Updated News From Kaup
ರಾಜ್ಯೋತ್ಸವ ಕೇವಲ ಆಚರಣಗೆ ಸೀಮಿತವಾಗದಿರಲಿ…ಕನ್ನಡಿಗರ ಮನೆ ಮನಸ್ಸಿನ ಹಬ್ಬವಾಗಲಿ
Posted On: 01 Nov 2023, 06:59 AM
ಪ್ರತೀ ಸಲ ಕರ್ನಾಟಕ ರಾಜ್ಯೋತ್ಸವ ಆಚರಣೆಯ ವೇಳೆ ಕೇಳಿ ಬರುವ ಒಂದೇ ಕೂಗು “ಕನ್ನಡ ಭಾಷೆಯನ್ನು ಉಳಿಸಿ!”. ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಮ್ಮ ಕನ್ನಡಿಗರದ್ದು. ಹಾಗಾದರೆ ನಮ್ಮ ಭಾಷೆಯನ್ನು ಸಾಯಿಸುವಂತೆ ಮಾಡುತ್ತಿರುವವರು ಯಾರು? ಜಾಗತೀಕರಣ, ವಾಣಿಜ್ಯೀಕರಣದಿಂದ ಪರಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಿರಬಹುದು. ಆದರೆ ಪ್ರಾಚೀನ ಹಾಗೂ ಸಮೃದ್ದ ವಾದ ಕನ್ನಡ ನುಡಿ ಇಷ್ಟೊಂದು ಕ್ಷೀಣವಾಗಲು ಕಾರಣಕತ೯ರು ನಾವೇ ಅಲ್ಲವೇ?ಎಂಬುದು ಚಿಂತಿಸಬೇಕಾದ ಸಂಗತಿ. ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಾಗಿರದೆ ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅಂತಹ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನುಡಿ ಇಂದು ಕರ್ನಾಟಕದಲ್ಲಿ ಸೊರಗಿಹೋಗುತ್ತಿದೆ. ಒಂದು ಕಾಲದಲ್ಲಿ “ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ” ಎಂದು ಹಾಡಿದ್ದ ನಾವು ಇಂದು Sorry, I can’t speak kannada ಅನ್ನುತ್ತೇವೆ. ಪರಭಾಷಾ ವ್ಯಾಮೋಹದಲ್ಲಿ ಕನ್ನಡ ಬಡವಾಯಿತೆ? ಹೌದು. ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಅನ್ನುವ ಹಾಗೆ ವಿದೇಶೀ ಸಂಸ್ಕೃತಿಯ ಅನುಕರಣೆ ನಮ್ಮ ಭಾಷೆಯನ್ನೂ ಬಲಿತೆಗೆದುಕೊಂಡಿದೆ. ಭೌಗೋಳಿಕ ಪ್ರದೇಶಕ್ಕನುಸಾರವಾಗಿ ನಮ್ಮ ಭಾಷೆಯ ಮೇಲೆ ಇತರ ಸಂಸ್ಕೃತಿ ಹಾಗೂ ಭಾಷೆಯ ಪ್ರಭಾವವಿದ್ದೇ ಇರುತ್ತದೆ. ಅದು ಮುಂದೆಯೂ ಇರುತ್ತದೆ. ಹಾಗಂತ ನಮ್ಮ ಮಾತೃಭಾಷೆಯನ್ನು ಕಡೆಗಣಿಸುವುದು ಎಷ್ಟು ಸರಿ? ಕಾಲ ಕಳೆದಂತೆ ಭಾಷೆ ಪ್ರಬುದ್ದತೆಯನ್ನು ಗಳಿಸುತ್ತದೆ ಎನ್ನುವುದಾದರೆ ಕನ್ನಡ ಭಾಷೆಗೆ ಈ ಸ್ಥಿತಿ ಯಾಕೆ ಬಂತು? ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಯಾಕೆ? ಅಂದ ಹಾಗೆ ಕನ್ನಡ ಅನ್ನ ಕೊಡದ ಭಾಷೆಯೆ? ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕನ್ನಡ ಕಲಿತರೇನು ಸಿಗುತ್ತೆ? ಇಂಗ್ಲೀಷ್ ಕಲಿತರೆ ಮುಂದೆ ಸುಲಭವಾಗಿ ಕೆಲಸ ಸಿಗಬಹುದು ಎಂಬ ಆಸೆಯಿಂದ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಅಟ್ಟುವ ಮಂದಿಯೇ ಜಾಸ್ತಿ. ಮಕ್ಕಳಿಗೆ ಪಾಠ ತಲೆಗೆ ಹತ್ತದಿದ್ದರೂ ತೊಂದರೆಯಿಲ್ಲ ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕು ಎನ್ನುವ ಹಠ ಹೆತ್ತವರದ್ದು. ಇಂಗ್ಲೀಷ್ ಶಾಲೆಗೆ ಹೋಗಿ ತಮ್ಮ ಮಕ್ಕಳು ಇಂಗ್ಲೀಷ್ ನಲ್ಲಿ ಮಾತನಾಡಿದರೆ ಹೆತ್ತವರ ಮುಖದಲ್ಲಿ ಧನ್ಯತಾ ಭಾವ. ಇನ್ನು ಕೆಲವರು ಕನ್ನಡ ಉಳಿಯಬೇಕಾದರೆ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ ಎಂದು ಭಾಷಣ ಬಿಗಿಯುತ್ತಾರೆ, ಆದರೆ ಅವರ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮದಲ್ಲೋದಿ, “ಐ ಡೋಂಟ್ ನೋ ಕನ್ನಡ “ಎನ್ನುತ್ತಿರುತ್ತವೆ. ಇನ್ನು ಕೆಲವರು ಕನ್ನಡ ಗೊತ್ತಿದ್ದರೂ ತಮಗೆ ಕನ್ನಡವೇ ಗೊತ್ತಿಲ್ಲ ಎಂಬಂತೆ ನಟಿಸುತ್ತಾರೆ. ಕನ್ನಡ ಮಾತನಾಡಿದರೆ ತಮಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂಬ ಭಾವನೆಯಿಂದ ಕನ್ನಡವನ್ನು ತಮ್ಮಲ್ಲೇ ಬಚ್ಚಿಟ್ಟವರೂ ಇದ್ದಾರೆ. ! ಇತ್ತ, ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳ ಪಾಡು ಯಾರಿಗೆ ಅರ್ಥವಾಗುತ್ತದೆ ಹೇಳಿ? ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆಗೈದ ಮಕ್ಕಳು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದಿದ್ದಾರೆ ಅಂದುಕೊಂಡರೆ, ‘ಅಲ್ಪಸಂಖ್ಯಾತ’ ಕನ್ನಡಿಗರಿರುವ ಬೆಂಗಳೂರಲ್ಲಿ ಇಂಗ್ಲೀಷಿನದ್ದೇ ಕಾರುಬಾರು. ಇಲ್ಲಿ ಬಂದು ಕನ್ನಡದಲ್ಲಿ ಮಾತನಾಡಿದವರಿಗೆ ‘ಹಳ್ಳಿ ಗುಗ್ಗು’ ಎಂಬ ಪಟ್ಟ ಗ್ಯಾರಂಟಿ. ಹೀಗಿರುವಾಗ ನಿಮಗೆ ಚೆನ್ನಾಗಿ ಇಂಗ್ಲೀಷ್ ಗೊತ್ತಿಲ್ಲದಿದ್ದರೂ ಪರ್ವಾಗಿಲ್ಲ, ಒಂದೆರಡು ಇಂಗ್ಲಿಷ್ ಪದಗಳನ್ನು ಕನ್ನಡದೊಳಗೆ ತುರುಕಿ ಕಂಗ್ಲೀಷು ಮಾತನಾಡಿದರೆ ಸಾಕು.ನೀವು ಬುದ್ದಿವಂತರೆಸಿಕೊಳ್ಳುತ್ತೀರಿ. ಇಂಗ್ಲೀಷ್ ಮಾತನಾಡಿದರೆ ನಾವು ತುಂಬಾ ಬಲ್ಲವರು ಎಂದು ಜನ ತಿಳಿದುಕೊಳ್ಳುತ್ತಾರೆ ಎಂಬ ಹುಚ್ಚು ಭ್ರಮೆಯೇ ಕನ್ನಡ ಭಾಷೆ ಈ ರೀತಿ ಸೊರಗಲು ಕಾರಣ ಎಂದರೆ ತಪ್ಪಾಗಲಾರದು. ಕನ್ನಡ ಮಾತನಾಡಲು ಹಿಂದೇಟು ಯಾಕೆ ? ಸಂವಹನದಿಂದಲೇ ಭಾಷೆಯೊಂದು ಬೆಳೆಯಲು ಸಾಧ್ಯ. ಆದರೆ ಇಂದೇನಾಗುತ್ತಿದೆ? ನಮ್ಮ ರಾಜ್ಯದಲ್ಲಿ ಪರಭಾಷಾ ಪ್ರಾಬಲ್ಯ ಏರುತ್ತಿದ್ದಂತೆ ಕನ್ನಡದಲ್ಲಿ ವ್ಯವಹರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಉದಾಹರಣೆಗೆ ಬೆಂಗಳೂರನ್ನೇ ತೆಗೆದುಕೊಳ್ಳೋಣ. ಇಲ್ಲಿಗೆ ಬರುವ ಅನ್ಯ ಭಾಷಿಗರಲ್ಲಿ ನಾವು ಕನ್ನಡಿಗರು ಅವರದ್ದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತೇವೆಯೇ ವಿನಾ ಕನ್ನಡದಲ್ಲಿ ವ್ಯವಹರಿಸಲು ಹೋಗುವುದಿಲ್ಲ. ಅವರು ತಮಿಳರಾಗಿದ್ದರೆ ನಾವು ಅವರಲ್ಲಿ ತಮಿಳಲ್ಲಿ ಮಾತನಾಡಿ ಅವರನ್ನು ಮೆಚ್ಚಿಸಲು ನೋಡುತ್ತೇವೆಯೇ ಹೊರತು ನಮ್ಮ ಭಾಷೆಯನ್ನು ಅವರಿಗೆ ಕಲಿಸಲು ಹೋಗುವುದಿಲ್ಲ. ಅವರು ಕಲಿಯುವ ಆಸಕ್ತಿಯನ್ನೂ ತೋರುವುದಿಲ್ಲ. ನೆರೆ ರಾಜ್ಯಗಳಿಂದ ಕಲಿಯಬೇಕು : ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದ ಜನರನ್ನು ಗಮನಿಸಿ. ಅವರು ಅನ್ಯಭಾಷಿಗರಲ್ಲಿ ಅಥ೯ವಾಗದಿದ್ದರೂ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ. ತಮಿಳುನಾಡಲ್ಲಿದ್ದರೆ ಕನ್ನಡಿಗನೂ ತಮಿಳು ಕಲಿತು ಬಿಡ್ತಾನೆ. ಆದರೆ ಕನಾ೯ಟಕದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಯಬೇಕೆಂಬ ಒತ್ತಡವೂ ಇಲ್ಲ. ಕನ್ನಡ ಕಲಿತೇ ಆಗಬೇಕೆಂಬ ಆವಶ್ಯಕತೆಯೂ ಅವರಿಗಿರುವುದಿಲ್ಲ. ಇದರ ಪರಿಣಾಮ ಇತರ ಭಾಷೆಗಳ ಅಧಿಪತ್ಯವನ್ನು ಇನ್ನೂ ಹೆಚ್ಚಾಗ ತೊಡಗುತ್ತದೆ. ಸಂವಹನ ಅಂತ ಹೇಳುವಾಗ ಅದು ಮಾತಿಗೂ ಕೃತಿಗೂ ಅನ್ವಯವಾಗುತ್ತದೆ. ಮಾತು ಹಾಗೂ ಕೃತಿ ಇವೆರಡರಲ್ಲಿ ಬಳಕೆಯಾಗುವ ಕನ್ನಡ ಸಾಮಾನ್ಯ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲುದು. ಯಾವುದೇ ಭಾಷೆಯಾಗಲಿ, ಅದರ ಕಲಿಕೆ ಆರಂಭವಾಗುವುದೇ ಕೇಳುವುದರಿಂದ. ನಿರಂತರವಾಗಿ ನಾವು ಆಲಿಸುವ ಭಾಷೆಯನ್ನು ನಾವು ಬೇಗನೆ ಕಲಿತು ಬಿಡುತ್ತೇವೆ. ಆದರೆ ನಾವೀಗ ಕೇಳುವ ಕನ್ನಡವಾದರೂ ಎಂತದ್ದು. ಕೆಲವೊಮ್ಮೆ ಇದೂ ಕನ್ನಡವೇ? ಎಂಬ ಪ್ರಶ್ನೆ ಕಾಡುತ್ತದೆ. ಎಫ್. ಎಂ ನ ಆರ್ ಜೆ ಗಳು ಉಲಿಯುವ ‘ಬಿಂದಾಸ್ ಕನ್ನಡ’, ಸೆಲೆಬ್ರಿಟಿಗಳ ‘ಕಂಗ್ಲೀಷು’ ಹಾಗೂ ಮಾಧ್ಯಮಗಳ ಪ್ರಭಾವದಿಂದ ಬಂದ ‘ಪಂಚಿಂಗ್ ಕನ್ನಡ’ ಇವೇ” ನಮ್ಮ ಕನ್ನಡ” ಆಗಿ ಬಿಟ್ಟಿದೆ. ನಾವು ಕೇಳುವ ಕನ್ನಡದ ಕಥೆ ಹೀಗಾಯ್ತು, ಇತ್ತ ಬರವಣಿಗೆಯಲ್ಲೂ ನಾವು ಇದೇ ಕನ್ನಡವನ್ನು ಬಳಸಿ ಬರವಣಿಗೆಯನ್ನೂ ಹಾಳು ಮಾಡಹೊರಟಿದ್ದೇವೆ. ನೀವೇ ಗಮನಿಸಿ, ಅಪ್ಪಟ ಕನ್ನಡದಲ್ಲಿ ಬರೆದ ಲೇಖನಕ್ಕಿಂತ ಇಂಗ್ಲೀಷ್ , ಒಂದಷ್ಟು ಎಸ್ಸೆಮ್ಮೆಸ್ಸ್ ಭಾಷೆಗಳನ್ನು ಬಳಸಿ ಬರೆದ ಲೇಖನವೇ ಇಂದು ಯುವ ಜನಾಂಗವನ್ನು ಆಕಷಿ೯ಸುತ್ತದೆ. ಇಂತಿರುವಾಗ ಸಾಕಷ್ಟು ಮಾಹಿತಿಗಳಿದ್ದರೂ ಅಪ್ಪಟ ಕನ್ನಡದಲ್ಲಿ ಬರೆದ ಲೇಖನ ಇವುಗಳ ಮುಂದೆ ಏನೂ ಇಲ್ಲ ಎಂಬಂತಾಗುತ್ತದೆ. ಇಂತಹಾ ಪರಿಸ್ಥಿತಿಯಲ್ಲಿ ಬರಹಗಾರರು ಕೂಡಾ ಮಡಿವಂತಿಕೆಯನ್ನ ಬಿಟ್ಟು ಟ್ರೆಂಡ್ ಗೆ ತಕ್ಕಂತೆ ತಮ್ಮ ಬರವಣಿಗೆಯಲ್ಲೂ ಬದಲಾವಣೆಯನ್ನು ತರುತ್ತಾರೆ. ಪರಿಣಾಮ ಓದುಗ ಕೂಡಾ ಅದೇ ಕನ್ನಡಕ್ಕೆ ಒಗ್ಗಿಕೊಳ್ಳುತ್ತಾನೆ. ಇದು ಕನ್ನಡ ಭಾಷೆಯ ಮಟ್ಟಿಗೆ ಅಪಾಯಕಾರಿ ಬೆಳವಣಿಗೆ ಎಂದೇ ಹೇಳಬಹುದು. ನಮ್ಮ ಶಿಕ್ಷಣ ವ್ಯವಸ್ಥೆಯೂ ಸುಧಾರಿಸಬೇಕಾಗಿದೆ ಕಂಬಾರರು ಹೇಳಿದಂತೆ ಕನಾ೯ಟಕದಲ್ಲಿ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಕೆಯಾಗಬೇಕು. ಇಂಗ್ಲಿಷ್ ವ್ಯಾಮೋಹಕ್ಕೊಳಗಾಗಿ ನಾಡು ನುಡಿಯಿಂದ ದೂರ ಸಾಗುತ್ತಿರುವ ಕನ್ನಡಿಗರನ್ನು ಮತ್ತೆ ತಾಯ್ನುಡಿಯತ್ತ ಸೆಳೆಯುವ ಕಾರ್ಯವನ್ನು ಸಕಾ೯ರ ಮಾಡಬೇಕಾಗಿದೆ. ಒಂದೆಡೆ ಕನ್ನಡ ಮಾಧ್ಯಮದ ಸಕಾ೯ರಿ ಶಾಲೆಗಳು ಮುಚ್ಚುತ್ತಿವೆ. ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಇವುಗಳ ಬಗ್ಗೆ ಜಾಣ ಕುರುಡು ಪ್ರದಶಿ೯ಸುತ್ತಿರುವ ಸಕಾ೯ರವನ್ನು ಬಡಿದೆಬ್ಬಿಸುವ ಹೊಣೆಗಾರಿಕೆಯೂ ಕನ್ನಡಿಗನ ಮೇಲಿದೆ. ಇದೀಗ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕೊಂಡಿರುವ ನಮ್ಮ ಕನ್ನಡ ಸಾಹಿತ್ಯ ಲೋಕ ಸಮೃದ್ದವಾಗಿದೆ. ಅದನ್ನು ಇನ್ನಷ್ಟು ಸಮೃದ್ದಗೊಳಿಸುವುದರ ಜತೆಗೆ ತಾಯ್ನುಡಿಯಾದ ಕನ್ನಡವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕನ್ನಡಿಗರಿಗಿದೆ. ನಮ್ಮ ನಾಡಿನ ಜನಪದ, ಸಾಂಸ್ಕತಿಕ ಜೀವನದ ಉಸಿರಾಗಿರುವ ಕನ್ನಡದ ಜ್ಞಾನ ಶಾಖೆ ಪಸರಿಸಬೇಕಾದರೆ ಕನ್ನಡಲ್ಲೇ ಜ್ಞಾನಾಜ೯ನೆಯಾಗಬೇಕು.ಈ ನಡುವೆ ಕಲಿಕೆಗೆ ಇಂಗ್ಲೀಷ್ ಬೇಕೋ ಬೇಡವೋ, ಕನ್ನಡ ಮಾತ್ರ ಸಾಕೆ? ಎಂಬ ಎಂಬ ವಿಚಾರದಲ್ಲಿ ಸಾಕಷ್ಟು ಚಚೆ೯ಗಳು ಈಗಾಗಲೇ ನಡೆದಿವೆ. ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ನಿಲುವು ಇದ್ದೇ ಇರುವುದು. ಯಾವುದೇ ಭಾಷೆಯಾಗಲಿ ಅದಕ್ಕೆ ಅದರದ್ದೇ ಆದ ಸೌಂದರ್ಯವಿದೆ. ಸತ್ವವಿದೆ. ಅದನ್ನು ಕಾಪಾಡುವ ಹೊಣೆ ನಮ್ಮದು ಒಟ್ಟಿನಲ್ಲಿ ಹೇಳುವುದೇನೆಂದರೆ ಜ್ಞಾನ ಸಂಪಾದನೆಗೆ ಯಾವ ಭಾಷೆಯಾದರೇನಂತೆ, ನಮ್ಮ ನಡೆ-ನುಡಿ ಕನ್ನಡವಾಗಿರಲಿ. ನಮ್ಮ ನಾಡು, ನಮ್ಮ ಸಂಸ್ಕೃತಿ ಹಾಗೂ ನಮ್ಮ ಭಾಷೆಯ ಮೇಲಿರುವ ಈ ಪ್ರೀತಿ, ಉತ್ಸಾಹ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಈ ಬಾರಿಯ ಸುವಣ೯ ರಾಜ್ಯೋತ್ಸವ ಕನ್ನಡದ ಅಭಿವೃದ್ಧಿಗೆ ನಾಂದಿ ಹಾಡಲಿ. ಲೇಖನ : ರಾಘವೇಂದ್ರ ಪ್ರಭು ಕರ್ವಾಲು
ನವೆಂಬರ್ ೪ : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಪು ತಾಲ್ಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನ
Posted On: 01 Nov 2023, 06:40 AM
ಕಾಪು : ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ, ಕಾಪು ತಾಲ್ಲೂಕು ಘಟಕದ ೫ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ ೪, ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿವೃತ್ತ ಉಪನ್ಯಾಸಕ, ಕನ್ನಡ ಸಂಘಟಕ ಕೆ.ಎಸ್. ಶ್ರೀಧರ ಮೂರ್ತಿ ಶಿರ್ವಾರವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ‘ಸಿರಿಗನ್ನಡದ ಸೊಗಸು; ಭಾಷಾ ಶುದ್ಧತೆಯೆಡೆಗೆ ಪುಟ್ಟ ಹೆಜ್ಜೆ’ ಪರಿಕಲ್ಪನೆಯಲ್ಲಿ ದಿನವಿಡೀ ಗೋಷ್ಠಿಗಳು, ಸಂವಾದ, ಪ್ರಾತ್ಯಕ್ಷಿಕೆ ಜರಗಲಿವೆ. ಸಮ್ಮೇಳನದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಅವರು ನೆರವೇರಿಸಲಿದ್ದು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್. ಪಾಟ್ಕರ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಕ್ಯಾಥರಿನ್ ರೊಡ್ರಿಗಸ್, ಕಾಪು ತಹಶೀಲ್ದಾರ್ ನಾಗರಾಜ ವಿ. ನಾಯ್ಕಡ, ಪಾಂಬೂರು ಚರ್ಚ್ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್, ಶಿರ್ವ ಸುನ್ನಿ ಜಾಮಿಯಾ ಮಸೀದಿ ಧರ್ಮಗುರು ಸಿರಾಜುದ್ದೀನ್ ಝೈನಿ, ಕಾಲೇಜಿನ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ. ನಿರ್ದೇಶಕಿ ಪೂರ್ಣಿಮಾ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರು, ನಿವೃತ್ತ ಪಂ. ಅಭಿವೃದ್ಧಿ ಅಧಿಕಾರಿ ಶಂಕರ ಪದಕಣ್ಣಾಯ, ಜಿಲ್ಲಾ ಕನ್ನಡ ಭವನ ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ಮನೋಹರ ಪಿ. ಭಾಗವಹಿಸುವರು. ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗ ಇರಲಿದೆ. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ರಾಷ್ಟ್ರ ಧ್ವಜಾರೋಹಣಗೈಯಲಿದ್ದು, ಕಸಾಪ ಕಾಪು ತಾ. ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪರಿಷತ್ತಿನ ಧ್ವಜಾರೋಹಣಗೈಯಲಿದ್ದಾರೆ. ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿರಲಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಧ್ಯಯನಾತ್ಮಕ ಗೋಷ್ಠಿಯನ್ನು ಉಪನ್ಯಾಸಕರಾದ ನೀಲಾನಂದ ನಾಯ್ಕ್, ಡಾ. ಪ್ರಜ್ಞಾ ಮಾರ್ಪಳ್ಳಿ, ವಿದ್ಯಾ ಅಮ್ಮಣ್ಣಾಯ, ವಿದ್ಯಾಧರ ಪುರಾಣಿಕ್ ಸಂಯೋಜಿಸುವರು. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಜಾನಪದ ಗಾಯಕ ಗಣೇಶ ಗಂಗೊಳ್ಳಿ ಅವರಿಂದ ಕನ್ನಡ ಗೀತ ಗಾಯನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ‘ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡ, ಪಾಂಬೂರು, ಪಡುಬೆಳ್ಳೆ’ ಇವರಿಂದ ಕಲಾಪ್ರಸ್ತುತಿ ನಡೆಯಲಿದೆ. ನಿವೃತ್ತ ಶಿಕ್ಷಕ ಕೃಷ್ಣಕುಮಾರ್ ರಾವ್ ಮಟ್ಟು ಮತ್ತು ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್.ಯು ಕನ್ನಡದ ಬಗ್ಗೆ ಸೃಜನಾತ್ಮಕ ರಸಪ್ರಶ್ನೆ ನಡೆಸಿಕೊಡಲಿದ್ದಾರೆ. ಸಾಹಿತಿ ಡಾ. ರಾಘವೇಂದ್ರ ರಾವ್ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ. ಸಾಧಕರಿಗೆ ಸಮ್ಮಾನ : ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶೀನ ಪಾತ್ರಿ ನಂದಿಕೂರು (ದೈವಾರಾಧನೆ), ಹೇಮನಾಥ ಪಡುಬಿದ್ರಿ (ಪತ್ರಿಕೋದ್ಯಮ), ರಾಮಚಂದ್ರ ಭಟ್ ಯೆಲ್ಲೂರು (ಯಕ್ಷಗಾನ), ರಘುರಾಮ ನಾಯಕ್ ಸಡಂಬೈಲು (ಕೃಷಿ), ನಾಗರಿಕ ಸೇವಾ ಸಮಿತಿ ಬಂಟಕಲ್ಲು (ಸೇವಾ ಸಂಘ ಸಂಸ್ಥೆ) ಇವರನ್ನು ಅದಾನಿ ಯುಪಿಸಿಎಲ್ ಘಟಕದ ಅಧ್ಯಕ್ಷ ಡಾ. ಕಿಶೋರ್ ಆಳ್ವ ಸಮ್ಮಾನಿಸುವರು. ಕಸಾಪ ತಾ. ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯಾ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ ಕಾಮತ್, ಉದ್ಯಮಿ ನವೀನ್ ಅಮೀನ್, ಕಾಪು ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಶಿರ್ವ ವ್ಯ.ಸೇ.ಸ.ಸಂ. ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಪಂ. ಅಭಿವೃದ್ಧಿ ಅಧಿಕಾರಿ, ನಿವೃತ್ತ ಸೈನಿಕ ಅನಂತ ಪದ್ಮನಾಭ ನಾಯಕ್, ಶಿರ್ವ ಗ್ರಾಮ ಆಡಳಿತ ಅಧಿಕಾರಿ ಅರುಣ್ ಕುಮಾರ್, ಉಪನ್ಯಾಸಕಿ ಡಾ. ರವಿಪ್ರಭಾ ಕೆ., ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕಸಾಪ ಕಾಪು ತಾ. ಉಸ್ತುವಾರಿ ಪಿ.ವಿ. ಆನಂದ ಸಾಲಿಗ್ರಾಮ, ಗೌರವ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಉಪಸ್ಥಿತರಿರುವರು. ನವೆಂಬರ್ ೩ರಂದು ಕನ್ನಡಾಂಬೆಯ ಶೋಭಾಯಾತ್ರೆ : ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ ೩, ಶುಕ್ರವಾರ ಸಂಜೆ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸಮ್ಮೇಳನ ಸಭಾಂಗಣದವರೆಗೆ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ನೇತೃತ್ವದಲ್ಲಿ ಮತ್ತು ಸ್ಥಳೀಯ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಕನ್ನಡಾಂಬೆಯ ಶೋಭಾಯಾತ್ರೆ ಜರಗಲಿದೆ ಎಂದು ಕಸಾಪ ಕಾಪು ತಾಲೂಕಿನ ಪ್ರಕಟನೆ ತಿಳಿಸಿದೆ.
