Updated News From Kaup
ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು : ಈದ್ ಉಲ್ ಫಿತ್ರ್ ಹಬ್ಬದ ಪ್ರಾರ್ಥನೆ

Posted On: 31-03-2025 12:41PM
ಕಾಪು : ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಸೋಮವಾರ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಅಬ್ದುಲ್ ರಶೀದ್ ಸಖಾಫಿ ಮಸ್ಜಿದ್, ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ, ಮಸ್ಜಿದ್ ಡೆವಲಪ್ಮೆಂಟ್ ಸಮಿತಿ ಅಧ್ಯಕ್ಷರಾದ ಶರ್ಫುದ್ದೀನ್ ಶೇಕ್, ಮಸ್ಜಿದ್ ಕಾರ್ಯದರ್ಶಿ ಅಶ್ರಫ್ ಮುಸ ಮಜೂರು ,ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ ಉಪಾಧ್ಯಕ್ಷರಾದ ಹಸನಬ್ಬ ಮಜೂರು, ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಆಡಳಿತ ಸಮಿತಿ ಸದಸ್ಯರಾದ ರಝಕ್ ಕೊಪ್ಪಲ್ತೋಟ, ರಝಕ್ ಕೊಪ್ಪ , ಹುಸೇನ್ ಅಚ್ಚಲ್, ರಝಕ್ ಗುಡ್ಡೆಕೇರಿ, ಹಸನಬ್ಬ ಗುಡ್ಡೆಕೇರಿ, ಶಮಿಮ್ ಕೆ.ಪಿ, ಅಬ್ದುಲ್ ರಹ್ಮನ್, ಹಸನಬ್ಬ ಪಕೀರಣಕಟ್ಟೆ, ಅಬ್ದುಲ್ಲ ಚಂದ್ರನಗರ, ಫಯಾಜ್ ಕಿನ್ನಿಗೋಳಿ, ಜಮಾತ್ ಅಂಗ ಸಂಸ್ಥೆ ಯವರು, ಜಮಾತಿಗರು ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಪಾಜಕ ಕ್ಷೇತ್ರದಲ್ಲಿ ಭಕ್ತಿ ರಥ ಯಾತ್ರೆಗೆ ವೈಭವದ ಚಾಲನೆ

Posted On: 31-03-2025 08:49AM
ಕಾಪು : ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಉಡುಪಿ ಜಿಲ್ಲೆ ಪಾಜಕ ಕ್ಷೇತ್ರದಲ್ಲಿ ಭಕ್ತಿ ರಥಯಾತ್ರೆಗೆ ಅಧ್ವರ್ಯುಗಳೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ರಥದಲ್ಲಿ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ರಾಮದೇವರ ಪಂಚಲೋಹದ ಮೂರ್ತಿಯನ್ನು ಕುಳ್ಳಿರಿಸಿ ಪವಿತ್ರ ಮಂತ್ರೋದಕದಿಂದ ಶುದ್ಧೀಕರಿಸಿ ಅಲಂಕಾರಾದಿಗಳನ್ನು ಮಾಡಿ ಮಂಗಳಾರತಿ ಬೆಳಗಿದ ಬಳಿಕ ಭಗವಾಧ್ವಜ ಕೇಸರಿ ಪತಾಕೆಯ ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು , ತ್ರೇತಾಯುಗದಲ್ಲಿ ಹನುಮನಾಗಿ ದ್ವಾಪರದಲ್ಲಿ ಭೀಮನಾಗಿ ಅವತರಿಸಿದ ವಾಯುದೇವರೇ ಕಲಿಯುಗದಲ್ಲಿ ಮಧ್ವಾರಾಗಿ ಉಡುಪಿಯಲ್ಲಿ ಅವತರಿಸಿ ತತ್ವವಾದವೆಂಬ ಸರಳ ಸುಲಭವೂ ಆದ ಭಕ್ತಿಸಿದ್ಧಾಂತ ಸುಧೆಯನ್ನು ನಮಗೆಲ್ಲ ಉಣಬಡಿಸಿ ತಮ್ಮ ತಪಸ್ಸಿಗೆ ಒಲಿದ ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ನಮ್ಮೆಲ್ಲರನ್ನೂ ಧನ್ಯರಾಗಿಸಿದ್ದಾರೆ .