Updated News From Kaup
ಪಡುಬಿದ್ರಿಯಲ್ಲಿ 16,62,804 ರೂ. ಮೌಲ್ಯದ ಗಾಂಜಾ ನಾಶ
Posted On: 24 Jan 2025, 06:23 PM
ಪಡುಬಿದ್ರಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 27 ಕೆಜಿ 970 ಗ್ರಾಂ 120 ಮಿಲಿಗ್ರಾಂ ತೂಕದ ಅಂದಾಜು 16,62,804 ರೂ. ಬೆಲೆಯ ಗಾಂಜಾವನ್ನು ನಾಶಪಡಿಸಲಾಯಿತು. ನಂದಿಕೂರಿನ ಮೆ. ಆಯುಷ್ ಎನ್ವಿರೋಟೆಕ್ ಪ್ರೈ. ಲಿ. ಎಂಬಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರಾದ ಡಾ. ಅರುಣ್ ಕೆ., ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ಸದಸ್ಯರು ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಮತ್ತು ಅರವಿಂದ ಕಲಗುಜ್ಜಿ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಖ್ಯಾತ ಯಕ್ಷಗಾನ ಭಾಗವತ ಸುರೇಂದ್ರ ಪಣಿಯೂರುರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ
Posted On: 23 Jan 2025, 09:14 PM
ಕಾಪು : ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಹಾಗೂ ಮೇಳದ ಯಜಮಾನರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸುರೇಂದ್ರ ಪಣಿಯೂರುರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು 2024 ಸಾಲಿನ ಡಾಕ್ಟರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಿದೆ. ಸುರೇಂದ್ರ ಪಣಿಯೂರುರವರ ಯಕ್ಷಗಾನ ಮೇಳಗಳ ವಿಕಾಸ ಮತ್ತು ವರ್ತಮಾನದ ಬೆಳವಣಿಗೆ (ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು 2024 ಸಾಲಿನ ಡಾಕ್ಟರೇಟ್ ನೀಡಿ ಗೌರವಿಸಿದೆ. ಸುರೇಂದ್ರ ಪಣಿಯೂರುರವರ ಸಾಧನೆಗೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಚಾರ್ಯ ಆಯ್ಕೆ
Posted On: 21 Jan 2025, 09:45 PM
ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಕಡಂಬು ಮಟ್ಟಾರು ಇದರ 2025 -2026 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಚಾರ್ಯ, ಕಾರ್ಯದರ್ಶಿಯಾಗಿ ಗಜಾನಂದ ಆಚಾರ್ಯ, ಕೋಶಾಧಿಕಾರಿಯಾಗಿ ಅವಿನಾಶ್ ಆಚಾರ್ಯ, ಗೌರವ ಅಧ್ಯಕ್ಷರಾಗಿ ಲಕ್ಷ್ಮಣ ಆಚಾರ್ಯ, ಸಾಮಾಜಿಕ ಕಾರ್ಯದರ್ಶಿಯಾಗಿ ದೀಕ್ಷಿತ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಮುಕೇಶ್ ಆಚಾರ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಸನತನ ಆಚಾರ್ಯ, ಭಜನಾ ಕಾರ್ಯದರ್ಶಿಯಾಗಿ ಸದಾನಂದ ಆಚಾರ್ಯ ಆಯ್ಕೆ ಆಗಿರುತ್ತಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದಿಂದ ಸಾಧಕರಿಗೆ ಸನ್ಮಾನ
Posted On: 21 Jan 2025, 09:37 PM
ಕಾಪು : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಮುಲ್ಕಿ ದ.ಕ. ಇದರ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾಸಭೆ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಅಭಿನಂದನಾ ಮತ್ತು ಸಾಧಕರ ಸನ್ಮಾನ ಸಮಾರಂಭವು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮುದರಂಗಡಿ ಇದರ ಸಭಾಗೃಹದಲ್ಲಿ ಜರಗಿತು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ ಇದರ ಅಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ, 2024ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ 3 ಬಿಲ್ಲವ ಸಂಘಗಳಿಗೆ, ವಿವಿಧ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ 12 ಮಂದಿ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ, ಸಮಾಜ ಸೇವಕಿ ಗೀತಾಂಜಲಿ ಸುವರ್ಣ, ಸಾವಿತ್ರಿ ಗಣೇಶ್ ಸೇರಿದಂತೆ ಸಂಘಟನಾತ್ಮಕವಾಗಿ ಸಾಮಾಜಿಕವಾಗಿ ಮಹಾಮಂಡಲದ ಜೊತೆ ಸಮಾಜದಲ್ಲಿ ಸೇವೆಗೈಯುತ್ತಿರುವ ಆಯ್ದ 12 ಮಂದಿ ಮಹಿಳೆಯರಿಗೆ ಗೌರವ ಅಭಿನಂದನೆಯು ಜರಗಿತು. ಈ ಸಂದರ್ಭ ಮಹಾಮಂಡಲದ ಸದಸ್ಯ ಸಂಘದ ಪ್ರತಿನಿಧಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
