Updated News From Kaup
ಆಟವಾಡಲು ಹೋಗಿ ಕಾಣೆಯಾದ ಬಾಲಕ ಶವವಾಗಿ ಪತ್ತೆ

Posted On: 28-02-2022 11:21PM
ಮಂಗಳೂರು : ಮನೆಯ ಹತ್ತಿರದ ಆಟದ ಮೈದಾನಕ್ಕೆ ಕ್ರಿಕೆಟ್ ಆಟಕ್ಕೆ ತೆರಳಿದ ಬಾಲಕ ಮನೆಗೆ ಬಾರದಿದ್ದನ್ನು ಕಂಡು ಕಾಣೆಯಾದ ಬಗ್ಗೆ ಬಾಲಕನ ತಾಯಿ ದೂರು ನೀಡಿದ್ದರು. ಸಂಜೆಯ ವೇಳೆ ಹೊಯ್ಗೆ ಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾಕಾಳಿ ಪಡ್ಪು ನಿವಾಸಿಗಳಾದ ಆಶಾ ಮತ್ತು ಚೆನ್ನಪ್ಪ ದಂಪತಿಯ ಪುತ್ರ ದೃಶ್ಯಾಂತ್ (16) ನಗರದ ರೋಸಾರಿಯೋ ಶಾಲೆನಲ್ಲಿ 9ನೇ ತರಗತಿಯಲ್ಲಿ, ವ್ಯಾಸಾಂಗ ಮಾಡುತ್ತಿದ್ದು, ಫೆಬ್ರವರಿ 27ರಂದು ಶಾಲೆಗೆ ರಜೆ ಇದ್ದ ಕಾರಣ ಮಹಾಕಾಳಿ ಪಡ್ಪು ಮೈದಾನದಲ್ಲಿ, ಕ್ರಿಕೆಟ್ ಮ್ಯಾಚ್ ನಲ್ಲಿ ಭಾಗವಹಿಸಿ, ಅವನ ಸ್ನೇಹಿತರೆಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ಬಾಲಕ ಮನೆಗೆ ಬಂದಿರದೆ ಇದ್ದುದನ್ನು ಕಂಡು ಕೂಡಲೇ ಅವನ ಸ್ನೇಹಿತರಲ್ಲಿ ಹಾಗೂ ಪರಿಚಯದವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆಯದಿದ್ದನ್ನು ಕಂಡು ಬಾಲಕನ ತಾಯಿ ಪಾಂಡೇಶ್ವರ ಠಾಣೆಯಲ್ಲಿ ದೂರನ್ನು ನೀಡಿದ್ದರು.
ಸಂಜೆಯ ವೇಳೆ ಹೊಯ್ಗೆ ಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ .ಈ ಘಟನೆಯ ಬಗ್ಗೆ ನಿಖರವಾದ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
ಇ ಸಮುದಾಯ್ ಆಪ್ ಡೌನ್ಲೋಡ್ ಮಾಡಿ - ನಿಮಗೆ ಬೇಕಾದ ದಿನಸಿ, ಆಹಾರ ಪದಾರ್ಥಗಳು ಮನೆ ಬಾಗಿಲಿಗೆ

Posted On: 28-02-2022 10:43PM
ಕಾಪು : ಸಾರ್ವಜನಿಕರಿಗೆ ಬೇಕಾದ ದಿನಸಿ ವಸ್ತುಗಳು, ಆಹಾರ ಪದಾರ್ಥ, ತಿಂಡಿತಿನಿಸುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಯು ಇದೀಗ ಕಾಪುವಿನಲ್ಲಿ ಪ್ರಾರಂಭವಾಗಿದೆ.