ಭಗವಂತನ ಒಲುಮೆಗೆ ಪರಿಶುದ್ಧವಾದ ನಿಷ್ಕಲ್ಮಶ ಭಕ್ತಿಯೇ ಪರಮ ಸಾಧನ ಎಂದು ಸಾರಿ ಹೇಳಿದ ಮಧ್ವ ಗುರುಗಳು ನಾಡಿನೆಲ್ಲೆಡೆ ಈ ಸರಳ ಸಿದ್ಧಾಂತದ ಪ್ರಸಾರಕ್ಕಾಗಿ ಮಠಗಳನ್ನು ಸ್ಥಾಪಿಸಿ ತಾವೂ ದೇಶಾದ್ಯಂತ ಸಂಚರಿಸಿದರು. ಅಷ್ಟು ಮಾತ್ರವಲ್ಲದೇ ಹರಿದಾಸ ಸಾಹಿತ್ಯದ ಉಗಮಕ್ಕೂ ಕಾರಣರೆನಿಸಿ, ವ್ಯಾಸರಾಜರು ವಾದಿರಾಜರು ಜಯತೀರ್ಥರು ರಾಘವೇಂದ್ರ ತೀರ್ಥರು ಕನಕ ಪುರಂದರದಾಸರು ಜಗನ್ನಾಥದಾಸರು ಶ್ರೀಪಾದರಾಜರು, ಗೋಪಾಲದಾಸರು ವಿಜಯದಾಸರು ಮೊದಲಾದ ದಾಸವರೇಣ್ಯರ ಮೂಲಕ ಭಕ್ತಿ ಸಿದ್ಧಾಂತದ ಜ್ಞಾನಗಂಗೆ ಈ ನಾಡಿನಲ್ಲಿ ಸಮೃದ್ಧವಾಗಿ ಹರಿಯುವಂತೆ ಮಾಡಿ ಈ ನೆಲವನ್ನು ಪಾವನಗೊಳಿಸಿದರು. ಮಧ್ವಗುರುಗಳು ಕೊಟ್ಟ ಇಂಥಹ ಅರ್ಪಣಾ ಭಾವದ ಭಕ್ತಿಯ ಸಿದ್ಧಾಂತವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ದೇಶದೆಲ್ಲೆಡೆ ಪ್ರಸಾರ ಮಾಡುವ ಕಾರ್ಯವನ್ನು ನಿರಂತರ ಮಾಡಿದ್ದರು. ಅದನ್ನು ಯಥಾಮತಿ ಮುಂದುವರೆಸುವ ಪ್ರಯತ್ನ ಮಾಡ್ತಾ ಇದ್ದೇವೆ. ಅಂದರ ಅಂಗವಾಗಿ ಪಾಜಕದಿಂದ ಪ್ರಾರಂಭಿಸಿ ಈ ಕರಾವಳಿ ಜಿಲ್ಲೆಗಳಲ್ಲಿ ಮಧ್ವರು ಸಂದರ್ಶಿಸಿದ ಕ್ಷೇತ್ರಗಳು ಹಾಗೂ ಇತರೆ ಧರ್ಮಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತ ಜನರಿಗೆ ಭಕ್ತಿ ಸಿದ್ಧಾಂತದ ಸಾರ ಸಂದೇಶಗಳನ್ನು ತಿಳಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಂಡಿದ್ದೇವೆ. ಸಮಸ್ತ ಆಸ್ತಿಕ ಜನತೆ ಇದರಲ್ಲಿ ಸಹಯೋಗ ಸಹಕಾರ ನೀಡಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ತಿಳಿಸಿದರು. ಆರಂಭದಲ್ಲಿ ಶ್ರೀಗಳು ಮಧ್ವಾಚಾರ್ಯರ ಮನೆ ದೇವರಾದ ಶ್ರೀ ಅನಂತಪದ್ಮನಾಭ ದೇವರು ಮತ್ತು ಶ್ರೀ ವಾದಿರಾಜ ಪ್ರತಿಷ್ಠಿತ ಮಧ್ವಗುರುಗಳ ಮಂಗಳಾರತಿ ಬೆಳಗಿ, ಗೋಗ್ರಾಸ ಸಮರ್ಪಿಸಿದರು. ವಿದ್ವಾನ್ ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಂದಳಿಕೆ ವಿಠಲ ಭಟ್ಟರು ಮಧ್ವರಾಜ ಭಟ್, ವಾದಿರಾಜ ಭಟ್ ಶ್ರೀಕರ ಭಟ್ವರ ಸಹಯೋಗದಲ್ಲಿ ರಾಮತಾರಕ ಮಂತ್ರ ಹೋಮ ನೆರವೇಸಿದರು. ನೂರಾರು ರಾಮ ಭಕ್ತರು, ಭಜಕರು, ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಸಾವಿರಕ್ಕೂ ಅಧಿಕ ಜನ ಸೇರಿದ್ದರು.
