Updated News From Kaup
ಕಾಪು : ರಸ್ತೆ ಬದಿ ಪೈಪ್ ಲೈನ್ ಅಳವಡಿಕೆ - ಬಸ್ಸು ಬಾರದೆ ಸಂಕಷ್ಟ
Posted On: 04 Oct 2023, 07:29 PM
ಕಾಪು : ಇಲ್ಲಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಂಚಲಕಾಡು ಕಳತ್ತೂರು ಭಾಗದಲ್ಲಿ ಬಸ್ಸಿನ ಮೂಲಕ ಕಾಪು, ಉಡುಪಿ ಇನ್ನಿತರ ಕಡೆಗೆ ಉದ್ಯೋಗ ನಿಮಿತ್ತ ತೆರಳುವವರು ಕಳೆದ 3 ದಿನದಿಂದ ಬಸ್ಸಿನಲ್ಲಿ ಹೋಗಲು ಬೆಳಪು ಕಡೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಸಂಬಂಧ ಪಟ್ಟ ಇಲಾಖೆಯವರು ಬೇಗನೆ ತಮ್ಮ ಕೆಲಸ ಮುಗಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜು - ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
Posted On: 04 Oct 2023, 06:50 PM
ಪಲಿಮಾರು : ಮಾದಕ ದ್ರವ್ಯಗಳನ್ನು ಸೇವಿಸುವವರಿಗಲ್ಲ, ವ್ಯಾಪಾರಿಗಳಿಗೆ ಮಾತ್ರ ಲಾಭವಾಗಿದೆ ಎಂಬುದಾಗಿ ಪಡುಬಿದ್ರಿ ಆರಕ್ಷಕ ಠಾಣೆಯ ಉಪ ಠಾಣಾಧಿಕಾರಿ ಸುರೇಶ್ ಅವರು ಅಭಿಪ್ರಾಯಪಟ್ಟರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ವಿಧ್ಯಾರ್ಥಿಗಳಿಗೋಸ್ಕರ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾದಕ ದ್ರವ್ಯಗಳ ವಿವಿಧ ನಮೂನೆಗಳು, ಅವುಗಳ ಸೇವನೆಯಿಂದ ಆಗುವ ವೈಯಕ್ತಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳು,ಅವುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು. ಮತ್ತೋರ್ವ ಸಹಾಯಕ ಠಾಣಾಧಿಕಾರಿ ದಿವಾಕರ್ ಮಾತನಾಡಿ ಯುವಜನರಲ್ಲಿ ಇಂದು ಮಾದಕ ದ್ರವ್ಯಗಳ ಸೇವನೆ ಹೆಚ್ಚಾಗುತ್ತಿದೆ. ಪೋಷಕರು, ತಮ್ಮ ಮಕ್ಕಳು ಕಲಿತು ಒಳ್ಳೆಯ ಭವಿಷ್ಯವನ್ನು ರೂಪಿಸಬೇಕು ಎಂದು ಕೇಳಿದ್ದನ್ನೆಲ್ಲಾ ಒದಗಿಸಲು ಪ್ರಯತ್ನ ಪಡುತ್ತಾರೆ. ಆದರೆ ಮಕ್ಕಳು ಪೋಷಕರ ಗಮನಕ್ಕೆ ಬಾರದ ಹಾಗೆ ದಾರಿ ತಪ್ಪುತ್ತಿದ್ದಾರೆ. ವಿಧ್ಯಾರ್ಥಿ ಜೀವನದಲ್ಲಿ ಸಮಯದ ಸದುಪಯೋಗ ಮಾಡಿಕೊಂಡು, ಈ ಭಾಗದವರು ಸರ್ಕಾರಿ ಸೇವೆಗಳಿಗೆ ಸೇರಲು ಹೆಚ್ಚಿನ ಆಸಕ್ತಿ ತೋರಿಸಬಹುದು ಎಂಬುದಾಗಿ ಕರೆಕೊಟ್ಟರು. ಸಹಶಿಕ್ಷಕ ಪ್ರಸನ್ನ, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಸ್ವಾಗತಿಸಿ, ಕನ್ನಡ ಉಪನ್ಯಾಸಕರಾದ ಜ್ಯೋತಿ ವಂದಿಸಿದರು.
