Updated News From Kaup

ಸತೀಶ್ ಆಚಾರ್ಯ ಇನ್ನಂಜೆ ನಿಧನ

Posted On: 11-10-2021 07:33PM

ಕಾಪು : ಇಲ್ಲಿನ ಉಂಡಾರು ಗ್ರಾಮದ ನಿವಾಸಿ ಸತೀಶ್ ಆಚಾರ್ಯ ಇನ್ನಂಜೆ ಹೃದಯಘಾತದಿಂದ ಮೃತರಾಗಿದ್ದಾರೆ.

ಇವರು ದುಬೈನಲ್ಲಿ ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು.

ಸಹಾಯ ಹಸ್ತದ ನಿರೀಕ್ಷೆಯಲ್ಲಿ ಅನಿಲ್ ಪೂಜಾರಿ

Posted On: 11-10-2021 12:34PM

ಕಾಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ನಿವಾಸಿ 32 ವರ್ಷದ ಅನಿಲ್ ಪೂಜಾರಿ ಸುಮಾರು 15ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ತನ್ನ ಎರಡೂ ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಇದೀಗ ಗಾಲಿಕುರ್ಚಿಯ ಆಸರೆಯನ್ನು ಪಡೆದು ಬದುಕುತ್ತಿದ್ದಾರೆ.

ನಾಲ್ವರು ಮಕ್ಕಳಲ್ಲಿ ಹಿರಿಯವರಾದ ಅನಿಲ್ ಪೂಜಾರಿಯವರ ಶಸ್ತ್ರಚಿಕಿತ್ಸೆಗೆ ಸುಮಾರು 12ರಿಂದ 15ಲಕ್ಷಗಳ ವರೆಗೆ ಖರ್ಚಾಗಬಹುದೆಂದು ವೈದ್ಯರು ತಿಳಿಸಿದ್ದು, ಬಡ ಕುಟುಂಬದವರಾದ ತಮಗೆ ಅಷ್ಟು ಹಣ ಹೊಂದಿಸುವ ಶಕ್ತಿ ಇಲ್ಲದೆ ಇರುವುದರಿಂದ ಸಹೃದಯ ದಾನಿಗಳ ನೆರವನ್ನು ಕೋರುವ ಸಲುವಾಗಿ ಪತ್ರಿಕಾ ಪ್ರಕಟಣೆಗಾಗಿ ಮನವಿ ಮಾಡಿರುತ್ತಾರೆ.

ದಾನಿಗಳು RAJANI, Canara Bank Mudarangadi Branch, A/c. 0638101009850, IFSC Code: CNRB0000638 ತೆ ಹಣವನ್ನು ಜಮಾ ಮಾಡಿ ನೆರವಾಗಬಹುದು. ಮೊಬೈಲ್ : 8197576815, 9632951506

ಬಂಟ್ವಾಳದಲ್ಲಿ ತುಲು ಲಿಪಿ ನಾಮಫಲಕ ಅನಾವರಣ

Posted On: 10-10-2021 07:50PM

ಮಂಗಳೂರು : ವಿಶ್ವ ತುಲು ಲಿಪಿ ದಿನವಾದ ಅಕ್ಟೋಬರ್ 10 ರಂದು ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುವಿನಲ್ಲಿ ಯುವಜನ ವ್ಯಾಯಾಮ ಶಾಲೆಯ ನಾಮಫಲಕವನ್ನು ತುಲು ಲಿಪಿಯಲ್ಲಿ ಹಾಕಲಾಯಿತು. ತುಲು ಲಿಪಿ ಶಿಕ್ಷಕರು ಹಾಗೂ ಜೈ ತುಲುನಾಡ್ (ರಿ.) ಸಂಘಟನೆಯ ಉಪ ಸಂಘಟನಾ ಕಾರ್ಯದರ್ಶಿಯಾದ ಜಗದೀಶ ಗೌಡ ಕಲ್ಕಳ ಇವರು ತುಲು ಲಿಪಿ ನಾಮಫಲಕವನ್ನು ಅನಾವರಣಗೊಳಿಸಿದರು. ಹಾಗೆಯೇ ತುಲು ಲಿಪಿ ದಿನದ ವಿಶೇಷತೆ ಹಾಗೂ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟುಹಬ್ಬವನ್ನು ತುಲು ಲಿಪಿ ದಿನವಾಗಿ ಆಚರಿಸುವುದರ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತುಲು ಲಿಪಿಯಲ್ಲಿ ನಾಮಫಲಕವನ್ನು ಬರೆದ ಜಯ ಆರ್ಟ್ಸ್‌ನ ಜಯರಾಮ, ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇದರ ಅಧ್ಯಕ್ಷರಾದ ಹೆನ್ರಿ ಪಿರೇರಾ ಉಪಸ್ಥಿತಿ ಇದ್ದರು.

ತುಲುನಾಡ ಯುವಸೇನೆ ಬಂಟ್ವಾಳ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ತುಲು ಲಿಪಿ ಶಿಕ್ಷಕರಾದ ಪೃಥ್ವಿ ತುಲುವೆ ಕಾರ್ಯಕ್ರಮವನ್ನು ನಿರೂಪಿಸಿದರು. ನಾಮಫಲಕ ಅನಾವರಣದ ನಂತರ ಜೈ ತುಲುನಾಡ್ (ರಿ.), ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಲುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ನಡೆದ ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರದ ತುಲು ಲಿಪಿ ಪರೀಕ್ಷೆ ನಡೆಯಿತು. ತುಲು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ, ಪೂರ್ಣಿಮಾ ಬಂಟ್ವಾಳ ಮತ್ತು ಪೃಥ್ವಿ ತುಲುವೆ ಪರೀಕ್ಷೆಯನ್ನು ನಡೆಸಿಕೊಟ್ಟರು.

ಕಟಪಾಡಿ : ಮಕ್ಕಳ ತರಬೇತಿ ಶಿಬಿರ ಉದ್ಘಾಟನೆ

Posted On: 10-10-2021 12:03PM

ಕಟಪಾಡಿ : ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿ ಇದರ ವತಿಯಿಂದ ಡ್ರಾಯಿಂಗ್,ಕ್ರಾಫ್ಟ್, ಎಂಬ್ರಾಯ್ಡರಿ,ಮ್ಯಾಜಿಕ್ ಇತ್ಯಾದಿ ತರಗತಿಗಳು ಕಟಪಾಡಿಯಲ್ಲಿ ಇಂದು ಉದ್ಘಾಟಿಸಲಾಯಿತು.

ಈ ಸಂದರ್ಭ ಅಹಲ್ಯಾ ನಾಯಕ್ ಉಡುಪಿ, ಸುಜಾತ ಕಾಮತ್ ಕಟಪಾಡಿ, ಭವ್ಯ ಗುರುಪ್ರಸಾದ್ ಕಟಪಾಡಿ, ನಾಗೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಕಾಪುದಪ್ಪೆ - ಮಾರಿಯಮ್ಮ

Posted On: 09-10-2021 11:17PM

ಆದಿಮ - ಶಿಷ್ಟ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು "ಜಾನಪದ ಮನೋಧರ್ಮ". ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ, ಪೂಜೆ ನಡೆಯುತ್ತಿರುವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವ ನಂಬಿಕೆ ಹಾಗೂ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಸಾನ್ನಿಧ್ಯ ಇದೆ ಎಂಬ ನಂಬಿಕೆಯೊಂದಿಗೆ ಪೂಜೆ ಮಾಡುವುದು . ಕಟ್ಟಳೆಗಳೇ ಪ್ರಧಾನವಾಗುವ ಕಟ್ಟಡಗಳಿಗೆ ಮಹತ್ವ ಇಲ್ಲದ ಚಿಂತನೆಯಿಂದ ಕಟ್ಟಳೆ ಹಾಗೂ ಕಟ್ಟಡಗಳೆರಡೂ ಮುಖ್ಯ ಎಂಬ ಶ್ರದ್ಧೆಯಿಂದ ಆರಾಧನೆ ನೆರವೇರಿಸುವ ಹಂತ ತಲುಪಿದರೂ ಮೂಲವನ್ನು ಸುಪ್ತವಾಗಿ ಹೊಂದಿರುವುದು ನಮ್ಮ ಉಪಾಸನಾ ವಿಧಾನದಲ್ಲಿ ನಿಚ್ಚಳ . ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ‌ ಕಾಪುವಿನ ಮಾರಿ , ಮಾರಿಯಮ್ಮಳಾಗಿ, ಮಾರಿಯಮ್ಮ ದೇವರಾಗಿ ವಿವಿಧ ಸ್ವರೂಪದ ನಿಷ್ಠಾಂತರಗೊಂಡು ಗದ್ದುಗೆ - ಗುಡಿ - ದೇವಸ್ಥಾನ ಸಂಕಲ್ಪಗಳಲ್ಲಿ ವ್ಯಕ್ತಗೊಂಡುದುದನ್ನು ಗಮನಿಸ ಬಹುದು . ಸಮೂಹ ಪೂಜೆ ಹಾಗೂ ಬಹುದೇವತಾ ಆರಾಧನೆಗಳನ್ನು ಸ್ವೀಕರಿಸಿರುವ ನಮ್ಮ ತುಳುನಾಡಿನ ಉಪಾಸನಾ ಪ್ರಕಾರಗಳಲ್ಲಿ‌ 'ಮಾರಿ'ಯಕಲ್ಪನೆ ಮತ್ತು ಅನುಸಂಧಾನ ಸಾಮೂಹಿಕವಾಗಿ ಮಾತ್ರ ರೂಢಿಯಲ್ಲಿವೆ .ಮಾರಿಗೆ ನೆರವೇರುವ ಪೂಜೆಯಲ್ಲಿ ಪಾಲ್ಗೊಂಡು ಮುಂದುವರಿದ ಆಚರಣೆಗಳು ಮನೆಗಳಲ್ಲಿ ನಡೆಯುವುದಿದೆ.