ರಥಯಾತ್ರೆಗೆ ವಿಶ್ವಹಿಂದು ಪರಿಷತ್ ಸಹಕಾರ ದೊರೆತಿದೆ. ಪ್ರಾಂತ ವಿ ಹಿಂ ಪ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಠದ ದಿವಾನರಾದ ಎಂ ರಘುರಾಚಾರ್ಯ, ಸಿ ಇ ಒ ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿಯ ಪ್ರ ಕಾರ್ಯದರ್ಶಿ ನಿಟ್ಡೆ ಪ್ರಸನ್ನಾಚಾರ್, ಕುಂಜಾರು ದುರ್ಗಾ ದೇವಳದ ಪರ್ಯಾಯ ಅರ್ಚಕ ರಾಘವೇಂದ್ರ ಭಟ್, ಪರಶುರಾಮ ದೇವಳದ ಅರ್ಚಕ ವಿನಯ ಪ್ರಸಾದ್ ಭಟ್,ಬೆಳ್ಳೆ ಗ್ರಾ ಪಂ ಅಧ್ಯಕ್ಷೆ ದಿವ್ಯಾ ಆಚಾರ್ಯ, ಗಿರಿಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಬೆಳ್ಳೆ ವಿ ಹಿಂ ಪ ಅಧ್ಯಕ್ಷ ವಿಕಾಸ್, ಕುರ್ಕಾಲು ಪಟ್ಟಾಚಾವಡಿ ಸುಂದರ ಶೆಟ್ಟಿ, ಸದಾನಂದ ಶೆಣೈ, ಸುರೇಂದ್ರ ಶೆಟ್ಟಿ ಕುಳೆದು, ಪಾಜಕ ಭಕ್ತಿರಥ ಯಾತ್ರಾ ಸಮಿತಿಯ ಅಧ್ಯಕ್ಷರಾದ ಕುರ್ಕಾಲು ದಿನೇಶ ಶೆಟ್ಟಿ , ಪ್ರ.ಕಾರ್ಯದರ್ಶಿ ಪಟ್ಟಾಭಿರಾಮ ಆಚಾರ್ಯ, ಮಧ್ವರಾಜ ಭಟ್, ಪಡುಬೆಳ್ಳೆ ವಿಶ್ವನಾಥ ಶೆಟ್ಟಿ , ಸುದರ್ಶನ್ ರಾವ್, ಕುರ್ಕಾಲು ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಗ್ರಿ ಅನಂತ ಸಾಮಗ , ವಿಷ್ಣುಮೂರ್ತಿ ಆಚಾರ್ಯ ಪೆರಣಂಕಿಲ ಶ್ರೀಶ ನಾಯಕ್, ಗಿರಿಧರ ಐತಾಳ್, ಕೃಷ್ಣರಾಜ ಕುತ್ಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.
ಈದ್ ಸಂದೇಶ

Posted On: 31-03-2025 08:44AM
ಈದ್ ಉಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಹನೆ, ಶಾಂತಿ, ಪ್ರೀತಿ, ಸಮೃದ್ದಿಯನ್ನು ತರುವಂತಾಗಲಿ. (ಅಮೀನ್ ) ನಿಮ್ಮ ನೆರೆಕರೆಯವರಿಗೆ ಸಂತೋಷ ತರುವವರೆಗೂ, ನೀವು ಸಂಪೂರ್ಣವಾಗಿ ಹಬ್ಬವನ್ನು ಆಚರಿಸಿದವರಾಗಲಾರಿರಿ. (ಪ್ರವಾದಿ ವಚನ) ನಿಜವಾದ ಹಬ್ಬವೆಂದರೆ, ಅದು ಸಮಾಜದಲ್ಲಿರುವ ಪ್ರತಿಯೊಬ್ಬರ ಹೃದಯದಲ್ಲಿ ಸಂಭ್ರಮ ಮೂಡಿಸುವ ಹಬ್ಬವಾಗಿರಬೇಕು. ಹೌದು, ಭಾರತವೆಂಬುವುದು ಸರ್ವ ಜನಾಂಗದ ಶಾಂತಿಯ ಹೂದೋಟವಾಗಿರುತ್ತದೆ.
ಈ ದೇಶದಲ್ಲಿ ಯಾವುದೇ ಒಂದು ಧರ್ಮದವರಿಗೆ ಹಬ್ಬ ಬಂದರೆ, ಆ ಹಬ್ಬಗಳು, ಉಳಿದ ಎಲ್ಲಾ ಧರ್ಮದವರಿಗೆ ಸಂಭ್ರಮಿಸುವ, ಸಂತೋಷ ಪಡುವ ಮತ್ತು ಆ ಹಬ್ಬಗಳಲ್ಲಿ ಪಾಲ್ಗೊಳ್ಳುವ ಅವಕಾಶ ಮುಕ್ತವಾಗಿರಬೇಕು.
