Updated News From Kaup

ಕಾಪು ಹೊಸ ಮಾರಿಗುಡಿ ದೇವಸ್ಥಾನ : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ

Thumbnail
Posted On: 04 Oct 2024, 03:56 PM

ಕಾಪು : ಸಂಪೂರ್ಣ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ನೇತೃತ್ವದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅಕ್ಟೋಬರ್ 3 ರಂದು ಮುಹೂರ್ತ ನೆರವೇರಿಸಲಾಯಿತು. ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಪ್ರೈ. ಲಿಮಿಟೆಡ್‌ನ ಕಾರ್ಯಾಗಾರವಾದ ಸ್ವರ್ಣೋದ್ಯಮದಲ್ಲಿ ಸುಮಾರು 20 ಕೆ.ಜಿ. ಚಿನ್ನ ಮತ್ತು 160 ಕೆ.ಜಿ. ಬೆಳ್ಳಿಯೊಂದಿಗೆ ಸ್ವರ್ಣ ಗದ್ದುಗೆ ನಿರ್ಮಾಣಗೊಳ್ಳಲಿದೆ. ಟೆಂಡರ್ ಮೂಲಕ ಗುತ್ತಿಗೆ ಪಡೆದುಕೊಂಡಿರುವ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ನ ದೀಪಕ್ ನಾಯಕ್ ಮತ್ತು ಶೈಲೇಶ್ ನಾಯಕ್ ಅವರಿಗೆ ಕಾಪು ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಸ್ವರ್ಣ ಗದ್ದುಗೆಯ ಕೆಲಸ ಆರಂಭಿಸಲು ಮುಹೂರ್ತ ನೆರವೇರಿಸಿ ಪ್ರಸಾದ ನೀಡಲಾಯಿತು. ಅಕ್ಟೋಬರ್ 29ರವರೆಗೆ ಸ್ವರ್ಣ ಸಮರ್ಪಣೆಗೆ ಅವಕಾಶ : ನವದುರ್ಗಾ ಐಕ್ಯ ಸ್ವರೂಪಿಣೀ ಕಾಪು ಮಾರಿಯಮ್ಮನ ದೇವಸ್ಥಾನದ ನವ ನಿರ್ಮಾಣ ಕಾರ್ಯಗಳೊಂದಿಗೆ ನೂತನ ಸ್ವರ್ಣ ಗದ್ದುಗೆ ಸಮರ್ಪಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಭಕ್ತರಿಗೆ 9 ಗ್ರಾಂ, 18 ಗ್ರಾಂ, 99 ಗ್ರಾಂ, 243 ಗ್ರಾಂ, 450 ಗ್ರಾಂ, 999 ಗ್ರಾಂ ಸ್ವರ್ಣ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿದ್ದು ಈಗಾಗಲೇ ಹೆಚ್ಚಿನ ಭಕ್ತರು ಸ್ವರ್ಣ ಸಮರ್ಪಣೆ ಮಾಡುತ್ತಿದ್ದಾರೆ. ಭಕ್ತರ ಅಪೇಕ್ಷೆಯ ಮೇರೆಗೆ ಸ್ವರ್ಣ ಸಮರ್ಪಣೆಗೆ ಅಕ್ಟೋಬರ್ 29ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯು ತಿಳಿಸಿದೆ. ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಕೆ., ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಕಾರ್ಯಾಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಕಾರ್ಯದರ್ಶಿ ರವಿ ಭಟ್ ಮಂದಾರ, ಪ್ರಮುಖರಾದ ಮನೋಹರ್ ಶೆಟ್ಟಿ, ಮಾಧವ ಪಾಲನ್, ಜಯರಾಮ ಆಚಾರ್ಯ, ಬೀನಾ ಶೆಟ್ಟಿ, ಅನುರಾಧ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಸಾವಿತ್ರಿ ಗಣೇಶ್, ಜಯಲಕ್ಷ್ಮೀ ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನವೆಂಬರ್ 16 ರಂದು ಪಲಿಮಾರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಂಗಾಳ ಬಾಬು ಕೊರಗ ಆಯ್ಕೆ

Thumbnail
Posted On: 04 Oct 2024, 03:47 PM

ಪಡುಬಿದ್ರಿ : ಕೊರಗ ಸಮುದಾಯದ ಹಿರಿಯ ಸಂಘಟಕ ಹಾಗೂ ಕೊರಗ ಭಾಷಾ ತಜ್ಞ, ಸಾಹಿತಿ, ಸಂಶೋಧಕ ಪಾಂಗಾಳ ಬಾಬು ಕೊರಗ ಅವರನ್ನು ನವೆಂಬರ್ 16, ಶನಿವಾರದಂದು ಪಲಿಮಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಲಿರುವ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಕಾಪು ತಾಲ್ಲೂಕು ಘಟಕದ 6ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾಪು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪಾಂಗಾಳ ಬಾಬು ಕೊರಗರ ಪರಿಚಯ : ಕಾಪು ತಾಲ್ಲೂಕಿನ ಪಾಂಗಾಳದಲ್ಲಿ ಕುಂದು ಕೊರಗ ಮತ್ತು ಬಡ್ಡೆ ಕೊರಪಳು ದಂಪತಿಯ ಪುತ್ರನಾಗಿ ಜನಿಸಿದ ಪಾಂಗಾಳ ಬಾಬು ಕೊರಗ ಅವರು, ಕೊರಗ ಸಮುದಾಯದ ಆದಿಬುಡ ಮೂಲ ಅಸ್ಮಿತೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿದ ಗಟ್ಟಿಧ್ವನಿಯಾಗಿದ್ದಾರೆ. ಅವರು 1988ರಿಂದ ನಿರಂತರವಾಗಿ ಕೊರಗ ಸಮುದಾಯದ ಸಂಘಟನೆಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ದೆಹಲಿ ದರ್ಶನ ಕಾರ್ಯಕ್ರಮದಲ್ಲಿ ತಂಡದೊಂದಿಗೆ ಭಾಗವಹಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಕೊರಗ ಸಮುದಾಯದ ಬಗ್ಗೆ ವಿಚಾರಮಂಡನೆ ಮಾಡಿದ್ದಾರೆ. ಚೆನ್ನೈ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಇಲ್ಲಿ ಜರಗಿದ ವಿಚಾರ ಸಂಕಿರಣದಲ್ಲಿ ಅವರು ಪಾಲ್ಗೊಂಡು, ತಿರುಕ್ಕುರಳ್ ಗ್ರಂಥವನ್ನು ಅವರು ಕೊರಗ ಭಾಷೆಗೆ ಅನುವಾದಿಸಿದ್ದನ್ನು ಪ್ರಸ್ತುತಪಡಿಸಿದ್ದಲ್ಲದೆ, ದಕ್ಷಿಣ ಭಾರತದ ಭಾಷೆಗಳ ನಡುವೆ ಕೊರಗ ಭಾಷೆಯ ಅಳಿವು-ಉಳಿವು ಬಗ್ಗೆ ವಿಚಾರಗಳನ್ನು ದಾಖಲಿಸಿದ್ದಾರೆ. 90 ಭಾಷೆಗಳಲ್ಲಿ ತಿರುಕ್ಕುರಳ್ ಗ್ರಂಥ ಅನುವಾದಗೊಂಡಿದ್ದು, ಇದರಲ್ಲಿ ಕೊರಗ ಭಾಷೆಯೂ ಒಳಗೊಳ್ಳುವಂತೆ ಮಾಡಿದ್ದು ಕೊರಗ ಭಾಷಾ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ತುಳು ಅಕಾಡೆಮಿಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಕಾಪು ತಾಲ್ಲೂಕು ಬೆಳ್ಳೆ ಗ್ರಾಮದ ಪಾಂಬೂರಿನ ಮುಂಚಿಕಾಡು ಕೊರಗರ ಬಲೆಪಿನಲ್ಲಿ ನವೋದಯ ಕಲಾತಂಡವನ್ನು ಸ್ಥಾಪಿಸಿ, ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ. ಅವರ ಬರೆಹಗಳು ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಕೊರಗರ ಅಜಲು, ಕೊರಗರ ಭಾಷೆ, ಆದಿಬುಡಮೂಲ ಕೊರಗರು, ಚೋಮನ ಕರಂಡೆ (ಅನುವಾದ), ಅರಕಜಬ್ಬೆ ಮತ್ತು ಕುದ್ಕನ ಕಥೆಗಳು ಅವರ ಪ್ರಮುಖ ಕೃತಿಗಳು. ಬಾನ ದೇಬೆರೆ ತುಡರ್- ಕೊರಗ ತನಿಯ, ಸಾಮಾಜಿಕ ಹೋರಾಟದ ಗುರಿಕಾರರು ಕೃತಿಗಳು ಪ್ರಕಟನೆಗೆ ಸಿದ್ಧವಾಗಿವೆ. ಕೊರಗರ ಅಜಲು ಕೃತಿ ಮರುಮುದ್ರಣದ ಹಂತದಲ್ಲಿದೆ. ಅವರಿಗೆ ಕರಾವಳಿ ರತ್ನ-ಸಂಶೋಧಕ ರತ್ನ ಪುರಸ್ಕಾರ-2022, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ -2022 ಸಂದಿವೆ. ಅವರು ಕೊರಗರ ಭಾಷೆ ಕೃತಿಯಲ್ಲಿ ಬರೆದ ಕೂಜಿನ ಪಾಟು ಎಂಬ ಕವಿತೆ ಸಂಗೀತ ಹಾಗೂ ನೃತ್ಯದೊಂದಿಗೆ ಡಿಜಿಟಲೀಕರಣಗೊಂಡು ನಿಟ್ಟೆ ವಿವಿಯಲ್ಲಿ ತೆರೆಕಂಡಿದೆ. ಇದು ಯೂಟ್ಯೂಬ್ ಪ್ರವೇಶಿಸಿದ ಮೊದಲ ಪೂರ್ಣಪ್ರಮಾಣದ ಕೊರಗ ಭಾಷೆಯ ಹಾಡು ಎಂಬ ದಾಖಲೆ ಸೃಷ್ಟಿಸಿದೆ. ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ರಾಗಸಂಯೋಜನೆ ಮಾಡಿದ್ದಾರೆ.

