Updated News From Kaup
ಕಾಪು : ತಹಶಿಲ್ದಾರ್ ಕಚೇರಿಯ ಆವರಣದಲ್ಲಿದ್ದ ಅಪಾಯಕಾರಿ ಮರ ತೆರವು
Posted On: 04 Aug 2024, 04:27 PM
ಕಾಪು : ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದು ಯಾವುದೇ ಕ್ಷಣದಲ್ಲಿ ಬೀಳಬಹುದಾಗಿದ್ದ ಬೃಹದಾಕಾರದ ಹೆಬ್ಬಲಸಿನ ಮರವೊಂದನ್ನು ಭಾನುವಾರ ತೆರವುಗೊಳಿಸಲಾಯಿತು. ಈ ಹಿಂದೆಯೇ ಸಿಡಿಲು ಬಡಿದು, ಒಣಗಿ ಹೋಗಿ ಬೀಳುವ ಸ್ಥಿತಿಯಲ್ಲಿ ಇತ್ತು. ಈ ಆವರಣದಲ್ಲಿ ತಹಶಿಲ್ದಾರ್ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯತ್, ಸರ್ವೆ ಇಲಾಖೆ ಹೀಗೆ ಹಲವು ಕಚೇರಿಗಳ ಸಮುಚ್ಚಯವಾಗಿರುವ ಆಡಳಿತ ಸೌಧದಲ್ಲಿ ಹಲವು ಕಾರ್ಯಗಳಿಗೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚು ಇದೆ. ತಾಲ್ಲೂಕು ಆಡಳಿತ ಸೌಧಕ್ಕೆ ಬರುವ ಸಾರ್ವಜನಿಕರ ವಾಹನಗಳು ಇಲ್ಲಿ ನಿಲ್ಲುತ್ತಿದ್ದವು. ಹಲವು ವರ್ಷಗಳಿಂದ ಇದನ್ನು ತೆರವು ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಎಷ್ಟೋ ಅಧಿಕಾರಿಗಳು ಆಗಿ ಹೋದರೂ ಫಲ ಸಿಕ್ಕಿರಲಿಲ್ಲ. ಈಗ ತಹಶಿಲ್ದಾರ್ ಡಾ. ಪ್ರತಿಭಾ ಆರ್., ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಪುರಸಭಾ ಚೀಫ್ ಆಫೀಸರ್ ನಾಗರಾಜ್ ರವರ ಪ್ರಯತ್ನದಿಂದಾಗಿ ಇಂದು ಅಪಾಯಕಾರಿ ಮರ ತೆರವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಾದ ಜೀವನ್ ಶೆಟ್ಟಿ, ಮಂಜುನಾಥ್ ರವರ ಸಹಕಾರದಿಂದ ಗೌರವ್, ಜಯ, ಭರತ್, ಪ್ರಜಾನ್ ರವರ ತಂಡ ಈ ದಿನ ಅಪಾಯಕಾರಿ ಮರವನ್ನು ತೆರವು ಮಾಡಿದ್ದಾರೆ. ಭಾನುವಾರವನ್ನೂ ಲೆಕ್ಕಿಸದೆ ಸದಾ ಸಾರ್ವಜನಿಕರ ಸುರಕ್ಷತೆಗೆ ಕರ್ತವ್ಯ ನಿರ್ವಹಿಸುವ ತಹಶಿಲ್ದಾರ್ ಪ್ರತಿಭಾ ರವರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕರ ಸುರಕ್ಷತೆ ಮುಖ್ಯ. ಹಾಗಾಗಿ ಈ ಮರವನ್ನು ಅರಣ್ಯ ಇಲಾಖೆಯ ಅನುಮತಿ ಮತ್ತು ಸಹಕಾರದಿಂದ ತೆರವು ಮಾಡಿದ್ದೇವೆ. ಈ ರೀತಿ ಬೇರೆಡೆಯಲ್ಲಿ ಎಲ್ಲಿಯಾದರೂ ಅಪಾಯಕಾರಿ ಮರಗಳಿದ್ದರೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೆ ತೆರವುಗೊಳಿಸಲು ಕ್ರಮವಹಿಸಲಾಗುವುದು - ತಹಶಿಲ್ದಾರ್ ಡಾ. ಪ್ರತಿಭಾ ಆರ್.
