Updated News From Kaup
ಆಗಸ್ಟ್ 26 : ಮೀರಾರೋಡಿನಲ್ಲಿ ಸೌಜನ್ಯ ಪ್ರಕರಣದ ವಿರುದ್ಧ ಪ್ರತಿಭಟನೆಯ ಪೂರ್ವಬಾವಿ ಸಭೆ

Posted On: 16-08-2023 11:15PM
ಮುಂಬಯಿ : ಧರ್ಮವು ಅಧರ್ಮದ ದಾರಿಯಲ್ಲಿ ನಡೆದಾಗ ಭಗವಂತನು ಯಾವುದೇ ರೂಪದಲ್ಲಿ ಬಂದು ರಕ್ಷಣೆ ನೀಡುತ್ತಾನೆ ಎಂಬ ದೃಢ ನಂಬಿಕೆಯಿಂದ ಹನ್ನೆರಡು ವರ್ಷಗಳ ಹಿಂದೆ ಅಮಾನುಷವಾಗಿ ಕೊಲೆಯಾದ ಧರ್ಮಸ್ಥಳ ಪರಿಸರದ ಬಾಲೆ ಸೌಜನ್ಯಳ ನಿಜವಾದ ಕೊಲೆಗಾರ ಯಾರು ಎಂದು ತಿಳಿಯುವರೇ ಹೋರಾಟ ಆರಂಭವಾಗಿದೆ.ಈ ಹೋರಾಟದಲ್ಲಿ ನ್ಯಾಯ ಸಿಗಲೇಬೇಕೆಂದು ಪ್ರೋತ್ಸಾಹಿಸಿ ಮಹಾರಾಷ್ಟ್ರದ ಮಣ್ಣಿನಲ್ಲಿ ನೆಲೆಸಿದ ಸಮಾನ ಮನಸ್ಕರಾದ ನಾವು ಮುಂಬಯಿಯಲ್ಲೂ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶದಿಂದ ಪೂರ್ವಬಾವಿ ಸಭೆಯಲ್ಲಿ ಒಟ್ಟುಗೂಡಿದ್ದೇವೆ. ನಮ್ಮ ನಡೆ ಕೇವಲ ನ್ಯಾಯದ ಕಡೆ. ಹಿಂದೆ ಸಂತೋಷ್ ರಾವ್ ಎಂಬ ಸಜ್ಜನ ಯುವಕನನ್ನು ಆರೋಪಿಯ ಸ್ಥಾನದಲ್ಲಿಟ್ಟು ಇದೀಗ ನ್ಯಾಯಾಲಯವು ಅವರನ್ನು ನಿರಾಪರಾಧಿ ಎಂದು ತೀರ್ಪು ನೀಡಿದೆ. ಹಾಗಾಗಿ ನಿಜವಾದ ಆರೋಪಿ ಅಲ್ಲದೆ ಸಂತೋಷ್ ರಾವ್ ಹಾಗೂ ಅವರ ಕುಟುಂಬಕ್ಕೆ ಕಳಂಕ ತಂದವರು ಯಾರು ಎಂಬ ಗೊಂದಲವು ಈ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕಾಗಿ ಎಸ್ ಐಟಿ ಮುಖೇನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಮರು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಮಾಡಬೇಕು. ನಾವು ಯಾರದ್ದೇ ಚಾರಿತ್ರ್ಯ ಹರಣ ಮಾಡದೆ ನ್ಯಾಯಕ್ಕಾಗಿ ಪ್ರತಿಭಟಿಸುವ ಎಂದು ಕನ್ನಡ ಜಾನಪದ ಪರಿಷತ್ ಮಹಾರಾಷ್ಟ್ರದ ಅದ್ಯಕ್ಷ , ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ಯಾಡಿ ಹೇಳಿದರು. ಅವರು ಆಗಸ್ಟ್ 14ರಂದು ಮೀರಾರೋಡ್ ಶೀತಲ್ ನಗರದ ಸಾಯಿ ಸಾಫಲ್ಯ ವಸತಿ ಸಂಕೀರ್ಣದ ವಠಾರದಲ್ಲಿ ಸಭೆಯನ್ನು ಆಯೋಜಿಸಿ ಮಾತನಾಡಿದರು.
