Updated News From Kaup
ಇನ್ನಂಜೆ : ಔಷಧಿ ರಹಿತ ಕೆಚ್ಚಲು ಬಾವು ಗುಣಪಡಿಸುವುದು - ಕಾರ್ಯಾಗಾರ
Posted On: 03 May 2022, 07:20 PM
ಕಾಪು : ಕರ್ನಾಟಕ ಹಾಲು ಮಹಾಮಂಡಲ (ನಿ.), ಬೆಂಗಳೂರು, ದ.ಕ. ಹಾಲು ಒಕ್ಕೂಟ (ನಿ.), ಮಂಗಳೂರು ಹಾಗೂ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಔಷಧಿ ರಹಿತ ಕೆಚ್ಚಲು ಬಾವು ಗುಣಪಡಿಸುವುದು ಕಾರ್ಯಾಗಾರ ಮೇ 4 ಬೆಳಿಗ್ಗೆ 9.30ಕ್ಕೆ ಇನ್ನಂಜೆ, ಮಡುಂಬು (ಕೊಲ್ಲಂಗಾಲ್) ಶೇಖರ್ ಎನ್. ಬಂಗೇರ ಅವರ ಮನೆಯ ಹತ್ತಿರ ಜರಗಲಿದೆ. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ದ.ಕ.ಸ.ಹಾಲು ಒಕ್ಕೂಟ (ನಿ.), ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ವಹಿಸಲಿದ್ದು, ಕ. ಹಾ. ಮ., ಬೆಂಗಳೂರು ಇದರ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೇ. ಇದರ ಉಪ ವ್ಯವಸ್ಥಾಪಕರಾದ ಡಾ. ಅನಿಲ್ ಕುಮಾರ್ ಶೆಟ್ಟಿ, ಎ.ಎಚ್./ಎ.ಐ. ಉಪ ವ್ಯವಸ್ಥಾಪಕರಾದ ಡಾ. ಟಿ. ವಿ. ಶ್ರೀನಿವಾಸ, ಸಂಪನ್ಮೂಲ ವ್ಯಕ್ತಿಯಾಗಿ ರಘೋತ್ತಮ್ ಭಾಗವಹಿಸಲಿದ್ದಾರೆ. ಇನ್ನಂಜೆ ಹಾ.ಉ.ಸ.ಸಂ. (ನಿ.) ಅಧ್ಯಕ್ಷರಾದ ಲಕ್ಷ್ಮಣ ಕೆ. ಶೆಟ್ಟಿಯವರ ಗೌರವ ಉಪಸ್ಥಿತಿಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳಿಯಾರು : ಉಳಿಯಾರಮ್ಮನ ಸನ್ನಿಧಿಯಲ್ಲಿ ಪ್ರತಿಷ್ಠೆಯ ವರ್ಧಂತಿ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ
Posted On: 01 May 2022, 11:48 PM
ಕಾಪು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಳಿಯಾರು ಮಜೂರು ಉಳಿಯಾರಮ್ಮನ ಸನ್ನಿಧಿಯಲ್ಲಿ ಭಕ್ತಾಧಿಗಳ ಸಹಕಾರದೊಂದಿಗೆ ಮೇ 3, ಮಂಗಳವಾರ ಅಕ್ಷಯ ತೃತಿಯ ದಿನದಂದು ಪ್ರತಿಷ್ಠೆಯ ವರ್ಧಂತಿ ಮಹೋತ್ಸವದ ಪ್ರಯುಕ್ತ ದುರ್ಗೆಯ ಸನ್ನಿಧಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಶತ ಚಂಡಿಕಯಾಗ, ಮಧ್ಯಾಹ್ನ 12ಕ್ಕೆ ಪೂರ್ಣಹುತಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ರಂಗಪೂಜೆ ಬಲಿ ಉತ್ಸವ, ರಾತ್ರಿ ಶ್ರೀ ಪಂಚಾಕ್ಷರೀ ಮಕ್ಕಳ ಮೇಳ ಎಲ್ಲೂರು ಇವರಿಂದ ಮಹಿಷ ಮರ್ಧಿನಿ ಯಕ್ಷಗಾನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ
Posted On: 30 Apr 2022, 07:53 PM
