Updated News From Kaup

ಉಡುಪಿ : ನಾರಾಯಣಗುರುಗಳ ವಿಷಯವನ್ನು ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ ಅಪರಾಧ ; ಸರಿಪಡಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

Thumbnail
Posted On: 08 Jul 2022, 05:40 PM

ಉಡುಪಿ : ಎಸೆಸೆಲ್ಸಿ ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ಬಿಲ್ಲವ ಸಮಾಜದ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು. ಈ ವೇಳೆ ಪ್ರೆತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲೆಯ ಬಿಲ್ಲವ ಮುಖಂಡರು‌ ರಾಜಕೀಯ ಮುಖಂಡರು ಈ ತಪ್ಪನ್ಬು ಸರಿಪಡಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ನಾರಾಯಣ ಗುರುಗಳು ಅಸ್ಪೃಶ್ಯ ಸಮಾಜಕ್ಕೆ ಬೆಳಕು ನೀಡಿದವರು. ಅವರ ಪಠ್ಯವನ್ನು ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ ಅಪರಾಧ. ಈ ತಪ್ಪನ್ನು ಸರಕಾರ ಸರಿಪಡಿಸಬೇಕು ಎಂದರು. ಭಾರೀ ಸಂಖ್ಯೆಯ ಬಿಲ್ಲವರು ಪಕ್ಷಬೇಧ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವಕೀಲರಾದ ಪದ್ಮರಾಜ್ ಮಂಗಳೂರು, ಕಟಪಾಡಿ ಶಂಕರ್ ಪೂಜಾರಿ, ರಮೇಶ್ ಕಾಂಚನ್ ,ವಿಶ್ವನಾಥ ಕ್ಷೇತ್ರದ ಪದಾಧಿಕಾರಿಗಳು, ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.

