Updated News From Kaup

ಕಾಪು : ಅಪಘಾತಕ್ಕೆ ಎಡೆಮಾಡುತ್ತಿದೆ ತೆಂಕು ಪೇಟೆಯ ಮುಖ್ಯ ರಸ್ತೆ ; ಮನವಿಗೂ ಸ್ಪಂದನೆಯಿಲ್ಲ

Thumbnail
Posted On: 24 Dec 2021, 04:26 PM

ಕಾಪು : ಇಲ್ಲಿನ ಪುರಸಭೆ ವ್ಯಾಪ್ತಿಯ ಕಾಪು ತೆಂಕು ಪೇಟೆಯ ಮುಖ್ಯ ರಸ್ತೆಯಲ್ಲಿ, ರಸ್ತೆ ಹಾಳಾಗಿದ್ದು, ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಕಟ್ ಮಾಡಿ ಸುಮಾರು 1ವರುಷ ಕಳೆದರೂ ರಿಪೇರಿ ಗೋಜಿಗೆ ಸಂಬಂಧ ಪಟ್ಟ ಇಲಾಖೆ ಅಥವಾ ಪುರಸಭೆ ಹೋಗಲಿಲ್ಲ. ಇಲಾಖೆಯವರಲ್ಲಿ ಹಲವು ಬಾರಿ ತಿಳಿಸಿದರೂ ಕೂಡಾ ರಿಪೇರಿಯಾಗಲಿಲ್ಲ. ಇದರಿಂದ ಅಪಘಾತ ಆಗಿರೋದು ಎಲ್ಲರಿಗೂ ತಿಳಿದ ವಿಷಯ. ರಸ್ತೆಯ ಬದಿಯ ದಾರಿಯಲ್ಲಿ ಡ್ರೈನೇಜ್ ಪಿಟ್ ನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ಪಾದಚಾರಿಗಳಿಗೆ ಅಲೆದಾಡಲು ಕಷ್ಟವಾಗಿರುತ್ತದೆ. ಪುರಸಭೆ ಚುನಾವಣೆ ಸಂದರ್ಭದಲ್ಲಿ ಕಾಪು ಪೇಟೆಯಲ್ಲಿ ಅಲ್ಪ ಸ್ವಲ್ಪ ಡಾಂಬರು ಎರಚಿದಂತೆ ಮಾಡದೆ, ಈ ಸ್ಥಳವನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಕಾದು ನೋಡಬೇಕು.

ಅದಮಾರು : ಅಪರಾಧ ತಡೆ ಮಾಸಾಚರಣೆ 2021 ಹಾಗೂ 112 ಜಾಗೃತಿ ಕಾರ್ಯಕ್ರಮ

Thumbnail
Posted On: 24 Dec 2021, 07:43 AM

ಅದಮಾರು: ತೆಂಕ ಎರ್ಮಾಳ್ ಗ್ರಾಮದ ಅದಮಾರು ಪೂರ್ಣ ಪ್ರಜ್ಞಾ ವಿದ್ಯಾ ಸಂಸ್ಥೆಯಲ್ಲಿ ಪೋಲಿಸ್ ಇಲಾಖೆ ಮತ್ತು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಅಪರಾಧ ತಡೆ ಮಾಸಾಚರಣೆ 2021 ಹಾಗೂ 112 ERSS ಜಾಗೃತಿ ಮೂಡಿಸುವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ಪಿಎಸ್ ಐ (ಕಾನೂನು ಸುವ್ಯವಸ್ಥೆ & ಸಂಚಾರ ) ಹಾಗೂ ಜಯ ಕೆ ಪಿಎಸ್ ಐ (ತನಿಖೆ) ರವರು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ, ಸೈಬರ್ ಕ್ರೈಂ, 112 ಬಗ್ಗೆ ಜಾಗೃತಿ, NDPS ಮತ್ತು COVID-19 ಮಾರ್ಗ ಸೂಚಿಗಳನ್ನು ಪಾಲಿಸಿ ಅಪರಾಧವನ್ನು ತಡೆಯುವಲ್ಲಿ ಜಾಗೃತರಾಗಿ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿ, ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಪಡುಬಿದ್ರಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್, ರೋಟರಿ ಪದಾಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು, ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.

ಕಾಪು ಪೇಟೆಯ ರಸ್ತೆಯಲ್ಲಿದ್ದ ಗುಂಡಿಗಳು ಇದ್ದಕ್ಕಿದಂತೆ ಮಾಯ...! ಚುನಾವಣಾ ಗಿಮಿಕ್ ?

