Updated News From Kaup
ಜೀವನ್ಮರಣ ಸ್ಥಿತಿಯಲ್ಲಿದ್ದ ರಾಷ್ಟ್ರಪಕ್ಷಿಯನ್ನು ಉಳಿಸಲು ಪ್ರಯತ್ನ ಪಟ್ಟ ಕಾಪು ತುಳುನಾಡು ಹಿಂದೂ ಸೇನೆ
Posted On: 10 Aug 2020, 05:04 PM
ಪಡುಬಿದ್ರಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲಿನ ಜೀವ ಉಳಿಸಲು ಪ್ರಯತ್ನ ಪಟ್ಟ ಕಾಪು ತುಳುನಾಡು ಹಿಂದೂ ಸೇನೆಯ ಕಾರ್ಯಕರ್ತರು. ಪಡುಬಿದ್ರಿ,10.ಆಗಸ್ಟ್ : ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರ ಮನೆಯ ಹತ್ತಿರದ ತೋಡಿನ ಹತ್ತಿರದಲ್ಲಿ ಕಳೆದ ಒಂದೆರಡು ದಿನಗಳಿಂದ ನವಿಲೊಂದು ಕಾಲಿಗೆ ಪೆಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತಿತ್ತು, ಇದನ್ನು ಗಮನಿಸಿದ ಸ್ಥಳೀಯ ನಾಗರಿಕರು ಕಾಪು ತುಳುನಾಡು ಹಿಂದೂ ಸೇನೆಯ ಪ್ರಮುಖರಾದ ಪ್ರಶಾಂತ್ ಪೂಜಾರಿ ಕಾಪು ಅವರಿಗೆ ತಿಳಿಸಿದರು, ವಿಷಯ ತಿಳಿದ ತಕ್ಷಣ ಪಡುಬಿದ್ರಿಗೆ ಧಾವಿಸಿ ನವಿಲಿನ ಜೀವ ಉಳಿಸಲು ಪ್ರಯತ್ನ ಪಟ್ಟರು, ಪ್ರಯತ್ನ ಫಲಕೊಡದೆ ನವಿಲು ಮರಣ ಹೊಂದಿತು . ಮರಣ ಹೊಂದಿದ ನವಿಲಿನ ಅಂತ್ಯ ಸಂಸ್ಕಾರ ಮಾಡಲು ನವಿಲನ್ನು ಕರ್ನಾಟಕ ಅರಣ್ಯ ಇಲಾಖೆ, ಕಾಪು ಉಪವಲಯದ ಅರಣ್ಯಾಧಿಕಾರಿ ಅಭಿಲಾಷ್ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ್ ಪೂಜಾರಿ ಕಾಪು, ಚಿತ್ತನ್ ಪೂಜಾರಿ ಮತ್ತು ನಿತಿನ್ ಜೊತೆಯಲ್ಲಿದ್ದರು.
ಚಾಂದ್ರ ಕೃಷ್ಣಾಷ್ಟಮಿ : ಕೃಷ್ಣ ಸ್ಮರಣೆ 'ಜಾನಪದ' ಮನಸ್ಸಿನ 'ಜಗನ್ನಾಥ'
Posted On: 10 Aug 2020, 04:34 PM
ಮೋಹಕ ಮಹಿಮಾತಿಶಯದ ವಿಸ್ಮಯ ಪುರುಷ ಕೃಷ್ಣನ ಬದುಕು ಅದ್ಭುತವೆನಿಸಿದಾಗ , ಅಗಾಧ ಹರವನ್ನು ಪಡೆದುಕೊಂಡಾಗ ಲೋಕ ಕ್ಷೇಮಾರ್ಥಕ್ಕೆ ತೊಡಗಿಕೊಂಡಾಗ ಸಹಜವೆಂಬಂತೆ ಸಜ್ಜನರು ಉದ್ಗರಿಸಿದ್ದು "ಕೃಷ್ಣಾವತಾರ ಪರಿಪೂರ್ಣ ಅವತಾರವೆಂದು" . ಈ ಪರಿಪೂರ್ಣತೆಯು ಒಂದು ಸಾಧನೆಯಾಗಿ ,ಜಗನ್ಮೋಹಕವಾಗಿ ಸ್ಥಾಪನೆಯಾಗುವುದು ಜನಸಾಮಾನ್ಯತೆಯ ಮುಗ್ಧ ಮನಸ್ಸುಗಳೊಂದಿಗೆ - ಜನಪದರ ಸಾಂಗತ್ಯದಲ್ಲಿ. ಬಹುಶಃ ಪರಿಪೂರ್ಣತೆಯು ಪರಾಕಾಷ್ಠೆಯನ್ನು ತಲುಪಲು ದೇಸಿ ಪರಿಸರವೇ ಪೂರಕವಾಗುತ್ತದೆ. ಈ ಮನಃಸ್ಥಿತಿಯ ವ್ಯಕ್ತಿತ್ವವೇ ಕೃಷ್ಣನಾಗಿ ಆಕರ್ಷಿಸಲ್ಪಡುತ್ತದೆ , 'ಜಗನ್ನಾಥ' ಎಂಬ ಎತ್ತರಕ್ಕೆ ಏರಿಬಿಡುತ್ತದೆ . ಕೃಷ್ಣ ಬೆಳೆದದ್ದು ,ಆಟವಾಡಿದ್ದು , ಅಪೂರ್ವ ಸಾಧನೆಗಳನ್ನು ಮಾಡಿದ್ದು ಆ ಮೂಲಕ ಜನಜನಿತನಾಗಿ ಜಗದೋದ್ದಾರನೆನ್ನಿಸಿದ್ದು ಗೋಪಾಲಕರ ನಡುವೆ ,ಗೋ ಸಮೂಹದ ಸನ್ನಿಧಿಯಲ್ಲಿ , ಸೆಗಣಿ - ಗಂಜಳಗಳ ಸುವಾಸನೆಯಲ್ಲಿ . ನುಡಿಸಿದ್ದು ಬಿದಿರಿನ ಓಟೆಯನ್ನು ,ಧರಿಸಿದ್ದು ನವಿಲುಗರಿಯನ್ನು . ಬಿದಿರ ಓಟೆ ಮುರಲಿಯಾಗಿ ಉಲಿದಾಗ ಆ ಅನುರಣನ ಅಥವಾ ಸುಶ್ರಾವ್ಯ ನಾದ ಸಮ್ಮೋಹನವಾಯಿತು .ಗೋವುಗಳು - ಗೋಪಾಲಕರು - ಗೋಪಿಯರು ಮಂತ್ರಮುಗ್ಧರಾದರು ,ಆತ್ಮೀಯ ಆನಂದ ಪರವಶರಾದರು. ಕೃಷ್ಣ ಗೋಕುಲವನ್ನು ತೊರೆದು ಮಧುರೆಗೆ ಹೊರಟಾಗ ತನ್ನ ನೆನಪಾಗಿ ಗೋಕುಲದಲ್ಲಿ ಉಳಿಸಿದ್ದು ಕೊಳಲನ್ನು . ತಾನು ಜೊತೆಗೆ ಒಯ್ದದದ್ದು ನವಿಲುಗರಿಯನ್ನು ಮತ್ತು 'ಜನಪದ' ಮನಸ್ಸನ್ನು . ಆದರೆ ಮುಂದಿನ ಕೃಷ್ಣಕಥೆಯ ಯಾವ ದೃಶ್ಯವನ್ನೆ ಕಲಾವಿದ ಚಿತ್ರಿಸಿದರೂ ಕೃಷ್ಣನ ಕೈಯಲ್ಲಿ ಕೊಳಲು ಅನಿವಾರ್ಯ . ಇದು ಮೂಲದ ಜನಪದರ ಮನಸ್ಸುಗಳು ಕೃಷ್ಣನನ್ನು ಅನುಸರಿಸಿದ ಸಂಕೇತವೇ ? ಅಥವಾ ಕೃಷ್ಣ ಅದನ್ನು ಒಪ್ಪಿದ್ದೇ ಆಗಿರಬಹುದಲ್ಲ . ಅಂದರೆ ಕೃಷ್ಣ ಚಿತ್ರದ ಕಲಾವಿದ ಒಬ್ಬ ಜನಪದನೇ ತಾನೆ ? ಗೋಕುಲವನ್ನು ಬಿಟ್ಟ ಬಳಿಕ ಕೃಷ್ಣ ಕೊಳಲು ಊದಿಲ್ಲ . ಆದರೆ ಮರೆತಿಲ್ಲ ಎಂದು ಕೃಷ್ಣಪ್ರೀತಿಯ ಮಂದಿಗೆ ಕೊಳಲು ಇಲ್ಲದ ಕೃಷ್ಣನನ್ನು ಕಲ್ಪಿಸಲಾಗಲೇ ಇಲ್ಲ . ಕೃಷ್ಣನ ಸಮ್ಮೋಹನ ಸಾಮರ್ಥ್ಯಕ್ಕೆ ಕೂಡಿಕೊಂಡದ್ದು ಜಾಣ್ಮೆ , ಚಾಣಾಕ್ಷತೆ , ದೃಢವಾದ ಧೀ ಶಕ್ತಿ , ಅತಿಶಯ ಆತ್ಮವಿಶ್ವಾಸ ಇವುಗಳೇ ಕಾರಣವಾಗಿ ಕೃಷ್ಣ ಯುಗಾಂತದಲ್ಲಿ ಪೂರ್ಣಪುರುಷನಾಗಿ ವಿಜೃಂಭಿಸಿದ .ಆದರೆ ತಾನು ಜನಪದನಾಗಿಯೇ ಉಳಿದ .ಜನ ಸಾಮಾನ್ಯನನ್ನು ಬೆಂಬಲಿಸಿದ , ಅಗತ್ಯಗಳನ್ನು ಪೂರೈಸುತ್ತಾ ರಕ್ಷಣೆ ನೀಡಿದ .ಈ ಕಾರ್ಯಗಳೆಲ್ಲ ಧರ್ಮರಕ್ಷಣೆಯ ಕಾರ್ಯಗಳಾದುವು .ಕೃಷ್ಣ ಧರ್ಮ ಸಂಸ್ಥಾಪಕನಾದ . 'ಯಾದವರು ರಾಜತ್ವ ವಂಚಿತರು' ಎಂಬ ಕಳಂಕವನ್ನು ನಿವಾರಿಸಲು ದ್ವಾರಾವತಿಯ ನಿರ್ಮಾಣ. ಬಳಿಕ ಬಲರಾಮನನ್ನೆ ಅರಸನನ್ನಾಗಿ ಮಾಡಿದ , ತಾನು ತಮ್ಮನಾಗಿಯೇ ಉಳಿದ , ಈ ಸಂದರ್ಭ ಒಂದು ವಿಶಿಷ್ಟ ಮನೋಧರ್ಮವನ್ನು ಪ್ರಕಟಿಸುತ್ತದೆ . ರಾಜಸೂಯಾಧ್ವರದ ಸಂದರ್ಭ ಚಂದ್ರ ವಂಶದ ಪಿತಾಮಹ ಭೀಷ್ಮರಿಂದಲೇ ಕೃಷ್ಣ ಸ್ತುತಿಸಲ್ಪಡುತ್ತಾನೆ , ದೇಶದಾದ್ಯಂತ ಸ್ಥಾಪಿಸಲ್ಪಡುತ್ತಾನೆ . ಇದೊಂದು ಕೃಷ್ಣನ ವ್ಯಕ್ತಿತ್ವಕ್ಕೆ ದೊರೆತ ಪ್ರಚಾರ ,ಅದೂ ಆಚಾರ್ಯ ಭೀಷ್ಮರಿಂದ. ಇದು ಒಬ್ಬ ಸಾಮಾನ್ಯ ಜನಪದನಿಗೆ ಪ್ರಾಪ್ತಿಯಾದ ಯೋಗ . ಜನ ಸಮೂಹ ಬಯಸುವ ಸುಖದ ಜೀವನಕ್ಕೆ ದುಡಿಮೆಯೇ ಆಧಾರವೆಂಬ ಸೂತ್ರವನ್ನು ಪ್ರಚುರಪಡಿಸಿದ . ಕ್ಷತ್ರಿಯರಿಗೆ ಯುದ್ಧವೇ ಧರ್ಮ ಸಮ್ಮತವಾದ ಪರಮಗುರಿ ಎಂಬುದನ್ನು ಬೋಧಿಸಿದ . ಧರ್ಮ - ಅಧರ್ಮ , ಕರ್ಮ - ಅಕರ್ಮಗಳ ವಿವರ ವಿಸ್ತಾರವನ್ನು ಲೋಕಧರ್ಮಿಯಾಗಿ ಪ್ರತಿಪಾದಿಸಿ ಹಸ್ತಿನಾವತಿಯಲ್ಲಿ ಧರ್ಮರಾಯನನ್ನು ಚಕ್ರವರ್ತಿ ಎಂದು ಸ್ಥಿರಗೊಳಿಸಿದ . ಆದರೆ ತಾನು ಮಾತ್ರ ಯಾವ ಅಧಿಕಾರವನ್ನಾಗಲಿ ,ಸ್ಥಾನಮಾನವನ್ನಾಗಲಿ ಪಡೆಯದೆ ಅಸಾಮಾನ್ಯ ಹಂತವನ್ನು ಏರಿ ಜಗದ್ವಂದ್ಯನಾದ . ಸಾಮಾನ್ಯ ಗೊಲ್ಲರವನೊಬ್ಬ ಚಂದ್ರವಂಶದ ಚಕ್ರವರ್ತಿ ಪೀಠದ ಮುಂದೆ ಸಂಧಾನಕಾರನಾಗಿ ಕೌರವನಿಗೆ ಬುದ್ಧಿಹೇಳುವ ಧೈರ್ಯ ತೋರುತ್ತಾನೆ . ಭರತವರ್ಷ ನಿಬ್ಬೆರಗಾಗುತ್ತದೆ . ನಾಗರಿಕತೆಯ ಪಾಠ ಆ ಕಾಲಕ್ಕೆ ನಾಗರಿಕತೆಯ ಪಾಠ ಅಗತ್ಯವಿದ್ದುದು ಗೋಪಾಲಕರಿಗೆ , ಅದೇ ಆತನ ಬಾಲ್ಯದ ಕಾಯಕವಾಯಿತು . ವಿಮೋಚನೆಯಿಂದ ರಕ್ಷಣೆಯನ್ನು ಕೊಡುತ್ತಾ ಸದೃಢ 'ಯಾದವ ಸ್ತೋಮ'ವನ್ನು ರಚಿಸಲು ಕೃಷ್ಣ ಕಷ್ಟಪಟ್ಟ ,ಆ ಮೂಲಕ ಭರತವರ್ಷ ಪೂರ್ತಿ ಒಂದು ಆದರ್ಶವನ್ನು ಸಾರಿದ . ಆರ್ಥಿಕ ಸಬಲತೆ ನಾಗರಿಕತೆಯ ಸ್ಥಿರೀಕರಣಕ್ಕೆ ಹಾಗೂ ಮುಂದುವರಿಕೆಗೆ ಹೇತುವೆಂಬುದನ್ನು ಅರಿತ ಕೃಷ್ಣ ಹೈನುಗಾರಿಕೆಯಂತಹ ಗೋ ಪಾಲನೆ ,ಗವ್ಯಗಳ ವಿನಿಮಯದಿಂದ ಅಗತ್ಯಗಳನ್ನು ಪೂರೈಸಿಕೊಳ್ಳುವ , ಸ್ವತಂತ್ರವಾಗಿ ಬದುಕುವ ವಿಧಾನವನ್ನು ಅನುಷ್ಠಾನಿಸುವ ಪಥ ನಿರ್ದೇಶಕನಾದ .ಅಣ್ಣ ಬಲರಾಮ ಕೃಷಿಯಿಂದ ಸುಭಿಕ್ಷೆ ಎಂದ. ಸಾಂಕೇತಿಕವಾಗಿ ಹಲಧರನಾದ . ಕೃಷ್ಣನಿಗೆ ಮುರಲಿ, ರಾಮನಿಗೆ ಹಲ - ಮುಸಲಗಳು ಭೂಷಣವಾದುವು . ವಿಫುಲವಾದ ಗೋ ಸಂಪತ್ತು - ಅಕ್ಷಯ ಕೃಷಿ ಲಾಭಗಳು ಗೋಪಾಲಕರ ಉತ್ಕರ್ಷಕ್ಕೆ ಕಾರಣವಾದುವು .