ಕಾಪು : ಉದ್ದ ಜಿಗಿತದಲ್ಲಿ ರಾಷ್ಟಮಟ್ಟಕ್ಕೆ ಆಯ್ಕೆಯಾದ ಸುಶಾನ್ ಸುವರ್ಣರನ್ನು ಅಭಿನಂದಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
Posted On: 02 Oct 2023, 07:07 PM
ಕಾಪು : ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಕಾಪು ವಿಧಾನಸಭಾ ಕ್ಷೇತ್ರದ ಬೆಳ್ಳಂಪಳ್ಳಿ ನಿವಾಸಿ ಸುಶಾನ್ ಸುವರ್ಣ ಅವರನ್ನು ಮಹಾಲಕ್ಷ್ಮಿ ಭಜನಾ ಮಂಡಳಿಯಲ್ಲಿ ಅಕ್ಟೋಬರ್ 2 ರಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬೆಳ್ಳಂಪಳ್ಳಿ ಮೋಗವೀರ ಗ್ರಾಮಸಭಾ ಅಧ್ಯಕ್ಷರಾದ ಸುಧಾಕರ್ ಕಾಂಚನ್, ಮಹಾಲಕ್ಷ್ಮಿ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಕಾಂಚನ್, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಶೆಟ್ಟಿ, ಬೆಳ್ಳಂಪಳ್ಳಿ ಮೋಗವೀರ ಗ್ರಾಮಸಭಾ ಮಾಜಿ ಅಧ್ಯಕ್ಷರಾದ ಬಾಲು ಕೋಟ್ಯಾನ್, ಸುಶಾನ್ ಅವರ ಕುಟುಂಬದವರಾದ ಮುದ್ದು ಕೋಟ್ಯಾನ್, ಆನಂದಿ ಸುವರ್ಣ ಹಾಗೂ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಬಂಟಕಲ್ಲು : ಬೃಹತ್ ರಕ್ತದಾನ ಶಿಬಿರ ಸಂಪನ್ನ - ಅಂಗಾಂಗದಾನದ ಬಗ್ಗೆ ಜಾಗೃತಿ
Posted On: 02 Oct 2023, 06:22 PM
ಬಂಟಕಲ್ಲು : ನಾಗರಿಕ ಸೇವಾ ಸಮಿತಿ(ರಿ) ಬಂಟಕಲ್ಲು ಇವರ ಆಶ್ರಯದಲ್ಲಿ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ಗಾಂಧೀ ಜಯಂತಿ ಪ್ರಯುಕ್ತ ಬಂಟಕಲ್ಲು ಶಿರ್ವ ರೋಟರಿ ಸಭಾಭವನದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ತಂಡದ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಜರುಗಿತು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ನೂರಕ್ಕೂ ಅಧಿಕ ದಾನಿಗಳು ಶಿಬಿರದಲ್ಲಿ ಭಾಗವಹಿಸಿದ್ದು, ರಕ್ತನಿಧಿ ವೈದ್ಯಾಧಿಕಾರಿ ಡಾ.ಮಾನ್ವಿ ಇವರ ಮಾರ್ಗದರ್ಶನದಲ್ಲಿ 86 ಆರೋಗ್ಯವಂತರು ರಕ್ತದಾನ ಮಾಡಿದರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಗೌರವ ಸಲಹೆಗಾರರಾದ ದೇವದಾಸ ಪಾಟ್ಕರ್ ಮುದರಂಗಡಿ 78ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಮಾತನಾಡಿ ಗಾಂಧೀ ಜಯಂತಿಯ ದಿನವೇ ಬಂಟಕಲ್ಲು ನಾಗರಿಕ ಸಮಿತಿಯ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳು ಸೇರಿ ರಕ್ತದಾನ ಶಿಬಿರ ಮಾಡಿದ್ದು ಔಚಿತ್ಯ ಪೂರ್ಣವಾಗಿದೆ. ರಕ್ತವನ್ನು ಬಹುದಿನಗಳವರೆಗೆ ಸಂಗ್ರಹಿಸಿ ಇಡುವುದು ಒಳ್ಳೆಯದಲ್ಲ. ತುರ್ತು ಸಂದರ್ಭದಲ್ಲಿ ರಕ್ತ ನೀಡಲು ಜಾಗೃತಿ ಮೂಡಿಸಬೇಕಾಗಿದೆ. ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಯಾಗುವುದಲ್ಲದೆ ಇನ್ನೊಬ್ಬರ ಪ್ರಾಣವನ್ನು ಉಳಿಸುವ ಪುಣ್ಯ ಲಭಿಸುತ್ತದೆ. ಆಗಾಗ ಕ್ಯಾಂಪ್ಗಳನ್ನು ಮಾಡುವುದರಿಂದ ನಾಗರಿಕರಲ್ಲಿ ರಕ್ತದಾನದ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎಂದರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇದರ ಅಧ್ಯಕ್ಷ ಸತೀಶ್ ಸಾಲಿಯಾನ್ ಮಾತನಾಡಿ ರಕ್ತದಾನದ ಮಹತ್ವ, ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ದೀಪಿಕಾ ನಾಯಕ್ ಅಂಗಾಂಗದಾನದ ಪ್ರತಿಜ್ಞಾವಿಧಿ ನೆರವೇರಿಸಿದರು, ಆರೋಗ್ಯ ಅಧಿಕಾರಿ ವೈಷ್ಣವಿ ಅಂಗಾಂಗದಾನದ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ 15 ಆಸಕ್ತ ಅಭ್ಯರ್ಥಿಗಳು ಅಂಗಾಂಗದಾನದ ನೋಂದಣಿ ಮಾಡಿದರು. ಈ ಸಂದರ್ಭದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ತುರ್ತು ಸೇವಾ ವಾಹನದಲ್ಲಿ ಯಾವುದೇ ಕ್ಷಣದಲ್ಲಿ ಆಕಸ್ಮಿಕ ಘಟನೆಗಳು ನಡೆದಾಗ ಸೇವಾ ರೂಪದಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಹರೀಶ್ ಹೇರೂರು, ವಿನ್ಸೆಂಟ್ ಪಲ್ಕೆ, ಉಮೇಶ ರಾವ್ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಶಿರ್ವದ ಅಧ್ಯಕ್ಷ ಮೊಹಮ್ಮದ್ ಫಾರೂಖ್, ರಾಜಾಪುರ ಸಾರಸ್ವತ ಯುವವೃಂದ ಬಂಟಕಲ್ಲು ಇದರ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ, ಬಂಟಕಲ್ಲು ಲಯನ್ಸ್ ಕ್ಲಬ್ ಜಾಸ್ಮಿನ್ ಅಧ್ಯಕ್ಷೆ ಪ್ರಮೀಳಾ ಲೋಬೊ, ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಬಂಟಕಲ್ಲು ಇದರ ಉಪಾಧ್ಯಕ್ಷ ಹರೀಶ್ ಹೇರೂರು, ಲಯನ್ಸ್ ಕ್ಲಬ್ ಬಂಟಕಲ್ಲು-ಬಿ.ಸಿ.ರೋಡ್ ಅಧ್ಯಕ್ಷ ಜೋಸಿಲ್ ನೊರೋನ್ಹಾ, ಕಾರು ಚಾಲಕ ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷ ಉಮೇಶ್ ರಾವ್, ಸ್ವಾಸ್ಥ್ಯಆಯೋಗ್ ಪಾಂಬೂರು ಚರ್ಚ್ ಇದರ ನಿರ್ದೇಶಕಿ ಪ್ರಸಿಲ್ಲಾ ನೊರೋನ್ಹಾ, ವೇದಿಕೆಯಲ್ಲಿದ್ದರು. ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಮರ ಬಿದ್ದು ವ್ಯಕ್ತಿ ಮೃತ್ಯು ; ಇಬ್ಬರಿಗೆ ಗಾಯ
Posted On: 02 Oct 2023, 04:57 PM
ಕಾಪು : ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂದಾಡಿಯಲ್ಲಿ ಮರವೊಂದನ್ನು ತೆರವುಗೊಳಿಸುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತಪಟ್ಟ ವ್ಯಕ್ತಿ ಸುಧೀರ್ ಮಾಂಜಿ (59) ಬಿಹಾರ ಮೂಲದವನಾಗಿದ್ದು. ಮರ ತೆರವು ಸಂದರ್ಭ ಮೂವರ ಮೇಲೆ ಬಿದ್ದಿದ್ದು ಇಬ್ಬರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲಿಸಿದ್ದಾರೆ.
