Updated News From Kaup
ಕಾಪು : ವೀರ ವನಿತೆ ಒನಕೆ ಓಬವ್ವ ದಿನಾಚರಣೆ
Posted On: 11 Nov 2024, 06:03 PM
ಕಾಪು : ಒನಕೆ ಓಬವ್ವ ತಮ್ಮ ಅಸಾಧಾರಣ ಸಮಯ ಪ್ರಜ್ಞೆ, ಧೈರ್ಯ, ದೇಶಪ್ರೇಮಗಳ ಮೂಲಕ ಸಬಲ ನಾರೀಶಕ್ತಿ ಪ್ರತೀಕವಾಗಿದ್ದು ನಾವೆಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಕರೆ ನೀಡಿದರು. ಅವರು ಸೋಮವಾರ ತಹಶಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಒನಕೆ ಓಬವ್ವ ದಿನಾಚರಣೆಯಲ್ಲಿ ಮಾತನಾಡಿದರು. ವೀರವನಿತೆ ಒನಕೆ ಓಬವ್ವರ ಆದರ್ಶಗಳು ನಮ್ಮ ಬಾಳಿನ ಬೆಳಕು. ಆಕೆ ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ, ಯಾರೂ ಮರೆಯಲು ಸಾಧ್ಯವಿಲ್ಲ. ಅವರು ನಾರಿಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ಉಪತಹಶೀಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೆಕಾರ್, ದೇವಕಿ, ಸಿಬ್ಬಂದಿ ಹಾಜರಿದ್ದರು. ಸತೀಶ್ ರವರು ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರಿನಲ್ಲಿ ನ.17ರಂದು ಆಯೋಜಿಸಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಲು ಮನವಿ
Posted On: 11 Nov 2024, 06:51 AM
ಕಾಪು : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಲಾದ ನವದುರ್ಗಾ ಲೇಖನ ಯಜ್ಞದಲ್ಲಿ ಬೆಂಗಳೂರಿನ ಜನತೆ ಪಾಲ್ಗೊಳ್ಳುವ ದೃಷ್ಟಿಯಿಂದ ನ.17 ರಂದು ಬೆಂಗಳೂರಿನ ಗಾಯತ್ರಿ ವಿಹಾರ, ಗೇಟ್ ನಂ 4, ಪ್ಯಾಲೇಸ್ ಗ್ರೌಂಡ್ ಇಲ್ಲಿ ಹಮ್ಮಿಕೊಂಡಿರುವ ವಾಗೀಶ್ವರಿ ಪೂಜೆಯ ಮೂಲಕ ನವದುರ್ಗಾ ಲೇಖನವನ್ನು ಬರೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನವದುರ್ಗಾ ಲೇಖನ ಯಜ್ಞ ಬರೆದು ಕಾಪು ಅಮ್ಮನ ಕೃಪೆಗೆ ಪಾತ್ರರಾಗುವಂತೆ ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ ರಘುಪತಿ ಭಟ್ ಮನವಿ ಮಾಡಿದರು. ಅವರು ಕರ್ನಾಟಕ ಕರಾವಳಿ ಮಿತ್ರ ಮಂಡಳಿ ಹಾವನೂರು ಬಡಾವಣೆ, ನಾಗಸಂದ್ರ ಬೆಂಗಳೂರು ಇವರು ಬೆಂಗಳೂರಿನಲ್ಲಿ ರವಿವಾರ ಆಯೋಜಿಸಿದ ಕ್ರೀಡಾಕೂಟದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ- ಬೆಂಗಳೂರು ಸಮಿತಿ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿಗಳಾದ ವಿಜಯ್ ಶೆಟ್ಟಿ, ನಾಗರಾಜ್ ರಾವ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಲಿಮಾರುವಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
Posted On: 10 Nov 2024, 04:41 PM