ಪಡುಬಿದ್ರಿ, ಏ.30 : ಯುವಜನಾಂಗವು ಕಲಿಕೆಯ ಸಮಯದಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆಯಿದೆ. ಕಲಿಕೆಯ ಹಂತದಲ್ಲಿಯೇ ತರಬೇತಿಗಳು ಅವಶ್ಯ. ಉದ್ಯಮಶೀಲತಾ ತರಬೇತಿ ಶಿಬಿರಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಜರಗಿದ ಯುವವಾಹಿನಿ ಪಡುಬಿದ್ರಿ ಘಟಕ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆ ಸಿಡೋಕ್ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜರಗಿದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ತರಬೇತುದಾರರಾಗಿ ಸಿಡೋಕ್ ಮಂಗಳೂರಿನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್, ಉದ್ಯಮಶೀಲತಾ ತರಬೇತುದಾರರಾದ ಮೋಹನಾಂಗಯ್ಯ ಸ್ವಾಮಿ, ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಮಂಗಳೂರು ಇಲ್ಲಿಯ ಹಿರಿಯ ಸಮಾಲೋಚಕರಾದ ಅಶೋಕ್ ಶೆಟ್ಟಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆಯ ಜಂಟಿ ನಿರ್ದೇಶಕರಾದ ಅರವಿಂದ ಡಿ ಬಾಲೇರಿ ವಹಿಸಿದ್ದರು. ಸುಮಾರು 30ಕ್ಕೂ ಅಧಿಕ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಸಿಡೋಕ್ ಮಂಗಳೂರಿನ ಜಿಲ್ಲಾ ಸಂಯೋಜಕರಾದ ಪ್ರವಿಶ್ಯ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರಾದ ರೇಖಾ ಗೋಪಾಲ್, ಸಮಾಜಸೇವಕರಾದ ಉಮಾನಾಥ್ ಕೋಟ್ಯಾನ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲ, ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷೆ ಯಶೋದ, ಪಡುಬಿದ್ರಿ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸುಜಾತ ಪ್ರಸಾದ್, ಘಟಕದ ಕಾರ್ಯದರ್ಶಿ ವಿಧಿತ್, ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಡುಬಿದ್ರಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ನಿರೂಪಿಸಿದರು. ಪಡುಬಿದ್ರಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಯಶೋದ ಸ್ವಾಗತಿಸಿ, ಪಡುಬಿದ್ರಿ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸುಜಾತ ಪ್ರಸಾದ್ ವಂದಿಸಿದರು.
ಮೇ 2 ರಿಂದ 7ರವರೆಗೆ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿಯಿಂದ ಮಕ್ಕಳಿಗಾಗಿ ರಜಾ ಶಿಬಿರ
Posted On: 30 Apr 2022, 06:33 PM