ಇದೇ ಮುಂದೆ ಭರತವರ್ಷದಲ್ಲಿ ಸ್ಥಾಯಿಯಾಯಿತು . ಸನಾತನವಾಗಿದ್ದ ಹೈನುಗಾರಿಕೆ ಮತ್ತು ಕೃಷಿ ಮರಳಿ ನೆಲೆಯಾಯಿತು . ಬಲರಾಮ - ಕೃಷ್ಣರಿಬ್ಬರೂ ಗೋ ಸಂಪತ್ತು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರು ,ಸಾಧಿಸಿ ತೋರಿಸಿದರು .ಇದು ಮಣ್ಣಿನೊಂದಿಗಿನ ಹೋರಾಟ ,ಈ ಸಂಬಂಧ ಜನಪದೀಯವಾದುದು . ಇದು ರಾಮ - ಕೃಷ್ಣರಿಬ್ಬರ ವ್ಯಕ್ತಿತ್ವದ ಒಂದು ಆಯಾಮವಲ್ಲ , ಸಮಗ್ರ ಸ್ವರೂಪ. ಕೃಷ್ಣ ಮಹಾಭಾರತದ ಪ್ರಮುಖ ಪಾತ್ರಧಾರಿಯಾದರೂ , ಗೀತಾಚಾರ್ಯನಾದರೂ ತನ್ನ ಮೂಲದ ಜನಪದೀಯ ಮನೋಧರ್ಮವನ್ನು ಸುಪ್ತವಾಗಿ ಇರಿಸಿಕೊಂಡಿದ್ದು ಸಂದರ್ಭಾನುಸಾರ ಪ್ರಕಟಿಸುತ್ತಿದ್ದ . ಎಷ್ಟುಅನುರಕ್ತನೋ ಅಷ್ಟೇ ವಿರಕ್ತನಾಗುತ್ತಿದ್ದ , 'ಬಂಧಗಳಿಲ್ಲದ ಕರ್ಮ ನಿರತ' ಎಂಬುದನ್ನು ಬದುಕಿನುದ್ದಕ್ಕೂ ಸಾಧಿಸಿ ತೋರಿಸುತ್ತಾನೆ . ಭಗವಂತನ 'ಧರ್ಮಾವತಾರ' ಎಂದೇ ಕೃಷ್ಣನ ಜನ್ಮವನ್ನು ಋಷಿಮುನಿಗಳು ಕೊಂಡಾಡಿದರು . 'ಕಿಷ್ಣ'ನೆಂಬ ಜನಪದ ತುಳು ಜನಪದ ಸಾಹಿತ್ಯಗಳಲ್ಲಿ ಕೃಷ್ಣ ಕತೆಗಳೂ ರೋಚಕವಾಗಿ ಮೂಡಿಬಂದಿದೆ .ಈ ಪಾಡ್ದನಗಳಲ್ಲಿ ಕೃಷ್ಣ ಅತಿಮಾನುಷನೆಂಬ ಗೌರವವಿದೆಯಾದರೂ 'ಜನಪದ'ನೆಂಬ ಸಲುಗೆಯೂ ಸ್ಪಷ್ಟವಾಗಿದೆ . 'ಕಂಸಾಲ ಸುರಿಯಾ' ಪಾಡ್ದನದಲ್ಲಿ : ಕಂಸಾಲ ಸುರಿಯನು ತನ್ನ ತಂಗಿ ಚಿಕ್ಕಿಯಮ್ಮನಿಗೆ ಮದುವೆಗೆ ವರ ಸಿಕ್ಕದಿದ್ದಾಗ ಆನೆಯ ಸೊಂಡಿಲಲ್ಲಿ ಹೂಮಾಲೆ ಕೊಟ್ಟು ,ಅದು ಯಾರಿಗೆ ಮಾಲೆ ಹಾಕುತ್ತದೋ ಅವನಿಗೆ ತನ್ನ ತಂಗಿಯನ್ನು ಮದುವೆಮಾಡಿ ಕೊಡುತ್ತೇನೆ ಎಂದು ನಿರ್ಧರಿಸುತ್ತಾನೆ .ಆನೆ ಚಪ್ಪರದ ಮೂಲೆಯಲ್ಲಿ ಕುಳಿತಿದ್ದ ಮುದುಕನೊಬ್ಬನ ಕೊರಳಿಗೆ ಮಾಲೆ ಹಾಕುತ್ತದೆ .'ಈ ಮುದುಕನಿಗೆ ನಿನ್ನನ್ನು ಮದುವೆಮಾಡಿ ಕೊಡಲಾರೆ' ಎಂದು ಕಂಸಾಲಸುರಿಯನು ಕೋಪಮಾಡಿಕೊಂಡಾಗ ಚಿಕ್ಕಿಯಮ್ಮ 'ತಲೆಯಲ್ಲಿ ಬರೆದುದನ್ನುಎಲೆಯಿಂದ ಅಳಿಸಲಾಗುತ್ತದೆಯೇ ,ನಾನು ಆ ಮುದುಕನನ್ನು ಮದುವೆಯಾಗುತ್ತೇನೆ . ದೇವರು ಆತನನ್ನು ನನಗೋಸ್ಕರ ಕಳುಹಿಸಿದ್ದಾನೆ' ಎನ್ನುತ್ತಾಳೆ. ಆ ಮುದುಕ ಕೃಷ್ಣನಾಗಿ ಮುಂದೆ ಬಂದು ಆಕೆಯ ಕೈ ಹಿಡಿಯುತ್ತಾನೆ .ಆ ಹುಡುಗಿಯು ಮನಸ್ಸಿನಲ್ಲಿ ಮಾಡಿಕೊಂಡ ನಿರ್ಧಾರವನ್ನು ತಿಳಿದು ಆಕೆಯನ್ನು ಅನುಗ್ರಹಿಸುವುದಕ್ಕಾಗಿಯೇ ಕೃಷ್ಣ ಈ ನಾಟಕವಾಡಿದ . 'ಗಾಳಿಮ ಬೊಳ್ಳಿಮ' ಎಂಬ ಪಾಡ್ದನದಲ್ಲಿಅಣ್ಣಂದ್ರಾಯ ಎಂಬವನ ತಂಗಿಗೆ ಮಕ್ಕಳಾಗದಿದ್ದಾಗ ಕೃಷ್ಣನೇ ಗೋವಳನ ವೇಷ ಧರಿಸಿ ಬಂದು ಆಕೆಯ ಜೊತೆಗೂಡಿ ಆಕೆ ಗರ್ಭಿಣಿಯಾಗುವ ಹಾಗೆ ಮಾಡುತ್ತಾನೆ .ಆಕೆಯ ಹೆರಿಗೆಯಾಗುವಾಗಲೂ ಸೂಲಗಿತ್ತಿಯ ಕೆಲಸಮಾಡಿ ಆಕೆಯ ಸೇವೆ ಮಾಡುತ್ತಾನೆ . ಆದರೆ ನಾಗಸಿರಿ ಪಾಡ್ದನದಲ್ಲಿ ಶ್ರೀಕೃಷ್ಣ ಪತಿವ್ರತೆ ನಾಗಸಿರಿ ಎಂಬಾಕೆಯೊಬ್ಬಳ ಪಾತಿವ್ರತ್ಯ ಪರೀಕ್ಷೆ ಮಾಡಲು ಹೋಗಿ ಆಕೆಯ ಕೋಪಕ್ಕೆ ಪಾತ್ರನಾಗಿ ಶಾಪಕ್ಕೊಳಗಾಗುವ ವರ್ಣನೆ ಇದೆ .ದೇವರಾದರೂ ಪತಿವ್ರತಾ ಶಿರೋಮಣಿಗೆ ಕಿರುಕುಳ ಕೊಟ್ಟರೆ ಅದರ ಫಲ ಅನುಭವಿಸಬೇಕಾಗುತ್ತದೆ ಎಂಬುದು ಈ ಪಾಡ್ದನದ ಸಂದೇಶ . ಗೋಪಿಕಾ ಸ್ತ್ರೀಯರ ವಸ್ತ್ರಕದ್ದ ಘಟನೆಯ ಕುರಿತಾದ ಪಾಡ್ದನವೊಂದು ದೇವರಿಗೆ ಸಂಪೂರ್ಣ ಶರಣಾಗತರಾಗಬೇಕೆಂಬ ಸಂಕೇತವನ್ನು ನೀಡುತ್ತಾ ದೇವರಿಗೆ ಸಂಪೂರ್ಣ ಶರಣಾದರೆ ಮಾತ್ರ ದೇವರು ಕಾಪಾಡುತ್ತಾನೆ .ಅರ್ಧ ನನ್ನ ಪ್ರಯತ್ನ ,ಅರ್ಧ ನಿನ್ನದು ಎಂಬುದಿಲ್ಲ . ಇಂತಹ ಕೆಲವು ತತ್ತ್ವಗಳನ್ನು ಪಾಡ್ದನದ ಅಜ್ಞಾತ ಕವಿಗಳು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದ್ದಾರೆ . ಯಶೋದೆಯ ಮುದ್ದುಮಗನನ್ನು ನೋಡಲು ಗೋಪಿಯರು ಬರುತ್ತಾರೆ . ಮಗುವನ್ನು ಹಿಡಿದು ಮುದ್ದಾಡಿದಾಗ ಮಗು ಮುಖನೋಡಿ ನಗುತ್ತದೆ ,ಎದೆಗೆ ಕೈ ಹಾಕಿ ರವಕೆ ಹರಿಯುತ್ತದೆ .