ಉಚ್ಚಿಲ : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು - ಆಟಿ ಕಷಾಯ ವಿತರಣೆ
Posted On: 04 Aug 2024, 09:29 AM
ಉಚ್ಚಿಲ : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು, ಟ್ರಸ್ಟ್ ಸದಸ್ಯರು ಹಾಗೂ ಸಂಜೀವ ಪೂಜಾರಿ ಕಟಪಾಡಿ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 9ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಸರಕಾರಿ ಸಂಯುಕ್ತ ಶಾಲೆ ಮೂಳೂರಿನಲ್ಲಿ ಉಚಿತವಾಗಿ ವಿತರಿಸಿದರು. ಸುಮಾರು 12೦೦ ಜನರು ಕಷಾಯ ಸೇವಿಸಲು ಅನುಕೂಲ ಮಾಡಿಕೊಡಲಾಯಿತು. ಟ್ರಸ್ಟಿ ಪ್ರತೀಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಅರುಣ್ ಕುಲಾಲ್,ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಆಕಾಶ್, ಅವೀಶ್, ವಿಕಾಸ್, ಶಲಿನ್, ತನೀಶ್, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಪಡುಬಿದ್ರಿ : ಬಾಲಪ್ಪ ಗುರಿಕಾರ ನಟರಾಜ್ ಪಿ ಎಸ್ ನೇತೃತ್ವದಲ್ಲಿ ಕೌಡೂರು ಹೊಸ ಬೆಳಕು ಅನಾಥ ಆಶ್ರಮ ಭೇಟಿ
Posted On: 04 Aug 2024, 09:20 AM
ಪಡುಬಿದ್ರಿ : ಪ್ರೀತಿ , ವಾತ್ಸಲ್ಯದ ಬದುಕು ಕಟ್ಟಿ ಕೊಟ್ಟ ತಂದೆ ತಾಯಿಯನ್ನು ಅನಾಥ ಅಶ್ರಮಕ್ಕೆ ದೂಡುವ ಇಂದಿನ ಜನತೆಯ ಮನಸ್ಥಿತಿ ಖೇದಕರವಾಗಿದೆ. ಜೀವನದ ಪಾಠವನ್ನು ಕಲಿಸಿದ ಹಿರಿಯರು ತನ್ನ ಬದುಕಿನ ಕೊನೆ ಕಾಲದಲ್ಲಿ ಅನಾಥ ಅಶ್ರಮದಲ್ಲಿ ಬದುಕುವಂತಾದುದು ತುಂಬಾ ಬೇಸರದ ಸಂಗತಿ. ಬಾಲ್ಯದಲ್ಲಿಯೇ ಮಾನವೀಯತೆ ಮತ್ತು ಮನುಷ್ಯತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯ ಬದುಕನ್ನು ಕಾಣುತ್ತದೆ ಎಂದು ಪಡುಬಿದ್ರಿಯ ಬಾಲಪ್ಪ ಗುರಿಕಾರ ನಟರಾಜ್ ಪಿ.ಎಸ್ ಹೇಳಿದರು. ಅವರು ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ನಡೆಸುವಂತಹ 187 ಜನ ಅನಾಥ ಹಿರಿಯರಿರುವ ಹೊಸ ಬೆಳಕು ಆಶ್ರಮಕ್ಕೆ ಭೇಟಿ ನೀಡಿ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿ, ಬೆಡ್ ಶಿಟ್ , ದಿಂಬು ಹಾಗು ವೀಲ್ ಚಯರ್ ಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಮುರುಡಿ ಗುರಿಕಾರ ಜಗದೀಶ್ ರಾವ್, ನಾರಾಯಣ್ ರಾವ್ ಮುದರಂಗಡಿ, ಮಲ್ಪೆ ಶಿಫ್ ಯಾರ್ಡ ಇಂಜಿನಿಯರ್ ಶಶಿಕಾಂತ್ ಕೋಟ್ಯಾನ್, ಓಂಕಾರ್ ಕಾಸ್ಟೂಮ್ ಪಾಲುದಾರ ಅರುಣ್ ಕುಮಾರ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವಾಧ್ಯಕ್ಷರಾದ ಗೀತಾ ಅರುಣ್, ಸಂತೋಷ್ ಪಡುಬಿದ್ರಿ, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್ , ದೀಕ್ಷಿತ್ ಅಮೀನ್, ಜಯ ಕುಂದರ್, ನಾಗಮ್ಮ ಹಿರಿಯಡ್ಕ, ಹೊಸ ಬೆಳಕು ಸಂಸ್ಥೆಯ ಮೇಲ್ವಿಚಾರಕಿ ತನುಲಾ ಉಪಸ್ಥಿತರಿದ್ದರು.
