Updated News From Kaup
ಕಾಪು : ಕಾರು - ಬಸ್ಸು ಡಿಕ್ಕಿ, ಮಹಿಳೆ ಪ್ರಾಣಪಾಯದಿಂದ ಪಾರು
Posted On: 21 Dec 2021, 03:19 PM
ಕಾಪು : ಇಲ್ಲಿನ ಹೊಸ ಮಾರಿಗುಡಿ ಮುಂಭಾಗದ ಎಕ್ಸ್ಪ್ರೆಸ್ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಮಹಿಳೆಯೋರ್ವರು ಎಟಿಯೋಸ್ ಕಾರಿನ ಹಿಂಭಾಗದಿಂದ ಬಲ ಭಾಗದ ಬಾಗಿಲಿನಿಂದ ಇಳಿಯಲು ಯತ್ನಿಸಿದಾಗ ನವದುರ್ಗಾ ಎಕ್ಸ್ಪ್ರೆಸ್ ಬಸ್ ಕಾರಿನ ಬಾಗಿಲಿಗೆ ಹೊಡೆದು ಕಾರಿನ ಬಾಗಿಲು ನಜ್ಜುಗುಜ್ಜಾಗಿರುತ್ತದೆ. ಕಾರಿನಲ್ಲಿದ್ದ ಮಹಿಳೆಯ ಕೈಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿರುತ್ತಾರೆ.
ಮಂಗಳೂರು : ಬೀದರ್ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
Posted On: 19 Dec 2021, 10:58 PM
ಮಂಗಳೂರು : ಇಲ್ಲಿನ ಕಣಚೂರು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್ಶಿಪ್ ಮಾಡುತ್ತಿದ್ದ ಬೀದರ್ ಮೂಲದ ವೈಶಾಲಿ ಎಂಬ ಹುಡುಗಿ ಸಿಲಿಕೋನಿಯಾ ಅಪಾರ್ಟ್ಮೆಂಟ್ನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಘಟನೆ ಆದಿತ್ಯವಾರ ನಡೆದಿದೆ. ಮೃತ ಹುಡುಗಿ ಹೆಸರು ವೈಶಾಲಿ ಗಾಯಕ್ವಾಡ್ (25) ತಂದೆ ವಿಜಯಕುಮಾರ ಗಾಯಕ್ವಾಡ್, ಬೀದರ್ ನ ಆನಂದನಗರದ ನಿವಾಸಿಯಾಗಿದ್ದಾರೆ. ವೈಶಾಲಿ ಗಾಯಕ್ವಾಡ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್ಶಿಪ್ ಮಾಡುತ್ತಿದ್ದಳು. ಮಂಗಳೂರಿನ ಕುತ್ತಾರ್ ನ ಸಿಲಿಕೋನಿಯಾ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯ ಇದ್ದಳು. ಮೃತ ಹುಡುಗಿ ಹೆಸರು ವೈಶಾಲಿ ಗಾಯಕ್ವಾಡ್ (25) ತಂದೆ ವಿಜಯಕುಮಾರ ಗಾಯಕ್ವಾಡ್, ಬೀದರ್ ನ ಆನಂದನಗರದ ನಿವಾಸಿಯಾಗಿದ್ದಾರೆ. ವೈಶಾಲಿ ಗಾಯಕ್ವಾಡ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್ಶಿಪ್ ಮಾಡುತ್ತಿದ್ದಳು. ಮಂಗಳೂರಿನ ಕುತ್ತಾರ್ ನ ಸಿಲಿಕೋನಿಯಾ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯ ಇದ್ದಳು. ಪೋಲಿಸರು ತನಿಖೆ ಆರಂಭಿಸಿದ್ದು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಕುತ್ಯಾರು : ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮ
Posted On: 19 Dec 2021, 09:32 PM
ಕಾಪು : ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಸಭಾಂಗಣದಲ್ಲಿ ಡಿಸೆಂಬರ್ 23 ರ ಗುರುವಾರದಂದು ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಅಂತರ್ಜಾಲದ ಮಿತಿಮೀರಿದ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳನ್ನು ವಿವರಿಸುವ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ವಿಷಯ ತಜ್ಞರಾಗಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಾಜಶ್ರೀ ನಂಬಿಯಾರ್ ಭಾಗವಹಿಸುವರು. ಪೂರ್ವಾಹ್ನ 10 ರಿಂದ ಕಾರ್ಯಕ್ರಮವು ಆರಂಭವಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ವಹಿಸಲಿದ್ದು ಪ್ರಾಂಶುಪಾಲ ಗುರುದತ್ತ ಸೋಮಯಾಜಿ, ಶಿಕ್ಷಕವೃಂದ ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು. ಆಸಕ್ತರು ಈ ಮಾಹಿತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂದು ತೆರೆಗೆ : ಆರ್ಎಸ್ಬಿ ಕೊಂಕಣಿ ಭಾಷೆಯಲ್ಲಿ ಪ್ರಪ್ರಥಮವಾಗಿ ನಿರ್ಮಾಣಗೊಂಡ ಚಲನಚಿತ್ರ ಅಮ್ಚೆ ಸಂಸಾರ್ ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ
Posted On: 19 Dec 2021, 09:20 AM
ಮಂಗಳೂರು: ಆರ್ಎಸ್ಬಿ ಕೊಂಕಣಿ ಭಾಷೆಯಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣಗೊಂಡ ಚಲನಚಿತ್ರ ಅಮ್ಚೆ ಸಂಸಾರ್ ಇಂದು ಅಪರಾಹ್ನ 3 ಗಂಟೆಗೆ ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ತೆರೆಕಾಣಲಿದೆ. ಪ್ರದರ್ಶನ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ನಿವೃತ್ತ ಜನರಲ್ ಮೆನೇಜರ್ ಎನ್.ಉಪೇಂದ್ರ ಉದ್ಘಾಟಿಸಲಿದ್ದು, ಮಂಗಳೂರು ಆರ್.ಎಸ್.ಬಿ. ಸಂಘದ ಅಧ್ಯಕ್ಷ ಆರ್.ಎಂ.ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ನಿರ್ದೇಶನವನ್ನು ಸಂದೀಪ್ ಕಾಮತ್ ಅಜೆಕಾರು ಮಾಡಿದ್ದು, ಭುವನೇಶ್ ಪ್ರಭು ಹಿರೇಬೆಟ್ಟು ಸಿನೇಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಪುಂಡಲೀಕ ಮರಾಠೆ ಮಾಹಿತಿ ನೀಡಿದರು. ಈ ಸಂದರ್ಭ ಚಿತ್ರ ತಂಡದ ಸಂದೀಪ್ ಕಾಮತ್ ಅಜೆಕಾರು, ಭುವನೇಶ್ ಪ್ರಭು ಹಿರೇಬೆಟ್ಟು, ನಟ ರೋಹನ್ ನಾಯಕ್ ಹಾಗೂ ಮಂಗಳೂರು ಆರ್ಎಸ್ಬಿ ಸಂಘದ ಅಧ್ಯಕ್ಷ ಆರ್.ಎಂ.ಪ್ರಭು ಉಪಸ್ಥಿತರಿದ್ದರು.
ಜನವರಿ 2 : ಫಲಿಮಾರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
Posted On: 18 Dec 2021, 03:02 PM
ಫಲಿಮಾರು : ಹೊಯ್ಗೆ ಫ್ರೆಂಡ್ಸ್, ಹೊಯ್ಗೆ (ರಿ.) ಫಲಿಮಾರು, ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜನವರಿ 2ರ ಆದಿತ್ಯವಾರ ಬೆಳಿಗ್ಗೆ 8 ರಿಂದ ಅಪರಾಹ್ನ ಗಂಟೆ 2ರ ವರೆಗೆ ಫಲಿಮಾರಿನ ಗಣೇಶ ಮಂಟಪದಲ್ಲಿ ಜರಗಲಿದೆ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲಿಚ್ಛಿಸುವವರು ಪಾಲ್ಗೊಳ್ಳಬಹುದು. ಈ ಬಗ್ಗೆ ಎಲ್ಲರಿಗೂ ಮಾಹಿತಿ ಹಂಚಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ರಾಘವೇಂದ್ರ ಸುವರ್ಣ- 8197605299 ಪ್ರತಾಪ್ - 9743339093
ಬಾಲ ಕಾರ್ಮಿಕ, ಕಿಶೋರ ಕಾರ್ಮಿಕ ಪದ್ಧತಿ ಕುರಿತು ಹೆಚ್ಚಿನ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 18 Dec 2021, 10:33 AM
ಉಡುಪಿ : ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ದುಷ್ಪರಿಣಾಮಗಳ ಕುರಿತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿಷೇಧದ ಕುರಿತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಯಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಆಟೋ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿನ ಪೋಷಕರಿಗೆ ಮನ ಮುಟ್ಟುವಂತೆ ಬೀದಿ ನಾಟಕಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆಟೋ ಪ್ರಚಾರದ ಮೂಲಕ ಹಾಗೂ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಈ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸಬೇಕು. ಜಿಲ್ಲೆಯಾದ್ಯಂತ 10 ದಿನ ನಡೆಸಲಾಗುವ ಈ ಆಟೋ ಪ್ರಚಾರ ಕಾರ್ಯಕ್ರಮವು ಸಾಧ್ಯವಾದಷ್ಟು ಎಲ್ಲಾ ಕಾಲೋನಿಗಳಿಗೆ ತಲುಪುವಂತೆ ಯೋಜನೆ ರೂಪಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ.ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ಶೇಷಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ನಗರಸಭೆ ಅಧ್ಯಕ್ಷೆ ಆರ್.ಸುಮಿತ್ರ ನಾಯಕ್, ನಗರಸಭೆ ಸದಸ್ಯೆ ಎನ್.ವಿಜಯಲಕ್ಷ್ಮಿ, ಚೈಲ್ಡ್ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತಾ ಹಾಗೂ ಮಕ್ಕಳಾ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಸ್ವಾಗತಿಸಿದರು.
ಪಡುಬಿದ್ರಿ : ಪಡುಹಿತ್ಲು ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ
Posted On: 17 Dec 2021, 06:18 PM
ಪಡುಬಿದ್ರಿ : ಇಲ್ಲಿನ ಪಡುಹಿತ್ಲು ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ಶ್ರೀ ಮೈಸಂದಾಯ, ಶ್ರೀ ಜಾರಂದಾಯ ಬಂಟ, ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಡಿಸೆಂಬರ್ 21ನೇ ಮಂಗಳವಾರ ಮತ್ತು 22ನೇ ಬುಧವಾರ ನಡೆಯಲಿದೆ. ಡಿಸೆಂಬರ್ 21, ಮಂಗಳವಾರ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಘಂಟೆ 6 ಕ್ಕೆ :ದೈವದ ಭಂಡಾರ ಇಳಿಯುವುದು, ರಾತ್ರಿ 8 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30 ರಿಂದ ಶ್ರೀ ಮೈಸಂದಾಯ ದೈವದ ನೇಮೋತ್ಸವ, ರಾತ್ರಿ 9 ರಿಂದ ಜಾರಂದಾಯ ದೈವದ ನೇಮೋತ್ಸವ ಜರಗಲಿದೆ. ಡಿಸೆಂಬರ್ 22, ಬುಧವಾರ ಬೆಳಗ್ಗೆ 9 ಕ್ಕೆ ಶ್ರೀ ಧೂಮಾವತಿ ಪರಿವಾರ ದೈವಗಳ ಮತ್ತು ಮಾಯಾಂದಾಲ್ ದೈವದ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಡ್ಮೇರು : ನಿಸರ್ಗ ಯುವಕ ಮಂಡಲದ 20ನೇ ವಾರ್ಷಿಕೋತ್ಸವ
Posted On: 17 Dec 2021, 04:27 PM
ಕಾಪು : ಇಲ್ಲಿಯ ಮೂಡುಬೆಳ್ಳೆಯ ಎಡ್ಮೇರು ನಿಸರ್ಗ ಯುವಕ ಮಂಡಲದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿಸೆಂಬರ್ 17, ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ರಗಂಟೆಯವರೆಗೆ ಉಡುಪಿ, ದ.ಕ. ಜಿಲ್ಲೆಯ ಆಯ್ದ ತಂಡಗಳಿಂದ ಕಟ್ಟಿಂಗೇರಿ ಸುಭಾಶ್ಚಂದ್ರ ಹೆಗ್ಡೆ ಇವರ ಸಾರಥ್ಯದಲ್ಲಿ ಎಡ್ಮೇರು ನಾಲ್ಕು ಬೀದಿ ಜಂಕ್ಷನ್ ನಲ್ಲಿ 'ನಿಸರ್ಗ ತೆಲಿಪಾಲೆ' ಎಂಬ ಹಾಸ್ಯ ಕಾರ್ಯಕ್ರಮ ಸ್ಪರ್ಧೆ ಜರಗಲಿದೆ. ಡಿಸೆಂಬರ್ 18 ಶನಿವಾರ ರಾತ್ರಿ 8:30ಕ್ಕೆ ಯುವಕ ಮಂಡಲದ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ 500ನೇ ಪ್ರದರ್ಶನದ ತುಳು ಹಾಸ್ಯಮಯ ನಾಟಕ ಪಿರ ಬನ್ನಗ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು ಪುರಸಭಾ ಚುನಾವಣೆ - ಟಿಕೆಟ್ ಹಂಚಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
Posted On: 17 Dec 2021, 01:24 PM
ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯು ನಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಕಡೆ ಪಕ್ಷವು ನಡೆದುಕೊಂಡಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕೆಲವು ಕಡೆ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದ ಬಗೆಯೂ ಚರ್ಚಿತವಾಗುತ್ತಿದೆ. ಹಿಂದು ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಶಿವಾನಂದ ಪೂಜಾರಿ ಯಾನೆ ಮುನ್ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಭಾರತ ನಗರ ವಾರ್ಡ್ ನಲ್ಲಿ ಜಿ ಎಸ್ ಬಿ ಸಮಾಜದ ಹರೀಶ್ ಕಮಲಾಕ್ಷ ನಾಯಕ್ ರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದೆ. ಕೆಲವೊಂದು ವಾಡ್೯ಗಳಲ್ಲಿ ಬಿಜೆಪಿ ಪಕ್ಷವನ್ನೇ ಬೆಂಬಲಿಸುವ ಜಾತಿಗಳಾದ ಜಿ ಎಸ್ ಬಿ ಮತ್ತು ಬ್ರಾಹ್ಮಣ ಜಾತಿಗಳಿಗೆ ಮಣೆ ಹಾಕಿಲ್ಲ, ಜಾತಿವಾರು ಲೆಕ್ಕದಲ್ಲಿ ಬಿಜೆಪಿಯು ಎಡವಿದೆ ಎನ್ನಲಾಗುತ್ತಿದೆ. ನಿವೃತ್ತ ಸಿಆರ್ಪಿಎಫ್ ಯೋಧ ರಾಜೇಶ್ ಮೆಂಡನ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಏನಿದ್ದರೂ ಮತದಾರರ ಒಲವು ಯಾವ ಪಕ್ಷದ ಮೇಲಿದೆ ಎಂಬುದು ಫಲಿತಾಂಶ ಬಂದ ಮೇಲಷ್ಟೆ ನಿರ್ಣಯಿಸಬೇಕಾಗಿದೆ.
ಕಾಪು ಪುರಸಭಾ ಚುನಾವಣೆ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕೆ
Posted On: 17 Dec 2021, 12:38 PM
ಕಾಪು : ಜನಕಲ್ಯಾಣದ ಬಗ್ಗೆ ತನ್ನದೇ ಆದ ದೂರದೃಷ್ಟಿಯನ್ನು ಹೊಂದಿ, ಚುನಾವಣೆಯಲ್ಲಿ ವಾಮಮಾರ್ಗಗಳನ್ನು ಅನುಸರಿಸದೇ ಜನರ ಭಾವುಕತೆಗೆ ಮಹತ್ವ ನೀಡಿ ಮೌಲ್ಯಗಳಿಗೆ ಬದ್ಧವಾಗಿ ಸ್ಪರ್ಧಿಸಿ, ಕಾಪು ಪುರಸಭೆ ಆಗುವುದಕ್ಕಿಂತ ಮೊದಲು ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತಿಗಳಲ್ಲಿ ಸ್ಪರ್ಧಿಸಿ ಜಯಗಳಿಸಿ, ಜನಸೇವೆ ಮಾಡಿದ ಹಿನ್ನೆಲೆಯ ವ್ಯಕ್ತಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಈ ಬಾರಿ ಕಾಪು ಪುರಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಉದ್ಯಾವರ ತಿಳಿಸಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿಯ ಕಾಪು ಪುರಸಭಾ ಚುನಾವಣೆಯಲ್ಲಿ 17ನೇ ಬಡಗರಗುತ್ತು ವಾಡ್೯ನಲ್ಲಿ ಗುಲ್ಶನ್ ಮೊಹಮ್ಮದ್, 18ನೇ ಕೊಂಬಗುಡ್ಡೆ ವಾಡ್೯ನಿಂದ ಅನ್ವರ್ ಅಲಿ ಕಾಪು ಸ್ಪರ್ಧಿಸಲಿದ್ದಾರೆ ಎಂದರು. ಈ ಸಂದರ್ಭ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಶಹಜಹಾನ್ ತೋನ್ಸೆ, ಗುಲ್ಶನ್ ಮೊಹಮ್ಮದ್, ಅನ್ವರ್ ಅಲಿ, ದಿನಕರ್ ಉಚ್ಚಿಲ, ಅಶ್ಫಾಕ್ ಅಬ್ದುಲ್ ಅಲಿ, ರಿಯಾಜ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.
