Updated News From Kaup
ಡಿಸೆಂಬರ್ 30ರಂದು ಸೋಮನಾಥ ಎಸ್.ಕರ್ಕೇರರ 'ಹನಿ-ಧ್ವನಿ' ಹನಿಗವನ ಸಂಕಲನ ಬಿಡುಗಡೆ
Posted On: 28 Dec 2022, 08:33 PM
ಕಾಪು : ಮೂಲತಃ ಕಾಪು ನಿವಾಸಿಯಾಗಿರುವ ಪ್ರಸ್ತುತ ಮುಂಬೈ ವಾಸಿಯಾಗಿರುವ ಲೇಖಕ ಹಾಗೂ ಕವಿ ಸೋಮನಾಥ ಎಸ್.ಕರ್ಕೇರರ ನೂರು ಹನಿಗವನಗಳ ಸಂಕಲನ 'ಹನಿ-ಧ್ವನಿ' ಇದರ ದ್ವಿತೀಯ ಮುದ್ರಣದ ಬಿಡುಗಡೆ ಸಮಾರಂಭವು ಶುಕ್ರವಾರ ಡಿಸೆಂಬರ್ 30 ರಂದು ಸಂಜೆ ಗಂಟೆ 6:30ಕ್ಕೆ ಚೆಂಬೂರಿನ ಫೈನ್ ಆರ್ಟ್ ಸೊಸೈಟಿಯ ಆರ್ ಸಿ ಎಫ್ ಸಭಾಂಗಣದಲ್ಲಿ ಜರಗಲಿದೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನಕ ಸಭಾ ಪರ್ಫಾಮಿಂಗ್ ಆರ್ಟ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಜರಗಲಿರುವ ಈ ಸಮಾರಂಭದಲ್ಲಿ ಸೋಮಯ್ಯಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಎಸ್ ಕೆ ಭವಾನಿಯವರು ಕೃತಿ ಬಿಡುಗಡೆ ಮಾಡಲಿದ್ದು ಕವಯಿತ್ರಿ, ಲೇಖಕಿ ಅನಿತಾ ಪೂಜಾರಿ ತಾಕೋಡೆ ಇವರು ಕೃತಿ ಪರಿಚಯ ಮಾಡಲಿದ್ದಾರೆ. ನವಿ ಮುಂಬಯಿಯ ಅಕ್ಷರ ಗಂಗಾ ಪ್ರಕಾಶನದ ವತಿಯಿಂದ ಪ್ರಕಟಗೊಂಡ 'ಹನಿ-ಧ್ವನಿ'ಯ ಪ್ರಥಮ ಮುದ್ರಣವು 2020ರಲ್ಲಿ ಬಿಡುಗಡೆಗೊಂಡಿದ್ದು ಇದೀಗ ಇದರ ಎರಡನೇ ಮುದ್ರಣವು ಓದುಗರ ಕೈಸೇರುತ್ತಿದೆ. ಈ ಕೃತಿಯು ಈಗಾಗಲೇ ಕಳೆದ ಅಕ್ಟೋಬರ್ 21 ರಂದು ದುಬೈಯ ಬುರ್ಪ್ರಾಂತದ ಲಾಕ್ವೆಂಟಾ ಹೋಟೆಲ್ನಲ್ಲಿ ಬಿಡುಗಡೆಗೊಂಡಿದ್ದು ಇದೀಗ ಮುಂಬಯಿಯಲ್ಲಿ ಬಿಡುಗಡೆಗೊಳ್ಳಲಿದೆ. ಈ ತನಕ ಸೋಮನಾಥ ಎಸ್. ಕರ್ಕೇರರ 'ಇಡ್ಲಿ ತಿನ್ನುವ ಸ್ಪರ್ಧೆ', 'ನುಂಗಣ್ಣ ಆಯೋಗದ ವರದಿ ' ಮತ್ತು 'ಹನಿ-ಧ್ವನಿ' ಎಂಬ ಮೂರು ಕನ್ನಡ ಕೃತಿಗಳು ಹೊರ ಬಂದಿದ್ದು ಇವರ ನಗೆ ಲೇಖನಗಳು, ಹನಿಗವನಗಳು, ಹನಿ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಕೋವಿಡ್ ಸೋಂಕಿನ ಬಗ್ಗೆ ಎಚ್ಚರವಹಿಸಿ, ಬೂಸ್ಟರ್ ಡೋಸ್ ತಪ್ಪದೆ ಪಡೆಯಿರಿ : ಜಿಲ್ಲಾಧಿಕಾರಿ ಕೂರ್ಮಾರಾವ್
Posted On: 28 Dec 2022, 07:28 PM
