Updated News From Kaup

ಕಾಪು : ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಶ್ರದ್ಧಾಂಜಲಿ ಸಭೆ

Posted On: 02-01-2024 06:30PM

ಕಾಪು : ಎಲ್ಲಾ ಕ್ಷೇತ್ರದಲ್ಲಿ ಛಾಪನ್ನು ಒತ್ತಿದ ಮಹನೀಯ ವ್ಯಕ್ತಿ ಲೀಲಾಧರ ಶೆಟ್ಟಿ. ಯಾವುದೇ ಅಹಂ ಭಾವವಿರದೆ ಎಲ್ಲರಲ್ಲೂ ಒಂದಾಗುವ ವ್ಯಕ್ತಿ. ಸಮಾಜಸೇವೆ ಎಲ್ಲರೂ ಮಾಡುತ್ತಾರೆ ನನ್ನ ಬಗ್ಗೆ ಯೋಚಿಸದೆ ಗಂಧದ ಕೊರಡಿನಂತೆ ತನ್ನನ್ನು ತಾನು ತೀಡಿ ಸರ್ವರಿಗೂ ಒಳಿತಾಗಲಿ ಎಂಬ ಮನಸ್ಥಿತಿಯ ವ್ಯಕ್ತಿ. ಲೀಲಾಧರ ಶೆಟ್ಟಿ ಮತ್ತು ವಸುಂಧರ ದಂಪತಿಗಳಿಗೆ ಚಿರಶಾಂತಿ ಸಿಗಲಿ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಹೇಳಿದರು. ಅವರು ಕಾಪು ತಾಲೂಕಿನ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಲೀಲಾಧರ ಶೆಟ್ಟಿ ದಂಪತಿಯ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಧಾರ್ಮಿಕ ಚಿಂತಕ ಜನಾರ್ಧನ ಕೊಡವೂರು ಮಾತನಾಡಿ ಸ್ವಂತದ ಬಗ್ಗೆ ಯೋಚನೆ ಮಾಡದ ಲೀಲಾಧರ ಶೆಟ್ಟಿ ಮಾಡಿದ ಕಾರ್ಯಗಳು ಅಜರಾಮರ ಅಂತಹ ಸೇವಕರು ಹುಟ್ಟಬೇಕು. ಧಾರ್ಮಿಕತೆ, ಸಂಸ್ಕೃತಿಯ ಬಗ್ಗೆ ಯೋಚಿಸುವ ವ್ಯಕ್ತಿ ಅವರಾಗಿದ್ದರು ಎಂದರು.

ಈ ಸಂದರ್ಭ ರಾಧಾಕೃಷ್ಣ ಮೆಂಡನ್, ವಿಜಯ್ ಕುಮಾರ್ ಕೊಡವೂರು, ರಂಜಿತ್ ಶೆಟ್ಟಿ, ಅರುಣ್ ಕ‌ಮಾರ್ ಬಿ.ಕೆ., ನಡಿಕೆರೆ ರತ್ನಾಕರ‌ ಶೆಟ್ಟಿ, ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ನಿರ್ಮಲ್ ಕುಮಾರ್ ಹೆಗ್ಡೆ , ಮೋಹನ್ ಬಂಗೇರ ಕಾಪು, ರಘುರಾಮ ಶೆಟ್ಟಿ ಕೊಪ್ಪಲಂಗಡಿ, ದಿವಾಕರ ಶೆಟ್ಟಿ ಮಲ್ಲಾರು ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ : ಶಿವಾಯ ಫೌಂಡೇಶನ್ ಮುಂಬೈ ವತಿಯಿಂದ ಕುಟುಂಬವೊಂದಕ್ಕೆ ದಿನಸಿ ಸಾಮಾಗ್ರಿ, ವಿಧವಾ ವೇತನದ ಚೆಕ್ ಹಸ್ತಾಂತರ

Posted On: 02-01-2024 02:38PM

ಮುಲ್ಕಿ : ಶಿವಾಯ ಫೌಂಡೇಶನ್ (ರಿ) ಮುಂಬೈ ಇವರ ವತಿಯಿಂದ ಇಂದು ಮುಲ್ಕಿ ಕಾರ್ನಾಡು ಅಮೃತಮಾಯಿ ನಗರ ನಿವಾಸಿ ಗೀತಾರವರ ಕುಟುಂಬಕ್ಕೆ ದಿನಬಳಕೆಯ ದಿನಸಿ ಸಾಮಾಗ್ರಿ ಹಾಗೂ ವಿಧವಾ ವೇತನದ ಚೆಕ್ ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ನ ಸದಸ್ಯರಾದ ರವಿ ಶೆಟ್ಟಿ (ಶಾರದೆ) ಪಡುಬಿದ್ರಿ, ರಮಣಿ ಐಸ್ ಕ್ರೀಮ್ ಪಾರ್ಲರ್ ಮಾಲಿಕರಾದ ಜಗನ್ನಾಥ್ ಶೆಟ್ಟಿ ಪಡುಬಿದ್ರಿ, ಸುಧಾಕರ್ ಕೆ ಪಡುಬಿದ್ರಿ ಉಪಸ್ಥಿತರಿದ್ದರು.