ಕುತ್ತಿಗೆಗೆ ಕೈ ಹಾಕಿ ಕರಿಮಣಿ ಎಳೆಯುತ್ತದೆ . ಆಗ ಗೋಪಿಯರು 'ಮಗು ಮಗು ಎನ್ನುತ್ತೀರಲ್ಲ ,ಇವ ಮಗುವಲ್ಲ ಮದನಗೋಪಾಲ' ಎಂದು ದೂರುತ್ತಾರೆ . 'ಚಿಕ್ಕವನಲ್ಲಿ ತಪ್ಪು ಹುಡುಕಬೇಡಿರಿ . ನಿಮ್ಮ ಮನಸ್ಸಿನಲ್ಲಿ ಏನೋ ಕಳಂಕವಿದೆ .ಪುಟ್ಟ ಮಗುವಿನ ಮನಸ್ಸಿನಲ್ಲಿಕಳಂಕವಿಲ್ಲ' ಎಂದು ಯಶೋದೆ ಅವರನ್ನು ಕಳುಹಿಸುತ್ತಾಳೆ . (ಡಾ.ಸುಶೀಲಾ ಉಪಾಧ್ಯಾಯರ ಬರೆಹಗಳ ಸಂಗ್ರಹದಿಂದ ) ತುಳುನಾಡಿನ 'ಕಂಗುಲು ಕುಣಿತ'ದ ಬಗ್ಗೆ ವಿವರಿಸುವ ಡಾ.ಅಶೋಕ ಆಳ್ವ ಅವರು ಕಾಂಗ್ + ಆಳ್ = ಕಾಂಗಾಳ್ ಆಗಿ ಅದೇ 'ಕಂಗುಲು' ಆಗಿರಬೇಕು . ಈ ಕಾಂಗ್ ಅಂದರೆ ಕಪ್ಪು ,ಆಳ್ ಎಂದರೆ ಮನುಷ್ಯ ,ಇವನೇ ಕೃಷ್ಣ ಎನ್ನುತ್ತಾರೆ .ಕಂಗುಲು ಕುಣಿತದಲ್ಲಿ ನಡುವೆ ಕೊಳಲು ಹಿಡಿದುಕೊಂಡು ಕುಣಿಯುವ ವ್ಯಕ್ತಿ ಕೃಷ್ಣ ,ಅತನ ಸುತ್ತ ತೆಂಗಿನಸಿರಿ ಕಟ್ಟಿಕೊಂಡು ಕುಣಿಯುವ ಸಿರಿಗಳೆ ಗೋಪಿಕೆಯರು ಎನ್ನುವುದು ಅವರ ಊಹೆ . ಅವತಾರ ಪುರುಷರಲ್ಲಿರುವ ಕೆಲವು ದೋಷಗಳನ್ನು ಆ ಅಜ್ಞಾತ ಜನಪದ ಕವಿಗಳು ಎತ್ತಿತೋರಿಸಿ ಹಾಡಿದರು , ಕುಣಿದರು . ಇದರೊಳಗೆ ಏನೋ ತತ್ತ್ವವಿದೆ ಎಂಬುದನ್ನು ತಿಳಿಸುವ ಪ್ರಯತ್ನಮಾಡಿದ್ದಾರೆ. ಬರಹ : ಕೆ.ಎಲ್ .ಕುಂಡಂತಾಯ
ಕಾಪು ನಿಕಿಲ ಚಿಕನ್ ಸ್ಟಾಲ್ ಹೊಸ ಮಾರಿಗುಡಿ, ಬೀಚ್ ರೋಡ್ ಇಲ್ಲಿಗೆ ಸ್ಥಳಾಂತರಗೊಂಡಿರುತ್ತದೆ
Posted On: 10 Aug 2020, 02:46 PM
ಕಾಪು ಮೂರನೇ ಮಾರಿಗುಡಿ ಹತ್ತಿರದಲ್ಲಿ ಇದ್ದ ನಿಕಿಲ ಚಿಕನ್ ಸ್ಟಾಲ್ ಈಗ ಹೊಸಮಾರಿಗುಡಿ ಬಳಿ ಇರುವ ಬೀಚ್ ರೋಡ್ ಇಲ್ಲಿಗೆ ಸ್ಥಳಾಂತರಗೊಂಡಿರುತ್ತದೆ.. ಇಲ್ಲಿ ಬಾಯ್ಲರ್ , ಟೈಸನ್, ಊರಿನ ಕೋಳಿ, ಕೋಳಿ ಮಾಂಸ ಸಿಗುತ್ತದೆ ಜೊತೆಗೆ ಹೋಮ್ ಡೆಲಿವರಿ ಕೂಡ ಕೊಡಲಾಗುತ್ತದೆ. ಗ್ರಾಹಕರ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಜಗದೀಶ್ ಶೆಟ್ಟಿ ಕಾಪು 9845069173, 8197956173
ಹೇರೂರಿನಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ
Posted On: 09 Aug 2020, 08:44 PM
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೇರೂರು ಒಕ್ಕೂಟದ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸಹಭಾಗಿತ್ವದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಮಾಡುವ ಕಾರ್ಯಕ್ರಮ ಹೇರೂರು ಭಜನಾ ಮಂಡಳಿಯ ವಠಾರದಲ್ಲಿ ನಡೆಯಿತು. ಭಜನಾ ಮಂಡಳಿಯ ಅಧ್ಯಕ್ಷರಾದ ಸುಜಿತ್ ಕುಮಾರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಕೃಷಿ ಅಧಿಕಾರಿ ಶ್ರೀ ರಾಘವೇಂದ್ರ ಆಚಾರ್ಯ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಉಡುಪಿ ತಾಲೂಕು ಯೋಜನಾಧಿಕಾರಿ ಶ್ರೀ ರೋಹಿತ್ ಮಜೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಗಣೇಶ್ ಶೆಟ್ಟಿ ಶುಭ ಹಾರೈಸಿದರು. ಹೇರೂರು ಒಕ್ಕೂಟದ ಅಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ರವರು ಶಿರ್ವ ವಲಯದ ಮೇಲ್ವಿಚಾರಕರಾದ ಶ್ರೀಮತಿ ಪಲ್ಲವಿ ಶೆಟ್ಟಿ ಸೇವಾ ಪ್ರತಿನಿಧಿ ಶ್ರೀಮತಿ ವಸಂತಿ ಆಚಾರ್ಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು ಭಜನಾ ಮಂಡಳಿಯ ಬಳಿ ಗಿಡಗಳನ್ನು ನೆಡಲಾಯಿತು ಆಗಮಿಸಿದ ಸದಸ್ಯರಿಗೆ ವಿವಿಧ ಗಿಡಗಳನ್ನು ನೀಡಲಾಯಿತು
