Updated News From Kaup
ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭ
Posted On: 19 Feb 2021, 03:06 PM
ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭಗೊಂಡಿತು. ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದೊಡ್ಡನಗುಡ್ಡೆ ನಗರಸಭಾ ಸದಸ್ಯರಾದ ಪ್ರಭಾಕರ್ ದೊಡ್ಡನಗುಡ್ಡೆ, ಮಾಜಿ ನಗರಸಭಾ ಸದಸ್ಯರಾದ ಆರ್. ಕೆ. ರಮೇಶ್ ಪೂಜಾರಿ ಹಾಗೂ ಪೆರಂಪಳ್ಳಿ ನಗರ ಸಭಾ ಸದಸ್ಯರಾದ ಸೆಲಿನ್ ಕರ್ಕಡ, ಗಣೇಶ್ ಶೇರಿಗಾರ್, ಕಿಶೋರ್ ಪೂಜಾರಿ ಹಾಗೂ ವಸಂತಿ ಅನಿಲ್, ಮಾಲಕರಾದ ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಕುಲಶೇಖರ : ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ, ಬಾಲಾಲಯ ನಿರ್ಮಾಣದ ಭೂಮಿ ಪೂಜೆ
Posted On: 17 Feb 2021, 07:10 PM
ಮಂಗಳೂರು : ದ. ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಆಡಳಿತಕೊಳಪಟ್ಟ ಕುಲಶೇಖರ ಶ್ರೀವೀರನಾರಾಯಣ ದೇವಸ್ಥಾನ ಇದರ ಜೀರ್ಣೋದ್ದಾರ ಕೆಲಸ ಕಾರ್ಯಗಳು ಅತ್ಯಂತ ಸುಲಲಿತವಾಗಿ ನಡೆಯುತ್ತಿದ್ದು, ಫೆಬ್ರವರಿ 17, ಬುಧವಾರ ಬೆಳಗ್ಗೆ ಬಾಲಾಲಯ ನಿರ್ಮಾಣದ ಸಲುವಾಗಿ ಭೂಮಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ದಕ್ಷಿಣಕನ್ನಡ ಜಿಲ್ಲಾ ಮೂಲ್ಯರ ಸಂಘದ ಅಧ್ಯಕ್ಷರಾದ ಮಯೂರ ಉಲ್ಲಾಲ್, ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪುರುಷೋತ್ತಮ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಬಂಗೇರ, ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಟ್ರಸ್ಟಿನ ಅಧ್ಯಕ್ಷ ಪ್ರೇಮನಂದ ಕುಲಾಲ್, ಸುಂದರ ಸಾಲ್ಯಾನ್, ಶ್ರೀಮತಿ ರೂಪ.ಡಿ.ಬಂಗೇರ, ಗಿರಿಧರ್ ಜೆ. ಮೂಲ್ಯ, ಅನಿಲ್ದಾಸ್ ಅಂಬಿಕಾ ರೋಡು,ಪ್ರವೀಣ್ ಬಸ್ತಿ, ಪ್ರದೀಪ್, ಕಿರಣ್,ಸದಾನಂದ ಕುಲಾಲ್,ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಅನಿಲ್ ಬಗಂಬಿಲ ಎಂ.ಪಿ. ಬಂಗೇರ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾಜಿ ಅಧ್ಯಕ್ಷ ಗಿರೀಶ ಸಾಲ್ಯಾನ್, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್ ಹಾಗೂ ಜಿಲ್ಲೆಯ ಕುಲಾಲ ಸಮಾಜದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿರ್ವ : ಯೋಗಶಕ್ತ ರೋಗ ಮುಕ್ತ ಜೀವನ ಅಗತ್ಯ
Posted On: 16 Feb 2021, 02:13 PM
ಶಿರ್ವ:ಮಾನವ ಶರೀರವೇ ನಿಜವಾದ ಯೋಗ.ಅದನ್ನು ಸಮರ್ಪಕವಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾದುದು ಅತೀ ಅಗತ್ಯ.ತನ್ನ ಜೀವನ ಶೈಲಿಯಲ್ಲಿ ಉತ್ತಮ ಆಹಾರದೊಂದಿಗೆ ವ್ಯಾಯಾಮವನ್ನು ದಿನ ನಿತ್ಯ ರೂಢಿಸಿಕೊಂಡರೆ ದೇಹ ಸ್ವಸ್ಥವಾಗಿ ರೋಗದಿಂದ ಮುಕ್ತವಾಗಲು ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿಯಾಗಿ ಬಂದ ಶ್ರೀರಂಜಿತ್ ಪುನರೂರು ಸಂತಮೇರಿ ಕಾಲೇಜಿನಲ್ಲಿ ಏರ್ಪಡಿಸಿದ ಮೂರು ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ನುಡಿದರು. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ-ಎನ್.ಸಿ.ಸಿ.ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸಮಾಜ ಸೇವಕ ರಾಜ್ಯ ಪ್ರಶಸ್ತಿ ಪಡೇದ ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್ರವರು ಪ್ರಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈ , ಶ್ರೀ ರಂಜಿತ್ ಪುನಾರ್, ಶ್ರೀ ಪ್ರಕಾಶ್ ಆಚಾರ್ಯ ಯೋಗಾಸನ ಶ್ಯೆಲಿಯನ್ನು ಪ್ರಾತ್ಯೆಕ್ಷೀಕೆಯ ಮೂಲಕ ಮಾಡಿತೋರಿಸಿದರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ ಸಂಯೋಜಕ ಜೆಫ್ ಸನ್ನಿ ಡಿಸೋಜಾ, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಕು. ದೀಪ್ತಿ ಮತ್ತು ಬಳಗ ಪ್ರಾರ್ಥಿಸಿ, ಕು. ನವ್ಯ ಆಚಾರ್ಯ ಸ್ವಾಗತಿಸಿ, ಮುಖ್ಯ ಅಥಿತಿಗಳನ್ನು ಪರಿಚಯಿಸಿದರು. ಕು. ಶ್ರಾವ್ಯ ವಂದಿಸಿ, ಕು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ: ಪುಲ್ವಾಮ ಹುತಾತ್ಮರ ಸ್ಮರಣಾರ್ಥ ಯೋಧ ನಮನ
Posted On: 14 Feb 2021, 09:43 PM
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಉಡುಪ ರತ್ನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕ ಯುದ್ಧ ಸ್ಮಾರಕದಲ್ಲಿ ಭಾನುವಾರ ಸಂಜೆ ಯೋಧ ನಮನ ಕಾರ್ಯಕ್ರಮ ನಡೆಯಿತು. ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಗಣೇಶ್ ರಾವ್ ಮಾತನಾಡುತ್ತಾ, ಯುವಜನರಿಗೆ ಸೇನೆಗೆ ಸೇರಲು ಇದೊಂದು ಸೂಕ್ತವಾದ ಸಂದರ್ಭ. ಸೇನೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಯಾವುದರಲ್ಲಿಯೂ ಸಿಗಲು ಅಸಾಧ್ಯ. ಅರ್ಪಣಾ ಮನೋಭಾವದಿಂದ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿ ಬದುಕನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಹೆಮ್ಮೆಯ ಯೋಧರೇ ನಮಗೆಲ್ಲ ಸ್ಪೂರ್ತಿ. ದೇಶಕ್ಕಾಗಿ ಸೇವೆ ಸಲ್ಲಿಸಲು ಸಿಕ್ಕಿದ ಅವಕಾಶ ಎಂದಿಗೂ ಮರೆಯಲು ಅಸಾಧ್ಯ ಎಂದರು. ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ವಾದಿರಾಜ ಹೆಗ್ಡೆ ಮಾತನಾಡುತ್ತಾ ಜೀವದ ಹಂಗು ತೊರೆದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಂದ ಕಲಿಯುವುದು ಸಾಕಷ್ಟಿದೆ. ದೇಶದ ವಿಚಾರ ಬಂದಾಗ ಒಗ್ಗಟ್ಟಿನ ಧ್ವನಿ ಇರಬೇಕು ಎಂದರು. ನೆರೆದ ಎಲ್ಲರೂ ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿಸಿ ಪುಷ್ಪ ನಮನ ಸಮರ್ಪಿಸಿದರು. ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಮಾಜಿ ಸೈನಿಕರುಗಳಾದ ಸೈಮನ್ ಡಿಸೋಜ, ಭೀಮಯ್ಯ, ವಕೀಲ ರಫೀಕ್ ಖಾನ್, ಉದಯ ನಾಯ್ಕ್, ನಾಗರಾಜ್ ಭಂಡಾರ್ಕರ್, ಲಕ್ಷ್ಮಣ ಬಿ ಕೋಲ್ಕಾರ, ಸವಿತಾ ನೋಟಗಾರ್, ಈರಪ್ಪ ಗೌಂಡಿ, ರಮೇಶ್ ಎಲಿಬಳ್ಳಿ, ಪಾಂಪೇಶ್, ಹನುಮಂತರಾಯ ಪೂಜಾರಿ, ಶರಣಪ್ಪ, ರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ,ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ನಿರೂಪಿಸಿ, ಜನಾರ್ದನ್ ಕೊಡವೂರು ವಂದಿಸಿದರು.