ಆರೋಗ್ಯಯುತ ಜೀವನಕ್ಕೆ ಹೊಸ ವರುಷ ದಾರಿಯಾಗಲಿ

Posted On: 02-01-2024 11:21AM

ನೂತನ ವಷ೯ 2024 ಬಂದಿದೆ. ಈ ವಷ೯ ನಮ್ಮ ಬದುಕಿನಲ್ಲಿ ಮತ್ತಷ್ಟು ಭರವಸೆಯ ಸಾಧನೆಗಳು ಹೊರಬರಲಿ ಎಂಬ ಆಶಯದೊಂದಿಗೆ ಈ ವಷ೯ ನಮ್ಮ ಆರೋಗ್ಯ ದ ವಷ೯ವಾಗಲಿ ಆರೋಗ್ಯವಿದ್ದರೆ ವರ್ಷವೆಲ್ಲ ಹೊಸತನದಿಂದಲೇ ಕೂಡಿರುತ್ತದೆ. ಆರೋಗ್ಯ ಪಾಲನೆಗೆ ಕೆಲವು ಸೂತ್ರಗಳನ್ನಾದರೂ ಕಟ್ಟುನಿಟ್ಟಾಗಿ ಪಾಲಿಸಲು ಈ ಹೊಸವರ್ಷ ನಮಗೆ ನೆಪವಾಗಲಿ. ಒಂದೆಡೆ ಈ ವರ್ಷ ಸುಸೂತ್ರವಾಗಿ ಉರುಳಿದ ಸಂತಸವಿದ್ದರೆ ಮತ್ತೊಂದೆಡೆ ಮುಂದಿನ 20 24 ನೇ ವರ್ಷದ ಬಗ್ಗೆ ಕಾತರ, ಕನಸುಗಳ ನಿರೀಕ್ಷೆಯಿದೆ. ಈ ಹಿಂದಿನ ಎರಡು ವರ್ಷಗಳು ಹೇಗಿದ್ದವು ಎಂಬುದು ಜಗತ್ತಿಗೇ ಗೊತ್ತಿದೆ. ಕೊರೊನಾ ಈ ಅಮೂಲ್ಯ ವರ್ಷಗಳನ್ನು ಬಹುಮಟ್ಟಿಗೆ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿತ್ತು. ಆರಂಭದಲ್ಲಿ ಕೊರೊನಾ ತನ್ನ ಗತ್ತು ತೋರಿಸಿದರೂ ಹೆಚ್ಚು ಕಾಡಲಿಲ್ಲವೆನ್ನಬಹುದು. ಏಕೆಂದರೆ ಪ್ರಾರಂಭದಲ್ಲಿ ಕೊರೊನಾ ಪ್ರಕರಣ ಕಂಡರೂ ಅವೆಲ್ಲ ಸೌಮ್ಯ ಸ್ವರೂಪದ್ದಾಗಿತ್ತು. ಲಸಿಕಾ ಅಭಿಯಾನ, ದೇಹದಲ್ಲಿ ಪ್ರತಿರೋಧಕ ಕಾಯಗಳ ಉತ್ಪತ್ತಿಯಿಂದಾಗಿ ರೋಗ ಬಹುತೇಕ ಅಳಿವಿನ ಅಂಚಿಗೆ ಬಂದು ನಿಂತಿದೆ.

