Updated News From Kaup
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ : ವಿಶ್ವ ಛಾಯಾಗ್ರಹಣ ದಿನಾಚರಣೆ

Posted On: 19-08-2024 07:32PM
ಕಾಪು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದ.ಕ - ಉಡುಪಿ ಜಿಲ್ಲೆ ಇದರ ಕಾಪು ವಲಯದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸೋಮವಾರ ಕೆ1 ಹೋಟೆಲ್ ನ ಸಭಾಭವನದಲ್ಲಿ ಆಚರಿಸಲಾಯಿತು.
ಸನ್ಮಾನ : ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಬಾಲಕೃಷ್ಣ ಪೂಜಾರಿ ಉಚ್ಚಿಲ ಮತ್ತು ಛಾಯಾಗ್ರಾಹಕ ಪ್ರಭಾಕರ ದೇವಾಡಿಗರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಪರಿಸ್ಥಿತಿ ಕಠಿಣವಾಗಿದ್ದು, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯಿದೆ. ಛಾಯಾಗ್ರಾಹಕರು ಛಾಯಾಗ್ರಹಣವನ್ನು ನಂಬಿ ಬದುಕುವ ಜೊತೆಗೆ ಸಹ ಉದ್ಯೋಗದ ಬಗ್ಗೆ ಚಿಂತಿಸಿ ಆರ್ಥಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು. ಛಾಯಾಗ್ರಾಹಕ ಪ್ರಭಾಕರ ದೇವಾಡಿಗ ಮಾತನಾಡಿ, ಕಪ್ಪು ಬಿಳುಪಿನ ಕಾಲದಿಂದ ಕಲರ್ ಫುಲ್ ಯುಗದವರೆಗೂ ಫೋಟೋಗ್ರಫಿಗೆ ಮಾನ್ಯತೆಯಿದೆ. ತಾಳ್ಮೆಯ ವೃತ್ತಿ ಇದಾಗಿದೆ. ಇಂದು ಅಸಂಖ್ಯಾತ ಕಿರಿಯ ಛಾಯಾಗ್ರಾಹಕರು ಛಾಯಾಗ್ರಹಣ ಕ್ಷೇತ್ರಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ವಹಿಸಿದ್ದರು.
ಈ ಸಂದರ್ಭ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್, ಕಾಪು ವಲಯದ ಉಪಾಧ್ಯಕ್ಷರುಗಳಾದ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ಕಾಪು ವಲಯದ ಕಾರ್ಯದರ್ಶಿ ರಾಘವೇಂದ್ರ ಭಟ್, ಕೋಶಾಧಿಕಾರಿ ಕಿರಣ್ ಕಾಪು, ಕಾಪು ವಲಯದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಉದಯ ಕುಮಾರ್ ಮತ್ತು ರಾಘವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಸ್ವಾಗತಿಸಿದರು. ಉದಯ ಕುಮಾರ್ ನಿರೂಪಿಸಿದರು. ರಾಘವೇಂದ್ರ ಭಟ್ ವಂದಿಸಿದರು.
ಆಗಸ್ಟ್ 21 : ಕಂಚಿನಡ್ಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Posted On: 19-08-2024 06:55PM
ಕಾಪು : ರಾಜ್ಯ ಪ್ರಸ್ತಾವಿತ ಕಂಚಿನಡ್ಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ರದ್ದು ಮಾಡುವ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದೊಂದಿಗೆ ಆಗಸ್ಟ್ 21 ರಂದು ಬೆಳಿಗ್ಗೆ 10 ಗಂಟೆಗೆ ಕಂಚಿನಡ್ಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೃಹತ್ ಪ್ರತಿಭಟನೆಯ ಬಳಿಕ ಆ.22 ರಂದು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ವಿವಿಧ ಸಚಿವರನ್ನೊಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಗೆ ಸಾರ್ವಜನಿಕರ ಸಹಿತವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ನ ದಕ್ಷಿಣ ಮತ್ತು ಉತ್ತರ ವಿಭಾಗ, ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲೆಯ ಎಲ್ಲಾ ಬ್ಲಾಕ್ ಗಳ ಸಹಭಾಗಿತ್ವದೊಂದಿಗೆ ಈ ಪ್ರತಿಭಟನೆ ನಡೆಯಲಿದ್ದು ಈ ಮೂಲಕ ಸರಕಾರಕ್ಕೆ ಒತ್ತಡ ತರುವ ಪ್ರಯತ್ನ ನಡೆಸಲಾಗುವುದು ಎಂದರು.
ಯಡಿಯೂರಪ್ಪ ಸರಕಾರ ಇರುವಾಗ ಆರಂಭಗೊಂಡ ಪ್ರಕ್ರಿಯೆ ಇದಾಗಿದ್ದು ಬೆಳ್ಮಣ್ ನಲ್ಲಿ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ ಉದ್ದೇಶಕ್ಕಾಗಿ ಈ ಹೋರಾಟ ನಡೆಯಲಿದೆ ಎಂದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು.
ಕಂಚಿನಡ್ಕ ಟೋಲ್ ಗೇಟ್ ವಿರುದ್ದ ಪ್ರತಿಭಟನೆ : ಕಾಪು ತಾಲೂಕು ಕುಲಾಲ ಸಂಘ ಬೆಂಬಲ

