Updated News From Kaup

ಕಾಪು : ಪಡುಬಿದ್ರಿ - ಕನ್ನಂಗಾರ್ ಬೈಪಾಸ್ ರಸ್ತೆ ಶೀಘ್ರ ಕಾಮಗಾರಿಗೆ ಹೋರಾಟ ಸಮಿತಿ ಆಗ್ರಹ

Thumbnail
Posted On: 11 Nov 2023, 12:37 PM

ಕಾಪು : ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಭರವಸೆ ನೀಡಿ 6 ವರ್ಷ ಸಂದರೂ ಈವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದಾಗಿ ಈ ಭಾಗದಲ್ಲಿ 54 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 8 ಮಂದಿ ಯುವಜನತೆ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ಪಡುಬಿದ್ರಿ ಹಾಗೂ ಹೆಜಮಾಡಿಯಲ್ಲಿ ಸುಮಾರು ನಾಲ್ಕು ನೂರು ಅಟೋ-ರಿಕ್ಷಾಗಳಿದ್ದು, ಸಾರ್ವಜನಿಕರು ದ್ವಿಚಕ್ರ ವಾಹನ ಹಾಗೂ ಕಾರು, ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರಾಣವನ್ನು ಒತ್ತೆ ಇಟ್ಟು ಭಯದಿಂದಲೇ ಇಲ್ಲಿ ಸಂಚರಿಸಬೇಕಾಗಿದೆ ಎಂದು ಪಡುಬಿದ್ರಿ, ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಪೌವ್ಲ್ ರೊಲ್ಪಿ ಡಿ ಕೋಸ್ತ ಹೇಳಿದರು. ಅವರು ಪಡುಬಿದ್ರಿ - ಹೆಜಮಾಡಿ ಕನ್ನಂಗಾರ್ ಬೈಪಾಸ್‌ ಬಳಿ ಸರ್ವಿಸ್ ರಸ್ತೆ ನಿರ್ಮಾಣದ ಕುರಿತಂತೆ ಶನಿವಾರ ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಹೆದ್ಮಾರಿ 66ರ ಹೆಜಮಾಡಿ ಬಳಿ ಟೋಲ್ ಗೇಟ್ ನಿರ್ಮಾಣ ಸಂದರ್ಭದಲ್ಲಿ ಹೆದ್ದಾರಿಯಿಂದ ಹೆಜಮಾಡಿಯ ಒಳರಸ್ತೆ ಸಂಪರ್ಕಿಸುವುದಕ್ಕೆ ಕನ್ನಂಗಾರು ಬಳಿ ರಸ್ತೆ ವಿಭಜಕ ನಿರ್ಮಿಸಿರುವುದಿಲ್ಲ. ಸುಮಾರು 150 ಮೀಟರ್ ಹಿಂದಕ್ಕೆ ಪಡುಬಿದ್ರಿ ಬೀಡು ಬಳಿಯ ಸುಜ್ಞಾನ್ ಗೇಟ್ ಬಳಿ ಕಾನೂನು ಬಾಹಿರವಾಗಿ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ಎಲ್ಲಾ ಮಾದರಿಯ ವಾಹನಗಳು ಸಂಚರಿಸಿ ತೀರಾ ಅಪಾಯಕಾರಿಯಾಗಿ ಹೆಜಮಾಡಿಗೆ ಬರುತ್ತಿವೆ. ಈ ಸಂಕಷ್ಟವನ್ನು ಮನಗಂಡು ಕನ್ನಂಗಾ‌ರ್ ಬೈಪಾಸ್ ನಿಂದ ಪಡುಬಿದ್ರಿವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಆ ಸಮಯದಲ್ಲಿ ಉಭಯ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರವನ್ನು ಆಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿ ಜನರ ಸಮಸ್ಯೆಯನ್ನು ಮನಗಂಡು ಹೆದ್ದಾರಿ ಇಲಾಖೆಯ ಮುಖ್ಯ ಅಧಿಕಾರಿಗಳು ಶೀಘ್ರ ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಪಡುಬಿದ್ರಿ ಹೆಜಮಾಡಿ ಗ್ರಾಮಸ್ಥರ ಪಡುಬಿದ್ರಿ- ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯನ್ನು ರಚಿಸಿರುತ್ತೇವೆ. ಈಗಾಗಲೇ ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಉಡುಪಿಯ ಸಂಸದರು ಹಾಗೂ ಕೇಂದ್ರ ಸರಕಾರದ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದು ಇವರು ನಮ್ಮ ಮನವಿಗೆ ತಕ್ಷಣವಾಗಿ ಸ್ಪಂದಿಸಿ ಈ ಸರ್ವಿಸ್ ರಸ್ತೆಯ ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯವರಿಗೆ ಪತ್ರವನ್ನು ಬರೆದಿರುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಮಟ್ಟದಿಂದ ಸಚಿವರವರೆಗೂ ಮನವಿ ನೀಡಲಾಗಿದೆ. ನಮ್ಮ ನಿಯೋಗವು ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ಕಚೇರಿಗೆ ಹಾಗೂ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಕಚೇರಿಗೆ ನಮ್ಮ ನಿಯೋಗವು ತೆರಳಿ ಪ್ರಾದೇಶಿಕ ಅಧಿಕಾರಿಯ ಭೇಟಿಯಾಗಿ ನಮ್ಮ ಮನವಿಯನ್ನು ಈಗಾಗಲೇ ಸಲ್ಲಿಸಿರುತ್ತೇವೆ. ಅತೀ ಶೀಘ್ರವಾಗಿ ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸುವರೇ ಮಂಗಳೂರು ಯೋಜನಾ ನಿರ್ದೇಶಕರವರಿಗೆ ದೂರವಾಣಿ ಕರೆಯ ಮೂಲಕ ನಿರ್ದೇಶನವನ್ನು ನೀಡಿರುತ್ತಾರೆ. ಮಂಗಳೂರಿನಲ್ಲಿ ಯೋಜನಾ ನಿರ್ದೇಶಕರು, ಪ್ರಾದೇಶಿಕ ಅಧಿಕಾರಿಯವರ ನಿರ್ದೇಶನದಂತೆ ಎರಡು ದಿವಸದೊಳಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಸುಮಾರು 4 ರಿಂದ 6 ತಿಂಗಳ ಒಳಗೆ ಡಾಮ‌ರು ರಸ್ತೆಯನ್ನು ನಿರ್ಮಿಸುವುದು ಹಾಗೂ ಇದೇ ದೀಪಾವಳಿ ಹಬ್ಬದ ನಂತರ ಅತೀ ಶೀಘ್ರವಾಗಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ. ಈ ಕಾಮಗಾರಿಯು ಅತೀ ಶೀಘ್ರವಾಗಿ ಕೈಗೊಳ್ಳದಿದ್ದಲ್ಲಿ, ಪಡುಬಿದ್ರಿ ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಡುಬಿದ್ರಿ ಹಾಗೂ ಹೆಜಮಾಡಿಯ ಸಾರ್ವಜನಿಕರನ್ನು ಸೇರಿಸಿ ಕನ್ನಂಗಾರು ಬೈಪಾಸ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು. ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೆಶ್ಮಾ ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯತ್ ಶಶಿಕಲಾ, ಹೋರಾಟ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಂ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಅಲ್-ಅಝ್ ಹರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೆಜಮಾಡಿ ಸಂಚಾಲಕ ಹಾಜಿ ಶೇಖಬ್ಬ ಉಪಸ್ಥಿತರಿದ್ದರು.

ರೂಪಶ್ರೀ ಕುಲಾಲ್ ಕಾರು ಅಪಘಾತ ಪ್ರಕರಣ : ಕಾಪು ಕುಲಾಲ ಯುವ ವೇದಿಕೆ ಸೂಕ್ತ ತನಿಖೆಗೆ ಆಗ್ರಹ

Thumbnail
Posted On: 11 Nov 2023, 10:07 AM

ಮಂಗಳೂರು : ಕಾರು ಚಾಲಕನ ನಿರ್ಲಕ್ಷದಿಂದ ಅಪಘಾತದಲ್ಲಿ ಮೃತಪಟ್ಟ ಸುರತ್ಕಲ್ ಬಾಳ ನಿವಾಸಿ ರೂಪಶ್ರೀ ಕುಲಾಲ್ ಇವರ ಆತ್ಮಕ್ಕೆ ಚಿರ ಶಾಂತಿಯನ್ನು ಕರುಣಿಸಲಿ ಹಾಗೆಯೇ ತಪ್ಪಿಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕೆಂದು ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್ ಆಗ್ರಹಿಸಿದ್ದಾರೆ. ಮಂಗಳೂರು : ಕಾರು ಚಾಲಕನ ನಿರ್ಲಕ್ಷದಿಂದ ಅಪಘಾತದಲ್ಲಿ ಮೃತಪಟ್ಟ ಸುರತ್ಕಲ್ ಬಾಳ ನಿವಾಸಿ ರೂಪಶ್ರೀ ಕುಲಾಲ್ ಇವರ ಆತ್ಮಕ್ಕೆ ಚಿರ ಶಾಂತಿಯನ್ನು ಕರುಣಿಸಲಿ ಹಾಗೆಯೇ ತಪ್ಪಿಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕೆಂದು ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್ ಆಗ್ರಹಿಸಿದ್ದಾರೆ.

