Updated News From Kaup
ಮಸ್ಕತ್ : ‘ಬಿರುವ ಜವನೆರ್ ‘ ಸಂಘಟನೆ - ‘ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ
Posted On: 26 Feb 2024, 05:57 PM
ಮಸ್ಕತ್ : ‘ಬಿರುವ ಜವನೆರ್ ‘ ಸಂಘಟನೆ ಯು ಮಸ್ಕತ್ ನ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾ ಸಹಿತ ‘ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ’ ಕಥೆಯನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಗೊಳಿಸಲಿದೆ. ಹೊರರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ತಂಡದಿಂದ ಸತ್ಯನಾರಾಯಣ ಪೂಜಾ ಸಹಿತ ತಾಳಮದ್ದಳೆ ಸಂಪನ್ನಗೊಳ್ಳಲಿದೆ. ಮಾ.1ರಂದು ಶುಕ್ರವಾರ ಪೂರ್ವಾಹ್ನ 8.30 ರಿಂದ ಅಪರಾಹ್ನ 1.30 ರ ತನಕ ಶನೀಶ್ವರ ಪೂಜೆ ಖ್ಯಾತಿಯ ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ, ಮಂಗಳೂರು ತಂಡವು ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಇವರ ಸಂಯೋಜನೆ ಯಲ್ಲಿ ಪ್ರದರ್ಶನ ನೀಡಲಿದೆ. ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಗೂ ದುಬೈ, ಅಬುದಾಬಿ, ಮಸ್ಕತ್ ರಾಷ್ಟ್ರಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಜನಪ್ರಿಯತೆ ಗಳಿಸಿವೆ. ಈ ಪೂರ್ವದಲ್ಲಿ ‘ಬಿರುವ ಜವನೆರ್’ ಇದೇ ತಂಡದಿಂದ ಎರಡು ಬಾರಿ ಶನಿಪೂಜೆಯನ್ನು ಮಸ್ಕತ್ ನಲ್ಲಿ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಈ ಸಂಘಟನೆಯು ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಯನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಭಾಗವಹಿಸಲಿದ್ದಾರೆ. ರವಿ ಭಟ್ ಪಡುಬಿದ್ರಿ ಅವರು ಪೂಜಾ ವ್ಯವಸ್ಥೆಯಲ್ಲಿ ಸಹಕರಿಸಲಿದ್ದಾರೆ. ಪೂಜೆಯ ನಂತರ ಪ್ರಸಾದ ಭೋಜನ ಹಾಗೂ ಸಂಜೆ 5.30 ರ ತನಕ ಕಲ್ಲಡ್ಕ ವಿಠ್ಠಲ ನಾಯ್ಕ್ ಅವರ ತಂಡ ದಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಜರಗಲಿದೆ. ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಭಕ್ತ ಭಾಂದವರು ಆಗಮಿಸಿ ಸಹಕರಿಸಬೇಕೆಂದು ಬಿರುವ ಜವನೆರ್ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬೆಳ್ಳೆ: ಶಿಕ್ಷಣತಜ್ಞ ಆರ್.ಎಸ್. ಬೆಳ್ಳೆ ಸಂಸ್ಮರಣೆ
Posted On: 26 Feb 2024, 05:37 PM
