Updated News From Kaup

ಬಂಟ್ವಾಳ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Thumbnail
Posted On: 29 Oct 2021, 05:45 PM

ಮಂಗಳೂರು : ಬಂಟ್ವಾಳ ಸ್ಪರ್ಶ ಕಲಾಮಂದಿರದಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು. ಸದರಿ ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆ ಐ.ಪಿ.ಎಸ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್, ಬಂಟ್ವಾಳ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶಿವಾಂಶು ರಜಪೂತ್ ಐ.ಪಿ.ಎಸ್ ಸೇರಿದಂತೆ ಬಂಟ್ವಾಳ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತ ಮಾಹಿತಿಯನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವಕ/ಯುವತಿಯರು ಪೊಲೀಸ್ ಇಲಾಖೆಗೆ ಸೇರಲು ಸೂಕ್ತ ಮಾರ್ಗದರ್ಶನ ನೀಡಿದರು. ಇದರೊಂದಿಗೆ ಪೊಲೀಸ್ ಹುತಾತ್ಮ ದಿನಾಚರಣೆಯ ಮಹತ್ವ, ರಸ್ತೆ ಸುರಕ್ಷತೆಯ ಕುರಿತು ಮಾಹಿತಿ ಹಾಗೂ ಸಂಚಾರ ನಿಯಮಗಳು, ಮಾದಕದ್ರವ್ಯ ಸೇವನೆ, ಸೈಬರ್ ಅಪರಾಧ ಬಗ್ಗೆ ಕಾನೂನು ಅರಿವು ಮೂಡಿಸಲಾಯಿತು.

ಶಿರ್ವ : ನವೆಂಬರ್ ೧ರಂದು ಎಣ್ಣೆ ದೀಪದ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮ

Thumbnail
Posted On: 29 Oct 2021, 05:33 PM

ಶಿರ್ವ : ವಿದ್ಯುತ್ ದೀಪಗಳು ಇಲ್ಲದ ಹಲವು ವರ್ಷಗಳ ಹಿಂದೆ ರಸ್ತೆಬದಿಗಳಲ್ಲಿ ಅಲ್ಲಲ್ಲಿ ಎಣ್ಣೆ ದೀಪದ ಬೀದಿ ದೀಪಗಳು ಕಂಡುಬರುತ್ತಿದ್ದವು ಕಲ್ಲಿನ ಕಂಬದಲ್ಲಿ ದೀಪವನ್ನು ಎಣ್ಣೆ ಹಾಕಿ ಇರಿಸಲಾಗುತ್ತಿತ್ತು ದಾರಿಯಲ್ಲಿ ಹೋಗುವವರಿಗೆ ಸ್ಥಳದ ಗುರುತುಹಿಡಿಯಲು ರಸ್ತೆಯಲ್ಲಿ ಹೋಗುವಾಗ ಬೆಳಕಿಗಾಗಿ ಹಾಗೂ ಬ್ಯಾಟರಿ ಗಳಿಲ್ಲದ ಆ ಕಾಲದಲ್ಲಿ ತೂಟ /thute / ಹಿಡಿದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅದನ್ನು ಉರಿಸಲು ಈ ಎಣ್ಣೆ ದೀಪದ ಬೀದಿದೀಪದ ಉದ್ದೇಶವಾಗಿತ್ತು. ಇಂತಹ ಬೀದಿದೀಪ ಒಂದು ಬಂಟಕಲ್ಲು ಮಾಧವ ಕಾಮತ್ ರವರ ಮನೆ ಬಳಿ ಇದ್ದ ಬಗ್ಗೆ ತಿಳಿದಿದ್ದು, ಅಲ್ಲೇ ಸಮೀಪದಲ್ಲಿ ಹೋಟೆಲ್ ಒಂದನ್ನು ನಡೆಸುತ್ತಿದ್ದ ದಿ| ನಾರಾಯಣ ನಾಯಕ್ ಎಂಬವರು ಈ ಕಂಬದಲ್ಲಿರುವ ದೀಪಕ್ಕೆ ಎಣ್ಣೆ ಹಾಕಿ ಸಂಜೆ ಹೊತ್ತಿಗೆ ದೀಪ ಉರಿಸುತ್ತಿದ್ದರು. ಅವರ ನಂತರ ಮಾನಿಪ್ಪಾಡಿ ಪುಂಡಲೀಕ ನಾಯಕ್ ರವರು ದೀಪ ಹಚ್ಚುವುದನ್ನು ಮುಂದುವರಿಸಿದ್ದರು. ಸುಮಾರು ನಲವತ್ತು, ಐವತ್ತು ವರ್ಷಗಳ ಹಿಂದಿನಿಂದ ಅಶ್ವತ್ಥ ಮರದ ಹತ್ತಿರವಿದ್ದ ಈ ಕಲ್ಲಿನ ಕಂಬವು ಇತ್ತೀಚಿನ ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಸಮಯದಲ್ಲಿ ಮುರಿದುಬಿದ್ದಿತ್ತು. ಹಳೆಯ ನೆನಪನ್ನು ಮರಳಿ ತರುವ ಯತ್ನವಾಗಿ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಕಾಮತ್ ರವರ ನೇತೃತ್ವದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರ ಸಹಕಾರದೊಂದಿಗೆ ನೂತನ ಎಣ್ಣೆ ದೀಪದ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ ೧, ಸೋಮವಾರ ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಸಂಜೆ 6 ಗಂಟೆಗೆ ಬಂಟಕಲ್ಲು ಮಾಧವ ಕಾಮತ್ ರವರ ಮನೆಯ ಬಳಿ ಲೋಕಾರ್ಪಣೆಗೊಳ್ಳಲಿದೆ. ನಮ್ಮ ರಾಜ್ಯದಲ್ಲಿಯೇ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ರಾಮರಾಯ ಪಾಟ್ಕರ್, ಅತಿಥಿಗಳಾಗಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುಂಡಲೀಕ ಮರಾಟೆ, ಪುಂಡಲೀಕ ನಾಯಕ್ ಮಾನಿಪ್ಪಾಡಿ, ಶಂಕರ್ ನಾಯಕ್ ಬಂಟಕಲ್ಲು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿರ್ವ : ಜಾಗೃತಿ ಅರಿವು ಸಪ್ತಾಹ - 2021

