Updated News From Kaup

ಕಾಪು : ಎ.ಆರ್.ಕೆ ಡೆವಲಪರ್ಸ್ ವತಿಯಿಂದ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ರಂಜಾನ್ ಕಿಟ್ ವಿತರಣೆ

Thumbnail
Posted On: 12 Mar 2024, 10:03 AM

ಕಾಪು : ಎ.ಆರ್.ಕೆ ಡೆವಲಪರ್ಸ್ ಮತ್ತು ಕನ್ಸ್ಟ್ರಕ್ಷನ್ ಕಂಪನಿ ಕಾಪು ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಂಜಾನ್ ಕಿಟ್ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ರಂಜಾನ್ ಉಪವಾಸದಲ್ಲಿರುವ ಅತೀ ಬಡತನದ 100 ಮನೆಯನ್ನು ಗುರುತಿಸಿ ಅವರ ಮನೆಗೆ ಸುಮಾರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಮತ್ತು ಪಡಿತರ ಕಿಟ್ ನ್ನು ಕಾಪುವಿನ ಆಸು ಪಾಸಿನ ಕುಟುಂಬದ ಮನೆಗಳಿಗೆ ಒದಗಿಸಲಾಯಿತು. ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು ಮಲ್ಲಾರು ಗುರುಗಳಾದ ಅಶ್ರಫ್ ಮದನಿ ಮಜೂರು ದುವಾವನ್ನು ನೆರವೇರಿಸಿದರು. ನಂತರ ಮಾತನಾಡಿದ ಎ.ಆರ್.ಕೆ ಡೆವಲಪರ್ಸ್ ಕನ್ಸ್ಟ್ರಕ್ಷನ್ ಕಂಪನಿ ಮಾಲಕರಾದ ಅಸ್ಲಾಂ ಪರ್ಕಳ ನಾನು ನನ್ನ ದಿವಂಗತ ತಂದೆಯ ಸವಿನೆನಪಿಗಾಗಿ ಸುಮಾರು 5 ವರ್ಷಗಳಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರವರ ಮಾರ್ಗದರ್ಶನದಲ್ಲಿ ಆಯ್ದ 100 ಅತಿ ಬಡತನ ಕುಟುಂಬಕ್ಕೆ ರಂಜಾನ್ ಕಿಟ್ ನೀಡುತ್ತಿದ್ದೇನೆ ಎಂದು ತಿಳಿಸಿದರು ದೇವರು ರಂಜಾನ್ ತಿಂಗಳು ಎಲ್ಲಾ ಜನರಿಗೆ ಸುಖ ಸಂಪತ್ತು ನೀಡಲಿ ಎಂದು ಶುಭ ಹಾರೈಸಿದರು. ಫಾರೂಕ್ ಚಂದ್ರನಗರ ಮಾತನಾಡಿ ಅಸ್ಲಾಂ ಪರ್ಕಳ ಹಾಗೂ ರಿಯಾಜ್ ಸೌದಿ ಅರೇಬಿಯಾ ಹಾಗೂ ಅವರ ಸಹೋದರರು ಅನಿವಾಸಿ ಭಾರತೀಯರಗಿದ್ದು ಇಲ್ಲಿಯೂ ಡೆವಲಪರ್ಸ್ ಕನ್ಸ್ಟ್ರಕ್ಷನ್ ಕೆಲಸ ಮಾಡಿಕೊಂಡು ರಂಜಾನ್ ಕಿಟ್ ಅಂತೆಯೇ ನಾನು ಮಾಡುವ ಹಲವಾರು ಸಮಾಜ ಸೇವೆಗೆ ಅವರು ನನಗೆ ಬೆನ್ನುಲುಬಾಗಿ ನಿಂತು ಬಡವರ ಸೇವೆ ಮಾಡುವುದರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಉಸ್ಮಾನ್ ಶಿರ್ವ, ಆರಿಫ್ ಕಾಪು, ನಾಸಿರ್ ಅಬ್ದುಲ್ ಉಸ್ಮಾನ್, ಶಂಶುದ್ದಿನ್ ಇಸ್ಮಾಯಿಲ್ ಕರಂದಾಡಿ, ಅರಫ್ ಮಣಿಪಾಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಉಡುಪಿ : ಸಾರ್ವಜನಿಕ ಪ್ರದೇಶ, ವಾಣಿಜ್ಯ ಮಳಿಗೆಗಳಲ್ಲಿ ತುಳು ಭಾಷೆಯ ನಾಮಫಲಕ ಅಳವಡಿಸಲು ಮನವಿ