ಈ ಸಮುದಾಯ ಆಪ್ ಡೌನ್ಲೋಡ್ ಮಾಡಿ ಆನ್ಲೈನ್ ಮೂಲಕ ಅಲ್ಲಿ ಸೂಚಿಸಿದ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ : APP LINK FACEBOOK PAGE LINK

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರ

Posted On: 28-02-2022 05:47PM
ಶಿರ್ವ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಪದವೀಧರ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನ ಕಲಿಕೆಯು ಕಾಲೇಜು ಹಂತದಲ್ಲಿ ಕಲಿಯುವ ಮೂಲಕ ಮುಂದೆ ಸಮಾಜಕ್ಕೆ ಬೇಕಾಗುವ ನುರಿತ ತಂತ್ರಾಂಶವನ್ನು ರೂಪಿಸಲು ಮತ್ತು ಸಂಶೋಧನಾ ಮನಸ್ಥಿತಿಯನ್ನು ಬೆಳೆಸಲು ಇಂತಹ ಕಾರ್ಯಗಾರ ಸಹಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಬಿಸಿಎ ವಿದ್ಯಾರ್ಥಿಗಳಿಗೆ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಏರ್ಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಪ್ರೋ ಕಂಪನಿಯ ಜೂನಿಯರ್ ಅಸೋಸಿಯೇಟ್ ರಿಯಾನ್ ರಿಷಿ ಅಲ್ಫೋನ್ಸೋ ಮಾತನಾಡಿದರು.
ತಾಂತ್ರಿಕ ಪರಿಣತಿಯೊಂದಿಗೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯೂ ಅಗತ್ಯ. ಈ ಅವಶ್ಯಕತೆಗಳನ್ನು ಪೂರೈಸಲು, ಉದ್ಯಮದ ಮಾನದಂಡಗಳಿಗೆ ಸಮಾನವಾಗಿ ಕಂಪ್ಯೂಟರ್ ಪದವೀಧರರ ಸಾಮರ್ಥ್ಯವನ್ನು ಹೆಚ್ಚಿಸಲು ಕಾಲೇಜು ಹಂತದಲ್ಲೇ ಇಂತಹ ಸಂಪೂರ್ಣ ತರಬೇತಿ ಪಡೆದುಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಮುಂದೆ ವಿವಿಧ ವಿಜ್ಞಾನಿಗಳ ಆಗಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ನುಡಿದರು.
ಪ್ರತಿ ಸ್ಟಾರ್ಟ್ಅಪ್ಗೆ ಉತ್ತಮ ಐಡಿಯಾ ಬೇಕು. ಅನನ್ಯ ಮತ್ತು ಬಲವಾದ ಪೂರೈಸಬಹುದಾದ ಗ್ರಾಹಕರ ಅಗತ್ಯವನ್ನು ಕಂಡುಕೊಂಡಾಗ ಆರಂಭಿಕ ವ್ಯವಹಾರಗಳು ಯಶಸ್ವಿಯಾಗುತ್ತವೆ. ಯಾವುದೇ ಸಂದರ್ಭದಲ್ಲಿ, ಉತ್ತಮ ಆಲೋಚನೆ, ಸರಿಯಾದ ಮಾನದಂಡಗಳಿಗೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿಗೆ ನಿರ್ಣಾಯಕವಾಗಿದೆ. ಈ ಪ್ರಮುಖ ಅಂಶವನ್ನು ಪರಿಗಣನೆಗೆ ಇಟ್ಟುಕೊಂಡು, ಪದವಿ ವಿದ್ಯಾರ್ಥಿಗಳು ತಮ್ಮ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವಿವಿಧ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗವನ್ನು ಸಾಧಿಸಲು ಇಂತಹ ಕಾರ್ಯಗಾರ ಇಂದು ಅನಿವಾರ್ಯವಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಪ್ರೋ ಕಂಪನಿಯ ಜ್ಯೂನಿಯರ್ ಅಸೋಸಿಯೇಟ್ ಪೂಜಾರಿ ಪ್ರತಿಕ್ ಪ್ರಭಾಕರ್, ಉಪನ್ಯಾಸಕ ಪ್ರಕಾಶ್, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ್, ದೀಕ್ಷಿತ್ ಹಾಗೂ ಸಾತ್ವಿಕ್ ಜೆ ಕೋಟ್ಯಾನ್ ಸಹಕರಿಸಿದರು. ಹರ್ಷಿತ ಮತ್ತು ಬಳಗ ಪ್ರಾರ್ಥಿಸಿ, ಶ್ರಾವ್ಯ ವಂದಿಸಿದರು. ಛಾಯಾ ಏ ಕರ್ಕೇರ ಸ್ವಾಗತಿಸಿ, ಚಂದನ ಕಾರ್ಯಕ್ರಮ ನಿರೂಪಿಸಿದರು.