50ನೇ ಹುಟ್ಟು ಹಬ್ಬದ ಪ್ರಯುಕ್ತ ಆಶ್ರಮಗಳಿಗೆ ರೂ.50 ಸಾವಿರ ಮೌಲ್ಯದ ದಿನಸಿ ಸಾಮಾಗ್ರಿ ವಿತರಿಸಿದ ಗಿರೀಶ್ ರಾವ್
Posted On: 21 Jan 2025, 09:20 PM
ಉಡುಪಿ : ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್ ರವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಕಾರ್ತಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಹೊಸ ಬದುಕು ಹಾಗು ಕೌಡೂರಿನ ಹೂಸ ಬೆಳಕು ಆಶ್ರಮಕ್ಕೆ ಒಟ್ಟು ಸುಮಾರು ರೂ. 50,000 ವೆಚ್ಚದ ದಿನಸಿ ಸಾಮಗ್ರಿಗಳನ್ನು ನೀಡಿ ಆಶ್ರಮ ವಾಸಿಗಳೂಂದಿಗೆ ಹುಟ್ಟು ಹಬ್ಬ ಆಚರಿಸಿದರು. ಈ ಸಂದರ್ಭ ಅವರ ಸಹವರ್ತಿ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ನಟರಾಜ್ ಪಿ.ಎಸ್. ರವರು ಮಾತನಾಡಿ, ದಾನವೆಂದರೆ ಕೇವಲ ಹಣವನ್ನು ಸಹಾಯ ರೂಪದಲ್ಲಿ ನೀಡುವುದು ಮಾತ್ರವಲ್ಲದೆ ದಾನದ ನಿಜವಾದ ಅರ್ಥವೆಂದರೆ ಸೇವೆಗೆ ತನ್ನ ಶಕ್ತಿ ಸಮಯ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ಕೊಡುಗೆ ನೀಡುವುದಾಗಿದೆ. ದಾನ ಮಾಡುವುದರಿಂದ ಆತ್ಮದ ಶುದ್ದೀಕರಣ ಮತ್ತು ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಮನೋ ಇಂಗಿತ ಇಂದಿನ ಯುವ ಜನತೆಯಲ್ಲಿ ಮೂಡಿ ಬರಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ. ತನುಶ್ರೀ ರಾವ್, ಮೂರನೇ ಗುರಿಕಾರ ಮುರುಡಿ ಜಗದೀಶ್ ರಾವ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಹೊಸ ಬದುಕು ಸಂಸ್ಥೆಯ ನಿರ್ವಾಹಕರಾದ ವಿನಯಚಂದ್ರ, ರಾಜಶ್ರೀ ಮತ್ತು ಕೌಡೂರು ಹೊಸ ಬೆಳಕು ಆಶ್ರಮದ ನಿರ್ವಾಹಕರಾದ ತನುಲಾ ಉಪಸ್ಥಿತರಿದ್ದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ದಾರು ಮುಹೂರ್ತ, ವೀಳ್ಯ ಪ್ರದಾನ
Posted On: 20 Jan 2025, 09:10 PM
ಪಡುಬಿದ್ರಿ : ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವದ ಪೂರ್ವಭಾವೀ ದಾರು ಮುಹೂರ್ತ ಹಾಗೂ ಶಿಲ್ಪಿಗಳಿಗೆ ವೀಳ್ಯ ಪ್ರದಾನ ಸಮಾರಂಭವು ಜರಗಿತು. ಪಡುಬಿದ್ರಿಯ ಗುಂಡ್ಲಾಡಿ ಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶಿಲೆಗಳು ಹಾಗೂ ದಾರುಖಂಡಗಳನ್ನು ದೇವಸ್ಥಾನಕ್ಕೆ ತರಲಾಯಿತು. ಬಳಿಕ ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ ಹಾಗೂ ವೈ. ಗುರುರಾಜ ಭಟ್ರವರ ಉಪಸ್ಥಿತಿಯಲ್ಲಿ ಶ್ರೀ ದೇವಸ್ಥಾನದ ಧ್ವಜಸ್ತಂಭದ ಎದುರು ಆದ್ಯ ಗಣಪತಿ ಪ್ರಾರ್ಥನೆಯ ಮೂಲಕ ದಾರು ದೇವತೆಗಳಿಗೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ತದನಂತರ ಜೀರ್ಣೊದ್ಧಾರ ಕಾರ್ಯಗಳ ಗುತ್ತಿಗೆದಾರ ಸುಜಯ ಕುಮಾರ್ ಶೆಟ್ಟಿ ಕಾರ್ಕಳ, ವಾಸ್ತು ಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿ, ಶಿಲ್ಪಿಗಳಿಗೆ ವೀಳ್ಯ ಪ್ರದಾನ ಮಾಡಲಾಯಿತು. ಈ ಸಂದರ್ಭ ಉಡುಪಿ ಚಿಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದ.ಕ., ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಶ್ರೀ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಅನುವಂಶಿಕ ಆಡಳಿತ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಜ.21 : ಕಾಪು ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆ
Posted On: 20 Jan 2025, 06:45 PM
ಕಾಪು : ಕಾಪು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆಯು ಜ.21, ಮಂಗಳವಾರ ಕಾಪು ತಹಶಿಲ್ದಾರ್ ರವರ ಅಧ್ಯಕ್ಷತೆಯಲ್ಲಿ ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಹವಾಲನ್ನು ಸಲ್ಲಿಸುವವರು ಆಗಮಿಸುವಂತೆ ಕಾಪು ತಹಶಿಲ್ದಾರ್ ಡಾ. ಪ್ರತಿಭ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 22: ಕುಲಾಲ ಸಂಘ ಪೆರ್ಡೂರು ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಆರೋಗ್ಯ ಶಿಬಿರ
Posted On: 20 Jan 2025, 06:34 PM
ಉಡುಪಿ : ಕುಲಾಲ ಸಂಘ (ರಿ.) ಪೆರ್ಡೂರು ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ, ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಕುಲಾಲ ಸಮುದಾಯ ಭವನ, ಬುಕ್ಕಿಗುಡ್ಡೆ ಪೆರ್ಡೂರು ಇಲ್ಲಿ ಜ.22 ರಂದು ನಡೆಯಲಿದ್ದು, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕೇಂದ್ರ ಉಕ್ಕು, ಬೃಹತ್ ಕೈಗಾರಿಕಾ ಸಚಿವರಿಗೆ ಆಮಂತ್ರಣ
Posted On: 20 Jan 2025, 06:30 PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ಪ್ರತಿಷ್ಠಾಧಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರಗಲಿದ್ದು ಆ ಪ್ರಯುಕ್ತ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್. ಡಿ ಕುಮಾರಸ್ವಾಮಿಯವರಿಗೆ ಶ್ರೀ ಕ್ಷೇತ್ರದ ಆಮಂತ್ರಣ ಪತ್ರಿಕೆ ನೀಡಲಾಯಿತು. ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಎಚ್. ಡಿ ಕುಮಾರಸ್ವಾಮಿಯವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮನವಿಯನ್ನು ನೀಡುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಸಂಚಾಲಕ ಉದಯ ಶೆಟ್ಟಿ ಭಾರ್ಗವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಖಂಡಿಸಿ, ಹೆದ್ದಾರಿ ತಡೆ, ಪ್ರತಿಭಟನಾ ಸಭೆ
Posted On: 20 Jan 2025, 05:26 PM
ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತ ಸಹಿತ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಆಗ್ರಹಿಸಿ ಸೋಮವಾರ ಉಚ್ಚಿಲ ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ರಾಷ್ಟ್ರೀಯ ಹೆದ್ದಾರಿ 66 ತಡೆದು, ಹೆದ್ದಾರಿ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಉಚ್ಚಿಲ ಪೇಟೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ, ಎರ್ಮಾಳು ಡಿವೈಡರಿನಿಂದ ಆಲ್ ಇಹ್ಸಾನ್ ಶಾಲೆಯ ಡಿವೈಡೆರ್ ತನಕ ಹೆದ್ದಾರಿ ಮಧ್ಯೆ ಹೆದ್ದಾರಿ ದೀಪ ಅಳವಡಿಕೆ, ಉಚ್ಚಿಲ ಪೇಟೆಯಲ್ಲಿ ಹೈಮಾಸ್ಕ್ ದೀಪ ಅಳವಡಿಕೆ, ಹೆದ್ದಾರಿಯಲ್ಲಿ ಜೀಬ್ರಾ ಕ್ರಾಸಿಂಗ್, ಸಮರ್ಪಕ ಕ್ರಾಸಿಂಗ್ ವ್ಯವಸ್ಥೆ, ಸರ್ವಿಸ್ ರಸ್ತೆ ಡಿವೈಡರಿಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಇದೇ ಮುಂತಾದ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಲಾಯಿತು. ಪ್ರತಿಭಟನಾ ಸಭೆಯಲ್ಲಿ ರಾಜಕೀಯ ಮುಖಂಡರಿಗೆ ಮತ್ತು ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲ, ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಎಂ.ಎ ಗಫರ್ ಸಹಿತ ಗಣ್ಯರು, ನಾಗರಿಕರು ಉಪಸ್ಥಿತರಿದ್ದರು.