ಪಲಿಮಾರು : ಹೊಯ್ಗೆ ಫ್ರೆಂಡ್ಸ್ ಹೊಯ್ಗೆ ಪಲಿಮಾರು, ಶ್ರೀದೇವಿ ಫ್ರೇಂಡ್ಸ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಶ್ರೀ ಗಣೇಶ ಮಂಟಪ ಪಲಿಮಾರಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನ ಇದರ ಪ್ರಧಾನ ಅರ್ಚಕರರಾದ ಶ್ರೀನಿವಾಸ ಉಡುಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೊಯ್ಗೆ ಫ್ರೇಂಡ್ಸ್ ಹಾಗೂ ಶ್ರಿದೇವಿ ಫ್ರೆಂಡ್ಸ್ ಕಳೆದ ಏಳು ವರ್ಷಗಳಿಂದ ರಕ್ತದಾನದಂತಹ ಮಹತ್ಕಾರ್ಯ ಆಯೋಜಿಸುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಕ್ತದ ಆಪತ್ಬಾಂದವ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ವರ ಪೈ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಪ್ರಬಂಧಕರು, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಪ್ರಬಂಧಕ ಕಿರಣ್ ಶೆಟ್ಟಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದ ವೈದ್ಯ ಡಾ.ಲಿಂಗೇಶ್, ಹೊಯ್ಗೆ ಫ್ರೇಂಡ್ಸ್ ಪಲಿಮಾರು ಅಧ್ಯಕ್ಷ ರಿತೇಶ್ ದೇವಾಡಿಗ, ಹರೀಶ್ ಪೂಜಾರಿ, ಶ್ರೀದೇವಿ ಫ್ರೆಂಡ್ಸ್ ಅವರಾಲು ಮಟ್ಟು ಅಧ್ಯಕ್ಷ ಹರೀಶ್ ಪೂಜಾರಿ, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯ ಶಿವರಾಂ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಾಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿದರು. ಸತೀಶ್ ಪಲಿಮಾರು ವಂದಿಸಿದರು.
ಡಿ. 12 : ದಿ. ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ಸ್ಮರಣಾರ್ಥ ಕಾಪುವಿನಲ್ಲಿ ಬೃಹತ್ ರಕ್ತದಾನ ಶಿಬಿರ
Posted On: 09 Nov 2024, 06:56 AM
ಕಾಪು : ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಇವರ ನೇತೃತ್ವದಲ್ಲಿ ಡಿಸೆಂಬರ್ 12 ರಂದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಸಮಾಜರತ್ನ ದಿ. ಕೆ. ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ದಿ. ವಸುಂದರಾ ಶೆಟ್ಟಿ ಸ್ಮರಣಾರ್ಥ ಅವರ ಕುಟುಂಬಿಕರ ಹಾಗೂ ಅವರ ಸರ್ವ ಧರ್ಮಗಳ ಅಭಿಮಾನಿ ಬಂಧುಗಳ ಸಹಕಾರದಿಂದ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ ಮಜೂರು ಸರ್ಕಲ್ ಬಳಿಯ ಕೆ. ಲೀಲಾಧರ ಶೆಟ್ಟಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ನಂತರ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭಾ ಕಾರ್ಯಕ್ರಮ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲ್ಲಿದ್ದು, ಕಾಪು ಪುರಸಭೆಯ ಕಾರ್ಮಿಕರು, ಚಾಲಕರು ಒಟ್ಟು 38 ಜನರಿಗೆ ಸನ್ಮಾನ, ಸಮಾಜ ಸೇವಕ ದೆಂದೂರು ಅಶೋಕ್ ಶೆಟ್ಟಿಯವರಿಗೆ ಸನ್ಮಾನ ಸಭಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸಮಾಜ ಸೇವಕ ಸೂರಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಶಾಸಕರು ಶಾಸಕ ಸ್ಥಾನದ ಘನತೆಗೆ ತಕ್ಕಂತೆ ವರ್ತಿಸಿ, ಅಭಿವೃದ್ಧಿಯ ಕಡೆ ಗಮನಹರಿಸಲಿ : ಶರ್ಫುದ್ದಿನ್ ಶೇಖ್ ಮಜೂರು