ಉಡುಪಿ : ಮುನ್ನೆಚ್ಚರಿಕೆ ವಹಿಸಿ, ಅವಘಡ ತಪ್ಪಿಸಿ - ಉಸ್ತುವಾರಿ ಸಚಿವ ಎಸ್.ಅಂಗಾರ

Thumbnail
Posted On: 08 Jul 2022, 05:15 PM

ಉಡುಪಿ : ಪ್ರಸಕ್ತ ಮಳೆಗಾಲದಲ್ಲಿ ಯಾವುದೇ ಜೀವ ಹಾಗೂ ಜಾನುವಾರು ಹಾನಿಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ ಅವಘಢಗಳು ನಡೆಯದಂತೆ ತಪ್ಪಿಸಬೇಕೆಂದು ಅಧಿಕಾರಿಗಳಿಗೆ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿವೃಷ್ಠಿಯಿಂದಾಗಿ ಮನೆಗಳು ಹಾನಿ ಉಂಟಾದ ಸಂದರ್ಭದಲ್ಲಿ ನಷ್ಠ ಪರಿಹಾರ ಅಂದಾಜಿಸುವಾಗ ಹಾನಿಯ ವಸ್ತುಸ್ಥಿತಿಯನ್ನು ವೈಜ್ಞಾನಿಕವಾಗಿ ಅಂದಾಜಿಸಿ ಗ್ರಾಮ ಲೆಕ್ಕಿಗರು ಪ್ರಾಥಮಿಕ ವರದಿಯನ್ನು ಸಲ್ಲಿಸಬೇಕು. ಅದರ ಆಧಾರದ ಮೇಲೆ ಹಾನಿಯ ಪ್ರಮಾಣವನ್ನು ಇಂಜಿನಿಯರ್ ಗಳು ನಿರ್ಧರಿಸುವುದು ಸೂಕ್ತ ಎಂದರು. ಕೆಲವೊಮ್ಮೆ ಮಳೆಯ ನೀರಿನಿಂದ ಮನೆಗಳ ತಳಪಾಯಗಳು ಹಾನಿಯಾದಲ್ಲಿ ಅಂತಹ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕಾಗುತ್ತದೆ ಅವು ದುರಸ್ಥಿಗೆ ಯೋಗ್ಯವಾಗಿರುವುದಿಲ್ಲ ಇಂತಹವುಗಳನ್ನು ಅಂದಾಜಿಸುವಾಗ ಹಾನಿಯು ಸೂಕ್ಷ್ಮತೆಯನ್ನು ಆಧರಿಸಿ ವರದಿ ನೀಡಬೇಕಾಗುತ್ತದೆ ಎಂದರು. ಮಳೆಯ ನೀರು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಂತು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ ಈ ರಸ್ತೆಗಳ ಬದಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆಯನ್ನು ಮಾಡಬೇಕು. ರಾತ್ರಿ ವೇಳೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲು ಹೆದ್ದಾರಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿದಿಂದ ಹಲವು ಬಾರಿ, ರಸ್ತೆಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸೂಚನೆಗಳನ್ನು ನೀಡಿದ್ದರೂ ಯಾವುದೇ ಕ್ರಮಗಳು ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ ಸಾರ್ವಜನಿಕರಿಂದ ಈ ಬಗ್ಗೆ ಹೆಚ್ಚಿನ ದೂರುಗಳು ಸಹ ಬರುತ್ತಿವೆ. ಸಭೆಗೆ ಹಾಜರಾಗಲೂ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಹಾಜರಾಗದೇ ಗುತ್ತಿಗೆದಾರರ ಇಂಜಿನಿಯರ್ ಗಳು ಹಾಜರಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಅಸಮರ್ಪಕ ನಿರ್ಮಾಣದಿಂದ ರಸ್ತೆ ಅಪಘಾತಗಳು ಉಂಟಾದಲ್ಲಿ ಸಂಬಂಧಿಸಿದ ಇಂಜಿನಿಯರ್ ಮೇಲೆ ಕಾನೂನು ಪ್ರಕರಣಗಳನ್ನು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಯಾವುದೇ ಕಟ್ಟಡ ಸೇರಿದಂತೆ ಮತ್ತಿತರೆ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನಿರ್ಮಾಣ ಸ್ಥಳದ ವಸ್ತು ಸ್ಥಿತಿಗನುಗುಣವಾಗಿ ನೀಲಿ ನಕ್ಷೆಯನ್ನು ತಯಾರಿಸಿ ಕಾಮಗಾರಿ ಕೈಗೊಂಡಾಗ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಈ ಬಗ್ಗೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾನ್ಸೂನ್ ಮಳೆಗಾಲದಲ್ಲಿ ಕಡಲ ಕೊರೆತ ಉಂಟಾಗಿ ಸಾರ್ವಜನಿಕರು ಜನಪ್ರತಿನಿಧಿಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವುದು ಹಲವು ವರ್ಷಗಳಿಂದ ಸಾಮಾನ್ಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವಾಗಿದ್ದು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಡಕ್ ಫೂಟ್ ಅಥವಾ ಸೀ ವೇವ್ ಬ್ರೇಕ್ ತಂತ್ರಜ್ಞಾನ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆಗೆ ಕರಾವಳಿ ಭಾಗದ ಎಲ್ಲಾ ಸಚಿವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ ಎಂದರು. ಪೂರ್ಣ ಪ್ರಮಾಣದ ಮನೆಹಾನಿಗೊಳಗಾದವರಿಗೆ ಎನ್.ಡಿ.ಆರ್ಎಫ್ ನಿಯಮಾವಳಿಯನ್ವಯ ಪರಿಹಾರದ ಮೊತ್ತದ ಜೊತೆಗೆ ನೂತನ ಗೃಹ ನಿರ್ಮಾಣಕ್ಕೆ ವಸತಿ ಯೋಜನೆಯಡಿ ಸೌಲಭ್ಯವನ್ನು ಒದಗಿಸಿ ಶಾಶ್ವತ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಹೆಚ್ಚಾಗಿ ಸಿಡಿಲು ಪ್ರಕರಣಗಳು ಬಯಲು ಪದೇಶ ಹೊಂದಿರುವ ಕಾರ್ಕಳ ತಾಲೂಕಿನಲ್ಲಿ ಸಂಭವಿಸುತ್ತಿವೆ. ಕಳೆದ 5 ವರ್ಷಗಳಿಂದ ಉಂಟಾಗಿರುವ ಇಂತಹ ಪ್ರಕರಣಗಳ ಮಾಹಿತಿಗಳನ್ನು ಕ್ರೋಢಿಕರಿಸುವುದರೊಂದಿಗೆ ತಜ್ಞರಿಂದ ವರದಿಯನ್ನು ತಯಾರಿಸಿ, ಸಿಡಿಲಿನಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ 2 ಮನೆಗಳು ಪೂರ್ಣ ಪ್ರಮಾಣದಲ್ಲಿ, 48 ಮನೆಗಳು ಭಾಗಶಃ ಹಾನಿಗೊಳಗಾಗಿವೆ . ಜನವರಿಯಿಂದ ಈವರೆಗೆ ಸಿಡಿಲು ಬಡಿತಕ್ಕೆ 1 ಮಾನವ ಜೀವ ಹಾನಿ, 2 ಜಾನುವಾರು ಹಾನಿ, ಪೂರ್ಣ ಪ್ರಮಾಣದ ಮನೆ ಹಾನಿ 10 ಆಗಿದ್ದು, 189 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿರುತ್ತದೆ . ಜಿಲ್ಲೆಯಲ್ಲಿ ಈವರೆಗೆ 10.63 ಕೋಟಿಯಷ್ಟು ಅಂದಾಜು ನಷ್ಠ ವಾಗಿದ್ದು, ಮೂಲ ಸೌಕರ್ಯಗಳಾದ ರಸ್ತೆ, ಸೇತುವೆ, ವಿದ್ಯುತ್ ಸರಬರಾಜು ಪರಿಕರಗಳು,ಸರ್ಕಾರಿ ಕಟ್ಟಡಗಳು ಸೇರಿದಂತೆ ಮತ್ತಿತರೆ ಅಂದಾಜು 11.99 ಕೋಟಿಯಷ್ಟು ನಷ್ಠ ಉಂಟಾಗಿರುತ್ತದೆ. ಸಭೆಯಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ವಿಷ್ಣುವರ್ಧನ್, ಡಿಎಫ್ಓ ಆಶೀಶ್ ರೆಡ್ಡಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು : ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆ

Thumbnail
Posted On: 08 Jul 2022, 12:52 PM

ಕಾಪು : ಇಲ್ಲಿನ ಉಳಿಯಾರಗೋಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ವೊಂದರಿಂದ ಲಿಕ್ವಿಡ್ ಸೋರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿತ್ತು. ಮಂಗಳೂರು ಕಡೆಗೆ ತೆರಳುತ್ತಿರುವ ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆಯಾಗುತ್ತಿದ್ದು, ಸುತ್ತಲೂ ಹೊಗೆ ಆವರಿಸಿಕೊಂಡಿತ್ತು. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯ ವಾಗಬೇಕಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುರತ್ಕಲ್ : ಸಂಸದರು, ಶಾಸಕರು ಅಕ್ರಮ ಟೋಲ್ ಪರ - ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪ ; ಸುರತ್ಕಲ್ ಟೋಲ್ ಗೇಟ್ಗೆ ಮುತ್ತಿಗೆ ನಿರ್ಧಾರ

Thumbnail
Posted On: 07 Jul 2022, 11:04 PM

ಸುರತ್ಕಲ್ : ವಿಲೀನದ ನಿರ್ಣಯ, ಹೆದ್ದಾರಿ ಸಚಿವರ ಭರವಸೆ, ಸತತ ಹೋರಾಟಗಳ ಹೊರತಾಗಿಯೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಯಲು ಸ್ಥಳೀಯ ಸಂಸದ, ಶಾಸಕರುಗಳೇ ಕಾರಣ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸುಂಕ ಸಂಗ್ರಹದ ಗುತ್ತಿಗೆದಾರರು ಅಕ್ರಮ ಟೋಲ್ ಗೇಟ್ ಪರ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಆರೋಪಿಸಿದೆ‌. ಇಂದು ಸುರತ್ಕಲ್ ನ ಖಾಸಗಿ ಹೊಟೇಲ್ ನಲ್ಲಿ ನಡೆದ ಹೋರಾಟ ಸಮಿತಿಯ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು‌. ಸಂಸದರು, ಶಾಸಕರು ಅಕ್ರಮ ಟೋಲ್ ಗೇಟ್ ಮುಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಸಭೆ ನಿರ್ಧರಿಸಿತು. ಮಾರ್ಚ್ 22 ರಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ನೀಡಿದ ಭರವಸೆಯ ನಂತರದ ಬೆಳವಣಿಗೆಗಳನ್ನು ಸಭೆ ಚರ್ಚಿಸಿತು. 