Updated News From Kaup

ವಿಧಾನ ಪರಿಷತ್​ ಸಭಾನಾಯಕನಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಮನಿರ್ದೇಶನ

Posted On: 11-02-2022 11:30PM

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿಧಾನ ಪರಿಷತ್​ ಸಭಾನಾಯಕನಾಗಿ ನಾಮನಿರ್ದೇಶನ ಮಾಡಲಾಗಿದೆ.

ಈ ಬಾರಿಯೂ ಸಭಾ ನಾಯಕರಾಗಿ ನಾಮನಿರ್ದೇಶನ ಮಾಡಿ ಸಭಾಪತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಜೂನ್‌ ವೇಳೆಗೆ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಉಡುಪಿ ಬೊಬ್ಬರ್ಯ ಯುವಸೇವಾ ಸಮಿತಿಯಿಂದ ಹೊರೆಕಾಣಿಕೆ ಸಮರ್ಪಣೆ

Posted On: 11-02-2022 11:23PM

ಉಡುಪಿ : ಕುಕ್ಕೆಹಳ್ಳಿ ಕೊರಗಜ್ಜ ದೈವಸ್ಥಾನದಲ್ಲಿ ಫೆಬ್ರವರಿ 12ರ ಶನಿವಾರದಂದು ನಡೆಯಲಿರುವ ವಾರ್ಷಿಕ ನೇಮೋತ್ಸವಕ್ಕೆ ಉಡುಪಿ ಬೊಬ್ಬರ್ಯ ಯುವಸೇವಾ ಸಮಿತಿಯಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.

ಈ ಸಂದರ್ಭ ಬೊಬ್ಬರ್ಯ ಯುವಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ ಕಾಮತ್ ತುಳುನಾಡಿನ ಧ್ವಜವನ್ನು ಬೀಸುವ ಮೂಲಕ ಹೊರೆಕಾಣಿಕೆಯ ವಾಹನಕ್ಕೆ ಚಾಲನೆ ನೀಡಿದರು.

ಬೊಬ್ಬರ್ಯ ಯುವ ಸೇವಾ ಸಮಿತಿ ಹಾಗೂ ಕೊರಗಜ್ಜ ಯುವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂತೋಷ್, ನಾಗರಾಜ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ನಿರ್ಲಕ್ಷ್ಯತನದ ಚಾಲನೆ ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Posted On: 11-02-2022 11:17PM

ಮೂಡಬಿದ್ರಿ : ಇಲ್ಲಿನ ವಿದ್ಯಾಗಿರಿ ಎಂಬಲ್ಲಿ ಮೂಲ್ಕಿ ಕ್ರಾಸ್ ರಸ್ತೆಯ ಬಳಿ ಕಾರಿನ ನಿರ್ಲಕ್ಷ್ಯತನದ ಚಾಲನೆಯದ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಫೆಬ್ರವರಿ 9ರಂದು ನಡೆದಿದೆ.

ಚಾಲಕ ಕಾರನ್ನು ಮೂಡಬಿದ್ರೆ ಕಡೆಯಿಂದ ಚಲಾಯಿಸಿಕೊಂಡು ಬಂದು ಮೂಲ್ಕಿ ಕ್ರಾಸ್ ರಸ್ತೆಗೆ ತಿರುಗಿಸಿ ನಂತರ ಏಕಾಏಕಿಯಾಗಿ ಪುನಃ ಮಂಗಳೂರು ಕಡೆಗೆ ಹೋಗುವ ರಸ್ತೆಗೆ ನಿರ್ಲಕ್ಷ್ಯತನದಿಂದ ತಿರುಗಿಸಿದ ಪರಿಣಾಮ ಮಂಗಳೂರು ಕಡೆಯಿಂದ ಸ್ಕೂಟರ್ನಲ್ಲಿ ಬರುತ್ತಿದ್ದ ಸಹೋದರರಾದ ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಸಾಹುಲ್ ಹಮೀದ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಹಮ್ಮದ್ ಸಾಹುಲ್ ಹಮೀದ್ ನಿಗೆ ಎರಡು ಕೈಗಳಿಗೆ ಮೂಳೆ ಮುರಿತದ ಗಾಯಗಳಾಗಿರುವುದು ಅಲ್ಲದೇ ದೇಹದ ಭಾಗಗಳಿಗೂ ಗಾಯವಾಗಿದೆ.

ಗಾಯಾಳುವನ್ನು ಚಿಕಿತ್ಸೆಗಾಗಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಜಾಬ್- ಕೇಸರಿ ವಿವಾದದ ಹಿನ್ನೆಲೆ-ಕಾಪು ಪೇಟೆಯಲ್ಲಿ ಪೊಲೀಸ್ ಪಥಸಂಚಲನ

Posted On: 11-02-2022 01:28PM

ಕಾಪು : ಹಿಜಾಬ್- ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಾಪು ವೃತ್ತ ವ್ಯಾಪ್ತಿಯ ಪೊಲೀಸರು ಕಾಪು ಪೇಟೆಯಲ್ಲಿಂದು ಬೆಳಗ್ಗೆ ಪಥ ಸಂಚಲನ ನಡೆಸಿದರು.

ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಕಾಪು, ಪಡುಬಿದ್ರೆ, ಶಿರ್ವ ಠಾಣಾ ವ್ಯಾಪ್ತಿಯ ಸುಮಾರು 90 ಪೊಲೀಸರು ಈ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.

ಪಡುಬಿದ್ರಿ ಎಸೈ ಅಶೋಕ್ ಕುಮಾರ್, ಶಿರ್ವ ಎಸೈ ಶ್ರೀಶೈಲಾ, ಕಾಪು ಎಸೈ ರಾಘವೇಂದ್ರ ಸಿ., ಕ್ರೈಂ‌ ಎಸೈ ತಿಮ್ಮೇಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಡಿಆರ್ ತುಕಡಿ ಕೂಡಾ ಪಾಲ್ಗೊಂಡಿತ್ತು.