ಹಬ್ಬದ ಅರ್ಥವೇ ಶಾಂತಿ, ಪ್ರೀತಿ ಮತ್ತು ಒಗ್ಗಟ್ಟನ್ನು ಹರಡುವುದು ಆಗಿರುತ್ತದೆ. ಇದು ಕೇವಲ ಆಚಾರ, ವಿಚಾರಗಳ ಸಂಗತಿಯಾಗಿರದೆ ಎಲ್ಲರ ಹೃದಯಕ್ಕೆ ಮತ್ತು ಮನಸ್ಸಿಗೆ ಹತ್ತಿರವಾಗುವ ಮತ್ತು ಎಲ್ಲರನ್ನೂ ಸಮಾನವಾಗಿ ಗೌರವಿಸುವ, ಹಸಿವು, ದಾಹಗಳನ್ನು ಮರೆಯುವ ಅವಕಾಶವಿರಬೇಕು. ಹಬ್ಬಗಳು ಎಲ್ಲಾ ಧರ್ಮ, ಜಾತಿ ವರ್ಗಗಳ ನಡುವಿನ ಭಾಂದವ್ಯವನ್ನು ಗಟ್ಟಿಯಾಗಿಸಿ ಸ್ನೇಹ ಮತ್ತು ಒಗ್ಗಟ್ಟನ್ನು ಮೂಡಿಸುವ ಸಂಕೇತವಾಗಬೇಕು. ಈ ದಿವಸ ಸಮಾಜದಲ್ಲಿ ಯಾರೂ ದುಃಖಿತನಾಗಿರಬಾರದು. " ನಾವೆಲ್ಲಾ ಮಾನವರು, ಪರಸ್ಪರ ಸಹೋದರರು. ನಮ್ಮೆಲ್ಲರ ಸ್ರಷ್ಟಿಕರ್ತ ದೇವನೊಬ್ಬನೇ " ಎಂಬ ಸಂದೇಶವನ್ನು ನೀಡುತ್ತಾ, ಹಬ್ಬದ ಶುಭಮಯ ವಾತಾವರಣ ಎಲ್ಲರ ಮನಸ್ಸಿಗೆ ಶಾಂತಿ ಮತ್ತು ಸಂತೋಷ ನೀಡಲಿ. ಅನ್ವರ್ ಅಲಿ, ಅಧ್ಯಕ್ಷರು, ಜಮಾ ಅತೆ ಇಸ್ಲಾಮಿ ಹಿಂದ್, ಕಾಪು.
ಎಸ್ ಕೆ ಪಿ ಎ ಕಾಪು ವಲಯ : ಛಾಯಾ ಟ್ರೋಫಿ - 2025 ಉದ್ಘಾಟನೆ

Posted On: 31-03-2025 08:31AM
ಕಾಪು : ಸಂಘಟನೆಗಳು ಸದಸ್ಯರಿಗೆ ಒಗ್ಗಟ್ಟಿನ ಬಲದೊಂದಿಗೆ ನೈತಿಕ ಬೆಂಬಲವನ್ನು ನೀಡಬೇಕು. ಸೋತು ಗೆದ್ದಾಗ ಸಿಗುವ ಖುಷಿ ನಮ್ಮದಾಗಬೇಕು. ಸ್ಪರ್ಧಾತ್ಮಕತೆಯ ಯುಗದಲ್ಲಿ ತಾಂತ್ರಿಕತೆಗೆ ಅನುಗುಣವಾಗಿ ನಾವೂ ಹೊಂದಾಣಿಕೆ ಮಾಡಬೇಕಾಗಿದೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಕಾಪು ವಲಯ ಇವರ ಆಶ್ರಯದಲ್ಲಿ ಆದಿತ್ಯವಾರ ಕಟಪಾಡಿ ಎಸ್.ವಿ.ಎಸ್ ಕಾಲೇಜು ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಜರಗಿದ ಹೊನಲು ಬೆಳಕಿನ ಲೀಗ್ ಮಾದರಿಯ ಜಿಲ್ಲಾ ಮಟ್ಟದ ವಾಲಿಬಾಲ್ ಮತ್ತು ಹಗ್ಗ-ಜಗ್ಗಾಟ ಪಂದ್ಯಾಟ ಛಾಯಾ ಟ್ರೋಫಿ - 2025 ಉದ್ಘಾಟಿಸಿ ಮಾತನಾಡಿದರು.
ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ದಕ ಸಂಘದ ಸಂಚಾಲಕ ಸತ್ಯೇಂದ್ರ ಪೈ, ಶ್ರೀ ಮಹಾಲಕ್ಷ್ಮೀ ದೇವಾಸ್ಥಾನ ಉಚ್ಚಿಲದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ದೀಪಕ್ ಎರ್ಮಾಳು, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಬಿಲ್ಲವ ಪರಿಷತ್ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಆಶಾ ಅಂಚನ್, ಸನ್ಮಾನಿತರಾದ ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ರಾವ್ ಮಟ್ಟು ಕಟಪಾಡಿ ಮಾತನಾಡಿದರು.