ದಂಡಿನಮಾರಿ ರಾಜಕೀಯ ಸ್ಥಿತ್ಯಂತರಗಳಾಗಿ ವಿಜಯನಗರದ ಆಳ್ವಿಕೆಯ ಬಳಿಕ‌ ಕೆಳದಿಯ ನಾಯಕರು ತುಳುನಾಡಿನ ಅಧಿಕಾರ ಸೂತ್ರವನ್ನು ಹಿಡಿದ ಕಾಲಘಟ್ಟವನ್ನು ಮಾರಿಯ ಪ್ರವೇಶಕಾಲವೆಂದು ಅಂದಾಜಿಸ ಬಹುದು. ಲಿಂಗಣ್ಣ ಕವಿಯ "ಕೆಳದಿನೃಪ ವಿಜಯ" ಗ್ರಂಥದ ಆಧಾರದಲ್ಲಿ‌ ಕ್ರಿ.ಶ. 1743ರಲ್ಲಿ ಬಸಪ್ಪನಾಯಕನು ಕಾಪುವಿನ ಸಮುದ್ರತೀರದಲ್ಲಿ "ಮನೋಹರಗಡ" ಎಂಬ ಸಣ್ಣಕೋಟೆಯನ್ನೂ ( ಲೈಟ್ ಹೌಸ್ ಪಕ್ಕದ ಹೆಬ್ಬಂಡೆ ಮೇಲೆ ಕಟ್ಟಡದ ಕೆಂಪುಕಲ್ಲಿನ ಅವಶೇಷವಿದೆ ) ಮಲ್ಲಾರಿನಲ್ಲಿ ಸೈನ್ಯನಿಲ್ಲುವುದಕ್ಕೆ ದೊಡ್ಡ ಕೋಟೆಯೊಂದನ್ನು ನಿರ್ಮಿಸಿದನೆಂಬ ಐತಿಹಾಸಿಕ ವಿವರಗಳ ಆಧಾರದಲ್ಲಿ ಕಾಪುವಿಗೆ ಸೇನೆಯೊಂದಿಗೆ ಬಂದ "ದಂಡಿನಮಾರಿ" ಎಂದು "ಮಾರಿ"ಯ ಆಗಮನವನ್ನು ಉಲ್ಲೇಖಿಸಬಹುದು . ವಿಜಯನಗರದ ಕಾಲದಲ್ಲೆ ಕೋಟೆ ಇತ್ತು ,ಅದು ಸಂಪೂರ್ಣ ಜೀರ್ಣಗೊಂಡಿತ್ತು ,ಆ ಕೋಟೆಯನ್ನು ಸಂಪೂರ್ಣವಾಗಿ ಬಸಪ್ಪನಾಯಕ ಪುನಾರಚಿಸಿದ ಎಂಬ ಮಾಹಿತಿಯೂ ಇದೆ . ಮಾರಿ ಗುಡಿಗಳಲ್ಲಿ 'ದಂಡಿನಮಾರಿ' ಎಂಬ ಸಂಬೋಧನೆ ಚಾಲ್ತಿಯಲ್ಲಿದೆ . ಕೋಟೆಮನೆ , ರಾಣ್ಯದವರು( ರಣವೀರರು ಎಂದು ಹೇಳಿಕೊಳ್ಳುತ್ತಾರೆ) ಮುಂತಾದ ಪಂಗಡದವರು ಇಂದಿಗೂ ಮಲ್ಲಾರು ಕೋಟೆಯ ( ಕೋಟೆ ಸಂಪೂರ್ಣ ನಾಶವಾಗಿದೆ) ಪಕ್ಕದಲ್ಲಿ ನೆಲೆಯಾಗಿರುವುದನ್ನು ಮತ್ತು ಇವರ ಭಾಗವಹಿಸುವಿಕೆಯಲ್ಲೆ "ಮಾರಿಪೂಜೆ" ನೆರವೇರುತ್ತಿರುವುದನ್ನು ಆಧರಿಸಿ ಮಾರಿ ಆರಾಧನೆಯ ಮೂಲದ ಕಡೆಗೆ ಗಮನಹರಿಸಿದಂತಾಗುತ್ತದೆ .ಇವರೆಲ್ಲ ಕನ್ನಡ ಭಾಷಿಕರೆನ್ನುವುದು ಮುಖ್ಯ ಅಂಶವಾಗಿದೆ . ಇದರಿಂದ 'ಕಾಪುವಿನ ಮಾರಿ'ಸೇನೆಯೊಂದಿಗೆ ಬಂದ ಶಕ್ತಿ ಎಂದು ಪುಷ್ಟೀಕರಿಸಬಹುದು . ಕೋಟೆ ಮನೆಯಲ್ಲಿ 'ಮಾರಿ'ಯು ಮನೆ ದೇವರಾಗಿ ಪೂಜೆಗೊಳ್ಳುತ್ತದೆ . ಮಾರಿಗುಡಿಗಳಲ್ಲಿ ದರ್ಶನ ಆರಂಭಕ್ಕೆ ಮುನ್ನ ಹವಾಲ್ದಾರ್ ಪ್ರಾರ್ಥನೆ ನಡೆಸುತ್ತಾರೆ . ಮಂಗಳವಾರದ ಆಚರಣೆ ಮತ್ತು ಮಾರಿಪೂಜಾ ವಿಧಿಗಳನ್ನು ಸಂಪೂರ್ಣ ನಿರ್ವಹಿಸುವುದು ಸೇರ್ವೇಗಾರರು ಮತ್ತು ರಾಣ್ಯದವರು ( ಕ್ರಮ ಹೀಗಿತ್ತು). ಈ ವಿವರಗಳು ಮಾರಿ - ಈ ಪಂಗಡಗಳವರ ಸಂಬಂಧವನ್ನು ದೃಢೀಕರಿಸುತ್ತಾ ಕಾಪುವಿನಲ್ಲಿ ಮಾರಿ ಆರಾಧನೆ ಮೊದಲಿಟ್ಟಿರಬಹುದಾದ ಸಂದರ್ಭವನ್ನು ನೆನಪಿಸಿಕೊಳ್ಳಬಹುದು . ಕೋಟೆಗೆ ಮಾತ್ರ ಸಂಬಂಧಪಟ್ಟ 'ಮಾರಿ' ಸರ್ವರ ದೇವರಾಗಿ ಸಾರ್ವಜನಿಕ ಉಪಾಸನಾ ಶಕ್ತಿಯಾಗಿ ಪರಿವರ್ತನೆಗೊಂಡು ಪ್ರಸ್ತುತ ನಾವು ಕಾಣುವ "ಕಾಪುದ ಅಪ್ಪೆ" ಮಾರಿಯಮ್ಮದೇವರಾಗಿ ಅನಾವರಣಗೊಂಡ ಕುರಿತ ಪ್ರಚಲಿತವಿರುವ ದಂತಕತೆಗಳಲ್ಲಿ‌ ಇತಿಹಾಸದ ಅಂಶವನ್ನು ಮತ್ತು ಹೆಚ್ಚು ಸರಿಯಾಗಿದೆ ಎಂದು ಪರಿಗ್ರಹಿಸಬಹುದಾದ ಒಂದನ್ನು‌‌ ಇಲ್ಲಿ ನಿರೂಪಿಸುತ್ತೇನೆ .

ನಂದಿಕೆರೆ 1799 ರಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಬ್ರಿಟಿಷರ ವಶಕ್ಕೆ ಕೋಟೆ ಸೇರಿಹೋಯಿತು , ಅರಾಜಕವಾಯಿತು . ಆದರೆ ಟಿಪ್ಪುಸುಲ್ತಾನನ ಉಗ್ರಾಣಿಯೊಬ್ಬರು ತಮ್ಮ ಹುದ್ದೆಯಲ್ಲಿ ಮುಂದುವರಿದು ಬ್ರಿಟಿಷರ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದರು . ಮಂಗಳವಾರ ,ಶುಕ್ರವಾರ ಕೋಟೆ‌ ಪರಿಸರದಲ್ಲಿ ಬರುತ್ತಿದ್ದ ಮಲ್ಲಿಗೆ ಹೂವಿನ ಪರಿಮಳ ಬರುವುದು ,ಕೋಟೆಯೊಳಗಿನ ನಂದಿಕೆರೆಯಲ್ಲಿ ಸ್ನಾನ ಮಾಡುವ ಸದ್ದು ಕೇಳಿ ಬರುವುದನ್ನು ಪರೀಕ್ಷಿಸಲು ಉಗ್ರಾಣಿ ಒಂದು ದಿನ ರಾತ್ರಿವೇಳೆ ಕೋಟೆಯ ನಂದಿಕೆರೆಯ ಬಳಿ ಬರುತ್ತಾರೆ .ಆಗ ಕೆರೆಯಲ್ಲಿ ಸ್ತ್ರೀಯ ತಲೆ ಕೂದಲು ಮಾತ್ರ ಕಾಣಿಸುತ್ತದೆ ."ಯಾರಮ್ಮ ನೀವು" ಎಂದು ಕೇಳುತ್ತಾರೆ ."ನಾನು ಕೋಟೆಮಾರಿ" ಎಂಬ ಉತ್ತರ ಬರುತ್ತದೆ .ಕೋಟೆ ಈಗ ನಮ್ಮದಾಗಿದೆ ಎಂದು ಉಗ್ರಾಣಿ ಹೇಳುತ್ತಾರೆ . ಆಗ ಕೆರೆಯಿಂದ "ನನಗೆ ಬೇರೆ ನೆಲೆಯನ್ನು ತೋರಿಸಿಕೊಡು ಹೋಗುತ್ತೇನೆ" ಎಂಬ ಧ್ವನಿ ಕೇಳಿಸುತ್ತದೆ . 'ನಾನು ಮುಸ್ಲಿಮನಿದ್ದೇನೆ ಅಮ್ಮಾ..ಹೇಗೆ ನಿಮಗೆ ನೆಲೆ ತೋರಿಸಲಿ' ಎಂದು‌ ಉಗ್ರಾಣಿ ವಿನಂತಿಸಿಕೊಂಡಾಗ, 'ನಾಲ್ಕು ಜಾತಿಯ ಜನರನ್ನು ಸೇರಿಸು ,ಇಲ್ಲಿಂದ ತೆಂಗಿನಕಾಯಿಯನ್ನು ಬಿಸಾಡು‌ ಅದು ಎಲ್ಲಿ ಬೀಳುತ್ತದೊ ಅಲ್ಲಿ ನನಗೆ ನೆಲೆಯನ್ನು ಸಾರ್ವಜನಿಕರು ರೂಪಿಸುತ್ತಾರೆ' ಎಂದು ಸೂಚನೆ ಕೊಡುತ್ತಾಳೆ 'ಕೋಟೆ ಮಾರಿ'. ಈಗ ಐತಿಹಾಸಿಕ ಮಹತ್ವದ ಕೋಟೆಯೂ ಇಲ್ಲ ,ನಂದಿಕೆರೆಯೂ ಕಾಣಸಿಗುವುದಿಲ್ಲ - ಕಾಲ ಗರ್ಭ ಸೇರಿಹೋಗಿವೆ . ಮಾರಿಯ ಆದೇಶದಂತೆ ನಾಲ್ಕು ಜಾತಿಯ ಹತ್ತು ಸಮಸ್ತರ ಸಮಕ್ಷಮ ತೆಂಗಿಕಾಯಿಯನ್ನು ಹಾರಿಸಿದಾಗ ಅದು "ಪಲ್ಲ ಪಡ್ಪು" ಎಂಬಲ್ಲಿ ಬಿತ್ತು.ಅಲ್ಲಿ ಮಾರಿ ನೆಲೆಗೊಂಡು ಸೀಮಿತ ಜನರಿಂದ ಆರಾಧನೆಗೊಳ್ಳುತ್ತಿದ್ದಳು .ಮುಂದೆ ಸಮಷ್ಟಿಯ ಆರಾಧನಾ ಶಕ್ತಿಯಾಗಿ ತನ್ನ ಭಕ್ತರ ವಾಸ್ತವ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಳು . ಪಲ್ಲಪಡ್ಪು > ಪಳ್ಳಪಡ್ಪು > ಪಳ್ಳಿಪಡ್ಪು ಎಂದಾಯಿತು‌.ನೀರು ನಿಲ್ಲವ ತಗ್ಗುಪ್ರದೇಶವೇ ಪಲ್ಲ . ಪಡ್ಪು ಎಂದರೆ ಗಿಡ , ಪೊದೆಗಳಿಂದ ಆವೃತವಾದ ಸ್ಥಳ .ಹೀಗೆ 'ಪಲ್ಲ ಪಡ್ಪು'. "ಗದ್ದುಗೆ"ಯೇ ಮೂಲ ಸನ್ನಿಧಾನ ಪ್ರತಿ ಮಂಗಳವಾರ ಮಾತ್ರ ಪೂಜೆ. ಕೋಟೆಯವಳಾದ್ದರಿಂದ ಕೋಟೆಗೆ ಸಂಬಂಧ ಪಟ್ಟವರಿಂದ ಗದ್ದುಗೆ ತಂದು ಪೂಜೆ . ಕೇವಲ ಗದ್ದುಗೆ ಪೂಜೆ ನಡೆಯುತ್ತಿತ್ತು. ವರ್ಷಕ್ಕೊಮ್ಮೆ ತಾತ್ಕಾಲಿಕ ಚಪ್ಪರಹಾಕಿ ಮಾರಿಪೂಜೆ ನಡೆಯುತ್ತಿತ್ತು .ಮಾರಿಪೂಜೆ ಬಳಿಕ ಚಪ್ಪರಕ್ಜೆ ಬೆಂಕಿ ಕೊಡಲಾಗುತ್ತಿತ್ತು . ಗದ್ದುಗೆಯೇ ಮಾರಿಯ ಆರಾಧನೆಯ ಮೂಲ ಸನ್ನಿಧಾನ ಎನ್ನಬಹುದು . ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಳವಾಯಿತು . ಮಾರಿಗುಡಿಯಾಯಿತು‌. ಮಾರಿ > ಮಾರಿಯಮ್ಮನಾದಳು . ಗುಡಿ ದೇವಸ್ಥಾನ ಸದೃಶವಾದಾಗ ಮಾರಿಯಮ್ಮ ದೇವರಾದಳು . ಕಾಲ ಕಾರಣವಾಗಿ ಒಂದು ಗುಡಿ ಮೂರು ಗುಡಿಯಾಯಿತು .ಅವು ದೇವಸ್ಥಾನಗಳೆಂದೇ ಒಪ್ಪಲಾಯಿತು . ಎಷ್ಟೇ ವೈದಿಕೀಕರಣಗೊಂಡರೂ "ಗದ್ದುಗೆ ಪೂಜೆ" , "ಮಾರಿಪೂಜೆ"ಗಳು ನಿರಾತಂಕವಾಗಿ ನಡೆಯುತ್ತಲೇ ಇವೆ .ಇದು ಆದಿಮ ಅಥವಾ ಜನಪದರ‌ ಆಚರಣೆಯ ಸಾಮರ್ಥ್ಯ ಹಾಗೂ ವೈದಿಕದ ವೈಚಾರಿಕ ವೈಶಾಲ್ಯತೆ. ಜನಪದರ ಭಾಗವಹಿಸುವಿಕೆಯಲ್ಲಿ ಜಾನಪದ ವಿಧಾನದಲ್ಲಿ ನೆರವೇರುತ್ತಿದ್ದ ಆಚರಣೆಗಳೆಲ್ಲ ವೈದಿಕದ ಪ್ರಭಾವ ಮತ್ತು ಸ್ವೀಕಾರದಿಂದ ಮಾರಿ 'ಶಕ್ತಿದೇವತೆ'ಯಾಗಿ‌ ರೂಪಾಂತರಗೊಂಡು ದುರ್ಗಾ ಸಂಬಂಧಿಯಾದ ಆರಾಧನಾ ವಿಧಿಗಳು ಸ್ವೀಕಾರವಾದುವು .ಮಾರ್ಕಾಂಡೇಯ ಪುರಾಣದ ಶ್ರೀದೇವೀಮಹಾತ್ಮ್ಯೆ- 'ಸಪ್ತಶತೀ'ಯ ಹಲವು ಶ್ಲೋಕಗಳು ಆಧಾರವಾದಾಗ ದುರ್ಗಾ ಸಂಬಂಧಿ ಪೂಜೆಗಳು , ದುರ್ಗಾನಮಸ್ಕಾರ, ಚಂಡಿಕಾಯಾಗ ,ಶಕ್ತಿ ಯಾಗಾದಿಗಳು , ಕಲ್ಪೋಕ್ತ ಪೂಜೆಗಳು ಸೇರಿಕೊಂಡುವು . ಶರನ್ನವರಾತ್ರಿ ಆರಾಧನಾ ಪರ್ವವಾಗಿ ವೈಭವದ ಆಚರಣೆಗಳು ನಡೆಯಲಾರಂಭವಾಯಿತು .

ಮೂರು ಗುಡಿಗಳಲ್ಲಿ ನವರಾತ್ರಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ : ಪ್ರತಿ ದಿನ ಬೆಳಗ್ಗೆ : ಶ್ರೀ ದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ , ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ. ಶಾರದಾ ಪೂಜೆ. ಶುಕ್ರವಾರ : ದುರ್ಗಾಷ್ಟಮಿ,ದುರ್ಗಾ ನಮಸ್ಕಾರ ಪೂಜೆ. ಸೋಮವಾರ : ವಿಜಯ ದಶಮಿ , ಕಲಶ ವಿಸರ್ಜನೆ. ಅ.27ಮಂಗಳವಾರ : ಚಂಡಿಕಾಯಾಗ . ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ ದೇವಸ್ಥಾನಗಳಲ್ಲಿ ಬಹುತೇಕ ಒಂದೆ ಕ್ರಮದಲ್ಲಿ ನವರಾತ್ರಿ ಆಚರಣೆ ನೆರವೇರುತ್ತವೆ : ಇಲ್ಲಿ ನೆರವೇರುವ ನವರಾತ್ರಿ ಆಚರಣೆ ಕಲಶ ಪ್ರತಿಷ್ಠಾ ಕ್ರಮದಲ್ಲಿ. ಪ್ರತಿದಿನ ಬೆಳಗ್ಗೆ ಮಂಗಳ ಧ್ವನಿ, ಹಿಂದಿನ ದಿನದ ಕಲಶ , ಅಲಂಕಾರ ವಿಸರ್ಜನೆ.ಉಷಃಕಾಲ ಪೂಜೆ , ಹೊಸ ಕಲಶ ಪ್ರತಿಷ್ಠೆ . ಗಣಯಾಗ , ಶಕ್ತಿಯಾಗ . ಮಧ್ಯಾಹ್ನ ಕಲ್ಪೋಕ್ತ ಪೂಜೆ ,ದೇವಿಮಹಾತ್ಮ್ಯೆ ಪಾರಾಯಣ , ಪೂಜೆ ,ಸುವಾಸಿನಿ ಆರಾಧನೆ . ರಾತ್ರಿ - ದುರ್ಗಾನಮಸ್ಕಾರ ,ಕಲ್ಪೋಕ್ತ ಪೂಜೆ ,ಏಕಾಂತ ಸೇವೆ .ನವರಾತ್ರಿ ಕಾಲದಲ್ಲಿ ಎರಡು ಮಂಗಳವಾರಗಳು ಬಂದರೆ ಒಂದನೇ ಮಂಗಳವಾರ ಕದಿರುಕಟ್ಟುವುದು. ಎರಡನೇ ಮಂಗಳವಾರ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ ‌. ಒಂದೇ ಮಂಗಳವಾರವಾದರೆ ಬೆಳಗ್ಗೆ ಕದಿರು ಕಟ್ಟುವುದು ,ಮಧ್ಯಾಹ್ನ ಚಂಡಿಕಾಯಾಗ - ಅನ್ನಸಂತರ್ಪಣೆ . ನವರಾತ್ರಿ ಕಾಲದಲ್ಲಿ ದುರ್ಗಾದೇವಿ , ಆರ್ಯಾದೇವಿ , ಭಗವತೀದೇವಿ , ಕುಮಾರೀದೇವಿ , ಅಂಬಿಕಾದೇವಿ , ಮಹಿಷಮರ್ದಿನಿ ‌, ಚಂಡಿಕಾದೇವಿ , ಸರಸ್ವತೀದೇವಿ ,ವಾಗೀಶ್ವರೀದೇವಿ , ಮೂಲದೇವಿಯಾಗಿ ಕಲ್ಪಿಸಿ ಪೂಜಿಸುವ ಅನುಸಂಧಾನ ಎರಡೂ ಸನ್ನಿಧಾನಗಳಲ್ಲಿವೆ . ಮನುಕುಲವನ್ನು ಬಾಧಿಸುತ್ತಿರುವ ಮಹಾವ್ಯಾಧಿಯನ್ನು ಪರಿಹರಿಸಿ ಪ್ರಜಾವರ್ಗಕ್ಕೆಆಯುರಾರೋಗ್ಯವನ್ನು , ರಕ್ಷಣೆಯನ್ನು ಅನುಗ್ರಹಿಸುವಂತೆ ಮಾರಿಯಮ್ಮನಲ್ಲಿ ಪ್ರಾರ್ಥಿಸೋಣ. (ಪ್ರಸಿದ್ಧ ಪತ್ರಿಕೆಯಲ್ಲಿ ಬರೆದ ಮತ್ತು 2005ರಲ್ಲಿ ಅಭಯ ಪ್ರಸಾದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ) ಲೇಖನ : ಕೆ.ಎಲ್.ಕುಂಡಂತಾಯ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಲಿಕಾ ಸಾಮಾಗ್ರಿ ವಿತರಣೆ

Posted On: 09-10-2021 11:09PM

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ಇದರ G.P.T ಕಾಲೇಜು ಘಟಕದ ವತಿಯಿಂದ ಕಾಂತಾವರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮದಕ ಇಲ್ಲಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಕಾರಿಯಾಗುವಂತೆ ಕಲಿಕಾ ಸಾಮಾಗ್ರಿಯಾದ ಪುಸ್ತಕ, ಪೆನ್ನು, ಪೆನ್ಸಿಲ್ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ABVPಯ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿ : ಡಿಜಿಟಲ್ ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆ

Posted On: 09-10-2021 10:15PM

ಉಡುಪಿ : ಗ್ಯಾಲಾಕ್ಸಿ ಇಮೇಜಿಂಗ್ ಟೆಕ್ನಾಲಜಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ಉಡುಪಿ ಜಂಟಿ ಸಹಯೋಗದಲ್ಲಿ Konico Minolta Digital Mechine Print Expo 2021 ಡಿಜಿಟಲ್ ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆಯು ಆದಿಉಡುಪಿ ತಾರಾಸ್ ಪ್ರಿಂಟ್ ಕಾರ್ನರ್ ಬೈದಶ್ರೀ ಬಿಲ್ಡಿಂಗ್ ಪ್ರಥಮ ಮಹಡಿಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಮಾಜಿ ಅಧ್ಯಕ್ಷರು ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ಎಚ್ ವಿಶ್ವನಾಥ್ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ದಯಾನಂದ ಬಂಗೇರ ಕಟಪಾಡಿ, ಗ್ಯಾಲಾಕ್ಷಿ ಇಮ್ಯಾಜಿಂಗ್ ಟೆಕ್ನಾಲಜಿಯ ಎನ್. ಮೋಹನ್, ಸಂಘಟನೆಯ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಗೌರವ ಸಲಹೆಗಾರ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಸದಸ್ಯರಾದ ರಮೇಶ್ ಕುಂದರ್, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಸದಸ್ಯರಾದ ಶೇಖರ್ ಜತ್ತನ್, ಸರ್ವಿಸ್ ಇಂಜಿನಿಯರ್ ಗಳಾದ ಉಲ್ಲಾಸ್, ನಾಗೇಂದ್ರ ಉಪಸ್ಥಿತರಿದ್ದರು.

ಸುಮಾರು 50 ಜನ ಪ್ರೆಸ್ ಮಾಲಕರು ಆಗಮಿಸಿ ವೀಕ್ಷಿಸಿದರು. ಈ ಸಂದರ್ಭ ಒಟ್ಟು 12 ಡಿಜಿಟಲ್ ಯಂತ್ರ ಬುಕ್ ಆಯಿತು. ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕುಂದರ್ ರವರು ನೆರವೇರಿಸಿದರು. ಕಾರ್ಯದರ್ಶಿ ಮನೋಜ್ ಕಡಬ ವಂದಿಸಿದರು.

ಜಿಲ್ಲೆಯ ಬೀಚ್ ಗಳನ್ನು ವಿಶ್ವ ದರ್ಜೆಗೇರಿಸಬೇಕು: ಸಚಿವ ವಿ.ಸುನೀಲ್ ಕುಮಾರ್

Posted On: 09-10-2021 05:41PM

ಪಡುಬಿದ್ರಿ : ಕಡಲತೀರದಲ್ಲಿ ಜನಸ್ನೇಹಿ ಪರಿಸರ ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಜಿಲ್ಲೆಯಲ್ಲಿರುವ ಬೀಚ್‌ಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವದರ್ಜೆಗೇರಿಸುವ ಕೆಲಸವಾಗಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್‌ಕುಮಾರ್ ಹೇಳಿದರು. ಅವರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ,ಉಡುಪಿ ಜಿಲ್ಲೆ ಪರಿಸರ ಮಂತ್ರಾಲಯ ಅರಣ್ಯ ಮತ್ತು ಹವಾಮಾನ ಬದಲಾವಣೆ ಭಾರತ ಸರಕಾರ ಸೊಸೈಟಿ ಆಫ್ ಇಂಟರ್ನೆಟ್ ಕೋಸ್ಟಲ್ ಮ್ಯಾನೇಜ್ಮೆಂಟ್ ಹಾಗೂ ಮ್ಯಾನೇಜ್ಮೆಂಟ್ ಕಮಿಟಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಜಿಲ್ಲೆಯ ಪಡುಬಿದ್ರಿ ಕಡಲತೀರದಲ್ಲಿ ಭಾರತದ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ರಾಜ್ಯದಲ್ಲಿ 2 ಬ್ಲೂ ಫ್ಲಾಗ್ ಬೀಚ್‌ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದು, ಇನ್ನೂ 16 ಬೀಚ್‌ಗಳ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಡೆನ್ಮಾರ್ಕ್ನಲ್ಲಿ ಎಫ್‌ಇಇ ಸಂಸ್ಥೆಯು ನಿಗಧಿಪಡಿಸಿದ ಸರಾಸರಿ (33)ಅಂಕ ಪಡೆದಲ್ಲಿ ರಾಜ್ಯದಲ್ಲಿ ಇನ್ನೂ ಹೆಚ್ಚು ಪ್ರವಾಸಿ ಆಕರ್ಷಿತ ಬೀಚ್‌ಗಳು ನೀಲಿಧ್ವಜ ಸಂಕೇತವನ್ನು ಪಡೆಯಲಿವೆ. ಆ ನಿಟ್ಟಿನಲ್ಲಿ ನಾವು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಸಂರಕ್ಷಣೆಯನ್ನು ಸಹ ಮಾಡಬೇಕಿದೆ ಎಂದರು.

ಕರಾವಳಿ ತೀರದ ಗ್ರಾಮಗಳನ್ನು ಇಕೋಸ್ಮಾಟ್ ಗ್ರಾಮಗಳನ್ನಾಗಿ ಮಾಡುವುದರ ಜೊತೆಗೆ ಮೀನುಗಾರರ ಜೀವನಶೈಲಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದ ಅವರು ಕರಾವಳಿ ಅಭಿವೃದ್ಧಿ ಹೊಂದಿದಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು. ಕರಾವಳಿ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ರಾಜ್ಯ ಸರಕಾರದಿಂದ ಜಿಲ್ಲಾಡಳಿತಕ್ಕೆ ಆಧ್ಯತೆಯ ಮೇರೆಗೆ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ನೀಡಲಾಗುವುದು ಎಂದರು. ಕರಾವಳಿ ಅಭಿವೃದ್ಧಿಗೆ ಸರಕಾರದ ಜೊತೆಗೆ ಸ್ಥಳೀಯರು ಆಧ್ಯತೆ ನೀಡಿದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ ಸಿಕ್ಕಂತಾಗುತ್ತದೆ ಎಂದ ಅವರು ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಉತ್ತಮ ಬೀಚ್ ಗಾರ್ಡ್ಗಳಿಗೆ ಬಹುಮಾನ ವಿತರಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಮಾತನಾಡಿ, ಕರಾವಳಿ ಪ್ರದೇಶಗಳು ಅದ್ಭುತವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಟ್ಟದಲ್ಲಿ ಉತ್ತೇಜನವನ್ನು ಕೊಡುವುದರಿಂದ ಸ್ಥಳೀಯರ ಜನಜೀವನ ಸುಧಾರಿಸಬಹುದು ಹಾಗೂ ಹೆಚ್ಚು ಪ್ರವಾಸಿಗರು ಬರುವುದರಿಂದ ಆದಾಯ ಗಳಿಸುವ ಪ್ರಮಾಣವನ್ನು ಹೆಚ್ಚಿಸಬಹುದು ಎಂದರು. ಐ.ಎಫ್.ಎಸ್ ಅಧಿಕಾರಿ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಡುಬಿದ್ರಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಶೆಟ್ಟಿ, ಪರಿಸರ ಅಭಿಯಂತರರು ಗರೀಮಾ ಶರ್ಮ, ಉಡುಪಿ ಕರಾವಳಿ ಪ್ರವಾಸೋದ್ಯಮ ಇಲಾಖೆ ಸಂಘಟನೆ ಅಧ್ಯಕ್ಷ ಮನೋಹರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ವಿವಿಧ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು, ಪಡುಬಿದ್ರಿ ಎಂಡ್ ಪಾಯಿಂಟ್ ಕಡಲತೀರದ ಬೀಚ್ ಮ್ಯಾನೇಜ್‌ಮೆಂಟ್ ಕಮಿಟಿಯ ಸದಸ್ಯರು ಮತ್ತು ಬೀಚ್ ನಿರ್ವಹಣ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಜೆ. ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.

ಗೃಹ ಸಚಿವರಿಂದ ಪೊಲೀಸ್ ವಸತಿಗೃಹ ಉದ್ಘಾಟನೆ

Posted On: 09-10-2021 05:27PM

ಉಡುಪಿ : ಉಡುಪಿ ಮಿಷನ್ ಕಾಂಪೌಂಡ್ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 56 ಮನೆಗಳನ್ನು ಒಳಗೊಂಡ ನೂತನ ಪೊಲೀಸ್ ವಸತಿ ಸಮುಚ್ಛಯವನ್ನು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಉದ್ಘಾಟಿಸಿದರು. ರಾಜ್ಯದಲ್ಲಿ ಗೃಹ ಇಲಾಖೆ ವತಿಯಿಂದ 2025 ರೊಳಗೆ 10000 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 200 ಕೋಟಿ ರೂ ವೆಚ್ಚದಲ್ಲಿ 100 ನೂತನ ಪೊಲೀಸ್ ಠಾಣೆಗಳ ನಿರ್ಮಾಣ ಹಾಗೂ 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಬಲವರ್ಧನೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕ್ರೈಂಸೀನ್ ಅಧಿಕಾರಿಗಳ ನೇಮಕಾತಿ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಇಲಾಖೆಯಲ್ಲಿ ಅಳವಡಿಸಿದ್ದು, ಸೈಬರ್ ಅಪರಾಧಗಳನ್ನು ಪತ್ತೆ ಮಾಡಲು ಬ್ಯಾಂಕ್ ಗಳೊಂದಿಗೆ ಒಪ್ಪಂದ ಆಗಿದ್ದು, ಹಣ ಕಳೆದುಕೊಂಡು ವ್ಯಕ್ತಿ 1-2 ಗಂಟೆಯೊಳಗೆ ದೂರು ನೀಡಬೇಕು , ತಕ್ಷಣದಲ್ಲಿ ಲಿಖಿತ ದೂರು ನೀಡಲು ಸಾಧ್ಯವಾಗದಿದ್ದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ದೂರು ಸಲ್ಲಿಸಬಹುದು,ಸಾರ್ವಜನಿಕರು ಪೊಲೀಸ್ ಇಲಾಖೆಯ ನೆರವು ಅಗತ್ಯವಿದ್ದಲ್ಲಿ 112 ಗೆ ಕರೆ ಮಾಡುವಂತೆ ಸಚಿವರು ಹೇಳಿದರು.

ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸುವಾಗ ಅಗ್ನಿಶಾಮಕ ಇಲಾಖೆಯ ನಿರಪೇಕ್ಷಣಾ ಅನುಮತಿ ಪತ್ರ ಮತ್ತು ಕಟ್ಟಡ ಮುಕ್ತಾಯಗೊಂಡಾಗ ಕ್ಲಿಯರೆನ್ಸ್ ಪತ್ರ ಪಡೆಯುವುದು ಕಡ್ಡಾಯ ಎಂದ ಸಚಿವರು, ಮಾದಕ ವಸ್ತುಗಳ ನಿಯಂತ್ರಣ ಇಲಾಖೆಗೆ ದೊಡ್ಡ ಸವಾಲಾಗಿದ್ದು,ಸಾರ್ವಜನಿಕರು ಈ ಬಗ್ಗೆ ಮಾಹಿತಿಗಳನ್ನು ಇಲಾಖೆಗೆ ನೀಡಬೇಕು,ರಾಜ್ಯದಲ್ಲಿ ಎಫ್.ಎಸ್.ಎಲ್ ಲ್ಯಾಬ್ ನ್ನು ಅತ್ಯಾಧುನಿಕವಾಗಿ ಸಿದ್ದಪಡಿಸಿದ್ದು, ಸೈಬರ್ ಕ್ರೈಂ ತನಿಖೆ ಕುರಿತಂತೆ ಗುಜರಾತ್ ಸರ್ಕಾರದೊಂದಿಗೆ ಎಂಓಯು ಮಾಡಿಕೊಂಡಿದ್ದು,ರಾಜ್ಯದ ಸಿಬ್ಬಂದಿಗಳನ್ನು ಅಲ್ಲಿಗೆ ತರಬೇತಿಗಾಗಿ ಕಳುಹಿಸಲಾಗುವುದು ಎಂದರು.

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿದ್ದು, ಮಧ್ಯವರ್ತಿಗಳನ್ನು ನಂಬಿ ಯಾರೂ ಮೋಸ ಹೋಗಬೇಡಿ, ಇಂತಹ ಮಧ್ಯವತಿಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಹೇಳಿದರು. ಉಡುಪಿಯ ಮಣಿಪಾಲದಲ್ಲಿ ನೂತನ ಅಗ್ನಿಶಾಮಕ ಠಾಣೆಗೆ ಮಂಜೂರಾತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ನಗರದಲ್ಲಿ ಪೊಲೀಸರಿಗೆ ವಸತಿಗೃಹಗಳ ಕೊರತೆ ಇಲ್ಲ , ದೊಡ್ಡಣಗುಡ್ಡೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿಗೃಹಗಳನ್ನು ನೆಲಸಮ ಮಾಡಿ, ಸಮುಚ್ಛಯ ಮಾದರಿಯಲ್ಲಿ ನೂತನ ಗೃಹಗಳ ನಿರ್ಮಾಣ, ಶ್ರೀಕೃಷ್ಣಮಠದಲ್ಲಿ ಪೊಲೀಸ್ ಔಟ್‌ಪೋಸ್ಟ್ ನಿರ್ಮಾಣ ಮತ್ತು ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆಗೆ ಮಂಜೂರು ನೀಡುವಂತೆ ಕೋರಿದರು.

ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಎ.ಎನ್.ಎಫ್ ಹಾಗೂ ಕರಾವಳಿ ಕಾವಲು ಪಡೆ ಎಸ್ಪಿ ನಿಖಿಲ್ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ವಾಗತಿಸಿದರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ವಂದಿಸಿದರು. ಮನಮೋಹನ್ ರಾವ್ ನಿರೂಪಿಸಿದರು.

ಶರನ್ನವರಾತ್ರಿ ರಮೋತ್ಸವ, ದಶಾಹರ್ = ದಸರ

Posted On: 09-10-2021 05:09PM

ಶರದೃತು ಆರಂಭ ಎಂದರೆ ಮಳೆಗಾಲದ ಅಂತ್ಯ. ಗದ್ದೆಗಳಲ್ಲಿ ಪೈರು ಬೆಳೆದು ತೆನೆಗಳು ತೊನೆದಾಡುವ ಸಂಭ್ರಮ . ಅನ್ನದಾತನ ದುಡಿಮೆಗೆ ಭೂಮಿ ತಾಯಿ ನೀಡಿದ ಸತ್ಫಲ , ಜೀವನಾಧಾರವಾದ 'ಅನ್ನಬ್ರಹ್ಮ' ಮನೆಯಂಗಳಕ್ಕೆ ಬರುವ ಸಮೃದ್ಧಿಯ ಸಮುಲ್ಲಾಸದ ಸಂದರ್ಭ. 'ನವರಾತ್ರಿ ರಮೋತ್ಸವ'ವೂ ಹೌದು. 'ರಮಾ' ಎಂದರೆ ಲಕ್ಷ್ಮೀ,ಶೋಭೆ,ಸಮೃದ್ಧಿ ಎಂಬುದು ಅರ್ಥ. ಪ್ರಕೃತಿಯು ಬೆಳೆದ ಬೆಳೆಯಿಂದ ತುಂಬಿ ಅತಿಶಯತೆಯನ್ನು ಸಾಂಕೇತೀಸುವ ಪರ್ವಕಾಲ.ಇದು ಲಕ್ಷ್ಮೀ ,ಸಂಪತ್ತಿಗೆ ಹೇತುವಾದ ಪರಿಸರವಲ್ಲವೇ ? ಈ ಒಂಬತ್ತು ದಿನಗಳ ಉತ್ಸವ ,ಹತ್ತನೇ ದಿನದ ಸಮಾರೋಪ ಅವಭೃತ .ಇದರಿಂದ ಈ ಕಾಲ ದಶಾಹರ್= ದಸರ( ಹತ್ತು ದಿವಸಗಳ ಉತ್ಸವ, ಹತ್ತು ಹಗಲುಗಳು)ಶಕ್ತಿ ಪೂಜೆಯ ಸುಸಂದರ್ಭ. ‌‌‌‌ ಶರತ್ಕಾಲವು ಭೂಮಿ ತಾಯಿ ಹಸಿರು ಹೊದ್ದು ,ಆ ಹಸಿರಲ್ಲಿ ಬಂಗಾರದ ಬಣ್ಣದ ತೆನೆಗಳನ್ನು ಪ್ರದರ್ಶಿಸುತ್ತಾ ತನ್ನ ಸಹಜ ಸೊಬಗಿನಿಂದ ಶೋಭಿಸುವ ಕಾಲ. ಹವಾಮಾನದಲ್ಲಿ‌ ಬದಲಾವಣೆಯಾಗುವ ಈ ವೇಳೆ ಪ್ರಕೃತಿಮಾತೆಯ ಮೂಲಕ ಲೋಕಮಾತೆಯ ಆರಾಧನೆ. ಮಾನವ ನಿಸರ್ಗದೊಂದಿಗೆ ಕೈ ಜೋಡಿಸುತ್ತಾ ಬದುಕು‌ ರೂಪಿಸಿಕೊಂಡ. ಈ ಮೂಲದ ಮಾನವ - ಪ್ರಕೃತಿ ಸಂಬಂಧವೇ ಈ ವರೆಗೂ ಸಾಗಿಬಂತು‌.ನಮ್ಮ ವಾರ್ಷಿಕ ಆಚರಣೆಗಳೆಲ್ಲ ಅದಕ್ಕೆ ಹೊಂದಿಕೊಂಡವು. ಹುಟ್ಟು - ಬೆಳವಣಿಗೆ - ಸಾವು ಈ ಮೂರರ ನೈರಂತರ್ಯದ ಪ್ರತ್ಯಕ್ಷ ದರ್ಶನವೇ ಮಹಾಕಾಳಿ - ಮಹಾಲಕ್ಷ್ಮೀ - ಮಹಾಸರಸ್ವತೀ ಕಲ್ಪನೆಗೆ ಆಧಾರವಾಗುತ್ತದೆ.ಹುಟ್ಟು ಎಂದೊಡನೆ ನಮಗೆ ಜನ್ಮ ನೀಡಿದ ತಾಯಿಯೇ ಸಾಕ್ಷಿ ತಾನೆ ? ಈಗ ತಾಯಿ ಎಂದ ಮೇಲೆ ತಂದೆ ಮುಂದಿನ ಎಲ್ಲ ಸಂಬಂಧಗಳು ಸಂಭವಿಸುವುದು ಸಹಜ ಪ್ರಕ್ರಿಯೆ.

ನಮ್ಮ ಅಮ್ಮನೊಂದಿಗಿನ ಭಾವನಾತ್ಮಕ ಹೊಂದುಗೆಯ ಸಾಕ್ಷಾತ್ಕಾರವೇ ಭೂಮಿತಾಯಿಯೊಂದಿಗಿನ‌ ನಂಟಿನ ಗ್ರಹಿಕೆಗೆ ಸುಲಭ ಸಾಧನ .ನಮ್ಮಮ್ಮನೊಂದಿಗಿನ‌ ಪ್ರೀತಿಯೇ ಬಳಿಕ ಒದಗುವ ಬಾಂಧವ್ಯಗಳಿಗೆ ಮೂಲ. ಆದುದರಿಂದಲೇ ನಾವು ಚಿಂತಿಸ ಹೊರಟ ಮಹಾಮಾತೆಯ ತಿಳಿವಳಿಕೆಗೆ ನಮ್ಮ ತಾಯಿ ,ನಮ್ಮ ತಾಯಿಯಿಂದ ಭೂಮಿತಾಯಿ. ಏಕೆಂದರೆ ಅಮ್ಮನ ಮಡಿಲಿನಿಂದ ಮುಂದಿನ ನಮ್ಮ ಹೆಜ್ಜೆ ಭೂಮಿಗೆ ತಾನೆ ? ಹಾಗಾಗಿ ತಾಯಿ , ಭೂಮಿತಾಯಿ . ಈ ಎರಡು ಅಮ್ಮಂದಿರ ಬಳಿಕ ಸಮಸ್ತ ಸೃಷ್ಟಿಯನ್ನೊಳಗೊಂಡ ಜಗನ್ಮಾತೆಯ ದರ್ಶನ ಸಾಧ್ಯವಾಗುವುದು. ಇದು ಲಲಿತೆಯಾದ ಜಗನ್ಮಾತೆಯ ದಿವ್ಯ ದರ್ಶನ. ಲಾಲಿತ್ಯಪೂರ್ಣವಾದುದು ಮಾತ್ರ ಆತ್ಮೀಯವಾಗುತ್ತದೆ. ಲೌಕಿಕ ಅಮ್ಮನಲ್ಲಿರುವ ಅಲೌಕಿಕ ಜಗನ್ಮಾತೆಯನ್ಮು ಅರಿತು ಆರಾಧಿಸುವುದು ಶರನ್ನವರಾತ್ರಿಯ ಆಶಯ.ಆದುದರಿಂದಲೇ ನವರಾತ್ರಿ ಆಚರಣೆಯಲ್ಲಿ ವ್ರತದ ಶ್ರದ್ಧೆ , ನಿಯಮ ಪಾಲನೆ ,ಒಂಬತ್ತು ದಿನಗಳ ಅವಧಿಯ ನಿರ್ಧಾರದಿಂದ ಆರಾಧನೆಗೊಂದು ಶಿಸ್ತು , ಬದ್ಧತೆ ಒದಗುತ್ತದೆ. ನವರಾತ್ರಿಯ ವ್ರತನಿಷ್ಠೆಯಲ್ಲಿ ಅಮ್ಮನೆಂಬ ಆತ್ಮೀಯತೆ - ಪ್ರೀತಿಯ ಅಪೂರ್ವವಾದುದು ಸಂಭವಿಸಿದರೆ ಅದೇ ಸಿದ್ಧಿ. ನಡವಳಿಕೆ ಸಾರ್ಥಕ. ಲಲಿತೆಯಾದ ಜಗನ್ಮಾತೆಯನ್ನು ಮಹಾಕಾಳಿ ,ಮಹಾಲಕ್ಷ್ಮೀ, ಮಹಾಸರಸ್ವತೀ ಎಂಬ ಅನುಸಂಧಾನದೊಂದಿಗೆ ಪೂಜಿಸಲಾಗುತ್ತದೆ.ಮಾರ್ಕಾಂಡೇಯ ಪುರಾಣದ 'ಸಪ್ತಶತೀ'ಯಲ್ಲಿ ಪ್ರಥಮ ಚರಿತೆ ,ಮಧ್ಯಮ ಚರಿತೆ,ಉತ್ತಮ ಚರಿತೆಗಳೆಂದು ಮೂರು ವಿಭಾಗ. ಈ ಮೂರು ವಿಭಾಗಗಳಿಗೆ ಮಹಾಕಾಳಿ ,ಮಹಾಲಕ್ಷ್ಮೀ, ಮಹಾಸರಸ್ವತೀಯರು ಅನುಕ್ರಮವಾಗಿ ದೇವರುಗಳೆಂದು ಅನುಸಂಧಾನವಿದೆ. ಮಹಾಕಾಳಿ(ಮಹಾಕಾಲಿ) ಒಂದು ಭೀಕರ ದೇವತೆ .ಈ ಶಬ್ದವೇ ದುರ್ಗಾ, ಪಾರ್ವತೀ ಎಂಬ ಅರ್ಥವನ್ನು ಧ್ವನಿಸುತ್ತದೆ. ಮಹಾಲಕ್ಷ್ಮೀ ಎಂದರೆ ಸಂಪತ್ತಿನ ಅಧಿದೇವತೆ : ಕಾಂತಿ ,ಸೌಂದರ್ಯ, ಶೋಭೆ, ಲಕ್ಷಣ ಎಂದು ತಿಳಿವಳಿಕೆ. ಮಹಾಸರಸ್ವತೀಯು ವಿದ್ಯಾಧಿದೇವತೆಯಾಗಿ, ಶಾರದೆಯಾಗಿ 'ಮಾತು' ಎಂಬ ಅರ್ಥವನ್ನು ಬಿಂಬಿಸುತ್ತದೆ. ಈ ಮೂರು ಸ್ವರೂಪಗಳಿಗೆ ತಾಮಸ, ರಾಜಸ,ಸಾತ್ವಿಕ ಗುಣಗಳೆಂದು‌ ಮನಗಂಡು ಆರಾಧನೆಗೆ ಸ್ವೀಕಾರ. ಮೊದಲು 'ತಮಸ್ಸು' ಬಳಿಕ 'ಸಮೃದ್ಧಿ' ಬಳಿಕ ಪರಿಪೂರ್ಣವಾದ 'ಜ್ಞಾನ'ವೆಂದು ಒಪ್ಪಿಗೆ.

ದುರ್ಗಮ ದುರಿತಗಳಿಗೆ ಕಾರಣವಾಗಿ , ಜಡತ್ವ ಹಾಗೂ ಅಹಂಕಾರದ ವಿಜೃಂಭಣೆ ಎಂದರೆ ಪೂರ್ಣ ಪ್ರಮಾಣದ ತಮಸ್ಸು .ಈ ತಮಸ್ಸನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹರಿಸುವುದು ಮಹಾಕಾಳಿಯ ಕೆಲಸ. 'ನಾನೇ' ಎಂಬ ಅಹಂಕಾರ ,ಅದರೊಂದಿಗೆ ಸರ್ವಸಮೃದ್ಧಿ , ಸಂಪತ್ತು ಪ್ರಾಪ್ತಿ .ದಕ್ಕಿದ ಸಂಪತ್ತನ್ನು ಉಳಿಸಿಕೊಳ್ಳಲು ರಾಜಸದ ವಿಜೃಂಭಣೆ.ಉದಾಹರಣೆಗೆ ಮಹಿಷ : ವರಗಳನ್ನು ಪಡೆಯುವ, ಸರ್ವಾಧಿಕಾರ ಸ್ಥಾಪಿಸುವ , ಧನಕನಕಾದಿಗಳನ್ನು ಹೊಂದುವ , ಅಪೂರ್ವವಾದುವುಗಳನ್ನು ಪಡೆಯುವ , ಆದರೆ ಸಾಧನೆಗಳೆಲ್ಲವೂ ಲೋಕ ಒಪ್ಪಿದ ಧರ್ಮದ ಚೌಕಟ್ಟನ್ನು ಮೀರಿ ದಾಷ್ಟ್ಯವಾಗಿ ನಿಗಿನಿಗಿಸಿದರೆ ಅಂತಹ ರಾಜಸದ ನಿಯಂತ್ರಣಕ್ಕೆ ಅಥವಾ ವಧೆಗೆ ಮಹಾಲಕ್ಷ್ಮೀಯಾಗಿ ಲೋಕ ಒಪ್ಪುವ ರಾಜಸವನ್ನು - ಧರ್ಮವನ್ನು ರಕ್ಷಿಸುವ ಕಾರ್ಯವೇ ಮಹಾಲಕ್ಷ್ಮೀಯ ಸಾಕ್ಷಾತ್ಕಾರ. ಮುಂದಿನ ಹಂತದಲ್ಲಿ ಜ್ಞಾನ - ಅನುಭವವು ವಿದ್ಯೆಯಾಗಿ , ವಿದ್ಯೆಯ ಸುಭಗತೆಯಲ್ಲಿ ಸತ್ಯಜ್ಞಾನ - ಸಂಸ್ಕೃತಿಯ ಪ್ರತಿಷ್ಠೆಯೇ ಮಹಾಸರಸ್ವತೀಯ ಅನುಗ್ರಹ . ಮಾರ್ಕಾಂಡೇಯ ಪುರಾಣದ "ಸಪ್ತಶತೀ". ಇದರಲ್ಲಿ ಹದಿಮೂರು ಅಧ್ಯಾಯ + ಏಳುನೂರು ಶ್ಲೋಕಗಳು. ಮೇದಿನಿ ನಿರ್ಮಾಣ - ಎಂಬತ್ತನಾಲ್ಕು ಲಕ್ಷ ಜೀವಕೋಟಿಯ ಸೃಷ್ಟಿ - ಸ್ಥಿತಿ - ಲಯದ ಕ್ರಿಯೆಗೆ ಚಾಲನೆ, ಪ್ರಥಮ ಚರಿತೆ. ಮಹಿಷಾದಿ ದಾನವರ ವಧೆ ,ಶಕ್ರಾದಿ ಸ್ತುತಿ ; ಇದು ಮಧ್ಯಮ ಚರಿತೆ . ಮುಂದಿನ ಚಂಡ - ಮುಂಡರು , ಧೂಮ್ರಾಕ್ಷ , ರಕ್ತಬೀಜ, ಶುಂಭ - ನಿಶುಂಭರೇ ಮೊದಲಾದ ರಾಕ್ಷಸ ವಂಶದ ನಾಶ ಕಾರ್ಯದ ಬಳಿಕ ನೆಲೆಯಾಗುವ ಧರ್ಮ, ಶಾಂತಿ. ಇಂತಹ ಪ್ರಶಾಂತ ಸ್ಥಿತಿಯಲ್ಲಿ ಮಹಾಸರಸ್ವತೀಯ ಅನುಗ್ರಹ ಈ ವಿವರಣೆವುಳ್ಳ ವಿಸ್ತಾರವಾದ ಭಾಗವೇ ಉತ್ತಮ ಚರಿತೆ .ಇದು ಸ್ಥೂಲವಾದ 'ಸಪ್ತಶತೀ'ಯ ಅವಲೋಕನ. ದುರ್ಗಾ ದೇವಾಲಯ - ಸನ್ನಿಧಿಗಳಲ್ಲಿ , ಮಂದಿರಗಳಲ್ಲಿ , ಮನೆಗಳಲ್ಲಿ ಕಲ್ಪೋಕ್ತ ಪೂಜೆ , ಯಾಗ, ಯಜ್ಞ , ಕನ್ನಿಕಾ ಪೂಜೆ , ಸುಮಂಗಲಿಯರ ಪೂಜೆಗಳು‌ ಸಾಮಾನ್ಯ.ಸಂಭ್ರಮದ ಆಚರಣೆಯಂತೆ ಕಂಡರೂ ವೈಭವೀಕರಣವಿಲ್ಲ. ಪೂಜೆ - ಯಾಗಗಳ ವಿಧಿವಿಧಾನಗಳಿಗೆ ಹೆಚ್ಚು ಮಹತ್ವ. ಭವ್ಯ ಅಲಂಕರಣಗಳಿವೆಯಾದರೂ ಆರಾಧನೆಯ ಮೂಲ ಆಶಯ ಮರೆತ ವಿಧಿಗಳಿಲ್ಲ.ಒಂಬತ್ತು ದಿನಗಳ ಪೂಜೆಯ ಬಳಿಕ ವಿಜಯ ದಶಮಿ ಸಂಭ್ರಮೋಲ್ಲಾಸದಿಂದ ನೆರವೇರುತ್ತದೆ. ಅದು ಸಾಂಸ್ಕೃತಿಕ ಸಂಭ್ರಮವಾಗಿರುತ್ತದೆ. ಕಲೆ ,ನೃತ್ಯ ,ಗೀತೆಗಳ ಗೋಷ್ಠಿಯಾಗಿಯೂ ಇರುತ್ತದೆ‌. ಒಂಬತ್ತು ದಿನ ಮೂರ್ತಿಯಲ್ಲಿ, ಕಲಶದಲ್ಲಿ , ಸ್ವಸ್ತಿಕೆಯಲ್ಲಿ , ಮಂಡಲ ಮಧ್ಯದಲ್ಲಿ , ಅಗ್ನಿಮಧ್ಯದಲ್ಲಿ , ಸನ್ನಿಹಿತಳಾಗಿ ವಿವಿಧರೀತಿಯಲ್ಲಿ ಪೂಜೆಗೊಳ್ಳುವ ಅಮ್ಮಾ...ಮನುಕುಲಕ್ಕೆ ಸರ್ವಮಂಗಲವನ್ನು , ರಕ್ಷಣೆಯನ್ನು‌ ಅನುಗ್ರಹಿಸು ಎಂಬುದು ಪ್ರಾರ್ಥನೆ.

|ಕೊಪ್ಪರಿಗೆ ಏರ್ನು| • ಹೆಚ್ಚಿನ ದುರ್ಗಾ - ದೇವಿ ಕ್ಷೇತ್ರಗಳಲ್ಲಿ ನವರಾತ್ರಿಯ ಆರಂಭವೇ 'ಕೊಪ್ಪರಿಗೆ ಏರಿಸುವ' ( ಕೊಪ್ಪರಿಗೆ ಏರ್ನು) ವಿಧಿಯೊಂದಿಗೆ. ಅನ್ನದಾನ ನಿರಂತರ ನಡೆಯಲಿ ಎನ್ನುವ ಆಶಯ.ಅಮ್ಮನ ಸನ್ನಿಧಿಯಲ್ಲಿ, ಆಕೆ ಹಸಿದ ಹೊಟ್ಟೆಯ ಮಕ್ಕಳನ್ನು ಜಗಜ್ಜನನಿ ನೋಡ ಬಯಸಲಾರಳು.ಆದುದರಿಂದ ಅನ್ನ ಸಂತರ್ಪಣೆ ಪ್ರಧಾನ. • ಕನ್ನಿಕಾ ಪೂಜೆ : ಆರು - ಏಳು ವರ್ಷ ಹರೆಯದ ಕನ್ನಿಕಾ ರೂಪಿ ಸಣ್ಣ ಅಮ್ಮನವರನ್ನು ಪೂಜಿಸುವ ಕ್ರಮ ರೂಢಿಯಲ್ಲಿದೆ .ನವರಾತ್ರಿ ಕಾಲದಲ್ಲಿ ಕನ್ನಿಕಾ ಪೂಜೆ ಹೆಚ್ಚು ವಿಶೇಷ. • ಸುಮಂಗಲಿ ಪೂಜೆ : ಮುತ್ತೈದೆ ಸುಮಂಗಲಿಯರಿಗೆ ಬಾಗಿನ ನೀಡುವ ಕ್ರಮವಿದೆ .ಪ್ರತಿ ಚಂಡಿಕಾಯಾಗ ಅಥವಾ ದುರ್ಗಾ ಸಂಬಂಧಿ ಯಾಗಗಳಲ್ಲಿ ಮೂರು ಮಂದಿ ಸುಮಂಗಲಿಯರಿಗೆ ಬಾಗಿನ. ಅಂದರೆ ಮಹಾಕಾಳಿ ,ಮಹಾಲಕ್ಷ್ಮೀ, ಮಹಾಸರಸ್ವತೀ ಎಂಬ ಒಪ್ಪಿಗೆಯಂತೆ. • ಸೀರೆ ,ರವಕೆ ಕಣ ,ಅರಸಿನ ಕುಂಕುಮ , ಬಳೆಗಳು,ಕರಿಮಣಿ ಮುಂತಾದ ಮಂಗಲ ದ್ರವ್ಯಗಳನ್ನು ಮುತ್ತೈದೆಯರಿಗೆ , ಹೆಣ್ಣುಮಕ್ಕಳಿಗೆ( ಕನ್ನಿಕೆಯರು)ಹಂಚುವುದು, ದಾನ ನೀಡುವುದು ನವರಾತ್ರಿ ಪರ್ವದಲ್ಲಿ ಶ್ರದ್ಧೆಯಿಂದ ನಡೆಯುತ್ತವೆ. ------------------- ‌‌‌ ಬರಹ : ಕೆ.ಎಲ್.ಕುಂಡಂತಾಯ