Updated News From Kaup
ಪತ್ರಿಕಾಗೋಷ್ಠಿಯಲ್ಲಿ ಹಲ್ಲೆಯ ಸತ್ಯಾಂಶ ಬಿಚ್ಚಿಟ್ಟು, ಘಟನೆಯ ಹಿಂದಿನ ವ್ಯಕ್ತಿಗಳನ್ನು ಸತ್ಯ ಪ್ರಮಾಣಕ್ಕಾಗಿ ಆಹ್ವಾನಿಸಿದ ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ
Posted On: 23 Mar 2021, 04:54 PM
ಉಡುಪಿ : ಯಾವ ತಪ್ಪು ಮಾಡದೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನನಗೆ ಹಲ್ಲೆ ಮಾಡಿದವರನ್ನು ಬಾರಕೂರು ಕಾಳಿಕಾಂಬೆ ಮತ್ತು ಅಲ್ಲಿನ ಕಲ್ಲುಕುಟ್ಟಿಗ ಸಾನಿಧ್ಯಕ್ಕೆ, ಕಟಪಾಡಿ ವಿಶ್ವನಾಥ ಕ್ಷೇತ್ರ ಹಾಗೂ ಧರ್ಮಸ್ಥಳದ ಅಣ್ಣಪ್ಪ ಕ್ಷೇತ್ರಕ್ಕೆ ಸತ್ಯ ಪ್ರಮಾಣಕ್ಕೆ ಆಹ್ವಾನಿಸುತ್ತಿದ್ದೇನೆ ಎಂದು ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಹೇಳಿದರು. ಅವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಚ್ಚೂರು ಕಾಳಿಕಾಂಬ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಶ್ರೀಧರ ಆಚಾರಿ ವಡೇರಹೋಬಳಿ, ರವಿ ಆಚಾರಿ ಕೆರಾರ್ಕಳಬೆಟ್ಟು, ಚಂದ್ರಯ್ಯ ಆಚಾರಿ, ಸೌನ್ಯ ಸುರೇಶ್ ಆಚಾರಿ, ಪ್ರವೀಣ್ ಆಚಾರಿ ಮತ್ತು ಇತರರ ಮೇಲೆ ನಾನೇ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ, ಸಭಾಭವನದ ಗಾಜು ಒಡೆದಿದ್ದು, ಹಾಗೆಯೇ ಬ್ರಹ್ಮಕಲಶದ ಸಂದರ್ಭದಲ್ಲಿ ವಿದ್ಯುತ್ ಟ್ಯೂಬ್ಲೈಟ್ ಒಡೆದಿದ್ದು ಇದೆಲ್ಲವೂ ಸಭಾಭವನದ ಎದುರಿನ ಕಚ್ಚೂರು ರಸ್ತೆಯಲ್ಲಿ ನಡೆದಿದ್ದು, ದೇವಸ್ಥಾನಕ್ಕೆ ಸಂಬಂಧಪಟ್ಟ ಅಡುಗೆ ಕೋಣೆಯಲ್ಲಿ ನಡದದ್ದೇ ಅಲ್ಲವೆಂದು ತಾವು ಕಣ್ಣಾರೆ ಕಂಡಂತೆ ಸುಳ್ಳನ್ನು ಬಂಡವಾಳವಾಗಿಟ್ಟುಕೊಂಡು ಅಪರಾಧಿಗಳನ್ನು ಬಚಾವ್ ಮಾಡುವ ಉದ್ದೇಶದಿಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿಂದುಗಳಿಗೆ ದೇವಿ ಪೂಜಾನೀಯ ಮತ್ತು ಶ್ರೇಷ್ಟ ಶಕ್ತಿ ಅಂತಹ ದೇವಿಯ ಮುಂದೆ ನಿಂತು ಪ್ರಸಾದ ಸ್ವೀಕಾರ ಮಾಡುವ ಇವರುಗಳು ತಮ್ಮ ಇನ್ನೊಬ್ಬ ಆಡಳಿತ ಮೊಕ್ತೇಸರ ಪ್ರವೀಣ್ ಆಚಾರಿ ಮತ್ತು ಅವನ ಸಹೋದರ ಪ್ರಸಾದ್ ಆಚಾರಿ ಮತ್ತಿತರ ಕುಕೃತ್ಯಕ್ಕೆ ಧರ್ಮ ಬಿಟ್ಟು ಬೆಂಬಲ ನಿಂತಿರುವುದು ದೇವಿಯ ಸಾನಿಧ್ಯದ ಅಪವಿತ್ರಕ್ಕೆ ಇವರುಗಳೂ ಕೂಡಾ ನೇರ ಹೊಣೆಯಾಗಿರುತ್ತಾರೆ. ಅಲ್ಲದೇ ನಾನೇ ದೇವಾಲಯದ ಕಿಟಕಿ ಗಾಜುಗಳನ್ನು ಒಡೆದು, ಕೋಳಿ ರಕ್ತವನ್ನು ಮೈಗೆ ಹಚ್ಚಿಕೊಂಡು ಪೊಲೀಸ್ ಕಂಪ್ಲೈಟ್ ದಾಖಲಿಸಿದ್ದೇನೆ ಎಂದು ದಿನೇಶ್ ಆಚಾರ್ಯ ಪಡುಬಿದ್ರೆಯವರು ವಿಶ್ವಕರ್ಮ ಸಮುದಾಯದ ವಾಟ್ಸಪ್ ಗ್ರೂಪ್ನಲ್ಲಿ ಅಪಪ್ರಚಾರ ಮಾಡಿರುತ್ತಾರೆ. ನಾನು ಮೇಲಿನ ಎಲ್ಲಾ ಆಚಾರಿ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಕಾಳಿಕಾಂಬೆ ಮತ್ತು ಅಲ್ಲಿರುವ ಕಲ್ಲುಕುಟ್ಟಿಗ ಸಾನಿಧ್ಯಕ್ಕೆ ಸತ್ಯ ಪ್ರಮಾಣಕ್ಕೆ ಆಹ್ವಾನಿಸುತ್ತಿದ್ದೇನೆ. ಮತ್ತೋರ್ವ ದೊಡ್ಡ ನಾಯಕ ಶ್ರೀ ಬಿ.ಎನ್ ಶಂಕರ ಪೂಜಾರಿ ಫೋನ್ ಸಂಭಾಷಣೆಯಲ್ಲಿ ಮತ್ತು ಸಾರ್ವಜನಿಕವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದು ನಾನು ಖುದ್ದಾಗಿ ಬ್ಲೇಡಿನಿಂದ ಕುಯ್ದುಕೊಂಡಿದ್ದೇನೆ. ಕಲ್ಲಿನಿಂದ ಒಡೆದುಕೊಂಡಿದ್ದೇನೆ. ಹಣ ವಸೂಲಿಗಾರನಾಗಿದ್ದೇನೆ. ನಾನು 420 ಎಂದು ಈ ವ್ಯಕ್ತಿ ಮಾತನಾಡಿದ್ದು ಇವತ್ತು ತಮ್ಮ ಮೂಲಕ ಮೂರು ವಿಷಯಗಳನ್ನು ಸಮಾಜದ ಮುಂದೆ ಇಡುತ್ತೇನೆ. ಯಾರು 420 ಎಂದು ಸಮಾಜ ನಿರ್ಧಾರ ಮಾಡಲಿ. ಎರಡು ವರ್ಷ (03/02/2019 ಬ್ರಹ್ಮಾವರ) ಹಿಂದೆ ಬಿಲ್ಲವ ಸಮಾವೇಶಕ್ಕಾಗಿ ಒಂದು ಕೋಟಿಗೂ ಹೆಚ್ಚು ಧನ ಸಂಗ್ರಹಿಸಿದ್ದು ಎಲ್ಲರಿಗೂ ಎಲ್ಲರಿಗೂ ಗೊತ್ತಿರುವ ವಿಚಾರ, ಸರ್ಕಾರದಿಂದ ಮತ್ತು ಸಮಾಜ ಬಾಂಧವರಿಂದ ಸಂಗ್ರಹವಾದ ಹಣದ ಲೆಕ್ಕಾಚಾರ ಈ ವರೆಗೆ ಯಾಕೆ ನೀಡಲಿಲ್ಲ ? ಸಾರಥಿಯು ಹಣ ನುಂಗಿ ಕುದುರೆಯ ಒರೆಸುವ ಕೆಲಸ ಮಾಡುತ್ತಿರುವುದು ಯಾಕೆ ? ವಿಖ್ಯಾತಾನಂದ ಸ್ವಾಮಿ..! ಧರ್ಮಕಾರ್ಯ ಬಿಟ್ಟು ನನ್ನ ಪರ ಹೋರಾಟಕ್ಕೆ ಬಂದ ಸಮಾನ ಮನಸ್ಕರಿಗೆ ಕರೆ ಮಾಡಿ ದಾರಿ ತಪ್ಪಿಸುವ ಕಾರ್ಯ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದರು. ಮತ್ತೊಂದು ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದು, ಬಾರ್ಕೂರು ಜೈನ ಬಸದಿಗೆ ಸಂಬಂಧಪಟ್ಟ ಸ್ಥಳವನ್ನು ಮಂಜಪ್ಪ ಪೂಜಾರಿ ಮತ್ತು ಕುಟುಂಬ ಅಕ್ರಮವಾಗಿ ಉಪಯೋಗಿಸುತ್ತಿದ್ದು ಜಿಲ್ಲಾ ಆಡಳಿತ ಆದಷ್ಟು ಬೇಗ ಆ ಸ್ಥಳವನ್ನು ಜೈನ ಸಮುದಾಯಕ್ಕೆ ನೀಡುವ ಕೆಲಸ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಅಮರಾಣಂತ ಉಪವಾಸ ಕೈಗೊಳ್ಳುತ್ತೇನೆ. ಅಪರಾಧಿಗಳಿಗೆ ನ್ಯಾಯಾಲಯ ಜಾಮೀನು ನೀಡಿರಬಹುದು. ಆದರೆ ನ್ಯಾಯದೇವತೆ ನನ್ನ ಪರವಾಗಿ ಇದ್ದಾಳೆ ಎಂಬುದು ನನ್ನ ನಂಬಿಕೆ. ನಾನು ಸಸ್ಯಹಾರಿ ಆಗಿದ್ದು, ದೇವಿಯ ನಿತ್ಯ ಪೂಜಾ ಅರ್ಚಕನಾಗಿರುವ ಕಾರಣ ನನ್ನ ಸತ್ಯಕ್ಕೆ ದೇವಿಯ ಆಶಿರ್ವಾದ ಖಂಡಿತ ನನ್ನ ಮೇಲೆ ಇದೆ ಎನ್ನುವ ನಂಬಿಕೆ ನನಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಸೂಡಾ ರವರ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಸುತ್ತೇನೆ. ನನಗೆ ಬೆಂಬಲವಾಗಿ ನಿಂತ ಸಂಘಟನೆಯ ಪ್ರತಿನಿಧಿಗಳು, ಸಮಾಜ ಬಂಧುಗಳು, ಸ್ನೇಹಿತರು ಸಾರ್ವಜನಿಕರು, ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು, ವಿಶೇಷವಾಗಿ ಜೈನ ಸಮುದಾಯಕ್ಕೆ ಕೂಡಾ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದರು. ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ಉಡುಪಿ ಜಿಲ್ಲೆ ಆರ್ ಟಿ ಐ ಕಾರ್ಯಕರ್ತರ ಸಮಿತಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ, ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.
