Updated News From Kaup

ಪಡುಬಿದ್ರಿ : ಅದಾನಿ‌ ಫೌಂಡೇಶನ್ ವತಿಯಿಂದ ರೂ.60 ಲಕ್ಷ ಮೌಲ್ಯದ ಶಿಕ್ಷಣ ಪರಿಕರಗಳ ವಿತರಣೆ

Thumbnail
Posted On: 02 Aug 2024, 04:56 PM

ಪಡುಬಿದ್ರಿ : ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಸ್ಥಾವರದ ಆಸುಪಾಸಿನ ಕನ್ನಡ ಮಾಧ್ಯಮದ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಎಸ್ ಆರ್ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ರೂ. 60 ಲಕ್ಷ ಮೊತ್ತದ ಶಿಕ್ಷಣ ಪರಿಕರಗಳನ್ನು 76 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 6,800 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ಅದಾನಿ ಫೌಂಡೇಷನ್ ಅಧ್ಯಕ್ಷರಾದ ಕಿಶೋರ್ ಆಳ್ವ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಅದಾನಿ ಸಂಸ್ಥೆಯ ವತಿಯಿಂದ ಸ್ಥಾವರದ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ಪರಿಕರ ವಿತರಿಸಿ ಮಾತನಾಡಿದರು. ಪ್ರತಿ ವಾರ್ಷಿಕ ಸಾಲಿನ ಅದಾನಿ ಸಿಎಸ್‌ಆರ್ ಅನುದಾನದಲ್ಲಿ ಶೇ. 20ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಯೋಜಿಸುತ್ತಿದೆ. ಅದಾನಿ ಸಂಸ್ಥೆಯು ಕರಾವಳಿ ಪ್ರದೇಶದಲ್ಲಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಜೊತೆಗೆ ಮಂಗಳೂರಿನ ವಿಮಾನ ನಿಲ್ದಾಣ, ಗ್ಯಾಸ್ ಪೈಪ್‌ಲೈನ್ ಯೋಜನೆ, ಸಿಮೆಂಟ್ ಕೈಗಾರಿಕಾ ಘಟಕದ ವಿಸ್ತರಣೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ಹಾಗೂ ಅನೇಕ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ ಅದಾನಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಸುಮಾರು ಒಂದು ದಶಕದಿಂದ ಹಲವಾರು ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ನೆರೆ ಗ್ರಾಮಗಳಲ್ಲಿ ಹಮ್ಮಿಕೊಂಡು ಬರುತ್ತಿದ್ದು ಪಂಚಾಯತ್ ಹಾಗೂ ಗ್ರಾಮಸ್ಥರ ವಿಶ್ವಾಸವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಕಾಪು ತಾಲೂಕಿನ ಯುವಜನ ಕ್ರೀಡಾಧಿಕಾರಿಯಾದ ರಿತೇಶ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾರವರು ಮಾತನಾಡಿದರು. ವೇದಿಕೆಯಲ್ಲಿ ಸ್ಥಾವರದ ಆಸುಪಾಸಿನ ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಅದಾನಿ ಫೌಂಡೇಶನ್ ಸಂಸ್ಥೆಯ ಅನುದೀಪ್, ಧೀರಜ್, ಶುಭಮಂಗಳ ಉಪಸ್ಥಿತರಿದ್ದರು. ಅದಾನಿ ಸಮೂಹದ ಅಸೋಸಿಯೇಟ್ ಜನರಲ್ ಮ್ಯಾನೇಜರ್ ರವಿ ಆರ್. ಜೇರೆ ಸ್ವಾಗತಿಸಿದರು. ಶಿಕ್ಷಕ ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪಡುಕುತ್ಯಾರು : ಆನೆಗುಂದಿ ಶ್ರೀಗಳವರ ಜನ್ಮ ವರ್ಧಂತ್ಯುತ್ಸವ ; ವಿವಿಧ ಧಾರ್ಮಿಕ ಕಾರ್ಯಕ್ರಮ