ಚಂದ್ರನಗರ : ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ, ಉಚಿತ ಮೆಡಿಸಿನ್, ಮನೆ ಸಾಮಗ್ರಿ ಕಿಟ್ ವಿತರಣೆ

Thumbnail
Posted On: 04 Oct 2024, 06:49 AM

ಕಾಪು : ನಮ್ಮ ನಾಡ ಒಕ್ಕೂಟ(ರಿ) ಕಾಪು ತಾಲೂಕು ಹಾಗೂ ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಚಂದ್ರನಗರ ಇವರ ಜಂಟಿ ಆಶ್ರಯದಲ್ಲಿ ನುರಿತ ವೈದ್ಯರಿಂದ ಮರ್ಹೂಂ ಹಾಜಿ ಕೆ.ಉಮ್ಮರಬ್ಬ ರವರ ಸ್ಮರಣಾರ್ಥ ಇಪ್ಪತ್ತೇಳು ಮಕ್ಕಳಿಗೆ ಉಚಿತ ಮುಂಜಿ(ಸುನ್ನತ್) ಕಾರ್ಯಕ್ರಮ ಹಾಗೂ ಉಚಿತ ಮೆಡಿಸಿನ್ ಮತ್ತು ಮನೆ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಚಂದ್ರನಗರ ಬಟರ್ ಫ್ಲೈ ಪಾರ್ಟಿ ಹಾಲ್ ನಲ್ಲಿ ನಡೆಯಿತು. ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಅಧ್ಯಕ್ಷ, ಸಮಾಜ ಸೇವಕರಾದ ಡಾ.ಎಂ ಫಾರೂಕ್ ಉಮ್ಮರಬ್ಬ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಮಾಜ ಸೇವೆಯೆ ನನ್ನ ತಂದೆಯ ಕನಸಾಗಿತ್ತು. ಸಮಾಜದಲ್ಲಿ ಆಶಕ್ತರು ಬಡವರಿಗಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸಿದ್ದು, ಸಾಮೂಹಿಕ ಮುಂಜಿ ಕಾರ್ಯಕ್ರಮವನ್ನು ಸಮಾಜದಲ್ಲಿ ಉತ್ತಮ ಸಾಮಾಜಿಕ ಕಾರ್ಯಕ್ರಮ ಹಾಕಿಕೊಳ್ಳುವ ಎನ್ ಎನ್ ಒ ಜಂಟಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸಮಾಜ ಸೇವೆ ಮಾಡಿದ್ದು ತೃಪ್ತಿಕರವಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಅಶ್ರಫ್ ಪಡುಬಿದ್ರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಕ್, ಎನ್ ಎನ್ ಒ ಘಟಕದ ಜಿಲ್ಲಾ ಉಪಾಧ್ಯಕ್ಷ ಕಾಪು ತಾಲೂಕು ಉಸ್ತುವಾರಿ ಯು.ಎ ರಶೀದ್, ಸೌದಿ ಅರೇಬಿಯಾ ಅನಿವಾಸಿ ಭಾರತೀಯ ಉದ್ಯಮಿ ಮೊಹಮ್ಮದ್ ಇಲ್ಯಾಸ್ ಹಮೀದ್, ದ.ಕ ಜಿಲ್ಲಾ ಮದ್ರಸ ಮೆನೆಜ್ಮೆಂಟ್ ಜಿಲ್ಲಾಧ್ಯಕ್ಷರಾದ ಎಂ.ಎಚ್ ಹಾಜಿ ಮೊಯಿದಿನ್ ಅಡ್ದುರು, ಎನ್ ಎನ್ ಒ ಪರ್ಯವರಣ ಸಮಿತಿ ರಾಜ್ಯಾಧ್ಯಕ್ಷರಾದ ಡಾ.ಶೇಕ್ ವಹಿದ್ ದಾವುದ್, ಎನ್ ಎನ್ ಒ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಮೊಹಮ್ಮದ್, ಜಮೀಯತುಲ್ ಫಲಹ್ ಕಾಪು ತಾಲೂಕು ಅಧ್ಯಕ್ಷರಾದ ಶಬೀ ಅಹ್ಮದ್ ಖಾಝಿ ಡಾ.ಸಿದ್ದಿಕ್ ಅಡ್ದುರು ಉಪಸ್ಥಿತರಿದ್ದರು. ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಸಖಾಫಿ ಅಲ್ ಖಾಮೀಲ್ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಯೂಸುಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು. ಎಸ್ ಎ ಅಬ್ದುಲ್ ರಝಕ್ (ಕೊಪ್ಪ )ಚಂದ್ರನಗರ ವಂದಿಸಿದರು.

ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಾಟರ್ ಪ್ಯೂರಿಫೈರ್, ಸಿಲಿಂಗ್ ಫ್ಯಾನ್ ಕೊಡುಗೆ

Thumbnail
Posted On: 03 Oct 2024, 09:08 PM

ಕಾಪು : ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೆಳಪುವಿನ ಸಮುದಾಯದ ಆರೋಗ್ಯ ಕೇಂದ್ರ ಶಿರ್ವ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬೆಳಪು (ಉಪಕೇಂದ್ರ )ದಲ್ಲಿ ವಾಟರ್ ಪ್ಯೂರಿಫೈರ್ ಮತ್ತು ಸಿಲಿಂಗ್ ಫ್ಯಾನ್ ಕೊಡುಗೆ ನೀಡಲಾಯಿತು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಿತು. ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶಾನವಾಜ್ ಫಜುಲ್ಲಾವುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉಪಾಧ್ಯಕ್ಷ ಶಾಹಿದ್ ನವಾಜ್, ಹಿರಿಯ ಸದಸ್ಯರಾದ ಶಾನವಾಜ್ ನೂರುಲ್ಲಾ, ಸಯೀದ್ ಅಹಮದ್ ಅಂಜಲಬೆಟ್, ಶೇಖ್ ಖಾಲಿದ್ ಅಹಮದ್, ಅಲ್ತಾಫ್ ಹುಸೇನ್ ಅಂಜಲ್ಭಟ್, ಅಕ್ರಮ್ ಮೆತಾಬ್, ಜೂಬರ್ ಮಾಡಿಘರ್, ಸಜೀದ್ ಕಾಸಿಂ ಉಪಸ್ಥಿತರಿದ್ದರು ಹಾಗೂ ಬೆಳಪು ಅರೋಗ್ಯ ಅಧಿಕಾರಿ ದಿವ್ಯಾ ಕೆ ಎ ಹಾಗೂ ಅರೋಗ್ಯ ಸುರಕ್ಷಣಾ ಅಧಿಕಾರಿ ರಮ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿ ಉಚ್ಚಿಲ ದಸರಾ -2024 ವಿದ್ಯುದೀಪಾಲಂಕಾರದ ಉದ್ಘಾಟನೆ

Thumbnail
Posted On: 03 Oct 2024, 08:57 PM

ಉಚ್ಚಿಲ : ಉಡುಪಿ ಉಚ್ಚಿಲ‌ ದಸರಾ 2024 ಪ್ರಯುಕ್ತ ಉದ್ಯಮಿ, ಎಂ.ಆರ್.ಜಿ ಗ್ರೂಪ್ ನ ಮುಖ್ಯಸ್ಥ ಡಾ. ಕೆ. ಪ್ರಕಾಶ್ ಅವರ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಗುರುವಾರ ಸಂಜೆ ಉದ್ಘಾಟಿಸಿದರು. ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್, ಡಾ. ಕೆ. ಪ್ರಕಾಶ್ ಶೆಟ್ಟಿ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಮಹಾರಾಷ್ಟ್ರ ಸರಕಾರದ ವಿಧಾನ ಪರಿಷತ್‌ ಸದಸ್ಯ ಮಿಲಿಂದ್‌ ನಾರ್ವೇಕರ್‌ ದಂಪತಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಮಟ್ಟು, ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ಶ್ರೀಪತಿ ಭಟ್ ಉಚ್ಚಿಲ, ಮೋಹನ್ ಬೇಂಗ್ರೆ, ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಉಚ್ಚಿಲ ದಸರಾ - 2024 : ಉಡುಪಿ ಜಿಲ್ಲಾಧಿಕಾರಿಯವರಿಂದ ಚಾಲನೆ