ಕಾಪು : ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ದಿವಾಕರ ಬಿ ಶೆಟ್ಟಿ ಆಯ್ಕೆ

Thumbnail
Posted On: 10 Nov 2023, 06:20 PM

ಕಾಪು : ಪತ್ರಿಕೋದ್ಯಮ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ದ್ವಾದಶಿ ಪಬ್ಲಿಸಿಟಿಯ ಮಾಲಕರಾದ ದಿವಾಕರ ಬಿ ಶೆಟ್ಟಿ ಇವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ) ಕೇರಳ ಇದರ ಗಡಿನಾಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಡಮಾಡುವ ಪತ್ರಿಕೋದ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಕಾಪು ತಾಲೂಕು ಪರಿಸರದಲ್ಲಿ ಸಮಾಜ ಸೇವಕರಾಗಿ ಜನಸಂಪರ್ಕ ಜನಸೇವಾ ವೇದಿಕೆ ಮೂಲಕ ಮದ್ಯವರ್ಜನ ಶಿಬಿರ, ನಾಯಿಗಳಿಗೆ ಉಚಿತ ರೇಬಿಸ್ ಲಿಸಿಕಾ ಶಿಬಿರ, ಆರೋಗ್ಯ ಶಿಬಿರ, 1000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು 20 ವರ್ಷಗಳಿಂದ ಸತತವಾಗಿ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಏರ್ಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ ಅಲ್ಲದೆ ಸರಕಾರದಿಂದ ಸಿಗುವ ವೃದ್ಯಾಪ್ಯ ವೇತನ, ವಿಧವೆ ವೇತನ, ಅಂಗವಿಕಲರ ವೇತನ, ಸುಮಾರು 500ಕ್ಕೂ ಮಿಕ್ಕಿ ಫಲಾನುಭವಿಗಳಿಗೆ ದೊರಕಿಸಿ ಕೊಟ್ಟಿರುತ್ತಾರೆ ವಿವಿಧ ಸಂಘ ಸಂಸ್ಥೆಗಳಿಂದ ಬಡವರಿಗೆ ಮನೆ ಕಟ್ಟಿಸಿ ಕೊಟ್ಟ ಆಶ್ರಯದಾತರಾಗಿದ್ದಾರೆ. ರಂಗ ಕಲಾವಿದರಿಗೆ ಸನ್ಮಾನ ಸತ್ಯನಾರಾಯಣ ಪೂಜೆ ಅಲ್ಲದೆ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ ಕೋವಿಡ್ ಸಮಯದಲ್ಲಿ ಸಮಾಜ ಸೇವಾ ವೇದಿಕೆ ಮುಕಾಂತರ 6000 ಕ್ಕೂ ಮಿಕ್ಕಿ ಆಹಾರ ಕಿಟ್ ನೀಡಿ ಬಡ ಜನರಿಗೆ ಸಹಾಯ ಮಾಡಿದ್ದಾರೆ ಹಲವಾರು ಸಮಾಜ ಸೇವೆ ಮಾಡಿರುವ ಕಾಪು ಬಂಟರ ಸಂಘದ ನಿರ್ದೇಶಕರು ಕೊಟ್ಟಾರಿ ಅಶ್ವತಕಟ್ಟೆ ಇದರ ಪ್ರದಾನ ವ್ಯವಸ್ಥಾಪಕರಾಗಿ ಹಲವಾರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ರಾಷ್ಟೀಯ ಪುರಸ್ಕೃತರಾದ ಏಷ್ಯಾ ಫೇಷಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ, ಸದ್ಭವನ್ ಪುರಸ್ಕಾರ್ ಅವಾರ್ಡ್ ಗೋವಾ, ಕೈರಾಳಿ ಪ್ರಕಾಶನ ಕಾಸರಗೋಡು ವತಿಯಿಂದ ಸಮಾಜ ರತ್ನ ಅವಾರ್ಡ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಜಿಲ್ಲಾ ಸಾದಕ ಅವಾರ್ಡ್ ಇಷ್ಟು ಲಭಿಸಿದೆ ಹಾಗೂ ನೂರಾರು ಕಡೆ ಗುರುತಿಸಿ ಸನ್ಮಾನಿಸಲಾಗಿದೆ. ನವೆಂಬರ್ 19ರಂದು ಭಾನುವಾರ ಕೇರಳ ರಾಜ್ಯದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇರಳ ವಿವಿಧ ಜಿಲ್ಲೆಯಲ್ಲಿ ಅನೇಕ ಕನ್ನಡಿಗರು ಭಾಗವಹಿಸಲಿದ್ದು ಇವರನ್ನು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ರಾಜ್ಯೋತ್ಸವ ನೀಡಲಿದ್ದೆವೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಕೇರಳ ಇದರ ಸಂಸ್ಥಾಪಕರಾದ ಎಸ್ ಪ್ರದೀಪ ಕಲ್ಕೂರ ಇವರು ತಿಳಿಸಿದ್ದಾರೆ. ಪ್ರಶಸ್ತಿ ಪಡೆಯಲಿರುವ ಇವರಿಗೆ ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಶ್ರೀ ಕಟೀಲು ಕ್ಷೇತ್ರದ ಪ್ರದಾನ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು- ಮಲ್ಲಾರು ಧರ್ಮಗುರುಗಳಾದ ಅಬ್ದುಲ್ ರಶೀದ್ ಸಕಾಫಿ, ಶೇಖರ್ ಬಿ ಶೆಟ್ಟಿ ಕಳತ್ತೂರು ಕಾಪುವಿನ ಸಮಾಜ ಸೇವಕರಾದ ಫಾರೂಕ್ ಚಂದ್ರನಗರ, ದಿವಾಕರ ಡಿ ಶೆಟ್ಟಿ ಕಳತ್ತೂರು ಹಾಗೂ ಅನೇಕ ಗಣ್ಯರು ಅಭಿನಂದಿಸಿದರು.

