Updated News From Kaup
ಮಾ.30 : ಆಚಾರ್ಯ ಮಧ್ವರ ಜನ್ಮಭೂಮಿ ಶ್ರೀಕ್ಷೇತ್ರ ಪಾಜಕದಿಂದ ಭಕ್ತಿ ರಥಯಾತ್ರೆ ಪ್ರಾರಂಭ
Posted On: 28 Mar 2025, 01:53 PM
ಕಾಪು : ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರಿಂದ ನಿರ್ಮಿಸಲ್ಪಟ್ಟ ನೂತನ ಮಂದಿರದಲ್ಲಿ ಶ್ರೀರಾಮಚಂದ್ರ ದೇವರನ್ನು ಪ್ರತಿಷ್ಠಾಪಿಸಿದ ನಂತರ, ನಮ್ಮಲ್ಲಿ ನಿರಂತರ ರಾಮದೇವರ ಪ್ರಜ್ಞೆ ಜಾಗೃತಿಯಲ್ಲಿರಬೇಕೆಂಬ ಸದುದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಮಿತಿಯವರ ಯೋಚನೆಯಂತೆ ಅದರ ಟ್ರಸ್ಟಿಗಳೂ ಆಗಿರುವ ಉಡುಪಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರತಿಯೊಬ್ಬರ ಮನೆಯಲ್ಲೂ ನಿರಂತರ ಶ್ರೀರಾಮ ಜಪ ನಡೆಯಬೇಕೆಂಬ ದೃಷ್ಠಿಯಿಂದ ರಾಮತಾರಕ ಮಂತ್ರದ ಮಹತ್ವವನ್ನು ತಿಳಿಸಲು ಹಾಗೂ ಭಕ್ತಿ ಸಿದ್ಧಾಂತವನ್ನು ಪ್ರಸಾರ ಮಾಡಲು "ಭಕ್ತಿ ರಥಯಾತ್ರೆ"ಯನ್ನು ಆಚಾರ್ಯ ಮಧ್ವರ ಅವತಾರ ಭೂಮಿ ಶ್ರೀಕ್ಷೇತ್ರ ಪಾಜಕದಿಂದ ಮಾ.30, ರವಿವಾರ ಪ್ರಾರಂಭಿಸುವುದಾಗಿ ಸಂಕಲ್ಪಿಸಿದ್ದಾರೆ ಎಂದು ಪಾಜಕ ಭಕ್ತಿ ರಥಯಾತ್ರೆ ಸಮಿತಿಯ ಸದಸ್ಯರಾದ ಪಡುಬೆಳ್ಳೆ ಮಧ್ವರಾಜ ಭಟ್ ಗುರುವಾರ ಕಾಪು ಪ್ರೆಸ್ ಕ್ಲಬ್ನಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಕ್ತಿ ರಥವು ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ. ಪೇಜಾವರ ಶ್ರೀಪಾದರ ಮಾರ್ಗದರ್ಶನದಲ್ಲಿ ಎ.10 ರಿಂದ 12ರ ವರೆಗೆ ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ, ಎ.13 ರಂದು ಭಕ್ತರೆಲ್ಲರೂ ಸೇರಿ ಜಪಿಸಿದ ದಶಕೋಟಿ ರಾಮತಾರಕ ಮಂತ್ರದ ಯಾಗ, ಸಂತ ಸಂಗಮ, ಹಿಂದೂ ಸಮಾವೇಶ ಶ್ರೀಕ್ಷೇತ್ರ ಪೆರ್ಣಂಕಿಲದಲ್ಲಿ ನಡೆಯಲಿದೆ. ಯಾಗದಂದು ರಾಮತಾರಕ ಮಂತ್ರ ಜಪಿಸಿದ ಭಕ್ತರಿಗೆ ಮಂತ್ರಾಕ್ಷತೆ ಸಹಿತ ಪ್ರಸಾದ ವಿತರಿಸಲಾಗುವುದು. ಮಾ.30 ರವಿವಾರ ಬೆಳಿಗ್ಗೆ ಗಂಟೆ 9ಕ್ಕೆ ಶ್ರೀಪಾಜಕ ಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿಶ್ವಹಿಂದೂ ಪರಿಷದ್ ಪ್ರಾಂತೀಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಪೆರ್ಣಂಕಿಲ, ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಕುರ್ಕಾಲು ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಪೂಜಾರಿ ಸಹಿತ ಇನ್ನಿತರ ಗಣ್ಯದ ಉಪಸ್ಥಿತಿಯಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಕ್ತಿರಥಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡುವರು. ನಂತರ ವೇದಘೋಷ,ಪೂರ್ಣಕುಂಭ,ಕುಣಿತ ಭಜನೆ, ಡೋಲು, ಮಂಗಲವಾದ್ಯ ಸಹಿತ ಭಕ್ತಸಮೂಹದೊಂದಿಗೆ ಶ್ರೀಪರಶುರಾಮ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ, ಅಲ್ಲಿಂದ ಬೈಕ್ ರ್ಯಾಲಿಯೊಂದಿಗೆ ದಂಡತೀರ್ಥಕ್ಕೆ ಸಾಗುವುದು. ಅಲ್ಲಿಂದ ಮುಂದೆ ಮಂಗಳುರು, ಕಾಸರಗೋಡು ಜಿಲ್ಲೆಯಲ್ಲಿ ಸಾಗಿ ಎ.9 ಬುಧವಾರ ಪಾಜಕದಲ್ಲಿಯೇ ಸಮಾಪನಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರರು ಹಾಗೂ ಶ್ರೀಮಧ್ವಮಠ ಪಾಜಕಕ್ಷೇತ್ರದ ಪ್ರಧಾನ ವ್ಯವಸ್ಥಾಪಕರಾದ ವೇದಮೂರ್ತಿ ಮಾಧವ ಉಪಾಧ್ಯಾಯ, ಸಮಿತಿಯ ಅಧ್ಯಕ್ಷ ಕುರ್ಕಾಲು ಪಟ್ಟಚಾವಡಿ ದಿನೇಶ್ ಶೆಟ್ಟಿ, ಪ್ರಧಾನಕಾರ್ಯದರ್ಶಿ ಪಟ್ಟಾಭಿರಾಮ ಆಚಾರ್ಯ, ವಿಶ್ವನಾಥ ಪೂಜಾರಿ ಕುರ್ಕಾಲು, ಪರಶುರಾಮ ಭಟ್ ಉಪಸ್ಥಿತರಿದ್ದರು.
ಆಟೊ ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು : 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
Posted On: 28 Mar 2025, 01:48 PM
ಬಂಟಕಲ್ಲು : ಆಟೊ ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು : 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಸತತ 5ನೇ ಬಾರಿಗೆ ಅಧ್ಯಕ್ಷರಾಗಿ ಮಂಜುನಾಥ್ ಪೂಜಾರಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಮಾಧವ ಕಾಮತ್, ಉಪಾಧ್ಯಕ್ಷರಾಗಿ ಸಂದೇಶ ಕುಲಾಲ್, ಕಾರ್ಯದರ್ಶಿಯಾಗಿ ಹರೀಶ್ ಹೇರೂರು, ಜೊತೆ ಕಾರ್ಯದರ್ಶಿಯಾಗಿ ಗೋಪಾಲ್ ದೇವಾಡಿಗ, ಕೋಶಾಧಿಕಾರಿ ಸುರೇಶ್ ಟಿವಿಎಸ್, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ (ಗುಂಡು) ಆಯ್ಕೆಯಾದರು.
