Updated News From Kaup
ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರ : ಜನವರಿ 4 ಶುಭಾರಂಭ ; ಕಾರ್ಯನಿರ್ವಹಿಸಲು ಜನ ಬೇಕಾಗಿದ್ದಾರೆ
Posted On: 26 Dec 2021, 07:10 PM
ಕಾಪು : ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರವು ಜನವರಿ 4ರಂದು ಶುಭಾರಂಭಗೊಳ್ಳಲಿದೆ. ಸರಕಾರದ ಯೋಜನೆಗಳು ತ್ವರಿತವಾಗಿ ಜನರಿಗೆ ತಲುಪಲು ಸಿ.ಎಸ್.ಸಿ ಕೇಂದ್ರವು ಸಹಕಾರಿಯಾಗಿದೆ. ಅದೇ ರೀತಿ ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಜನ ಬೇಕಾಗಿದ್ದು, ಕಾಪು ಹಾಗೂ ಕಟಪಾಡಿಯ ಆಸುಪಾಸಿನವರಿಗೆ ಮೊದಲ ಆದ್ಯತೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8951569423
ಮುಂಬೈ ಶಿವಸೇನಾ ಮುಖಂಡ ಚಂದ್ರಕೃಷ್ಣ ಶೆಟ್ಟಿಯವರಿಂದ ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರಕ್ಕೆ 51 ಶಿಲಾ ಸೇವೆ ಸಮರ್ಪಣೆ
Posted On: 26 Dec 2021, 05:14 PM
ಕಾಪು : ಮುಂಬೈ ಶಿವಸೇನಾ ಮುಖಂಡರಾದ ಉದ್ಯಮಿ ಚಂದ್ರಕೃಷ್ಣ ಶೆಟ್ಟಿ "ಬೆರ್ಮೋಟ್ಟು" ಮಡುಂಬು, ಇನ್ನಂಜೆ ಇವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 51 ಶಿಲಾ ಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿ ಕಾಪು ಮಾರಿಯಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು ಕೋವಿಡ್ ಕಾರಣದಿಂದಾಗಿ ಭಕ್ತರು ಕಂಗಲಾಗಿದ್ದಾರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಹೊರ ರಾಜ್ಯ ಮತ್ತು ಹೊರ ದೇಶಗಳಿಂದಲೂ ಶಿಲಾಸೇವೆಯ ಮಹಾಪೂರವೇ ಹರಿದು ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕರಾದ ಲಕ್ಷ್ಮೀಶ ತಂತ್ರಿ ಕಲ್ಯಾ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಜನವರಿ 2ರಂದು ಪಾಂಜಗುಡ್ಡೆಯಲ್ಲಿ ಉಚಿತ ನೇತ್ರ ತಪಾಸಣೆ
Posted On: 26 Dec 2021, 04:39 PM
ಶಿರ್ವ : ಧರ್ಮ ಫೌಂಡೇಶನ್ (ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಶಿರ್ವ ಇವರ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಇವರ ಸಹಭಾಗಿತ್ವದಲ್ಲಿ ಜನವರಿ 02, ರವಿವಾರದಂದು ಬೆಳಿಗ್ಗೆ ಘಂಟೆ 9ರಿಂದ ಮಧ್ಯಾಹ್ನ 12.30ರ ತನಕ ಧರ್ಮ ಫೌಂಡೇಶನ್(ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಕಡಂಬು, ಶಿರ್ವ ಇಲ್ಲಿ ಉಚಿತ ನೇತ್ರ ತಪಾಸಣೆ ನಡೆಯಲಿದೆ. ಈ ಸಂದರ್ಭ ಅಗತ್ಯ ಇರುವವರಿಗೆ ಉಚಿತ ಕನ್ನಡಕ ಹಾಗೂ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗಿರೀಶ್ ಜಿ. (9946815444)
