Updated News From Kaup

ಪಡುಬಿದ್ರಿ : ಬಾಲ ಗಣಪತಿಯ ಜಲಸ್ತಂಭನ

Thumbnail
Posted On: 13 Oct 2024, 10:44 AM

ಪಡುಬಿದ್ರಿ : ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಹಿಂದಿನ ಕಾಲದಲ್ಲಿ ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಬಾಲ ಗಣಪತಿಯ ಜಲಸ್ತಂಭನ ಶನಿವಾರ ಸಂಜೆ ಜರಗಿತು. ವಿಶೇಷವಾಗಿ ಗಣೇಶ ಚತುರ್ಥಿಯಿಂದ ಮೊದಲ್ಗೊಂಡು ನವರಾತ್ರಿಯಾದ್ಯಂತ ಪ್ರತಿದಿನ ಸಾಯಂಕಾಲ ಭಕ್ತರಿಂದ ಹರಕೆಯ ರೂಪವಾಗಿ ರಂಗಪೂಜೆ ನಡೆಯುತ್ತದೆ. ವಿಜಯದಶಮಿಯಂದು ಬೆಳಗ್ಗಿನಿಂದ ಪೂಜಾ ವಿಧಿವಿಧಾನಗಳು ನಡೆದು ಸಂಜೆ ಪಲ್ಲಕ್ಕಿಯ ಮೂಲಕ ಗಣಪತಿಯ ಮೃಣ್ಮಯ ಮೂರ್ತಿಯು ಶ್ರೀ ಕ್ಷೇತ್ರದಿಂದ ಪೇಟೆಗೆ ಸಾಗಿ‌ ಅಲ್ಲಿಂದ ಹಿಂತಿರುಗಿ ಕೆಳಗಿನ ಪೇಟೆಯ ರಸ್ತೆಯ ಮೂಲಕ ಬೀಚ್ ರಸ್ತೆಗೆ ಸಾಗಿ ಗುಡ್ಡೆಚ್ಚಿಗೆ ತಲುಪಿ ಅಲ್ಲಿ ಕಟ್ಟೆ ಪೂಜೆ, ತಪ್ಪಂಗಾಯಿ‌ ಸೇವೆಯ ಬಳಿಕ‌ ಮುಂದೆ ಸಾಗಿ ಸಮುದ್ರದಲ್ಲಿ ಗಣಪತಿಯ ಮೂರ್ತಿಯನ್ನು ಜಲಸ್ತಂಭನ ಮಾಡಲಾಯಿತು. ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡ, ವಿವಿಧ ವೇಷಗಳು, ಹುಲಿವೇಷ ಕುಣಿತ ತಂಡ ಪಾಲ್ಗೊಂಡಿದ್ದವು.

ಉಡುಪಿ ಉಚ್ಚಿಲ ದಸರಾ - 2024 ಸಂಪನ್ನ

Thumbnail
Posted On: 13 Oct 2024, 02:10 AM

ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2024 ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಸಹಿತ ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ‌ ಕಾಪುವಿನ ಕಡಲ ಕಿನಾರೆಯಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಸಾಗಿ ಬಂದ ದೇವಿಯರ ವಿಗ್ರಹಗಳಿಗೆ ಕಡಲ ಕಿನಾರೆಯಲ್ಲಿ ಕಾಶಿ ಗಂಗಾರತಿ ಮಾದರಿಯಲ್ಲಿ ಗಂಗಾರತಿ ಜೊತೆಗೆ ಸೇರಿದ ಸಾವಿರಾರು ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಿದ ಬಳಿಕ ಏಕಕಾಲದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ವಿಗ್ರಹಗಳನ್ನು ಸಮುದ್ರದಲ್ಲಿ ಜಲಸ್ತಂಭನ ಮಾಡಲಾಯಿತು. ಸುಡುಮದ್ದು ಪ್ರದರ್ಶನ, ರಸಮಮಜರಿ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭ ದೇವಳದ ರುವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜ ಡಾ. ಜಿ ಶಂಕರ್‌, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್‌ ಎರ್ಮಾಳು, ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಉಪಸ್ಥಿತರಿದ್ದರು. ಜಲಸ್ತಂಭನ ಸಂದರ್ಭ 250 ಜನ ಸ್ವಯಂ ಸೇವಕರು ಸಹಕರಿಸಿದ್ದರು.

3ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2024 ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ

Thumbnail
Posted On: 12 Oct 2024, 06:19 PM

ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶನಿವಾರ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2024 ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಡ್ರೋನ್ ಪುಷ್ಪ ಸಿಂಚನ : ನವದುರ್ಗೆಯರ ಸಹಿತ ಶಾರದಾ ಮೂರ್ತಿಗೆ ಮಹಾಪೂಜೆಯ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ ಸಿಂಚನ ಮಾಡಲಾಯಿತು. ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿಂದ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿ, ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡಭಾಗದ ಬೀಚ್‌ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಲಿದೆ. ಶೋಭಾಯಾತ್ರೆಯಲ್ಲಿ ಮೈಸೂರು ದಸರಾ ಅಂಬಾರಿ ಪ್ರತಿಕೃತಿಯು ಮುಂಭಾಗದಲ್ಲಿ ಸಾಗಿ, ಶ್ರೀ ಶಾರದಾದೇವಿ ಹಾಗೂ ನವದುರ್ಗೆಯರ ಟ್ಯಾಬ್ಲೊಗಳೊಂದಿಗೆ ತುಳು ನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ವಿವಿಧ ಟ್ಯಾಬ್ಲೊಗಳು, ಕಲಾ ತಂಡ ಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಾರು ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿತು. ಗಂಗಾರತಿ, ಸುಡುಮದ್ದು : ಕಾಪು ಬೀಚ್ ಬಳಿ ಬೃಹತ್‌ ಗಂಗಾರತಿ, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು. ಉಡುಪಿ ಉಚ್ಚಿಲ ದಸರಾ ರೂವಾರಿಯಾದ ನಾಡೋಜ ಡಾ.ಜಿ.ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಆನಂದ್ ಸಿ ಕುಂದರ್ ಹಾಗೂ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ಸಿಪಿಐ ಜಯಶ್ರೀ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ನೇತೃತ್ವದಲ್ಲಿ ಸೂಕ್ತ ಭದ್ರತೆಯ ಜೊತೆಗೆ ಸಾವಿರಾರು ಸ್ವಯಂ ಸೇವಕರು ಶಿಸ್ತು ಪಾಲನೆಯಲ್ಲಿ ಸಹಕರಿಸಿದ್ದರು.