ಕಾಪು ಪೇಟೆಯಲ್ಲಿ ನಾಳೆಯಿಂದ ಸ್ವಯಂ ಪ್ರೇರಿತ ಬಂದ್ ಇಲ್ಲ
Posted On: 09 Aug 2020, 08:33 PM
ಕಾಪು,09.ಆಗಸ್ಟ್ : ನಾಳೆಯಿಂದ ಸ್ವಯಂ ಪ್ರೇರಿತ ಬಂದ್ ಇಲ್ಲ ಈಗಾಗಲೇ ಸಾಕಷ್ಟು ವಹಿವಾಟು ಇಲ್ಲದೆ ಹೈರಾಣಾಗಿರುವ ವ್ಯಾಪಾರಿಗಳು ಅರ್ಧ ದಿನದ ಸ್ವಯಂ ಪ್ರೇರಿತ ಬಂದ್ ಅನ್ನು ನಿಲ್ಲಿಸುವ ಆಲೋಚನೆಯಲ್ಲಿದ್ದಾರೆ. ಬಂದ್ ಆರಂಭವಾದಾಗಿನಿಂದ ಜನರು ಬೆಳಿಗ್ಗೆಯೂ ಪೇಟೆಗೆ ಬರುವುದನ್ನು ನಿಲ್ಲಿಸಿರುವುದರಿಂದ ಇದ್ದ ವ್ಯಾಪಾರವೂ ನಿಂತು ಹೋಗಿದ್ದು ವರ್ತಕರು ದಿಕ್ಕೆಟ್ಟು ಹೋಗಿದ್ದಾರೆ. ಬಸ್ಸುಗಳಲ್ಲೂ ಪ್ರಯಾಣಿಕರು ಕಡಿಮೆ ಆಗಿರುವುದರಿಂದ ಇಂದು ಬಸ್ಸುಗಳು ಸಂಚಾರವನ್ನೇ ಮಾಡಲಿಲ್ಲ. ಒಟ್ಟಿನಲ್ಲಿ ಆದದ್ದಾಗಲಿ ನಮ್ಮ ಜಾಗ್ರತೆ ನಾವು ಮಾಡಿಕೊಂಡು ಇಡೀ ದಿನ ವ್ಯಾಪಾರ ಮಾಡುವ ಎಂದು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ
ನೂತನ ಶಿಕ್ಷಣ ನೀತಿ ದೇಶದ ಅಭಿವೃದ್ಧಿಗೆ ರಹದಾರಿ
Posted On: 08 Aug 2020, 07:36 PM
ಕಳೆದ ಹಲವಾರು ವಷ೯ಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿತ್ತು ಈ ಬಗ್ಗೆ ಕೇಂದ್ರ ಸಕಾ೯ರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಶಿಕ್ಷಣವು ಕೇವಲ ಅಕ್ಷರಸ್ಥರನ್ನಾಗಿ ಮಾಡುವ ಕೇಲಸ ಮಾತ್ರ ಮಾಡುದಲ್ಲ ಅದು ವಿದ್ಯಾಥಿ೯ ಯ ಸವ೯ ತೋಮುಖ ಅಭಿವೃದ್ಧಿಯತ್ತ ಗಮನ ಹರಿಸಬೇಕು.ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಲು ಈ ರೀತಿಯ ನೀತಿ ಅವಶ್ಯಕವಿತ್ತು. ವಿವಿಗಳು ಸಟಿ೯ಫಿಕೆಟ್ ನೀಡುವ ಮಾರುಕಟ್ಟೆಯಾಗಬಾರದು ಅದು ದೇಶದ ಭವಿಷ್ಯವನ್ನು ಬದಲಾಯಿಸುವ ಕೇಂದ್ರವಾಗಬೇಕು ಈ ನಿಟ್ಟಿನಲ್ಲಿ ಸಕಾ೯ರವು ತಂದಿರುವ ಈ ನೀತಿ ವಿದ್ಯಾಥಿ೯ಗಳಿಗೆ ಉತ್ತಮವಾಗಬಹುದಾಗಿದೆ. ಹೊಸ ಶಿಕ್ಷಣ ನೀತಿಯ ಸಾರಾಂಶ: 1. 10 + 2 ಬೋರ್ಡ್ ರಚನೆಯನ್ನು ಕೈಬಿಡಲಾಗಿದೆ 2. ಹೊಸ ಶಾಲೆಯ ರಚನೆಯು 5 + 3 + 3 + 4 ಆಗಿರುತ್ತದೆ 3. 5 ಪೂರ್ವ ಶಾಲೆ, 6 ರಿಂದ 8 ಮಧ್ಯಮ ಶಾಲೆ, 8 ರಿಂದ 11 ಪ್ರೌ School ಶಾಲೆ, 12 ರಿಂದ ಪದವಿ 4. ಯಾವುದೇ ಪದವಿ 4 ವರ್ಷಗಳು 5. 6 ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣ ಲಭ್ಯವಿದೆ 6. 8 ರಿಂದ 11 ರವರೆಗೆ ವಿದ್ಯಾರ್ಥಿಗಳು ವಿಷಯಗಳನ್ನು ಆಯ್ಕೆ ಮಾಡಬಹುದು 7. ಎಲ್ಲಾ ಪದವಿ ಕೋರ್ಸ್ ಪ್ರಮುಖ ಮತ್ತು ಚಿಕ್ಕದಾಗಿರುತ್ತದೆ ಉದಾಹರಣೆ - ವಿಜ್ಞಾನ ವಿದ್ಯಾರ್ಥಿಯು ಭೌತಶಾಸ್ತ್ರವನ್ನು ಮೇಜರ್ ಮತ್ತು ಸಂಗೀತವನ್ನು ಚಿಕ್ಕದಾಗಿ ಹೊಂದಬಹುದು. ಅವರು ಆಯ್ಕೆ ಮಾಡಬಹುದಾದ ಯಾವುದೇ ಸಂಯೋಜನೆ. 8. ಎಲ್ಲಾ ಉನ್ನತ ಶಿಕ್ಷಣವನ್ನು ಕೇವಲ ಒಂದು ಪ್ರಾಧಿಕಾರದಿಂದ ನಿಯಂತ್ರಿಸಲಾಗುತ್ತದೆ. 9. ಯುಜಿಸಿ ಎಐಸಿಟಿಇ ವಿಲೀನಗೊಳ್ಳುತ್ತದೆ. 10. ಎಲ್ಲಾ ವಿಶ್ವವಿದ್ಯಾಲಯ ಸರ್ಕಾರ, ಖಾಸಗಿ, ಮುಕ್ತ, ಡೀಮ್ಡ್, ವೃತ್ತಿಪರ ಇತ್ಯಾದಿಗಳಿಗೆ ಒಂದೇ ಶ್ರೇಣಿ ಮತ್ತು ಇತರ ನಿಯಮಗಳಿವೆ. 