ಪಡುಬೆಳ್ಳೆ : ಸಮಾಜಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹಾಗೂ ಯಶಸ್ಸು ಸಂಪೂರ್ಣ ಸಾಧ್ಯವಾಗುತ್ತದೆ ಎಂಬುದಕ್ಕೆ ಶಿಕ್ಷಣ ತಜ್ಞ ಮತ್ತು ಸಮಾಜಸೇವಕ ಆರ್.ಎಸ್. ಬೆಳ್ಳೆ ಅವರ ಬದುಕೇ ಉದಾಹರಣೆಯಾಗಿದೆ ಎಂದು ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಹೇಳಿದರು. ಅವರು ಪಡುಬೆಳ್ಳೆ ಪಾಂಬೂರಿನಲ್ಲಿ ಫೆ. 25ರಂದು ಜರಗಿದ ಆರ್.ಎಸ್. ಬೆಳ್ಳೆ ಸಂಸ್ಮರಣೆಯ ಹೊನಲು ಬೆಳಕಿನ ಮಿತ್ರಗೋಷ್ಠಿಯಲ್ಲಿ ಮಾತನಾಡಿದರು. ಆರ್.ಎಸ್. ಬೆಳ್ಳೆ ಅವರು ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿದ್ದರು. ನಿವೃತ್ತಿ ಬಳಿಕ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರದ್ದು ತ್ಯಾಗಪೂರ್ಣ ಬದುಕಾಗಿದ್ದು, ತನ್ನ ಶಕ್ತಿಗೂ ಮೀರಿ ಜನರಿಗೆ ನೆರವು ನೀಡುತ್ತಿದ್ದರು ಎಂದು ಅವರು ನೆನಪಿಸಿಕೊಂಡರು. ಕವಿ, ಸಾಹಿತಿ ರಿಚ್ಚಾರ್ಡ್ ದಾಂತಿ ಪಾಂಬೂರು ಅವರು ಸಂಸ್ಮರಣಾ ಭಾಷಣ ಮಾಡಿದರು. ಉಡುಪಿಯ ಹಿರಿಯ ನ್ಯಾಯವಾದಿ ಜಯಶಂಕರ ಕುತ್ಪಾಡಿ ಅವರಿಗೆ ಆರ್.ಎಸ್. ಬೆಳ್ಳೆ ಸ್ಮರಣಾರ್ಥ ಮೊದಲ ವರ್ಷದ ಪುರಸ್ಕಾರವನ್ನು ಪ್ರದಾನಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ವಾಸು ಆಚಾರ್, ಪಡುಬೆಳ್ಳೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ದೇವಾಡಿಗ, ಕಸಾಪ ಕಾಪು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಬೆಳ್ಳೆ ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಪಾಂಬೂರು, ಸ್ಯಾಮ್ಸನ್ ನೊರೋನ್ನಾ ದಿಂದೊಟ್ಟು, ಮುರಳೀಧರ ಆರ್. ಸಾಮಗ ಬೆಳ್ಳೆ ಮಾತನಾಡಿದರು. ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದು, ಅವರ ಅವಧಿಗೆ ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರ ಪಡೆದುದಕ್ಕಾಗಿ ಅವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಯಿತು. ಕಾಪು ತಾಪಂ ಮಾಜಿ ಸದಸ್ಯೆ ಸುಜಾತಾ ಎಸ್. ಸುವರ್ಣ, ನಿವೃತ್ತ ಕಚೇರಿ ಸಿಬಂದಿ ಕ್ರಿಸ್ತಿನ್ ಫೆರ್ನಾಂಡಿಸ್, ನಿವೃತ್ತ ಹಿರಿಯ ಶುಶ್ರೂಶಕಿ ಉಷಾ ಮರಾಠೆ, ಪತ್ರಕರ್ತ ಶ್ರೀರಾಮ ದಿವಾಣ, ಪೆಲ್ವಿನ್ ಫ್ರಾನ್ಸಿಸ್ ಕ್ವಾಡ್ರಸ್, ಅರುಣ್ ನೊರೋನ್ನಾ, ಪೀಟರ್ ಮಿನೇಜಸ್ ಉಪಸ್ಥಿತರಿದ್ದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿದರು.