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ಅವಹೇಳನ - ಕಠಿಣ ಕ್ರಮ ಕೈಗೊಳ್ಳಲು ಮನವಿ‌

Thumbnail
Posted On: 12 Oct 2024, 10:01 AM

ಉಡುಪಿ : ಕೇಂದ್ರ ಸಂಪುಟ ಸಚಿವರಾದ ಎಚ್ ಡಿ ಕುಮಾರಸ್ವಾಮಿಯವರ ವಿರುದ್ಧ ಅವಹೇಳನಕಾರಿ ಹಾಗೂ ಅತ್ಯಂತ ಕೀಳು ಮಟ್ಟದ ಪದ ಬಳಸಿರುವ ಲೋಕಾಯುಕ್ತ ಎಡಿಜಿಪಿ ಎಂ ಚಂದ್ರಶೇಖರ್ ರವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಮುಖೇನ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಮತ್ತು ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನು ಒಳಗೊಂಡ ತಂಡ ಅಪರ ಜಿಲ್ಲಾಧಿಕಾರಿ ಮಮತಾ ದೇವಿಯವರಿಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ವಾಸುದೇವರಾವ್, ರಾಜ್ಯ ಕಾರ್ಯದರ್ಶಿ ಸುಧಾಕರ ಶೆಟ್ಟಿ ಹೆಜಮಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ಜಯರಾಮ ಆಚಾರ್ಯ, ರಮೇಶ್ ಕುಂದಾಪುರ, ಕಾರ್ಕಳ ಬ್ಲಾಕ್ ಅಧ್ಯಕ್ಷರು ಶ್ರೀಕಾಂತ್ ಹೆಬ್ರಿ, ಕಾಪು ಬ್ಲಾಕ್ ಅಧ್ಯಕ್ಷ ದೇವರಾಜ್ ತೊಟ್ಟಂ, ವೆಂಕಟೇಶ್ ಎಂ ಟಿ, ಬಿ ಕೆ ಮೊಹಮ್ಮದ್, ಅಶ್ರಫ್ ಪಡುಬಿದ್ರಿ, ರಂಗ ಕೋಟ್ಯಾನ್, ಇಸ್ಮಾಯಿಲ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಅ.14 : ಮುದರಂಗಡಿಯಲ್ಲಿ ವೈಜ್ಞಾನಿಕ ಅಡಿಕೆ ಕೃಷಿ ಮಾಹಿತಿ ಕಾರ್ಯಕ್ರಮ

Thumbnail
Posted On: 12 Oct 2024, 09:51 AM

ಮುದರಂಗಡಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ವೈಜ್ಞಾನಿಕ ಅಡಿಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮ ಅ.14ರಂದು ಸೋಮವಾರ ಸಂಜೆ ಗಂಟೆ 3:30 ಕ್ಕೆ ಮುದರಂಗಡಿ ಮಾಣಿಯೂರು ರಾಜಾಪುರ ಸಾರಸ್ವತ ಸಮುದಾಯ ಭವನದಲ್ಲಿ ನಡೆಯಲಿದೆ. ನಿವೃತ್ತ ಅಧ್ಯಾಪಕ ವೈ ಉಪೇಂದ್ರ ಪ್ರಭು ಉದ್ಘಾಟಿಸಲಿದ್ದಾರೆ. ಮುದರಂಗಡಿ ಹಾಲು ಉತ್ಪಾದಕರ ಸ. ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಶಿಕುಮಾರ್ ಶೆಟ್ಟಿ ಸಾಂತೂರು ಮತ್ತು ಮಾಣಿಯೂರು ಕೃಷ್ಣರಾಜ ಹೆಗ್ಡೆ ಭಾಗವಹಿಸಲಿದ್ದಾರೆ. ಮಾಹಿತಿದಾರರಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮತ್ತು ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ. ಕಡಿಮೆ ಖರ್ಚು, ಕಡಿಮೆ ಶ್ರಮ, ಕಡಿಮೆ ನೀರು-ಗೊಬ್ಬರ ಬಳಕೆಯಿಂದ ಲಾಭದಾಯಕವಾಗಿ ಅಡಿಕೆ ಕೃಷಿ ಮಾಡುವ ವಿಧಾನ, ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳನ್ನು ತಿಳಿಸಿಕೊಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತ ಬಾಂಧವರು ಭಾಗವಹಿಸುವಂತೆ ಕಾರ್ಯಕ್ರಮ ಸಂಘಟಕರಾದ ಮುರಳೀಧರ ಪ್ರಭು, ಶಂಕರ ಕೇಂಜ ಮತ್ತು ಜೋನ್ ಅಮ್ಮಣ್ಣ ಮುದರಂಗಡಿ ಮತ್ತು ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂತಾವರ ಗ್ರಾಮ ಪಂಚಾಯತ್ : ಖೋ ಖೋ ಪಂದ್ಯಾಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