11. ದೇಶದ ಎಲ್ಲಾ ರೀತಿಯ ಶಿಕ್ಷಕರಿಗೆ ಹೊಸ ಶಿಕ್ಷಕರ ತರಬೇತಿ ಮಂಡಳಿಯನ್ನು ಸ್ಥಾಪಿಸಲಾಗುವುದು, ಯಾವುದೇ ರಾಜ್ಯವು ಬದಲಾಗುವುದಿಲ್ಲ 12. ಯಾವುದೇ ಕೊಲಾಜ್ಗೆ ಅದೇ ಮಟ್ಟದ ಮಾನ್ಯತೆ, ಅದರ ರೇಟಿಂಗ್ ಕೊಲಾಜ್ ಆಧರಿಸಿ ಸ್ವಾಯತ್ತ ಹಕ್ಕುಗಳು ಮತ್ತು ಹಣವನ್ನು ಪಡೆಯುತ್ತದೆ. 13. ಪೋಷಕರು ಮನೆಯಲ್ಲಿ 3 ವರ್ಷಗಳವರೆಗೆ ಮತ್ತು ಶಾಲಾಪೂರ್ವ 3 ರಿಂದ 6 ರವರೆಗೆ ಮಕ್ಕಳಿಗೆ ಕಲಿಸಲು ಹೊಸ ಮೂಲ ಕಲಿಕಾ ಕಾರ್ಯಕ್ರಮವನ್ನು ಸರ್ಕಾರ ರಚಿಸುತ್ತದೆ 14. ಯಾವುದೇ ಕೋರ್ಸ್ನಿಂದ ಬಹು ಪ್ರವೇಶ ಮತ್ತು ನಿರ್ಗಮನ 15. ಪ್ರತಿ ವರ್ಷ ವಿದ್ಯಾರ್ಥಿಗೆ ಪದವಿಗಾಗಿ ಕ್ರೆಡಿಟ್ ವ್ಯವಸ್ಥೆಯು ಕೆಲವು ಸಾಲಗಳನ್ನು ಪಡೆಯುತ್ತದೆ, ಅವನು ಕೋರ್ಸ್ ವಿರಾಮ ತೆಗೆದುಕೊಂಡು ಕೋರ್ಸ್ ಅನ್ನು ಪೂರ್ಣಗೊಳಿಸಲು ಮತ್ತೆ ಬಂದರೆ ಅವನು ಬಳಸಿಕೊಳ್ಳಬಹುದು. 16. ಎಲ್ಲಾ ಶಾಲೆಗಳ ಪರೀಕ್ಷೆಗಳು ವರ್ಷಕ್ಕೆ ಸೆಮಿಸ್ಟರ್ ಬುದ್ಧಿವಂತವಾಗಿರುತ್ತವೆ 17. ಪಠ್ಯಕ್ರಮವು ಯಾವುದೇ ವಿಷಯದ ಮುಖ್ಯ ಜ್ಞಾನಕ್ಕೆ ಮಾತ್ರ ಕಡಿಮೆಯಾಗುತ್ತದೆ 18. ವಿದ್ಯಾರ್ಥಿಗಳ ಪ್ರಾಯೋಗಿಕ ಮತ್ತು ಅಪ್ಲಿಕೇಶನ್ ಜ್ಞಾನದ ಮೇಲೆ ಹೆಚ್ಚಿನ ಗಮನ ಯಾವುದೇ ಪದವಿ 19. ಕೋರ್ಸ್ಗೆ ವಿದ್ಯಾರ್ಥಿ ಕೇವಲ ಒಂದು ವರ್ಷ ಪೂರ್ಣಗೊಳಿಸಿದರೆ ಅವನಿಗೆ ಮೂಲ ಪ್ರಮಾಣಪತ್ರ ಸಿಗುತ್ತದೆ, ಎರಡು ವರ್ಷ ಪೂರ್ಣಗೊಳಿಸಿದರೆ ಅವನಿಗೆ ಡಿಪ್ಲೊಮಾ ಪ್ರಮಾಣಪತ್ರ ಸಿಗುತ್ತದೆ ಮತ್ತು ಅವನು ಪೂರ್ಣ ಕೋರ್ಸ್ ಪೂರ್ಣಗೊಳಿಸಿದರೆ ಪದವಿ ಪ್ರಮಾಣಪತ್ರವನ್ನು ಪಡೆಯುತ್ತಾನೆ. ಆದ್ದರಿಂದ ಯಾವುದೇ ವಿದ್ಯಾರ್ಥಿಯ ನಡುವೆ ಕೋರ್ಸ್ ಅನ್ನು ಮುರಿದರೆ ಅವನಿಗೆ ಯಾವುದೇ ವರ್ಷವನ್ನು ನೀಡಲಾಗುವುದಿಲ್ಲ. 20. ಎಲ್ಲಾ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಫೀಡ್ ಅನ್ನು ಪ್ರತಿ ಕೋರ್ಸ್ ಅನ್ನು ಕ್ಯಾಪಿಂಗ್ ಮಾಡುವ ಮೂಲಕ ಒಂದೇ ಪ್ರಾಧಿಕಾರದಿಂದ ನಿಯಂತ್ರಿಸಲಾಗುತ್ತದೆ. ಈಗ ನಮ್ಮ ಶಿಕ್ಷಣ ವ್ಯವಸ್ಥೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿರುತ್ತದೆ ಮತ್ತು ನಮ್ಮ ಮಕ್ಕಳ ಭವಿಷ್ಯವು ಉಜ್ವಲವಾಗಿರುತ್ತದೆ. ಸಕಾ೯ರ ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ಬದಲಾವಣೆ ನಮ್ಮಿoದಲೇ ಪ್ರಾರಂಭವಾಗಲಿ. ಲೇಖಕ : ರಾಘವೇಂದ್ರ ಪ್ರಭು, ಕವಾ೯ಲು, ಶಿಕ್ಷಣ ಪ್ರೇಮಿ
ಯಶಸ್ವಿ ಉದ್ಯಮಿಗಳ ಸಂಘಟನೆ ಆಸರೆಯಿಂದ ಕೊರೊನ ಜಾಗೃತಿ ಕಾರ್ಯಕ್ರಮ
Posted On: 08 Aug 2020, 07:21 PM
ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ಇಲ್ಲಿ ತರಬೇತಿ ಪಡೆದು ಯಶಸ್ವೀ ಉದ್ಯಮಿ ಗಳ ಸಂಘಟನೆ "ಆಸರೆ" ಇದರ ವತಿಯಿಂದ ಕೋವಿಡ್ 19 ಕೋರೋಣ ಇದರ ಸಮಸ್ಯೆ ಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ರುಡ್ಸೆಟ್ ನಿರ್ದೇಶಕರಾದ ಶ್ರೀ ಪಾಪ ನಾಯಕ್ ಆಸರೆ ಸಂಘಟನೆಯ ಅಧ್ಯಕ್ಷ ರಾದ ಕಿಶ್ವರಿ ಸಂಸ್ಥೆ ಯ ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್, ಸಂತೋಷ ಶೆಟ್ಟಿ, ಆಸರೆ ಸಂಘಟನೆಯ ಮಾಜಿ ಅಧ್ಯಕ್ಷರು ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಎಮ್ ಮಹೇಶ್ ಕುಮಾರ್, ಗೌರವ ಅಧ್ಯಕ್ಷ ರಾದ ರಾಜೇಶ್, ಡಿ. ಕೆ ಸಿ ಅಮೀನ್, ಕಾರ್ಯದರ್ಶಿ ಉಮೇಶ್ ಹಾಗೂ ಆಸರೆ ಸಂಘಟನೆ ಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆಯನ್ನು ಮಾಜಿ ಕಾರ್ಯದರ್ಶಿ ಕುಶ ಕುಮಾರ್ ಮಾಡಿದರು.