ಕಟಪಾಡಿ : ಇಲ್ಲಿನ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಇವರಿಂದ 1ರಿಂದ 10ನೇ ತರಗತಿಯೊಳಗಿನ ಮಕ್ಕಳಿಗಾಗಿ ರಜಾ ಶಿಬಿರವು ಮೇ 2 ರಿಂದ 7ರವರೆಗೆ )ಪ್ರತೀ ದಿನ ಬೆಳಗ್ಗೆ 9 ರಿಂದ 1 ಗಂಟೆ ತನಕ ಎಸ್. ವಿ. ಎಸ್ ಹಿ. ಪ್ರಾ.ಶಾಲೆ ಕಟಪಾಡಿ ಇಲ್ಲಿ ಜರಗಲಿದೆ. ಅಂತರರಾಷ್ಟ್ರೀಯ ಖ್ಯಾತಿಯ ತರಬೇತುದಾರರಾದ ವೆಂಕಿ ಪಲಿಮಾರು, ಪ್ರಸಾದ್ ರಾವ್ ಉಡುಪಿ, ಮುಸ್ತಫಾ, ರಮೇಶ್ ಬಂಟಕಲ್, ವಂದನಾ ರೈ ಕಾರ್ಕಳ, ಸೂರ್ಯ ಪುರೋಹಿತ್ ಕಾರ್ಕಳ ಮತ್ತು ಪ್ರಥಮ್ ಕಾಮತ್ ಕಟಪಾಡಿ ಇವರಿಂದ ಮಕ್ಕಳಿಗಾಗಿ ಡ್ರಾಯಿಂಗ್, ಕ್ಲೇ ಮಾಡೆಲಿಂಗ್, ಅಭಿನಯ, ಮ್ಯಾಜಿಕ್, ಪೇಪರ್ ಕ್ರಾಪ್ಟ್, ಡ್ಯಾನ್ಸ್, ಟ್ಯಾಟೂ, ಮುಖವಾಡ ತಯಾರಿ, ಪಿಕ್ನಿಕ್ ಇತ್ಯಾದಿ ಹೊಸತನದ ಕ್ರಿಯಾಶೀಲ ಚಟುವಟಿಕೆಗಳ ಶಿಬಿರ ಜರಗಲಿದೆ. ಕಳೆದ ಬಾರಿ ಕೊರೊನ ಸಮಯ ಕಟಪಾಡಿಯ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ನಿಂದ ಉಚಿತವಾಗಿ ನಮ್ಮ ರಾಜ್ಯವಲ್ಲದೆ ಹೊರ ರಾಜ್ಯದ ಮಕ್ಕಳು ಸೇರಿದಂತೆ ಸುಮಾರು 1ಸಾವಿರಕ್ಕೂ ಅಧಿಕ ಮಕ್ಕಳಿಗೆ ರಜಾ ಮಜಾ ಎಂಬ ವಾಟ್ಸಾಪ್ ಗ್ರೂಪಿನ ಮೂಲಕ ದಿನಕ್ಕೊಂದು ಪ್ರಸಿದ್ಧ ತರಬೇತುದಾರರಿಂದ ಸಾಹಿತ್ಯ, ಕರಕುಶಲಕಲೆಗೆ ಸಂಬಂಧಿಸಿದಂತೆ ತರಬೇತಿ ನೀಡಿದ ಹೆಗ್ಗಳಿಕೆಯಿದ್ದು ಈ ಬಾರಿ ಕಟಪಾಡಿಯಲ್ಲಿ ಮಕ್ಕಳ ಉಪಸ್ಥಿತಿಯೊಂದಿಗೆ ಶಿಬಿರ ನಡೆಯಲಿದೆ. ಕೇವಲ 50 ಮಂದಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಶಿಬಿರದ ಆಯೋಜಕರಾದ ನಾಗೇಶ್ ಕಾಮತ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕೆ.ನಾಗೇಶ್ ಕಾಮತ್, ಕಟಪಾಡಿ 9886432197
ಕೋಟಿ ಚೆನ್ನಯ್ಯ ಪೌಂಡೇಶನ್ ಕಾಪು ವತಿಯಿಂದ ಯಕ್ಷಗಾನ ಕಲಾವಿದನ ಚಿಕಿತ್ಸೆಗೆ ನೆರವು
Posted On: 30 Apr 2022, 09:05 AM
ಕಾಪು : ಯಕ್ಷಗಾನ ಕ್ಷೇತ್ರದ ಪ್ರತಿಭೆ ಗಣೇಶ್ ಕೊಲೆಕಾಡಿ, ಮುಲ್ಕಿಯವರು ಅನಾರೋಗ್ಯದಿಂದ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಕೋಟಿ ಚೆನ್ನಯ್ಯ ಪೌಂಡೇಶನ್(ರಿ), ಕಾಪು ಇದರ ವತಿಯಿಂದ ರೂಪಾಯಿ 28,000 ಗಳ ಚೆಕ್ಕನ್ನು ಕೋಟಿ ಚೆನ್ನಯ್ಯ ಫೌಂಡೇಶನ್(ರಿ) ಇದರ ಅಧ್ಯಕ್ಷರಾದ ಡಾ.ರಾಜಶೇಖರ್ ಕೋಟ್ಯಾನ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೋಪಿನಾಥ ಪಡಂಗ,ಧನಂಜಯ ಮಟ್ಟು, ಪುಷ್ಪರಾಜ್ ಕೊಲೆಕಾಡಿ, ಶಶಿಧರ ಬಂಗೇರ ಉಪಸ್ಥಿತರಿದ್ದರು.