ಹಾಗೆಂದು ಮೈಮರೆಯುವ ಹಾಗಿಲ್ಲ. ಜಗತ್ತಿನ ಇನ್ನೂ ಅನೇಕ ಕಡೆ ಕೊರೊನಾ ಹೊಸ ಪ್ರಭೇದಗಳು ಕಾಣಿಸಿಕೊಳ್ಳುತ್ತಿವೆ. ಇಂದಿನ ಜೆಟ್ ಯುಗದಲ್ಲಿ ಇವುಗಳ ಹರಡುವಿಕೆಯೂ ವೇಗವಾಗಿಯೇ ಇರುತ್ತದೆ. ನಮ್ಮನ್ನು ಕಾಡಿದ ಕೊರೊನಾ ಜೀವನದ ಕೆಲವು ಪಾಠಗಳನ್ನು ಕಲಿಸಿದೆ. ಈ ಪಾಠಗಳನ್ನು ಮುಂದಿಟ್ಟುಕೊಂಡು ಹೊಸ ವರ್ಷವನ್ನು ಹರುಷದಿಂದಲೇ ಸ್ವಾಗತಿಸೋಣ. ನಾವೆಲ್ಲರೂ ಆರೋಗ್ಯವಂತರಾಗಿರಲು ಬಯಸುತ್ತೇವೆ. ಅದಕ್ಕನುಗುಣವಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಕೆಲವು ಗುರಿಗಳನ್ನು ಇಟ್ಟುಕೊಳ್ಳುವ ಸಂಕಲ್ಪ ಮಾಡೋಣ.. ಶುಚಿತ್ವ ಪಾಲನೆ ಮಾಡೋಣ : ಕೊರೊನಾ ಕಲಿಸಿದ ಮೊದಲ ಪಾಠವೇ ವೈಯಕ್ತಿಕ ಶುಚಿತ್ವ ವನ್ನು ಕಾಪಾಡಿಕೊಳ್ಳುವುದು ನಾವು ವೈಯಕ್ತಿಕವಾಗಿ ಇತರರೊಂದಿಗೆ ಹೇಗೆ ಬೆರೆಯುತ್ತೇವೆ ಎನ್ನುವುದರ ಮೇಲೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಅವಲಂಬಿಸಿವೆ. ಪರರ ವಸ್ತುಗಳನ್ನು ಬಳಸದೇ ಇರುವುದು, ಊಟ-ಪಾನೀಯಗಳ ಬಳಕೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದರಿಂದ ಕೊರೊನಾ ಅಷ್ಟೆ ಅಲ್ಲ, ಮುಂದೆ ಬರಬಹುದಾದ ಇನ್ನಿತರ ಸಾಂಕ್ರಾಮಿಕ ರೋಗಗಳಿಂದಲೂ ದೂರವಿರಬಹುದು.

ವ್ಯಾಯಾಮ ಯೋಗ ಜೀವನದ ಭಾಗವಾಗಲಿ ಗೆಳೆಯರೇ : ನಿಯಮಿತ ವ್ಯಾಯಾಮಕ್ಕೂ ಮತ್ತು ಆರೋಗ್ಯಕ್ಕೂ ಅವಿನಾಭಾವ ಸಂಬಂಧ. ವ್ಯಾಯಾಮವು ದೇಹದ ಮಾಂಸಖಂಡಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ವ್ಯಾಯಾಮದಿಂದ ಹೃದಯ ಮತ್ತು ಶ್ವಾಸಕೋಶದ ಕ್ಷಮತೆ ಹೆಚ್ಚುತ್ತದೆ. ಕರೋನಾಪೀಡಿತ ಅನೇಕ ರೋಗಿಗಳು ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಮರಳಿ ಪಡೆಯಲು ಲಘು ವ್ಯಾಯಾಮಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಕೆಲವು ಆಧುನಿಕ ಜಿಮ್‌ ಗಳು ಕೇವಲ ಮಾಂಸಖಂಡಗಳ ಬಲವರ್ಧನೆ ಮತ್ತು ಸೌಂದರ್ಯಕ್ಕೆ ಒತ್ತು ಕೊಡುತ್ತವೆ. ಇದರಿಂದನೈಜಸೌಂದರ್ಯ ಅನಾವರಣಗೊಳ್ಳುವುದು ಅನುಮಾನ. ಬರಿ ಬಾಹ್ಯಸೌಂದರ್ಯದ ಆಮಿಷಕ್ಕೆ ಬಲಿಯಾಗದೆ ನೈಸರ್ಗಿಕವಾಗಿ ದೇಹದಾರ್ಢ್ಯವನ್ನು ಹೆಚ್ಚಿಸುವ ವಿಧಾನಗಳಿಗೆ ಹೊಂದಿಕೊಳ್ಳುವುದೇ ಉತ್ತಮ. ಯೋಗ, ಪ್ರಾಣಾಯಾಮ, ಈಜುಗಳಂಥವು ಸ್ವಾಭಾವಿಕವಾಗಿಯೇ ನಮ್ಮ ದೇಹವನ್ನು ಹುರಿಗೊಳಿಸುತ್ತವೆ. ಮುಂಜಾನೆಯ ತಂಗಾಳಿಯಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡಿರಿ. ಆಗ ಪ್ರಕೃತಿಯ ಮಡಿಲಲ್ಲಿ ಹುದುಗಿರುವ ನಿಷ್ಕಲ್ಮಶ ಪ್ರೀತಿ ಅರಿವಿಗೆ ಬರುತ್ತದೆ. ಸಮತೋಲಿತ ಆಹಾರ : ಉತ್ತಮ ಆರೋಗ್ಯಕ್ಕೆ ವ್ಯಾಯಾಮದಷ್ಟೆ ಆಹಾರವೂ ಮುಖ್ಯ. ಪೌಷ್ಟಿಕಾಂಶಗಳುಳ್ಳ ಸಮತೋಲಿತ ಆಹಾರದಿಂದ ದೇಹದ ರಾಸಾಯನಿಕ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಅಷ್ಟೇ ಅಲ್ಲ; ಮಾಂಸಖಂಡಗಳ ಬಲವರ್ಧನೆ ಮತ್ತು ಪ್ರತಿರೋಧ ಕಾಯಗಳ ಮತ್ತು ಕಿಣ್ವಗಳ ಉತ್ಪತ್ತಿಗೂ ಸಹಾಯ ಮಾಡುತ್ತವೆ. ಆದರೆ ಪೌಷ್ಟಿಕಾಂಶಗಳ ನೆಪದಲ್ಲಿ ಕೆಲವು ಪೌಡರ್, ಲೇಹ್ಯಗಳ ಸೇವನೆ ಬಗ್ಗೆ ಎಚ್ಚರದಿಂದಿರಿ. ಫಾಸ್ಟ್ ಫುಡ್ ಮತ್ತು ಜಂಕ್ಫುಡ್‌ಗಳಿಂದ ದೂರವಿರಿ. ಇದು ಆಹಾರದ ಸೇವನೆಯ ಮೇಲೆದುಷ್ಪರಿಣಾಮ ಬೀರುತ್ತದೆ. ಅಲ್ಲದೆ ವೈದ್ಯರ ಅಭಿಪ್ರಾಯದಂತೆ ಬಹಳಷ್ಟು ಕಾಯಿಲೆಗಳು ಇದರಿಂದ ಬರುತ್ತದೆ.

