Updated News From Kaup

ಕುತ್ಯಾರು : ಭಾರತ ಮಾತಾ ಪೂಜನಾ ಕಾರ್ಯಕ್ರಮ

Thumbnail
Posted On: 31 Jan 2021, 04:19 PM

ಅಯೋಧ್ಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾರತ ಮಾತಾ ಪೂಜನಾ ಕಾರ್ಯಕ್ರಮ ಕೇಂಜ ತಂತ್ರಿ ‌ನಿವಾಸದಲ್ಲಿ ಜರಗಿತು. ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ಮಂದಿರದ ಜತೆ ಜತೆಯಲ್ಲೇ ದೇಶವಾಸಿಗಳ ಹೃದಯ ಮಂದಿರಗಳಲ್ಲಿ ಶ್ರೀರಾಮನು ತೋರಿದ ಜೀವನ ಮೌಲ್ಯಗಳು ನೆಲೆಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಎಲ್ಲೂರು ಸೀಮೆಯ ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳು ಹೇಳಿದರು. ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ್ಯ ಶಾರೀರಿಕ್ ಸತೀಶ್ ಕುತ್ಯಾರು, ಶಿರ್ವ ಸಿಎ ಬ್ಯಾಂಕ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಭಂಡಾರಿ, ಆರೆಸೆಸ್ಸ್ ಮಹಿಳಾ ಪ್ರಮುಖ್ ರಾಜಲಕ್ಷ್ಮಿ ಸತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಬಿ. ಶೆಟ್ಟಿ, ಸಂಪತ್ ಕುಮಾರ್, ಭಾರತಿ ರಾಘವೇಂದ್ರ, ಗ್ರಾಮದ ಪ್ರಮುಖರಾದ ಭಾರ್ಗವ ತಂತ್ರಿ, ಹರಿಕೃಷ್ಣ ಭಟ್, ಸುಧಾಕರ ಪೂಜಾರಿ ಕೇಂಜ, ಸುಭಾಷ್ ಅಂಚನ್, ಪವನ್ ಶೆಟ್ಟಿ ಕೇಂಜ, ಸುಶಾಂತ್ ಶೆಟ್ಟಿ, ದಿನೇಶ್ ಆಚರ್ಯ, ಗೀತಾ ಬಗ್ಗ ತೋಟ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ: ಸಾರ್ವಜನಿಕರಿಂದ ಉತ್ತಮ ಸ್ಪಂದನೆ