ಕಾಪು ಶ್ರೀ ಹಳೇ ಮಾರಿಯಮ್ಮ ದೇವಳ : ಸಮಗ್ರ ಜೀರ್ಣೋದ್ಧಾರ ಮಹಾ ಸಂಕಲ್ಪ - ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ
Posted On: 26 Mar 2025, 04:13 PM
ಕಾಪು : ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದ ಸಮಗ್ರ ಜೀರ್ಣೋದ್ಧಾರ ಮಹಾಸಂಕಲ್ಪ- ಮೂಲನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರ ದೇಗುಲದ ವಠಾರದಲ್ಲಿ ಚಾಲನೆ ನೀಡಲಾಯಿತು. ಸನ್ನಿಧಾನದ ಜೀರ್ಣೋದ್ಧಾರ ಮತ್ತು ಸುತ್ತುಪೌಳಿ ಪುನರ್ ನಿರ್ಮಾಣ ಉದ್ದೇಶದೊಂದಿಗೆ ಶ್ರೀ ಕಾಶೀ ಮಠಾಧಿಶರಾದ ಶ್ರೀ ಸಂಯ್ಯಮೀಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ 2023ರಲ್ಲಿ ಮುಷ್ಟಿಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಗಿತ್ತು. ಈಗ ಕಾಪು ಪೇಟೆಯ ಹತ್ತು ಸಮಸ್ತರು ಮತ್ತು ಮಾರಿಯಮ್ಮ ದೇವರ ಸಮಸ್ತ ಭಕ್ತರ ಅಪೇಕ್ಷೆಯಂತೆ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಪೂರ್ವಭಾವಿಯಾಗಿ ಸಮಸ್ತ ಭಕ್ತರಿಗೆ ಕಾಣಿಕೆ ಡಬ್ಬಿ ವಿತರಣೆ, ಜೀರ್ಣೋದ್ದಾರ ಲಾಂಛನ ಅನಾವರಣ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಕೆ. ಕಮಲಾಕ್ಷ ಭಟ್, ಮಂಗಳೂರು ವೆಂಕಟರಮಣ ದೇವಸ್ಥಾನದ ತಂತ್ರಿ, ಧಾರ್ಮಿಕ ವಿದ್ವಾಂಸ ಡಾ. ಎಂ. ಪಂಡಿತ್ ನರಸಿಂಹ ಆಚಾರ್ಯ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತಾನಾಡಿ, 42 ವರ್ಷಗಳ ಹಿಂದೆ ಊರು ಬಿಟ್ಟು ಪರವೂರಿಗೆ ಹೋಗುವ ಸಂಧರ್ಭದಲ್ಲಿ ಕೈಯಲ್ಲಿ ಇದದ್ದು ಹಳೆ ಮಾರಿಯಮ್ಮನ ಗದ್ದಿಗೆ ಪೂಜೆಯ ಪ್ರಸಾದ ಇವತ್ತು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಸಂಕಲ್ಪ ಮಾಡಿದರೆ ಸಿದ್ದಿಯಾಗುವ ಸಮಯ ತುಂಬಾ ದೂರವಿಲ್ಲ ಎಂದರು. ಮಾಜಿ ಸಚಿವ ವಿನಯ್ಕುಮಾರ್ ಸೊರಕೆ ಮಾತಾನಾಡಿ, ಕಾಪು ಸುಗ್ಗಿ ಮಾರಿಪೂಜೆ ಕಾಪುವಿಗೆ ಹಬ್ಬವಾಗಿದೆ. ಜಿಎಸ್ಬಿ ಸಮಾಜ ನೂರಾರು ಕೋಟಿ ರೂಪಾಯಿಯನ್ನು ಶೈಕ್ಷಣಿಕ -ಧಾರ್ಮಿಕ-ವೈದ್ಯಕೀಯ ರಂಗಕ್ಕೆ ನೀಡಿದೆ. ಹಾಗಾಗಿ ಇವತ್ತಿನ ಮೂಲಧನ ಸಂಗ್ರಹ ಕೂಡ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದರು. ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದ್ರಾಯ ಶೆಣೈ, ಶಾಸಕರಾದ ಪ್ರತಾಪ್ಸಿಂಹ ನಾಯಕ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಎಸ್ಬಿ ಸರ್ವ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಅಜಿತ್ ಕುಡ್ವ ಮುಲ್ಕಿ, ಪ್ರಮುಖರಾದ ಮನೋಹರ್ ಎಸ್. ಶೆಟ್ಟಿ ಕಾಪು, ಕೆ. ವಾಸುದೇವ ಶೆಟ್ಟಿ, ವಿಕ್ರಂ ಕಾಪು, ಮೋಹನ್ ಎಂ. ಬಂಗೇರ, ಲಕ್ಷ್ಮೀನಾರಾಯಣ ನಾಯಕ್ ಕಾಪು, ಡಾ.