ಸನ್ಮಾನ/ ಬಹುಮಾನ ವಿತರಣೆ : ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ರಾವ್ ಮಟ್ಟು ಕಟಪಾಡಿ ಇವರನ್ನು ಸನ್ಮಾನಿಸಲಾಯಿತು. ಉಚ್ಚಿಲ ದಸರಾ ಛಾಯಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಿತರಾದ ಸಂತೋಷ ಕೊರಂಗ್ರಪಾಡಿ, ವಾಮನ್ ಪಡುಕೆರೆ, ಪ್ರೇಮ್ ರನ್ನು ಗೌರವಿಸಲಾಯಿತು.
ಎಸ್ ಕೆ ಪಿ ಎ ಕಾಪು ವಲಯ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಕೆ ಪಿ ಎ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಉದ್ಯಮಿ ಜಯವಂತ್ ಪ್ರಭು, ಶ್ರೀನಿಧಿ ಕನ್ಸ್ ಸ್ಟ್ರಕ್ಷನ್ ಉಚ್ಚಿಲ ಕರುಣಾಕರ್ ಪೂಜಾರಿ, ಎಸ್ ಕೆ ಪಿ ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ, ಎಸ್ ಕೆ ಪಿ ಎ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್, ಎಸ್ ಕೆ ಪಿ ಎ ಕಾಪು ವಲಯ ಕರುಣಾಕರ್ ನಾಯಕ್, ಎಸ್ ಕೆ ಪಿ ಎ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಂಜಿತ್ ಮೆಂಡನ್, ಹಿರಿಯ ಛಾಯಾಗ್ರಾಹಕ ಸುಭಾಷ್ ಬಲ್ಲಾಳ್, ಚಂದ್ರಹಾಸ ಕೋಟ್ಯಾನ್,ಭಾರಧ್ವಾಜ್, ಕಾಪು ವಲಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಕೋಶಾಧಿಕಾರಿ ಕಿರಣ್ ಕುಮಾರ್ ಕಾಪು, ಕ್ರೀಡಾ ಕಾರ್ಯದರ್ಶಿ ವಿಕ್ರಂ ಭಟ್, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಪೂಜಾರಿ ಕಾಪು, ಪೂರ್ವಾಧ್ಯಕ್ಷ ವಿರೇಂದ್ರ ಶಿರ್ವ, ಉದಯ ಮುಂಡ್ಕೂರು, ರವಿಕುಮಾರ್ ಕಟಪಾಡಿ, ವಿನೋದ್ ಕಾಂಚನ್, ದೀಪಕ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಕಾಪು ವಲಯದ ಮಾಜಿ ಅಧ್ಯಕ್ಷ ಪ್ರವೀಣ್ ಕುರ್ಕಾಲು ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ಸನ್ಮಾನ ಪತ್ರ ವಾಚಿಸಿದರು.ರಘುರಾಮ್ ಕೋಟ್ಯಾನ್ ಕುರ್ಕಾಲು ನಿರೂಪಿಸಿ, ರಾಘವೇಂದ್ರ ಭಟ್ ವಂದಿಸಿದರು.
ಬಂಟಕಲ್ಲು : ಬಿ.ಸಿ ರೋಡು - ಪಾಂಬೂರು ರಸ್ತೆ ಅಫಘಾತ ತಿರುವು ಬಂಟಕಲ್ಲು ನಾಗರಿಕ ಸಮಿತಿಯಿಂದ ದುರಸ್ಥಿ

Posted On: 30-03-2025 04:33PM
ಶಿರ್ವ : ಬಂಟಕಲ್ಲು ಸಮೀಪದ ಬಿ.ಸಿ ರೋಡು - ಪಾಂಬೂರು ರಸ್ತೆಯಲ್ಲಿ ಅನೇಕ ಅಫಘಾತಗಳಿಗೆ ಕಾರಣವಾಗಿರುವ ರಸ್ತೆಯ ತಿರುವು ಮರಗಿಡಗಳು ರಸ್ತೆಗೆ ಚಾಚಿಕೊಂಡಿರುವುದು ವಾಹನ ಸವಾರರಿಗೆ ರಸ್ತೆಯ ಮುಂದೆ ಕಾಣದೆ ಇರುವುದು ಹಾಗೂ ರಸ್ತೆಯ ಬದಿಯಲ್ಲಿ ಸ್ಥಳವಿಲ್ಲದೆ ದೂಡ್ಡ ದೊಡ್ಡ ಹೊಂಡಗಳನ್ನು ತಪ್ಪಿಸಲು ವಾಹನ ಸವಾರರು ಬಲಭಾಗಕ್ಕೆ ವಾಹನ ಚಲಾಯಿಸುತ್ತಿದ್ದುದರಿಂದ ಆ ತಿರುವುನಲ್ಲಿ ಅನೇಕ ಅಫಘಾತಗಳು ನಡೆಯುತ್ತಿದ್ದವು.