ಶಿವರಾತ್ರಿ - ಶರ್ವನಿಗೆ ಶರಣಾರ್ಥಿಯ ಶರಣು

Posted On: 28-02-2022 05:30PM
ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆ ವಿಶಿಷ್ಟವಾದುದು : • ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ಜಗವು ಶಿವನಿಂದ ಬೇರಿಲ್ಲ ಈ ಬೆಡಗ ಅಘಹರನೇ ಬಲ್ಲ ಸರ್ವಜ್ಞ' 'ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ'. • 'ರಾತ್ರಿಯೊಳು ಶಿವರಾತ್ರಿ' ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ . • ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ . • ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ .ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು. • 'ಚೆನ್ನಮಲ್ಲಿಕಾರ್ಜುನಯ್ಯ ,ಆತ್ಮ ಸಂಗಾತಕ್ಕೆ ನೀನೆನಗುಂಟು', ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ.
ಮಾನವ ಚಿಂತನೆಗೆ ಸುಲಭ ಗ್ರಹ್ಯವಾಗಬಲ್ಲ ಮನುಕುಲಕ್ಕೆ ಸಮೀಪವರ್ತಿಯಾಗಿ ಬಹುಮುಖ ವ್ಯಕ್ತಿತ್ವದಿಂದ ಬಹುಮಾನ್ಯನಾದ ದೇವರು ’ಶಿವ’. ಈ ಜನಪ್ರಿಯ ದೇವರ ಆರಾಧನಾ ಪರ್ವವೇ ’ಶಿವರಾತ್ರಿ’. ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಸನ್ನಿಹಿತವಾಗುತ್ತದೆ ಈ ಶುಭ ದಿನ. 'ಪರ್ವ' ಎಂದಾಗ 'ಹಬ್ಬ'ವೆಂದು ಆಚರಿಸುವ, ಆ ಮೂಲಕ ಸಂಭ್ರಮಿಸುವ ಅವಕಾಶ ’ಶಿವರಾತ್ರಿ’ ಸಂದರ್ಭದಲ್ಲಿಲ್ಲ. ಉಪವಾಸ, ರಾತ್ರಿ ಜಾಗರಣೆ, ಶಿವಧ್ಯಾನದಲ್ಲಿ ತೊಡಗಿ ಅಭಿಷಾಕಾದಿಗಳಿಂದ, ಅರ್ಚನೆಗಳಿಂದ ಶಿವ ಸಾಮೀಪ್ಯ ಸಾಧಿಸುವ ವ್ರತವಾಗಿ ಶಿವರಾತ್ರಿ ಸ್ವೀಕರಿಸಲ್ಪಟ್ಟಿದೆ. ಆದರೆ ಅರ್ಚನೆ ಪೂಜೆ, ಪ್ರದಕ್ಷಿಣೆ ಅಲಂಕಾರಗಳೆಲ್ಲ ಶಿವರಾತ್ರಿಯ ಅಂಗವೇ ಆಗಿರುವುದರಿಂದ ಶ್ರದ್ಧೆ ಇರುವ ಹಬ್ಬವಾಗಿಯೂ ಆಚರಿಸಬಹುದೆಂಬುದು ಶಾಸ್ತ್ರ ಸೂಚನೆ. ತ್ರಿಮೂರ್ತಿಗಳಲ್ಲಿ ಒಬ್ಬನೆನಿಸಿ,ಲಯಕರ್ತನಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ’ಶಿವ’ನದ್ದೆಂದು ಪುರಾಣಗಳು ವಿವರಿಸುತ್ತವೆ. ಇಲ್ಲೆ ಇರುವುದು, ಸಮಗ್ರ ಸೃಷ್ಟಿ ಲಯವಾಗಿ ಮುಂದಿನ ನೂತನ ಸೃಷ್ಟಿಯ ನಿರ್ಮಾಣಕ್ಕೆ ಸಿದ್ಧಗೊಳ್ಳುವಲ್ಲಿಯವರೆಗೆ ಅವುಗಳಿಗೆ ಲಯಾಧಿಕಾರಿಯಾದರೂ ಶಿವನೇ ಆಶ್ರಯಸ್ಥಾನ. ಸೃಷ್ಟಿ-ಸ್ಥಿತಿ-ಲಯಗಳ ನಿರಂತರ ಪ್ರಕ್ರಿಯೆಯಲ್ಲಿ ಲಯವೂ ಪ್ರಧಾನವಾದುದೇ. ಆದುದರಿಂದ ಲಯದಲ್ಲಿ ಒಂದು ತಡೆ ಇದೆ, ನಿಂತು ಮುಂದುವರಿಯುವ ಸಂಕೇತವಿದೆ. ಒಂದು ಮುಕ್ತಾಯದ ಸಂಜ್ಞೆ ಇದೆ. ಆದರೆ ಈ ಮುಕ್ತಾಯವೇ ಸೃಷ್ಟಿಗೆ ಪ್ರೇರಣೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಅಂತಹ ಮಹಾದೇವನಿಗೆ ಶಿವರಾತ್ರಿಯ ನಮೋ ನಮಃ ಎಂಬ ಪ್ರಣಾಮ.
ಶರಣಾರ್ಥಿಯಾದವನ ಶರಣು (ನಮಸ್ಕಾರ) ಸ್ವೀಕರಿಸುವ ಭಗವಾನ್ ಶರ್ವನು ಸರ್ವಮಂಗಲಕರನು. ಮಂಗಲ ಎಲ್ಲಿದೆಯೋ ಅಲ್ಲಿ ಅಶುಭಗಳಿಲ್ಲದ ಆನಂದವಿರುತ್ತದೆ. ಭರ್ಗನ ಆರಾಧನೆಯಿಂದ ನಿರ್ಮಲಚಿತ್ತದೊಂದಿಗೆ ಹೃದಯದ ಔದಾರ್ಯವೂ ಸಿದ್ಧಿಸುವುದು. ಆ ಮೂಲಕ ಲೋಕಮುಖಿ ಮನೋಧರ್ಮವು ಬೆಳೆದು ಮಾನವ ಉದಾತ್ತ ಚರಿತನಾಗುತ್ತಾನೆ. ಈ ಭಾವಸ್ಫುರಣೆಗೆ ಶಿವನ ಹೊರತಾಗಿ ಬೇರೆ ದೇವರಿಲ್ಲ. ಆಧ್ಯಾತ್ಮ ತಿಳಿಯಾಗಿದ್ದಾಗ, ಸುಲಭ ಗ್ರಾಹ್ಯವಾಗಿದ್ದಾಗ ಬಹುಜನ ಪ್ರೀತವಾಗುತ್ತದೆ. ಅಂತೆಯೇ ಆರಾಧನಾ ಮೂರ್ತಿಯೂ ನಮ್ಮ ಹೃದಯಸ್ಪರ್ಶಿ ಗುಣಗಳಿಂದ ಆಲಂಕೃತನಾಗಿದ್ದರೆ ಸಹಜವಾಗಿ ದೇವ-ಜೀವ ಸಂಬಂಧ ಸಾಧ್ಯವಾಗುತ್ತದೆ. ಇಂತಹ ಕ್ಲಿಷ್ಟ, ಆದರೆ ಅನುಭವ ವೇದ್ಯವಾದ ಆನಂದಕ್ಕೆ ಮಹಾರುದ್ರನು ಕಾರಣನಾಗುತ್ತಾನೆ. ಭೂತನಾಥನಾಗಿ ಈ ಮಣ್ಣಿನ ಸತ್ಯಗಳ ಅಧಿದೈವವಾಗಿ ನಮ್ಮ ಮುಂದೆ ಒಡೆಯನಾಗಿ ಶೋಭಿಸುವ ದೇವರು ಅಂತರ ಬೇರ್ಪಡುವ ವ್ಯಕ್ತಿತ್ವ ಪ್ರದರ್ಶಿಸುವುದೇ ಇಲ್ಲ. ಆಸಕ್ತಿ-ವಿರಕ್ತಿ, ಸರಸ ವಿನೋದ, ಮಾನವರ ಕಷ್ಟಗಳಿಗೆ ಪರಿಹಾರ , ಸುಖದ ಅನುಗ್ರಹ ಮುಂತಾದುವುಗಳಲ್ಲಿ ಮನುಕುಲಕ್ಕೆ ಸಮೀಪವಾಗುವ ದೇವರು ಸುಲಭನಾಗಿ ಜನಪ್ರಿಯನಾಗುವುದು ಶಿವದೇವರ ವೈಶಿಷ್ಟ್ಯ.
