Updated News From Kaup
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಆವಿಷ್ಕಾರ ದಿನ ಆಚರಣೆ
Posted On: 17 Oct 2023, 05:20 PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇನ್ನೊವೇಶನ್ ಕೌನ್ಸಿಲ್ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೋಶದ ಸಹಯೋಗದೊಂದಿಗೆ ರಾಷ್ಟ್ರೀಯ ಆವಿಷ್ಕಾರ ದಿನವನ್ನು ಅಕ್ಟೋಬರ್ 16ರಂದು ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಎನ್ ಐ ಟಿ ಕೆ ಸುರತ್ಕಲ್ನ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಅರುಣ್ ಮೋಹನ್ ಇಸ್ಲೂರು ಉದ್ಘಾಟಿಸಿದರು. ಇವರು ಉದ್ಯಮಶೀಲತೆ, ಉದ್ಯಮಿಗಳಿಗೆ ಅಗತ್ಯವಿರುವ ಶಿಸ್ತು, ಹೊಂದಿಕೊಳ್ಳುವಿಕೆ, ಸೃಜನಶೀಲತೆಯ ಬಗ್ಗೆ ತಿಳಿಸಿದರು. ಹಲವಾರು ಉದ್ಯಮಿಗಳ ಉದಾಹರಣೆಯೊಂದಿಗೆ ಕೌಶಲ್ಯ ಮತ್ತು ಕಠಿಣ ಪರಿಶ್ರಮದಿಂದ ಉದ್ಯಮಿಗಳು ತಮ್ಮ ಉದ್ಯೋಗದಲ್ಲಿ ಹೇಗೆ ಯಶಸ್ವಿಯಾಗಬಹುದೆಂದು ವಿವರವಾಗಿ ತಿಳಿಸಿದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಡೀನ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಉಷಾ ಪಾರ್ವತಿ ಅತಿಥಿಯನ್ನು ಪರಿಚಯಿಸಿದರು. ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸಹನಾ ಕಾರಂತ್ ಸ್ವಾಗತಿಸಿದರು. ಉದ್ಯಮಶೀಲತೆ ಅಭಿವೃದ್ಧಿ ಕೋಶದ ಸಂಯೋಜಕರಾದ ಡಾ. ಮಧುಕ ನಾಯಕ್ ವಂದಿಸಿದರು.
ಶರನ್ನವರಾತ್ರಿ : ಮಾತೃ - ಪ್ರಕೃತಿ - ಶಕ್ತಿ ಉಪಾಸನಾ ಪರ್ವ
Posted On: 17 Oct 2023, 05:06 PM
ನಾವೆಲ್ಲರೂ ಒಬ್ಬಳು ’ತಾಯಿ’ಯಿಂದ ಜನಿಸಿದವರು. ನಮ್ಮೆಲ್ಲರನ್ನು ಒಳಗೊಂಡಿರುವ ಜಗತ್ತು ಒಬ್ಬಳೇ ಮಾತೆಯಿಂದ ಉಂಟಾಯಿತು ಎಂಬುದು ಆಶ್ಚರ್ಯದ ವಿಷಯವಲ್ಲ, ಅಸಂಬದ್ಧ ವಿವರಣೆಯಲ್ಲ.ಮಾನವನ ಬದುಕು-ಪ್ರಕೃತಿ- ಹವಾಮಾನ ಇವು ಪರಸ್ಪರ ಸಂಬಂಧಿ. ಪ್ರಕೃತಿಯ ಬದಲಾವಣೆಗೆ ತನ್ನನ್ನು ರೂಢಿಸಿಕೊಂಡು, ಅವಲಂಬಿಯಾಗಿ ತನ್ನ ನೆಲೆಯಾದ ಪ್ರಕೃತಿಯ ನಿಗ್ರಹ, ಅನುಗ್ರಹಗಳೆರಡನ್ನೂ ಸಹಜವಾಗಿ ಸ್ವೀಕರಿಸಿ ’ಬದುಕು ಕಟ್ಟಿಕೊಂಡ ಆದಿ ಮನುಷ್ಯ’ ಎಂಬ ತಿಳಿವಳಿಕೆಯಲ್ಲೂ ಸತ್ಯವಿಲ್ಲವೇ? ಜನ್ಮ ನೀಡಿದ ತಾಯಿಯನ್ನು, ಬದುಕಲು ಅವಕಾಶ ನೀಡಿದ ಪ್ರಕೃತಿಯನ್ನು ಕೃತಜ್ಞತಾ ಭಾವದಿಂದ ಕಂಡು ಪರಸ್ಪರ ಸಮೀಕರಿಸಿ, ಕೊನೆಗೆ ನಾಗರಿಕತೆಯ ಒಂದು ಪೂರ್ಣ ಹಂತದಲ್ಲಿ ನಿಲುಮೆಗೆ ನಿಲುಕದ, ಕಲ್ಪನೆಗೆ ಸಿಗದ ನಿಯಾಮಕ ಶಕ್ತಿಯಾಗಿ ಸ್ವೀಕರಿಸಿದ್ದು, ನಾವು ಸಂಶೋಧನಾ ಸಂಗ್ರಹಗಳಿಂದ ತಿಳಿಯಬಹುದಾದ ವಿಶ್ಲೇಷಣೆ. ಬಹುಶಃ ಇದೇ ಇರಬೇಕು ಮಾತೃ-ಪ್ರಕೃತಿ-ಶಕ್ತಿ ಉಪಾಸನಾ ಪ್ರಕಾರದ ಮೂಲ. ಪ್ರಜನನ ಶಕ್ತಿ - ಸಸ್ಯಧಾರಣೆ : ಗರ್ಭಧಾರಣೆ ಹಾಗೂ ಪ್ರಜನನ ಶಕ್ತಿ ವಿಶೇಷವನ್ನು ಹೊಂದಿರುವ ಸ್ತ್ರೀ ಮಾತೃ ಆರಾಧನೆ ಮೂಲವಾದಳು. ತನ್ನಂತಹ ಪ್ರತಿರೂಪವನ್ನು ನೀಡಬಲ್ಲ ಸ್ತ್ರೀಯ ವಿಶೇಷ ಶಕ್ತಿ, ತಾನು ಪಡೆದುದನ್ನು ಪೋಷಿಸುವ ವಿಶಿಷ್ಟ ಮನಃಸ್ಥಿತಿಗಳು ಸ್ತ್ರೀ ಪಾರಮ್ಯವನ್ನು ಪ್ರತಿಷ್ಠಾಪಿಸಿಕೊಳ್ಳುವಲ್ಲಿ ಪರಿಣಾಮ ಬೀರಿರುವ ಅಂಶಗಳಿರಬೇಕು. ಕೃಷಿ ಸ್ತ್ರೀಯ ಅನ್ವೇಷಣೆ ಎಂಬುದು ಹಲವು ಸಂಶೋಧಕರ ಅಭಿಪ್ರಾಯ. ಪುರುಷ ಬೇಟೆಗೆ, ಪಶುಪಾಲನೆಗೆ ಹೊರಟಾಗ ಸ್ತ್ರೀ-ಕೃಷಿ ಸಂಬಂಧ ಅನಿವಾರ್ಯವಾಯಿತು. ಈ ಕಾರಣದಿಂದಲೇ ಭೂಮಿ-ಸ್ತ್ರೀ ಸಮಾನ ಸ್ಥಾನಮಾನ ಪಡೆದಿರಬಹುದೆಂಬ ವಾದದಲ್ಲಿ ಅರ್ಥವಿದೆ ಎಂದು ಅನ್ನಿಸುವುದಿಲ್ಲವೇ? ಸ್ತ್ರೀಯ ’ಗರ್ಭಧಾರಣಾ ಸಾಮರ್ಥ್ಯ’ಕ್ಕೆ ಸಂವಾದಿಯಾದ ಭೂಮಿಯ ’ಸಸ್ಯಧಾರಣ ಶಕ್ತಿ’ ಗಮನ ಸೆಳೆಯುವ ಅಂಶವಾಗುತ್ತದೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆಯುವ ನಿಸರ್ಗ ನಿಯಮವೂ ಸ್ತ್ರೀ ಸಹಜವಾದ ಮಾತೃತ್ವದ ವಿಶೇಷತೆ ಕಂಡಾಗ ಸ್ತ್ರೀಯನ್ನು ಭೂಮಿಗೆ ಹೋಲಿಸಿದ ಆದಿಮಾನವನು ತಾಯಿಯಂತೆ ಭೂಮಾತೆಗೂ (ಪ್ರಕೃತಿಗೂ) ಗೌರವ ನೀಡಲಾರಂಭಿಸಿದ, ಕೃತಜ್ಞನಾಗತೊಡಗಿದ. ಶಕ್ತಿ-ವಸ್ತು ಪ್ರಕೃತಿಯ ಅವಿಭಾಜ್ಯ ಅಂಗಗಳು. ಇವುಗಳ ಪ್ರಾಂಸಗಿಕ ಸಮಾಗಮ ದೈವೀಶಕ್ತಿ. ನಿಯಾಮಕ ಶಕ್ತಿಯ ಕೆಲಸ ಎಂಬುದು ಒಂದು ಪ್ರಮಾಣ. ಈ ದೈವೀಶಕ್ತಿಯನ್ನು ಶಕ್ತಿ, ಮಹಾಮಾತೆ ಎನ್ನಲೇಬೇಕಾಯಿತು. ತಾಯಿ-ಪ್ರಕೃತಿಯ ಅದ್ಭುತ, ಕಲ್ಪನಾತೀತ ಸಾಮರ್ಥ್ಯವನ್ನು ಕಂಡು ನಿಬ್ಬೆರಗಾಗಿದ್ದ ಮನುಷ್ಯ, ನಿಯಾಮಕ ಶಕ್ತಿಯನ್ನು ಇವುಗಳಿಗಿಂತ ಹೆಚ್ಚಿನ, ಎತ್ತರದ ವಿಶೇಷ ಬಲ ಸಮನ್ವಿತವಾದುದೆಂದು ಊಹಿಸಿದ ಹಂತವೇ ಶಕ್ತಿ ಆರಾಧನೆ ಮೊದಲಿಟ್ಟಿರ ಬಹುದಾದ ಮನುಷ್ಯ ವಿಕಾಸದ ಹಂತವೆಂದು ಪರಿಗ್ರಹಿಸಬಹುದು. ಆಹಾರ ಸಂಗ್ರಹಣೆಯುಗ, ಬೇಟೆಯುಗ, ಪಶುಪಾಲನೆ-ಕೃಷಿಯುಗ, ಕೈಗಾರಿಕಾಯುಗಗಳೆಂದು ಮಾನವ ಬದುಕಿನ ಪುರಾತನ ಜೀವನ ವಿಧಾನಗಳ ಹಂತವನ್ನು ಗುರುತಿಸಿರುವ ವಿದ್ವಾಂಸರು ಪಶುಪಾಲನೆ-ಕೃಷಿಯೊಂದಿಗೆ ದೇವತೆಗಳ ಉಗಮವಾಗಿರಬೇಕು ಎನ್ನುತ್ತಾರೆ. ಇದರೊಂದಿಗೆ ವೈದಿಕ ಪೂರ್ವದ ಮಾತೃ-ಪ್ರಕೃತಿ-ಶಕ್ತಿ ಆರಾಧನೆಯ ಅಸ್ಪಷ್ಟ ನಿಲುವಿನ ಹಂತದಿಂದ ಸುವ್ಯವಸ್ಥಿತ, ಮೌಖಿಕ-ಲಿಖಿತ ಆಧಾರಗಳುಳ್ಳ ವೈದಿಕ ಕಾಲಕ್ಕೆ ಪ್ರವೇಶಿಸೋಣ. ಭಾರತೀಯ ಸಂಸ್ಕೃತಿಯ ಬೇರು ಇರುವುದು ಜನಪದ ಬದುಕಿನ ಹರವಿನಲ್ಲಿ ಅಲ್ಲವೇ? (ವಿವಿಧ ಗ್ರಂಥಗಳು ವಿದ್ವಾಂಸರಿಂದ ಸಂಗ್ರಹಿಸಿದ್ದು) ಶಕ್ತಿ ಆರಾಧನೆ ವೈದಿಕ ಕಲ್ಪನೆ : ಪರಬ್ರಹ್ಮನ ಚೈತನ್ಯ ಸ್ವರೂಪಿಣಿಯಾದ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಳಾದ ಶಕ್ತಿಯನ್ನು ಮಹಾದೇವನ ಮಡದಿಯಾಗಿ ಶಿವಶಕ್ತಿ ಎಂದು ಶೈವರು, ಶ್ರೀ ಲಕ್ಷ್ಮೀ ಎಂದು ವೈಷ್ಣವರು, ಮಹಾಮಾತೆ ಎಂದು ಶಾಕ್ತರು ಪೂಜಿಸಲಾರಂಭಿಸಿದರು. ವೇದದಲ್ಲಿ ಬರುವ ರಾತ್ರೀ ಸೂಕ್ತ, ವಾಗಂಭೃಣಿಸೂಕ್ತ, ಶ್ರೀ ಸೂಕ್ತಗಳು ಮಹಾಕಾಳಿ, ಮಹಾಸರಸ್ವತೀ, ಮಹಾಲಕ್ಷ್ಮೀಯರ ಅವಿರ್ಭಾವದ ಸ್ಪಷ್ಟ ಕಲ್ಪನೆ ನೀಡುತ್ತದೆ. ವೈದಿಕಗೊಂಡ ಶಕ್ತಿ ಆರಾಧನೆ ಮಹತ್ತ್ವವನ್ನು ಪಡೆಯಿತು. ಮಾರ್ಕಂಡೇಯ ಪುರಾಣದ ಸಪ್ತಶತಿಯು ಶಕ್ತಿ ಆರಾಧನೆಗೆ ಪೂರ್ಣ ಪ್ರಮಾಣದ ವೈದಿಕ ಸಾಕ್ಷಿಯಾಗಿದೆ. ಮಾತೃ ಆರಾಧನೆಯೇ ವಿಕಾಸಗೊಂಡು ಮುಂದೆ ಶಕ್ತಿ ಪೂಜೆಯಾಗಿ, ವೈದಿಕರ ಮಾನ್ಯತೆ ಪಡೆದು ಉಪಾಸನಾ ದೇವತೆಯಾಗಿ ಪುರಾಣಗಳಲ್ಲಿ ಪ್ರಚಾರ ಪಡೆಯಿತು. ದೇವಾಲಯ ಸಂಸ್ಕೃತಿಯು ವೈದಿಕರ ಅನಿವಾರ್ಯ ಹೆಜ್ಜೆಯಾಗಬೇಕಾದ ಕಾಲ ಬಂದಾಗ ದುರ್ಗಾ ದೇವಾಲಯಗಳು ಕಾಣಿಸಿಕೊಂಡವು. ದಕ್ಷಿಣಕನ್ನಡ - ಉಡುಪಿ ಜಿಲ್ಲೆಗಳಲ್ಲಿ ಕ್ರಿ.ಶ. ೭-೮ನೇ ಶತಮಾನದಷ್ಟು ಪುರಾತನವಾದ ದುರ್ಗಾ ಆರಾಧನಾ ಕೇಂದ್ರಗಳಿವೆ. ಇತಿಹಾಸ ಪೂರ್ವಕಾಲದ ಶಕ್ತಿ ಆರಾಧನೆಗೆ ಹೋಲಿಸಬಹುದಾದ ಉಪಾಸನಾ ತಾಣಗಳು ಕರಾವಳಿ ಜಿಲ್ಲೆಗಳಲ್ಲಿವೆ. ಲೇಖನ : ಕೆ.ಎಲ್.ಕುಂಡಂತಾಯ
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ - ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ ಸಂಪನ್ನ
Posted On: 17 Oct 2023, 11:32 AM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಹೊಸ ಮಾರಿಗುಡಿ ಜೀರ್ಣೋದ್ದಾರದ ಕಾಪು ವಿಧಾನಸಭಾ ಕ್ಷೇತ್ರ ಗ್ರಾಮ ಸಮಿತಿ ಮತ್ತು ವಿವಿಧ ಸಮಿತಿಯ ಮಹಿಳೆಯರಿಂದ ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ ನಡೆಯಿತು. ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರ ಗುರು ತಂತ್ರಿಯವರ ಮಾರ್ಗದರ್ಶನ ದಲ್ಲಿ ಅರ್ಚಕ ವೆl ಮೂ। ಶ್ರೀನಿವಾಸ ತಂತ್ರಿಯವರ ಪ್ರಾರ್ಥನೆಯೊಂದಿಗೆ ಭಜನೆ, ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕುಂಕುಮಾರ್ಚನೆ ಸೇವೆಯ ಉಸ್ತುವಾರಿ ಗಳಾದ ಶಿಲ್ಪಾ ಜಿ. ಸುವರ್ಣ, ಶಾಂತಲತಾ ಎಸ್. ಶೆಟ್ಟಿ, ಬೀನಾ ವಿ. ಶೆಟ್ಟಿ, ಅನುರಾಧಾ ಎಂ. ಶೆಟ್ಟಿ, ರೇಣುಕಾ ಧನಂಜಯ್, ಶೈಲಜಾ ಪುರುಷೋತ್ತಮ್, ಕವಿತಾ ಶೆಟ್ಟಿ, ಪ್ರತಿಭಾ ಯು. ಶೆಟ್ಟಿ, ಸುನೀತಾ ಶೆಟ್ಟಿ, ಅರ್ಚನಾ ಶೆಟ್ಟಿ, ಸಾವಿತ್ರಿ ಗಣೇಶ್, ವಿಜಯಲಕ್ಷ್ಮಿ ಆಚಾರ್ಯ, ಮಮತಾ ವೈ. ಶೆಟ್ಟಿ, ಹೀರಾ ಡಿ. ಶೆಟ್ಟಿ, ಜಯಲಕ್ಷ್ಮಿ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಸಮಿತಿ ಉಪಾಧ್ಯಕ್ಷರಾದ ಗಂಗಾಧರ ಬಿ. ಸುವರ್ಣ, ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ ಎಸ್. ಶೆಟ್ಟಿ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ಶರನ್ನವರಾತ್ರಿ ಮಹೋತ್ಸವ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
Posted On: 16 Oct 2023, 10:45 PM
ಬಂಟಕಲ್ಲು : ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಶರನ್ನವರಾತ್ರಿ ಮಹೋತ್ಸವದಲ್ಲಿ ಒಂಭತ್ತು ದಿನಗಳ ಪರ್ಯಂತ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ನವರಾತ್ರಿ ಉತ್ಸವ ಶಕ್ತಿದೇವತೆಗಳ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ಇದ್ದು ದುರ್ಗೆಯು ಲೋಕಕಲ್ಯಾಣಾರ್ಥ ನವರೂಪಗಳನ್ನು ಧರಿಸಿ ಅಸುರ ದುಷ್ಟಶಕ್ತಿಗಳ ನಾಶ ಮಾಡಿ ಧರ್ಮವನ್ನು ರಕ್ಷಿಸಿದ ಹಿನ್ನೆಲೆಯನ್ನು ದೇಶದಾದ್ಯಂತ ವಿವಿಧ ರೂಪದಲ್ಲಿ ನವರಾತ್ರಿ ಹಬ್ಬದ ಮೂಲಕ ದೇವಿಯ ಆರಾಧನೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿಯೂ ದೇವಿಯ ಆರಾಧನೆಯೊಂದಿಗೆ ಪ್ರತೀ ವರ್ಷವೂ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಹವ್ಯಾಸಿ ಯಕ್ಷಗಾನ ಹಿರಿಯ ಕಲಾವಿದ ಅಚ್ಯುತ ನಾಯಕ್ ಶಂಕರಪುರ ಇವರನ್ನು ಸನ್ಮಾನಿಸಲಾಯಿತು. ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಯಕ್ಷಗಾನ ಕರಾವಳಿಯ ಹೆಮ್ಮೆಯ ಕಲೆಯಾಗಿದ್ದು, ಅನಾದಿ ಕಾಲದಿಂದಲೂ ಪುರಾಣ, ರಾಮಾಯಣ, ಮಹಾಭಾರತ, ಭಾಗವತದ ಘಟನೆಗಳನ್ನು ರಂಗದಲ್ಲಿ ಅಭಿನಯಿಸಿ ಪ್ರದರ್ಶಿಸುವ ಮೂಲಕ ಜನಸಾಮಾನ್ಯರಲ್ಲೂ, ದೇಶದ ಭವ್ಯ ಸಂಸ್ಕೃತಿ, ಪರಂಪರೆ, ದೈವಭಕ್ತಿ, ಜೀವನ ಮೌಲ್ಯಗಳನ್ನು ಜಾಗೃತಿ ಮೂಡಿಸುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯುವ, ಸನ್ನಡತೆಯ ಗುಣಗಳನ್ನು ಬೆಳೆಸಲು ಪ್ರೇರಣೆ ನೀಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ರಾಜಾಪುರ ಸಾರಸ್ವತ ಯುವೃಂದದ ಅಧ್ಯಕ್ಷ ರಾಂಘವೇಂದ್ರ ನಾಯಕ್ ಪಾಲಮೆ, ಶ್ರೀದುರ್ಗಾ ಮಹಿಳಾ ವೇದಿಕೆಯ ಅಧ್ಯಕ್ಷ ಸರಸ್ವತೀ ಎಸ್.ಕಾಮತ್, ಉಷಾ ಮರಾಠೆ, ಉಪಸ್ಥಿತರಿದ್ದರು. ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕರಾದ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಸುಕನ್ಯಾ ಜೋಗಿ ಪ್ರಾರ್ಥಿಸಿದರು. ನಂತರ ಶ್ರೀಆದಿಶಕ್ತಿ ಮಹಾಲಕ್ಷ್ಮಿ ತೆಂಕುತಿಟ್ಟು ಯಕ್ಷಗಾನ ಮಂಡಳಿ ಇವರಿಂದ "ಶಾಂಭವಿ ವಿಜಯ" ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕಾಪುವಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಕಾಪು ಅಭಿವೃದ್ಧಿ ಸಮಿತಿ
Posted On: 16 Oct 2023, 10:41 PM
ಕಾಪು : ಇಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಪು ಅಭಿವೃದ್ಧಿ ಸಮಿತಿಯು ಕಾಪುವಿನ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ನೀಡಿತು. ಕಾಪು ಪೇಟೆಯ ಸುತ್ತಮುತ್ತಲೂ ಹಲವಾರು ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳ ತ್ಯಾಜ್ಯವನ್ನು ಬಿಡಲು ಸೂಕ್ತವಾದ ಒಳಚರಂಡಿಯ ವ್ಯವಸ್ಥೆ, ಟ್ರೀಟ್ಮೆಂಟ್ ಪ್ಲಾಂಟ್, ಕುಡಿಯುವ ನೀರು, ಪೇಟೆಯಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆಯಲಾಯಿತು. ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಸರಕಾರೀ ಜಮೀನಿನ ಸಮೀಕ್ಷೆಯನ್ನು ನಡೆಸಿದಾಗ ಕೆಲವೊಂದು ಕಡೆ ಜಮೀನು ಒತ್ತುವರಿಯ ಬಗ್ಗೆ ತಿಳಿಸಲಾಯಿತು. ಪೇಟೆಯಲ್ಲಿ ಸಾಕಷ್ಟು ಬೀದಿದೀಪಗಳ ಕೊರತೆ. ರಾತ್ರಿಯಾದಂತೆ ಕಾಪು ಪೇಟೆಯಲ್ಲಿ ಮಾರ್ಕೆಟ್ ಬಳಿ ಅಳವಡಿಸಿದ ಹೈಮಾಸ್ಕ್ ದೀಪವನ್ನು ಬಿಟ್ಟರೆ ಉಳಿದ ದೀಪಗಳು ಬೆಳಕು ನೀಡುವಲ್ಲಿ ವಿಫಲವಾಗಿವೆ. ಹಾಗೂ ಪೇಟೆಯ ಪ್ರಮುಖ ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದಲ್ಲಿ ಅಪರಾಧ ಪತ್ತೆಗೆ ಸಹಾಯವಾಗುತ್ತದೆ. ಸಾರ್ವಜನಿಕ ಹಿಂದೂ ರುದ್ರಭೂಮಿಯ ಪಕ್ಕ ಈ ಹಿಂದೆ ಇದ್ದ ತ್ಯಾಜ್ಯ ಸಂಗ್ರಹ ಕೇಂದ್ರವು ಪ್ರಸ್ತುತ ಕಾಪು ತಾಲೂಕಿನ ಎಲ್ಲೂರು ಗ್ರಾಮಕ್ಕೆ ಸ್ಥಳಾಂತರಿಸಲ್ಪಟ್ಟರೂ, ತ್ಯಾಜ್ಯದ ರಾಶಿಯು ಇನ್ನೂ ಇಲ್ಲೇ ಬಾಕಿಯಾಗಿ ದುರ್ನಾತ ಬೀರುತ್ತಿದೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಬಾವಿಯ ಕಲುಷಿತವಾಗಿದೆ. ಈ ತ್ಯಾಜ್ಯವನ್ನು ಈ ಕೂಡಲೇ ತೆರವುಗೊಳಿಸಲು ನಿರ್ದೇಶಿಸುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಸಂದರ್ಭ ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪಡುಕುತ್ಯಾರು : ಆನೆಗುಂದಿ ಮಹಾ ಸಂಸ್ಥಾನ - ರಜತ ಮಂಟಪ ಸಮರ್ಪಣೆ