Thumbnail
Posted On: 11 Mar 2024, 02:41 PM

ಉಡುಪಿ : ತುಳು ಭಾಷೆ ಲಿಪಿಯ ಅಕ್ಷರಗಳನ್ನು ಸಹ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಅಳವಡಿಸಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಆದೇಶ ಹೊರಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಮೊಯಿದೀನ್ ಬಾವ ಹಾಗೂ ಎಲ್ಲಾ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ತುಳುನಾಡಿನ ಜನರ ಪರವಾಗಿ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಯಿತು. ಉಡುಪಿ ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು. ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ 2024 ರಲ್ಲಿ ತಿಳಿಸಿರುವಂತೆ ಕನ್ನಡ ಭಾಷೆಯನ್ನು ಶೇಕಡ 60 ರ ಬದಲಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೌರವಾನ್ವಿತ ನ್ಯಾಯಾಲಯದ ಕನ್ನಡ ನಾಮಫಲಕಗಳಿಗೆ ಕನಿಷ್ಠ ಶೇಕಡ 50 ನ್ನು ನಮೂದಿಸಿ ಹಾಗೂ 2500 ವರ್ಷಗಳ ಇತಿಹಾಸ ಹೊಂದಿರುವ ಸ್ವಂತ ಲಿಪಿ ಹೊಂದಿರುವ ತುಳು ಲಿಪಿಯ ಅಕ್ಷರಗಳಿಗೆ ಶೇಕಡ 30 ರಷ್ಟು ಅವಕಾಶ ನೀಡಬೇಕು ಮತ್ತು ಉಳಿದ ವ್ಯಾವಹಾರಿಕ ಭಾಷೆಗಳಿಗೆ ಶೇಕಡ 20 ರಷ್ಟನ್ನು ತುಳುನಾಡಿನ 2 ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೂಡಲೇ ವಿಶೇಷ ಆದೇಶ ಹೊರಡಿಸಬೇಕೆಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಆಕಾಶ್ ರಾಜ್ ಜೈನ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ತುಳು ಪರ ಹೋರಾಟಗಾರರಾದ ರೋಷನ್ ರೆನೋಲ್ಡ್, ಜೈ ತುಳುನಾಡು ಸಂಘಟನೆ ಅಧ್ಯಕ್ಷರಾದ ವಿಷು ಶ್ರೀಕೆರಾ, ತುಳುನಾಡು ಒಕ್ಕೂಟದ ಪ್ರಮುಖ ಮುಖಂಡರುಗಳು, ಉಡುಪಿ ರಾಜಕೀಯ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಅವರು, ಸೇರಿದಂತೆ ಎಲ್ಲಾ ತುಳು ಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.