ಪಡುಬಿದ್ರಿ : ಸಾಯಿ ಆರ್ಕೆಡ್ ಆವರಣದಲ್ಲಿ ಆಟಿಯ ಕಷಾಯ, ಮೆಂತೆ ಗಂಜಿ ವಿತರಣೆ
Posted On: 04 Aug 2024, 08:50 AM
ಪಡುಬಿದ್ರಿ : ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿಯರುವ ಸಾಯಿ ಆರ್ಕೆಡ್ ಆವರಣದಲ್ಲಿ ತುಳು ಜಾನಪದ ಚಿಂತಕ, ಪ್ರಗತಿಪರ ಕೃಷಿಕರಾದ ಪಿ.ಕೆ ಸದಾನಂದ ಪಡುಬಿದ್ರಿಯವರ ನೇತೃತ್ವದಲ್ಲಿ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ನಡೆಯಿತು. ಈ ಸಂದರ್ಭ ಮಾತನಾಡಿದ ಪಿ.ಕೆ ಸದಾನಂದರವರು, ತುಳುನಾಡಿನ ಹಿರಿಯರ ಸಂಪ್ರದಾಯದಂತೆ ಆಟಿ ಕಷಾಯದ ಜೊತೆಗೆ ದೇಹಕ್ಕೆ ತಂಪನ್ನು ನೀಡಲು ಮೆಂತೆ ಗಂಜಿ ಸೇವನೆ ಮಾಡಲಾಗುತ್ತದೆ. ಇದು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡಿ ಕಾಯಿಲೆಯನ್ನು ದೂರ ಮಾಡಲು ಸಹಕಾರಿಯಾಗಿದೆ. ಇಂದಿನ ಯುವ ಜನಾಂಗಕ್ಕೆ ಹಾಳೆ ಮರ ಸೇರಿದಂತೆ ಆಯುರ್ವೇದೀಯ ಅಂಶದ ಗಿಡಮೂಲಿಕೆಗಳ ಬಗ್ಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಕಳೆದ 12 ವರ್ಷಗಳಿಂದ ಆಟಿ ಕಷಾಯ ಮತ್ತು ಮೆಂತೆ ಗಂಜಿಯನ್ನು ಸಾಮೂಹಿಕ ತಯಾರಿಯ ಜೊತೆಗೆ ಸಾರ್ವಜನಿಕ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಪಡುಬಿದ್ರಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಸಂತೋಷ್, ಪ್ರಾಣೇಶ್ ಹೆಜಮಾಡಿ, ಸಂತೋಷ್ ನಂಬಿಯಾರ್, ಕುಟ್ಟಿ ಪೂಜಾರಿ, ಚಿತ್ರಾಕ್ಷಿ ಕೆ ಕೋಟ್ಯಾನ್, ಸುಧಾಕರ್, ಪಂಚಾಯತ್ ಸದಸ್ಯರು, ಪಿ ಕೆ ಸದಾನಂದರವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಸುಮಾರು 250 ಕ್ಕೂ ಅಧಿಕ ಮಂದಿ ಆಟಿ ಕಷಾಯ ಮತ್ತು ಮೆಂತೆ ಗಂಜಿ ಸೇವಿಸಿದರು.
ಶಿರ್ವ : ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ - ವಲಯ ಮಟ್ಟದ ಬಾಲಕ, ಬಾಲಕಿಯರ ಕಬ್ಬಡ್ಡಿ ಪಂದ್ಯಾಟ
Posted On: 03 Aug 2024, 10:57 PM
ಶಿರ್ವ : ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟ ಶನಿವಾರದಂದು ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಪು ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ, ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕಿರಣ್ ಶೆಟ್ಟಿ, ಎಸ್.ವಿ.ಎಚ್ ಶಾಲೆ ಇನ್ನಂಜೆಯ ದೈಹಿಕ ಶಿಕ್ಷಕ ನವೀನ್ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ ಹಸನಬ್ಬ ಶೇಖ್, ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಉಪಾಧ್ಯಕ್ಷರಾದ ಉಮ್ಮರ್ ಇಸ್ಮಾಯಿಲ್, ಕಾರ್ಯದರ್ಶಿ ಮೊಹಮ್ಮದ್, ಖಜಾಂಚಿ ಪರ್ವೇಝ್ ಸಲೀಂ ಮತ್ತು ಮುಖ್ಯ ಶಿಕ್ಷಕಿ ಖೈರುನ್ನೀಸಾ ಉಪಸ್ಥಿತರಿದ್ದರು. ಸಹಶಿಕ್ಷಕಿ ಮುಮ್ತಾಜ್ ಬೇಗಂರವರು ಸ್ವಾಗತಿಸಿದರು. ಉಷಾ ಎಸ್. ನಿರೂಪಿಸಿದರು. ಅಂಬಿಕಾ ಎಸ್. ಪ್ರಭು ವಂದಿಸಿದರು.