Thumbnail
Posted On: 23 Dec 2021, 06:23 PM

ಕಾಪು : ಇಲ್ಲಿನ ಪೇಟೆ ಭಾಗದ ರಸ್ತೆಯು ಹೊಂಡಮಯವಾಗಿತ್ತು. ಆದರೆ ಇಂದು ಹೊಂಡಗಳು ಮಾಯವಾಗಿ ಉತ್ತಮ ರಸ್ತೆಯಾಗಿದೆ. ಹಲವಾರು ಸಮಯದವರೆಗೆ ಇದ್ದ ಹೊಂಡದ ರಸ್ತೆಯು ಏಕಾಏಕಿಯಾಗಿ ಬದಲಾಗಲು ಪುರಸಭೆಯ ಚುನಾವಣೆ ಬರಬೇಕಾಯಿತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಕಳ್ಳತನದ ಆರೋಪ : ಅಪಹರಿಸಿ, ಮಾರಣಾಂತಿಕ ಹಲ್ಲೆ, ಆರೋಪಿಗಳ ಬಂಧನ

Thumbnail
Posted On: 23 Dec 2021, 05:36 PM

ಮಂಗಳೂರು : ಇಲ್ಲಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೊಬೈಲ್ ಕಳ್ಳತನದ ಆರೋಪ ಮಾಡಿ ತಂಡವೊಂದು ಆತನನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆಗೈದ ಪ್ರಕರಣ ಮಂಗಳೂರಿನ ದಕ್ಕೆಯಲ್ಲಿ ನಡೆದಿದೆ. ಡಿಸೆಂಬರ್ 14ರಂದು ರಾತ್ರಿ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವ ಆಂದ್ರಪದೇಶದ, ಪಕಾಶಂ ಜಿಲ್ಲೆಯ, ಕಾಟಮ್ವಾರಿ ಪಾಲಮ್ ನಿವಾಸಿ ವೈಲ ಶೀನು (32) ಎಂಬಾತನು ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ JOHN SHAILESH 2 ಎಂಬ ಬೋಟಿಗೆ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟಿನಲ್ಲಿ ಮಲಗಿರುತ್ತಾನೆ. ಮರುದಿನ JOHN SHAILESH 2 ಬೋಟಿನಲ್ಲಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಕರಪಿಂಗಾರ ರವಿ, ಕೊಂಡೂರು ಪೊಲಯ್ಯ, ಅವುಲ ರಾಜಕುಮಾರ್‌, ಕಾಟಂಗರಿ ಮನೋಹರ್, ವುಟುಕುರಿ ಜಾಲಯ್ಯ ಹಾಗೂ ಪ್ರಲಯ ಕಾವೇರಿ ಗೋವಿಂದಯ್ಯರವರು ವೈಲ ಶೀನು ರವರಲ್ಲಿಗೆ ಬಂದು, ನಿನ್ನೆ ರಾತ್ರಿ ಬೋಟಿಗೆ ಬಂದವನು ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹೇಳಿ, ಬೆಳಿಗ್ಗೆ 11-15 ಗಂಟೆಗೆ ವೈಲ ಶೀನು ನನ್ನು ಅಪಹರಿಸಿಕೊಂಡು JOHN SHAILESH 2 ಬೋಟಿಗೆ ಹೋಗಿ, ಎಲ್ಲರು ಸೇರಿಕೊಂಡು ವೈಲ ಶೀನುವಿನ ಕೈ ಕಾಲುಗಳನ್ನು ಹಿಡಿದು, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ, ಎರಡೂ ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿ, ಬಳಿಕ ಕಾಲಿಗೆ ಕಟ್ಟಿದ ಹಗ್ಗವನ್ನು ಬೋಟ್ ನ ಆರಿಯ ಕೊಕ್ಕೆಗೆ ಸಿಕ್ಕಿಸಿ ತಲೆ ಕೆಳಗಡೆ ಮಾಡಿ ವೈಲ ಶೀನು ರವರನ್ನು ನೇತಾಡಿಸಿ, ಕೈಗಳಿಂದ, ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಳಪಳಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪುಯತ್ನಿಸಿರುತ್ತಾರೆ. ಆರೋಪಿಗಳು ವೈಲು ಶೀನುವಿನ ಕಾಲುಗಳನ್ನು ಕಟ್ಟಿ, ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದು, ಆ ಸಮಯ ಸಾರ್ವಜನಿಕರು ಬಂದು ವೈಲು ಶೀನುವನ್ನು ರಕ್ಷಿಸಿರುತ್ತಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ಡಿಸೆಂಬರ್‌ 21ರಂದು ರಾತ್ರಿ ದಾಖಲಾಗಿರುತ್ತದೆ. ಈ ಪ್ರಕರಣದ ಆರೋಪಿಗಳಾದ ಡಿಸೆಂಬರ್ 22ರಂದು ಸಂಜೆ 6ಗಂಟೆಗೆ ಮಂಗಳೂರು ದಕ್ಕೆ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ಹಾಗೂ ಮೊಬೈಲ್ ಹ್ಯಾಂಡ್ ಸೆಟ್ಟನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ : ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮ

Thumbnail
Posted On: 23 Dec 2021, 05:08 PM

ಕಾಪು : ನಮ್ಮ ಖಾಸಗಿ ಮಾಹಿತಿಗಳು ಕ್ಲೌಡ್ ಸರ್ವರ್ ಗಳಲ್ಲಿ ಶೇಖರವಾಗುವುದರಿಂದ ಇವು ಸುರಕ್ಷಿತವಲ್ಲ. ಯಾವುದೇ ಮೊಬೈಲ್ ತಂತ್ರಾಂಶಗಳನ್ನು ಉಪಯೋಗಿಸುವಾಗ ಮಾಹಿತಿಗಳನ್ನು ಅಪರಿಚಿತರೊಡನೆ ಹಂಚಿಕೊಳ್ಳಬಾರದು. ನಮಗೆ ಬರುವ ಇಮೇಲ್ ಮತ್ತು ಎಸ್ ಎಂ ಎಸ್ ಗಳ ಬಗೆಗೆ ಜಾಗರೂಕರಾಗಿರಬೇಕು. ಯಾವುದೇ ಬ್ಯಾಂಕ್ ನವರು ಕರೆ ಮಾಡಿ ಒಟಿಪಿ, ಪಾಸ್ವರ್ಡ್ ಅಥವಾ ಸಿವಿವಿ ಗಳನ್ನು ಕೇಳುವುದಿಲ್ಲ. ಬಳಕೆದಾರರು ವಿವೇಚನೆಯನ್ನು ಬಳಸಿ ವ್ಯವಹರಿಸಿದರೆ ಹಾನಿಯನ್ನು ತಪ್ಪಿಸಬಹುದು. ಫೇಸ್ ಬುಕ್ ನ ನಕಲಿ ಅಕೌಂಟ್ ಗಳಿಂದ ಹಾಗೂ ಇಮೇಲ್ ಗಳಿಂದ ಬರುವ ಲಿಂಕ್ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಎಂದು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಾಜಶ್ರೀ ನಂಬಿಯಾರ್ ತಿಳಿಸಿದರು. ಅವರು ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಆಯೋಜಿಸಿದ್ದ ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ತಜ್ಞರಾಗಿ ಮಾತನಾಡಿದರು . ಇಂದಿನ ಆಧುನಿಕ ಯುಗದಲ್ಲಿ ಜಾಗರೂಕರಾಗಿ ಬಳಕೆದಾರರು ವ್ಯವಹರಿಸಬೇಕು. ಖಾಸಗಿ ಮಾಹಿತಿಗಳು , ಒಟಿಪಿ , ಪಾಸ್ ವರ್ಡ್ ಗಳನ್ನೂ ಎಂದೂ ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎಂದು ಸಲಹೆಯಿತ್ತರು. ಶಾಲಾ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಯಮಿ ದೀಪಕ್ ಕಾಮತ್, ಹಿತೈಷಿಗಳಾದ ಚಂದ್ರಿಕಾ ಪೂಜಾರಿ, ಅಕ್ಷತಾ , ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು. ಶ್ರುತಿ ಆಚಾರ್ಯ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸಂಗೀತಾ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ರಮ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ದೀಪಾ ಮೋಹನ್ ವಂದಿಸಿದರು.