Thumbnail
Posted On: 03 Oct 2024, 02:16 PM

ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರ ಸಹಯೋಗದೊಂದಿಗೆ 3ನೇ ಬಾರಿಗೆ‌ ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿರುವ ಉಡುಪಿ ಉಚ್ಚಿಲ ದಸರಾ-2024ಕ್ಕೆ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿಯವರು ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಈ ಬಾರಿಯ ಉಡುಪಿ ಉಚ್ಚಿಲ ದಸರಾ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ತಾಯಿ ಶಾರದೆ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು. ಸಭಾಂಗಣದಲ್ಲಿಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರು ಪ್ರತಿಷ್ಠಾಪನಾ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. ಸನ್ಮಾನ : ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್‌ರವರು ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕಾಪು ತಹಶಿಲ್ದಾರ್‌ ಡಾ. ಪ್ರತಿಭಾ ಆರ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರನ್ನು ಶಾರದಾ ಮಾತೆಯ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆಯ ಜೊತೆಗೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭವೂ ನೆರವೇರಿತು. ಈ ಸಂದರ್ಭ ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮುಲ್ಕಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಕಾರ್ಯದರ್ಶಿ ನಾರಾಯಣ ಸಿ ಕರ್ಕೇರ, ಕೋಶಾಧಿಕಾರಿ ಸುಧಾಕರ್ ಕುಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮ, ಕಾಪು ತಹಶಿಲ್ದಾರ್ ಡಾ. ಪ್ರತಿಭ ಆರ್., ಸದಸ್ಯರಾದ ಮೋಹನ್ ಬಂಗೇರ ಕಾಪು, ದಿನೇಶ್ ಎರ್ಮಾಳು, ಬೆಣ್ಣೆಕುದ್ರು ಕ್ಷೇತ್ರದ ಅಧ್ಯಕ್ಷ ಆನಂದ ಸಿ ಕುಂದರ್, ಮೊಗವೀರ ಮಹಾಜನ ಸಂಘದ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾರಾಣಿ ಬೋಳೂರು, ಪ್ರಧಾನ ಕಾರ್ಯದರ್ಶಿ ಉಷಾ ಲೋಕೇಶ್, ಕಾಪು ನಾಲ್ಕುಪಟ್ಣ ಮೊಗವೀರ ಸಭಾ ಉಚ್ಚಿಲ ಅಧ್ಯಕ್ಷ ಮನೋಜ್ ಪಿ. ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಎಸ್ ಕರ್ಕೇರ, ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಆಡಳಿತ ಮಂಡಳಿ ಸದಸ್ಯರಾದ ವಾಸುದೇವ ಸಾಲ್ಯಾನ್ ಕಟಪಾಡಿ, ಗುಂಡು ಬಿ ಅಮೀನ್ ಕಿದಿಯೂರು, ಸತೀಶ್ ಎಸ್ ಅಮೀನ್ ಬೆಣ್ಣೆ ಕುದ್ರು, ಮಂಜುನಾಥ್ ಸುವರ್ಣ ಬ್ರಹ್ಮಾವರ, ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶಿವರಾಮ ಕೋಟ, ಲೋಕೇಶ್ ಮೆಂಡನ್ ಉಪ್ಪೂರು, ವಿನಯ ಕರ್ಕೆರ ಮಲ್ಪೆ, ಕೇಶವ ಎಂ ಕೋಟ್ಯಾನ್ ಮಲ್ಪೆ, ಗಿರೀಶ್ ಕುಮಾರ್ ಪಿತ್ರೋಡಿ, ಜಯಂತ್ ಸಾಲ್ಯಾನ್ ಕನಕೋಡ, ಕಿರಣ್ ಕುಮಾರ್ ಪಿತ್ರೋಡಿ, ಸುಧಾಕರ ವಿ ಸುವರ್ಣ ಉಚ್ಚಿಲ, ನಾರಾಯಣ ಸಿ ಕರ್ಕೇರ ಪಡಬಿದ್ರಿ ಕಾಡಿಪಟ್ಣ, ಸತೀಶ್ ಆರ್ ಕರ್ಕೇರ ಸುರತ್ಕಲ್, ವಿಜಯ ಸುವರ್ಣ ಕುಳಾಯಿ, ಹೇಮಂತ್ ತಿಂಗಳಾಯ ಹೊಯ್ಗೆ ಬಜಾರ್, ಪುರುಷೋತ್ತಮ ಕೋಟ್ಯಾನ್ ಬೋಳೂರು, ಯಶವಂತ್ ಪಿ ಮೆಂಡನ್ ಬೋಳೂರು, ಶಿಲ್ಪ ಜಿ. ಸುವರ್ಣ, ದೇವಳದ ಪ್ರಬಂಧಕ ಸತೀಶ್ ಅಮೀನ್‌ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.

