Updated News From Kaup
ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ಇದರ ನೂತನ ರಾಜ್ಯಾಧ್ಯಕ್ಷರಾಗಿ ರಚನ್ ಸಾಲ್ಯಾನ್ ಹೆಜಮಾಡಿ ಆಯ್ಕೆ
Posted On: 27 Oct 2024, 04:03 PM
ಪಡುಬಿದ್ರಿ : ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ( ರಿ.) ಕರ್ನಾಟಕ ಇದರ ನೂತನ ರಾಜ್ಯಾಧ್ಯಕ್ಷರಾಗಿ ಯುವ ನಾಯಕ ರಚನ್ ಸಾಲ್ಯಾನ್ ಹೆಜಮಾಡಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ( ರಿ.) ಕರ್ನಾಟಕ ಇದರ ವಿವಿಧ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಎನ್.ಐ.ಟಿ.ಕೆ ಸೀಮನ್ಸ್ ಕೇಂದ್ರದ ಒಡಂಬಡಿಕೆ
Posted On: 27 Oct 2024, 12:35 PM
ಶಿರ್ವ : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಸುರತ್ಕಲ್ ಎನ್.ಐ.ಟಿ.ಕೆ ಸೀಮನ್ಸ್ ಕೇಂದ್ರದೊಂದಿಗೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಒಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ ಸೀಮನ್ಸ್ ಕೇಂದ್ರವನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳಿಗೆ ಪ್ರಸ್ತುತ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡಲು ಬೇಕಾದ ಸೂಕ್ತ ಕೌಶಲ್ಯಗಳ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಪ್ರಸ್ತುತ ಈ ಕೇಂದ್ರದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳಾದ ಪ್ರಾಡಕ್ಟ್ ಡಿಜಿಟಲೈಜೇಷನ್ ಲ್ಯಾಬ್, ಪ್ರೋಸಸ್ ಡಿಜಿಟಲೈಜೇಷನ್ ಲ್ಯಾಬ್, ಫ್ಯಾಕ್ಟರಿ ಆಟೋಮೇಶನ್ ಲ್ಯಾಬ್, ಮೆಕಟ್ರಾನಿಕ್ಸ್ ಲ್ಯಾಬ್, ಪ್ರೋಟೋಟೈಪ್ ಲ್ಯಾಬ್ ಮತ್ತು ಅಡ್ವಾನ್ಸ್ ಅನಾಲಿಸಿಸ್ ಲ್ಯಾಬ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಬಡಂಬಡಿಕೆಯಿ೦ದ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ವಿವಿಧ ಅತ್ಯಾಧುನಿಕ ಮೆಕ್ಯಾನಿಕಲ್ ಸಾಫ್ಟ್ವೇರ್ ಕೋರ್ಸ್ ಗಳನ್ನು ಕಲಿಯಲು ಮತ್ತು ಇಂಟರ್ನ್ಪ್ ತರಬೇತಿ ಪಡೆಯಲು ಅನುಕೂಲವಾಗಿದೆ. ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜ ಯತೀಶ್ ಯಾದವ್, ವಿಭಾಗದ ಪ್ರಾಧ್ಯಾಪಕರಾದ ಡಾ. ಭರತ್ ಕೆ ಭಟ್, ಸೀಮನ್ಸ್ ಕೇಂದ್ರದ ಸಂಚಾಲಕರಾದ ಅರುಣಾಚಲಂ ಮತ್ತು ಕೇಂದ್ರದ ವಿದ್ಯಾರ್ಥಿ ಸಂಚಾಲಕರಾದ ಆರೀ ರಾಯ್ಸನ್ಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರಕ್ಕೆ ತಂತ್ರಜ್ಞಾನ ನೆರವು ಒದಗಿಸುವ ಪುಣೆಯ 3ಡಿ ಇಂಜಿನಿಯರಿಂಗ್ ಆಟೋಮೇಶನ್ ಸಂಸ್ಥೆಯ ವ್ಯವಸ್ಥಾಪಕರಾದ ಹೃಷಿಕೇಶ್ ಕೋಲಪ್ಕರ್ ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಮಾಡಿಕೊಂಡ ಒಡಂಬಡಿಕೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅಭಿನಂದಿಸಿದ್ದಾರೆ.
