Updated News From Kaup

ಲಾಕ್ಡೌನ್ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ

Posted On: 06-10-2020 10:40AM

ಕೊರೊನಾ ಮಹಾಮಾರಿಯ‌ ಈ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ :- ರೋ| ಪಿ ಎಚ್ ಎಫ್ ಡಾ| ಅರುಣ್ ಹೆಗ್ಡೆ.

ಬೆಳ್ಮಣ್ ರೋಟರಿ ಸಂಸ್ಥೆಯ ೨ನೇ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಲಯ ೫ರ ಮಾಜಿ ವಲಯ ಸೇನಾನಿ ರೋ| ಅರುಣ್ ಹೆಗ್ಡೆ ಬೆಳ್ಮಣ್ ರೋಟರಿ ಸಂಸ್ಥೆಯ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ರೋ| ಪ್ರದೀಪ್ ಶೆಟ್ಟಿ, ರೋ| ನವೀನ್ ಶೆಣೈ ಹಾಗೂ ರೋ| ಮರ್ವಿನ್ ಮೆಂಡೋನ್ಸಾ ಇವರ ಹುಟ್ಟು ಹಬ್ಬಗಳನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವಲಯ‌ ೫ರ ಮಾಜಿ ಸಾಹಯಕ ಗವರ್ನರ್ ರೋ| ಸೂರ್ಯಕಾಂತ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ರೋ| ವಿಘ್ನೇಶ್ ಶೆಣೈ ನಿರೂಪಿಸಿ , ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಬೆಳ್ಮಣ್ಮೀನ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ರೋ| ಪ್ರದೀಪ್ ಶೆಟ್ಟಿ, ರೋ| ನವೀನ್ ಶೆಣೈ ಹಾಗೂ ರೋ| ಮರ್ವಿನ್ ಮೆಂಡೋನ್ಸಾ ಪ್ರಾಯೋಜಿಸದರು .

111 ಸವಂತ್ಸರ ಪೂರೈಸಿದ ಹಿರಿಯ ಜೀವಕ್ಕೆ ರೋಟರಿ ಬೆಳ್ಮಣ್ ವತಿಯಿಂದ ಸಮ್ಮಾನ

Posted On: 05-10-2020 02:02AM

ರೋಟರಿ ಕ್ಲಬ್ ಬೆಳ್ಮಣ್ ಇಂದು ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ 111ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಸೂಡ ನಿವಾಸಿ ನರ್ಸಿ ಮೂಲ್ಯ ಇವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ 5 ರ ಮಾಜಿ ಸಾಹಯಕ ಗವರ್ನರ್ ರೋ| ಪಿ ಎಚ್ ಎಫ್ ಸೂರ್ಯಕಾಂತ ಶೆಟ್ಟಿ ಗೌರವಾರ್ಪಣೆ ಕಾಯಕವನ್ನು ನಡೆಸಿಕೊಟ್ಟರು. ಅತಿಥಿಗಳಾಗಿ ವಲಯ 5 ರ ವಲಯ ಸೇನಾನಿ ರೋ| ಸುರೇಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೂರ್ವಾಧ್ಯಕ್ಷ ರೋ| ಪಿ ಎಚ್ ಎಫ್ ರನೀಶ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯ ರಾಜೇಶ್ ಸಾಲ್ಯಾನ್ ಹಾಗೂ ನರ್ಸಿ ಮೂಲ್ಯ ಇವರ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನ ,ದೈವಸ್ಥಾನ ,ಚಾವಡಿ, ಮನೆ ಹೆಸರನ್ನು ತುಳುವಿನಲ್ಲಿ ಬರೆಯೋಣ

Posted On: 05-10-2020 01:55AM

ತುಳು ಭಾಷೆಯ ಲಿಪಿಯನ್ನು ಆಸಕ್ತಿಯಿಂದ ಗಮನಿಸುವ , ಕಲಿಯುವ , ಬರೆಯುವ ,ಬರೆಯಿಸುವ ಒಂದು‌‌ ಅಭಿಯಾನ‌ ಆರಂಭವಾಗಿದೆ. ನಾವು ಮಾತನಾಡುವ ಭಾಷೆಯನ್ನು ಅದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವಿದೆ - ಅವಕಾಶಇತ್ತು ; ಆದರೆ ನಾವದನ್ನು ಶತಮಾನಗಳಷ್ಟು ಹಿಂದೆಯೇ ಮರೆತಿದ್ದೆವು ಅಥವಾ ಕಲಿಯುವ ಕುರಿತು ನಿರ್ಲಕ್ಷ್ಯ ತಾಳಿದ್ದೆವೋ ಗೊತ್ತಿಲ್ಲ. ಅಂತೂ ತುಳುಲಿಪಿ‌ ಬಳಕೆಯಿಂದ ಮರೆಯಾಗಿತ್ತು .

ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಸ್ವತಃ ತುಳುಲಿಪಿ ಕಲಿತು‌ ಅದನ್ನು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳಿಗೆ ಕಲಿಸುವ ಕೆಲಸವನ್ನು ಆರಂಭಿಸಿದ್ದಾರೆ . ಕೆಲವು ಸಂಘಟನೆಗಳೂ ಬರೆಯುವ - ಕಲಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಕಾಣುತ್ತೇವೆ . ಈ ಬೆಳವಣಿಗೆ ಸಂತೋಷದ ಸಂಗತಿ .
ತುಳುವಿನಲ್ಲಿ ಒಂದು ಗಾದೆ ಇದೆ : "ಉಡಲ್ ಡ್ ಪುಟ್ಟೊಡು ಬುದ್ಧಿ ,ಕಡಲ್ ಡ್ ಪುಟ್ಟೊಡು ಗಾಳಿ". 'ಮನಸ್ಸಿನಲ್ಲಿ ಬುದ್ಧಿ ಹುಟ್ಟಬೇಕು (ಬರಬೇಕು) ,ಕಡಲಿನಲ್ಲಿ ಗಾಳಿ ಹುಟ್ಟಬೇಕು' . ಹೀಗೆ ಸಹಜವಾಗಿ ತುಳುಭಾಷೆಯ ಮೇಲಿನ ಅಭಿಮಾನ‌ ತುಳುವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ , ಕಲಿಯಲೇ ಬೇಕೆಂಬ ಹಠದಿಂದ ನಮ್ಮ ಯುವಕರು ಕಲಿತು ಮಕ್ಕಳಿಗೆ ಕಲಿಸುತ್ತಿದ್ದಾರೆ .ಈ ಅಭಿಯಾನ ತನ್ನಿಂದತಾನೆ ಆರಂಭವಾದದ್ದು , ಮನಃಪೂರ್ವಕ ತೊಡಗಿದ್ದು .ಇದು ಖಂಡಿತ ಮುಂದುವರಿಯುತ್ತದೆ . ನಾವು ಪ್ರೋತ್ಸಾಹಿಸೋಣ .
ಯುವಕರು ,ಮಕ್ಕಳು ಹೆಚ್ಚಿನ ಪ್ರಯತ್ನಗಳಿಲ್ಲದೆ ಕಲಿಯುತ್ತಾರೆ . ಅವರು ಕಲಿಯುವ ಬದುಕಿನ ಅವಧಿಯಲ್ಲಿ ಈ ಉಮೇದು ಹುಟ್ಟಿಕೊಂಡಿದೆ .ಆದರೆ ಹಿರಿಯರು ,ಹಿರಿಯ ನಾಗರಿಕರು ತುಳುಲಿಪಿಯನ್ನು ಸುಲಭವಾಗಿ ಕಲಿಯಲಾಗದು .ಅದಕ್ಕೆ ಮಕ್ಕಳೊಟ್ಟಿಗೆ ಕುಳಿತು ತಮ್ಮ ಹೆಸರನ್ನಾದರೂ ಬರೆಯಲು ಕಲಿಯಬೇಕು .ಹಿರಿಯರು ಇಷ್ಟು ಬರೆಯಲಾರಂಭಿಸುವಾಗ ನಿಮ್ಮ ಮನೆ ಯುವಕರು ,ಮಕ್ಕಳು ತುಳುಲಿಪಿಯನ್ನು ಕನ್ನಡ ,ಇಂಗ್ಲೀಷ್ ,ಹಿಂದಿಯಂತೆಯೇ ಸರಾಗವಾಗಿ ಬರೆಯುತ್ತಾರೆ . ಮುಂದೊಂದು ದಿನ ತುಳುಲಿಪಿಯಲ್ಲಿ ಕವನ , ಕತೆ , ನಾಟಕ ಹೀಗೆ ವಿವಿಧ ಪ್ರಕಾರದ ತುಳು ಸಾಹಿತ್ಯ ಸೃಷ್ಟಿಯಾಗುತ್ತದೆ .ಆಗ ಅದನ್ನು ಓದುವವರೂ ಇರುತ್ತಾರೆ .ಇದು ಈಗ ಆರಂಭವಾದ ಈ ಅಭಿಯಾನದ ಭವಿಷ್ಯ.