Posted On: 18-08-2024 08:19PM
ಕಾಪು : ತಾಲೂಕಿನ ಪಡುಬಿದ್ರಿಯ ಕಂಚಿನಡ್ಕದಲ್ಲಿ ಆಗಸ್ಟ್ 24 ರಂದು ನಡೆಯುವ ರಾಜ್ಯ ಸರಕಾರ ಪ್ರಸ್ತಾವಿತ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಕಾಪು ತಾಲೂಕು ಕುಲಾಲ ಸಂಘ ಬೆಂಬಲ ನೀಡಲಿದ್ದೇವೆ ಎಂದು ಕಾಪು ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ತಿಳಿಸಿದ್ದಾರೆ.
ಉಚ್ಚಿಲ ರೋಟರಿ ಕ್ಲಬ್ ವತಿಯಿಂದ ವನಮಹೋತ್ಸವ

Posted On: 18-08-2024 08:11PM
ಉಚ್ಚಿಲ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಉಚ್ಚಿಲ ಹೆದ್ದಾರಿಯ ಡಿವೈಡರ್ನಲ್ಲಿ ವನಮಹೋತ್ಸವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ನೆರವೇರಿತು.
ಈ ಸಂದರ್ಭ ಉಚ್ಚಿಲ ರೋಟರಿಯ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮಾತನಾಡಿ, ಅಂತರ್ರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ಉಚ್ಚಿಲದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿಗಳಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುವ ಯೋಜನೆ ನಮ್ಮದಾಗಿದೆ ಎಂದರು.
ಉಚ್ಚಿಲ ರೋಟರಿ ಕ್ಲಬ್ ಉಚ್ಚಿಲ ಇದರ ಅಧ್ಯಕ್ಷ ಇಬಾದುಲ್ಲ ರಫಿಕ್ ಅಹ್ಮದ್, ಕಾರ್ಯದರ್ಶಿ ಸತೀಶ್ ಕುಂಡಂತಾಯ, ನಿಕಟಪೂರ್ವ ಕಾರ್ಯದರ್ಶಿ ಅಚ್ಚುತ ಶೆಣೈ, ನಜ್ಮಾ ಇಬಾದುಲ್ಲ ಉಪಸ್ಥಿತರಿದ್ದರು.
ಕಾಪು : ದಿಕ್ರ್ ದುವಾ ಮಜ್ಲೀಸ್ ಕೊಯಾಮ್ಮ ತಂಗಳ್ ರ ಕುರ್ರತ್ತುಸ್ಸಾದತ್ ಪುಸ್ತಕ ಬಿಡುಗಡೆ

Posted On: 18-08-2024 04:14PM
ಕಾಪು : ಸಯ್ಯದ್ ಫಝಲ್ ಕೊಯಮ್ಮ ತಂಗಲ್ ಅಲ್ ಬುಕಾರಿ ಕೂರತ್ ತಂಗಲ್ ರವರ ಕುರ್ರತುಸ್ಸಾದತ್ ಬದುಕು ಮತ್ತು ಬೋಧನೆಗಳ ಇಣುಕು ನೋಟ ಎಂಬ ಪುಸ್ತಕ ಬಿಡುಗಡೆಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಾಮ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಕುರಾ ತಂಗಲ್ ರವರ ಆತ್ಮೀಯರಾದ ಹೆಜಮಾಡಿ ಗುಲಾಮ್ ಮೊಹಮ್ಮದ್ ರವರಿಗೆ ಪ್ರಥಮ ಪುಸ್ತಕ ನೀಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ, ಕರ್ನಾಟಕ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಹದಿ, ಅಸ್ಸಯ್ಯಿದ್ ಅಬ್ದುರಹ್ಮನ್ ಮಸ್ ಊದ್ ತಂಗಲ್ ಕೂರತ್ ಮತ್ತಿತರರು ಉಪಸ್ಥಿತರಿದ್ದರು.
ಪಡುಕುತ್ಯಾರು ಶ್ರೀ ದುರ್ಗಾ ಮಂದಿರದಲ್ಲಿ ವರಮಹಾಲಕ್ಷ್ಮಿ ವ್ರತ ಪೂಜೆ ಸಂಪನ್ನ

Posted On: 18-08-2024 03:18PM
ಶಿರ್ವ : ಪಡುಕುತ್ಯಾರು ಶ್ರೀ ದುರ್ಗಾ ಮಂದಿರದಲ್ಲಿ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ನೆರವೇರಿತು.

