Updated News From Kaup
ಉಡುಪಿ : ವಿಪರೀತ ಮದ್ಯಪಾನದ ಚಟದಿಂದ ವ್ಯಕ್ತಿಯೋರ್ವ ನಿಧನ
Posted On: 17 Jul 2022, 12:27 PM
ಉಡುಪಿ : ಮಧುಕರ ಸುವರ್ಣ (43)ರವರು ತನ್ನ ತಾಯಿಯೊಂದಿಗೆ ಕುತ್ಪಾಡಿ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂದಿರದ ಬಳಿ ವಾಸ್ತವ್ಯವಿದ್ದು, ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಜುಲೈ 15ರ ಸಂಜೆ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಮಧುಕರ ಸುವರ್ಣರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಚೈತನ್ಯ ಕಲಾವಿದರು ಬೈಲೂರು ತಂಡದ ನೂತನ ನಾಟಕದ ಮುಹೂರ್ತ
Posted On: 17 Jul 2022, 12:15 PM
ಉಡುಪಿ : ಚೈತನ್ಯ ಕಲಾವಿದರು ಬೈಲೂರು ತಂಡದ 8ನೇ ನಾಟಕ ವಾರ್ಡ್ ನಂಬರ್-2 ಇದರ ಶುಭ ಮುಹೂರ್ತವು ಜು. 15ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು. ನೂತನ ಕಲಾ ಕುಸುಮವನ್ನು ಬೆಂಗಳೂರು ತುಳುವರ ಚಾವಡಿ ಅಧ್ಯಕ್ಷ ಡಿ. ಪುರುಷೋತ್ತಮ ಪೂಂಜ ಬಿಡುಗಡೆಗೊಳಿಸಿದರಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಭಟ್ ಕೌಡೂರು ಶುಭ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಶುಭ ಹಾರೈಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ ಪೂಜಾರಿ, ಬೈಲೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಪ್ರಸಾದ ಐಸಿರ, ಸಂದೀಪ್ ಮಾಡ, ಆನಂದ ಪೂಜಾರಿ, ಸದಾನಂದ ಸಾಲಿಯಾನ್, ಗುರುರಾಜ್ ಮಾಡ, ಕೃಷ್ಣ ಶೆಟ್ಟಿ, ಸುಬ್ರಹ್ಮಣ್ಯ, ಹರೀಶ್ ಆಚಾರ್ಯ, ಪ್ರಿಯಾ ಪ್ರಸನ್ನ ಶೆಟ್ಟಿ, ಬಲೆ ತೆಲಿಪಾಲೆ ಖ್ಯಾತಿಯ ಪ್ರಶಂಸ ತಂಡದ ಕಲಾವಿದರಾದ ಸಂದೀಪ್ ಶೆಟ್ಟಿ, ಮರ್ವಿನ್ ಶಿರ್ವ, ಶರತ್ ಉಚ್ಚಿಲ, ಸುರೇಶ್ ಸಾಯಿರಾಮ್, ಕಾಪು ರಂಗ ತರಂಗ ತಂಡದ ಸದಸ್ಯರು, ಚೈತನ್ಯ ತಂಡದ ಕಲಾವಿದರು, ಕಲಾಪ್ರೋತ್ಸಾಹಕರು ಉಪಸ್ಥಿತರಿದ್ದರು.
ಕಾಪು : ಲಾರಿ ಚಾಲಕನ ನಿರ್ಲಕ್ಷ್ಯತನದ ಚಾಲನೆ ಕಾರಿಗೆ ಹಾನಿ
Posted On: 17 Jul 2022, 12:11 PM
ಕಾಪು : ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಕಾರೊಂದಕ್ಕೆ ಹಾನಿಯಾದ ಘಟನೆ ಜುಲೈ 16ರಂದು ಕಾಪುವಿನಲ್ಲಿ ನಡೆದಿದೆ. ರೋಹಿತ್ ಆರ್ ಭಟ್ ಇವರು ಕೆಲಸಗಾರರಾದ ಮಂಜುನಾಥರವರೊಂದಿಗೆ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಬೆಳಿಗ್ಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ಕಾಪುವಿನ ಮಹಾವೀರ ಟಾಕೀಸ್ ನ ಎದುರು ರಸ್ತೆಯ ಬಲಗಡೆ ಹೋಗುತ್ತಿರುವಾಗ ಕಾರ್ನ ಸಮಾನಾಂತರವಾಗಿ ಎಡಬದಿಯಲ್ಲಿ ಹೋಗುತ್ತಿದ್ದಾಗ ಲಾರಿಯೊಂದರ ಚಾಲಕನು ನಿರ್ಲಕ್ಷ್ಯತನದಿಂದ ಏಕಾಏಕಿಯಾಗಿ ಲಾರಿಯನ್ನು ಬಲಗಡೆ ಚಲಾಯಿಸಿಕೊಂಡು ಬಂದ ಪರಿಣಾಮ ಕಾರ್ನ ಎಡಬದಿಗೆ ಲಾರಿಯ ಬಲಬದಿಯ ಚಕ್ರಗಳು ಹಾಗು ಲಾರಿಯ ಬಾಡಿ ತಗುಲಿ, ಕಾರ್ನ ಎಡಬದಿಯ ಮುಂದಿನ ಬಂಪರ್, ಎಡಬದಿಯ ಎರಡು ಬಾಗಿಲುಗಳು ಹಾಗು ಬಾಗಿಲಿನ ಹಿಂಭಾಗದ ಬಾಡಿ. ಕಾರಿನ ಬಲಭಾಗದ ಟೈರ್ ಜಖಂಗೊಂಡಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಪು : ಶಿರ್ವದಲ್ಲಿ ಅನಿಯಮಿತ ವಿದ್ಯುತ್ ಕಡಿತ ; ಬಳಕೆದಾರರಿಂದ ಮೆಸ್ಕಾಂ ಕಛೇರಿ ಎದುರು ಬೃಹತ್ ಪ್ರತಿಭಟನೆ
Posted On: 16 Jul 2022, 04:26 PM
ಶಿರ್ವ: ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿ ೫- ೬ ತಿಂಗಳಿಂದ ನಿರಂತರವಾಗಿ ಅನಿಯಮಿತ, ರಾತ್ರಿ ಹಗಲು ಎನ್ನದೆ ವಿದ್ಯುತ್ ಕಡಿತ, ಶಿರ್ವ ಮೆಸ್ಕಾಂ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ಪ್ರತಿಭಟಿಸಿ, ಬಳಕೆದಾರರ ಬೃಹತ್ ಪ್ರತಿಭಟನೆ ಶಿರ್ವ ಮೆಸ್ಕಾಂ ಕಛೇರಿ ಎದುರು ಶನಿವಾರ ಬೆಳಿಗ್ಗೆ ನಡೆಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ವಹಿಸಿದ್ದರು. ಗ್ರಾಮಸ್ಥರ ಪರವಾಗಿ ಕೆಇಬಿ ಅಧಿಕಾರಿಗಳಾದ ಹರೀಶ್ ಕುಮಾರ್ ಮತ್ತು ಪ್ರಸನ್ನ ಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ, ಮತ್ತೆ ಪ್ರತಿಭಟನೆ ನಡೆಸುವುದಾಗಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರು ಪಕ್ಷ, ಜಾತಿ ಭೇದ ಮರೆತು ಭಾಗವಹಿಸಿದ್ದರು.
ನಟ ಪೃಥ್ವಿ ಅಂಬಾರ್ ತಾಯಿ ವಿಧಿವಶ
Posted On: 16 Jul 2022, 01:59 PM
ಕಾಪು : ಉದಯೋನ್ಮುಖ ನಟ, ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರಿಗೆ ಮಾತೃ ವಿಯೋಗ ಉಂಟಾಗಿದೆ. ಅವರ ತಾಯಿ ಸುಜಾತ ವೀರಪ್ಪ ಅಂಬಾರ್ ಅವರು ಅಲ್ಪಕಾಲ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಜಾತ ಅವರು ವೀರಪ್ಪ ಅಂಬರ್ ಅವರ ಧರ್ಮಪತ್ನಿಯಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಅಂತ್ಯಕ್ರಿಯೆ ಇಂದು ಮಂಗಳೂರಿನಲ್ಲಿ ನಡೆಯಲಿದೆ. ದುರ್ಗಾಪರಮೇಶ್ವರಿ ಮಹಿಳಾ ಸಂಘದಲ್ಲಿ ತೊಡಗಿಸಿಕೊಂಡಿದ್ದ ಸುಜಾತ ಅವರು ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನೂ ಇವರ ಪುತ್ರ ನಟ ಪೃಥ್ವಿ ಅಂಬರ್ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದು, ದಿಯಾ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಬೈರಾಗಿ ಮತ್ತು ಶುಗರ್ ಲೆಸ್ ಚಿತ್ರದಲ್ಲಿ ಪೃಥ್ವಿ ಅಂಬರ್ ನಟಿಸಿದ್ದಾರೆ. ಚಿತ್ರಗಳ ಸಕ್ಸಸ್ನ್ನು ಖುಷಿ ಪಡೋ ಸಮಯದಲ್ಲಿ ನಟ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ.
ಶಿರ್ವ ನಿರಂತರ, ಅನಿಯಮಿತ ವಿದ್ಯುತ್ ಕಡಿತ ನಾಳೆ ಬಳಕೆದಾರರ ಬೃಹತ್ ಪ್ರತಿಭಟನೆ
Posted On: 15 Jul 2022, 11:30 PM
ಶಿರ್ವ : ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿ 5- 6 ತಿಂಗಳಿಂದ ನಿರಂತರವಾಗಿ ಅನಿಯಮಿತ, ರಾತ್ರಿ ಹಗಲು ಎನ್ನದೆ ವಿದ್ಯುತ್ ಕಡಿತ, ಶಿರ್ವ ಮೆಸ್ಕಾಂ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ಪ್ರತಿಭಟಿಸಿ ಬಳಕೆದಾರರ ಬೃಹತ್ ಪ್ರತಿಭಟನೆಯು ಜುಲೈ 16 ಬೆಳಿಗ್ಗೆ 10 ಗಂಟೆಗೆ ಶಿರ್ವ ಮೆಸ್ಕಾಂ ಕಛೇರಿ ಮುಂದೆ ಬಳಕೆದಾರರ ಪ್ರತಿಭಟನೆ ನಡೆಯಲಿದೆ ಎಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಆರ್ ಪಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯುತ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.
ಆನ್ ಲೈನ್ ಮೋಸ : ಖರೀದಿಸಿದ ಶೂ ಹಿಂತಿರುಗಿಸುವ ಸಂದರ್ಭ ಬ್ಯಾಂಕ್ ಖಾತೆಯ ಹಣ ಗುಳುಂ
Posted On: 15 Jul 2022, 10:16 PM
ಉಡುಪಿ : ಶೂ ಖರೀದಿಸಿ ಅದನ್ನು ಹಿಂತಿರುಗಿಸುವ ಸಂದರ್ಭ ಕ್ರೆಡಿಟ್ ಕಾಡ್೯ ಮಾಹಿತಿಯನ್ನು ಒದಗಿಸಿ ಬ್ಯಾಂಕ್ ಖಾತೆಯಿಂದ ಹಣವನ್ನು ಕಳೆದುಕೊಂಡ ಘಟನೆ ಜುಲೈ 13ರಂದು ಬ್ರಹ್ಮಾವರದಲ್ಲಿ ನಡೆದಿದೆ. ವಸಂತ ಶೆಟ್ಟಿ ಎಂಬುವವರು ಬ್ರಹ್ಮಾವರ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಂಬ್ರ ಹೊಂದಿರುತ್ತಾರೆ. ಇವರು ಖರೀದಿಸಿದ್ದ ಶೂ ವನ್ನು ಹಿಂತಿರುಗಿಸುವ ಬಗ್ಗೆ ಕರೆ ಮಾಡಿದಾಗ ನಿಮ್ಮ ಶೂ ಹಣವನ್ನು ಹಿಂತಿರುಗಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಒದಗಿಸುವಂತೆ ಸೂಚಿಸಿದ ಮೇರೆಗೆ ಕ್ರೆಡಿಟ್ ಕಾರ್ಡ್ ವಿವರ ಒದಗಿಸಿದ್ದು, ಆ ಬಳಿಕ ಅವರ ಕ್ರೆಡಿಟ್ ಕಾರ್ಡ್ ನಿಂದ ಅದೇ ದಿನ ರೂ. 20,290/-, ರೂ. 15,217/- ಹಾಗೂ ರೂ. 3,554/- ಒಟ್ಟು ರೂ. 39,061/- ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ವಸಂತ್ ರವರ ಗಮನಕ್ಕೆ ಬಾರದೇ ಅನಧಿಕೃತವಾಗಿ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜಿಲ್ಲೆಯ ಅಸಂಘಟಿತ ಕಾರ್ಮಿಕರನ್ನು ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 15 Jul 2022, 08:40 PM
ಉಡುಪಿ : ಜಿಲ್ಲೆಯಲ್ಲಿನ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಹಾಗೂ ಇ-ಶ್ರಮ್ ಯೋಜನೆಯಲ್ಲಿ ನೋಂದಣಿ ಮಾಡುವಂತೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ನಿರ್ದೇಶನ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಹಾಗೂ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 18-40 ವರ್ಷದೊಳಗಿನ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡುವ ಕುರಿತಂತೆ ಅಸಂಘಟಿತ ಕಾರ್ಮಿಕರ ವೃತ್ತಿವಾರು ಸಂಘಗಳೊಂದಿಗೆ ಸಮಾಲೋಚನೆ ನಡೆಸಿ, ನಿಗಧಿತ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಎಲ್ಲಾ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನಗಳ ಕುರಿತು ಅರಿವು ಮೂಡಿಸಿ, ಸ್ಥಳದಲ್ಲೇ ನೋಂದಣಿ ಕಾರ್ಯವನ್ನು ಮಾಡುವ ಮೂಲಕ ಪಿಂಚಣಿ ಸೌಲಭ್ಯ ಪಡೆಯಲು ಯೋಜನೆಗೆ ಸೇರ್ಪಡೆ ಮಾಡುವಂತೆ ಹೇಳಿದರು. ಕಾರ್ಮಿಕರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಕಾರ್ಯಕ್ರಮ ಆಯೋಜನೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ಗಳು ತಮ್ಮ ವ್ಯಾಪ್ತಿಯಲ್ಲಿ ನಿಗಧಿತ ಸ್ಥಳ ಗುರುತಿಸಿ ಎಲ್ಲಾ ಅಗತ್ಯ ಸಹಕಾರವನ್ನು ನೀಡಬೇಕು ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸಹಕಾರ ಪಡೆಯುವಂತೆ ತಿಳಿಸಿದರು. ಜಿಲ್ಲೆಯ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಯೋಜನೆಯಲ್ಲಿ ನೊಂದಣಿ ಮಾಡುವ ಕುರಿತಂತೆ ಎಲ್ಲಾ ಇಲಾಖೆಗಳು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಮಾಹಿತಿ ನೀಡಬೇಕು. ಅಲ್ಲದೇ ನೋಂದಣಿ ಶಿಬಿರಗಳನ್ನು ಆಯೋಜಿಸಿ, ಇ-ಶ್ರಮ್ ನೋಂದಣಿಯ ಪ್ರಯೋಜನಗಳ ಬಗ್ಗೆ ಕಾರ್ಮಿಕ ಇಲಾಖೆ ಮತ್ತು ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಕಾರ್ಮಿಕರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು. ಜುಲೈ 25 ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ-ಶ್ರಮ್ ನೊಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡುವ ಕುರಿತಂತೆ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ, ಅರ್ಹ ಎಲ್ಲಾ ಕಾರ್ಮಿಕರನ್ನು ನೊಂದಣಿ ಮಾಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಕುರಿತೂ ಸಹ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು. ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಹಾಗೂ ಇ-ಶ್ರಮ್ನಲ್ಲಿ ನೋಂದಾಯಿಸಲು ಕಾರ್ಮಿಕರು ಶಿಬಿರಗಳಲ್ಲಿ ಮಾತ್ರವಲ್ಲದೇ ತಮ್ಮ ಸಮೀಪದ ಕಾಮನ್ ಸರ್ವೀಸ್ ಸೆಂಟರ್ಗಳಲ್ಲೂ ಸಹ ನೋಂದಾಯಿಸಬಹುದಾಗಿದೆ ಎಂದರು. ಅಸಂಘಟಿತ ಕಾರ್ಮಿಕ ವಲಯದಲ್ಲಿನ ಬೀದಿ ಬದಿ ವ್ಯಾಪಾರಿಗಳು, ಹಮಾಲಿಗಳು, ಮನೆ ಕೆಲಸ ಮಾಡುವವರು, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಗೃಹ ಆಧಾರಿತ ಕಾರ್ಮಿಕರು ಸೇರಿದಂತೆ ಇತರೆ ವಿವಿಧ ವೃತ್ತಿಯಲ್ಲಿರುವವರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಯಲ್ಲಿ ಸೇರ್ಪಡೆಯಾಗುವ ಮೂಲಕ 60 ವರ್ಷದ ನಂತರ ಕನಿಷ್ಠ 3000 ರೂ. ಖಚಿತ ಮಾಸಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ವಿವಿಧ ಅನುಷ್ಠಾನಾಧಿಕಾರಿಗಳು ಹಾಗೂ ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರುಗಳು ಉಪಸ್ಥಿತರಿದ್ದರು
ಶಿರ್ವ : ಸ್ಪರ್ಧೆಗಳಿಂದ ಪ್ರತಿಭೆಗಳ ಅನಾವರಣ
Posted On: 13 Jul 2022, 02:57 PM
ಶಿರ್ವ: ಇಂದು ನಾವು ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ಇದ್ದೇವೆ. ಪ್ರತಿಯೊಂದು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿದ್ದು ಅದನ್ನು ಪಡೆಯುವುದರಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಪಡೆದುಕೊಳ್ಳಲು ವಿವಿಧ ಸ್ಪರ್ಧೆಗಳ ಅವಶ್ಯಕತೆ ಇಂದು ಅನಿವಾರ್ಯವಾಗಿದೆ . ಪ್ರತಿಯೊಂದು ಸ್ಪರ್ಧೆಯು ಯುವ ಪೀಳಿಗೆಗಳಿಗೆ ಜೀವನದ ಕೌಶಲ್ಯ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ರೂಪಿಸುವಲ್ಲಿ ಸಹಕಾರಿಯಾಗಲಿದೆ, ತನ್ಮೂಲಕ ಪ್ರತಿಭೆಗಳ ಅನಾವರಣ ಆಗಲಿದೆ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ಟೆಕ್ ಮಂತನ 22 ಐಟಿ ಕಾಂಪಿಟೇಶನ್ಸ್ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ವಿಜೇತರಿಗೆ ಪ್ರಮಾಣ ಪತ್ರ ಜೊತೆಗೆ ಬಹುಮಾನಗಳನ್ನು ವಿತರಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಟೆಕ್ ಮಂತನ್ 22 ಐಟಿ ಕಾಂಪಿಟೇಶನ್ಸ್ ಬಗ್ಗೆ ಮಾರ್ಗದರ್ಶನ ನೀಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ವೃದ್ಧಿಸುವ ರಸಪ್ರಶ್ನೆ,ಚರ್ಚೆ ಕೋಡಿಂಗ್, ಗೇಮಿಂಗ್,ರಂಗೋಲಿ,ಅಣುಕು ಸಂದರ್ಶನ, ಪೋಸ್ಟರ್ ತಯಾರಿಕೆ, ಪವರ್ಪಾಯಿಂಟ್ ಪ್ರಸ್ತುತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಕೆಂಜಾರ್ನಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೇಮಿಂಗ್ ಕಾಂಪಿಟೇಶನ್ ನಲ್ಲಿ 1500 ನಗದು ಬಹುಮಾನ ಪಡೆದು ವಿಜೇತರಾದ ದೇವಿ ಪ್ರಸಾದ್ ಶೆಟ್ಟಿ, ಹಾರ್ದಿಕ್ ಸಾಲಿಯಾನ್, ವರ್ಷಿತ್ ಶೆಟ್ಟಿ ಹಾಗೂ ಡೆನ್ಸನ್ ಬ್ರೈನ್ ನಜರೆತ್ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಮಾನ್ವಿತ ಎಸ್ ಸುವರ್ಣ, ಪದ್ಮಶ್ರೀ ಭಟ್, ರಾಯ್ಸನ್ ಜೋಸೆಫ್ ಬರ್ಬೋಜಾ , ನಿವೇದಿತಾ ನಿಖಿಲ್ ಪೂಜಾರಿ, ಪ್ರತ್ವಿನ್ ಬಂಗೇರ ಈ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಶ್ರೀ ಬಿ, ಪ್ರಕಾಶ್, ಪ್ರಣಿತ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೀತಿಕಾ ಬಹುಮಾನ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಸನತ್ ಕುಮಾರ್ ಶೆಟ್ಟಿ, ರಕ್ಷಿತ್ ಪೂಜಾರಿ,ಅನುಪ್ ನಾಯಕ ಸಹಕರಿಸಿದರು. ಪ್ರಿಯಾಂಕ ಪ್ರಾರ್ಥಿಸಿದರು. ಸೃಷ್ಟಿ ಸ್ವಾಗತಿಸಿ, ವಿಧಾತ್ ಶೆಟ್ಟಿ ವಂದಿಸಿದರು. ಎಲ್ರುಶಾ ಮೆಲಿನಾ ಡಿಸಾ ಕಾರ್ಯಕ್ರಮ ಸಂಯೋಜಿಸಿದರು.
ಕಾಪು : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಹೃದಯಾಘಾತ
Posted On: 12 Jul 2022, 11:14 PM
ಕಾಪು : ಮಂಗಳೂರಿನಿಂದ ಗುಲ್ಬರ್ಗಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಪು ಸಮೀಪದ ಉದ್ಯಾವರದಲ್ಲಿ ಜುಲೈ 11 ರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯು ಕನಕಪ್ಪ ದಂಡಿನ (38) ತನ್ನ ಹೆಂಡತಿ ದುರ್ಗವ್ವಳೊಂದಿಗೆ ಕಳೆದ 2 ತಿಂಗಳಿನಿಂದ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಬಂದು ಮಂಗಳೂರಿನ ಪಂಪ್ ವೆಲ್ ಬಳಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಮಳೆಯಾದ ಕಾರಣ ಸ್ವಂತ ಊರಿನಲ್ಲಿ ಕೃಷಿ ಕೆಲಸ ಆರಂಭವಾದ ಕಾರಣ ಮಂಗಳೂರಿನಿಂದ ಬಸ್ಸಿನಲ್ಲಿ ಊರಿಗೆ ಹೊರಟು ಕಾಪುವಿನ ಉದ್ಯಾವರ ಸಮೀಪ ರಾತ್ರಿ ಕನಕಪ್ಪ ದಂಡಿನಗೆ ಎದೆನೋವು ಕಾಣಿಸಿಕೊಂಡಿದ್ದು ದುರ್ಗವ್ವ ಬಸ್ಸಿನ ಕಂಡೆಕ್ಟರ್ ಗೆ ತಿಳಿಸಿ ಅವರು ಚಾಲಕರಿಗೆ ತಿಳಿಸಿ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿಯ ವೈದ್ಯಾಧಿಕಾರಿಯವರಿಗೆ ತೋರಿಸಿ ಪರೀಕ್ಷಿಸಿದಾಗ ವೈದ್ಯರು ಕನಕಪ್ಪ ದಂಡಿನ ಎಂಬುವರು ಎದೆನೋವು ಕಾಣಿಸಿಕೊಂಡು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