ಮಾತೃಜಾ ಸೇವಾ ಸಿಂಧು ನಿಟ್ಟೆ : 25 ನೇ ಸೇವಾ ಯೋಜನೆ ಹಸ್ತಾಂತರ

Thumbnail
Posted On: 03 Oct 2024, 07:26 AM

ಕಾರ್ಕಳ : ನಿಟ್ಟೆಯ ಮಾತೃಜಾ ಸೇವಾ ಸಿಂಧು ತಂಡ ಈ ಬಾರಿ ಕುತ್ಯಾರು ಭಾಗದ ಶರತ್ ಅವರ ವೈದ್ಯಕೀಯ ಚಿಕಿತ್ಸೆಯ ಮನವಿಗೆ ಸ್ಪಂದಿಸಿ 15,000 ಮೊತ್ತದ ಧನಸಹಾಯವನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೆಳ್ಮಣ್ ಇಲ್ಲಿಯ ಅರ್ಚಕರ ಹಾಗೂ ತಂಡದ ಸದಸ್ಯರ ಉಪಸ್ಥಿತಿಯಲ್ಲಿ ಶರತ್ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಮತ್ತೆ ಬಂದಿದೆ ನವರಾತ್ರಿ : ನಮ್ಮ ಬದುಕಿನ ವಿಜಯದ ಹಬ್ಬವಾಗಲಿ