Thumbnail
Posted On: 11 Oct 2024, 04:19 PM

ಕಾರ್ಕಳ : ತಾಲೂಕಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ ಇಲ್ಲಿಯ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟದಲ್ಲಿ ಜಯ ಗಳಿಸಿದ ವಿದ್ಯಾರ್ಥಿಗಳನ್ನು ಕಾಂತಾವರ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಬಾರಾಡಿ, ಉಪಾಧ್ಯಕ್ಷ ಪ್ರಭಾಕರ್ ಕುಲಾಲ್ ಬೇಲಾಡಿ, ಪಂಚಾಯತ್ ಸದಸ್ಯರಾದ ಅಮಿತಾ ಕೆ ಪೂಜಾರಿ, ಸುರೇಖಾ ಪೂಜಾರಿ, ವನಿತಾ ನಾಯ್ಕ್, ನಳಿನಿ ಶೆಟ್ಟಿ ಬೇಲಾಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಜಯಕರ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೀಶ್ ಶೆಟ್ಟಿ, ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ - ಕನ್ನಡ ವಿಡಿಯೋ ಅಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ

Thumbnail
Posted On: 11 Oct 2024, 09:49 AM

ಪಡುಬಿದ್ರಿ : ಇಂದಿನ ಯುವ ಜನತೆ ಸಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಈ ಸಂದರ್ಭದಲ್ಲಿ ಬಪ್ಪನಾಡು ಶ್ರೀ ದುರ್ಗ ಮಾತೆಯ ಪುರಾತನ ಕಥೆಯುಳ್ಳ ಇತಿಹಾಸ ನೆನಪಿಸುವಂತಹ ಭಕ್ತಿ ಪ್ರಧಾನ ವೀಡಿಯೋ ಅಲ್ಬಮ್ ಅನ್ನು ನಿರ್ಮಿಸಿದ್ದು ಶ್ಲಾಘನೀಯ. ಅಲ್ಬಮ್ ಸಾಂಗ್ ಅದ್ದೂರಿ ಯಶಸ್ಸಿಯಾಗಿ ನಡೆಯಲಿ, ಮುಂದೆ ಈ ತಂಡದಿಂದ ಚಲನಚಿತ್ರ ನಿರ್ಮಾಣಗೊಳ್ಳುವಂತಾಗಲಿ ಎಂದು ಬಂಟರ ಸಂಘದ ಮಾಜಿ ಅಧ್ಯಕ್ಷರಾದ‌ ನವೀನಚಂದ್ರ ಜೆ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಓಂಕಾರ ಕಲಾ ಸಂಗಮದಲ್ಲಿ ನಡೆದ ಎಸ್.ಜಿ.ಎಸ್ ಕ್ರಿಯೇಷನ್ಸ್ ಪ್ರಸುತ್ತ ಪಡಿಸಿದ "ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ" ಕನ್ನಡ ವಿಡಿಯೋ ಅಲ್ಬಮ್ ಸಾಂಗ್ ನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಸ್ಥಳಗಳ ಇತಿಹಾಸವನ್ನು ಯುವ ಜನತೆಗೆ ತಿಳಿಸುವಂತಹ ಕಾರ್ಯ ನಡೆಯಲಿ, ವೀಡಿಯೋ ಅಲ್ಬಮ್ ಸಾಂಗ್ ಯಶಸ್ಸು ಕಾಣಲಿ ಎಂದು ಮೀನುಗಾರರ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ಅಮೀನ್ ಶುಭ ಹಾರೃೆಸಿದರು. ಈ ಸಂದರ್ಭದಲ್ಲಿ ಪೆರ್ಡೂರು ಗ್ರಾ.ಪಂ.ಸದಸ್ಯ ನವೀನ್ ಸಾಲ್ಯಾನ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಉಡುಪಿ ಜಿಲ್ಲಾ ಅಧ್ಯಕ್ಷ ರಚನ್ ಸಾಲ್ಯಾನ್, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಯಶೋಧ ಪಡುಬಿದ್ರಿ, ನಾಯಕಿ ನಟಿ ಸುಪ್ರೀತಾ ಪೂಜಾರಿ ಪಾಂಗಾಳ, ನಿರ್ಮಾಪಕ ಸಂತೋಷ್ ಪಡುಬಿದ್ರಿ, ನಮೃತಾ ಮಹೇಶ್, ಸಂತೋಷ್ ನಂಬಿಯಾರ್, ಪಡುಬಿದ್ರಿ ರೋಟರಿ ಯ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಕಾರ್ಯದರ್ಶಿ ಹೇಮಲತಾ ಸುವರ್ಣ ಉಪಸ್ಥಿತರಿದ್ದರು.