2018 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡ ನಿರ್ಣಯದ ಪ್ರಕಾರ ಸುರತ್ಕಲ್ ಟೋಲ್ ಗೇಟ್ ವರ್ಷಗಳ ಹಿಂದೆಯೇ ತೆರವುಗೊಳ್ಳಬೇಕಿತ್ತು. ದಿನವೊಂದಕ್ಕೆ 15 ಲಕ್ಷ ರೂಪಾಯಿಗೂ ಹೆಚ್ಚು ಸುಂಕ ಸಂಗ್ರಹ ಆಗುವ ಸುರತ್ಕಲ್ ಟೋಲ್ ನಲ್ಲಿ ಸುಂಕ ಸಂಗ್ರಹ ಗುತ್ತಿಗೆ ಮಾಫಿಯಾ ಆಗಿ ಬೆಳೆದಿದೆ. ಅದಲ್ಲದೆ ಇದೇ ರಸ್ತೆ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ವರ್ಷವೊಂದಕ್ಕೆ ಖಾಸಗಿ ಏಜನ್ಸಿಗೆ ಗುತ್ತಿಗೆ ನೀಡಲಾಗುತ್ತಿದೆ‌. ಈ ಹತ್ತಾರು ಕೋಟಿ ರೂಪಾಯಿ ಲಾಭದ ವ್ಯವಹಾರದ ಹಿತಾಸಕ್ತಿ ಟೋಲ್ ಗೇಟ್ ತೆರವಿಗೆ ದೊಡ್ಡ ಅಡ್ಡಿಯಾಗಿದೆ. ಇಂತಹ ಹಿತಾಸಕ್ತಿಗಳ ಪರವಾಗಿ ಸಂಸದರು, ಶಾಸಕರು ನಿಂತಿದ್ದಾರೆ ಎಂದು ಹೋರಾಟ ಸಮಿತಿ ಸಭೆ ಗಂಭೀರ ಆರೋಪ ಮಾಡಿದೆ. ರಸ್ತೆ ನಿರ್ವಹಣೆ ಗುತ್ತಿಗೆ ಪಡೆದ ಕಂಪೆನಿ ಮಳೆಗಾಲದ ಮುಂಚಿತವಾಗಿ ದುರಸ್ತಿ ಕೆಲಸ ನಡೆಸದಿರುವುದರಿಂದ ಹೆದ್ದಾರಿ ಪೂರ್ತಿ ಗುಂಡಿಮಯವಾಗಿ ಸಂಚಾರ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಕೂಳೂರು ಹೊಸ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಹಳೆ ಸೇತುವೆ ಪ್ರಯಾಣಕ್ಕೆ ಅಯೋಗ್ಯ ಸ್ಥಿತಿಗೆ ತಲುಪಿದೆ. ಇಂತಹ ಕೆಟ್ಟ ರಸ್ತೆಗೆ ಬಲವಂತದಿಂದ ಟೋಲ್ ಪಾವತಿ ಮಾಡುವ ಸ್ಥಿತಿ ವಾಹನ ಸವಾರರಿಗೆ ಬಂದೊದಗಿದೆ. ಜನತೆ ಈ ಕುರಿತು ಆಕ್ರೋಶಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕರುಗಳ ಕರ್ತವ್ಯ ಚ್ಯುತಿಯ ಕುರಿತು ಸಚಿವ ನಿತಿನ್ ಗಡ್ಕರಿಗೆ ವಿವರವಾದ ಪತ್ರ ಬರೆಯಲು ಹೋರಾಟ ಸಮಿತಿ ನಿರ್ಧರಿಸಿತು ಹಾಗೂ ಟೋಲ್ ಗುತ್ತಿಗೆ ನವೀಕರಣ ಪ್ರಕ್ರಿಯೆ ಕೈ ಬಿಟ್ಟು, ಟೋಲ್ ಗೇಟ್ ತೆರವಿಗೆ ತಕ್ಷಣ ಕ್ರಮಗಳನ್ನು ಜನಪ್ರತಿನಿಧಿಗಳು ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಸಮಿತಿ ಸಭೆ ತೀರ್ಮಾನಿಸಿತು‌. ಸಭೆಯ ಅಧ್ಯಕ್ಷತೆಯನ್ನು ವಸಂತ ಬೆರ್ನಾಡ್ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ವಿವಿಧ ಸಂಘಟನೆಗಳ ಪ್ರಮುಖರಾದ ವೈ ರಾಘವೇಂದ್ರ ರಾವ್, ಮೂಸಬ್ಬ ಪಕ್ಷಿಕೆರೆ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಹರೀಶ್ ಪೇಜಾವರ, ಯೋಗೀಶ್ ಕೋಟ್ಯಾನ್ ಮುಲ್ಕಿ, ರಾಜೇಶ್ ಪೂಜಾರಿ ಕುಳಾಯಿ, ಟಿ ಎನ್ ರಮೇಶ್ ಸುರತ್ಕಲ್, ಸಲೀಂ ಶ್ಯಾಡೋ, ರಮೀಝ್ ಪಡುಬಿದ್ರೆ, ಶ್ರೀಕಾಂತ್ ಸಾಲ್ಯಾನ್, ಶ್ರೀನಾಥ್ ಕುಲಾಲ್, ರಶೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು‌.

