Updated News From Kaup

ಮಟ್ಟು : ಮೀನುಗಾರಿಕೆಯ ಸಂದರ್ಭ ಎದೆ ನೋವು ವ್ಯಕ್ತಿ ಸಾವು

Thumbnail
Posted On: 02 Jul 2022, 06:06 PM

ಕಾಪು : ಅಣ್ಣ ಮತ್ತು ತಮ್ಮ ಮಟ್ಟುಗ್ರಾಮದ ಪಾಪನಾಶಿನಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು ಅಣ್ಣನು ಮೀನು ಹಿಡಿಯುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ಜುಲೈ 1ರಂದು ನಡೆದಿದೆ. ಮಟ್ಟು ಗ್ರಾಮದ ದಿನೇಶ್‌ ಎಂಬುವವರು ತನ್ನ ಅಣ್ಣ ಗಣೇಶ್‌ (45)ರೊಂದಿಗೆ ಎಂದಿನಂತೆ ಮೀನು ಹಿಡಿಯಲು ಬೆಳಿಗ್ಗೆ 10 ಗಂಟೆಗೆ ಮಟ್ಟುಗ್ರಾಮದ ಪಾಪನಾಶಿನಿ ನದಿಗೆ ದೋಣಿಯಲ್ಲಿ ಹೋಗಿದ್ದು, ಮೀನು ಹಿಡಿಯುತ್ತಿರುವ ಸಂದರ್ಭ ಗಣೇಶ್ ಗೆ ಎದೆ ನೋವು ಕಾಣಿಸಿಕೊಂಡು ದೋಣಿಯಿಂದ ನೀರಿಗೆ ಬಿದ್ದಿದ್ದು, ಆ ಕೂಡಲೇ ದಿನೇಶ್ ಅಲ್ಲಿಯೇ ಬೇರೆ ದೋಣಿಯಲ್ಲಿ ಮೀನು ಹಿಡಿಯುತ್ತಿದ್ದವರನ್ನು ಕೂಗಿ ಕರೆದು ಅವರ ಸಹಾಯದಿಂದ ನೀರಿಗೆ ಬಿದ್ದಿದ್ದ ಗಣೇಶ್‌ರವರನ್ನು ಮೇಲಕ್ಕೆ ಎತ್ತಿ ದಡಕ್ಕೆ ತಂದಾಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅವರನ್ನು ಕೂಡಲೇ ಮಟ್ಟುವಿನ ಕ್ಲಿನಿಕ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ : ಮನೆಯಂಗಳದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ

Thumbnail
Posted On: 01 Jul 2022, 08:20 PM

ಮಣಿಪಾಲ : ಮನೆಯ ಮುಂದಿನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಮನೆಯಂಗಳದಲ್ಲಿ ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು, ತಲೆಗೆ ತೀವ್ರ ತರಹದ ಗಾಯವಾಗಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ. ತಲೆಗೆ ತೀವ್ರವಾದ ಗಾಯವಾದ ಕೆ .ಎಸ್. ರಮೇಶ್ (62) ರವರನ್ನು ಕೂಡಲೇ ಚಿಕಿತ್ಸೆಗಾಗಿ ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಲಾಗಿದ್ದು, ವೈದ್ಯರು ಪರೀಕ್ಷಿಸಿ ಕೆ.ಎಸ್.ರಮೇಶ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದವಾಗಿರಬೇಕು : ಮನೋಜ್ ಜೈನ್

Thumbnail
Posted On: 01 Jul 2022, 03:28 PM

ಉಡುಪಿ, ಜೂನ್ 30 : ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಹೀಗೆ ಮುಂದುವರೆದಲ್ಲಿ ಅತಿವೃಷ್ಠಿ ಉಂಟಾಗಿ ಸಮಸ್ಯೆಗಳು ಆಗುವ ಸಾಧ್ಯತೆ ಇರುವ ಹಿನ್ನಲೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದರಾಗಿರಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು. ಅವರು ಇಂದು ವರ್ಚುವಲ್ ಮೀಟಿಂಗ್ ಮೂಲಕ ನಡೆದ , ಜಿಲ್ಲೆಯ ಮಳೆ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರಂತರ ಮಳೆಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆಗಳು ಇರುತ್ತವೆ ಅಂತಹ ಪ್ರದೇಶಗಳನ್ನು ಈಗಾಗಲೇ ಗುರ್ತಿಸಿದ್ದು, ಅಲ್ಲಿ ವಾಸಿಸುವ ಜನರಿಗೆ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕಾಳಜಿ ಕೇಂದ್ರಗಳನ್ನು ಗುರುತಿಸಿ ಸಿದ್ದವಾಗಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದರು. ಮಳೆ ಗಾಳಿಯಿಂದಾಗಿ ರಸ್ತೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಕ್ರಮ ವಹಿಸಲು ಅಗತ್ಯ ಪರಿಕರಗಳೊಂದಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ದರಿರಬೇಕು, ತಗ್ಗುಪ್ರದೇಶದಲ್ಲಿರುವ ಸೇತುವೆಗಳು ಮುಳುಗಡೆಗೊಂಡ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಕಾರ್ಯವನ್ನು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ಮಳೆಯಿಂದಾಗಿ ಮನೆ , ಜಾನುವಾರು , ಆಸ್ತಿ ಸೇರಿದಂತೆ ಮತ್ತಿತರ ಹಾನಿಗಳಿಗೆ ನಷ್ಠ ಪರಿಹಾರವನ್ನು ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ ಪರಿಹಾರವನ್ನು ಶೀಘ್ರದಲ್ಲಿಯೇ ತಲುಪಿಸಬೇಕು ಎಂದರು. ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು ,ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ 24 ಗಂಟೆಯೂ ಕಾರ್ಯನಿರ್ವಹಿಸುವುದರೊಂದಿಗೆ , ತುರ್ತು ಕರೆಗಳು ಬಂದಾಗ ತಕ್ಷಣ ಸ್ಪಂದಿಸಬೇಕು ಎಂದರು. ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ರೈತರಿಗೆ ಅಗತ್ಯವಿರುವ ಭಿತ್ತನೆ ಬೀಜ, ರಸಗೊಬ್ಬರಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಅಪಾಯಕ್ಕೆ ಒಳಗಾಗುವ ಸಂಭವವಿರುವ ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಪ್ರಸಕ್ತ ಮಳೆಗಾಲ ಮುಗಿಯುವವರೆಗೂ ತಾಲೂಕು ಹಾಗೂ ಗ್ರಾಮ ಮಟ್ಟದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಗಳು ಪ್ರತೀ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದ ಅವರು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ವಿಕೋಪ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಜುಲೈ 3 : ಎನ್ ಎಸ್ ಸಿ ಡಿ ಎಫ್ ಆಶ್ರಯದಲ್ಲಿ ಸಂಸ್ಕೃತಿ ಜಾತ್ರೆ - ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ‌

Thumbnail
Posted On: 30 Jun 2022, 10:55 PM

ಮಂಗಳೂರು : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಒಂದು ದಿನದ ಸಂಸ್ಕೃತಿ ಜಾತ್ರೆ ಕಾರ್ಯಕ್ರಮ ಜುಲೈ 3, ಭಾನುವಾರ ಬೆಳಿಗ್ಗೆ (9ರಿಂದ ರಾತ್ರಿ 9ರ ವರೆಗೆ) ಮಂಗಳೂರು ಪುರ ಭವನದಲ್ಲಿ ನಡೆಯಲಿದೆ. ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜೆ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕವಿಗೋಷ್ಠಿ ಅಧ್ಯಕ್ಷೆ ಉಪನ್ಯಾಸಕಿ, ಕವಯತ್ರಿ ಮಾನ್ವಿ, ಸಂಚಾಲಕಿ ಮಾನಸ ಪ್ರವೀಣ್ ಭಟ್, ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ NSCDF ಸಮಾಜ ಸೇವಾ ಪುರಸ್ಕಾರವನ್ನು ಮೈಸೂರಿನ ಸಮಾಜ ಸೇವಕ ಡಾ.ಎಂ.ಪಿ.ವರ್ಷ, NSCDF ಸಾಹಿತ್ಯ ಸೇವಾ ಪುರಸ್ಕಾರವನ್ನು ಪಿ.ವಿ.ಪ್ರದೀಪ್ ಕುಮಾರ್, NSCDF ಬಾಲ ಪ್ರತಿಭಾ ಪುರಸ್ಕಾರವನ್ನು ಲಾಲಿತ್ಯ ಕುಮಾರ್ ಬೇಲೂರು ಇವರಿಗೆ ನೀಡಿ ಗೌರವಿಸಲಾಗುವುದು. ಬಳಿಕ ಕವಿಗೋಷ್ಠಿ, ಯಕ್ಷಗಾನ ಗೀತಗಾಯನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು NSCDF ಪ್ರಧಾನ ಕಾರ್ಯದರ್ಶಿ ದಿನಕರ ಡಿ ಬಂಗೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಉದ್ಯಾವರ : ಹೃದಯಾಘಾತದಿಂದ ಮಹಿಳೆ ಸಾವು

Thumbnail
Posted On: 30 Jun 2022, 07:59 PM

ಉದ್ಯಾವರ : ಇಲ್ಲಿನ ಗುಡ್ಡೆಅಂಗಡಿ ಉದ್ಯಾವರದ ವಸಂತಿ (55) ರವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜೂನ್ 30 ರಂದು ನಡೆದಿದೆ. ಕಂಟ್ಟಿಂಗೇರಿಯಲ್ಲಿರುವ ಬ್ಯಾಂಕ್ ಒಂದರಲ್ಲಿ ಉದ್ಯೋಗ ಮಾಡಿಕೊಂಡಿರುವ ಇವರು ಬೆಳಿಗ್ಗೆ 8:30 ಗಂಟೆಗೆ ಬ್ಯಾಂಕ್‌ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್‌ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಿದ್ದಾಗ ಕುಸಿದು ಬಿದ್ದವರನ್ನು ಸ್ಥಳೀಯ ರಿಕ್ಷಾದವರು ಒಂದು ರಿಕ್ಷಾದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ವಸಂತಿರವರಿಗೆ ಮಧುಮೇಹದ ಖಾಯಿಲೆ ಇದ್ದು ಒಂದೂವರೆ ವರ್ಷದ ಮೊದಲು ಎದೆ ಬಡಿತದ ಸಮಸ್ಯೆ ಕಾಣಿಸಿಕೊಂಡಿದ್ದು ಈ ಬಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವಸಂತಿಯವರು ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ : ಭಾರೀ ಮಳೆಯ ಸಾಧ್ಯತೆ - ಶಾಲಾ,ಕಾಲೇಜುಗಳಿಗೆ ರಜೆ

Thumbnail
Posted On: 30 Jun 2022, 07:55 PM

ಉಡುಪಿ : ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗರೂಕತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ - ಜುಲೈ 1ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ. ಜುಲೈ 1 ರಿಂದ 4 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ,ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 30 ಮತ್ತು ಜುಲೈ ಒಂದರಂದು ಆರೆಂಜ್ ಅಲರ್ಟ್ ಜೂನ್ 2 ರಿಂದ ಜೂನ್ ನಾಲ್ಕರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಟಪಾಡಿ : ಶ್ರೇಷ್ಠ ನಾದಸ್ವರ ವಾದಕ ಅಗ್ರಹಾರ ಚಂದಯ್ಯ ಶೇರಿಗಾರ್ ವಿಧಿವಶ

Thumbnail
Posted On: 30 Jun 2022, 07:01 PM

ಕಟಪಾಡಿ : ನಾಡಿನ ಶ್ರೇಷ್ಠ ನಾದಸ್ವರ ವಾದಕರಾಗಿ ಹೆಸರುವಾಸಿಯಾಗಿರುವ ಅಗ್ರಹಾರ ಚಂದಯ್ಯ ಶೇರಿಗಾರ್ ರವರು ಜೂನ್ 30 ರ ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದರು. ಶ್ರೀಯುತ ಅಪ್ಪು ಶೇರಿಗಾರ್ ಹಾಗೂ ಶ್ರೀಮತಿ ಸೀತು ಸೇರಿಗಾರ್ತಿ ರವರ ಸುಪುತ್ರರು. ಬಾಲ್ಯದಿಂದಲೇ ತಂದೆಯಿಂದ ನಾಗಸ್ವರ ವಾದನವನ್ನು ಕರಗತ ಮಾಡಿಕೊಂಡು ಎಲ್ಲರ ಜನಮನ ಗೆದ್ದವರು. ಹಲವಾರು ಸನ್ಮಾನಗಳಿಗೆ ಭಾಜನರಾದರು. ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ. ಇವರು ನೀಡಿದ ಕೊಡುಗೆಗೆ ಸನ್ಮಾನ ನೀಡಿದ ಸಂಘ ಸಂಸ್ಥೆಗಳು : ಸಾವಿರಾಳು ಧೂಮಾವತಿ ದೈವಸ್ಥಾನ ಫಾರೆಸ್ಟ್ ಗೇಟ್ ಏಣಗುಡ್ಡೆ ಕಟಪಾಡಿ, ಲಯನ್ಸ್ ಕ್ಲಬ್ ಕಟಪಾಡಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಯುವ ವೇದಿಕೆ, ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ, ದೇವಾಡಿಗರ ಸೇವಾ ಸಂಘ ಕಟಪಾಡಿ, ಹಳೆ ವಿದ್ಯಾರ್ಥಿ ಸಂಘ ಶ್ರೀ ದುರ್ಗಾಪರಮೇಶ್ವರಿ ಶಾಲೆ ಅಗ್ರಹಾರ. ಸೇವೆ ಸಲ್ಲಿಸಿದ ಕ್ಷೇತ್ರಗಳು : ಅಗ್ರಹಾರ ದುರ್ಗಾಪರಮೇಶ್ವರಿ ದೇವಸ್ಥಾನ. ಕಟಪಾಡಿ, ಕಾಳಿಕಾಂಬ ದೇವಸ್ಥಾನ ಅಗ್ರಹಾರ ಕಟಪಾಡಿ, ಚೊಕ್ಕಾಡಿ ಮಹಾಲಿಂಗೇಶ್ವರ ದೇವಸ್ಥಾನ ಕಟಪಾಡಿ, ವಿಷ್ಣು ಮೂರ್ತಿ ದೇವಸ್ಥಾನ ಮಟ್ಟು ಕಟಪಾಡಿ, ಕಾಪು ಮಾರಿಗುಡಿ, ಜುಮಾದಿ ದೈವಸ್ಥಾನ ಫಾರೆಸ್ಟ್ ಗೇಟ್ ಕಟಪಾಡಿ, ನೀಚ ದೈವಸ್ಥಾನ ದುರ್ಗಾನಗರ ಕಟಪಾಡಿ ಹಾಗೂ ಕಾಪು, ಪಾಂಗಳ, ಕಟಪಾಡಿ, ಶಂಕರಪುರ, ಉದ್ಯಾವರ ಸುತ್ತಮುತ್ತ ಧಾರ್ಮಿಕ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಮರೆಯಾಯಿತು ಶ್ರಮಜೀವಿಯ ಬದುಕು : ಶ್ರೀ ಸಂಜೀವ ಪೂಜಾರಿ

Thumbnail
Posted On: 29 Jun 2022, 07:50 PM

ಕಾಪು : ಮೂಡುಬೆಳ್ಳೆ ಗರಡಿಯ ಪೂ ಪೂಜನೆಯ ಸಂಜೀವ ಪೂಜಾರಿಯವರು ಜೂನ್ 28ರಂದು ದೈವಾಧೀನರಾದರು. ಶ್ರದ್ದಾ ಭಕ್ತಿಯ ಕೇಂದ್ರ ಬ್ರಹ್ಮ ಬೈದ್ಯರುಗಳ ಗರೋಡಿಯಲ್ಲಿ ಪೂ ಪೂಜನೆಯ ಪೂಜಾರಿಯಾಗಿ ಕಾಯ ವಾಚಾ ಮನಪೂರ್ವಕವಾಗಿ ಆತ್ಮ ಸಮರ್ಪಣಾ ಮನೋಭಾವದಿಂದ ಬೈದ್ಯರುಗಳ ಸೇವಾ ಕಾರ್ಯವನ್ನು ಮಾಡಿದ್ದಲ್ಲದೆ ಬೈದ್ಯರುಗಳು ಇತರೆ ಕ್ಷೇತ್ರಗಳಲ್ಲಿ ಆಯಾ ಸಂಪ್ರದಾಯ ಪರಂಪರೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದವರು. ಹಿರಿಯರಿಂದ ಬಂದ ರೂಢಿಗತ ಆಚರಣೆಗಳನ್ನು ಚಾಚೂ ತಪ್ಪದ ರೀತಿಯಲ್ಲಿ ಪಾಲಿಸಿಕೊಂಡು ಬಂದವರು. ಕೃಷಿ, ಹೈನುಗಾರಿಕೆಯಂತಹ ಶ್ರಮಭರಿತ ಕಾಯಕದಲ್ಲಿ ತೊಡಗಿಕೊಂಡ ಕ್ರೀಯಾಶೀಲ ವ್ಯಕ್ತಿ ಇಂದು ಅಕಾಲಿಕವಾಗಿ ಬೈದ್ಯರುಗಳ ಪಾದ ಸೇರಿರುವುದನ್ನು ತಿಳಿಸಲು ವಿಷಾದವಾಗುತ್ತಿದೆ. ಆಗಲಿದ ಸಂಜೀವ ಪೂಜಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣ

Thumbnail
Posted On: 29 Jun 2022, 10:46 AM

ಕಟಪಾಡಿ : ರೋಟರಿ ಜಿಲ್ಲೆ 3182 ವಲಯ 5ರ ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣವು ರೋಟರಿ ಶತಾಬ್ದಿ ಭವನದಲ್ಲಿ ಜೂ.28ರಂದು ಜರಗಿತು. ರೋಟರಿ ಜಿಲ್ಲಾ ಗವರ್ನರ್ ರೊ|ಡಾ| ಜಯಗೌರಿ ಹಡಿಗಾಲ್ ಪದಗ್ರಹಣ ನೆರವೇರಿಸಿ ಶುಭ ಕೋರಿದರು. ಅಧಿಕಾರ ಹಸ್ತಾಂತರ : 2021-22 ಸಾಲಿನ ಅಧ್ಯಕ್ಷರಾದ ಫ್ಲಾವಿಯ ಮಿನೇಝಸ್ ನೂತನ ಅಧ್ಯಕ್ಷರಾದ ರೊ|ಗ್ಲಾಡ್ಸನ್ ಕುಂದರ್ ರಿಗೆ ಮತ್ತು 2021-22 ಸಾಲಿನ ಕಾರ್ಯದರ್ಶಿ ಮಾಲಿನಿ ಶೆಟ್ಟಿ ನೂತನ ಕಾರ್ಯದರ್ಶಿ ರೊಸಿಲ್ವಿಯಾ ಕ್ಯಾಸ್ತಲಿನೋ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಹಲವು ಜಿಲ್ಲಾ ಸಮ್ಮೇಳನಗಳಲ್ಲಿ ಅಸಂಖ್ಯ ಪ್ರಶಸ್ತಿ, ಮನ್ನಣೆಗಳನ್ನು ಪಡೆದಿದ್ದು, ಸರ್ವರ ಸಹಕಾರ, ಸಹಯೋಗದೊಡನೆ ಇನ್ನಷ್ಟು ಉತ್ತುಂಗಕ್ಕೇರಿಸುವ ಅಭಿಲಾಷೆಯನ್ನು ನೂತನ ಅಧ್ಯಕ್ಷರೊಗ್ಲಾಡನ್ ಕುಂದರ್ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೊ| ಡಾ| ಶಶಿಕಾಂತ ಕರಿಂಕ, ವಲಯ ಸೇನಾನಿ ರೊ|ಯಶೋಧರ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ : ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರ

Thumbnail
Posted On: 28 Jun 2022, 09:43 PM

ಉಡುಪಿ : ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ ಕರ್ತವ್ಯವಾಗಿದೆ. ಇದರಿಂದ ಸಮಾಜದಲ್ಲಿ ಎಲ್ಲರೂ ಉತ್ತಮ ಅರೋಗ್ಯವಂತರಾಗಿ ಇರಲು ಸಾಧ್ಯ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಮ್ಮ ಸುತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕು. ಕೇವಲ ಪ್ರಶಸ್ತಿ ಪುರಸ್ಕಾರ ಪಡೆಯುವ ದೃಷ್ಠಿಯಿಂದ ಈ ಕಾರ್ಯವನ್ನು ಮಾಡುವುದು ಸರಿಯಲ್ಲ. ಇದು ನಮ್ಮ ದೈನಂದಿನ ಚಟುವಟಿಕೆಗಳ ಕಾರ್ಯವಾಗಬೇಕು ಎಂದರು. ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಫಲಾಪೇಕ್ಷೆಯಿಲ್ಲದೆ ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅದಕ್ಕೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಅಂತಹ ಪ್ರತಿಫಲ ಮಹತ್ವನ್ನು ಪಡೆದಿರುತ್ತದೆ. ಈ ರೀತಿಯಾಗಿ ನಾವುಗಳು ಸ್ವಚ್ಛತಾ ಕಾರ್ಯಗಳನ್ನು ಮಾಡಿದಾಗ ಅದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು. ಕೇಂದ್ರ ಸರ್ಕಾರದ ಸ್ವಚ್ಛ ವಿದ್ಯಾಲಯ ಪುರಸ್ಕಾರದಂತಹ ಕಾರ್ಯಕ್ರಮವನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ಇಂತಹ ಒಂದು ಮಹತ್ವ ಕಾರ್ಯಕ್ರಮವನ್ನು ರೂಪಿಸುವುದರೊಂದಿಗೆ ಶಾಲಾ ಕಾಲೇಜುಗಳ ಪರಿಸರವನ್ನು ಉತ್ತಮವಾಗಿ ಇರಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಾಮರ್ಥ್ಯ ಹಾಗೂ ಶುಚಿತ್ವವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು. ಪ್ರಸ್ತುತ ಸಾಲಿನ ಈ ಪುರಸ್ಕಾರಕ್ಕೆ ಜಿಲ್ಲೆಯ 1168 ಶಾಲಾ ಕಾಲೇಜುಗಳಲ್ಲಿ 729 ಶಾಲೆಗಳು ನೊಂದಾಯಿಸಿ, 627 ಶಾಲೆಗಳು ಆನ್ಲೈನ್ನಲ್ಲಿ ತಮ್ಮ ಶಾಲೆಯ ಕಾರ್ಯ ಸಾಧನೆಯ ಮಾಹಿತಿಯನ್ನು ದಾಖಲಿಸಿದ್ದು, ಜಿಲ್ಲಾ ಮಟ್ಟದ ಸಮಿತಿಯು ಸರ್ಕಾರದ ಮಾನದಂಡದನ್ವಯ 38 ಶಾಲೆಗಳನ್ನು ವಿವಿಧ ಆಯಾಮಗಳಲ್ಲಿ ಆಯ್ಕೆಗೊಂಡಿರುತ್ತವೆ. ಈ ಎಲ್ಲಾ ಶಾಲಾ-ಕಾಲೇಜುಗಳನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವುದರಿಂದ ಸಮಾಜದ ಹಿತಕ್ಕೆ ಹಾಗೂ ತಮ್ಮ ವೈಯಕ್ತಿಕ ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲೆಗಳೂ ಸ್ವಚ್ಛ ವಿದ್ಯಾಲಯ ಪುರಸ್ಕಾರ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಳಿತು ಎಂದರು. ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರದಲ್ಲಿ, ಕಾರ್ಕಳ ತಾಲೂಕಿನ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರದ ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆವರ್ಸೆಯ ಹಿರಿಯ ಪ್ರಾಥಮಿಕ ಶಾಲೆ, ನಿಟ್ಟೂರಿನ ಜಿ.ಎಂ.ವಿದ್ಯಾನಿಕೇತನ ಶಾಲೆ, ಕುಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುವಳತ್ತೂರು ಕಾರ್ವಾಡಿ ಶಾಲೆ, ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಹಳ್ನಾಡು, ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಗಳಿಗೆ ಸಮಗ್ರ ಪ್ರಶಸ್ತಿ ಹಾಗೂ 30 ಶಾಲೆಗಳಿಗೆ ಇತರೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಡಿಡಿಪಿಐ ಗೋವಿಂದ ಮಡಿವಾಳ ಹಾಗೂ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಚಂದ್ರಾ ನಾಯಕ್ ಸ್ವಾಗತಿಸಿ , ವಂದಿಸಿದರು.