ಭಾರತದ ದಂತಕಥೆ ರತನ್‌: ರತನ್‌ ಕುರಿತ ಗೊತ್ತಿರಬೇಕಾದ ಸಂಗತಿಗಳು

Thumbnail
Posted On: 11 Oct 2024, 09:38 AM

ರತನ್‌ ಟಾಟಾ ಅವರಿಗೆ ನಾಯಿಗಳ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ 2018 ರಲ್ಲಿ ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು. ಈ ರೀತಿಯ ಅದ್ಬುತ ವ್ಯಕ್ತಿತ್ವ ಇರಲು ಅಸಾಧ್ಯ. ಇಡೀ ಭಾರತ ಪ್ರೀತಿಸುವ ಗೌರವಾನ್ವಿತ ವ್ಯಕ್ತಿ ಹಾಗೂ ಉದ್ಯಮ ಲೋಕದ ಧ್ರುವತಾರೆ ರತನ್‌ ಟಾಟಾ ಅವರ ನಿಧನಕ್ಕೆ ದೇಶವೇ ಕಣ್ಣೀರಿಡುತ್ತಿದೆ. ರತನ್ ಟಾಟಾ ಕೇವಲ ಕೈಗಾರಿಕೋದ್ಯಮಿಯಾಗಿರಲಿಲ್ಲ. ಅವರು ಟಾಟಾ ಗ್ರೂಪ್‌ಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ವ್ಯಕ್ತಿ. ಅಷ್ಟೇ ಆಗಿದ್ದರೆ, ಬಹುಶಃ ಇಡೀ ದೇಶ ಹೀಗೆ ಅವರಿಗಾಗಿ ಮಿಡಿಯುತ್ತಿರಲಿಲ್ಲ. ದೇಶದ ಬಡವರು, ಮಧ್ಯಮವರ್ಗದ ಬದುಕಿನಲ್ಲಿ ಸುಧಾರಣೆ ತರುವ, ದೇಶದ ಕಲೆ, ಸಾಹಿತ್ಯ, ಪರಿಸರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅವರು ತೋರಿದ ಕಾಳಜಿ ಮತ್ತು ಆಸ್ಥೆಗಳು ಅವರನ್ನು ದೇಶದ ಉಳಿದೆಲ್ಲಾ ಉದ್ಯಮಿಗಳಿಗಿಂತ ಮೇಲುಸ್ತರದಲ್ಲಿ ಇರಿಸಿವೆ. ಹಣ ಮತ್ತು ವ್ಯವಹಾರಕ್ಕಷ್ಟೇ ಸೀಮಿತವಾಗಿ ಉದ್ಯಮ ಸಾಮ್ರಾಜ್ಯ ಕಟ್ಟುವುದಷ್ಟನ್ನೇ ಬದುಕಿನ ಸರ್ವಸ್ವ ಎಂದು ಎಣಿಸದೆ, ಹಾಗೇ ದೇಶವನ್ನು ಕಟ್ಟುವ, ದೇಶದ ಬದುಕು ಕಟ್ಟುವ ಕಾಳಜಿ ತೋರಿದ್ದಕ್ಕಾಗಿ ಅವರ ಅಗಲಿಕೆಯ ಈ ಹೊತ್ತು ದೇಶ ತಮ್ಮದೇ ಮನೆ ಮಗನನ್ನು ಕಳೆದುಕೊಂಡಂತೆ ಮಿಡಿಯುತ್ತಿದೆ. ರತನ್‌ ಬಾಲ್ಯ ಮತ್ತು ಶಿಕ್ಷಣ : ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಮುಂಬೈನಲ್ಲಿ ಜನಿಸಿದರು. ರತನ್ ಟಾಟಾ ಅವರು ಟಾಟಾ ಗ್ರೂಪ್ ಸಂಸ್ಥಾಪಕ ಜಮ್‌ ಶೆಡ್‌ಜೀ ಟಾಟಾ ಅವರ ಕುಟುಂಬಕ್ಕೆ ಸೇರಿದ್ದಾರೆ. ಅವರ ತಾಯಿ ಸುನಿ ಟಾಟಾ, ಮತ್ತು ತಂದೆ ನಾವುಲ್ ಟಾಟಾ. ರತನ್ ಟಾಟಾ ಅವರ ಪೋಷಕರು ಅವರು 10 ವರ್ಷದವರಾಗಿದ್ದಾಗ; 1948 ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಅವರನ್ನು ಅವರ ಅಜ್ಜಿ ನವಾಜ್ಬಾಯಿ ಟಾಟಾ ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಮುಂಬೈ ಮತ್ತು ಶಿಮ್ಲಾದಲ್ಲಿ ಪೂರೈಸಿದರು. 