ಹಿರಿಯರು ,ಹಿರಿಯ ನಾಗರಿಕರು ಸೇರಿ ನಿಮ್ಮ ಹೆಸರು ಬರೆಯಲು ಕಲಿಯಿರಿ. ಇದರೊಂದಿಗೆ ಊರಿನ‌ ದೇವಸ್ಥಾನಗಳ , ದೈವ - ಬೂತ ಸ್ಥಾನಗಳ‌ , ಚಾವಡಿಗಳ , ಮನೆಗಳ , ಸಂಘ - ಸಂಸ್ಥೆಗಳ , ರಸ್ತೆಗಳ ಹೆಸರನ್ನು ತುಳುಲಿಪಿಯಲ್ಲಿ ಬರೆಯಿಸಿರಿ . ಕನ್ನಡದ ನಾಮಫಲಕದ ಬಳಿಯಲ್ಲೆ ಹಾಕಿರಿ . ಆಗ ಆಸಕ್ತಿ , ಕುತೂಹಲ ಮೂಡುತ್ತದೆ ,ಇದು ಏನು ಮಲಯಾಳವಾ ......ಹೀಗೆ ಹತ್ತಾರು ಪ್ರಶ್ನೆಗಳು ಕೇಳಿಸುತ್ತವೆ . ಆಗ "ಇದು ನಾವು ಮಾತನಾಡುವ ಭಾಷೆ" ಆ ಭಾಷೆಯಲ್ಲಿಯೇ ಬರೆದದ್ದು ಎಂಬ ವಿವರಣೆ ಕೊಡುವ . ಇದು ತುಳುಲಿಪಿಯನ್ನು ಜನಮಾನಸದಲ್ಲಿ ಸ್ಥಾಪಿಸುವ ಪ್ರಯತ್ನವಾಗುತ್ತದೆ .ಇದು ನಾಮಫಲಕಕ್ಕೆ ಅಷ್ಟೆ ಸೀಮಿತವಾಗದು . ಏಕೆಂದರೆ ನಮ್ಮ ಯುವಕರು ,ಮಕ್ಕಳು ತುಳು ಕಲಿಯಲು ಆರಂಭಿಸಿದ್ದಾರೆ.