R.M ಕ್ರಿಯೆಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಮಾಜಂದಿನ ಮೋಕೆ ತುಳು ಆಲ್ಬಮ್ ಗೀತೆ ಬಿಡುಗಡೆ
Posted On: 14 Feb 2021, 09:38 PM
ಪ್ರಿಯ ಕ್ರಿಯೇಷನ್ಸ್ ಅರ್ಪಿಸುವ ಅಕ್ಕ-ತಂಗಿಯ ಪ್ರೀತಿಯ ಸಂಬಂಧವನ್ನು ಸಾರುವ ಮಾಜಂದಿನ ಮೋಕೆ ಎಂಬ ತುಳು ಆಲ್ಬಮ್ ಗೀತೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಡ್ವೆಯಲ್ಲಿ, ಯುವವಾಹಿನಿ (ರಿ) ಅಡ್ವೆ ಘಟಕದ ಆಶ್ರಯದಲ್ಲಿ ಕ್ಷೇತ್ರದ ಪೂಜಾ ಕಾರ್ಯಕ್ರಮದೊಂದಿಗೆ R.M ಕ್ರಿಯೆಷನ್ಸ್ ಲಾಂಛನದ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಅಡ್ವೆ ಘಟಕದ ಅಧ್ಯಕ್ಷರಾದ ಶಶಿಧರ್ ಟಿ ಪೂಜಾರಿ, ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ, ಘಟಕದ ಗೌರವ ಸಲಹೆಗಾರರಾದ ಜಯರಾಮ್ ಸುವರ್ಣ, ಸ್ಥಾಪಕಾದ್ಯಕ್ಷರಾದ ನೀತೇಶ್ ಜೆ ಕರ್ಕೇರ , ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾನಂದ ಪೂಜಾರಿ ಉಪಸ್ಥಿತರಿದ್ದರು. ಶರತ್ ಅಡ್ವೆ ಸಾಹಿತ್ಯ , ರಕ್ಷಿತಾ ಪೂಜಾರಿ ಮತ್ತು ಪ್ರಿಯಾಂಕ ಅಡ್ವೆಯವರ ಗಾಯನ ದಿನೇಶ್ ಎರ್ಮಾಳ್ ಸಂಗೀತ, ಸುದೀಪ್ ಕಾಪು ಮತ್ತು ವಿರಾಜ್ ಕಾಪು ಸಂಕಲನ, ನಿತೇಶ್ ಜೆ. ಕರ್ಕೇರ , ಶೀನ ಶಕುಂತಲಾ ನಿರ್ಮಾಣದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಗೀತಾ ಎನ್. ಸುವರ್ಣ ಪ್ರಾರ್ಥಿಸಿ, ಶರತ್ ಅಡ್ವೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಾಜಂದಿನ ಮೋಕೆ ತುಳು ಆಲ್ಬಮ್ ಗೀತೆ ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ Click here to watch MOKE Tulu Album song
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡ ವಿಜಯ ಬಾಲನಿಕೇತನ ಭೇಟಿ
Posted On: 14 Feb 2021, 08:48 PM
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯ ಆಶಕ್ತ ಕಾರ್ಮಿಕ ಮಕ್ಕಳ ವಸತಿ ಗೃಹ ವಿಜಯ ಬಾಲನಿಕೇತನಕ್ಕೆ ಭೇಟಿ ನೀಡಿ ಅವರ ಬೇಡಿಕೆಯ ಅವಶ್ಯ ತರಕಾರಿ ಸಾಮಗ್ರಿ ವಿತರಿಸಲಾಯಿತು. ಆಸರೆ ತಂಡದ ಅಧ್ಯಕ್ಷರಾದ ಡಾ. ಕೀರ್ತಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಂಡದ ಜಗದೀಶ್ ಬಂಟಕಲ್, ಮೋಕ್ಷ, ಶ್ಲೋಕ ಪಾಲ್ಗೊಂಡಿದ್ದರು. ಅಲ್ಲಿಯ ವ್ಯವಸ್ಥಾಪಕರು ಆದಂತಕ ಜಯರಾಮ್ ನೈರಿ ಅವರು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಸ್ಥೆಗಳಿಗೆ ನಿಮ್ಮ ಆಸರೆ ಆಗಲಿ ಎಂದು ಹಾರೈಸಿದರು.