ಉಡುಪಿ : ಸುಳ್ಳಿಗೆ ಬೆಂಬಲವಾಗಿ ನಿಲ್ಲುವ ಸಂಘಟನೆ ನ್ಯಾಯದ ಘೋರಿ ಕಟ್ಟಲು ಹೊರಟಿದೆಯಾ ?

Thumbnail
Posted On: 09 Nov 2023, 10:48 PM

ಉಡುಪಿ : ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯುರ್ವೇದ ವೈದ್ಯರುಗಳ ಸಂಘಟನೆ ಎಂಬ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ತನ್ನ ವೈದ್ಯಕೀಯ ವೃತ್ತಿಗೆ ಪತ್ರಕರ್ತ ಓರ್ವನಿಂದ ತೊಂದರೆಯಾಗುತ್ತಿದೆ ಎಂದು ಹೇಳಿ ತುಳುನಾಡ ರಕ್ಷಣಾ ವೇದಿಕೆ ಎಂಬ ಸಂಘಟನೆಗೆ ದೂರು ಸಲ್ಲಿಸಿದ್ದಾರೆ ಆಯುರ್ವೇದ ವೈದ್ಯರುಗಳೆಂಬ ವ್ಯಕ್ತಿಗಳ ಬೆಂಬಲಕ್ಕೆ ನಿಂತು ಆಯುರ್ವೇದ ವೈದ್ಯರ ಪರವಾಗಿ ಉಡುಪಿ ಜಿಲ್ಲಾ ಎಸ್.ಪಿಯವರಿಗೆ ಮನವಿ ನೀಡಿದ್ದಾರೆ ಎಂದು ಅದೇ ಸಂಘಟನೆಯ ಹೆಸರನ್ನು ಹೋಲುವ ವೆಬ್ ಸೈಟ್ ನಲ್ಲಿ ವರದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ, ಅಸಲಿಗೆ ಆಯುರ್ವೇದ ವೈದ್ಯರುಗಳು ಎನ್ನುವರಿಗೆ ಅನ್ಯಾಯ ಆಗಿದೆ, ಬೆದರಿಕೆ ಇದೆ ಎಂದಾದರೆ ಕಾನೂನಿನ ಸಾಮಾನ್ಯ ಅರಿವು ಇದ್ದವರು ಕೂಡ ನೇರವಾಗಿ ಸಮೀಪದ ಪೊಲೀಸ್ ಠಾಣೆಯಲ್ಲಿ, ದೂರನ್ನು ಸಲ್ಲಿಸುತ್ತಾರೆ. ಈ ಪ್ರಕರಣದಲ್ಲಿ ಆಯುರ್ವೇದ ವೈದ್ಯರು ಎಂದು ಹೇಳುವವರು ಕನಿಷ್ಠ ಪೊಲೀಸರಿಗೆ ದೂರು ನೀಡದೆ ಸಂಘಟನೆ ಒಂದಕ್ಕೆ ದೂರು ನೀಡಿರುವುದು ವಿಪರ್ಯಾಸ ಅಲ್ಲದೆ, ಅಹಿತಕರ ಬೆಳವಣಿಗೆ ಆಗಿದೆ. ಈ ಆಯುರ್ವೇದ ವೈದ್ಯರುಗಳು ತಮ್ಮ ಸಂಘಟನೆಯ ಮೂಲಕ ತುಳುನಾಡ ರಕ್ಷಣಾ ವೇದಿಕೆಗೆ ದೂರು ನೀಡಿ ಓರ್ವ ನಿಷ್ಠಾವಂತ ಪತ್ರಕರ್ತನಿಗೆ ಬೆದರಿಸುವ ತಂತ್ರವೇ? ಯಾವುದೇ ಸಂಘಟನೆ ಯಾವುದೇ ಘಟನೆಗಳ ಬಗ್ಗೆ ದೂರನ್ನು ಸಲ್ಲಿಸುವಾಗ ಆ ವಿಚಾರದ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡುವುದು ಸೂಕ್ತ ಅದನ್ನು ಬಿಟ್ಟು ಯಾರೋ ತಮಗೆ ಆಗದವರ ಮೇಲೆ ನೀಡಿದ ದ್ವೇಷ ಪೂರಿತ ದೂರನ್ನು ಯಥಾವತ್ ಹಿಂದುಮುಂದು ನೋಡದೆ ಮನವಿ ಸಲ್ಲಿಸುವುದು ಸಂಘಟನೆಯ ಅಪಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ, ಅಲ್ಲದೆ ಪತ್ರಕರ್ತ ಕಿರಣ್ ಪೂಜಾರಿಯವರು ಹಳ್ಳಿಗಾಡಿನಾ ಬಡ ಮುಗ್ದ ರೋಗಿಗಳಿಗೆ ಆಗುತ್ತಿರುವ ಅನ್ಯಾಯದ ಪರ ರಾತ್ರಿ ಹಗಲೆನ್ನದೆ ತನಿಖಾ ಪತ್ರಕರ್ತಿಕ್ಕೆ ನಡೆಸಿ ಪ್ರಕಟಿಸಿದ ವರದಿಯಿಂದ ರೊಚ್ಚಿಗೆದ್ದ, ಅಕ್ರಮವಾಗಿ ವ್ಯವಹಾರ ನಡೆಸುತ್ತಿರುವ ವೈದ್ಯರುಗಳು ಪತ್ರಕರ್ತ ಕಿರಣ ಪೂಜಾರಿಯ ಮಾನಹಾನಿ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುವುದರಲ್ಲದೆ ಅವರನ್ನು ನಿರ್ನಾಮ ಮಾಡುವವರೆಗೆ ಎಲ್ಲಾ ಪ್ರಯತ್ನವನ್ನು ಈಗಾಗಲೇ ಮಾಡಿದ್ದಾರೆ. ಆಯುಷ್ ಫೆಡರೇಶನ್ ಆಫ್ ಇಂಡಿಯಾ ಸಂಘಟನೆಯ ತಾಲೂಕು ಅಧ್ಯಕ್ಷ ಡಾ ಹರಿಪ್ರಸಾದ್ ಶೆಟ್ಟಿ ಎಂದು ತಿಳಿದು ಬಂದಿದೆ. ಆದರೆ ತುಳುನಾಡ ರಕ್ಷಣಾ ವೇದಿಕೆಗೆ ಮನವಿ ನೀಡಿದ ಲೆಟರ್ ಹೆಡ್ ರಾಜ್ಯಕ್ಕೆ ಸಂಬಂಧಿಸಿದ್ದು, ತಾಲೂಕು ಅಧ್ಯಕ್ಷ ರವೀಂದ್ರ ಗೊಲ್ಲ ಎನ್ನುವ ವ್ಯಕ್ತಿಯದಾಗಿರುತ್ತದೆ, ಇದು ಸಹ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮನವಿ ನೀಡಿದ ಆಯುರ್ವೇದ ವೈದ್ಯರಾಗಿ ಅಲೋಪತಿ ಚಿಕಿತ್ಸೆಯನ್ನು ನೀಡಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿರುವ ವೈದ್ಯರುಗಳು ಬಡ ಪತ್ರಕರ್ತ ಕಿರಣ್ ಪೂಜಾರಿಯವರನ್ನು ಹಣಿಯಲು ಪೊಲೀಸ್ ದೂರಿನಿಂದ ಮೊದಲು ಬಂದು ಇನ್ನಿಲ್ಲದ ಕಸರತ್ತುಗಳನ್ನು ನಡೆಸಿ ವಿಫಲರಾಗಿದ್ದು, ಇದೀಗ ಸಂಘಟನೆ ಒಂದರ ಬೆಂಬಲವೆಂಬ ಹೊಸ ನಾಟಕದೊಂದಿಗೆ ನಿಷ್ಠಾವಂತ ಪತ್ರಕರ್ತನನ್ನು ಹಣಿಯಲು ವೇದಿಕೆಯನ್ನು ನಿರ್ಮಿಸಿದ್ದಾರೆ. ಆಯುರ್ವೇದ ವೈದ್ಯರುಗಳು ನಡೆಸುವ ಚಿಕಿತ್ಸೆ, ಅವರು ನಡೆಸುವ ವ್ಯವಹಾರಗಳು ನ್ಯಾಯಯುತವಾಗಿದ್ದರೆ ಅವರು ಭಯಪಡುವ ಅಗತ್ಯ ಏನಿದೆ? ಕಿರಣ್ ಪೂಜಾರಿಯಂತ 100 ಪತ್ರಕರ್ತರು ಬಂದರು ಹೆದರುವ ಅಗತ್ಯ ಇದೆಯೇ? ತಾವು ನಡೆಸುವ ಅಕ್ರಮ ವ್ಯವಹಾರವನ್ನು ಯಾರು ಪ್ರಶ್ನಿಸಬಾರದು ತಾವು ವೈದ್ಯರು ಎಂಬ ದುರಂಕಾರದಿಂದ ಓರ್ವ ಪತ್ರಕರ್ತ ಕಿರಣ್ ಪೂಜಾರಿ ಅವರನ್ನು ಮಣಿಸಲು ಯತ್ನಿಸಿದರೆ ಅವರಂತ ನೂರು ಪತ್ರಕರ್ತರು ಇಂಥ ಅಕ್ರಮ ವ್ಯವಹಾರ ನಡೆಸುವಂತಹ ವೈದ್ಯರುಗಳ ಜಾತಕ ಬಯಲು ಮಾಡಲು ಸಜ್ಜಾಗುವುದರಲ್ಲಿ ಸಂಶಯವಿಲ್ಲ. ಪತ್ರಕರ್ತರು ಭಯವನ್ನು ಜಯಿಸಿದ ಮೇಲೆಯೇ ಇಂತಹ ತನಿಖಾ ಪತ್ರಿಕೋದ್ಯಮಕ್ಕೆ ಇಳಿದಿರುತ್ತಾರೆ ಅಂತಹ ಭಯವನ್ನು ಜಯಸಿ ಬಂದಿರುವ ಕಿರಣ್ ಪೂಜಾರಿಯಂತಹ ಪತ್ರಕರ್ತರನ್ನು ಯಾವುದೇ ಸಂಘಟನೆಗಳಿಂದ ಭಯಭೀತಿಗೊಳ್ಳಿಸುವ ಪ್ರಯತ್ನದಿಂದ ಏನು ಪ್ರಯೋಜನವಾಗದು , ಬಡವರ ಮುಗ್ದ ರೋಗಿಗಳ ಪರವಾಗಿ ನಿಂತಿರುವ ಕಿರಣ್ ಪೂಜಾರಿಯಂತವರ ನ್ಯಾಯಯುತ ಹೋರಾಟ ನಿರಂತರವಾಗಿ ಇರಬೇಕು. ಈ ಹೋರಾಟಕ್ಕೆ ನ್ಯಾಯವನ್ನು ಬಯಸುವ ಪ್ರತಿ ಒಬ್ಬ ಸಾಮಾಜಿಕ ಕಳಕಳಿ ಇರುವ ಸಾರ್ವಜನಿಕರು ಬೆಂಬಲ ಸಹಕಾರ ನಿಷ್ಠಾವಂತ ಪತ್ರಕರ್ತ ಕಿರಣ್ ಪೂಜಾರಿ ಅವರಿಗೆ ಬೇಕು.