ಮಂಗಳೂರು : ಎನ್ ಎಸ್ ಸಿ ಡಿ ಎಫ್ -12 ಗಂಟೆಗಳ ಕನ್ನಡ ಗೀತೆಗಳ ಗಾಯನ ವಿಶ್ವ ದಾಖಲೆ ; ಅಭಿನಂದನಾ ಸಮಾರಂಭ
Posted On: 25 Feb 2024, 11:05 AM
ಮಂಗಳೂರು : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ (NSCDF) ನವೆಂಬರ್ 5ರಂದು ಆಯೋಜಿಸಿದ್ದ ನಿರಂತರ 12 ಗಂಟೆಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವು ವಿಶ್ವ ದಾಖಲೆಯನ್ನು ನಿರ್ಮಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವು ಫೆಬ್ರವರಿ 23ರಂದು ಮಂಗಳೂರು ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಚಲನಚಿತ್ರ ಖ್ಯಾತ ಹಾಸ್ಯ ನಟ ಅರವಿಂದ ಬೋಳಾರ್ ಮಾತನಾಡಿ ಮನಃಶಾಂತಿಗಾಗಿ ಹಾಡು ವಿಶ್ವದಾಖಲೆ ನಿರ್ಮಿಸಿದ್ದು ಸಂತಸದ ವಿಚಾರ. ಇವರ ಈ ಸಾಧನೆಯನ್ನು ಮೆಚ್ಚಲೇಬೇಕು. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು ಮತ್ತು ಇವರ ತಂಡಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ವಿಶ್ವ ದಾಖಲೆ ನಿರ್ಮಿಸಿದ ಗಾಯಕರಾದ ಗಂಗಾಧರ್ ಗಾಂಧಿ, ವರ್ಷ ಕರ್ಕೇರ, ಶ್ರೀರಕ್ಷಾ ಸರ್ಪಂಗಳ, ನೇತ್ರ ಖುಷಿ, ರಾಣಿ ಪುಷ್ಪಲತಾ ದೇವಿ ಇವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರ ನೀಡಿ ಶಾಲು, ಹಾರ, ತುರಾಯಿ, ಫಲತಾಂಬೂಲದೊಂದಿಗೆ ಸನ್ಮಾನಿಸಲಾಯಿತು. ಅಂದಿನ ಕಾರ್ಯಕ್ರಮದಲ್ಲಿ ಸಹಕರಿಸಿದ ರವೀಂದ್ರ ಮುನ್ನಿಪಾಡಿ, ಡಾ. ಸುರೇಶ್ ನೆಗಳಗುಳಿ, ಡಾ. ವಾಣಿಶ್ರೀ ಕಾಸರಗೋಡು, ಯು ಆರ್ ಶೆಟ್ಟಿ, ಶಿವಪ್ರಸಾದ್ ಕೊಕ್ಕಡ, ರೇಷ್ಮಾ ಶೆಟ್ಟಿ ಗೋರೂರು, ಆರ್ವಿ ವಿ.ಕೆ, ಗುರುರಾಜ್ ಎಂ.ಆರ್, ರೇಖಾ ಸುದೇಶ್ ರಾವ್, ಮಮ್ತಾ ರಾವ್ ಮುಂತಾದವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು NSCDF ಅಧ್ಯಕ್ಷ ಗಂಗಾಧರ ಗಾಂಧಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳು ಹಾಸ್ಯ ಚಿತ್ರನಟ ಸತೀಶ್ ಬಂದಲೆ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, NSCDF ಅಂತರಾಷ್ಟ್ರೀಯ ವಕ್ತಾರೆ ಮಮತಾ ರಾವ್, ಪ್ರಧಾನ ಕಾರ್ಯದರ್ಶಿ ದಿನಕರ ಡಿ. ಬಂಗೇರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಶ್ಮಿ ಸನಿಲ್ ಮತ್ತು ರೇಷ್ಮಾ ಶೆಟ್ಟಿ ಗೋರೂರು ನಿರೂಪಿಸಿದರು.
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಲಬಾರ್ ಚಾರಿಟೇಬಲ್ ಟ್ರಸ್ಟ್ - 15 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ
Posted On: 25 Feb 2024, 10:27 AM
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಸಂಸ್ಥೆಯ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲೆಯ ಸುಮಾರು 40 ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ 266 ವಿದ್ಯಾರ್ಥಿನಿಯರಿಗೆ 15ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಇಂದು ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿವೇತನ ವಿತರಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯ ಪ್ರಕಾಶ್ ಹೆಗ್ಡೆ ಮಾತನಾಡಿ, ಮಲಬಾರ್ ಗೊಲ್ಡ್ ಅರ್ಹರಿಗೆ ಎಲ್ಲ ರೀತಿಯಲ್ಲೂ ಸಹಾಯ ನೀಡುತ್ತಿದೆ. ಮನೆ ನಿರ್ಮಾಣ, ರೋಗಿಗಳಿಗೆ ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿದೆ ಎಂದು ಹೇಳಿದರು. ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಬಗ್ಗೆಯೂ ನಾವು ಯೋಚನೆ ಮಾಡಬೇಕು. ಮಲಬಾರ್ ಗೋಲ್ಡ್ ನೀಡಿದ ವಿದ್ಯಾರ್ಥಿವೇತನದಿಂದ ಭವಿಷ್ಯದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆಗಳನ್ನು ಪಡೆಯುವ ವಿದ್ಯಾರ್ಥಿಗಳು ಮುಂದೆ ಸಮಾಜದ ಬಗ್ಗೆಯೂ ಚಿಂತನೆ ಮಾಡಬೇಕು. ಆಗ ಇದೇ ರೀತಿಯ ನೆರವಿನ ನಿರೀಕ್ಷೆಯನ್ನು ಸಮಾಜ ಕೂಡ ನಿಮ್ಮಿಂದ ಮಾಡುತ್ತಿರುತ್ತದೆ ಎಂದರು. ಮಕ್ಕಳಲ್ಲಿರುವ ಶಕ್ತಿ, ಕೌಶಲ್ಯಗಳು ಸಮಾನತೆಯನ್ನು ಮೂಡಿಸಲ್ಲ. ನಾವೆಲ್ಲ ಒಂದಾಗಿರಬೇಕೆಂಬ ಬದ್ಧತೆಯೇ ಮಕ್ಕಳಲ್ಲಿರುವ ನಿಜವಾದ ಸಮಾನತೆ ಆಗಿದೆ. ಜಾತಿ ಧರ್ಮ ಮೀರಿದ ಸಂಬಂಧವೇ ಮಕ್ಕಳಲ್ಲಿ ಶಾಶ್ವತವಾಗಿರುತ್ತದೆ. ಆ ಸಂಬಂಧ ಸಮಾಜದ ಮುಂದಿನ ಪೀಳಿಗೆಗೂ ಉಳಿಯಲಿ ಎಂದು ಅವರು ಹಾರೈಸಿದರು. ಈ ಸಂದರ್ಭದಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ನ ಹಸಿವು ಮುಕ್ತ ಜಗತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಮಾತನಾಡಿ, ಹಸಿವು ಮುಕ್ತ ಜಗತ್ತು ಬಹಳ ಉತ್ತಮ ಕಾರ್ಯಕ್ರಮ ವಾಗಿದ್ದು, ಇದೇ ರೀತಿಯ ಕಾರ್ಯಕ್ರಮ ಇನ್ನಷ್ಟು ಸಂಸ್ಥೆಗಳು ಮಾಡಿದರೆ ಇಡೀ ಜಗತ್ತನ್ನು ಹಸಿವು ಮುಕ್ತ ಮಾಡಬಹುದಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ನಿವೃತ್ತ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೋ, ಸಮಾಜ ಸೇವಕರಾದ ಫಾರೂಕ್ ಚಂದ್ರನಗರ, ನಿತ್ಯಾನಂದ ಒಳಕಾಡು, ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪ್ರಾದೇಶಿಕ ಸಿಎಸ್ಆರ್ ಉಸ್ತುವಾರಿ ಹೈದರ್ ಕೆ.ಎ., ಪ್ರಮುಖ ರಾದ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಕರ್ವಾಲು ಸ್ವಾಗತಿಸಿ, ವಿಘ್ನೇಶ್ ನಿರೂಪಿಸಿ ವಂದಿಸಿದರು.
ಕಾರ್ಕಳ : ಕುಲಾಲ ಚಾವಡಿಯಿಂದ ನೆರವಿನ ಹಸ್ತ
Posted On: 25 Feb 2024, 10:17 AM
ಕಾರ್ಕಳ : ತಾಲೂಕಿನ ಅಂಡಾರು ಗ್ರಾಮದ ಮಹಿಳೆಯೋರ್ವರ ಶಸ್ತ್ರಚಿಕಿತ್ಸೆಗೆ ಕುಲಾಲ ಚಾವಡಿಯಿಂದ ರೂ.35,000 ಸಂಗ್ರಹಿಸಿ ಫೆಬ್ರವರಿ 18 ರಂದು ಹಸ್ತಾಂತರಿಸಲಾಯಿತು. ಅಂಡಾರುವಿನ ಶಾಲಿನಿಯವರು ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ ನೀಡಿದ ಮನವಿಯ ಮಾಹಿತಿ ತಿಳಿದ ಕೃಷ್ಣ ಕುಲಾಲ್ ಅಜೆಕಾರ್ ಇವರು ಕುಲಾಲ ಚಾವಡಿಯ ಸಹೃದಯರ ಗಮನಕ್ಕೆ ತಂದು ದೇಶ ವಿದೇಶದ ಚಾವಡಿ ಸದಸ್ಯರು ಧನ ಸಹಾಯ ನೀಡಿದ್ದಾರೆ. ಈ ಸಂಧರ್ಭದಲ್ಲಿ ಕುಲಾಲ ಚಾವಡಿ ನಿರ್ವಾಹಕ ಸಂತೋಷ್ ಕುಲಾಲ್ ಪದವು, ಹೃದಯ್ ಕುಲಾಲ್ ಹೀರ್ಗಾನ , ವಿಶ್ವನಾಥ್ ಕುಲಾಲ್, ಕೃಷ್ಣ ಕುಲಾಲ್ ಅಜೆಕಾರು, ಜಯಾನಂದ ಕುಲಾಲ್ ಅಂಡಾರು, ಸುರೇಂದ್ರ ಕುಲಾಲ್ ಅಂಡಾರು ಉಪಸ್ಥಿತರಿದ್ದರು.