1955 ರಲ್ಲಿ ನ್ಯೂಯಾರ್ಕ್‌ ಶಾಲೆಯಿಂದ ಪದವಿ ಪಡೆದರು. ಬಳಿಕ ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ವ್ಯಾಪಾರ ನಿರ್ವಹಣಾ ಪದವಿಯನ್ನು ಪಡೆದುಕೊಂಡಿದ್ದಾರೆ. ಮದುವೆಯಾಗಲಿಲ್ಲ ರತನ್‌ ಟಾಟಾ : ರತನ್‌ ಟಾಟಾ ತಮ್ಮ ಜೀನವಪೂರ್ತಿ ಒಂಟಿಯಾಗಿಯೇ ಉಳಿದ್ದರು. ಎಂದೂ ಮದುವೆಯಾಗಿಲ್ಲ. ಆದರೆ ನಾಲ್ಕಾರು ಬಾರಿ ಪ್ರೀತಿಯಲ್ಲಿ ಬಿದ್ದಿದ್ದ ರತನ್‌ ಟಾಟಾಗೆ ಮದುವೆಯಾಗುವ ಅವಕಾಶಗಳು ಕೂಡ ಇತ್ತು. ಸಂದರ್ಶನವೊಂದರಲ್ಲಿ ರತನ್‌ ಟಾಟಾ, ತಮ್ಮ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅವರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಅವರಿಬ್ಬರ ನಡುವಿನ ಪ್ರೀತಿ ತುಂಬಾ ಆಳವಾಗಿತ್ತು ಮತ್ತು ಇಬ್ಬರೂ ಪರಸ್ಪರ ಮದುವೆಯಾಗಲು ಸಹ ಯೋಚಿಸಿದ್ದರು. ಇದೇ ವೇಳೆ ರತನ್ ಟಾಟಾ ಅವರ ಅಜ್ಜಿಯ ಆರೋಗ್ಯ ಹದಗೆಟ್ಟಾಗ, ಅವರು ಭಾರತಕ್ಕೆ ಮರಳಿದರು. ತನ್ನ ಗೆಳತಿ ಕೂಡ ಶೀಘ್ರದಲ್ಲೇ ಭಾರತಕ್ಕೆ ಬರುತ್ತಾಳೆ ಮತ್ತು ತಾವಿಬ್ಬರೂ ಇಲ್ಲೇ ಮದುವೆಯಾಗಬಹುದು ಎಂದು ಅವರು ಭಾವಿಸಿದ್ದರು. ದುರಾದೃಷ್ಟವಶಾತ್ ಭಾರತ ಮತ್ತು ಚೀನಾ ನಡುವೆ 1962 ರ ಯುದ್ಧ ಪ್ರಾರಂಭವಾಗಿತ್ತು ಮತ್ತು ಅವರ ಗೆಳತಿಯ ಕುಟುಂಬವು ಭಾರತಕ್ಕೆ ಬರಲು ನಿರಾಕರಿಸಿತು. ಹೀಗಾಗಿ ಅವರ ಪ್ರೇಮಕಥೆ ಅಲ್ಲಿಗೇ ಅಂತ್ಯವಾಯಿತು ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸಂಸಾರಿಯಾಗದೆ, ಸಂಸಾರದ ದುರಿತಗಳನ್ನು ನೋಡಿ ಅನೇಕ ಯೋಜನೆಗಳನ್ನು ತಮ್ಮ ಉದ್ಯೋಗಿಗಳಿಗೆ ನೀಡಿದ್ದರು. ಭಾರತದಲ್ಲಿ ಮೊದಲ ಬಾರಿಗೆ ಟಾಟಾ ಸಂಸ್ಥೆ ಪಿ.ಎಫ್ ಯೋಜನೆಯನ್ನು ಜಾರಿಗೆ ತಂದಿತ್ತು.ಅದೇ ರೀತಿ ನೌಕರರಿಗೆ ಆರೋಗ್ಯವಿಮೆಯನ್ನು ಮೊದಲ ಬಾರಿಗೆ ನೀಡಿತ್ತು.( ಜೆoಶೇಡ್ ಜೀ ಟಾಟಾ ಅವಧಿ) ಕಾಣದಂತೆ ಕೊಡುತ್ತಿದ್ದ ಕೊಡುಗೈ ದಾನಿ : ರತನ್‌ ಟಾಟಾ ಯಾವುದೇ ಮಾಧ್ಯಮಗಳ ಗಮನಕ್ಕೆ ಬಾರದೆ, ಶತಕೋಟಿ ಡಾಲರ್‌ಗಳನ್ನು ಜನ ಸಮುದಾಯಗಳ ಒಳಿತಿನ ಉದ್ದೇಶಗಳಿಗಾಗಿ ದಾನ ಮಾಡಿದ್ದಾರೆ. 300 ಶತಕೋಟಿ ಮೌಲ್ಯದ ವಹಿವಾಟು ಸಾಮ್ರಾಜ್ಯದ ಚುಕ್ಕಾಣಿ ವಹಿಸಿದ್ದರೂ, ಅವರು ಸ್ವತಃ ಬಿಲಿಯನೇರ್ ಆಗಿರಲಿಲ್ಲ. ಅವರು ತಮ್ಮ ಹಣವನ್ನು ತಮಗೆ ಖರ್ಚು ಮಾಡಿಕೊಳ್ಳುವ ಬದಲು ಯೋಗ್ಯ ಸಾಮಾಜಿಕ ಯೋಜನೆಗಳಿಗೆ ದೇಣಿಗೆ ನೀಡಲು ಆದ್ಯತೆ ನೀಡುತ್ತಿದ್ದರು. ಟಾಟಾ ಕಂಪೆನಿಯ ಆಸ್ತಿ ಪಾಕಿಸ್ತಾನದ ಜಿಡಿಪಿಗಿಂತ ಬಹಳ ಹೆಚ್ಚು ಆದರೆ ರತನ್‌ ಟಾಟಾ ಶ್ರೀಮಂತರ ಪಟ್ಟಿಯಲ್ಲಿ ಯಾವತ್ತೂ ಸ್ಥಾನ ಪಡೆದಿಲ್ಲ ಯಾಕೆಂದರೆ ಅವರ ದಾನದ ಪ್ರಭಾವ' ಪೈಲಟ್ ಆಗಿಯೂ ತರಬೇತಿ ಪಡೆದಿದ್ದ ಟಾಟಾ : ರತನ್‌ ಟಾಟಾ ಅವರು ಪೈಲಟ್‌ ಆಗಿಯೂ ತರಬೇತಿ ಪಡೆದಿದ್ದರು. ಅವರು ತಮ್ಮ ಸಹಪಾಠಿಗಳೊಂದಿಗೆ ಒಮ್ಮೆ ವಿಮಾನದಲ್ಲಿ ಚಲಿಸುತ್ತಿದ್ದಾಗ ಆ ವಿಮಾನದ ಎಂಜಿನ್‌ ವಿಫಲವಾಗಿತ್ತು. ಆಗ ರತನ್‌ ಟಾಟಾ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಅವರನ್ನು ರಕ್ಷಿಸಿದ್ದರು. 