ಕಳೆದ ವಾರ ಅದೇ ತಿರುವುನಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊರ್ವರರಿಗೆ ವಿರುದ್ದ ದಿಕ್ಕಿನಿಂದ ಬಂದ ಕಾರು ಡಿಕ್ಕಿಹೊಡೆದು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರು ಮೃತಪಟ್ಟ ಅಘಾತದಿಂದ ಅವರ ತಾಯಿಯೂ ಮೃತಪಟ್ಟಿದ್ದರು.
ಹೀಗೆ ಅಫಘಾತಗಳಿಗೆ ಕಾರಣವಾಗಿದ್ದ ಸದ್ರಿ ರಸ್ತೆ ತಿರುವನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ಇಂದು ಜೆ.ಸಿ.ಬಿ ಬಳಸಿ ತಿರುವನ್ನು ದುರಸ್ಥಿ ಪಡಿಸಿದ್ದಾರೆ. ಹೊಂಡಗಳಿಗೆ ಮಣ್ಣು ತುಂಬಿಸಿ, ರಸ್ತೆಗೆ ಅಡ್ಡವಾಗಿದ್ದ ಮರದ ಗೆಲ್ಲುಗಳು, ಗಿಡ, ಪೊದೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ದುರಸ್ಥಿಪಡಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿರುತ್ತಾರೆ. ನಾಗರಿಕ ಸೇವಾ ಸಮಿತಿಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಸದ್ರಿ ತಿರುವು ಅಫಘಾತಕ್ಕೆ ಕಾರಣವಾಗಬಹುದಾದ ತಿರುವು ಆಗಿರುವುದರಿಂದ ವಾಹನ ಸವಾರರು ಈ ಭಾಗದಲ್ಲಿ ನಿಧಾನವಾಗಿ ಸಂಚರಿಸುವಂತೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ ಆರ್ ಪಾಟ್ಕರ್ ತಿಳಿಸಿದ್ದಾರೆ. ನಾಗರಿಕ ಸಮಿತಿಯ ಉಮೇಶ್ ರಾವ್, ಪುಂಡಲೀಕ ಮರಾಠೆ, ವಿನ್ಸಂಟ್ ಕಸ್ತಲಿನೋ, ಡೇನಿಸ್ ಡಿಸೋಜಾ, ವೈಲೇಟ್ ಕಸ್ತಲಿನೋ, ಸ್ಥಳೀಯರಾದ ಸುಂದರ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿಗೆ ಮುಂಬೈ ಪೊಲೀಸ್ ಆಡಳಿತಾಧಿಕಾರಿ ಭೇಟಿ

Posted On: 30-03-2025 10:19AM
ಕಾಪು : ಮುಂಬೈ ಪೊಲೀಸ್ ಆಡಳಿತಾಧಿಕಾರಿ ಜಯಕುಮಾರ್ ಐ. ಪಿ. ಎಸ್ ಅವರು ಸ್ನೇಹಿತರೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನ ದರುಶನ ಪಡೆದು ಅನುಗ್ರಹ ಪ್ರಸಾದ ಸ್ವೀಕರಿಸಿದರು.
ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿಯವರು ದೇವಳದ ಜೀರ್ಣೋದ್ಧಾರ ಮತ್ತು ವಾಸ್ತುಶಿಲ್ಪದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕರಾದ ಶೋಭಾ ರಮೇಶ್ ಶೆಟ್ಟಿ ಮತ್ತು ಸುನಿತಾ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
ಎ.6 : ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್

Posted On: 30-03-2025 08:35AM
ಕಾಪು : ಉಡುಪಿ ಜಿಲ್ಲಾ ಜಿಲ್ಲಾ ಚೆಸ್ ಅಸೋಸಿಯೇಷನ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯು ಎಪ್ರಿಲ್ 6 ರಂದು ಡಾ. ಟಿ.ಎಂ.ಎ.ಪೈ ಮಣಿಪಾಲದಲ್ಲಿ ಜರಗಲಿದೆ.