Thumbnail
Posted On: 03 Oct 2024, 07:21 AM

ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ನವರಾತ್ರಿಯು ದುರ್ಗಾ ದೇವಿಗೆ ಸಮರ್ಪಿತವಾದ ಮಂಗಳಕರ ಹಬ್ಬವಾಗಿದೆ. ಒಂಬತ್ತು ರಾತ್ರಿಗಳ ಸಾಂಕೇತಿಕ ಆಚರಣೆಯಾಗಿರುವ ಈ ಹಬ್ಬಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಯು ಹಲವಾರು ನೃತ್ಯ ಪ್ರದರ್ಶನಗಳನ್ನು, ವಿವಿಧ ವಿಶೇಷ ಪಾಕವಿಧಾನಗಳನ್ನು ಮತ್ತು ದುರ್ಗಾ ದೇವಿಗೆ ಸಲ್ಲಿಸುವ ಪ್ರಾರ್ಥನೆಗಳನ್ನು ಒಳಗೊಂಡಿರುತ್ತದೆ. ಶಾರದೀಯ ನವರಾತ್ರಿಯನ್ನೇಕೆ ಆಚರಿಸಲಾಗುತ್ತದೆ..? ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಿದ ಕಥೆಗಳ ಪ್ರಕಾರ, ಶಕ್ತಿಯ ಅಧಿದೇವತೆಯಾದ ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದು ರಾಕ್ಷಸ ಶಕ್ತಿಯನ್ನು ನಾಶಪಡಿಸಿದಳು ಮತ್ತು ಬ್ರಹ್ಮಾಂಡದ ಒಳಿತನ್ನು ರಕ್ಷಿಸಿದ್ದಾಳೆ. ದುರ್ಗಾ ದೇವಿಯು ಮಹಿಷಾಸುರನ ಮೇಲೆ ದಾಳಿ ಮಾಡಿ ಒಂಬತ್ತು ದಿನಗಳ ಕಾಲ ಅವನೊಂದಿಗೆ ಹೋರಾಡಿ ಹತ್ತನೇ ದಿನ ಅವನನ್ನು ಹತ್ಯೆಗೈದ ಸಮಯವು ಅಶ್ವಿನ ಮಾಸವಾಗಿತ್ತು. ಆದ್ದರಿಂದ, ಅಶ್ವಿನ ಮಾಸದ ಈ ಒಂಬತ್ತು ದಿನಗಳು ಶಕ್ತಿಯ ಆರಾಧನೆಗೆ ಮೀಸಲಾಗಿವೆ. ಪಂಚಾಂಗದ ಪ್ರಕಾರ, ಶರತ್ಕಾಲವು ಅಶ್ವಿನ ಮಾಸದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಶಾರದೀಯ ನವರಾತ್ರಿ ಎಂದು ಕರೆಯಲಾಗುತ್ತದೆ. ಶಾರದೀಯ ನವರಾತ್ರಿಯ 10 ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ನವರಾತ್ರಿ ಹಬ್ಬದ ಇತಿಹಾಸ : ನವರಾತ್ರಿ ಆಚರಣೆಯ ಹಿಂದೆ ಹಲವು ಐತಿಹ್ಯಗಳಿವೆ. ದಂತಕಥೆಯ ಪ್ರಕಾರ, ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದಳು ಮತ್ತು ನಂತರ ನವಮಿಯ ರಾತ್ರಿ ಅವನನ್ನು ಕೊಂದಳು ಎಂದು ಕಥೆಯಲ್ಲಿ ಹೇಳಲಾಗಿದೆ. ಅಂದಿನಿಂದ ದೇವಿಯನ್ನು 'ಮಹಿಷಾಸುರಮರ್ದಿನಿ' ಎಂದು ಕರೆಯುತ್ತಾರೆ. ಅಂದಿನಿಂದ, ತಾಯಿ ದುರ್ಗೆಯ ಶಕ್ತಿಗೆ ಸಮರ್ಪಿತವಾದ ನವರಾತ್ರಿಯ ಉಪವಾಸವನ್ನು ಆಚರಿಸುವಾಗ ಅವಳ 9 ರೂಪಗಳನ್ನು ಪೂಜಿಸಲಾಗುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ, ಭಗವಾನ್ ಶ್ರೀರಾಮನು ದುಷ್ಟ ರಾವಣನನ್ನು ಕೊಂದು ಒಳಿತನ್ನು ವಿನಾಶದಿಂದ ರಕ್ಷಿಸಿದನು. ಈ ಉದ್ದೇಶವನ್ನು ಸಾಧಿಸಲು, ನಾರದನು ನವರಾತ್ರಿಯ ವ್ರತದ ಆಚರಣೆಗಳನ್ನು ಮಾಡಲು ಶ್ರೀರಾಮನನ್ನು ವಿನಂತಿಸಿದನು. ಆಗ ಭಗವಾನ್ ಶ್ರೀರಾಮನು ಉಪವಾಸವನ್ನು ಮುಗಿಸಿದ ನಂತರ ಲಂಕೆಯ ಮೇಲೆ ದಾಳಿ ಮಾಡಿ ರಾವಣನನ್ನು ಕೊಂದನು. ಅಂದಿನಿಂದ ನವರಾತ್ರಿಯ ವ್ರತ ಸಾಧನೆಗಾಗಿ ಮಾಡಲಾಗುತ್ತಿದೆ. ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಹೇಗೆ ನವರಾತ್ರಿಯು ಸೂಚಿಸುತ್ತದೆಯೋ ಹಾಗೇ ನಮ್ಮ ಕೆಟ್ಟ ಆಲೋಚನೆ, ಅಹಿತಕರ ಘಟನೆಗಳು, ನಕಾರಾತ್ಮಕ ಶಕ್ತಿಗಳ ಆರ್ಭಟವನ್ನು ಸಂಹಾರ ಮಾಡಲು ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರಧಾನಿಯವರು ಕೂಡ ಉಪವಾಸವಿದ್ದು ಆಚರಣೆ ಮಾಡುತ್ತಾರೆ. ಈ ಹಬ್ಬ ನಮ್ಮ ಬದುಕಿನ ಹೊಸ ಮನ್ವಂತಕ್ಕೆ ಸಾಕ್ಷಿಯಾಗಲಿ' ಲೇಖನ : ರಾಘವೇಂದ್ರ ಪ್ರಭು, ಕವಾ೯ಲು

ಮಲ್ಪೆಯಲ್ಲಿ ಮತ್ಸ್ಯ ಕ್ಷಾಮ : ಮೀನುಗಾರರ ಸಂಕಷ್ಟ ಪರಿಹಾರಕ್ಕೆ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸಮುದ್ರ ಪೂಜೆ