ಕುಟುಂಬದೊಂದಿಗೆ ಬೆರೆಯೋಣ : ಕುಟುಂಬದ ಜೊತೆ, ಸ್ನೇಹಿತರ ಜೊತೆ ಸಮಯವನ್ನು ಕಳೆಯುವುದು. ಪ್ರೀತಿಪಾತ್ರರೊಂದಿಗೆ ಒಂದಾಗಿ ಬೆರೆಯುವ ಕ್ಷಣಗಳಿಂದ ದೇಹದಲ್ಲಿ ಸಂತೋಷಸೂಚಕ ರಸವಾಹಿಗಳು ಹೆಚ್ಚು ಸ್ರವಿಸುತ್ತವೆ ಇದರಿಂದ ನಮ್ಮ ಆರೋಗ್ಯ ಮೇಲೆ ಕೂಡ ಪರಿಣಾಮ ಬೀರುತ್ತವೆ. ಹವ್ಯಾಸಗಳು ವ್ಯಕ್ತಿತ್ವ ವಿಕಸನಕ್ಕೆ ದಾರಿ : ಪ್ರತಿ ವರ್ಷವೂ ಹೊಸ ಹವ್ಯಾಸಗಳನ್ನು ರೂಢಿಗೊಳಿಸಿಕೊಳ್ಳುವುದು ಒಳ್ಳೆಯದು. ಅದು ಪ್ರವಾಸ ಆಗಿರಬಹುದು; ಆಟ ಆಗಿರಬಹುದು ಅಥವಾ ಪುಸ್ತಕಗಳ ಓದು, ಕಲೆಯಲ್ಲಿ ಆಸಕ್ತಿಯಂಥ ಹವ್ಯಾಸಗಳು ಆಗಿರಬಹುದು. ಇಂದಿನ ಯುಗದಲ್ಲಿ ಜಿಮ್ ಮತ್ತು ಸಂಸ್ಕರಿಸಿದ ಆಹಾರಕ್ಕೆ ದಾಸರಾಗಿದ್ದೇವೆ. ನಮ್ಮ ಜೀವನಶೈಲಿ ಯಾಂತ್ರಿಕವಾದಷ್ಟು ರೋಗಗಳಿಗೆ ತುತ್ತಾಗುತ್ತೇವೆ. ಹಿತ-ಮಿತವಾದ ಪ್ರಕೃತಿದತ್ತ ಆಹಾರ, ಸರಳ–ಒತ್ತಡರಹಿತ ಜೀವನಶೈಲಿ ಮತ್ತು ದೇಹ- ಮನಸ್ಸುಗಳಿಗೆ ಮುದ ನೀಡುವ ಹವ್ಯಾಸಗಳಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಪ್ರೊಟೀನ್ ಪೌಡರ್, ಸಂಸ್ಕರಿಸಿದ ಆಹಾರ ಪದಾರ್ಥಗಳು, ದಿಢೀರ್‌ ತೂಕವನ್ನು ಕಳೆದುಕೊಳ್ಳಲು ಪ್ರಚೋದಿಸುವ ಆಫರ್‌ಗಳುಮತ್ತು ಆಧುನಿಕತೆಯ ಹೆಸರಿನಲ್ಲಿ ನಡೆಯುವ ಸ್ವೇಚ್ಛಾಚಾರಗಳಿಂದ ದೂರವಿರೋಣ. ಈ ಆರೋಗ್ಯಸೂತ್ರಗಳು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರನ್ನಾಗಿಸುತ್ತವೆ. ಇದು ಬದುಕು ಒಡ್ಡುವ ಸವಾಲುಗಳನ್ನು ಎದುರಿಸುವ ತಾಕತ್ತನ್ನೂ ನೀಡುವುದು ನಿಸ್ಸಂಶಯ, ಒಟ್ಟಾಗಿ ಹೊಸ ವಷ೯ ಕ್ಯಾಲಂಡರ್ ಬದಲಾವಣೆಗೆ ಮಾತ್ರ ಸೀಮಿತ ವಾಗದಿರಲಿ ಅದರೊಂದಿಗೆ ಒಂದಿಷ್ಟು ಹೊಸ ಅಲೋಚನೆಗಳು, ಸಾಧನೆಗಳು ಮತ್ತು ಉತ್ತಮವಾದ ಜೀವನ ನಮ್ಮದಾಗಲಿ ಉದಾಸೀನತೆ, ಋಣಾತ್ಮಕ ಚಿಂತನೆ ದೂರವಾಗಲಿ' ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಲಿ ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಕಸಾಪ ಉಡುಪಿ