Thumbnail
Posted On: 31 Jan 2021, 08:16 AM

ಉಡುಪಿ : ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಮತ್ತಿತರ ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪೈಲಟ್ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ವಿವಿಧ ಸಮಸ್ಯೆಗಳ ಕುರಿತು 147 ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ರಾಜ್ಯದಲ್ಲೇ ಫೆಬ್ರವರಿಯಿಂದ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಪೈಲಟ್ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಗ್ರಾಮಕ್ಕೆ ಅಗಮಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಥಮದಲ್ಲಿ ನಾಲ್ಕೂರು ಶಾಲೆಗೆ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಪರಿಶೀಲಿಸಿದರು. ಶಾಲಾ ಆವರಣದಲ್ಲಿ ಹಣ್ಣು ಬಿಡುವ ಗಿಡಗಳನ್ನು ನೆಟ್ಟ ಅವರು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಪರೀಕ್ಷೆ ಎದುರಿಸುವ ಕುರಿತು ಆತ್ಮ ವಿಶ್ವಾಸ ಮೂಡಿಸಿದರು. ನಂತರ ನಾಲ್ಕೂರಿನ ಸಭಾಭವನದಲ್ಲಿನ ಆಯೋಜಿಸಿದ್ದ ಸಾರ್ವಜನಿಕರ ಅರ್ಜಿ ಸ್ವೀಕಾರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪೂರ್ಣಕುಂಭ ಮತ್ತು ಚಂಡೆ ವಾದನದ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಹಿಂದಿನ ದಿನಕ್ಕೆ ಒಟ್ಟು 53 ಸಾರ್ವಜನಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತು ಸ್ಥಳದಲ್ಲೇ 94 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಾರ್ವಜನಿಕರ ಎಲ್ಲಾ ಅರ್ಜಿಗಳನ್ನು ವೀಕ್ಷಿಸಿ, ಅವರೆಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಿದರು. ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್, ಜಾಗ ಮಂಜೂರಾತಿ ಮುಂತಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನದಲ್ಲಿ ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪೌತಿ ಖಾತೆ ಬದಲಾವಣೆ ಕುರಿತ ಅರ್ಜಿಗೆ, ವಂಶವೃಕ್ಷ ನೀಡುವ ಮೂಲಕ ಖಾತೆ ಬದಲಾವಣೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 94 ಸಿ ಮತ್ತು ಫಾರ್ಮ್ ನಂ. 57 ರಲ್ಲಿನ ಅರ್ಜಿಗಳು ಬಾಕಿ ಉಳಿದಿದ್ದು, ಹೊಸದಾಗಿ ಕಡತಗಳನ್ನು ತಯಾರಿಸಿ ಕಮಿಟಿ ಮುಂದೆ ಮಂಡಿಸಲು ಕ್ರಮ ವಹಿಸಲಾಗುವುದು. ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸ್ವೀಕೃತಗೊಂಡಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮವನ್ನು ಸರಕಾರದ ಸೂಚನೆಯಂತೆ ಆಯೋಜಿಸಿದ್ದು, ಇಂದಿನ ಕಾರ್ಯಕ್ರಮದ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದ ರೂಪು ರೇಷೆಗಳನ್ನು ಉತ್ತಮ ಪಡಿಸಲು ಸಾಧ್ಯವಾಗಲಿದೆ. ಸಾರ್ವಜನಿಕರು ವಾಸ್ತವ್ಯ ದಿನದಂದು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಷ್ಟೇ ಸಮಯವಾದರೂ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅದೇ ದಿನ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು. ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಆಸ್ಪತ್ರೆಯ ಪರಿಶೀಲನೆ ಮತ್ತು ಅಗತ್ಯ ಕಡತಗಳನ್ನು ಪರಿಶೀಲಿಸಿದರು. ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದ ಸಾಮಾನ್ಯ ಭೋಜನವನ್ನು ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕವಾಗಿಯೇ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಂತರ ಕಜ್ಕೆಯಲ್ಲಿನ ಕುಡುಬಿ ಜನಾಂಗದ ಸಿದ್ದನಾಯ್ಕ ಅವರ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ಕುಡುಬಿ ಜನಾಂಗದವರ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವರ ಯೋಗಕ್ಷೇಮ ಮತ್ತು ಮಕ್ಕಳ ವಿದ್ಯಾಭ್ಯಾಸ, ನಿವೇಶನದ ಅಗತ್ಯತೆ ಕುರಿತು ಮಾಹಿತಿ ಪಡೆದರು. ಕುಡುಬಿ ಜನಾಂಗದ ಸಾಂಪ್ರದಾಯಿಕ ಕಲೆಯನ್ನು ವೀಕ್ಷಿಸಿ, ಸ್ಥಳೀಯರು ಪ್ರೀತಿಯಿಂದ ನೀಡಿದ, ತಾವು ಬೆಳೆದ ತರಕಾರಿಯನ್ನು ಡಿಸಿ ಸ್ವೀಕರಿಸಿದರು. ನಂತರ ಮಾರಾಳಿಯ ದಲಿತ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದರು. ನಂತರ ನಂಚಾರಿನ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಬ್ರಹ್ಮಾವರ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಇಬ್ರಾಹಿಂ, ತಹಸೀಲ್ದಾರ್ ಕಿರಣ ಗೌರಯ್ಯ ಮತ್ತಿತರರು ಉಪಸ್ಥಿತರಿದ್ದರು. ಇಡೀ ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ನಾಲ್ಕೂರು ನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಾವುದೇ ಅಡಚಣೆಗಳಿಗೆ ಆಸ್ಪದ ನೀಡದೇ ಅತ್ಯಂತ ಮುತುವರ್ಜಿಯಿಂದ ಆಯೋಜಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗುವ ಮೂಲಕ ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಪ್ರೇರಣೆ ನೀಡಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಕ್ರಮದ ಯಶಸ್ಸಿಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿತು.

ಮಲ್ಲಾರುಗುತ್ತು ಶ್ರೀ ಸುಬ್ರಹ್ಮಣ್ಯ ಶೆಟ್ಟಿ ನಿಧನ

Thumbnail
Posted On: 30 Jan 2021, 10:00 PM

ಕಾಪು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಭಾಸ್ಕರ್ ಶೆಟ್ಟಿಯವರ ಸುಪುತ್ರ, ಕಾಪು ಪುರಸಭೆಯ ಸದಸ್ಯೆ ಶ್ರೀಮತಿ. ಶಾಂತಲತಾ ಎಸ್. ಶೆಟ್ಟಿ ಯವರ ಪತಿ ಮಲ್ಲಾರುಗುತ್ತು ಶ್ರೀ ಸುಬ್ರಹ್ಮಣ್ಯ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಲ್ಲಾರಿನ ತಮ್ಮ ಸ್ವಗೃಹದಲ್ಲಿ ನಿಧನಹೊಂದಿದರು. ಮೃತರ ಅಂತ್ಯಕ್ರಿಯೆ ಇಂದು ರಾತ್ರಿ 9.00 ಗಂಟೆಗೆ ಮಲ್ಲಾರುಗುತ್ತುವಿನ ಸ್ವಗೃಹದಲ್ಲಿ ನಡೆಯಲಿದೆ.