Thumbnail
Posted On: 02 Aug 2024, 09:14 AM

ಪಡುಕುತ್ಯಾರು : ಬದುಕಿನಲ್ಲಿ ಸಂತಸ ಕಾಣಲು ಹುಟ್ಟು ಸಾವಿನ ನಡುವಿನ ನಮ್ಮ ಜೀವನದ ಅವಧಿಯಲ್ಲಿ ಭಗವಂತನ ಅನುಗ್ರಹದೊಂದಿಗೆ ಸನ್ನಡತೆ, ಸತ್ಕಾರ್ಯ,ಉತ್ತಮ ನುಡಿಯ ಮೂಲಕ ಬದುಕಿನಲ್ಲಿ ಸ್ವರ್ಗವನ್ನು ಕಾಣಲು ಸಾಧ್ಯ. ನಮ್ಮಿಂದ ಇನ್ನೊಬ್ಬರ ಬದುಕಿನಲ್ಲಿ ಸಂತಸ ಮೂಡಿದರೆ ಅದುವೇ ಬದುಕಿನ ಅತ್ಯಂತ ಸುಂದರ ಸಂತಸದ ಕ್ಷಣಗಳು ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಹೇಳಿದರು. ಅವರು ಪಡುಕುತ್ಯಾರಿನಲ್ಲಿ ಗುರುವಾರ ನಡೆದ ತಮ್ಮ 20ನೇ ಚಾತುರ್ಮಾಸ್ಯದ ಅಂಗವಾಗಿ ಜನ್ಮವರ್ಧಂತ್ಯುತ್ಸವ ಧರ್ಮ ಸಂಸತ್‌ನಲ್ಲಿ ಆಶೀರ್ವಚನ ನೀಡಿದರು. ಜ್ಞಾನದ ಹರಿವು ಹರಿದಷ್ಟು ಸಮಾಜದ ಜನರಲ್ಲಿ ಅರಿವಿನ ಜಾಗೃತಿ ಹೆಚ್ಚುತ್ತದೆ. ಶಾಸ್ತ್ರರಹಿತವಾದ ಶಿಲ್ಪವು ಕೇವಲ ಕೂಲಿ ಕೆಲಸವಾಗುತ್ತದೆ ಶಾಸ್ತ್ರಸಹಿತವಾದ ಅಧ್ಯಯನದ ಮೂಲಕ ಮಾತ್ರವೇ ಅದು ಶಿಲ್ಪವಾಗುತ್ತದೆ ಅದರ ನಿರ್ಮಾತೃ ಶಿಲ್ಪಿ ಎನಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪಡುಕುತ್ಯಾರಿನ ಮಹಾಸಂಸಂಸ್ಥಾನದಲ್ಲಿ ಶಾಸ್ತ್ರ ಸಹಿತವಾದ ಶಿಲ್ಪ ಕಲೆಯ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಪಂಚ ಶಿಲ್ಪದ, ವಾಸ್ತು ಶಿಲ್ಪವನ್ನು ಕಲಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ನುಡಿದರು. ವಿಶೇಷ ಉಪನ್ಯಾಸ ನೀಡಿದ ಮಹಾಸಂಸ್ಥಾನ ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್ ಅವರು ದೇಶ, ದೇಶದ ಭವಿಷ್ಯ, ಜನತೆ ಮತ್ತು ಸಮಾಜದ ಹಿತಕ್ಕಾಗಿ ನಿರಂತರ ಕ್ರಿಯಾಶೀಲ ಚಟುವಟಿಕೆ ನಿರತರಾಗಿರುವ ಕಾಳಹಸ್ತೇಂದ್ರ ಶ್ರೀಗಳು ಸಮಾಜದ ಅಭ್ಯದಯಕ್ಕಾಗಿ ನಡೆಸುತ್ತಿರುವ ಸೇವಾ ಕಾರ್ಯಗಳು ಸರ್ವರಿಗೂ ಅನುಕರಣೀಯವಾಗುವಂತದ್ದಾಗಿದೆ. ಅಂತಹ ಯತಿಗಳನ್ನು ಗೌವಿಸಬೇಕಾಗಿರುವುದು ನಮ್ಮ ಕರ್ತವ್ಯ ಅವರ ವರ್ದಂತಿಯು ನಮ್ಮ ವರ್ದಂತಿಯಂತೆ ಆಚರಿಸಬೇಕು ವಿಶ್ವಕರ್ಮ ಸಮಾಜದ ಜನರು ಶಿಲ್ಪ ಮತ್ತು ಬ್ರಾಹ್ಮಣ್ಯ ಎರಡು ಅತ್ಯಂತ ಪ್ರಮುಖವಾದುವು. ಕಾಷ್ಠ ಶಿಲ್ಪ ಸಹಿತವಾಗಿ ತಮ್ಮ ಕುಲಕಸುಬುಗಳನ್ನು ಉಳಿಸಿ, ಬೆಳೆಸಿ ಕೊಂಡು ಬರುವುದರ ಜತೆಗೆ ಸಮಾಜಕ್ಕಾಗಿ, ಸಮಾಜದ ಹಿತಕ್ಕಾಗಿಯೂ ಯೋಚನೆ, ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶ್ರೀಗಳ ಸಂಕಲ್ಪದ ಸಾಕಾರಕ್ಕೆ ಕೈ ಜೋಡಿಸಬೇಕು ಎಂದರು. ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಮಾತನಾಡಿ, ನದಿಗಳು ಹರಿದು ಸಮುದ್ರವನ್ನು ಸೇರುವಂತೆ ನಾವೆಲ್ಲರೂ ನಡೆಸುವ ಧಾರ್ಮಿಕ ಕ್ರೀಯಾ ಕರ್ಮಗಳು ನಾಂ ರೂಪವನ್ನು ಬಿಟ್ಟು ಗುರು ಅನುಗ್ರಹದಿಂದ ಭಗವಂತನಲ್ಲಿಯೇ ಸೇರುತ್ತದೆ. ಒಂದೇ ಉದ್ದೇಶದಿಂದ, ಒಂದೇ ಮನಸ್ಸಿನಿಂದ ಎಲ್ಲರೂ ಒಂದು ಕಡೆ ಸೇರಿಕೊಂಡು ನಡೆಸುವ ಸಂಸತ್ತು ಆನೆಗುಂದಿಶ್ರೀಗಳವರ ಸಾನಿಧ್ಯದಿಂದ ಧರ್ಮ ಸಂಸತ್ತಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಸನ್ಯಾಸ ಎನ್ನುವುದು ಶಿಷ್ಟಾಚಾರ ಪಾಲನೆಯ ಸಂಕೇತವಾಗಿದೆ. ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬಂದು, ಧರ್ಮ ರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸನ್ಯಾಸವನ್ನು ಸರ್ವರೂ ಗೌರವಿಸುತ್ತಾರೆ ಎಂದು ಹೇಳಿದರು. ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ದಿನೇಶ್ ಆಚಾರ್ಯ ಪಡುಬಿದ್ರಿ ಆನೆಗುಂದಿ, ಮುರಹರಿ ಆಚಾರ್ಯ ಉಡುಪಿ ಕಟಪಾಡಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಚಂದ್ರಯ್ಯ ಆಚಾರ್ಯ ಕಳಿ ಉಪ್ರಳ್ಳಿ, ಗಜಾನನ ಎನ್ ಆಚಾರ್ಯ ನೀರಕಂಠ ಭಟ್ಕಳ, ಕೆ. ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಬಂಗ್ರಮಂಜೇಶ್ವರ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಮಧೂರು, ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್, ಜಗದೀಶ್ ಆಚಾರ್ಯ ಪಡುಪಣಂಬೂರು, ಶಂಕರ ಬಲವಂತರಾವ್ ಅಥಣಿ, ಪುರೋಹಿತ್ ಜಯಕರ ಆಚಾರ್ಯ ಮೂಡುಬಿದಿರೆ, ಜನಾರ್ಧನ ಆಚಾರ್ಯ ಅರಿಕ್ಕಾಡಿ, ಮೋಹನ್ ಕುಮಾರ್ ಬೆಳ್ಳೂರು, ಗಣೇಶ್ ಆಚಾರ್ಯ ಕೆಮ್ಮಣ್ಣು, ದಿನೇಶ್ ಆಚಾರ್ಯ ಕಿನ್ನಿಗೋಳಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ವಿದ್ವಾನ್ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು ಉಪಸ್ಥಿತರಿದ್ದರು. ಐ ಲೋಲಾಕ್ಷ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರ್ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ವಂದಿಸಿದರು. ಗೀತಾಚಂದ್ರ ಆಚಾರ್ಯ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಶ್ರೀಗಳ ಜನ್ಮವರ್ಧಂತಿ ಅಂಗವಾಗಿ ಶ್ರೀ ಗಣೇಶ ಅಥರ್ವಶಿರ್ಷ ಹೋಮ, ಪೂರ್ಣಮಾನ ನವಗ್ರಹ ಹೋಮ, ಶತರುದ್ರ ಯಾಗ, ಮಹಾಮೃತ್ಯುಂಜಯ ಹೋಮ, ಶ್ರೀ ಧನ್ವಂತರೀ ಹೋಮ, ಶ್ರೀ ಮಹಾ ಸರಸ್ವತೀ ಯಜ್ಞ ವೈದಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಶಿಷ್ಯವೃಂದದವರಿಂದ ಜಗದ್ಗುರುಗಳವರ ತುಲಾಭಾರ ಸೇವೆ ಗುರುಪಾದುಕಾ ಪೂಜೆ ನೆರವೇರಿತು