ಮಾತೃಜ ಸೇವಾ ಸಿಂಧು ನಿಟ್ಟೆ : 17 ಹಾಗೂ 18 ನೇ ಸೇವಾ ಯೋಜನೆ ಹಸ್ತಾಂತರ

Posted On: 01-01-2024 06:14PM

ಕಾರ್ಕಳ : ಇಲ್ಲಿಯ ನಿಟ್ಟೆಯ ಮಾತೃಜ ಸೇವಾ ಸಿಂಧು ವತಿಯಿಂದ ಮೂಡಬಿದ್ರೆಯ 4 ವರ್ಷದ ಮಗು ಹಾಗೂ ಕಿನ್ನಿಗೋಳಿಯ 6 ತಿಂಗಳ ಮಗುವಿಗೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಲಾಯಿತು.

ಕಿನ್ನಿಗೋಳಿಯ ಪೂಜಿತ್ ಶೆಟ್ಟಿಗಾರ್ ಎಂಬ 6 ತಿಂಗಳಿನ ಮಗು ಕಣ್ಣಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಚಿಕಿತ್ಸೆಗೆ ಸುಮಾರು 15 ಲಕ್ಷದ ಅವಶ್ಯಕತೆ ಹಾಗೆಯೇ ಮೂಡಬಿದ್ರೆಯ ಕಲ್ಲಮುಂಡ್ಕೂರು ಕುದ್ರಿಪದವುನ 4 ವರ್ಷದ ಯಶಿಕಾ ಎಂಬ ಪುಟ್ಟ ಕಂದಮ್ಮ RHABDOMYOSARCOMA ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ಮಂಗಳೂರಿನ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಅಷ್ಟೊಂದು ದೊಡ್ಡ ಮೊತ್ತ ಕೊಡಿಸಲು ಸಾಧ್ಯವಾಗದ ಈ ಎರಡು ಕುಟುಂಬ ಮಾತೃಜ ಸೇವಾ ಸಿಂಧು ತಂಡಕ್ಕೆ ಮನವಿಯನ್ನು ಸಲ್ಲಿಸಿದ್ದರು.

ಎರಡು ಕುಟುಂಬದ ಮನವಿಗೆ ಸ್ಪಂದಿಸಿದ ತಂಡದ ಸದಸ್ಯರು ಡಿಸೆಂಬರ್ 18ರಂದು ನಡೆದ ಸೂಡ ಷಷ್ಠಿ ಹಾಗೂ ಕಡoದಲೆ ಷಷ್ಠಿ ಮಹೋತ್ಸವದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮದಲ್ಲಿ ಸಂಗ್ರಹವಾದ ಒಟ್ಟು ಹಣದಲ್ಲಿ ತಲಾ ರೂ. 61,000 ರಂತೆ ಎರಡು ಕುಟುಂಬಕ್ಕೆ ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳದಲ್ಲಿ ತಂಡದ ಸದಸ್ಯರ ಸಮ್ಮುಖದಲ್ಲಿ ಕುಟುಂಬದ ಕೈಗೆ ಹಸ್ತಾಂತರಿಸಿದರು.

ಇದು ಮಾತೃಜ ಸೇವಾ ಸಿಂಧು ತಂಡದ 17 ಹಾಗೂ 18 ನೇ ಸೇವಾ ಯೋಜನೆಯಾಗಿದ್ದು ಈ ತಂಡದೊಂದಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಂಘಟಕರು ತಿಳಿಸಿದ್ದಾರೆ.