ನಂದಿಕೂರು : ಬೀಳುವ ಹಂತದಲ್ಲಿದ್ದ ಮನೆಯ ಒಂಟಿ ಜೀವಕ್ಕೆ ಆಸರೆ ತೋರಿದ ಕಾಪು ತಹಶಿಲ್ದಾರ್
Posted On: 03 Aug 2024, 05:39 PM
ನಂದಿಕೂರು : ಕಾಪು ತಾಲ್ಲೂಕಿನ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ಗ್ರಾಮದಲ್ಲಿ ಆಗಲೋ ಈಗಲೋ ಬೀಳುವ ಹಂತದಲ್ಲಿದ್ದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕೃಷ್ಣಯ್ಯ ಆಚಾರ್ಯ (82ವರ್ಷ)ರನ್ನು ಕಾಪು ತಹಶಿಲ್ದಾರ್ ನೇತೃತ್ವದ ತಂಡ ಅವರ ಮನವೊಲಿಸಿ ಉದ್ಯಾವರದಲ್ಲಿರುವ ಹಿರಿಯ ನಾಗರಿಕರ ಕನಸಿನ ಮನೆಗೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಯ್ಯ ಆಚಾರ್ಯರು ವಾಸಿಸುತ್ತಿದ್ದ ಮನೆಯ ಒಂದು ಭಾಗದ ಮಣ್ಣಿನ ಗೋಡೆ ಭಾಗಶಃ ಹಾನಿಗೊಳಗಾಗಿತ್ತು. ಟರ್ಪಾಲಿನ ಆಸರೆಯಲ್ಲಿ, ಈ ರಣಮಳೆಗೆ ಬೀಳುವ ಹಂತದಲ್ಲಿತ್ತು. ಅವಿವಾಹಿತನಾಗಿದ್ದ ಅವರ ಒಬ್ಬ ತಂಗಿಯೂ ತೀರಿ ಹೋಗಿದ್ದರು. ವೃದ್ಧಾಪ್ಯ ವೇತನ, ಊರಿನವರ ಅಲ್ಪ ಸ್ವಲ್ಪದ ಸಹಾಯ, ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳ ಸಹಾಯದಿಂದ ಜೀವಿಸುತ್ತಾ ಇದ್ದರು. ಅಜ್ಜನ ಮನೆ ಸೆಂಟಿಮೆಂಟ್ : ಕೃಷ್ಣಯ್ಯರಿಗೆ ಮನೆ ಬಗ್ಗೆ ಬಹಳ ಪ್ರೀತಿ. ಬೀಳುವಂತಿದ್ದರೂ ಬೇರೆ ಕಡೆಗೆ ಹೋಗಲು ಒಪ್ಪಿರಲಿಲ್ಲ. ಪಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಊರವರು ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಬೇರೆಡೆಗೆ ಹೋಗಲು ಅಜ್ಜ ಒಪ್ಪಿರಲಿಲ್ಲ. ಅಧಿಕಾರಿಗಳು ಹಲವು ವರ್ಷಗಳಿಂದ ಪ್ರಯತ್ನ ಪಟ್ಟರೂ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕಳಿಸಲು ಸಾಧ್ಯವಾಗಿರಲಿಲ್ಲ. ಇಷ್ಟೆಲ್ಲ ವಿಷಯ ಮನಗಂಡ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರು ತಾವೇ ಸ್ವತಃ ಖುದ್ದಾಗಿ ಅಲ್ಲಿಗೆ ಬಂದು ಕೃಷ್ಣಯ್ಯ ಆಚಾರ್ಯರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ ಕೊನೆಗೆ ಉದ್ಯಾವರದ ವೃದ್ಧಾಶ್ರಮಕ್ಕೆ ಸೇರಿಸುವ ಪ್ರಯತ್ನ ಯಶಸ್ವಿಯಾಯಿತು. ಅಲ್ಲಿಯ ಸ್ವಚ್ಛವಾಗಿದ್ದ ಪರಿಸರ, ನಾಗರಿಕ ಸೌಲಭ್ಯಗಳು, ಇತರ ಸಮಾನ ವಯಸ್ಕರನ್ನು ಕಂಡು ಕೃಷ್ಣಯ್ಯರಿಗೂ ಮುಖದಲ್ಲಿ ನಗು ಮೂಡಿತು. ಇಂಥಹ ವ್ಯವಸ್ಥೆ ಮಾಡಿಕೊಟ್ಟ ತಹಶಿಲ್ದಾರ್ ಗೆ ಕೃಷ್ಣಯ್ಯರವರು ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ. ತಹಶಿಲ್ದಾರ್ ರವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಪಿಡಿಒ ಶಶಿಧರ್, ಸ್ಥಳೀಯರಾದ ಸತೀಶ್, ಸುರೇಶ್ ಮತ್ತು ಸತೀಶ್, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್ ಸಹಕರಿಸಿದ್ದರು.