ಸಭೆಯ ಇನ್ನೋರ್ವ ಆಯೋಜಕ ನೀಲೇಶ್ ಪೂಜಾರಿ ಪಲಿಮಾರು ಮಾತನಾಡಿ ಧರ್ಮ ಹಾಗೂ ನ್ಯಾಯ ಸಿಗುವಂತಹ ಧಾರ್ಮಿಕ ಕ್ಷೇತ್ರದ ಪರಿಸರದಲ್ಲಿ ನಡೆದ ಈ ಅಮಾನುಷ ಕೃತ್ಯಕ್ಕೆ ನ್ಯಾಯ ಯಾಕೆ ಸಿಗಲಿಲ್ಲ ಎಂಬ ವಿಚಾರವಾಗಿ ಇದೀಗ ಕಾನೂನಿನ ಮುಖಾಂತರ ನ್ಯಾಯಾಲಯದ ಮೊರೆ ಹೋಗುವಂತಾಗಿದೆ. ಖ್ಯಾತ ಸಮಾಜಮುಖಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಉಪಸ್ಥಿತಿಯಲ್ಲಿ ಶನಿವಾರ ಆಗಸ್ಟ್ 26 ರಂದು ಮೀರಾರೋಡ್ ಪೂರ್ವದ ಶಾಂತಿ ನಗರ, ಸೆಕ್ಟರ್ 10ರ ಸ್ವಾಮೀ ನಾರಾಯಣ ಮಂದಿರದ (BAPS) ಸಭಾಗೃಹದಲ್ಲಿ ಮಧ್ಯಾಹ್ನ ಗಂಟೆ 2ರಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಗೆ ಒತ್ತಡ ಹಾಗೂ ಬೆದರಿಕೆ ಬಂದರೂ ನಾವೆಲ್ಲರೂ ಸೇರಿ ಸೌಜನ್ಯ ಕುಟುಂಬದ ನ್ಯಾಯಕ್ಕಾಗಿ ಹೋರಾಟ ನಡೆಸುವ ಎಂದರು. ಸಮಾಜಸೇವಕ, ಹ್ಯುಮಾನಿಟಿ ಫಸ್ಟ್ ಫೌಂಡೇಶನಿನ ರಾಯಭಾರಿ ಡಾ. ಶಿವ ಮೂಡಿಗೆರೆ ಮಾತನಾಡಿ ಇಂದು ನಾವು ಯಾವುದೇ ವ್ಯಕ್ತಿ ಪರ ಅಲ್ಲದೆ ರಾಜಕೀಯವಾಗಿ ಸಭೆಯನ್ನು ನಡೆಸುತ್ತಿಲ್ಲ.ಕೇವಲ ನ್ಯಾಯದ ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ. ಮುಂಬಯಿಯ ಎಲ್ಲಾ ತುಳುಕನ್ನಡ ಸಂಸ್ಥೆಗಳು ಒಟ್ಟು ಸೇರಿ ಸರಕಾರಕ್ಕೆ ಕೂಡಲೇ ತ್ವರಿತ ಕ್ರಮ ಕೈಗೊಳ್ಳಲು ಲಿಖಿತ ಮನವಿ ನೀಡಬೇಕು. ಮೊದಲ ಬಾರಿ ಈ ಕೇಸಿನ ವಿಚಾರಣೆ ಮಾಡಿದ ವೈದ್ಯರು ಅಲ್ಲದೆ ಪೋಲಿಸು ಅಧಿಕಾರಿಗಳನ್ನು ಮೊದಲು ಅಧಿಕಾರದಿಂದ ವಜಾ ಮಾಡಬೇಕು. ಇವರೇ ಈ ಕೇಸಿಗೆ ಸಂಬಂಧಪಟ್ಟ ಸಾಕ್ಷಿಗಳನ್ನು ನಾಶ ಮಾಡಿದ್ದರಿಂದ ನ್ಯಾಯ ದೊರಕಲಿಲ್ಲ.ಅಲ್ಲದೆ ಅಲ್ಲಿನ ರಾಜಕೀಯ ಪ್ರಭಾವವೂ ಅವರೊಂದಿಗೆ ಜತೆ ಕೂಡಿರಬಹುದು. ನಿಜ ಆರೋಪಿಯನ್ನು ಕಂಡು ಹಿಡಿದು ಶಿಕ್ಷಿಸಿದರೆ ಮಾತ್ರ ಸೌಜನ್ಯ ಮತ್ತು ಸಂತೋಷ್ ರಾವ್ ಕುಟುಂಬಕ್ಕೆ ನೆಮ್ಮದಿ ಸಿಗಬಹುದು ಎಂದರು.