Thumbnail
Posted On: 29 Oct 2021, 04:36 PM

ಶಿರ್ವ: ಇಂದು ದೇಶದಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಭ್ರಷ್ಟಾಚಾರ. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ, ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 'ಜಾಗೃತಿ ಅರಿವು ಸಪ್ತಾಹ-2021' ಏರ್ಪಡಿಸಲಾಯಿತು. ಪ್ರತಿಯೊಬ್ಬ ನಾಗರಿಕ ಪ್ರಜೆಯೂ ಯಾವುದೇ ಭ್ರಷ್ಟಾಚಾರಕ್ಕೆ ಒಳಪಡದೆ ಅಂಥವರ ವಿರುದ್ಧ ಹೋರಾಡಲು ಸೂಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ರಕ್ಷಣೆ - ದೇಶ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾವಿಧಿಯನ್ನು ಕಾಲೇಜಿನ ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ವಿಠ್ಠಲ ನಾಯಕ್, ಐಕ್ಯೂಎಸಿ ಸಂಯೋಜಕ ಮೆಲ್ವಿನ್ ಕ್ಯಾಸ್ಟಲಿನೊ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ಸಂಯೋಜಿಸಿದರು.

ನವೆಂಬರ್ 2 : ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ

Thumbnail
Posted On: 29 Oct 2021, 12:37 AM

ಕಾಪು : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ಹಾಗೂ ಜಿಲ್ಲಾಸ್ಪತ್ರೆ ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ನವೆಂಬರ್ 2 ರಂದು ಬೆಳಗ್ಗೆ 8:30 ರಿಂದ ಮಧ್ಯಾಹ್ನ 1ಗಂಟೆಯವರೆಗೆ ಶಿರ್ವದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿಖರದಿಂದ ಸಾಗರ - ಯುವತಿಯರ ಐತಿಹಾಸಿಕ ಯಾನ

Thumbnail
Posted On: 29 Oct 2021, 12:27 AM

ಉಡುಪಿ : ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ" ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಯುವತಿಯರು ಕಾಶ್ಮೀರದಲ್ಲಿ ಕೊಲಹೊಯ್ (5425 ಮೀ) ಶಿಖರವನ್ನು ಯಸ್ವಿಯಾಗಿ ಏರಿ, ನಂರ ಲಡಾಖ್ ನಿಂದ 3,000 ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿದ್ದು, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಿದ್ದು, ಈ ಯುವತಿಯರ ತಂಡ ಇಂದು ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದರು. ಮಲ್ಪೆ ಸಮದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಇವರನ್ನು ಸ್ವಾಗತಿಸಿದ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ನಂತರ ಮಾತನಾಡಿ, ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸುವುದರ ಜೊತೆಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತು ಓಲಂಪಿಕ್ನಲ್ಲಿ ಉತ್ತಮ ಸಾಧನೆಯನ್ನು ಮಾಡುವ ದಿಟ್ಟ ನಿರ್ಧಾರ ಮಾಡಬೇಕು. ಇದಕ್ಕಾಗಿ ಈ ಯುವತಿಯರಲ್ಲಿರುವ ಸಾಹಸ ಗುಣಗಳು, ಛಲ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಯುವತಿಯರು ಮತ್ತು ಮಹಿಳೆಯರಿಗೂ ಮಾದರಿಯಾಗಬೇಕು ಎಂದರು. ಈ ಸಾಹಸ ಯತ್ರೆಯಲ್ಲಿ ತಮಗೆ ಎದುರಾದ ಎಲ್ಲ ಸಂಕಷ್ಟಗಳನ್ನು ದಿಟ್ಟತನದಿಂದ ಎದುರಿಸಿರುವ, ಈ ಯುವತಿಯರ ಸಾಧನೆ , ಕೇವಲ ರಾಜ್ಯಕ್ಕೆ , ದೇಶಕ್ಕೆ ಮಾತ್ರ ಸೀಮಿತಗೊಳ್ಳದೆ ಮುಂದಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಛಲವನ್ನು ಹೊಂದುವುದರ ಜೊತೆಗೆ , ಯುವ ಪೀಳಿಗೆಗೆ ಮಾದರಿಯಾಗಬೇಕು. ಸ್ತ್ರೀಯರಲ್ಲಿನ ಶಕ್ತಿ , ಸಾಹಸ, ಧೈರ್ಯ ವನ್ನು ಬಿಂಬಿಸುವಂತಹ ವಿಭಿನ್ನವಾದ ಕಾರ್ಯಕ್ರಮವಾಗಿದೆ ಎಂದರು. ಉಡುಪಿ ಜಿಲ್ಲೆಯಲ್ಲಿಯೂ ಸಹ ಸಾಹಸ ಕಾರ್ಯಕ್ರಮಗಳ ತರಬೇತಿಗೆ ಈಗಾಗಲೇ ಪಡುಕೆರೆಯೆಲ್ಲಿ ಸ್ಥಳ ಗುರುತಿಸಲಾಗಿದ್ದು, ಜನರಲ್ ತಮ್ಮಯ್ಯ ಸಾಹಸ ಅಕಡೆಮಿಯ ಮೂಲಕ ಇಲ್ಲೂ ಸಹ ಸಾಹಸ ಕ್ರೀಡೆಗಳ ತರಬೇತಿ ಕೇಂದ್ರ ಆರಂಭವಾಗಲಿದ್ದು,ಜಿಲ್ಲೆಯ ಯುವ ಜನತೆಯ ಈ ಕೇಂದ್ರದ ಪ್ರಯೋಜನ ಪಡೆಯಬೇಕು ಎಂದರು. ತಮ್ಮ ಈ ಸಾಹಸ ಯಾತ್ರೆಯ ಅನುಭವ ಹಂಚಿಕೊಂಡ ಯುವತಿಯರು, ಶಿಖರವೇರುವ ಸಂದರ್ಭದಲ್ಲಿ 25 ಕೆಜಿಗೂ ಅಧಿಕ ಭಾರದ ಬ್ಯಾಗ್ ಗಳನ್ನು ಹೊತ್ತುಕೊಂಡು, ಜೀವವನ್ನು ಪಟಕ್ಕಿಟ್ಟು ಸಾಹಸ ಮಾಡಿದ್ದು, ಯಾನದ ಸಂಪೂರ್ಣ ಸಂದರ್ಭದಲ್ಲಿ ತಮ್ಮ ಎಲ್ಲಾ ಅಗತ್ಯತೆಗಳಿಗೆ ಯಾರನ್ನೂ ಅವಲಂಬಿಸದೇ ತಾವೇ ಸ್ವತ: ಅಡಿಗೆ ಮಾಡುವುದು ಸೇರಿದಂತೆ ಟೆಂಟ್ ಗಳನ್ನು ಹಾಕುವ ಕೆಲಸಗಳನ್ನು ಮಾಡಿದ್ದು, ಶಿಖರವನ್ನು ನಿಗಧಿತ ಅವಧಿಗಿಂತ ಮುಂಚಿತವಾಗಿಯೇ ಏರಿ ಸಾಧನೆ ಮಾಡಿದ್ದೇವೆ ,ಸಾಧನೆಯ ಈ ಹಾದಿಯಲ್ಲಿ ಎದುರಾದ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಲೆಕ್ಕಿಸದೇ ನಿಗಧಿತ ಗುರಿ ಸಾದನೆಯೆಡೆಗೆ ಬಂದಿದ್ದೇವೆ , ಲಡಾಖ್ ನಿಂದ ನಡೆಸಿದ ಸೈಕ್ಲಿಂಗ್ ಪ್ರಯಾಣದಲ್ಲಿ ಕಂಡು ಬಂದ ವಿವಿಧ ಪ್ರದೇಶದಲ್ಲಿನ ಯುವತಿಯರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದು, ಮಹಿಳೆಯರು ಮನೆಯಿಂದ ಹೊರಬಂದು ಸಾಹಸಿಗಳಾಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನದಲ್ಲಿ ಅರಿವು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಇದೆ , ಪೋಷಕರು ಮತ್ತು ತರಬೇತುದಾರರು ಸಂಪೂರ್ಣ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ ಎಂದರು. “ಶಿಖರದಿಂದ ಸಾಗರ" ಈ ಐತಿಹಾಸಿಕ ಯಾನದಲ್ಲಿ ಶಿವಮೊಗ್ಗದ ಐಶ್ವರ್ಯ.ವಿ, ಮತ್ತು ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಪ್ಪ, ಮೈಸೂರಿನ ಬಿಂದು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ , ಸಾಹಸ ಯಾತ್ರೆಯ ಮಾರ್ಗದರ್ಶಕ ಶಬ್ಬೀರ್ ಮತ್ತಿತರರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ , ವಂದಿಸಿದರು. ಸುಮಾರು 60 ದಿನಗಳ ಅಭಿಯಾನ ಇದಾಗಿದ್ದು,, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ನಾರಿಯ ಪುರುಷರ ವಿಕಾಸ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ವಿಭಿನ್ನವಾದ ಒಂದು ಕಾರ್ಯಕ್ರಮವಾಗಿರುತ್ತದೆ. ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನವನ್ನು ಅಗಸ್ಟ್ 16ರಂದು ಧ್ವಜಾರೋಹಣ ಮಾಡಿದ್ದು, ಕಯಾಕಿಂಗ್ ಯಾನದ ಮೂಲಕ ಮಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

ಉಡುಪಿ : ಲಕ್ಷ ಕಂಠದಿ ಮೊಳಗಿದ ಕನ್ನಡ ಗಾಯನ, ಅಭೂತಪೂರ್ವ ಸ್ಪಂದನೆ

Thumbnail
Posted On: 29 Oct 2021, 12:16 AM

ಉಡುಪಿ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲಕ್ಷ ಕಂಠ ಗಾಯನ ಕಾರ್ಯಕ್ರಮದಡಿ ,ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಸೇರಿದಂತೆ, ಕನ್ನಡದ ಶ್ರೇಷ್ಠತೆಯನ್ನು ಸಾರುವ , ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು , ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಆವರಣ ಸೇರಿದಂತೆ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ಹಾಡುವ ಮೂಲಕ ಜಿಲ್ಲೆಯಾದ್ಯಂತ ಕನ್ನಡದ ಕಂಪನ್ನು ಹರಡಲಾಯಿತು. ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಆವರಣದಲ್ಲಿ ಸುಮಾರು 750 ಕ್ಕೂ ಅಧಿಕ ಮಂದಿಯಿಂದ ಕನ್ನಡ ಗೀತೆಗಳ ಗಾಯನ ನಡೆಯಿತು, ಪ್ರಬಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಣಿಪಾಲ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ ಬಹುತೇಕ ಪುರುಷ ಸಿಬ್ಬಂದಿಗಳು ಬಿಳಿ ಬಣ್ಣದ ಶರ್ಟ್ ಗಳು ಮತ್ತು ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳನ್ನು ಧರಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಕನ್ನಡವನ್ನು ಎಲ್ಲಾ ಸ್ಥಳದಲ್ಲಿ , ಎಲ್ಲಾ ಕಾರ್ಯದಲ್ಲೂ ಬಳಸುವುದಾಗಿ ಸಂಕಲ್ಪ ಕೈಗೊಳ್ಳಲಾಯಿತು. ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್ ಸೇರಿದಂತೆ ಜಿಲ್ಲೆಯ 20 ಕ್ಕೂ ಅಧಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಗಾಯನ ಕಾರ್ಯಕ್ರಮ ನಡೆದಿದ್ದು, ಜಿಲ್ಲೆಯಾದ್ಯಂತ ಸುಮಾರು 60 ರಿಂದ 63 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು,ಎಲ್ಲರಿಗೂ ಕಾರ್ಯಕ್ರಮ ಅತ್ಯಂತ ಸಂತೋಷ ತಂದಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು. ಮಲ್ಪೆ ಕಡಲಿನಲ್ಲಿಯೂ ಮೊಳಗಿದ ಕನ್ನಡ ಗೀತೆಗಳ ಕಹಳೆ: ಮಲ್ಪ ಕಡಲ ಮಧ್ಯದಲ್ಲಿ ಬೋಟ್ ನಲ್ಲಿ 100 ಮಂದಿ ವೃತ್ತಪರ ಸಂಗೀತ ಕಲಾವಿದರಿಂದ ನಡೆದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿತ್ತು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲ್ಪೆ ಅಭಿವೃಧ್ದಿ ಸಮಿತಿ, ದಕ ಮತ್ತು ಉಡುಪಿ ಮೀನುಗಾರಿಕಾ ಫೆಡರೇಷನ್ ಸಹಯೋಗದಲ್ಲಿ ಸಮುದ್ರ ನಡೆದ ಕಾಯಕ್ರಮದಲ್ಲಿ 100 ಮಂದಿ ಕಲಾವಿದರ ತಮ್ಮ ಗಾಯನದ ಮೂಲಕ ಕಡಲಿನ ಅಲೆಗಳ ನಡುವೆ ಕನ್ನಡದ ಕಹಳೆಯನ್ನು ಮೊಳಗಿಸಿದರು. ಇವರೊಂದಿಗೆ ಮಲ್ಪೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ದನಿಗೂಡಿಸಿದ್ದು, ಒಟ್ಟು 200 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ದ.ಕ ಮತ್ತು ಉಡುಪಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಕೃಷ್ಣ ಮಠದಲ್ಲಿ : ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಪರ್ಯಾಯ ಶ್ರೀಅದಮಾರು ಶ್ರೀಕೃಷ್ಣ ಮಠ ಉಡುಪಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು,ಶ್ರೀ ಕೃಷ್ಣ ಮಠದ ಸಿಬ್ಬಂದಿ, ಸಾರ್ವಜನಿಕರು ಮತ್ತು ಪ್ರವಾಸಿಗರು ಸೇರಿದಂತೆ ಸುಮಾರು 800 ಕ್ಕೂ ಅಧಿಕ ಕನ್ನಡ ಗೀತೆಗಳ ಗಾಯನಕ್ಕೆ ದನಿಗೂಡಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಪೂರ್ಣ ಸುರೇಶ್,ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು,ಶಾಲೆಗಳು,ಕೈಗಾರಿಕೆಗಳು,ಪ್ರವಾಸಿ ಕೇಂದ್ರಗಳು,ಪ್ರಮುಖ ದೇವಾಲಯಗಳು, ಬ್ಯಾಂಕ್ಗಳು, ಬಸ್ ನಿಲ್ದಾಣ,ರಿಕ್ಷಾ ನಿಲ್ದಾಣ,ಮೆಸ್ಕಾಂ ಸೇರಿದಂತೆ ಎಲ್ಲಡೆ ಏಕಕಾಲದಲ್ಲಿ ಕನ್ನಡದ ಕಂಪು ಪಸರಿಸಿದ್ದು, ಒಟ್ಟು 62000 ಕ್ಕೂ ಅಧಿಕ ಮಂದಿ ಅತ್ಯುತ್ಸಾಹದಿಂದ ಕನ್ನಡದ ಬಗೆಗಿನ ತಮ್ಮ ಒಲುಮೆಯನ್ನು ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳ ಗಾಯನದ ಮೂಲಕ ಪ್ರದರ್ಶಿಸಿದರು.

ಉದ್ಯಾವರ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಗೀತ ಗಾಯನ

Thumbnail
Posted On: 28 Oct 2021, 10:55 PM

ಕಟಪಾಡಿ :ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶದಂತೆ ಕನ್ನಡದ ಅಭಿಮಾವನ್ನು ವೃದ್ಧಿಸುವ ನಿಟ್ಟಿನಲ್ಲಿ ಕನ್ನಡ ಗೀತ ಗಾಯನವು ಉದ್ಯಾವರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಶ್ರೀಯಾನ್ ಕನ್ನಡ ಧ್ವಜ ನೀಡುವ ಮೂಲಕ ಚಾಲನೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂತೋಷ್ ಸುವರ್ಣ ಬೊಲ್ಜೆ ಪ್ರತಿಜ್ಞಾ ವಿಧಿಬೋಧಿಸಿದರು. ವಿದ್ಯಾರ್ಥಿಗಳು ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡುಗಳ ಗಾಯನ ನಡೆಯಿತು. ಈ ಸಂದರ್ಭ ಮುಖ್ಯ ಶಿಕ್ಷಕಿ ಮೂಕಾಂಬೆ, ಪ್ರಾಂಶುಪಾಲೆ ರಶ್ಮಿ, ಸಿಬಿಸಿ ಉಪಾಧ್ಯಕ್ಷ ವಿಜಯ್ ಕುಮಾರ್ ಉದ್ಯಾವರ, ಪ್ರಮುಖರಾದ ಯೋಗೀಶ್ ಕೋಟ್ಯಾನ್, ಪ್ರತಾಪ್ ಕುಮಾರ್, ಪೂರ್ಣಿಮಾ, ಗುರುಚಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್ ಸುವರ್ಣ ಪಿತ್ರೋಡಿ, ರಾಜೇಶ್ ಕುಂದರ್, ಸರೋಜ, ಪ್ರಮೀಳಾ, ವನಿತಾ ಶೆಟ್ಟಿ, ರಮಾನಂದ ಶೇರಿಗಾರ್, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇನ್ನಂಜೆ : ಯುವತಿ ಮಂಡಲದ ವತಿಯಿಂದ ಶ್ರೀ ಕ್ಷೇತ್ರ ಉಂಡಾರುವಿನಲ್ಲಿ ಹೂವಿನ ಪೂಜೆ

Thumbnail
Posted On: 28 Oct 2021, 10:45 PM

ಕಾಪು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಉಂಡಾರುವಿನಲ್ಲಿ ಇನ್ನಂಜೆ ಯುವತಿ ಮಂಡಲದ ವತಿಯಿಂದ ಇಂದು ಸಂಜೆ ಹೂವಿನ ಪೂಜೆ ನಡೆಯಿತು. ಕ್ಷೇತ್ರದ ಅರ್ಚಕರಾದ ಶ್ರವಣ್ ಭಟ್ ಇನ್ನಂಜೆಯಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಶ್ರೀ ದೇವರ ಅನುಗ್ರಹ ನಿಮ್ಮ ಸಂಸ್ಥೆಯ ಮೇಲಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಆಶಾ ನಾಯಕ್ ಇನ್ನಂಜೆ, ಸ್ಥಳೀಯ ಗ್ರಾ. ಪಂ ಸದಸ್ಯ ನಿತೇಶ್ ಸಾಲ್ಯಾನ್ ಕಲ್ಯಾಲು, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷ ಉಮೇಶ್ ಆಚಾರ್ಯ, ಮಾಜಿ ಅಧ್ಯಕ್ಷ ಮಧುಸೂದನ್ ಆಚಾರ್ಯ, ಕಾರ್ಯದರ್ಶಿ ಹರೀಶ್ ಪೂಜಾರಿ,ಸ್ಥಾಪಕಧ್ಯಕ್ಷೆ ಸುಮಲತಾ ಇನ್ನಂಜೆ, ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಮಂಡೇಡಿ, ಯುವತಿ ಮಂಡಲದ ಭಜನಾ ಗುರುಗಳು ಶ್ರೀಕಾಂತ್ ಪ್ರಭು ಪಳ್ಳಿ, ಶ್ರೀ ಜನಾರ್ದನ ಚೆಂಡೆ ಬಳಗ ಎರ್ಮಾಳ್, ಯುವತಿ ಮಂಡಲದ ಗೌರವ ಸಲಹೆಗಾರರಾದ ಶ್ವೇತಾ ಎಲ್.ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮೀ ವೈ ನಾಯಕ್, ಹಾಗೂ ಪದಾಧಿಕಾರಿಗಳು, ಸದಸ್ಯರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ, ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ದೇವರ ಬಲಿ ಉತ್ಸವ

Thumbnail
Posted On: 28 Oct 2021, 10:34 PM

ಕಾರ್ಕಳ : ಕಾರ್ಕಳ ತಾಲೂಕಿನ ಎಳ್ಳಾರೆ ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ನವೆಂಬರ್ 14ರ ಪೂರ್ವಾಹ್ನ ಗಂಟೆ 9.00ಕ್ಕೆ ಶ್ರೀ ದೇವರಿಗೆ ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಮಧ್ಯಾಹ್ನ 1ಗಂಟೆಯಿಂದ ಅನ್ನಸಂತರ್ಪಣೆ ಜರಗಲಿದೆ. ಸೇವಾರ್ಥಿಗಳಾದ ಪುರಂದರ ಬಿ. ಪೂಜಾರಿ, ಪಂಚಮಿ ದೊಂಡೇರಂಗಡಿಯವರ ಕೊಡುಗೆಯಾದ ಸೇವಾ ಕೌಂಟರ್ ಸಮರ್ಪಣೆಯು ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಸಂಜೆ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ನವೆಂಬರ್ 18 ಗುರುವಾರ ಸಂಜೆ ಗಂಟೆ 6.30ರಿಂದ ದೀಪಾರಾಧನೆಯು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳು ಅದಮಾರು - ಕನ್ನಡ ಗೀತ ಗಾಯನ

Thumbnail
Posted On: 28 Oct 2021, 07:51 PM

ಪಡುಬಿದ್ರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ವತಿಯಿಂದ ರಾಜ್ಯದಾದ್ಯಾಂತ ಆಯೋಜಿಸಲಾದ ಮಾತಾಡ್ ಮಾತಾಡ್ ಕನ್ನಡ ಕನ್ನಡಕ್ಕಾಗಿ ನಾವು, ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಪ್ರಯುಕ್ತ ಕನ್ನಡ ಗೀತ ಗಾಯನ ಕಾರ್ಯಕ್ರಮವು ಇಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳು ಅದಮಾರು ಇಲ್ಲಿ ನಡೆಯಿತು. ಉಚ್ಚಾರ ಸ್ಪಷ್ಟತೆಯೊಂದಿಗೆ ಬರೆದಂತೆ ಓದುವ ಹಾಗೂ ಓದಿದಂತೆ ಬರೆಯಲ್ಪಡುವ ಭಾಷೆ ಕನ್ನಡ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕಲಿಯಲು ಹಲವು ಭಾಷೆಗಳಿದ್ದರೂ, ವ್ಯವಹರಿಸಲು ಮಾತೃ ಭಾಷೆಯೇ ಇರಲಿ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ಜೋಗದ ಸಿರಿ ಬೆಳಕಿನಲ್ಲಿ, ಬಾರಿಸು ಕನ್ನಡ ಡಿಂಡಿಮವ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಕನ್ನಡದ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ರಾವ್‍ರವರು ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈ, ಉಪಪ್ರಾಂಶುಪಾಲೆ ಡಾI ಒಲ್ವಿಟಾ ಡಿಸೋಜ, ಮಾಜಿ ಪ್ರಾಂಶುಪಾಲರು ಹಾಗೂ ಗೌರವ ಆಂಗ್ಲ ಭಾಷಾ ಉಪನ್ಯಾಸಕರಾದ ಬಿ. ಆರ್ ನಾಗರತ್ನ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ನಾಯಕ್ ಮತ್ತು ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಿಶ್ಮಿತಾ ಶೆಟ್ಟಿ, ಸಂಸ್ಥೆಯ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿ, ಉಪನ್ಯಾಸಕರಾದ ಡಾI ಜಯಶಂಕರ್ ಕಂಗಣ್ಣಾರು ವಂದಿಸಿದರು.