ಉಡುಪಿ : ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶ
Posted On: 02 Oct 2023, 01:53 PM
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಉಡುಪಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ.), ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಮತ್ತು ತಾಲೂಕು ಜನಜಾಗೃತಿ ವೇದಿಕೆ ಉಡುಪಿ, ಕಾಪು, ಬ್ರಹ್ಮಾವರ ಹಾಗೂ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಇಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶ - 2023 ಕಾರ್ಯಕ್ರಮ ಜರಗಿತು. ಉಡುಪಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಸತ್ಯಾನಂದ ನಾಯಕ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಉಡುಪಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ದೇವದಾಸ್ ಹೆಬ್ಬಾರ್, ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಉಡುಪಿ ವಿಭಾಗ ಸೂಕ್ಷ್ಮ ವಿಮಾ ವಿಭಾಗ ಪ್ರಬಂಧಕರಾದ ದಿನೇಶ್ ಪ್ರಭು, ಬ್ರಹ್ಮಾವರ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ನಗರಸಭಾ ಸದಸ್ಯರಾದ ಮಾನಸ ಸಿ ಪೈ, ಉಡುಪಿ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶಮಿತ ಪಿ ಶೆಟ್ಟಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ದಲಿತ ಸಂಘರ್ಷ ಸಮಿತಿ - ನೂತನ ಸಂಚಾಲಕರಾಗಿ ಕೀರ್ತಿಕುಮಾರ್ ಆಯ್ಕೆ
Posted On: 02 Oct 2023, 07:10 AM
ಪಡುಬಿದ್ರಿ : ಇಲ್ಲಿನ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ ರವಿವಾರ ನಡೆಯಿತು. ಸಮಿತಿಯ ನೂತನ ಸಂಚಾಲಕರಾಗಿ ಕೀರ್ತಿಕುಮಾರ್, ಸಂಘಟನಾ ಸಂಚಾಲಕರಾಗಿ ಸುರೇಶ್ ಎರ್ಮಾಳ್, ವಿಠಲ ನಂದಿಕೂರು ಆಯ್ಕೆಯಾದರು. ಸಮಿತಿಯ ಇತರ ಸಂಘಟನಾ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಯ ಸಂತೋಷ್ ಶೆಟ್ಟಿ ಇವರು ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಹೋರಾಟಗಾರ ಜಿಲ್ಲಾ ಸಂಚಾಲಕರಾದ ಸುಂದರ್ ಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ್ ಉಪ್ಪೂರ್, ಕಾಪು ತಾಲೂಕು ಸಂಚಾಲಕರಾದ ವಿಠ್ಠಲ್ ಉಚ್ಚಿಲ, ಪಡುಬಿದ್ರಿ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಹೇಮಚಂದ್ರ, ಪಡುಬಿದ್ರಿ ಪೊಲೀಸ್ ಠಾಣಾ ಸಿಬ್ಬಂದಿ ಸುದರ್ಶನ್, ರಾಜ್ಯ ಮಹಿಳಾ ಸಂಚಾಲಕಿ ವಸಂತಿ ಶಿವಾನಂದ್, ಶಿವಾನಂದ್ ಕಲ್ಲಟ್ಟೆ, ಸುರೇಶ್, ಸುಕೇಶ್, ರಮೇಶ್ ನಂಬಿಯಾರ್, ವಿಠ್ಠಲ್ ಮಾಸ್ಟರ್, ಹರಿಶ್ಚಂದ್ರ, ನಯನ, ಕುಶಾಲಕ್ಷ, ಉಷಾ, ಆಶಾ, ರಮೇಶ್ ಕಲ್ಲಟ್ಟೆ ಮುಂತಾದವರು ಉಪಸ್ಥಿತರಿದ್ದರು.