ಹೆಜಮಾಡಿ : ವಿಜ್ಞಾನ ಸಂಶೋಧಕ ಪುಷ್ಪರಾಜ್ ಅಮೀನ್ ತಯಾರಿಸಿದ ಸ್ಪೆಷಲ್ ಪರ್ಪಸ್ ಬೋಟ್ ಪ್ರಾತ್ಯಕ್ಷಿಕೆ
Posted On: 29 Apr 2022, 05:59 PM
ಹೆಜಮಾಡಿ : ರಾಷ್ಟ್ರೀಯ ದಾಖಲೆಗಳನ್ನು ಮಾಡಿದ ವಾಯು ಜಲ ಬಲ ವಿಜ್ಞಾನ ಸಂಶೋಧಕ ಪುಷ್ಪರಾಜ್ ಅಮೀನ್ ಅವರು ತಯಾರಿಸಿದ ಸ್ಪೆಷಲ್ ಪರ್ಪಸ್ ಬೋಟ್ ಪ್ರಾತ್ಯಕ್ಷಿಕೆ ಇಂದು ಹೆಜಮಾಡಿ ಕೋಡಿ ನದಿ ಕುದ್ರುವಿನಲ್ಲಿ ನಡೆಯಿತು. ಈ ಸಂದರ್ಭ ಉಡುಪಿ ಶಾಸಕ ರಘುಪತಿ ಭಟ್, ಸ್ಥಳೀಯರು ಉಪಸ್ಥಿತರಿದ್ದರು.
ಮೇ 6 : ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ
Posted On: 29 Apr 2022, 05:40 PM
ಉಡುಪಿ : ಸಂದೀಪ್ ಶೆಟ್ಟಿ ಕಲ್ಲಪಾಪು, 80 ಬಡಗಬೆಟ್ಟು, ಮುಕೇಶ್ ಕುಮಾರ್ ಕೆರೆಕಾಡು, ಮೂಲ್ಕಿ ಸಹಕಾರದಲ್ಲಿ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಮೈಸೂರು, ಆದಿತ್ಯ ಟ್ರಸ್ಟ್ (ರಿ.) ನಕ್ರೆ, ಕಾರ್ಕಳ ಸಹಯೋಗದೊಂದಿಗೆ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ ಮೇ 6ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾ ಭವನ, ಕುಂತಳನಗರ ಇಲ್ಲಿ ಜರಗಲಿದೆ. ಫಲಾನುಭವಿಗಳು ಶಿಬಿರಕ್ಕೆ ಬರುವಾಗ ತರಬೇಕಾದ ದಾಖಲೆಗಳು : 1. ಇತ್ತೀಚಿನ ಭಾವಚಿತ್ರ 2 ಪ್ರತಿ 2. ಆಧಾರ್ ಕಾರ್ಡಿನ ನಕಲು 2ಪ್ರತಿ 3. ಬಿ. ಪಿ. ಎಲ್. ಕಾರ್ಡಿನ ನಕಲು 2ಪ್ರತಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 90084 44076 / 98457 81211
ಚೆನ್ನಿಬೆಟ್ಟು ಫ್ರೆಂಡ್ಸ್ ಕಡ್ತಲ - 15ನೇ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗಾನ ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ
Posted On: 29 Apr 2022, 05:30 PM
ಉಡುಪಿ : ಚೆನ್ನಿಬೆಟ್ಟು ಫ್ರೆಂಡ್ಸ್ ಕಡ್ತಲ, ಎಳ್ಳಾರೆ ಗ್ರಾಮಸ್ಥರು ಇವರ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ಮಡಾಮಕ್ಕಿ ಮೇಳದರಿಂದ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ ಏಪ್ರಿಲ್ 30 ಶನಿವಾರ, ರಾತ್ರಿ 9.30ಕ್ಕೆ ಕಡ್ತಲ ಚೆನ್ನಿಬೆಟ್ಟು ಅಂಗನವಾಡಿ ವಠಾರದಲ್ಲಿ ನಡಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು -ಮನ -ಧನಗಳಿಂದ ಕಾರ್ಯಕ್ರಮದಲ್ಲಿ ಸಹಕರಿಸಬೇಕೆಂದು ಚೆನ್ನಿಬೆಟ್ಟು ಫ್ರೆಂಡ್ಸ್ ಕಡ್ತಲ,ಎಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರ್ಮಾಳು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ನಿಧನ