ಕಟಪಾಡಿಯ ಕೋಟೆ, ಕಂಬೆರ್ಕಳ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಇಂದು ಮತ್ತು ನಾಳೆ ಸಿರಿ ಸಿಂಗಾರದ ನೇಮೋತ್ಸವ

Thumbnail
Posted On: 30 Jan 2021, 02:32 PM

ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಪುರಾತನ ಕಟಪಾಡಿಯ ಕೋಟೆ, ಕಂಬೆರ್ಕಳ ಬಬ್ಬುಸ್ವಾಮಿ ದೈವಸ್ಥಾನದ ಪ್ರಸಕ್ತ ಸಾಲಿನ ನೇಮೋತ್ಸವವು ಇಂದು ಮತ್ತು ನಾಳೆ ಜರಗಲಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಗಜಕಂಬ ಮುಹೂರ್ತ, ಮಧ್ಯಾಹ್ನ 12ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಂಡಾರ ಇಳಿಯುವುದು, ರಾತ್ರಿ 9ರಿಂದ ದೈವರಾಜ ಶ್ರೀ ಬಬ್ಬುಸ್ವಾಮಿ ದೈವದ ನೇಮೋತ್ಸವ, ರಾತ್ರಿ ಗಂಟೆ 12ರಿಂದ ಆದಿಶಕ್ತಿ ಸ್ವರೂಪಿಣಿ ಶ್ರೀ ತನ್ನಿಮಾನಿಗ ದೇವಿಯ ನೆಲೆ. ನಾಳೆ ಬೆಳಿಗ್ಗೆ 10ರಿಂದ ಶ್ರೀ ಧೂಮಾವತಿ ಬಂಟ ದೈವದ ನೇಮೋತ್ಸವ, ಮಧ್ಯಾಹ್ನ 3ರಿಂದ ಜೋಡು ಗುಳಿಗ ನೇಮೋತ್ಸವ, ಸಂಜೆ 6 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಮ್ ಆರ್ ಜಿ ಗ್ರೂಪಿನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿರವರಿಗೆ ಭಾರತೀಯ ವ್ಯವಹಾರಗಳ ದೂರದೃಷ್ಟಿಯ ನಾಯಕ 2020 ಪ್ರಶಸ್ತಿ