ನವ ಭಾರತಕ್ಕಾಗಿ ಒಂದಾಗೋಣ ಪುಲ್ವಾಮಾ ದಾಳಿಗೆ ದೈಯ೯ವಾಗಿ ಉತ್ತರಿಸೋಣ
Posted On: 14 Feb 2021, 08:38 PM
ಫೆಬ್ರವರಿ 14 ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ. ಇಂದು ನಮ್ಮ ಕೆಚ್ಚೆದೆಯ ವೀರರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ದಿನ. ಹೇಡಿ ಉಗ್ರರ ಪಾಪಕೃತ್ಯಕ್ಕೆ ಗಡಿಯಲ್ಲಿ ನಮ್ಮ ವೀರರು ಅಮರರಾಗಿದ್ದರು. ನರಿಬುದ್ಧಿ ಉಗ್ರರ ಈ ಕುಕೃತ್ಯದ ಫಲವಾಗಿ ನಮ್ಮ 40 ವೀರರು ಹುತಾತ್ಮರಾದ ದಿನವಿಂದು. ಪುಲ್ವಾಮಾದಲ್ಲಿ ನಡೆದಿದ್ದ ಈ ರಕ್ಕಸ ಕೃತ್ಯವನ್ನು ಇಡೀ ಭಾರತ ಎಂದೂ ಮರೆಯದು. ಇಂತಹ ನೋವಿನ ದಿನಕ್ಕೆ ಇವತ್ತಿಗೆ ಎರಡು ವರ್ಷ ತುಂಬಿದೆ. 2019ರ ಫೆಬ್ರವರಿ 14ರ ಶುಕ್ರವಾರ 40 ಸಿಆರ್ಪಿಎಫ್ ಯೋಧರಿದ್ದ ವಾಹನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ, ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರಾದಲ್ಲಿ ರಕ್ಕಸ ಉಗ್ರರು ದಾಳಿ ಮಾಡಿದ್ದರು. ಭಾರತದ ಹೋರಾಟ ಅನನ್ಯ: ವಾಯುದಾಳಿಯ ನಂತರ ಪ್ರಧಾನಿ ಜಾಗತಿಕ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡು ಪ್ರಮುಖ ರಾಷ್ಟ್ರಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಅದು ಮಿಸುಕಾಡದಂತೆ ಮಾಡಿದ ಪರಿಯಂತೂ ಅನನ್ಯವಾದ್ದು. ಶಕ್ತರಾಷ್ಟ್ರಗಳು ಮಾತ್ರ ಈ ಪರಿಯ ದಿಗ್ಬಂಧನ ಹೇರಬಹುದೆನ್ನುವುದಾದರೆ ಭಾರತ ಇಂದೂ ಅದೇ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ ಎಂದಾಯ್ತು. ಸ್ವತಃ ಚೀನಾ ಕೂಡ ಪಾಕಿಸ್ತಾನದ ಸಹಕಾರಕ್ಕೆ ಬರದೇ ದೂರವೇ ಉಳಿದು ಮೌನವನ್ನು ಕಾಪಾಡಿಕೊಂಡಿದ್ದು ಪಾಕಿಸ್ತಾನ ತನ್ನ ಆಲೋಚನಾ ದಿಸೆಯನ್ನು ಬದಲಾಯಿಸಬೇಕೆಂಬುದಕ್ಕೆ ಉದಾಹರಣೆಯಾಯ್ತು. ಈ ನಡುವೆಯೇ ಬಂದ ಮತ್ತೊಂದು ಸುದ್ದಿ ಪಾಕಿಸ್ತಾನದ ಪಾಲಿಗೆ ಆಘಾತಕಾರಿಯೇ ಸರಿ. ಅಲ್ಲಿನ ಸೇನಾ ಮುಖ್ಯಸ್ಥ ಬಾಜ್ವಾನ ಗಮನಕ್ಕೂ ತರದಂತೆ ಸೈನಿಕರು ಮತ್ತು ಜೈಶ್-ಎ-ಮೊಹಮ್ಮದ್ ಕಮ್ಯಾಂಡರುಗಳು ಈ ಯೋಜನೆಯನ್ನು ರೂಪಿಸಿದ್ದರಂತೆ. ಅಂದರೆ ಭಯೋತ್ಪಾದಕರು ಈಗ ಸೇನೆಯನ್ನೂ ಮೀರಿ ಬೆಳೆದಿದ್ದಾರೆ. ಪಾಕಿಸ್ತಾನ ಬಿತ್ತಿದ ಬೀಜ ಹೆಮ್ಮಾರಿಯಾಗಿ ಅವರನ್ನೇ ತಿನ್ನುತ್ತಿದೆ. ವಿಕಾಸದ ಕನಸನ್ನು ಹೊತ್ತು ಬಂದ ಇಮ್ರಾನ್ ಹಿಂದೆಂದೂ ಇಲ್ಲದಂತಹ ಪ್ರತಿರೋಧವನ್ನು ಈಗ ಎದುರಿಸುತ್ತಿದ್ದಾರೆ. ಒಂದೆಡೆ ಬಲಾಢ್ಯವಾಗಿರುವ ಭಾರತ, ಮುಲಾಜಿಲ್ಲದ ಸಕಾ೯ರ ಮತ್ತೊಂದೆಡೆ ಕೈಗೇ ಸಿಗದ ಪಾಕಿಸ್ತಾನದ ಆಥಿ೯ಕತೆ ಮತ್ತು ರಾಷ್ಟ್ರವನ್ನೇ ಮೀರಿ ಬೆಳೆಯುತ್ತಿರುವ ಭಯೋತ್ಪಾದಕರು, ಇವು ಶತ್ರು ರಾಷ್ಟ್ರವನ್ನು ಖಂಡಿತವಾಗಿಯೂ ತಿನ್ನುತ್ತಿವೆ. ಏನೇ ಆಗಲಿ ಮುಂದೆ ಈ ರೀತಿಯ ದಾಳಿ ಆಗದಂತೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.ಭಯೋತ್ಪಾದನೆಯ ಮೂಲ ಬೇರು ಹೋಗುವವರೆಗೂ ಹೋರಾಡಬೇಕು. ನಮ್ಮ ದೇಶದ ದೇಶ ಬಾಂಧವರು ಪ್ರೇಮಿಗಳ ದಿನಕ್ಕೆ ಹೆಚ್ಚು ಒತ್ತು ನೀಡದೆ ಈ ದಿನವನ್ನು ಸೈನಿಕರ ದಿನವಾಗಿ ಆಚರಿಸಿ ಅವರಿಗೆ ಮತ್ತಷ್ಟು ಶಕ್ತಿ ತುಂಬುವ ಕಾಯ೯ ಮಾಡಲಿ. ಏನೇ ಆಗಲಿ ಮುಂದೆ ಸಾಗೋಣ ನವ ಭಾರತ ಕಟ್ಟಲು ಈ ದಿನವನ್ನು ಮುಡಿಪಾಗಿಡೋಣ. ಲೇಖನ : ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಪ್ರೇಮಿಗಳ ದಿನಾಚರಣೆಯಂದು ಸ್ವಚ್ಛತಾ ಶ್ರಮದಾನ
Posted On: 14 Feb 2021, 08:26 PM
ಪ್ರೇಮಿಗಳ ದಿನಾಚರಣೆ ಯಂದು ಪರಿಸರ ಪ್ರೇಮಿಗಳಾಗೋಣ ಎಂಬ ಧೇಯವಾಕ್ಯದೊಂದಿಗೆ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು ಇವರ ಆಶ್ರಯದಲ್ಲಿ ಇಂದು ಬೆಳಿಗ್ಗೆ 7.30 ರಿಂದ 9.30 ರವರೆಗೆ ಶಿರ್ವ ಮಹಾಲಸ ನಾರಾಯಣಿ ದೇವಸ್ಥಾನದ ತಿರುವಿನಿಂದ ಶಿರ್ವ ಪೇಟೆಯ ಮುಖ್ಯ ರಸ್ತೆ ಎರಡು ಬದಿಗಳಲ್ಲಿ ಹರಡಿದ್ದ ತ್ಯಾಜ್ಯ,ಕಸ, ಪ್ಲಾಸ್ಟಿಕ್, ಹೆಕ್ಕುವ ಮೂಲಕ ಸ್ವಚ್ಚತೆ ಕಾರ್ಯಕ್ರಮ ನಡೆಯಿತು. ಡಾನ್ ಬೋಸ್ಕೊ ಶಾಲೆ ಮುಂಬಾಗ, ಅಂಚೆ ಕಛೇರಿ, ಸಮುದಾಯ ಆರೋಗ್ಯ ಕೇಂದ್ರ ಮುಂಬಾಗ, ಸಂತ ಮೇರಿ ಪ.