Updated News From Kaup

ಹೆಜಮಾಡಿ : ಅಟೋ ರಿಕ್ಷಾ ಯೂನಿಯನ್ - 78ನೇ ಸ್ವಾತಂತ್ರೋತ್ಸವ

Posted On: 15-08-2024 03:26PM

ಹೆಜಮಾಡಿ : ಅಟೋ ರಿಕ್ಷಾ ಯೂನಿಯನ್ ವತಿಯಿಂದ 78 ನೇ ಸ್ವಾತಂತ್ರೋತ್ಸವವನ್ನು ಹೆಜಮಾಡಿ ಮುಖ್ಯ ಪೇಟೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶೇಖರ್ ಹೆಜ್ಮಾಡಿ ಧ್ವಜಾರೋಹಣ ಮಾಡಿ ಸ್ವಾತಂತ್ರೋತ್ಸವ‌ ಮಹತ್ವದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಯೂನಿಯನ್ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

ದುರ್ಗಾ ಫ್ರೆಂಡ್ಸ್ ಹೆಜಮಾಡಿ ವತಿಯಿಂದ 78 ನೇ ಸ್ವಾತಂತ್ರೋತ್ಸವ ದಿನಾಚರಣೆ

Posted On: 15-08-2024 03:20PM

ಹೆಜಮಾಡಿ : ನಾನು ಭಾರತೀಯ ಎಂಬ ಹೆಮ್ಮೆಯ ಭಾವನೆ ಬೆಳೆಸಿಕೂಳ್ಳುವುದರೊಂದಿಗೆ ದೇಶ ರಕ್ಷಣೆಯ ಕರ್ತವ್ಯವನ್ನು ಪ್ರತಿಯೊಬ್ಬರೂ ಹೊತ್ತು ಕೊಳ್ಳಬೇಕು. ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿ ಯಲ್ಲಿ ‌ಯುವಕರ ಪಾತ್ರ ಬಹಳ ಮುಖ್ಯ. ಏಕೆಂದರೆ ಯಾವುದೇ ರಾಷ್ಟ್ರದ ಅಭಿವೃದ್ಧಿ ಭವಿಷ್ಯದ ಪೀಳಿಗೆ ಯಲ್ಲಿದೆ. ಯುವಕರಿಗೆ ಜಗತ್ತನ್ನು ಬದಲಿಸುವ ಶಕ್ತಿ ಇದೆ. ನಾವೆಲ್ಲರೂ ದೇಶದ ಸತ್ಪ್ರಜೆಯಾಗಿ ಬಾಳ ಬೇಕು ಎಂದು ಭಾರತೀಯ ವಾಯುಪಡೆ ಸೇನೆಯ ನಿವೃತ್ತ ಕಾರ್ಪೋರಲ್ ಪುರುಷೋತ್ತಮ್ ಗುರಿಕಾರ ಹೆಜಮಾಡಿ ಇವರು 78ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ನೇರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ವಾತಂತ್ರೋತ್ಸವ ‌ಅಂಗವಾಗಿ ನಡೆದ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದುರ್ಗಾ ಫ್ರೆಂಡ್ಸ್ ನ ಅಧ್ಯಕ್ಷರಾದ ಅನಿಲ್ ಎಚ್ ಕುಂದರ್, ಮಾಜಿ ಅಧ್ಯಕ್ಷರು ಪ್ರಭಾಕರ್ ಕರ್ಕೇರ, ಸಂಚಾಲಕರಾದ ಎಚ್ ರವಿ ಕುಂದರ್, ಗೌರವ ಸಲಹೆಗಾರ ದೇವದಾಸ್ ಸಾಲ್ಯಾನ್, ಉಪಾಧ್ಯಕ್ಷರಾದ ಹಿತೇಶ್ ಮೆಂಡನ್, ಹೆಜಮಾಡಿ ಗ್ರಾ.ಪಂ.ಸದಸ್ಯೆ ನಿರ್ಮಲಾ ಕೆ, ಖಡ್ಗೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾದ ಗಣೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಕೃಷ್ಣ ‌ಪೂಜಾರಿ, ಹೆಜಮಾಡಿ ‌ದೇವಾಡಿಗರ ಸಂಘದ ಅಧ್ಯಕ್ಷರಾದ ಹರೀಶ್ ದೇವಾಡಿಗ, ಪಡುಬಿದ್ರಿ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.