Posted On: 09 Nov 2024, 06:47 AM
ಕಾಪು : ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶಾಸಕ ಸ್ಥಾನದ ಘನತೆಯನ್ನು ಮರೆತು ವರ್ತಿಸುತ್ತಿದ್ದಾರೆ. ಈ ವ್ಯಕ್ತಿ ಶಾಸಕರೋ ಅಥವಾ ಪುಡಿ ರೌಡಿಯೋ ಎಂಬ ಅನುಮಾನ ಮೂಡುತ್ತಿದೆ. ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಅವ್ಯವಹಾರದ ಆರೋಪ ವ್ಯಾಪಕವಾಗಿ ಇವರ ಮೇಲಿದೆ ಎಂದು ಉಡುಪಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಶರ್ಫುದ್ದಿನ್ ಶೇಖ್ ಮಜೂರು ಹೇಳಿದ್ದಾರೆ. ಈ ಪ್ರಕರಣದಿಂದ ಸಾರ್ವಜನಿಕರ ಗಮನವನ್ನು ಬೇರೆ ಕಡೆ ಸೆಳೆಯಲು ವಕ್ಫ್ ನೆಪವಾಗಿಸಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಶಾಸಕ ಸ್ಥಾನದ ಘನತೆಯನ್ನು ಮರೆತು ಮಾತನಾಡುತ್ತಿದ್ದಾರೆ. ನಿನ್ನೆ ಇವರೊಂದಿಗೆ ಬಹಳಷ್ಟು ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ವಕ್ಫ್ ವಿಚಾರದಲ್ಲಿ ಪ್ರತಿಭಟನೆಯ ನೆಪದಲ್ಲಿ ನುಗಿದ್ದಾರೆ. ವಕ್ಫ್ ಸಂಬಂಧವಾಗಿ ಅತಿಹೆಚ್ಚು ನೋಟಿಸ್ ಗಳನ್ನು ರೈತರಿಗೆ ನೀಡಿದ್ದು ಇವರ ಹಿಂದಿನ ಸರ್ಕಾರ. 2014ರಲ್ಲಿ ಬಿಜೆಪಿಯವರ ಕೇಂದ್ರ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ವಕ್ಫ್ ಭೂಮಿಯನ್ನು ತೆರವುಗೊಳಿಸುತ್ತೇವೆ ಎನ್ನುವ ವಾಗ್ದಾನವಿದೆ. 2012 ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅನ್ವರ್ ಮಾಣಿಪ್ಪಾಡಿ ವರದಿ ತರಿಸಿಕೊಂಡು ರಾಜ್ಯಾದ್ಯಂತ ರೈತರಿಗೆ ನೋಟಿಸ್ ಕೊಟ್ಟಿದೆ. ಇಷ್ಟೆಲ್ಲಾ ಇತಿಹಾಸ ಇದ್ದರೂ ಈಗ ರಾಜ್ಯ ಸರ್ಕಾರ ನೋಟಿಸ್ ಕೊಟ್ಟಿದೆ ಎಂದು ಕಂಡಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವ ಸರ್ಕಾರ ಹಲವು ಗ್ಯಾರಂಟಿಗಳನ್ನು ಘೋಷಿಸಿ ಜನಪ್ರಿಯತೆಯ ಉತ್ತುಂಗದಲ್ಲಿದೆ. ಹೀಗೆ ಗ್ಯಾರಂಟಿಗಳು ಬಡವರಿಗೆ ತಲುಪಿ ಅವರ ಬದುಕು ಹಸನಾದರೆ ಮತ್ತೆ ನಮಗೆ ರಾಜಕೀಯ ಭವಿಷ್ಯವಿಲ್ಲ ಎಂದು ಬಗೆದು ಈಗ ಸರ್ಕಾರದ ವಿರುದ್ಧ ವಕ್ಫ್ ನೋಟಿಸುಗಳನ್ನೇ ನೆಪವಾಗಿಸಿಕೊಂಡು ಡಿಸಿ ಕಚೇರಿಗೆ ನುಗ್ಗುವುದು, ರಸ್ತೆಯ ಮೇಲೆ ಪ್ರತಿಭಟನೆ ಮಾಡುವ ನಾಟಕಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಈ ನಾಟಕದ ಹಿಂದಿನ ಉದ್ದೇಶ ಮತ್ತು ಹುನ್ನಾರ ಅರ್ಥವಾಗಿದೆ. ಮೂರು ಉಪಚುನಾವಣೆಗಳು ಮತ್ತು ಮಹಾರಾಷ್ಟ್ರ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂದಿನ ಅಲ್ಪಸಂಖ್ಯಾತರ ವಿರೋಧದ ರಾಜಕಾರಣ ಇದೆಂಬುದು ಸಾಮಾನ್ಯ ಜ್ಞಾನ ಇದೆ ಎಲ್ಲರಿಗೂ ತಿಳಿಯುತ್ತದೆ. ಬಿಜೆಪಿಯವರು ಇಂತಹ ನಾಟಕಗಳನ್ನು ಬಿಟ್ಟು ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಭಾರತದ ತಮ್ಮ ಆಡಳಿತ ಇರುವ ರಾಜ್ಯ ಸರ್ಕಾರಗಳಿಗೆ ಸಿದ್ದರಾಮಯ್ಯ ಸರ್ಕಾರದ ರೀತಿಯಲ್ಲಿ ಜನಕಲ್ಯಾಣ ಯೋಜನೆಯನ್ನು ಬುದ್ಧಿ ಬೆಳೆಸಿಕೊಳ್ಳಬೇಕಿದೆ. ಅದನ್ನು ಮಾಡುವ ಸಾಮರ್ಥ್ಯವಿಲ್ಲದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಜನರ ಗಮನವನ್ನು ಬೇರೆ ಕಡೆ ಸೆಳೆಯುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರ್ವ ರೋಟರಿ : ದೀಪಾವಳಿ ಸಂಭ್ರಮ - 2024