ಕೆ. ನಾಗಾನಂದ ಭಟ್ ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್ದಾಸ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸದಾನಂದ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮಟ್ಟಾರು : ಉಚಿತ ನೇತ್ರ ತಪಾಸಣೆ ; ಆರೋಗ್ಯ ಮಾಹಿತಿ ಮತ್ತು ದಂತ ತಪಾಸಣಾ ಶಿಬಿರ
Posted On: 25 Mar 2025, 02:56 PM
ಶಿರ್ವ : ಶಿರ್ವ ಮಟ್ಟಾರು ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ಇದರ ನೇತೃತ್ವದಲ್ಲಿ ಡಾ.ವಿ.ಎಸ್.ಆಚಾರ್ಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಆರೋಗ್ಯ ಸೊಸೈಟಿ, ಅಂಧತ್ವ ನಿಯಂತ್ರಣ ವಿಭಾಗ ಉಡುಪಿ, ಸಂಚಾರಿ ನೇತ್ರಘಟಕ ಜಿಲ್ಲಾಸ್ಪತ್ರೆ ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಉಪ ಆರೋಗ್ಯ ಕೇಂದ್ರ ಮಟ್ಟಾರು ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ತಪಾಸಣೆ, ಗ್ಲಾಕೋಮಾ ಕಾಯಿಲೆ ಬಗ್ಗೆ ಮಾಹಿತಿ, ಉಚಿತ ದಂತ ಚಿಕಿತ್ಸಾ ಶಿಬಿರ,ಮಧುಮೇಹ, ರಕ್ತದೊತ್ತಡ ತಪಾಸಣೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಸ್ಪತ್ರೆಯ ಹಿರಿಯ ನೇತ್ರತಜ್ಞರಾದ ಡಾ. ನಿತ್ಯಾನಂದ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ, ಶಿಬಿರದ ಉದ್ದೇಶ ಮತ್ತು ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಮಟ್ಟಾರು ಬಬ್ಬರ್ಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಹಿಸಿದ್ದರು. ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯ ನೇತ್ರತಜ್ಙ ಡಾ.ಫಾಯಲ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯಾಧಿಕಾರಿ ಡಾ.ಗಾಯತ್ರಿ ಸಂತೋಷ್, ಮಟ್ಟಾರು ಆರೋಗ್ಯ ಸಮುದಾಯ ಆರೋಗ್ಯಾಧಿಕಾರಿ ಮಾನಸಾ ಜೆ, ಆರೋಗ್ಯ ಸುರಕ್ಷಾಧಿಕಾರಿ ಗೀತಾ, ಶಿರ್ವ ಗ್ರಾ.ಪಂ ಸದಸ್ಯ ದೇವದಾಸ್ ನಾಯಕ್, ಮಮತಾ ಶೆಟ್ಟಿ, ಮಟ್ಟಾರು ವಿ.ಹಿಂ.ಅಧ್ಯಕ್ಷ ಜಗದೀಶ ಆಚಾರ್ಯ, ವೇದಿಕೆಯಲ್ಲಿದ್ದರು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಿಬಿರಕ್ಕೆ ಭೇಟಿ ನೀಡಿ ಸಂಘಟನೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂಧಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದರು. ಸಂಘಟನೆಯ ಕಾರ್ಯಕರ್ತರು ಸಕ್ರೀಯವಾಗಿ ಭಾಗವಹಿಸಿದ್ದರು. 150 ಕ್ಕೂ ಅಧಿಕ ಗ್ರಾಮಸ್ಥರು ಶಿಬಿರದ ಪ್ರಯೋಜನವನ್ನು ಪಡೆದರು.
