿಕ್ಕಿ ಪೂಜಾರಿ ಮಡುಂಬು
ಎಲ್ಲೂರಿನ ಶಿಕ್ಷಕ ವೈ. ವಿ .ಸುಬ್ಬರಾವ್ ಇನ್ನಿಲ್ಲ
Posted On: 25-05-2020 08:07AM
ಎಲ್ಲೂರು , ಮೇ 24 : ಎಲ್ಲೂರಿನ ನಿತ್ಯ ಸಹಾಯ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಅವಧಿಗೆ ಶಿಕ್ಷಕರಾಗಿ , ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದ್ದ ಜನಾನುರಾಗಿ ಶಿಕ್ಷಕ ವೈ.ವಿ .ಸುಬ್ಬರಾವ್ (83) ಅವರು ಮೇ 23 ರಂದು ಅಲ್ಪಕಾಲದ ಅಸೌಖ್ಯದಿಂದ ಎಲ್ಲೂರಿನ ಸ್ವಗೃಹ 'ಧವಳ'ದಲ್ಲಿ ನಿಧನರಾದರು . ಅವರು ಪತ್ನಿ , ಓರ್ವ ಪುತ್ರಿ , ಇಬ್ಬರು ಪುತ್ರರನ್ನು ಹಾಗೂ ಬಹು ಸಂಖ್ಯೆಯ ಶಿಷ್ಯರನ್ನು ಅಗಲಿದ್ದಾರೆ . ಐವತ್ತೆಂಟು ವರ್ಷಗಳಷ್ಟು ಹಿಂದೆ ಪ್ರಾರಂಭವಾಗಿದ್ದು ಈ ಪರಿಸರದಲ್ಲಿ ರಚನಾತ್ಮಕ ಕೆಲಸಗಳಿಂದ ಹಾಗೂ ಮಾದರಿ ಕಾರ್ಯವೈಖರಿಗಳಿಂದ ಪ್ರಸಿದ್ಧವಾಗಿದ್ದ ,ಹಲವು ಸಾಧಕರನ್ನು - ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ ಎಲ್ಲೂರು ಯುವಕ ಮಂಡಲದ ಸ್ಥಾಪಕ ಪದಾಧಿಕಾರಿಗಳಲ್ಲೊಬ್ಬರಾಗಿದ್ದ ಸುಬ್ರಾಯರು ಮಂಡಲದಲ್ಲಿ ಹಲವು ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸಿದ್ದರು . ಯುವಕ ಮಂಡಲದ ಸಹ ಸಂಸ್ಥೆಯಾಗಿ 1972ರಲ್ಲಿ ಸಂಘಟಿತವಾದ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಕಲ್ಪನೆ ಮತ್ತು ಉಪಕ್ರಮದಲ್ಲಿ ಶ್ರಮಿಸಿದವರು. ಸ್ಥಳೀಯ ಹವ್ಯಾಸಿ ಕಲಾವಿದರಿಗೆ ಮಾದರಿ ಹಿರಿಯ ಕಲಾವಿದರಾಗಿದ್ದರು. ಸುಬ್ರಾಯರು ಎಲ್ಲೂರಿನ ವಿಶ್ವೇಶ್ವರ ದೇವಳದಲ್ಲಿ ಆಕಾಲದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಪ್ರಸಿದ್ಧ ಅರ್ಥವಾದಿ ಪೊಲ್ಯ ದೇಜಪ್ಪ ಶೆಟ್ಟಿಯವರ ಗರಡಿಯಲ್ಲಿ ಪಳಗಿದ್ದ ಸಾಂಪ್ರದಾಯಿಕ ಶೈಲಿಯ ಅರ್ಥವಾದಿಯಾಗಿ ಹೆಸರುವಾಸಿಯಾಗಿದ್ದರು . ಪಂಚಾಕ್ಷರೀ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿಯೂ ಪರಿಶ್ರಮ ಸಾಧಿಸಿದ್ದರು .ಪಂಚಾಕ್ಷರೀ ಮಕ್ಕಳ ಮೇಳಕ್ಕೂ ಪ್ರೋತ್ಸಾಹ ಕೊಡುತ್ತಿದ್ದರು . ಸುಬ್ರಾಯರ ನಿಧನಕ್ಕೆ ಎಲ್ಲೂರಿನ ಯುವಕ ಮಂಡಲ , ಪಂಚಾಕ್ಷರಿ ಯಕ್ಷಗಾನ ಮಂಡಳಿ ಮತ್ತು ಮಕ್ಕಳ ಮೇಳಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ .
ಪತ್ತನಾಜೆಯ ಸಂದರ್ಭದಲ್ಲಿ ಕೆ ಎಲ್ ಕುಂಡಂತಾಯರಿಂದ ಕೃಷಿ ಸಂಸ್ಕೃತಿಯ ಪರಿಚಯ
Posted On: 24-05-2020 11:41AM
"ಪತ್ತನಾಜೆ' ಪೂರ್ವೋತ್ತರ" 'ಪೃಥ್ವೀ ಗಂಧವತೀ' 'ಪತ್ತನಾಜೆ' ಎಂದರೆ ಆಟ. ಕೋಲ, ಬಲಿ, ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ . ಆದರೆ ಸಾಕು ಸಂಭ್ರಮ - ಗೌಜಿ ಗದ್ದಲ , ಉತ್ಸವಗಳ ಗುಂಗಿನಿಂದ ಹೊರಗೆ ಬಾ.....ತೊಡಗು... ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ . ಆಚರಣೆಗಳಿಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ . ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ .ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ .ವೃಷಭ ಎಂದರೆ ಬೇಶ . 'ಬೇಶ' ತಿಂಗಳು ತನ್ನ ವಿಶೇಷಗಳಿಂದ , ಪುರಾತನ ಒಪ್ಪಿಗೆಗಳೊಂದಿಗೆ ಬಹಳ ಮುಖ್ಯ ತಿಂಗಳು . 'ಬೇಶದ ತನು - ಬೇಶದ ತಂಬಿಲ' ತುಳುವರಿಗೆ ಆಚರಣೆಗಳ ಪರ್ವಕಾಲ .'ಬೆನ್ನಿ' ಅಥವಾ 'ಬೇಸಾಯ'ಕ್ಕೆ ತೊಡಗುವ ಮುನ್ನ ತಮ್ಮ ಮೂಲಸ್ಥಾನಗಳಿಗೆ ಹೋಗಿ ಭೂಮಿ ಪುತ್ರನಾದ ಈ ನೆಲದ ಸರ್ವಾಧಿಕಾರಿ 'ನಾಗನಿಗೆ' - ತನು ಮಯಿಪಾದ್ ತಂಬಿಲಕಟ್ಟಾದ್ , ದೈವಗಳಿಗೆ ಭೋಗ ಕೊಟ್ಟು ಬಂದು ಬೇಸಾಯಕ್ಕೆ ಆರಂಭಿಸುವ ಸಂಪ್ರದಾಯ ತುಳುವರದ್ದಾಗಿತ್ತು. ಈಗ ಕಾಲ ಬದಲಾಗಿದೆ , ಮನಸ್ಸು ಬಂದಾಗ 'ಮೂಲತಾನ'ಗಳಿಗೆ ಹೋಗಿ 'ನಾಗ - ದೈವ'ಗಳಿಗೆ ಸೇವೆ ಸಲ್ಲಿಸುವ ಆರ್ಥಿಕ ಸಬಲತೆ ಇದೆ - ಸ್ವಂತ ವಾಹನ ಸೌಲಭ್ಯಗಳಿವೆ . ಬದಲಾಗುತ್ತಿರುವ ಕಾಲ - ಸಂದರ್ಭ - ಮನೋಧರ್ಮಗಳಿಂದಾಗಿ ತಮ್ಮ ಮೂಲಸ್ಥಾನ ತೊರೆದು ಬದುಕುಕಟ್ಟುವ ಉದ್ದೇಶದಿಂದ ಬೇಸಾಯದ ಅವಕಾಶ ಬಯಸಿ ದೂರದ ಪ್ರದೇಶಗಳಿಗೆ ಹೋಗಿ ಬೇಸಾಯದ ಜೀವನ ಆರಂಭಿಸಿದ್ದ ಮಾನವ ಮನೋಧರ್ಮಕ್ಕೆ ಶತಮಾನಗಳೇ ಸಂದು ಹೋದುವು. ಈ ಪರಿಸ್ಥಿತಿಯಲ್ಲೂ ಬೇಸಾಯಕ್ಕೆ ಆರಂಭಿಸುವ ಮುನ್ನ ಮೂಲಕ್ಕೆ ಹೋಗುವುದು ಶಿಷ್ಟಾಚಾರವಾಯಿತು . ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಲಕ್ಕೆ ಸಂದರ್ಶನ ನೀಡುವ ಆಸ್ತಿಕರು ಬೇಶದಲ್ಲಿ ಖಂಡಿತ ಹೋಗುತ್ತಾರೆ . ಅದು ಪತ್ತನಾಜೆಯ ಆಸುಪಾಸಿನಲ್ಲಿರುತ್ತದೆ . ಮಕರ - ಪುಯಿಂತೆಲ್ ತಿಂಗಳ ಕೊನೆಯ ಮೂರು ದಿನಗಳ "ಕೆಡ್ಡಸ" ಆಚರಣೆಯಲ್ಲಿ ಭೂಮಿದೇವಿ ಪುಷ್ಪವತಿಯಾದಳು ಎಂಬ ನಂಬಿಕೆ ನಮ್ಮದು .ಅಂದರೆ ನಿಸರ್ಗದಲ್ಲಿ ಅದ್ಭುತ ಬದಲಾವಣೆಯಾಗುವ ಕಾಲವದು .ಹೆಣ್ಣು ಮಗಳು 'ಪುಷ್ಪವತಿ' ಯಾದಳೆಂದರೆ 'ಫಲವತಿ'ಯಾಗಲು ಸಿದ್ಧಳಾದಳು ಎಂದಲ್ಲವೇ ಅರ್ಥ . ಪುಯಿಂತೆಲ್ - ಮಕರ ತಿಂಗಳಲ್ಲೆ ಪ್ರಕೃತಿ ಬದಲಾಗಲು ತೊಡಗುತ್ತದೆ , ಕೃಷಿಯ ಸಣ್ಣ ಪುಟ್ಟ ತಯಾರಿ ನಡೆಯಲಾರಂಭವಾಗುತ್ತದೆ . 'ಮಾಯಿ - ಕುಂಭ' ತಿಂಗಳು ಮುಗಿಯುತ್ತಿರುವಂತೆ 'ಸುಗ್ಗಿ - ಮೀನ' ತಿಂಗಳು . ಬೆಳೆದ ಗೆಣಸು ಮುಂತಾದುಗಳನ್ನು ಅಗೆದು ತೆಗೆಯದಿದ್ದರೆ ಅವು 'ಮಾಯಿ ತಿಂಗಳಲ್ಲಿ ಮಾಯವಾಗುತ್ತವಂತೆ" . ಹೀಗೊಂದು ಒಡಂಬಡಿಕೆ . ಮುಂದೆ ಹಂತಹಂತವಾಗಿ ಬೇಸಾಯಕ್ಕೆ ಅಣಿಯಾಗುವ ರೈತ ಸುಗ್ಗಿ ತಿಂಗಳು ಮುಗಿದು ಪಗ್ಗು ತಿಂಗಳ 'ಮೊದಲ ದಿನ - ತಿಂಗೊಡೆ' ಮೊದಲ ಹಬ್ಬ ಯುಗಾದಿ ಅಥವಾ ಇಗಾದಿ - ವಿಷು ಆಚರಿಸುತ್ತಾನೆ .ಇಗಾದಿ ಆಚರಣೆ ಸರಳವಾದುದು ,ಚೌತಿ , ದೀಪಾವಳಿಗಳಂತೆ ಸಂಭ್ರಮಗಳಿಲ್ಲ .ಆದರೆ ಕೃಷಿಕನಿಗೆ "ಪುಂಡಿಬಿತ್ತ್ ಪಾಡುನ - ನಾಲೆರು ಮಾದಾವುನ" ಕೃಷಿ ಚಕ್ರವನ್ನು ಮತ್ತೆ ಆರಂಭಿಸುವ ಕ್ರಮವಿದೆ . ಮುಂದೆ 'ಪಗ್ಗು ತಿಂಗಳ ಹದಿನೆಂಟು ಹೋಗುವ ದಿನ' ತನ್ನ ಕೃಷಿ ಭೂಮಿಗೆ ಬೇಕಾಗುವಷ್ಟು 'ನೇಜಿ' ಹಾಕುವ ಸಾಂಪ್ರದಾಯಿಕ ಕ್ರಮವಿತ್ತು . ಕೃತ್ತಿಕಾ ಮಳೆಯ ಕಾಲ ಆರಂಭವಾಗುತ್ತದೆ. ಈ ಮಳೆ ಬರಬಾರದು "ಕಿರ್ತಿಕೆ ಕಾಯೊಡು"- ಕೃತ್ತಿಕೆಯ ಬಿಸಿಲಿಗೆ ಭೂಮಿ ಸುಡಬೇಕು - ಬಿಸಿಗೆ ಭೂಮಿ 'ಬಿರಿಯ' ಬೇಕು. ಭಾಗೀರಥೀ ಜನ್ಮದಿನ' ಒದಗಿಬರುತ್ತದೆ. ಮಳೆಬಂದಾಗ ಭೂಮಿ ತನ್ನೊಳಗೆ ಮಳೆ ನೀರು ಇಳಿಸಿಕೊಂಡು - ಹಾಕುವ ಗೊಬ್ಬರ ಮತ್ತು ಸಿದ್ಧಗೊಳಿಸಿದ ಸುಡುಮಣ್ಣುಗಳಿಂದಾಗಿ ( ತೂಟಾನ್ - ತೂಂಟಾನ್) ಫಲವತ್ತಾದ ಕ್ಷೇತ್ರವಾಗುತ್ತದೆ , ಮುಂದೆ ಬೀಜಾಂಕುರವಾದಾಗ ಭೂಮಿದೇವಿ ತನ್ನ ಫಲವಂತಿಕೆಯನ್ನು ವ್ಯಕ್ತಗೊಳಿಸುತ್ತಾಳೆ . ಬಿಸಿಲ ಬೇಗೆಗೆ ಸುಟ್ಟ ಗದ್ದೆಗೆ ಮೊದಲ ಮಳೆ ನೀರು ಬಿದ್ದಾಗ ಒಂದು ಅಪೂರ್ವ ಪರಿಮಳ ಭೂಗರ್ಭದಿಂದ ಹೊರಬರುತ್ತದೆ . ಅದಕ್ಕಲ್ಲವೇ "ಪೃಥ್ವೀ ಗಂಧವತೀ" ಎಂದರು ನಮ್ಮ ಪೂರ್ವಸೂರಿಗಳು .ಇದು ಮಣ್ಣಿನ ಪರಿಮಳ ,ಇದೇ ಕಾರಣವಾಗಿ ಬೆನ್ನಿ - ಬೇಸಾಯ ಸಮೃದ್ಧವಾಗಿತ್ತು ಒಂದು ಕಾಲದಲ್ಲಿ . ಈಗ ಮಣ್ಣಿಗೆ ಅಥವಾ ಪೃಥ್ವಿಗೆ ಗಂಧವಿದೆಯಾ ...ಅದು ಅಷ್ಟು ಸುವಾಸನೆಯುಳ್ಳದ್ದಾ ...ಎಂದು ಕೇಳುವವರಿದ್ದಾರೆ . ಆದರೆ ಬೇಸಾಯವೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಣ್ಣಿನ ಪರಿಮಳ ಗ್ರಹಿಸುತ್ತಿದ್ದ ಮಾನವ .ಆಗ ಅದೇ ಸುಗಂಧವಾಗಿತ್ತು , ಏಕೆಂದರೆ ಭೂಮಿ ತಾಯಿಯಾಗಿದ್ದಳು .ಜಡವಾದ ಭೂಮಿಯೊಂದಿಗೆ ಎಂತಹ ಭಾವನಾತ್ಮಕ ಸಂಬಂಧ. ಹಾಗೆ ಬಂದಿರಬೇಕು "ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ" ಎಂಬ ಗಾದೆ . ಪತ್ತನಾಜೆ ಮುಗಿಸಿ ಬೇಸಾಯಕ್ಕೆ ಹೊರಡುವ ಸಂದರ್ಭ ಭೂಮಿ ,ಬೇಸಾಯ , ನಮ್ಮ - ಮಣ್ಣಿನ ಸಂಬಂಧ ಮಣ್ಣಿನ ಸತ್ಯದ ದರ್ಶನವಾಗಲು ಅಥವಾ 'ಸತ್ಯ ನೆಗತ್ತ್ ದ್' ತೋಜೊಡ್ಡ ' ಪತ್ತನಾಜೆ ಪರ್ವಕಾಲ , ಸುಸಂದರ್ಭ . ಇನ್ನು ನಮಗೆ "ಬೆನ್ನಿದ ಮಗೆ" - ಬೇಸಾಯಗಾರ ಸಿಗುವುದು ಆಟಿ ತಿಂಗಳಲ್ಲಿ . ಬಳಿಕ ಅಷ್ಟಮಿ ,ಚೌತಿ ಆಚರಣೆಗಳಲ್ಲಿ . ಅನಂತರ ತೆನೆಕಟ್ಟುವ ಸಂಭ್ರಮದಲ್ಲಿ , ನವರಾತ್ರಿಯ ವೇಳೆ .ಆದರೆ ನಗುಮೊಗದಿಂದ ಬೇಸಾಯಗಾರ ಮುಖಾಮುಖಿಯಾಗುವುದು ದೀಪಾವಳಿಯ ಗೌಜಿ ಗದ್ದಲದಲ್ಲಿ ಬೆಳಗುವ ಸೊಡರಿನಲ್ಲಿ ,ಆಗ ಧಾನ್ಯಲಕ್ಷ್ಮೀ ಮನೆ ತುಂಬಿರುತ್ತಾಳೆ .ಆತ ಸಂತೃಪ್ತನಾಗಿರುತ್ತಾನೆ ."ಕೃಷಿಯಿದ್ದಲ್ಲಿ ದುರ್ಭಿಕ್ಷೆ ಇಲ್ಲವಂತೆ" ಪತ್ತನಾಜೆ ಎಂದು ಆರಂಭಿಸಿ ದೀಪಾವಳಿಯವರೆಗೆ ಹೋಗ ಬೇಕಾಯಿತು . ಭೂಮಿ ,ಕೃಷಿ ಈ ಸಂಬಂಧ ಮತ್ತೆ ಗಾಢವಾಗಬೇಕೆಂಬುದೇ ಆಶಯ .ಹಾಗೆ ಎಲ್ಲಿಂದಲೋ ಹೊರಟು ಬೇಸಾಯಗಾರನಲ್ಲಿ ಮಾತನಾಡಿ ,ನಿಸರ್ಗದ ವಿಸ್ಮಯಗಳನ್ನು ಅವಲೋಕಿಸುತ್ತಾ , ಮಳೆಯ ಅನಿವಾರ್ಯತೆಯನ್ನು ಹೇಳುತ್ತಾ 'ಕೃಷಿ ಸಂಸ್ಕೃತಿ"ಯನ್ನು ಪರಿಚಯಿಸುವ ಪ್ರಯತ್ನಮಾಡಿದೆ . ಬರಹ : ✍️ ಕೆ.ಎಲ್ .ಕುಂಡಂತಾಯ
ಕೋವಿಡ್-19 ಪ್ರಕರಣಗಳನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜು
Posted On: 23-05-2020 03:35PM
ಉಡುಪಿ ಮೇ 23 (ಕರ್ನಾಟಕ ವಾರ್ತೆ) ಉಡುಪಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಇದುವರೆಗೆ 8010 ಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಂಡುಬರುವ ಕೋವಿಡ್ -19 ಪಾಸಿಟಿವ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಗೆ ಇದುವರೆಗೆ , ಮಹಾರಾಷ್ಟçದಿಂದ 7226, ತಮಿಳುನಾಡು ನಿಂದ 74, ತೆಲಂಗಾಣದಿAದ 425, ಆಂಧ್ರಪ್ರದೇಶದಿAದ 43, ಗೋವಾದಿಂದ 53, ಗುಜರಾತ್ ನಿಂದ 42, ಮಧ್ಯಪ್ರದೇಶದಿಂದ 1, ದೆಹಲಿಯಿಂದ 26, ಹರಿಯಾಣದಿಂದ 1, ಚಂಡೀಗಢದಿAದ 1, ಒರಿಸ್ಸಾದಿಂದ 1, ಪಶ್ಚಿಮ ಬಂಗಾಳ 6, ರಾಜಾಸ್ಥಾನ 6, ಪಂಜಾಬ್ 12 , ಕೇರಳ 93 ಸೇರಿದಂತೆ ಒಟ್ಟು 8010 ಮಂದಿ ಅಗಮಿಸಿದ್ದು, ಇವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದು, ಜಿಲ್ಲೆಯ ಬಹುತೇಕ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ ಎಂದು ಡಿಸಿ ತಿಳಿಸಿದರು. ಕ್ವಾರಂಟೈನ್ ಕೇಂದ್ರದಲ್ಲಿರುವವರ ಗಂಟಲು ದ್ರವದ ಮಾದರಿಯನ್ನು, ಪರೀಕ್ಷೆಗೆ ಕಳುಹಿಸಬೇಕಿದ್ದು, ಪರೀಕ್ಷಾ ವರದಿ ಬರುವವರೆಗೂ, 14 ದಿನದ ಅವಧಿ ಮುಗಿದಿದ್ದರೂ ಸಹ ಯಾರನ್ನೂ ಕೇಂದ್ರದಿAದ ಬಿಡುಗಡೆಗೊಳಿಸುವುದಿಲ್ಲ ಎಂದು ಡಿಸಿ ಜಿ.ಜಗದೀಶ್ ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾದ್ಯತೆಯಿದ್ದು, ಇದಕ್ಕಾಗಿ ಈಗಾಗಲೇ ಇರುವ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಜೊತೆಯಲ್ಲಿ ತಾಲೂಕು ಆಸ್ಪತ್ರೆ ಕುಂದಾಪುರದಲ್ಲಿ 125 ಹಾಸಿಗೆಗಳ ಕೋವಿಡ್ ಪ್ರತ್ಯೇಕ ಬ್ಕಾಲ್ ಆರಂಬಿಸಲಾಗಿದ್ದು, ತಾಲೂಕು ಆಸ್ಪತ್ರೆ ಕಾರ್ಕಳದಲ್ಲಿ 75 ಹಾಸಿಗೆಗಳ ಸೌಲಭ್ಯ, ಎಸ್.ಡಿ.ಎಂ ಉದ್ಯಾವರದಲ್ಲಿ 90 ಹಾಸಿಗೆಗಳ ಸೌಲಭ್ಯ, ಭುವನೇಂದ್ರ ಹಾಸ್ಟೆಲ್ ಕಾರ್ಕಳದಲ್ಲಿ 58 ಹಾಸಿಗೆಗಳ ಚಿಕಿತ್ಸಾ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ಕೇಂದ್ರಗಳಿಗೆ ಅಗತ್ಯವಿರುವ ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಚಿಕಿತ್ಸೆಗೆ ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್ ಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಪರಿಕರಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಜಿಲ್ಲೆಯಲ್ಲಿ ಪ್ರಸ್ತುತ ಕೆಎಂಸಿ ಯಲ್ಲಿ ಮಾತ್ರ ಪ್ರಯೋಗಾಲಯ ಇದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಮಾದರಿಯನ್ನು ಪರೀಕ್ಷೆ ಮಾಡಬೇಕಿದ್ದು, ಇದಕ್ಕಾಗಿ ಮಂಗಳೂರಿನ ವೆನ್ಲಾಕ್ , ಕೆಎಂಸಿ ಮತ್ತು ಯೆನಪೋಯ ಹಾಗೂ ಶಿವಮೊಗ್ಗ ಲ್ಯಾಬ್ ಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ ಎಂದು ಡಿಸಿ ಹೇಳಿದರು. ಕ್ವಾರಂಟೈನ್ ಗಳಲ್ಲಿ ಇರುವವರು ಕೇಂದ್ರದಿAದ ಹೊರಬರುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಂತಹವರ ವಿರುದ್ದ ಸೆಕ್ಷನ್ 188 ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು, ಪಾಸ್ ಇಲ್ಲದೇ ಜಿಲ್ಲೆಯನ್ನು ಅಕ್ರಮವಾಗಿ ಪ್ರವೇಶಿಸುವವರ ವಿರುದ್ದ ಎಫ್.ಐ.ಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಕ್ವಾರಂಟೈನ್ ಕೇಂದ್ರಗಳಲ್ಲಿರುವವರಿಗೆ ಮನೆಯಿಂದ ಊಟ ನೀಡಲು ಅವಕಾಶವಿಲ್ಲ ಆದರೆ ತೀರಾ ಅನಿವಾರ್ಯವಿದ್ದಲ್ಲಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಡಿಸ್ಪೋಸಬಲ್ ಕಂಟೇನರ್ ಗಳಲ್ಲಿ ಮಾತ್ರ ಮನೆಯಿಂದ ಊಟ ನೀಡಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಉಪಸ್ಥಿತರಿದ್ದರು.
ಮುಂಗಾರು ವಿಕೋಪ ತಡೆಗೆ ಮುಂಜಾಗ್ರತೆ ವಹಿಸಿ : ಅಪರ ಜಿಲ್ಲಾಧಿಕಾರಿ
Posted On: 22-05-2020 10:03PM