ನಂದಿಕೂರು : ಶೇನರಾ ಕಾಡು ಕ್ರಿಕೆಟ್ ಟ್ರೋಫಿ - 2023
Posted On: 01 Oct 2023, 09:19 PM
ನಂದಿಕೂರು : ಯುವಕರಲ್ಲಿ ಕ್ರಿಕೆಟ್ ಆಟದ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಆಯ್ದ ತಂಡಗಳ ಕೂಡುವಿಕೆಯಲ್ಲಿ ಪ್ರತೀಕ್ ಕೋಟ್ಯಾನ್, ರಿತೇಶ್ ದೇವಾಡಿಗ, ರೋಹಿತ್ ಪೂಜಾರಿ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 1ರಂದು ನಂದಿಕೂರಿನಲ್ಲಿ ಶೇನರಾ ಕಾಡು ಕ್ರಿಕೆಟ್ ಟ್ರೋಫಿ 2023 ಜರಗಿತು. ಪಂದ್ಯಾಟದಲ್ಲಿ ಸಂತೋಷ್ ನಂದಿಕೂರು ನಾಯಕತ್ವದ ಚಾಣಕ್ಯ 11 ಗೆಲುವು ಸಾಧಿಸಿ ಶೇನರಾ ಕಾಡು ಕ್ರಿಕೆಟ್ ಟ್ರೋಫಿ 2023 ಮುಡಿಗೇರಿಸಿಕೊಂಡಿತು. ಪ್ರಸಾದ್ ನಾಯಕತ್ವದ ಪ್ರಿಷಾ 11 ತಂಡವು ರನ್ನರ್ಸ್ ಟ್ರೋಫಿ ಪಡೆಯಿತು.
ಉಡುಪಿ ಹೆಲ್ಪ್ ಲೈನ್ : ಹೊನ್ನಪರ ಕುದ್ರು ನಿವಾಸಿಗಳೊಂದಿಗೆ 6ನೇಯ ವಷ೯ದ ಪಾದಾಪ೯ಣೆಯ ಸಂಭ್ರಮ
Posted On: 01 Oct 2023, 08:55 PM
ಉಡುಪಿ : ಉಡುಪಿ ಹೆಲ್ಪ್ ಲೈನ್ (ರಿ) (ಹಸಿದವರ ಬಾಳಿನ ಆಶಾಕಿರಣ) ಸಂಸ್ಥೆಯ 6ನೇಯ ವಷ೯ದ ಪಾದಾಪ೯ಣೆಯ ಸಂಭ್ರಮವನ್ನು ಅಕ್ಟೋಬರ್ 1 ರಂದು ಕಲ್ಯಾಣಪುರ ಗ್ರಾಮದ ಹೊನ್ನಪರ ಕುದ್ರುವಿನಲ್ಲಿ ವಾಸಿಸುವ ಬೊಗ್ಗು ಬೆಳ್ಚಡ ಹಾಗೂ ಅವರ ಅಕ್ಕ ಕಲ್ಯಾಣಿ ಬೆಳ್ಚಡ್ತಿ ಹಾಗೂ ಅವರ ಮಗಳೊಂದಿಗೆ ವಾಸಿಸುವ ಒಕ್ಕಲು ಮನೆಯ ಮುಂಭಾಗದಲ್ಲಿ ಆಚರಿಸಲಾಯಿತು. ಈ ಸಂದರ್ಭ ಅವರಿಗೆ ಹೊಸಬಟ್ಟೆಗಳನ್ನು, ಆಹಾರ ಸಾಮಗ್ರಿಗಳನ್ನು, ಗೌರವ ಧನವನ್ನು ನೀಡಿ ಅವರ ಜೊತೆಯಾಗಿ ಸದಸ್ಯರು