Posted On: 08 Nov 2024, 07:22 AM
ಶಿರ್ವ : ಹಬ್ಬಗಳ ರಾಜ "ದೀಪಾವಳಿ" ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕ ಎಂದು ಅನಿವಾಸಿ ಭಾರತೀಯ, ಬಂಟಕಲ್ಲು ಹೇರೂರಿನ ದತ್ತಾತ್ರೇಯ ಪಾಟ್ಕರ್ ನುಡಿದರು. ಅವರು ಬುಧವಾರ ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ಏರ್ಪಡಿಸಿದ "ದೀಪಾವಳಿ ಸಂಭ್ರಮ-2024" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿ ಹಬ್ಬದ ಶುಭಾಶಯ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ ಶೂಭಾಶಂಸನೆಗೈದರು. ಸಹ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪರಿಚಯಿಸಿದರು. ಶ್ರೀನಿಧಿ, ಉಷಾ ಮರಾಠೆ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕರಾದ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜೂಡ್ ಡಿಸೋಜ ವಂದಿಸಿದರು. ವಿಷ್ಣುಮೂರ್ತಿ ಸರಳಾಯ ನಿರೂಪಿಸಿದರು. ಮೈಕಲ್ ಮತಾಯಸ್ ಸಹಕರಿಸಿದರು. ಸಾಮೂಹಿಕವಾಗಿ ದೀಪ ಪ್ರಜ್ವಲನ, ರಘುಪತಿ ಐತಾಳ್ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.
ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಬಂಟಕಲ್ಲು ವತಿಯಿಂದ ದೀಪಾವಳಿ ಸಂಭ್ರಮಾಚರಣೆ
Posted On: 08 Nov 2024, 06:59 AM
ಬಂಟಕಲ್ಲು : ಹಬ್ಬಗಳು ಕೇವಲ ಆಡಂಬರದ ಹಬ್ಬವಾಗಿದೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹಬ್ಬವಾಗಬೇಕು ಎಂದು 92ನೇ ಹೇರೂರು ವಿಕಾಸ ಸೇವಾ ಸಮಿತಿ ಅಧ್ಯಕ್ಷರಾದ ಮಾಧವ ಆಚಾರ್ಯರು ತಿಳಿಸಿದರು. ಅವರು ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಬಂಟಕಲ್ಲು ವತಿಯಿಂದ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಹೇರೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗಿರಿಜಾ ತನಿಯ ಪೂಜಾರಿ ಅವರು ಉದ್ಘಾಟಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ, ಅತಿಥಿಯಾಗಿ ಆಗಮಿಸಿದ ಮಾಧವಾಚಾರ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ಉಮೇಶ್ ಕುಲಾಲ್, ಕಾರ್ಯದರ್ಶಿ ಟೋನಿ ಮೋನಿಸ್ , ಕೋಶಾಧಿಕಾರಿ ಸದಾನಂದ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಿತಾ ಪಂಜಿಮಾರು, ವಿಜಯ ಧೀರಜ್ ನಿರ್ವಹಿಸಿದರು. ಕಾರ್ಯದರ್ಶಿ ವಂದಿಸಿದರು.