ಮಾಚ್೯ 11 : ಕಾಪು ಪುರಸಭಾ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮ

Thumbnail
Posted On: 10 Mar 2024, 08:39 PM

ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾಪು, ಕಾಪು ಪುರಸಭೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಾಪು, ಜೆಸಿಐ ಕಾಪು ಮತ್ತು ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಇವರ ಜಂಟಿ ಆಶ್ರಯದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಗ್ರಾಮಗಳಲ್ಲಿ ಮಾ. 11 ರಂದು ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ನಾಯಿಗಳಿಂದ ರೇಬಿಸ್ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಪು ಪುರಸಭೆ ಆವರಣ, ಉಳಿಯಾರಗೋಳಿ ಯಾರ್ಡ್ ಬೀಚ್, ಮಲ್ಲಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಆವರಣ ಹಾಗೂ ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ಆವರಣದಲ್ಲಿ ಬೆಳಿಗ್ಗೆ 10.30 ರಿಂದ 12.00ಗಂಟೆಯ ವರೆಗೆ ಏಕಕಾಲದಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಕಾಪು ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ಲಸಿಕಾ ಅಭಿಯಾನಕ್ಕಾಗಿ ಸಾಕು ನಾಯಿಗಳನ್ನು ನಿಗದಿತ ಸಮಯದಲ್ಲಿ ನಿಗದಿತ ಸ್ಥಳಕ್ಕೆ ತಂದು ಲಸಿಕೆ ಹಾಕಿಸಿಕೊಳ್ಳ ಬಹುದಾಗಿದೆ. ಈ ಅಭಿಯಾನದ ಯಶಸ್ಸಿಗೆ ಕಾಪು ಪುರಸಭೆ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಕಾರ್ಯಕ್ರಮ ಸಂಯೋಜಕರು ವಿನಂತಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ದರ್ಶನ ಮಾಡಿ ಇಹಲೋಕ ತ್ಯಜಿಸಿದ ಆರ್‌ಎಸ್‌ಎಸ್‌ ಮುಖಂಡ ಪಾಂಡುರಂಗ ಶಾನುಭಾಗ್  

Thumbnail
Posted On: 10 Mar 2024, 08:34 PM

ಅಯೋಧ್ಯೆ: ಆರ್‌ಎಸ್‌ಎಸ್‌ನ ಉಡುಪಿಯ ‌ ಹಿರಿಯ ಸಕ್ರಿಯ ಸದಸ್ಯ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಶ್ರೀ ರಾಮನ ದರ್ಶನ‌ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ  ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ  ಸಂತೋಷದಿಂದ ತೆರಳಿದ್ದರು. ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರಿಗೆ ಹೃದಯಾಘಾತವಾಗಿದೆ. ಸಮೀಪವರ್ತಿಗಳು ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಜೀವನ ಪರ್ಯಂತ ಹಿಂದು ಸಿದ್ಧಾಂತಕ್ಕಾಗಿ ದೈಹಿಕ ಅಂಧತ್ವವಿದ್ದರೂ, ಆರ್‌ಎಸ್‌ಎಸ್‌ನಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗರು ಅಪೂರ್ವ ಚಿಂತಕರೂ, ರಾಷ್ಟ್ರ ಭಕ್ತರೂ ಆಗಿದ್ದರು.

ಪಡುಬಿದ್ರಿ : ಶಿವಾಯ ಫೌಂಡೇಶನ್ ವತಿಯಿಂದ ಚಿಕಿತ್ಸೆಗೆ ನೆರವು

Thumbnail
Posted On: 09 Mar 2024, 02:09 PM

ಪಡುಬಿದ್ರಿ : ಪದವಿ ಶಿಕ್ಷಣ ಪಡೆಯುತ್ತಿರುವ ಶಿರ್ವದ ಜಿಗಿಷಾ ದೇವಾಡಿಗ ಎಂಬ ಹೆಣ್ಣು ಮಗಳ ಬೋನ್ ಟ್ಯೂಮರ್ ಚಿಕಿತ್ಸೆಗಾಗಿ ಶಿವಾಯ ಫೌಂಡೇಶನ್ ವತಿಯಿಂದ, ಗಣಪತಿ ದೇವಸ್ಥಾನ ಪಡುಬಿದ್ರಿ ಇಲ್ಲಿ 45,000 ರೂಪಾಯಿಗಳ ಧನಸಹಾಯದ ಚೆಕ್ ಹಸ್ತಾಂತರಿಸಿ ಜಿಗಿಷಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಆಸ್ಪೆನ್ ಎಸ್ ಇ ಝಡ್ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷರಾದ ನವೀನಚಂದ್ರ ಶೆಟ್ಟಿ, ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಫಲಿಮಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ ಶೆಟ್ಟಿ ಶಾರದೆ, ಸದಸ್ಯರಾದ ಮಹೇಶ್ ದೇವಾಡಿಗ ಸ್ಮೈಲ್ ಫೋಟೊಗ್ರಫಿ ಮುಕ್ಕ ಮತ್ತು ಜಗನ್ನಾಥ್ ಶೆಟ್ಟಿ, ರಮಣಿ ಐಸ್ಕ್ರೀಂ ಪಡುಬಿದ್ರಿ ಮುಂತಾದವರು ಉಪಸ್ಥಿತರಿದ್ದರು.