Thumbnail
Posted On: 02 Oct 2024, 04:51 PM

ಮಲ್ಪೆ : ಮತ್ಸ್ಯ ಕ್ಷಾಮದಿಂದ ಮೀನುಗಾರರ ಸಂಕಷ್ಟ ಪರಿಹಾರಕ್ಕಾಗಿ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮಪೀಠ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಮಲ್ಪೆಯಲ್ಲಿ ಬುಧವಾರ 108 ಪುಣ್ಯ ಕ್ಷೇತ್ರ ಪ್ರಸಾದ ಸಮುದ್ರಕ್ಕೆ ಸಮರ್ಪಿಸಿದರು. ಈ‌ ಸಂದರ್ಭದಲ್ಲಿ ಶ್ರೀ ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ಸತೀಶ್ ಬಂಗೇರ, ಅರ್ಚಕರಾದ ನವೀನ್, ಡೀಪ್ ಸಿ ಸಂಘದ ಅಧ್ಯಕ್ಷರಾದ ಸುಭಾಷ್ ಮೆಂಡನ್, ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಡೀಪ್ ಸಿ ತಂಡೇಲರ ಅಧ್ಯಕ್ಷರಾದ ರವಿ ರಾಜ್ ಸುವರ್ಣ, ಪರ್ಸಿನ್ ಸಂಘದ ಅಧ್ಯಕ್ಷರಾದ ನಾಗರಾಜ್ ಸುವರ್ಣ, ಮತ್ಸ್ಯೋದ್ಯಮಿ ಶಶಿಧರ್ ಕುಂದರ್, ಶೇಖರ್ ಎಸ್ . ಪುತ್ರನ್, ರತ್ನಾಕರ ಸಾಲಿಯನ್, ದಿನೇಶ್ ಬಂಗೇರ, ಸುಂದರ್ ಪಿ.ಸಾಲಿಯನ್, ವಿಜಯ ಕುಂದರ್, ವಿನೋದ್ ಮಲ್ಪೆ, ಪುಷ್ಪ ಶಶಿಧರ್ ಕುಂದರ್, ಗೀತಾಂಜಲಿ ಎಮ್. ಸುವರ್ಣ, ವಿಘ್ನೇಶ್ ನೀಲಾವರ, ಸತೀಶ್ ದೇವಾಡಿಗ, ಶಶಾಂಕ್, ಆರ್ಯನ್ ಉಪಸ್ಥಿತರಿದ್ದರು.

ನೆಹರು ಯುವ ಕೇಂದ್ರ : ಸ್ವಚ್ಚತಾ ಹಿ ಸೇವಾ ಕಾಯ೯ಕ್ರಮ

Thumbnail
Posted On: 02 Oct 2024, 04:08 PM

ಉಡುಪಿ : ಗಾಂಧೀಜಿಯವರಂತಹ ವ್ಯಕ್ತಿಗಳು ಪ್ರಪಂಚದಲ್ಲಿ ಯಾರೂ ಇರಲು ಅಸಾಧ್ಯ. ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಅರ್ಥ ಮಾಡಿದಾಗ ಅವರಲ್ಲಿರುವ ಅಪೂರ್ವ ಶಕ್ತಿ ನಮಗೆ ತಿಳಿಯಲು ಸಾಧ್ಯ ಎಂದು ರೆಡ್ ಕ್ರಾಸ್ ಸೊಸೈಟಿ ಉಡುಪಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು. ಅವರು ಗಾಂಧಿ ಜಯಂತಿಯ ಪ್ರಯುಕ್ತ ನೆಹರು ಯುವ ಕೇಂದ್ರ ಜಿಲ್ಲಾಡಳಿತ ಉಡುಪಿ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಹಿ ಸೇವಾ 2024 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಾನಸಿಕ ಸ್ವಚ್ಛತೆ, ಭೌತಿಕ ಸ್ವಚ್ಛತೆ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಗಾಂಧೀಜಿಯವರು ಹೆಚ್ಚಿನ ಒತ್ತನ್ನು ನೀಡಿದರು ಈ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಗಾಂಧೀಜಿಯವರಿಗೆ ಸಲ್ಲಿಸಿದ ಅಪೂರ್ವ ನಮನವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸುಕನ್ಯಾ ಮೇರಿ ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸರ್ಕಾರಿ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ. ರಘು ನಾಯ್ಕ್, ಮಮತಾ, ಸರಸ್ವತಿ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಉಡುಪಿ ಎಸ್.ಕೆ.ಪಿ ಎ ಅಧ್ಯಕ್ಷ ಸುಧೀರ್ ಶೆಟ್ಟಿ, ಮಾನವ ಹಕ್ಕು, ಮಹಾ ಮೈತ್ರಿಯ ಪ್ರೀತಿ ತಂಗಪ್ಪನ್ ನೆಹರು ಯುವ ಕೇಂದ್ರದ ಅಧಿಕಾರಿ ಶ್ರೀದೇವಿ ರಾವ್ ಮುಂತಾದವರು ಉಪಸ್ಥಿತರಿದ್ದರು. ಸ್ವಚ್ಛ ಭಾರತ್ ಫ್ರೆಂಡ್ಸ್ ನ ರಾಘವೇಂದ್ರ ಪ್ರಭು ಕವಾ೯ಲು ಸ್ವಚ್ಚತಾ ಪ್ರತಿಜ್ಞಾವಿಧಿ ಬೋಧಿಸಿದರು. ಕಾಯ೯ಕ್ರಮದಲ್ಲಿ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ಮತ್ತು ಸರಸ್ವತಿ ಯುವಕ ಮಂಡಲ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಯಿತು.