Updated News From Kaup

ರಾಜ್ಯಾದ್ಯಂತ ನಾಳೆಯಿಂದ ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ಆರಂಭ

Posted On: 14-03-2020 01:44AM

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಮುಂಜಾಗೂರಕತಾ ಕ್ರಮವಾಗಿ ರಾಜ್ಯಾದ್ಯಂತ ಇರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 14ರ ಶನಿವಾರದಿಂದಲೇ ಬೇಸಿಗೆ ರಜೆಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಈ ಆದೇಶ ಮತ್ತು ಅದರಲ್ಲಿರುವ ಎಲ್ಲಾ ಸೂಚನೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಪಠ್ಯಕ್ರಮ/CBSC/ICSC/IGCSC/IB ಮುಂತಾದ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯವಾಗುತ್ತದೆ. 1 ರಿಂದ 6ನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ದಿನಾಂಕ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಒಂದು ವೇಳೆ ಪರೀಕ್ಷೆಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು 7 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಪರೀಕ್ಷಾ ಪೂರ್ವ ಸಿದ್ಧತಾ ರಜೆಯ (ಸ್ಟಡೀ ಲೀವ್) ಮಾದರಿಯಲ್ಲಿ ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ. ಮತ್ತು ಈ ಪರೀಕ್ಷೆಗಳನ್ನು ಮಾರ್ಚ್ 23ರ ಒಳಗೆ ಕಡ್ಡಾಯವಾಗಿ ಮುಗಿಸಿ ಬಳಿಕ ಬೇಸಿಗೆ ರಜೆಯನ್ನು ನೀಡುವಂತೆ ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪೂರ್ವನಿರ್ಧಾರಿತ ವೇಳಾಪಟ್ಟಿಯಂತೆ ನಡೆಯಲಿವೆ. ದ್ವಿತೀಯ ಪಿ.ಯು. ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿದ್ದು ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ. 1 ರಿಂದ 6ನೇ ತರಗತಿ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ತಾವು FA1, FA2, FA3, FA4, SA1 ಮತ್ತು SA2 (ದಿನಾಂಕ 13.032020ರವರೆಗೆ ನಡೆದ ಪರೀಕ್ಷೆಗಳ ಆಧಾರದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶ್ರೇಣೀಕೃತ ಫಲಿತಾಂಶವನ್ನು ಪ್ರಕಟಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಬೇಸಿಗೆ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿವೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸಿದಲ್ಲಿ ಅದಕ್ಕೆ ಅವಕಾಶ ನೀಡುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಮತ್ತು ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಲಾಗಿದೆ.

ಹಿಂದೂ ಜನ ಸಂಘ ಕರ್ನಾಟಕದ ಉಡುಪಿ ಘಟಕ ಸ್ಥಾಪನೆ

Posted On: 13-03-2020 09:24PM

ದಿನಾಂಕ 15 ಮಾರ್ಚ್ ಭಾನುವಾರದಂದು ಸ್ಥಾಪನೆಗೊಳ್ಳಲಿರುವ ಹಿಂದೂ ಜನಸಂಘ ಕರ್ನಾಟಕ ಸಂಘಟನೆಯ ಉದ್ಘಾಟನಾ ಸಮಾರಂಭ ಹಾಗೂ ಸಂಘಟನೆಯ ರೂಪುರೇಷೆಯ ಬಗ್ಗೆ ಸಂಘಟನೆಯ ಪ್ರಮುಖರಾದ ಅಂಬಿಕಾ ಪ್ರಭು ಅವರು ಪತ್ರಿಕಾ ಮಾದ್ಯಮ ಹಾಗೂ ದೃಶ್ಯ ಮಾದ್ಯಮಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶರತರಾಜ್ ಉಡುಪಿ, ಪ್ರದೀಪ್ ಬೇಲಾಡಿ, ಸಂಪತ್ SJ, ವಿನೋದ್ ಕರ್ಕೇರ, ರಾಮಾಂಜಿ ಉಪಸ್ಥಿತರಿದ್ದರು.

ತುಳು ಚಿತ್ರ ರಂಗಕ್ಕೊಂದು ಭರವಸೆಯ ಪ್ರತಿಭೆ - ಶ್ರುತಿ ಆರ್ ಪೂಜಾರಿ

Posted On: 10-03-2020 08:12PM

ಕೋಸ್ಟಲ್ ವುಡ್ ನ ಹೊಸ ಪ್ರತಿಭೆ : ಶ್ರುತಿ ಆರ್. ಪೂಜಾರಿ ಯಾವುದೇ ಕಲೆಯ ಬಗ್ಗೆ ಆಸಕ್ತಿಯಿದ್ದಾಗ ಅದನ್ನು ತಿಳಿಯಬೇಕು, ನಾನೂ ಹಾಗೆ ಆಗಬೇಕು, ಎನ್ನುವುದು ಮಾನವ ಸಹಜ ಗುಣ. ಆದರೆ ನಾನೂ ಅದರಲ್ಲಿ ತೊಡಗಬೇಕೆಂದರೆ ಅನುಭವದ ಪ್ರಶ್ನೆ ಕಾಡದಿರದು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಹಿಂದೇಟು ಹಾಕುವುದನ್ನು ಪ್ರತಿ ರಂಗದಲ್ಲೂ ಕಾಣಸಿಗುತ್ತದೆ. ಕಿರುತೆರೆ, ಸಿನಿಮಾ ರಂಗದಲ್ಲಿ ರಂಗಭೂಮಿ, ನಟನೆ, ಮಾಡೆಲಿಂಗ್ ಕ್ಷೇತ್ರದ ಪರಿಚಯವಿದೆಯೇ ಎಂಬ ಪ್ರಶ್ನೆ ಮಾಮೂಲು. ಅಂತೆಯೇ ಮನದ ಮೂಲೆಯಲ್ಲಿದ್ದ ನಟಿಯಾಗಬೇಕೆಂಬ ಸಣ್ಣ ಕನಸು ಕೋಸ್ಟಲ್ ವುಡ್ನ 'ಎನ್ನ' ಎಂಬ ತುಳು ಚಿತ್ರದ ನಾಯಕಿಯಾಗಿ ಆಯ್ಕೆಯಾಗುವುದರೊಂದಿಗೆ ನನಸಾಗಿ ಜನರಿಂದ ಪ್ರಶಂಸೆಗೆ ಪಾತ್ರರಾದವರೇ ಶ್ರುತಿ ಆರ್. ಪೂಜಾರಿ. ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಅವರಾಲು ಮಟ್ಟು ಎಂಬ ಸಣ್ಣ ಗ್ರಾಮದ ರಮೇಶ್ ಪೂಜಾರಿ ಮತ್ತು ರೇವತಿ ಪೂಜಾರಿ ದಂಪತಿಗಳ ಪುತ್ರಿಯಾದ ಶ್ರುತಿಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಪದವಿ ಶಿಕ್ಷಣವನ್ನು ಮುಲ್ಕಿಯ ವಿಜಯ ಕಾಲೇಜಿನಲ್ಲಿ ಮುಗಿಸಿದರು. ತದನಂತರ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಬಿಡುವಿನ ವೇಳೆಯಲ್ಲಿ ತನ್ನದೇ ಫೋಟೋ ಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆ ಮೂಲಕ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ತನ್ನ ಹೊಸ ತುಳು ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಹಂಬಲದಲ್ಲಿದ್ದ ನಿರ್ದೇಶಕ ವಿಶ್ವನಾಥ ಕೋಡಿಕಲ್ ರ 'ಎನ್ನ' ಚಿತ್ರದ ಅಡಿಷನ್ ನಡೆಯುತ್ತಿತ್ತು. ಅದರಲ್ಲಿ ಶ್ರುತಿಯವರು ಭಾಗವಹಿಸಿ ಕೊಟ್ಟ ಸಂಭಾಷಣೆಯನ್ನು ನಟನೆಯೊಂದಿಗೆ ಒಪ್ಪಿಸಿ ಚಿತ್ರದ ನಾಯಕಿಯಾಗಿ ಆಯ್ಕೆಯಾಗುತ್ತಾರೆ. ಅಲ್ಲಿ ಒಂದಷ್ಟು ಧೈರ್ಯ ಬಂದರೂ ನಟನೆ, ಸಂಭಾಷಣೆ, ಕ್ಯಾಮರ ಇದರ ಬಗೆಗೆ ಸರಿಯಾದ ಅನುಭವ ಇರದೆ ಭಯವಿತ್ತು. ಮುಂದೆ ಚಿತ್ರದ ಪೂರ್ವ ತಯಾರಿಯ ಹಂತದಲ್ಲಿ ಸಾಕಷ್ಟು ತರಬೇತಿ ಪಡೆದೆ ಜೊತೆಗೆ ಹೆಚ್ಚಿನವರು ಹೊಸಬರೇ ಆಗಿದ್ದರಿಂದ ಯಾವುದೇ ರೀತಿಯ ತೊಂದರೆಯಾಗದೆ ಉತ್ತಮವಾಗಿ ಅಭಿನಯಿಸಿದೆ ಎನ್ನುತ್ತಾರೆ‌. ಹಿಂಜರಿಕೆಯಿಂದ ನಾನು ಹಿಂದೆ ಸರಿದಿದ್ದರೆ ಬಹುಷ: ನಟಿಯಾಗಬೇಕೆಂಬ ಆಸೆ ಆಸೆಯಾಗಿಯೇ ಉಳಿದಿತ್ತೇನೋ ಎನ್ನುವ ಅವರು ತನ್ನ ಬದುಕಿನಲ್ಲಿ ಬಂದ ಒಂದೊಳ್ಳೆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ ಎನ್ನುವ ತೃಪ್ತಿ ನನಗಿದೆ. ಮುಂದೆ ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ. ಇನ್ನಷ್ಟು ಅವಕಾಶಗಳು ಇವರಿಗೆ ಲಭಿಸಲಿ ಎಂದು ಹಾರೈಸುವ. ನಮ್ಮ ಕಾಪು