ಪಡುಬಿದ್ರಿ : ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

Posted On: 10-02-2022 06:34PM

ಪಡುಬಿದ್ರಿ : ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ ಬ್ರಹ್ಮಸ್ಥಾನದ ಬಳಿ ನಡೆದಿದೆ.

ಪಡುಬಿದ್ರಿ ಇಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ರಾಮಕೃಷ್ಣ ಎಂಬುವವರ ಎರಡನೆಯ ಮಗಳಾದ ಸೌಜನ್ಯ (22) ಹೈದರಾಬಾದಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಳು. ವಕ್೯ ಫ್ರಂ ಹೋಮ್ ಮೂಲಕ ಕಾರ್ಯನಿರ್ವಹಿಸುತ್ತಿದ್ದಳು. ತಂದೆಯ ಅನಾರೋಗ್ಯದ ನಿಮಿತ್ತ ತಂದೆ ತಾಯಿ ಜೊತೆಯಾಗಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಮೊಬೈಲ್ ರಿಚಾಜ್೯ ಬಗ್ಗೆ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಳು ಎಂದು ತಿಳಿದು ಬಂದಿದೆ. ಇದು ತಾಯಿಯೊಂದಿಗೆ ಆಕೆಯ ಕೊನೆಯ ಕರೆಯಾಗಿತ್ತು.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಗೆ ಬಂದು ಹೆತ್ತವರು ಕೋಣೆಯ ಬಾಗಿಲು ಬಡಿದಾಗ ತೆರೆಯದಿದ್ದನ್ನು ಕಂಡು ಕಿಟಕಿಯ ಮೂಲಕ ನೋಡಿದಾಗ ನೇಣಿಗೆ ಶರಣಾದ ದೃಶ್ಯ ಕಂಡು ಬಂದಿತ್ತು. ಆತ್ಮಹತ್ಯೆಗೂ ಮುನ್ನ ಸ್ಥಳೀಯ ವಾಟ್ಸಾಪ್ ಗ್ರೂಪಿನಲ್ಲಿ ಈಕೆ ಹೊರ ಬಂದಿದ್ದಳು. ಸಾವಿಗೂ ಮುನ್ನ ಬರೆದ ಡೆತ್ ನೋಟಿನಲ್ಲಿ ತನ್ನ ಬಾಲ್ಯದ ದಿನಗಳು ಮತ್ತು ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.

ಸೌಮ್ಯ ಸ್ವಭಾವದ ಈಕೆ ಮನೆಯವರೊಂದಿಗೆ ಅನ್ಯೋನ್ಯತೆಯಿಂದ ಇದ್ದಳು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆಬ್ರವರಿ 11 -13 : ಉದ್ಯಾವರದಲ್ಲಿ ನಿರಂತರ್ ನಾಟಕೋತ್ಸವ

Posted On: 10-02-2022 12:02PM

ಕಾಪು : ಕಲೆ' ಸಾಹಿತ್ಯ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಸ್ಥೆಯ ನಾಲ್ಕನೇ ವರ್ಷದ 3 ದಿನಗಳ 'ನಿರಂತರ್ ನಾಟಕೋತ್ಸವ'ವೂ ಇದೇ ಫೆಬ್ರವರಿ 11ರಿಂದ 13ರವರೆಗೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದ ಐಸಿವೈಎಂ ಉದ್ಯಾವರ ಸುವರ್ಣಮಹೋತ್ಸವ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ.

ಫೆಬ್ರವರಿ 11ರಂದು ಸಂಜೆ 6.15ಕ್ಕೆ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ.ವಂ. ಸ್ಟ್ಯಾನಿ ಬಿ ಲೋಬೋ ರವರು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಮೆಲ್ವಿನ್ ನೊರೊನ್ಹಾ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷರಾದ ಲ. ಗೋಡ್ ಫ್ರೀ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನ ದಿನದಲ್ಲಿ 2ನಾಟಕ ಪ್ರದರ್ಶನವಾಗಲಿದ್ದು, ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ 'ರಾಯಾಚಿ ನವಿ ಮುಸ್ತಾಯ್ಕಿ' ಮತ್ತು ವಿಕಾಸ್ ಕಲಾಕುಲ್ ನಿರ್ದೇಶನದ ಮಾಂಡ್ ತಂಡದಿಂದ 'ಮಜ್ಯಾ ಪುತಾಚೊ ಕಿಣ್ಕುಳೊ' ಪ್ರದರ್ಶನವಾಗಲಿದೆ.

ದ್ವಿತೀಯ ದಿನ (ಫೆ.12) ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕ ಮತ್ತು ಉಡುಪಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಅ. ವಂ. ಚಾರ್ಲ್ಸ್ ಮಿನೇಜಸ್, ಕರ್ನಾಟಕ ಪೊಲೀಸ್ ನ ನಿವೃತ್ತ ಎಸ್ ಪಿ ಎಚ್ ಡಿ ಮೆಂಡೋನ್ಸಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ನಿಕಟಪೂರ್ವ ಅಧ್ಯಕ್ಷ ಲ. ಜೋನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡೆನಿಸ್ ಮೊಂತೇರ್ ನಿರ್ದೇಶನದ ಅಸ್ತಿತ್ವ ತಂಡದಿಂದ 'ಹಾಂಡೊ ಉಟ್ಲಾ' ನಾಟಕ ಪ್ರದರ್ಶನವಾಗಲಿದೆ.

ಕೊನೆಯ ದಿನ (ಫೆ.13) ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾಗಿರುವ ವಂ. ರಿಚ್ಚರ್ಡ್ ಕುವೆಲ್ಲೋ, ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಡೀನ್ ಮತ್ತು ಮೆಡಿಕಲ್ ಕಾಲೇಜ್ ಇಲ್ಲಿಯ ಪ್ರೊಫೆಸರ್ ಆಗಿರುವ ಡಾ. ಉರ್ಬನ್ ಡಿಸೋಜ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಸ್ಥಾಪಕ ಅಧ್ಯಕ್ಷರಾಗಿರುವ ಲ. ಹೆನ್ರಿ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ 'ಸಂಪದ್ಲೆ' ನಾಟಕ ಪ್ರದರ್ಶನವಾಗಲಿದೆ ಎಂದು ನಿರಂತರ್ ಪ್ರಕಟನೆ ತಿಳಿಸಿದೆ.

ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ್ ಕುಲಾಲ್ ಪಕ್ಕಾಲು ಆಯ್ಕೆ

Posted On: 09-02-2022 09:04PM

ಕಾಪು : ಪಕ್ಷ ಸಂಘಟನೆಯ ಹೊಣೆಯರಿತ ಜವಾಬ್ದಾರಿ ಮತ್ತು ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಶಿಪಾರಸ್ಸಿನ ಮೇರೆಗೆ, ಪೆರ್ಡೂರಿನ ಕಾಂಗ್ರೆಸ್ ಮುಖಂಡರಾದ ಶಾಂತಾರಾಮ್ ಸೂಡ ರವರ ಮುತುವರ್ಜಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ‌.ಶಿವಕುಮಾರ್ ರವರು ಕಾಪು ವಿಧಾನಸಭಾ ಕ್ಷೇತ್ರದ ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಸಂತೋಷ್ ಕುಲಾಲ್ ಪಕ್ಕಾಲು ಅವರನ್ನು ಆಯ್ಕೆ ಮಾಡಲಾಗಿದೆ.

ಆತ್ಮ ರಕ್ಷಣಾ ಕಲೆಯ ಮೂಲಕ ದೌರ್ಜನ್ಯನಿಂದ ರಕ್ಷಣೆ: ಜಯಪ್ರಕಾಶ್ ಹೆಗ್ಡೆ

Posted On: 09-02-2022 08:39PM

ಉಡುಪಿ : ಹೆಣ್ಣುಮಕ್ಕಳು ತಮ್ಮ ಮೇಲೆ ನಡೆಯುವ ದೌರ್ಜನ್ಯದಿಂದ ರಕ್ಷಿಸಿಕೊಳ್ಳಲು ಕರಾಟೆ ಆತ್ಮ ರಕ್ಷಣಾ ಕಲೆಯು ಸಹಕಾರಿಯಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಓಬವ್ವ ಆತ್ಮರಕ್ಷಣೆ ಕಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ದೌರ್ಜನ್ಯನಿಂದ ತಕ್ಷಣದಲ್ಲಿ ರಕ್ಷಿಸಿಕೊಳ್ಳಲು ಆತ್ಮ ರಕ್ಷಣೆ ಕಲೆ ನೆರವಾಗಲಿದೆ. ಆತ್ಮ ರಕ್ಷಣೆಯಿಂದ ಆತ್ಮಸ್ಥೈರ್ಯ ಮೂಡಲಿದೆ. ಕರಾಟೆಯಿಂದ ದೈಹಿಕವಾಗಿ ಬಲಿಷ್ಠವಾಗುವ ಜೊತೆಗೆ ಮಾನಸಿಕವಾಗಿಯೂ ಬಲಿಷ್ಠರಾಗಲು ಸಾಧ್ಯ. ಈ ಕಾರ್ಯಕ್ರಮ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆರಂಭವಾಗಬೇಕು ಎಂದರು. ವಿದ್ಯಾರ್ಥಿಗಳು ಆನ್ಲೈನ್ ವಂಚನೆ ಕುರಿತಂತೆ ಎಚ್ಚರವಹಿಸುವಂತೆ ತಿಳಿಸಿದ ಜಯಪ್ರಕಾಶ್ ಹೆಗ್ಡೆ, ಯಾವುದೇ ಕಾರಣಕ್ಕೂ ತಮ್ಮ ಮೊಬೈಲ್ಗೆ ಬರುವ ಓ.ಟಿ.ಪಿ ಯನ್ನು ಇತರರಿಗೆ ನೀಡದಂತೆ ಕಿವಿ ಮಾತು ಹೇಳಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳನ್ನು ಕಲಿಯುವ ಆಸೆ ಇದ್ದರೂ ಸಹ ಸಮಯದ ಕೊರತೆಯಿರುತ್ತದೆ. ಪ್ರಸ್ತುತ ಸರ್ಕಾರವೇ ಹಾಸ್ಟೆಲ್ನಲ್ಲಿ ಆತ್ಮ ರಕ್ಷಣೆ ಕಲೆಯನ್ನು ಕಲಿಸುತ್ತಿದ್ದು, ವಸತಿ ನಿಲಯಗಳಲ್ಲಿನ ಎಲ್ಲಾ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬೇಕು. ಆತ್ಮ ರಕ್ಷಣೆಯಿಂದ ಆತ್ಮ ವಿಶ್ವಾಸ ಮೂಡಲಿದೆ ಎಂದು ಹೇಳಿದರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದೇವಿಂದ್ರ ಎಸ್ ಬಿರಾದಾರ ಸ್ವಾಗತಿಸಿದರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಜಿಲ್ಲೆಯ 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಂದ ಕರಾಟೆ ಪ್ರದರ್ಶನ ನಡೆಯಿತು. ಮೃಣಾಲಿನಿ ಸಚಿನ್ ಶೆಟ್ಟಿ ತರಬೇತಿ ನೀಡಿದರು.

ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ರಾಷ್ಟ್ರೀಯ ಭೂ-ಯುವಸೇನಾ ತರಬೇತಿ ಶಿಬಿರ

Posted On: 09-02-2022 07:56PM

ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರವು ಏರ್ಪಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಶಸ್ತ್ರಾಸ್ತ್ರವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಪ್ರತಿಯೊಬ್ಬ ಕ್ಯಾಡೆಟ್‍ಗಳು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳುವುದು ಅತೀ ಅಗತ್ಯ ಮುಂದೆ ವಿವಿಧ ಉದ್ಯೋಗಾವಕಾಶಗಳಿಗೆ ಇದು ಸಹಕಾರಿ ಎಂದು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಕಳದ ಪೊಲೀಸ್ ಫೈರ್ ರೇಂಜ್ ಅಲ್ಲಿ ನಡೆದಂತ ಬೆಸ್ಟ್ ಫೈರಿಂಗ್ ತರಬೇತಿಯಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ಕೆಡೆಟ್ ಆಶಿಶ್ ಪ್ರಸಾದ್ ಮತ್ತು ಇತರ ಕ್ಯಾಡೆಟ್ ಗಳನ್ನು ಅಭಿನಂದಿಸಲಾಯಿತು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ತರಬೇತಿನ ಮುಖ್ಯ ಉದ್ದೇಶ ಮತ್ತು ಪ್ರಯೋಜನವನ್ನು ತಿಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಘಟಕದ ಹವಾಲ್ದಾರ್ ಜೆಸಿಓ ಟಿಸೆರಿಂಗ್ ಆಂಗ್ಚೋಕ್ , ಸಂತೋಷ್ ಕುಮಾರ್, ಎನ್ಸಿಓ ಗುರು ಪಾಲ್ ಸಿಂಗ್ ಭೂ-ಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ. ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಕವಾಯತು, ಭೂಪಟ ಅಧ್ಯಯನ, ಫೈರಿಂಗ್ ಅಣಕುಯುದ್ಧ, ಶಸ್ತ್ರಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದನ್ನು ಪ್ರಾತ್ಯಕ್ಷಿಕೆಯಮೂಲಕ ತಿಳಿಸಿ ತರಬೇತಿ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉಪನ್ಯಾಸಕಿ ಯಶೋದ, ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ,ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ, ಸುರಕ್ಷಾ ಉಪಸ್ಥಿತರಿದ್ದರು.ಕಂಪನಿ ಸರ್ಜೆಂಟ್ ಕ್ವಾರ್ಟರ್ ಮಾಸ್ಟರ್ ಮೋಹಿತ ಎನ್ ಸಾಲಿಯಾನ್,ಕಾರ್ಪೋರಲ್ ಧೀರಜ್, ಅನುಪ್ ನಾಯಕ ಮತ್ತಿತರರು ಸಹಕರಿಸಿದರು. ಕ್ಯಾಡೆಟ್ ಜನಿಸಿಯಾ ನೊರೊನ್ಹಾ ಸರ್ವರನ್ನೂ ಸ್ವಾಗತಿಸಿ ,ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ವಂದಿಸಿದರು. ಕ್ಯಾಡೆಟ್ ಎಲ್ರುಷಾ ಮಿಲಿನಾ ಡೇಸ ಕಾರ್ಯಕ್ರಮವನ್ನು ನಿರೂಪಿಸಿದರು.

'ಕೆಡ್ಡಸ' ಮರೆತು ಹೋಗುತ್ತಿರುವ ಆಚರಣೆ - ಭೂಮಿತಾಯಿ 'ಪುಷ್ಪವತಿ' ಎಂಬ 'ಒಸಗೆ'

Posted On: 09-02-2022 07:46PM

[ಫೆ.9,10,11 ಅಂದರೆ ಮಕರಮಾಸದ ಕೊನೆಯ ಮೂರು ದಿನ.ಪುಯಿಂತೆಲ್ ತಿಂಗಳ ಅಂತ್ಯದ ದಿನಗಳು : 'ಭೂ ರಜಸ್ವಲಾ ದಿನ'.] ‌‌‌ ‘ನಿಸರ್ಗ ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ’ ಎಂಬುದು ಒಂದು ಹಳೆಯ ರೂಢಿಯ ಮಾತು. ಕಾಡು ನಾಡಾಗುತ್ತಾ ಕೃಷಿ ಲಾಭಕಾರಿ ಎನಿಸದೆ, ಅವಗಣನೆಗೆ ಒಳಗಾಗಿರುವ ಅಭಿವೃದ್ಧಿಯ ಭರಾಟೆಯ ಈ ಕಾಲಘಟ್ಟದಲ್ಲಿ ಒಂದು ಪುರಾತನ ಸಾಂಸ್ಕೃತಿಕ ಸಂಭ್ರಮ ಮರೆಯಾಗುತ್ತಿದೆ. ಆದುದರಿಂದಲೇ ನಮ್ಮ ಆಚರಣೆಗಳು ಮೂಲ ಆಶಯ ಕಳೆದುಕೊಳ್ಳುತ್ತಿವೆ, ಔಪಚಾರಿಕವಾಗುತ್ತಿವೆ. ಅಥವಾ ಮರೆತೇ ಹೋಗುತ್ತಿವೆ. ಮರೆತು ಹೋದ - ಹೋಗುತ್ತಿರುವ ಆಚರಣೆಗಳಲ್ಲಿ ತುಳುವರ ‘ಕೆಡ್ಡಸ’ ಒಂದು; ಹೌದು... ಕೆಡ್ಡಸ ಹಾಗಂದರೆ ಏನು, ಯಾವಾಗ ಸನ್ನಿಹಿತವಾಗುತ್ತದೆ ಎಂದು ಪ್ರಶ್ನಿಸುವಂತಾದ ಈ ಸ್ಥಿತಿಗೆ ನಮ್ಮ ಬದುಕಿನ ರೀತಿ-ನೀತಿ-ರಿವಾಜುಗಳು ಬದಲಾದುದೇ ಕಾರಣ. ಮನಸ್ಸು - ಮನಸ್ಸುಗಳ ನಡುವಿನ ಮಾನಸಿಕ ಅಂತರ ಹಿಗ್ಗುತ್ತಾ ಭಾವನಾತ್ಮಕ ಸಂಬಂಧಗಳು ಕೇವಲ ‘ಸೋಗು ಅನ್ನಿಸುತ್ತಾ’ ಮುಂದೆ ಗಮಿಸುವ ಅತಿ ಉತ್ಸಾಹದಲ್ಲಿ ನೆಲ, ಜಲ, ಮರಮಟ್ಟು ,ಒಟ್ಟಿನಲ್ಲಿ ಪ್ರಕೃತಿಯನ್ನು ಕಾಣುವ ದೃಷ್ಟಿಯೂ ಬದಲಾಗಿದೆ. ಒಂದು ಕಾಲಕ್ಕೆ ಪ್ರಕೃತಿ ನಮ್ಮನ್ನು ಪೋಷಿಸುವ, ಜೀವನಾಧಾರಳಾಗಿರುವ ತಾಯಿ. ನೆಲದವ್ವೆಯನ್ನು ನಂಬಿದ್ದು ಎಲ್ಲಿಯವರೆಗೆ ಎಂದರೆ ‘ಭೂಮಿಸಾಕ್ಷಿಯಾಗಿ ಹೇಳುತ್ತೇನೆ' ಎಂದು ಭೂಮಿಯನ್ನು ಸ್ಪರ್ಶಿಸಿ ಸಾಕ್ಷಿ ಹೇಳುವ ಮಾತು ಜನಮಾನಸದಲ್ಲಿ ಸಹಜವಾಗಿ ಚಾಲ್ತಿಯಲ್ಲಿತ್ತು. ನಾವು ಭೂಮಿಯನ್ನು ಗೌರವಿಸುತ್ತಿದ್ದೆವು, ಪೂಜಿಸುತ್ತಿದ್ದೆವು.ಜನಪದರ ಜೀವನ ಭೂಮಿಗೆ ಅಂತಹ ಮಹತ್ತರ ಪ್ರಾಶಸ್ತ್ಯ ಕೊಟ್ಟಿತ್ತು ಎಂಬುದಕ್ಕೆ ‘ಕೆಡ್ಡಸ’ ಆಚರಣೆಯ ಸ್ವರೂಪ, ಕಲ್ಪನೆ, ಅನುಸಂಧಾನಕ್ಕೆ ಆಧಾರವಾಗುತ್ತದೆ. ಭೂಮಿ ಹೆಣ್ಣು ಎಂದು ಪರಿಗ್ರಹಿಸಿದ ಮಾನವ ಭೂಮಿಯಂತೆ ಫಲಸಮೃದ್ಧಿಯನ್ನು ನೀಡುವ, ಜನ್ಮ ನೀಡಿದ ತಾಯಿಯ ಔದಾರ್ಯಕಂಡ; ‘ನೆಲವನ್ನು ಅಬ್ಬೆ ಎಂದು ಪ್ರೀತಿಸಿದ. ಆಕೆಯ ಉತ್ಪನ್ನಗಳೆಲ್ಲ ‘ಫಲವೆಂದು ಪರಿಗ್ರಹಿಸಿ ತಾಯಿಯಿಂದ ತಾನು, ಭೂಮಿಯಿಂದ ಫಲವಂತಿಕೆ’ ಎಂದು ಸಮೀಕರಿಸಿ ಆರಾಧಿಸತೊಡಗಿದ. ಜನಪದರ ಸರಳ, ಮುಗ್ಧ ಆದರೆ ಗಾಢವಾದ ಚಿಂತನೆಯುಳ್ಳ ಪ್ರಕೃತಿ ಪರ ಕಾಳಜಿ ಎಷ್ಟು ಭವ್ಯವಾಗಿದೆ ತಾನೆ! ಸ್ತ್ರೀ ಸಹಜ ದೈಹಿಕ ಬದಲಾವಣೆಯನ್ನು ಗಮನಿಸುತ್ತಾ ಪ್ರಕೃತಿಯ ಋತುಚಕ್ರಕ್ಕನುಗುಣವಾಗಿ ಭೂಮಿತಾಯಿಯಲ್ಲಿ ಕಾಣುವ ಸ್ಥಿತ್ಯಂತರಗಳನ್ನು ಕ್ರೋಡೀಕರಿಸಿಕೊಂಡ ಜನಪದರು ತನ್ನ ತಾಯಿಯಂತೆಯೇ ಭೂಮಿದೇವಿಯೂ 'ಋತುಮತಿ'ಯಾಗುವ ಕಾಲವನ್ನು, ಮತ್ತೆ ಸೃಷ್ಟಿಗೆ ಅಣಿಯಾಗುವ ಸಂದರ್ಭವನ್ನು ಪ್ರಾಕೃತಿಕ ಋತುಮಾನಕ್ಕೆ ಅನುಗುಣವಾಗಿ ನಿಗದಿಪಡಿಸಿ ಆಚರಿಸತೊಡಗಿದ , ಹೇಗಿದೆ ಮುಗ್ಧ ಹೃದಯಗಳ ಕಲ್ಪನೆ? ನಮ್ಮವ್ವೆ ತಿಂಗಳಿಗೊಮ್ಮೆ ಪುಷ್ಪವತಿಯಾಗುವುದಾದರೆ, ‘ಭೂಮಿ ಅವ್ವೆ ವರ್ಷಕ್ಕೊಮ್ಮೆ ಋತುಮತಿಯಾಗುವುದು. ನಮ್ಮ ಜೀವನ ವಿಧಾನದಲ್ಲಿ ಇರುವ ಎಲ್ಲ ವಿಧಿ-ನಿಷೇಧಗಳೂ ಭೂಮಿತಾಯಿಗೂ ಇದೆ ಎಂದು ನಿರ್ಧರಿಸಿ ಭೂಮಿಯನ್ನು ಅಗೆಯಬಾರದು, ಕೃಷಿಗೆಂದು ಉಳಬಾರದು, ಮರಗಿಡಗಳನ್ನು ಕಡಿಯಬಾರದು , ಬದಲಾಗುವ ನಿಸರ್ಗದ ಸೌಂದರ್ಯ ನೋಡುತ್ತಾ ಸೌಭಾಗ್ಯ ರೂಪದ ಕೃಷಿ ಸಮೃದ್ಧಿ ನೀಡಲು ಭೂಮಿತಾಯಿ ಪ್ರಕೃತಿಯ ಮಡಿಲಲ್ಲಿ ಮತ್ತೆ ಅಣಿಯಾದಳು ಎಂಬ ಸಂಕೇತವಾಗಿ ಫಲೀಕರಣಕ್ಕೆ ಮುನ್ನ ಪುಷ್ಪವತಿಯಾಗಿ ತಾನು ಸಿದ್ಧಳಾಗುತ್ತಿದ್ದಾಳೆ ಎಂದು ಭವದ ಭವ್ಯತೆಯನ್ನು ನಿರೂಪಿಸಿರಬೇಕು.

'ಭೂದೇವಿ ಪುಷ್ಪವತಿ' ಎಂಬ ಸಡಗರವಾದರೆ ಈ ಸಂಭ್ರಮಾಚರಣೆಗೆ ‘ಬೇಟೆ’ ಒಂದು ಪೂರಕ ಅಂಗ. ‘ಪುಂಡದ’ ಎಂಬ ಹಕ್ಕಿಗೆ ಜ್ವರ ಬರುವ ದಿನಗಳಂತೆ, ಉಳಿದಂತೆ ಕಾಡು ಪ್ರಾಣಿಗಳ ಕಾಲಿನ ಪಾದದ (ಗೊರಸು, ಪಂಜ ಇತ್ಯಾದಿ) ಅಡಿಭಾಗ ಬಿರಕು ಬಿಟ್ಟು ಓಡಲು ಕಷ್ಟವಾಗುವ ಸಂದರ್ಭವು ಕಾಲಮಾನಕ್ಕೆ ಸರಿಯಾಗಿ ಒದಗುತ್ತದದಂತೆ. ಊರಿನ ಜನರೆಲ್ಲ ಸಾಮೂಹಿಕವಾಗಿ ಬೇಟೆಯಾಡುತ್ತಾ ಬೇಟಯನ್ನು ಸಂಭ್ರಮಿಸುತ್ತಾರೆ. ಊರಿನ ಮುಖ್ಯಸ್ಥನ ಅಥವಾ ಅರಸನ ಅಪ್ಪಣೆಯೂ ಬೇಟೆಯಾಟಕ್ಕೆ ಇತ್ತಂತೆ. ಒಟ್ಟಿನಲ್ಲಿ ಸ್ತ್ರೀಯರ ಆಚರಣೆಯಲ್ಲಿ ಪುರುಷರಿಗೆ ಬೇಟೆಯ ಅವಕಾಶ. ಮನೆಯಂಗಳದಲ್ಲಿ ‘ಕೆಡ್ಡಸ’ ಬರೆದು ಅದರ ಮೇಲೆ ಮಾಂಗಲ್ಯ ಸೂಚಕ ವಸ್ತುಗಳನ್ನು ಕೊಡಿಬಾಳೆ ಎಲೆಯಲ್ಲಿಡುವ, ಸ್ನಾನಕ್ಕೆ ಬೇಕಾದ ಪ್ರಕೃತಿಜನ್ಯ ಸವಲತ್ತುಗಳನ್ನು ಒದಗಿಸುತ್ತಾ ಫುಷ್ಪವತಿಯಾದ ತಾಯಿ ಮಡಿಸ್ನಾನದಿಂದ ಪರಿಶುದ್ಧಳಾಗಿ ಮನೆಯೊಳಗೆ ಬರುವ ಮುಂತಾದ ವಿವಿಧ ಆಚರಣೆಗಳು ನಡೆಯುತ್ತವೆ. ಫಲವತಿಯಾಗುವ ಸರ್ವ ಲಕ್ಷಣ ಸಂಪನ್ನೆಯಾಗಿ ಪುಷ್ಪವತಿಯಾಗುವ ಪೂರ್ವಭಾವೀ ಚಿಂತನೆ, ಸ್ನಾನದ ಸಡಗರ, ಈ ನಡುವೆ ತಿನ್ನಲು ನೀಡುವ ,ಆ ಕಾಲದಲ್ಲಿ ಲಭ್ಯವಿರುವ ಧಾನ್ಯಗಳನ್ನು ಹುರಿದು ತಯಾರಿಸಿದ ವಿಶೇಷ ತಿನಿಸುಗಳು ತುಳುನಾಡಿನ ‘ಕೆಡ್ಡಸ’ ಆಚರಣೆಯ ವಿಶಿಷ್ಟ ವಿಷಯಗಳು. ಧಾನ್ಯಗಳಲ್ಲಿ ‘ಜೀವ’ವನ್ನು, ದೈಹಿಕ ಕಾಮನೆಗಳನ್ನು ಪ್ರಚೋದಿಸುವ ಗುಣಗಳು ಇವೆ ಎಂಬುದೂ ಒಂದು ಆಯಾಮದ ಚಿಂತನೆ. ಭೂ ದೇವಿಗೆ ಪುಷ್ಪವತಿ ಎಂಬ ಸಂಭ್ರಮ ಮುಗಿದು ಜಳಕದ ಸಿದ್ಧತೆಗಳಾಗುತ್ತಿವೆ. ಇದು ‘ಕೆಡ್ಡಸ’.

ಕುಡುವರಿ - ನನ್ನೆರಿ : • ಕುಡುವರಿ ನನ್ನೆರಿ ಅಕ್ಕಿ, ಹುರುಳಿ, ಹೆಸರು ಮುಂತಾದ ಧಾನ್ಯಗಳನ್ನು ಹುರಿದು ತೆಂಗಿನ ಕಾಯಿ ತುಂಡುಗಳನ್ನು ಬೆರೆಸಿ ತಯಾರಿಸುವ ವಿಶಿಷ್ಟ ತಿನಿಸು 'ಕೆಡ್ಡಸದ ಕುಡುವರಿ'. ಹೀಗೆ ಹುರಿದ ಧಾನ್ಯಗಳನ್ನು ಕುಟ್ಟಿಪುಡಿ ಮಾಡಿ ಬೆಲ್ಲ ಮತ್ತು ತೆಂಗಿನ ಕಾಯಿ ಬೆರೆಸಿ ಸಿದ್ಧಗೊಳಿಸುವ ‘ನನ್ನೆರಿ’ ಎಂಬುದು ಪ್ರಾದೇಶಿಕ ಭಿನ್ನತೆಯಾಗಿ ರೂಢಿಯಲ್ಲಿದೆ. • ಕುಡುವರಿಯನ್ನು ಎಲ್ಲರೂ ತಿನ್ನಬೇಕು. ಊರಿನಲ್ಲಿಲ್ಲದಿದ್ದರೆ ತೆಗೆದಿಟ್ಟು ಬಂದಾಗ ಕೊಡಬೇಕು. ಚೊಚ್ಚಲ ಮಕ್ಕಳಿಗೆ ಇದರಲ್ಲೂ ಆದ್ಯತೆ. • ಕೆಡ್ಡಸದ ಗಾಳಿ, ಕೆಡ್ಡಸ ಬರೆಪುನಿ ಮುಂತಾದುವು ಕೇಳಿಬರುತ್ತಿರುವ ಶಬ್ದಗಳು. ಈಗ ಗಾಳಿಯೂ ಬೀಸುವುದಿಲ್ಲ. ಭೂಮಿಯೂ ಪರಿಮಳ ಬೀರುವುದಿಲ್ಲ. ಮಂದಾರ ರಾಮಾಯಣದಲ್ಲಿ ‘ಬನ್ನಗನೆ ಕೆಡ್ಡಸದ ಪೊತ್ತುದಿನರಿ, ಕುಡುಕಡಲೆ, ಪೇರ‍್ಪದೆಂಗಿದ ಪೊದಿಕೆನ್ ಕಣತ್ ದೀದ್' ಎಂಬ ಉಲ್ಲೇಖವಿದೆ. • ಕೆಡ್ಡಸ ಒಂದು ಕಾಲದ ವಿಜೃಂಭಣೆಯ ಆಚರಣೆಯಾಗಿತ್ತು. ಆದರೆ ಈಗ ನೆನಪೇ ಆಗದ ಪರ್ವ ದಿನ’ವಾಗಿದೆ. ಒಂದು ವ್ಯತ್ಯಾಸವಾದರೆ ಅದನ್ನು ಆಧರಿಸಿದ ಎಲ್ಲವೂ ವ್ಯತ್ಯಸ್ತಗೊಂಡಂತೆ ತಾನೆ? ಪ್ರಕೃತಿಯ ಮಡಿಲಲ್ಲಿ ನಿಸರ್ಗದ ನಿಶ್ಚಿತ ಸ್ಥಿತ್ಯಂತರಗಳ ವಿಸ್ಮಯಗಳನ್ನು ಗಮನಿಸುತ್ತಾ ಮನುಷ್ಯ ಬದುಕು ಕಟ್ಟಿದ. • ಪುಯಿಂತೆಲ್ ಅಥವಾ ಪೊನ್ನಿ ತಿಂಗಳ (ಮಕರಮಾಸ) ಇಪ್ಪತ್ತೇಳನೇ ದಿನ ಸಂಜೆಯಿಂದ ಮಾಯಿ ತಿಂಗಳು ಬರುವ ಸಂಕ್ರಮಣ (ಕುಂಭ ಸಂಕ್ರಮಣ)ದವರೆಗೆ ಮೂರು-ನಾಲ್ಕು ದಿನ 'ಕೆಡ್ಡಸ'. ಸುರುಕೆಡ್ಡಸ-ನಡುಕೆಡ್ಡಸ-ಕಡೆಕೆಡ್ಡಸವೆಂದು ಮೂರು ದಿನ ಆಚರಣೆ. ಫಲವಂತಿಕೆಯನ್ನು ನೀಡುವ ಭೂದೇವಿ ಬೆಳೆ ಸಮೃದ್ಧಿಯನ್ನು ನೀಡಲು ಮತ್ತೆ ಸನ್ನದ್ಧಳಾದಳೆಂಬ ಸಂದರ್ಭದ ಆರಾಧನಾ ವಿಧಿಯಾಗಿ ‘ಕೆಡ್ಡಸ’ ತುಳುವರ ವಿಶಿಷ್ಟ ಹಬ್ಬ. • ಮಳೆಗಾಲದ ಪ್ರಧಾನ ಕೃಷಿಗೆ (ಕರಾವಳಿಯಲ್ಲಿ ಹೆಚ್ಚಾಗಿ ಭತ್ತ) ಪೂರ್ವಭಾವಿ ಸಿದ್ಧತೆಯನ್ನು ಚಳಿಗಾಲ ಮುಗಿದು ಧಾನ್ಯಗಳ ಬೆಳೆಯ ಬಳಿಕ ಆರಂಭಿಸಲಾಗುತ್ತದೆ. ಪೊನ್ನಿ ತಿಂಗಳ (ಜನವರಿ ತಿಂಗಳ ಮಧ್ಯದಿಂದ ಫೆಬ್ರವರಿ ತಿಂಗಳ ಮಧ್ಯದವರೆಗೆ) ಆರಂಭವು ಬೇಸಗೆ ಕಾಲವನ್ನು ಘೋಷಿಸುತ್ತದೆ.ಮುಂದಿನ ಮಳೆಗಾಲದಲ್ಲಿ ಭೂಮಿ (ಗದ್ದೆಯನ್ನು) ಉತ್ತು, ನೇಜಿ ನೆಡಲು ಸಿದ್ಧತೆ ನಡೆಸಲು ಜಾಗೃತನಾಗುವಂತೆ ಕೃಷಿಕನನ್ನು ಎಚ್ಚರಿಸುತ್ತಾಳೆ ಪ್ರಕೃತಿ. • ಮೂಡು ದಿಕ್ಕಿನಿಂದ ವಿಶಿಷ್ಟವಾದ ಗಾಳಿ ಬೀಸತೊಡಗುತ್ತದೆ. ಭೂಮಿಗೆ ವಿಶೇಷ ಕಂಪು ಬರುತ್ತದೆ. ಇದು ಪುಯಿಂತೆಲ್ ಕೊನೆಯ ದಿನಗಳಾಗಿರುತ್ತವೆ. • ಇದು 'ಭೂ ರಜಸ್ವಲಾ' ಪರ್ವ ಕಾಲವಾಗಿರುತ್ತದೆ. ಭೂದೇವಿ ರಜಸ್ವಲೆಯಾದಳೆಂದು ನಂಬಲಾಗುವ ಈ ದಿನಗಳು ಪರ್ವವಾಗಿ ಸ್ವೀಕರಿಸಲ್ಪಟ್ಟ ಕಲ್ಪನೆ ಹಾಗೂ ಕೃಷಿ ಆಧಾರಿತ ಜೀವನ ಶೈಲಿ. • ಭೂಮಾತೆಗೆ ಬಡಿಸುವ ಆಹಾರ (ಕುಡುಅರಿ - ನನ್ನೆರಿ) ವಸ್ತುಗಳೆಲ್ಲ ಫಲವಂತಿಕೆಯ ಬಯಕೆಯ ಸಂಕೇತಗಳೇ ಆಗಿರುತ್ತವೆ. ಹಲಸಿನ ಎಳಸು ಕಾಯಿ ಹಾಕಿದ ಪದಾರ್ಥ, ಉದ್ದಿನ ದೋಸೆ, ನುಗ್ಗೆ ಕೋಡು ಹಾಕಿದ ಪಲ್ಯಗಳು ಪ್ರಧಾನ. • ಕೆಡ್ಡಸದ ಅವಧಿಯಲ್ಲಿ ಹೆಂಗಸರು ಮುಟ್ಟಾದರೆ ಹಸಿ ಸೋಗೆಯಲ್ಲಿ ಮಲಗಬೇಕು. ತಾನು ಮುಟ್ಟಾಗುವ ವೇಳೆ ಇತರ ಹೆಣ್ಣು ಮಕ್ಕಳುಮುಟ್ಟಾಗುವುದನ್ನು ಭೂಮಿತಾಯಿ ಸಹಿಸಲಾರಳೆಂಬ ಕಲ್ಪನೆ ಜನಪದರಲ್ಲಿದೆ. ಕೈಯಲ್ಲಿ ಹಿಡಿದುಕೊಂಡೇ ತಿಂಡಿ ತಿನ್ನುವ, ಊಟ ಮಾಡುವ ಸಂಪ್ರದಾಯವೂ ಇದೆ‌ (ಇತ್ತು). • ಭೂಮಿಯನ್ನು ಯಾವುದೇ ಕಾರಣಕ್ಕೆ ಅಗೆಯಬಾರದು ಎಂಬ ನಿಷೇಧ ಕೆಡ್ಡಸದ ಅವಧಿಯಲ್ಲಿ ಅನುಸರಿಸಲಾಗುತ್ತದೆ ಅಥವಾ ಅನುಸರಿಸಲಾಗುತ್ತಿತ್ತು. • ಭೂದೇವಿ ಪುಷ್ಪವತಿಯಾಗುವಳೆಂಬ ಕಲ್ಪನೆಯೇ ಅನನ್ಯವಾದುದು. ಬೆಳೆ ಆಕೆಯ ಫಲವಂತಿಕೆಯ ಫಲಗಳೆಂಬುದು ವಿಶಿಷ್ಟ ಕಲ್ಪನೆ.