ಸರ್ವ ಕಾಲೇಜು ವಿದ್ಯಾರ್ಥಿಶಕ್ತಿ ಕರ್ನಾಟಕ : ಉಡುಪಿ ಜಿಲ್ಲಾ ಚುನಾವಣೆ ; ಪದಗ್ರಹಣ ಕಾರ್ಯಕ್ರಮ
Posted On: 27 Oct 2024, 12:25 PM
ಉಡುಪಿ : ವಿದ್ಯಾರ್ಥಿಗಳು ದೇಶದ ಭವಿಷ್ಯ ಸಾಮಾಜಿಕ ನ್ಯಾಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ಹಲವಾರು ವರ್ಷಗಳಿಂದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ ನಡೆಸುತ್ತಿದೆ ಈ ಸಂಘಟನೆಯನ್ನು ಪ್ರತಿಯೊಂದು ಕಾರ್ಯಕ್ರಮ ಗಳಲ್ಲಿ ಕೂಡ ನಾನು ಭಾಗವಹಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಕೆಲಸ ನಡೆಯಲಿ ಎಂದು ಶ್ರೀ ಶ್ರೀ ಶ್ರೀ ಈಶ ವಿಠ್ಠಲ್ ದಾಸ ಸ್ವಾಮೀಜಿ ಹೇಳಿದರು. ಅವರು ತುಳುಜಾ ಭವಾನಿ ಸಭಾ ಭವನ ಕುಂಜಿಬೆಟ್ಟು ಉಡುಪಿಯಲ್ಲಿ ಜರಗಿದ ಸರ್ವ ಕಾಲೇಜು ವಿದ್ಯಾರ್ಥಿಶಕ್ತಿ ಕರ್ನಾಟಕ (ರಿ.) ಇದರ ಉಡುಪಿ ಜಿಲ್ಲಾ 2024-25 ನೇ ಸಾಲಿನ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸಾದ್ ರಾಜ್ ಕಾಂಚನ್ ಅವರು ಪಕ್ಷಾತೀತವಾಗಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ತುಂಬಿಸುವ ಕೆಲಸ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನಿಯ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ವಿಜಯ ಕೊಡವೂರು,ಪ್ರಕಾಶ್ ಶೆಟ್ಟಿ ಬಜಗೋಳಿ, ನವೀನ್ ಚಂದ್ರ ಶೆಟ್ಟಿ, ಸಂತೋಷ ಶೆಟ್ಟಿ ಪಡುಬಿದ್ರಿ, ಮನೋಜ್ ಕೋಡಿಕೆರೆ, ವಿಶ್ವಾಸ ವಿ ಅಮೀನ್, ಕರುಣಾಕರ ಶೆಟ್ಟಿ ಮುದ್ರಾಡಿ, ತುಳು ಕೂಟದ ಪುಣೆ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಸುಕುಮಾರ್ ಎಣ್ಣೆ ಹೊಳೆ, ರಮೇಶ್ ಶೆಟ್ಟಿ ದುಬೈ, ಆಶಿಕ್ ಶೆಟ್ಟಿ ಮುದ್ರಾಡಿ, ರೂಪೇಶ್ ಕಲ್ಮಾಡಿ, ಚಲನಚಿತ್ರ ನಟ ಸೂರ್ಯೋದಯ ಪೆರಂಪಲ್ಲಿ, ಚಲನಚಿತ್ರ ನಟಿಯರಾದ ಚಿರಶ್ರೀ ಅಂಚನ್, ವೆನ್ಸಿಟಾ ಡಯಾಸ್, ಸಿಂಚನ ಪ್ರಕಾಶ್, ಸ್ಪೂರ್ತಿ ಡಿ ಶೆಟ್ಟಿ, ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಸ್ವಾಗತಿಸಿದರು. ಸಂಘಟನೆ ಸಂಸ್ಥಾಪಕರಾದ ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ವಿದ್ಯಾರ್ಥಿಗಳ ವಿಜಯೋತ್ಸವ ಮೆರವಣಿಗೆಯು ನಡೆಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಕುಣಿತ ಭಜನಾ ಸ್ಪರ್ಧೆ
Posted On: 27 Oct 2024, 11:44 AM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅ.29ರಂದು ನಡೆಯಲಿರುವ ವಾಗೀಶ್ವರಿ ಪೂಜೆ ಹಾಗೂ ನವದುರ್ಗಾ ಲೇಖನ ಯಜ್ಞದ ಲೇಖನಕ್ಕೆ ಚಾಲನೆ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಮೂರು ಜಿಲ್ಲೆಗಳ 15 ತಂಡಗಳಿಂದ ನಡೆದ ಕುಣಿತ ಭಜನಾ ಸ್ಪರ್ಧೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯಾ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ಈಗಾಗಲೇ 108 ತಂಡಗಳಿಂದ ಭಜನೆ ನಡೆದಿದೆ. ಮುಂದೆಯೂ ಶ್ರೀ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಶ್ರೀ ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ರಘುಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮಾತನಾಡಿದರು. ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ರವಿಕಿರಣ್, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಶ್ರೀ ನವದುರ್ಗಾ ಲೇಖನ ಯಜ್ಞ ಸಮತಿ ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಕೋಶಾಧಿಕಾರಿ ವಿಶ್ವನಾಥ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಭಜನೆಯ ಉಸ್ತುವಾರಿಗಳಾದ ಸಂತೋಷ್ ಶೆಟ್ಟಿ ಮಂಗಳೂರು, ರಮೇಶ್ ಕಲ್ಮಾಡಿ ಮತ್ತಿತರರು ಉಪಸ್ಥಿತರಿದ್ದರು. ವಿದ್ವಾನ್ ದಾಮೋದರ ಶರ್ಮ ಬಾರ್ಕೂರು ಮತ್ತು ಮನೋಜ್ ವಾಮಂಜೂರು ನಿರೂಪಿಸಿದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನಮ್ಮ ಸಮುದಾಯಕ್ಕೆ ಸಂದ ಗೌರವ : ಬಾಬು ಕೊರಗ
Posted On: 27 Oct 2024, 08:27 AM
ಕಾಪು : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ ವತಿಯಿಂದ ನವೆಂಬರ್ 16ರಂದು ಫಲಿಮಾರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಾಬು ಕೊರಗ ಅವರನ್ನು ಅವರ ಮೂಲ ಮನೆ ಪಾಂಗಾಳದ ಮಠದ ಕಾಡು, ಮಂಡೇಡಿಯ ಕುಡ್ಡು ಕೊರಗ ಅವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಜಂಟಿಯಾಗಿ ಸಮ್ಮೇಳದ ಆಹ್ವಾನ ಪತ್ರಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಬಾಬು ಕೊರಗ, ಸಮುದಾಯಗಳಲ್ಲಿ ಸಾವಿರ ವರ್ಷದ ಇತಿಹಾಸವಿರುವ ಸಮುದಾಯ ಕೊರಗ ಸಮುದಾಯ. ಅಂತಹ ಸಮುದಾಯದ ತನ್ನನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಗುರುತಿಸಿರುವುದು ನಮ್ಮ ಸಮುದಾಯಕ್ಕೆ ಸಂದ ಗೌರವ ಎಂದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಈ ಸಂದರ್ಭದಲ್ಲಿ ಬಾಬು ಕೊರಗ ಅವರ ಕುಟುಂಬದ ಹಿರಿಯರಾದ ಕುಡ್ಡು ಕೊರಗರವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಸಮಾ ಜದ ಪ್ರಮುಖರಾದ ಸುಂದರ ಟಿ., ಜಿಲ್ಲಾ ಸಮಿತಿಯ ನರಸಿಂಹಮೂರ್ತಿ, ಸಮಿತಿಯ ಸದಸ್ಯ ಅನಂತ ಮೂಡಿತ್ತಾಯ, ಕೊರಗ ಸಮುದಾಯದ ಪ್ರಮುಖರಾದ ರಮೇಶ್ ಬಜ್ಪೆ ಉಪಸ್ಥಿತರಿದ್ದರು. ಕ.ಸಾ.ಪ. ಕಾಪು ತಾಲ್ಲೂಕು ಸಮಿತಿಯ ಸದಸ್ಯರಾದ ಸುಧಾಕರ ಪೂಜಾರಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.
ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅರಣ್ಯಾಧಿಕಾರಿಯ ಮಾತುಗಳು ಖಂಡನೀಯ : ಪ್ರವೀಣ್ ಪೂಜಾರಿ
Posted On: 27 Oct 2024, 07:09 AM
ಉಡುಪಿ : ಅರಣ್ಯಾಧಿಕಾರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಜೀವ ಪೂಜಾರಿ ಕಾಣಿಯೂರು ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಅವಮಾನದ ಮಾತುಗಳನ್ನಾಡಿರುವುದು ಖಂಡನೀಯ ಎಂದು ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಹೇಳಿಕೆ ನೀಡಿದ್ದಾರೆ. ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸಾಮಾಜಿಕ ಸ್ವಾಸ್ಥ್ಯದ ಕುರಿತು ಕಾಳಜಿ ವಹಿಸಬೇಕಾಗಿದೆ. ಸುಖಾಸುಮ್ಮನೆ ಮನಸ್ಸಿಗೆ ಬಂದಂತೆ ಆಡಿಕೊಂಡರೆ ಅದು ಶೋಭೆಯಲ್ಲ. ಹೆಣ್ಣು ಮಕ್ಕಳು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನೆ ಗುರಿಯಾಗಿಸಿ ಮಾತನ್ನಾಡಿದ ಸಂಜೀವ ಪೂಜಾರಿಯವರು ಇನ್ನು ಮುಂದಾದರೂ ತನ್ನನ್ನು ತಾನು ತಿದ್ದಿಕೊಳ್ಳುವುದು ಕ್ಷೇಮವೆನಿಸುತ್ತದೆ. ಸರ್ಕಾರಿ ಅಧಿಕಾರಿ ಸಂಜೀವ ಪೂಜಾರಿಯವರ ಹೇಳಿಕೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಖಂಡಿಸುತ್ತದೆ.
ಅ. 29 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ - ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ
Posted On: 27 Oct 2024, 07:03 AM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಇದೇ ಬರುವ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪೇಜಾವರ ಮತ್ತು ಮಾಣಿಲ ಸ್ವಾಮಿಗಳ ಸಹಿತ 9ಜನ ಗಣ್ಯರಿಂದ ಪುಸ್ತಕ ಬಿಡುಗಡೆ, 99,999 ನವದುರ್ಗಾ ಲೇಖನದ ಪುಸ್ತಕಗಳಿಗೆ ಏಕಕಾಲದಲ್ಲಿ ವಾಗೀಶ್ವರಿ ಪೂಜೆ ನಡೆಯಲಿದೆ. ತದನಂತರ ನವದುರ್ಗಾ ಲೇಖನ ಬರೆಯುವ ಪುಸ್ತಕವನ್ನು ಭಕ್ತರಿಗೆ ವಿತರಿಸಲಾಗುವುದು. ಈಗಾಗಲೇ ಸೆಪ್ಟೆಂಬರ್ 3ರಿಂದ ನವದುರ್ಗಾ ಲೇಖನ ಬರೆಯುವ ಭಕ್ತರ ಹೆಸರಿನ ನೋಂದಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಪ್ರಕ್ರಿಯೆಗೆ ಪ್ರಪಂಚದಾದ್ಯಂತ ಇರುವ ಭಕ್ತರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ ನಡೆಸಿ ಪುಸ್ತಕ ಬರೆಯುವ ಸಂಕಲ್ಪದೊಂದಿಗೆ ಪುಸ್ತಕ ವಿತರಣೆಗೆ ಚಾಲನೆ ನೀಡಲಾಗುತ್ತದೆ. ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮರಳಿಸಬೇಕಿದೆ, 2025ರ ಫೆಬ್ರವರಿ 4ರಂದು ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ನವಚಂಡಿಯಾಗವನ್ನು ನಡೆಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ. ಭಕ್ತರು ಬರೆದ ಪುಸ್ತಕವನ್ನು ಸೂರ್ಯ-ಚಂದ್ರರು ಇರುವವರೆಗೆ ಅಮ್ಮನ ಸಾನಿಧ್ಯದಲ್ಲಿ ಶೇಖರಿಸಿ ಇಡಲಾಗುತ್ತದೆ, ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಆ ಪುಸ್ತಕಕ್ಕೆ ಪ್ರತಿವರ್ಷ ನವರಾತ್ರಿಯ ಒಂದು ದಿನ ವಾಗೀಶ್ವರಿ ಪೂಜೆ ನೆರವೇರುತ್ತದೆ, ಲೇಖನ ಬರೆದವರ ಹೆಸರು ಸಾನಿಧ್ಯದಲ್ಲಿ ಶಾಶ್ವತವಾಗಿದ್ದು ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಸಾನಿಧ್ಯದಲ್ಲಿ ನೆನಪಿಸುವಂತೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಅವರ ಕುಟುಂಬದವರ ಒಳಿತಿಗಾಗಿ ಪ್ರಾರ್ಥಿಸುವ ಸಂಕಲ್ಪ ಹೊಂದಲಾಗಿದೆ. ಲೇಖನ ಬರೆದ ಕುಟುಂಬಕ್ಕೂ ಕಾಪು ಮಾರಿಯಮ್ಮನ ಸನ್ನಿಧಾನಕ್ಕೂ ಶಾಶ್ವತವಾದ ಭಕ್ತಿ ಭಾವದ ಸಂಬಂಧ ನೆಲೆಯೂರುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ರಘುಪತಿ ಭಟ್, ನವದುರ್ಗಾ ಲೇಖನ ಯಜ್ಞ ಸಮಿತಿ ಕಾಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಕೋಶಾಧಿಕಾರಿ ಕೆ.ವಿಶ್ವನಾಥ್ ಉಪಸ್ಥಿತರಿದ್ದರು.
ಅ. 29 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ - ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ
Posted On: 25 Oct 2024, 02:51 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಇದೇ ಬರುವ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೇಜಾವರ ಮತ್ತು ಮಾಣಿಲ ಸ್ವಾಮಿಗಳ ಸಹಿತ 9ಜನ ಗಣ್ಯರಿಂದ ಪುಸ್ತಕ ಬಿಡುಗಡೆ, 99,999 ನವದುರ್ಗಾ ಲೇಖನದ ಪುಸ್ತಕಗಳಿಗೆ ಏಕಕಾಲದಲ್ಲಿ ವಾಗೀಶ್ವರಿ ಪೂಜೆ ನಡೆಯಲಿದೆ. ತದನಂತರ ನವದುರ್ಗಾ ಲೇಖನ ಬರೆಯುವ ಪುಸ್ತಕವನ್ನು ಭಕ್ತರಿಗೆ ವಿತರಿಸಲಾಗುವುದು. ಈಗಾಗಲೇ ಸೆಪ್ಟೆಂಬರ್ 3ರಿಂದ ನವದುರ್ಗಾ ಲೇಖನ ಬರೆಯುವ ಭಕ್ತರ ಹೆಸರಿನ ನೋಂದಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಪ್ರಕ್ರಿಯೆಗೆ ಪ್ರಪಂಚದಾದ್ಯಂತ ಇರುವ ಭಕ್ತರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ ನಡೆಸಿ ಪುಸ್ತಕ ಬರೆಯುವ ಸಂಕಲ್ಪದೊಂದಿಗೆ ಪುಸ್ತಕ ವಿತರಣೆಗೆ ಚಾಲನೆ ನೀಡಲಾಗುತ್ತದೆ, ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮರಳಿಸಬೇಕಿದೆ, 2025ರ ಫೆಬ್ರವರಿ 4ರಂದು ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ನವಚಂಡಿಯಾಗವನ್ನು ನಡೆಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ. ಭಕ್ತರು ಬರೆದ ಪುಸ್ತಕವನ್ನು ಸೂರ್ಯ-ಚಂದ್ರರು ಇರುವವರೆಗೆ ಅಮ್ಮನ ಸಾನಿಧ್ಯದಲ್ಲಿ ಶೇಖರಿಸಿ ಇಡಲಾಗುತ್ತದೆ, ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಆ ಪುಸ್ತಕಕ್ಕೆ ಪ್ರತಿವರ್ಷ ನವರಾತ್ರಿಯ ಒಂದು ದಿನ ವಾಗೀಶ್ವರಿ ಪೂಜೆ ನೆರವೇರುತ್ತದೆ, ಲೇಖನ ಬರೆದವರ ಹೆಸರು ಸಾನಿಧ್ಯದಲ್ಲಿ ಶಾಶ್ವತವಾಗಿದ್ದು ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಸಾನಿಧ್ಯದಲ್ಲಿ ನೆನಪಿಸುವಂತೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಅವರ ಕುಟುಂಬದವರ ಒಳಿತಿಗಾಗಿ ಪ್ರಾರ್ಥಿಸುವ ಸಂಕಲ್ಪ ಹೊಂದಲಾಗಿದೆ. ಲೇಖನ ಬರೆದ ಕುಟುಂಬಕ್ಕೂ ಕಾಪು ಮಾರಿಯಮ್ಮನ ಸನ್ನಿಧಾನಕ್ಕೂ ಶಾಶ್ವತವಾದ ಭಕ್ತಿ ಭಾವದ ಸಂಬಂಧ ನೆಲೆಯೂರುತ್ತದೆ ಎಂದು ತಿಳಿಸಿದ್ದಾರೆ.
ಅ.30 : ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ "ಅಕ್ಷರ ಯಾನ"
Posted On: 25 Oct 2024, 10:25 AM
ಕಾರ್ಕಳ : ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ 'ಅಕ್ಷರಯಾನ - ಬರವಣಿಗೆಯ ಮೆರವಣಿಗೆ' ಕಾರ್ಯಕ್ರಮವು ಅಕ್ಟೋಬರ್ 30ರ ಬುಧವಾರ ಬೆಳಗ್ಗೆ 9:30ಕ್ಕೆ ಆರಂಭಗೊಳ್ಳಲಿದೆ. ಈ ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿ. ಸುನಿಲ್ ಕುಮಾರ್ ರವರು ಆಗಮಿಸಲಿದ್ದಾರೆ. ಯುವ ಸಾಹಿತ್ಯಾಸಕ್ತರಿಗೆ ಸ್ಪೂರ್ತಿದಾಯಕ ಮಾತುಗಳ ಜೊತೆಯಲ್ಲಿ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಖ್ಯಾತ ರಂಗ ಕಲಾವಿದ, ನಟ, ನಿರ್ದೇಶಕರಾಗಿರುವ ಎಸ್. ಎನ್. ಸೇತುರಾಮ್ ರವರು. ಲೇಖಕ, ಕನ್ನಡ ಸಿನಿಮಾರಂಗದ ಪ್ರಮುಖ ನಿರ್ದೇಶಕ ಮತ್ತು ನಟರೂ ಆಗಿರುವ ಪ್ರಕಾಶ್ ಬೆಳವಾಡಿಯವರು ಹಾಗೂ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ, ತೀಕ್ಷ್ಣ ಲೇಖನ ಹಾಗೂ ಯುವಪ್ರಜ್ಞೆ ಮತ್ತು ಉತ್ಸಾಹದ ಪ್ರತಿನಿಧಿಯಂತೆ ರಾಜಕೀಯದಲ್ಲೂ ತಮ್ಮ ಗುರುತು ಕಟ್ಟಿಕೊಂಡಿರುವ ಮಾಜಿ ಸಂಸದರಾದ ಪ್ರತಾಪ್ ಸಿಂಹರವರು. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಯುವ ಬರಹಗಾರರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ಪುಸ್ತಕಮನೆ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಕಾಪು ಹೊಸ ಮಾರಿಗುಡಿ ದೇವಸ್ಥಾನ : ಸ್ವರ್ಣ ಜುವೆಲ್ಲರ್ಸ್ ಗೆ ಸ್ವರ್ಣ ಹಸ್ತಾಂತರ
Posted On: 24 Oct 2024, 07:39 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ನೇತೃತ್ವದಲ್ಲಿ ಸ್ವರ್ಣ ಜುವೆಲರ್ಸ್ ನ ಪ್ರಬಂಧಕ ಲಕ್ಷ್ಮೀ ನಾರಾಯಣ್ ಮತ್ತು ಸುನಿಲ್ ಜಿ ಅವರಿಗೆ ಗುರುವಾರದಂದು ಚಿನ್ನ ಮತ್ತು ಬೆಳ್ಳಿಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರಶೇಖರ್ ಅಮೀನ್, ಪ್ರಚಾರ ಸಮಿತಿ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರೀ, ನವದುರ್ಗಾ ಲೇಖನ ಯಜ್ಞ ಸಮಿತಿಯ ಸಂಚಾಲಕ ದಾಮೋದರ ಶರ್ಮಾ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಅ. 29ರವರೆಗೆ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಅವಕಾಶ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ನೇತೃತ್ವದಲ್ಲಿ ಭಕ್ತಾದಿಗಳಿಂದ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಸ್ವರ್ಣ ಸಮರ್ಪಣೆಗೆ ಜೂನ್ 25ರಂದು ಚಾಲನೆ ನೀಡಲಾಗಿತ್ತು, ಅಕ್ಟೋಬರ್ 3 ರಂದು ಮುಹೂರ್ತ ನೆರವೇರಿಸಲಾಗಿತ್ತು. ಸಮಿತಿಯ ನಿರೀಕ್ಷೆಯಂತೆ ಭಕ್ತರು ಈಗಲೂ ಚಿನ್ನ ಮತ್ತು ಬೆಳ್ಳಿಯನ್ನು ನೀಡುತ್ತಿದ್ದು, ಅಕ್ಟೋಬರ್ 29ರವರೆಗೆ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಅವಕಾಶವಿದ್ದು, ಸ್ವರ್ಣ ಗದ್ದುಗೆಯ ಕೆಲಸ ಪ್ರಗತಿಯಲ್ಲಿದೆ. ಸುಮಾರು 20 ಕೆಜಿ ಚಿನ್ನ, 180 ಕೆಜಿ ಬೆಳ್ಳಿಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸ್ವರ್ಣ ಗದ್ದುಗೆಗೆ ಭಕ್ತರಿಂದ ಈಗಾಗಲೇ 11 ಕೆಜಿ ಚಿನ್ನ, 36 ಕೆಜಿ ಬೆಳ್ಳಿ ಸಮರ್ಪಣೆಯಾಗಿದೆ. ಪ್ರಪಂಚದಾದ್ಯಂತ ಇರುವ ಭಕ್ತರಿಂದ ಮತ್ತಷ್ಟು ಚಿನ್ನ ಸಮರ್ಪಣೆಗೊಳ್ಳುವ ನಿರೀಕ್ಷೆಯಿದ್ದು ಭಕ್ತರು ಆದಷ್ಟು ಶೀಘ್ರದಲ್ಲಿ ಸ್ವರ್ಣ ಮತ್ತು ಬೆಳ್ಳಿ ಸಮರ್ಪಿಸಬಹುದಾಗಿದೆ ಎಂದು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಅಧ್ಯಕ್ಷ ರವಿಸುಂದರ್ ಶೆಟ್ಟಿ ಮುಂಬಯಿ ತಿಳಿಸಿದ್ದಾರೆ.