1989 ರ ಪತ್ರಿಕೆಯಲ್ಲಿ ಕೊರೊನ ವೈರಸ್ ಬಗ್ಗೆ

Posted On: 06-03-2020 08:18PM

ಕೊರೊನ ವೈರಸ್ ಬಗ್ಗೆ 1989 ತರಂಗ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಈ ರೀತಿ ಇದೆ.. ಕೊರೊನ ಎಂಬುದು ಹೊಸ ರೋಗ ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ.. ದೇಶ ವಿದೇಶಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ.. ಮತ್ತು ಇದಕ್ಕೆ ಬೇಕಾದ ಚಿಕಿತ್ಸೆಯನ್ನು ಇದುವರೆಗೂ ಕಂಡು ಹಿಡಿದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.. ಆದರೆ ಈ ಕೊರೊನ ವೈರಸ್ ಬಗ್ಗೆ ಈ ಹಿಂದೆ 1989 ರ ತರಂಗದಲ್ಲಿ ಅದಾಗಲೇ ಪ್ರಕಟವಾಗಿತ್ತು.. ನಮ್ಮ ಕಾಪು

ಪಾಂಗಳ ಆದಿ ಆಲಡೆಯ"ಆಲಡೆ ಮಹೋತ್ಸವದ" ಆಮಂತ್ರಣ ಪತ್ರಿಕೆ

Posted On: 06-03-2020 03:59PM

ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಪಾಂಗಳ ಇಲ್ಲಿ ವರ್ಷಂಪ್ರತಿ ಜರಗುವ ಪಾಂಗಳ ಆದಿ ಆಲಡೆ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳ "ಆಲಡೆ ಮಹೋತ್ಸವ"ವು ಇದೆ ಬರುವ ತಾರೀಕು 08-03-2020 ನೇ ರವಿವಾರದಂದು ಜರಗಲಿರುವುದು. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ತರಾಗಬೇಕಾಗಿ ವಿನಂತಿ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತಿವೆ. 08-03-2020 ರವಿವಾರದಂದು ಬೆಳಿಗ್ಗೆ 11:30 ಕ್ಕೆ ಧ್ವಜಾರೋಹಣ, 12:30 ಕ್ಕೆ ಮಹಾಪೂಜೆ, 12:45 ಕ್ಕೆ ಬ್ರಾಹ್ಮಣ ಸುವಾಸಿನಿ ಆರಾಧನೆ, ಗಂಟೆ 01:00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಡುವುದು, 09:30 ಕ್ಕೆ ಬೈಗಿನ ಬಲಿ, ರಾತ್ರಿ 11:00 ಕ್ಕೆ ಕುಮಾರ ದರ್ಶನ, ರಾತ್ರಿ 01:00 ಕ್ಕೆ ರಂಗಪೂಜೆ, ರಾತ್ರಿ 02:30 ಕ್ಕೆ ಬ್ರಹ್ಮಮಂಡಲ, ರಾತ್ರಿ 04:30 ರಿಂದ ತುಲಾಭಾರ ಸೇವೆ, ತಾರೀಕು 09-03-2020ನೇ ಸೋಮವಾರ ಬೆಳಿಗ್ಗೆ 11:00 ಕ್ಕೆ ಮಹಾಪೂಜೆ, ಸಂಜೆ 07:00 ಕ್ಕೆ ಬೈಗಿನ ಬಲಿ, ರಾತ್ರಿ 09:00 ಕ್ಕೆ ದೂಳು ಮಂಡಲ, ನಂತರ ಬೂತಬಲಿ, ಶಯನೋತ್ಸವ, ತಾರೀಕು 10-03-2020 ನೇ ಮಂಗಳವಾರ ಬೆಳಿಗ್ಗೆ 07:00 ಕ್ಕೆ ಕಾವೊಟೋದ್ಘಾಟನೆ ನಂತರ ಮಹಾಪೂಜೆ, ಸಾಯಂಕಾಲ 05:00 ಕ್ಕೆ ಬಲಿ ಹೊರಟು ಅವಭ್ರತ ಸ್ನಾನ, ಕಟ್ಟೆಪೂಜೆ, ರಾತ್ರಿ ದ್ವಜ ಅವರೋಹಣ. ಹೀಗೆ ಧಾರ್ಮಿಕ ಕಾರ್ಯಕ್ರಮಗಳು ಕ್ರಮವಾಗಿ ನಡೆಯಲಿವೆ.. ನಮ್ಮ ಕಾಪು

ತುಳುನಾಡಿನ ಸಪ್ತ ಜಾತ್ರೆಗಳಲ್ಲೊಂದಾದ ಕಾಪು ಸುಗ್ಗಿ ಮಾರಿಪೂಜೆ-2020 ಕ್ಷಣಗಣನೆ

Posted On: 06-03-2020 01:41PM

ಕಾಪು : ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದಿರುವ ಕಾಪುವಿನ ಸುಗ್ಗಿ ಮಾರಿಪೂಜಾ ಜಾತ್ರೆಗೆ ಕ್ಷಣಗಣನೆ ಕಾಪುವಿನ ಹಳೇ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ (ಕಲ್ಯ) ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ನಡೆಯುವ ಮಾರಿ ಪೂಜೆಯಲ್ಲಿ ಭಾಗವಹಿಸಲು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಕಾಸರಗೋಡು, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದೂರದ ಮುಂಬಯಿ ಮಹಾನಗರದಿಂದಲೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಮಾರ್ಚ್ 24ರ ಮಂಗಳವಾರ ಮಧ್ಯಾಹ್ನದಿಂದಲೇ ಆಗಮಿಸುತ್ತಾರೆ. ಮಾ. 17 ರಂದು ಬೇಟೆ (ಕುರಿ) ಬಿಡುವ ಮೂಲಕ ಮಾರಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ. ಮಾ. 25 ರಂದು ಬುಧವಾರ ಸಂಜೆಯ ವರೆಗೂ ಮಾರಿ ಪೂಜಾ ಮಹೋತ್ಸವ ಮುಂದುವರಿಯುತ್ತದೆ. ಮಂಗಳವಾರ ರಾತ್ರಿ ಮಾರಿಯಮ್ಮ ದೇವಿಯ ಗದ್ದುಗೆ ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಸಂಖ್ಯೆಯ ಕುರಿ-ಆಡು ಮತ್ತು ಕೋಳಿಗಳನ್ನು ಭಕ್ತರು ಮಾರಿಪೂಜೆಯ ಪ್ರಯುಕ್ತ ಸಮರ್ಪಿಸುತ್ತಾರೆ. ನಮ್ಮ ಕಾಪು

ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ನವೀನ ಮಾದರಿಯ ಉಡುಪು

Posted On: 05-03-2020 04:59PM

ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಿಂದ ಫ್ಯಾಷನ್ ಲೋಕಕ್ಕೆ ಹೊಸ ಮಾದರಿಯ ಹೆಜ್ಜೆ, ಹಾಸನದಲ್ಲಿ ತನ್ನದೇ ಛಾಪು ಮೂಡಿಸಲಿರುವ ನಮ್ಮ ಕಾಪುವಿನ ಯುವಕ. ಸ್ಯಾಮುವೆಲ್ ಅಕ್ವಿಲ್ ಸೋನ್ಸ್ ಇವರು ಕಾಪು-ಪಾಂಗಾಳದವರು. ಇಂದಿರಾ ಶಿವರಾವ್ ಪಾಲಿಟೆಕ್ನಿಕ್- ಮೂಡುಪೆರಂಪಳ್ಳಿ. ಕಾಲೇಜಿನಲ್ಲಿ ತೃತೀಯ ವರುಷದ ಫ್ಯಾಷನ್ ಟೆಕ್ನಾಲೊಜಿಯ ವಿದ್ಯಾರ್ಥಿಯಾದ ಇವರು ಕಸದಿಂದ ರಸ ಆಧಾರಿತ ವಿಶಿಷ್ಟ ಉಡುಗೆಯನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೆ. ಮದುವೆ ಸಮಾರಂಭಗಳಲ್ಲಿ ಕುಡಿಯಲು ಬಳಸುವ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಅದರ ಎಲ್ಲಾ ಭಾಗಗಳನ್ನು ಬಳಸಿ ಅದರಿಂದ ಉಡಿಗೆಯನ್ನು ತಯಾರಿಸಿದ್ದಾರೆ. ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಹಾಸನದಲ್ಲಿ ನಡೆಯುವ "ನಾನು ಕಸವಲ್ಲ ರಸ" -ಸ್ವಚ್ಛತೆಯೆಡೆಗೆ ನಮ್ಮ ನಡೆ ಎಂಬ ಕಾರ್ಯಕ್ರಮದಲ್ಲಿ ತನ್ನ ಉಡುಗೆಯ ಪ್ರದರ್ಶನ ನೀಡಲಿದ್ದಾರೆ. ಮನಸ್ಸಿದ್ದರೆ ಮಾರ್ಗ ಎನ್ನುವ ಹಾಗೆ, ಯಾರು ಏನೇ ಹೇಳಿದರೂ ತನ್ನ ಕೆಲಸದಲ್ಲಿ ನಂಬಿಕೆ,ಶ್ರಮ ಹಾಗೂ ಸಂಸ್ಥೆಯ ಸಹಕಾರ ಇದರಿಂದ ತನಗೆ ಬೆಂಬಲ, ಪ್ರೋತ್ಸಾಹ ಎನ್ನುತ್ತಾರೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಈ ಕಾಲದಲ್ಲಿ ಕಸವನ್ನೇ ರಸವನ್ನಾಗಿಸಿದ ಇವರ ಈ ಸಾಧನೆಗೆ ಮೆಚ್ಚಲೇಬೇಕು. ಶಹಬಾಷ್ ಗಿರಿ ನೀಡಲೇಬೇಕು...!! ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಾದನೆಗಳನ್ನು ಮಾಡಿ ಹೆತ್ತವರಿಗೆ, ಕಲಿತ ಶಾಲೆಗೆ ಹುಟ್ಟಿದ ಊರಿಗೆ ಕೀರ್ತಿಯನ್ನು ತರಲೆಂಬುದೇ ನಮ್ಮೆಲ್ಲರ ಆಶಯ.. ನಿಮ್ಮ ಈ ಸಾದನೆಗೆ ಅಭಿನಂದನೆಗಳು : ನಮ್ಮ ಕಾಪು ತಂಡ ಧನ್ಯವಾದಗಳು