ಮುಂಬಯಿಯ ಖ್ಯಾತ ಸಮಾಜಮುಖಿ ಹೋರಾಟಗಾರ ಬೆರ್ಮೊಟ್ಟು ಚಂದ್ರಕೃಷ್ಣ ಶೆಟ್ಟಿ ಮಾತನಾಡಿ ಲಕ್ಷಾಂತರ ಭಕ್ತರು ದರುಶನ ಪಡೆಯುವ ಅಣ್ಣಪ್ಪ ದೈವ ಮತ್ತು ಮಂಜುನಾಥ ಸ್ವಾಮಿ ನೆಲೆಸಿದ ಧರ್ಮದ ಬೀಡು, ದೇವರ ನಾಡು ಎಂದು ಜನಜನಿತವಾದ ಕ್ಷೇತ್ರಕ್ಕೆ ಇಂದು ಕಳಂಕ ಬಂದಿದೆ. ಕ್ಷೇತ್ರದ ಮಹಿಮೆಯ ಬಗ್ಗೆ ಹೆಗ್ಗಡೆಯವರ ಬಾಯಿಯಿಂದ ಬರುವ ಮಾತಿನ ಬಗ್ಗೆ ನಂಬಿಕೆಯಿದೆ. ಲೋಕಕ್ಕೆ ನ್ಯಾಯ ಸಿಗುವ ಸ್ಥಳದಲ್ಲಿ ನ್ಯಾಯಕ್ಕೆ ಅನ್ಯಾಯವಾಗಿದೆ. ಇದಕ್ಕೆ ಪರಿಹಾರವಾಗಿ ನ್ಯಾಯವು ಮರು ತನಿಖೆಯ ಮುಖಾಂತರ ನ್ಯಾಯಾಲಯದಿಂದ ಸಿಗಬಹುದೇ ಅಥವಾ ಧರ್ಮದ ನೆಲೆಯಲ್ಲಿ ಮಾತನಾಡುವ ದೇವರ ನಾಲಗೆಯಿಂದ ಬರಹುದೇ ಎಂದು ಕಾಯುವಂತಾಗಿದೆ. ಹೆಗ್ಗಡೆಯವರು ಯಾಕೆ ಮೌನವಾಗಿದ್ದಾರೆ, ಅವರೇ ಮುಂದೆ ಬಂದು ದೈವದೇವರ ಪರವಾಗಿ ನ್ಯಾಯ ನೀಡಲಿ, ಪ್ರತಿಭಟನೆ ನಿಲ್ಲಿಸಿ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಲಿ. ಸೌಜನ್ಯಳ ತಾಯಿ ಮೂವರು ಅಪರಾಧಿಗಳೆಂದು ಹೆಸರು ಹೇಳಿದ್ದರೂ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ರಾಜಕೀಯ ಪ್ರಭಾವವಿದೆ ಮತ್ತು ಪ್ರಭಾವಿಗಳ ಷಡ್ಯಂತ್ರವಿದೆ ಎಂದು ಎದ್ದು ಕಾಣಿಸುತ್ತಿದೆ. ಸೌಜನ್ಯ ಕುಟುಂಬ ಹಾಗೂ ಸಂತೋಷ್ ರಾವ್ ಕುಟುಂಬಕ್ಕೆ ಕೂಡಲೇ ನ್ಯಾಯ ದೊರೆಯುವಂತೆ ದೇವರಲ್ಲಿ ಪ್ರಾರ್ಥಿಸುವ ಎಂದರು. ನಮ್ಮ ಹೋರಾಟ ಧರ್ಮದ ನೆಲೆ ಅಥವಾ ಯಾವುದೇ ವ್ಯಕ್ತಿಯ ಮೇಲೆ ಅಲ್ಲ. ಪಾಪಕೃತ್ಯ ಮಾಡಿದವನನ್ನು ಕಂಡುಹಿಡಿದು ಇಂತಹ ಕೃತ್ಯೆ ಮುಂದೆ ಆಗದಂತೆ ತಡೆಯುವುದರ ಮೂಲ ಉದ್ದೇಶ ಎಂದು ಗಂಧರ್ವ ಸುರೇಶ್ ಶೆಟ್ಟಿ ಹೇಳಿದರು.
ಶ್ರೀ ಶಕ್ತಿ ಸಂಘಟನೆಯ ಅದ್ಯಕ್ಷೆ ಶಾಲಿನಿ ಸತೀಶ್ ಶೆಟ್ಟಿ, ಸಮಾಜ ಸೇವಕಿ ವಸಂತಿ ಶೆಟ್ಟಿ, ಡಾ.ರವಿರಾಜ್ ಸುವರ್ಣ, ಪತ್ರಕರ್ತ ವಿಜಯ ಶೆಟ್ಟಿ ಕುತ್ತೆತ್ತೂರು ಸೌಜನ್ಯ ಹತ್ಯೆಯ ಬಗ್ಗೆ ಮಾತನಾಡಿ ಮುಂದಿನ ಪ್ರತಿಭಟನಾ ಸಭೆಗೆ ಸಲಹೆ ಸೂಚನೆ ನೀಡಿ ತಮ್ಮ ಸಹಕಾರ ವ್ಯಕ್ತಪಡಿಸಿದರು. ರಾಧಾಕೃಷ್ಣ ಶೆಟ್ಟಿ, ಮೀರಾರೋಡ್ ಹಾಗೂ ವಿಜಯ ಶೆಟ್ಟಿ ಮೂಡುಬೆಳ್ಳೆ,ಪ್ರಭಾಕರ ಬೆಳ್ವಾಯಿ, ಸುಂದರ ಶೆಟ್ಟಿ ವಾಮನಪದವು, ಶೇಖರ ಪೂಜಾರಿ ಮತ್ತಿತರರು ಸಹಕರಿಸಿದ್ದರು. ಆರಂಭದಲ್ಲಿ ಸೌಜನ್ಯಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯನ್ನು ಜಿ.ಕೆ.ಕೆಂಚನಕೆರೆ ನಿರೂಪಿಸಿದರು.