ಲಯನ್ಸ್ ಕ್ಲಬ್ ಬಂಟಕಲ್ಲು 2020-21ನೇ ಸಾಲಿನ ಪದಗ್ರಹಣ ಕಾರ್ಯಕ್ರಮ
Posted On: 08 Aug 2020, 07:07 PM
ಬಂಟಕಲ್ಲು ಲಯನ್ಸ್ ಕ್ಲಬ್ ಬಿ ಸಿ ರೋಡ್ ಇದರ ಪದಗ್ರಹಣ ಕಾರ್ಯಕ್ರಮವು ನಿನ್ನೆ ಸಂಜೆ ಗಂಟೆ 5.30 ಕ್ಕೆ ಬಿ.ಸಿ ರೋಡ್ ಪಾಂಬೂರು ನಿಶಾ ಕೆಟರರ್ಸ್ ನ ಮಾಲಕರಾದ ಇಗ್ನೇಶಿಯಸ್ ಡಿಸೋಜ ರವರ ಮನೆಯಲ್ಲಿ ನೆರವೇರಿತು. ಈ ಸಭೆಯಲ್ಲಿ 317C ಲಯನ್ ಜಿಲ್ಲಾ ಗವರ್ನರ್ ಲಯನ್ N .M ಹೆಗ್ಡೆ ಮತ್ತು 317 C II ಪ್ರಾಂತ್ಯ ಅಧ್ಯಕ್ಷ ಲಯನ್ ಸ್ಟೀಫನ್ ಕಾಸ್ಟ್ಲಿನೋ , ಲಿಯೋ ಕ್ಲಬ್ ನ ಕೋ ಅರ್ಡಿನೇಟ್ ಲಯನ್ ಜೆರಾಲ್ಧ್ ಫೆರ್ನಾಂಡಿಸ್, ವಲಯ ಅಧ್ಯಕ್ಷ ಲಯನ್ ಲಾನ್ಸಿ ಕೊರ್ಡ ಮೊದಲಾದವರು ಉಪಸ್ಥಿತರಿದ್ದರು. ಕೇವಲ ಕ್ಲಬ್ ಸದಸ್ಯರ ಉಪಸ್ಥಿತಿಯಲ್ಲಿ ಸರಳವಾಗಿ ಕಾರ್ಯಕ್ರಮ ನೆರವೇರಿತು ಬಿ.ಸಿ ರೋಡ್ ಕ್ಲಬ್ ನ ಅಧ್ಯಕ್ಷರಾಗಿ ಲಯನ್ ವಿಜಯ್ ಧೀರಜ್ ಪದ ಪ್ರಧಾನ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಲಯನ್ ಅರುಂಧತಿ ಪ್ರಭು, ಖಜಾಂಚಿಯಾಗಿ ದಿನೇಶ್ S K .ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷರು ಲಯನ್ K .R ಪಾಟ್ಕರ್ ತಮ್ಮ ಅನಿಸಿಕೆ ತಿಳಿಸಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಇದೇ ಸಮಯದಲ್ಲಿ ನೂತನ ಲಿಯೋ ಕ್ಲಬ್ ಉದ್ಘಾಟನೆಗೊಂಡು ನೂತನ ಲಿಯೋ ಅಧ್ಯಕ್ಷರಾಗಿ ಲಿಯೋ ಲಾಯಲ್ ಡಿಸೋಜಾ ಕಾರ್ಯದರ್ಶಿ ಲಯನ್ ಗ್ಲೇನ್ ಪಿ0ಟೋ, ಹಾಗೂ ಖಜಾಂಜಿ ಆಗಿ ಆರೋನ್ ಡಿಸೋಜರವರು ನೂತನ ಲಿಯೋ ಕ್ಲಬ್ ನ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು ಲಯನ್ ಅನಿತಾ ಮಥ್ಯಾಯಸ್ ಕಾರ್ಯಕ್ರಮ ನಿರೂಪಿಸಿದರು.