ಶ್ರೀ ದುರ್ಗಾಮಹಿಳಾ ಮಂಡಳಿ ಮತ್ತು ಪಡುಕುತ್ಯಾರು ಕೂಡುವಳಿಕೆಯ ಸದಸ್ಯರು ಹಾಗೂ ಕುಟುಂಬಸ್ಥರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ಪ್ರಭಾರ ತಹಶೀಲ್ದಾರ್ ಆಗಿ ಪ್ರತಿಭಾ.ಆರ್ ಅಧಿಕಾರ ಸ್ವೀಕಾರ

Posted On: 18-08-2024 08:42AM
ಕಾರ್ಕಳ : ಕಾಪು ತಾಲೂಕಿನ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಕಾರ್ಕಳ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ ಶನಿವಾರದಂದು ಅಧಿಕಾರ ಸ್ವೀಕರಿಸಿದರು.
ಕಾರ್ಕಳ ತಹಶೀಲ್ದಾರ್ ನರಸಪ್ಪ ಅವರು ಬಳ್ಳಾರಿಗೆ ವರ್ಗಾವಣೆಗೊಂಡಿದ್ದು, ನೂತನ ತಹಶೀಲ್ದಾರ್ ನಿಯೋಜನೆಯಾಗದ ಹಿನ್ನೆಲೆ ಪ್ರತಿಭಾ ಆರ್. ಪ್ರಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಉಪತಹಶೀಲ್ದಾರ್ ಮಂಜುನಾಥ್ ನಾಯಕ್, ಲಕ್ಷ್ಮೀ, ನಮಿತಾ, ಕಂದಾಯ ನಿರೀಕ್ಷಕರಾದ ಶಿವಪ್ರಸಾದ್, ರಿಯಾಜ್ ಅಹಮದ್ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಂಚಿನಡ್ಕ ರಾಜ್ಯ ಹೆದ್ದಾರಿ ಟೋಲ್ : ಪಡುಬಿದ್ರಿ ರೋಟರಿ, ಲಯನ್ಸ್, ಜೆಸಿಐ ಸಂಸ್ಥೆಗಳಿಂದ ಪ್ರತಿಭಟನೆಗೆ ಸಹಕಾರ