ಶಿರ್ವ : ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ಸುಧಾಮತಿರವರಿಗೆ ಬೀಳ್ಕೊಡುಗೆ

Posted On: 16-08-2023 06:53PM
ಶಿರ್ವ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 15 ವರ್ಷಗಳಿಂದ ಆರೋಗ್ಯ ಸುರಕ್ಷಾ ಅಧಿಕಾರಿಯಾಗಿ ಸೇವೆ ನೀಡಿದ ಸುಧಾಮತಿಯವರು ಸ್ವಯಂ ನಿವೃತ್ತಿ ಹೊಂದಿದ ಪ್ರಯುಕ್ತ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿವರ್ಗದ ವತಿಯಿಂದ ಬೀಳ್ಕೊಡುಗೆ ನಡೆಯಿತು.
ಈ ಸಂದರ್ಭ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ ಮಾತನಾಡಿ ಕನಿಷ್ಠ ಸಂಬಳದಲ್ಲಿ ಗರಿಷ್ಠ ಸೇವೆ ನೀಡಿದ ಸುಧಾಮತಿಯವರ ಸೇವೆ ಶ್ಲಾಘನಾರ್ಹವಾಗಿದ್ದು ಅವರ ಕೊಡುಗೆ ಸದಾ ಸ್ಮರಣೀಯ. ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿ ಶುಭಕೋರಿದರು.
ಕಳತ್ತೂರು ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ, ಸಮುದಾಯ ಆರೋಗ್ಯಕೇಂದ್ರ ಹಿರಿಯ ಶುಶ್ರೂಷಕಿ ಉಷಾ ಮರಾಠೆ, ದಂತಚಿಕಿತ್ಸಾ ವೈದ್ಯಾಧಿಕಾರಿ ಡಾ.ಗಾಯತ್ರಿ ಸಂತೋಷ್, ಆಪ್ತ ಸಮಾಲೋಚಕ ದಿನೇಶ್ ಮಡಿವಾಳ ಸುಧಾಮತಿರವರ ಸೇವೆಯ ಬಗ್ಗೆ ಮಾತನಾಡಿ ಅಭಿನಂದಿಸಿ ಶುಭ ಕೋರಿದರು.
ಆರೋಗ್ಯ ಕೇಂದ್ರದ ವೈದ್ಯರು, ಶುಶ್ರೂಷಕಿಯವರು, ವಿವಿಧ ವಿಭಾಗಗಳ ತಂತ್ರಜ್ಞರು, ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.
ಪಡುಬಿದ್ರಿ : ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

Posted On: 16-08-2023 06:13PM
ಪಡುಬಿದ್ರಿ : ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಬುಧವಾರ ಭೇಟಿ ನೀಡಿದರು.