ಮಣ್ಣಿನ ಸತ್ಯಗಳು-ಶಿವ : ನಮ್ಮ ಆರಾಧನಾ ವಿಧಾನಗಳಲ್ಲಿ ಮಣ್ಣಿನ ಸತ್ಯಗಳ ಸಾಮ್ರಾಜ್ಯದಲ್ಲಿ, ನಾವು ಪ್ರತ್ಯಕ್ಷ - ಪರೋಕ್ಷವಾಗಿ ನಿರ್ದೇಶಿಸಲ್ಪಡುವ ಶಕ್ತಿಗಳಾದ ದೈವಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಹೊಂದಿ ಅವುಗಳ ಹುಟ್ಟಿಗೆ ಕಾರಣವಾಗುತ್ತಾ ಈ ಮಣ್ಣಿನ ಜನಮಾನಸವನ್ನು ಬೆಳಗುವ ಶಿವದೇವರು, ಈ ಮೂಲಕವೂ ನಮಗೆ ಪ್ರಿಯನಾದ ದೇವರು. ಪಾಪಿಗಳನ್ನು ಮರ್ದಿಸಲು ಸಾವಿರದೊಂದು ’ಗಂಡಗಣ’ಗಳನ್ನು ಸೃಷ್ಟಿಸಿದ ರುದ್ರ ದೇವರು ಸಾವಿರದೊಂದು ಭೂತಗಳನ್ನು ಅಷ್ಟೇ ಸಂಖ್ಯೆಯ ರೋಗಗಳನ್ನು ನಿರ್ಮಿಸಿ ಪಾಪಿಗಳನ್ನು ಶಿಕ್ಷಿಸಿದರೆಂದು ಆ ಮುಲಕ ಭೂತನಾಥರಾದರೆಂದು ಜನಪದ ಕಥೆಗಳು ವಿವರ ನೀಡುತ್ತವೆ. ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವದ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ಹೇಳುತ್ತದೆ. ಮುಂಡತ್ತಾಯ ದೈವವು ಶಿವದೇವರ ಹಣೆಯಿಂದ ಜನಿಸಿತಂತೆ. ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ. ಗುಳಿಗ ದೈವವೂ ಶಿವಾಂಶವೆಂಬ ವರ್ಣನೆ ಇದೆ. ಗಣಪತಿಯ ಜನನದ ಕುರಿತಾದ ಪಾಡ್ದನವೊಂದರಲ್ಲಿ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ. ಬಾಮಕುಮಾರನೇ ಗಣಪತಿ, ಶಿವಪಾರ್ವತಿಯರು ಬೇಡರಾಗಿಯೋ ಕೊರವಂಜಿಗಳಾಗಿಯೋ ’ಮೇಗಿ’ ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ. ಶಿವಪಾರ್ವತಿಯರ ಲೋಕ ಸಂಚಾರ ಸಾಮಾನ್ಯ ಘಟನೆಯಾಗಿದೆ. ಈ ಮೇಲಿನ ವಿವರಣೆಗಳಿಂದ ಶಿವ, ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ, ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ. ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯವರೆಗೆ ವಿವಿಧ ರೂಪಗಳಿಂದ, ಅನುಸಂಧಾನ ವಿಧಾನಗಳಿಂದ ಸ್ವೀಕರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು. ಅಂತಹ ಶರ್ವಾಣಿ ಸಹಿತನಾದ ಶರ್ವನಿಗೆ ಲೋಕದ ತಾಯಿ-ತಂದೆಯರೆಂದು ಭಾವಿಸಿ ಶಿವರಾತ್ರಿಯ ಪರ್ವದಿನದಲ್ಲಿ ’ಶರಣಾರ್ಥಿಗಳಾಗಿ ಶರಣು ಎನ್ನೋಣ. { ಮಾಘ ಮಾಸದಲ್ಲಿ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು "ಶಿವರಾತ್ರಿ" . ಇದು ಹಬ್ಬವಲ್ಲ ವ್ರತ. ಅಭಿಷೇಕ - ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ , ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ .ಇದೇ ಶಿವರಾತ್ರಿ.} ಬರಹ :ಕೆ.ಎಲ್.ಕುಂಡಂತಾಯ
ಪಲ್ಸ್ ಪೋಲಿಯೋ : ರೋಟರಿ ಕಲ್ಯಾಣಪುರ ಅಧ್ಯಕ್ಷರಿಂದ ಚಾಲನೆ

Posted On: 27-02-2022 10:30PM
ಉಡುಪಿ : ರೋಟರಿ ಕಲ್ಯಾಣಪುರದ ವ್ಯಾಪ್ತಿಯಲ್ಲಿ ನಡೆದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಂಭು ಶಂಕರ್ ಹಾಗೂ ನಿರಂತರವಾಗಿ 25ವರ್ಷಗಳಿಂದ ಈ ಸಂಸ್ಥೆಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಿರ್ದೇಶಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿರುವ ಗಿರಿಧರ್ ಬಾಳಿಗ ನೇತೃತ್ವದಲ್ಲಿ ಫೆಬ್ರವರಿ 27ರಂದು ಸರ್ಕಾರದ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಹೂಡೆ ಮತ್ತು ಕೊಳಲಗಿರಿಯ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇ.96 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. ಇನ್ನು ಉಳಿದ 2ದಿನಗಳಲ್ಲಿ ಬಾಕಿ ಇದ್ದಿರುವ ಎಲ್ಲಾ ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಕ್ರಮ ವಹಿಸಲಾಯಿತು.
ರೋಟರಿ ಕಲ್ಯಾಣಪುರದ ಸದಸ್ಯರು 6 ತಂಡಗಳಲ್ಲಿ 2 ಪ್ರಾಥಮಿಕ ಆರೋಗ್ಯ ಕೇಂದ್ರದ 22 ಖಾಯಂ ಮತ್ತು 1 ವಿಶೇಷ ಪೋಲಿಯೋ ಲಸಿಕಾ ಕೇಂದ್ರಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ಗಳನ್ನು ಸರಬರಾಜು ಮಾಡಲಾಯಿತು. ಈ ಕೇಂದ್ರಗಳ 135 ಸಿಬ್ಬಂದಿಯವರು ಮತ್ತು ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ವಲಯ ಸೇನಾನಿ ಬ್ರಯಾನ್ ಡಿಸೋಜ, ಕಾರ್ಯದರ್ಶಿ ಪ್ರಕಾಶ್ ಕುಮಾರ್, ಮತ್ತಿತರ ರೋಟರಿ ಪದಾಧಿಕಾರಿಗಳು, ಸದಸ್ಯರು ಹಾಗೂ ಯುವ ವಿಚಾರ ವೇದಿಕೆ ಉಪ್ಪೂರು ಇದರ ಸದಸ್ಯರು ಉಪಸ್ಥಿತರಿದ್ದರು.
ಇನ್ನಂಜೆ : 14ನೇ ಶತಮಾನದ ಶಿಲಾಶಾಸನ ಪತ್ತೆ

Posted On: 27-02-2022 10:00PM
ಕಾಪು : ಇನ್ನಂಜೆ ಗ್ರಾಮದ ಕುಂಜಾರ್ಗ ಪ್ರಭು ಕುಟುಂಬದ ಬ್ರಹ್ಮಸ್ಥಾನದ ಪಶ್ಚಿಮದಲ್ಲಿರುವ ಗದ್ದೆಯಲ್ಲಿ ಶಿಲಾಶಾಸನವೊಂದು ಪತ್ತೆಯಾಗಿದೆ.
ಈ ಶಿಲಾಶಾಸನವು ವಿಜಯನಗರದರಸರ ಕಾಲದ್ದು ಎನ್ನಲಾಗಿದ್ದು, ಪುರಾತತ್ವ ಶಾಸನಗಳ ಸಂಶೋಧಕ ಅಧ್ಯಯನ ತಜ್ಞರಾದ ಸುಭಾಸ್ ನಾಯಕ್ ಬಂಟಕಲ್ಲು ಅವರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಶಿಲಾಶಾಸನದಲ್ಲಿ 14ನೇ ಶತಮಾನದ (1356-1377)ಬುಕ್ಕರಾಯನ ಹೆಸರು ಉಲ್ಲೇಖಿತ ಆಗಿದೆ. ಕೊನೆಯಲ್ಲಿ 'ಅರಸಿಂಗೆ ಗದ್ಯಾಣ ನೂರು ಹೊನ್ನು' ಕೊಟ್ಟ ಉಲ್ಲೇಖ. ಕೊನೆಯಲ್ಲಿ ಶಾಪಾಶಯ ಶಾಸನ ಹಾಳು ಮಾಡಿದವನಿಗೆ ವಾರಣಾಸಿಯಲ್ಲಿ ಗೋವುಗಳನ್ನು ಕೊಂದ ಪಾಪ. ಅವರ ಮಗ, ಆತನ ಮಗ ಇತ್ಯಾದಿ ಉಲ್ಲೇಖಿತವಾಗಿದೆ. ಒಂದಿಷ್ಟು ಪದಗಳು ಸಿಕ್ಕರೂ ಅಕ್ಷರಗಳು ನಶಿಸಿ ಹೋಗಿರುವುದರಿಂದ ಸಂಪೂರ್ಣ ಓದಲು ಸಾಧ್ಯವಿಲ್ಲದಾಗಿದೆ.
ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯರಿಗೆ ವಿಶೇಷ ಸಾಧನಾ ಪ್ರಶಸ್ತಿ ಗೌರವ

Posted On: 27-02-2022 09:47PM
ಮಂಗಳೂರು : ಕಾಸರಗೋಡು ಜಿಲ್ಲೆ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಇದರ ಹದಿನೇಳನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ, ಮಕ್ಕಳ ಯಕ್ಷಗಾನ ಬಯಲಾಟದ ವಾರ್ಷಿಕ ಕಲಾಪದಲ್ಲಿ ಫೆಬ್ರವರಿ 26ರಂದು ಜಾನಪದ ಸಂಶೋಧಕ,ಕಟೀಲಿನ ಯಕ್ಷಪ್ರಭಾ ಪತ್ರಿಕೆಯ ಸಂಪಾದಕ ಕೆ.ಎಲ್.ಕುಂಡಂತಾಯರಿಗೆ "ವಿಶೇಷ ಸಾಧನಾ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನಿಸಿದರು. ಶ್ರೀ ಕ್ಷೇತ್ರ ಮಲ್ಲ ಮೊಕ್ತೇಸರ ವಿಷ್ಣು ಭಟ್,ನಿವೃತ್ತ ಐಎಎಸ್ ಅಧಿಕಾರಿ( ಕೇರಳ ಸರಕಾರದ ಸೆಕ್ರೆಟರಿ) ಕೆ.ಗೋಪಾಲಕೃಷ್ಣ ಭಟ್ ಎಡನೀರು, ಅಡ್ಯನಡ್ಕ ಅಮೃತಧಾರಾ ಕ್ಲಿನಿಕ್ ನ ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಪೆರ್ಲದ ಜ್ಯೋತಿ ಮೆಡಿಕಲ್ಸ್ ನ ಡಾ.ಎಸ್.ಎನ್.ಭಟ್ ಪೆರ್ಲ, ಪ್ರಸಿದ್ಧ ಭಾಗವತ ಡಾ.ಸತ್ಯನಾರಾಯಣ ಪಣಿಂಚಿತ್ತಾಯ, ಕೃಷ್ಣ ಭಟ್ ದೇವಕಾನ,ಹಾಗೂ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ ಮತ್ತು ಕೇಂದ್ರದ ನಾಟ್ಯಗುರು ಮತ್ತು ಅಧ್ಯಕ್ಷರಾದ ಸಬ್ಬಣಕೋಡಿ ರಾಮ ಭಟ್ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಟಿ ಪಿ ಮಂಜುನಾಥ್ ಅವರಿಗೆ ಬಿ ಅಪ್ಪಣ್ಣ ಹೆಗಡೆ ಜೀವಮಾನ ಸಾಧನ ಪ್ರಶಸ್ತಿ

Posted On: 27-02-2022 09:14PM
ಕುಂದಾಪುರ: ಓಂ ಶಾಂತಿ ಪ್ರೊಡಕ್ಷನ್ ಕೋಟೇಶ್ವರ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಮಾಚ್೯ 1 ರಂದು ಸಂಜೆ 5:30 ಕ್ಕೆ ಹೊಡೆ ಹೋಬಳಿ ಹನುಮನ್ ಗ್ಯಾರೇಜ್ ಸಮೀಪದಲ್ಲಿರುವ ಪ್ರೆಸ್ ಕ್ಲಬ್ ವಠಾರದಲ್ಲಿ ಶಿವರಾತ್ರಿ ಆಧ್ಯಾತ್ಮ ಸಂದೇಶ, ತಾಲೂಕು ಪತ್ರಕರ್ತರ ಸಂಘದ ಮೂರನೇ ವಾರ್ಷಿಕ ಸಂಭ್ರಮ ಜರಗಲಿದೆ.