2007 ರಲ್ಲಿ F-16 ಫಾಲ್ಕನ್ ಫೈಟರ್ ಜೆಟ್ ಅನ್ನು ಹಾರಿಸಿದ ಮೊದಲ ಭಾರತೀಯರಾಗಿದ್ದಾರೆ ರತನ್‌ ಟಾಟಾ. ನಾಯಿಗಳ ಆಪತ್ಬಾಂಧವ ರತನ್‌ ಟಾಟಾ : ರತನ್‌ ಟಾಟಾ ಅವರಿಗೆ ನಾಯಿಗಳ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ 2018 ರಲ್ಲಿ ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಅಂದು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು. 2018ರ ಫೆಬ್ರವರಿ 6ರಂದು ಬ್ರಿಟನ್​ನ ರಾಜಮನೆತನ ಬಕಿಂಗ್​ಹ್ಯಾಮ್ ಅರಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬ್ರಿಟನ್ ರಾಯಲ್ ಪ್ರಿನ್ಸ್​​ ಚಾರ್ಲ್ಸ್​ ಅವರು ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಲೋಕೋಪಕಾರಿ ಕೆಲಸಕ್ಕೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಅವರ ಸಾಕು ನಾಯಿ. ಅವರ ಒಂದು ಸಾಕು ನಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು, ಆ ಕಾರಣಕ್ಕೆ ತಮ್ಮ ಪ್ರೀತಿಯ ನಾಯಿಗೆ ಕಾಯಿಲೆಯಿಂದ ಬಳಲುತ್ತಿದೆ. ಅದನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂದು ಹೇಳಿ ಈ ಕಾರ್ಯಕ್ರಮಕ್ಕೆ ರತನ್‌ ಟಾಟಾ ಹಾಜರಾಗಿಲ್ಲ. ರತನ್ ಟಾಟಾ ಬಾರದಿರುವುದರ ಹಿಂದಿನ ಕಾರಣ ಕೇಳಿ ಪ್ರಿನ್ಸ್ ಚಾರ್ಲ್ಸ್ ಅವರು, ಮನುಷ್ಯನೆಂದರೆ ಹೀಗಿರಬೇಕು, ರತನ್ ಟಾಟಾ ಅದ್ಭುತ ವ್ಯಕ್ತಿ ಎಂದು ಹಾಡಿ ಹೊಗಳಿದ್ದರು. ಇದಲ್ಲದೆ ರತನ್‌ ಟಾಟಾ ಅವರು ಅನೇಕ ಬೀದಿ ನಾಯಿಗಳಿಗೆ ಆಶ್ರಯ ನೀಡಿದ್ದಾರೆ. ಮುಂಬೈನಲ್ಲಿರುವ ಟಾಟಾ ಮುಖ್ಯ ಕಚೇರಿ ಬಾಂಬೆ ಹೌಸ್‌ಗೆ ಭೇಟಿ ನೀಡಿದ ಬಗ್ಗೆ ಪತ್ರಕರ್ತರೊಬ್ಬರು ಹೀಗೆ ಬರೆದಿದ್ದರು. ಸುಮಾರು ಹತ್ತು ಬೀದಿ ನಾಯಿಗಳಿಗೆ ಆಶ್ರಯ ನೀಡಲಾಗಿದ್ದ ಮೆಜ್ಜನೈನ್ ಮಹಡಿಯಲ್ಲಿರುವ ದೊಡ್ಡ ಹವಾನಿಯಂತ್ರಿತ ಕೋಣೆಗೆ ನನ್ನನ್ನು ಕರೆದೊಯ್ದರು. ಅಲ್ಲಿ ಆ ನಾಯಿಗಳಿಗೆ ಸ್ನಾನದ ಸೌಲಭ್ಯ ಹಾಗೂ ಅವುಗಳನ್ನು ನೋಡಿಕೊಳ್ಳಲು ಸಿಬ್ಬಂದಿ ಕೂಡ ಇದ್ದರು ಎಂದು ಅವರು ಬರೆದಿದ್ದರು. ಬಾಂಬೆ ಹೌಸ್ ಮತ್ತು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಸೇರಿದಂತೆ ಎಲ್ಲಾ ಟಾಟಾ ಕಚೇರಿಗಳಲ್ಲಿ ಎಲ್ಲಾ ಬೀದಿ ನಾಯಿಗಳಿಗೆ ಆಶ್ರಯ ಮತ್ತು ಆರೈಕೆಯನ್ನು ಒದಗಿಸುವುದು ಮತ್ತು ಅವುಗಳನ್ನು ಎಂದಿಗೂ ಓಡಿಸಬಾರದು ಎಂಬ ನಿಯಮ ಕೂಡ ಬಹಳಷ್ಟು ಪ್ರಸಿದ್ದಿಯಲ್ಲಿದೆ. ಕಲೆ ಮತ್ತು ಆಟೋಮೊಬೈಲ್ ಉತ್ಸಾಹಿ : ರತನ್‌ ಟಾಟಾ ಅವರು ಕಲೆಯ ಉತ್ಸಾಹಿ ಸಂಗ್ರಾಹಕರಾಗಿದ್ದರು. ಅವರು ವರ್ಣಚಿತ್ರಗಳು, ಛಾಯಾಚಿತ್ರಗಳು ಮತ್ತು ಶಿಲ್ಪಗಳ ಸಂಗ್ರಹಕರಾಗಿದ್ದರು. ಎಮ್ ಎಫ್ ಹುಸೇನ್, ಅಂಜಲಿ ಇಳಾ ಮೆನನ್, ಜಹಾಂಗೀರ್ ಸಬವಾಲಾ ಮತ್ತು ಎಸ್‌ಎಚ್ ರಝಾ ಅವರು ರತನ್‌ ಅವರ ನೆಚ್ಚಿನ ಕಲಾವಿದರಾಗಿದ್ದರು. ಟಾಟಾ ಅವರಿಗೆ ಕಾರು ಮತ್ತು ಮೋಟಾರ್ ಸೈಕಲ್‌ಗಳ ಬಗ್ಗೆ ಒಲವು ಕೂಡ ಇತ್ತು. ರಾಯಲ್ ಎನ್‌ಫೀಲ್ಡ್ ಬುಲೆಟ್, ಮರ್ಸಿಡಿಸ್-ಬೆನ್ಜ್ 500 ಎಸ್‌ಎಲ್ ಮತ್ತು ಫೆರಾರಿ ಕ್ಯಾಲಿಫೋರ್ನಿಯಾದಂತಹ ವಿಂಟೇಜ್ ಮತ್ತು ಆಧುನಿಕ ವಾಹನಗಳ ಸಂಗ್ರಹ ಟಾಟಾ ಅವರ ಬಳಿಯಿತ್ತು. 26/11 ದಾಳಿಯ ವೇಳೆ ಉದ್ಯೋಗಿಗಳ ಕಾಳಜಿ : ಮುಂಬೈನಲ್ಲಿ 26/11 ರ ಭಯೋತ್ಪಾದಕ ದಾಳಿಯ ಸಮಯದಲ್ಲಿ ತಾಜ್ ಹೋಟೆಲ್‌ನಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದಾಗ 70 ವರ್ಷ ವಯಸ್ಸಿನ ಮತ್ತು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ಟಾಟಾ ಅವರು ಇಡೀ ದಿನ ಹೋಟೆಲ್‌ನ ಹೊರಗೆ ನಿಂತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವುದನ್ನು ವೀಕ್ಷಿಸುತ್ತಿದ್ದರು. ತಾಜ್ ಹೋಟೆಲ್‌ನಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬ ಸಂತ್ರಸ್ತರ ಮನೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಅವರ ಕುಟುಂಬಗಳಿಗೆ ಅಗತ್ಯವಿರುವ ಸಹಾಯ ತಲುಪಿರುವುದನ್ನು ಖಚಿತಪಡಿಸಿಕೊಂಡಿದ್ದರು. ಘಟನೆ ನಡೆದ ಒಂದು ತಿಂಗಳೊಳಗೆ, ಡಿಸೆಂಬರ್ 2008 ರಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಮಾನವೀಯ ಬೆಂಬಲವನ್ನು ಒದಗಿಸಲು ಟಾಟಾ ಗ್ರೂಪ್ ತಾಜ್ ಸಾರ್ವಜನಿಕ ಸೇವಾ ಕಲ್ಯಾಣ ಟ್ರಸ್ಟ್ ಅನ್ನು ಸ್ಥಾಪಿಸಿತು. ರತನ್ ಟಾಟಾ ರ ಜೀವನ ದೇಶ ಸೇವೆಗೆ ಮುಡಿಪಾಗಿತ್ತು. ಈ ಹಿಂದೆ ಬ್ರಿಟಿಷರು ತಮ್ಮ ಐಶಾರಾಮಿ ಹೋಟೆಲ್ ನಲ್ಲಿ ಭಾರತೀಯರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲಿ ಎಂಬ ಭಿತ್ತಿ ಪತ್ರ ಅಂಟಿಸಿದ್ದರು.ಇದನ್ನು ಕಂಡ ಟಾಟಾ ರವರು ವಿಶ್ವವೇ ನೋಡುವಂತಹ ಹೋಟೆಲ್ ಕಟ್ಟಿದ್ದರು.ಇಂದು ಅದೇ ಬ್ರಿಟನ್ ನಲ್ಲಿ ಭಾರತೀಯರಿಲ್ಲದೆ ಸಕಾ೯ರ ನಡೆಯದು ಎಂಬತ್ತಿದೆ ಇದಕ್ಕೆ ಹೇಳುವುದು ಕಾಲಚಕ್ರ' ಈ ಅಪೂವ೯ ಮಾಣಿಕ್ಯ ರತ್ನ ನಮ್ಮನ್ನು ಬಿಟ್ಟು ಅಗಲಿದೆಯಾದರೂ ಪ್ರತಿಯೊಬ್ಬ ಭಾರತೀಯ ರ ಮನದಲ್ಲಿ ಗಟ್ಟಿಯಾಗಿದ್ದಾರೆ. ಟಾಟಾ ಗೆ ಟಾಟಾನೇ ಸಾಟಿ. ✍ ರಾಘವೇಂದ್ರ ಪ್ರಭು, ಕವಾ೯ಲು ಬರಹಗಾರ, ಕಸಾಪ ಉಡುಪಿ ತಾಲೂಕು ಸಂ.ಕಾಯ೯ದಶಿ೯