ಶಾಸಕರು ಶಾಲೆಯ ಕುಂದು ಕೊರತೆ ಬಗ್ಗೆ ಮನವಿ ಸ್ವೀಕರಿಸಿ ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಶೂ ವಿತರಣೆ ಮಾಡಿದರು. ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಸುಕುಮಾರ್, ಪ್ರಾಂಶುಪಾಲರಾದ ಶಾಲಿನಿ, ಮುಖ್ಯ ಶಿಕ್ಷಕರಾದ ಕೃಷ್ಣಯ್ಯ, ಶಿಕ್ಷಕರಾದ ಗೀತಾ, ಹಳೆ ವಿದ್ಯಾರ್ಥಿಗಳಾದ ಶರತ್ ಶೆಟ್ಟಿ, ಕೃಷ್ಣ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ವತಿಯಿಂದ ಆಷಾಢ ಸಂಭ್ರಮ ಕಾರ್ಯಕ್ರಮ

Posted On: 16-08-2023 08:18AM
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ) ಶಿರ್ವ ಮತ್ತು ಮಹಿಳಾ ಬಳಗದ ಆಷಾಢ ಸಂಭ್ರಮ ಕಾರ್ಯಕ್ರಮ ಹೋಟೆಲ್ ಮಂದಾರ ಸಭಾಂಗಣದಲ್ಲಿ ಜರುಗಿತು. ಶಿರ್ವ ನ್ಯೂ ಭಾರ್ಗವಿ ಜುವೆಲರ್ಸ್ನ ಮಾಲಕರಾದ ಸೌಮ್ಯ ಗಣೇಶ ಆಚಾರ್ಯ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘ ಗಾಯತ್ರಿ ವೃಂದದ ಮಾಜಿ ಅಧ್ಯಕ್ಷರಾದ ವಸಂತಿ ಅಶೋಕ್ ಆಚಾರ್ಯರು ಆಷಾಢ ಸಂಭ್ರಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ ಸಂಸ್ಕೃತಿ ಕಿರಿಯರಿಗೆ ನೀಡುವುದರ ಮೂಲಕ ಸಂಭ್ರಮ ಸಂಗಮವಾಗಿ ಬೆಳೆಯಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರಾಚಾರ್ಯ, ಸಂಗಮದ ಗೌರವಾಧ್ಯಕ್ಷ ಸುರೇಶ ಆಚಾರ್ಯ, ಅಧ್ಯಕ್ಷ ಉಮೇಶ್ ಆಚಾರ್ಯ, ಕಾರ್ಯದರ್ಶಿ ಮಾಧವಾಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿ, ಕಾರ್ಯದರ್ಶಿ ಪ್ರೀತಿ ಉಮೇಶ್ ಆಚಾರ್ಯ ಸ್ವಾಗತಿಸಿದರು, ಮಂಜುಳಾ ಉಮೇಶ್ ಆಚಾರ್ಯ ವಂದಿಸಿದರು. ಶರ್ಮಿಳ ಸದಾಶಿವಾಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಆಚಾರ್ಯ ಮತ್ತು ಶಶಿರಾಜ್ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ಕಾಪು : ಫ್ರೆಂಡ್ಸ್ ಗ್ರೂಪ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Posted On: 15-08-2023 11:06PM
ಕಾಪು : ಫ್ರೆಂಡ್ಸ್ ಗ್ರೂಪ್ ವತಿಯಿಂದ ಕುಶಲಶೇಖರ ಆಡಿಟೋರಿಯಂನಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶೇಖರ ಶೆಟ್ಟಿ ಧ್ವಜಾರೋಹಣಗೈದರು. ರಂಗನಾಥ ಶೆಟ್ಟಿ ನೇತೃತ್ವದಲ್ಲಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಶೇಖರ ಶೆಟ್ಟಿ, ಸುಂದರ ಶೆಟ್ಟಿ ಆನಂದಿ ಶೆಟ್ಟಿ, ರಂಗನಾಥ ಶೆಟ್ಟಿ ಭಾಗವಹಿಸಿದ್ದರು. ಫ್ರೆಂಡ್ಸ್ ಗ್ರೂಪ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಶಶಾಂಕ್ ಸ್ವಾಗತಿಸಿದರು. ಕಾವ್ಯ ವಂದಿಸಿದರು.
ಕಾರ್ಕಳ : ಹಿರಿಯರ ತ್ಯಾಗ ಬಲಿದಾನವನ್ನು ಸಾರ್ಥಕ ಪಡಿಸೋಣ - ಎಮ್ ಕೆ ವಿಜಯಕುಮಾರ್

Posted On: 15-08-2023 07:37PM
ಕಾರ್ಕಳ : ನಮ್ಮ ದೇಶಕ್ಕೆ ಹಿರಿಯರ ನಿಸ್ವಾರ್ಥ, ತ್ಯಾಗ, ದೇಶಪ್ರೇಮದ ಪರಾಕಾಷ್ಠೆಯ ಪರಿಣಾಮ ಇಂದು ಸ್ವತಂತ್ರ ಭಾರತದಲ್ಲಿ ನಾವು ಜೀವಿಸುತ್ತಿದ್ದೇವೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಪೂರ್ವಜರು ಭಾರತವೆಂಬುದು ಶ್ರೇಷ್ಠ ಭಾರತವಾಗಬೇಕೆಂದು ಬಲಿದಾನಗೈದರು. ಇಂತಹ ಅಮೃತಕಾಲವನ್ನು ನಾವು ಸಂಪತ್ತಿನಂತೆ ಕಾಪಾಡಿಕೊಳ್ಳಬೇಕು ಎಂದು ಕಾರ್ಕಳದ ಖ್ಯಾತನ್ಯಾಯವಾದಿ ಎಂ ಕೆ ವಿಜಯಕುಮಾರ್ ಕರೆ ನೀಡಿದರು. ಅವರು ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡುತ್ತ ಇಂತಹ ಭರತ ಭೂಮಿಯಲ್ಲಿ ಜನಿಸಿರುವುದೇ ಪುಣ್ಯ. ಈ ದೇಶದ ಪ್ರಜೆಗಳಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದು ಆಶಿಸಿದರು.