ಪಡುಬಿದ್ರಿ : ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ - ಸ್ಟಾರ್ ನೃೆಟ್ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ
Posted On: 25 Mar 2025, 02:47 PM
ಪಡುಬಿದ್ರಿ : ಪಡುಬಿದ್ರಿ ರಾಗ್ ರಾಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ.) ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 20 ನೇ ವರ್ಷದ "ಸ್ಟಾರ್ ನೃೆಟ್" ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ.ಅಮೀನ್ ಸಾರಥ್ಯದಲ್ಲಿ ದೇವಸ್ಥಾನದ ವಠಾರದಲ್ಲಿ ಅದ್ದೂರಿ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಸಾಂಸ್ಕೃತಿಕ ನಾಡು ನಮ್ಮ ತುಳುನಾಡಿನ ಊರ ಜಾತ್ರೆಯಲ್ಲಿ ವಿಭಿನ್ನವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಗವಂತನಿಗೆ ಸಮರ್ಪಿಸುವ ಒಳ್ಳೆಯ ಕಾರ್ಯವನ್ನು ಸಂಸ್ಥೆ ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು. ಮಾಜಿ ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗ. ದೇಶ ವಿದೇಶದ ಸಾಂಸ್ಕೃತಿಕ ವೃೆವಿಧ್ಯತೆಗಳು ಒಂದು ಸಾಂಸ್ಕೃತಿಕ ಬೆಳವಣಿಗೆಗೆ ದಾರಿಯಾಗಿದೆ. ನಿರಂತರವಾಗಿ 20 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯ. ಯುವ ಜನತೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೃೆವಿಧ್ಯತೆಯನ್ನು ಬೆಳೆಸುವಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಸನ್ಮಾನ : ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಾಜಿ ತಾ.ಪಂ. ಸದಸ್ಯರಾದ ನವೀನಚಂದ್ರ ಜೆ ಶೆಟ್ಟಿ ಹಾಗು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ರವನ್ನು ಸನ್ಮಾನಿಸಲಾಯಿತು. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಕಾಂಚನ್ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೃೆ, ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಮಿಥುನ್ ಆರ್. ಹೆಗ್ಡೆ, ದಮಯಂತಿ ಅಮೀನ್, ಶಿವಕುಮಾರ್ ಕರ್ಜೆ, ಸುಕುಮಾರ್ ಶೆಟ್ಟಿ, ನಟರಾಜ್ ಪಿ.ಎಸ್, ದೀಪಕ್ ಎರ್ಮಾಳ್, ರೂಪೇಶ್ ಕಲ್ಮಾಡಿ, ಗಣೇಶ್ ಆಚಾರ್ಯ ಉಚ್ಚಿಲ, ರಮೇಶ್ ಯು., ನವೀನ್ ಎನ್.ಶೆಟ್ಟಿ, ಅಶೋಕ್ ಸಾಲ್ಯಾನ್, ರಚನ್ ಸಾಲ್ಯಾನ್, ಸಂತೋಷ್ ಪಡುಬಿದ್ರಿ, ಚಲನಚಿತ್ರ ನಟರಾದ ಪ್ರಥ್ವಿ ಅಂಬರ್, ರಮೇಶ್ ರೃೆ ಕುಕ್ಕೆಹಳ್ಳಿ, ಬಹುಭಾಷಾ ನಟಿ ಚಿರಶ್ರಿ ಅಂಚನ್, ವನ್ಸಿಟಾ ಡಯಾಸ್, ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಖ್ಯಾತಿಯ ದೀಕ್ಷಾ ಬ್ರಹ್ಮಾವರ, ರೂಪದರ್ಶಿ ಸಿಂಚನಾ ಪ್ರಕಾಶ್ ಉಪಸ್ಥಿತರಿದ್ದರು. ಡ್ರೀಮ್ಸ್ ಗರ್ಲ್ಸ್ ನೃತ್ಯ ತಂಡದವರಿಂದ "ನೃತ್ಯ ವೃೆಭವ" ಹಾಗು ಶಶಿ ಮ್ಯೂಸಿಕಲ್ ಪಡುಬಿದ್ರಿ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಿತು. ಸಂಸ್ಥೆಯ ಅಧ್ಯಕ್ಷ ವಿಶ್ವಾಸ್ ಅಮೀನ್ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿ, ವಂದಿಸಿದರು.
