Updated News From Kaup

ವಿದ್ಯಾಸರಸ್ವತಿಗೆ ಡಾಜ್ಲಿಂಗ್ ಫ್ಯಾಷನ್ ಸ್ಟ್ರೀಕ್ಸ್ ಪ್ರಶಸ್ತಿ

Thumbnail
Posted On: 22 May 2022, 05:28 PM

ಉಡುಪಿ : ಬೆಂಗಳೂರಿನ ಡಾಜ್ಲಿಂಗ್ ಫ್ಯಾಷನ್ ಸ್ಟ್ರೀಕ್ಸ್ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಉಡುಪಿಯ ವಿದ್ಯಾ ಸರಸ್ವತಿ ಅವರು ಡಾಜ್ಲಿಂಗ್ ಫ್ಯಾಷನ್ ಸ್ಟ್ರೀಕ್ಸ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತನ್ನ 50ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿದ್ಯಾ ಸರಸ್ವತಿ ಅವರು ಅನೇಕ ಹೆಣ್ಣು ಮಕ್ಕಳಿಗೆ ಮಾದರಿಯಾಗಿರುವುದನ್ನು ಪರಿಗಣಿಸಿ ಶುಕ್ರವಾರ ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಕೊರಂಗ್ರಪಾಡಿ ಉಪಚುನಾವಣೆ ಬಿಜೆಪಿಗೆ ಗೆಲುವು

Thumbnail
Posted On: 22 May 2022, 01:03 PM

ಉಡುಪಿ : ಅಲೆವೂರು ಗ್ರಾಮ ಪಂಚಾಯತ್ ಕೊರಂಗ್ರಪಾಡಿ ಮೂರನೇ ವಾರ್ಡ್ ನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಪಾಲನ್ ರವರು 67 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಮನೆ ಮನೆ ಭೇಟಿ ಮಾಡಿ ಶತಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ. ನಮ್ಮ ಸಾಮಾನ್ಯ ಕಾರ್ಯಕರ್ತರನ್ನು‌ ನಿಲ್ಲಿಸಿ ಗೆಲ್ಲಿಸಿದ್ದೇವೆ. ಇದು ಎಲ್ಲ ಕಾಂಗ್ರೆಸ್ಸಿಗರಿಗೆ ಸ್ಪಷ್ಟವಾದ ಸೂಚನೆ ಜನ ಕಾಂಗ್ರೆಸ್ ಪರವಾಗಿಲ್ಲವೆಂಬುದು. ಅಲ್ಲದೆ ಅಲೆವೂರು ಪಂಚಾಯತ್ ಆಡಳಿತ ಎಷ್ಟು ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದು ಇದರಿಂದ ತಿಳಿಯುತ್ತಿದೆ. ಅಲೆವೂರು ಪಂಚಾಯತ್ ಆಡಳಿತ ಜನಮರುಳು ಮಾಡುತ್ತ ವ್ಯರ್ಥ ಕಾಲಹರಣ ಮಾಡುತ್ತಿದೆ. ಜನತೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡೆಸುವುದು ಬಿಟ್ಟು ಜನವಿರೋಧಿ ಆಡಳಿತ ನಡೆಸಿದುದರ ಪರಿಣಾಮವೂ ಈ ಫಲಿತಾಂಶಕ್ಕೆ ಸ್ವಲ್ಪ ಮಟ್ಟಿನ ಕಾರಣವಾಗಿದೆ. ಒಟ್ಟಾರೆ ಕಾಂಗ್ರೆಸ್ ಮುಳುಗುವ ಹಡಗು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೂ‌ ಇದು ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹೇಳಿದ್ದಾರೆ.