ಸನ್ಮಾನ : ಅಂಡಮಾನ್ನಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಸಂಸ್ಥೆಗೂ ಗೌರವ ತಂದ ಕ್ರಿಯೇಟಿವ್ ಕಾಲೇಜಿನ ಹಳೆ ವಿದ್ಯಾರ್ಥಿನಿ ನಿಧಿ ಯು ಆಚಾರ್ ಅವರನ್ನು ಸಂಸ್ಥೆಯ ವತಿಯಿಂದ ಹೆಮ್ಮೆಯಿಂದ ಸನ್ಮಾನಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಸಂಸ್ಥಾಪಕರಾದ ಅಶ್ವತ್ ಎಸ್ ಎಲ್, ಆದರ್ಶ ಎಮ್ ಕೆ, ಅಮೃತ್ ರೈ, ಗಣಪತಿ ಭಟ್ ಕೆ ಎಸ್, ಉಪನ್ಯಾಸಕ ವರ್ಗ ಹಾಗೂ ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ರಾಜೇಶ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಧ್ವಜಾರೋಹಣ ಕಾರ್ಯಕ್ರಮದ ನಂತರ ಪ್ರಸಿದ್ಧ ಚಲನಚಿತ್ರ ಹಿನ್ನಲೆ ಗಾಯಕಿ 'ಜೀ' ವಾಹಿನಿಯ ಸರಿಗಮಪ ಸಂಗೀತ ಸ್ಪರ್ಧೆಯ ರನ್ನರ್ ಅಪ್ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಸದಭಿರುಚಿಯ ಗೀತ ಗಾಯನ "ಕ್ರಿಯೇಟಿವ್ ಸವಿಗಾನ" ಕಾರ್ಯಕ್ರಮ ನೆರವೇರಿತು.ಲೋಹಿತ್ ಎಸ್ ಕೆ ನಿರೂಪಿಸಿ, ವಿನಾಯಕ ಜೋಗ್ ವಂದಿಸಿದರು.
ಪಡುಬಿದ್ರಿ : ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ ; ಸಂಸ್ಥೆಯ ಸಿಬ್ಬಂದಿಗೆ ತರಬೇತಿ ಶಿಬಿರ

Posted On: 15-08-2023 07:26PM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 77ನೇ ಸ್ವಾತಂತ್ರೋತ್ಸವದ ಆಚರಣೆ ಮತ್ತು ಸಂಸ್ಥೆಯ ಸಿಬ್ಬಂದಿಗೆ ತರಬೇತಿ ಶಿಬಿರ ಮಂಗಳವಾರ ಜರಗಿತು. ರಾಷ್ಟ್ರಧ್ವಜದ ಧ್ವಜಾರೋಹಣದ ನೆರವೇರಿಸಿದ ನಂತರ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಟೀಮ್ ಬಿಲ್ಡ್ ವಿಷಯದಲ್ಲಿ ಜೆ. ಸಿ. ಐ. ಇಂಡಿಯಾದ ಅಂತರಾಷ್ಟ್ರೀಯ ತರಬೇತುದಾರರಾದ ಸುಭಾಶ್ ಬಂಗೇರ ಉಡುಪಿ ಇವರಿಂದ ತರಬೇತಿ ಕಾರ್ಯಕ್ರಮ ಜರಗಿತು.
ತರಬೇತಿಯನ್ನು ಜೆ. ಸಿ. ಐ ಆಡಳಿತ ಮಂಡಳಿ ಸದಸ್ಯರಾದ ಸುಕುಮಾರ್ರವರು ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೆ. ಸಿ. ಐ. ಸಂಸ್ಥೆಯು ಇರುವುದೇ ಯುವಕರಿಗೆ ತರಬೇತಿಯನ್ನು ನೀಡುವ ಅಂತರಾಷ್ಟ್ರೀಯ ಸಂಸ್ಥೆ. ಜೆ. ಸಿ. ಐ. ಯಿಂದಾಗಿ ನಮ್ಮ ದೇಶದಲ್ಲಿ ಹಲವಾರು ನಾಯಕರು ಮೂಡಿ ಬಂದಿರುತ್ತಾರೆ. ಈ ತರಬೇತಿಯಿಂದ ಸೊಸೈಟಿಯ ಸಿಬ್ಬಂದಿಗಳು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕರುಗಳಾದ ವೈ ಜಿ ರಸೂಲ್, ಗಿರೀಶ್ ಪಲಿಮಾರು, ಶಿವರಾಮ ಶೆಟ್ಟಿ, ವಾಸುದೇವ ಪಲಿಮಾರು, ಮಾಧವ ಆಚಾರ್ಯ, ಯಶವಂತ, ರಾಜಾರಾಮ ರಾವ್, ಸ್ಟ್ಯಾನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕಾಂಚನ ಉಪಸ್ಥಿತರಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ಸುಧೀರ್ ಕುಮಾರ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿಯವರು ವಂದಿಸಿದರು.