ಪಾಜಕ ಶ್ರೀವಿಶ್ವೇಶತೀರ್ಥ ಮಹಾವಿದ್ಯಾಲಯ -ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
Posted On: 25 Mar 2025, 02:35 PM
ಶಿರ್ವ : ಕುಂಜಾರುಗಿರಿ ಸಮೀಪದ ಪಾಜಕ ಶ್ರೀವಿಶ್ವೇಶತೀರ್ಥ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಜೆಸಿಐ ಕಟಪಾಡಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾಲೇಜಿನ ಪ್ರಾಚಾರ್ಯ ವಿಜಯ್ ಪಿ.ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚಿತವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಅಶಕ್ತರಿಗೆ ಹೆಚ್ಚಿನ ಪ್ರಯೋಜನವಾಗುವುದು. ವಿದ್ಯಾರ್ಥಿಗಳಲ್ಲಿ ರಕ್ತದಾನದ ಅರಿವು ಮೂಡಿಸುವುದರಜೊತೆಗೆ ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಅಗತ್ಯ ಇರುವ ರೋಗಿಗಳಿಗೆ ಇದರ ಸದುಪಯೋಗ ಆಗುವಲ್ಲಿ ಸಹಕಾರಿಯಾಗಲಿದೆ ಎಂದರು. ಶಿಬಿರದಲ್ಲಿ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ, ಕೀಲು, ಮೂಳೆ ತಪಾಸಣೆ, ಮಧುಮೇಹ, ಕಣ್ಣಿನ ಆರೋಗ್ಯ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯರಾದ ಸುದರ್ಶನ್ ರಾವ್, ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಡಾ.ಗೀತಾ ಎಸ್.ಕೋಟ್ಯಾನ್, ಉಡುಪಿ ಸಿಎಸ್ಐ ಲಾಂಬರ್ಡ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ನಾಯಕ್, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಘಟಕದ ಡಾ,ವೀಣಾ ಕುಮಾರಿ, ಕಟಪಾಡಿ ಜೆಸಿಐ ಅಧ್ಯಕ್ಷೆ ರಂಜಿತಾ ಶೇಟ್, ವಲಯ ಸಂಯೋಜಕ ಪ್ರಶಾಂತ್ ಆರ್,ಎಸ್, ಪದವಿ ಕಾಲೇಜು ಸಂಯೋಜಕಿ ರಕ್ಷಿತಾ, ಕಾಲೇಜು ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪೂಜಾ ಉಪಸ್ಥಿತರಿದ್ದರು. 170ಕ್ಕೂ ಅಧಿಕ ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. 62 ಯುನಿಟ್ ರಕ್ತ ಸಂಗ್ರಹವಾಗಿದೆ.
ಎರ್ಮಾಳಿನಲ್ಲಿ ಯುವಕನಿಗೆ ಕಾರು ಡಿಕ್ಕಿ ; ಗಂಭೀರ
Posted On: 25 Mar 2025, 02:21 PM
ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ಎದುರು ರಾ.ಹೆ. 66ರಲ್ಲಿ ಕೊರಿಯರ್ ಸರ್ವೀಸ್ ಯುವಕನಿಗೆ ಕಾರೊಂದು ಡಿಕ್ಕಿ ಹೊಡೆದು ಗಂಭಿರವಾಗಿ ಗಾಯಗೊಂಡ ಘಟನೆ ಮಂಗಳವಾರ ಘಟಿಸಿದೆ. ಗಾಯಗೊಂಡ ಯುವಕನನ್ನು ಅದಮಾರು ಕೆಮುಂಡೇಲು ಗಣೇಶ್ ಆಚಾರ್ಯರವರ ಮಗ ಶರಣ್ ಆಚಾರ್ಯ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಯುವಕನನ್ನು ಉಚ್ಚಿಲದ ಎಸ್ಡಿಪಿಐ ಅಂಬುಲೆನ್ಸ್ನಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿ : ಕಾಪು ಶಾಸಕರ ನೇತೃತ್ವದಲ್ಲಿ ಮನವಿ
Posted On: 24 Mar 2025, 03:36 PM
ಪಡುಬಿದ್ರಿ : ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ವಾಹನಗಳಿಗೆ ಹೆಜಮಾಡಿ ಟೋಲ್ ಗೇಟ್ನಲ್ಲಿ ಸುಂಕ ವಿನಾಯಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮನವಿ ನೀಡಲಾಯಿತು. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಲ್ಲಿ ಹಲವಾರು ವರ್ಷಗಳಿಂದ ಟೋಲ್ ಗೇಟ್ ನಿರ್ಮಾಣಗೊಂಡು ಸುಂಕ ವಸೂಲಾತಿಯನ್ನು ಮಾಡುತ್ತಿದ್ದು, ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಬೇಕೆಂದು ಮನವಿಯನ್ನು ಮಾಡಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೋಟಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಿದ್ದು, ಅದರಂತೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ನ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿಗೊಳಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಪಕ್ಷದ ಹಿರಿಯರಾದ ರಮಕಾಂತ್ ಪಡುಬಿದ್ರಿ, ಮಿಥುನ್ ಆರ್ ಹೆಗ್ಡೆ ಉಪಸ್ಥಿತರಿದ್ದರು.