ಹೇರೂರು : ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 22 May 2022, 10:05 AM

ಕಾಪು : ಹೇರೂರು ಗ್ರಾಮದ ಶ್ರೀ ಜುಮಾದಿ ಮತ್ತು ಬಂಟ ದೈವಸ್ಥಾನದ ಪುನರ್ ಪ್ರತಿಷ್ಠೆ ಸಾನಿಧ್ಯ ಕಲಶಾಭಿಷೇಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೇರೂರು ಇದರ ಪ್ರಧಾನ ಅರ್ಚಕರಾದ ಗುರುರಾಜ್ ಭಟ್ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ರಾಮನಾಥ ಶೆಟ್ಟಿ ಹೇರೂರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗುಣಪಾಲ ಶೆಟ್ಟಿ ಅಬ್ಬೆಟ್ಟು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ದೇವದಾಸ್ ಜೋಗಿ, ಶಂಕರ್ ದೇವಾಡಿಗ ಹೇರೂರು, ಗಾಣದ ಮನೆ ದೇಜು ಸೇರಿಗಾರ್, ನಿವೃತ್ತ ಸೇನಾನಿ ದಿನಕರ ರಾವ್, ಮುಕ್ಕಾಲ್ದಿ ಹರೀಶ್ ಶೆಟ್ಟಿ, ವಿಜಯ ಶೆಟ್ಟಿ, ಪ್ರಕಾಶ್ ಶೆಟ್ಟಿ, ಯತೀಶ್ ಶೆಟ್ಟಿ ಹಾಗೂ ಹೇರೂರು ಗ್ರಾಮಸ್ಥರು ಉಪಸ್ಥಿತರಿದ್ದರು.

ಗುರಿ ಸಾಧನೆಗೆ ಪ್ರಯತ್ನ ನಿರಂತರವಾಗಿರಲಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 21 May 2022, 05:52 PM

ಉಡುಪಿ : ವಿದ್ಯಾರ್ಥಿಗಳು ತಮ್ಮ ಕನಸಿನ ಗುರಿಯನ್ನು ಸಾಧಿಸಲು ಕಠಿಣ ಶ್ರಮ ಮತ್ತು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳು ತಾವು ನಿಗದಿಪಡಿಸಿಕೊಂಡಿರುವ ನಿಗದಿತ ಗುರಿಯನ್ನು, ಯಾವುದೇ ಸಂದರ್ಭದಲ್ಲೂ ಕೈಬಿಡದೆ ಅದರ ಸಾಧನೆಗೆ ಪ್ರಯತ್ನಿಸಬೇಕು. ನಿರಂತರವಾಗಿ ಅಧ್ಯಯನ ಹಾಗೂ ಗ್ರಂಥಾಲಯಗಳಿಗೆ ಭೇಟಿ ನೀಡಿ, ಸಾಧನೆಗೆ ಅಗತ್ಯವಿರುವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಸುಸಜ್ಜಿತ ಮತ್ತು ಡಿಜಿಟಲ್ ಗ್ರಂಥಾಲಯ ಸೌಲಭ್ಯವಿದ್ದು, ಅದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಡಿಡಿಪಿಐ ಗೋವಿಂದ ಮಡಿವಾಳ, ಶಿಕ್ಷಣಾಧಿಕಾರಿ ಜಾಹ್ನವಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಅಶೋಕ್ ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪುನೀತ್ ನಾಯಕ್, ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಗಾಯತ್ರಿ, ಕಾಳಾವರ ಸರಕಾರಿ ಪ್ರೌಢಶಾಲೆಯ ನಿಶಾ ಹಾಗೂ ಬೈಂದೂರು ಕಿರಿಮಂಜೇಶ್ವರ ಸಂದೀಪನ ಆಂಗ್ಲಮಾಧ್ಯಮ ಶಾಲೆಯ ಅಕ್ಷತಾ ಅವರನ್ನು ಸನ್ಮಾನಿಸಲಾಯಿತು.

ಕಾಪು ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

Thumbnail
Posted On: 21 May 2022, 05:39 PM

ಕಾಪು : ಕರ್ನಾಟಕ ಸರಕಾರದ ಅಧೀನದಲ್ಲಿರುವ ಕಾಪು ಸಾರ್ವಜನಿಕ ಗ್ರಂಥಾಲಯ ಮತ್ತು ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದರ ಸಾರ್ವಜನಿಕ ಗ್ರಂಥಾಲಯಕ್ಕೆ ಸಮಾಜ ಸೇವೆಯಲ್ಲಿ ರಾಷ್ಟ್ರೀಯ ಪುರಸ್ಕೃತರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ ಬಿ ಶೆಟ್ಟಿ ಕಳತ್ತೂರು,ದಿವಾಕರ ಡಿ ಶೆಟ್ಟಿ ಕಳತ್ತೂರು ಇವರ ನೇತೃತ್ವದಲ್ಲಿ ಕಾದಂಬರಿ ಕಥೆ ಪುಸ್ತಕ, ಆರೋಗ್ಯಕ್ಕೆ ಸಂಬಂಧಪಟ್ಟ ಪುಸ್ತಕ ಹಾಗೂ ಧಾರ್ಮಿಕ ವಿಚಾರವಾದ ದೆಂದೂರ ಪಂಜುರ್ಲಿ ಪುಸ್ತಕವನ್ನು ಕಾಪುವಿನ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕರಾದ ಪೂರ್ಣಿಮಾ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಸಮಾಜ ಸೇವಾ ವೇದಿಕೆ ಗೌರವ ಸಲಹೆಗಾರರದ ದಯಾನಂದ ಕೆ ಶೆಟ್ಟಿ ದೆಂದೂರು, ಉಡುಪಿ ಯುವ ದೇವಾಡಿಗರ ವೇದಿಕೆ ಅಧ್ಯಕ್ಷ ಅಶೋಕ್ ಶೇರಿಗಾರ್ ಅಲೆವೂರು, ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮುಖ್ಯಸ್ಥರಾದ ಹಫೀಜ್ ರೆಹಮಾನ್, ಮಾರ್ಕೆಟಿಂಗ್ ಮೆನೇಜರ್ ರಾಘವೇಂದ್ರ ನಾಯಕ್ ಅಜೆಕಾರ್, ಮಲಬಾರ್ ಚಾರಿಟಿ ಇಂಚಾರ್ಜ್ ತನ್ಜಿಮ್ ಶಿರ್ವ ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿಗೆ ಬಹುಭಾಷಾ ಗಾಯಕಿ ವಿದೂಷಿ ನಂದಿನಿ ರಾವ್ ಭೇಟಿ

Thumbnail
Posted On: 21 May 2022, 05:21 PM

ಕಾಪು : ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿರುವ ಬಹುಭಾಷಾ ಗಾಯಕಿ ವಿದೂಷಿ ನಂದಿನಿ ರಾವ್ ಪಡುಬಿದ್ರಿ ಅವರು ಮೇ. 20ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದೇವಳದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ, ತನ್ನ ಹುಟ್ಟೂರಿನಲ್ಲಿ ಆಗುತ್ತಿರುವ ಇಂತಹ ಪುಣ್ಯಕಾರ್ಯಕ್ಕೆ ಮುಂದಿನ ದಿನಗಳಲ್ಲಿ ತಾನು ಕೂಡಾ ಕೈಜೋಡಿಸುವುದಾಗಿ ಭರವಸೆಯನ್ನಿತ್ತರು. ದೇವಳದ ಸಿಬ್ಬಂದಿ ಸಂತೋಷ್ ಶೆಟ್ಟಿಯವರು ಶ್ರೀ ದೇವಿಯ ಸನ್ನಿದಾನದಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದವನ್ನು ನೀಡಿದರು.

ಕಳತ್ತೂರು ಆರೋಗ್ಯ ಉಪ ಕೇಂದ್ರಕ್ಕೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ

Thumbnail
Posted On: 17 May 2022, 05:08 PM

ಕಾಪು : ಕಾಪು ಪರಿಸರದ ಸಮಾಜ ಸೇವೆಯಲ್ಲಿ ರಾಷ್ಟೀಯ ಪ್ರಶಸ್ತಿ ಪುರಸ್ಕೃತರುಗಳಾದ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಜನಸಂಪ್ರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು,ಉಭಯ ವೇದಿಕೆ ಸಂಚಾಲಕರುಗಳಾದ ದಿವಾಕರ ಡಿ ಶೆಟ್ಟಿ ಕಳತ್ತೂರು ಇವರು ವೈಯಕ್ತಿಕವಾಗಿ ಕಳತ್ತೂರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಉಪ ಕೇಂದ್ರ ಕಳತ್ತೂರುಗೆ 1000 ಲೀಟರ್ ನ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆಯಾಗಿ ಹಸ್ತಾಂತರಿಸಿದರು.) ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಸುಧಾವತಿ ಮಾತನಾಡಿ ನಮ್ಮ ಆರೋಗ್ಯ ಕೇಂದ್ರಕ್ಕೆ ನೀರಿನ ಟ್ಯಾಂಕ್ ಅಗತ್ಯವಿದ್ದು ಕೊಡುಗೆ ನೀಡಿದ ಮೂವರು ರಾಷ್ಟೀಯ ಪ್ರಶಸ್ತಿ ಪಡೆದ ಸಮಾಜ ಸೇವಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾಪು : ಮುಂಬೈ ಪೊಲೀಸ್ ಉಪ ಮಹಾನಿರೀಕ್ಷಕ ವೀರೇಶ್ ಪ್ರಭುರವರಿಂದ ಶಿಲಾ ಸೇವೆ, ಶಿಲಾ ಪುಷ್ಪ ಸಮರ್ಪಣೆ

Thumbnail
Posted On: 17 May 2022, 04:44 PM

ಕಾಪು : ಪೊಲೀಸ್ ಉಪ ಮಹಾನಿರೀಕ್ಷಕ, ಡಿಐಜಿ ಮುಂಬೈ ಕ್ರೈಮ್ ವೀರೇಶ್ ಪ್ರಭು, ಬೈಕಲ, ಮುಂಬೈ ಇವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 9 ಶಿಲಾ ಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮನೋಹರ ಶೆಟ್ಟಿ ಮತ್ತು ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ ಶೆಟ್ಟಿ ಉಪಸ್ಥಿತರಿದ್ದರು.

ಅಕ್ರಮ ಗೋಸಾಗಾಟ, ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ; ಬೃಹತ್ ಪ್ರತಿಭಟನೆಯ ಎಚ್ಚರಿಕೆ

Thumbnail
Posted On: 16 May 2022, 11:36 PM

ಪಡುಬಿದ್ರಿ : ವಿಶ್ವ ಹಿಂದು ಪರಿಷದ್, ಬಜರಂಗದಳ ಕಾಪು ಪ್ರಖಂಡ ವತಿಯಿಂದ ಪಡುಬಿದ್ರಿ ಸುತ್ತ ಮುತ್ತ ನಡೆಯುವ ಅಕ್ರಮ ಗೋಸಾಗಾಟ, ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇ. 16ರಂದು ಪಡುಬಿದ್ರಿ ಪೋಲಿಸ್ ಠಾಣೆಗೆ ಮನವಿ ನೀಡಲಾಯಿತು. ಪಡುಬಿದ್ರಿ ಠಾಣಾ ವ್ಯಾಪ್ತಿಯ ಪಡುಬಿದ್ರಿ, ಹೆಜಮಾಡಿ, ಅವರಾಲು ಪ್ರದೇಶದಲ್ಲಿ ಅವ್ಯಾಹತವಾಗಿ ಗೋಸಾಗಾಟ ಮತ್ತು ಅಕ್ರಮ ಕಸಾಯಿಖಾನೆಗಳನ್ನು ನಡೆಸುವ ತಂಡವನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇಂತಹ ಅಕ್ರಮ ದಂಧೆಗಳು ಮುಂದುವರಿದಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂದರ್ಭ ವಿಶ್ವ ಹಿಂದು ಪರಿಷದ್, ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಜಿಲ್ಲಾಡಳಿತದಿಂದ ಪ್ರಕಟನೆ

Thumbnail
Posted On: 16 May 2022, 10:19 PM

ಉಡುಪಿ : ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರಿಯುವ ಸಾಧ್ಯತೆಯಿರುವ ಕಾರಣ ಮೇ 17 ಮತ್ತು 19ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತು ದಿನಾಂಕ 16 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರತಿದಿನ ತಲಾ 100ಮಿ.ಮಿ ರಿಂದ 150ಮಿ.ಮಿ ಮೇಲ್ಪಟ್ಟು ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕಾಗಿದೆ ಅದರಂತೆ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು. ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ, ಪ್ರವಾಸಿಗರು/ ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸುವುದು ಎಂದು ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ದೂರವಾಣಿಗೆ ಸಂಪರ್ಕಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.