ಕಾಪುವಿನ ಕಾಲಗರ್ಭದೊಳಗಿನ ಇತಿಹಾಸವನ್ನು ಸಂರಕ್ಷಿಸೋಣವೇ

Posted On: 05-03-2020 04:59PM

ಸಾಂಸ್ಕೃತಿಕ , ಧಾರ್ಮಿಕ ಬಹುತ್ವಗಳೊಂದಿಗೆ ಸಮೃದ್ಧವಾದ " ಐತಿಹಾಸಿಕ " ಹಿನ್ನೆಲೆಯನ್ನು ಹೊಂದಿದೆ . ಕಾಪು ಪುರಸಭೆ ವ್ಯಾಪ್ತಿಯಲ್ಲಿ ಅಂದರೆ "ಪಡು , ಉಳಿಯಾರಗೋಳಿ , ಮೂಳೂರು , ಮಲ್ಲಾರು" ಗ್ರಾಮಗಳಲ್ಲಿ ಕಾಲಗರ್ಭ ಸೇರುತ್ತಿರುವ ಅಥವಾ ಈಗಾಗಲೇ ಸೇರಿರುವ ಐತಿಹಾಸಿಕ ಉಳಿಕೆಗಳಿವೆ . ಧಾರ್ಮಿಕ , ಸಾಂಸ್ಕೃತಿಕ ಮಹತ್ವಗಳಿರುವ ಪುರಾತನ ಅವಶೇಷಗಳಿವೆ . ನವ ನಿರ್ಮಾಣದ ಉತ್ಸಾಹದಲ್ಲಿ ಅವಗಣಿಸಲ್ಪಟ್ಟ , ನಶಿಸಿ ಹೋಗುತ್ತಿರುವ ಹಳಮೆಗಳಿವೆ . ಕಾಪು ಪುರಸಭೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಮೊತ್ತ ಬಿಡುಗಡೆಯಾಗುತ್ತಿದೆ . ಸರ್.....ಈ ಬೃಹತ್ ಮೊತ್ತದಲ್ಲಿ ಕೇವಲ ಕೆಲವೇ ಸಾವಿರ ರೂಪಾಯಿ ವೆಚ್ಚದಲ್ಲಿ ಕಾಪುವಿನ ಇತಿಹಾಸವನ್ನು ಕಾಪಿಡಬಹುದು . ಇತಿಹಾಸ ಕಾಪಿಡುವ ಈ ಸಂಸ್ಕೃತಿ ಪ್ರೀತಿಯ ಕಾರ್ಯವನ್ನು ಸಾಧಿಸಿದ ಕೀರ್ತಿ ತಮ್ಮದಾಗುತ್ತದೆ . 1988 -1989ರ ವೇಳೆ "ಕಾಪು ಕ್ಷೇತ್ರ ಚರಿತ್ರೆ" ಎಂಬ ಯಕ್ಷಗಾನ ಪ್ರಸಂಗ ರಚನೆಗೆ ಕತೆ ಸಂಗ್ರಹದ ವೇಳೆ ಕಾಪುವಿನಲ್ಲಿ ನಡೆಸಿದ ಕ್ಷೇತ್ರ ಕಾರ್ಯದ ವೇಳೆ ಕಾಪುವಿನ ಇತಿಹಾಸ ಗಮನಸೆಳೆಯಿತು . ಅಂದಿನಿಂದ ನಾಲ್ಕು ಬಾರಿ ತರಂಗ ,ಉದಯವಾಣಿ ಪತ್ರಿಕೆಗಳಲ್ಲಿ ' ಕಾಪಿಡಲಾದೀತೇ ಕಾಪುವಿನ ಇತಿಹಾಸ' ಎಂಬ ಶಿರೋನಾಮೆಲ್ಲಿ ಲೇಖನಗಳನ್ನು ಬರೆದಿದ್ದೆ . ಕಾಪುವಿನ " ಉಪ್ಪಿನೊಂದಿಗೆ ಕರಗುತ್ತಿದೆ ಕಾಪುವಿನ ಇತಿಹಾಸ " ಎಂದು ಉದಯವಾಣಿಯ ಜನತಾವಾಣಿ ವಿಭಾಗದಲ್ಲಿ ಆಗಿನ ವರದಿಗಾರರು ಬರೆದಿದ್ದರು ( ಕಳೆದ ವರ್ಷ ಈ ಶಾಸನ ಸ್ಥಳಾಂತರಗೊಂಡಿದೆ ) . 2002 ನೇ ಇಸವಿಯಲ್ಲಿ ಕಾಪುವಿನ ಲಕ್ಷ್ಮೀ ಜನಾರ್ದನ ದೇವಳದ ಜೀರ್ಣೋದ್ಧಾರ ಸಂದರ್ಭ ನಾನು ಸಂಪಾದಿಸಿದ ಕೈಪಿಡಿ "ಒಡೆಯ ಲಕ್ಷ್ಮೀ ಜನಾರ್ದನ" ಕಾಪು ಕ್ಷೇತ್ರ ಪರಿಚಯ ಪುಸ್ತಕ ಪ್ರಕಟಗೊಂಡಿತ್ತು . ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಈ ಪುಸ್ತಕವನ್ನು ಪ್ರಕಟಿಸಿತ್ತು . ನಾನು ಕನಿಷ್ಠ ಐದಾರು ಬಾರಿ ಕಾಪುವಿನಲ್ಲಿ ನಡೆದ , ಗಣ್ಯರ ಉಪಸ್ಥಿತಿಯ ಸಭೆಗಳಲ್ಲಿ ಕಾಲಗರ್ಭ ಸೇರುತ್ತಿರುವ ಕಾಪುವಿನ ಐತಿಹಾಸಿಕ ಉಳಿಕೆಗಳ ಕುರಿತು ಭಾಷಣ ಮಾಡಿದ್ದೆ .ಇವುಗಳಿಂದ ಯಾವ ಪ್ರಯೋಜನವೂ ಆಗಿಲ್ಲ . ಆಧುನಿಕತೆಯ ಚಿಂತನೆಯೊಂದಿಗೆ ಮುಂದೆ ಗಮಿಸುವ ವರ್ತಮಾನದಲ್ಲಿ ಭೂತ ಕಾಲವನ್ನು ಗಮನಿಸಿ ಭವಿಷ್ಯವನ್ನು ಕಟ್ಟಬೇಕಾದರೆ ಇತಿಹಾಸ ಏನೆಂದು ತಿಳಿಯುವುದು ಅಗತ್ಯತಾನೆ ?.ಆ ಇತಿಹಾಸ ರಕ್ಷಿಸುವ ಅಗತ್ಯವಿಲ್ಲವೇ ? * ಅಡಕ : ಐತಿಹಾಸಿಕ ಅವಶೇಷಗಳ ಪಟ್ಟಿ. ***************** ಅಡಕ‌. ಕಾಪು : ಕಾಲಗರ್ಭ ಸೇರುತ್ತಿರುವ , ಅವಗಣಿಸಲ್ಪಟ್ಟಿರುವ ಐತಿಹಾಸಿಕ - ಧಾರ್ಮಿಕ ಅವಶೇಷಗಳು ಮತ್ತು ಅವುಗಳ ಮಹತ್ವ ಉಡುಪಿ ಜಿಲ್ಲೆಯ ಕಾರ್ಕಳ , ಬಾರಕೂರು , ಉದ್ಯಾವರ ಮುಂತಾದ ಪ್ರಸಿದ್ಧ ಚಾರಿತ್ರಿಕ ಸ್ಥಳಗಳಂತೆ ಕಾಪು ಸಹ ಇತಿಹಾಸ ಪ್ರಸಿದ್ಧಸ್ಥಳ . ಇವತ್ತಿಗೂ " ಕಾಪು " ಎಂಬುದು ಒಂದು ಗ್ರಾಮದ ಹೆಸರಲ್ಲ . ತುಳುನಾಡಿನ ಮಧ್ಯಯುಗೀನ ಇತಿಹಾಸ ಕಾಲದಲ್ಲಿ ಕಾಪು ಒಂದು ಸೀಮೆ . ಒಂದು ಅರಸೊತ್ತಿಗೆಯ ಅಧಿಕಾರವ್ಯಾಪ್ತಿ . ಈ ಕಾಲಘಟ್ಟದಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಹೆಸರು .ಪ್ರಸಕ್ತ ಒಂದು ಪುರಸಭೆ. ತಾಲೂಕು ಕೇಂದ್ರ. * ಕ್ರಿ . ಶ . 8 ನೇ ಶತಮಾನದ ಬೆಳ್ಮಣ್ಣಿನ ತಾಮ್ರಶಾಸನದಲ್ಲಿ ಮೊತ್ತಮೊದಲು ' ಕಾಪು' ಉಲ್ಲೇಖವಿದೆ .ಇದು ಕಾಪು ಸ್ಥಳನಾಮಕ್ಕಿರುವ ಚಾರಿತ್ರಿಕ ಪ್ರಾಚೀನತೆಗೆ ಆಧಾರ. ಕಾಪು ಹೆಸರು ಸುಮಾರು 1300 ವರ್ಷ ಪುರಾತನವಾದುದು . ಈಗ ಕಾಪು ಪುರಸಭೆಯಾಗಿದೆ . ಕಾಪು ಎಂಬ ಹೆಸರು ರಕ್ಷಣೆ ಎಂಬ ಅರ್ಥ ದಿಂದ ಬಂದುದಲ್ಲ .ಕಾಪು ಎಂದರೆ 'ಕಾವು' ಶಬ್ದದಿಂದ ನಿಷ್ಪತ್ತಿಯಾದುದು .ಕಾವು = ಕಾಡು.ಎನ್ನುತ್ತಾರೆ ಸ್ಥಳನಾಮ ಸಂಶೋಧಕರು. * ಕಾಪು ಲೈಟ್ ಹೌಸ್ ಪಕ್ಕದ ಹೆಬ್ಬಂಡೆಯ ಮೇಲೆ ಇರುವ ಕೆಂಪು ಕಲ್ಲಿನ ಪುರಾತನ ಕಟ್ಟಡವೊಂದರ ಪಂಚಾಂಗವು ಒಂದು ಕಾಲದ "ಮನೋಹರಗಡ" . ಕೆಳದಿಯ ನಾಯಕರ ಚರಿತ್ರೆ ಯನ್ನು ವಿವರಿಸುವ ಲಿಂಗಣ್ಣ ಕವಿ ಬರೆದಿರುವ "ಕೆಳದಿನೃಪ ವಿಜಯ" ದಲ್ಲಿ : ಈ ಪರಿಯಲ್ಲದೆ ಪಡುವಣ | ಕೂಪಾರದ ತೀರದೊಳ್ ವಿರಾಜಿಸುತಿರ್ಪಾ | ಕಾಪಿನ ಸಮೀಪದೊಳತ| ದ್ಭೂಪಂ ನೆಲೆಗೊಳಿಸಿದಮ್ ಮನೋಹರಗಡಮಂ || ಎಂಬ ಕಂದ ಪದ್ಯ ಒಂದಿದೆ . ಆದರೆ ಇಂದು ಈ ಹೆಸರನ್ನು ಯಾರೂ ಹೇಳುತ್ತಿಲ್ಲ .ಬೀಚ್ ಉತ್ಸವಗಳಲ್ಲಿ ಈ ಹೆಸರನ್ನು ಬಳಸಬಹುದು .ಏಕೆಂದರೆ ಹೆಸರು ಸುಂದರವಾಗಿಲ್ಲವೆ. ಪ್ರವಾಸೋದ್ಯಮಕ್ಕೆ ಈ ಹೆಸರು ಪ್ರಶಸ್ತವಾಗಿಲ್ಲವೆ ? *'ಕೆಳದಿ ನೃಪ ವಿಜಯ'ದ ಪ್ರಕಾರ ಕ್ರಿ . ಶ . 1743 ರಲ್ಲಿ ಬಸಪ್ಪ ನಾಯಕ ಕಟ್ಟಿಸಿದ . ಅದೇ ವೇಳೆ 'ಮಲ್ಲಾರ'ದಲ್ಲಿ ಸೇನೆ ನಿಲ್ಲಲು ಕೋಟೆಯನ್ನು ಕಟ್ಟಿಸಿದ ಎಂದು ಹೇಳಲಾಗುತ್ತದೆ . ಪೂರ್ವ ದಲ್ಲಿದ್ದ ಜೇರ್ಣಗೊಂಡ ಕೋಟೆಯನ್ನು ಸುಭದ್ರವಾಗಿ , ಸುಸಜ್ಜಿತವಾಗಿ ಬಸಪ್ಪನಾಯಕರು ಕಟ್ಟಿಸಿದರು ಎಂದೂ ಹೇಳಲಾಗುತ್ತದೆ . * ಕಾಪು ಪೇಟೆಯ ದಕ್ಷಿಣದ ಕೊನೆಯಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿರುವ ಶಿಲಾಶಾಸನವೊಂದು ಉಪ್ಪಿನ ಗೋಣಿಯನ್ನು ಪೇರಿಸಿಡಲು ಬಳಸಲಾಗುತ್ತಿದೆ .1985 ರಿಂದ ಈ ಶಾಸನದ ಕುರಿತು ಬರೆಯಲಾಗಿದೆ ,ಹೇಳಲಾಗಿದೆ . ಈಶಾಸನ ತುಳುನಾಡನ್ನು ಬಲುದೀರ್ಘಾವಧಿಗೆ ಆಳಿದ ಆಳುಪ ವಂಶದ ದೊರೆ ಸೋಯಿದೇವಾಳುಪೇಂದ್ರನ ಕಾಲದ್ದು . ಶಾ . ಶ . 1247ರಲ್ಲಿ ಬರೆದುದು .ಇದು ದಾನಶಾಸನ . ಈ ಶಾಸನದಲ್ಲಿ ಕಾಪು ಸೀಮೆಯ ನಿರ್ದಿಷ್ಟ ಪ್ರದೇಶಗಳ ಹೆಸರುಗಳಿವೆ( ಈ ಶಾಸನ ಇತ್ತೀಚೆಗೆ ಸ್ಥಳಾಂತರವಾಗಿದೆ , ರಕ್ಷಿಸಲ್ಪಟ್ಟಿದೆ ) . * ಕಾಪು ಪೇಟೆಯಲ್ಲಿ ಸಂವತ್ಸರ , ದಿನ ಮಾತ್ರ ನಮೂದಿಸಿರುವ ಶಕ ವರ್ಷ ಇಲ್ಲದ ಎರಡು ವೀರಗಲ್ಲುಗಳಿವೆ . ಇವುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು . * ತುಳುನಾಡಿನ ಪ್ರಸಿದ್ಧ ಅರಸು ಮನೆತನದಲ್ಲೊಂದಾದ ಕಾಪುವಿನ ತಿರುಮಲರಸ ಮರ್ದ ಹೆಗಡೆ ( ವದ್ದ ಹೆಗಡೆ )ಅರಸರು ಕಾಪುವಿನ ಜನಾರ್ದನ ದೇವಾಲಯ ಕಟ್ಟಿಸಿದರು .ಇವರ ಅಧಿಕಾರ ವ್ಯಾಪ್ತಿಯಲ್ಲಿ ಕಾಪು ಸೀಮೆ ಎಂದು ಪಡು , ಮಲ್ಲಾರು , ಮೂಳೂರು , ಪಾದೂರು , ಹೇರೂರು , ಮಜೂರು , ಇನ್ನಂಜೆ ಗ್ರಾಮಗಳಿದ್ದವು ( ಮುಂದೆ ಪಾದೂರು ಗ್ರಾಮ ಎಲ್ಲೂರು ಸೀಮೆಗೆ ಸೇರ್ಪಡೆಯಾಗುವುದನ್ನು ಚರಿತ್ರೆ ಯ ಪುಟಗಳಲ್ಲಿ ಕಾಣುತ್ತೇವೆ ).ಸುಮಾರು 300 - 400 ವರ್ಷಕಾಲ ಕಾಪು ಸೀಮೆಯ ಆಡಳಿತ ಮರ್ದ ಹೆಗಡೆ ಮನೆತನದ್ದಾಗಿತ್ತು . ಅವರು ವಾಸಿಸುತ್ತಿದ್ದ ಬೀಡು ಯಾವತ್ತೆ ಅಳಿದು ಹೋಯಿತು . * ಕಾಪು ಜನಾರ್ದನ ದೇವಾಲಯದಲ್ಲಿ ಒಳ ಸುತ್ತಿನಲ್ಲಿ ಆಗ್ನೇಯ ದಿಕ್ಕಿನಲ್ಲಿದ್ದ ಶಿಲಾಶಾಸನವು ಈಗ ತುಂಡಾದ ಸ್ಥಿತಿಯಲ್ಲಿ ದೇವಳದ ಕೆರೆಯ ಪಕ್ಕದಲ್ಲಿದೆ . ಇದೊಂದು ಒಪ್ಪಂದ ಶಾಸನವಾಗಿದೆ . ಅಪೂರ್ವವಾದ ಶಾಪಾಶಯದ ದಾಖಲು ಇದರಲ್ಲಿದೆ . ಇದು ಶಾ.ಕ.1421( ಕ್ರಿ. ಶ . 1499) ರಲ್ಲಿ ಬರೆದುದು . * ಕಾಪುವಿನ ಇದೇ ದೇವಾಲಯದ ಜೀರ್ಣೋದ್ಧಾರದ ವೇಳೆ ಬದಲಾಯಿಸಿದ್ದ ಪುರಾತನ ಪಾಣಿಪೀಠ , ವಿವಿಧ ಪ್ರಾಚೀನ ಶಿಲ್ಪಗಳುಳ್ಳ ಕಲ್ಲುಗಳು ಇವೆ .ಇವುಗಳ ರಕ್ಷಣೆಯಿಂದ ದೇವಾಲಯ ನಿರ್ಮಾಣ ಕಾಲವನ್ನು ನೆನಪಿಸಿಕೊಳ್ಳ ಬಹುದು . * "ಬೀಡು ಧರ್ಮನಾಥ ಬಸದಿ" ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ(ತುಳು ನಾಡು ) 180 ಬಸದಿಗಳಲ್ಲಿ ಒಂದು . ಇದು ಕಾಪಿನಲ್ಲಿದೆ . ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ . ಇದರ ಪಾಗಾರ ರಾಷ್ಟ್ರೀಯ ಹೆದ್ದಾರಿಗೆ ಹೋಗಿದೆ . ಹೆದ್ದಾರಿಗೆ ಬಹಳ ಸಮೀಪದಲ್ಲಿದ್ದು , ಇದರ ರಕ್ಷಣೆಗೆ ಸೂಕ್ತ ಕ್ರಮ ಅಗತ್ಯವಿದೆ . ಈ ಬಸದಿ ಕಾಪುವಿನ ಇತಿಹಾಸಕ್ಕೆ ಮಹತ್ವದ ಆಧಾರವಾಗಿದೆ. * ಕ್ರಿ . ಶ .1743 ರಲ್ಲಿ ಬಸಪ್ಪನಾಯಕರು ಕಟ್ಟಿಸಿದ ಮಲ್ಲಾರಿನ ಕೋಟೆಯ ಅಧಿಕಾರವು1784 ರಲ್ಲಿ ಟಿಪ್ಪುಸುಲ್ತಾನನ ವಶವಾಯಿತು (ಬ್ರಿಟಿಷರೊಂದಿಗೆ ಟಿಪ್ಪುಸುಲ್ತಾನನಿಗೆ ನಡೆದ 'ಮಂಗಳೂರು ಒಪ್ಪಂದ'ದ ಬಳಿಕ) . 1799ರಲ್ಲಿ ಟಿಪ್ಪುಸುಲ್ತಾನರ ನಿಧನಾನಂತರ , ಮುಂದಿನ ದಿನಗಳಲ್ಲಿ ಕ್ರಮೇಣ ಕೋಟೆ ಅರಾಜಕವಾಗ ತೊಡಗಿತು . 1985 ರ ವೇಳೆ ಕೋಟೆಯ ಒಂದು ಬಾಗಿಲು ಮಾತ್ರ ಇತ್ತು , ಒಳಗೆ ವಿಶಾಲವಾದ ಮೈದಾನವಿತ್ತು . ಆನೆಗಳನ್ನು ಕಟ್ಟುವ ಕಲ್ಲುಗಳಿದ್ದವು . ಒಂದು ಗುಡಿಇದ್ದ ಅವಶೇಷವಿತ್ತು . ಈ ಗುಡಿ ಆಂಜನೇಯ ದೇವಸ್ಥಾನವಾಗಿತ್ತಂತೆ . ಹೌದು.... ಎಂಬುದಕ್ಕೆ ಆಂಜನೇಯ ಮೂರ್ತಿ ಈಗ ಕಾಪು ಜನಾರ್ದನ ದೇವಳದಲ್ಲಿದೆ . ಅದನ್ನು ಕೋಟೆ ಆಂಜನೇಯ ಎನ್ನಲಾಗುತ್ತಿದೆ . ಕೋಟೆಯ ಒಂದು ಬದಿಯಲ್ಲಿ ( ನೈಋತ್ಯದಲ್ಲಿ) 'ನಂದಿ ಕೆರೆ ' ಎಂಬ ಕೆರೆಯೊಂದಿತ್ತು ಕೆರೆಗೆ ಇಳಿಯುವ ಮೆಟ್ಟಿಲುಗಳಿದ್ದವು , ಇಕ್ಕೆಲಗಳಲ್ಲಿ ಸರಳ , ಸುಂದರ ಶಿಲ್ಪಗಳಿದ್ದವು . ಅಲ್ಲೆ ಮೈದಾನದಲ್ಲಿ ದೇವಾಲಯಗಳಲ್ಲಿರುವ ಆನೆಕಲ್ಲು (ಹಸ್ತಿಹಸ್ತ) ಒಂದು ಬಿದ್ದಿತ್ತು . ಆದರೆ ಈಗ ಅಲ್ಲಿ ಒಂದು ಕೋಟೆ ಇತ್ತು ಎನ್ನುವ ಯಾವ ಪುರಾವೆಯೂ ಇಲ್ಲ . ಇತಿಹಾಸ ಪ್ರಸಿದ್ಧ ಕೋಟೆ ಹೀಗೆ ಕಾಲಗರ್ಭ ಸೇರಿ ಹೋಯಿತು . * ಕಾಪು ದೇವಸ್ಥಾನದ ಜೀರ್ಣೋದ್ಧಾರ ನಿಮಿತ್ತ ಮೂಲ ಗರ್ಭಗುಡಿಯನ್ನು ಬಿಚ್ಚುವ ವೇಳೆ ಕಂಡು ಬಂದ ಪುರಾತನ ಶಿಲೆಕಲ್ಲಿನ "ಅಧಿಷ್ಠಾನ" ವು ದೇವಳದ ಪ್ರಾಚೀನತೆ ನಿಷ್ಕರ್ಷೆಗೆ ಆಧಾರವಾಗುತ್ತಿತ್ತು ,ಆದರೆ ಇದನ್ನು ಅವಶೇಷವೆಂದು ಕಾಪಿಡುವ ಉದ್ದೇಶದಿಂದ ತೆಗೆದು ಒಂದು ಕಡೆ ರಾಶಿ ಹಾಕಲಾಗಿತ್ತು . ಈ ಐತಿಹಾಸಿಕ ಮಹತ್ವದ ಉಳಿಕೆಯೂ ಇತ್ತೀಚೆಗೆ ಕಾಲಗರ್ಭ ಸೇರಿ ಹೋಯಿತು . * ಕಾಪು ಕೋತಲಕಟ್ಟೆ ಬಳಿ‌‌ ಇದ್ದ ಎರಡು‌ ವೀರಗಲ್ಲುಗಳಿಗೆ ತಾತ್ಕಾಲಿಕ‌ ರಕ್ಷಣೆ ಕೊಡಲಾಗಿದೆ . * ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಏಳು ಪ್ರಸಿದ್ಧ ಜಾತ್ರೆಗಳಲ್ಲಿ " ಕಾಪು ಮಾರಿಪೂಜೆ "ಒಂದು. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಅಪೂರ್ವ ಜಾತ್ರೆ . ಪಿಲಿಕೋಲ ಜನಪ್ರಿಯ ಆಚರಣೆ . ಕಾಪು ಸಾವಿರ ಸೀಮೆಯ ಎಲ್ಲ ದೈವಸ್ಥಾನಗಳಿಗೂ , ಬ್ರಹ್ಮಸ್ಥಾನಗಳಿಗೂ ಜಾನಪದ ಹಿನ್ನೆಲೆಗಳಿವೆ . * ಶ್ರೀವೆಂಕಟರಮಣ ದೇವಸ್ಥಾನ , ಶ್ರೀ ವೀರಭದ್ರ ದೇವಸ್ಥಾನ , ಶ್ರೀ ಕಾಳಿಕಾಂಬಾ ದೇವಸ್ಥಾನಗಳು ಐತಿಹಾಸಿಕ , ಧಾರ್ಮಿಕ - ಸಾಂಸ್ಕೃತಿಕ ಹಿನ್ನೆಲೆ ಹೊಂದಿದವುಗಳು .ಇವು ವ್ಯವಸ್ಥಿತವಾಗಿ ನಿರ್ವಹಿಸಲ್ಪಡುತ್ತಿವೆ . * ಕಾಪು ; ಪುರಾಣ ,ಇತಿಹಾಸಗಳೊಂದಿಗೆ ದಟ್ಟವಾದ ಜಾನಪದ ಹಿನ್ನೆಲೆ ಹೊಂದಿದೆ . * ಮೇಲೆ ನಮೂದಿಸಿರುವ ವಿವರಗಳಿಗಿಂತಲೂ ಇನ್ನೂ ಹೆಚ್ಚಿನ ಅಪೂರ್ವ ಸಂಗತಿಗಳು ಕಾಪುವಿನಲ್ಲಿದೆ . ಅವುಗಳನ್ನು ಗುರುತಿಸ ಬಹುದು.ಕಾಪಿಡಲು ಸಂಗ್ರಹಿಸ ಬಹುದು . * ಚಾರಿತ್ರಿಕ ಅವಶೇಷಗಳನ್ನು ದೇವಳ ಪರಿಸರ , ಪಂಚಾಯತ್ ಕಚೇರಿ ಪರಿಸರ , ಪುರಸಭೆ ಕಚೇರಿ ಆವರಣ , ಅಥವಾ ಯಾವುದಾದರೊಂದು ಸ್ಥಳದಲ್ಲಿ ಓರಣಗೊಳಿಸಿ ಇಟ್ಟು " ಕಾಪುವಿನ ಗತ ಇತಿಹಾಸ " ಎಂದು ಹೆಸರಿಸಿ ಕಾಪಿಡುವ ಸಾಧ್ಯತೆ ಇದೆ . # ಸರ್... ಪುರಸಭೆ , ತಾಲೂಕು ಕಲ್ಪನೆಗಳ ಸಾಕಾರಕ್ಕೆ ವ್ಯಯವಾಗುವ ಕೋಟಿ ಕೋಟಿ ಮೊತ್ತದಲ್ಲಿ ಕೆಲವೇ ಕೆಲವು ಸಾವಿರ ರೂಪಾಯಿ ವೆಚ್ಚದಲ್ಲಿ ಒಂದು ಇತಿಹಾಸವನ್ನು , ಸಂಸ್ಕೃತಿ ಯನ್ನು ಕಾಪಿಡಬಹುದು . ಇನ್ನು ತಾವು ನಿರ್ಧರಿಸ ಬೇಕು . ✍️ ಕೆ . ಎಲ್ .ಕುಂಡಂತಾಯ