ಸುರತ್ಕಲ್ ಎನ್ಐಟಿಕೆ ವಿದ್ಯಾರ್ಥಿ ಆತ್ಮಹತ್ಯೆ
Posted On: 26 Dec 2021, 04:19 PM
ಸುರತ್ಕಲ್ : ಇಲ್ಲಿನ ಠಾಣಾ ವ್ಯಾಪ್ತಿಯ ಎನ್ಐಟಿಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಿಹಾರದ ಪಾಟ್ನಾ ಮೂಲದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿ ಸೌರವ್ (19) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಡೆತ್ ನೋಟಿನಲ್ಲಿ ಹಣಕಾಸಿನ ಸಮಸ್ಯೆಯಿಂದ ನಾನು ಆತ್ಮಹತ್ಯೆ ಮಾಡುತ್ತಿದ್ದು ಕ್ಷಮಿಸಿ, ಶೈಕ್ಷಣಿಕ ಸಾಲವಾದ ಒಂದು ಲಕ್ಷವನ್ನು ಪಾವತಿಸಿ ಎಂದು ತಂದೆಗೆ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಾಳೆ ಕಾಪು ಪುರಸಭೆ ಚುನಾವಣೆ : ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ ಮತದಾರರು
Posted On: 26 Dec 2021, 12:01 PM
ಕಾಪು : ಇಲ್ಲಿನ ಪುರಸಭಾ ಚುನಾವಣೆ ಡಿಸೆಂಬರ್ 27 , ನಾಳೆ ನಡೆಯಲಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದರೆ, ಉಳಿದಂತೆ ಇತರೆ ಪಕ್ಷಗಳಿಗೆ ತಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ. ತಮ್ಮ ಪಕ್ಷ ಗೆಲ್ಲಲೇ ಬೇಕೆಂಬ ದಿಸೆಯಲ್ಲಿ ಸ್ಥಳೀಯ ರಾಜಕೀಯ ಪ್ರಮುಖರಲ್ಲದೆ ಜಿಲ್ಲೆಯ ಪ್ರಮುಖರು ಬಿರುಸಿನ ಪ್ರಚಾರ ನಡೆಸಿದ್ದರು. ಸಂಪೂರ್ಣ ಸಿದ್ಧತೆ : ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಪು ತಾಲೂಕು ಆಡಳಿತದಿಂದ ಮತದಾನ ಕೇಂದ್ರ ಸೇರಿದಂತೆ ಇನ್ನಿತರ ವ್ಯವಸ್ಥೆಯನ್ನು ಮಾಡಲಾಗಿದೆ. ಪಕ್ಷ /ಅಭ್ಯರ್ಥಿಗಳು : ಕಾಂಗ್ರೆಸ್, ಬಿಜೆಪಿ, ಜನತಾದಳ, ಎಸ್ಡಿಪಿಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ಮತ್ತು ಪಕ್ಷೇತರರು ಸೇರಿದಂತೆ 67 ಮಂದಿ 23 ವಾಡ್೯ಗಳಲ್ಲಿ ಸ್ಪರ್ಧಿಸಲಿದ್ದಾರೆ. 23 ಮತಗಟ್ಟೆಗಳಿದ್ದು, 4 ಅತಿ ಸೂಕ್ಷ್ಮ, 8 ಸೂಕ್ಷ್ಮ, 11 ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಪುರಸಭೆ, ಅಭಿವೃದ್ಧಿ ಪ್ರಾಧಿಕಾರ, ಅನುದಾನ ಇತ್ಯಾದಿ ಚರ್ಚೆಗಳಿಗೆ ಅಲ್ಪವಿರಾಮ ಬಿದ್ದಿದೆ. 27 ರಂದು ನಡೆಯುವ ಮತದಾನದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿ ಬಹುಮತ ಯಾವ ಪಕ್ಷದ ಪಾಲಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಿ, ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ಬಲಿಯಾಗದಿರಿ : ಯೋಗೀಶ್ ವಿ ಶೆಟ್ಟಿ ಬಾಲಾಜಿ