ಕಾಪು - ಶಂಕರಪುರ - ಬಂಟಕಲ್ಲು ಕೂಡುವ ರಸ್ತೆ ಮಡುಂಬು : ಯುವಕರಿಂದಲೇ ದುರಸ್ತಿ ಕಾರ್ಯ
Posted On: 03 Aug 2024, 06:36 AM
ಕಾಪು : ತಾಲೂಕಿನ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡುಂಬು ಇಲ್ಲಿನ ಹೃದಯ ಭಾಗವಾಗಿ ಗುರುತಿಸಿಕೊಂಡಿರುವ ಬೆರ್ಮೊಟ್ಟು ಬಳಿಯ ಮಡುಂಬು ಮೂರು ರಸ್ತೆಯು ಕಳೆದ ಕೆಲವು ತಿಂಗಳಿನಿಂದ ಪೈಪ್ ಲೈನ್ ಗಾಗಿ ಗುಂಡಿ ತೋಡುವ ಭರದಲ್ಲಿ ಈ ಭಾಗದಲ್ಲಿ ಸಂಚರಿಸುವವರಿಗೆ ಅಪಾಯಕಾರಿ ತಿರುವಿನ ರಸ್ತೆಯಾಗಿ ಪರಿಣಮಿಸಿತ್ತು. ಮಳೆಗಾಲದಲ್ಲಿ ರಸ್ತೆಯ ಮೇಲಿನ ಮಣ್ಣು ಮತ್ತು ಹೊಂಡದಿಂದಾಗಿ ನೀರು ನಿಲ್ಲುತ್ತಿದ್ದು ಇದಕ್ಕಾಗಿ ಪಿ. ಡಬ್ಲ್ಯೂ.ಡಿ ಕಾಂಟ್ರಾಕ್ಟರ್, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಕಂಡು ಇಲ್ಲಿನ ಸ್ಥಳೀಯ ಯುವಕರ ತಂಡವೊಂದು ದುರಸ್ತಿ ಕಾರ್ಯವನ್ನು ಮಾಡಿದೆ. ಮಳೆಗಾಲ ಮುಗಿಯುವ ಮುನ್ನವೇ ಈ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಿರುವುದರಿಂದ ಈ ಭಾಗದಲ್ಲಿ ಚಲಿಸುವ ವಾಹನ ಸವಾರರಿಗೆ ಕೊಂಚ ಮಟ್ಟಿನ ಸಮಾಧಾನ ಉಂಟಾಗಿದೆ. ಪೈಪ್ ಲೈನ್ ಅಳವಡಿಸಿರುವವರು ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಬೇಕಾಗಿದ್ದು, ಅವರು ಇಲ್ಲದಿದ್ದಲ್ಲಿ ಪಿ. ಡಬ್ಲ್ಯೂ. ಡಿ ಗುತ್ತಿಗೆದಾರರು ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದ್ದು ಎಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದಾರೆ. ನಾವ್ಯಾರಿಗೂ ಕಾಯುವುದು ಬೇಡ ನಮ್ಮೂರಿನ ರಸ್ತೆಯ ದುರಸ್ತಿ ನಾವೇ ಮಾಡೋಣ ಎಂದು ಯುವಕರೇ ಫೀಲ್ಡಿಗೆ ಇಳಿದಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದಿರುವ ಅಲ್ಪ ಸ್ವಲ್ಪ ಕೆಲಸವನ್ನಾದರೂ ಮಾಡಲಿ ಎಂದು ಯುವಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಆಗಸ್ಟ್ 4 : ಪಡುಬಿದ್ರಿಯ ಸಾಯಿ ಆರ್ಕೆಡ್ ನಲ್ಲಿ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ; 10 ವರ್ಷಗಳ ಸ್ತುತ್ಯರ್ಹ ಸೇವೆ
Posted On: 02 Aug 2024, 08:55 PM