ಪಲಿಮಾರು : ಅವಿರತ ಪ್ರಯತ್ನದಿಂದ ಮಾತ್ರ ಸಾಧನೆಯ ಮೆಟ್ಟಿಲನ್ನು ಹತ್ತಲು ಸಾಧ್ಯ - ಪ್ರಸಾದ್ ಪಲಿಮಾರು

Posted On: 29-12-2023 09:39PM

ಪಲಿಮಾರು : ಸೂರ್ಯನಂತೆ ನಿನ್ನನ್ನು ನೀನು ಸುಟ್ಟರೆ ಮಾತ್ರ ಪ್ರಕಾಶಮಾನವಾಗಿ ಜಗತ್ತಿಗೆ ಬೆಳಕನ್ನು ನೀಡಲು ಸಾಧ್ಯ. ಜಗತ್ತಿನ ಯಾವುದೇ ಕ್ರೀಡಾಪಟುಗಳು ಒಂದು ದಿನದಲ್ಲಿ ಯಶಸ್ವಿ ಆಗಲಿಲ್ಲ. ಅವಿರತ ಪ್ರಯತ್ನದಿಂದ ಮಾತ್ರ ಸಾಧನೆಯ ಮೆಟ್ಟಿಲನ್ನು ಹತ್ತಲು ಸಾಧ್ಯ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು ಹೇಳಿದರು. ಅವರು ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಲಿಮಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸೌಮ್ಯಲತ ಶೆಟ್ಟಿ ಅವರು ಧ್ವಜಾರೋಹಣಗೈದರು. ಉಪಾಧ್ಯಕ್ಷರಾದ ರಾಯೇಶ್ವರ ಪೈ ಕ್ರೀಡಾಳುಗಳ ಗೌರವ ರಕ್ಷೆ ಸ್ವೀಕರಿಸಿದರು.

ಪಲಿಮಾರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ನವೀನ್ ಚಂದ್ರ ಸುವರ್ಣ, ಸದಸ್ಯ ಪ್ರವೀಣ್ ಕುಮಾರ್ ಅಡ್ವೆ, ಸುಜಾತಾ, ರಶ್ಮಿ, ಯೋಗೀಶ್ ಸುವರ್ಣ, ಹೊಯ್ಗೆ ಪ್ರೆಂಡ್ಸ್ ಹೊಯ್ಗೆ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಕುಮಾರ್, ದಾನಿಗಳಾದ ಜೋಸೆಫ್ ಡಿಸೋಜ ಮತ್ತು ಮೇರಿಲಿನ್ ಡಿಸೋಜ ಯು.ಎಸ್.ಎ., ರವೀಂದ್ರ ಪ್ರಭು ಪಲಿಮಾರು, ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಹಿರಿಯ ಸಹಶಿಕ್ಷಕಿ ಸುನಿತಾ ಸ್ವಾಗತಿಸಿದರು. ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮುಸ್ಲಿಂ ಮಹಿಳೆಯರ ಅವಹೇಳನ - ಡಾ| ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು : ರಮೀಜ್ ಹುಸೇನ್

Posted On: 29-12-2023 09:24PM

ಪಡುಬಿದ್ರಿ : ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಳಿಕೆ ನೀಡಿ, ಮಹಿಳೆಯರ ಮನಸ್ಸಿಗೆ ನೋವು ಉಂಟು ಮಾಡಿದ ವಿಕೃತ ಮನಸ್ಸಿನ ಡಾ| ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಸರಕಾರಕ್ಕೆ ಮನವಿ ಮಾಡಿರುತ್ತಾರೆ.

ಪದೇ ಪದೇ ಇಂತಹ ಉದ್ರೇಕ ಹೇಳಿಕೆ ನೀಡಿ ಸಮಾಜವನ್ನು ಒಡೆಯುವ ಕೆಲಸವನ್ನು ‌ನಿರಂತರ ವಾಗಿ ಮಾಡುತಿದ್ದು, ಭಾರತ ದೇಶದಲ್ಲಿ ಸೌಹಾರ್ದತೆಯಲ್ಲಿ ಬದುಕುತ್ತಿರುವ ನಾಗರಿಕ ಸಮಾಜದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದ್ವೇಷ ಸಾಧಿಸುವ ಹಾಗು ರಾಜ್ಯದ ಜನಗಳ ಸೌಹಾರ್ದ ಬದುಕಿಗೆ ಧಕ್ಕೆ ತರುವ ಇಂತಹ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಪ್ರಭಾಕರ್ ಭಟ್ ರ ಹೇಳಿಕೆ ಇಡೀ ಮಹಿಳಾ ಸಮುದಾಯದಕ್ಕೆ ಅವಮಾನಿಸುವಂತಾಗಿದ್ದು ಇದನ್ನು ಧರ್ಮ, ಜಾತಿ ಭೇದ ಮರೆತು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ ಕೃೆಗೊಂಡಿದ್ದು ಪ್ರಭಾಕರ ಭಟ್ಟರ ಮೇಲೆ ಕಠಿಣ ಕಾನೂನು ಕ್ರಮ ಕೆೃಗೊಳ್ಳಬೇಕು ಮತ್ತು ಕೋರ್ಟ್ ಆತನಿಗೆ ನೀಡಿದ ಮಧ್ಯಂತರ ಜಾಮೀನು ರದ್ದುಪಡಿಸಿ ಆದಷ್ಟು ಬೇಗ ಬಂಧಿಸಬೇಕು.