Posted On: 15 Oct 2023, 03:46 PM
ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡು ಕುತ್ಯಾರಿನ ಶ್ರೀ ಸರಸ್ವತೀ ಮಾತೃ ಮಂಡಳಿಯ ವತಿಯಿಂದ 21ಕಿಲೋಗ್ರಾಂ ಬೆಳ್ಳಿಯಲ್ಲಿ ತಯಾರಿಸಲಾದ 5.5 ಅಡಿ ಎತ್ತರ ಹಾಗೂ 3.5 ಅಡಿ ಅಗಲದ ಅತ್ಯಾಕರ್ಷಕ ಕುಸುರಿ ಕೆಲಸದೊಂದಿಗೆ ನಿರ್ಮಾಣಗೊಂಡ ಜಗದ್ಗುರುಗಳವರ ಪಟ್ಟದ ದೇವರ ರಜತ ಮಂಟಪವು ಶರನ್ನವರಾತ್ರಿಯ ಆರಂಭದ ದಿನವಾದ ರವಿವಾರ ಶ್ರೀಕರಾರ್ಚಿತ ಪೂಜೆಗೆ ಸಮರ್ಪಣೆಗೊಂಡಿತು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಬ್ರಹ್ಮಶ್ರೀ ಅಕ್ಷಯ ಶರ್ಮಾ ತಂತ್ರಿ ಕಟಪಾಡಿ ಅವರ ನೇತೃತ್ವದಲ್ಲಿ ಮಹಾಸಂಸ್ಥಾನದ ಬ್ರಹ್ಮಶ್ರೀ ಕೇಶವ ಶರ್ಮ ಇರುವೈಲು, ಬ್ರಹ್ಮಶ್ರೀ ಮೌನೇಶ್ ಶರ್ಮ ಬ್ರಹ್ಮಶ್ರೀ ರುದ್ರೇಶ್ ಶರ್ಮ ರಜತಾ ಮಂಟಪದ ಶಿಲ್ಪಿಗಳಾದ ಅಣ್ಣಪ್ಪ ಆಚಾರ್ಯ ಶಿರ್ವ, ಮಹೇಶ್ ಆಚಾರ್ಯ ಬಾರ್ಕೂರು, ಧೀರಜ್ ಆಚಾರ್ಯ ಕಾರ್ಕಳ, ಸತೀಶ್ ಆಚಾರ್ಯ ಮಂಚಕಲ್ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದೇ ವೇಳೆ ಮಹಾ ಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಕಟಪಾಡಿ ಇವರಿಂದ ಧಾನ್ಯ ಲಕ್ಷ್ಮಿ ಪೂಜೆಯ ಅಂಗವಾಗಿ ಬತ್ತದ ತೆನೆಕಟ್ಟುವ ಸಂಪ್ರದಾಯ ನೆರವೇರಿತು. ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ ಸೂರ್ಯ ಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ದೀಪಾ ಸುರೇಶ್ ಆಚಾರ್ಯ ಉಡುಪಿ, ಆನೆಗುಂದಿ ಸರಸ್ವತಿ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು, ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ರವಿ ಆಚಾರ್ಯ ಬೆಂಗಳೂರು ಲೋಕೇಶ್ ಆಚಾರ್ಯ ಅರೆ ಮಾದನಹಳ್ಳಿ, ಮನೋಹರ ಆಚಾರ್ಯ ಬೆಂಗಳೂರು, ಸುಧಾಕರ ಆಚಾರ್ಯ ಕುಕ್ಕಿ ಕಟ್ಟೆ,ಇಂದಿರಾ ಪುರುಷೋತ್ತಮ ಆಚಾರ್ಯ ಪುತ್ತೂರು, ಉಷಾ ವಿವೇಕ್ ಆಚಾರ್ಯ ಮಂಚಕಲ್, ಉಷಾ ರೂಪೇಶ್ ಆಚಾರ್ಯ ಶಿರ್ವ,ರಾಘವೇಂದ್ರ ಆಚಾರ್ಯ ಉಡುಪಿ, ಉಷಾ ಸುಬ್ರಹ್ಮಣ್ಯ ಆಚಾರ್ಯ ಕಾಡಬೆಟ್ಟು, ಸುರೇಶ್ ಆಚಾರ್ಯ ಇರಂದಾಡಿ, ನವೀನ್ ಆಚಾರ್ಯ ಪಣಿಯೂರು, ರಮಾ ಅಚ್ಯುತ ಆಚಾರ್ಯ ಉಡುಪಿ, ಲತಾ ಎಸ್ ಆಚಾರ್ಯ ಕುತ್ಯಾರು, ಶಾಲಿನಿ ರತ್ನಾಕರ ಆಚಾರ್ಯ ಕುತ್ಯಾರು, ಸವಿತಾ ನಾಗೇಶ ಆಚಾರ್ಯ ಉಡುಪಿ , ಸುಲೋಚನಾ ರಮೇಶ್ ಆಚಾರ್ಯ ಎರ್ಮಾಳು, ಚಂದ್ರಾವತಿ ಶ್ರೀಧರ. ಆಚಾರ್ಯ ವಡೇರಹೋಬಳಿ, ಪುಷ್ಪಲತಾ ಲೋಕೇಶ್ ಆಚಾರ್ಯ ಕಂಬಾರು ಮುಂತಾದವರು ಉಪಸ್ಥಿತರಿದ್ದರು.
ಕಟಪಾಡಿ : ಉಚಿತ ಪ್ರಾಣ ಯೋಗ ಶಿಬಿರ ಉದ್ಘಾಟನೆ
Posted On: 15 Oct 2023, 01:34 PM
ಕಟಪಾಡಿ : ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ.) ಕಟಪಾಡಿ ಇವರ ಸಹಯೋಗದಲ್ಲಿ ಅಕ್ಟೋಬರ್ 15 ರಿಂದ 24ರ ವರೆಗೆ 10 ದಿನಗಳ ಕಾಲ ನಡೆಯುವ ಉಚಿತ ಪ್ರಾಣ ಯೋಗ ಶಿಬಿರವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ರವಿವಾರ ಮುಂಜಾನೆ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ. ಸತ್ಯೇಂದ್ರ ಪೈ. ಉದ್ಘಾಟಿಸಿದರು. ಉಡುಪಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ರಾಘವೇಂದ್ರ ಭಟ್, ವೆಂಕಟೇಶ್ ಮೇಹಂದಲೆ, ಜಗದೀಶ್ ಕುಮಾರ್, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಕಟಪಾಡಿ, ಹಳೆ ವಿದ್ಯಾರ್ಥಿ ಸಂಘದ ಮಹೇಶ್ ಅಂಚನ್, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಟಪಾಡಿ ಪತಂಜಲಿ ಯೋಗ ಕಕ್ಷೆಯ ರಾಜೇಶ್ ಕಾಮತ್, ರಾಮಚಂದ್ರ ಪೈ ಶಿಬಿರವನ್ನು ಆಯೋಜಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯ ನಾಗೇಶ್ ಕಾಮತ್ ಸ್ವಾಗತಿಸಿ, ವಂದಿಸಿದರು.
ಉಚ್ಚಿಲ ದಸರಾ - 2023 ; ಉಡುಪಿ ಜಿಲ್ಲಾಧಿಕಾರಿಯಿಂದ ಚಾಲನೆ
Posted On: 15 Oct 2023, 12:22 PM
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದ ಉಚ್ಚಿಲ ದಸರಾಕ್ಕೆ ಭಾನುವಾರ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಹುಲಿವೇಷ, ಸಾಂಸ್ಕೃತಿಕ ಮೆರುಗಿನ ಜೊತೆಗೆ ಭಕ್ತಿಭಾವದ ಸಂಭ್ರಮವನ್ನು ನವರಾತ್ರಿಯ ಸಂದರ್ಭ ಕಾಣಬಹುದಾಗಿದೆ. ಉಚ್ಚಿಲ ದಸರಾ ಉಡುಪಿಯ ಜನತೆಗೆ ಸಂಭ್ರಮದ ಹಬ್ಬವಾಗಲಿ ಸರಕಾರದಿಂದಲೂ ಅನುದಾನದ ಸಹಾಯ ನೀಡಲಾಗಿದೆ. ದಸರಾ ದೇಶದಾದ್ಯಂತ ನಡೆಯುತ್ತಿದೆ. ನಾಡಿಗೆ ಸುಖ ಸಮದ್ಧಿ ಜನರು ಸುಖ ಸಂತೋಷದಿಂದ ಇರಲಿ ಎಂದು ಶುಭಹಾರೈಸಿದರು. ನವದುರ್ಗೆಯರು ಮತ್ತು ಶ್ರೀ ಶಾರದಾ ಪ್ರತಿಷ್ಠಾಪನೆ ಯೊಂದಿಗೆ ಶಾರದೆಗೆ ಬೆಳ್ಳಿ ವೀಣೆ, ಬೆಳ್ಳಿ ಕಿರೀಟಧಾರಣೆಯು ನಡೆಯಿತು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಗೌರವಿಸಲಾಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ನವದುರ್ಗೆಯರಿಗೆ ಮಹಾಮಂಗಳಾರತಿ ನಡೆಯಿತು. ಇದೇ ಸಂದರ್ಭ ಅನ್ನಛತ್ರ, ನೂತನ ಅತಿಥಿಗೃಹ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನವನ್ನು ಕ್ಷೇತ್ರದ ಗೌರವ ಸಲಹೆಗಾರರಾದ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಿದರು. ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಸಹಾಯಕ ಕಮೀಷನರ್ ರಶ್ಮಿ ಎಸ್. ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ತಹಶೀಲ್ದಾರ್ ನಾಗರಾಜ ನಾಯ್ಕಡ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕಿದಿಯೂರು ಹೋಟೆಲ್ ಪ್ರೈ.ಲಿ. ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷೆ ಸುಗುಣ ಕರ್ಕೇರ ಉಪಸ್ಥಿತರಿದ್ದರು. ಡಾ. ಜಿ. ಶಂಕರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.