ತುಳುವಿನಲ್ಲಿ ಬರೆದ ಕತೆಗಳಿವೆ , ಕಾವ್ಯಗಳಿವೆ , ಪುರಾಣಗಳಿವೆ , ಮಂತ್ರಗಳಿವೆ ,ವೈದಿಕವಿಧಿಯಾಚರಣೆಯ ಪ್ರಯೋಗ ವಿಧಾನಗಳಿರುವ ತಾಳೆಗರಿ - ಪುಸ್ತಕಗಳಿವೆ , ಜಾತಕಗಳಿವೆ , ಮನೆಮನೆಗಳಲ್ಲಿ ತಾಳೆಗರಿಯಲ್ಲಿ ಬರೆದ ಅಮೂಲ್ಯ ಸಾಹಿತ್ಯಗಳಿವೆ ಇವೆಲ್ಲ ಕಾಲ ಗರ್ಭಸೇರುತ್ತಿವೆ ,ಗೆದ್ದಲು ತಿಂದು ನಾಶವಾಗುತ್ತವೆ . ತುಳುಲಿಪಿ ಕಲಿಯುವ - ಕಲಿಸುವ ಅಭಿಯಾನದಿಂದ ನಮ್ಮಲ್ಲಿ ಇದ್ದು ,ಅವಗಣಿಸಲ್ಪಟ್ಟು ಮನೆಯಂಗಳದ ತೆಂಗಿನ ಮರದಬುಡ ಅಥವಾ ಗೊಬ್ಬರದ ಗುಂಡಿ ಸೇರುವ ಮೊದಲು ಇಂತಹ ತುಳುಲಿಪಿಯ ತಾಳೆಗರಿಗಳ ಕಟ್ಟು ಅಥವಾ ಪುಸ್ತಕಗಳು ಖಂಡಿತಾ ಕಾಪಿಡಲ್ಪಡುತ್ತವೆ .
ಸುಮಾರು ಒಂದುಸಾವಿರ ವರ್ಷಗಳಷ್ಟು ಹಿಂದೆಯೇ ಆಳುಪ ಅರಸರು ಬರೆಯಿಸಿದ ತುಳು ಶಾಸನ ಸಿಗುತ್ತದೆ . ಹನ್ನೊಂದನೇ ಶತಮಾನದ ಶಾಸನ ಲಭ್ಯವಿದ್ದು ಓದಲಾಗಿದೆ .ಹನ್ನೆರಡನೇ ಶತಮಾನದ ಶಾಸನ ಇವೇ ಮುಂತಾದುವು ಪ್ರಾಚೀನ ಶಾಸನಗಳು .ಹೀಗೆ 50-60 ಸಂಖ್ಯೆಯ ತುಳು ಶಾಸನಗಳು ಸಿಕ್ಕಿವೆ.ಇವುಗಳಲ್ಲಿ ಗೋಸಾಡ, ಕಿದೂರು, ಅನಂತಪುರ, ಅನಂತಾಡಿ, ಕೊಡಂಗಳ, ಕೊಳನಕೋಡು, ಕುಲಶೇಖರ ಇತ್ಯಾದಿ ತುಳು ಲಿಪಿಯ ಪ್ರಾಚೀನ ಶಾಸನಗಳು ಮುಖ್ಯವಾಗುತ್ತವೆ ಎಂದು ಅವುಗಳನ್ನು ಓದಿದ ತುಳುಲಿಪಿ ಸಂಶೋಧಕ ಸುಬಾಸ್ ನಾಯಕ್ ವಿವರ ನೀಡುತ್ತಾರೆ .‌
ಹದಿಮೂರನೇ ಶತಮಾನದಲ್ಲಿ ಆಚಾರ್ಯಮಧ್ವರು ಹೇಳಿದ ಅವರ ಶಿಷ್ಯ ಹೃಷೀಕೇಶ ತೀರ್ಥರು ಬರೆದ ಅಮೂಲ್ಯ ಸರ್ವಮೂಲ ಗ್ರಂಥ ತುಳುಲಿಪಿಯಲ್ಲಿದೆ . ಅಷ್ಟು ಸುಂದರವಾದ ತುಳುಲಿಪಿಯನ್ನು ತಾನು ಕಂಡಿಲ್ಲ ಎಂದು ನೂರಾರು ತುಳುಲಿಪಿಯ ಗ್ರಂಥಗಳನ್ನು ಸಂಪಾದಿಸಿದ ಗೋವಿಂದಾಚಾರ್ಯರು ಹೇಳುತ್ತಾರೆ . ಉಡುಪಿಯ ಮಠಗಳಲ್ಲಿ ತುಳುಲಿಪಿಯ ಗ್ರಂಥಗಳಿವೆ ಎಂದು ಇನ್ನೂರು ವರ್ಷಗಳಷ್ಟು ಹಿಂದೆಯೇ ಕರ್ನಲ್ ಕಾಲಸ್ ಮೆಕೆಂಜಿ ಸಂಗ್ರಹಿಸಿದ ಕಫಿಯತ್ತುಗಳಿಂದ ಮಾಹಿತಿ ಸಿಗುತ್ತವೆ .ಆದರೆ ಈ ವಿವರ ಇವತ್ತಿಗೂ ಪ್ರಚಾರವಾಗಲೇ ಇಲ್ಲ . ಲಿಪಿಯ ಕುರಿತಾದ ಅಧ್ಯಯನಕ್ಕೆ ಈ ಸಂಗ್ರಹ ಉಪಯುಕ್ತವಾದೀತು . ಹತ್ತೊಂಬತ್ತನೇ ಶತಮಾನದಲ್ಲಿ ಬರ್ನರ್ ಕೊಟ್ಟ ತುಳುಲಿಪಿಯೂ ಪರಿಗಣಿಸಲೇ ಬೇಕು.
ಮಂತ್ರವಾದರೆ ಏನು ತುಳುಲಿಪಿ ಎಂಬುದು ಮುಖ್ಯವಾಗಬೇಕು. ಯಾರಲ್ಲಿದೆ ಎನ್ನುವುದಕ್ಕಿಂತಲೂ ಇರುವುದು ತುಳುಲಿಪಿಯ ಬರೆಹ ಎಂಬ ಹೃದಯವಂತಿಕೆ ಬೇಕು . ಈಗಲೂ ಹಿರಿಯ ವೈದಿಕರು ತುಳುಲಿಪಿಯಲ್ಲೆ ಬರೆಯುತ್ತಾರೆ ,ಓದುತ್ತಾರೆ. ಅವರು ವೈದಿಕರು ಎನ್ನುವುದಕ್ಕಿಂತಲೂ ಅವರು ತುಳುಲಿಪಿ ಬಲ್ಲವರು ,ಅವರು ನಮ್ಮವರು ಎಂಬ ಭಾವನೆ ಆಸಕ್ತರಿಗೆ , ಅಧ್ಯಯನಕಾರರಿಗೆ ಅಗತ್ಯ .ಲಿಪಿಯಲ್ಲಿರುವ ಪಾಠಾಂತರಗಳನ್ನು ಗಮನಿಸಿ ಲಿಪಿಯ ವಿನ್ಯಾಸ ಸ್ಥಿರೀಕರಣಕ್ಕೆ ಯತ್ನಿಸುವ ಕೆಲಸಕ್ಕೆ ಲಭ್ಯ ಲಿಪಿಗಳ ವಿಸ್ತೃತ ಅವಲೋಕನ ಬೇಕು . .ಕಳೆದ ಶತಮಾನದಲ್ಲಿ ವೆಂಕಟರಾಜ ಪುಣಿಂಚತ್ತಾಯರು ಸಂಶೋಧಿಸಿದ ತುಳುಲಿಪಿಯ ಕಾವ್ಯಗಳನ್ನು ಹಾಗೂ ಅಕ್ಷರಗಳನ್ನು ನೆನಪಿಸಿಕೊಳ್ಳಬೇಡವೇ . ಇಲ್ಲಿ ಪುಣಿಂಚತ್ತಾಯರು ಮುಖ್ಯವಲ್ಲ ,ಅವರು ಮಾಡಿದ ತುಳುವಿನ ಕೆಲಸ ಮುಖ್ಯ .
ಒಂದು ರಾಜಾಜ್ಞೆ , ಆಜ್ಞೆ ,ಯಾವುದೋ ಒಂದು ಘಟನೆಯನ್ನು , ವೀರರಕಲ್ಲುಗಳನ್ನು ಶಾಸನವಾಗಿ ಹಾಕುವಾಗ ,ಅದರ ಉದ್ದೇಶ ಪ್ರಚಾರವೇ ತಾನೆ .ಪ್ರಚಾರ ಎಂದರೆ ಬಹುತೇಕ ಜನಮಂದಿಗೆ ತಿಳಿಯಲು ತಾನೆ .
ಹಾಗಾಗಿ ಓದಲು ಬರುತ್ತಿದ್ದ ಜನ ಇದ್ದರು ಎಂಬುದು ಸ್ಪಷ್ಟವಾಗದೆ . ಲಿಪಿ ಕೇವಲ ವೈದಿಕರಿಗೆ ಸೀಮಿತವಾಗಿತ್ತು ಎಂಬುದು ಒಪ್ಪಲಾಗದು ‌.ಸಮಾಜದ ಸಂವಹನ ಮಾಧ್ಯಮವಾಗಿದ್ದ ಭಾಷೆಯಲ್ಲವೆ ? ಸಮಾಜದ ಶೇ.40 ಮಂದಿಗಾದರೂ ಗೊತ್ತಿದ್ದಿರಲೇ ಬೇಕು .ಇದು ನನ್ನ ವಿವರಣೆ.
ಸರಿಯಾಗಿರಬೇಕೆಂದಿಲ್ಲ .
ಇತಿಹಾಸ ಸಂಶೋಧಕರು ತುಳುಲಿಪಿಯ ಶಾಸನಗಳನ್ನು ಹುಡುಕಿ ಓದಿದ್ದಾರೆ , ಕಾಲ ನಿರ್ಣಯಿಸಿದ್ದಾರೆ . ಭಿನ್ನವಾದ ತುಳುವಿನ ಅಕ್ಷರ‌ ವಿನ್ಯಾಸವನ್ನು ಗುರುತಿಸಿದ್ದಾರೆ .‌ಈ ಮಾಹಿತಿಯು ಲಿಪಿಯ ಸ್ವರೂಪದ ನಿರ್ಧಾರಕ್ಕೆ ಪೂರಕವಾದುದು .ಅಂತೂ ತುಳುಲಿಪಿ ಜನಪ್ರಿಯವಾಗಲಿ , ಎಲ್ಲರೂ ಬರೆಯುವ - ಓದುವ ದಿನಗಳು ಬರಲಿ .
• ಕೆ.ಎಲ್.ಕುಂಡಂತಾಯ.
[ಈ ಬರಹವನ್ನು ನಾನು ಕನ್ನಡದಲ್ಲಿ ಏಕೆ ಬರೆದೆ : ತುಳು ಭಾಷೆ ಮತ್ತು ಕನ್ನಡ ಲಿಪಿ ಬರುವವರಿಗೆ ಮಾತ್ರ ಸೀಮಿತವಾಗದೆ , ಕನ್ನಡ ಓದಲು ಬರುವ ಕನ್ನಡಿಗರಿಗೂ ಈ ಮಾಹಿತಿ ಸಿಗಲೆಂಬುದು ನನ್ನ ಉದ್ದೇಶ. ತುಳುವಿನಲ್ಲೂ ಬರೆದು ಹಾಕುತ್ತೇನೆ.]

ಇನ್ನಂಜೆಯಲ್ಲೊಂದು ಉಪಯೋಗಕ್ಕೆ ಬಾರದ ಎಟಿಎಮ್

Posted On: 05-10-2020 01:44AM

ಬ್ಯಾಂಕುಗಳು ವಿಲೀನ ಪ್ರಕ್ರಿಯೆ ‌ಒಂದೆಡೆ ಗ್ರಾಹಕರಿಗೆ ಕೊಂಚ ಕಿರಿಕಿರಿ ಎನಿಸಿದರೂ ತಮ್ಮ ಅಗತ್ಯತೆಗೆ ಬೇಕಾದ ಹಣವನ್ನು ತೆಗೆಯಲು ಎಟಿಮ್ ಗಳನ್ನು ಬಳಸುವುದು ಸಾಮಾನ್ಯ. ಆದರೆ ಶಂಕರಪುರ ಬ್ಯಾಂಕ್ ಆಫ್ ಬರೋಡದ ಇನ್ನಂಜೆಯ ಎಟಿಎಮ್ ಅಗತ್ಯಕ್ಕೆ ಹಣ ಬೇಕಾದವರಿಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಅದೆಷ್ಟೋ ದಿವಸದಿಂದ ಸ್ಥಬ್ದವಾಗಿದ್ದು ಅದರ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನವರಿಗೆ ತಿಳಿಸಿದರೂ ಏನೂ ಪ್ರಯೋಜನವಾಗದ ಸ್ಥಿತಿಯಾಗಿದೆ. ಇನ್ನಾದರು ಸಂಬಂಧಪಟ್ಟ ಬ್ಯಾಂಕ್ ನವರು ಗ್ರಾಹಕರ ಹಿತದೃಷ್ಟಿಯಿಂದ ಇನ್ನಂಜೆಯ ಎಟಿಎಮ್ ನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೋಟೆಲ್ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ ಅಗ್ರಿಪಾಡ ಇನ್ನಿಲ್ಲ

Posted On: 05-10-2020 12:29AM

ಮುಂಬೈ ಅಗ್ರಿಪಾಡ ನಿವ್ ಉಡುಪಿ ನಿಕೇತನ್ ಮಾಲಕ ಹಾಗೂ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ (67) ಕಳೆದ 03/10/2020 ರ ಶನಿವಾರ ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.
ಮಡುಂಬು ಪಡ್ನಗುತ್ತು, ಪಡುಮನೆ ಸುಶೀಲ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ದಂಪತಿಗಳ ಮಗನಾಗಿ 1953 ರಂದು ಜನಿಸಿದ ಗಂಗಾಧರ್ ಎನ್ ಶೆಟ್ಟಿಯವರು ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