ಸಾಂತೂರು, ಪಿಲಾರು ಭಾಗದಲ್ಲಿ ಕಾಡುಕೋಣಗಳ ಹಾವಳಿ

Thumbnail
Posted On: 11 Oct 2024, 09:23 AM

ಮುಂದರಂಗಡಿ : ಸಾಂತೂರು ಹಾಗೂ ಪಿಲಾರು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಗುರುವಾರ ಬೈಕ್ ಸವಾರ ರವಿ ಆಚಾರ್ಯ ಸಾಂತೂರು ಅನ್ನುವವರಿಗೆ ಕಾಡುಕೋಣ ಡಿಕ್ಕಿ ಹೊಡೆದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿ ಇರುವರು. ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ತುರ್ತು ಸ್ಪಂದಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಕಟಪಾಡಿಯಲ್ಲಿ "ಬಲೆ ತುಲು ಲಿಪಿ ಕಲ್ಪುಗ” ತುಳು ಭಾಷಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

Thumbnail
Posted On: 10 Oct 2024, 10:31 AM

ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಹಾಗೂ ಜೈ ತುಲುನಾಡ್(ರಿ.) ವತಿಯಿಂದ “ಬಲೆ ತುಲು ಲಿಪಿ ಕಲ್ಪುಗ” ತುಳು ಭಾಷಾ ತರಬೇತಿಯ ಕಾರ್ಯಕ್ರಮಕ್ಕೆ ತ್ರಿಶಾ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ನಾರಾಯಣ್ ರಾವ್ ಮಾತನಾಡಿ ಇಂದು ಭಾಷೆಯನ್ನು ಕಲಿಯಲು ಹಲವಾರು ಆಧುನಿಕ ತಂತ್ರಜ್ಞಾನಗಳಿವೆ. ಆದರೆ ನಿಜವಾಗಿಯೂ ಭಾಷೆ ಕಲಿಯುವುದೆಂದರೆ ಸಂಸ್ಕೃತಿ, ಭಾಷೆಯ ಇತಿಹಾಸ, ಪರಂಪರೆಯನ್ನು ಕೂಡ ಕಲಿಯುದಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟಕ ರಚನೆಕಾರ, ನಟ, ನಿರ್ದೇಶಕ, ರವಿಕುಮಾರ್ ಕಡೆಕಾರ್ ಮಾತನಾಡಿ, ನಾವು ಎಲ್ಲಾ ಭಾಷೆಗಳನ್ನು ಕಲಿಯಬೇಕು. ಜೊತೆಗೆ ಗೌರವಿಸಬೇಕು. ಆದರೆ ನಮಗೆ ಜನ್ಮ ಕೊಟ್ಟಂತಹ ಈ ತುಳುನಾಡಿನ ಭಾಷೆಯ ಅಭಿಮಾನವನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಾವೆಲ್ಲರೂ ಸೇರಿ ನಮ್ಮ ತಾಯಿನಾಡಿನ ಭಾಷೆಯನ್ನು ಉಳಿಸಿಕೊಳ್ಳೋಣ ಆಗ ಮಾತ್ರ ತುಳು ಭಾಷೆ ರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಜೈ ತುಲುನಾಡ್ (ರಿ.) ಸಂಘದ ಅಧ್ಯಕ್ಷರಾದ ಉದಯ ಪುಂಜಾರವರು ಮಾತನಾಡಿ, ಈಗಿನಿಂದಲೇ ತುಳು ಭಾಷೆ ಲಿಪಿಯನ್ನು ಕಲಿತರೆ ಅದನ್ನು ಮುಂದಿನ ಜನಾಂಗಕ್ಕೂ ಕಲಿಸಬಹುದು. ಆಗ ಮಾತ್ರ ಎಲ್ಲರಿಗೂ ತುಳು ಭಾಷೆ, ತುಳು ಲಿಪಿಯ ಅರಿವು ಮೂಡಲು ಸಾಧ್ಯವಾಗುವುದರೊಂದಿಗೆ ನಮ್ಮ ಭಾಷೆಯನ್ನು ಕಲಿತ ಹೆಮ್ಮೆಯೂ ನಮಗೆ ಇರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಫ್ನೇಶ್ ಶೆಣೈ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೈ ತುಲುನಾಡು(ರಿ.)ಸಂಘದ ತುಳು ಲಿಪಿ ಬೋಧಕರಾದ ಸಂತೋಷ್.ಎನ್.ಎಸ್ ಕಟಪಾಡಿ ಹಾಗೂ ಸುಶೀಲ ಜಯಕರ್ ಕೊಡವೂರ್, ಸ್ಥಾಪಕ ಸದಸ್ಯರಾದ ಶರತ್ ಕೊಡವೂರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಾಗರ್ ಬನ್ನಂಜೆ, ವಿಶಾಂತ್ ಉದ್ಯಾವರ, ಸಂಘದ ಸದಸ್ಯರಾದ ಅಕ್ಷತಾ ಕುಲಾಲ್, ಸುಪ್ರಿಯಾ ಕೊಡವೂರ್,ದೀಪಕ್ ಉದ್ಯಾವರ ,ಸಂತೋಷ್ ನಿಟ್ಟೆ ಹಾಗೂ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ರಾಮದಾಸ್ ನಾಯಕ್ ಮತ್ತು ಶಿಕ್ಷಕ ವೃಂದದವರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತ್ರಿಶಾ ವಿದ್ಯಾ ಕಾಲೇಜ್ ನ ಸಂಸ್ಕೃತ ಪ್ರಾಧ್ಯಾಪಕ ರಾದ ವಾಗೇಶ್ ಅವರು ಸ್ವಾಗತಿಸಿ, ಶ್ವೇತಾ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ.ಜೆ. ಶೆಟ್ಟಿ ವಂದಿಸಿದರು.