ಉಡುಪಿ ಮೇ 23 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯ ಸಮಯದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಮಾನವ ಜೀವ ಹಾನಿ , ಜಾನುವಾರು ಹಾಗೂ ಆಸ್ತಿ ಹಾನಿಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ವಿಕೋಪ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರ ರಕ್ಷಣೆಗೆ ತುರ್ತಾಗಿ ಸ್ಪಂದಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮುಂಗಾರು ಮಳೆ ವಿಪತ್ತು ನಿರ್ವಹಣೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಚರಂಡಿಗಳಲ್ಲಿನ ಹೂಳು ತೆಗೆದು , ಮಳೆ ನೀರು ಸರಾಗವಾಗಿ ಹರಿದು ಹೋಗುಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ತಮ್ಮ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳ ಕುರಿತು ಸಂಬಂದಪಟ್ಟ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅವುಗಳನ್ನು ತೆರವುಗೊಳಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅಪರ ಜಿಲ್ಲಾಧಿಕಾರಿ, ಪ್ರಾಕೃತಿಕ ವಿಕೋಪ ನಿಧಿಯಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮರ ಕತ್ತರಿಸುವ ಯಂತ್ರಗಳನ್ನು ಒದಗಿಸಲಾಗುವುದು ಎಂದರು. ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ತಮ್ಮ ತಾಲೂಕು ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮತ್ತು ಸ್ಥಳೀಯ ನುರಿತ ಈಜುಗಾರರು, ಮುಳುಗು ತಜ್ಞರ ಪಟ್ಟಿಯನ್ನು ಸರಿಯಾದ ಮೊಬೈಲ್ ಸಂಖ್ಯೆಯೊಂದಿಗೆ ಸಿದ್ದವಾಗಿಟ್ಟುಕೊಂಡು, ತುರ್ತು ಸಂದರ್ಭಗಳಿಗಾಗಿ ಬೋಟುಗಳನ್ನು ಸಿದ್ದವಾಗಿಟ್ಟುಕೊಳ್ಳುವಂತೆ ಮತ್ತು ಹಾಗೂ ವಿಕೋಪ ಸಂದರ್ಭದಲ್ಲಿ ಹಾನಿಯಾದ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ, ನಷ್ಠದ ವರದಿ ಸಿದ್ದಪಡಿಸಿ , ಸಂತ್ರಸ್ಥರಿಗೆ ನಿಗಧಿತ ಅವಧಿಯೊಳಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಸೂಚಿಸಿದರು. ಕಡಲಕೊರೆತ ಸಂಭವಿಸುವ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿ ಈ ಕುರಿತಂತೆ ನಡೆಯುತ್ತಿರುವ ಕಾಮಗಾರಿಗಳ ಕುರಿತು ಎಡಿಬಿ ಮತ್ತು ಬಂದರು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅತ್ಯಗತ್ಯವಾದ ಕ್ರಮ ಕೈಗೊಂಡು ಸಮಸ್ಯೆಗಳು ಬಾರದಂತೆ ಎಚ್ಚರವಹಿಸಿಬೇಕು ಹಾಗೂ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆಗೆಯುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿನ ಸ್ಥಗಿತಗೊಂಡಿರುವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಕಲ್ಲುಕೋರೆಗಳಿಗೆ ಸೂಕ್ತ ತಡೆ ಬೇಲಿ ಹಾಕಿ , ಸೂಚನಾ ಫಲಕ ಹಾಕಿರುವ ಕುರಿತಂತೆ ಪರಿಶೀಲಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿ , ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಕೋರೆಗಳ ಲೈಸೆನ್ಸ್ ರದ್ದುಗೊಳಿಸಿ, ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸುವ ಕುರಿತಂತೆ ಎಲ್ಲಾ ಹೋಬಳಿಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಹಾಗೂ ಗ್ರಾಮ ಮಟ್ಟದಲ್ಲಿ ಸಹ ತುರ್ತು ಕಾರ್ಯಪಡೆ ರಚಿಸಲಾಗುವುದು ಎಂದು ಬಿ.ಸದಾಶಿವ ಪ್ರಭು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಅಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು. ಕಳೆದ ವರ್ಷ ಜಿಲ್ಲೆಯ ವಾಡಿಕೆ ಮಳೆ 4039 ಮಿಮೀ ಆಗಿದ್ದು, 4637 ಮಿ.ಮೀ ಮಳೆ ಆಗಿದೆ, ಈ ವರ್ಷ ಇಂದಿನವರೆಗೆ 57.8 ಮಿಮೀ ಮಳೆ ಆಗಿದ್ದು, 37 ವಿವಿಧ ಹಾನಿ ಪ್ರಕರಣಗಳಲ್ಲಿ 11.32 ಲಕ್ಷ ಹಾನಿ ಸಂಭವಿಸಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಜೆಯ ಸವಿಯಲು ಬನ್ನಿ ಪ್ರವಾಸಿಗರ ಕುತೂಹಲ ಕೆರಳಿಸುವ ಇನ್ನಂಜೆಯ ರೆಂಜಲ ಬಂಡೆಗೆ
Posted On: 21-05-2020 01:31PM
ಉಡುಪಿ ಜಿಲ್ಲೆಯು ಧಾರ್ಮಿಕ ತೀರ್ಥಕ್ಷೇತ್ರಗಳಿಗೆ ಬಲು ಪ್ರಸಿದ್ಧಿ. ಧಾರ್ಮಿಕ ನೆಲೆಗಟ್ಟಿನೊಂದಿಗೆ, ತನ್ನ ಸಹಜ ಸೌಂದರ್ಯದಿಂದ ಮೈಮನಗಳನ್ನು ಸೂರೆಗೊಳ್ಳಬಲ್ಲ, ಅಷ್ಟೊಂದು ಜನಪ್ರಿಯವಲ್ಲದ, ಜನಜಂಗುಳಿಯಿಲ್ಲದ ತಾಣವೊಂದಿದೆ!! ಅದೇ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಅಜಿಲಕಾಡು ಬಳಿಯಿರುವ 'ರೆಂಜಲ' ಬಂಡೆ ಅರ್ಥಾತ್ "ಧನುಷ್ ತೀರ್ಥ". ಹಿಂದೆ ಈ ಬಂಡೆಯ ಸುತ್ತ ರಂಜದ ಹೂವಿನ ಮರಗಳು ಹೆಚ್ಚಾಗಿದ್ದ ಕಾರಣ ಜನರು ಆ ಹೆಸರು ಕೊಟ್ಟಿರಬಹುದು. ಸುಮಾರು 60 ರಿಂದ 70 ಅಡಿ ಎತ್ತರ,150 ಮೀಟರ್ ಉದ್ದ, 40-50 ಅಡಿ ಅಗಲವಾಗಿರುವ ಈ ಏಕಶಿಲಾ ರಚನೆ ಭೂಇತಿಹಾಸದ ಆರಂಭದ ಜ್ವಾಲಾಮುಖಿ ತಣಿದು ನಿರ್ಮಾಣವಾಗಿದೆ. ಇದರ ಮೇಲಿರುವ ಎಂದೂ ಬತ್ತದ ನೀರಿನ ಕೊಳ ಪ್ರಮುಖ ಆಕರ್ಷಣೆಯಾಗಿದೆ. ಧನುಷ್ ತೀರ್ಥವು ದಕ್ಷಿಣ, ಪಶ್ಚಿಮ ಹಾಗೂ ಉತ್ತರ ದಿಕ್ಕುಗಳಲ್ಲಿ ಇನ್ನಂಜೆ ಗ್ರಾಮದ ಮಡುಂಬು ಎಂಬ ಜನವಸತಿ ಪ್ರದೇಶದಿಂದಲೂ , ಪೂರ್ವ ಹಾಗೂ ಆಗ್ನೇಯದಲ್ಲಿ ಮಜೂರು ಗ್ರಾಮದ ಕಲ್ಲುಗುಡ್ಡೆಯೆಂಬ ಪ್ರದೇಶದಿಂದ ಸುತ್ತುವರಿಯಲ್ಪಟ್ಟಿದ್ದು , ಎರಡೂ ಗ್ರಾಮಗಳ ಗಡಿಭಾಗವಾಗಿದೆ. ತಾಲೂಕು ಕೇಂದ್ರವಾದ ಕಾಪುವಿನಿಂದ ಕೇವಲ 4.5 ಕಿ.