ಉಡುಪಿ : ಜಿಲ್ಲೆಯ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಅನ್ನು ತಪ್ಪದೇ ಪಡೆಯಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸಲಹೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಕೋವಿಡ್ ಮುನ್ನೆಚ್ಚರಿಕೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಾಮಾನ್ಯರು ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಆತಂಕ ಪಡದೇ ಸರಳ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಮಾಸ್ಕ್ಗಳನ್ನು ಧರಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಈಗಾಗಲೇ 2 ಡೋಸ್ ಕೋವಿಡ್ ಲಸಿಕೆ ಪಡೆದಿರುವವರು ಬೂಸ್ಟರ್ ಡೋಸ್ ಅನ್ನು ಪಡೆಯಬೇಕು ಎಂದರು. ನಮ್ಮ ನೆರೆಯ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮಿತಿಮೀರಿದ್ದು, ನಮ್ಮ ದೇಶದಲ್ಲಿಯೂ ಹರಡುವ ಸಾಧ್ಯತೆ ಇರುವ ಹಿನ್ನಲೆ, ಅಗತ್ಯ ಕೋವಿಡ್ ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದ್ದು, ಸರ್ಕಾರ ಮಾರ್ಗಸೂಚಿಗಳನ್ನು ಸಹ ಹೊರಡಿಸಿದ್ದು, ಅವುಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ಆಸ್ಪತ್ರೆಗಳಿಗೆ ಬರುವ ಶೀತ, ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವ ರೋಗಿಗಳಿಗೆ, ಹೊರದೇಶದಿಂದ ಬಂದವರಿಗೆ, ಕೋವಿಡ್ ರೋಗಿಗಳ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದ ಅವರು ಪಾಸಿಟಿವ್ ಫಲಿತಾಂಶ ಬಂದವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿಕೊಡಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ ಶೇ.30 ರಷ್ಟು ಕೋವಿಡ್ ಬೂಸ್ಟರ್ ಡೋಸ್ಗಳನ್ನು ಪಡೆದಿದ್ದಾರೆ. ಪಡೆಯದೇ ಇರುವವರು ಆದ್ಯತೆಯ ಮೇಲೆ ಲಸಿಕೆಯನ್ನು ಪಡೆಯಬೇಕು. 60 ವರ್ಷ ಮೇಲ್ಪಟ್ಡವರಲ್ಲಿ ಶೇ.67 ರಷ್ಟು ಬೂಸ್ಟರ್ ಲಸಿಕೆಯನ್ನು ನೀಡಲಾಗಿದೆ. ಇದು ಪ್ರತಿಶತ 100 ರಷ್ಟು ನೀಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ಪ್ರತೀ ಬುಧವಾರ ತಾಲೂಕು ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಬೇಕೆಂದು ಸೂಚನೆ ನೀಡಿದರು. ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕನಿಷ್ಠ ಸಂಖ್ಯೆಯ ಐಸೋಲೇಶನ್ ಬೆಡ್ಗಳನ್ನು ಮೀಸಲಿಡಬೇಕು ಎಂದ ಅವರು, ಪ್ರಕರಣಗಳ ಸಂಖ್ಯೆ ಏರಿಕೆಯಾದಲ್ಲಿ ನಿರ್ವಹಣೆಗೆ ಎಲ್ಲಾ ಹಂತಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸನ್ನದ್ಧರಾಗಿರಬೇಕು ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಹಾಗೂ ಆಕ್ಸಿಜಿನ್ ಪೂರೈಕಾ ಘಟಕಗಳ ವ್ಯವಸ್ಥೆಯನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ದುರಸ್ಥಿ ಅಗತ್ಯವಿದ್ದಲ್ಲಿ ಕೂಡಲೇ ಅವುಗಳನ್ನು ಸರಿಪಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿನಿಮಾ ಹಾಲ್, ಮಾಲ್, ಹೋಟೆಲ್ಗಳು ಸೇರಿದಂತೆ ಮತ್ತಿತರ ಒಳಾಂಗಣ ಪ್ರದೇಶದ ಚಟುವಟಿಕೆಗಳಲ್ಲಿ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದ ಅವರು, ಹೊರದೇಶದಿಂದ ಬಂದಿರುವವರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಹಿತಿ ಪಡೆದು ಅವರ ಮೇಲೆ ನಿಗಾವಹಿಸಬೇಕು ಎಂದರು. ತಾಲೂಕು, ಗ್ರಾಮ ಪಂಚಾಯತ್ ಮಟ್ಟಗಳ ಸಮಿತಿಗಳು ಕಾರ್ಯಪ್ರವೃತ್ತವಾಗಬೇಕು ಎಂದ ಅವರು, ಕೋವಿಡ್ ರೋಗಿಗಳಿಗೆ ಚಿಕಿತ್ಸೆಗಳನ್ನು ನೀಡುವುದರ ಜೊತೆಗೆ ಟೆಲಿ ಮೆಡಿಸನ್ ಮೂಲಕ ಸಹ ನೀಡಿ, ಜಿಲ್ಲೆಯಲ್ಲಿ ಕೋವಿಡ್ ಸಂಬಂಧ 24*7 ಸಹಾಯವಾಣಿ ಸಂಖ್ಯೆ 9663950222, 9663957222 ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದು, ಈಗಾಗಲೇ ವಿತರಿಸಲಾಗುತ್ತಿದೆ. ಆದರೆ ಕೋವಿಶೀಲ್ಡ್ ಲಸಿಕೆಯ ದಾಸ್ತಾನು ಇರುವುದಿಲ್ಲ. ಅಗತ್ಯವಿರುವವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಗಧಿತ ಮೊತ್ತ ಪಾವತಿಸಿ ಪಡೆಯಬಹುದಾಗಿದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಾಂಗಾಳ ಬ್ರಿಡ್ಜ್ ಬಳಿ ಖಾಲಿ ಟೆಂಪೋ ಪಲ್ಟಿ
Posted On: 28 Dec 2022, 08:41 AM
ಕಾಪು : ತಾಲೂಕಿನ ಪಾಂಗಾಳ ಗ್ರಾಮದ ಬ್ರಿಡ್ಜ್ ಬಳಿ ಟೆಂಪೋವೊಂದು ಮಂಗಳವಾರ ತಡರಾತ್ರಿ 2 ಗಂಟೆ ಹೊತ್ತಿಗೆ ಪಲ್ಟಿಯಾದ ಘಟನೆ ನಡೆದಿದೆ. ಇಷ್ಟರವರೆಗೂ ಈ ವಾಹನವು ಇಲ್ಲೇ ಉಳಿದಿದ್ದು ಇನ್ನು ತೆರವುಗೊಳಿಸಿಲ್ಲ.
ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ; ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 27 Dec 2022, 05:22 PM
ಕಟಪಾಡಿ : ಬಿಲ್ಲವ ಈಡಿಗ ನಾಮಧಾರಿ ಸೇರಿದಂತೆ 26 ಪಂಗಡಗಳ ಬೇಡಿಕೆಗಳ ಈಡೇರಿಕೆಗಾಗಿ ಕಲ್ಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಮತ್ತು ಸಮಾಜ ಭಾಂದವರ ನೇತೃತ್ವದಲ್ಲಿ ಜನವರಿ 06 ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ ನಡೆಯುವ ಐತಿಹಾಸಿಕ ಪಾದಯಾತ್ರೆಯ ಉಡುಪಿ ಜಿಲ್ಲಾ ಸಮಿತಿಯ ಆಮಂತ್ರಣ ಪತ್ರಿಕೆಯನ್ನು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಮಾಜದ ಹಿರಿಯರಾದ ಸುಧಾಕರ ಪೂಜಾರಿ ಪಾಂಗಳ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಐತಿಹಾಸಿಕ ಪಾದಯಾತ್ರೆ ಸಮಿತಿಯ ಗೌರವಾಧ್ಯಕ್ಷರಾದ ಉಮೇಶ್ ಪೂಜಾರಿ ಕೇಂಜ, ಮಾಧವ ಬನ್ನಂಜೆ, ರಾಮ ಟಿ. ಪೂಜಾರಿ ಸಂತೆಕಟ್ಟೆ, ಶಶಿಧರ ಮಲ್ಪೆ, ಪ್ರಭಾಕರ್ ಆರ್. ಸಾಲ್ಯಾನ್, ಸದಾನಂದ ನಾಯಗರ್, ದಿವಾಕರ ಸನಿಲ್, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಕೆ. ಅಮೀನ್, ಕಾರ್ಯಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ, ಸಂಚಾಲಕರಾದ ವಿಶುಕುಮಾರ್ ಸುವರ್ಣ ಕಲ್ಯಾಣಪುರ, ಚಲನ ಚಿತ್ರ ನಟ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ಕ್ಷೇತ್ರದ ಕಾರ್ಯದರ್ಶಿ ಶಿವಾನಂದ ಪೂಜಾರಿ, ಹರೀಶ್ ಕರ್ಕೇರ, ಚಂದ್ರ ಪೂಜಾರಿ, ಶಂಕರ್ ಪೂಜಾರಿ,ಶಿವಪ್ರಸಾದ್ ಪಾಲನ್ ಬೆಂಗ್ರೆ ಸಂತೋಷ್ ಜತ್ತನ್,ಬಾಲರಾಜ್ ಕೆಮ್ಮಣ್ಣು, ದಾಮೋದರ ಜತ್ತನ್ ಹೂಡೆ, ಉದಯ ಪೂಜಾರಿ ಕಂಡಾಳ, ಸಂಜಯ್ ಪೂಜಾರಿ,ಪ್ರವೀಣ್ ಪೂಜಾರಿ ಕುತ್ಯಾರ್, ಶರತ್ ಜತ್ತನ್, ಉದಯ ಸನಿಲ್ ಮತ್ತಿತ್ತರರು ಉಪಸ್ಥಿತರಿದ್ದರು.
ಮೂಲ್ಕಿ : ಮರ ಕಡಿಯುವ ವೇಳೆ ಮರದ ತುಂಡು ತಲೆಯ ಮೇಲೆ ಬಿದ್ದು ವ್ಯಕ್ತಿ ದುರ್ಮರಣ
Posted On: 27 Dec 2022, 04:14 PM
ಮೂಲ್ಕಿ : ಮೂಲ್ಕಿ - ಮೂಡಬಿದ್ರಿ ಕ್ಷೇತ್ರದ ಶಿಮಂತೂರ್ ಗ್ರಾಮದ ಬಲೆಪುವಿನಲ್ಲಿ ಉಮೇಶ್ ಕೆ. ಬಂಜನ್ ರವರು ಮರ ಕಡಿಯುವ ಸಂದರ್ಭದಲ್ಲಿ ಮರದ ತುಂಡು ತಲೆಯ ಮೇಲೆ ಬಿದ್ದು ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿದ್ದಾರೆ. ಈ ಬಗ್ಗೆ ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಕಾರ್ಯಕರ್ತ ಪ್ರಾಣೇಶ್ ಹೆಜಮಾಡಿ ಮೂಲ್ಕಿ - ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ಇವರಿಗೆ ಮನವಿ ನೀಡಿದ್ದು ತಕ್ಷಣ ಕುಟುಂಬ ವರ್ಗಕ್ಕೆ ಪರಿಹಾರ ಸಿಗುವಂತೆ ಆಗ್ರಹಿಸಿದ್ದಾರೆ.