Posted On: 25 Dec 2021, 07:25 PM
ಕಾಪು : ಈ ಬಾರಿ ಕಾಪು ಪುರಸಭಾ ಚುನಾವಣೆಯಲ್ಲಿ ಜನತಾದಳ ಪಕ್ಷವು 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪುರಸಭೆಯಲ್ಲಿ ನಾವೇ ನಿರ್ಣಾಯಕವಾಗಲಿದ್ದೇವೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ. ಜನತಾದಳ ಮತ ವಿಭಜನೆಗೆ ನಿಂತಿಲ್ಲ ಬದಲಾಗಿ ಜನರ ಪರವಾಗಿದೆ ಎಂದು ಜನತಾದಳ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಬಾಲಾಜಿ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪುರಸಭೆಯಿಂದ ತೊಂದರೆಯಾಗದು ಎಂದಿದ್ದ ಪಕ್ಷಗಳು ಇಂದು ಹತ್ತು ಪಟ್ಟು ತೆರಿಗೆ ಹೆಚ್ಚಿಸಿ ಜನರಿಗೆ ತೊಂದರೆಯಾಗಿದೆ. ತರಾತುರಿಯಲ್ಲಿ ಪ್ರಾಧಿಕಾರ ತರುವ ಅಗತ್ಯವೇನಿತ್ತು?. ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ಬಲಿಯಾಗದಿರಿ ಎಂದರು. ಈ ಸಂದರ್ಭ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಪ್ರಾಪ್ತ ಬಾಲಕಿ, ಯುವತಿಗೆ ಕಿರುಕುಳ : ಪ್ರಕರಣ ದಾಖಲು
Posted On: 25 Dec 2021, 04:15 PM
ಮಂಗಳೂರು : ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ತಲಪಾಡಿ ತಚ್ಚಣಿ ಬಳಿ ಅಪ್ರಾಪ್ತ ಬಾಲಕಿ ಹಾಗೂ ಇನ್ನೋರ್ವ ಯುವತಿಯ ಕೈ ಎಳೆದು ಅಸಭ್ಯವಾಗಿ ವರ್ತಿಸಿದ ಬಗ್ಗೆ ಮಂಜೇಶ್ವರ ಹೊಸಬೆಟ್ಟು ನಿವಾಸಿ ಇಬ್ರಾಹಿಂ ಎಂಬುವವರ ಮಗನಾದ ಮುಸ್ತಫಾ ಎನ್ನುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ. ಈತನು ಕೇರಳ ರಿಜಿಸ್ಟಡ್೯ ಆಕ್ಟಿವಾ ಹೋಂಡಾ (KL14 P 6400) ಮೂಲಕ ಈ ಕೃತ್ಯ ಮಾಡುತ್ತಿದ್ದ. ಅಪ್ರಾಪ್ತ ಬಾಲಕಿಯ ದೂರಿನನ್ವಯ 354 ಐಪಿಸಿ ಮತ್ತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವತಿಯ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ದೂರು ದಾಖಲಾಗಿದೆ.
2020 - 21ನೇ ಸಾಲಿನಲ್ಲಿ ದ್ವಿತೀಯ ಅತ್ಯುತ್ತಮ ಸಂಘ ಪ್ರಶಸ್ತಿಗೆ ಪಾತ್ರವಾದ ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ
Posted On: 25 Dec 2021, 01:43 PM