ಉಚ್ಚಿಲ : ನಟೇಶ ನೃತ್ಯ ನಿಕೇತನ - ವಿಂಶತಿ ಸಂಭ್ರಮ ; ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

Thumbnail
Posted On: 09 Mar 2024, 07:44 AM

ಉಚ್ಚಿಲ : ಭಾರತವು ಹಲವು ಸಂಸ್ಕೃತಿಗಳ ತವರು. ಬಹು ಬದುಕುಗಳ ಕಥನ ಎಂಬ ಮಾತಿನಂತೆ ವಿವಿಧ ಅಭಿವೃದ್ಧಿಯ ಜೊತೆಗೆ ಸಂಸ್ಕಾರಯುತ ಮಾನವ ಸಂಪನ್ಮೂಲ ದೇಶದ ಆಸ್ತಿ. ಪಾಶ್ಚಿಮಾತ್ಯದೆಡೆಗೆ ಮಕ್ಕಳು ವಾಲುತ್ತಿರುವ ಸಂದರ್ಭ ನಮ್ಮ ನೆಲದ ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸುವುದು ಅನಿವಾರ್ಯ. ಐತಿಹಾಸಿಕ ಸಾಂಸ್ಕೃತಿಕ ನೃತ್ಯ ಪ್ರಾಕಾರವಾದ ಭರತನಾಟ್ಯವನ್ನು ನೂರಾರು ಮಕ್ಕಳಿಗೆ ಕಲಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕೀರ್ತಿ ನಟೇಶ ನೃತ್ಯ ನಿಕೇತನ ಸಂಸ್ಥೆಗಿದೆ. ವೃತ್ತಿ ಮತ್ತು ಲೌಕಿಕ ಬದುಕಿನಲ್ಲಿ ಲಯ ಕಂಡುಕೊಂಡ ಮಂಗಳ ಕಿಶೋರ್ ದೇವಾಡಿಗ ಅವರ ನಾಟ್ಯ ಕೇಂದ್ರದಿಂದ ಭರತನಾಟ್ಯದ ಕಲಿಕೆಯ ಜೊತೆಗೆ ಸಾಧಕರನ್ನು ಗುರುತಿಸುವ ಕಾಯಕ‌ ಮುಂದೆಯೂ ನಡೆಯಲಿ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಉಚ್ಚಿಲದಲ್ಲಿ ನಟೇಶ ನೃತ್ಯ ನಿಕೇತನ ಉಚ್ಚಿಲದ ವಿಂಶತಿ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅರ್ಚಕರಾದ ಗೋವಿಂದ ರಾಜ್ ಭಟ್ ಉದ್ಘಾಟಿಸಿ, ಶುಭಹಾರೈಸಿದರು. ಪ್ರಶಸ್ತಿ ಪ್ರದಾನ : ಪತ್ರಿಕಾರಂಗದಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಸಂಗೀತ ಕ್ಷೇತ್ರದಲ್ಲಿ ಶರತ್ ಉಚ್ಚಿಲ, ಭರತನಾಟ್ಯ ಕ್ಷೇತ್ರದಲ್ಲಿ ಡಾ| ರಶ್ಮಿ ಕಲ್ಕೂರ, ಯಕ್ಷಗಾನ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ವೈ.ಎಲ್.ವಿಶ್ವರೂಪ ಮಧ್ಯಸ್ಥ ನೀಲಾವರ, ಶಿಕ್ಷಣ ಕ್ಷೇತ್ರದಲ್ಲಿ ವನಿತಾ, ನಾಟ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರಕಾಶ್ ಕಾರ್ಕಳರಿಗೆ ನಟೇಶ ಪ್ರಶಸ್ತಿಯನ್ನು ನೀಡಲಾಯಿತು. ಪ್ರಸಾದನ ಕ್ಷೇತ್ರದಲ್ಲಿ ರಮೇಶ್ ಉಡುಪಿ, ವೇಷಭೂಷಣ ಸಂಸ್ಥೆ ಕಲಾನಿಕೇತನ ಸುರತ್ಕಲ್ ಇದರ ಸ್ವರ್ಣ ಎಲ್ ಶೆಟ್ಟಿ ಇವರಿಗೆ ವರ್ಣಾರ್ಪಣ ಪ್ರಶಸ್ತಿ, ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ ಇವರಿಗೆ ನಾಟ್ಯ ಕಲಾಂಜಲಿ ಪ್ರಶಸ್ತಿಯನ್ನು ಅತಿಥಿಗಳ ಸಮ್ಮುಖ ಪ್ರದಾನಿಸಲಾಯಿತು. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಾಲೂಕು ತಹಶೀಲ್ದಾರ್ ಡಾ| ಪ್ರತಿಭ ಆರ್., ಉಚ್ಚಿಲ ಬಡಾ ಗ್ರಾ. ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ಉಚ್ಚಿಲ ಮಹಾಲಕ್ಷ್ಮಿ ದೇವಳದ ಅರ್ಚಕ ಕೆ.ವಿ.ರಾಘವೇಂದ್ರ ಉಪಾಧ್ಯಾಯ, ನಾದಶ್ರೀ ಸೊಸೈಟಿ ಕುಕ್ಕಿಕಟ್ಟೆ ಉಡುಪಿ ಇದರ ಅಧ್ಯಕ್ಷ ಶ್ರೀಧರ ದೇವಾಡಿಗ, ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ, ನೃತ್ಯ ಗುರು ಮಂಗಳ ಕಿಶೋರ್, ಸಂಚಾಲಕರಾದ ಪ್ರಕಾಶ್ ದೇವಾಡಿಗ, ಕಿಶೋರ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು. ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ ಅಧ್ಯಕ್ಷತೆ ವಹಿಸಿದ್ದರು. ಪಂಚಮಿ ಪ್ರಾರ್ಥಿಸಿದರು. ನೃತ್ಯ ಗುರು ಮಂಗಳ ಕಿಶೋರ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಸುಜಲ ಎಸ್ ಸುವರ್ಣ ಆಯ್ಕೆ