ಈ ಸಂದರ್ಭ ಹಿರಿಯ ಪತ್ರಕರ್ತ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕ ಟಿ ಪಿ ಮಂಜುನಾಥ್ ರವರಿಗೆ ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತದನಂತರ ಕುಂದಾಪುರ ಜಿಲ್ಲೆ ಹೋರಾಟ ಎತ್ತ ಸಾಗುತ್ತಿದೆ ಎಂಬ ವಿಷಯದ ಕುರಿತು ಚರ್ಚೆ, ಸಂವಾದ ಹಾಗೂ ಭಕ್ತಿಗಾನ ವೈಭವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಇನ್ ಸ್ಟಾಗ್ರಾಂ ಟ್ರೋಲ್ ಕಿಂಗ್ 193 ಪೇಜ್ ಅಡ್ಮಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

Posted On: 27-02-2022 03:54PM
ಮಂಗಳೂರು : ಇನ್ ಸ್ಟಾಗ್ರಾಂ ಖಾತೆಯಲ್ಲಿ ವ್ಯಕ್ತಿಯೋರ್ವ ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿರುವುದನ್ನು ಕಂಡು ಈ ಪೇಜ್ ನ ವಿರುದ್ಧ ಮಂಗಳೂರಿನ ನಿವಾಸಿಯೋರ್ವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ತಿಳಿಸಿದಂತೆ ಫೆಬ್ರವರಿ 24ರಂದು ಬೆಳಿಗ್ಗೆ ಸುಮಾರು 8ಗಂಟೆಗೆ ತನ್ನ ಸ್ನೇಹಿತರೊಂದಿಗೆ ಇನ್ ಸ್ಟಾ ಗ್ರಾಂ ಖಾತೆಯನ್ನು ಪರಿಶೀಲಿಸುತ್ತಿರುವಾಗ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯಾರೋ ವ್ಯಕ್ತಿಯು ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಮಾಡುತ್ತಿರುವುದು ಕಂಡು ಬಂದು ತಮ್ಮ ಮನಸ್ಸಿಗೆ ನೋವುಂಟಾಗಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಕೋಮು ಗಲಭೆ ನಡೆದು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮಂಗಳೂರು ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2022 ಕಲಂ 66(ಸಿ)66(ಡಿ), ಐಟಿ ಕಾಯ್ದೆ ಮತ್ತು ಕಲಂ 153(ಎ), 505(2) ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕನೊಬ್ಬನನ್ನು ವಿಚಾರಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.
ಬಂಟಕಲ್ಲು : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Posted On: 27-02-2022 12:14PM
ಕಾಪು : ಬಂಟಕಲ್ಲು ಶಾಲೆಯಲ್ಲಿ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ಸಹಕಾರದೊಂದಿಗೆ ನಡೆದ ಪೋಲಿಯೋ ಲಸಿಕಾ ಶಿಬಿರಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ ಕೆ ಆರ್ ಪಾಟ್ಕರ್ ಚಾಲನೆ ನೀಡಿದರು.
ಬೆಳಗ್ಗೆ 11 ಗಂಟೆ ಹೊತ್ತಿಗೆ ನೂರಕ್ಕೂ ಅಧಿಕ ಮಕ್ಕಳು ಲಸಿಕೆ ಪಡೆದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು.
ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ಲಸಿಕಾ ಕೇಂದ್ರಗಳ ಸಿಬ್ಬಂದಿಯವರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ತಿಳಿಸಿದರು.
ಲಯನ್ಸ್ ಕಾರ್ಯದರ್ಶಿ ಅನಿತಾ ಮೆಂಡೋನ್ಸಾ, ರೀನಾ, ಐರಿನ್, ಅಂಗನವಾಡಿ ಕಾರ್ಯಕರ್ತೆ ವಿನಯಾ, ಆಶಾ ಕಾರ್ಯಕರ್ತೆಯರಾದ ಸವಿತಾ, ಕಮಲ, ರೆಹಮತ್ ಉಪಸ್ಥಿತರಿದ್ದರು.