Updated News From Kaup
ಕಾಪು ಲೈಟ್ ಹೌಸ್ ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ
Posted On: 27 Feb 2021, 05:54 PM
ಬ್ರಿಟಿಷ್ ಕಾಲದಲ್ಲಿ ಸ್ಥಾಪನೆಯಾದ ಕಾಪು ಲೈಟ್ ಹೌಸ್ ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ ನೀಡಿ ಬೀಚ್ನ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಪ್ರವಾಸೋದ್ಯಮ ಇಲಾಖೆಯ ಉಪ ಕಾರ್ಯದರ್ಶಿ ಸೋಮಶೇಖರ್ ಬಿ.ಕೆ, ಕೃಷಿ ಇಲಾಖೆಯ ಚಂದ್ರಶೇಖರ್, ಅಧಿಕಾರಿವರ್ಗ ಮತ್ತಿತರರು ಉಪಸ್ಥಿತರಿದ್ದರು.
ಜೈನ ಸಮುದಾಯದಿಂದ ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಹಲ್ಲೆಯ ಖಂಡನೆ
Posted On: 27 Feb 2021, 04:53 PM
ಸರಳ ವ್ಯಕ್ತಿತ್ವದ ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿಯವರು ಭೃಷ್ಟಾಚಾರವನ್ನು ವಿರೋಧಿಸಿದವರು ಅವರ ಮೇಲೆ ಸುಳ್ಳು ಆರೋಪ ಹೊರಿಸಿರುವುದು ಅಕ್ಷಮ್ಯ. ಶಂಕರ್ ರವರ ಸಾಮಾಜಿಕ ಕಳಕಳಿಗೆ ಜೈನ ಬಸದಿಯ ಹೋರಾಟವು ಸಾಕ್ಷಿಯಾಗಿದೆ. ಅವರ ಮೇಲೆ ಹಲ್ಲೆಗೈದವರನ್ನು ಇಷ್ಟರವರೆಗೆ ಬಂಧಿಸದಿರುವುದು ದುರಂತ. ಈ ನಿಟ್ಟಿನಲ್ಲಿ ಜೈನ ಸಮುದಾಯದ ಒಂದಷ್ಟು ಜನ ಒಟ್ಟಾಗಿ ಸದ್ಯದಲ್ಲಿಯೇ ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಮನವಿ ನೀಡಲಿದ್ದೇವೆ ಎಂದು ಜೈನ ಸಮುದಾಯದ ಮುಖಂಡರಾದ ಡಾ. ಆಕಾಶ್ ಜೈನ್ ತಿಳಿಸಿದ್ದಾರೆ.
ಇನ್ನಂಜೆ : ಮಾಚ್೯ 20, 21 ಇನ್ನಂಜೆ ಪ್ರೀಮಿಯರ್ ಲೀಗ್, ಮಾಚ್೯ 27 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
Posted On: 27 Feb 2021, 02:52 PM
ಕಾಪು : ಇನ್ನಂಜೆ ಯುವಕ ಮಂಡಲ ಇನ್ನಂಜೆ ಇವರ ಆಶ್ರಯದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟವರಿಗೆ ಮಾರ್ಚ್ 20, 21 ರಂದು ಇನ್ನಂಜೆ ಶಾಲಾ ಮೈದಾನದಲ್ಲಿ ಇನ್ನಂಜೆ ಪ್ರೀಮಿಯರ್ ಲೀಗ್ ಸೀಮಿತ ಓವರ್ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಇನ್ನಂಜೆ ಯುವಕ ಮಂಡಲ ಟ್ರೋಫಿ - 2021ರೊಂದಿಗೆ ಪ್ರಥಮ ಬಹುಮಾನವಾಗಿ ₹ ಇಪ್ಪತ್ತು ಸಾವಿರ ಮತ್ತು ದ್ವಿತೀಯ ₹ ಹತ್ತು ಸಾವಿರ ಇರಲಿದೆ. ಮಾರ್ಚ್ 27ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ಪ್ರಥಮ ಬಹುಮಾನ ₹ ಹದಿನೈದು ಸಾವಿರ, ದ್ವಿತೀಯ ₹ ಹತ್ತು ಸಾವಿರ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8884565769
ಹಗ್ಗ ಜಗ್ಗಾಟ : ಬೆಳ್ಳೆಯ ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘಕ್ಕೆ ಬಹುಮಾನ.
Posted On: 27 Feb 2021, 02:15 PM
ಕಾಪು : ಬೆಳ್ತಂಗಡಿ ವಿಧಾನ ಸಭಾ ವ್ಯಾಪ್ತಿಯ ಪಾಲಡ್ಕದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರೀಡಾ ಕೂಟದಲ್ಲಿ ಸಾಮಾಜಿಕವಾಗಿ ಕಾಪು ತಾಲೂಕು ಬೆಳ್ಳೆ ಪರಿಸರದಲ್ಲಿ ಜನಾನುರಾಗಿರುವ ಯುವ ಸ್ಫೂರ್ತಿ ಕಲಾ ಹಾಗೂ ಕ್ರೀಡಾ ಸಂಘವು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಚತುರ್ಥ ಸ್ಥಾನ ಪಡೆದುಕೊಂಡಿದೆ. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಭೂತಪೂರ್ವ ಸಾಧನೆಗೈದಿರುವ ಬೆಳ್ಳೆಯ ಈ ತಂಡಕ್ಕೆ ನಮ್ಮ ಕಾಪು ನ್ಯೂಸ್ ತಂಡದ ವತಿಯಿಂದ ಅಭಿನಂದನೆಗಳು.
ಕುಂಜೂರು : ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ತ್ರಿಕಾಲ ಪೂಜೆ, ಅನ್ನಸಂತರ್ಪಣೆ
Posted On: 27 Feb 2021, 02:05 PM
ಕಾಪು ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ಕುಂಜೂರು ಇವರ ಮುಂದಾಳತ್ವದಲ್ಲಿ ಮಾರ್ಚ್ 1, ಸೋಮವಾರದಂದು ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ದಿನದ ತ್ರಿಸಂಧ್ಯಾ ಕಾಲಗಳಲ್ಲಿ ಶ್ರೀ ದುರ್ಗಾಮಾತೆಗೆ ವಿಸ್ತೃತ ವಿಧಿ-ವಿಧಾನ, ಅರ್ಚನೆ-ಪಾರಾಯಣ, ವಿಶೇಷ ಸಮರ್ಪಣೆ, ಬಾಗಿನದಾನ-ಕನ್ನಿಕಾ ಪೂಜೆ, ಅನ್ನಸಂತರ್ಪಣೆ ಮುಂತಾದ ವಿವಿಧ ಉಪಾಸನಾ ಅನುಷ್ಠಾನಗಳೊಂದಿಗೆ ನೆರವೇರುವ ಆರಾಧನೆಯಾದ ತ್ರಿಕಾಲ ಪೂಜೆ ನಡೆಯಲಿದೆ. ಅದೇ ರೀತಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 28 : ಗೆಜ್ಜೆಗಿರಿ ಕ್ಷೇತ್ರದಲ್ಲಿ ಐತಿಹಾಸಿಕ ಚಲನಚಿತ್ರ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಪ್ರದರ್ಶನ
Posted On: 27 Feb 2021, 01:33 PM
ತುಳುನಾಡ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಐತಿಹಾಸಿಕ ಚಲನಚಿತ್ರ "ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು" ಚಲನಚಿತ್ರವು ದಿನಾಂಕ 28.02.2021ನೇ ಭಾನುವಾರ ಸಂಜೆ ಗಂಟೆ 6ಗೆ ಗೆಜ್ಜೆಗಿರಿ ಕ್ಷೇತ್ರದ ಸತ್ಯ ಧರ್ಮ ಚಾವಡಿಯಲ್ಲಿ ಪ್ರದರ್ಶನ ಗೊಳ್ಳಲಿದೆ. ಸಂಕ್ರಿ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡು "ಸೂರ್ಯೋದಯ ಪೆರಂಪಳ್ಳಿಯವರ" ನಿರ್ದೇಶನದ ದೇಯಿ ಬೈದೆತಿಯು ಈಗಾಗಲೇ ಮೂಡುಬಿದಿರೆ, ಮುಲ್ಕಿ, ತೋನ್ಸೆ, ಉಡುಪಿಗಳಲ್ಲಿ ಪ್ರದರ್ಶನಗೊಳ್ಳಲು ತಯಾರಿ ನಡೆಸಿದೆ. ಅಪರೂಪದ ಈ ಅದ್ಭುತ ಚಲನಚಿತ್ರವು ಭಾಸ್ಕರ್ ರಾವ್'ರವರ ಸಂಗೀತ ಹಾಗೂ ಕಲಾವತಿ ದಯಾನಂನಂದ್'ರವರ ಸುಮಧುರ ಕಂಠದಲ್ಲಿ ಮೂಡಿ ಬಂದ ಸುಮಧುರ ಹಾಡುಗಳು ತುಳುನಾಡಿಗರನ್ನು ಮತ್ತೊಮ್ಮೆ ರಂಜಿಸಲಿದೆ ನಿಮ್ಮ ಊರಿನಲ್ಲಿ ಕೂಡಾ ಪ್ರದರ್ಶನ ವಾಗಬೇಕೆಂದರೆ ನಮ್ಮನ್ನು ಸಂಪರ್ಕಿಸಿ +91 92428 30302 8217679743
ಮಾನವೀಯ ನೆಲೆಯಲ್ಲಿ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಗೆ ನ್ಯಾಯ ದೊರಕಿಸುವಲ್ಲಿ ಮುಂದಿನ ಹೋರಾಟ : ಸಮಾನ ಮನಸ್ಕ ಬಿಲ್ಲವರು
Posted On: 27 Feb 2021, 11:16 AM
ಉಡುಪಿ : ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಾರಕೂರಿನ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಯವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮತ್ತು ಪದಾಧಿಕಾರಿಗಳಿಂದ ಫೆಬ್ರವರಿ 25ರಂದು ಮನವಿ ಸಲ್ಲಿಸಲಾಗಿದ್ದರೂ ದುಷ್ಕರ್ಮಿಗಳನ್ನು ಇನ್ನೂ ಬಂಧಿಸದಿರುವುದರಿಂದ ಇಂದು ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಮಾನ ಮನಸ್ಕರು ಜೊತೆಯಾಗಿ ಸಭೆ ಸೇರಿದರು. ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲಾ ನಗರ ಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸಂಘಟಿತ ಹೋರಾಟದ ಮೂಲಕ ನಾವು ಮುಂದಿನ ಹೆಜ್ಜೆ ಇಡಬೇಕಾಗಿದೆ. ಹತಾಶೆ ಭಾವನೆಯನ್ನು ಬಿಟ್ಟು ಧನಾತ್ಮಕತೆಯಲ್ಲಿ ನಾವು ಮುನ್ನಡೆಯುವ ಎಂದರು. ರಾಮ ಮಾಸ್ಟರ್ ಶಂಕರ್ ಶಾಂತಿಯವರಿಗೆ ಧೈರ್ಯ ತುಂಬುವ ಕಾರ್ಯದೊಂದಿಗೆ ದುಷ್ಕರ್ಮಿಗಳನ್ನು ಪೋಲಿಸ್ ಇಲಾಖೆ ಬಂಧಿಸಿ ಸರಿಯಾದ ಶಿಕ್ಷೆ ಸಿಗುವವರೆಗೆ ಹೋರಾಡಬೇಕಿದೆ ಎಂದರು. ಸಮಾನ ಮನಸ್ಕರಾದ ಕಿರಣ್ ಮಾತನಾಡಿ ಶಂಕರ್ ಪೂಜಾರಿ ನಿಸ್ವಾರ್ಥ ಸಮಾಜ ಸೇವಕರಾಗಿ ಸಮಾಜದಲ್ಲಿಯ ಭೃಷ್ಟರ ಭೃಷ್ಟಾಚಾರವನ್ನು ಬಯಲಿಗೆಳೆಯುವ ಕಾರ್ಯ ಮಾಡುತ್ತಿದ್ದು ಅದರಿಂದ ಸಾರ್ವಜನಿಕರಿಗೆ ಉಪಯೋಗವಾಗಿದೆ. ಆದರೆ ಭೃಷ್ಟರಿಗೆ ಕಂಟಕವಾಗಿದೆ. ಹಲ್ಲೆ ಪೂರ್ವನಿಯೋಜಿತವಾಗಿದ್ದು, ಶಂಕರ ಶಾಂತಿಯವರಿಗೆ ನ್ಯಾಯ ಸಿಗುವವರೆಗೆ ಹೋರಾಡುವ ಎಂದರು. ಬಿಲ್ಲವ ಚಿಂತಕ ದಯಾನಂದ ಉಗ್ಗೆಲ್ ಬೆಟ್ಟು ಮಾತನಾಡಿ ಸಮಾಜದಲ್ಲಿಯ ಅನ್ಯಾಯಕ್ಕೆ ತುಡಿಯುವ ಮನಸ್ಥಿತಿಯ ಶಂಕರ್ ಶಾಂತಿಯವರ ಹೋರಾಟ ಮುಂದೆಯೂ ಸಾಗಲು ನಾವೆಲ್ಲ ಅವರಿಗೆ ಧೈರ್ಯ ತುಂಬಬೇಕಾಗಿದೆ. ಕೆಲವು ಕ್ಷುಲ್ಲಕ ಮನಸಿನ ವ್ಯಕ್ತಿಗಳು ಈ ಹೋರಾಟದ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದು ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ವಹಿಸಿ ಮಾತನಾಡಿ ಘಟನೆ ನಡೆದು 6 ದಿವಸವಾದರೂ ಇನ್ನೂ ದುಷ್ಕರ್ಮಿಗಳನ್ನು ಬಂಧಿಸದಿರುವುದು ಪೋಲಿಸ್ ಇಲಾಖೆಯ ಮೇಲೆ ನಮಗೆ ಅನುಮಾನ ಮೂಡಿಸುತ್ತಿದೆ. ಒಂದು ವೇಳೆ ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಉಪಸ್ಥಿತರಿದ್ದ ಸಮಾಜ ಬಾಂಧವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಪದಾಧಿಕಾರಿಗಳು, ಬಿಲ್ಲವ ಸಮಾಜದ ಸಮಾನ ಮನಸ್ಕರು ಉಪಸ್ಥಿತರಿದ್ದರು.