ದುರ್ಗಾ ಫ್ರೆಂಡ್ಸ್ ನ ಕಾರ್ಯದರ್ಶಿ ಕೀರ್ತನ್ ಎಸ್ ಸಾಲ್ಯಾನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಪಡುಬಿದ್ರಿ : ಬಾಪೂಜಿ ಭಜನಾ ಮಂದಿರ - 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆ

Posted On: 15-08-2024 03:12PM

ಪಡುಬಿದ್ರಿ : ಇಲ್ಲಿನ ಹಿರಿಯ ಸಂಘ ಸಂಸ್ಥೆಗಳಲ್ಲಿ ಒಂದಾದ ಬಾಪೂಜಿ ಸಮಾಜ ಮಂದಿರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ಪಡುಬಿದ್ರಿ ಮುಂಡಾಲ ವೇದಿಕೆಯ ಅಧ್ಯಕ್ಷರಾದ ಶಿವಪ್ಪ ಪಡುಬಿದ್ರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ರವಿ ಸಾಲ್ಯಾನ್ ಕಲ್ಲಟ್ಟೆ, ಸುರೇಶ್ ಪಡುಬಿದ್ರಿ, ಯಶವಂತ್, ವಾಮನ್ ಸಾಲ್ಯಾನ್, ಬಾಲಕೃಷ್ಣ, ಗೀತಾ ಮೊದಲಾದವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆ ಮನೆ ಮನೆಯ ಹಬ್ಬವಾಗಲಿ

Posted On: 15-08-2024 03:09PM

ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ನಮ್ಮೆಲ್ಲರಿಗೂ ಗೊತ್ತಿರುವಂತದ್ದೇ. ಅದೇನು ಮಹಾ, ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮದೇ ಸರ್ಕಾರ ಸ್ಥಾಪನೆಯಾದ ದಿನ ಎಂದು ಮೂಗು ಮುರಿಯುವವರ ಸಂಖ್ಯೆದಿನ ಕಳೆದಂತೆ ದೊಡ್ಡದಾಗುತ್ತಿದೆ. ಅಂದು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಇಂದು ನಾವೇನು ಮಾಡುವುದು? ಎಂದು ಹಲವರು ಪ್ರಶ್ನೆ ಕೇಳುತ್ತಾರೆ.‌ ಇವರಿಗೆ ಮಾಗ೯ದಶ೯ನ ಮಾಡಿ ನಮ್ಮ ದೇಶದ ಘನತೆ ಶ್ರೇಷ್ಠತೆಯ ಬಗ್ಗೆ ಪರಿಚಯ ಮಾಡಿ ಬೇಕಾದ ಸ್ಥಿತಿ ಇದೆ.

ಶೋಕಿಯ ಆಚರಣೆ ಸಲ್ಲದು : ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧ ಮಾದರಿಯ ಒಂದು ಸಂದೇಶ ಭಾಷಣ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸ್‌ಆ್ಯಪ್‌ನಲ್ಲಿ ತೇಲಿ ಬಿಡುತ್ತಾರೆ. ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ’ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾರೆ. ಈ ಮೂಲಕ ಸ್ವಾತಂತ್ರ್ಯವನ್ನು ಆಚರಿಸುವವರು ನಮ್ಮಲ್ಲಿ ಇದ್ದಾರೆ.ಕೇವಲ ಶೋಕಿಗಾಗಿ ಆಚರಿಸಿ ನಾವೇ ದೊಡ್ದ ಸಾಧನೆ ಮಾಡಿದ್ದೇವೆ ಎಂದು ಹೇಳುವವರಲ್ಲಿ ನಮ್ಮ ಹೋರಾಟಗಾರ ಶ್ರಮ ತ್ಯಾಗ ದ ಬಗ್ಗೆ ಹೇಳಬೇಕಾಗಿದೆ. ಮತ್ತೆ ಹಲವರು ಇಂತಹ ಸಂದೇಶಗಳನ್ನು ತೆರೆದೇ ನೋಡುವುದಿಲ್ಲ. ರಜಾ ಸಿಕ್ಕಿತೆಂದು ಪ್ರವಾಸಕ್ಕೆ ಹೊರಡುತ್ತಾರೆ. ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಹಾಕುವ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇಲ್ಲವೇ ಮನೆಯಲ್ಲಿನಿದ್ದೆಗೆ ಜಾರುತ್ತಾರೆ. ಅತ್ತ ಜಿಲ್ಲಾಡಳಿತ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಜನರಿಲ್ಲದೇ ಬಣಗುಡುವಂತಾಗುತ್ತಿದೆ. ಅಧಿಕಾರಿಗಳು ಕಡ್ಡಾಯವಾಗಿ ಬರಲೇಬೇಕು ಎಂದು ಆದೇಶ ಹೊರಡಿಸುವ ಮಟ್ಟಕ್ಕೆ ಅಧಿಕಾರಿಗಳ ಬದ್ಧತೆ ಇಳಿದಿದೆ. ಮನಸೊಳಗೆ ಬೈಯ್ದುಕೊಳ್ಳುತ್ತ ಬರುವವರು ಅನೇಕರು. ಧ್ವಜಾರೋಹಣದಂದು ಸೇರುವ ಬಹುತೇಕ ಮಂದಿ ಶಾಲಾ ಮಕ್ಕಳ ಪೋಷಕರು. ಅದೂ ಅವರು ತಮ್ಮ ಮಕ್ಕಳು ಹೇಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಾರೆ, ಎನ್‌ಸಿಸಿಯಲ್ಲಿ ಹೇಗೆ ಕವಾಯತು ಮಾಡುತ್ತಾರೆ ಎಂದು ವೀಕ್ಷಿಸುವುದಕ್ಕೆ ಬಂದಿರುತ್ತಾರೆ.‌ ಕೇವಲ ಕಾಟಾಚಾರ ಆಚರಣೆ ಮಾಡದೆ, ಸಾಥ೯ಕತೆಯಿಂದ ಈ ಉತ್ಸವ ಆಚರಿಸಬೇಕು.