ನಿವ್ ಉಡುಪಿ ನಿಕೇತನ್ ಹೋಟೆಲ್ ಬರೋಬ್ಬರಿ 60 ವರ್ಷಗಳ ಹಿಂದೆ ದಿವಂಗತ ನಾರಾಯಣ ಶೆಟ್ಟಿಯವರು ಸ್ಥಾಪಿಸಿದ ಹೋಟೆಲ್ ಆಗಿದ್ದು, ಇದನ್ನು ಅವರ ಹಿರಿಯ ಮಗನಾದ ಗಂಗಾಧರ್ ಎನ್ ಶೆಟ್ಟಿಯವರು ಮುನ್ನಡೆಸಿಕೊಂಡು ಬರುತ್ತಿದ್ದರು, ಈ ಹೋಟೆಲ್ ಸಾವಿರಾರು ಮಂದಿ ಕೆಲಸಗಾರರಿಗೆ ಉದ್ಯೋಗ ನೀಡಿದ ಸಂಸ್ಥೆಯಾಗಿದ್ದು.

ಮೃತರು ಸಹೋದರಂದಿರು, ಸಹೋದರಿ ಸೇರಿದಂತೆ ಧರ್ಮಪತ್ನಿ ಸುಜಾತ ಶೆಟ್ಟಿ, ಮಕ್ಕಳಾದ ಅಕ್ಷಯ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಸೊಸೆಯಂದಿರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇವೆ.

ಕಟಪಾಡಿ ಕಾರುಣ್ಯ ವೃದಾಶ್ರಮಕ್ಕೆ ಕಂಪ್ಯೂಟರ್ ಟೇಬಲ್ ಕೊಡುಗೆ

Posted On: 04-10-2020 09:11PM

ಉಚಿತ ಕಂಪ್ಯೂಟರ್ ಟೇಬಲ್ ಕೊಡುಗೆ ದಿನಾಂಕ 04.10.2020 ಇಂದು "ಆಸರೆ" ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಭೇಟಿನೀಡಿ ಉಚಿತ ಕಂಪ್ಯೂಟರ್ ಟೇಬಲ್ ಅನ್ನು ಕೊಡುಗೆಯಾಗಿ ನೀಡಲಾಯಿತು. "ಆಸರೆ" ತಂಡದ ಅಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಕಂಪ್ಯೂಟರ್ ಟೇಬಲ್ ಅನ್ನು ಹಸ್ತಾಂತರಿಸಿದರು. ಟೇಬಲ್ ಮಾಡಲು ಸಹಕರಿಸಿದ ಅಶೋಕ್ ಆಚಾರ್ಯ ಬಸ್ತಿ, ಹಿರಿಯಡ್ಕ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.

ಇನ್ನಂಜೆ ರೋಟರಿ ಸಮುದಾಯದಳ ಉದ್ಘಾಟನೆ ಮತ್ತು ಪದಪ್ರಧಾನ ಸಮಾರಂಭ

Posted On: 04-10-2020 01:22PM

ರೋಟರಿ ಶಂಕರಪುರ ವಲಯ-5 ರೋಟರಿ ಜಿಲ್ಲೆ 3182 ನೂತನ ರೋಟರಿ ಸಮುದಾಯ ದಳ ಇದರ ಉದ್ಘಾಟನಾ ಮತ್ತು ಪದಪ್ರಧಾನ ಸಮಾರಂಭ ಇಂದು ಇನ್ನಂಜೆಯಲ್ಲಿ ನಡೆಯಿತು.

ಇದರ ನೂತನ ಅಧ್ಯಕ್ಷರಾಗಿ Rcc ಪ್ರಶಾಂತ್ ಶೆಟ್ಟಿ ಮಂಡೇಡಿ ಹಾಗೂ ಕಾರ್ಯದರ್ಶಿಯಾಗಿ Rcc ಮನೋಹರ್ ಕಲ್ಲುಗುಡ್ಡೆ ಹಾಗೂ ದಂಡಪಾಣಿಯಾಗಿ Rcc ಗಣೇಶ್ ಆಚಾರ್ಯ ಇನ್ನಂಜೆ ಆಯ್ಕೆಯಾಗಿರುತ್ತಾರೆ.

ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ ಗವರ್ನರ್ ನವೀನ್ ಅಮೀನ್ ಶಂಕರಪುರ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ವ್ಯಕ್ತಿತ್ವ ವಿಕಸನಕ್ಕೆ ರೋಟರಿ ಕ್ಲಬ್ ಸಹಾಯ ಮಾಡುತ್ತದೆ ಎಂದರು,
ಸಭಾಪತಿ ರೋಟರಿಯನ್ ಮಾಲಿನಿ ಶೆಟ್ಟಿ ಇನ್ನಂಜೆ ರೋಟರಿ ಕ್ಲಬ್ ನ ಉದ್ದೇಶಗಳನ್ನು ತಿಳಿಸಿದರು. ಡಿಸ್ಟ್ರಿಕ್ ಗವರ್ನರ್ ನಾಗರಾಜ್ ಎಚ್ ಎನ್ ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಅವಕಾಶಗಳನ್ನು ತೆರೆದಿಡುತ್ತದೆ, ಉದ್ಯೋಗ ಉನ್ನತಿಗಾಗಿ ರೋಟರಿಯು ಸಹಕರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರವಿವರ್ಮ ಶೆಟ್ಟಿ ಇನ್ನಂಜೆ, Rcc ಜಯರಾಮ್ ರೊಡ್ರಿಗಸ್, Rcc ವಿಕ್ಟರ್ ಮಾರ್ಟಿಸ್, Rcc ಸಂದೀಪ್ ಬಂಗೇರ ಶಂಕರಪುರ,Rcc ಹರೀಶ್ ಕುಲಾಲ್, ಕೊಪ್ಪ ಆನಂದ್ ಶೆಟ್ಟಿ, Rcc ಚಂದ್ರ ಪೂಜಾರಿ, ದಿವೇಶ್ ಶೆಟ್ಟಿ ಇನ್ನಂಜೆ, ಗ್ಲಾಡ್ಸನ್ ಕುಂದರ್ ಹಾಗೂ ಮತ್ತಿತರು ಪಾಲ್ಗೊಂಡಿದ್ದರು.
ನಂತರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ದಂಡಪಾಣಿಯವರಿಗೆ ಪದಪ್ರಧಾನ ಮಾಡಲಾಯಿತು.

ಶಂಕರಪುರ ರೋಟರಿ ಗವರ್ನರ್ ವಿಕ್ಟರ್ ಮಾರ್ಟಿಸ್ ಸ್ವಾಗತಿಸಿ, ಕಾರ್ಯದರ್ಶಿ Rcc ಮನೋಹರ್ ಕಲ್ಲುಗುಡ್ಡೆ ಇವರು ಧನ್ಯವಾದಗೈದರು.
ವರದಿ : ವಿಕ್ಕಿ ಪೂಜಾರಿ ಮಡುಂಬು

ಸ್ವಚ್ಛತೆ ಮನೆಯಿಂದಲೇ ಆರಂಭವಾಗಲಿ - ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ

Posted On: 02-10-2020 03:52PM

ಉಡುಪಿ :- ಸ್ವಚ್ಚತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು.ಪ್ರತಿ ಪ್ರಜೆಯೂ ಸ್ವಯಂಪ್ರೇರಿತನಾಗಿ ತನ್ನ ಸಮಾಜವನ್ನು ಶುಚಿಯಾಗಿಟ್ಟುಕೊಂಡರೆ ಆಗ ಯಾವುದೋ ಸಂಘ ಸಂಸ್ಥೆಗಳು ಸ್ವಚ್ಛಭಾರತ ಅಭಿಯಾನ ಮಾಡುವ ಅಗತ್ಯವೇ ಇಲ್ಲ ಎಂದು ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು.

ಅವರು ಕೆಮ್ಮಣ್ಣು ಸಕಾ೯ರಿ ಪ.ಪೂ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ಗಾಂಧಿ ಜಯಂತಿ ಆಚರಣಿ ಕಾಯ೯ಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ನಾವು ಬದಲಾದರೆ ಮಾತ್ರ ದೇಶ ಬದಲಾಗುವುದು ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ನಂದಕಿಶೋರ್, ಶಾಲಾ ಪ್ರಾಂಶುಪಾಲರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ತೋನ್ಸೆ ಗ್ರಾ.ಪಂ, ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘ, ನಿಮ೯ಲ ತೋನ್ಸೆ, ಸೌಹಾಧ೯ ಸಮಿತಿ', ಸ್ವಚ್ಚ ಭಾರತ್ ಫ್ರೆಂಡ್ಸ್,ಲಯನ್ಸ್ ರೋಟರಿ ಕ್ಲಬ್, ರಿಕ್ಷಾ ಚಾಲಕರು ಶ್ರೀ.ಕ್ಷೇ.ಧ.ಗ್ರಾ ಯೋಜನೆ,ಪುಟ್ ಬಾಲ್ ಫ್ರೆಂಡ್ಸ್, ಮುಂತಾದವರು ಸಹಕರಿಸಿದರು.

ಇನ್ನಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಂದ ಇನ್ನಂಜೆ ಬಾಲವನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Posted On: 02-10-2020 03:14PM

ಇನ್ನಂಜೆ ಗ್ರಾಮ ಪಂಚಾಯತ್ ಪ್ರತಿ ಬಾರಿಯೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಹಾಗುಹೋಗುಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡು ಮಾದರಿ ಗ್ರಾಮ ಅನಿಸಿಕೊಂಡಿದೆ.