ಉಚ್ಚಿಲ : ಬಹುಭಾಷಾ ನಟ ಸುಮನ್ ತಲ್ವಾರ್ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳ ಭೇಟಿ
Posted On: 31 Oct 2023, 07:51 PM
ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಂಗಳವಾರ ಖ್ಯಾತ ಬಹುಭಾಷಾ ನಟ ಸುಮನ್ ತಲ್ವಾರ್ ಭೇಟಿ ನೀಡಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರು ಪ್ರಸಾದ ವಿತರಿಸಿದರು. ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಅವರು ದೇವಳದ ವತಿಯಿಂದ ಸುಮನ್ ತಲ್ವಾರ್ ರವರನ್ನು ಅಭಿನಂದಿಸಿದರು. ಈ ಸಂದರ್ಭ ದೇವಳದ ಸಿಬ್ಬಂದಿ ವರ್ಗ, ಅರ್ಚಕ ವರ್ಗ ಉಪಸ್ಥಿತರಿದ್ದರು.
ಶಿರ್ವ : ಹಿಂದೂ ಜೂನಿಯರ್ ಕಾಲೇಜು - ಜೇಸಿ ಇಂಡಿಯಾ ವಿದ್ಯಾರ್ಥಿವೇತನ ವಿತರಣೆ
Posted On: 30 Oct 2023, 09:34 PM
ಶಿರ್ವ : ಹಿಂದೂ ಜೂನಿಯರ್ ಕಾಲೇಜು ಶಿರ್ವ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಮನವಿಯ ಮೇರೆಗೆ ಜೇಸಿ ಇಂಡಿಯಾ ವಿದ್ಯಾರ್ಥಿವೇತನ ಕಾರ್ಯಕ್ರಮ 2023ರ ಯೋಜನೆಯಡಿಯಲ್ಲಿ, ಜೇಸಿ ಮಂಗಳೂರು ಲಾಲ್ ಬಾಗ್ ಇವರು ಕೊಡಮಾಡಲ್ಪಟ್ಟ ವಿದ್ಯಾರ್ಥಿವೇತನವನ್ನು ಸೋಮವಾರ ಹಿಂದೂ ಜೂನಿಯರ್ ಕಾಲೇಜು ಶಿರ್ವ ಕಾಲೇಜಿನ ಪ್ರಾಂಶುಪಾಲರಾದ ಭಾಸ್ಕರ್ ಎ. ಇವರಿಗೆ ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ಸಂಯೋಜಕರಾದ ಕುತ್ಯಾರು ಕಿಶೋರ್ ಶೆಟ್ಟಿಯವರು ಹಸ್ತಾಂತರಿಸಿದರು. ಸದ್ರಿ ಯೋಜನೆಯಲ್ಲಿ ಕಾಲೇಜಿನ ಒಟ್ಟು ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿ ಮಂಗಳೂರು ಲಾಲ್ ಬಾಗ್ ಅಧ್ಯಕ್ಷೆ ಜೆಎಫ್ಎಂ ಶಿಲ್ಪಾ ಮುಲ್ಕಿ, ಸಂಘದ ಅಧ್ಯಕ್ಷರಾದ ರಮಾನಂದ ಶೆಟ್ಟಿಗಾರ್, ಹಳೆ ವಿದ್ಯಾರ್ಥಿ ಸಂಘದ ಮಾರ್ಗದರ್ಶಕರಾದ ರಾಜಗೋಪಾಲ್ ಕೆ, ಪ್ರಶಾಂತ್ ಬಿ ಶೆಟ್ಟಿ, ಖಜಾಂಚಿ ಉಮೇಶ್ ಆಚಾರ್ಯ, ಕ್ರಿಕೆಟ್ ತರಬೇತುದಾರರಾದ ಸದಾನಂದ ಎಸ್ ಹಾಗೂ ಶಿಕ್ಷಕ - ಶಿಕ್ಷಕೇತರ ವೃಂದದವರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಿಸೆಂಬರ್ 17 : ಕುಲಾಲ ಸಮಾಜ ಬಾಂಧವರಿಗಾಗಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ - ಕುಲಾಲ ಟ್ರೋಫಿ : 2023
Posted On: 30 Oct 2023, 09:27 PM
ಕಾಪು : ಕುಲಾಲ ಸಂಘ ಪೆರ್ಡೂರು ಹಾಗೂ ಕುಲಾಲ ಸೇವಾದಳ ಇವರ ಆಶ್ರಯದಲ್ಲಿ ಕುಲಾಲ ಟ್ರೋಫಿ -2023 ಕ್ರಿಕೆಟ್ ಪಂದ್ಯಾಟವು ಪೆರ್ಡೂರು ಪ್ರೌಢಶಾಲಾ ಮೈದಾನದಲ್ಲಿ ಡಿಸೆಂಬರ್ 17, ಭಾನುವಾರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಎಂದು ಪಂದ್ಯಾಟ ಆಯೋಜನೆಯ ಪ್ರಮುಖರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 9844616085 9902205793 9844552875
ಉಡುಪಿ : ಮತ್ಸ್ಯ ಮೇಳ - 2023 ಕಾರ್ಯಕ್ರಮ
Posted On: 28 Oct 2023, 08:05 PM
ಉಡುಪಿ : ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾಲಕ ಇಲಾಖೆ, ಸ್ಕೊಡ್ ವೆಸ್ ಸಂಸ್ಥೆ-ಶಿರಸಿ ಮತ್ತು ಉಡುಪಿ, ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಅಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ಶನಿವಾರ ಲಕ್ಷ್ಮೀ ಸೋಮ ಬಂಗೇರ ಸಹಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಇಲ್ಲಿ ಮತ್ಸ್ಯ ಮೇಳ - 2023 ಕಾರ್ಯಕ್ರಮ ಜರಗಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಕಡಲನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು ಮೊಗವೀರ ಸಮಾಜದವರು. ದೋಣಿಯ ಮೂಲಕ ಆರಂಭವಾದ ಮೀನುಗಾರಿಕಾ ಚಟುವಟಿಕೆ ಇಂದು ದೋಣಿಯ ಜೊತೆಯಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಮುಂದುವರೆಯುತ್ತದೆ ಜೊತೆಗೆ ಅನೇಕರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿದೆ ಎಂದರು. ಈ ಸಂದರ್ಭ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಗೀತಾಂನದ ಫೌಂಡೇಶನ್ ಕೋಟ ಪಡುಕೆರೆ ಪ್ರವರ್ತಕರಾದ ಆನಂದ್ ಸಿ ಕುಂದರ್, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷರಾದ ಲೋಹಿತ್ ಖಾರ್ವಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್, ಸ್ಕೊಡ್ ವೆಸ್ ಸಂಸ್ಥೆ ಕಾರ್ಯ ನಿರ್ವಾಹಕರಾದ ಡಾ. ವೆಂಕಟೇಶ ಎಲ್. ನಾಯ್ಕ್, ಹನುಮಂತಪ್ಪ, ಮೀನುಗಾರಿಕಾ ಜಂಟಿ ನಿರ್ದೇಶಕರಾದ ವಿವೇಕ್ ಉಪಸ್ಥಿತರಿದ್ದರು.