ಉಚ್ಚಿಲ ದಸರಾ - 2023 ; ಕ್ಷಣ ಗಣನೆ ; ವಿದ್ಯುದ್ದೀಪಾಲಂಕಾರದ ಉದ್ಘಾಟನೆ
Posted On: 14 Oct 2023, 08:57 PM
ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ದಲ್ಲಿ ದಸರಾದ ಪ್ರಯುಕ್ತ ಶನಿವಾರ ಸಂಜೆ ವಿದ್ಯುದ್ದೀಪಾಲಂಕಾರ ಪ್ರಾಯೋಜಕರಾದ MRG ಗ್ರೂಪ್ ಅಧ್ಯಕ್ಷರಾದ ಬಂಜಾರ ಪ್ರಕಾಶ್ ಶೆಟ್ಟಿ ವಿದ್ಯುದ್ದೀಪಾಲಂಕಾರಕ್ಕೆ ಚಾಲನೆ ನೀಡಿದರು. ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಬಾರಿಯು ಉಚ್ಚಿಲ ದಸರಾವು ಅಕ್ಟೋಬರ್ 15 ರಿಂದ 24 ರವರೆಗೆ ನಡೆಯಲಿದೆ. ದೇವಸ್ಥಾನದ ಪಕ್ಕದ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಮತ್ತು ವಿಗ್ರಹ ಉತ್ಸವಕ್ಕೆ ಅಕ್ಟೋಬರ್ 15 (ನಾಳೆ) ಚಾಲನೆ ದೊರಕಲಿದೆ. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಚಾಲನೆ ನೀಡಲಿದ್ದು ಬಳಿಕ ಮಹಾಲಕ್ಷ್ಮೀ ಅನ್ನಛತ್ರ ಮತ್ತು ಅತಿಥಿಗೃಹ ಲೋಕಾರ್ಪಣೆಗೊಳ್ಳಲಿದೆ. ಕೊನೆ ಕ್ಷಣದ ಸಿದ್ಧತೆಗಳು ಪೂರ್ಣಗೊಂಡಿದೆ. ದೇವಳದ ಸುತ್ತಮುತ್ತಲಿನ ಪ್ರದೇಶ, ಬೀದಿಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದು, ಭಕ್ತಾದಿಗಳು ಈ ವೈಭವವನ್ನು ತಮ್ಮ ಮೊಬೈಲ್ ಗಳಲ್ಲಿ ಕ್ಲಿಕ್ಕಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಸಂದರ್ಭ ದೇವಳದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದೇವಳದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಉಪಾಧ್ಯಕ್ಷ ಸುಭಾಶ್ಚಂದ್ರ, ಕಾರ್ಯದರ್ಶಿ ಸುಧಾಕರ್ ಕುಂದರ್, ಅನಿಲ್ ಕುಮಾರ್, ಶಂಕರ್ ಸಾಲ್ಯಾನ್, ದಿನೇಶ್ ಮೂಳೂರು, ಗಂಗಾಧರ ಸುವರ್ಣ ಎರ್ಮಾಳು, ಸತೀಶ್ ಬಾರ್ಕೂರು, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಬಾರ್ಕೂರು, ದೇವಳದ ಮುಖ್ಯ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಉಪಸ್ಥಿತರಿದ್ದರು.
ಪಡುಬಿದ್ರಿ : ನೂತನ ಗ್ರಾಮ ಒನ್ ಮತ್ತು ಸೈಬರ್ ಕೆಫೆ, ಬುಕ್ಸ್ ಮತ್ತು ಸ್ಟೇಶನರಿ ಕಚೇರಿ ಶುಭಾರಂಭ
Posted On: 14 Oct 2023, 12:58 PM
ಪಡುಬಿದ್ರಿ : ಇಲ್ಲಿನ ಅದಿಧನ್ ಸಾಯಿ ಕೃಪಾ ಕಟ್ಟಡದ ನೆಲ ಮಹಡಿಯಲ್ಲಿ ನೂತನವಾಗಿ ಪ್ರಾರಂಭವಾದ ಪಡುಬಿದ್ರಿ ಗ್ರಾಮ ಒನ್ (ನಾಗರಿಕ ಸೇವಾ ಕೇಂದ್ರ) ಮತ್ತು ಸೈಬರ್ ಕೆಫೆ, ಬುಕ್ಸ್ ಮತ್ತು ಸ್ಟೇಶನರಿ ಕಚೇರಿಯನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ಶುಭ ಹಾರೈಸಿದರು. ಕೇಂದ್ರ ಹಾಗು ರಾಜ್ಯ ಸರ್ಕಾರದ 750 ಕ್ಕೂ ಹೆಚ್ಚಿನ ಯೋಜನೆಗಳಿಗೆ ಅರ್ಜಿಯನ್ನು ಒಂದೇ ಸೂರಿನಲ್ಲಿ ಸಲ್ಲಿಸಬಹುದು ಹಾಗು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬುಕ್ಸ್ , ಸ್ಟೇಶನರಿ, ಮತ್ತು ಪ್ರೊಜೆಕ್ಟ್ ವಕ್೯್ಸ ,ಜೆರಾಕ್ಸ್ ಗಳನ್ನು ರಿಯಾಯತಿ ದರದಲ್ಲಿ ಪಡೆಯಬಹುದೆಂದು ಮಾಲಕರಾದ ರಮೀಜ್ ಹುಸೇನ್ ತಿಳಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಮಾಜಿ.ತಾ.ಪಂ ಸದಸ್ಯರಾದ ನವೀನಚಂದ್ರ ಜೆ.ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ , ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ. ಸುಕುಮಾರ್, ಕೆ.ಪಿ.ಸಿ.ಸಿ ಕೊ-ಅರ್ಡೀನೇಟರ್ ಅಬ್ಬುಲ್ ಆಜೀಜ್ ಹೆಜಮಾಡಿ, ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಸ್ ಶಾಫಿ, ಜ್ಯೋತಿ ಮೆನನ್, .ಮಾಜಿ ಸದಸ್ಯ ಬುಡಾನ್ ಸಾಹೇಬ್, ಹಿರಿಯರಾದ ಕೆ.ಎಮ್ ಅಬ್ದುಲ್, ಪಿ ಎ ಹುಸೇನ್, ಸುಚರಿತ ಅಮೀನ್, ಮನ್ಸೂರ್ ಕಂಚಿನಡ್ಕ, ಪುಷ್ಪಲತಾ ಆಚಾರ್ಯ, ಅಬ್ದುಲ್ ರಜಾಕ್, ಹಸನ್ ಕನ್ನಂಗಾರ್ ಮತ್ತಿತರರು ಉಪಸ್ಥಿತರಿದ್ದರು.