ಕೆಡ್ಡಸದ ಬೋಂಟೆ : ‘ಕೆಡ್ಡಸ’ ಎಂದರೆ ಬೇಟೆ ಸಂಬಂಧಿಯಾದುದು ಎಂಬ ನಿರ್ವಚನವೂ ಇದೆ. ಆದುದರಿಂದಲೇ ಬೇಟೆಯೂ ಕೆಡ್ಡಸದ ಅವಿಭಾಜ್ಯ ಅಂಗ. ‘ಪುಂಡದ’ ಎಂಬ ಹಕ್ಕಿಗೆ ಈ ಶ್ರಾಯದಲ್ಲಿ ಜ್ವರ ಬರುತ್ತದೆಯಂತೆ. ‘ಪುಂಡದ ಬೋಟೆ’ ಎಂಬುದು ವಾಡಿಕೆ. ‘ಕೆಡ್ಡಸ’ ಎಂದರೆ ತೊಡಗು ಎಂಬ ಅರ್ಥವೂ ಇದೆ. ತೊಡಗುವುದು ಎಂದರೆ ಕೃಷಿ ಆರಂಭಿಸು ಎಂದು ಪರಿಗ್ರಹಿಸಬಹುದು. ಕೆಡ್ಡಸದ ನೇಮ, ಕೆಡ್ಡಸದ ಆಯನ, ಕೆಡ್ಡಸದ ಗಾಳಿ, ಕೆಡ್ಡಸದ ಕುಡುಅರಿ ಮುಂತಾದವು ಜನಪದರಲ್ಲಿ ರೂಢಿಯಲ್ಲಿರುವ ಆಡು ಮಾತು. ಸಂಪ್ರದಾಯ : ಮೂರುದಿನ ಹಸಿ ಕಡಿಯಬಾರದು, ಒಣಗಿರುವುದನ್ನು ಮುರಿಯಬಾರದು ಎಂಬ ನಂಬಿಕೆ ಇದೆ. ಲೇಖನ : ಕೆ.ಎಲ್.ಕುಂಡಂತಾಯ