ಜೈ ತುಲುನಾಡ್ ಉಡುಪಿ ಘಟಕದ ಉದ್ಘಾಟನೆ
Posted On: 07 Nov 2024, 10:49 PM
ಉಡುಪಿ : ತುಳುಲಿಪಿ ತುಳುಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಕಳೆದ 10 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ಜೈತುಲುನಾಡ್ (ರಿ.) ಇದರ ಉಡುಪಿ ಘಟಕದ ಉದ್ಘಾಟನಾ ಸಮಾರಂಭವು ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿರಿ ತುಳು ಚಾವಡಿ ಉಡುಪಿ ಇದರ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರ್, ಸಮಾಜದಲ್ಲಿ ಬೇರೆ ಭಾಷೆಗಳಿಗೆ ಆಡಳಿತಾತ್ಮಕ ರಕ್ಷಣೆ ಇದೆ. ಆದರೆ ತುಳುಭಾಷೆಗೆ ಆಡಳಿತಾತ್ಮಕ ರಕ್ಷಣೆ ಇಲ್ಲ. ಹಾಗಾಗಿ ತುಳುಭಾಷೆಯನ್ನು ರಕ್ಷಣೆಮಾಡಬೇಕಾದ ಅಗತ್ಯ ತುಳು ಸಂಘಟನೆಗಳಿಗಿದೆ ಆ ನಿಟ್ಟಿನಲ್ಲಿ ಜೈತುಲುನಾಡ್ (ರಿ.) ಸಂಘಟನೆ ತುಳುಭಾಷೆಗೆ ಕೊಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ರಾಜಕಾರಣಿಗಳು ವೇದಿಕೆಯಲ್ಲಿ ಮಾತ್ರ ತುಳುವಿನ ಬಗ್ಗೆ ಮಾತನಾಡುತ್ತಾರೆ ಆದರೆ ತುಳು ಭಾಷೆಯ ಏಳಿಗೆಗೆ ಯಾರೂ ಬಲವಾಗಿ ನಿಲ್ಲುವುದಿಲ್ಲ ಹಾಗಾಗಿ ತುಳು ಭಾಷೆ ತುಳುವರ ಬದುಕು ಹಿಂದುಳಿಯುತ್ತಿದೆ. ಆದರೆ ತುಳುಪರ ಸಂಘಟನೆಗಳು ತುಳುಭಾಷೆಗೆ ಗಟ್ಟಿಯಾದ ರಕ್ಷಣೆ ಕೊಟ್ಟ ಸಲುವಾಗಿ ತುಳುಭಾಷೆ ಉಳಿಯುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜೈ ತುಲುನಾಡ್ (ರಿ.)ಉಡುಪಿ ವಲಯದ ಅಧ್ಯಕ್ಷೆಯಾಗಿ ಸುಶೀಲ ಜಯಕರ್ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜೈ ತುಲುನಾಡ್ (ರಿ.) ಸಂಘಟನೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಪೂರ್ಣಿಮಾ ಬಂಟ್ವಾಳರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜದಲ್ಲಿ ತುಳು ಭಾಷೆಗೆ ತುಳುಭಾಷಿಗರಿಂದಲೇ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿದರು. ತುಳುಭಾಷೆ ಹಾಗೂ ಲಿಪಿಯ ಉಳಿವಿಗಾಗಿ ಸಂಘಟನೆಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಉಡುಪಿ ವಲಯದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಘಟನೆಯ ಸ್ಥಾಪಕ ಸಮಿತಿಯ ಸದಸ್ಯರಾದ ಸುಮಂತ್ ಹೆಬ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವೇದಿಕೆಯಲ್ಲಿ ಉಡುಪಿಯ ಹಿರಿಯ ವಕೀಲರಾದ ರಮೇಶ್.ಎಲ್.ದೇವಾಡಿಗ, ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಯಶೋದ ಕೇಶವ್, ಜೈ ತುಲುನಾಡ್ (ರಿ.) ಸಂಘಟನೆಯ ಸ್ಥಾಪಕ ಸಮಿತಿಯ ಸದಸ್ಯರಾದ ಸದಾಶಿವ ಮುದ್ರಾಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್.