ಶಿರ್ವ : ಆಶಾಲತ ಮೂಲ್ಯರಿಗೆ ಬೇಕಿದೆ ಸಹೃದಯಿ ಬಂಧುಗಳ ನೆರವು

Thumbnail
Posted On: 02 Aug 2024, 08:55 AM

ಕಾಪು : ತಾಲೂಕಿನ ಶಿರ್ವ ಸಮೀಪದ ಆಶಾಲತ ಮೂಲ್ಯ ಇವರಿಗೆ 6 ವರ್ಷದ ಹಿಂದೆ ಕ್ಯಾನ್ಸರ್ ಆಗಿದ್ದು, ಇದೀಗ ಚೇತರಿಸಿ ಮತ್ತೆ ಅಲ್ಸರ್ ಸಮಸ್ಯೆ ಇದ್ದು ಒಂದು ಹೆಣ್ಣು ಮಗಳ ವಿದ್ಯಾಭ್ಯಾಸದ ಚಿಂತೆಯಾದರೆ, ಇತ್ತ ಪತಿಯ ಆಸರೆಯನ್ನು ಕಳೆದುಕೊಂಡ ಇವರಿಗೆ ತಿಂಗಳ ಚಿಕಿತ್ಸೆಗಾಗಿ ಹಣವಿಲ್ಲದೆ ಸಂಕಷ್ಟದಲ್ಲಿದ್ದು ನೆರವಿನ ನಿರೀಕ್ಷೆಯಲ್ಲಿದ್ದಾರೆ. Bank details : Ashalatha Canara bank Shirva branch. A/c numberr :O14522OOO94784 Ifsc code :CNRB0010145. Contact :96110 04077.

ಕುಲಾಲ ಸಮಾಜ ಸೇವಾ ಸಂಘ ಬೆಳಪು : ವಾರ್ಷಿಕ ಮಹಾಸಭೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Thumbnail
Posted On: 02 Aug 2024, 08:51 AM