ಇಂದು 151 ನೇ ಗಾಂಧಿ ಜಯಂತಿಯ ಪ್ರಯುಕ್ತ ಇನ್ನಂಜೆ ಬಾಲವನದಲ್ಲಿ ಬೆಳೆದಿದ್ದ ಗಿಡ, ಬಳ್ಳಿ, ಪೊದೆಗಳನ್ನು ಕಡಿಯುವುದರ ಮೂಲಕ ಸ್ವಚ್ಛ ಇನ್ನಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರಾಜೇಶ್ ಶೆಣೈ, ಮಾಜಿ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ, ಇನ್ನಂಜೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಶ್ರೀ ಚಂದ್ರಶೇಖರ ಸಾಲಿಯಾನ್. ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಪ್ರೀತಿ ಶೆಟ್ಟಿ, ಹರೀಶ್, ಸಂದೀಪ್, ವಜ್ರೇಶ್, ಪವಿತ್ರ, ರೋಕೆಶ್, ಗ್ರಾಮಸ್ಥರು ಆದ ಅರುಣ್ ಶೆಟ್ಟಿ, ಗಣೇಶ್ ಆಚಾರ್ಯ, ಚಿಂತನ್ ಉಪಸ್ಥಿತರಿದ್ದರು

ವರದಿ : ವಿಕ್ಕಿ ಪೂಜಾರಿ ಮಡುಂಬು
NAMMA KAUP NEWS

ಮಂಗಳೂರು ಡ್ರಗ್ಸ್ ಪ್ರಕರಣ ಭೇದಿಸುವರೇ ನೂತನ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ?

Posted On: 01-10-2020 06:35PM

ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರ ತಂಡದಲ್ಲಿದ್ದ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ ರಾಜೇಂದ್ರ ನಾಯಕ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಕಾಪು ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ಶಿವಪ್ರಕಾಶ್ ಅವರ ಸ್ಥಾನಕ್ಕೆ ನಿಯೋಜಿಸಲಾಗಿದೆ.

ಡ್ರಗ್ಸ್ ಜಾಲವನ್ನು ಬೇಧಿಸಲು ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಲ್ಪಟ್ಟಿರುವ ನೈಜೀರಿಯಾದ ಪ್ರಜೆ ಫ್ರಾಂಕ್ ಎಂಬಾತನ ವಿಚಾರಣೆ ತೀವ್ರಗೊಳಿಸಿದ್ದಾರೆ. ಈತ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಸ್ಥಳಗಳಲ್ಲಿ ತಪಾಸಣೆ ನಡೆಸುವ ಜೊತೆಗೆ ಬೆಂಗಳೂರಿನಲ್ಲಿ ಆತನೊಂದಿಗೆ ಸಂಪರ್ಕದಲ್ಲಿದ್ದ ಇತರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ ಸಂಗ್ರಹಿಸಿಟ್ಟುಕೊಂಡಿರಬಹುದಾದ ಮಾದಕ ಪದಾರ್ಥಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಗೂ ಪೊಲೀಸರು ಮುಂದಾಗಿದ್ದಾರೆ.

ಬೆಟ್ಟಿಂಗ್, ಸಿನಿಮಾಕ್ಕೂ ಡ್ರಗ್ಸ್ ನಂಟು:
ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳು ಮತ್ತು ಸಿನಿಮಾರಂಗದ ಕೆಲವರಿಗೂ ಮಂಗಳೂರಿನ ಡ್ರಗ್ಸ್ ಪ್ರಕರಣದೊಂದಿಗೆ ನಂಟಿದೆ. ಬಂಧಿಸಲ್ಪಟ್ಟಿರುವವರು ಡ್ರಗ್ಸ್ ಪಾರ್ಟಿ ನಡೆಸಿರುವುದು ಅದರಲ್ಲಿ ಕೆಲವು ಮಂದಿ ಬುಕ್ಕಿಗಳು ಮುಂಬೈ, ಬೆಂಗಳೂರಿನ ಸಿನಿಮಾ ಕ್ಷೇತ್ರದವರು ಕೂಡ ಪಾಲ್ಗೊಂಡಿರುವ ಬಗ್ಗೆ ಪೊಲೀಸರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳದಿಂದ ಗಾಂಜಾ ಪೂರೈಕೆ
ಒಂದೆಡೆ ಸಿಂತೆಟ್ ಡ್ರಗ್ಸ್ ಗಳ ಪೂರೈಕೆ ಜಾಲದ ಹಿಂದೆ ಸಿಸಿಬಿ ಎಕನಾಮಿಕ್ ಎಂ ನಾರ್ಕೊಟಿಕ್ ಪೊಲೀಸರು ಬೆನ್ನು ಬಿದ್ದಿದ್ದು ಇನ್ನೊಂದೆಡೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ಗಾಂಜಾ, ಚರಸ್ ಮೊದಲಾದ ಮಾದಕ ವಸ್ತುಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳೂರಿಗೆ ಕೇರಳ ಶಿವಮೊಗ್ಗ ಮೊದಲಾದೆಡೆಗಳಿಂದ ಭಾರೀ ಪ್ರಮಾಣದಲ್ಲಿ ಸಾಗಾಟವಾಗುತ್ತಿದೆ ಎನ್ನಲಾಗಿದ್ದು ಪ್ರಮುಖ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.