ಎನ್.ಎಸ್ ಕಟಪಾಡಿ ಉಪಸ್ಥಿತರಿದ್ದರು. ಉಡುಪಿ ವಲಯದ ಕಾರ್ಯದರ್ಶಿಯಾಗಿರುವ ಸಾಗರ್ ಬನ್ನಂಜೆ ಸ್ವಾಗತಿಸಿದರು. ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರು ವಂದಿಸಿದರು. ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾಗಿರುವ ಪ್ರಜ್ಞಾಶ್ರೀ ಎಮ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು
ಕಾಪು : ಕೊಪ್ಪಲಂಗಡಿಯಲ್ಲಿ ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವಕ್ಕೆ ಚಾಲನೆ
Posted On: 07 Nov 2024, 10:37 PM
ಕಾಪು : ಶ್ರೀ ಜನಾರ್ದನ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ವಾಸುದೇವ ಸ್ವಾಮಿ ಸೇವಾ ಭಜನಾ ಮಂಡಳಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ ಕೊಪ್ಪಲಂಗಡಿ ಇಲ್ಲಿ ಗುರುವಾರ ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವವು ನ.7, ಗುರುವಾರದಿಂದ, ನ.10, ಆದಿತ್ಯವಾರದವರೆಗೆ ಜರಗಲಿದೆ. ನ.10, ಆದಿತ್ಯವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಪರಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ.
ಕಾಪು : ಮಲ್ಲಾರು ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟ
Posted On: 07 Nov 2024, 10:20 PM
ಕಾಪು : ಇಲ್ಲಿನ ಮಲ್ಲಾರು ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟವು ನ.7 ರಂದು ಉರ್ದು ಶಾಲೆಯ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶಹನವಾಜ್ ಫಾಝಲೂದ್ದಿನ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟದ ಪಥ ಸಂಚಲನದ ವಂದನ ಸ್ವೀಕಾರವನ್ನು ಮಹೇಶ್ ಬೆಳಪು ಅವರು ಸ್ವೀಕರಿಸಿ ಶುಭ ಹಾರೈಸಿದರು. ಸಭಾ ಅಧ್ಯಕ್ಷತೆಯನ್ನು ಮುಸ್ತಾಕ್ ಬೆಳಪು ಅವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೌಲನಾ ಅಜಾದ್ ಕಾರ್ಕಳ ಶಾಲೆಯ ಶಿಕ್ಷಕರಾದ ಸಂತೋಷ್, ಜಮಾ ತೇ ಇಸ್ಲಾಂ ಹಿಂದ್ ಕಾಪು ಅಧ್ಯಕ್ಷರಾದ ಅನ್ವರ್ ಅಲಿ, ಕಾಪು ತಾಲ್ಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಶಾಹಿದ್, ಫಾರೂಕ್, ರಾಜೇಂದ್ರ, ವೀಣಾ, ಖಾತುನ್ ಬಿ ಉಪಸ್ಥಿತರಿದ್ದರು. ನದಾ ಬಾನು ಸ್ವಾಗತಿ ಸಿದರು. ದಾಕ್ಷಾಯಣಿ ಶೆಟ್ಟಿ ವಂದಿಸಿದರು. ನೀಹಾ ನಿರೂಪಿಸಿದರು.