Posted On: 17-08-2024 06:46PM
ಪಡುಬಿದ್ರಿ : ಇಲ್ಲಿನ ಕಂಚಿನಡ್ಕದಲ್ಲಿ ರಾಜ್ಯ ಹೆದ್ದಾರಿಯ ಟೋಲ್ ನಿರ್ಮಾಣಕ್ಕೆ ರಾಜ್ಯ ಸರಕಾರ ಯೋಜನೆ ರೂಪಿಸಿದ್ದು ಇದನ್ನು ವಿರೋಧಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳಾದ ಪಡುಬಿದ್ರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನ್ಸ್ ಸ್ಫೂರ್ತಿ, ಜೆಸಿಐ ಪಡುಬಿದ್ರಿ ಶನಿವಾರ ಪಡುಬಿದ್ರಿ ಸೊಸೈಟಿ ಸಭಾಂಗಣದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೆಸಿಐ ಪಡುಬಿದ್ರಿ ಸಂಸ್ಥೆಯ ಪ್ರಮುಖರಾದ ವೈ ಸುಕುಮಾರ್ ಮಾತನಾಡಿ, ಅಭಿವೃದ್ಧಿಯ ಹೆಸರಲ್ಲಿ ಸರಕಾರವು ಕೇಂದ್ರ ಮತ್ತು ರಾಜ್ಯ ಹೆದ್ದಾರಿಗೆ ಟೋಲ್ ಸಂಗ್ರಹ ಮಾಡುತ್ತಿದ್ದು, ಇದು ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದರು. ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಅರಾ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಜಿಲ್ಲೆಗೆ 2 ಟೋಲ್ ಈಗಾಗಲೇ ಇದೆ. ಈಗಾಗಲೇ ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿಗೆ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಅಗುತ್ತಿದೆ. ಇದು ಹಗಲು ದರೋಡೆಯಾಗಿದೆ. ಹೆಜಮಾಡಿಯಿಂದ ಪಡುಬಿದ್ರಿ ಕಂಚಿನಡ್ಕಕ್ಕೆ ಕೇವಲ 5 ಕಿಲೋ ಮೀಟರ್ ಅಂತರವಿದ್ದು ಮತ್ತೆ ರಾಜ್ಯ ಟೋಲ್ ನಿಯಮಕ್ಕೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಲಯನ್ಸ್ ಕ್ಲಬ್ ಜಿಲ್ಲಾ ಕೋರ್ಡಿನೇಟರ್ ಮಿಥುನ್ ಆರ್ ಹೆಗ್ಡೆ, ಮಾತನಾಡಿ ಯಾವುದೇ ಕಾರಣಕ್ಕೂ ಇನ್ನೊಂದು ಟೋಲ್ ಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆಯಲ್ಲಿ ಕಾರ್ಕಳದಿಂದ ಪಡುಬಿದ್ರಿವರೆಗಿನ ನಮ್ಮ ಸಂಸ್ಥೆಯ ಘಟಕಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಜೆಸಿಐ ಪಡುಬಿದ್ರಿ ಅಧ್ಯಕ್ಷ ಸಂಜಿತ್ ಎರ್ಮಾಳು ಮಾತನಾಡಿ, ಈಗಾಗಲೇ ಹೆಜಮಾಡಿಯಲ್ಲಿ ಟೋಲ್ ಗೇಟ್ ಇದ್ದು, 60 ಕಿ.ಮೀ. ಒಳಗೆ ಇನ್ನೊಂದು ಸುಂಕ ವಸೂಲಿ ಕೇಂದ್ರ ಇರಲು ಸಾಧ್ಯವಿಲ್ಲ. ಅದರಲ್ಲೂ ಕಂಚಿನಡ್ಕ ಮತ್ತು ಹೆಜಮಾಡಿಗೆ ಕೇವಲ 5 ಕಿ.ಮೀ ಅಂತರ ಇದು ಜನರಿಗೆ ಹೊರೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಅರಾ, ಲಯನ್ಸ್ ಕ್ಲಬ್ ಜಿಲ್ಲಾ ಕೋರ್ಡಿನೇಟರ್ ಮಿಥುನ್ ಆರ್ ಹೆಗ್ಡೆ, ಲಯನ್ಸ್ ಪಡುಬಿದ್ರಿ ಅಧ್ಯಕ್ಷ ಸಂಪತ್ ಪಡುಬಿದ್ರಿ, ಕಾರ್ಯದರ್ಶಿ ಪ್ರಗತ್ ಗೋಪಾಲ್ ಶೆಟ್ಟಿ, ಕೋಶಾಧಿಕಾರಿ ಕಪಿಲ್, ಲಯನ್ಸ್ ಸ್ಫೂರ್ತಿ ಕ್ಲಬ್ ಅಧ್ಯಕ್ಷೆ ಸ್ನೇಹ ಪ್ರವೀಣ್, ಕೋಶಾಧಿಕಾರಿ ಕಸ್ತೂರಿ ಪ್ರವೀಣ್, ಜೆಸಿಐ ಪಡುಬಿದ್ರಿ ಅಧ್ಯಕ್ಷ ಸಂಜಿತ್ ಎರ್ಮಾಳು, ಜೆಸಿಐ ಪ್ರಮುಖ ವೈ ಸುಕುಮಾರ್ ಉಪಸ್ಥಿತರಿದ್ದರು.
ಎರ್ಮಾಳು : ಸ್ವಾತಂತ್ರ್ಯ ಹೋರಾಟಗಾರರ ಮನೆಯ ನಾಮಫಲಕ ಅನಾವರಣ

Posted On: 16-08-2024 10:53PM
ಎರ್ಮಾಳು : ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್ರವರ ಮನೆಯಲ್ಲಿ ವಿವಿಧ ಸಂಘಟನೆಗಳ ಆಯೋಜನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಗುರುವಾರ ಜರಗಿತು. ಪತ್ರಕರ್ತ ಚೇತನ್ ಶೆಟ್ಟಿ ರಾಷ್ಟ್ರಧ್ವಜಕ್ಕೆ ಪುಷ್ಪಾಚ೯ನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನಪದ ವಿದ್ವಾಂಸ ಡಾ. ವೈ .ಎನ್ . ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.