ವಯೋಮಿತಿ 7, 9, 11, 13, 15, 17, 19 ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಬಾಲಕರಿಗೆ 7 ಹಾಗೂ ಬಾಲಕಿಯರಿಗೆ 5 ಬಹುಮಾನ ಪ್ರತೀ ವಿಭಾಗದಲ್ಲಿ ಇರಲಿದೆ. ಪ್ರತಿ ವಿಭಾಗದಲ್ಲಿ ಎರಡು ಆಟಗಾರರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9341111024 ಎಂದು ಸಂಘದ ಅಧ್ಯಕ್ಷ ಉಮಾನಾಥ ಕಾಪು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ.ಹಿ.ಪ್ರಾ.ಶಾಲೆ ಎರ್ಮಾಳು ಸೌತ್ ಶಾಲೆಗೆ ರೋಬೋ ಸಾಫ್ಟ್ ಸಂಸ್ಥೆಯಿಂದ ಪ್ರಾಜೆಕ್ಟರ್, ಲ್ಯಾಪ್ಟಾಪ್ ಹಸ್ತಾಂತರ

Posted On: 30-03-2025 08:05AM
ಎರ್ಮಾಳು : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ಸೌತ್ ಶಾಲೆಗೆ ರೋಬೋ ಸಾಫ್ಟ್ ಸಂಸ್ಥೆಯವರು ನೀಡಿರುವ ಪ್ರಾಜೆಕ್ಟರ್ ಮತ್ತು ಲ್ಯಾಪ್ಟಾಪನ್ನು ರೋಬೋಸಾಫ್ಟ್ ಸಂಸ್ಥೆಯ ಕಾರ್ತಿಕ್ ಕೋಟ್ಯಾನ್ ರವರು ಶಾಲಾ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ರೋಬೋ ಸಾಫ್ಟ್ ಸಂಸ್ಥೆಯ ಕಾರ್ತಿಕ್ ಕೋಟ್ಯಾನ್ ರವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿಯಾದ ಶಾಂತಲಾ ದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರೋಬೋಸಾಫ್ಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಸತೀಶ್ಚಂದ್ರ, ಸಹ ಶಿಕ್ಷಕರಾದ ಕುಮಾರ್, ಪದ್ಮಲತಾ ಹಾಗೂ ಗೌರವ ಶಿಕ್ಷಕಿ ಸಿಂಚನ ಮತ್ತು ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ಚಂದ್ರ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶಾಂತಲಾ ದೇವಿ ಪ್ರಸ್ತಾವನೆಗೈದರು. ಶಿಕ್ಷಕ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಸಿಂಚನ ವಂದಿಸಿದರು.
ಬಂಟಕಲ್ಲು ಶ್ರೀಬಬ್ಬುಸ್ವಾಮಿ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ-ನೇಮೋತ್ಸವದ ಆಮಂತ್ರಣ ಬಿಡುಗಡೆ

Posted On: 28-03-2025 05:28PM
ಶಿರ್ವ : ಐತಿಹಾಸಿಕ ಹಿನ್ನೆಲೆ ಇರುವ ಬಂಟಕಲ್ಲು ಪೊದಮಲೆ ಪೆರಿಯಕಲದ ಪರಿಸರದಲ್ಲಿ ದೈವಸ್ಥಾನ ನಿರ್ಮಾಣ ಮಾಡುವಂತೆ ಪೂರ್ವಿಕರಿಗೆ ದೈವಗಳು ನೀಡಿದ ಪ್ರೇರಣೆಯಂತೆ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಿ, ಬಂಟೇಶ್ವರನ ಸಾನಿಧ್ಯದ ಪಶ್ಚಿಮ ಭಾಗದಲ್ಲಿ ಶ್ರೀಬಬ್ಬುಸ್ವಾಮಿ ದೈವಸ್ಥಾನವನ್ನು ಶತಮಾನಗಳ ಹಿಂದೆಯೇ ಪ್ರತಿಷ್ಠಾಪಿಸಲಾಗಿತ್ತು. ಜೀರ್ಣಾವಸ್ಥೆಯಲ್ಲಿದ್ದ ಈ ಸಾನಿಧ್ಯದ ಬಗ್ಗೆ ಆಗಮಶಾಸ್ತ್ರ ತಂತ್ರಿಗಳಿಂದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಗ್ರಾಮದ ಅಭಿವೃದ್ಧಿ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಾನಿಧ್ಯದ ಜೀರ್ಣೋದ್ದಾರಕ್ಕೆ, ಗ್ರಾಮಸ್ಥರು ಮತ್ತು ಹತ್ತು ಸಮಸ್ತರು ಸೇರಿಕೊಂಡು ಸಮಾಲೋಚನೆ ನಡೆಸಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿ ವಾಸ್ತುತಜ್ಞರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗಿದೆ.