ಎನ್ ಸಿಸಿ ವಿಶೇಷ ತರಬೇತಿ ಶಿಬಿರ

Thumbnail
Posted On: 23 Dec 2021, 05:01 PM

ಶಿರ್ವ: ಇಲ್ಲಿನ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ವಲಯ ಸಂತ ಮೇರಿ ಮಹಾವಿದ್ಯಾಲಯ ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 70 ಕೆಡೆಟ್ ಗಳಿಗೆ ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ ವಿಶೇಷ ತರಬೇತಿ ಶಿಬಿರವನ್ನು ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಯಿತು. ಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ. ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಅವರಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಈ ಶಿಬಿರದಲ್ಲಿ ಸಮುದಾಯ ಸೇವಾಗುಣ ಮೂಡಿಸುವ ಜೊತೆಗೆ ಕವಾಯತು, ಶಸ್ತ್ರ ತರಬೇತಿ, ಭೂಪಟ ಅಧ್ಯಯನ, ಫೈರಿಂಗ್ ಅಣಕುಯುದ್ಧ ಪ್ರಾತ್ಯಕ್ಷಿಕೆಯ ನಿಟ್ಟಿನಲ್ಲಿ ತರಬೇತಿ ನೀಡಿದರು. ಹವಲ್ದಾರ್ ನರೇಶ ಸಿಂಗ್ ತೋಮರ್, ವಿನೋದ್ ರಾಯ್, ಮಹೇಂದ್ರ ಲಿಂಬು ತರಬೇತುದಾರ ರಾಗಿದ್ದಾರೆ. ಮೇಜರ್ ಪ್ರಕಾಶ್ ರಾವ್, ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್, ಲೆಫ್ಟಿನೆಂಟ್ ನವ್ಯ ಭಾಗವಹಿಸಿದ್ದರು.

ರುಡ್ಸೆಟ್ನಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ವಿಘ್ನೇಶ್ವರ ಪ್ರಿಂಟರ್ಸ್ಗೆ ಕೆನರಾ ಬ್ಯಾಂಕಿನ ವಿವಿಧ ರಾಜ್ಯಗಳ ಅಧಿಕಾರಿಗಳ ಭೇಟಿ - ಕಾರ್ಯ ವೈಖರಿಗೆ ಮೆಚ್ಚುಗೆ

Thumbnail
Posted On: 22 Dec 2021, 10:35 PM

ಉಡುಪಿ : ರುಡ್ಸೆಟ್ ಸಂಸ್ಥೆ ಬ್ರಹ್ಮಾವರದ ಸಹಕಾರ ದೊಂದಿಗೆ 82 ಜನ ಕೆನರಾ ಬ್ಯಾಂಕ್ ಅಧಿಕಾರಿಗಳು ಮಲ್ಪೆ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ಗೆ ಭೇಟಿ ನೀಡಿದರು. ರುಡ್ಸೆಟ್ ಸಂಸ್ಥೆಯಿಂದ ತರಬೇತಿ ಪಡೆದು ಯಶಸ್ವಿ ಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಗೆ 82 ಜನ ಕೆನರಾ ಬ್ಯಾಂಕಿನ ವಿವಿಧ ರಾಜ್ಯಗಳ ಅಧಿಕಾರಿಗಳು ಭೇಟಿ ನೀಡಿ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಮತ್ತು ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಮಾರ್ಗದರ್ಶನ ಅಗತ್ಯ ಎಂಬ ಮಾತನ್ನು ತಿಳಿಸಿದರು. ಸಂಸ್ಥೆಯ ಮಾಲಕರಾದ ಎಮ್ ಮಹೇಶ್ ಕುಮಾರ್ ರವರಿಗೆ ಕೆನರಾ ಬ್ಯಾಂಕ್ ವತಿಯಿಂದ ಗೌರವ ಸ್ಮರಣಿಕೆ ನೀಡಿ ಗೌರವಿಸಿದರು. ಕೆನರಾ ಬ್ಯಾಂಕ್ ನ ಉನ್ನತ ಅಧಿಕಾರಿ ಗಳು ಹಾಗೂ ರುಡ್ಸೆಟ್ ಸಂಸ್ಥೆ ಬ್ರಹ್ಮಾವರದ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ಹಾಗೂ ಸಹಾಯಕರಾದ ಪ್ರಥ್ವಿ ರಾಜ್. ವಿಘ್ನೇಶ್ವರ ಪ್ರಿಂಟರ್ಸ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉಡುಪಿ ಪೀಟ್ಸ್ ತಂಡದಿಂದ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಪ್ರದರ್ಶಿಸಲ್ಪಡಲಿದೆ ತುಳುನಾಡಿನ ಕಂಗಿಲ್ ನೃತ್ಯ

Thumbnail
Posted On: 22 Dec 2021, 08:35 PM

ಉಡುಪಿ : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾಗಿ ದೆಹಲಿಯಲ್ಲಿ ವಂದೇ ಭಾರತಂ ನೃತ್ಯ ಉತ್ಸವ- 2021 ಫೈನಲ್‌ನಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪ್ರತಿನಿಧಿಸಿದ ಉಡುಪಿ ಜಿಲ್ಲೆಯ ಕಾಲೇಜ್ ವಿದ್ಯಾರ್ಥಿಗಳಿಂದ ಕೂಡಿದ 'ಉಡುಪಿ ಪೀಟ್ಸ್' ತಂಡವು ತುಳುನಾಡಿನ ದೈವರಾಧನೆಗೆ ಹೆಸರು ಪಡೆದ ಕಂಗಿಲ್ ನೃತ್ಯ ರೂಪಕ ಪ್ರಸ್ತುತಪಡಿ ಜಯಗಳಿಸಿದ್ದಾರೆ. ಈ ತಂಡವು ಮಂಂದೆ ದೇಶದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ದೊರಕಿದೆ. ತುಳುನಾಡಿನ ಕಂಗಿಲ್ ನೃತ್ಯದ ಮೂಲಕ ಉಡುಪಿ ಪೀಟ್ಸ್ ತಂಡವು ದೆಹಲಿಯಲ್ಲಿ ತುಳುನಾಡಿನ ಕಂಪನ್ನು ಪಸರಿಸಲಿದೆ.

ಸಾಂಪ್ರದಾಯಿಕ ಕ್ರೀಡೆ ಕಂಬಳದ ಬಗ್ಗೆ ತಿಳಿಯಲು ಕರಾವಳಿ ಕಂಬಳ ಆ್ಯಪ್

Thumbnail
Posted On: 22 Dec 2021, 11:58 AM

ಮಂಗಳೂರು : ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ನಡೆಯುವ ಸಾಂಪ್ರದಾಯಿಕ ಕೋಣಗಳ ಓಟ ಕಂಬಳವಾಗಿದೆ. ಕಂಬಳದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರದರ್ಶಿಸಲು ಮತ್ತು ಆ ಮೂಲಕ ರೈತರ ಈ ಸಾಂಪ್ರದಾಯಿಕ ಕ್ರೀಡೆಯನ್ನು ಜನಪ್ರಿಯಗೊಳಿಸಲು ಕಂಬಳದ ಬಗ್ಗೆ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಂಬಳ ಅಪ್ಲಿಕೇಶನ್ ಕೋಣಗಳ ವಿವರಗಳು, ಅವುಗಳ ಮಾಲೀಕರು, ಸಾಧನೆಗಳು ಮತ್ತು ಕಂಬಳದ ಇತರ ಸಂಬಂಧಿತ ಅಂಶಗಳನ್ನು ಒದಗಿಸುತ್ತದೆ. ಎಲ್ಲಾ ಕಂಬಳ ಪ್ರೇಮಿಗಳು ತಮ್ಮ ನೆಚ್ಚಿನ ಕೋಣಗಳು, ಅದರ ಸಾಧನೆಗಳು, ಪ್ರಸ್ತುತ ಕಂಬಳ ಘಟನೆಗಳು ಮತ್ತು ಫಲಿತಾಂಶಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ಈ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದು. (ಮಾಹಿತಿ ಕೃಪೆ : ಬ್ಯೂಟಿ ಆಫ್ ತುಳುನಾಡ್)

ಕಾಪು : ಪುರಸಭಾ ಚುನಾವಣೆಗೆ ಜನತಾದಳದಿಂದ 7 ಅಭ್ಯರ್ಥಿಗಳು ಕಣಕ್ಕೆ ; ಜನಸಾಮಾನ್ಯರ ಎಲ್ಲಾ ಸಂಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ ಇದು ನಮ್ಮ ಶಪಥ

Thumbnail
Posted On: 22 Dec 2021, 09:38 AM

ಕಾಪು : ಇಲ್ಲಿನ ಪುರಸಭಾ ಚುನಾವಣೆಗೆ ಜನತಾದಳ(ಜಾತ್ಯತೀತ) ಪಕ್ಷದ ವತಿಯಿಂದ ಮನೆ ಮನೆ ಪ್ರಚಾರಗಳು ಭರದಿಂದ ಸಾಗುತ್ತಿದ್ದು, 2ನೇ ಅವಧಿಗೆ ಕಾಪು ಪುರಸಭೆಯ ಚುನಾವಣೆಗೆ ಜನತಾದಳ ಪಕ್ಷದಿಂದ 7ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಕಳೆದ ಬಾರಿ ಮೊದಲು ಕಾಂಗ್ರೆಸ್ ನಂತರ ಬಿಜೆಪಿ ಅಧಿಕಾರವನ್ನು ನಡೆಸಿದೆ. ಪುರಸಭೆ, ಪ್ರಾಧಿಕಾರ, ಇನ್ನಿತರ ಕಾನೂನಾತ್ಮಕ ತೊಡರುಗಳಿಂದ 25% ಜನರಿಗೆ ಲಾಭ 75% ನಷ್ಟವೇ ಆಗಿದೆ. ತೆರಿಗೆ ಏರಿಸುವುದಿಲ್ಲವೆಂದು ಹೇಳಿ ಅತೀ ಹೆಚ್ಚು ತೆರಿಗೆಯನ್ನು ಏರಿಸಿರುತ್ತಾರೆ. ತುರಾತುರಿಯಲ್ಲಿ ಪ್ರಾಧಿಕಾರ ರಚನೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯ ಪುರಸಭೆಯ ಸದಸ್ಯರು ಜನರನ್ನು ಕತ್ತಲೆಯಲ್ಲಿಟ್ಟು, ಹಸಿರು ವರ್ತುಲ ಮಾಡಲು ಹೊರಟಿರುತ್ತಾರೆ. ಯಾವುದೇ ರೀತಿಯಲ್ಲಿ ಜನರಿಂದ ಚರ್ಚೆ/ಅಭಿಮತವನ್ನು ಪಡೆದುಕೊಳ್ಳಲಿಲ್ಲ. ಪುರಸಭೆಯಲ್ಲಿ ಜನರ ಸರ್ವತೋಮುಖ ಅಭಿವೃದ್ಧಿಗೆ,ಮೂಲಭೂತ ಸೌಕರ್ಯಕ್ಕೆ ಖಂಡಿತಾ ಒತ್ತು ಕೊಡುತ್ತೇವೆ. ಜನಸಾಮಾನ್ಯರ ಎಲ್ಲಾ ಸಂಕಷ್ಟ ಗಳಿಗೆ ನಾವು ಸ್ಪಂದಿಸುತ್ತೇವೆ ಇದು ನಮ್ಮ ಶಪಥ. ಜನವಿರೋಧಿ ಕಾನೂನಿನ ಬಗ್ಗೆ ವ್ಯವಸ್ಥಿತ ರೀತಿಯಲ್ಲಿ ವಿರೋಧವನ್ನು ಮಾಡಿ ಜನರ ಪರವಾಗಿ ಸಮರ್ಪಕವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅದಕ್ಕಾಗಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಿರಿ ಎಂಬ ಭರವಸೆ ನಮ್ಮಲ್ಲಿದೆ ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡುತ್ತೇವೆ, ಅದಕ್ಕಾಗಿ ನಮ್ಮ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುತೇವೆ ಎಂದು ಜನತಾದಳ(ಜಾತ್ಯತೀತ) ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾಪು ಪುರಸಭಾ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ)ದಿಂದ ಸ್ಪರ್ಧಿಸುವ ಅಭ್ಯರ್ಥಿಗಳು : ಅಬ್ದುಲ್ ಜಲೀಲ್ : 7ನೇ ಭಾರತ್ ನಗರ ವಾಡ್೯ ಉದಯ ಆರ್. ಶೆಟ್ಟಿ : 8ನೇ ಬೀಡು ಬದಿ ವಾಡ್೯ ದೇವರಾಜ : 11ನೇ ಲೈಟ್ ಹೌಸ್ ವಾಡ್೯ ಸನಾ ಬಾನು : 15ನೇ ಮಂಗಳ ಪೇಟೆ ವಾಡ್೯ ರುಬೀನಾ ಬೇಗಂ : 17ನೇ ಬಡಗರ ಗುತ್ತು ವಾಡ್೯ ಉಮೇಶ್ ಕರ್ಕೇರಾ : 18ನೇ ಕೊಂಬಗುಡ್ಡೆ ವಾಡ್೯ ಶೇಖ್ ಸನವರ್ ಕಲೀಮ್ : 23ನೇ ಅಹಮದಿ ಮೊಲ್ಲಾ ವಾಡ್೯