Thumbnail
Posted On: 09 Mar 2024, 07:31 AM

ಉಡುಪಿ : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಸುಜಲ ಎಸ್ ಸುವರ್ಣ ಇವರು ಆಯ್ಕೆಯಾಗಿರುತ್ತಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುತ್ತಾರೆ.

ಬಂಗಾರದ ಕನಸು ನನಸು ಮಾಡಲಿದೆ ಸಾಯಿ ಗೋಲ್ಡ್ ಸ್ಕೀಮ್

Thumbnail
Posted On: 09 Mar 2024, 07:01 AM

ಕಟಪಾಡಿ : ಇಲ್ಲಿನ ಸಾಯಿ ಗೋಲ್ಡ್ ‌ಸಂಸ್ಥೆಯು ಕಂತಿನ ಮೂಲಕ ಹಣ ಪಾವತಿಸುವ ಜೊತೆಗೆ ಒಂದಷ್ಟು ‌ಹೊಸ ಯೋಜನೆಗಳನ್ನು ಚಿನ್ನ ಪ್ರಿಯರಿಗಾಗಿ‌ ತಂದಿದ್ದಾರೆ. ಏಪ್ರಿಲ್ 15 ಕ್ಕೆ ಮೊದಲ ಕಂತು ಪ್ರಾರಂಭವಾಗಲಿದ್ದು, ಪ್ರತಿ ಸದಸ್ಯರು ಪ್ರತಿ ತಿಂಗಳು ರೂ. 1000/-ದಂತೆ 20 ಕಂತು ಪಾವತಿಸತಕ್ಕದ್ದು. ಸದಸ್ಯರು ಪ್ರತಿ ತಿಂಗಳು 13ನೇ ತಾರೀಕಿಗಿಂತ ಮುಂಚೆ ಕಂತನ್ನು ಪಾವತಿಸಬೇಕು. ತಪ್ಪಿದರೆ ನಿಮ್ಮ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ. ಪ್ರತಿ ತಿಂಗಳ 15ನೇ ತಾರೀಕಿನಂದು ಸಂಜೆ 5.30 ಗಂಟೆಗೆ ಸರಿಯಾಗಿ ಹಾಜರಿದ್ದ ಸದಸ್ಯರ ಸಮ್ಮುಖ ಹಾಗೂ ನಮ್ಮ ಕಾಪು ಯುಟ್ಯೂಬ್ ನೇರ ಪ್ರಸಾರದಲ್ಲಿ ಡಾ. ನಡೆಸಲಾಗುವುದು. ಪ್ರತಿ ತಿಂಗಳು ಡ್ರಾ ಫಲಿತಾಂಶವನ್ನು ಸದಸ್ಯರಿಗೆ ವಾಟ್ಸಾಪ್ ಮೂಲಕ ತಿಳಿಸಲಾಗುವುದು. ಅರ್ಧದಲ್ಲಿ ಕಂತು ಕಟ್ಟದೆ ಇದ್ದರೆ, ಯಾವುದೇ ಚಿನ್ನವನ್ನು ನೀಡಲಾಗುವುದಿಲ್ಲ. (ಅಂತಹ ಸದಸ್ಯರು ಕೊನೆಯಲ್ಲಿ ಪೂರ್ತಿ ಹಣವನ್ನು ಪಾವತಿಸಿ ಚಿನ್ನವನ್ನು ಪಡೆದುಕೊಳ್ಳಬಹುದು.) ಬಹುಮಾನ ವಿಜೇತರು ಮುಂದಿನ ಕಂತಿನಿಂದ ಹಣ ಕಟ್ಟುವಂತಿಲ್ಲ. ಯಾವ ಕಾರಣಕ್ಕೂ ಚಿನ್ನದ ಬದಲಾಗಿ ಹಣ ಕೊಡಲಾಗುವುದಿಲ್ಲ. ಕೊನೆಗೆ ಉಳಿದ ಸದಸ್ಯರ ಆಯ್ಕೆಯ ಚಿನ್ನವನ್ನು 30 ದಿವಸದ ಒಳಗೆ ಪಡೆದು ಕೊಳ್ಳತಕ್ಕದು. 916 ಹಾಲ್‌ಮಾರ್ಕಿನ ಚಿನ್ನವಾಗಿರುತ್ತದೆ ಹಾಗೂ ಚಿನ್ನದ ಜಿ.ಎಸ್.ಟಿ. ಮತ್ತು ಮಜೂರಿಯನ್ನು ಸದಸ್ಯರೇ ಭರಿಸತಕ್ಕದ್ದು. ಕರಪತ್ರದಲ್ಲಿ ತೋರಿಸುವ ಚಿನ್ನಾಭರಣದ ಚಿತ್ರಗಳು ವಿವರಣೆಯ ಉದ್ದೇಶಕ್ಕೆ ಮಾತ್ರ. ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು‌ ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ. ವಿಳಾಸ : ಪರ್ಸನಲ್ ಕಾಂಪ್ಲೆಕ್ಸ್ , ಏಣಗುಡ್ಡೆ, ಕಟಪಾಡಿ, ಉಡುಪಿ ಜಿಲ್ಲೆ -574 105. ಸಂಪರ್ಕ ಸಂಖ್ಯೆ : 9036001528, 9036001529, 8748999424, 9916278269