ಪೂ ಕಾಲೇಜು ಮುಂಬಾಗ , ಶಾಂಭವಿ ಹೈಟ್ಸ್ ವರೆಗೆ ಸ್ವಚ್ಛತಾ ಕಾರ್ಯಕ್ರಮದೊಂದಿಗೆ , ಪ್ರೇಮಿಗಳ ದಿನಾಚರಣೆಯನ್ನು ಪರಿಸರ ಪ್ರೇಮಿಗಳಾಗಿ ಶ್ರಮದಾನ ನಡೆಯಿತು. ಯುವ ವೃಂದದ ಗೌರವಾಧ್ಯಕ್ಷ, ಗ್ರಾ.ಪಂ ಸದಸ್ಯ ಕೆ ಆರ್ ಪಾಟ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಕಾರ್ಯದರ್ಶಿ ಆಶಿಷ್ ಪಾಟ್ಕರ್, ಹಿರಿಯ ಶಿಕ್ಷಕ ದೇವದಾಸ ಪಾಟ್ಕರ್, ಸೇನಾನಿ ರಾಜೇಂದ್ರ ಪಾಟ್ಕರ್, ಲಯನ್ ಅನಂತರಾಮ ವಾಗ್ಲೆ, ವೀರೇಂದ್ರ ಪಾಟ್ಕರ್, ಯುವ ವೃಂದದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು. ಸ್ಥಳೀಯರಾದ ಶ್ರೀನಿವಾಸ ಶೆಣೈಯವರು ಉಪಹಾರ, ಹಾಗೂ ಗಿರಿದರ್ ಪ್ರಭು ಶಿರ್ವ ರವರು ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
ಅನೈತಿಕ ತಾಣವಾಗಿ ಇತಿಹಾಸ ಪ್ರಸಿದ್ಧ ಧನಸ್ಸು ತೀರ್ಥ, ಭರವಸೆ ಈಡೇರಿಸದ ಪೊಲೀಸ್ ಇಲಾಖೆ, ಮೌನವಹಿಸಿದ ಪಂಚಾಯತ್, ಸ್ಥಳೀಯ ಯುವಕರಿಂದ ಸ್ವಚ್ಛತಾ ಕಾರ್ಯ
Posted On: 14 Feb 2021, 02:04 PM
ಗುರು ಪರಶುರಾಮ ರಿಂದ ನಿರ್ಮಿತವಾಗಿದೆ ಎಂಬ ನಂಬಿಕೆ ಇರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಧನಸ್ಸು ತೀರ್ಥವು ಶ್ರೀ ಕ್ಷೇತ್ರ ಕುಂಜಾರುಗಿರಿ ಸಂಬಂಧಿಸಿದ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ, ಮಜೂರು ಗ್ರಾಮಗಳ ಗಡಿಭಾಗದಲ್ಲಿದೆ. ಅನೈತಿಕ ಚಟುವಟಿಕೆಗಳ ತಾಣವಾದ ಸ್ಥಳ : ಇಂತಹ ಪೂಜನೀಯ ಧಾರ್ಮಿಕ ಧನಸ್ಸು ತೀರ್ಥವು ಇದೀಗ ಪುಂಡು-ಪೋಕರಿಗಳ ಕಾಲಕಳೆಯುವ ಸ್ಥಳವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮದ್ಯ ಪ್ರಿಯರ ಮನೋರಂಜನಾ ಸ್ಥಳವಾಗಿ ಪರಿಣಮಿಸಿರುವುದು ದುರಂತ. ಈ ಬಗ್ಗೆ ಇಂತವರಿಗೆ ಮನವರಿಕೆ ಮಾಡಿದರೆ ವಾಗ್ವಾದ, ಘರ್ಷಣೆಗಳು ಸಂಭವಿಸಿದ್ದೂ ಇದೆ ಎನ್ನುತ್ತಾರೆ ಸ್ಥಳೀಯರು. ಸಂಬಂಧಪಟ್ಟ ಇಲಾಖೆಗಳ ದಿವ್ಯಮೌನ : ಜೂನ್ ತಿಂಗಳಿನಲ್ಲಿ ಸ್ಥಳೀಯರು