ಕೆಮ್ರಾಲ್ ನಲ್ಲಿ ಜೆಜೆಎಮ್ ವತಿಯಿಂದ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ತರಬೇತಿ
Posted On: 26 Feb 2021, 10:54 PM
ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಪ್ ಚಾಲಕರ ಸಮೇತ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವವರ ಪಾತ್ರ ತುಂಬಾ ಮಹತ್ವದ್ದು ಎಂದು ಕೆಮ್ರಾಲ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅರುಣ್ ಶ್ಲಾಘಿಸಿದರು.ಅವರಿಂದು ದ.ಕ ಜಿಲ್ಲಾ ಪಂಚಾಯತ್ ,ಗ್ರಾಮೀಣ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಮಂಗಳೂರು ,ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯ ವತಿಯಿಂದ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಲ್ಕಿ ರಾಮಕೃಷ್ಣ ಪುಂಜ ಐಟಿಐ ಸಂಸ್ಥೆಯ ಕಿರಿಯ ತರಬೇತುದಾರ ವಿಲ್ಫ್ರೇಡ್ ಅವರು ಪಂಪ್ ಆಪರೇಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ನಂತರ ನಿರ್ಮಿತಿ ಕೇಂದ್ರದ ನವೀತ್ ಅವರು ವಾಟರ್ ಮೀಟರ್ ಕುರಿತು ವಿಷಯ ಮಂಡಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ನರೇಂದ್ರ ಸಿ.ಆರ್ ಅವರು ಸಮಗ್ರ ಕುಡಿಯುವ ನೀರು ಸರಬರಾಜಿನ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಜಲಜೀವನ್ ಮಿಷನ್ ಇದರ ಸಮುದಾಯ ಸಂಸ್ಥೆಯ ಐಇಸಿ/ಹೆಚ್.ಆರ್.ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಜೆಜೆಎಮ್ ಧ್ಯೇಯೋದ್ದೇಶಗಳ ಕುರಿತು ತಿಳಿಸಿದರು. ಇದೇ ಸಂದರ್ಭ ಸ್ವಚ್ಛ ಭಾರತ್ ಮಿಷನ್ ಇದರ ಶ್ರೀ ನವೀನ್ ಅವರು ನೀರು ನೈರ್ಮಲ್ಯದ ಕುರಿತು ಅರಿವು ಮೂಡಿಸಿದರು. ಈ ಸಂದರ್ಭ ಮಂಗಳೂರು ತಾಲೂಕಿನ 10 ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರು, ಕೆಮ್ರಾಲ್ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾ,ಉಪಾಧ್ಯಕ್ಷರು,ಸರ್ವ ಸದಸ್ಯರು, ಸ್ವಚ್ಛ ಭಾರತ್ ಮತ್ತು ಜೆಜೆಎಮ್ ಐಇಸಿ ಸಂಯೋಜಕರಾದ ಶ್ರೀ ಡೊಂಬಯ್ಯ ಮತ್ತು ಮಹಾಂತೇಶ್ ಹಿರೇಮಠ ಉಪಸ್ಥಿತರಿದ್ದರು. ಜೆಜೆಎಮ್ ಹೆಚ್.ಆರ್.ಡಿ ಫಲಹಾರೇಶ್ ಮಣ್ಣೂರಮಠ ಕಾರ್ಯಕ್ರಮ ಆಯೋಜಿಸಿದ್ದರು.