ವಿಶೇಷ ಊಟವನ್ನು ಮಾಡಿ ಅವರ ಜೊತೆ ಸ್ವಲ್ಪ ಸಮಯವನ್ನು ಕಳೆದರು. ಈ ಸಂದರ್ಭ ಅಜು೯ನ್ ಭಂಡಾರ್ಕರ್, ಮಮತ ಪಿ ಶೆಟ್ಟಿ ತೆಂಕನಿಡಿಯೂರು ಶ್ರೀ ನಗರ, ರಮೇಶ್ ಎಸ್ ತಿಂಗಳಾಯ ಕೋಡಿಬೆಂಗ್ರೆ, ನವೀನ್ ಡಿಸೋಜ ಕಲ್ಯಾಣಪುರ, ಓಂ ಪ್ರಕಾಶ್ ಕೆಮ್ಮಣ್ಣು, ಭಾರತಿ ಟಿ. ಕೆ, ವಿನೋದ್ ಶೆಟ್ಟಿ ಉಡುಪಿ, ಭವಿಷ್ ಉಡುಪಿ, ವಿವೇಕ್ ಎಡಬೆಟ್ಟು, ಉಷಾ ಹೂಡೆ, ಪ್ರೀತಿ ಕಲ್ಯಾಣಪುರ, ಗೌರಿ ಸುಧಾಕರ್ ತೆಂಕನಿಡಿಯೂರು ಗ್ರಾಮ ಗರಡಿಮಜಲು, ವತ್ಸಲಾ ಕೋಟ್ಯಾನ್ ನೇಜಾರು, ಪ್ರತಿಮಾ ನಾಯಕ್ ಕೆಳಾಕಳ೯ಬೆಟ್ಟು, ಕುಸುಮ ಗುಜ್ಜರುಬೆಟ್ಟು, ಯಶೋಧ ಕೆಮ್ಮಣ್ಣು, ವತ್ಸಲಾ ವಿನೋದ್ ಗುಜ್ಜರುಬೆಟ್ಟು, ಆಶಾ ತಿಮ್ಮಣ್ಣಕುದ್ರು, ರಫೀಕ್ ಕಲ್ಯಾಣಪುರ, ಮಹೇಶ್ ಪೂಜಾರಿ ಹೂಡೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಕುತ್ಯಾರು : ಹುಚ್ಚು ನಾಯಿ ಹಾವಳಿ, ಮುಂಜಾಗ್ರತೆಗೆ ಸೂಚನೆ
Posted On: 01 Oct 2023, 08:46 PM
ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಸಂಚರಿಸುತ್ತಿದ್ದು, ಕೆಲವು ನಾಯಿಗಳಿಗೆ ಕಚ್ಚಿದ್ದು ಗ್ರಾಮದಲ್ಲಿ ತುಂಬಾ ಆತಂಕವನ್ನು ಮೂಡಿಸಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮನೆಯ ಸಾಕು ನಾಯಿಗಳನ್ನು ಕಡ್ಡಾಯವಾಗಿ ಮನೆಯಲ್ಲಿ ಕಟ್ಟಿ ಹಾಕಿ ಹಾಗೂ ಕಡ್ಡಾಯವಾಗಿ ರೇಬಿಸ್ ಇಂಜೆಕ್ಷನ್ ಅನ್ನು ತಕ್ಷಣವೇ ನೀಡಬೇಕಾಗಿ ಕುತ್ಯಾರು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.