ಸ್ವಾತಂತ್ರ್ಯ ದಿನಾಚರಣೆ ಎಂಬುದು ಬಲು ದೊಡ್ಡ ಹಬ್ಬ, ಉತ್ಸವ : ಅಂದು ದಸರೆಯ ಪಂಜಿನ ಕವಾಯತಿಗೆ ಸೇರುವಷ್ಟು ಜನ ಸೇರಬೇಕು. ರಾಷ್ಟ್ರಗೀತೆಯನ್ನು ಒಕ್ಕೊರಲಿನಿಂದ ಹೇಳಬೇಕು. ರಾಷ್ಟ್ರಧ್ವಜಕ್ಕೆ ವಂದಿಸಬೇಕು. ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸದ ಪುಸ್ತಕಗಳನ್ನು ತೆರೆಯಬೇಕು. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ವಿವಿಧ ಮಗ್ಗುಲುಗಳನ್ನು ಪರಿಚಯ ಮಾಡಿಕೊಡಬೇಕು. ಇಡೀ ದಿನ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಅರಿಯುವ ಕೆಲಸ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆಗೆ ಉಂಟಾಗಿರುವ ಬೆದರಿಕೆಗಳನ್ನು ಕುರಿತು ಚಿಂತಿಸಬೇಕು. ಮುಖ್ಯವಾಗಿ ಯುವ ತಲೆಮಾರಿಗೆ ಅವುಗಳ ಪರಿಚಯ ಮಾಡಿಕೊಡಬೇಕು. ಪ್ಲಾಸ್ಟಿಕ್ ಬಾವುಟ ಹಿಡಿದೊ, ರಾಷ್ಟ್ರಧ್ವಜದ ಚಿತ್ರವನ್ನು ಎಲ್ಲೆಂದರಲ್ಲಿ ಬರೆದೊ, ರಾಷ್ಟ್ರಲಾಂಛನವನ್ನು ಬೇಕಾಬಿಟ್ಟಿ ಇಟ್ಟೊ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದುಕೊಂಡರೆ ಅದು ದೊಡ್ಡ ತಪ್ಪು. ನಿಜಕ್ಕೂ ಈ ರೀತಿ ಮಾಡಿದರೆ ರಾಷ್ಟ್ರಕ್ಕೆ ಅವಮಾನ ಮಾಡಿದಂತೆ. ರಾಷ್ಟ್ರಧ್ವಜಾರೋಹಣಕ್ಕೆ ಗೊತ್ತುಪಡಿಸಿದ ಜಾಗದಲ್ಲಿಯೇ ಮಾಡಬೇಕು. ಜಿಲ್ಲಾಡಳಿತ ಸಕಾ೯ರ ಅಥವಾ ಶಾಲಾ ಕಾಲೇಜುಗಳಲ್ಲಿ ಮಾಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಬೇಕು.ಈ ಮೂಲಕ ವಷ೯ದಲ್ಲಿ ಒಮ್ಮೆಯಾದರೂ ದೇಶ ಸೇವಕರ ನೆನಪು ಮಾಡುವ ಕೆಲಸ ಮಾಡಬೇಕಾಗಿದೆ.