ಕಾಪು : ಕಾಂಗ್ರೆಸ್ ಕಛೇರಿ ರಾಜೀವ್ ಭವನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

Posted On: 15-08-2023 05:50PM
ಕಾಪು : ಕಾಂಗ್ರೆಸ್ ಕಛೇರಿ, ರಾಜೀವ್ ಭವನದಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಭಾರತದ ಸಾರ್ವಭೌಮತೆ, ಅಖಂಡತೆ, ಸಮಾನತೆ, ಸಾಮರಸ್ಯತೆ ಮತ್ತು ಸಹೋದರತ್ವದ ಉಳಿವಿಗಾಗಿ ಭಾರತೀಯರಾದ ನಾವೆಲ್ಲರೂ ಪಣತೊಡಬೇಕು. ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿದ ಭಾರತದ ಸಂವಿಧಾನವನ್ನು ರಕ್ಷಿಸುವ ರಕ್ಷಕರಾಗಿ, ದ್ವೇಷ, ಹಿಂಸೆ ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಿ, ವಿಶೇಷವಾಗಿ ಮಹಿಳೆಯರ ರಕ್ಷಣೆಯನ್ನು ಹೊಣೆಗಾರಿಕೆಯೆಂದು ಭಾವಿಸಿ ಸತ್ಪ್ರಜೆಗಳಾಗಿ ಜೀವನ ನಡೆಸುವ ಧ್ಯೇಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅನಿವಾರ್ಯತೆ ಪ್ರಸಕ್ತ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ. ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಶಾಂತಲತಾ ಶೆಟ್ಟಿ, ದಿನೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಹರೀಶ್ ನಾಯಕ್, ಶರ್ಫುದ್ದೀನ್ ಶೇಖ್, ಲಕ್ಷ್ಮೀಶ ತಂತ್ರಿ, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಸದಾನಂದ ಶೆಟ್ಟಿ ಕೋಡು, ಶೋಭಾ ಬಂಗೇರ, ಸತೀಶ್ಚಂದ್ರ ಮೂಳೂರು, ರಾಧಿಕಾ ಸುವರ್ಣ, ಅಶ್ವಿನಿ ನವೀನ್, ಮೊಹಮ್ಮದ್ ನಯೀಮ್, ದಿವಾಕರ್ ಬಿ. ಶೆಟ್ಟಿ, ಫಾರೂಕ್ ಚಂದ್ರನಗರ, ದಿವಾಕರ್ ಡಿ.ಶೆಟ್ಟಿ, ಕೆ.ಎಚ್. ಉಸ್ಮಾನ್, ರಾಜೇಶ್ ಕುಲಾಲ್, ರೋಹನ್ ಕುತ್ಯಾರ್, ಜಾನ್ಸನ್ ಕರ್ಕಡ, ಶಶಿಕಾಂತ್ ಆಚಾರ್ಯ, ಯು.ಸಿ.ಶೇಖಬ್ಬ, ದೇವರಾಜ್ ಕೋಟ್ಯಾನ್, ಗೋಪಾಲ್ ಪೂಜಾರಿ, ಯಶವಂತ್ ಪಲಿಮಾರ್, ನಾಗಭೂಷಣ್ ರಾವ್, ಯಾಕೂಬ್ ಮಜೂರ್, ಅಝೀಜ್ ಪಕೀರ್ಣಕಟ್ಟೆ, ಶಾಬು ಸಾಹೇಬ್, ಬಬ್ಬಣ್ಣ ನಾಯಕ್, ಅಷ್ಫಾಕ್, ರವೀಂದ್ರ ಮಲ್ಲಾರ್ ಮತ್ತು ಅಶೋಕ್ ನಾಯರಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಸ್ವಾಗತಿಸಿ, ನಿರೂಪಿಸಿದರು.