ಉಡುಪಿ : ಕೊಳಲಗಿರಿ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

Thumbnail
Posted On: 08 Nov 2023, 05:58 PM

ಉಡುಪಿ : ಜಿಲ್ಲೆಯ ಪ್ರಮುಖ ಸೇವಾ ಸಂಸ್ಥೆಯಾದ ಹೋಮ್ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ ಸಾಮೂಹಿಕ ದೀಪ ಬೆಳಗಿಸುವುದರೊಂದಿಗೆ ದೀಪಾವಳಿ ಹಬ್ಬವನ್ನು ನವೆಂಬರ್ 7 ರಂದು ಆಚರಿಸಲಾಯಿತು. ಕೊಳಲಗಿರಿ ಸಂತೆ ಮಾರುಕಟ್ಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕರಾದ ಗೀತಾ ಶೆಟ್ಟಿ, ರಾಜೇಶ್ ರೈ, ಸಚ್ಚಿದಾನಂದ ಹೆಗ್ಡೆ, ಉದ್ಯಮಿಗಳಾದ ಯದುನಾಥ್, ಸದಾನಂದ ಶೆಟ್ಟಿ ಇವರು ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಪ್ರಮುಖರಾದ ಡಾ| ಶಶಿಕಿರಣ್ ಶೆಟ್ಟಿ ಮಾತನಾಡಿ ಹೋಮ್ ಡಾಕ್ಟರ್ ಫೌಂಡೇಶನ್ ನಡೆದು ಬಂದ ಹಾದಿ ಮತ್ತು ವಿವಿಧ ಕಾನ್ಸೆಪ್ಟ್ ಗಳ ಮೂಲಕ ಸಮಾಜ ಸೇವೆಗಳ ವಿವರಗಳನ್ನು ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಡಾ| ಸುಮಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಲವಾರು ಅಸಹಾಯಕ ರೋಗಿಗಳಿಗೆ ಸಹಾಯಧನ ಮತ್ತು ಅಕ್ಕಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು. ನಂತರ ಶಾರದ ಅಂಧ ಕಲಾವಿದ ತಂಡದಿಂದ ಸುಗಮ ಸಂಗೀತ ಕಾಯ೯ಕ್ರಮ ನಡೆಯಿತು. ಸಂಸ್ಥೆಯ ಸದಸ್ಯರಾದ ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸುಜಯ, ರಾಜೇಂದ್ರ, ಗಣೇಶ್, ಸುಂದರ ಪೂಜಾರಿ, ದಯಾನಂದ ಪೂಜಾರಿ, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು. ರೋಷನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕುತ್ಯಾರು ಯುವಕ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Thumbnail
Posted On: 08 Nov 2023, 05:49 PM