ನಿರಂತರ ಮಳೆ - ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜುಲೈ 8 ಮತ್ತು 9ರಂದು ರಜೆ

Thumbnail
Posted On: 07 Jul 2022, 07:50 PM

ಉಡುಪಿ/ಮಂಗಳೂರು : ಕಳೆದ ಕೆಲ ದಿನಗಳಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದ್ದು ನಾಳೆಯೂ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜುಲೈ 8ಮತ್ತು 9 ರಂದು ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶ ಹೊರಡಿಸಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜುಲೈ 8 ಮತ್ತು 9 ರಂದು ರಂದು ಉಭಯ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ,ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ, ಸೇರಿದಂತೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವರುಣಾರ್ಭಟ : ಭಾರಿ ಮಳೆ ಸಾಧ್ಯತೆ ; ಜುಲೈ 9ರವರೆಗೆ ಉಡುಪಿ, ದ.ಕ, ಉ.ಕ ಜಿಲ್ಲೆಯಲ್ಲಿ ರೆಡ್ ಅಲಟ್೯

Thumbnail
Posted On: 07 Jul 2022, 06:59 PM

ಕಾಪು : ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರವರೆಗೆ ರೆಡ್ ಅಲಟ್೯ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಜುಲೈ 7 ರಂದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಜುಲೈ 8 ಮತ್ತು 9 ರವರೆಗೆ ವಿಸ್ತರಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ, ಕರಾವಳಿಯ ಎಲ್ಲಾ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

NSCDF ಸಂಸ್ಕೃತಿ ಜಾತ್ರೆ - ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾಗಿದೆ : ಅರಳಿ ನಾಗರಾಜ್

Thumbnail
Posted On: 07 Jul 2022, 11:44 AM

ಮಂಗಳೂರು : ಪರಿಸರ ಅಂದರೆ ಗಿಡ ನೆಡುವುದು ನೀರು ಉಳಿಸುವುದು ಎಂದು ಭಾಷಣ ಮಾಡುತ್ತೇವೆ ಕಾರ್ಬನ ಡೈಆಕ್ಸೈಡ್ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು ಎಂದೆಲ್ಲ ಹೇಳಿಕೊಳ್ಳುತ್ತೇವೆಯೇ ಹೊರತು ಸಾಮಾಜಿಕ ಪರಿಸರ, ರಾಜಕೀಯ ಪರಿಸರ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಇದು ಅತ್ಯಂತ ಖೇದಕರ ಸಂಗತಿ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪುರ ಭವನದಲ್ಲಿ ಜುಲೈ ಮೂರರಂದು ಆಯೋಜಿಸಿದ್ದ ಒಂದು ದಿನದ ಸಂಸ್ಕೃತಿ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕೋವಿಡ್ ನಂತಹ ಪರಿಸ್ಥಿತಿಯಲ್ಲೂ ದೇಶ ಮುನ್ನಡೆದಿದೆ. ವಿದೇಶಗಳಿಗೆ ಔಷಧಿ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅದೇ ರೀತಿ ಬ್ರಷ್ಟಾಚಾರದಂತಹ ಪಿಡುಗು ಕೂಡಾ ವ್ಯಾಪಕವಾಗಿ ಹರಡಿಕೊಂಡಿದೆ. ಇಂದು ಪೂರ್ಣಾಂಕ ಪಡೆದ ಮಕ್ಕಳಿಗೆ ಮಾನ್ಯತೆ ಇಲ್ಲ. ಲಕ್ಷಾಂತರ ರುಪಾಯಿ ನೀಡಿ ಸೀಟು ಗಿಟ್ಟಿಸಿ ಕೊಂಡ ವಿದ್ಯಾರ್ಥಿಗಳು ಬಳಿಕ ಬ್ರಷ್ಟರಾಗದೆ ಇರುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಇದನ್ನ ತಡೆಯಬೇಕಾದರೆ ಇಂದಿನ ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು. ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿ ಪಾಡಿ ಮಾತನಾಡಿ NSCDF ಒಂದು ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ . ಈ ಕಾರಣದಿಂದಾಗಿಯೇ ಅವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸಾಮಾಜಿಕ ವಿಜ್ಞಾನಿ ಡಾ. ಎಂ ಪಿ. ವರ್ಷ , ಸಾಹಿತ್ಯ ಕ್ಷೇತ್ರದಲ್ಲಿ ಪಿ.ವಿ.ಪ್ರದೀಪ್ ಕುಮಾರ್, ನೃತ್ಯ ಕ್ಷೇತ್ರದಲ್ಲಿ ಲಾಲಿತ್ಯ ಕುಮಾರ್ ಬೇಲೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕವಿಗೋಷ್ಠಿ ಅಧ್ಯಕ್ಷೆ ಉಪನ್ಯಾಸಕಿ ಮಾನ್ವಿ, ಕವಿಗೋಷ್ಟಿ ಸಂಚಾಲಕಿ ಮಾನಸ ಪ್ರವೀಣ್ ಭಟ್ ಉಪಸ್ಥಿತರಿದ್ದರು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿ, ಯಕ್ಷಗಾನ ಹಾಗೂ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪಾಂಬೂರು : ಕಾಣೆಯಾಗಿದ್ದ ವ್ಯಕ್ತಿ ಪತ್ತೆ