ಕಟಪಾಡಿ : ಎಸ್.ವಿ.ಎಸ್ ಹಿರಿಯ ಪ್ರಾಥಮಿಕ ಶಾಲೆ -77ನೇ ವರ್ಷದ ಸ್ವಾತಂತ್ರ್ಯೋತ್ಸವ

Posted On: 15-08-2023 04:35PM
ಕಟಪಾಡಿ : ಎಸ್.ವಿ.ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಇಂದು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ| ದಯಾನಂದ ಪೈ ಧ್ವಜಾರೋಹಣವನ್ನು ನೆರವರಿಸಿ 77ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಹಾರೈಸಿದರು. ಸಾಮಾಜಿಕ ಆರ್ಥಿಕ ಸದೃಢತೆಯಿಂದಾಗಿ ನಿಜವಾದ ಸ್ವಾತಂತ್ರ್ಯ ಪ್ರಾಪ್ತಿಯಾಗುತ್ತದೆ ಅದಕ್ಕೆ ಎಲ್ಲಾ ವಿದ್ಯಾರ್ಥಿಗಳು ಶ್ರಮಿಸುವಂತಾಗಬೇಕೆಂದು ಅವರು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ತಂತ್ರಿ ಇವರು ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಮುಖ್ಯಶಿಕ್ಷಕರಾದ ಸುಬ್ರಹ್ಮಣ್ಯ ತಂತ್ರಿ, ಶಾಲಾ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು,ಕಾಲೇಜಿನ ಉಪನ್ಯಾಸಕರು, ಎಸ್.ವಿ.ಎಸ್ ಹೈಸ್ಕೂಲ್ ಕಾಲೇಜ್ ಫ್ರೆಂಡ್ಸ್ ನ ಅಧ್ಯಕ್ಷರಾದ ಸತೀಶ್ ಕುಮಾರ್, ಯುವ ಜನ ಸೇವಾ ಸಂಘದ ಕಾರ್ಯದರ್ಶಿಯಾದ ಸಂತೋಷ್, ಎನ್.ಎಸ್ ಕಟಪಾಡಿ, ಕೋಶಾಧಿಕಾರಿ ಸನತ್ ಕುಮಾರ್ ಉಪಸ್ಥಿತರಿದ್ದರು.

ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಇವರ ವತಿಯಿಂದ ನೀಡಲಾದ ಸಿಹಿತಿಂಡಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಾಜ ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ಕೆ ಭಾರತೀಯ ಸಂವಿಧಾನ ಬಗ್ಗೆ, ಮಕ್ಕಳಹಕ್ಕು, ಕರ್ತವ್ಯ ಹಾಗೂ ರಕ್ಷಣೆಯ ಬಗ್ಗೆ ವಿಶೇಷವಾದ ಮಾಹಿತಿ ನೀಡಿದರು.
ಕಟಪಾಡಿ : ನವೋದಯ ಫ್ರೆಂಡ್ಸ್ ದುರ್ಗಾನಗರ ಏಣಗುಡ್ಡೆ - 77 ನೇ ಸ್ವಾತಂತ್ರ್ಯೋತ್ಸವ

Posted On: 15-08-2023 04:21PM
ಕಟಪಾಡಿ : ನವೋದಯ ಫ್ರೆಂಡ್ಸ್ ದುರ್ಗಾನಗರ ಏಣಗುಡ್ಡೆ ಇವರ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವವನ್ನು ಇಂದು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಮೋದ್ ಪೂಜಾರಿಯವರು ವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು.
ಸನ್ಮಾನ : ಪಿಯುಸಿಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 99%ಅಂಕ ಗಳಿಸಿ ರಾಜ್ಯಕ್ಕೆ 5 ನೇ ಸ್ಥಾನಗಳಿಸಿದ ಗ್ರಾಮದ ವಿದ್ಯಾರ್ಥಿನಿ ಅನುಶ್ರೀ ಇವರನ್ನು ಹಾಗೂ 10ನೇ ತರಗತಿಯಲ್ಲಿ 90% ಕ್ಕಿಂತಲೂ ಅಧಿಕ ಅಂಕ ಗಳಿಸಿದ ಮೀನಾಕ್ಷಿ ಇವರನ್ನೂ ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮದ ಹಿರಿಯ ನಾಗರಿಕರಾದ ನಾರಾಯಣ ಪೂಜಾರಿ, ಮಂಜುನಾಥ್ ಸಂಘದ ಗೌರವಾಧ್ಯಕ್ಷರಾದ ಜಗನ್ನಾಥ್ ಕೋಟೆ, ಸಂಘದ ಮಾಜಿ ಅಧ್ಯಕ್ಷರಾದ ಸಂತೋಷ್ ಸುವರ್ಣ, ಪದಾಧಿಕಾರಿಗಳಾದ ದೀಪಕ್, ಜನಾರ್ದನ್, ಅರ್ಜುನ್ ಹಾಗೂ ಸದಸ್ಯರಾದ ಸ್ಟಿಫನ್, ಸಚಿನ್ ಸಂತೋಷ್,ದಿಲೀಪ್, ಅಜಿತ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ಮಧುಕರ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.