ಕಾಪು : ತಾಲೂಕಿನ ಕುಲಾಲ ಸಮಾಜ ಸೇವಾ ಸಂಘ ಬೆಳಪು ಇದರ ಮಹಾಸಭೆಯು ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ ಪಣಿಯೂರು ಇದರ ಸಭಾಂಗಣದಲ್ಲಿ ಜರಗಿತು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕುಲಾಲ ಸಮಾಜದ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನದ ವ್ಯವಸ್ಥೆ ಜೊತೆಗೆ ಬೆಳಪು ಭಾಗದಲ್ಲಿ ಆಗುವ ಕಾರ್ಖಾನೆಯಲ್ಲಿ ಕುಲಾಲ ಸಮುದಾಯದವರಿಗೆ ಉದ್ಯೋಗ ಕಲ್ಪಿಸಿ ಕೊಡುವುದಾಗಿ ಹೇಳಿದರು. ಈ ಸಂದರ್ಭ ಕುಲಾಲ ಸಮುದಾಯದ ಬಾಲ ಪ್ರತಿಭೆ ಮನಸ್ವಿ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಸುಧಾಕರ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ರಾದ ಕುಟ್ಟಿ ಮೂಲ್ಯ, ಉಪಾಧ್ಯಕ್ಷ ಪ್ರಕಾಶ್ ಕುಲಾಲ್, ಸಂದೀಪ್ ಮೂಲ್ಯ, ಗೀತಾ ವೈ, ಉಮೇಶ್ ಕುಲಾಲ್, ಜನಾರ್ದನ್ ಕುಲಾಲ್, ನಿತೇಶ್ ಕುಲಾಲ್ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಹರೀಶ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಮಲ್ಲಿಕಾ ಉಮೇಶ್ ಮಹಿಳಾ ಘಟಕದ ವರದಿ ಮಂಡಿಸಿದರು. ಸುಜಯ ಕುಲಾಲ್ ಸ್ವಾಗತಿಸಿದರು. ಸತೀಶ್ ಕುಲಾಲ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ಕುಲಾಲ್ ವಂದಿಸಿದರು.

ಕಾಪು : ಸ್ವತಃ ಫೀಲ್ಡಿಗಿಳಿದ ಸಾಹಸಿ ತಹಶಿಲ್ದಾರ್ ಡಾ. ಪ್ರತಿಭಾ ಆರ್.

Thumbnail
Posted On: 01 Aug 2024, 08:39 PM

ಕಾಪು : ಸಾಮಾನ್ಯವಾಗಿ ಅಧಿಕಾರಿಗಳೆಂದರೆ ಭರವಸೆಯ ಮಾತುಗಳಿಗೆ ಸೀಮಿತ ಎಂಬ ಅಪವಾದವಿದೆ. ಆದರೆ ಇಲ್ಲೊಬ್ಬರು ಮಹಿಳಾ ಅಧಿಕಾರಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರೇ ಕಾಪು ತಾಲ್ಲೂಕಿನ ‌ತಹಶಿಲ್ದಾರ್ ಡಾ. ಪ್ರತಿಭಾ ಆರ್. ಬುಧವಾರ ಸುರಿದ ಭಾರೀ ಮಳೆಯಿಂದಾಗಿ ನೆರೆ ಉಂಟಾಗಿ ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಸುರಿತಯುವ ಮಳೆಯನ್ನೂ ಲೆಕ್ಕಿಸದೆ ತಾವೇ ಸ್ವತಃ ಫೀಲ್ಡಿಗಿಳಿದು ನೆರೆ ಪ್ರದೇಶಕ್ಕೆ ಧಾವಿಸಿ ಬೋಟ್ ನ ಮೂಲಕ ನೆರೆಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದರು. ಸಂತ್ರಸ್ತರ ಮನ ಒಲಿಸಿ ಕರೆತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ತಹಶಿಲ್ದಾರ್ ಪ್ರತಿಭಾ ಯಶಸ್ವಿಯಾಗಿದ್ದಾರೆ. ಹಲವು ಕುಟುಂಬಗಳ ಸ್ಥಳಾಂತರ : ಕಾಪು ತಾಲೂಕು ಫಲಿಮಾರು ಗ್ರಾಮದ ಕೊಪ್ಪಳ ಎಂಬಲ್ಲಿ ಗೋಪಾಲರವರ ಮನೆಯ ಒಟ್ಟು ಐದು ಸದಸ್ಯರನ್ನು, ಯೇಣಗುಡ್ಡೆಯ ಫಾರೆಸ್ಟ್ ಗೇಟ್ ಬಳಿಯ ನಾಗಿ ಎಂಬುವವರ ಮನೆಯ 5 ಜನರನ್ನು, ಪಂಜಿಮಾರು ಪ್ರದೇಶದ ಹಿಲ್ಡಾ ರೋಡ್ರಿಗಸ್ ರವರ ಕುಟುಂಬದ ಇಬ್ಬರು ಸದಸ್ಯರು, ಶಿರ್ವದ ಮಾರಿಗುಡಿ ಸೇತುವೆ ಬಳಿಯ ಜಯಶ್ರೀಯವರ ಕುಟುಂಬದ ಮೂರು ಮಂದಿ, ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿ ಸದಸ್ಯರನ್ನು ಸ್ಥಳಾಂತರಿಸಲಾಯಿತು. ಈ ಸಂದರ್ಭ ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಹೋಮ್ ಗಾಡ್೯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಸಹಕರಿಸಿದರು. ಚಾಲೆಂಜಿಂಗ್ ಟಾಸ್ಕ್ : ಅಪರಿಚಿತ ಪ್ರದೇಶದಲ್ಲಿ ಬೋಟ್ ನಲ್ಲಿ ತೆರಳುವುದು ಅಷ್ಟು ಸುರಕ್ಷಿತವಲ್ಲ. ಆಳ-ಅಗಲ ತಿಳಿದಿರುವುದಿಲ್ಲ. ಆದರೂ ರಿಸ್ಕ್ ತೆಗೆದುಕೊಂಡು ಈ ಕಾರ್ಯವನ್ನು ಮಾಡಿದ್ದೇವೆ. ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಾನು ಮತ್ತು ನಮ್ಮ ರಕ್ಷಣಾ ತಂಡ ತೊಡಗಿದೆ. ಸಂತ್ರಸ್ತರ ರಕ್ಷಣೆಯೊಂದೇ ನಮ್ಮ ಗುರಿ. ನೆರೆ ಸಂಕಷ್ಟ ಎದುರಾದಲ್ಲಿ ಯಾವುದೇ ಸಂದರ್ಭದಲ್ಲಿ ತಹಶಿಲ್ದಾರ್ ಕಚೇರಿಯ ಕಂಟ್ರೋಲ್ ರೂಂ ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಕಾಪು ತಾಲ್ಲೂಕು ಆಡಳಿತ ನೆರೆ ಸಂರಕ್ಷಣೆಗೆ ಸದಾ ಸನ್ನದ್ಧವಾಗಿದೆ - ತಹಶಿಲ್ದಾರ್ ಪ್ರತಿಭಾ ಆರ್.

ಕಟಪಾಡಿ - ಏಣಗುಡ್ಡೆ : ಎಂಟು ಮನೆಗಳು ಜಲಾವೃತ ; ತಹಶಿಲ್ದಾರ್ ಭೇಟಿ

Thumbnail
Posted On: 01 Aug 2024, 08:15 PM

ಕಟಪಾಡಿ : ಇಲ್ಲಿನ ಏಣಗುಡ್ಡೆ ಗ್ರಾಮದಲ್ಲಿ ಜಲಾವೃತಗೊಂಡ ಎಂಟು ಮನೆಗಳಿಗೆ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಭೇಟಿ ನೀಡಿ, ಸಾಂತ್ವನ ಹೇಳಿದರು. ನಾಗಿ ಮುಕ್ಕಾರ್ತಿಯವರ ಮನೆ ಪೂರ್ಣ ಜಲಾವೃತವಾಗಿದೆ. ಈ ಸಂದರ್ಭ ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ಡೇನಿಯಲ್, ಗೃಹರಕ್ಷಕ ದಳದ ಸಿಬ್ಬಂದಿ ಕುಮಾರ್ ಉಪಸ್ಥಿತರಿದ್ದರು.

ಕಾಪು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನ - ವ್ಯಸನ‌ ಮುಕ್ತ ದಿನಾಚರಣೆ

Thumbnail
Posted On: 01 Aug 2024, 07:54 PM

ಕಾಪು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ವ್ಯಸನ‌ ಮುಕ್ತ ದಿನಾಚರಣೆಯಾಗಿ ಕಾಪು ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಡಾ. ಪ್ರತಿಭಾ ಆರ್ ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು, ಅವರ ಬದುಕೇ ನಮಗೆ ಪ್ರೇರಣೆ . ನಿರಂತರ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್‌ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು. ಡಿ ಡಿ ಎಲ್ ಆರ್ ರವೀಂದ್ರ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿದರು. ಈ ಸಂದರ್ಭ ವ್ಯಸನದಿಂದ ದೂರ ಇರುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ಸಂದರ್ಭ ಡಿ ಡಿ ಎಲ್ ಆರ್ ರವೀಂದ್ರ, ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಉಪ ತಹಶಿಲ್ದಾರ್ ಗಳಾದ ದೇವಕಿ, ರವಿಕಿರಣ್, ಅಶೋಕ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ತಾಲ್ಲೂಕು ಆಡಳಿತ ಸೌಧದ ಸಿಬ್ಬಂದಿ ಉಪಸ್ಥಿತರಿದ್ದರು. ಉಪ ತಹಶಿಲ್ದಾರ್ ದೇವಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಂಟಕಲ್ಲು ಬಸ್ ನಿಲ್ದಾಣದಲ್ಲಿ ಕಸಾಪ "ಮನೆಯೇ ಗ್ರಂಥಾಲಯ" ಅಭಿಯಾನ

Thumbnail
Posted On: 01 Aug 2024, 07:42 PM

ಬಂಟಕಲ್ಲು : ನಾಗರಿಕ ಸಮಿತಿ ಬಂಟಕಲ್ಲು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ ಬಂಟಕಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಅವರಿಗೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಉಡುಪಿ ತಾಲೂಕಿನಲ್ಲಿ ಈಗಾಗಲೇ 65 ಗ್ರಂಥಾಲಯಗಳು ಮನೆ, ಅಂಗಡಿ, ಆಸ್ಪತ್ರೆ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣಗೊಂಡಿದೆ. 100 ದಿನಗಳಲ್ಲಿ ನೂರು ಗ್ರಂಥಾಲಯ ನಿರ್ಮಾಣಗೊಳ್ಳುವ ಆಶಯವನ್ನು ಹೊಂದಿದ್ದು, ಕಸಾಪ ಕಾಪು ತಾಲೂಕು ಘಟಕ ಈ ಅಭಿಯಾನ ದಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ ಆಚಾರ್ಯ, ಸದಸ್ಯರಾದ ವೈಲೆಟ್ ಕಾಸ್ತಲಿನೂ, ಉಮೇಶ್ ರಾವ್, ಡೆನೀಸ್ ಡಿ ಸೋಜ, ವಿನ್ಸಂಟ್ ಕಾಸ್ತಲಿನೂ, ಅಶೋಕ, ಹರೀಶ್, ವಿರೇಂದ್ರ ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್, ಸುನೀಲ್, ಕಸಾಪ ಉಡುಪಿ ತಾಲೂಕು ಕಾಯ೯ದಶಿ೯ಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಮನೆಯೇ ಗ್ರಂಥಾಲಯ ಇದರ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ದೀಪಾ ಚಂದ್ರಕಾಂತ್ ಉಪಸ್ಥಿತರಿದ್ದರು.

ನಾಳೆ (ಆಗಸ್ಟ್ 2) : ಮಳೆ ಹಿನ್ನೆಲೆ - ಉಡುಪಿ ಜಿಲ್ಲೆಯ ಪಿಯುಸಿವರೆಗಿನ ಮಕ್ಕಳಿಗೆ ರಜೆ

Thumbnail
Posted On: 01 Aug 2024, 07:17 PM

ಉಡುಪಿ : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಗಸ್ಟ್ 2ರಂದು (ನಾಳೆ) ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.