ಈ ಬಗ್ಗೆ ಪೊಲೀಸ್ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ. ಬೀಟ್ ವ್ಯವಸ್ಥೆಯನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದರೂ ವ್ಯವಸ್ಥೆಯನ್ನು ಮಾಡಿಲ್ಲ. ಸ್ಥಳೀಯರ ಒತ್ತಡದ ಮೇರೆಗೆ ಪಂಚಾಯತ್ ವತಿಯಿಂದ ಸೂಚನಾ ಫಲಕವನ್ನು ಹಾಕಲಾಗಿದೆ. ಆದರೂ ನಿಯಮ ಪಾಲನೆ ಆಗುತ್ತಿಲ್ಲ. ಕೆರೆಯ ಸುತ್ತಮುತ್ತ ಮದ್ಯದ ಬಾಟಲಿಗಳ ರಾಶಿ ಬೀಳುತ್ತಿದೆ. ಇದಕ್ಕೆ ಗಮನ ವಹಿಸಬೇಕಾದ ಪಂಚಾಯತ್ ಮೌನವಹಿಸಿದೆ. ಸ್ವಚ್ಚತಾ ಕಾರ್ಯದಲ್ಲಿ ಯುವಕರು : ಯಾರೂ ಇತ್ತ ಗಮನ ಹರಿಸಿದಾಗ ಸ್ಥಳೀಯ ಯುವಕರ ತಂಡವಾದ ಅಜ್ಜಿಲಕಾಡು ಫ್ರೆಂಡ್ಸ್ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಇವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೀರ್ಣೋದ್ಧಾರಗೊಳ್ಳುತ್ತಿರುವ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದ ಗೋಡೆಯಲ್ಲಿ ಶಿಲ್ಪಿಗಳಿಗೆ ಕಂಡ ನಗುಮುಖದ ಬಾಬಾ
Posted On: 13 Feb 2021, 11:47 PM
ಜೀರ್ಣೋದ್ಧಾರಗೊಳ್ಳುತ್ತಿರುವ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ನೂತನ ಸಾಯಿಬಾಬಾ ಮೂರ್ತಿಯನ್ನು ಕೆತ್ತುತಿರುವ ರಾಜಸ್ಥಾನದ ಜೈಪುರದ ಶಿಲ್ಪಕಲಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ್ದರು. ಜೈಪುರದಲ್ಲಿ ಸಾಯಿ ಮೂರ್ತಿ ಕೆತ್ತನೆಯ ಶಿಲ್ಪ ಕೇಂದ್ರಕ್ಕೆ ಭೇಟಿ ನೀಡಿದಾಗ ಕಲಾವಿದರು ಬಾಬಾ ಪ್ರತಿಷ್ಠಾಪನಾ ಸ್ಥಳದ ಚಿತ್ರ ಕೇಳಿದಾಗ ಗುರುಗಳು ಮಂದಿರದ ಸಹಾಯಕರಿಗೆ ಕರೆ ಮಾಡಿ ಪೋಟೋ ಕ್ಲಿಕ್ಕಿಸಿ ಕಳುಹಿಸಲು ತಿಳಿಸಿದರು. ಪೋಟೋವನ್ನು ಗಮನಿಸಿದ ಕಲಾವಿದರು ಹೇಳಿದ್ದು ಹರ್ಷದ ಮಾತು "ಬಾಬಾ ತೋ ಮಂದಿರ್'ಮೇ ಹೀ ಹೇ" ("ಬಾಬಾ ಮಂದಿರದಲ್ಲಿಯೇ ಇದ್ದಾರೆ") ಮಂದಿರದ ಗೋಡೆಯಲ್ಲಿ ನಗುಮುಖದ ಬಾಬಾ ಕಾಣಿಸುತ್ತಿದ್ದಾರೆ ನೋಡಿ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