ಮೀ ದೂರದಲ್ಲಿರುವ ಈ ಬಂಡೆ ಪುರಾತನ ಐತಿಹ್ಯಗಳು, ಸುಂದರ ಕೊಳ, ನಿಗೂಢ ಗುಹೆಗಳು, ಮನೊಹರ ಸೂರ್ಯೋದಯ, ಸೂರ್ಯಾಸ್ತ, ಹಸುರು ಕಾಡು,ಗದ್ದೆ,ತೋಟ,ನದಿಗಳ ವಿಹಂಗಮ ನೋಟಕ್ಕೆ ಪ್ರಸಿದ್ಧಿಯಾಗಿದೆ . ಕರಾವಳಿಯ ಪ್ರಾತಿನಿಧಿಕ ಸೊಬಗು ಇಲ್ಲಿ ಮೈಹೊದ್ದು ಮಲಗಿದೆ..! ಹಿನ್ನೆಲೆ/ಐತಿಹ್ಯ:- ಇತಿಹಾಸ ಪ್ರಸಿದ್ಧ ಕುಂಜಾರುಗಿರಿ ಕ್ಷೇತ್ರದೊಂದಿಗೆ ಈ ಸ್ಥಳವು ತಳುಕು ಹಾಕಿಕೊಂಡಿದ್ದು, ಅಲ್ಲಿ ಉಲ್ಲೇಖಗೊಳ್ಳುವ ಚತುರ್ತೀರ್ಥಗಳಾದ ಗಧಾ,ಬಾಣ,ಪರಶುತೀರ್ಥಗಳಲ್ಲಿ ಇದು ನಾಲ್ಕನೆಯದಾಗಿ ಧನುಷ್ ತೀರ್ಥವೆಂದೇ ಪ್ರಖ್ಯಾತ. ಹಿರಿಯರು ಹೇಳುವ ಐತಿಹ್ಯದ ಪ್ರಕಾರ ತುಂಬಾ ಹಿಂದೆ ದುರ್ಗಾದೇವಿಯು ಈ ಬಂಡೆಯ ಗುಡಿಯಲ್ಲಿ ನೆಲೆಸಿದ್ದು, ಮಹಾಪ್ರವಾಹ ಬಂದಾಗ ಒಂದು ಕಾಲನ್ನು ಇಲ್ಲೂ, ಮತ್ತೊಂದು ಕಾಲನ್ನು ಕುಂಜಾರಿನ ಬೆಟ್ಟದ ಮೇಲೂ ಇಟ್ಟು ಊರನ್ನು, ಜನರನ್ನು ಕಾಪಾಡಿದಳಂತೆ.. ! ಹಾಗೂ ಈ ಸ್ಥಳವನ್ನು ಬಿಟ್ಟು ಕುಂಜಾರುಗಿರಿಯಲ್ಲಿ ನೆಲೆಯೂರಿದಳಂತೆ..! ಇದಕ್ಕೆ ಸಾಕ್ಷಿಯಾಗಿ ಪಾದವನ್ನು ಹೋಲುವ ಗುರುತೊಂದನ್ನು ಜನ ತೋರಿಸುತ್ತಾರೆ. ಇದೇ ಕಥೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಶಿಲಾಗುರುತುಗಳಿದ್ದು, ಒಂದನ್ನು ತುಳಸಿಕಟ್ಟೆಯೆಂದೂ, ಮತ್ತೊಂದನ್ನು 'ಡೋಲು ಸರಿದ ಸ್ಥಳ'ವೆಂದೂ ಹಿಂದೆ ಗುರುತಿಸುತ್ತಿದ್ದರು. ಮಹಾಪ್ರವಾಹದಿಂದ ಪಾರಾಗಲು ಇಲ್ಲಿನ ಮೂಲನಿವಾಸಿ ಪರಿಶಿಷ್ಟ ಕೊರಗ ಸಮುದಾಯದ ಹಿರಿಯರೊಬ್ಬರು ತನ್ನ ಪತ್ನಿಯೊಂದಿಗೆ ಡೋಲಿನೊಳಗೆ ಕುಳಿತು ತೇಲಿದರಂತೆ ! ಇವು ಕಟ್ಟುಕಥೆಗಳೆಂದು ನಕ್ಕು ನಾವು ಸುಮ್ಮನಾಗುವಂತೆ ಇಲ್ಲ...! ಹಿಂದಿನ ಕಾಲದ ಹೆಚ್ಚಿನ ಐತಿಹ್ಯಗಳು ನಮ್ಮ ಪೂರ್ವಿಕರ ಸುಪ್ತಮನಸ್ಸಿನಾಳದಲ್ಲಿ ಗಟ್ಟಿಯಾಗಿ ಕೂತ ಪ್ರಾಚೀನ ಸ್ಮೃತಿಯ ಅನಾವರಣಗಳೇ ಆಗಿರುತ್ತವೆ! ಜಗತ್ತಿನ ಪ್ರತೀ ನಾಗರಿಕತೆಗಳಲ್ಲಿ, ಪುರಾಣಗಳಲ್ಲಿ ನಮಗೆ ಇಂತದ್ದೇ ಮಹಾಪ್ರವಾಹದ ಉಲ್ಲೇಖಗಳು ಮತ್ತೆ, ಮತ್ತೆ ಎದುರಾಗುತ್ತದೆ. ಉದಾಹರಣೆಗೆ ನೋಹ, ಮನು, ವಿಷ್ಣುವಿನ ಮತ್ಸ್ಯಾವತಾರ, ಪರಶುರಾಮರ ತುಳುನಾಡು ಮತ್ತು ಕೇರಳೋತ್ಪತ್ತಿಯ ಪ್ರಸಂಗಗಳು, ಅಟ್ಲಾಂಟಿಸ್ , ದ್ವಾರಕಾ ಮುಳುಗಡೆ, ಸಿಂಧೂ ಸರಸ್ವತಿ ಸಂಸ್ಕ್ರತಿಯ ಅವನತಿ ಇತ್ಯಾದಿ.ಇಲ್ಲಿರುವ ಶಿಲಾಗುರುತುಗಳು ಮಾನವನ ಪ್ರಾಗೈತಿಹಾಸಿಕ ಯುಗದ ಗುರುತುಗಳೂ ಆಗಿರಬಹುದೇನೋ ! ಇಲ್ಲಿಗೆ ಸ್ವಲ್ಪ ದೂರದ ಕಲ್ಲುಗುಡ್ಡೆ ಪ್ರದೇಶದಲ್ಲಿ ,ಅಜ್ಜಿಪಾದೆ' ಎಂಬ ಸ್ಥಳವೊಂದಿದ್ದು ಅಲ್ಲಿ ಕಲ್ಲುಗಳ ಒಂದು ರಾಶಿಯಿದೆ. ಅಲ್ಲಿನ ಹುಡುಗರು ವರ್ಷಕ್ಕೊಮ್ಮೆ ಆ ಕಲ್ಲಿಗೆ ದೋಸೆ ಎಡೆಯಿಟ್ಟು ನಂತರ ಹಂಚಿ ತಿನ್ನುವ ರೂಢಿಯನ್ನು ಪಾಲಿಸುತ್ತಾರೆ. ಆ ಕಲ್ಲುಗಳ ರಾಶಿ ಬೇರೇನೂ ಅಲ್ಲದೆ ಪ್ರಾಚೀನ ಶಿಲಾ ಸಂಸ್ಕೃತಿಯ ಕಾಲದ ಸಮಾಧಿಯಾಗಿರಬಹುದೆಂಬ ಊಹೆ ನನ್ನದು. ಈ ಬಂಡೆಯ ಮೇಲೆ ಹಿಂದೆ ಸಣ್ಣ ಗುಡಿ ಇದ್ದಿರಬೇಕು, ಇದಕ್ಕೆ ಸಾಕ್ಷಿಯಾಗಿ ಸುತ್ತಮುತ್ತ ಕೆಂಪು ಇಟ್ಟಿಗೆ ತುಂಡುಗಳು ಕಾಣ ಸಿಗುತ್ತವೆ. ಈ ಬಂಡೆಯ ಬುಡದಲ್ಲಿ ಸುತ್ತ ಹಲವಾರು ಗುಹೆಗಳಿವೆ. ಇವುಗಳು ಸಾಹಸಿಗಳ ಕುತೂಹಲ ಕೆರಳಿಸಬಲ್ಲವು. ಸಾಮಾನ್ಯವಾಗಿ ಎಲ್ಲರಿಗೂ ಕಾಣ ಸಿಗುವ ಸಣ್ಣಗುಹೆ ಪೂರ್ವ ದಿಕ್ಕಿನಲ್ಲಿ ತಾಳೆಹರುವಿನ ಕೆಳಗಿದೆ. ಇದನ್ನು ಸ್ಥಳೀಯವಾಗಿ "ಪಿಲಿತ ಮಾಟೆ" (ಹುಲಿಯ ಗುಹೆ) ಎಂದೇ ಗುರುತಿಸುತ್ತಾರೆ. ಒಂದು ಕಾಲದಲ್ಲಿ ಈ ಗುಹೆ ವಿಶಾಲವಾಗಿದ್ದಿರಬಹುದು. ಆದರೆ ಈಗ ಮುಳ್ಳುಹಂದಿಯ ಶಿಕಾರಿದಾರರು ಅದನ್ನು ನಿರಂತರ ಅಗೆದು,ಮುಚ್ಚಿ ಒಳಗೆ ಮಣ್ಣು ಸಂಗ್ರಹವಾಗಿದೆ. ಆದರೂ ಹತ್ತು ಜನ ಕೂರಬಹುದಾದಷ್ಟು ಜಾಗವಿದೆ. ಮಳೆಗಾಲದಲ್ಲಿ ಕೆಲವೊಮ್ಮೆ ಇದು ಜುಗಾರಿ ಕಟ್ಟೆಯಾಗಿ ಮಾರ್ಪಾಡಾಗುವುದೂ ಇದೆ. ಆದರೆ ಇದಕ್ಕಿಂತಲೂ ದೊಡ್ಡದಾದ ಎರಡು ಗುಹೆಗಳು ಹಾಗೂ ಅನೇಕ ಕಲ್ಲಾಸರೆಗಳು ಬಂಡೆಯ ಪಶ್ಚಿಮ ಬುಡದಲ್ಕಿ ಕುರುಚಲು ಕಾಡಿನ ಜಿಗ್ಗಿನೊಳಗಿದೆ. ಅವುಗಳಲ್ಲಿ ಆಲದಮರದ ಕೆಳಗಿರುವ ಗುಹೆ ಸುಮಾರು ವಿಶಾಲವಾಗಿದ್ದು 25 ಜನ ಕೂರಬಹುದಾದಷ್ಟು ಜಾಗವಿದೆ. ಈಗ ಇಲ್ಲಿಯೂ ಮಣ್ಣು-ಕಲ್ಲು ರಾಶಿ ಬಿದ್ದಿದೆ. ಇದು ಹಗಲಿನಲ್ಲೂ ಕಗ್ಗತ್ತಲಿನಿಂದ ಕೂಡಿದ್ದು ಅಸಂಖ್ಯಾತ ಸಣ್ಣ ಬಾವಲಿಗಳ ಹಾಗೂ ಮುಳ್ಳುಹಂದಿಗಳ ಆವಾಸವಾಗಿದೆ. ಒಳಗಿನಿಂದಲೇ ಮೇಲೇರಬಹುದಾದ ಎರಡು ಇಕ್ಕಟ್ಟಾದ ಸುರಂಗಗಳು ಕಾಣಸಿಗುತ್ತವೆ. ಇನ್ನೂ ಕೆಲವು ಸಣ್ಣ ಪುಟ್ಟ ಗುಹೆ-ಬಿಲಗಳು ನೈರುತ್ಯ ದಿಕ್ಕಿನಲ್ಲಿವೆ, ಕೇವಲ ಒಬ್ಬ ವ್ಯಕ್ತಿ ತೆವಳಿಕೊಂಡು ಹೋಗಬಹುದಾದಷ್ಟೇ ಇಕ್ಕಟ್ಟು. ಇಲ್ಲಿ ಹೆಬ್ಬಾವು,ನಾಗರಹಾವು,ಮುಳ್ಳುಹಂದಿ, ಕಾಡುಹಂದಿ, ಕಾಡುಬೆಕ್ಕು,ನವಿಲು,ನರಿ,ಮೊಲ,ಉಡಗಳು ಕೆಲವೊಮ್ಮೆ ಕಾಣಸಿಗುತ್ತವೆ. ಇಲ್ಲಿನ ಈಚಲು ಹಾಗೂ ತಾಳೆಮರಗಳಲ್ಲಿ ಪುನುಗುಬೆಕ್ಕು, ಪಾಮ್ ಸಿವೆಟ್ ಗಳು ರಾತ್ರಿ ಗೋಚರಿಸುತ್ತವೆ. ಅಪರೂಪಕ್ಕೆ ಚಿರತೆಗಳೂ ಪ್ರತ್ಯಕ್ಷವಾಗುವುದುಂಟು..! ಇಲ್ಲಿಗೆ ಸಮೀಪದ ಪಾಂಬೂರು,ಪಾದೂರಿನಲ್ಲಿ ಸುಮಾರು ಬಾರಿ ಚಿರತೆಗಳನ್ನು ಸೆರೆಹಿಡಿದುದನ್ನು ಸ್ಮರಿಸಬಹುದು. ಇಲ್ಲೂ ಕಳ್ಳ ಶಿಕಾರಿದಾರರ ಕಾಟ ಇದೆ. ಹಗಲು ಸಂಭಾವಿತರಂತೆ ನಮ್ಮ ನಿಮ್ಮೊಂದಿಗೇ ಇರುವ ಇವರು ಪ್ರಾಣಿಗಳ ದಾರಿ ಪತ್ತೆ ಹಚ್ಚಿ ಉರುಳು ಇಡೋದರಲ್ಲಿ, ಮುಳ್ಳುಹಂದಿಯ ಬಿಲ ಅಗೆಯೋದರಲ್ಲಿ, ಅಪರೂಪಕ್ಕೊಮ್ಮೆ ಅಕ್ರಮ ಕೋವಿಗಳೊಂದಿಗೆ ಗುಂಪಲ್ಲಿ ಕಾಡುಹಂದಿ ಹೊಡೆಯುದರಲ್ಲಿ ನಿಸ್ಸೀಮರು. ನಾವು ಸಣ್ಣವರಿದ್ದಾಗ ಇಲ್ಲಿ ಗಂಧದ ಮರಗಳು ಹೆಚ್ಚಾಗಿದ್ದವು, ಕ್ರಮೇಣ ಅವುಗಳನ್ನು ಯಾವ ರೀತಿ ಖಾಲಿ ಮಾಡಿದ್ರು ಅಂದ್ರೆ! ಇವತ್ತು ಮದ್ದಿಗೆ ಬೇಕೆಂದು ಹುಡುಕಿದರೂ ಒಂದೇ ಒಂದು ಗಂಧದ ಗಿಡ ಸಿಗುವುದಿಲ್ಲ. ನನ್ನ ಅಜ್ಜ,ಅಜ್ಜಿ ಹಾಗೂ ಹಿರಿಯರು ಹೇಳುತ್ತಿದ್ದ ಇಲ್ಲಿಯ ಬೇಟೆ ಹಾಗೂ ಕಳ್ಳ ಭಟ್ಟಿ ಸಾರಾಯಿ ಬೇಯಿಸುವವರ ಕಥೆಗಳು ಇನ್ನೂ ಕಾಡುತ್ತಿವೆ. ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಕಾಡುಪ್ರಾಣಿಗಳು ವ್ಯಾಪಕವಾಗಿದ್ದವಂತೆ..! ಹುಲಿಗಳು ದನಗಳನ್ನು ಮೇಯುವಾಗ ಅಥವಾ ಕೆಲವೊಮ್ಮೆ ನೇರವಾಗಿ ಹಟ್ಟಿಗೇ ನುಗ್ಗಿ ಹಿಡಿಯುತ್ತಿದ್ದುವಂತೆ ! ಚಿರತೆ ಹಾಗೂ ಕತ್ತೆಕಿರುಬಗಳು ಹೆಚ್ಚಾಗಿ ನಾಯಿಗಳನ್ನು, ಕರುಗಳನ್ನು ಹೊತ್ತೊಯ್ಯುತ್ತಿದ್ದುವಂತೆ ! ಇಲ್ಲಿನ ಜನರು ಕಾಡು ಪ್ರಾಣಿಗಳಿಗೆ ಇಟ್ಟ ತುಳು ಹೆಸರುಗಳು ಉಲ್ಲೇಖನೀಯ, ಸಾಮಾನ್ಯ ಹುಲಿಗೆ 'ಪಿಲಿ', ಹೆಬ್ಬುಲಿಗೆ 'ಬಲಿಪೆ', ಚಿರತೆಗೆ 'ಚಿಟ್ಟೆಪಿಲಿ'(ಚುಕ್ಕೆಗಳಿಂದಾಗಿ), ಕತ್ತೆಕಿರುಬನಿಗೆ 'ನಾಯಿಪಿಲಿ'(ಅದರ ಆಕಾರ ನಾಯಿಯಂತೆ), ನಾವು ಸಣ್ಣವರಿದ್ದಾಗ ರಾತ್ರಿ ರಸ್ತೆಯಲ್ಲಿ ಜೋರಾಗಿ ಊಳಿಡುತ್ತಾ ಹೋಗುವ ಒಂಟಿ ಪ್ರಾಣಿಯೊಂದಿತ್ತು, ಅದನ್ನು ಜನರು "ಪಲ್ಲ್ ಕಲ್ಕುನಿ'(ತೋಳ ಊಳಿಡುವುದು) ಎನ್ನುತ್ತಿದ್ದರು. ಆ ಪ್ರಾಣಿ ತೋಳವೇ ಇರಬಹುದು, ಆದರೆ ನಾನು ಎಂದೂ ಅದನ್ನು ನೋಡಿದ್ದಿಲ್ಲ. ಜನರು ಅದನ್ನು ಹುಚ್ಚುಹಿಡಿದ ದೊಡ್ಡ ನರಿಯೆನ್ನುತ್ತಿದ್ದರು. ಕ್ರಮೇಣ ದಟ್ಟಕಾಡು ಕ್ಷೀಣಿಸಿತು, ಜನವಸತಿ ಹೆಚ್ಚಿತು ಮಾನವ-ವನ್ಯ ಪ್ರಾಣಿಗಳ ಸಂಘರ್ಷ ಆರಂಭಗೊಂಡಿತು, ಪ್ರಾಣಿಗಳು ಅರ್ಧ ತಿಂದು ಬಿಟ್ಟ ಆಹಾರಕ್ಕೆ ವಿಷವಿಕ್ಕಿ ಕಾಡು ಪ್ರಾಣಿಗಳ ಸಂಹಾರ ಮಾಡಲಾರಂಭಿಸಿದರು. ಹುಲಿಗಳು, ಕಿರುಬಗಳು ಇಲ್ಲಿಂದ ಶಾಶ್ವತವಾಗಿ ಕಣ್ಮರೆಯಾದವು. ಸ್ವಾತಂತ್ರ್ಯಾನಂತರ ಇಲ್ಲಿನ ಕಾಡುಗಳಲ್ಲಿ ಮಾನವನ ಕಾರುಬಾರು ಆರಂಭವಾಯಿತು. ಅದುವೇ ಕಳ್ಳಭಟ್ಟಿ ಸಾರಾಯಿ ಬೇಯಿಸುವ ಕಾಯಕ. ಆ ಕಾಲದ ಕಳ್ಳ - ಪೊಲೀಸ್ ಕಣ್ಣಮುಚ್ಚಾಲೆಯ ಬಗ್ಗೆ ಅನೇಕ ರಸವತ್ತಾದ ರೋಚಕ ಕಥೆಗಳಿವೆ. ಆದರೆ ಅವುಗಳನ್ನು ಹೇಳಬಲ್ಲ ಒಂದಿಬ್ಬರು ಮಾತ್ರ ಈಗ ಉಳಿದಿದ್ದಾರೆ. ಆಗಿನ ಕಳ್ಳಭಟ್ಟಿ ದಂಧೆಗೆ ಸಾಕ್ಷಿಯಾಗಿ ಇವತ್ತಿಗೂ ಇಲ್ಲಿನ ಗುಹೆಗಳಲ್ಲಿ ಹಳೇ ಮಡಕೆಚೂರುಗಳು, ತಾಮ್ರ ಹಾಗೂ ರಬ್ಬರ್ ಪೈಪಿನ ಅವಶೇಷಗಳು ದೊರೆಯುತ್ತವೆ. ಈ ಬಂಡೆ ಮೇಲಿನ ಪ್ರಮುಖ ಆಕರ್ಷಣೆಯೇ ಸಣ್ಣ ಕೊಳ. ಅದುವೇ ಧನುಷ್ ತೀರ್ಥ. ಪೂರ್ವ ಪಶ್ಚಿಮಕ್ಕೆ ಸುಮಾರು 10 ರಿಂದ 12 ಮೀಟರ್ ಉದ್ದ , 4 .5 ಮೀಟರ್ ಅಗಲ ಹಾಗೂ 10 ಅಡಿಗಳಷ್ಟು ಆಳವಾಗಿದೆ. ಕೊಳದ ಕೆಳಗಿನಿಂದ ಸುರಂಗವಿದೆಯೆಂದು ಹೇಳುತ್ತಾರಾದರೂ , ನಾವು ಚಿಕ್ಕಂದಿನಿಂದಲೂ ಈ ಕೊಳದಲ್ಲಿ ಈಜಾಡಿ ಬೆಳೆದವರು, ಆಳಕ್ಕೆ ಮುಳುಗಿದವರು. ತಳದಲ್ಲಿ ಕೆಸರನ್ನಲ್ಲದೆ ಬೇರೇನೂ ಕಂಡಿಲ್ಲ. ಸುಮಾರು 15 ವರ್ಷಗಳ ಹಿಂದೆ ಒಮ್ಮೆ ಸ್ವಚ್ಛಗೊಳಿಸಲೆಂದು ನೀರು ಖಾಲಿ ಮಾಡಿ ಕೆಸರನ್ನು ಹೊರತೆಗೆದು ಬರಿದು ಮಾಡಿದ್ದರು. ಆಗ ಅಲ್ಲಿ ಯಾವುದೇ ಸುರಂಗ ಕಂಡುಬಂದಿಲ್ಲ. ಸ್ವಚ್ಛಗೊಳಿಸಿದವರಿಗೆ ಏನು ದೊರಕಿತೋ ? ಗೊತ್ತಿಲ್ಲ! ಸುಮಾರು ದಿನಗಳ ನಂತರ ನನಗೆ ಇದರ ಕೆಸರಿನಲ್ಲಿ ಸುಮಾರು ತಾಮ್ರದ ಹಳೆ ಹಾಗೂ ಹೊಸ ನಾಣ್ಯಗಳು ಪತ್ತೆಯಾದವು. ನನಗೆ ದೊರಕಿದ ನಾಣ್ಯಗಳಲ್ಲಿ ಅತ್ಯಂತ ಹಳೆಯದೆಂದರೆ 1836ರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಲಾಂಛನವಿರುವ ನಾಣ್ಯಗಳು, ಇನ್ನು ಕೆಲವು 1858ರ ನಂತರದ ರಾಣಿ ವಿಕ್ಟೋರಿಯಾ ಹಾಗೂ ಕಿಂಗ್ ಜಾರ್ಜ್ ಚಿತ್ರವಿರುವ ಬ್ರಿಟಿಷ್ ಇಂಡಿಯಾದ ನಾಣ್ಯಗಳು, ಮತ್ತೆ ಕೆಲವು ಸ್ವಾತಂತ್ರ್ಯ ಪೂರ್ವದವು ಹಾಗೂ ನಂತರದವು. ನಡು ಹಗಲಲ್ಲಿ ಬಂಡೆ ಕಾಯುವುದರಿಂದ ಕೊಳದ ನೀರು ಬೆಚ್ಚಗಾಗಿ ಮತ್ತೆ ತಣ್ಣಗಾಗುವುದರಿಂದ ಈ ನೀರಿನಲ್ಲಿ ಯಾವುದೇ ಮೀನುಗಳು ಬದುಕುವುದಿಲ್ಲ. ನಾವು ಚಿಕ್ಕಂದಿನಲ್ಲಿ ಇದರ ನೀರಿಗೆ ಮೀನು ತಂದು ಹಾಕುವ ಪ್ರಯತ್ನ ಮಾಡಿ ವಿಫಲರಾಗಿದ್ದೇವೆ. ಆದರೆ ಉಷ್ಣ ಹಾಗೂ ಶೀತಕ್ಕೆ ಹೊಂದಿಕೊಳ್ಳಬಲ್ಲ ಸಣ್ಣ ಹಾಗೂ ದೊಡ್ಡ ಕಪ್ಪೆಗಳು, ಪಾಚಿ, ಕೆಲವೊಮ್ಮೆ ಸಾಂದರ್ಭಿಕವಾಗಿ ನೀರು ಹಾವು ಕಂಡುಬರುತ್ತವೆ. ಕಡುಬೇಸಿಗೆಯಲ್ಲಿ ಮೂರು ನಾಲ್ಕು ಅಡಿ ನೀರು ಕಡಿಮೆಯಾದರೂ ಕೊಳದಲ್ಲಿ ವರ್ಷವಿಡೀ ನೀರು ಬತ್ತುವುದಿಲ್ಲ. ಕೆಸರು ತೆಗೆದ ವರ್ಷ ಮಾತ್ರ ಕೆಲವು ತಿಂಗಳು ಬರಿದಾಗಿತ್ತು. ಹಿಂದೆ ಇಲ್ಲಿಗೆ ಭೇಟಿ ಕೊಟ್ಟವರು ಕೊಳಕ್ಕೆ ನಾಣ್ಯವನ್ನು ಎಸೆಯುತ್ತಿದ್ದರು. ಈಗ ಆ ಪದ್ದತಿ ನಿಂತಿದೆ. ಮಳೆಗಾಲದಿಂದ ಹಿಡಿದು ಡಿಸೆಂಬರ್ ತನಕ ಇದರ ನೀರು ಸ್ನಾನಕ್ಕೆ ಯೋಗ್ಯವಾಗಿರುತ್ತದೆ. ಆನಂತರ ಇದು ಪಾಚಿಗಟ್ಟುವುದರಿಂದ ಬೇಸಿಗೆಯ ಅವಧಿಯಲ್ಲಿ ಸ್ನಾನ ಮಾಡಿದರೆ ಸ್ವಲ್ಪ ಮೈತುರಿಕೆ ಕಾಣಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ನಮಗೆ ಈ ಕೊಳದಲ್ಲಿ ಸ್ನಾನ ಮಾಡುವುದೆಂದರೆ ಖುಷಿಯೋ ಖುಷಿ ! ಶನಿವಾರ ಮಧ್ಯಾಹ್ನ ಶಾಲೆಯಿಂದ ಬಂದು ನೀರಿಗೆ ಸಮ್ಮರ್ ಸಾಲ್ಟ್ ಹೊಡೆಯುವುದೊಂದೇ ಗೊತ್ತು,.. ಹೊತ್ತು ಕಳೆದು ಕತ್ತಲಾಗುತ್ತಾ ಬಂದರೂ ಮನೆಗೆ ಹಿಂದಿರುಗುವ ಯೋಚನೆಯಿಲ್ಲ...ಮನೆಯಿಂದ ಕೋಲು ಹಿಡಿದು ಜನಬರಬೇಕಷ್ಟೇ....! ತದನಂತರವೇ ಸಕಲ ಮರ್ಯಾದೆ ಹಾಗೂ ಮಿಡಿಯುವ ಪಕ್ಕವಾದ್ಯಗಳೊಂದಿಗೆ ಮರಳಿ ಮನೆಗೆ ಬಿಜಯ ಮಾಡಿಸುವುದು..! ಆದರೆ ನೀವು ,ಜಾಗ್ರತೆ ! ಸರಿಯಾಗಿ ಈಜು ಬಾರದವರಿಗೆ ಆಳ ನೀರಿನ ಬಾವಿಯಂತಿರುವ ಈ ಕೊಳ ಬಲು ಅಪಾಯಕಾರಿ ! ಮಳೆಗಾಲದಲ್ಲಂತೂ ಕಾಲು ಜಾರುವುದರಿಂದ ಬಹಳ ಜಾಗ್ರತೆಯಿಂದಿರಬೇಕು. ಜನರ ನಂಬಿಕೆಯ ಪ್ರಕಾರ ಈಗಿರುವ ಕೊಳ ನಿಧಾನವಾಗಿ ಚಿಕ್ಕದಾಗುತ್ತಾ, ಕ್ರಮೇಣ ಮುಚ್ಚಿಹೋಗಿ ಹೊಸ ಕೊಳ ಹುಟ್ಟಿಕೊಳ್ಳುತ್ತಂತೆ! ಈ ನಂಬಿಕೆಗೆ ಕಾರಣವೇನೆಂದರೆ, ಕೊಳದ ಪಶ್ಚಿಮಕ್ಕೆ ಸಾಲು ಬಂಡೆಗಳ ಕೆಳಗೆ ನೀರು ನಿಲ್ಲದ, ಕೊಳವನ್ನೇ ಹೋಲುವ ಗುಂಡಿಯೊಂದಿದೆ. ಮಾತ್ರವಲ್ಲದೆ ಈಗ ನೀರಿರುವ ಕೊಳದ ಪಕ್ಕದಲ್ಲೇ ಇನ್ನೊಂದು ಸಣ್ಣ ಉರುಟಾದ ಗುಂಡಿ ಇರುವುದು ಕಾರಣವಿರಬಹುದು. ಹಿಂದೆ ಬಂಡೆಯ ತುದಿಗೆ ಹತ್ತಲು ಮೆಟ್ಟಿಲುಗಳೇ ಇರಲಿಲ್ಲ. ನಾವೆಲ್ಲರೂ ಚಿಕ್ಕಂದಿನಿಂದಲೂ ಬಲು ಸಾಹಸ ಮಾಡಿ , ಬೇರೆ ಬೇರೆ ದಿಕ್ಕುಗಳಿಂದ ಬಂಡೆ ಹತ್ತುತ್ತಿದ್ದೆವು. ಆದರೆ ಕೆಳಬರುವಾಗ ಹೆಚ್ಚು ಕಡಿಮೆ ಜಾರುಬಂಡಿಯಂತೆ ಜಾರುವುದರಿಂದ ನಮ್ಮ ಚಡ್ಡಿಯ ಹಿಂಭಾಗ ಯಾವಾಗಲೂ ಶ್ರೀಲಂಕಾ ನಕಾಶೆಯೇ! ಕ್ರಮೇಣ ಅಭ್ಯಾಸವಾಗಿ ಯಾವುದೇ ಮಳೆಗಾಲವಾದರೂ,ರಾತ್ರಿಯಲ್ಲೂ ,ಬೆಳಕಿಲ್ಲದೆಯೂ ಮೇಲಕ್ಕೆ ಹತ್ತುತ್ತಿದ್ದೆವು. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ, ಭಕ್ತರಿಗೆ ಹತ್ತಲು ತುಂಬಾ ಕಷ್ಟವಾಗುತ್ತಿತ್ತು. ಹಾಗಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಉಡುಪಿಯ ಮಠಾಧೀಶರ ಹಂಬಲ ಹಾಗೂ ಚೆನ್ನೈನ ಸೇವಾಸಂಸ್ಥೆಯವರ ದೇಣಿಗೆಯಿಂದ ಕಾಂಕ್ರೀಟ್ ಮೆಟ್ಟಿಲುಗಳನ್ನು ಹಾಕಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ. ಆದರೆ ನಾವು ಯಾವುದನ್ನೂ ಒಳ್ಳೆಯದಕ್ಕೆ ಬಳಸುವುದಿಲ್ಲ ನೋಡಿ ? ಮೆಟ್ಟಿಲುಗಳಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು.. ಜೊತೆಗೆ ಪ್ಲಾಸ್ಟಿಕ್, ಕಸ, ತಂಪು ಪಾನೀಯ , ಮದ್ಯ, ಬಿಯರ್ ಬಾಟಲ್ ಗಳೂ ರಾಶಿ ಬೀಳಲಾರಂಭಿಸಿದವು. ಕೆಳಗೆ ಪಂಚಾಯತಿಯ ಪ್ರಕಟಣೆಯಿದ್ದರೂ ಅದಕ್ಕೆ ಬೆಲೆಯಿಲ್ಲ! ಇಂತಹ ಪೂಜನೀಯ ಕ್ಷೇತ್ರದ ಬಂಡೆಯನ್ನೂ ಒಡೆದು ಹಣ ಮಾಡುವ ಪ್ರಯತ್ನಗಳು 60-70 ವರ್ಷಗಳ ಹಿಂದೆ ನಡೆದಿತ್ತು, ಬಂಡೆಯ ದಕ್ಷಿಣ ತುದಿಯದಲ್ಲಿ ಸ್ಫೋಟಿಸಲು ಮಾಡಿದ ಕುರುಹುಗಳು ಇಂದಿಗೂ ಕಂಡು ಬರುತ್ತವೆ, ಆದರೆ ಅದೇಕೋ ಕೆಲವು ಅಸಾಧಾರಣ ಕಾರಣಗಳಿಂದಾಗ ಈ ಬಂಡೆಯನ್ನು ಒಡೆಯುವುದು ಸಾಧ್ಯವಾಗಲೇ ಇಲ್ಲ! ಬಂಡೆ ಒಡೆಯುವ ಚಟುವಟಿಕೆ ಕೋಟ್ಲ ಬಂಡೆಗೆ ಸ್ಥಳಾಂತರಗೊಂಡು ಅಲ್ಲಿ ಅನೇಕ ವರ್ಷಗಳ ಕಾಲ ಸ್ಥಳೀಯರ ಸಾವು ನೋವುಗಳಿಗೆ ಕಾರಣವಾದುದು ಇನ್ನೊಂದು ಕಥೆ! ಇಲ್ಲಿನ ಬೇರೆ ಆಕರ್ಷಣೆಗಳೆಂದರೆ ಬಂಡೆಯ ತುದಿಯಲ್ಲಿ ಕಂಡುಬರುವ ಚಿತ್ತಾಕರ್ಷಕ ದೃಶ್ಯಗಳು, ಎಲ್ಲಾ ಕಾಲದಲ್ಲೂ ಬೀಸುವ ತಂಗಾಳಿ, ದೈವಿಕ ಅನುಭೂತಿ ನೀಡುವ ಸೂರ್ಯೋದಯ ಹಾಗೂ ಸೂರ್ಯಾಸ್ತಗಳು. ಉತ್ತರ ದಿಕ್ಕಿನಲ್ಲಿ ಕಂಡುಬರುವ ಕೋಟ್ಲು ಬಂಡೆ, ಇನ್ನಂಜೆ-ಶಂಕರಪುರದ ಕಾಡು ಹಾಗೂ ತೋಟಗಳು, ಅರಸೀಕಟ್ಟೆಯ ಶ್ರೀ ಮಾಧ್ವ ಇಂಜಿನಿಯರಿಂಗ್ ಕಾಲೇಜು. ಪೂರ್ವದಲ್ಲಿ ಬಂಡೆ ಕಲ್ಲುಗಳಿಂದಲೇ ಹೆಸರು ಪಡೆದಿರುವ ಕಲ್ಲುಗುಡ್ಡೆ, ಪಾದೂರಿನ ಭೂಗತ ಕಚ್ಛಾ ತೈಲ ಸಂಗ್ರಹಣಾಗಾರ , ಅದರ ಬೃಹತ್ ಕಲ್ಲಿನ ರಾಶಿ, ಇತ್ತೀಚೆಗೆ ತೈಲ ಸಂಗ್ರಹಣಾಗಾರದಲ್ಲಿ ಉತ್ಪತ್ತಿಯಾಗುವ ಅನಿಲವನ್ನು ಚಿಮಿಣಿಯಿಂದ ಹೊರಹಾಕಿ ಆಗ್ಗಾಗ್ಗೆ ಸುಡುತ್ತಾರೆ , ಆಗ ಪೂರ್ವ ದಿಕ್ಕು ರಾತ್ರಿಗಳಲ್ಲೂ ಕೆಂಪಗೆ ,ಇಡೀ ಕಾಡಿಗೆ ಬೆಂಕಿ ಬಿದ್ದಂತೆ ಗೋಚರವಾಗುತ್ತದೆ. ದಕ್ಷಿಣದಲ್ಲಿ ಕರಂದಾಡಿ ಪರಿಸರ, ಜಲಂಚಾರು ದೇವಸ್ಥಾನ, ಕರಾವಳಿಯ ವಿಶಿಷ್ಟ ತೋಟದ ಮನೆಗಳು, ಎಲ್ಲೋ ದೂರದಲ್ಲಿ ಹೊಗೆಯುಗುಳುತ್ತಿರುವ ಯು.ಪಿ.ಸಿ,ಎಲ್ ಉಷ್ಣ ವಿದ್ಯುತ್ ಸ್ಥಾವರದ ಚಿಮಿಣಿ ಹಾಗೂ ಬಾಯ್ಲರ್ ಗಳು, ಪಶ್ಚಿಮಕ್ಕೆ ಮಡುಂಬು ಬೈಲಿನ ವಿಶಾಲ ಭತ್ತದ ಗದ್ದೆಗಳು, ಸುತ್ತಿಸುಳಿದು ಡೊಂಕಾಗಿ ಹರಿಯುವ ಪಾಂಗಾಳ ನದಿ, ಕೊಂಕಣದಿಂದ ಹಾದು ಕೇರಳ ಕಡೆಗೆ ಸಾಗುವ ರೈಲುಮಾರ್ಗ, ನಿರಂತರವಾಗಿ ಓಡಾಡುವ ಪ್ಯಾಸೆಂಜರ್ , ಗೂಡ್ಸ್, ಹಾಗೂ ಲಾರಿ ಹೊತ್ತ ರೋ ರೋ ರೈಲುಗಳು, ದೂರದಲ್ಲಿ ಕಾಪು ಪೇಟೆ, ಅದರಾಚೆ ದೀಪಸ್ತಂಭ, ಸದಾ ಕಾಡುವ ಕಡಲು ! ಮತ್ತಿನ್ನೇನು ಬಯಸುತ್ತೆ ಬಿಡಿ ನಮ್ಮ ಒಡಲು !! ಎಚ್ಚರಿಕೆ:- 1) ಈ ಸ್ಥಳವು ಪೂಜನೀಯ ಧಾರ್ಮಿಕ ಕ್ಷೇತ್ರವಾಗಿದ್ದು ಭಗದ್ಭಕ್ತರು, ನಿಸರ್ಗ ಪ್ರಿಯರು ಯಾವುದೇ ಸಮಯದಲ್ಲೂ ಸಂದರ್ಶಿಸಬಹುದು. ಪ್ರಾತಃ ಹಾಗೂ ಸಂಧ್ಯಾಕಾಲ ಅತ್ಯಂತ ಪ್ರಶಸ್ತ. 2) ಮೋಜು ಮಸ್ತಿ ಮಾಡಲು ಬರುವವರು, ಏಕಾಂತದಲ್ಲಿ ಪೊದೆಗೆ ನುಗ್ಗುವ ಪ್ರೇಮಿಗಳು ದಯವಿಟ್ಟು ದೂರವಿರಿ; ಕಾರಣ ಸ್ಥಳೀಯರಿಂದ ಧರ್ಮದೇಟು ಬೀಳುವ ಎಲ್ಲಾ ಸಂಭವವಿದೆ.(ಈಗಾಗಲೇ ಅನೇಕರು ಏಟು ತಿಂದ ನಿದರ್ಶನಗಳಿವೆ) 3)ಪ್ಲಾಸ್ಟಿಕ್ ಬಳಕೆ, ಮದ್ಯಪಾನ ,ಧೂಮಪಾನ,ತಂಬಾಕು, ಹಾಗೂ ಬಂಡೆಗಳ ಮೇಲೆ ಗೀಚುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 4)ಕೊಳ ಆಳವಾಗಿದ್ದು, ಸರಿಯಾಗಿ ಈಜು ಬಾರದವರು ಖಂಡಿತ ನೀರಿಗಿಳಿಯಬೇಡಿ. 5) ಬಂಡೆಯ ಕಡಿದಾದ ಇಳಿಜಾರು ತುಂಬಾ ಅಪಾಯಕಾರಿ, ಹಾಗಾಗಿ ಸೆಲ್ಫಿ ಹುಚ್ಚಾಟ ಬೇಡ. ಮಳೆಗಾಲದಲ್ಲಿ ತುಂಬಾ ಜಾಗ್ರತೆಯಾಗಿರಿ. 6) ಗುಹೆಗಳಿಗೆ ಏಕಾಂಗಿಯಾಗಿ ನುಗ್ಗಬೇಡಿ, ಈ ಪ್ರದೇಶದಲ್ಲಿ ವಿಷಪೂರಿತ ಹಾವುಗಳು,ಹೆಬ್ಬಾವು, ಕಾಡುಹಂದಿ, ಮುಳ್ಳುಹಂದಿ ಯಥೇಚ್ಛವಾಗಿವೆ.ಕೆಲವೊಮ್ಮೆ ಚಿರತೆಗಳೂ ಕಾಣಸಿಕ್ಕಿವೆ. 7) ವನ್ಯಜೀವಿಗಳಿಗೆ ತೊಂದರೆ ನೀಡಬೇಡಿ. ಯಾವುದೇ ರೀತಿಯ ಬೇಟೆ ಶಿಕ್ಷಾರ್ಹ ಅಪರಾಧ. ತಲುಪುವುದು ಹೇಗೆ ? *ಧನುಷ್ ತೀರ್ಥವು ತಾಲೂಕು ಕೇಂದ್ರವಾದ ಕಾಪುವಿನಿಂದ 4.5 ಕಿ.ಮೀ ದೂರವಿದ್ದು ಬಂಟಕಲ್ ರಸ್ತೆಯಲ್ಲಿ ಮಡುಂಬು ಅಜಿಲಕಾಡುವಿನಿಂದ ಬಲಕ್ಕೆ 300 ಮೀಟರ್ ಕಚ್ಛಾರಸ್ತೆಯಲ್ಲಿ ಕ್ರಮಿಸಬೇಕು. *ಜಿಲ್ಲಾ ಕೇಂದ್ರವಾದ ಉಡುಪಿಯಿಂದ 14 ಕಿ.ಮೀ ದೂರವಿದ್ದು ಶಂಕರಪುರದಿಂದ ಇನ್ನಂಜೆ ಮಾರ್ಕೆಟ್ ರೋಡ್ ಮೂಲಕ ಮಡುಂಬು ಅಜಿಲಕಾಡು ತಲುಪಬಹುದು. *ಅದೇ ರೀತಿ ಬಂಟಕಲ್-ಕಾಪು ರಸ್ತೆ ಹಾಗೂ ಮಜೂರು-ಕರಂದಾಡಿ-ಕಲ್ಲುಗುಡ್ಡೆ ರಸ್ತೆಗಳ ಮೂಲಕವೂ ಅಜಿಲಕಾಡು ತಲುಪಬಹುದು *ಖಾಸಗಿ ವಾಹನಗಳಲ್ಲೇ ಬಂತರೆ ಉತ್ತಮ. ಟ್ಯಾಕ್ಸಿ,ಆಟೋ ಲಭ್ಯವಿದೆ. ಊಟ ವಸತಿ ವ್ಯವಸ್ಥೆಗೆ ಕಾಪು ಅನುಕೂಲಕರ. ಲೇಖಕರು:-ರಾಜೇಶ್ ಇನ್ನಂಜೆ email: rajeshinnanje58@gmail.com