ನಮ್ಮ ಸ್ವಾತಂತ್ರದಲ್ಲಿ ರಾಜಕೀಯ ಬೇಡ : ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಕೇಂದ್ರ ಸಕಾ೯ರ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಾಡಬೇಕು ಎಂಬ ಸಂಕಲ್ಪದಂತೆ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದೆ. ಈ ನಿಟ್ಟಿನಲ್ಲಿಯೂ ರಾಜಕೀಯ, ಮಾತುಗಳು ಕೇಳಿ ಬರುತ್ತಿವೆ.ಇದು ಸಲ್ಲದು ದೇಶಭಕ್ತಿಯ ವಿಷಯದಲ್ಲಿ ರಾಜಕೀಯ ಬರಬಾರದು. ದೇಶದ ಅಖಂಡತೆ, ದೇಶ ಭಕ್ತಿ ಯ ಕುರಿತು ಚಿಂತನ ಮಂತನ ನಡೆಯಬೇಕು ಈ ಮೂಲಕ ಸ್ವಾತಂತ್ರ್ಯದ ಕಹಳೆ ಎಲ್ಲೆಡೆ ಮೊಳಗಲಿ ಭಾರತ ಮಾತೆಗೆ ನಮನವಿರಲಿ ಸದಾ ದೇಶ ಮೊದಲು ಎನ್ನುವ ಉಸಿರಿರಲಿ ಸದಾ . ✍

ಮುಂಡಾಲ ಯುವ ವೇದಿಕೆ ಪಡುಬಿದ್ರಿ : 78 ನೇ ಸ್ವಾತಂತ್ರೋತ್ಸವ ಆಚರಣೆ

Posted On: 15-08-2024 03:03PM

ಪಡುಬಿದ್ರಿ : ಇಲ್ಲಿನ ಮುಂಡಾಲ ಯುವ ವೇದಿಕೆಯ ಸಹಯೋಗದೊಂದಿಗೆ ಪಡುಬಿದ್ರಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೇದಿಕೆಯ ಅಧ್ಯಕ್ಷ ಶಿವಪ್ಪ ಸಾಲ್ಯಾನ್ ರವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.

ಸ್ವಾತಂತ್ರ್ಯೊತ್ಸವದ ಬಗ್ಗೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಬಸವರಾಜ್ ಮತ್ತು ವೇದಿಕೆಯ ಪರವಾಗಿ ಸಂತೋಷ್ ನಂಬಿಯಾರ್ ಶುಭಾಶಯಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಸುರೇಶ್ ಪಡುಬಿದ್ರಿ, ಪ್ರಸನ್ನ ಪಡುಬಿದ್ರಿ, ಮಂಜುನಾಥ್ ಎರ್ಮಾಳ್, ಪ್ರವೀಣ್ ಎರ್ಮಾಳ್, ಶ್ರೀಧರ್ ಪಲಿಮಾರ್, ನಿತಿನ್ ಬೊಗ್ಗರಿಲಚ್ಚಿಲ್, ಬಾಲಕೃಷ್ಣ, ಸೊಮಯ್ಯ ಎರ್ಮಾಳು, ಪ್ರಶಾಂತ್ ಪಾದೆಬೆಟ್ಟು, ರಾಜೇಂದ್ರ ಎರ್ಮಾಳು, ಮಹಿಳಾ ಅಧ್ಯಕ್ಷೆ ಸವಿತಾ, ಭಾರತಿ, ಶಾಲಿನಿ, ಸುನೀತಾ, ದೀಪಾ ನಿತಿನ್ ಮೊದಲಾದವರು ಉಪಸ್ಥಿತರಿದ್ದರು.

ಪಡುಬಿದ್ರಿ : ಕಾಮತ್‌ ಪೆಟ್ರೋಲ್‌ ಪಂಪ್‌ - ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 02:54PM

ಪಡುಬಿದ್ರಿ : ಇಲ್ಲಿನ ಕಾಮತ್‌ ಎಚ್‌ಪಿ ಪೆಟ್ರೋಲ್‌ ಪಂಪ್‌ನಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣಗೈದರು.