Thumbnail
Posted On: 30 Jan 2021, 10:06 AM

ನೆಟ್ ವಕ್೯ ಮೀಡಿಯಾ ಗ್ರೂಪ್ ಇದರ ಪ್ರಧಾನ ಸಂಪಾದಕ ಹಾಗೂ 11 ನೇ ವಾರ್ಷಿಕ ಭಾರತ ನಾಯಕತ್ವ ಕಾನ್ಕ್ಲೇವ್ ಮತ್ತು ಭಾರತೀಯ ವ್ಯವಹಾರಗಳ ನಾಯಕತ್ವ ಪ್ರಶಸ್ತಿಗಳ ತೀರ್ಪುಗಾರರ- ಅಧ್ಯಕ್ಷರಾದ ಸತ್ಯ ಬ್ರಹ್ಮ ಅವರು ಉಧ್ಯಮಿ ಎಂ.ಆರ್.ಜಿ. ಸಮೂಹದ ಕಾರ್ಯಾಧ್ಯಕ್ಷ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿರವರಿಗೆ ಭಾರತೀಯ ವ್ಯವಹಾರಗಳ ದೂರದೃಷ್ಷಿಯ ನಾಯಕ 2020 ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ತೀರ್ಪುಗಾರರಾದ ಸತ್ಯ ಬ್ರಹ್ಮ ಮತ್ತು ಗೂಗಲ್ ಹುಡುಕಾಟದಿಂದ ಇದು ಪ್ರತಿಷ್ಠಿತ ಪ್ರಶಸ್ತಿ ಎಂದು ಸ್ಪಷ್ಟವಾಗಿದೆ. ಸಾರ್ವಜನಿಕ ಮತದಾನ ಮತ್ತು ಮುಖ್ಯವಾಗಿ ತೀರ್ಪುಗಾರರ ಮತದಾನದ ನಂತರ ಅವರು ಈ ಪ್ರಶಸ್ತಿಯನ್ನು ತನ್ನದಾಗಿರಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಿಂದಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯದೆ, ಈ ಪ್ರಶಸ್ತಿಯನ್ನು ಅವರ ಕಚೇರಿಗೆ ಕಳುಹಿಸಲಿದ್ದಾರೆ. ಪ್ರಶಸ್ತಿ ಪಡೆದ ನಂತರ ಅವರು ಪ್ರಶಸ್ತಿ ಮತ್ತು 40 ಸೆಕೆಂಡ್ ಭಾಷಣದೊಂದಿಗೆ ಅವರ ಫೋಟೋವನ್ನು ಕೋರಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಟಿವಿ ಚಾನೆಲ್‌ಗಳು ಮತ್ತು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರು ಭಾರತದಲ್ಲಿ ೧೯೯೩ ರಿಂದ ರಿಯಲ್ ಎಸ್ಟೇಟ್ ಮತ್ತು ಹೊಸ್ಪಿಟಾಲಿಟಿ ಉದ್ಯಮದಲ್ಲಿ ಒರ್ವ ಉನ್ನತಮಟ್ಟದ ಯಶಸ್ವೀ ಉದ್ಯಮಿಯಾಗಿ ಗುರುತಿಸಲ್ಪಟ್ಟಿದ್ದು ಹಲವೆಡೆ ಶಾಖೆಗಳನ್ನು ಹೊಂದಿರುವ ಗೋಲ್ಡ್ ಪಿಂಚ್ ಹೋಟೇಲ್ಸ್, ಅಂತರಾಷ್ಟ್ರೀಯ ಮಟ್ಟದ ಕೋರ್ಟ್ ಯಾರ್ಡ್ ಬೈ ಮಾರಿಯೋಟ್ ಹೋಟೇಲು, ಡಬ್ಬಲ್ ಟ್ರೀ ಬೈ ಹಿಲ್ಟನ್ ಮಾತ್ರವಲ್ಲದೆ ಮುಂದೆ ಹಲವಾರು ಹೋಟೇಲುಗಳು, ಕಟ್ಟಡಗಳು, ಕಮರ್ಶಿಯಲ್ ಕಾಂಪ್ಲೆಕ್ಸ್ ಗಳನ್ನು ನಿರ್ಮಿಸಿ ಅನೇಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಯೋಜಗೆ ಇವರದ್ದಾಗಿದೆ. ದೇಶದ ಇತರ ಐದು ಕಂಪೆನಿಗಳ ಪ್ರಮುಖರಾದ ಆರ್. ಜೆ. ಕಾರ್ಪೊರೇಶನಿನ ರವಿ ಜಯಪುರಿಯಾ, ಸಮವರ್ಧನ್, ಮದರ್ ಸನ್ ಗ್ರೂಪ್ ನ ಕಾರ್ಯಾಧ್ಯಕ್ಷ ವಿವೇಕ್ ಚಾಂದ್ ಸೆಹಗಲ್, ಆರ್. ಜಿ. ಗ್ರೂಪ್ ನ್ ಡಾ. ರವೊ ಪಿಳ್ಳೆ, ಹೆವೆಲ್ಸ್ ಇಂಡಿಯಾದ ಅನಿಲ್ ರಾಯ್ ಗುಪ್ತಾ, ಹರಪ್ಪ ಅಜ್ಯುಕೇಶನಿನ ಪ್ರಮಥ್ ರಾಜ್ ಸಿನ್ಹಾ ಈ ಪ್ರಶಸ್ತಿಯ ಅಂತಿಮ ಆಯ್ಕೆಯಲ್ಲಿದ್ದು ಕೆ. ಪ್ರಕಾಶ್ ಶೆಟ್ಟಿಯವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಈ ಪ್ರಶಸ್ತಿಯು ಹಲವು ಪ್ರಸಿದ್ದ ಉದ್ಯಮಿಗಳಿಗೆ ದೊರಕಿದ್ದು ಅದರಲ್ಲಿ ರತನ್ ಟಾಟ, ನಾರಾಯಣ ಮೂರ್ತಿ, ಮುಕೇಶ್ ಅಂಬಾನಿ, ಕಿರಣ್ ಮುಜುಮ್ ದಾರ್ , ಪ್ರಿಯಾಂಕ ಚೋಪ್ರಾ ಮೊದಲಾದವರು ಸೇರಿದ್ದಾರೆ.