ಬಟರ್ ಫ್ಲೈ ಗೆಸ್ಟ್ ಹೌಸ್ ಚಂದ್ರನಗರ ವತಿಯಿಂದ ಸಿ.ಸಿ.ಕ್ಯಾಮರ ಕೊಡುಗೆ
Posted On: 27 Dec 2022, 02:56 PM
ಚಂದ್ರನಗರ : ಕಾಪು ತಾಲೂಕಿನ ಕಳತ್ತೂರು ಚಂದನಗರ ಬಟರ್ ಫ್ಲೈ ಗೆಸ್ಟ್ ಹೌಸ್ ವತಿಯಿಂದ ಚಂದ್ರನಗರ ಮೇಲ್ ಪೇಟೆಯಲ್ಲಿ ಸಾರ್ವಜನಿಕರಿಗೋಸ್ಕರ 30,000 ವೆಚ್ಚದಲ್ಲಿ ಸಿ.ಸಿ.ಕ್ಯಾಮರ ಅಳವಡಿಸಿ ಇದನ್ನು ಶಿರ್ವ ಪೋಲಿಸ್ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಪು ಕ್ಷೇತ್ರದಲ್ಲಿ ಪ್ರಖ್ಯಾತ ಸಮಾಜ ಸೇವಕರಾಗಿರುವ ಫಾರೂಕ್ ಚಂದ್ರನಗರ ಮತ್ತು ಅವರ ಸಂಗಡಿಗರು ಸೇರಿಕೊಂಡು ಕೊರೋನಾ ಸಮಯದಲ್ಲಿ ಜನರಿಗೆ ತುಂಬಾ ಸಹಕಾರ ನೀಡಿದ್ದಲ್ಲದೇ, ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿ ಈ ಭಾಗದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದಲ್ಲದೇ ಇಲ್ಲಿ ಕೂಡಾ ಸಿ.ಸಿ.ಕ್ಯಾಮರ ಅಗತ್ಯವಿದ್ದು ಅಪರಾಧ ಕೇಸುಗಳನ್ನು ಪತ್ತೆ ಮಾಡಲು ತುಂಬಾ ಸಹಕಾರಿ ಆಗುತ್ತದೆ ಎಂದರು. ಈ ಸಮಾರಂಭದಲ್ಲಿ ಬಟರ್ ಫ್ಲೈ ಗೆಸ್ಟ್ ಹೌಸ್ನ ಮಾಲಕ ಮೊಹಮ್ಮದ್ ಫಾರೂಕ್ ಚಂದ್ರನಗರ, ಠಾಣಾ ಪ್ರೊಬೆಷನರಿ ಎಸ್.ಐ ಶಶಿಧರ, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಸಂಚಾಲಕ ದಿವಾಕರ ಡಿ ಶೆಟ್ಟಿ, ಉದ್ಯಮಿ ಉಮರಬ್ಬ ಚಂದ್ರನಗರ, ಶಿರ್ವ ಉದ್ಯಮಿ ಹೆಚ್ ಆರ್ ರೆಸಿಡೆನ್ಸಿ ಮಾಲಕ ಹಸನ್, ಶಿರ್ವ ಪಂಚಾಯತ್ ಸದಸ್ಯೆ ಶಾಂಭವಿ ಕುಲಾಲ್, ಭಾರತಿ ಶೆಟ್ಟಿಗಾರ ಮುಂತಾದವರು ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಪಿ.ಯು ಕಾಲೇಜು ವಾರ್ಷಿಕೋತ್ಸವ ಆವಿರ್ಭವ್ - 2022
Posted On: 27 Dec 2022, 02:39 PM
ಕಾರ್ಕಳ : ಗ್ರಾಮೀಣ ಪ್ರದೇಶದಲ್ಲಿ ಕ್ರಿಯೇಟಿವ್ನಂತಹ ವಿದ್ಯಾಸಂಸ್ಥೆಗಳು ಬಂದಲ್ಲಿ ಅಂತಹ ಪ್ರದೇಶ ಅಭಿವೃದ್ಧಿ ಹೊಂದುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಬದಲಾವಣೆಯಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ದೊರೆತಂತೆ ಆಗುತ್ತದೆ ಎಂದು ಮಾನ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಹೇಳಿದರು. ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಕ್ರಿಯೇಟಿವ್ ಆವಿರ್ಭವ್ -2022 ರ ವಾರ್ಷಿಕೋತ್ಸವದಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆ ʼಕ್ರಿಯೇಟಿವ್ ಹೊಂಗಿರಣʼ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಡಾ. ನರೇಂದ್ರ ರೈ ದೇರ್ಲ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಾಹಿತ್ಯದ ಮಾನವಿಕ ಅಂಶ ಪ್ರತಿ ವಿದ್ಯಾರ್ಥಿಯ ಗುರಿಯಾಗಬೇಕು. ಸಹಜ ಬದುಕು ಬದುಕಲು ಮಾನವನ ದುರಾಸೆ ಬಿಡುತ್ತಿಲ್ಲ ಮಾನವೀಯ ಮೌಲ್ಯಗಳೊಂದಿಗೆ ಜೀವಿಸಿ ಎಂದು ಕರೆ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಕಲೆ ಸಾಹಿತ್ಯದೊಂದಿಗೆ ಒಡನಾಟ ಬೆಳೆಸಿಕೊಂಡು ಪರಿಸರ ಪ್ರೀತಿಯೊಂದಿಗೆ ಬದುಕಲು ಕಲಿಯೋಣ ಎಂದು ಆಶಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ. ಸಂತೋಷ್ ಶೆಟ್ಟಿಯವರು ಪರಸ್ಪರ ಸಹಕಾರದ ಮೂಲಕ ಉತ್ತಮ ವಿದ್ಯಾಸಂಸ್ಥೆಯನ್ನು ಕಟ್ಟೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು ಹಾಗೂ 2022ನೇ ಇಸವಿಯಲ್ಲಿ ಪ್ರತಿಷ್ಠತ ಸಂಸ್ಥೆಗಳಲ್ಲಿ ಕಾಲೇಜಿನಲ್ಲಿ 16 ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಗೆ ಪ್ರವೇಶ ಪಡೆದ 17 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಟ್ಲ್ ಬ್ಯಾಡ್ಮಿಂಡನ್ ನಲ್ಲಿ ಜಿಲ್ಲಾಮಟ್ಟದಿಂದ ರಾಜ್ಯ ತಂಡಕ್ಕೆ ಆಯ್ಕೆಯಾದ ಕ್ರೀಡಾ ಪ್ರತಿಭೆ ಕು.ಲೇಖನಾ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ನಿಹಾರ್ ಭಟ್ ಮತ್ತು ಸುಮಂತ್ ಶೆಟ್ಟಿ, ಹಾಸನದಲ್ಲಿ ನಡೆದ ಮೈಸೂರು ವಿಭಾಗಮಟ್ಟದ ಪ್ರತಿಭಾ ಕಾರಂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ಅಜಯ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಬೆಳಿಗ್ಗೆ ಕುಂದಾಪುರದ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರಿಂದ ಹಾಸ್ಯಮಯ ನಗೆನಾಟಕ ನಡೆಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥಾಪಕರಲ್ಲೊಬ್ಬರಾದ ಅಶ್ವತ್ ಎಸ್.ಎಲ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಗಣಪತಿ ಭಟ್ ಕೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಆದರ್ಶ ಎಂ.ಕೆ, ವಿಮಲ್ರಾಜ್. ಜಿ, ಅಮೃತ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್ ಎಸ್.ಕೆ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಹೆಗಡೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ʼಕಲಾಸಿಂಧುʼ ವೇದಿಕೆಯಲ್ಲಿ ʼಭಾರತ ವೈಭವʼ ಪರಿಕಲ್ಪನೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕುಲಾಲ ಸಂಘ ನಾನಿಲ್ತಾರ್ ಮುಂಡ್ಕೂರು : 34ನೇ ವರ್ಷದ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ವೈದ್ಯಕೀಯ ನೆರವು, ಸಾಂಸ್ಕೃತಿಕ, ಅಭಿನಂದನ ಕಾರ್ಯಕ್ರಮ
Posted On: 27 Dec 2022, 02:25 PM
ಕಾಪು : ಸಮಾಜದ ಅತ್ಯಂತ ಹಿಂದುಳಿದ ಸಮಾಜವನ್ನು ಗುರುತಿಸಿ ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಅನುದಾನಗಳನ್ನು ದೊರಕಿಸಿ ಕೊಡುವ ನಿರಂತರ ಪ್ರಯತ್ನಗಳನ್ನು ಮಾಡಲಾಗುವುದು. ಸಂಘವು ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿ ನಿರಂತರ ಚಟುವಟಿಕೆಗಳನ್ನು ನೀಡುವುದು ತುಂಬಾ ಹೆಮ್ಮೆಯಾಗಿದೆ ಎಂದು ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನೀಲ್ ಕುಮಾರ್ ಹೇಳಿದರು. ಅವರು