ಓಮನ್ ಬಿಲ್ಲವಾಸ್ : ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪೂಜೆ ಸಂಪನ್ನ
Posted On: 28 Oct 2023, 03:22 PM
ಗಲ್ಫ್ ರಾಷ್ಟ್ರದ ರಾಜಧಾನಿ ಮಸ್ಕಟ್ ನಲ್ಲಿ ಓಮನ್ ಬಿಲ್ಲವಾಸ್ ಸಂಘಟನೆಯ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪೂಜೆ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಪುರೋಹಿತರಾದ ಶ್ರೀ ಚರಣ್ ಶಾಂತಿ ಕಟಪಾಡಿ ಯವರ ನೇತೃತ್ವದಲ್ಲಿ ದೇವರ ವಿಸ್ತಾರವಾದ ಕಥೆ, ಭಕ್ತಿಯ ಪೂಜಾ ಕೈಂಕರ್ಯ, ಭಜನೆ, ಚೆಂಡೆ, ಮಹಿಳೆಯರಿಂದ ಕಳಸ ಪ್ರದಾನ ನೃತ್ಯ ಹಾಗೂ ಸೇರಿದ ಜನರ ಭಕ್ತಿ ಭಾವದೊಂದಿಗೆ ಕಾರ್ಯಕ್ರಮವು ಬಹಳ ಸುಸೂತ್ರವಾಗಿ ನೆರವೇರಿಸಲ್ಪಟ್ಟಿತು. ಈ ಸಂಧರ್ಭ ಓಮನ್ ಬಿಲ್ಲವಾಸ್ ಸಂಘಟನೆಯ ಅಧ್ಯಕ್ಷ ಸುಜಿತ್ ಅಂಚನ್, ಮಾಜಿ ಅಧ್ಯಕ್ಷ ಹಾಗೂ ಸ್ಥಾಪಕ ಸದಸ್ಯ ಎಸ್. ಕೆ. ಪೂಜಾರಿ, ಕಾರ್ಯಕಾರಿ ಸಮಿತಿ, ಸದಸ್ಯರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. B
ಉಡುಪಿ : ಎಬಿವಿಪಿ ವತಿಯಿಂದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ
Posted On: 28 Oct 2023, 02:47 PM
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಜ್ಜರಕಾಡಿನ ಯುದ್ಧ ಸ್ಮಾರಕದ ಬಳಿ ಪ್ರತಿಭಟನೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು. ನಗರ ಕಾರ್ಯದರ್ಶಿ ಶ್ರೀವತ್ಸ ಅವರು ಮಾತನಾಡಿ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ನೀಡದೆ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ವಿಶೇಷವಾಗಿ ಉಡುಪಿ ದಕ್ಷಿಣ ಕನ್ನಡ ಭಾಗದ ಮನೆಗಳಲ್ಲಿ ಬೀಡಿ ಕಟ್ಟಿ ಜೀವನ ನಡೆಸುವವರ ಬಡ ಮಕ್ಕಳಿಗೆ ಬರುವ ವಿದ್ಯಾರ್ಥಿ ವೇತನ ಬಾರದೆ ಇರುವುದು ಅವಶ್ಯಕ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆ ಆಗುತ್ತಿದೆ. ನಗರ ಕಾರ್ಯಕಾರಿಣಿ ಸದಸ್ಯರಾದ ಮಂಗಳಗೌರಿ ಅವರು ಮಾತನಾಡಿ ಎಸ್.ಎಸ್.ಪಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ತಾಂತ್ರಿಕ ಶಿಕ್ಷಣ ಹಾಗೂ ಇತರೆ ಇಲಾಖೆಯಡಿಯಲ್ಲಿ ಬರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾರದೆ ಉಡುಪಿಯು ಸೇರಿದಂತೆ ರಾಜ್ಯಾದ್ಯಂತ ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ವಂಚಿರಾಗುತ್ತಿರುವುದು ಖಂಡನಿಯವೆಂದು ಹೇಳಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ ಮಾತನಾಡಿ ರಾಜ್ಯ ಸರ್ಕಾರ ತನ್ನ ಗ್ಯಾರಂಟೀ ಮೂಲಕ ನಿರುದ್ಯೋಗಿಗಳಿಗೆ ಬತ್ತೆ ನೀಡುವುದರ ಬದಲು ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಬರುವಂತಹ ವಿದ್ಯಾರ್ಥಿ ವೇತನವನ್ನು ನೀಡಿದರೆ ನಿರುದ್ಯೋಗದ ಸಮಸ್ಯೆ ಉಲ್ಬಣವಾಗುವ ಮಾತೇ ಇರುವುದಿಲ್ಲ. ಕೊನೆಯಲ್ಲಿ ಅವರು ಮಾತನಾಡಿ, ಒಂದು ವೇಳೆ ನಾಳೆ ಉಡುಪಿಗೆ ಬರಲಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಒಂದು ವಾರದೊಳಗಾಗಿ ಸಮಸ್ಯೆಗೆ ಪರಿಹಾರ ವದಗಿಸದೇ ಹೋದಲ್ಲಿ ಉಡುಪಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಎಬಿವಿಪಿ ಪ್ರಮುಖರು ಉಪಸ್ಥಿತರಿದ್ದರು.