ಶಂಕರಪುರ : ರಾಷ್ಟ್ರಿಯ ರಸ್ತೆ ಸುರಕ್ಷತಾ ಸಪ್ತಾಹ -2021 ಮಾಹಿತಿ ಕಾರ್ಯಕ್ರಮ ಮತ್ತು ಜಾಥಾ

Thumbnail
Posted On: 29 Jan 2021, 11:38 PM

ರೋಟರಿ ಶಂಕರಪುರ, ಶಿರ್ವ ಪೊಲೀಸ್ ಠಾಣೆ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ, ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಮತ್ತು ಶ್ರೀ ದುರ್ಗಾ ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಇವರ ಸಹಯೋಗದಲ್ಲಿ ರಾಷ್ಟ್ರಿಯ ರಸ್ತೆ ಸುರಕ್ಷತಾ ಸಪ್ತಾಹ -2021ರ ಮಾಹಿತಿ ಕಾರ್ಯಕ್ರಮ ಮತ್ತು ಜಾಥಾ ಕಾರ್ಯಕ್ರಮವು ಶಂಕರಪುರ ರೋಟರಿ ಭವನದಲ್ಲಿ ನಡೆಯಿತು. ಉದ್ಘಾಟನೆಯನ್ನು ಶಿರ್ವ ಠಾಣಾ ಅಧಿಕಾರಿಯಾದ ಶ್ರೀ ಶೈಲ ಮುರಗೋಡ ಇವರು ಮಾಡಿದರು. ರಸ್ತೆ ಸುರಕ್ಷತಾ ಜಾಥಾ ಚಾಲನೆಯನ್ನು ವಲಯ 5.ರ ಅಸಿಸ್ಟೆಂಟ್ ಗವರ್ನರ್ ಆದ ರೋ ನವೀನ್ ಅಮೀನ್ ಮಾಡಿದರು.ಜಾಥಾವನ್ನು ಶಂಕರಪುರ ರೋಟರಿಯಿಂದ ಸೈoಟ್ ಜೋನ್ಸ್ ಚರ್ಚ್ ನವರೆಗೆ ಜಾಥಾವನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಅಧ್ಯಕ್ಷರು ಆದ ಕರುಣಾಕರ್, ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ಅಧ್ಯಕ್ಷರು ಆದ ಶ್ರೀವತ್ಸ ಮತ್ತು ಶ್ರೀ ದುರ್ಗಾ ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರದ ಅಧ್ಯಕ್ಷರು ಆದ ರಮೇಶ್ ನಾಯಕ್ ಮತ್ತು ಕಾರ್ಯಕ್ರಮದ ಸಂಯೋಜಕರು ಆದ ರೋ ಡೆನ್ಜಿಲ್ ಕ್ಯಾಸ್ತಲಿನೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾಥಾ ಕಾರ್ಯಕ್ರಮದಲ್ಲಿ ಸೈಂಟ್ ಜೋನ್ಸ್ ಪಿ ಯು ಕಾಲೇಜು ಮತ್ತು ಕನ್ನಡ ಮೀಡಿಯಂನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮತ್ತು ರೋಟರಿ ಶಂಕರಪುರದ ಸದಸ್ಯರು, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು, ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು, ಶ್ರೀ ದುರ್ಗಾ ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಂಕರಪುರದ ಅಧ್ಯಕ್ಷರು ಆದ ರೋ ವಿಕ್ಟರ್ ಮಾರ್ಟಿಸ್ ವಹಿಸಿದ್ದರು. ಮುಖ್ಯ ಅತಿಥಿಗಳನ್ನು ರೋ. ಸಂದೀಪ್ ಬಂಗೇರ ಇವರು ವೇದಿಕೆಗೆ ಆಹ್ವಾನಿಸಿ, ರೋಟರಿ ಪ್ರಾರ್ಥನೆಯನ್ನು ರೋ. ಮಾಲಿನಿ ಶೆಟ್ಟಿ ಮಾಡಿದರು. ರೋಟರಿ ಶಂಕರಪುರ ದ ಕಾರ್ಯದರ್ಶಿಯಾದ ರೋ ಜೆರಾಮ್ ರೋಡ್ರಿಗೆಸ್ ಇವರು ಧನ್ಯವಾದಗೈದರು.