ಉಡುಪಿಯ ಉದ್ಯಾವರದ ಹುಡುಗಿ ಭುವನ ಸುಂದರಿಯಾಗುವಳೇ..??

Posted On: 05-03-2020 04:59PM

ಮಿಸ್ ದಿವಾ ಸ್ಪರ್ಧೆಯ 8 ನೇ ಆವೃತ್ತಿ ಇಂದು ನಡೆಯಿತು ಮತ್ತು ದೇಶಾದ್ಯಂತ ವಿವಿಧ ಆಡಿಷನ್‌ಗಳ ನಂತರ ಪರಸ್ಪರ ಸ್ಪರ್ಧಿಸುತ್ತಿದ್ದ ಇಪ್ಪತ್ತು ಸ್ಪರ್ಧಿಗಳಲ್ಲಿ, ಆಡ್ಲೈನ್ ​​ಕ್ಯಾಸ್ಟೆಲಿನೊ ವಿಜೇತರಾದರು. ಆಡ್ಲೈನ್ ​​ಉಡುಪಿ ಜಿಲ್ಲೆಯ ಉದ್ಯಾವರ ಮೂಲದವರು ಮತ್ತು Professional Model ಈ ವರ್ಷದ Miss Universe ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ನಮ್ಮ ಕಾಪು