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ
Posted On: 26 Feb 2021, 10:48 PM
ಶಿರ್ವ: ಸಂತ ಮೆರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಯನ್ನು ಮಾಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ. ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ದುಶ್ಚ್ಯಟಗಳಿಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ ಆರೋಗ್ಯಪೂರ್ಣ ಜೀವನದ ಕಡೆ ಕೊಂಡೊಯ್ಯುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರು ತಮ್ಮ ಹೆಚ್ಚಿನ ಗಮನವನ್ನು ನೀಡಬೇಕಾದುದು ಅಗತ್ಯ ಎಂದರು. ಕಳೆದ ಬಾರಿ ಗಣಕ ವಿಜ್ಞಾನ ವಿಭಾಗದಲ್ಲಿ ತುಂಬಾ ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ ಮತ್ತು ಉನ್ನತ ವಿದ್ಯಾಬ್ಯಾಸ ಮಾಡುತ್ತಿರುವುದು ವಿಭಾಗಕ್ಕೆ ಒಂದು ಹೆಮ್ಮೆಯ ಗರಿಯಂತೆ ಎಂದು ತಿಳಿಸಿದರು. ಈ ಬಾರಿಯೂ ವಿವಿಧ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳು ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಇಂದಿನ ಸಂಕಷ್ಟದ ಕಾಲದಲ್ಲಿಯೂ ಇರುವುದು ಗಮನಾರ್ಹ ಎಂದು ಪ್ರಶಂಸನೀಯವಾದ ಮಾತುಗಳನ್ನಾಡಿದರು. ಇದೇ ಸಂಧರ್ಭದಲ್ಲಿ ಹೆತ್ತವರಿಗೆ ವಿದ್ಯಾರ್ಥಿಗಳ ಪ್ರಗತಿ ಪತ್ರದ ಪರಿಶೀಲನೆ ಮತ್ತು ಹಾಜರಾತಿ ವಿವರಗಳನ್ನು ವಿಭಾಗದ ವತಿಯಿಂದ ನೀಡಲಾಯಿತು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನ ಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್, ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರಿ, ಶ್ರೀಮತಿ ಸುಷ್ಮಾ, ಪ್ರಕಾಶ್, ಹೆತ್ತವರು ಹಾಗೂ ಪೋಷಕರು, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಪ್ರಿಯಾಂಕ ಮತ್ತು ಬಳಗದವರು ಪ್ರಾರ್ಥಿಸಿದರು. ಕೃಪಾ ಸ್ವಾಗತಿಸಿ, ಶೋಭಿತ ವಂದಿಸಿ, ದಾಕ್ಷಾಯನಿ ಕಾರ್ಯಕ್ರಮ ನಿರೂಪಿಸಿದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ
Posted On: 26 Feb 2021, 10:27 PM
ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಮೇಶ್ ಹೆಗ್ಡೆ ಕಲ್ಯಾರವರನ್ನು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಯವರು ಸನ್ಮಾನಿಸಿದರು. ಪ್ರಚಾರ ಸಮಿತಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕರ್ ಶೆಟ್ಟಿ ಕಲ್ಯಾ, ಹರೀಶ್ ನಾಯಕ್ ಕಾಪು,ಗೋವರ್ಧನ್ ಶೇರಿಗಾರ್, ಲಕ್ಷ್ಮಣ್ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.
