Updated News From Kaup

ಉದ್ಯಾವರ : ಹೃದಯಾಘಾತದಿಂದ ಮಹಿಳೆ ಸಾವು

Thumbnail
Posted On: 30 Jun 2022, 07:59 PM

ಉದ್ಯಾವರ : ಇಲ್ಲಿನ ಗುಡ್ಡೆಅಂಗಡಿ ಉದ್ಯಾವರದ ವಸಂತಿ (55) ರವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜೂನ್ 30 ರಂದು ನಡೆದಿದೆ. ಕಂಟ್ಟಿಂಗೇರಿಯಲ್ಲಿರುವ ಬ್ಯಾಂಕ್ ಒಂದರಲ್ಲಿ ಉದ್ಯೋಗ ಮಾಡಿಕೊಂಡಿರುವ ಇವರು ಬೆಳಿಗ್ಗೆ 8:30 ಗಂಟೆಗೆ ಬ್ಯಾಂಕ್‌ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್‌ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಿದ್ದಾಗ ಕುಸಿದು ಬಿದ್ದವರನ್ನು ಸ್ಥಳೀಯ ರಿಕ್ಷಾದವರು ಒಂದು ರಿಕ್ಷಾದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ವಸಂತಿರವರಿಗೆ ಮಧುಮೇಹದ ಖಾಯಿಲೆ ಇದ್ದು ಒಂದೂವರೆ ವರ್ಷದ ಮೊದಲು ಎದೆ ಬಡಿತದ ಸಮಸ್ಯೆ ಕಾಣಿಸಿಕೊಂಡಿದ್ದು ಈ ಬಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವಸಂತಿಯವರು ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ : ಭಾರೀ ಮಳೆಯ ಸಾಧ್ಯತೆ - ಶಾಲಾ,ಕಾಲೇಜುಗಳಿಗೆ ರಜೆ

Thumbnail
Posted On: 30 Jun 2022, 07:55 PM

ಉಡುಪಿ : ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗರೂಕತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ - ಜುಲೈ 1ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ. ಜುಲೈ 1 ರಿಂದ 4 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ,ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 30 ಮತ್ತು ಜುಲೈ ಒಂದರಂದು ಆರೆಂಜ್ ಅಲರ್ಟ್ ಜೂನ್ 2 ರಿಂದ ಜೂನ್ ನಾಲ್ಕರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಟಪಾಡಿ : ಶ್ರೇಷ್ಠ ನಾದಸ್ವರ ವಾದಕ ಅಗ್ರಹಾರ ಚಂದಯ್ಯ ಶೇರಿಗಾರ್ ವಿಧಿವಶ

Thumbnail
Posted On: 30 Jun 2022, 07:01 PM

ಕಟಪಾಡಿ : ನಾಡಿನ ಶ್ರೇಷ್ಠ ನಾದಸ್ವರ ವಾದಕರಾಗಿ ಹೆಸರುವಾಸಿಯಾಗಿರುವ ಅಗ್ರಹಾರ ಚಂದಯ್ಯ ಶೇರಿಗಾರ್ ರವರು ಜೂನ್ 30 ರ ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದರು. ಶ್ರೀಯುತ ಅಪ್ಪು ಶೇರಿಗಾರ್ ಹಾಗೂ ಶ್ರೀಮತಿ ಸೀತು ಸೇರಿಗಾರ್ತಿ ರವರ ಸುಪುತ್ರರು. ಬಾಲ್ಯದಿಂದಲೇ ತಂದೆಯಿಂದ ನಾಗಸ್ವರ ವಾದನವನ್ನು ಕರಗತ ಮಾಡಿಕೊಂಡು ಎಲ್ಲರ ಜನಮನ ಗೆದ್ದವರು. ಹಲವಾರು ಸನ್ಮಾನಗಳಿಗೆ ಭಾಜನರಾದರು. ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ. ಇವರು ನೀಡಿದ ಕೊಡುಗೆಗೆ ಸನ್ಮಾನ ನೀಡಿದ ಸಂಘ ಸಂಸ್ಥೆಗಳು : ಸಾವಿರಾಳು ಧೂಮಾವತಿ ದೈವಸ್ಥಾನ ಫಾರೆಸ್ಟ್ ಗೇಟ್ ಏಣಗುಡ್ಡೆ ಕಟಪಾಡಿ, ಲಯನ್ಸ್ ಕ್ಲಬ್ ಕಟಪಾಡಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಯುವ ವೇದಿಕೆ, ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ, ದೇವಾಡಿಗರ ಸೇವಾ ಸಂಘ ಕಟಪಾಡಿ, ಹಳೆ ವಿದ್ಯಾರ್ಥಿ ಸಂಘ ಶ್ರೀ ದುರ್ಗಾಪರಮೇಶ್ವರಿ ಶಾಲೆ ಅಗ್ರಹಾರ. ಸೇವೆ ಸಲ್ಲಿಸಿದ ಕ್ಷೇತ್ರಗಳು : ಅಗ್ರಹಾರ ದುರ್ಗಾಪರಮೇಶ್ವರಿ ದೇವಸ್ಥಾನ. ಕಟಪಾಡಿ, ಕಾಳಿಕಾಂಬ ದೇವಸ್ಥಾನ ಅಗ್ರಹಾರ ಕಟಪಾಡಿ, ಚೊಕ್ಕಾಡಿ ಮಹಾಲಿಂಗೇಶ್ವರ ದೇವಸ್ಥಾನ ಕಟಪಾಡಿ, ವಿಷ್ಣು ಮೂರ್ತಿ ದೇವಸ್ಥಾನ ಮಟ್ಟು ಕಟಪಾಡಿ, ಕಾಪು ಮಾರಿಗುಡಿ, ಜುಮಾದಿ ದೈವಸ್ಥಾನ ಫಾರೆಸ್ಟ್ ಗೇಟ್ ಕಟಪಾಡಿ, ನೀಚ ದೈವಸ್ಥಾನ ದುರ್ಗಾನಗರ ಕಟಪಾಡಿ ಹಾಗೂ ಕಾಪು, ಪಾಂಗಳ, ಕಟಪಾಡಿ, ಶಂಕರಪುರ, ಉದ್ಯಾವರ ಸುತ್ತಮುತ್ತ ಧಾರ್ಮಿಕ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಮರೆಯಾಯಿತು ಶ್ರಮಜೀವಿಯ ಬದುಕು : ಶ್ರೀ ಸಂಜೀವ ಪೂಜಾರಿ

Thumbnail
Posted On: 29 Jun 2022, 07:50 PM

ಕಾಪು : ಮೂಡುಬೆಳ್ಳೆ ಗರಡಿಯ ಪೂ ಪೂಜನೆಯ ಸಂಜೀವ ಪೂಜಾರಿಯವರು ಜೂನ್ 28ರಂದು ದೈವಾಧೀನರಾದರು. ಶ್ರದ್ದಾ ಭಕ್ತಿಯ ಕೇಂದ್ರ ಬ್ರಹ್ಮ ಬೈದ್ಯರುಗಳ ಗರೋಡಿಯಲ್ಲಿ ಪೂ ಪೂಜನೆಯ ಪೂಜಾರಿಯಾಗಿ ಕಾಯ ವಾಚಾ ಮನಪೂರ್ವಕವಾಗಿ ಆತ್ಮ ಸಮರ್ಪಣಾ ಮನೋಭಾವದಿಂದ ಬೈದ್ಯರುಗಳ ಸೇವಾ ಕಾರ್ಯವನ್ನು ಮಾಡಿದ್ದಲ್ಲದೆ ಬೈದ್ಯರುಗಳು ಇತರೆ ಕ್ಷೇತ್ರಗಳಲ್ಲಿ ಆಯಾ ಸಂಪ್ರದಾಯ ಪರಂಪರೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದವರು. ಹಿರಿಯರಿಂದ ಬಂದ ರೂಢಿಗತ ಆಚರಣೆಗಳನ್ನು ಚಾಚೂ ತಪ್ಪದ ರೀತಿಯಲ್ಲಿ ಪಾಲಿಸಿಕೊಂಡು ಬಂದವರು. ಕೃಷಿ, ಹೈನುಗಾರಿಕೆಯಂತಹ ಶ್ರಮಭರಿತ ಕಾಯಕದಲ್ಲಿ ತೊಡಗಿಕೊಂಡ ಕ್ರೀಯಾಶೀಲ ವ್ಯಕ್ತಿ ಇಂದು ಅಕಾಲಿಕವಾಗಿ ಬೈದ್ಯರುಗಳ ಪಾದ ಸೇರಿರುವುದನ್ನು ತಿಳಿಸಲು ವಿಷಾದವಾಗುತ್ತಿದೆ. ಆಗಲಿದ ಸಂಜೀವ ಪೂಜಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣ

Thumbnail
Posted On: 29 Jun 2022, 10:46 AM

ಕಟಪಾಡಿ : ರೋಟರಿ ಜಿಲ್ಲೆ 3182 ವಲಯ 5ರ ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣವು ರೋಟರಿ ಶತಾಬ್ದಿ ಭವನದಲ್ಲಿ ಜೂ.28ರಂದು ಜರಗಿತು. ರೋಟರಿ ಜಿಲ್ಲಾ ಗವರ್ನರ್ ರೊ|ಡಾ| ಜಯಗೌರಿ ಹಡಿಗಾಲ್ ಪದಗ್ರಹಣ ನೆರವೇರಿಸಿ ಶುಭ ಕೋರಿದರು. ಅಧಿಕಾರ ಹಸ್ತಾಂತರ : 2021-22 ಸಾಲಿನ ಅಧ್ಯಕ್ಷರಾದ ಫ್ಲಾವಿಯ ಮಿನೇಝಸ್ ನೂತನ ಅಧ್ಯಕ್ಷರಾದ ರೊ|ಗ್ಲಾಡ್ಸನ್ ಕುಂದರ್ ರಿಗೆ ಮತ್ತು 2021-22 ಸಾಲಿನ ಕಾರ್ಯದರ್ಶಿ ಮಾಲಿನಿ ಶೆಟ್ಟಿ ನೂತನ ಕಾರ್ಯದರ್ಶಿ ರೊಸಿಲ್ವಿಯಾ ಕ್ಯಾಸ್ತಲಿನೋ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಹಲವು ಜಿಲ್ಲಾ ಸಮ್ಮೇಳನಗಳಲ್ಲಿ ಅಸಂಖ್ಯ ಪ್ರಶಸ್ತಿ, ಮನ್ನಣೆಗಳನ್ನು ಪಡೆದಿದ್ದು, ಸರ್ವರ ಸಹಕಾರ, ಸಹಯೋಗದೊಡನೆ ಇನ್ನಷ್ಟು ಉತ್ತುಂಗಕ್ಕೇರಿಸುವ ಅಭಿಲಾಷೆಯನ್ನು ನೂತನ ಅಧ್ಯಕ್ಷರೊಗ್ಲಾಡನ್ ಕುಂದರ್ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೊ| ಡಾ| ಶಶಿಕಾಂತ ಕರಿಂಕ, ವಲಯ ಸೇನಾನಿ ರೊ|ಯಶೋಧರ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ : ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರ

Thumbnail
Posted On: 28 Jun 2022, 09:43 PM

ಉಡುಪಿ : ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ ಕರ್ತವ್ಯವಾಗಿದೆ. ಇದರಿಂದ ಸಮಾಜದಲ್ಲಿ ಎಲ್ಲರೂ ಉತ್ತಮ ಅರೋಗ್ಯವಂತರಾಗಿ ಇರಲು ಸಾಧ್ಯ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಮ್ಮ ಸುತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕು. ಕೇವಲ ಪ್ರಶಸ್ತಿ ಪುರಸ್ಕಾರ ಪಡೆಯುವ ದೃಷ್ಠಿಯಿಂದ ಈ ಕಾರ್ಯವನ್ನು ಮಾಡುವುದು ಸರಿಯಲ್ಲ. ಇದು ನಮ್ಮ ದೈನಂದಿನ ಚಟುವಟಿಕೆಗಳ ಕಾರ್ಯವಾಗಬೇಕು ಎಂದರು. ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಫಲಾಪೇಕ್ಷೆಯಿಲ್ಲದೆ ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅದಕ್ಕೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಅಂತಹ ಪ್ರತಿಫಲ ಮಹತ್ವನ್ನು ಪಡೆದಿರುತ್ತದೆ. ಈ ರೀತಿಯಾಗಿ ನಾವುಗಳು ಸ್ವಚ್ಛತಾ ಕಾರ್ಯಗಳನ್ನು ಮಾಡಿದಾಗ ಅದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು. ಕೇಂದ್ರ ಸರ್ಕಾರದ ಸ್ವಚ್ಛ ವಿದ್ಯಾಲಯ ಪುರಸ್ಕಾರದಂತಹ ಕಾರ್ಯಕ್ರಮವನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ಇಂತಹ ಒಂದು ಮಹತ್ವ ಕಾರ್ಯಕ್ರಮವನ್ನು ರೂಪಿಸುವುದರೊಂದಿಗೆ ಶಾಲಾ ಕಾಲೇಜುಗಳ ಪರಿಸರವನ್ನು ಉತ್ತಮವಾಗಿ ಇರಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಾಮರ್ಥ್ಯ ಹಾಗೂ ಶುಚಿತ್ವವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು. ಪ್ರಸ್ತುತ ಸಾಲಿನ ಈ ಪುರಸ್ಕಾರಕ್ಕೆ ಜಿಲ್ಲೆಯ 1168 ಶಾಲಾ ಕಾಲೇಜುಗಳಲ್ಲಿ 729 ಶಾಲೆಗಳು ನೊಂದಾಯಿಸಿ, 627 ಶಾಲೆಗಳು ಆನ್ಲೈನ್ನಲ್ಲಿ ತಮ್ಮ ಶಾಲೆಯ ಕಾರ್ಯ ಸಾಧನೆಯ ಮಾಹಿತಿಯನ್ನು ದಾಖಲಿಸಿದ್ದು, ಜಿಲ್ಲಾ ಮಟ್ಟದ ಸಮಿತಿಯು ಸರ್ಕಾರದ ಮಾನದಂಡದನ್ವಯ 38 ಶಾಲೆಗಳನ್ನು ವಿವಿಧ ಆಯಾಮಗಳಲ್ಲಿ ಆಯ್ಕೆಗೊಂಡಿರುತ್ತವೆ. ಈ ಎಲ್ಲಾ ಶಾಲಾ-ಕಾಲೇಜುಗಳನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವುದರಿಂದ ಸಮಾಜದ ಹಿತಕ್ಕೆ ಹಾಗೂ ತಮ್ಮ ವೈಯಕ್ತಿಕ ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲೆಗಳೂ ಸ್ವಚ್ಛ ವಿದ್ಯಾಲಯ ಪುರಸ್ಕಾರ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಳಿತು ಎಂದರು. ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರದಲ್ಲಿ, ಕಾರ್ಕಳ ತಾಲೂಕಿನ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರದ ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆವರ್ಸೆಯ ಹಿರಿಯ ಪ್ರಾಥಮಿಕ ಶಾಲೆ, ನಿಟ್ಟೂರಿನ ಜಿ.ಎಂ.ವಿದ್ಯಾನಿಕೇತನ ಶಾಲೆ, ಕುಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುವಳತ್ತೂರು ಕಾರ್ವಾಡಿ ಶಾಲೆ, ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಹಳ್ನಾಡು, ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಗಳಿಗೆ ಸಮಗ್ರ ಪ್ರಶಸ್ತಿ ಹಾಗೂ 30 ಶಾಲೆಗಳಿಗೆ ಇತರೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಡಿಡಿಪಿಐ ಗೋವಿಂದ ಮಡಿವಾಳ ಹಾಗೂ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಚಂದ್ರಾ ನಾಯಕ್ ಸ್ವಾಗತಿಸಿ , ವಂದಿಸಿದರು.

ಜೂನ್ 30 ರಂದು ಹಿರಿಯ ಪತ್ರಕರ್ತ ಕೆ.ಎಲ್.ಕುಂಡಂತಾಯರಿಗೆ ಪತ್ರಿಕಾ ದಿನದ ಗೌರವ ಪ್ರದಾನ

Thumbnail
Posted On: 28 Jun 2022, 02:15 PM

ಉಡುಪಿ: ಹಿರಿಯ ಪತ್ರಕರ್ತ, ಯಕ್ಷಪ್ರಭಾ ಸಂಪಾದಕ ಕೆ.ಎಲ್.ಕುಂಡಂತಾಯ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ ಪತ್ರಿಕಾ ದಿನದ ಗೌರವವನ್ನು ಜೂನ್ ೩೦ ರಂದು ಅವರ ನಿವಾಸದಲ್ಲಿ ನಡೆಯುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಡಾ. ಹರಿಕೃಷ್ಣ ಪುನರೂರು ಅವರು ಹಿರಿಯ ಪತ್ರಕರ್ತ ಪ್ರತಿನಿಧಿ ಸಂಪಾದಕ ಡಾ. ಉದಯ ರವಿ ಅವರ ಅಧ್ಯಕ್ಷತೆಯಲ್ಲಿ ಪ್ರದಾನಿಸುವರು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. 70 ರ ಹರೆಯದ ಧಣಿವರಿಯದ ಕುಂಡಂತಾಯ ಅವರು 20 ವರ್ಷಗಳ ಕಾಲ ಉದಯವಾಣಿ ದೈನಿಕದಲ್ಲಿ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿ ಇದೀಗ ಕಟೀಲು ಕ್ಷೇತ್ರದಿಂದ ಪ್ರಕಟವಾಗುವ ಯಕ್ಷಪ್ರಭಾ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ಶೋಧನೆಯ, ಸಂಶೋಧನೆಯ ಮನೋಭಾವವುಳ್ಳ ಸಜ್ಜನ ಸಾಹಿತಿಯಾಗಿದ್ದಾರೆ. ವಿಶ್ವನಾಥ ಶೆಣೈ, ಕರುಣಾ ಸುರೇಶ್ ಪೈ, ಎಸ್.ಆರ್.ಬಂಡಿಮಾರ್, ಪುನೀತ್ ಎಂ, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ಜನಾರ್ದನ ಕೊಡವೂರು, ರಾಕೇಶ್ ಕುಂಜೂರು ಸಹಿತ ಆಹ್ವಾನಿತ ಗಣ್ಯರು ಉಪಸ್ಥಿತರಿರುವರು. ಅಂಬಾತನಯ ಮುದ್ರಾಡಿ, ಎ.ಎಸ್.ಎನ್.ಹೆಬ್ಬಾರ್, ವಿದ್ವಾನ್ ಬಿ.ಚಂದ್ರಯ್ಯ, ಬಿ.ಎ.ಸನದಿ, ಮಲಾರ್ ಜಯರಾಮ ರೈ, ಎಂ.ವಿ.ಕಾಮತ್, ಸತೀಶ್ ಪೈ ಮಣಿಪಾಲ, ಕು.ಗೋ ಉಡುಪಿ, ಶ್ರೀನಿವಾಸ ರಾವ್ ಎಕ್ಕಾರು, ಕು.ಗೋ ಉಡುಪಿ, ಬಿ.ಸಿ.ರಾವ್ ಶಿವಪುರ, ನಾದವೈಭವಂ ಉಡುಪಿ ವಾಸುದೇವ ಭಟ್ ಸಹಿತ ಗಣ್ಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಉಡುಪಿ : ಬೆಂಗಳೂರನ್ನು ನಗರವನ್ನಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ - ಸಿಇಓ ಪ್ರಸನ್ನ ಹೆಚ್