ಸುಪ್ರೀಮ್ ಕೋರ್ಟ್ ಇಂತಹ ಕೋಮುದ್ವೇಷ ಹೇಳಿಕೆ ನೀಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಆದ್ದರಿಂದ ‌ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಸಮಾಜಘಾತುಕರನ್ನು ಹತ್ತಿಕ್ಕಲು ಈ ಕೂಡಲೇ ಕ್ರಮ ಜರಗಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ವ್ಯಕ್ತಿಗಳನ್ನು ಹತ್ತಿಕ್ಕಲು ಸಾಧ್ಯ ಮತ್ತು ಇತರರಿಗೆ ಪಾಠವಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಪು : ಕಿಡ್ನಿ ಮರುಜೋಡಣೆ ಶಸ್ತ್ರ ಚಿಕಿತ್ಸೆ ನಡೆಸಲು ಧನಸಹಾಯ ನೀಡಿ ಆಗೋಣ ಸಹಕಾರಿ

Posted On: 28-12-2023 08:25PM

ಕಾಪು : ಸೂರ್ಯನಗರ ಕಳತೂರ್ ಪಯ್ಯಾರ್ ಸಮೀಪದ ಜಾಮಿಯಾ ಮಸೀದಿಗೆ ಒಳಪಟ್ಟಂತಹ ಪರೀಧಾ ಎಂಬ ತಾಯಿಯ ಮಗನಾದ ಇಮ್ತಿಯಾಜ್ ಎಂಬ ಸಹೋದರನ ಎರಡೂ ಕಿಡ್ನಿ ವೈಫಲ್ಯಗೊಂಡು ವೈದ್ಯರ ಸಲಹೆಯಂತೆ ಹೊಸ ಕಿಡ್ನಿ ಜೋಡಿಸಿದರೆ ಮಾತ್ರ ಬದುಕುಳಿಯಲು ಸಾಧ್ಯ ಎಂದಾಗ ದಿಕ್ಕೇ ತೋಚದ ಕುಟುಂಬದಲ್ಲಿ ಅವರ ಕಿಡ್ನಿ ಮರುಜೋಡಣೆಗಾಗಿ ತನ್ನ ಸ್ವಂತ ತಂಗಿ ಒಂದು ಕಿಡ್ನಿಯನ್ನು ದಾನ ಮಾಡುತ್ತಿದ್ದಾರೆ.

ಅಂದಾಜು ಮೊತ್ತ 20 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ. ಇಮ್ತಿಯಾಜ್‌ಗೆ ಚಿಕ್ಕ ವಯಸ್ಸಿನ ಸಣ್ಣ ಎರಡು ಹೆಣ್ಣು ಮಕ್ಕಳು ಇದ್ದು ಮೆಕಾನಿಕ್ ದುಡಿಮೆಯ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಒಂದು ಚಲ ಇತ್ತು. ಆದರೆ ಸೃಷ್ಟಿಕರ್ತನ ವಿಧಿ ಬೇರೆ ಆಗಿತ್ತು.

ಮನೆಗೆ ಆಧಾರಸ್ತಂಭವಾಗಿದ್ದ ಸಹೋದರನ ಪರಿಸ್ಥಿತಿಯಿಂದ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯ ಮಾಡಿ ಸಹಕರಿಸಿ ಹಾಗೂ ಆದಷ್ಟು ಶೇರ್ ಮಾಡಿ ಸಹಕರಿಸಿ.