ಮಾ.25ರಂದು ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಜೀರ್ಣೋದ್ದಾರ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ
Posted On: 23 Mar 2025, 05:34 PM
ಕಾಪು : ಮಾರ್ಚ್ 25 ಮಂಗಳವಾರ ಸುಗ್ಗಿ ಜಾತ್ರೆಯ ಪರ್ವಕಾಲದಂದು “ಕಾಪು ಶ್ರೀ ಹಳೇ ಮಾರಿಯಮ್ಮ ಸನ್ನಿಧಾನ ಜೀರ್ಣೋದ್ಧಾರ ಮಹಾ ಸಂಕಲ್ಪ" ಐತಿಹಾಸಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾತ್ರಿ 9.30 ಗಂಟೆಗೆ ಶ್ರೀ ದೇವಳದ ಮುಂಭಾಗದ ವೇದಿಕೆಯಲ್ಲಿ "ಜೀರ್ಣೋದ್ದಾರ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನ ಪ್ರಾರಂಭ ಸಂಬಂಧಿ "ಸಭಾ ಕಾರ್ಯಕ್ರಮ - ಜೀರ್ಣೋದ್ಧಾರ ಲಾಂಛನ ಅನಾವರಣ", ಸಮಸ್ತ ಭಕ್ತರಿಗೆ ಕಾಣಿಕೆ ಡಬ್ಬಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಪ್ರಸಾದ್ ಜಿ ಶೆಣೈ ಹೇಳಿದ್ದಾರೆ. ಅವರು ಶನಿವಾರ ಕಾಪು ಹಳೆಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾಪು ಶ್ರೀ ಹಳೆ ಮಾರಿಯಮ್ಮನ ದೇಗುಲ ಜೀರ್ಣೋದ್ಧಾರ ಆಗಬೇಕೆಂದು ಲಕ್ಷಾಂತರ ಭಕ್ತರ ಬಹು ಕಾಲದ ಕನಸಾಗಿದ್ದು, ಶ್ರೀ ದೇವಿಯ ಸಮ್ಮುಖ ಊರಿನ ಗುರು ಹಿರಿಯರ, ಗಣ್ಯರ, ಸಮಸ್ತ ಭಕ್ತಾಧಿಗಳ ಸಹಭಾಗಿತ್ವದಲ್ಲಿ ಇದಕ್ಕೆ ಮುನ್ನುಡಿ ಇಡಲಾಗುತ್ತಿದೆ. ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಪು ಶ್ರೀ ವೆಂಕಟರಮಣ ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕೆ ಕಮಲಾಕ್ಷ ಭಟ್, ಧಾರ್ಮಿಕ ವಿದ್ವಾಂಸರು, ಪ್ರಸಿದ್ದ ಪಂಚಾಂಗಕರ್ತರು ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ತಂತ್ರಿಗಳಾದ ಡಾ. ಎಂ. ಪಂಡಿತ್ ನರಸಿಂಹ ಆಚಾರ್ಯ ಮಂಗಳೂರು ಉಪಸ್ಥಿತರಿರುವರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾಪು ಇದರ ಮಾಜಿ ಅಧ್ಯಕ್ಷ ಗೋಕುಲ್ದಾಸ್ ಆನಂದ್ರಾಯ ಶೆಣೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕರಾದ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಲಾಲಾಜಿ ಅರ್ ಮೆಂಡನ್, ಜಿ.ಎಸ್.