ಕಾಪು : ದ.ಕ. ಹಾಲು, ಉತ್ಪಾದಕರ ಒಕ್ಕೂಟ, ಕುಲಶೇಖರ ಡೈರಿಯ ಆವರಣದಲ್ಲಿ ಡಿಸೆಂಬರ್ 22ರಂದು ನಡೆದ ದ.ಕ, ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ನಿ.) ಮಂಗಳೂರು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು 2020 - 2021 ನೇ ಸಾಲಿನಲ್ಲಿ ಉಡುಪಿ ತಾಲೂಕಿನ 'ದ್ವಿತೀಯ ಅತ್ಯುತ್ತಮ ಸಂಘ'ವೆಂದು ಘೋಷಿಸಲಾಯಿತು. ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ. ರವಿರಾಜ ಹೆಗ್ಡೆಯವರಿಂದ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ. ಶೆಟ್ಟಿಯವರು ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ದ.ಕ.ಸ.ಒಕ್ಕೂಟದ ಉಪಾಧ್ಯಕ್ಷರಾದ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಕೆ.ಎಂ.ಎಫ್ ನಿರ್ದೇಶಕರಾದ ಕಾಪು ದಿವಾಕರ್ ಶೆಟ್ಟಿ , ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಸ್.ಟಿ. ಸುರೇಶ್ , ವ್ಯವಸ್ಥಾಪಕರಾದ ಡಾ. ನಿತ್ಯಾನಂದ ಭಕ್ತ, ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಉಪ ವ್ಯವಸ್ಥಾಪಕರುಗಳು ಹಾಗೂ ಒಕ್ಕೂಟದ ಅಧಿಕಾರಿ ವರ್ಗದವರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಉಡುಪಿ : ರಾಷ್ಟ್ರೀಯ ಗ್ರಾಹಕರ ದಿನಾಚರಣೆ ; ಗ್ರಾಹಕರು ಹಕ್ಕುಗಳ ಬಗ್ಗೆ ತಿಳಿದು ಸಬಲರಾಗಬೇಕು
Posted On: 24 Dec 2021, 09:04 PM
ಉಡುಪಿ, ಡಿಸೆಂಬರ್ 24 : ಪ್ರತಿಯೊಬ್ಬ ಸಾರ್ವಜನಿಕ ಸಹ ಯಾವುದಾದರೂ ವಸ್ತುಗಳ ಖರೀದಿ ಮಾಡುವ ಹಾಗೂ ವಿವಿಧ ಸೇವೆಗಳನ್ನು ಪಡೆಯುವ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ಎಲ್ಲಾ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದು ಸಬಲರಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ನ್ಯಾಯಾಲಯವು ಗ್ರಾಹಕ ಕಾಯಿದೆಯ ಮೂಲಕ ಗ್ರಾಹಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ತಿಳಿದು ಅವುಗಳನ್ನು ಚಲಾಯಿಸುವ ಮೂಲಕ ಉತ್ತಮ ಗುಣಮಟ್ಟದ ವಸ್ತು ಮತ್ತು ಸೇವೆಗಳನ್ನು ಪಡೆಯಬೇಕು. ತಾವು ಪಡೆಯುವ ವಸ್ತು ಮತ್ತು ಸೇವೆಗಳಲ್ಲಿ ನ್ಯೂನತೆ ಕಂಡು ಬಂದಲ್ಲಿ ಸೂಕ್ತ ಪರಿಹಾರ ಪಡೆಯಲೂ ಸಹ ಸಾಧ್ಯವಿದ್ದು, ಕಾಯಿದೆಯ ಪ್ರಯೋಜನ ಪಡೆದು ಸಬಲರಾಗಬೇಕು ಎಂದು ಕೂರ್ಮರಾವ್ ಎಂ ಹೇಳಿದರು. ಜಿಲ್ಲೆಯ ಜನತೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪಡೆಯುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಆಹಾರ ತಯಾರಿಕಾ ಉದ್ಯಮಗಳು, ಉದ್ಯಮ ಆರಂಭಕ್ಕೆ ಸಂಬಂದಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯುವ ಮುನ್ನ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಕಡ್ಡಾಯವಾಗಿ ಸುರಕ್ಷತಾ ಪ್ರಮಾಣಪತ್ರ ಪಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈಗಾಗಲೇ ಇರುವ ಆಹಾರ ತಯಾರಿಕಾ ಉದ್ಯಮಗಳು ಪ್ರಮಾಣಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಅಲ್ಲಿನ ಆಹಾರ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಸರಕು ಮತ್ತು ಸೇವೆಗಳ ಬೇಡಿಕೆ ಮತ್ತು ಪೂರೈಕೆಗಳ ನಡುವೆ ವ್ಯತ್ಯಾಸವಾದಲ್ಲಿ ಬೆಲೆ ಹೆಚ್ಚಳದ ಹೊರೆ ಗ್ರಾಹಕನಿಗೆ ಬೀಳಲಿದ್ದು, ಕೋವಿಡ್ ಮೊದಲನೆ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಸ್ಯಾನಿಟೈಸರ್, ರೆಮಿಡೆಸಿವರ್ ಔಷಧ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಅತ್ಯಾವಶ್ಯಕ ವಸ್ತುಗಳನ್ನು ಕೊರೆತೆಯಾಗುವ ಮುನ್ನವೇ ಖರೀದಿಸುವುದು ಉತ್ತಮವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಸಂಭಾವ್ಯ ಅಲೆಯನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಸಿದ್ಧವಾಗಿಟ್ಟುಕೊಳ್ಳಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಸಹ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಗ್ರಾಹಕರು ಮಾರಾಟಗಾರರು ನೀಡುವ ಯಾವುದೇ ಆಮಿಷಗಳಿಗೆ, ಜಾಹೀರಾತುಗಳ ಮೋಡಿಗೆ ಸಿಲುಕದೇ ತಮ್ಮ ಆಯ್ಕೆಯ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕು. ಖರೀದಿಸಿದ ವಸ್ತುಗಳಲ್ಲಿ ದೋಷ ಕಂಡು ಬಂದಲ್ಲಿ, ಸಂಬಂದಪಟ್ಟ ವಸ್ತುಗಳ ಉತ್ಪಾದಕರಿಂದ/ ಮಾರಾಟಗಾರರಿಂದ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದರು. ಗ್ರಾಹಕರು ಮತ್ತು ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಬಳಕೆದಾರರ ವೇದಿಕೆ ಸಂಚಾಲಕ ಎ.ಪಿ.ಕೊಡಂಚ ಮಾತನಾಡಿ, ಗ್ರಾಹಕರಿಗೆ ಕಾನೂನಿನಲ್ಲಿ 8 ವಿವಿಧ ಬಗೆಯ ಹಕ್ಕುಗಳನ್ನು ನೀಡಿದ್ದು, ಗ್ರಾಹಕರು ತಮ್ಮ ಆಯ್ಕೆ ವಸ್ತುಗಳನ್ನು ಖರೀದಿಸಲು, ಅವುಗಳಲ್ಲಿನ ದೋಷಗಳನ್ನು ಪ್ರಶ್ನಿಸಲು, ಸೂಕ್ತ ಪರಿಹಾರ ಪಡೆಯಲು ಸಾಧ್ಯವಿದ್ದು, ಇದು ಗ್ರಾಹಕರಿಗೆ ಹೆಚ್ಚಿನ ಶಕ್ತಿ ನೀಡಲಿದೆ. ದೋಷಪೂರಿತ ವಸ್ತು ಹಾಗೂ ಸೇವೆಗಳ ಕುರಿತು ದೇಶದ ಯಾವುದೇ ಭಾಗದಲ್ಲಿ ಪ್ರಕರಣ ದಾಖಲಿಸಬಹುದಾಗಿದ್ದು, ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ 1 ಕೋಟಿ ರೂ. ವರೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಹೈಕೋರ್ಟ್ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ದೂರು ನೀಡಬಹುದಾಗಿದ್ದು, ದೂರುಗಳನ್ನು ಆನ್ಲೈನ್ ಮೂಲಕ ಅಥವಾ ಪತ್ರದ ಮೂಲಕ ಸಹ ನೀಡಬಹುದಾಗಿದೆ. ತಮ್ಮ ದೂರುಗಳ ಕುರಿತು ಮಧ್ಯಂತರ ಪರಿಹಾರ ಪಡೆಯಲೂ ಸಹ ಅವಕಾಶವಿದ್ದು, ಗ್ರಾಹಕರು ಈ ಎಲ್ಲಾ ಸೌಲಭ್ಯಗಳ ಬಗ್ಗೆ ಅರಿತು ಈ ಸೌಲಭ್ಯಗಳನ್ನು ಬಳಸಿಕೊಂಡು ಜಾಗೃತರಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಮಾತನಾಡಿ, ಗ್ರಾಹಕರು ಜಾಹೀರಾತುಗಳ ಮೋಡಿಗೆ ಒಳಗಾಗದೇ ತಮ್ಮ ಅಗತ್ಯಕ್ಕನುಗುಣವಾಗಿ ಮಾತ್ರ ವಸ್ತುಗಳನ್ನು ಖರೀದಿಸಬೇಕು. ಪ್ರತೀ ವಸ್ತುವಿನ ಖರೀದಿಗೆ ಸೂಕ್ತ ರಸೀದಿಯನ್ನು ಪಡೆಯಬೇಕು. ಬ್ಯಾಂಕ್ಗಳ ಸೇವಾ ನ್ಯೂನತೆ, ವಾಹನ ವಿಮಾ ಕಂಪೆನಿಗಳ ಸೇವಾ ನ್ಯೂನತೆ, ಬೆಳೆ ವಿಮೆ, ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ಸಂಭವಿಸುವ ನ್ಯೂನತೆಗಳ ಬಗ್ಗೆ ಸಹ ದೂರು ದಾಖಲಿಸಲು ಅವಕಾಶವಿದೆ. ಮೀನುಗಾರರು ತಮ್ಮ ಬೋಟ್ ಮುಳುಗಡೆ ಕುರಿತು ಸಹ ನಷ್ಠ ಪರಿಹಾರ ಕೋರಿ ದೂರು ದಾಖಲಿಸಬಹುದು. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಂಡಲ್ಲಿ ಮೋಸ ಹೋಗಲು ಸಾಧ್ಯವಿಲ್ಲ ಎಂದರು. ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರೇಮಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಗಜೇಂದ್ರ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಹಮದ್ ಇಸಾಕ್ ಸ್ವಾಗತಿಸಿದರು. ಬಳಕೆದಾರರ ವೇದಿಕೆ ಸಂಚಾಲಕ ನಾರಾಯಣನ್ ನಿರೂಪಿಸಿದರು. ಲಕ್ಷ್ಮೀಬಾಯಿ ವಂದಿಸಿದರು.
ಕಾಪು : ಅಪಘಾತಕ್ಕೆ ಎಡೆಮಾಡುತ್ತಿದೆ ತೆಂಕು ಪೇಟೆಯ ಮುಖ್ಯ ರಸ್ತೆ ; ಮನವಿಗೂ ಸ್ಪಂದನೆಯಿಲ್ಲ
Posted On: 24 Dec 2021, 04:26 PM
ಕಾಪು : ಇಲ್ಲಿನ ಪುರಸಭೆ ವ್ಯಾಪ್ತಿಯ ಕಾಪು ತೆಂಕು ಪೇಟೆಯ ಮುಖ್ಯ ರಸ್ತೆಯಲ್ಲಿ, ರಸ್ತೆ ಹಾಳಾಗಿದ್ದು, ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಕಟ್ ಮಾಡಿ ಸುಮಾರು 1ವರುಷ ಕಳೆದರೂ ರಿಪೇರಿ ಗೋಜಿಗೆ ಸಂಬಂಧ ಪಟ್ಟ ಇಲಾಖೆ ಅಥವಾ ಪುರಸಭೆ ಹೋಗಲಿಲ್ಲ. ಇಲಾಖೆಯವರಲ್ಲಿ ಹಲವು ಬಾರಿ ತಿಳಿಸಿದರೂ ಕೂಡಾ ರಿಪೇರಿಯಾಗಲಿಲ್ಲ. ಇದರಿಂದ ಅಪಘಾತ ಆಗಿರೋದು ಎಲ್ಲರಿಗೂ ತಿಳಿದ ವಿಷಯ. ರಸ್ತೆಯ ಬದಿಯ ದಾರಿಯಲ್ಲಿ ಡ್ರೈನೇಜ್ ಪಿಟ್ ನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ಪಾದಚಾರಿಗಳಿಗೆ ಅಲೆದಾಡಲು ಕಷ್ಟವಾಗಿರುತ್ತದೆ. ಪುರಸಭೆ ಚುನಾವಣೆ ಸಂದರ್ಭದಲ್ಲಿ ಕಾಪು ಪೇಟೆಯಲ್ಲಿ ಅಲ್ಪ ಸ್ವಲ್ಪ ಡಾಂಬರು ಎರಚಿದಂತೆ ಮಾಡದೆ, ಈ ಸ್ಥಳವನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಕಾದು ನೋಡಬೇಕು.