ತುಳುವಿನಲ್ಲಿ ಗುಡ್ಡೆಡ್ ಇತ್ತಿನಾರ್ ಎಂದು ಕರೆಯಲ್ಪಡುವ ಉಚ್ಚಿಲ ಶ್ರೀ ಮಹಾಲಿಂಗೇಶ್ವರ

Posted On: 05-03-2020 04:59PM

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಷೇತ್ರ ಪರಿಚಯ. ಪಡ್ಡಾಯಿ ಮುಕುಡ್ದ್ ಕುಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ, ಉಲ್ಲಾಯ, ಈಶ್ವರ ದೇವೆರ್ ಹೀಗೆ ನಾನಾ ಹೆಸರಿನಿಂದ ಕರೆಸಿಕೊಂಡು. ಸಂಸ್ಕೃತಿ ಸಮ್ಮಿಲನಗಳ ಪ್ರತಿಕವಾಗಿಯೂ. ಸಾಂಸ್ಕೃತಿಕ ಸುಗಮ ಸಮಾಗಮದ ದ್ಯೋತಕವಾಗಿಯೂ. ಈಶ್ವರ ದೇವರು ನೆಲೆನಿಂತದ್ದು ಉಚ್ಚಿಲ ಶ್ರೀ ಮಹಾಲಿಂಗೇಶ್ವರನಾಗಿ. ಕ್ಷೇತ್ರದಲ್ಲಿ ಗಣಪತಿ ಜೊತೆಯಾಗಿರುವುದರಿಂದ ಇದು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ. ಇದು ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಸ್ಥಳನಾಮ : ಉಚ್ಚಿಲ ಎಂಬುದು ಗ್ರಾಮದ ಹೆಸರಲ್ಲ. ಅದು ಒಂದು ನಿರ್ದಿಷ್ಟವಾದ ಸ್ಥಳನಾಮ. ಎತ್ತರದ ಭೂಪ್ರದೇಶ, ಉನ್ನತ, ಶ್ರೇಷ್ಠ, ಗಂಭೀರವಾದ ಇಲ ಎಂದರೆ ಸ್ಥಳವಾಗಿದ್ದು ಉಚ್ಚಿಲವಾಯಿತು. ಉಚ್ಚ ಶಿಲೆಯೇ ಉಚ್ಚಿಲವಾಯಿತು. ಉಚ್ಚ ಊರ್ದ್ವ ಎಂಬ ಸಂಸ್ಕೃತ ಶಬ್ದದಿಂದ ಉಚ್ಚಿಲ ಎಂಬುವುದು ಪೂರಕವಾದ ನಿರೂಪಣೆ. ಉಚ್ಚಯ (ಉತ್ಸವ) ನಡೆಯುವ ಸ್ಥಳವಾಗಿ ಉಚ್ಚಿಲ ಎಂಬುದು ಇನ್ನೊಂದು ಆಯಾಮದ ಚಿಂತನೆ ಒಟ್ಟಿನಲ್ಲಿ ಎತ್ತರದಿಂದ, ಶ್ರೇಷ್ಠತೆಯಿಂದ ಉಚ್ಚ ಶಬ್ದವು ಮೂಲವಾಗಿ ಈ ನೆಲೆಯೇ ಉಚ್ಚಿಲವೆಂದು ನಿರ್ಧರಿಸಬಹುದು. ಪುರಾಣ : ಖರಸುರನು ತಲೆಯಲ್ಲಿ ಮತ್ತು ಉಭಯ ಕೈಗಳಲ್ಲಿ ಹೊತ್ತು ತಂದು ಸ್ಥಾಪಿಸಿದ ಶಿವಲಿಂಗಗಳಲ್ಲಿ ಉಚ್ಚಿಲದ ಮಹಾಲಿಂಗೇಶ್ವರ ಲಿಂಗವು ಒಂದು ಎಂಬುದು ಒಂದು ಪುರಾಣದ ಕಥೆ ಪ್ರಚಲಿತವಿದೆ. (ಖರಸುರ ಮೂರು ಲಿಂಗಗಳನ್ನು ತನ್ನ ಎರಡು ಕೈಯಲ್ಲಿ ಮತ್ತು ಒಂದನ್ನು ತನ್ನ ತಲೆಯಲ್ಲಿ ಹೊತ್ತು ತಂದಿದ್ದನು ಒಂದನ್ನು ಕಾಪುವಿನ ಉಚ್ಚಿಲ ಮತ್ತು ಒಂದನ್ನು ಸುರತ್ಕಲ್ಲಿನಲಿ ಹಾಗೂ ಇನ್ನೊಂದನ್ನು ಸೋಮೇಶ್ವರ ಉಚ್ಚಿಲ ಇಲ್ಲಿ ಪ್ರತಿಷ್ಠಾಪಿಸಿದನು. ಕಾಪು ಉಚ್ಚಿಲದಿಂದ ಮತ್ತು ಸೋಮೇಶ್ವರ ಉಚ್ಚಿಲದಿಂದ ಸುರತ್ಕಲ್ ದೇವಸ್ಥಾನಕ್ಕೆ ಇರುವ ಅಂತರ ಒಂದೆ ಆಗಿದೆ) ಸ್ಕಂದ ಪುರಾಣದ ಸಹ್ಯಾದ್ರಿ ಕಾಂಡದಲ್ಲಿ ಬರುವ ಖರ ಮತ್ತು ರಟ್ಟರೆಂಬ ಸಹೋದರರಿಬ್ಬರು ಮಹಾಶಿವನ ಭಕ್ತರಾಗಿದ್ದು. ಕರಾವಳಿಯುದ್ದಕ್ಕೂ ಹಲವು ಶಿವಾಲಯಗಳನ್ನು ಸ್ಥಾಪಿಸಿದರು ಎಂಬ ಉಲ್ಲೇಖ ''ಖರಪ್ರತಿಷ್ಠೆ'' ಎಂಬ ಜನಜನಿತವಾದ ಒಡಂಬಡಿಕೆಗೆ ಪ್ರಾಶಸ್ತ್ಯ ಒದಗುತ್ತದೆ. (ದೇವಸ್ಥಾನದ ನಂದಿಯು ಮೇಯುತ್ತಾ ಕಾರ್ಕಳದ ಕಡೆಗೆ ಹೋದಾಗ ಅದನ್ನು ಅಲ್ಲಿಯ ಜನರು ಹೊಡೆದೋಡಿಸಿದರು ಆಗ ನಂದಿಯು ಬಂದು ಶಿವನ ಗುಡಿಯ ಹಿಂಭಾಗದಲ್ಲಿ ಅಳುತ್ತ ಕುಳಿತಿರುತ್ತದೆ. ಇದನ್ನು ಗಮನಿಸಿದ ಶಿವನು ಪೂರ್ವಬಿಮುಖವಾಗಿ ಇದ್ದವನು ಪಶ್ಚಿಮಾಭಿಮುಖವಾಗುತ್ತಾನೆ ಇದನ್ನು ಕಂಡ ಸಮುದ್ರ ಅಲೆಗಳೇ ಹಿಂದೆ ಸರಿದಿದ್ದವು) ಇತಿಹಾಸ : ಪಶ್ಚಿಮಾಭಿಮುಖವಾಗಿರುವ ಶ್ರೀ ಮಹಾಲಿಂಗೇಶ್ವರ ದೇವಳದ ಗರ್ಭಗುಡಿಯ ರಚನಾಶೈಲಿ, ಮಹಾಲಿಂಗ ಹಾಗು ಪಾಣಿಪೀಠ ಆನೆಕಲ್ಲುಗಳ ನಿರ್ಮಾಣದ ವಿಧಾನವನ್ನು ಗಮನಿಸಿರುವ ಖ್ಯಾತ ಇತಿಹಾಸ ತಜ್ಞ ದಿ! ಡಾ ಗುರುರಾಜ್ ಭಟ್ ಇವರು ದೇವಳವು ಸುಮಾರು ಕ್ರಿ.ಶ. 9, 10 ನೇ ಶತಮಾನದ ನಿರ್ಮಿತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತೀರ್ಥಮಂಟಪ (ನಂದಿಮಂಟಪ) ದಲ್ಲಿರುವ ಆಕರ್ಷಕ ನಂದಿಯ ವಿಗ್ರಹವು ಗಮನ ಸೆಳೆಯುತ್ತದೆ. ಕುಳಿತ ಭಂಗಿಯು ವಿಧೇಯತೆಯನ್ನು ತೋರಿಸುತ್ತದೆ. ಕನಿಷ್ಠ ಆಭರಣಗಳಿವೆ ಆದುದರಿಂದ ಇದರ ನಿರ್ಮಾಣ ಕಾಲವು ಕ್ರಿ.ಶ. 9, 10 ಶತಮಾನದ್ದು ಎಂದು ನಿರ್ಧರಿಸುವ ಡಾ ಗುರುರಾಜ ಭಟ್ಟರು ದೇವಾಲಯ ನಿರ್ಮಾಣವನ್ನು ಈ ನಂದಿಯ ಪ್ರತಿಮೆಯ ಆಧಾರದಲ್ಲಿ ದೃಡೀಕರಿಸುತ್ತಾರೆ. ಉಪಸ್ಥಾನ, ಪರಿವಾರ : ಉಪಸ್ಥಾನ ಮಹಾಗಣಪತಿ ದೇವರ ಬಿಂಬವು ಚತುರ್ಬಹುವಾಗಿದೆ. ಪರಶು ದಂತ ಪಾಶ ಅಂಕುಶ ಆಯುದ್ದಗಳನ್ನು ಧರಿಸದೇ. ಪಟ್ಟಿಯಂತಹ ಪ್ರಭಾವಳಿಯನ್ನು ಹೊಂದಿದೆ. ಜಟಾಮುಕುಟ ಮತ್ತು ಉದರಬಂಧದಿಂದ ಅಲಂಕರಿಸಲ್ಪಟ್ಟಿದೆ. ಪ್ರಾಚೀನತೆ ಸುಮಾರು ಕ್ರಿ.