ಮುಲ್ಕಿ : ಸಿ.ಎಸ್.ಐ. ಬಾಲಿಕಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ

Thumbnail
Posted On: 08 Mar 2024, 10:18 PM

ಮುಲ್ಕಿ: ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮುಲ್ಕಿ ಸಿ.ಎಸ್.ಐ. ಬಾಲಿಕಾಶ್ರಮದ ಮಕ್ಕಳೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಡಾ. ಐಶ್ವರ್ಯ ಸಿ.ಅಂಚನ್ ಆಯುರ್ವೇದ ಜೀವನ ಪದ್ಧತಿ ಮತ್ತು ಚಿಕಿತ್ಸಾ ಮಾಹಿತಿ ನೀಡಿದರು. ಇದೇ ಸಂದರ್ಭ ಸ್ನಾತಕೋತ್ತರ 6ನೇ ರ‍್ಯಾಂಕ್ ವಿಜೇತೆ ಡಾ. ಐಶ್ವರ್ಯ ಸಿ. ಅಂಚನ್‌ರವರನ್ನು ಸಂಘಟಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬಾಲಿಕಾಶ್ರಮದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಸ್ವಾವಲಂಬಿಗಳಾಗಿ, ಸಾಧಕರಾಗಿ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು. ಸಿ.ಎಸ್.ಐ. ಚರ್ಚ್ ಸಭಾಪಾಲಕ ರೆ.ಫಾ. ಸ್ಟೀವನ್ ಸರ್ವೋತ್ತಮ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧಕರ ಶ್ರಮ ಬಾಲೆಯರಿಗೆ ಪ್ರೇರಣೆಯಾಗಲಿ ಎಂದರು. ಸೇವಾದಳದ ಅಧ್ಯಕ್ಷ ಸಂತೋಷ್ ಪೂಜಾರಿ, ಮಹಿಳಾ ಮಂಡಳಿ ಅಧ್ಯಕ್ಷೆ ರೋಹಿಣಿ ಆನಂದ್, ಕಲ್ಪತರು ಸ್ವಸಹಾಯ ಸಂಘದ ಮೇಲ್ವಿಚಾರಕ ರಮಾನಂದ ಪೂಜಾರಿ, ಬಾಲಿಕಾಶ್ರಮದ ಮೇಲ್ವಿಚಾರಕಿ ಶಾಂತಿ ಮುಖ್ಯ ಅತಿಥಿಗಳಾಗಿದ್ದರು. ರವಿರಾಜ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ರೋಹಿಣಿ ಆನಂದ್ ಸ್ವಾಗತಿಸಿದರು. ಕಾರ್ಯದರ್ಶಿ ತೇಜವತಿ ವಂದಿಸಿದರು.

ಉಡುಪಿ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ : ಉಡುಪಿ ತಂಡ ವಿನ್ನರ್ಸ್, ಕುಂದಾಪುರ ತಂಡ ರನ್ನರ್ಸ್