ಸಂಸ್ಥೆಯ ಮಾಲಿಕ‌ರಾದ ಸತೀಶ್ ಎನ್ ಕಾಮತ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸೂರ್ಯ ಚೈತನ್ಯ ಸ್ಕೂಲ್ ಕುತ್ಯಾರು, ಶಿರ್ವ : ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 02:48PM

ಶಿರ್ವ : ಸೂರ್ಯ ಚೈತನ್ಯ ಸ್ಕೂಲ್ ಕುತ್ಯಾರು, ಶಿರ್ವ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಜರಗಿತು.

ಸಂಸ್ಥೆಯ ಉಪಾಧ್ಯಕ್ಷರಾದ ವಿವೇಕ ಆಚಾರ್ಯ ಧ್ವಜಾರೋಹಣಗೈದರು.

ಈ ಸಂದರ್ಭ ‌ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ,, ಮುಖ್ಯಶಿಕ್ಷಕಿ ಸಂಗೀತಾ ರಾವ್, ಶಿಕ್ಷಕ‌ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು ; ಸ್ವಾತಂತ್ರ್ಯ ದಿನಾಚರಣೆ ; ಪೊಲೀಸ್ ಚೌಕಿ ಉದ್ಘಾಟನೆ

Posted On: 15-08-2024 02:33PM

ಶಿರ್ವ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ಬಂಟಕಲ್ಲು ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಗೌರವಾಧ್ಯಕ್ಷರಾದ ಕೆ ಆರ್ ಪಾಟ್ಕರ್ ಧ್ವಜಾರೋಹಣಗೈದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ರಾಜೇಂದ್ರ ಪಾಟ್ಕರ್, ಡಾ. ಪ್ರಕಾಶ್ ಭಟ್, ಶೈಲಾಮತ ಯಸ್, ವಿನ್ಸೆಂಟ್ ಕಾಸ್ಟೆಲಿನೊ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ಸದಾಶಿವ ಸ್ವಾಗತಿಸಿದರು. ಕಾರ್ಯದರ್ಶಿ ರಾಕೇಶ್ ವಂದಿಸಿದರು. ಡೆನಿಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ನಂತರ ಇನ್ಫೋಟೆಕ್ ಟೆಕ್ನಾಲಜಿ ಶಿರ್ವ ಬಿಸಿ ರೋಡ್ ನಲ್ಲಿ ನಿರ್ಮಿಸಿದ ಪೊಲೀಸ್ ಚೌಕಿಯನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಸುಧಾಂಶು ಸಿಂಗ್ ಉಪಸ್ಥಿತರಿದ್ದರು.

ಕಾಪು ತಾಲೂಕು ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 02:25PM

ಕಾಪು : ತಾಲೂಕು ಆಡಳಿತದ ವತಿಯಿಂದ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಪು ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಚರಿಸಲಾಯಿತು.

ಕಾಪು ದಂಡಾಧಿಕಾರಿ ಡಾ. ಪ್ರತಿಭಾ ಆರ್‌ರವರು ಧ್ವಜಾರೋಹಣಗೈದು,ಮಾತನಾಡಿದ ಅವರು ತಮ್ಮ ಸಂದೇಶದಲ್ಲಿ, ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ದೇಣಿಗೆಯಾಗಿದೆ.  ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಗರಿಕರಾದ ನಮಗಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಮಹಾತ್ಮ ಗಾಂಧೀಜಿ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೋಸ್ಕರ ಸಾವಿರಾರು ಮಂದಿ ವೀರ ಸೇನಾನಿಗಳು ಪ್ರಾಣಾರ್ಪಣೆ ಮಾಡಿದ್ದಾರೆ. 200 ವರ್ಷ ಬ್ರಿಟಿಷರ ದಾಸ್ಯದಿಂದ ಮುಕ್ತವಾದ ದಿನ ಇದಾಗಿದ್ದು,  ಮಾತೃ ಭೂಮಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದವರ ಬಲಿದಾನ ನಿಷ್ಪ್ರಯೋಜಕವಾಗಬಾರದು. ನಾವು ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು. ಇದೇ ಸಂದರ್ಭ ಕಾಪು ತಾಲೂಕಿನಲ್ಲಿ ಉತ್ತಮ ಅಂಕ ಗಳಿಸಿದರವರನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಕಾಪು ತಾಲೂಕು ಪಂಚಾಯತ್ ವಿಸ್ತರಣಾಧಿಕಾರಿ ಜೇಮ್ಸ್ ಡಿಸಿಲ್ವ,‌ ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಪೋಲಿಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್ ಮಾಣೆ, ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಮರಾಠೆ ಮತ್ತು ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಗಾಂವ್ಕರ್ ಸ್ವಾಗತಿಸಿ, ವಂದಿಸಿದರು. ಕಾಲೇಜು ಬೋಧಕಿ ಸುಚಿತ್ರ ನಿರೂಪಿಸಿದರು.