ಶ. 9-12 ಶತಮಾನದ ಅವಧಿಯದ್ದಾಗಿದೆ. ಈ ಕಾಲನಿರ್ಣಯಗಳನ್ನು ದೇವಸ್ಥಾನಕ್ಕೆ ಒದಗಿಸುವ ಐತಿಹಾಸಿಕ ಹಿನ್ನೆಲೆಯಾಗಿ ಪರಿಗ್ರಹಿಸಬಹುದು. ಗರ್ಭಗುಡಿಯು ದೀರ್ಘ ಚತುರಸ್ರ ಆಕಾರದ್ದಾಗಿದೆ. ದ್ವಿತಳದ ರಚನೆ, ಷಡ್ವರ್ಗ ಕ್ರಮದಲ್ಲಿದೆ. ತಾಮ್ರದಿಂದ ಅಚ್ಚದಿರವಾಗಿದೆ. ಸುತ್ತು ಪೌಳಿ, ಸರಳ ರಚನೆ, ಪ್ರದಾನ ಬಲಪೀಠ ಮತ್ತು ದ್ವಜಸ್ಥಂಭಗಳಿದ್ದು. ಆಗಮೋಕ್ತ ದೇವಾಲಯದ ಸರ್ವ ಅಂಗಗಳನ್ನು ಹೊಂದಿ ಬೃಹತ್ ದೇವಾಲಯ ಸಂಕೀರ್ಣವಾಗಿದೆ. ಅಗ್ರಸಭೆಯ ಕಲ್ಪನೆಯು ನಿಚ್ಚಳವಾಗಿದೆ. ಪರಿವಾರವಾಗಿ ರಕ್ತೇಶ್ವರಿ ಸನ್ನಿದಾನವು ದೇವಳದ ಉತ್ತರದ ಹೊರ ಸುತ್ತಿನಲ್ಲಿದೆ. ನಾಗದೇವರ ಸಂಕಲ್ಪವು ಈಶಾನ್ಯದಲ್ಲಿದೆ. ಉತ್ತರ ಬದಿಯಲ್ಲಿ ಸ್ವಲ್ಪ ಕೆಳಮಟ್ಟದಲ್ಲಿ ದೇವಳದ ಸರೋವರವಿದೆ. ಓಲಗ ಮತ್ತು ಮುಖಮಂಟಪವು ಪೂರ್ವದಲ್ಲಿದೆ. ಇದನ್ನು ಆಧರಿಸಿ ದೇವಾಲಯದ ದಿಕ್ಕು ಬದಲಾಗಿದೆ ಎಂಬ ಒಂದು ಸಣ್ಣ ಊಹೆಗೆ ಅವಕಾಶವಿದೆ. ಪೂರಕ ದಂತಕಥೆಯು ಇದೆ. ದೇವಳದ ಮುಂಭಾಗದಲ್ಲಿ ನಿಂತು ನೋಡಿದರೆ ದೇವಳವು ಎತ್ತರದ ಪ್ರದೇಶದಲ್ಲಿದೆ. ಕೆಳಗೆ ಸಮುದ್ರ ಇದ್ದಿರಬಹುದಾದ (ಸಮುದ್ರ ಇಲ್ಲಿಯವರೆಗೆ ಇದ್ದ) ನೋಟವು ದೊರೆಯುತ್ತಿದೆ. ಬೌಗೋಳಿಕ ಸ್ವರೂಪ ಪರಿವರ್ತನೆಯಂತಹ ಸಹಜ ಸ್ವರೂಪ ಪರಿವರ್ತನೆ ನಡೆದಿರುವ ಸಾಧ್ಯತೆ ಇದೆ. ಉಚ್ಚಿಲ ಮಹಾಲಿಂಗೇಶ್ವರ ದೇವಳದ ವಿಶೇಷತೆಗಳು (ಮಕರ ಸಂಕ್ರಾಂತಿ ದಿನದಂದು ಸೂರ್ಯನ ಕಿರಣ ನಂದಿಗೋಣನ ಎರಡು ಕೊಂಬುಗಳ ನಡುವೆ ಹಾದು ಹೋಗಿ ಈಶ್ವರ ದೇವರ ಮುಖಕ್ಕೆ ಬೀಳುತ್ತದೆ) ಹೆಸರಿನಂತೆ ಮಹಾಲಿಂಗವು ಮೂಲಸ್ಥಾನ ಸನ್ನಿಧಾನವಾಗಿದೆ ನಿಂತು ಪೂಜೆ ಮಾಡಬೇಕಾದ ಅನಿವಾರ್ಯತೆ ಇದೆ ಪಾಣಿಪೀಠ ಹಾಗು ಮಹಾಲಿಂಗವು ಅಳೆತ್ತರದಷ್ಟು ಇದೆ. ನಂದಿ ಮಂಟಪದಲ್ಲಿರುವ ನಂದಿ ವಿಶೇಷತೆಯೊಂದನ್ನು ಹೊಂದಿದ್ದು ಬೆಣ್ಣೆ, ಎಣ್ಣೆ ಮುಂತಾದವುಗಳನ್ನು ಲೇಪಿಸಿಕೊಂಡು ಜಾನುವಾರುಗಳ ರಕ್ಷಕನಾಗಿದ್ದಾನೆ. ಶಿಲ್ಪದ ಚಮತ್ಯತಿಯಾಗಿ ಅಥವಾ ನಂಬಿಕೆಯಾಗಿ ಕಣ್ಣು ಮುಚ್ಚುವ- ತೆರೆಯುವ ಬದಲಾವಣೆ ನಂದಿ ವಿಗ್ರಹದಲ್ಲಿದೆ. ಮದುವೆ ಸಂತಾನ ಪ್ರಾಪ್ತಿಯಂತಹ ವಿಶೇಷ ಫಲಗಳನ್ನು ಮಹಾಲಿಂಗೇಶ್ವರ ದೇವರು ಅನುಗ್ರಹಿಸುತ್ತಾರೆ. ತುಲಾಭಾರ ಮತ್ತು ಹೂವಿನ ಪೂಜೆಯಿಂದ ದೇವರು ಅನನ್ಯವಾಗಿ ಒಲಿಯುತ್ತಾರೆ. ಎರ್ಮಾಳಿನ ಜನಾರ್ದನ ದೇವರು ಅವಭ್ರತಕ್ಕಾಗಿ ಉಚ್ಚಿಲ ಮಹಾಲಿಂಗೇಶ್ವರ ದೇವರ ಸನ್ನಿದಿಗೆ ಬರುವ ವೇಳೆ ಗರ್ಭಗುಡಿಯಲ್ಲಿ ಜನಾರ್ದನ ದೇವರಿಗೆ ಮಹಾಲಿಂಗೇಶ್ವರ ದೇವರೊಂದಿಗೆ ಏಕಕಾಲದಲ್ಲಿ ಪೂಜೆ ನಡೆಯುವ ಅಪೂರ್ವ ಸಂದರ್ಭವೊಂದು ಇಲ್ಲಿ ಸನ್ನಿಹಿತವಾಗುತ್ತದೆ. (ಆದ್ದರಿಂದ ಇದನ್ನು ಹರಿಹರ ಕ್ಷೇತ್ರ ಎಂದು ಕರೆಯುತ್ತಾರೆ) ಅಕ್ಕಿ, ತೆಂಗಿನಕಾಯಿ, ಎಣ್ಣೆ, ತರಕಾರಿ, ಹೆಡಿಗೆ, ಹಗ್ಗ, ಸೆಗಣಿ ಸಾರಿಸುವ ಹಾಳೆತುಂಡು ಹೀಗೆ ಬಹುವಿಧದ ವಂತಿಗೆ ಕ್ಷೇತ್ರಕ್ಕೆ ಎಲ್ಲೆಡೆಯಿಂದ ಹರಿದುಬರುತ್ತದೆ. ಆಗಲೇ ಮಹಾಲಿಂಗೇಶ್ವರ ದೇವರ ಕೀರ್ತಿ, ಜನಪ್ರಿಯತೆ ಎಷ್ಟು ವಿಸ್ತಾರವಾಗಿದೆ, ಎಲ್ಲಿಯವರೆಗೆ ಹಬ್ಬಿದೆ ಎಂಬುದನ್ನು ಗಮನಿಸಬಹುದು.. ಜಾರಂದಾಯ ದೈವದ ದೇವಾಲಯ ಭೇಟಿಯ ಜಾನಪದ ಮತ್ತು ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮವಾಗಿದೆ. ಉಚ್ಚಿಲ ಮಹಾಲಿಂಗೇಶ್ವರ ದೇವರ ಅಯನೋತ್ಸವದಂದು ಸಿರಿಜಾತ್ರೆ ನಡೆಯುತಿತ್ತು ಎಂಬ ಒಂದು ಹೇಳಿಕೆಯು ಇದೆ. ಕೆಲವು ವರ್ಷಗಳ ಹಿಂದೆ ದೇವಳದಲ್ಲಿ ಸಿರಿಗಳ ನಂದಿಗೊಣನ ಪ್ರತೀಕಗಳಿತ್ತು. ಪ್ರತ್ಯೇಕ ಸಿರಿ ಆಲಡೆ ನಿರ್ಮಾಣವಾದ ಮೇಲೆ ಈ ಮೂರ್ತಿಗಳನ್ನು ವಿಸರ್ಜಿಸಲಾಗಿದೆ ಇದು ಕೂಡ ಜಾನಪದ ಹಿನ್ನೆಲೆಯಾಗಿದೆ. ಎರ್ಮಾಳು ಬೀಡಿನ ಮಾರಮ್ಮ ಹೆಗ್ಗಡೆಯವರು ನಾವಡರ ಮನೆತನ ಹಾಗು ಅರ್ಚಕರು ನೇತೃತ್ವ ವಹಿಸಿ ಸರ್ವವರ್ಗದ ಜಾತಿಯ ಭಕ್ತರ ನೆರವಿನೊಂದಿಗೆ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವರ ನಡಾವಳಿ ಮತ್ತು ಪಂಚಪರ್ವಗಳು ನಡೆಯುತ್ತವೆ. ಭದ್ರಂ ಶುಭಂ ಮಂಗಳಂ ವರದಿ : ಕೆ.ಎಲ್.ಕುಂಡಂತ್ತಾಯ (ಕ್ಷೇತ್ರಕ್ಕೆ ಆಗಮಿಸುವವರು ಸಂತೋಷ್ ಪುತ್ರನ್ ಇವರನ್ನು ಸಂಪರ್ಕಿಸಬಹುದು +91 81474 70317 ) ನಮ್ಮ ಕಾಪು