Thumbnail
Posted On: 06 Mar 2024, 04:48 PM

ಹೆಜಮಾಡಿ : ಲೀಗ್ ಮಾದರಿಯಲ್ಲಿ ಹೆಜಮಾಡಿಯ ರಾಜೀವ್ ಗಾಂಧಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಕಾಪು ತಾ. ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ರಜತ ಸಂಭ್ರಮದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದ ಆರು ತಂಡಗಳ ಕ್ರಿಕೆಟ್ ಹಣಾಹಣಿಯಲ್ಲಿ ರೋಚಕವಾಗಿದ್ದ ಅಂತಿಮ ಪಂದ್ಯದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡವು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು 4ರನ್ನುಗಳಿಂದ ಸೋಲಿಸಿ ಜಿಲ್ಲಾ ಮಟ್ಟದ ಕ್ರಿಕೆಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ವಿಜಯೀ ಜಿಲ್ಲಾ ತಂಡವು ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಉಡುಪಿ ತಂಡವು ನಿಗದಿತ 5 ಓವರ್‌ಗಳಲ್ಲಿ 37ರನ್ನುಗಳನ್ನು ಪೇರಿಸಿತ್ತು. ಕುಂದಾಪುರ ತಾ| ಪತ್ರಕರ್ತರ ತಂಡವು ದ್ವಿತೀಯ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವಿನೋದ್ ಸಾಲ್ಯಾನ್ ಬೆಳ್ಳಾಯರು ಮುಖ್ಯ ಅತಿಥಿಗಳಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ರಜತ ಸಂಭ್ರಮದ ಸಂಚಾಲಕ ಮಹಮ್ಮದ್ ಶರೀಫ್, ಕಾಪು ತಾ| ಅಧ್ಯಕ್ಷ ಹರೀಶ್ ಹೆಜಮಾಡಿ, ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಕ್ರೀಡಾ ಸಂಚಾಲಕ ರಾಕೇಶ್ ಕುಂಜೂರು ವೇದಿಕೆಯಲ್ಲಿದ್ದರು. ಯತೀಶ್ ಉಡುಪಿ, ಸಂತೋಷ್ ಕುದೇಶ್ವರ, ಹರೀಶ್ ಕುಂದಾಪುರ, ರಾಘವೇಂದ್ರ ಉಡುಪಿ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು. ಮುಖ್ಯ ಅತಿಥಿಗಳಾಗಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಮಾತನಾಡಿ, ಒತ್ತಡದ ನಡುವೆಯೂ ಪತ್ರಕರ್ತರು ಕ್ರೀಡೋತ್ಸಾಹದಿಂದ ಸೇರಿದ್ದೀರಿ. ನಿಮ್ಮ ಸಂಘಟನೆಯಿಂದ ಮತ್ತಷ್ಟು ಬಲಯುತರಾಗಿರಿ ಎಂದರು. ಕ್ರೀಡಾಸೂರ್ತಿ, ಕ್ರೀಡಾ ಮನೋಭಾವ ಪತ್ರಕರ್ತರಲ್ಲಿ ನಿರಂತರವಾಗಿರಲಿ. ಇದು ಸೌಹಾರ್ದತೆಗೂ ನಾಂದಿಯಾಗುತ್ತದೆ. ಯಾವುದೇ ಹಮ್ಮು ಇರದೆ ಭಾಗವಹಿಸುತ್ತಿರುವುದನ್ನು ಕಂಡು ತನಗೂ ಕ್ರಿಕೆಟ್ ಆಡಬೇಕೆನಿಸಿದೆ. ಪತ್ರಕರ್ತರ ಮತ್ತಷ್ಟು ಕ್ರೀಡೋತ್ಸವಗಳು ನಡೆಯುತ್ತಿರಲಿ ಎಂದು ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಅರ್. ಹೇಳಿದರು. ಅವರು ಫೈನಲ್ ಪಂದ್ಯದ ಕ್ರೀಡಾಳುಗಳಿಗೆ ಹಸ್ತಲಾಘವವನ್ನಿತ್ತು ಅಂತಿಮ ಪಂದ್ಯದ ಟಾಸ್  ಚಿಮ್ಮಿ ತಂಡಗಳಿಗೆ ಶುಭ ಹಾರೈಸಿದರು. ಪಂದ್ಯಾಕೂಟವನ್ನು ಉದ್ಘಾಟಿಸಿದ ಅಸ್ಪೆನ್ ಇನ್ಪ್ರಾ ಪಡುಬಿದ್ರಿಯ ಮಹಾ ಪ್ರಬಂಧಕ ಅಶೋಕ್ ಶೆಟ್ಟಿ ಅವರು, ಪತ್ರಕರ್ತರು ನಿರಂತರ ತಮ್ಮ ಕಾರ್ಯನಿರತರಾಗಿದ್ದು ವಿಪರೀತ ಕಾರ್ಯ ಬಾಹುಳ್ಯದ ನಡುವೆಯೂ ಪಂದ್ಯಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯವೆಂದರು. ಮಾಜಿ ತಾ. ಪಂ. ಸದಸ್ಯ ನವೀನ್‌ಚಂದ್ರ ಶೆಟ್ಟಿ, ಉದ್ಯಮಿ ದೀಪಕ್ ಕುಮಾರ್ ಎರ್ಮಾಳು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿದರು. ಕಾಪು ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನಝೀರ್ ಪೊಲ್ಯ, ತಾಲೂಕು ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ರಜತ ಸಂಭ್ರಮ ಸಮಿತಿಯ ಸಂಚಾಲಕ ಮೊಹಮ್ಮದ್ ಶರೀಫ್ ಕಾರ್ಕಳ, ಸಾಮಾಜಿಕ ಕಾರ್ಯಕರ್ತ ಶೇಖರ್ ಹೆಜಮಾಡಿ ಉಪಸ್ಥಿತರಿದ್ದರು. ಹರೀಶ್ ಹೆಜಮಾಡಿ ಸ್ವಾಗತಿಸಿದರು. ಕಾಪು ತಾಲೂಕು ಸಂಘದ ಕ್ರೀಡಾ ಸಂಚಾಲಕ ರಾಕೇಶ್ ಕುಂಜೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸಂತೋಷ್ ಕಾಪು ವಂದಿಸಿದರು.