ಜನವರಿ 31ರಂದು ಬೆಳ್ಮಣ್ಣು ರೋಟರಿ ಕ್ಲಬ್ ಆತಿಥ್ಯದಲ್ಲಿ ವಲಯ ಕ್ರೀಡಾ ಕೂಟ ಗೊಬ್ಬು ಗಮ್ಮತ್ 2021

Thumbnail
Posted On: 29 Jan 2021, 11:10 PM

ಬೆಳ್ಮಣ್ಣು ರೋಟರಿ ಕ್ಲಬ್ ಆತಿಥ್ಯದಲ್ಲಿ 3182 ಜಿಲ್ಲೆ ವಲಯ 5 ರಲ್ಲಿ ಒಳಗೊಂಡ ವಲಯ ಕ್ರೀಡಾಕೂಟ ಗೊಬ್ಬು ಗಮ್ಮತ್ 2021 ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಇದೇ ಬರುವ ದಿನಾಂಕ 31ಜನವರಿ ಆದಿತ್ಯವಾರದಂದು ನಡೆಯಲಿದೆ. 9 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ರೋ.ಡಾ ಭರತೇಶ್ ಮಾಜಿ ಜಿಲ್ಲಾ ಗವರ್ನರ್ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಮಣ್ಣು ಅಧ್ಯಕ್ಷರಾದ ರೋಟೇರಿಯನ್ ಸುಭಾಷ್ ಕುಮಾರ್ ನಂದಳಿಕೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಾಯಕ ಗವರ್ನರ್ ರೋಟೇರಿಯನ್ ನವೀನ್ ಅಮೀನ್, ವಲಯ ತರಬೇತುದಾರರು ರೋಟೇರಿಯನ್ ಪುಂಡಲಿಕ ಮರಾಠೆ, ವಲಯ ಸೇನಾನಿ ರೋಟೇರಿಯನ್ ಸುರೇಶ್ ರಾವ್, ವಲಯ ಕ್ರೀಡಾ ನಿರ್ದೇಶಕರು ರೋಟೇರಿಯನ್ ದೇವೇಂದ್ರ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ್ ಮಾಡ, ಪ್ರೌಢಶಾಲೆ ಬೆಳ್ಮಣ್ಣುಮುಖ್ಯ ಶಿಕ್ಷಕರಾದ ಶ್ರೀಮತಿ ಮಾಲತಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ರೋಟೇರಿಯನ್ ಅಲ್ಲೆನ್ ಲೂಯಿಸ್, ಮಾಜಿ ಜಿಲ್ಲಾ ಸಹಾಯಕ ಗವರ್ನರ್ ರೋಟೇರಿಯನ್ ಸೂರ್ಯಕಾಂತ್ ಶೆಟ್ಟಿ, ವಲಯ ಸೇನಾನಿ ರೊ. ಮಾದೇಗೌಡ, ಶ್ರೀ ದುರ್ಗಾ ಫೂಲ್ಸ್ ಮಾಲಕರಾದ ರೋಟೇರಿಯನ್ ನಿತ್ಯಾನಂದ ಶೆಟ್ಟಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರೂಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯದರ್ಶಿ ರವಿ ರಾಜ್ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರಾದ ರೋಟೇರಿಯನ್ ವಿಘ್ನೇಶ್ ಶೆಣೈ ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಲಜೀವನ್ ಮಿಷನ್ ಯಶಸ್ವಿ ಅನುಷ್ಠಾನ ನಮ್ಮೆಲ್ಲರ ಗುರಿ: ನವೀನ್ ಭಂಡಾರಿ

Thumbnail
Posted On: 29 Jan 2021, 08:30 PM

ಪುತ್ತೂರು : ಪ್ರತಿ ಮನೆಗೆ, ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಜನಜೀವನ್ ಮಿಷನ್ನಿನ ಮುಖ್ಯ ಗುರಿಯಾಗಿದೆ ಎಂದು ಪುತ್ತೂರು ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಭಂಡಾರಿ ಹೇಳಿದರು. ಪುತ್ತೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಪುತ್ತೂರು ತಾ.ಪಂ‌.ನಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಕಾರ್ಯತ್ಮಕ ನಳ ಸಂಪರ್ಕ, ಕುಡಿಯುವ ನೀರು ಪೂರೈಕೆ ಜಲಜೀವನ್ ಮಿಷನ್ ಯೋಜನೆ ಉದ್ದೇಶವಷ್ಟೇ ಅಲ್ಲದೇ ಅಂತರ್ಜಲ ಮರುಪೂರಣವೂ ಆಗಿದೆ. ಈಗಾಗಲೇ ತಾಲೂಕಿನಲ್ಲಿ ಇಂಗುಗುಂಡಿಗಳ ನಿರ್ಮಾಣ ಬಹುತೇಕ ಯಶಸ್ವಿ ಕಂಡಿದೆ ಎಂದವರು ಹೇಳಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಭರತ್ ಅವರು ಮಾತನಾಡಿದ ಜಲಜೀವನ್ ಮಿಷನ್ ಕಾರ್ಯನುಷ್ಠಾನ ಮತ್ತು ತಾಂತ್ರಿಕ ಅಡೆತಡೆಗಳ ಬಗೆಹರಿಸುವಿಕೆ ಕುರಿತು ಸ್ಪಷ್ಟ ಮಾಹಿತಿ ನೀಡಿದರು. ನೀರು ಪರೀಕ್ಷಾ ವಿಧಾನದ ಕುರಿತು ತಜ್ಞರಾದ ಕೃಷ್ಣ ಅವರು ಪ್ರಾತ್ಯಕ್ಷಿಕೆ ಮಾಡಿದರು. ಜಲಜೀವನ್ ಮಿಷನ್ ದ್ಯೇಯೋದ್ದೇಶಗಳ ಕುರಿತು ಜೆಜೆಎಮ್ ಜಿಲ್ಲಾ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಮಾತನಾಡಿದರು. ಸ್ವಚ್ಛ ಭಾರತ್ ಇದರ ಜಿಲ್ಲಾ ಐಇಸಿ ಡೊಂಬಯ್ಯ ಅವರು ತ್ಯಾಜ್ಯ ವಿಂಗಡನೆ ಬಗ್ಗೆ ಅರಿವು ಮೂಡಿಸಿದರು. ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ಕುರಿತು ಡಬ್ಲ್ಯೂಎಸ್.ಇ ಎಂಜಿನಿಯರ್ ಅಶ್ವಿನ್ ಕುಮಾರ್ ಮತ್ತು ಜಿಲ್ಲಾ ಐಇಸಿ ಮಹಾಂತೇಶ್ ಹಿರೇಮಠ್ ತಿಳಿಸಿದರು. ಜೆಜೆಎಮ್ ಸಿಬ್ಬಂದಿಗಳಾದ ದಯಾನಂದ ಮಯ್ಯಾಳ ಮತ್ತು ಈಶ್ವರ್ ಅವರು ಸಹಕರಿಸಿದರು.ದ.ಕ ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾ.ಕು.ನೀ,ನೈ ಇಲಾಖೆ, ಪುತ್ತೂರು ತಾಲೂಕು ಪಂಚಾಯತ್ ಮತ್ತು ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತರಬೇತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಸುಮಾರು 150 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಜನವರಿ 31ರಂದು ಕುತ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಜನಾ ಮಂಗಳೋತ್ಸವ

Thumbnail
Posted On: 28 Jan 2021, 03:44 PM

ಕಾಪು ತಾಲೂಕಿನ ಕುತ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಟ್ಟಡದ ಸುವರ್ಣ ಮಹೋತ್ಸವದ ಪ್ರಯುಕ್ತ ಭಜನಾ ಮಂಗಳೋತ್ಸವವು ಜನವರಿ 31ರಂದು ದೇವಸ್ಥಾನದಲ್ಲಿ ನಡೆಯಲಿದೆ. ಬಳಿಕ ರಾತ್ರಿ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಆನೆಗುಂದಿ ಮಠಾಧೀಶರಾದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.30 ರಂದು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ : ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

Thumbnail
Posted On: 28 Jan 2021, 12:42 PM

ಉಡುಪಿ : ಜನವರಿ 30 ರಂದು ಬ್ರಹ್ಮಾವರ ತಾಲೂಕಿನ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ್ಯ ಮಾಡಿ, ಸದ್ರಿ ಗ್ರಾಮಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ, ಇಡೀ ರಾಜ್ಯದಲ್ಲಿ ಇದು ಪ್ರಥಮ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಗ್ರಾಮ ವಾಸ್ತವ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 30 ರಂದು ಗ್ರಾಮ ವಾಸ್ತವ್ಯ ನಡೆಯುವ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳ ಸಾರ್ವಜನಿಕರ ಕುಂದು ಕೊರತೆಗಳ ಕುರಿತಂತೆ ಸಂಬAದಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು 3 ದಿನಗಳ ಮುಂಚಿತವಾಗಿಯೇ ಅರ್ಜಿಗಳನ್ನು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಿ. ಸದ್ರಿ ಗ್ರಾಮ ವಾಸ್ತವ್ಯದ ದಿನ ಫಲಾನುಭವಿಗಳಿಗೆ ಅರ್ಜಿಗೆ ಸಂಬAಧಿಸಿAತೆ ಸೂಕ್ತ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಿ. ಸಂಬಂದಪಟ್ಟ ತಾಲೂಕಿನ ತಹಸೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಎಲ್ಲಾ ಅಧಿಕಾರಿಗಳು ವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು ಮತ್ತು ಆಕಾರ್ ಬಂದ್ ತಾಳೆ ಹೊಂದುವ ಕುರಿತು ಖಚಿತಪಡಿಸಿಕೊಳ್ಳಬೇಕು. ಪೌತಿ ಹೊಂದಿದ ಖಾತೆದಾರರ ಹೆಸರನ್ನು, ನೈಜ ವಾರಿಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮದ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ದೊರೆಯುತ್ತಿರುವ ಬಗ್ಗೆ ಪರಿಶೀಲನೆ, ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು, ಗ್ರಾಮದಲ್ಲಿನ ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಆಶ್ರಯ ಯೋಜನೆಗೆ ಸಂಬAಧಿಸಿದAತೆ ಅಗತ್ಯ ಜಮೀನು ಕಾದಿರಿಸಲು ಕ್ರಮ ಕೈಗೊಳ್ಳುವುದು, ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವು, ಆಧಾರ್ ಕಾರ್ಡ್ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಮತದಾರರ ಪಟ್ಟಿ ಪರಿಷ್ಕರಣೆ, ಅತಿವೃಷ್ಠಿ/ಅನಾವೃಷ್ಠಿ ಎದುರಿಸಲು ಮುಂಜಾಗ್ರತಾ ಕ್ರಮಗಳು, ಬರ/ಪ್ರವಾಹ ಇದ್ದಲ್ಲಿ ಪರಿಹಾರ, ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ, ಕಲಿಕಾ ಕ್ರಮಗಳ ಬಗ್ಗೆ ಪರಿಶೀಲನೆ, ಗ್ರಾಮದಲ್ಲಿನ ವಸತಿ ನಿಲಯಗಳಿಗೆ ಭೇಟಿ ನೀಡಿ, ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲನೆ, ಗ್ರಾಮದ ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿ.ಪಿ.ಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವುದು, ಗುಡಿಸಲು ಇರುವ ವಾಸದ ಮನೆಗಳನ್ನು ಪತ್ತೆ ಹಚ್ಚಿ ಸರ್ಕಾರದ ವಿವಿಧ ಯೋಜನೆಯಡಿ ಮನೆ ಕಟ್ಟಲು ಅನುದಾನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು ಹಾಗೂ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸದಾಶಿವ ಪ್ರಭು ತಿಳಿಸಿದರು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಂಬಂದಪಟ್ಟ ಗ್ರಾಮದ ಪಿಡಿಓಗಳು ಮತ್ತು ಪಂಚಾಯತ್‌ಗಳ ಆಡಳಿತಾಧಿಕಾರಿಗಳು, ಕಂದಾಯ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕು. ಸಾರ್ವಜನಿಕರು ತಮ್ಮ ಕುಟುಂಬದ ವ್ಯಕ್ತಿ ಮರಣ ಹೊಂದಿದ್ದಲ್ಲಿ ಸಂಬಂದಪಟ್ಟ ಇಲಾಖೆಯಿಂದ ಮರಣ ಪ್ರಮಾಣ ಪತ್ರ ಪಡೆದು, ಪೌತಿ ಖಾತೆ ಬದಲಾವಣೆ ಮಾಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಯಗಳಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಲ್ಲಿ ಕೂಡಲೇ ಮಾಹಿತಿ ನೀಡಿ, ಅನವಶ್ಯಕವಾಗಿ ಪಿಂಚಣಿ ಹಣ ಅನರ್ಹರಿಗೆ ತಲುಪಿ ದುರುಪಯೋಗವಾಗದಂತೆ ಎಚ್ಚರವಹಿಸಬೇಕು, ಇಲ್ಲವಾದಲ್ಲಿ ಮೃತರ ಹೆಸರಿನಲ್ಲಿ ಪಿಂಚಣಿ ಪಡೆದವರಿಂದಲೇ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್ಚರಿಸಿದರು. ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ವಿಭಾಗದ ಸಹಾಯಕ ಆಯುಕ್ತರು, ಸಂಬಂದಪಟ್ಟ ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರೊಂದಿಗೆ ಗ್ರಾಮ ವಾಸ್ತವ್ಯ ನಡೆಯಲಿದ್ದು, ಜಿಲ್ಲಾಧಿಕಾರಿ ಭೇಟಿ ನೀಡುವ ತಾಲೂಕಿನ ತಹಸೀಲ್ದಾರ್ ಹೊರತುಪಡಿಸಿ, ಉಳಿದ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಲಿದ್ದು, ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಾಸ್ತವ್ಯ ಮಾಡಲಿದ್ದಾರೆ ಎಂದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.