ಕುಂಜೂರು ದುರ್ಗಾ ದೇವಸ್ಥಾನದ ನಿವೃತ್ತ ಸಿಬಂದಿಗಳಿಗೆ ಸಮ್ಮಾನ
Posted On: 07 Aug 2020, 08:37 PM
ಕಾಪು, ಆ. 7 : ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಹಲವು ದಶಕಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಗೋವಿಂದ ಉಡುಪ ದಂಪತಿ ಮತ್ತು ಅಡಿಪುಮನೆ ಗೋವಿಂದ ದೇವಾಡಿಗ ದಂಪತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ತಲಾ 50,000 ರೂಪಾಯಿ ಗೌರವ ನಿಧಿಯೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಮ್ಮಾನ ಕಾರ್ಯಕ್ರಮ ನೆರವೇರಿಸಿದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಮಾತನಾಡಿ, ಇಬ್ಬರೂ ಕೂಡಾ ತಮ್ಮ ಸೇವೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಭವಿಷ್ಯದಲ್ಲಿ ಇವರ ಜೀವನವನ್ನು ದೇವರು ಸುಖಮಯವಾಗಿರಿಸಲಿ ಎಂದು ಹಾರೈಸಿದರು. ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ, ಎಲ್ಲೂರುಗುತ್ತು ಪ್ರಭಾಕರ ಶೆಟ್ಟಿ, ದೇಗುಲದ ಪರ್ಯಾಯ ಅರ್ಚಕ ವೇ. ಮೂ. ಚಕ್ರಪಾಣಿ ಉಡುಪ, ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀವತ್ಸ ರಾವ್, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಗಿರಿಜಾ ಪೂಜಾರ್ತಿ, ಸರೋಜಿನಿ ಕುಮಾರಿ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಮಾಧವ ರಾವ್ ಪಣಿಯೂರು, ಎಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಮತಾ ವೈ. ಶೆಟ್ಟಿ, ಯಶೋಧರ ಶೆಟ್ಟಿ ಬಗ್ಗೇಡಿಗುತ್ತು, ಶ್ರೀ ದುರ್ಗಾ ಮಿತ್ರವೃಂದದ ಮಾಜಿ ಅಧ್ಯಕ್ಷ ರಾಕೇಶ್ ಕುಂಜೂರು ಮೊದಲಾದವರು ಉಪಸ್ಥಿತರಿದ್ದರು. ಎಲ್ಲೂರು ಗ್ರಾ.ಪಂ. ಮಾಜಿ ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮಳೆ ಹಾನಿಗೆ ತಕ್ಷಣ ಪರಿಹಾರ ವಿತರಿಸಿ: ಸಚಿವ ಬೊಮ್ಮಾಯಿ
Posted On: 06 Aug 2020, 07:12 PM
ಉಡುಪಿ ಆಗಸ್ಟ್ 6 : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣವೇ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಗುರುವಾರ, ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಮಳೆ ಹಾನಿ ಹಾಗೂ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ, ಮನೆ ಹಾನಿಯ ವಿವರ ಕುರಿತು ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ , ಹಾನಿಯದ ದಿನವೇ ಅಪ್ಲೋಡ್ ಮಾಡುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಕೃಷಿ ಬೆಳೆ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಓ ಒಳಗೊಂಡ ತಂಡಗಳನ್ನು ರಚಿಸಿ, ಹಾನಿಯ ಸಮೀಕ್ಷೆಯನ್ನು ಶೀಘ್ರದಲ್ಲಿ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಂಡು ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ, ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಅಲ್ಲಿನ ಜನತೆಗೆ ಈ ತಿಂಗಳ ಪಡಿತರದ ಜೊತೆಗೆ , ಮುಂದಿನ ತಿಂಗಳು ಪಡಿತರವನ್ನು ಮುಂಚಿತವಾಗಿ ವಿತರಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಇದುವರೆಗೆ 116 ಮನೆಗಳಿಗೆ ಭಾಗಶ: ಹಾನಿ ಮತ್ತು 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ, ವಿಪತ್ತು ಪರಿಹಾರ ನಿಧಿಯಲ್ಲಿ ಹಣದ ಕೊರತೆ ಇಲ್ಲ, ತಹಸೀಲ್ದಾರ್ ಗಳಿಗೆ ಹಾನಿಯ ಪರಿಹಾರ ವಿತರಿಸುವ ಅಧಿಕಾರ ನೀಡಲಾಗಿದೆ, ಸಂಬಂಧಪಟ್ಟ ತಹಸೀಲ್ದಾರ್ ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ, ಪ್ರವಾಹದಿಂದ ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ, ಪ್ರವಾಹ ಪೀಡಿತ ಸಂಭವವಿರುವ 26 ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಎಲ್ಲಾ ಅಧಿಕಾರಿಗಳಿಗೆ ಕೇಂದ್ರಸ್ಥಾನದಲ್ಲಿರಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಚಿವರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ಎತ್ತುವಳಿ ಆಗಿದ್ದು, ಕಳೆದ ತಿಂಗಳು 95% ಪಡಿತರ ವಿತರಣೆ ಆಗಿದೆ, 1000 ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಎಂಸಿಎಫ್ ನಿಂದ ನಾಳೆ ಸರಬರಾಜು ಆಗಲಿದ್ದು, ರಸಗೊಬ್ಬರದ ಸಮಸ್ಯೆ ಇಲ್ಲ, ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, 88% ಪೂರ್ಣಗೊಂಡಿದೆ , ಮರವಂತೆ ಮತ್ತು ನಾವುಂದ ಕ್ಕೆ ಭೇಟಿ ನೀಡಿ ನೆರೆ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಡಿಸಿ ಹೇಳಿದರು. ಜಿಲ್ಲೆಗೆ ಪ್ರಾಕೃತಿಕ ವಿಕೋಪ ನಿಧಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಸಚಿವ ಬೊಮ್ಮಾಯಿ , ಜಿಲ್ಲೆಯ ಪ್ರತಿದಿನದ ಹಾನಿಯ ವರದಿಯನ್ನು ತಮಗೆ ನೀಡುವಂತೆ ಹಾಗೂ ಜಿಲ್ಲೆಯ ನಾಗರೀಕರಿಗೆ ಮಳೆಯಿಂದಾಗಿ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ , ತಕ್ಷಣವೇ ಸ್ಪಂದಿಸಿ ಅಗತ್ಯ ನೆರವು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್19 ಸ್ಥಿತಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕಳೆದ ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 145 ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಸ್ತುತ 2100 ಸಕ್ರಿಯ ಪ್ರಕರಣಗಳಿದ್ದು, 1000 ಮಂದಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಮತ್ತು 1100 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ, ಇದುವರೆಗೆ ಒಟ್ಟು 46 ಮರಣ ಸಂಭವಿಸಿದ್ದು, 15 ದಿನಗಳಿಂದ ಮರಣದ ಸಂಖ್ಯೆ ಅಧಿಕವಾಗಿದೆ. ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಬೆಡ್ ಗಳು , ವೆಂಟಿಲೇಟರ್ ಮತ್ತು ಹೈ ಪ್ಲೋ ಆಕ್ಸಿಜಿನ್ ಬೆಡ್ ಗಳ ಕೊರತೆ ಇಲ್ಲ , ಪಾಸಿಟಿವ್ ಬಂದ ಕೊನೆಯ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮರಣ ಅಧಿಕವಾಗಿದ್ದು, ಇದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಕ್ಷಣೆ ನಡೆಸಬೇಕಿದ್ದು, ಇದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಸಚಿವರಲ್ಲಿ ಕೋರಿದರು. ಜಿಲ್ಲೆಯಲ್ಲಿನ ಸರ್ಕಾರಿ ಕೋವಿಡ್ ಲ್ಯಾಬ್ ಕಾರ್ಯ, ಪರೀಕ್ಷಾ ಕಿಟ್ ಗಳ ಸರಬರಾಜು ಕುರಿತು ಮಾಹಿತಿ ಪಡೆದ ಉಸ್ತುವಾರಿ ಸಚಿವರು, ತುರ್ತು ಸಂದರ್ಭಗಳಲ್ಲಿ ಮಾತ್ರ ಆಂಟಿಜಿನ್ ಕಿಟ್ ಗಳ ಬಳಕೆ ಮಾಡುವಂತೆ ಮತ್ತು ರೋಗ ಲಕ್ಷಣವಿರುವ ವ್ಯಕ್ತಿಗಳನ್ನು ಆರ್.ಟಿ.ಪಿ.ಸಿ.ಆರ್. ಮೂಲಕ ಪರೀಕ್ಷೆ ನಡೆಸುವಂತೆ ಸೂಚಿಸಿದರು, ಆರೋಗ್ಯ ಇಲಾಖೆಯಲ್ಲಿ ಸರ್ವೆಕ್ಷಣಾ ಸಿಬ್ಬಂದಿ ನೇಮಕ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೊಮ್ಮಾಯಿ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು
