Updated News From Kaup
ನವೆಂಬರ್ 26 : ಶ್ರೀ ಧೂಮಾವತಿ ದೈವಸ್ಥಾನ ಅವರಾಲು ಮಟ್ಟು ಇದರ 6ನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವ

Posted On: 21-11-2023 02:37PM
ಪಲಿಮಾರು : ಶ್ರೀ ಧೂಮಾವತಿ ದೈವಸ್ಥಾನ ಅವರಾಲು ಮಟ್ಟು ಇದರ 6ನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವವು ನವೆಂಬರ್ 26, ಆದಿತ್ಯವಾರ ಜರಗಲಿದೆ.
ಅವರಾಲು ಕಂಕಣಗುತ್ತು ಗುತ್ತಿನಾರ್ ಕೃಷ್ಣ ಶೆಟ್ಟಿ ಜ್ಯೋತಿ ಬೆಳಗಿಸುವ ಮೂಲಕ ಭಜನಾ ಮಂಗಲೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ ಗಂಟೆ 8:30ಕ್ಕೆ ಭಜನಾ ಕಾರ್ಯಕ್ರಮ ಆರಂಭವಾಗಲಿದ್ದು ಮಧ್ಯಾಹ್ನ 12.30 ಕ್ಕೆ ಧೂಮಾವತಿ ಪರಿವಾರ ದೈವಗಳಿಗೆ ಹೋಮ, ಪಂಚಕಜ್ಜಾಯ ಸೇವೆ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಿರ್ಗಾನದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ : ಬೈಂದೂರು ಮಡಿಲಿಗೆ "SMG ಟ್ರೋಫಿ 2023"

Posted On: 21-11-2023 02:33PM
ಕಾರ್ಕಳ : ಭಾರತೀಯ ಕಥೋಲಿಕ್ ಯುವ ಸಂಚಲನ(ICYM) ಹಿರ್ಗಾನ ಇದರ ಮುಂದಾಳತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕಥೋಲಿಕ ಕ್ರೈಸ್ತ ಸಮಾಜ ಬಾಂಧವರಿಗಾಗಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಕೂಟ "SMG ಟ್ರೋಫಿ 2023" ಹಿರ್ಗಾನ ಚರ್ಚ್ ಮೈದಾನದಲ್ಲಿ ನವೆಂಬರ್ 19 ರಂದು ಅದ್ದೂರಿಯಾಗಿ ನೆರವೇರಿತು. ಉಡುಪಿ ಧರ್ಮ ಪ್ರಾಂತ್ಯದ ವಿವಿಧ ಚರ್ಚುಗಳಿಂದ 32 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು.

ಹಿರ್ಗಾನ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಹಾಗೂ ಸಂತ ಮರಿಯ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರ್ಗಾನ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂ. ಸ್ವಾಮಿ ಜೋನ್ ವಾಲ್ಟರ್ ಮೆಂಡೋಂನ್ಸಾ ವಹಿಸಿದ್ದರು. ವೇದಿಕೆಯಲ್ಲಿ ಎಫ್.ಎಂ.ಎಂ ಕಾನ್ವೆಂಟಿನ ಮುಖ್ಯಸ್ಥೆ ಸಿ. ಬ್ರಿಜಿತ್ ಮಾಡ್ತಾ, ಪಾಲನಾ ಮಂಡಳಿಯ ಸದಸ್ಯರು, ಐಸಿವೈಎಂ ಕಾರ್ಕಳ ವಲಯದ ಸದಸ್ಯರು, ಮತ್ತಿತರರು ಹಾಜರಿದ್ದರು. ಫೈನಲ್ ಪಂದ್ಯದಲ್ಲಿ ಬೈಂದೂರು ದೇವಾಲಯದ ತಂಡ ಪ್ರಥಮ ಸ್ಥಾನ ಗಳಿಸಿದರೆ, ಶಂಕರಪುರ ದೇವಾಲಯದ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಯುವ ನಿರ್ದೇಶಕರಾದ ವಂ. ಸ್ವಾಮಿ ಸ್ಟೀವನ್ ಫೆರ್ನಾಂಡಿಸ್, ಕಾರ್ಕಳ ವಲಯದ ಯುವ ನಿರ್ದೇಶಕರಾದ ವಂ. ಲ್ಯಾರಿ ಪಿಂಟೊ, ಹಿರ್ಗಾನ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂ. ಸ್ವಾಮಿ ಜೋನ್ ವಾಲ್ಟರ್ ಮೆಂಡೋಂನ್ಸಾ, ಎಫ್ಎಂಎಂ ಕಾನ್ವೆಂಟಿನಾ ಮುಖ್ಯಸ್ಥರಾದ ಸಿ. ಬ್ರಿಜಿತ್ ಮಾಡ್ತಾ, ಐಸಿವೈಯಂ ಕೇಂದ್ರೀಯ ಅಧ್ಯಕ್ಷೆ ಕು. ಅಶ್ಲಿ ಡಿಸೋಜಾ, ಹಿರ್ಗಾನ ಘಟಕದ ಸಲಹೆಗಾರರಾದ ಝಿನ ಡಿಸಿಲ್ವಾ, ಅಧ್ಯಕ್ಷ ಗ್ರೇಶನ್ ಡಿಸೋಜಾ ಹಾಗೂ ಕಾರ್ಯದರ್ಶಿ ಅಶುವಲ್ ಡಿಸೋಜಾ, ಮತ್ತಿತರು ಉಪಸ್ಥಿತರಿದ್ದರು. ಎಲ್ಸನ್ ಹಿರ್ಗಾನ್ ಕಾರ್ಯಕ್ರಮ ನಿರೂಪಿಸಿದರು.
ಪಡುಬಿದ್ರಿ : ಕೆ.ಪಿ.ಎಸ್ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

Posted On: 21-11-2023 02:28PM
ಪಡುಬಿದ್ರಿ : ಕರ್ನಾಟಕ ಪಬ್ಲಿಕ್ ಸ್ಕೂಲ್ ಪಡುಬಿದ್ರಿ ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ಮಂಗಳವಾರ ಜರಗಿತು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಕುಂದು ಕೊರತೆಯ ಬಗ್ಗೆ ಮಾಹಿತಿ ಪಡೆದು ಇದಕ್ಕೆ ಪರಿಹಾರೋಪಾಯ ಕಂಡುಕೊಳ್ಳುವ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರಾದ ಪದ್ಮಿನಿ ತಂತ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಹೇಮಚಂದ್ರ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಕಾಮತ್, ಪ್ರಾಂಶುಪಾಲರಾದ ಅಜಯ್, ಮುಖ್ಯಶಿಕ್ಷಕರಾದ ಕೃಷ್ಣಯ್ಯ, ಗೀತಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣ ಬಂಗೇರ ಹಾಗೂ ರವೀಂದ್ರನಾಥ ಜಿ ಶೆಟ್ಟಿ, ದಯಾನಂದ ಶೆಟ್ಟಿ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಉಪನ್ಯಾಸಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.
ಉಡುಪಿ : ಕದಂಬರತ್ನ ಮಯೂರವರ್ಮ ರಾಷ್ಟ್ರೀಯ ಪ್ರಶಸ್ತಿಗೆ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ

Posted On: 21-11-2023 02:22PM
ಉಡುಪಿ : ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಉತ್ತರ ಕನ್ನಡ ಜಿಲ್ಲಾ ವಿಭಾಗ ಇದರ ವತಿಯಿಂದ ಹೊನ್ನಾವರದಲ್ಲಿ ನಡೆಯಲಿರುವ ಕರಾವಳಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಕದಂಬರತ್ನ ಮಯೂರವರ್ಮ ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಸಾಮಾಜಿಕ ಕಾರ್ಯಕರ್ತ ರಕ್ತದಾನಿ ರಾಘವೇಂದ್ರ ಪ್ರಭು ಕವಾ೯ಲುರವರು ಆಯ್ಕೆಯಾಗಿದ್ದಾರೆ.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ : 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ

Posted On: 20-11-2023 08:18PM
ಪಡುಬಿದ್ರಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ, ಉಡುಪಿ. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ) ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪಡುಬಿದ್ರಿ ಸಹಕಾರ ಸಂಗಮ ವೈ ಲಕ್ಷ್ಮಣ ಸಭಾಂಗಣದಲ್ಲಿ ಆಯೋಜಿಸಲಾದ "70ನೇ ಅಖಿಲ ಭಾರತ ಸಹಕಾರ ಸಪ್ತಾಹ" ಸಮಾರೋಪ ಸಮಾರಂಭವನ್ನು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ। ಎಮ್. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ರೈತರಿಗೆ ಅನುಕೂಲಕರವಾದ ಸಹಕಾರಿ ಸಂಸ್ಥೆಗಳು ಬಹು ಬೇಗನೆ ಅವರಿಗೆ ಬೇಕಾದ ಹಣಕಾಸಿನ ಸಹಾಯದ ಜೊತೆಗೆ ಇತರೆ ವ್ಯವಸ್ಥೆಗೆ ಪೂರಕವಾಗಿದೆ. ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಇತರೆಡೆಗಳಿಗೆ ಮಾದರಿ ಎನಿಸಿದೆ. ಸಮಾಜಮುಖಿ ಕೆಲಸಗಳಿಗೆ ಸಹಕಾರಿ ಕ್ಷೇತ್ರವು ಪ್ರೋತ್ಸಾಹಿಸುತ್ತಿದೆ ಎಂದರು. ಭಾರತದಲ್ಲಿ ಸಹಕಾರಿ ಕ್ಷೇತ್ರಕ್ಕೆ 119 ವರ್ಷಗಳ ಇತಿಹಾಸವಿದೆ ಎಂದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನವೀಕೃತ ಹವಾ ನಿಯಂತ್ರಿತ ಸಭಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕುರ್ಚಿ/ಸಹಾಯ ಧನ ವಿತರಣೆ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವತಿಯಿಂದ ಸ್ವಸಹಾಯ ಗುಂಪಿಗೆ 25 ಪ್ಲಾಸ್ಟಿಕ್ ಕುರ್ಚಿಗಳನ್ನು ಮತ್ತು ಸುಮಾರು 200 ರೈತರಿಗೆ ತಲಾ 3 ಸಾವಿರ ರೂ. ನಂತೆ ಸಹಾಯಧನವನ್ನು ವಿತರಿಸಲಾಯಿತು. ಸನ್ಮಾನ : ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.,ಮಂಗಳೂರು ಇದರ ಅಧ್ಯಕ್ಷರಾದ ಡಾ। ಎಮ್. ಎನ್. ರಾಜೇಂದ್ರ ಕುಮಾರ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ವೈ., ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ನಿವೃತ್ತ ಸಹಕಾರಿ ಮೇಲ್ವಿಚಾರಕ ಬಾಲಕೃಷ್ಣ ರಾವ್ ಅವರನ್ನು ಸಮ್ಮಾನಿಸಲಾಯಿತು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಸಹಕಾರಿ ಯೂನಿಯನ್ ನಿ. ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಬೆಳಪು ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ವೈ, ಕುಂದಾಪುರ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ, ನಿವೃತ್ತ ಪ್ರಾಂಶುಪಾಲರು, ಜಾನಪದ ವಿದ್ವಾಂಸರಾದ ಗಣನಾಥ್ ಎಕ್ಕಾರ್, ಅಶೋಕ್ ಕುಮಾರ್ ಬಲ್ಲಾಳ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ ಪಲಿಮಾರು, ರಾಜಾರಾಮ್ ರಾವ್, ವೈ.ಜಿ.ರಸೂಲ್, ಯಶವಂತ್ ಪಡುಬಿದ್ರಿ, ಮಾಧವ ಆಚಾರ್ಯ, ಸ್ಟಾನ್ಲಿ ಕ್ವಾಡ್ರಸ್, ಸುಚರಿತಾ ಎಲ್. ಅಮೀನ್, ಕಾಂಚನಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಕಾರಿ ದೀಪಕ್ ಸಾಲ್ಯಾನ್ ಉಪಸ್ಥಿತರಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಸೊಸೈಟಿಯ ನಿರ್ದೇಶಕರಾದ ಸುಚರಿತಾ ಎಲ್ ಅಮೀನ್ ಹಾಗೂ ಗಿರೀಶ್ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು. ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ - ಬಿರುವೆರ್ ಕಾಪು ಟ್ರೋಫಿ -2023 ; ಕ್ರಿಕೆಟ್ ಪಂದ್ಯಾಟದ ವಿಜ್ಞಾಪನ ಪತ್ರ ಬಿಡುಗಡೆ

Posted On: 19-11-2023 12:30PM
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಕಾಪು ಇವರ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ಕಾಪುವಿನ ದಂಡತೀರ್ಥ ಶಾಲಾ ಮೈದಾನದಲ್ಲಿ ಡಿಸೆಂಬರ್ 30 - 31 ರಂದು ಬಿರುವೆರ್ ಕಾಪು ಟ್ರೋಫಿ -2023 ಕ್ರಿಕೆಟ್ ಪಂದ್ಯಾಕೂಟ ನಡೆಯಲಿದ್ದು ಇದರ ವಿಜ್ಞಾಪನ ಪತ್ರವನ್ನು ಕಾಪು ಜೆಸಿ ಭವನದಲ್ಲಿ ನವೆಂಬರ್ 18ರಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಕ್ರಿಕೆಟ್ ಪಂದ್ಯಾಟದ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾಗಿ ದೀಪಕ್ ಕುಮಾರ್ ಎರ್ಮಾಳು ಇವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಕಾರ್ಯತಂತ್ರ ರೂಪಿಸಲು ಸಂಸ್ಥೆಯ ಅಧ್ಯಕ್ಷರನ್ನೊಳಗೊಂಡ ಸದಸ್ಯರನ್ನೂ ನೇಮಿಸಲಾಯಿತು.
ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್, ಸಂಸ್ಥೆಯ ಅಧ್ಯಕ್ಷರಾದ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಮಸ್ಕತ್, ರಾಕೇಶ್ ಕುಂಜೂರು, ರವಿರಾಜ್ ಶಂಕರಪುರ, ಯೋಗೀಶ್ ಪೂಜಾರಿ ಕಾಪು , ಪ್ರಶಾಂತ್ ಪೂಜಾರಿ ಕಾಪು , ಪ್ರಸಾದ್ ಪೂಜಾರಿ ಅದಮಾರ್ , ಯಾದವ ಪೂಜಾರಿ ಕಾಪು , ಸುಜನ್ ಎಲ್ ಸುವರ್ಣ ಶಿರ್ವ, ಅನಿಲ್ ಅಮೀನ್ ಕಾಪು, ಕಾರ್ತಿಕ್ ವಿ ಸುವರ್ಣ ಮೂಳೂರು, ವರುಣ್ ಬಿ ಕೋಟ್ಯಾನ್ ಕಲ್ಯಾಲ್, ಸಂಧ್ಯಾ ಬಿ ಕೋಟ್ಯಾನ್ ಕಲ್ಯಾಲ್ ಆನ್ ಲೈನ್ ಮೂಲಕ ಭಾಸ್ಕರ ಅಂಚನ್ ಕಲ್ಲುಗುಡ್ಡೆ ಕುವೈಟ್, ಗಣೇಶ್ ಕೋಟ್ಯಾನ್ ಮಲ್ಲಾರ್ ಕುವೈಟ್ ಉಪಸ್ಥಿತಿಯಿದ್ದರು.
ಕಾಪು : ದಿವಾಕರ ಶೆಟ್ಟಿಗೆ ಸಹಕಾರಿ ಕ್ಷೇತ್ರದ ಸಹಕಾರ ರತ್ನ ಪ್ರಶಸ್ತಿ

Posted On: 19-11-2023 12:13PM
ಕಾಪು : ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಿಯ ರಾಜ್ಯ ನಿರ್ದೇಶಕ, ಕೃಷಿ, ಸಹಕಾರಿ ಮತ್ತು ಉದ್ಯಮ ಕ್ಷೇತ್ರದ ಸಾಧಕ ಕಾಪು ದಿವಾಕರ ಶೆಟ್ಟಿ ಅವರಿಗೆ ಸಹಕಾರಿ ಕ್ಷೇತ್ರದ ರಾಜ್ಯಮಟ್ಟದ ಅತ್ಯುನ್ನತ ಸಹಕಾರ ರತ್ನ ಪ್ರಶಸ್ತಿ ದೊರೆತಿದೆ.
ವಿಜಯಪುರದಲ್ಲಿ ನವೆಂಬರ್ 20ರಂದು ನಡೆಯಲಿರುವ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾಪು ಕೋತ್ವಾಲ್ ಗುತ್ತು ನಿವಾಸಿಯಾಗಿರುವ ಅವರು ದೀರ್ಘ ಕಾಲ ದ.ಕ. ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಎರಡು ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಪ್ರವರ್ತಕ, ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದು, ಕಳೆದ 33 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಾಪು ಸಹಕಾರಿ ವ್ಯವಸಾಯ ಸಂಘದ ಅಧ್ಯಕ್ಷರಾಗಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿದ್ದಾರೆ.
ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಕಾಪು ಜನಾರ್ದನ ದೇವಸ್ಥಾನ, ಕಾಪು ಮೂರನೇ ಮಾರಿಗುಡಿಗಳ ಟ್ರಸ್ಟಿ, ಉಳಿಯಾರಗೋಳಿ ಗ್ರಾಪಂ ಅಧ್ಯಕ್ಷ, ದಕ್ಷಿಣ ರೈಲ್ವೆ ಮತ್ತು ದ.ಕ. ಜಿಲ್ಲಾ ಟೆಲಿಕಾಂ ಸಲಹಾ ಮಂಡಳಿ ಸದಸ್ಯ, ರಾಜ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಪ್ರಶಸ್ತಿ, ಅತ್ಯುತ್ತಮ ಹೈನುಗಾರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಆರ್ಯಭಟ ಭಾಜನರಾಗಿದ್ದಾರೆ.
ಪಡುಬಿದ್ರಿ : ಪಂಚಾಯತ್ ಸದಸ್ಯನಿಂದ ಅಧಿಕಾರಿಗೆ ಬೆದರಿಕೆ

Posted On: 19-11-2023 11:18AM
ಪಡುಬಿದ್ರಿ : ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರಿಗೆ ಪಂಚಾಯತ್ ಸದಸ್ಯರೋರ್ವರು ಬೆದರಿಕೆ ಹಾಕಿರುವ ಘಟನೆ ನವೆಂಬರ್ 17ರಂದು ಪಡುಬಿದ್ರಿ ಪಂಚಾಯತ್ ನಲ್ಲಿ ನಡೆದಿದೆ.
ಕಾಪು ತಾಲೂಕಿನ ಪಡುಬಿದ್ರಿ ಗ್ರಾಮ ಪಂಚಾಯತ್ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ರವರು ತನ್ನ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಪಡುಬಿದ್ರಿ ಗ್ರಾಮ ಪಂಚಾಯತ್ನ ಸದಸ್ಯ ಮಯ್ಯದ್ದಿ ಎಂಬುವವರು ಕಛೇರಿಗೆ ನುಗ್ಗಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಮಂಜುನಾಥರವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವೆಂಬರ್ 20 : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ

Posted On: 18-11-2023 06:36PM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ ಕೇಂದ್ರ ಕಚೇರಿ ಸಹಕಾರ ಸಂಗಮದ ವೈ ಲಕ್ಷ್ಮಣ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಸಹಕಾರ ಶಿಕ್ಷಣ, ತರಬೇತಿ ಪರಿಷ್ಕರಣೆ ದಿನ, ಸೊಸೈಟಿಯ ನವೀಕೃತ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ, ಸನ್ಮಾನ, ಕೃಷಿ ಸಹಾಯ ಧನ ವಿತರಣಾ ಸಮಾರಂಭ ಜರಗಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಹೇಳಿದರು. ಅವರು ಶನಿವಾರ ಪಡುಬಿದ್ರಿ ಸೊಸೈಟಿಯ ಸಭಾಂಗಣದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
70 ನೇ ಅಖಿಲ ಭಾರತ ಸಹಕಾರ ಸಪ್ತಾಹವು ನವೆಂಬರ್ 14ರಂದು ಪ್ರಾರಂಭಗೊಂಡಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 20, ಸೋಮವಾರ ಪಡುಬಿದ್ರಿಯಲ್ಲಿ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ನಡೆಯಲಿದೆ. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ ಸುಧೀರ್ ಕುಮಾರ್ ಅಧ್ಯ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮಾರೋಪ ಸಮಾರಂಭವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕೃತ ಹವಾನಿಯಂತ್ರಿತ ವೈ ಲಕ್ಷ್ಮಣ ಸಭಾಂಗಣವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಅರ್. ಮೆಂಡನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಹೆಚ್. ಎನ್., ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ದಿಕ್ಸೂಚಿ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ್ ಎಕ್ಕಾರ್ ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಅಪ್ರತಿಮ ಸಾಧಕರಾದ ಡಾ. ಎಮ್.ಎನ್. ರಾಜೇಂದ್ರ ಕುಮಾರ್, ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಶಿಕಲಾ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಹರೀಶ್ ಹೆಜ್ಮಾಡಿ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ ನಿಯೋಜಿತಗೊಂಡು ಸೊಸೈಟಿಯಲ್ಲಿ ವಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡಿರುವ ಬಾಲಕೃಷ್ಣ ರಾವ್ರವರನ್ನು ಸನ್ಮಾನಿಸಲಾಗುವುದು. ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೈತರಿಗೆ ಸಹಕಾರಿಯಾಗುವಂತೆ ಸೊಸೈಟಿಯು ಪ್ರಾರಂಭಿಸಿರುವ ಸಂಗಮ ಕೃಷಿ ನಿಧಿಯಿಂದ 1.25 ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಭತ್ತದ ಕೃಷಿ ಬೆಳೆಯುತ್ತಿರುವ ಸೊಸೈಟಿ ವ್ಯಾಪ್ತಿಯ ಸುಮಾರು 200 ಕ್ಕೂ ಹೆಚ್ಚು ರೈತರಿಗೆ ಕಳೆದ ಸಾಲಿನಂತೆ ಈ ವರ್ಷವೂ ಕೃಷಿ ಸಹಾಯಧನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಡುಬಿದ್ರಿ ಶ್ರೀ ಮಹಾಗಣಪತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಬಳಕೆಗೆ 25 ಕುರ್ಚಿಗಳ ಹಸ್ತಾಂತರ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಮುಖ್ಯಕಾರ್ಯನಿರ್ವಾಹಣಾಕಾರಿ ಹಾಲಪ್ಪ ಕೋಡಿಹಳ್ಳಿ, ನಿರ್ದೇಶಕರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ ಪಲಿಮಾರು, ರಾಜಾರಾಮ್ ರಾವ್, ವೈ.ಜಿ.ರಸೂಲ್, ಯಶವಂತ್ ಪಡುಬಿದ್ರಿ, ಮಾಧವ ಆಚಾರ್ಯ, ಸ್ಟಾನ್ಲಿ ಕ್ವಾಡ್ರಸ್, ಸುಚರಿತಾ ಎಲ್.ಅಮೀನ್, ಕಾಂಚನಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಕಾರಿ ದೀಪಕ್ ಸಾಲ್ಯಾನ್ ಉಪಸ್ಥಿತರಿದ್ದರು.
ನವೆಂಬರ್ ೧೮ : ಎರ್ಮಾಳುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ. ರಾಮಪ್ಪ ಜಿ. ಸಾಲಿಯಾನ್ ಸಂಸ್ಮರಣೆ

Posted On: 17-11-2023 11:06AM
ಎರ್ಮಾಳು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ "ಅಮೃತ ಭಾರತಿಗೆ ಕನ್ನಡದ ಆರತಿ" ಕಾರ್ಯಕ್ರಮದಡಿಯಲ್ಲಿ ಸ್ವಾತಂತ್ರ್ಯ ಸೇನಾನಿಗಳ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ.ರಾಮಪ್ಪ ಜಿ. ಸಾಲಿಯಾನ್ರವರ ಸಂಸ್ಮರಣೆ "ಅಮೃತಾಂಜಲಿ" ಕಾರ್ಯಕ್ರಮ ನವೆಂಬರ್ ೧೮ ಶನಿವಾರ ಸಾಯಂ ಗಂಟೆ ೪ ಕ್ಕೆ ಬಡ ಗ್ರಾ.ಪಂ.ವ್ಯಾಪ್ತಿಯ ಎರ್ಮಾಳುವಿನಲ್ಲಿ ಹೋರಾಟಗಾರರ ಹಿರಿಯ ಮಗಳು ಶಾರದಾ ಆರ್ ಸಾಲಿಯಾನ್ ಇವರ ನಿವಾಸ "ಸಿದ್ಧಿವಿನಾಯಕ"ದಲ್ಲಿ ಜರುಗಲಿದೆ.
ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ತಿರುಮಲೇಶ್ವರ ಭಟ್ ಇವರು ಹೋರಾಟಗಾರರಾದ ದಿ.ಆರ್.ಜಿ.ಸಾಲಿಯಾನ್ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸುವರು. ಶಾರದಾ ಆರ್ ಸಾಲಿಯಾನ್ ನುಡಿ ನಮನ ಸಲ್ಲಿಸುವರು. ಮುಖ್ಯ ಅಭ್ಯಾಗತರಾಗಿ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜ್ಮಾಡಿ, ಮೋಹನ್ ಬಂಗೇರ ಕಾಪು, ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಭಾಗವಹಿಸುವರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್.ಯು.ಕಲ್ಯಾ ಕಾರ್ಯಕ್ರಮ ಸಂಯೋಜಿಸುವರು ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ ತಿಳಿಸಿದೆ.