ಕಾಪು : ಕುತ್ಯಾರು ಯುವಕ ಮಂಡಲ ( ರಿ.) ಕುತ್ಯಾರು 1963 ರಲ್ಲಿ ಸ್ಥಾಪನೆ ಗೊಂಡು 60 ವರ್ಷಗಳಿಂದ ಸ್ಥಳೀಯವಾಗಿ ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ ಕ್ಷೇತ್ರ, ಉದ್ಯೋಗ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬ, ಪರಿಸರ ಸಂರಕ್ಷಣೆ, ರಕ್ತದಾನ ಇನ್ನಿತರ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತದೆ. ಯುವಕ ಮಂಡಲದ ಸೇವೆಯನ್ನು ಮನಗೊಂಡು ಪ್ರಸ್ತುತ 2023 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಡುಬಿದ್ರಿ ಆರೋಗ್ಯ ಕೇಂದ್ರ : ಆರೋಗ್ಯ ರಕ್ಷಾ ಸಮಿತಿ ಸಭೆ

Thumbnail
Posted On: 08 Nov 2023, 05:45 PM

ಪಡುಬಿದ್ರಿ : ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಇಂದು ಜರಗಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪ್ರಕಾಶ್ ಪಾದೆಬೆಟ್ಟು, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನವೆಂಬರ್ 9 : ಕಟಪಾಡಿಯಲ್ಲಿ ಆಯುಷ್ ಆರೋಗ್ಯ ಶಿಬಿರ

Thumbnail
Posted On: 08 Nov 2023, 11:58 AM

ಕಟಪಾಡಿ : ಆಯುಷ್‌ ಇಲಾಖೆ, ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ, ಕಟಪಾಡಿ ಗ್ರಾಮ ಪಂಚಾಯತ್, ಎಸ್.ವಿ.ಎಸ್. ಹಳೆವಿದ್ಯಾರ್ಥಿ ಸಂಘ ಕಟಪಾಡಿ, ಮಹಿಳಾ ಮಂಡಲ ಕಟಪಾಡಿ, ಕೋಟೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಕಟಪಾಡಿ, ಸೃಷ್ಠಿ ಫೌಂಡೇಶನ್ ಕಟಪಾಡಿ, ಎಸ್.ವಿ.ಎಸ್.ವಿದ್ಯಾವರ್ಧಕ ಸಂಘ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆ ಉಡುಪಿ ಇದರ ರಾಷ್ಟ್ರೀಯ ಅಯುಷ್‌ ಅಭಿಯಾನದ ಯೋಜನೆಯಡಿ ನವೆಂಬರ್ 9ರಂದು ಬೆಳಗ್ಗೆ 9.30ರಿಂದ 12.30ರ ವರೆಗೆ ಕಟಪಾಡಿ ಮಹಿಳಾ ಮಂಡಲ ಸಭಾ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಶಿಬಿರದಲ್ಲಿ ಅಸ್ತಮಾ, ಗ್ಯಾಸ್ಟಿಕ್‌, ವಾತವ್ಯಾಥಿ ಮತ್ತು ಸ್ತ್ರೀ ಸಂಬಂಧಿ ಖಾಯಿಲೆಗಳು ಹಾಗೂ ಎಲ್ಲಾ ರೀತಿಯ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ಉಡುಪಿ ಜಿಲ್ಲಾ ಆಯುಷ್‌ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ದಿನಕರ್ ಡೋಂಗ್ರೆ, ತಜ್ಞ ವೈದ್ಯರಾದ ಡಾ.ಸ್ವಾತಿ ಆರೋಗ್ಯ ತಪಾಸಣೆ ನಡೆಸಲಿರುವರು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರಾದ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ನಾಗೇಶ್ ಕಾಮತ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಲಿಮಾರು : ನಿರಂತರ ಪರಿಶ್ರಮ ಮಾತ್ರ ಯಶಸ್ಸನ್ನು ದೊರಕಿಸಿಕೊಡಬಲ್ಲುದು - ಸುಧಾಕರ್ ಶೆಣೈ