ಕಳತ್ತೂರು ಫ್ರೆಂಡ್ಸ್ ಗ್ರೂಪ್ : ಆಟಿಡೊಂಜಿ‌ ದಿನ ಕಾರ್ಯಕ್ರಮ

Posted On: 15-08-2024 02:11PM

ಕಾಪು : ತುಳುನಾಡಿನ‌ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ನಾವು ಮರೆತಿರುವ ಹಿಂದಿನ‌ ತಲೆಮಾರಿನ ಜೀವನ‌ ಪದ್ಧತಿ, ಚಟುವಟಿಕೆಗಳನ್ನು ಮತ್ತೆ ನೆನಪಿಸಿ ಕೊಡುವಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ರವಿವಾರ ಜರಗಿದ ಆಟಿಡೊಂಜಿ‌ ದಿನ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಹಿರಿಯ ಗ್ರಾಮೀಣ ಮಹಿಳೆಯರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬದುಕಿನ ಹಳೇ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ ಪೂರಕವಾಗಿದೆ. ತೆರೆಮರೆಗೆ ಸರಿಯುತ್ತಿರುವ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಮುನ್ನಲೆಗೆ ತರುವ ಪ್ರಯತ್ನ ಇದಾಗಿದೆ ಎಂದರು. ಮಾಜಿ ಶಾಸಕ ಲಾಲಾಜಿ‌ ಆರ್. ಮೆಂಡನ್, ಉದ್ಯಮಿ ಶೇಖರ್ ಬಿ. ಶೆಟ್ಟಿ ಮತ್ತು ಕುಶಲ ಶೇಖರ್ ಶೆಟ್ಟಿ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮನ್ವಿ ಶೆಟ್ಟಿ, ಹರ್ಷಿತಾ ಶೆಟ್ಟಿ ಗಾರ್ ಮತ್ತು ದೀಕ್ಷಾ ಅವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಸಾಧಕರಾದ ಕಾವ್ಯ ರೋಹಿತ್ ಕುಮಾರ್, ಸಾನ್ವಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಕಾಪು ಪುರಸಭೆ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಉಮೇಶ್ ಕರ್ಕೇರ, ಅನಿಲ್ ಕುಮಾರ್, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಶಿರ್ವ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ, ಕಾಪು ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್ ಶೆಟ್ಟಿ, ಹಿರಿಯರಾದ ವಿಶ್ವನಾಥ ಪೂಜಾರಿ ಗರಡಿಮನೆ, ವಳದೂರು ನಾರಾಯಣ ಶೆಟ್ಟಿ, ಸುಂದರ್ ಶೆಟ್ಟಿ ಕಳತ್ತೂರು, ಆನಂದಿ ವಾಸು ಶೆಟ್ಟಿ, ಫ್ರೆಂಡ್ಸ್ ಗ್ರೂಫ್ ಗೌರವಾಧ್ಯಕ್ಷ ರಂಗನಾಥ ಶೆಟ್ಟಿ ಕಳತ್ತೂರು, ಅಧ್ಯಕ್ಷ ರೋಹಿತ್ ಕುಮಾರ್ ಉಪಸ್ಥಿತರಿದ್ದರು.

ಕಳತ್ತೂರು ಫ್ರೆಂಡ್ಸ್ ಗ್ರೂಫ್ ನ ಸದಸ್ಯರಾದ ಅಶ್ವಿನಿ ಸ್ವಾಗತಿಸಿ, ಸುನೀತಾ ರಂಗನಾಥ್ ಶೆಟ್ಟಿ ವಂದಿಸಿದರು. ರಚನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.