ಬಿ. ಸರ್ವ ದೇವಳಗಳ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವಾ ಮುಲ್ಕಿ, ಕಾಪು ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕೇಸರ ಮನೋಹರ್ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಮಾಜಿ ಆಡಳಿತ ಮೊಕೇಸರ ಮೋಹನ್ ಬಂಗೇರ, ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಕೆ. ಲಕ್ಷ್ಮೀನಾರಾಯಣ ನಾಯಕ್ ಕಾಪು, ಡಾ. ಕೆ. ನಾಗಾನಂದ ಭಟ್ ಉಪಸ್ಥಿತರಿರುವರೆಂದು ಪ್ರಸಾದ್ ಶೆಣೈ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಹ ಮೊಕ್ತೇಸರರಾದ ಸದಾಶಿವ ಕಾಮತ್, ರಾಮ ನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಎಂ ಶೆಣೈ, ಸದಸ್ಯರಾದ ಮೋಹನದಾಸ್ ಕಿಣಿ, ಸುನಿಲ್ ಪೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ ನಾಯಕ್ ಮತ್ತು ರಾಜೇಶ್ ಶೆಣೈ ಉಪಸ್ಥಿತರಿದ್ದರು.
ಪಡುಬಿದ್ರಿ : ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಜೆಸಿಬಿಯಿಂದ ಕಿತ್ತೆಸೆದ ವ್ಯಕ್ತಿ ; ದೂರು ದಾಖಲು
Posted On: 21 Mar 2025, 01:49 PM
ಪಡುಬಿದ್ರಿ : ಪಡುಬಿದ್ರಿಯ ಅಲಂಗಾರು ಎಂಬಲ್ಲಿ ರಾ. ಹೆ. 66ರ ಬದಿಯಲ್ಲಿ ಬೆಳೆದ ಗಿಡಗಳು ಜಾಹೀರಾತು ಫಲಕಗಳಿಗೆ ಅಡ್ಡವಾಗುತ್ತದೆ ಎಂದು ಅರಣ್ಯ ಇಲಾಖೆ ನೆಟ್ಟ 42 ಗಿಡಗಳು ಹಾಗೂ ಅರಣ್ಯ ಇಲಾಖೆಯ ಬೋರ್ಡನ್ನು ಜಾಹೀರಾತು ಫಲಕ ಹಾಕುವ ವ್ಯಕ್ತಿ ಜೆಸಿಬಿಯಿಂದ ಕಿತ್ತೆಸೆದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. 2023 ನೇ ವರ್ಷದ ಜೂನ್ ತಿಂಗಳಲ್ಲಿ ಹೊಳೆ ದಾಸವಾಳ, ಮೇ ಪ್ಲವರ್, ನೇರಳೆ, ಕಕ್ಕೆ ಮುಂತಾದ ಗಿಡಗಳನ್ನು ಅರಣ್ಯ ಇಲಾಖಾ ವತಿಯಿಂದ ನೆಟ್ಟಿದ್ದು ಅದರ ಪೋಷಣೆ ಕರ್ತವ್ಯವನ್ನು ಅರಣ್ಯ ಪಾಲಕ ಅಖಿಲೇಶ್ ನಿರ್ವಹಿಸಿಕೊಂಡು ಬರುತ್ತಿದ್ದು, ಎಂದಿನಂತೆ ಗಸ್ತಿನಲ್ಲಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಜಾಹಿರಾತು ಫಲಕಗಳನ್ನು ಹಾಕುವ ರೋಶನ್ ಎಂಬಾತನ ವಿರುದ್ಧ ಅರಣ್ಯ ಪಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