Thumbnail
Posted On: 06 Jul 2022, 01:58 PM

ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್ ರಾವ್ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರು ಉಡುಪಿಯ ಕಲ್ಯಾಣಪುರ, ಸಂತೆಕಟ್ಟೆ ಬಳಿ ಪತ್ತೆಯಾಗಿದ್ದಾರೆ. ಇವರು ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದು ಹಣ ನೀಡದೆ ಮಾಲಿಕರಿಗೆ ಬೆದರಿಕೆ

Thumbnail
Posted On: 06 Jul 2022, 12:00 PM

ಮಣಿಪಾಲ : ಹೋಟೆಲ್ ಗೆ ಆಗಮಿಸಿ ಹೊಟ್ಟೆ ತುಂಬಾ ತಿಂದು ಹಣವನ್ನು ಕೊಡದೆ ಹೋಟೆಲ್ ಮಾಲಿಕರಿಗೆ ಬೆದರಿಕೆಯೊಡ್ಡಿದ ಘಟನೆ ಮುರ್ಡೇಶ್ವರ ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಜುಲೈ 5ರಂದು ನಡೆದಿದೆ. ಹಬೀಬುಲ್ಲಾ ಇವರ ಹೋಟೆಲ್ ಗೆ ಮೊಹಮ್ಮದ್ ಅನ್ವರ್ ಎಂಬಾತ ಕಾರಿನಲ್ಲಿ ಬಂದು ತಿಂಡಿ ತಿಂದು ಚಾ ಕುಡಿದು ಅದರ ಹಣವನ್ನು ಪಾವತಿಸದೇ ಕಾರಿನ ಬಳಿ ಹೋದಾಗ ಮಾಲಿಕರು ಹಣವನ್ನು ಕೇಳಿದಾಗ ಕೈಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ ತರಹ ಇರುವ ಒಂದು ವಸ್ತುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಬೂರು : ವ್ಯಕ್ತಿಯೋರ್ವ ಕಾಣೆ

Thumbnail
Posted On: 06 Jul 2022, 11:37 AM

ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್‌ ರಾವ್‌ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಜಾತ ರಾವ್‌ ಎಂಬುವವರು ನೀಡಿದ ದೂರಿನಂತೆ ಅವರ ಗಂಡ ಶಿವರಾಯ ರಾವ್‌ ಮತ್ತು ತಂದೆ ಲಕ್ಷ್ಮಣ್‌ ರಾವ್‌ ರವರು ಉಡುಪಿ ಬನ್ನಂಜೆಯ ಕೆನರಾ ಬ್ಯಾಂಕ್‌ ವ್ಯವಹಾರದ ಬಗ್ಗೆ ಬಸ್ಸಿನಲ್ಲಿ ಬಂದವರು ಉಡುಪಿಯ ಕೆಎಂ ಮಾರ್ಗದ ಬಳಿ ಬಸ್ಸಿನಿಂದ ಇಳಿದಿದ್ದು, ಶಿವರಾಯ ರಾವ್‌ರವರು ಲಕ್ಷ್ಮಣ ರಾವ್‌ರವರನ್ನು ಅಲ್ಲಿಯೇ ನಿಲ್ಲಲು ಹೇಳಿ ರಾಧಾ ಮೆಡಿಕಲ್‌ಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ವಾಪಾಸು ಹಿಂತಿರುಗಿ ಬಂದು ನೋಡಿದಾಗ ಲಕ್ಷ್ಮಣ ರಾವ್‌ರವರು ಅಲ್ಲಿರಲಿಲ್ಲ. ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.