ಡಿಸೆಂಬರ್ 30 - 31 : ಬಿರುವೆ‌ರ್ ಕಾಪು ಸೇವಾ ಸಮಿತಿ ಕಾಪು - ಬಿರುವೆರ್ ಕಾಪು ಟ್ರೋಫಿ 2023

Posted On: 28-12-2023 12:31PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಡಿಸೆಂಬರ್ 30 ಮತ್ತು 31ರಂದು ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಬಿಲ್ಲವ ಸಮಾಜ ಬಾಂಧವರಿಗೆ ಡಿಸೆಂಬರ್ 30-31 ರಂದು ಲೀಗ್ ಕಮ್ ನಾಕೌಟ್ ಮಾದರಿಯ 90 ಗಜಗಳ ಕ್ರಿಕೆಟ್ ಪಂದ್ಯಾಕೂಟವು ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ತಿಳಿಸಿದರು. ಅವರು ಗುರುವಾರ ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ‌ನೀಡಿದರು.

ಈಗಾಗಲೇ ಬಿಡ್ಡಿಂಗ್ ಕಾರ್ಯ ನಡೆದಿದ್ದು ಹತ್ತು ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಕ್ಕೆ ರೂ.88,888 ಮತ್ತು ಬಿರುವೆರ್ ಕಾಪು ಟ್ರೋಫಿ, ದ್ವಿತೀಯ ಬಹುಮಾನ ರೂ.55,555 ಮತ್ತು ಬಿರುವೆರ್ ಕಾಪು ಟ್ರೋಫಿ ಸಿಗಲಿದೆ. ಉತ್ತಮದಾಂಡಿಗ, ಉತ್ತಮ ಎಸೆತಗಾರ, ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಎಂದರು.

ಶನಿವಾರ ಬೆಳಗ್ಗೆ 10:30 ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ಮಾಡಲಿದ್ದಾರೆ.

ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಸೇರಿದಂತೆ ಸಮಾಜದ ವಿವಿಧ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆದಿತ್ಯವಾರ ಸಂಜೆ ಗಂಟೆ 5:30 ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುಜನ್ ಎಲ್ ಸುವರ್ಣ ಕುತ್ಯಾರ್,ವರುಣ್ ಬಿ ಕೋಟ್ಯಾನ್, ರವಿರಾಜ್ ಶಂಕರಪುರ, ಮಾಧವ ಪೂಜಾರಿ, ಯೋಗೀಶ್ ಪೂಜಾರಿ, ಯಾದವ ಪೂಜಾರಿ ಉಪಸ್ಥಿತರಿದ್ದರು

ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ

Posted On: 25-12-2023 06:38PM

ಕರ್ನಾಟಕದ ರಾಜ್ಯದ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಿದ್ದಾರೆ.

ಇದೇ ವೇಳೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನಾಗಿ ಅರವಿಂದ್‌ ಬೆಲ್ಲದ್‌ ಅವರನ್ನು ನೇಮಕ ಮಾಡಲಾಗಿದೆ. ವಿಧಾನಸಭೆಯ ಮುಖ್ಯ ಸಚೇತಕರಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ನೇಮಕವಾದರೆ, ವಿಧಾನಪರಿಷತ್​ನ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ಅವರನ್ನು ನೇಮಿಸಲಾಗಿದೆ. ವಿಧಾನಪರಿಷತ್ ವಿಪಕ್ಷ ಉಪ ನಾಯಕನಾಗಿ ಸುನೀಲ್ ವಲ್ಯಾಪುರೆ ಅವರನ್ನು ನೇಮಕ ಮಾಡಿದ್ದಾರೆ.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ವಿಧಾನಪರಿಷತ್ ವಿಪಕ್ಷ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಜೆಸಿಐ ಉಡುಪಿ ಸಿಟಿ : 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಆಯ್ಕೆ

Posted On: 25-12-2023 06:25PM

ಉಡುಪಿ : ವಲಯದ ಅತ್ಯಂತ ಪ್ರತಿಷ್ಠಿತ ಘಟಕವಾಗಿರುವ ಜೆಸಿಐ ಉಡುಪಿ ಸಿಟಿ ಇದರ 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಇವರು ಆಯ್ಕೆಯಾಗಿದ್ದಾರೆ.

ನೂತನ ಕಾರ್ಯದರ್ಶಿಯಾಗಿ ಸಂಧ್ಯಾ ವಿ ಕುಂದರ್, ಮಹಿಳಾ ಜೆಸಿ ಪ್ರತಿನಿಧಿಯಾಗಿ ನಯನ ಉದಯ ನಾಯ್ಕ್, ಯುವ ಜೇಸಿ ವಿಭಾಗದ ಪ್ರತಿನಿಧಿಯಾಗಿ ತನುಷ್ ಪ್ರಕಾಶ್ ದೇವಾಡಿಗ, ಉಪಾಧ್ಯಕ್ಷರುಗಳಾಗಿ ಶರತ್ ಶರತ್ ಕುಮಾರ್, ನಿಶಾ ಪ್ರಕಾಶ್ ದೇವಾಡಿಗ, ದಿಶಾ, ಸವಿತಾ ಲಕ್ಷ್ಮಣ್, ಅವಿನಾಶ್ ಕೆ. ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.