Thumbnail
Posted On: 07 Nov 2023, 06:23 PM

ಪಲಿಮಾರು : ಹಿರಿಯರು ಕಟ್ಟಿ ಬೆಳೆಸಿದ ಸುಂದರ ಸಂಸ್ಥೆ ಪಲಿಮಾರಿನ ಸರಕಾರಿ ವಿದ್ಯಾ ಸಂಸ್ಥೆ. ಎಲ್ಲಾ ರೀತಿಯ ಸೌಕರ್ಯಗಳಿರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಈ ವಿದ್ಯಾಸಂಸ್ಥೆಗೆ ಸೇರಿಸಲು ಮುಂದೆ ಬರಬೇಕು ಎಂಬುದಾಗಿ ಸರಕಾರಿ ಪ್ರೌಢಶಾಲೆಯ ಪಲಿಮಾರು ಇಲ್ಲಿಯ ಕನ್ನಡ ಶಿಕ್ಷಕರಾದ ಸುಧಾಕರ್ ಶೆಣೈ ಹೇಳಿದರು. ಅವರು ನವೆಂಬರ್ 7ರಂದು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ನಡೆದ ಪೋಷಕರ ಮತ್ತು ವಿದ್ಯಾರ್ಥಿಗಳ ಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅವರಿಗಿಂತ ನಿಮ್ಮ ಜೀವನ ಮಟ್ಟ ಒಳ್ಳೆಯದಾಗಬೇಕು ಎನ್ನುವುದು ನಿಮ್ಮ ಪೋಷಕರ ಅಭಿಲಾಷೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸತತ ಪ್ರಯತ್ನ ಮಾಡಿ, ಜೀವನದಲ್ಲಿ ಯಶಸ್ವಿಗಳಾಗಬೇಕು. ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ. ನಿರಂತರ ಪರಿಶ್ರಮ ಮಾತ್ರ ಯಶಸ್ಸನ್ನು ದೊರಕಿಸಿಕೊಡಬಲ್ಲುದು ಎಂಬುದಾಗಿ ಅವರು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಮಾತನಾಡಿ, ಪಲಿಮಾರಿನ ವಿದ್ಯಾರ್ಥಿಗಳು ತುಂಬಾ ಶಿಸ್ತು, ವಿನಯ ಮತ್ತು ವಿಧೇಯತೆ ಇರುವ ಮಕ್ಕಳು. ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮಾತ್ರವಲ್ಲ, ತಪ್ಪದೆ ತರಗತಿಗಳಿಗೆ ಹಾಜರಾಗುತ್ತಾರೆ ಎಂಬುದಾಗಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಭಿನಂದಿಸಿದರು. ಸಮಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂಬುದಾಗಿ ಅವರು ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರ್ ಮಾತನಾಡಿ, ಸಂಸ್ಥೆಯಲ್ಲಿ ಯಾವುದೇ ಕುಂದು ಕೊರತೆಗಳಿದ್ದಲ್ಲಿ ಪೋಷಕರು ನೇರವಾಗಿ ಕೇಳಬಹುದು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ಮತ್ತು ಎಂ.ಕಾಮ್ ನಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ ನಿಮ್ಮ ಪ್ರಾಂಶುಪಾಲರನ್ನೇ ಮೀರಿಸು ಸಾಧನೆಯನ್ನು ನೀವು ಮಾಡಬೇಕು ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೂ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿರುವ ರಾಯೇಶ್ವರ್ ಪೈ, ಪೋಷಕ ಪ್ರತಿನಿಧಿಗಳಾದ ಪ್ರಸನ್ನ, ತುಳಸಿ, ರೇಖಾ ಹಾಗೂ ನಳಿಸಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಕಾಪು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕನ್ನಡ ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಸ್ವಾತಿ ಪ್ರದೀಪ್ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರು ಜೊತೆ ಜೊತೆ ಸೇರಿ ಒಂದು ಪವಿತ್ರ ಕೆ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ಮಹಾಸಭೆ ; ಮಹಿಳಾ ಬಳಗದ ಪದಗ್ರಹಣ

Thumbnail
Posted On: 06 Nov 2023, 09:25 PM

ಶಿರ್ವ : ಇಲ್ಲಿನ ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಇದರ ಮಹಾಸಭೆ ಮತ್ತು ಮಹಿಳಾ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಶ್ರೀ ಕಾಳಿಕಾ ಭಜನಾ ಮಂಡಳಿಯ ಅಧ್ಯಕ್ಷರಾದ ರೇಖಾ ಶ್ರೀಕಾಂತ್ ಆಚಾರ್ಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುವಲ್ಲಿ ನಮ್ಮ ಪಾತ್ರ ಗಣನೀಯವಾಗಿದೆ ಎಂದರು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಆಚಾರ್ಯ ಮಾತನಾಡಿ ರಾಜಕೀಯವಾಗಿ ನಾವು ಸಬಲರಾಗಿರಬೇಕಾದರೆ ನಮ್ಮಲ್ಲಿ ಒಗ್ಗಟ್ಟಿರಬೇಕು. ಆಗ ಮಾತ್ರ ನಮ್ಮನ್ನು ಸಮಾಜ ಗುರುತಿಸುತ್ತದೆ ಎಂದರು. ಈ ಸಂದರ್ಭ ಜನಾರ್ಧನ ಆಚಾರ್ಯರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ನೂತನ ಅಧ್ಯಕ್ಷೆ ಸಹನಾ ಗಣೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಯುವ ಸಂಗಮದ ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಪ್ರೀತಿ ಆಚಾರ್ಯ ವರದಿ ವಾಚಿಸಿದರು. ಮಂಜುಳಾ ಆಚಾರ್ಯ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ಮಾಧವಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.