Thumbnail
Posted On: 27 Jun 2022, 11:31 PM

ಉಡುಪಿ : ಮಣ್ಣಿನ ಕೋಟೆಯಿಂದ ಕಟ್ಟಿದ ಹಳ್ಳಿ ಪ್ರದೇಶವಾಗಿದ್ದ ಬೆಂದಕಾಳೂರನ್ನು ನಗರವಾಗಿ ನಿರ್ಮಿಸಿದ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಂದ, ಬೆಂಗಳೂರು ನಗರ ಇಂದು ದೇಶ-ವಿದೇಶಿಗರಿಗೆ ಚಿರಪರಿಚಿತವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕೆಂಪೇಗೌಡರು ಶೌರ್ಯ, ಸಾಹಸ, ದೂರದೃಷ್ಠಿಗೆ ಹೆಸರಾಗಿದ್ದು, ವಿಜಯನಗರ ಅರಸರ ಒಪ್ಪಿಗೆಯೊಂದಿಗೆ ಯಲಹಂಕದಲ್ಲಿ ಜಾತ್ಯಾತೀತ ನಗರವನ್ನು ನಿರ್ಮಿಸಿದರು. ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿ ಮಾಡದೇ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದ ಬೆಂಗಳೂರು ಪ್ರದೇಶಕ್ಕೆ ಕೋಟೆ ನಿರ್ಮಿಸಿ, ನಗರವನ್ನಾಗಿ ಮಾಡಿ, ಅದರ ಅಭಿವೃದ್ಧಿಗೆ ಕಾರಣರಾದ ನಾಡಪ್ರಭುವಿಗೆ ಗೌರವ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮಾತನಾಡಿ, ಕೆಂಪೇಗೌಡರನ್ನು ಜನತೆ ಇಂದಿಗೂ ನೆನೆಯಲು ಕಾರಣ ಅವರ ವ್ಯಕ್ತಿತ್ವ ಹಾಗೂ ಅಸಾಧಾರಣ ಸಾಧನೆಯಾಗಿದೆ. ಅಂದಿನಿಂದ ಇಂದಿನವರೆಗೂ ಬೆಂಗಳೂರು ಹಂತಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಾ ಬಂದಿದ್ದು, ಕೆಂಪೇಗೌಡರ ಕುಟುಂಬವೂ ಕೂಡ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿತ್ತು ಎಂದರು. ಕೆಂಪೇಗೌಡರ ಜೀವನಚರಿತ್ರೆ ಮತ್ತು ಅವರ ಸಾಧನೆಗಳ ಕುರಿತು ಮಾತನಾಡಿದ ಜಿಲ್ಲಾ ಒಕ್ಕಲಿಗ ಸಮುದಾಯದ ಅಧ್ಯಕ್ಷ ಸಿದ್ಧರಾಜು, ತನ್ನನ್ನು ಬೇಟೆಯಾಡಲು ಬಂದಂತಹ ನಾಯಿಯನ್ನು ಮೊಲವೊಂದು ಧೈರ್ಯದಿಂದ ಅಟ್ಟಿಸಿಕೊಂಡು ಹೋಗಿ ಎದುರಿಸುತ್ತಿದ್ದ ದೃಶ್ಯ ಕೆಂಪೇಗೌಡರನ್ನು ವೀರಭೂಮಿ ಕಟ್ಟಲು ಪ್ರೇರೇಪಿಸಿತು ಎಂದು ಇತಿಹಾಸ ತಿಳಿಸುತ್ತದೆ. ನಾಲ್ಕೂ ದಿಕ್ಕಿನಲ್ಲೂ ಗಡಿ ರೇಖೆಯನ್ನು ಗುರುತಿಸಲು ಎತ್ತುಗಳಿಗೆ ನೇಗಿಲನ್ನು ಕಟ್ಟಿ ಎತ್ತುಗಳು ನಿಲ್ಲುವ ಪ್ರದೇಶವನ್ನು ಗಡಿ ಪ್ರದೇಶ ಎಂದು ನಿರ್ಧರಿಸಿ, ಅದರ ಒಳಗೆ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂಬ ಕಥೆಗಳು ಇವೆ. ವೃತ್ತಿಗೆ ಪ್ರಾಶಸ್ತ್ಯ ನೀಡಿ, ಕೆಂಪೇಗೌಡರು ಕೋಟೆಯನ್ನು ನಿರ್ಮಿಸಿದರು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯ ಪಾತ್ರಕೂಡ ಅವಿಸ್ಮರಣೀಯವಾದುದು ಎಂದರು. ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಸಿ.ಜಿ.ಕೆ ರಂಗ ಪ್ರಶಸ್ತಿ-2022 ಪುರಸ್ಕೃತರಾದ ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ

Thumbnail
Posted On: 27 Jun 2022, 11:22 PM

ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿ ಆಯೋಜನೆಯಲ್ಲಿ ಸಂಸ ಥಿಯೇಟರ್‌, ಬೆಂಗಳೂರು - ಕರ್ನಾಟಕ ಬೀದಿ ನಾಟಕ ಅಕಾಡೆಮಿ ಮತ್ತು ಎಂ.ಜಿ.ಎಂ ಕಾಲೇಜು, ಉಡುಪಿ ಸಹಭಾಗಿತ್ವದಲ್ಲಿ ಸಿ.ಜಿ.ಕೆ ಬೀದಿರಂಗ ದಿನ ಪ್ರಯುಕ್ತ ಜೂನ್ 26 ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಸಿ.ಜಿ.ಕೆ ರಂಗ ಪ್ರಶಸ್ತಿ-2022 ನ್ನು ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ ಇವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ನಮ ತುಳುವೆರ್ ಕಲಾ ಸಂಘಟನೆ (ರಿ.) ತಂಡದಿಂದ ಗುರುರಾಜ ಮಾರ್ಪಳ್ಳಿ ರಚನೆ ಮತ್ತು ನಿರ್ದೇಶನದ ಅವ್ವ ನನ್ನವ್ವ ನಾಟಕದ 75ನೇ ಪ್ರದರ್ಶನ ಜರಗಿತು.

ಇನ್ನಂಜೆ : ಮಂಡೇಡಿ ಶ್ರೀದೇವಿ ಭಜನಾ ಮಂಡಳಿ‌ಯ ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಆಯ್ಕೆ

Thumbnail
Posted On: 27 Jun 2022, 11:09 PM

ಕಾಪು : ತಾಲೂಕಿನ ಇನ್ನಂಜೆಯ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 2022-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಕೆ ಶೆಟ್ಟಿ, ಕಾರ್ಯದರ್ಶಿಯಾಗಿ ಕೃಷ್ಣ ವಿ ಶೆಟ್ಟಿ ಮತ್ತು ಕೋಶಾಧಿಕಾರಿಯಾಗಿ ಸಂತೋಷ್ ಎಸ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.