ಎಪ್ರಿಲ್ 16ರಿಂದ ಎ.19ರ ಪರ್ಯಂತ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನೇಮೋತ್ಸವ, ಧಾರ್ಮಿಕ ಸಭೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಂಟಕಲ್ಲು ಶ್ರೀ ಬಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯದಲ್ಲಿ ಜರುಗಿತು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಡಂಬೈಲು ಭಾಸ್ಕರ ಶೆಟ್ಟಿ ಹಾಗೂ ಹಿರಿಯರಾದ ದೇವದಾಸ್ ಜೋಗಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ ಸಾನಿಧ್ಯದ ಜೀರ್ಣೋದ್ದಾರ ಕಾರ್ಯ ದೈವದ ಪ್ರೇರಣೆ ಹಾಗೂ ಸಂಕಲ್ಪದಂತೆ ಭಕ್ತರ ಹಾಗೂ ದಾನಿಗಳ ಸಹಕಾರದೊಂದಿಗೆ ಪೂರ್ಣಗೊಳ್ಳುತ್ತಿದ್ದು, ಸಾನಿಧ್ಯದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಇತ್ಯಾದಿ ಕಾರ್ಯಗಳು ಯಶಸ್ವಿಯಾಗಿ ಜರುಗುವಲ್ಲಿ ಎಲ್ಲಾ ಉಪಸಮಿತಿಗಳ ಸಂಚಾಲಕರು, ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ದೈಸ್ಥಾನದ ಗುರಿಕಾರರು ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ಪದಕಣ್ಣಾಯ ಮಾತನಾಡಿ, ಈವರೆಗೆ ನಡೆದ ಕಾರ್ಯಗಳು ಹಾಗೂ ಪೂರ್ವ ಸಿದ್ಧತೆಯ ಬಗ್ಗೆ ವಿವರವಾದ ಮಾಹಿತಿ ತಿಳಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಮರಾಯ ಪಾಟ್ಕರ್ ಮಾತನಾಡಿ, ಉಪಸಮಿತಿಗಳ ಜವಾಬ್ದಾರಿ ಹಾಗೂ ನಿರ್ವಹಣೆ, ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಮಾಹಿತಿ ನೀಡಿ, ಇದೊಂದು ಊರಿನ ಜಾತ್ರೆಯಾಗಿದ್ದು ಎಲ್ಲಾ ಕಾರ್ಯಗಳಲ್ಲೂ ಸದಸ್ಯರು ಹಾಗೂ ಗ್ರಾಮಸ್ಥರು ಕೈಜೋಡಿಸಿ ಯಶಸ್ವಿಗೊಳಿಸುವಂತೆ ಕರೆಯಿತ್ತರು. ಸಹ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್ ಕಾರ್ಯಕ್ರಮಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಿರಿಯರಾದ ಶೇಖರ ಪೂಜಾರಿ, ಮಧ್ಯಸ್ಥರು ರಾಮಕೃಷ್ಣ(ಅಪ್ಪು)ನಾಯಕ್, ಮಂಜುನಾಥ ಪಾಟ್ಕರ್, ಮಂಜುನಾಥ ಪೂಜಾರಿ, ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಸೇವಾನಿರತೆ ಪೂರ್ಣಿಮಾ ರಮೆಶ್ ಆಚಾರ್ಯ, ಹರೀಶ್ ಹೇರೂರು, ರವೀಂದ್ರ ಆಚಾರ್ಯ, ಸದಾನಂದ ಎಸ್, ಪ್ರಧಾನ ಅರ್ಚಕ ಸಂತೋಷ್ ಆರ್ ಉಪಸ್ಥಿತರಿದ್ದರು. ಸುಕನ್ಯಾ ಜೋಗಿ ಪ್ರಾರ್ಥಿಸಿದರು. ಸತ್ಯಸಾಯಿ ಪ್ರಸಾದ್ ನಿರೂಪಿಸಿದರು. ದಿನೇಶ್ ಎಸ್ ವಂದಿಸಿದರು.
ಮುದರಂಗಡಿ : ಸ್ತ್ರೀಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಾಗಾರ

Posted On: 28-03-2025 04:41PM
ಮುದರಂಗಡಿ : ಜನನಿ ಮಹಾಸಂಘ ಮತ್ತು ಕಥೊಲಿಕ್ ಸ್ತ್ರೀ ಸಂಘಟನೆ ಮುದರಂಗಡಿ ವತಿಯಿಂದ ಸ್ಥಳೀಯ ಸ್ತ್ರೀಯರಿಗಾಗಿ ಸ್ತ್ರೀಯರ ಋತುಬಂಧ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಮಾಹಿತಿ ಕಾರ್ಯಗಾರವು ಸಂತ ಫ್ರಾನ್ಸಿಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಧೀರಜ್ ಫೆರ್ನಾಂಡಿಸ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ತ್ರೀಯರಲ್ಲಿ ಋತುಸ್ರಾವ, ಋತುಬಂಧದ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಚರ್ಚ್ ನ ಧರ್ಮಗುರು ಪೂಜ್ಯ ಫ್ರೆಡ್ರಿಕ್ ಡಿಸೋಜಾ ರವರು ಉಪಸ್ಥಿತರಿದ್ದರು.
ಅಧ್ಯಕ್ಷೆ ಸಮಿತಾ ಮೆಂಡೋನ್ಸಾ ರವರು ಸ್ವಾಗತಿಸಿ, ಪ್ರಮೋದಾ ಮತಾಯಸ್ ವಂದಿಸಿದರು.