Posted On: 29 Apr 2022, 03:06 PM
ಕಾಪು, ಏ.29 : ಎರ್ಮಾಳು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ (94) ಇಂದು ದೈವಾದೀನರಾದರು. ಎರ್ಮಾಳಿನ ಪ್ರತಿಷ್ಠಿತ ಬಂಟಮನೆತನದ ಜಗನ್ನಾಥ ಶೆಟ್ಟಿಯವರು ಕೃಷಿಕರಾಗಿ ಪ್ರಸಿದ್ಧರು. ಧಾರ್ಮಿಕ - ಸಾಂಸ್ಕೃತಿಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಕ್ರಿಯರಾಗಿದ್ದರು, ದೈವಸ್ಥಾನಗಳಲ್ಲಿ ತಮ್ಮ ಮನೆತನವನ್ನು ಪ್ರತಿನಿಧಿಸುತ್ತಿದ್ದರು. ಉಚ್ಚಿಲ ರೋಟರಿ ಸಂಸ್ಥೆ ಶೆಟ್ಟಿಯವರನ್ನು ಯಶಸ್ವೀ ಕೃಷಿಕನೆಂದು ಶ್ಲಾಘಿಸಿ ಸಮ್ಮಾನಿಸಿದೆ. ಜಗನ್ನಾಥ ಶೆಟ್ಟರು ಸರಳ ಸಜ್ಜನಿಕೆಯಿಂದ ಸಮಾಜದಲ್ಲಿ ಜನಪ್ರಿಯರಾಗಿದ್ದರು. ಅವರ ಅಂತ್ಯಕ್ರಿಯೆಯು ಎರ್ಮಾಳು ಮೂಡಬೆಟ್ಟು ಬರ್ಪಾಣಿ ಮನೆಯ ಪರಿಸರದಲ್ಲಿ ಸಂಜೆ ಗಂಟೆ 5 ರಿಂದ 6ರ ವೇಳೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಎಸ್. ಎಮ್. ಹೆಗಡೆ ಮತ್ತು ಕೆ. ಎಲ್. ಕುಂಡಂತಾಯರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ
Posted On: 29 Apr 2022, 01:58 PM
ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಹಿರಿಯ ಅರ್ಥಧಾರಿ ಎಸ್. ಎಮ್. ಹೆಗಡೆ ಹಾಗೂ ಅರ್ಥಧಾರಿ, ಲೇಖಕ, ಚಿಂತಕ ಕೆ. ಎಲ್. ಕುಂಡಂತಾಯ ಆಯ್ಕೆಯಾಗಿದ್ದಾರೆ. ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 23 ರಿಂದ ಆರಂಭವಾಗಲಿದ್ದು, ಮೇ 29 ಭಾನುವಾರ ಸಂಜೆ 5 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿರುವ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಸ್. ಎಮ್. ಹೆಗಡೆ ಮುಡಾರೆಯವರು ಪ್ರಶಸ್ತಿಗೆ ಆಯ್ಕೆಯಾದ ನಂತರ ನಮ್ಮನ್ನಗಲಿದ್ದು ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು. ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.