ಡಿಸೆಂಬರ್ 25 ರಂದು ಕುಲಾಲ ಸಂಘ ನಾನಿಲ್ತಾರ್ (ರಿ.) ಮುಂಡ್ಕೂರು ಇದರ 34ನೇ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ವೈದ್ಯಕೀಯ ನೆರವು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ವಹಿಸಿದ್ದರು. ರಾಜ್ಯ ಸರಕಾರದಿಂದ ಡಿ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾದ ಡಾ| ಅಣ್ಣಯ್ಯ ಕುಲಾಲ್ ದಂಪತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐತು ಕುಲಾಲ್ ಕನ್ಯಾನ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಮುಂಬೈ ಉದ್ಯಮಿ ಸುನಿಲ್ ಸಾಲ್ಯಾನ್, ಮುಂಬೈ ಕುಲಾಲ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ದೇವ್ ದಾಸ್ ಕುಲಾಲ್, ವಕೀಲರಾದ ಸುನೀಲ್ ಎಸ್ ಮೂಲ್ಯ, ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಪ್ರತೀಮಾ ಶ್ರೀಧರ್, ಯುವ ವೇದಿಕೆ ಅಧ್ಯಕ್ಷರಾದ ದೀಪಕ್ ಬೆಳ್ಮಣ್, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಿತ, ಮುಂಬೈ ಸುಕುಮಾರ್ ಸಾಲ್ಯಾನ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೇಲಾಡಿ, ಜಯರಾಮ್ ಕುಲಾಲ್ ಅಗರಟ್ಟ, ಮಂಜ್ಜಪ ಮೂಲ್ಯ, ಜಗನ್ನಾಥ ಮೂಲ್ಯ ಬೆಳ್ಮಣ್, ಗೋಪಾಲ್ ಮೂಲ್ಯ, ರತ್ನ ಜಿ ಮೂಲ್ಯ, ಸಂತೋಷ್ ಕುಲಾಲ್, ಲೋಕೆಶ್ ಕುಲಾಲ್, ಚಂದ್ರಹಾಸ್ ಕುಲಾಲ್, ಗಣೇಶ್ ಮೂಲ್ಯ ಬೋಳ, ಶಿಕ್ಷಕರಾದ ದೇವಿಪ್ರಸಾದ್ ಸ್ವಾಗತಿಸಿದರು. ಆಶಾ ವರದರಾಜ್ ವಂದಿಸಿದರು.
ಡಿಸೆಂಬರ್ 29ರಂದು ವಿದ್ಯುತ್ ವ್ಯತ್ಯಯ
Posted On: 26 Dec 2022, 11:54 PM
ಉಡುಪಿ : ಉದ್ಯಾವರ ಎಂ.ಯು.ಎಸ್.ಎಸ್ ನಿಂದ ಹೊರಡುವ ಸಂಪಿಗೆನಗರ ಮತ್ತು ಕಡೆಕಾರ್ ಫೀಡರ್ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಾಲ್ಮರ, ಕಲಾಯಿಬೈಲು, ಸಂಪಿಗೆನಗರ, ಕುತ್ಪಾಡಿ, ಅನಂತಕೃಷ್ಣನಗರ, ಕಡೆಕಾರು, ಕಿದಿಯೂರು, ಪಡುಕೆರೆ, ಕನ್ನರ್ಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್ಪ್ರೆಸ್ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 29 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸಾಲ ಸೌಲಭ್ಯ : ಅರ್ಜಿ ಆಹ್ವಾನ
Posted On: 26 Dec 2022, 11:42 PM
ಉಡುಪಿ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಫಾಯಿ ಕರ್ಮಚಾರಿ/ ಮ್ಯಾನುವಲ್ ಸ್ಕಾವೆಂರ್ಸ್ ಹಾಗೂ ಅವರ ಅವಲಂಬಿತರ ಆರ್ಥಿಕ ಅಭಿವೃದ್ಧಿಗಾಗಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ (ದ್ವಿ-ಚಕ್ರ / ತ್ರಿ-ಚಕ್ರ ಸರಕು ಸಾಗಾಣಿಕೆ ವಾಹನ) ಸಾಲ ಸೌಲಭ್ಯ ಪಡೆಯಲು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574884 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