ಇಂದು (ಆಗಸ್ಟ್ 1) ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ

Thumbnail
Posted On: 01 Aug 2024, 12:55 PM

ಪಡುಬಿದ್ರಿ : ಕಾನನದ ನಡುವಿನ ದೈವಿಕ ತಾಣ, ಮರಳೇ ಪ್ರಸಾದವಾಗಿ ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರೂ ನೆಲದ ಮೇಲೆಯೇ ಕುಳಿತುಕೊಂಡು ಭಕ್ತಿ ಪರವಶವಾಗುವ ಕ್ಷೇತ್ರವೇ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನ. ಎರಡು ವರ್ಷಕ್ಕೊಮ್ಮೆ ನಡೆಯುವ ಢಕ್ಕೆಬಲಿ ಸೇವೆ ವಿಶೇಷವಾಗಿದೆ. ಶ್ರೀ ಕ್ಷೇತ್ರದಲ್ಲಿ ಭಕ್ತ ಜನರು ಪಂಚಾಮೃತ ಸೇವೆ, ಹಗಲು ತಂಬಿಲ,ರಾತ್ರಿ ತಂಬಿಲ ಸೇವೆ ಸಲ್ಲಿಸಲು ಅವಕಾಶವಿದೆ. ಕರ್ಕಾಟಕ (ಆಟಿ) ಮಾಸದಲ್ಲಿ ಈ ಸೇವೆಗಳು ನಡೆಯದಿದ್ದರೂ, ಈ ತಿಂಗಳ 16 ನೇ ದಿನದಂದು ನಡೆಯುವ ಅಜಕಾಯಿ ಸೇವೆ ಪ್ರಮುಖವಾಗಿದೆ. ಅಜಕಾಯಿ ಸೇವೆಯ ಮುನ್ನ ಕ್ಷೇತ್ರದಲ್ಲಿಯ ಮರಳನ್ನು ಬದಲಾಯಿಸಲಾಗುತ್ತದೆ. ಕ್ಷೇತ್ರದ ದೇವರ ಸೇವಕರು ಸಮುದ್ರದೆಡೆಗೆ ಸಾಗಿ ಅಲ್ಲಿ ಮಿಂದು, ಸೊಂಟಮಟ್ಟದ ಸಮುದ್ರದ ನೀರಿನಿಂದ ತೆಗೆಯಲಾಗುವ ಮರಳನ್ನು ಶ್ರೀ ಖಡೇಶ್ವರೀ ಬ್ರಹ್ಮಸ್ಥಾನಕ್ಕೆ ತಂದು ಸಾನಿಧ್ಯದಲ್ಲಿ ಹರಡುತ್ತಾರೆ. ನಂತರ ನಾಗ ದೇವರಿಗೆ ಎಳನೀರಿನ ಅಭಿಷೇಕ, ಅಲಂಕಾರ ನಡೆಯುತ್ತದೆ. ನಂತರ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ದೇವರಲ್ಲಿ ಪ್ರಾರ್ಥಿಸಿ ತೆಂಗಿನಕಾಯಿಯನ್ನು ಸಮರ್ಪಿಸಿದ ಬಳಿಕ ಭಕ್ತ ಜನರಿಂದ ಬಂದ ಸಾವಿರಾರು ಕಾಯಿಗಳನ್ನು ಅಜಕಾಯಿ ಕಲ್ಲಿಗೆ ಕ್ಷೇತ್ರದ ಪಾತ್ರಿಗಳು ಒಡೆಯುತ್ತಾರೆ. ನಂತರ ಭಕ್ತರಿಗೆ ಪ್ರಸಾದ ರೂಪವಾಗಿ‌ ಹಂಚಲಾಗುತ್ತದೆ. ಈ ದಿನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಯ ಭಕ್ತರು ಸುಮಾರು 10 ಸಾವಿರಕ್ಕೂ ಅಧಿಕ ತೆಂಗಿನಕಾಯಿ, ಎಳನೀರು ಸಮರ್ಪಿಸುತ್ತಾರೆ.