ಸ್ವರಾಜ್ಯ 75, ಪೂಣ೯ ಪ್ರಜ್ಞ ಪದವಿ ಪೂವ೯ ಕಾಲೇಜು ಅದಮಾರು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಸ್ತ ಚಿತ್ರ ಫೌಂಡೇಶನ್ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ, ಎರ್ಮಾಳು ಬಡಾ ಮೊಗವೀರ ಸಭಾ ಸಂಘಟನೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ಎಮಾ೯ಳು ರಾಮಪ್ಪ ಜಿ ಸಾಲ್ಯಾನ್ ರವರ ಸ್ವಾತಂತ್ರ್ಯಹೋರಾಟದ ವಿಚಾರದ ಕುರಿತು ಕು. ಕವಿತಾ ಆಚಾಯ೯ ಮುದೂರು ಉಪನ್ಯಾಸಗೈದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ, ಅದಮಾರು ಕಾಲೇಜು ಪ್ರಾಂಶುಪಾಲರಾದ ಸಂಜೀವ ನಾಯ್ಕ, ಉಪನ್ಯಾಸಕ ಡಾ. ಜಯಶಂಕರ ಕಂಗಣ್ಣಾರು, ಮೊಗವೀರ ಮುಖಂಡ ಲಕ್ಷ್ಮಣ ಸುವಣ೯, ಶಾರದಾ ಎರ್ಮಾಳು, ಸ್ವರಾಜ್ಯ 75 ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು ಮಾತನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್ ವಹಿಸಿದ್ದರು.

ಕಾಯ೯ಕ್ರಮದಲ್ಲಿ ವಿಧ್ಯಾಥಿ೯ಗಳು, ಹೋರಾಟಗಾರ ಎರ್ಮಾಳು ರಾಮಪ್ಪ ಜಿ. ಸಾಲ್ಯಾನ್ ಕುಟುಂಬಸ್ಥರು, ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು, ಕೇಶವ ಮೊಯಿಲಿ, ಶಿಕ್ಷಕ ಬಾಬುರಾಯ ಆಚಾರ್ಯ, ಬಡಾ ಗ್ರಾಮ ಪಂಚಾಯತ್ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಮನೀಷ್ ಸ್ವಾಗತಿಸಿದರು. ಕು. ಪ್ರೀಶ ನಿರೂಪಿಸಿದರು. ಕು. ಹಷಿ೯ತಾ ವಂದಿಸಿದರು.
ಶಿರ್ವ ಸೈಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ : ಸ್ವಾತಂತ್ರ್ಯೋತ್ಸವ ಆಚರಣೆ ; ಆಕ್ಸಿಲಿಯಮ್ ನಿವಾಸ ಭೇಟಿ

Posted On: 16-08-2024 10:16PM
ಶಿರ್ವ : ಸೈಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆ ವತಿಯಿಂದ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಕ್ಸಿಲಿಯಮ್ ನಿವಾಸ ಶಿರ್ವ ಇಲ್ಲಿನ 43 ಮಕ್ಕಳಿಗೆ ಬೆಡ್ಶೀಟ್ ಮತ್ತು ಸಿಹಿ ತಿಂಡಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ| ಲೆಸ್ಲಿ ಡಿಸೋಜ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಲ್ಸನ್ ರೋಡ್ರಿಗಸ್, ಪಂಚಾಯತ್ ಸದಸ್ಯೆ ಜೆಸಿಂತಾ ಡಿಸೋಜ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಆರಾನ್ಹ, ಉಪಸ್ಥಿತರಿದ್ದರು.

ಆಕ್ಸಿಲಿಯಮ್ ಕಾನ್ವೆಂಟಿನ ಮೇಲ್ವಿಚಾರಕಿ ಸೀ.ಲೀಮಾ, ಧರ್ಮ ಭಗಿನಿಯರು, ಶಿರ್ವ ಶಾಖೆಯ ಸಿಬ್ಬಂದಿಗಳು ಸಹಕಾರ ನೀಡಿದರು.

ಸೈಂಟ್ ಮಿಲಾಗ್ರಿಸ್ ಸಹಕಾರಿ ಶಿರ್ವ ಶಾಖಾ ವ್ಯವಸ್ಥಾಪಕಿ ಪ್ರಮೀಳ ಲೋಬೋ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ವ್ಯವಸ್ಥಾಪಕ ವಿಲ್ಸನ್ ಡಿಸೋಜ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ಬ್ಲೆಸ್ಸಿ ಜಾಜ್೯ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಗಾಯನ, ನೃತ್ಯರೂಪಕ ಜರಗಿತು.