ಹೆಜಮಾಡಿ ಗಡಿಭಾಗದಲ್ಲಿ ಸಿ.ಎಂ.ಗೆ ಸ್ವಾಗತ
Posted On: 28 Oct 2023, 02:39 PM
ಹೆಜಮಾಡಿ : ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿ ಚೆಕ್ ಪೋಸ್ಟ್ ಬಳಿ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಶನಿವಾರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸ್ವಾಗತಿಸಲಾಯಿತು. ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದರು. ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ್ ಪೂಜಾರಿ ಸಹಿತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಧಿಕಾರಿ ವರ್ಗ ಉಪಸ್ಥಿತರಿದ್ದರು.
ಕಾಪು : ಯುವ ನ್ಯಾಯವಾದಿ ನಾಗಾರ್ಜುನ ಕಾಪುರವರ ನೂತನ ಕಚೇರಿ ಉದ್ಘಾಟನೆ
Posted On: 26 Oct 2023, 07:32 PM
ಕಾಪು : ಇಲ್ಲಿನ ತೃಪ್ತಿ ಹೊಟೇಲ್ ನ ಜನಾರ್ಧನ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಯುವ ನ್ಯಾಯವಾದಿ ನಾಗಾರ್ಜುನ ಕಾಪು ತಮ್ಮ ನೂತನ ಕಚೇರಿಯನ್ನು ಆದಿತ್ಯವಾರದಂದು ಶುಭಾರಂಭಗೊಳಿಸಿದರು. ಕಚೇರಿಯ ಉದ್ಘಾಟನೆಯನ್ನು ಉಡುಪಿ ಅಂಬಲಪಾಡಿ ಮತ್ತು ಕಾಪು ಮೂರನೇ ಮಾರಿಗುಡಿ ದೇವಳದ ಪಾತ್ರಿಗಳಾದ ಗಿರೀಶ್ ಮತ್ತು ಕಾಪು ಪುರಸಭೆ ಸದಸ್ಯೆ ಮೋಹಿನಿ ಗುಜ್ಜಿ ಮನೆ, ಶೇಖರ್ ಕಲ್ಯಾ, ಕಿಶೋರ್ ಪೊಲಿಪು, ರಾಜು ಶೆಟ್ಟಿ ಮಂಡೇಡಿ, ಕೋಟೆ ಹಳೇ ಮಾರಿಯಮ್ಮ ದೇವಸ್ಥಾನ ಮೊಕ್ತೇಸರರಾದ ಜಯರಾಣ್ಯ, ಕಾಪು ಮೂರನೇ ಮಾರಿಯಮ್ಮ ದೇವಳದ ಉಚ್ಚಂಗಿ ಅರ್ಚಕರಾದ ಸದಾನಂದ ರಾಣ್ಯ ಇವರ ಉಪಸ್ಥಿತಿಯಲ್ಲಿ ಮಾಡಲಾಯಿತು. ಕಾರ್ಯಕ್ರಮಕ್ಕೆ ಪುತ್ತೂರಿನ ಎರಡನೇ ಜೆ.ಎಮ್ ಎಪ್.ಸಿ ನ್ಯಾಯಮೂರ್ತಿ ಯೋಗೆಂದ್ರ ಶೆಟ್ಟಿ, ಉಡುಪಿ ಬಾರ್ ಅಸೋಸಿಯೇಷನ್ ನೂತನ ಅಧಕ್ಷರಾದ ರೆನೊಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಖಜಾಂಚಿ ಗಂಗಾಧರ ಎಚ್ ಎಮ್, ಹಿರಿಯ ವಕೀಲರಾದ ನಾಗರಾಜ್ ಬಿ, ಮಧ್ವಾಚಾರ್ಯ, ಅಖಿಲ್ ಬಿ ಹೆಗ್ಡೆ, ಆರೂರು ಸುಕೇಶ್ ಶೆಟ್ಟಿ, ಸಹನಾ ಕುಂದರ್ ಸೂಡ, ಅನಂತ ನಾಯ್ಕ, ಅಶೋಕ್ ಎಸ್ ಭಟ್, ಕಿರಣ್ ಎಸ್ ಬಿ, ಭರತ್ ಪೈ, ಜಯಚಂದ್ರ ಕುಂದಾಪುರ, ಸಂತೋಷ್ ಹೇರೂರು, ಶಿವಪ್ರಸಾದ್, ರಾಘವೇಂದ್ರ ಶುಭಹಾರೈಸಿದರು.