ಕಾಗದ ಮತ್ತು ಸಾಮಗ್ರಿಗಳ ಬೆಲೆ ಏರಿಕೆ : ಜಿಲ್ಲಾಧಿಕಾರಿಗೆ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಮನವಿ
Posted On: 23 Mar 2021, 07:56 AM
ಉಡುಪಿ : ನವದೆಹಲಿಯ ಅಖಿಲ ಭಾರತ ಮುದ್ರಕರ ಒಕ್ಕೂಟವು ಏರುತ್ತಿರುವ ಕಾಗದ ಮತ್ತು ಸಾಮಗ್ರಿಗಳ ಬೆಲೆ ಏರಿಕೆಯ ವಿಷಯವಾಗಿ ಕೇಂದ್ರ ಸರಕಾರವು ಕಾಗದ ಮತ್ತು ಕಚ್ಚಾ ಸಾಮಗ್ರಿಗಳ ತಯಾರಿಕಾ ಕೈಗಾರಿಕೆಗಳ ದರ ನಿಯಂತ್ರಣದಲ್ಲಿ ಮಧ್ಯಸ್ಥಿಕೆ ವಹಿಸಲೇಬೇಕೆಂದು ಸೋಮವಾರದಂದು ಜಿಲ್ಲಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಮನವಿ ಸಲ್ಲಿಸಿದರು. ಮುದ್ರಣಕಾರರು ತೀವ್ರವಾದ ಸಂಕಷ್ಟ ಅನುಭವಿಸುತ್ತಿದ್ದು ಉಡುಪಿ ಜಿಲ್ಲೆಯಲ್ಲಿ ಸುಮಾರು 180ಕ್ಕೂ ಹೆಚ್ಚು ಮುದ್ರಣ ಮತ್ತು ಮುದ್ರಣಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಹೊಂದಿಕೊಂಡುಜೀವನ ಸಾಗಿಸುತ್ತಿದ್ದಾರೆ. ಮುದ್ರಣಾಲಯಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಪೂರೈಸುವ ಡೀಲರ್ ಗಳು ಏಕೆ ಏಕೆ ಹೆಚ್ಚಿಸುವುದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಿಕೊಂಡಿದ್ದಾರೆ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕ ಸಂಘದ ಅಧ್ಯಕ್ಷರಾದ ಮಹೇಶ್ ಕುಮಾರ್, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ಜತೆ ಕಾರ್ಯದರ್ಶಿ ಮುರಳಿ ಕೃಷ್ಣ, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಸದಸ್ಯರಾದ ರಿಜಿನಲ್ಡ್ ಡಿ. ಸಿಲ್ವ ಉಪಸ್ಥಿತರಿದ್ದರು.
ಕಟಪಾಡಿಯಲ್ಲಿ ಮಗುಚಿದ ಗೂಡ್ಸ್ ಲಾರಿ ಹಿಂಭಾಗ - ನೆಲ ಪಾಲಾದ ಕಲ್ಲಿದ್ದಲು
Posted On: 20 Mar 2021, 11:13 PM
ಕಟಪಾಡಿ : ಕಲ್ಲಿದ್ದಲು ತುಂಬಿಸಿಕೊಂಡು ಮಂಗಳೂರಿನಿಂದ ಹೊಸಪೇಟೆ ಕಡೆ ಸಾಗುತ್ತಿದ್ದ ಗೂಡ್ಸ್ ಲಾರಿಯು ರಾತ್ರಿ 9 ಗಂಟೆಗೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಸಮೀಪ ವಾಹನದ ಹಿಂಭಾಗ ಮಗುಚಿ ಸಂಪೂರ್ಣ ಹಾನಿಯಾಗಿದೆ. ವಾಹನದಲ್ಲಿ ತುಂಬಿದ್ದ ಕಲ್ಲಿದ್ದಲು ಸಂಪೂರ್ಣ ನೆಲ ಪಾಲಾಗಿದೆ.
ಕುತ್ಯಾರು ಗ್ರಾಮ ಪಂಚಾಯತ್ ಗೆ ಸ್ವಚ್ಛ ಭಾರತ್ ಮಿಷನ್ ವಾಹನ
Posted On: 19 Mar 2021, 05:29 PM
ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಉಡುಪಿ, ಕುತ್ಯಾರು ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಕುತ್ಯಾರು- ಕಳತ್ತೂರು ಗ್ರಾಮದ ಘನ ಮತ್ತು ದ್ರವ ಕಸ ವಿಲೇವಾರಿಗಾಗಿ ಹೊಸ ವಾಹನವನ್ನು ಮಾರುತಿ ಸುಜುಕಿ ಅಧಿಕಾರಿಗಳು ಮಾರ್ಚ್ 19ರಂದು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು. ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ಎಸ್. ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಆಚಾರ್ಯ, ಗಣೇಶ್ ಶೆಟ್ಟಿ ಪೈಯ್ಯರು, ಎವುಜಿನ್ ಲೋಬೋ, ಸಂಪತ್ ಕುಮಾರ್, ಕೃಷ್ಣ ಕುಲಾಲ್, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಶ್ವ ಭಾರತೀ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ಆಲಗುಡ್ಲ 33ನೇ ವಾರ್ಷಿಕೋತ್ಸವ
Posted On: 19 Mar 2021, 11:07 AM
ಮಂಗಳೂರು : ವಿಶ್ವ ಭಾರತೀ ಫ್ರೆಂಡ್ಸ್ ಸರ್ಕಲ್ (ರಿ) ಕೋಡಿಕಲ್ ಆಲಗುಡ್ಲ ಇದರ 33ನೇ ವಾರ್ಷಿಕೋತ್ಸವವು ಮಾ. 13 ರಂದು ಸಂಜೆ ಕೋಡಿಕಲ್ಲಿನ ನಾಗಬ್ರಹ್ಮ ಚಾವಡಿಯ ಎದುರುಗಡೆ ಎ.ಜೆ ಶೆಟ್ಟಿ ಗ್ರೌಂಡ್ ನಲ್ಲಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ರಾಜೇಶ್ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಭಾ ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು. ಕುಲಶೇಖರ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರೂ ಹಾಗೂ ಶ್ರೇಯಾ ಕನ್ಸಲ್ಟೆಂಟ್ ನ ಮಾಲೀಕರಾದ ಬೊಕ್ಕಪಟ್ನ ಪ್ರೇಮಾನಂದ ಕುಲಾಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡುತ್ತ ಭಜನಾ ಯುವ ಜನಾಂಗ ಸನ್ಮಾರ್ಗದಲ್ಲಿ ನಡೆಯಲು ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು. ಸಂಘಟನೆಗಳಿಂದ ಗ್ರಾಮದ ಅಭಿವೃದ್ಧಿ ಆಗಲು ಸಾಧ್ಯ ಎಂದು ನುಡಿದರು. ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಯೋಗೇಶ್ ರೈ ಕೋಡಿಕಲ್, ಸ್ಥಳೀಯ ಕಾರ್ಪೋರೇಟರುಗಳಾದ ಕಿರಣ್ ಕುಮಾರ್, ಮನೋಜ್ ಕುಮಾರ್ ಪಂಜಿಮೊಗರು, 24ನೇ ವಾರ್ಡ್ ನ ಕಾರ್ಪೋರೇಟರ್ ಶಶಿಧರ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಸ್ಥಳೀಯ ಉದ್ಯಮಿ ವೃಂದಾವನ ಕನ್ ಸ್ಟ್ರಕ್ಶನ್ ಇದರ ಮಾಲೀಕರಾದ ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಬಿ. ಪ್ರೇಮಾನಂದ ಕುಲಾಲ್, ಮಾಜಿ ಯೋಧ ಗೋಪಾಲ್ ವಿ. ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿ ಸ್ವಾತಿಕ್ ಪೂಜಾರಿ ಅವರನ್ನು ಗೌರವಾರ್ಪಣೆ ಮಾಡಲಾಯಿತು. ಕೊಡಿಯಾಲ್ ಬೈಲ್ ನಿರ್ದೇಶಿಸಿದ ಶಿವದೂತ ಗುಳಿಗೆ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ರಾಕೇಶ್ ಶೆಟ್ಟಿ ನಿರೂಪಿಸಿದ್ದು, ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ವರದಿಯನ್ನು ಮಂಡಿಸಿದರು. ಸಮಾರಂಭದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬಳಕುಂಜೆಯಲ್ಲಿ ಜಲ ಸಮಸ್ಯೆಯ ಕುರಿತ ಕಿರುಚಿತ್ರ ಪ್ರದರ್ಶನ
Posted On: 17 Mar 2021, 02:42 PM
ಮಂಗಳೂರು : ತಾಲೂಕಿನ ಬಳಕುಂಜ ಗ್ರಾಮ ಪಂಚಾಯತಿಯಲ್ಲಿ ದೇಶದ ವಿವಿಧ ಪ್ರದೇಶದಲ್ಲಿ ಇರುವ ನೀರಿನ ಅಭಾವದ ಕುರಿತು ಒಂದು ಕಿರು ಚಿತ್ರ ಪ್ರದರ್ಶನದ ಜೊತೆಗೆ Book ಎಂಬ ಕೃತಿ ಆಧಾರಿತ ಜಲದ ಸಮಸ್ಯೆಗೆ ಸಂಬಂಧಿಸಿದ ಕಿರುಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಮರುಭೂಮಿಯಲ್ಲಿ ದಾಹದಿಂದ ಸುತ್ತಾಡುವ ವ್ಯಕ್ತಿಗೆ ಹ್ಯಾಂಡ್ ಪಂಪ್ ಸಿಕ್ಕಾಗ, ಎಷ್ಟೇ ಪಂಪ್ ಮಾಡಿದರೂ ನೀರು ಸಿಗದೇ ಇದ್ದಾಗ ಮರಕ್ಕೆ ನೇತು ಹಾಕಿದ ಒಂದು ಅಶುದ್ಧ ನೀರಿನ ಬಾಟಲಿ ಸಿಕ್ಕಿ, ಅದರ ಕೆಳಗೆ ತೆಲುಗು ಲಿಪಿಯಲ್ಲಿ ಬರೆದಿರುವ (ಈ ನೀರನ್ನು ಪಂಪಿಗೆ ಹಾಕಿ ಆಗ ಶುದ್ಧ ನೀರು ಸಿಗುತ್ತದೆ) ವಾಕ್ಯ ನೋಡಿ ಆ ವ್ಯಕ್ತಿ ಹಾಕುವುದು. ಬಳಿಕ ಶುದ್ಧವಾದ ನೀರು ಲಭ್ಯವಾಗುವ ಸಂದೇಶ ನಿರ್ಮಿತ ಅದ್ಭುತ ಕಿರುಚಿತ್ರ ಇದಾಗಿತ್ತು. ನೆರೆದಿದ್ದ ಎಲ್ಲರಿಂದಲೂ ಈ ಕಿರುಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಶಂಕರ್ ಶಾಂತಿ ಪ್ರಕರಣ : ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಆರೋಪಿಗಳನ್ನು ಬಂಧಿಸುವ ಭರವಸೆ
Posted On: 15 Mar 2021, 10:58 PM
ಉಡುಪಿ : ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ನೈಜ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಅವರ ಪತ್ನಿ ಪೂರ್ಣಿಮಾ ಶಂಕರ್, ಮಕ್ಕಳು ಹಾಗೂ ಕುಟುಂಬ ವರ್ಗದ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ, ದಲಿತ ಸಂಘರ್ಷ ಸಮಿತಿ, ಆರ್ ಟಿ ಐ ಕಾರ್ಯಕರ್ತರ ಸಮಿತಿ, ಜಿಲ್ಲೆಯ ವಿವಿಧ ಬಿಲ್ಲವ ಸಂಘಗಳು, ಸಮಾನ ಮನಸ್ಕರು ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಶಂಕರ್ ಶಾಂತಿ ಅವರ ಪತ್ನಿ ಪೂರ್ಣಿಮ ಶಂಕರ್ ದೇವರ ಭಯವಿಲ್ಲದೆ ದೇವಸ್ಥಾನದಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಪೊಲೀಸರ ಭಯವಿಲ್ಲದಾಗಿದೆ. ಈ ಬೆಳವಣಿಗೆ ಅನುಮಾನವನ್ನು ಉಂಟುಮಾಡುತ್ತಿದೆ. ಶಂಕರ್ ಶಾಂತಿ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಸುಳ್ಳು ಆರೋಪದ ವಿರುದ್ಧ ಯಾವುದೇ ದೇವರ ಮುಂದೆ ನಾನು ಆಣೆ-ಪ್ರಮಾಣಕ್ಕೂ ಸಿದ್ಧನಾಗಿದ್ದೇನೆ ಎಂದರು. ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ದೊರಕಿಸಿ ಎಂದು ಎಂದರು. ಇದೇ ಸಂದರ್ಭ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಶೇಖರ್ ಹಾವಂಜೆ ರಾಜಕೀಯದ ಮಂದಿ ಜಿಲ್ಲೆಯಲ್ಲಾದ ಹಲ್ಲೆಯ ಬಗ್ಗೆ ಮಾತನಾಡುತ್ತಿಲ್ಲ. ಅಂದರೆ ಅವರಿಗೆ ಓಟು ನೀಡುವ ತನಕ ಮಾತ್ರ ಜನರು ಬೇಕೇ? ಎಂದು ಪ್ರಶ್ನಿಸಿದರು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯದಲ್ಲಿ ಇಂತಹ ಅನಾಚಾರ ನಡೆದಾಗಲೂ ಸಂಬಂಧಪಟ್ಟ ಇಲಾಖೆ ಪ್ರಶ್ನಿಸುತ್ತಿಲ್ಲ ಇದರ ಬಗ್ಗೆ ಜಿಲ್ಲಾಧಿಕಾರಿಯವರು ಗಮನಹರಿಸಬೇಕಾಗಿದೆ. ಅದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಶಂಕರ್ ಶಾಂತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಬಿಲ್ಲವ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮಾತನಾಡಿ ಹಲವಾರು ಬಾರಿ ಪ್ರತಿಭಟನೆ ಆದಾಗ ಮಾತ್ರ ಪೊಲೀಸ್ ಇಲಾಖೆಯು ದುಷ್ಕರ್ಮಿಗಳನ್ನು ಬಂಧಿಸುತ್ತದೆ. ಆದರೆ ನೈಜ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು ಆ ಮೂಲಕ ಪೊಲೀಸ್ ಇಲಾಖೆಗೆ ಸಡ್ಡು ಹೊಡೆಯುತ್ತಿದ್ದಾರೆ. ಇದು ಇಲಾಖೆಯ ಮೇಲೆ ನಮ್ಮಲ್ಲಿ ಅನುಮಾನ ಮೂಡಿಸುತ್ತಿದೆ ಎಂದರು. ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಬಂದಾಗ ಪ್ರತಿಭಟನಾಕಾರು ಜಿಲ್ಲಾಧಿಕಾರಿಯವರೇ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದಾಗ ಪ್ರತಿಭಟನಾಕಾರರ ಮನವಿ ಮೇರೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು ದುಷ್ಕರ್ಮಿಗಳನ್ನು ಬಂಧಿಸುವ ಭರವಸೆ ನೀಡಿದರು. ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲೆಯ ಬಿಲ್ಲವ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಗೂ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಸದಸ್ಯರು, ಆರ್ ಟಿ ಐ ಕಾರ್ಯಕರ್ತರುಗಳು, ಉಡುಪಿ ಜಿಲ್ಲಾ ಬಿಲ್ಲಾ ವೇದಿಕೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾನಮನಸ್ಕರು ಉಪಸ್ಥಿತರಿದ್ದರು.
ಸಿಟಿ ರಿಜನ್ ಮುಂಬೈ : ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಧ್ಯಕ್ಷರಾಗಿ ನಿಲೇಶ್ ಶೆಟ್ಟಿ ಇನ್ನಾ ಆಯ್ಕೆ
Posted On: 15 Mar 2021, 10:43 PM
ಕಾಪು : ಮುಂಬಯಿ ಬಂಟರ ಸಂಘದ ಸಿಟಿ ರಿಜನ್ ಮುಂಬೈ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಧ್ಯಕ್ಷರಾಗಿ ನಿಲೇಶ್ ಶೆಟ್ಟಿ ಇನ್ನಾ ಆಯ್ಕೆಯಾಗಿರುತ್ತಾರೆ.
ಮಾಚ್೯ 21 : ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವ
Posted On: 15 Mar 2021, 09:35 PM
ಪಡುಬಿದ್ರಿ : ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿಯ ಧ್ವಜಾರೋಹಣ ಮಾಚ್೯ 14, ಆದಿತ್ಯವಾರ ಜರಗಿದೆ. ಮಾರ್ಚ್ 21 ರಂದು ಬೆಳಗ್ಗೆ 11ಕ್ಕೆ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 11ಕ್ಕೆ ಮಹಾರಥೋತ್ಸವ ನಡೆಯಲಿದೆ. ಮಾರ್ಚ್ 22 ಪ್ರಾತಃಕಾಲ 6:30 ಕವಾಟೋದ್ಘಾಟನೆ, ಬಲಿ ಉತ್ಸವ, ತುಲಾಭಾರ ಸೇವೆಗಳು ನಡೆಯಲಿದ್ದು. ಸಂಜೆ 4 ಕ್ಕೆ ಇತಿಹಾಸ ಪ್ರಸಿದ್ಧ ಚೆಂಡು, ರಾತ್ರಿ 7ಕ್ಕೆ ಅವಭೃತ ಸ್ನಾನ, ಬಲಿ ಕಟ್ಟೆ ಪೂಜೆ, ಸೂಟೆದಾರ, ಬಲಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ ಬ್ಲೂಫ್ಲಾಗ್ ಬೀಚ್ ನಲ್ಲಿ ನಮಾಜ್ ಮಾಡಿ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಖಂಡನೆ
Posted On: 15 Mar 2021, 08:51 PM
ಕಾಪು ತಾಲೂಕಿನ ಪಡುಬಿದ್ರಿ ಬ್ಲೂಫ್ಲಾಗ್ ಬೀಚ್ ನಲ್ಲಿ ನಮಾಜ್ ಮಾಡಿ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಪ್ರಕರಣ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುತ್ತದೆ. ಈ ಪ್ರಕರಣವನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ,ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ರಾಜೇಶ್ ಕೋಟ್ಯಾನ್,ಕಾಪು ಪ್ರಖಂಡ ಸಂಚಾಲಕ ಸುಧೀರ್ ಜಂಟಿಯಾಗಿ ತಿಳಿಸಿರುತ್ತಾರೆ. ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನ ಮಾಡಿರುವವರ ವಿರುಧ್ಧ ಕಾನೂನು ಕ್ರಮ ಕೈಗೊಂಡು ಮುಂದೆ ಈ ರೀತಿಯ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮನವಿ ಮಾಡುತ್ತದೆ. ಪಡುಬಿದ್ರಿ ಬೀಚ್ ಪ್ರವಾಸೋದ್ಯಮ ಪ್ರದೇಶವಾಗಿದ್ದು ಸ್ಥಳೀಯ ಹಾಗೂ ಹೊರಗಿನ ಅನೇಕರು ಇಲ್ಲಿಗೆ ಆಗಮಿಸುತ್ತಿದ್ದು ಅವರ ಸುರಕ್ಷತಾ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯ ಪ್ರದೇಶದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ವರ್ತನೆಗಳು ಮರುಕಳಿಸಿದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಗ್ರವಾದ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.