ಫೆ.25 (ನಾಳೆ) : ಕುಕ್ಕುಂಜದಲ್ಲಿ ಕೆಪಿಎಲ್ ಟ್ರೋಫಿ - 2024
Posted On: 24 Feb 2024, 09:18 PM
ಕಾಪು : ಕುತ್ಯಾರು ಗ್ರಾಮದ ಕುಕ್ಕುಂಜದಲ್ಲಿ ಗ್ರಾಮೀಣ ಭಾಗದ ವಿವಿಧ ತಂಡದೊಂದಿಗೆ ವಾಲಿಬಾಲ್ ಪಂದ್ಯಾಟ ನಾಳೆ ಬೆಳಿಗ್ಗೆ 9 ರಿಂದ ಕಳತ್ತೂರು ಕುಕ್ಕುಂಜದಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಕೆಪಿಎಲ್ ಟ್ರೋಫಿ ನೀಡಲಾಗುವುದು. ಎಂದು ಕ್ರೀಡಾ ಕೂಟದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಲಿಮಾರು : ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು - 25ನೇ ವರ್ಷದ ವಾರ್ಷಿಕೋತ್ಸವ
Posted On: 23 Feb 2024, 07:29 PM
ಪಲಿಮಾರು : ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಚ್೯ 2, ಶನಿವಾರ ಸಂಜೆ ಗಂಟೆ 6ರಿಂದ ಶ್ರೀ ಮೂಕಾಂಬಿಕಾ ದೇವಸ್ಥಾನ ಅವರಾಲು ಮಟ್ಟು ಬಳಿ ಜರಗಲಿದೆ. ಸಂಜೆ ಗಂಟೆ 6ಕ್ಕೆ ಸರಿಯಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, 7ಕ್ಕೆ ಸಭಾ ಕಾರ್ಯಕ್ರಮ ಜರಗಲಿದೆ. ದಿನೇಶ್ ಪ್ರಭು, ಪಲಿಮಾರು ಉದ್ಘಾಟಿಸಲಿದ್ದಾರೆ. ಶ್ರೀ ದೇವಿ ಫ್ರೆಂಡ್ಸ್ ಕ್ಲಬ್, ಅವರಾಲುಮಟ್ಟು ಅಧ್ಯಕ್ಷ ಹರೀಶ್ ಬಂಗೇರ ಅಧ್ಯಕ್ಷತೆ ವಹಿಸಲಿದ್ದು, ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕರಾದ ಚಂದ್ರಶೇಖರ ಶಾಂತಿ ಗೌರವ ಉಪಸ್ಥಿತರಿದ್ದು, ಮುಖ್ಯ ಅತಿಥಿಗಳಾಗಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಶಿವಾಯ ಫೌಂಡೇಶನ್ ಮುಂಬೈಯ ಗೌರವಾಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಕರ್ನಿರೆಗುತ್ತು ಸಂಪತ್ ಶೆಟ್ಟಿ, ಬೆಂಗಳೂರಿನ ಉದ್ಯಮಿ ಗಣೇಶ್ ಗುಜರನ್, ಪಡುಬಿದ್ರಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಪಡುಬಿದ್ರಿ ಶಾಖೆ ಪ್ರಭೋದ್ ಚಂದ್ರ ಹೆಜಮಾಡಿ, ಬಿಜೆಪಿ ಉಡುಪಿನಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಪಾದೆಬೆಟ್ಟು, ಮಟ್ಟು ಮೊಗವೀರ ಮಹಾಸಭಾ ಮಟ್ಟುಪಟ್ಣ, ಹೆಜಮಾಡಿ ಅಧ್ಯಕ್ಷ ರಘುವೀರ್ ಎಲ್. ಸುವರ್ಣ, ಪಲಿಮಾರು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು ಭಾಗವಹಿಸಲಿದ್ದಾರೆ. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಮತ್ತು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್ ಇವರಿಗೆ ಸನ್ಮಾನ, ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಬಹುಮಾನ ವಿತರಣೆ, ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕೃಷ್ಣ ಕಲಾವಿದರು ಉಡುಪಿ ಇವರಿಂದ ಕುತೂಹಲ ಭರಿತ ತುಳು ಸಾಮಾಜಿಕ ಹಾಸ್ಯಮಯ ನಾಟಕ ಆನಿದ ಮನದಾನಿ ಪ್ರದರ್ಶನವಾಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಶ್ರೀ ಬ್ರಹ್ಮಲಿಂಗೇಶ್ವರ ಆಲಡೆ ಪಾಂಗಾಳ - ಮಂಡೇಡಿ : ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ
Posted On: 23 Feb 2024, 03:20 PM
ಪಾಂಗಾಳ : ವೇದಮೂರ್ತಿ ಪಾಂಗಾಳ ವಿಷ್ಣು ಭಟ್ಟರ ನೇತೃತ್ವದಲ್ಲಿ ಪಾಂಗಾಳ-ಮಂಡೇಡಿ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆ ಪುನರ್ ನಿರ್ಮಿತ ಶ್ರೀ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ, ಶ್ರೀ ನಾಗಬ್ರಹ್ಮ ದೇವರು, ಶ್ರೀ ವೀರಭದ್ರ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವದ ಗುರುವಾರ ಸಂಪನ್ನಗೊಂಡಿತು. ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ಘಂಟೆ 9ರಿಂದ ಪೂಜಾದಿ ಸಕಲ ಕಾರ್ಯಕ್ರಮಗಳು ಜರಗಿದವು. ಈ ಸಂದರ್ಭ ಪಾಂಗಾಲಣ್ಣ ಬಂಟ ಕುಟುಂಬಸ್ಥರು, ಕ್ಷೇತ್ರದ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.
ನಟ ರಕ್ಷಿತ್ ಶೆಟ್ಟಿ : ಕಾಪು ಮಾರಿಯಮ್ಮ ದರುಶನಗೈದು, ಜೀರ್ಣೋದ್ಧಾರ ಕಾರ್ಯ ವೀಕ್ಷಣೆ
Posted On: 23 Feb 2024, 03:01 PM
ಕಾಪು: ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿಯವರು ಫೆಬ್ರವರಿ 22ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು, ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ನಂತರ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ಅವರು ನಾನು ಬಾಲ್ಯದಲ್ಲಿ ಪ್ರತಿವರ್ಷ ತಂದೆಯೊಂದಿಗೆ ಕಾಪುವಿನಲ್ಲಿ ಭಾವನ ಮನೆಗೆ ಬರುವಾಗ ಮಾರಿಗುಡಿಗೆ ಬಂದು ಹೋಗುತ್ತಿದ್ದೆ, ಈಗ ಇದರ ಸಂಪೂರ್ಣ ಚಿತ್ರಣವೆ ಬದಲಾಗಿದೆ, ನನ್ನ ಭಾವ ವಾಸುದೇವ ಶೆಟ್ರ ಮುಂದಾಳತ್ವದಲ್ಲಿ ಈ ಕೆಲಸ ನಡೆಯುತ್ತಿದೆ, ಸುಮಾರು ವರ್ಷಗಳಿಂದ ಅವರು ಈ ದೇವಸ್ಥಾನವನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬ ಚಿಂತನೆಯಲ್ಲಿದ್ದರು. ಪುರಾತನ ಕಾಲದಲ್ಲಿ ಈ ರೀತಿಯಾಗಿ ಕಲ್ಲಿನ ದೇವಸ್ಥಾನಗಳನ್ನು ಕಟ್ಟುತ್ತಿದ್ದರು. ಈಗಿನ ಕಾಲದಲ್ಲಿ ಅನೇಕ ಕಡೆ ಕಾಂಕ್ರೀಟ್ ನಲ್ಲೆ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ, ದೇವಸ್ಥಾನ ಇದ್ದರೆ ಹೀಗಿರಬೇಕು, ಇಳಕಲ್ಲ್ ಕೆಂಪು ಶಿಲೆಯಲ್ಲಿ ಗರ್ಭಗುಡಿ ಬಹಳಷ್ಟು ಅದ್ಭುತವಾಗಿ ಮೂಡಿಬಂದಿದೆ. ಇದು ಮೂರ್ನಾಲ್ಕು ಜನ ಸೇರಿ ಮಾಡುತ್ತಿರುವ ಕೆಲಸವಲ್ಲ, ಪ್ರತಿಯೊಬ್ಬ ಭಕ್ತನು ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಸಮಿತಿಯ ಮಹದಾಸೆ. ಈ ಪುಣ್ಯ ಕಾರ್ಯಕ್ಕೆ ಬಹಳಷ್ಟು ದಾನಿಗಳು ಸಹಕರಿಸಿದ್ದಾರೆ, ಇದು ಅಮ್ಮನ ಪ್ರೇರಣೆಯೆಂದು ಅನಿಸುತ್ತಿದೆ. ಕೆಲಸಗಳು ಪೂರ್ಣಗೊಂಡಾಗ ಇನ್ನೆಷ್ಟು ಅದ್ಭುತವಾಗಿ ಕಾಣಬಹುದು, ಕರ್ನಾಟಕದ ಜನತೆ ಎಲ್ಲರೂ ಬಂದು ಕಣ್ತುಂಬಿಕೊಳ್ಳಿ. ಇಲ್ಲಿನ ಭಕ್ತಾದಿಗಳಿಗೆ ಒಂದು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ 9 ಶಿಲೆ ಅಂದರೆ 9,999 ರೂಪಾಯಿ ಮೇಲ್ಪಟ್ಟು ನೀಡಿದರೆ "ಕಾಪುವಿನ ಅಮ್ಮನ ಮಕ್ಕಳು" ತಂಡದ ಸದಸ್ಯರಾಗಬಹುದು. ಈ ತಂಡಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪುಣೆ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಧವ ಆರ್. ಶೆಟ್ಟಿ ಪಾದೂರು ಹೊಸಮನೆ, ಆರ್ಥಿಕ ಸಮಿತಿಯ ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕರಾದ ಬಿ. ಕೆ. ಶ್ರೀನಿವಾಸ್, ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕರಾದ ಬೀನಾ ವಿ. ಶೆಟ್ಟಿ, ಸಂಚಾಲಕರುಗಳಾದ ಅನುರಾಧ ಮನೋಹರ್ ಶೆಟ್ಟಿ, ಅರ್ಚನಾ ಶೆಟ್ಟಿ, ಕವಿತಾ ಶೆಟ್ಟಿ, ಅನಿತಾ ಹೆಗ್ಡೆ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಫೆಬ್ರವರಿ 26 : ಶ್ರೀ ಹಳೆ ಮಾರಿಯಮ್ಮ ಸಭಾಗೃಹದಲ್ಲಿ ಗ್ಯಾರಂಟಿ ಸಮಾವೇಶ
Posted On: 23 Feb 2024, 02:55 PM
ಕಾಪು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಗ್ಯಾರಂಟಿ ಸಮಾವೇಶವನ್ನು ಆಯೋಜಿಸುವಂತೆ ಸರ್ಕಾರದ ನಿರ್ದೇಶನವಿರುವ ಹಿನ್ನೆಲೆಯಲ್ಲಿ ಫೆಬ್ರವರಿ 26 ರಂದು ಪೂರ್ವಾಹ್ನ 10.30ಕ್ಕೆ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಗೃಹ ಇಲ್ಲಿ ಗ್ಯಾರಂಟಿ ಸಮಾವೇಶವನ್ನು ಆಯೋಜಿಸಲಾಗಿರುತ್ತದೆ. ಗ್ಯಾರಂಟಿ ಸಮಾವೇಶಕ್ಕೆ ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳು, ಸಾರ್ವಜನಿಕರು ಭಾಗಿಯಾಗಿ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯುವ ಕುರಿತಾದ ಮಾಹಿತಿಯನ್ನು ಸಹ ಸಮಾವೇಶದ ಮೂಲಕ ಪಡೆಯಬಹುದೆಂದು ಕಾಪು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