ಪಡುಬಿದ್ರಿ : ಸಾಯಿ ಆರ್ಕೆಡ್ ಪಡುಬಿದ್ರಿ ಇದರ ಆಶ್ರಯದಲ್ಲಿ ಆಗಸ್ಟ್ 4, ಆದಿತ್ಯವಾರ ಆಟಿ ಅಮಾವಾಸ್ಯೆಯಂದು ಪಡುಬಿದ್ರಿಯ ಮಾರ್ಕೆಟ್ ರಸ್ತೆಯಲ್ಲಿಯರುವ ಸಾಯಿ ಆರ್ಕೆಡ್ ನಲ್ಲಿ ಪೂರ್ವಾಹ್ನ 6 ಗಂಟೆಯಿಂದ 9 ಗಂಟೆಯವರೆಗೆ ತುಳು ಜಾನಪದ ವಿದ್ವಾಂಸರು, ಪ್ರಗತಿಪರ ಕೃಷಿಕರಾದ ಪಿ.ಕೆ ಸದಾನಂದ ಪಡುಬಿದ್ರಿಯವರ ನೇತೃತ್ವದಲ್ಲಿ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ನಡೆಯಲಿದೆ. ಕಳೆದ 10 ವರ್ಷಗಳಿಂದ ಆಟಿ ಅಮಾವಾಸ್ಯೆಯ ದಿನದಂದು ಕಷಾಯ ಹಾಗೂ ಮೆಂತೆ ಗಂಜಿಯನ್ನು ಸಾರ್ವಜನಿಕರಿಗೆ ಯಾವ ಫಲಾಪೇಕ್ಷೆ ಇಲ್ಲದೆ ನಿರಂತರವಾಗಿ ವಿತರಿಸುತ್ತಿರುವ ಇವರ ಕಾರ್ಯ ಸ್ತುತ್ಯರ್ಹವಾಗಿದೆ.
ಕಾಪು : ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ
Posted On: 02 Aug 2024, 08:31 PM
ಕಾಪು : ತಾಲೂಕಿನ ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಲಾರ್ವಾ ಉತ್ಪತ್ತಿಯಾಗಿದೆಯೇ ಎಂದು ತಹಶಿಲ್ದಾರ್ ನೇತೃತ್ವದಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಪರಿಶೀಲಿಸಿ ಜಾಗೃತಿ ಉಂಟು ಮಾಡಲಾಯಿತು. ಸೊಳ್ಳೆ ಕಚ್ಚದ ಹಾಗೆ ನೋಡಿಕೊಳ್ಳಬೇಕು. ಯಾವುದೇ ಜ್ವರಕ್ಕೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಡಾಕ್ಟರ್ ರವರ ಸಲಹೆ ಪಡೆಯಬೇಕು. ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತದೆ. ಅದನ್ನು ನಿಯಂತ್ರಿಸಬೇಕು. ಸ್ವಚ್ಚತೆ ಕಾಪಾಡಬೇಕು ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಕರೆ ನೀಡಿದರು. ಲಯನ್ಸ್ ಕ್ಲಬ್ ಕೊಡುಗೆ ನೀಡಿದ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಸೀನಿಯರ್ ಹೆಲ್ತ್ ಆಫೀಸರ್ ಬಸವರಾಜ್, ಮೆಡಿಕಲ್ ಆಫೀಸರ್ ಶೈನಿ, ಪಂಚಾಯತಿ ಅದ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಆಗಸ್ಟ್ 4 : ಕಾಪುವಿನಲ್ಲಿ ಹಾಲೆ ಮರದ ತೊಗಟೆ ಕಷಾಯ ವಿತರಣೆ
Posted On: 02 Aug 2024, 06:59 PM
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಆಗಸ್ಟ್ 4 ರಂದು ಆಟಿ ಅಮವಾಸ್ಯೆ ಪ್ರಯುಕ್ತ ಕಾಪು ತೃಪ್ತಿ ಹೊಟೇಲ್ ಮುಂಭಾಗದಲ್ಲಿ ಬೆಳಿಗ್ಗೆ 6.30 ರಿಂದ 8.30 ರವರೆಗೆ ಉಚಿತವಾಗಿ ಹಾಲೆ ಮರದ ತೊಗಟೆ ಕಷಾಯ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯು ತಿಳಿಸಿದೆ.
